Tuesday, October 16, 2012

ಬಟ್ಟೆ ಮತ್ತು ಇತರ ಕತೆಗಳು

ಹಸಿವೆ
ಆ ಊರು ಬರಗಾಲದಿಂದ ತತ್ತರಿಸುತ್ತಿತ್ತು.
ಆಹಾರವಿಲ್ಲದೆ ಗತಿಗೆಟ್ಟ ಕುಟುಂಬ ಕಟ್ಟಕಡೆಗೆ ತನ್ನ ಮಗುವನ್ನು ಒಂದು ಕಿಲೋ ಅಕ್ಕಿಗೆ ಮಾರಿ, ಪೊಲೀಸರಿಂದ ಬಂಧನಕ್ಕೊಳಗಾಯಿತು.
ಅಭಿವೃದ್ಧಿ ತುಂಬಿ ತುಳುಕುವ ನಗರ ಅದು.
ಒಬ್ಬ ತಾಯಿ ತನ್ನ ಮಗುವನ್ನು ಮಾರಿ, ಅದಾಗಲೇ ಮಾರುಕಟ್ಟೆಗೆ ಬಂದ ಹೊಸ ಮೊಬೈಲ್ ಕೊಂಡುಕೊಂಡಳು.

ಆದೇಶ
ಸರಕಾರ ಆದೇಶ ನೀಡಿತು ‘‘ಇನ್ನು ಮುಂದೆ ರೈತರು ಗದ್ದೆ ತೋಟಗಳಿಗೆ ನದಿಯ ನೀರನ್ನು ಬಳಸುವಂತಿಲ್ಲ’’
ಹಾಗೆಂದು ಆದೇಶ ನೀಡಿದ ಜಿಲ್ಲಾಧಿಕಾರಿಯ ಮನೆ ಮುಂದಿನ ಉದ್ಯಾನವನಕ್ಕೆ ಒಂದು ದಿನ ನೀರು ಹನಿಸದ ಕಾರಣಕ್ಕೆ ಮಾಲಿ ಕೆಲಸ ಕಳೆದುಕೊಂಡ.

ಮಂಗಳ
‘‘ಅಪ್ಪಾ ಮಂಗಳನಲ್ಲಿ ನೀರಿದೆ ಅಂತಾರೆ. ಒಂದು ವೇಳೆ ಮಂಗಳ ಗ್ರಹದಲ್ಲಿ ನಿಜಕ್ಕೂ ನೀರಿದ್ರೆ ಅದು ಯಾರಿಗೆ ಸೇರತ್ತೆ....ಅಮೆರಿಕಕ್ಕೋ...ನಮ್ಮೆಲ್ಲರಿಗೋ...’’
ಮಗ ಮುಗ್ಧವಾಗಿ ಕೇಳಿದ.
‘‘ಅದನ್ನು ಮತ್ತೊಂದು ಯುದ್ಧ ನಿರ್ಧರಿಸುತ್ತೆ ಮಗ...’’ ಅಪ್ಪ ನಿರ್ಲಿಪ್ತವಾಗಿ ಉತ್ತರಿಸಿದ.
‘‘ಹಾಗಾದರೆ ಅದನ್ನು ನಾವು ಅಮಂಗಳ ಗ್ರಹ ಎಂದೇ ಕರೆಯುವುದು ಒಳ್ಳೆಯದಲ್ವ ಅಪ್ಪಾ...’’ ಮಗ ಆತಂಕದಿಂದ ಕೇಳಿದ.

ದಾರಿ
ಸಂತ ಪ್ರಯಾಣ ಹೋರಟಿದ್ದ.
ಶಿಷ್ಯ ಹೇಳಿದ ‘‘ದಾರಿಯಲ್ಲಿ ಒಂದು ಮರವೂ ಇಲ್ಲ...ಬರೇ ಬಿಸಿಲು...ಪ್ರಯಾಣ ಕ್ಷಷ್ಟ...’’
ಸಂತ ಹೇಳಿದ ‘‘ಸರಿ ಪ್ರಯಾಣದುದ್ದಕ್ಕೂ ನಾವು ದಾರಿಯ ಇಕ್ಕೆಡೆಗಳಲ್ಲಿ ಸಸಿಗಳನ್ನು ನೆಡುತ್ತಾ ಮುಂದೆ ಸಾಗುವ...’’
ಮುಂದೆ ಆ ಗಿಡಗಳೆಲ್ಲ ಬೆಳೆದು ಮರವಾದವು. ನೆರಳಿನ ಕಾರಣಕ್ಕಾಗಿ ಸಂತ ನಡೆದ ದಾರಿಯಲ್ಲಿ ಈಗ ನೂರಾರು ಜನರು ನಡೆಯುತ್ತಿದ್ದಾರೆ.

ನಕ್ಷೆ
ಸಂತ ಪ್ರಯಾಣ ಹೊರಟ.
ಶಿಷ್ಯ ಹೇಳಿದ ‘‘ಗುರುಗಳೇ...ನೀವು ಹೋಗುವ ಊರಿನ ನಕ್ಷೆ ಇಟ್ಕೊಂಡಿದ್ದೀರಾ?’’
ಸಂತ ನಕ್ಕ ‘‘ನಾನು ಪ್ರಯಾಣ ಹೊರಟ ದಾರಿಯೇ ನಕ್ಷೆಯ ರೂಪ ಪಡೆಯತ್ತೆ’’ ಹೊರಗೆ ಹೆಜ್ಜೆಯಿಟ್ಟ.

ಅಪಘಾತ
ಅಪಘಾತವಾಗಿತ್ತು. ಆತ ವಿಲವಿಲನೆ ಒದ್ದಾಡುತ್ತಿದ್ದ.
ಯಾರೋ ಆತನನ್ನು ಆಸ್ಪತ್ರೆಗೆ ಒಯ್ಯಲು ಯತ್ನಿಸುತ್ತಿದ್ದರು.
ಅಷ್ಟರಲ್ಲಿ ಅಲ್ಲಿಗೆ ಬಂದ ಚಾನೆಲ್ ವರದಿಗಾರ ಹೇಳಿದ ‘‘ಸ್ವಲ್ಪ ನಿಲ್ಲಿ. ಇನ್ನೊಂದು ಐದು ನಿಮಿಷದಲ್ಲಿ ನಮ್ಮ ಕ್ಯಾಮರಾಮೆನ್ ಬರ್ತಾನೆ’’

ಕಳ್ಳ
ಒಬ್ಬ ಕಳ್ಳ ಜೈಲಿನಿಂದ ತಪ್ಪಿಸಿಕೊಂಡು ಬಂದು ಸಂತನ ಆಶ್ರಮದಲ್ಲಿ ಅವಿತುಕೊಂಡ.
ಕೆಲ ದಿನ ಅಲ್ಲೇ ಇದ್ದು, ಅಲ್ಲಿನ ವಾತಾವರಣ ಅವನ ಮನಸ್ಸನ್ನು ಬದಲಿಸಿತು. ಕಳ್ಳ ಸಂತನಿಂದ ಶಿಷ್ಯತ್ವ ಸ್ವೀಕರಿಸಿದ.
ಒಂದು ದಿನ ಕಳ್ಳ ಆಶ್ರಮದಲ್ಲಿರುವುದು ಪೊಲೀಸರಿಗೆ ತಿಳಿಯಿತು. ಪೊಲೀಸರು ಆಶ್ರಮಕ್ಕೆ ಬಂದು, ಸಂತನಲ್ಲಿ ಕೇಳಿದರು ‘‘ಇಲ್ಲೊಬ್ಬ ಕಳ್ಳ ಇದ್ದಾನೆಯೆ?’’
‘‘ಹೌದು ಇದ್ದಾನೆ’’ ಸಂತ ಹೇಳಿದ.
‘‘ಎಲ್ಲಿದ್ದಾನೆ?’’ ಪೊಲೀಸರು ಕೇಳಿದರು.
‘‘ನಾನೇ ಕಳ್ಳ. ಒಬ್ಬ ಕಳ್ಳನ ಮನಸ್ಸನ್ನು ಕದ್ದ ದೊಡ್ಡ ಕಳ್ಳ’’ ಸಂತ ಹೇಳಿದ.

ಬಟ್ಟೆ
‘‘ಈ ಹೊಸ ಬಟ್ಟೆಯಲ್ಲಿ ನಾನು ಹೇಗೆ ಕಾಣುತ್ತೇನೆ...’’ ಅವಳು ಕೇಳಿದಳು.
‘‘ನಿನ್ನಿಂದಾಗಿ ಈ ಹೊಸ ಬಟ್ಟೆ ಚೆಂದ ಕಾಣುತ್ತಿದೆ’’ ಜಾಣ ಹುಡುಗ ಉತ್ತರಿಸಿದ.
ಹುಡುಗಿ ಅರಳಿದಳು.

ಕರೆ

ಶಿಷ್ಯ ಸಂತನಲ್ಲಿ ಬಂದು ಕೇಳಿದ ‘‘ಕರೆದಿರಾ?’’
‘‘ಇಲ್ಲವಲ್ಲ’’ ಸಂತ ಹೇಳಿದ.
‘‘ನೀವು ಕರೆದಂತಾಯಿತು...’’ ಶಿಷ್ಯ ಹೇಳಿದ.
‘‘ಹಾಗಾದರೆ ನಾನು ಕರೆದಿರಲೂ ಸಾಕು’’ ಸಂತ ಉತ್ತರಿಸಿದ.

3 comments:

  1. This comment has been removed by the author.

    ReplyDelete
  2. :-)
    'ದಾರಿ', 'ಕಳ್ಳ' ಕತೆ ತುಂಬಾ ಇಷ್ಟ ಆಯ್ತು..
    ಮಂಗಳ ಗ್ರಹ ದಲ್ಲೇನಾದರೂ ನೀರಿದ್ದರೆ ಅಲ್ಲಿ ಕಾಮತ್ ಹೋಟಲ್ ಮೊದಲಿಗೆ ಶುರು ಆಗ್ತಿತ್ತು..
    ಮಾಲತಿ ಎಸ್.

    ReplyDelete
  3. ಎಲ್ಲವೂ ಚಂದ ಮತ್ತು ಅರ್ಥಪೂರ್ಣವಾಗಿದೆ..
    :)

    ReplyDelete