Wednesday, August 13, 2014

ಫೇಸ್‌ಬುಕ್ ಮೂಲಕ ಕವಿಗೆ ಸಿಕ್ಕಿದ ಸ್ವಾತಂತ್ರ್ಯ

 ಇದು ತುಂಬಾ ವರ್ಷಗಳ ಹಿಂದಿನ ಮಾತು. ನನ್ನ ವಿದ್ಯಾರ್ಥಿ ದೆಸೆಯ ಕಾಲ. ನಾವು ಬರೆದ ಕವಿತೆ ನಿಜಕ್ಕೂ ಕವಿತೆ ಆಗಿದೆಯೋ ಇಲ್ಲವೋ ಎನ್ನುವುದು ಗೊತ್ತಾಗಬೇಕಾದರೆ ಪತ್ರಿಕೆಗಳಲ್ಲಿ ಪ್ರಕಟವಾಗಬೇಕು ಎಂದು ನಂಬಿಕೊಂಡಿದ್ದ ಕಾಲ. ನನ್ನ ಮೊತ್ತ ಮೊದಲ ಕತೆ ‘ರಣರಂಗದಲ್ಲಿ ಮುಸ್ಸಂಜೆ’ ತುಷಾರದಲ್ಲಿ ಪ್ರಕಟವಾಗಿ, ಅದರ ಸಂಪಾದಕರು ನನಗೆ ವೈಯಕ್ತಿಕವಾಗಿ ಪತ್ರ ಬರೆದಾಗ ಭೂಮಿ ಬಿಟ್ಟು ಆಕಾಶದಲ್ಲಿ ತೇಲಾಡಿದ ಕಾಲ.. ಒಂದು ಕತೆಯನ್ನು ಕಳುಹಿಸಿ ಅದು ಪ್ರಕಟವಾಗುವವರೆಗೆ ಅಂದರೆ ಎರಡು ತಿಂಗಳೋ, ಮೂರು ತಿಂಗಳೋ ಕೆಲವೊಮ್ಮೆ ಒಂದು ವರ್ಷವೋ ಕಾಯುವ ಕೆಲಸ ನನ್ನದು. ಕೆಲವೊಮ್ಮೆ ಅದು ಕಸದ ಬುಟ್ಟಿ ಸೇರಿರುತ್ತದೆ. ಆದರೆ ನಾನು ಮಾತ್ರ ಪ್ರತಿ ಸಂಚಿಕೆಯನ್ನು ಬಿಡಿಸುತ್ತಾ ವರ್ಷಗಟ್ಟಳೆ ನಿರೀಕ್ಷೆಯಲ್ಲೇ ಉಳಿದದ್ದಿದೆ. ಪ್ರಕಟವಾದ ದಿನವಂತೂ ಆ ಪತ್ರಿಕೆಯನ್ನು ಹಿಡಿದುಕೊಂಡು ನನ್ನೂರಿನ ಬೀದಿಯಲ್ಲಿ ಎದೆಯುಬ್ಬಿಸಿ ತಿರುಗಾಡಿದ ಕಾಲ ಅದು. ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ....ಇಡೀ ರಾಜ್ಯ ಇಂದು ನನ್ನ ಕುರಿತಂತೆಯೇ ಮಾತನಾಡುತ್ತಿದೆ ಎಂದು ನನಗೆ ನಾನೇ ಭ್ರಮೆಗಳನ್ನು ಕಟ್ಟಿಕೊಂಡು ಓಡಾಡುತ್ತಿದ್ದ ದಿನಗಳು ಅವು. "ಕವಿ ಮತ್ತು ಓದುಗನ ಮಧ್ಯೆ ಏಕೈಕ ಸೇತುವೆ ನಾನು'' ಎಂದು ಕವಿಗಳಿಂದ ಈ ಪತ್ರಿಕೆಗಳು ವಸೂಲಿ ಮಾಡುತ್ತಿದ್ದ ಟೋಲ್‌ಗೇಟ್ ಫೀಗಳಿಗೆ ಲೆಕ್ಕವಿಲ್ಲ. ಕೆಲವೊಮ್ಮೆ ತಪ್ಪು ಮುದ್ರಣಗಳು. ಕೆಲವೊಮ್ಮೆ ಒಳ್ಳೆಯ ಕವಿತೆ ಎಂದು ಭಾವಿಸಿರುವುದು ವಾಪಾಸಾಗಿ ಬಿಡುತ್ತಿತ್ತು. ಯಾಕೆಂದರೆ ಯಾವುದು ಕವಿತೆ, ಯಾವುದು ಕವಿತೆ ಅಲ್ಲ ಎನ್ನೋದನ್ನು  ತೀರ್ಮಾನಿಸುವ ವ್ಯಕ್ತಿಗೆ ಕವಿತೆಯ ಧ್ವನಿಯೇ ಅರ್ಥವಾಗುತ್ತಿರಲಿಲ್ಲ. ಒಟ್ಟಿನಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗುವುದು ಎನ್ನುವುದು ಕವಿಯ ಬದುಕಿನ ಅದ್ಭುತ ಕ್ಷಣಗಳು. ಅದೃಷ್ಟದ ಕ್ಷಣಗಳು. ಪ್ರಕಟವಾದರೆ ಕವಿಯ ನಿರೀಕ್ಷೆ ಮುಗಿಯುವುದಿಲ್ಲ. ಮುಂದಿನ ವಾರ ತನ್ನ ಕವಿತೆಯ ಬಗ್ಗೆ ಯಾರಾದರೂ ಓದುಗರು ಅಭಿಪ್ರಾಯ ಬರೆದಿದ್ದಾರೆಯೋ ಎಂದು ಭೂತಗನ್ನಡಿ ಹಿಡಿದು ನೋಡುವ ಕೆಲಸ. ಯಾರಾದರೂ ಓದುಗರು ಕೃಪೆ ತೋರಿ ಏನಾದರೂ ಬರೆದಿದ್ದರೆ, ಅದು ಹಲವು ಸೆನ್ಸಾರ್‌ಗಳನ್ನು ಅನುಭವಿಸಿ ಅದರ ಸಣ್ಣ ಚೂರೊಂದು ಅಭಿಪ್ರಾಯ ರೂಪದಲ್ಲಿ ಪ್ರಕಟವಾಗುತ್ತಿತ್ತು. ಅದು ಕವಿಯ ಕುರಿತಂತೆ ಉಪಸಂಪಾದಕ ತೋರಿಸಿದ ದೊಡ್ಡ ಕೃಪೆ. ಆ ಓದುಗನ ಒಂದು ಸಾಲಿನ ಅಭಿಪ್ರಾಯವನ್ನು ಪತ್ರಿಕೆಯ ಪುಟದಿಂದ ಕತ್ತರಿಸಿ ತೆಗೆದು, ಧನ್ಯೋಸ್ಮಿ ಎಂದು ಡೈರಿಯ ಪುಟಗಳಲ್ಲಿ ಇಡುತ್ತಿದ್ದ ಆ ಕಾಲ. ಕವಿ ತನ್ನ ಓದುಗನನ್ನು ತಲುಪಬೇಕಾದರೆ ಸಂಪಾದಕ ಅಥವಾ ಉಪಸಂಪಾದಕನೆನ್ನುವ ಗೇಟುಪಾಲಕನ ಕೃಪೆಯನ್ನು ಕಾಯುತ್ತಿರಬೇಕಾಗುತ್ತಿತ್ತು. ಆ ಗೇಟುಪಾಲಕ ಒಳ್ಳೆಯ ಕವಿತೆಗಳನ್ನು ಗುರುತಿಸುವಲ್ಲಿ ವಿಫಲನಾಗಿದ್ದರೆ ಕವಿಯೂ ನಿರಾಶನಾಗಬೇಕಾಗುತ್ತಿತ್ತು. ಪತ್ರಿಕೆಗಳ ಕೃಪೆಯಿಂದಲೇ ಹಲವರು ಕವಿಗಳಾಗಿ ಗುರುತಿಸಲ್ಪಟ್ಟಿದ್ದರು. ಪತ್ರಿಕೆಗಳ ಅವಕಪೆಯಿಂದಲೇ ಹಲವಾರು ಕವಿಗಳು ಮೂಲೆ ಸೇರಿದ್ದೂ ಇದೆ. 
ನಾನೇ ಒಬ್ಬ ಪತ್ರಕರ್ತನಾದ ಬಳಿಕ, ಒಮ್ಮಿಂದೊಮ್ಮೆಗೆ ಈ ಎಲ್ಲ ಭ್ರಮೆಗಳಿಂದ ಕೆಳಗಿಳಿದು ಬಿಟ್ಟೆ. ಪತ್ರಿಕೆಯೊಳಗೆ ನಮ್ಮ ಕವಿತೆಗಳನ್ನು ಗುರುತಿಸುವವರು, ನಿರ್ಧರಿಸುವವರು ತೀರಾ ತೀರಾ ಸಾಮಾನ್ಯರು. ಅವರೂ ನಮ್ಮಂತೆಯೇ ಮನುಷ್ಯರು ಎನ್ನುವುದನ್ನು ನಾನು ಅರಿತುಕೊಂಡೆ. ಕೆಲವರು ಕವಿತೆಗಳನ್ನು ಪುಟ ತುಂಬಿಸುವುದಕ್ಕಷ್ಟೇ ಬಳಸುತ್ತಾರೆ ಎನ್ನುವುದೂ ಗೊತ್ತಾಯಿತು. ಅದರ ಒಳಗಿರುವ ಎಲ್ಲ ರಾಜಕೀಯಗಳು ಗೊತ್ತಾಗುತ್ತಾ ಹೋದಂತೆ, ಪತ್ರಿಕೆಗಳಲ್ಲಿ ನನ್ನ ಕವಿತೆಗಳು ಪ್ರಕಟವಾಗಬೇಕು ಎನ್ನುವ ಹಂಬಲ, ಆಸಕ್ತಿ ಕಡಿಮೆಯಾಗುತ್ತಾ ಹೋಯಿತು. ತೀರಾ ಬರೆಯುವ ಒತ್ತಡ ಇದ್ದಾಗ ಬರೆಯುತ್ತಿದ್ದೆ. ಬರೆಯುವ ಖುಷಿ ಖಾಸಗಿಯಾದದ್ದೇ ಆದರೂ, ಆ ಖುಷಿ ಓದುಗರಿಗೆ ತಲುಪಬೇಕು ಎನ್ನುವ ಹಂಬಲಿಕೆ ಇಲ್ಲದೆ ಬರೆಯುವುದು ತುಂಬಾ ಕಷ್ಟ. ಬರೆಯುವ ಕುರಿತಂತೆಯೇ ನಿಧಾನಕ್ಕೆ ಆಸಕ್ತಿ ಕಡಿಮೆಯಾಯಿತು. ಪತ್ರಿಕಾ ಬರಹಗಳ ಕಡೆಗೆ ಆಸಕ್ತಿ ಹೆಚ್ಚುತ್ತಾ ಹೋಯಿತು. ನನ್ನ ಮುಗ್ಧ ಕಾಲದಲ್ಲಿ ಪತ್ರಿಕೆಗೆ ಕವಿತೆಗಳನ್ನು ಕಳುಹಿಸಿ ಅದು ಪ್ರಕಟವಾಗುವ ದಿನಗಳಿಗಾಗಿ ಕಾಯುವ ಆ ನಿರೀಕ್ಷೆಯ ರೋಮಾಂಚನವನ್ನು ಕಳೆದುಕೊಳ್ಳುವುದರೊಂದಿಗೆ ಬರೆಯುವ ಸ್ಫೂರ್ತಿ ಭಾಗಶಃ ಇಲ್ಲವಾಯಿತೇನೋ. ಒಂದೆಡೆ ಪತ್ರಿಕೆಯಲ್ಲಿ ಕೆಲಸ ಮಾಡುವ ಒತ್ತಡ. ಪತ್ರಿಕೆಯಲ್ಲಿ ಕೆಲಸ ಮಾಡುವವನಿಗೆ ಹಲವು ಸ್ವಾತಂತ್ರಗಳು ಕಡಿತಗೊಳ್ಳುತ್ತವೆ. ನಾವು ನಮಗೇ ಕೆಲವು ನೈತಿಕ ಗಡಿಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ನಮ್ಮದೇ ಪತ್ರಿಕೆಗಳಲ್ಲಿ ನಮ್ಮ ಹೆಸರು, ಫೋಟೋಗಳು ಬರದಂತೆ ಸಾಧ್ಯವಾದಷ್ಟು ಜಾಗರೂಕತೆ ವಹಿಸಬೇಕಾಗುತ್ತದೆ. ನಮ್ಮ ವೈಯಕ್ತಿಕ ತೆವಲುಗಳಿಗೆ ನಾವು ಕೆಲಸ ಮಾಡುವ ಪತ್ರಿಕೆಗಳು ಬಲಿಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತ ಮತ್ತು ಕವಿ ಜೊತೆ ಜೊತೆಯಾಗಿ ಬಾಳುವಂತಿಲ್ಲ. ಒಬ್ಬನೊಳಗೆ ಪತ್ರಕರ್ತ ಮತ್ತು ಕವಿ ಇಬ್ಬರು ಬದುಕಿದ್ದಾರೆಂದರೆ ಅವರಿಬ್ಬರು ಶತ್ರುಗಳಂತೆ ಬದುಕುತ್ತಿರುತ್ತಾರೆ. ಅವರಿಬ್ಬರ ನಡುವೆ ಸದಾ ತಿಕ್ಕಾಟ ನಡೆಯುತ್ತದೆ. ನನ್ನ ಗೆರೆಯೊಳಗೆ ನೀನು ಬರಬೇಡ ಎಂದು ಪತ್ರಕರ್ತ ಸದಾ ಕವಿಗೆ ಎಚ್ಚರಿಕೆ ಕೊಡುತ್ತಾ ಇರುತ್ತಾನೆ. ನನ್ನ ಶಬ್ದಗಳ ಸೂಕ್ಷ್ಮತೆಯನ್ನು ಕೆಡಿಸಬೇಡ ಎಂದು ಕವಿ ಸದಾ ಪತ್ರಕರ್ತನಲ್ಲಿ ಗೋಗರೆಯುತ್ತಾ ಇರುತ್ತಾನೆ. ಕವಿ ತನ್ನ ಕಾವ್ಯವನ್ನು ಹಿಡಿದುಕೊಂಡು ಬಂದರೆ ಪತ್ರಕರ್ತ ನಡಿಯಾಚೆ ಎನ್ನುತ್ತಾನೆ. ಒಂದೆ ಎದೆಯೊಳಗೆ ಇಬ್ಬರೂ ಎಣ್ಣೆ-ಸೀಗೆಯ ಹಾಗೆ ಬದುಕಬೇಕು. ಬರೆದ ವರದಿ ಕವಿತೆ, ಕತೆಯಾಗಬಾರದು. ಹಾಗೆಯೇ ಬರೆದ ಕತೆ, ಕವಿತೆ ವರದಿಯೂ ಆಗಬಾರದು. ಈ ಎಚ್ಚರಿಕೆಯ ನಡುವೆ ವ್ಯಕ್ತಿತ್ವ ಒಡೆದು ಹೋಗುತ್ತದೆ. ಒಬ್ಬನೇ ಎರಡಾಗಿ ಒಡೆದು ಕೊಂಡು ಬದುಕಬೇಕಾಗುತ್ತದೆ. ಪತ್ರಕರ್ತನಿಗೋ ಪತ್ರಿಕೆಯಿದೆ. ಕವಿ ಮಾತ್ರ ಆಸರೆಯಿಲ್ಲದೆ ಅನಾಥನಾಗುತ್ತಾನೆ. ಇಂತಹ ಸಂದರ್ಭದಲ್ಲೇ ಕವಿಗೆ ತೆರೆದುಕೊಂಡ ಅತಿ ದೊಡ್ಡ ಅವಕಾಶ ಫೇಸ್‌ಬುಕ್. ಓದುಗ ಮತ್ತು ಕವಿಯ ನಡುವಿದ್ದ ದೊಡ್ಡದೊಂಡು ಬರ್ಲಿನ್ ಗೋಡೆ ಫೇಸ್‌ಬುಕ್ ಮೂಲಕ ಕುಸಿದು ಬಿತ್ತು. ಇಲ್ಲಿ ಕವಿ ನೇರವಾಗಿ ಓದುಗನನ್ನು ಮುಖಾಮುಖಿಯಾಗುತ್ತಾನೆ. ಹಾಗೆಯೇ ಓದುಗನಿಗೂ ನೇರವಾಗಿ ಕವಿಯನ್ನು ಮುಖಾಮುಖಿಯಾಗುವ ಅವಕಾಶ. ನಡುವೆ ಯಾವ ದೊಣ್ಣೆ ನಾಯಕನ ಅನುಮತಿಯೂ ಬೇಡ. ಒಳ್ಳೆಯ ಕವಿತೆಯನ್ನು ನೇರವಾಗಿ ಓದುಗನೇ ಗುರುತಿಸುತ್ತಾನೆ. ವಿಶೇಷವೆಂದರೆ, ಇಲ್ಲಿ ಒಂದು ಕವಿತೆಯನ್ನು ಬರೆದು ಅದನ್ನು ಓದುಗನಿಗೆ ತಲುಪಿಸಲು ವರ್ಷಗಟ್ಟಲೆ ಕಾಯಬೇಕಾಗಿಲ್ಲ. ಅವನ ಪ್ರತಿಕ್ರಿಯೆಗೂ ಯಾರ ಸೆನ್ಸಾರ್ ಇರುವುದಿಲ್ಲ. ಒಂದು ಕವಿತೆಯನ್ನು ಫೇಸ್‌ಬುಕ್‌ನಲ್ಲಿ ಹಾಕಿದ ಕೆಲವೇ ನಿಮಿಷಗಳಲ್ಲಿ ಅದು ಓದುಗನನ್ನು ತಲುಪಿಯಾಗಿರುತ್ತದೆ. ಅಷ್ಟೇ ಅಲ್ಲ, ಅಭಿಪ್ರಾಯಗಳೂ ಕವಿಯನ್ನು ತಲುಪಿರುತ್ತದೆ. ಇಷ್ಟವಾಯಿತೋ, ಇಲ್ಲವೋ, ಯಾಕೆ ಇಷ್ಟವಾಯಿತು ಎನ್ನುವುದರ ಚರ್ಚೆಯೇ ಆರಂಭವಾಗಿ ಬಿಡುತ್ತದೆ. ಓದುಗನ ಮೂಲಕ ಕವಿಯೂ, ಕವಿಯ ಮೂಲಕ ಓದುಗನೂ ಪರಸ್ಪರ ಸ್ಫೂರ್ತಿ ಪಡೆಯುತ್ತಾ ಹೋಗುತ್ತಾರೆ. ಕವಿ ತನ್ನ ಹಂಗಿಲ್ಲದೆ ಓದುಗನನ್ನು ಮುಕ್ತವಾಗಿ ತಲುಪುತ್ತಿರುವುದು, ಓದುಗನು ತನ್ನ ಸಹಾಯವಿಲ್ಲದೆ ಕವಿಯನ್ನು ತಲುಪುತ್ತಿರುವುದು ಪತ್ರಿಕೆಗಳಿಗೆ ಒಳಗಿಂದ ಒಳಗೆ ಅಸಹನೆಯನ್ನು ತಂದಿಟ್ಟಿದೆ. ಹರಿಯುವ ನದಿಗೆ ದೊಣ್ಣೆನಾಯಕನ ಹಂಗೇಕೆ? ಎನ್ನುವ ಪ್ರಶ್ನೆಯನ್ನು ಕವಿ ಮತ್ತು ಓದುಗ ಜೊತೆಗೂಡಿ ಪತ್ರಿಕೆಗಳಿಗೆ ಕೇಳುತ್ತಿದ್ದಾನೆ. ಪತ್ರಿಕೆಗಳ ಈಗೋಗಳಿಗೆ ಭಾರೀ ಆಘಾತವಾಗಿದೆ ಎನ್ನುವುದಂತೂ ಸತ್ಯ. ಎಲ್ಲಕ್ಕಿಂತ ವಿಶೇಷವೆಂದರೆ, ಪತ್ರಿಕೆಗಳೇ ಇಂದು ಫೇಸ್‌ಬುಕ್, ಬ್ಲಾಗ್‌ಗಳನ್ನು ಮೊರೆ ಹೋಗಿ ಅಲ್ಲಿಂದ ಬರಹಗಳನ್ನು ಎತ್ತುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕೆಂದರೆ ಎಲ್ಲ ಬರಹಗಾರರೂ ತಮ್ಮ ತಮ್ಮ ಬ್ಲಾಗ್‌ಗಳನ್ನು ರಚಿಸಿಕೊಂಡಿದ್ದಾರೆ. ಫೇಸ್‌ಬುಕ್‌ಗಳಲ್ಲಿ ಬರೆಯುತ್ತಿದ್ದಾರೆ. ಯಾವುದೋ ಪತ್ರಿಕೆಗಳು ತಮ್ಮ ಬರಹಗಳನ್ನು ಸೆನ್ಸಾರ್ ಮಾಡಿದೆ ಎಂದು ಮುಖಮುಚ್ಚಿ ಖಿನ್ನರಾಗಬೇಕಾದದ್ದಿಲ್ಲ. ನನ್ನ ಬರಹ ಚೆನ್ನಾಗಿದ್ದರೆ ನನಗೆ ಓದುಗರು ಇದ್ದೇ ಇದ್ದಾರೆ ಎನ್ನುವ ಆತ್ಮವಿಶ್ವಾಸವನ್ನು ಕವಿಗಳು, ಕತೆಗಾರರು ತಮ್ಮದಾಗಿಸಿಕೊಂಡಿದ್ದಾರೆ. ಒಂದು ರೀತಿಯಲ್ಲಿ ‘ಎಲ್ಲ ಓದುಗರೂ ಈ ದಿನಗಳಲ್ಲಿ ಒಂದೊಂದು ಪತ್ರಿಕೆ’ಗಳಾಗಿದ್ದಾರೆ. ಈ ಹಿಂದಿನಂತೆ ಸುಳ್ಳುಗಳನ್ನು ಮೂರು ಬಾರಿ ಬರೆದು ಸತ್ಯ ಮಾಡುವ ಸ್ವಾತಂತ್ರವನ್ನು ಪತ್ರಿಕೆಗಳು ಕಳೆದುಕೊಂಡಿವೆ. ಫೇಸ್‌ಬುಗ್, ಬ್ಲಾಗ್ ಮತ್ತು ವೆಬ್‌ಸೈಟ್‌ಗಳು ಪರ್ಯಾಯ ಮಾಧ್ಯಮವಾಗಿ ಕೆಲಸ ಮಾಡುತ್ತಿವೆ.
ಫೇಸ್‌ಬುಕ್‌ನಲ್ಲಿ ಬರೆಯುತ್ತಿರುವವರನ್ನು ಕೆಲವರು ‘ಫೇಸ್‌ಬುಕ್’ ಕವಿಗಳು ಎಂದು ವ್ಯಂಗ್ಯವಾಡುವುದಿದೆ. ಹಿಂದೆ ಪತ್ರಿಕೆಗಳ ಮ್ಯಾಗಜಿನ್‌ಗಳಲ್ಲಿ ಕವಿತೆಗಳನ್ನು ಬರೆಯುತ್ತಿರುವವರು ‘ಮ್ಯಾಗಜಿನ್’ ಕವಿಗಳು ಎಂದೂ ಗಂಭೀರ ಸಾಹಿತಿಗಳಿಂದ ವ್ಯಂಗ್ಯಕ್ಕೀಡಾಗಿದ್ದರು. ವರ್ಷಕ್ಕೊಂದೋ, ಎರಡು ವರ್ಷಕ್ಕೊಂದೋ ಪುಸ್ತಕಗಳನ್ನು ಗಂಭೀರವಾಗಿ ಬಿಡುಗಡೆ ಮಾಡಿ, ಅದಕ್ಕೆ ಬಗ್ಗೆ ಇನ್ನೊಬ್ಬ ಗಂಭೀರ ವಿಮರ್ಶಕ ಪೌರೋಹಿತ್ಯ ವಹಿಸುವುದೇ ಸಾಹಿತ್ಯ ಎಂದು ಈ ಕಾಲದಲ್ಲೂ ಗಂಭೀರವಾಗಿ ನಂಬಿದವರಿದ್ದಾರೆ. ಇದೊಂದು ರೀತಿಯಲ್ಲಿ ಶ್ರೇಷ್ಠತೆಯ ವ್ಯಸನ. ಫೇಸ್‌ಬುಕ್, ಪತ್ರಿಕೆಗಳು ಇದ್ದಂತೆಯೇ ಪುಸ್ತಕಗಳು ಕೂಡ ಒಂದು ಮಾಧ್ಯಮ. ಓದುಗರನ್ನು ತಲುಪುವ ವಿವಿಧ ಮಾಧ್ಯಮಗಳನ್ನು ಗರಿಷ್ಠವಾಗಿ ಬಳಸಿಕೊಂಡಂತೆ ಸಾಹಿತ್ಯದಲ್ಲಿ ಹೆಚ್ಚು ಹೆಚ್ಚು ಕ್ರಿಯಾಶೀಲತೆ ಸಾಧ್ಯ. ಫೇಸ್‌ಬುಕ್ ಎನ್ನುವುದು ಒಂದು ಪ್ರಕಾರವಲ್ಲ. ಆಧುನಿಕ ಕಾಲದಲ್ಲಿ ಅದೊಂದು ಶಕ್ತಿಶಾಲಿ ಮಾಧ್ಯಮ. ಕವಿಗಳು ಮಾತ್ರವಲ್ಲ, ಬೇರೆ ಬೇರೆ ರಾಜಕೀಯ ಶಕ್ತಿಗಳೂ ಕೂಡ ಅದನ್ನು ನಿಧಾನಕ್ಕೆ ಆಶ್ರಯಿಸಿಕೊಳ್ಳುತ್ತಿವೆ. ಹೀಗಿರುವಾಗ ಕವಿಗಳಿಗೆ ಅದು ಅಸ್ಪೃಶ್ಯವಾಗಬಾರದು.
ಫೇಸ್‌ಬುಕ್‌ನಲ್ಲಿ ಎಲ್ಲರೂ ಬರೆಯುತ್ತಾರೆ ಎನ್ನುವುದೇ ಗಂಭೀರ ಕವಿಗಳ ಚಿಂತೆ. ಕವಿತೆಯೆನ್ನುವುದು ಇಂಥವರೇ ಬರೆಯಬೇಕು ಎನ್ನುವುದಕ್ಕೆ ಅದೇನೂ ಧಾರ್ಮಿಕ ಶಾಸ್ತ್ರವಲ್ಲ. ಫೇಸ್‌ಬುಕ್‌ನಲ್ಲಿ ಬರೆಯುತ್ತಿರುವ ಹುಡುಗರು ಈ ಹಿಂದೆಯೂ ಬರೆಯುತ್ತಿದ್ದರು. ಆದರೆ ಅದನ್ನು ಓದುಗರ ಮುಂದಿಡಲು ಅವರಿಗೆ ಮಾಧ್ಯಮಗಳು ದಕ್ಕುತ್ತಿರಲಿಲ್ಲ. ಇಂದು ಅವರಿಗೆ ಫೇಸ್‌ಬುಕ್ ಸಾಮಾಜಿಕ ತಾಣ ಸಿಕ್ಕಿದೆ. ಬ್ಲಾಗ್‌ಗಳನ್ನು ಮಾಡಿಕೊಂಡು ತಮ್ಮ ಬರಹಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಯಾರು ಚೆನ್ನಾಗಿ ಬರೆಯುತ್ತಾರೆಯೋ ಅವರೆಲ್ಲ ಫೇಸ್‌ಬುಕ್‌ನಲ್ಲಿ ಮಾತ್ರವಲ್ಲ, ಅದರಾಚೆಗೂ ಉಳಿದು ಬೆಳೆಯುತ್ತಾರೆ. ಫೇಸ್‌ಬುಕ್‌ಗಳು ಸಾಹಿತ್ಯ ಚಟುವಟಿಕೆಗಳಿಗೆ ಇನ್ನಷ್ಟು ಜಾಗವನ್ನು ಮಾಡಿಕೊಟ್ಟಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಸಾಹಿತ್ಯಾಸಕ್ತರ, ಭಾಷಾಸಕ್ತರ ಕರ್ತವ್ಯವಾಗಿದೆ. ಜವಾಬ್ದಾರಿಯಾಗಿದೆ.
 ಕುಣಿಯಲಾರದವಳು ನೆಲ ಡೊಂಕು ಎಂದಳಂತೆ. ಫೇಸ್‌ಬುಕ್‌ನ್ನು ಬಳಸಲಾಗದ ಕೆಲವು ಹಿರಿಯರು ಇದೀಗ ಕೈ ಕೈ ಹಿಸುಕಿಕೊಂಡು ‘ಅದರಲ್ಲಿ ರಕ್ತ ಇಲ್ಲ. ಮಾಂಸವಿಲ್ಲ...’ ಎಂದೆಲ್ಲ ಹೇಳಿ ಸಣ್ಣವರಾಗುತ್ತಿದ್ದಾರೆ. ಇದರ ಬದಲಿಗೆ ಕಿರಿಯರ ಸ್ನೇಹ ಮಾಡಿ, ಅವರಿಂದ ಫೇಸ್‌ಬುಕ್‌ನ್ನು, ಬ್ಲಾಗನ್ನು ಪರಿಣಾಮಕಾರಿಯಾಗಿ ಹೇಗೆ ಬಳಸುವುದು ಎನ್ನುವುದನ್ನು ತಿಳಿದುಕೊಂಡು ಅದಕ್ಕೆ ರಕ್ತ ಮಾಂಸವನ್ನು ನೀಡುವ ಪ್ರಯತ್ನ ಮಾಡಬೇಕು. ಈ ಪರ್ಯಾಯ ಮಾಧ್ಯಮವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಇನ್ನಷ್ಟು ವಿವೇಕಿಗಳಾಗಿ ಹೇಗೆ ಬಳಸಬಹುದು ಎನ್ನುವುದರ ಕಡೆಗೆ ಚಿಂತಕರು ಗಮನಕೊಡಬೇಕು. ಸಾಹಿತ್ಯಕ ಜಗತ್ತು ರಕ್ತ, ಮಾಂಸ ಕಳೆದುಕೊಂಡು ಅಪೌಷ್ಟಿಕ ಕೂಸಿನಂತಾಗಿರುವ ಈ ದಿನಗಳಲ್ಲಿ ಫೇಸ್‌ಬುಕ್‌ಗಳ ಮೂಲಕ ಯುವ ತರುಣ ಹೊಸ ಓದುಗ ಲೋಕವೊಂದನ್ನು ನಿರ್ಮಾಣ ಮಾಡುತ್ತಿರುವುದು ಅತ್ಯಂತ ಖುಷಿಯ ವಿಚಾರವಾಗಿದೆ. ಇದನ್ನು ಇನಷ್ಟು ರಚನಾತ್ಮಕವಾಗಿ ಹೇಗೆ ಸಾಹಿತ್ಯಲೋಕಕ್ಕೆ ಪೂರಕವಾಗಿಸಬಹುದು ಎನ್ನುವುದರ ಕುರಿತು ಲೇಖಕರು ಮಖ್ಯವಾಗಿ ಹಿರಿಯ ಲೇಖಕರು ತಮ್ಮ ಮಡಿ ಮೈಲಿಗೆಗಳಿಂದ ಹೊರಬಂದು ಯೋಚಿಸಬೇಕಾಗಿದೆ.

Monday, August 11, 2014

ಮಂಗಳೂರಿನ ಮೊತ್ತಮೊದಲ ಮತಾಂತರ!!

 ಮಂಗಳೂರು ಸಮಾಚಾರ (1843ರಲ್ಲಿ) ಕರ್ನಾಟಕದ ಮೊತ್ತ ಮೊದಲ ಪತ್ರಿಕೆ ಎಂದು ಗುರುತಿಸಿಕೊಂಡಿದೆ. ಇದರ 13ನೆ ಸಂಚಿಕೆಯಲ್ಲಿ ಪ್ರಕಟವಾದ ಒಂದು ಸುದ್ದಿ ನನ್ನನ್ನು ತೀವ್ರವಾಗಿ ಸೆಳೆಯಿತು. ಮಂಗಳೂರಿನಲ್ಲಿ ಬಾಷೆಲ್ ಮಿಶನ್ ನಡೆಸಿದ ಮೊತ್ತ ಮೊದಲ ಮತಾಂತರ ಪ್ರಕರಣವೊಂದು ಈ ಸಂಚಿಕೆಯಲ್ಲಿ ವರದಿಯಾಗಿತ್ತು. ಮತ್ತು ಅದು ಅಂದು ಮಂಗಳೂರಿನಲ್ಲಿ ತೀವ್ರ ಉದ್ವಿಗ್ನ ವಾತಾವರಣವನ್ನೂ ಸಷ್ಟಿಸಿತ್ತು. ಸಾಧಾರಣವಾಗಿ ಮತಾಂತರ ಎಂದಾಗ ನಮ್ಮ ಕಣ್ಮುಂದೆ ನಿಲ್ಲುವುದು ದಲಿತರು. ಆದರೆ ಈ ಪ್ರಪ್ರಥಮ ಪ್ರಕರಣದಲ್ಲಿ ಮತಾಂತರವಾದ ಮೂವರೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ವಿಶೇಷವೆಂದರೆ, ಅವರು ತಾವು ಮತಾಂತರವಾಗಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಈ ಘಟನೆಯಲ್ಲಿ ಇನ್ನೂ ಒಂದು ವಿಶೇಷವಿದೆ. ಮತಾಂತರವಾದವರು ಬ್ರಾಹ್ಮಣರು, ಮತಾಂತರ ಮಾಡಿಸಿದ್ದು ಕ್ರೈಸ್ತ ಮಿಶನರಿಗಳು. ಆದರೆ ದುಷ್ಕರ್ಮಿಗಳು ಹಂದಿಯನ್ನು ಕಡಿದು ಹಾಕಿದ್ದು ಮಾತ್ರ ಮಸೀದಿಯ ಕೆರೆಗೆ. ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಮಾಚಾರ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಇದ್ದಂತೆಯೇ ಇಲ್ಲಿ ನಿಮ್ಮ ಮುಂದಿಟ್ಟಿದ್ದೇನೆ. ಆ ಕಾಲಘಟ್ಟದ ಪತ್ರಿಕಾ ಭಾಷೆಯನ್ನು ಕೂಡ ನೀವು ಗಮನಿಸಬೇಕಾಗಿದೆ.

ಮಂಗಳೂರು ಸಮಾಚಾರ 1844(13ನೇ ಸಂಚಿಕೆ)

ಇಂಗ್ಲಿಷ್ ಶಾಲೆಯಲ್ಲಿ ಓದುತ್ತಿದ್ದ ಮೂವರು ಬ್ರಾಹ್ಮಣರು, ಕ್ರೈಸ್ತ ಮತವನ್ನು ಅವಲಂಬಿಸಿದಾಗ ಮಂಗಳೂರಲ್ಲಿ ತುಂಬಾ ಗಲಾಟೆಯಾಯಿತು. ಬಾಷೆಲ್ ಮಿಶನ್ನಿನ ಪ್ರಥಮ ಮತಾಂತರ ಕಾರ್ಯವಿದು.
ಅವರನ್ನು ಹಿಂದೂ ಧರ್ಮಕ್ಕೆ ತಿರುಗಿಸಬೇಕೆಂದು ಊರವರು ತುಂಬಾ ಪ್ರಯತ್ನ ಮಾಡಿದವರಾದರೂ ಮತಾಂತರ ಹೊಂದಿದ್ದ ಈ ತರುಣರು ವಿಮುಖರಾಗಲಿಲ್ಲವಂತೆ. ಆಗ ‘‘ಈ ದುಷ್ಟ ಜನರು ಊರಲ್ಲಿ ಏನಾದರೂ ಗುಬಾರು ಎಬ್ಬಿಸಬೇಕೆಂಬ ಉಮೇದಿನಿಂದ ಮುಸಲ್ಮಾನದವರಿಗೆ ಅತೀ ವಿರೋಧವಾಗಿರುವಂಥ ಸೌಹಾರ್ದ ಹಂದಿಯನ್ನು ರಾತ್ರಿಯಲ್ಲಿ ಕೊಂದು ಹಾಕಿದರು. ಆಗ ಜಿಲ್ಲಾ ಮೆಜಿಸ್ಟ್ರೇಟ್ ಸಾಹೇಬನು ಕೂಡಲೇ ಈ ರೀತಿಯ ಪ್ರಕಟನೆಯನ್ನು ಹೊರಡಿಸಿದನು.

ಮುಸಲ್ಮಾನ ಜನರಿಗೆ ಚಾಳಿಸುವ ಇರ್ಯಾದೆಯಿಂದ ಈ ಕೆಟ್ಟ ಕತ್ಯ ಮಾಡಿರುತ್ತಾರೆ ಎಂಬುದರಲ್ಲಿ ಏನೂ ಅನುಮಾನವಿಲ್ಲ. ಈ ವಿಷಯದಲ್ಲಿ ಕೂಲಂಕುಷ ತನಿಖೆ ಕೂಡ್ಲೆ ಮಾಡಲಾದಿತ್ತು. ಈ ದುಷ್ಕೃತ್ಯ ನಡೆಸಿದ ವಾ ತಲಾಕಿಗೆ ಸಾಕಾಗುವ ವರ್ತಮಾನ ಯಾರಾದರೂ ಕೊಟ್ಟಿದ್ದಾದರೆ, ಅಂಥ ಮನುಷ್ಯನಿಗೆ ಐದು ನೂರು ರೂಪಾಯಿ ಕೊಡಲಾದೀತು. ಆದುದರಿಂದ ಮುಸಲ್ಮಾನ ಯಾವುತ್ತೂ ಜನರು ದುರಾಲೋಚನೆ ಜನರ ದಗೆ ಬೋಧನೆಗೆ ಒಳಗಾಗದೆ ನಿಧಾನದಲ್ಲಿ ಇರಬೇಕು ಎಂತ ಅಪೇಕ್ಷಿಸುತ್ತೇವೆ, ಈ ಪ್ರಕಾರ ಸಮಾಧಾನ ಮಾಡದೆ ತಂಟೆ ಏನಾದರೂ ನಡೆಸಿದ್ದಾದರೆ ವ್ಯರ್ಥ ಬಹಳ ದಣಿಕೊಳ್ಳಬೇಕಾದೀತು.
ಮೆಜಿಸ್ಟ್ರೇಟ್ ಬ್ಲೆಅರ್ ಸಾಹೇಬರು ಅಷ್ಟಕ್ಕೆ ಮುಗಿಸದೆ, ಮುಸಲ್ಮಾನರ ಹಾಗೂ ಮಾಪಿಳ್ಳೆಯವರ ಮುಖಂಡರನ್ನು ಕರೆದು, ಅಪರಾಧಿಯನ್ನು ಎಂತಿದ್ದರೂ ಹುಡುಕುವೂದಾಗಿಯೂ, ಆ ಕೆರೆಯನ್ನೂ ಸರಕಾರದ ವದಿಯಿಂದ, ಸಾಪು ಮಾಡಿಸಿ ಕೊಡುವುದಾಗಿಯೂ ಆಶ್ವಾಸನವಿತ್ತರು.

Tuesday, August 5, 2014

ನೀರಿನ ಬೇರು

 ಕೊಳವೆ ಬಾವಿಯೊಳಗೆ ಬಿದ್ದ
ಮಗುವೊಂದನ್ನು
ಹೊರ ತೆಗೆಯಲಾಗದೆ 

ಯಂತ್ರಗಳೆಲ್ಲ ಕಣ್ಣೀರು ಸುರಿಸುತ್ತಿದ್ದವು 

ತಂದೆ ಹೇಳಿದ, ಅಗೆದದ್ದು ಸಾಕು
ಇನ್ನಷ್ಟು ಬಗೆದರೆ ನನ್ನ ಜಮೀನು
ಸರ್ವನಾಶ ವಾಗತ್ತೆ

ಕೊಳವೆ ಬಾವಿಗೆ ಚಪ್ಪಡಿ ಕಲ್ಲು ಮುಚ್ಚಿ
ಹುಡುಗನನ್ನು ಅಲ್ಲೇ
ದಫನ ಮಾಡಲಾಯಿತು


ಘಟನೆ ನಡೆದು ಅದೆಷ್ಟೋ ದಿನಗಳಾಗಿವೆ
ಈಗೀಗ ಒಮ್ಮೊಮ್ಮೆ ಆ ಚಪ್ಪಡಿ ಕಲ್ಲನ್ನು
ಯಾರೋ ಅಲುಗಾಡಿಸಿದಂತೆ,
ಒಳಗಿಂದ ಮೊರೆಯಿಟ್ಟಂತೆ
ಊರಿನ ಜನರ ಅನುಭವ !


ಜಮೀನು, ತೋಟಗಳೆಲ್ಲ
ಹನಿ ನೀರಿನ ಪಸೆಯೂ ಇಲ್ಲದೆ
ಸುಟ್ಟು ಬೂದಿಯಾಗಿವೆ
ಹುಡುಗ ಆ ಕೊಳವೆಯ ಮೂಲಕ
ದಾರಿ ಮಾಡುತ್ತಾ ಸಾಗಿದ್ದಾನೆ
ಅಂತರ್ಜಲ ಅರಸುತ್ತಾ...
ಒಂದಲ್ಲ ಒಂದು ದಿನ ಅವನು
ಮರಳಿ ಬರುವನೆಂದು
ತನ್ನೂರಿಗೆ ನೀರಿನ ಬೇರು ತರುವನೆಂದು
ಊರು ಅವನ ನಿರೀಕ್ಷೆಯಲ್ಲಿದೆ 


ಭೂಮಿಗೊಮ್ಮೆ ಕಿವಿ ಹಚ್ಚಿ ನೋಡಿ
ಅದರ ನಾಭಿಯಿಂದ
ಹೊರಡುತ್ತಿರುವ ಅವನ ಹೆಜ್ಜೆ ಸಪ್ಪಳ
ನಿಮ್ಮ ಎದೆಯೊಳಗೂ ಪ್ರತಿಧ್ವನಿಸೂದು !

Friday, August 1, 2014

ಪತ್ರಿಕಾ ಮನೆಯೊಳಗಿನ ದುರ್ಘಟನೆಗಳು

ದುರ್ಘಟನೆ-1
ನೀವು ಇದನ್ನು ನಂಬಿದರೆ ನಂಬಿ. ಬಿಟ್ಟರೆ ಬಿಡಿ.
ಪತ್ರಿಕೆಯ ಮನೆಯೊಳಗೇ ಕೆಲವೊಮ್ಮೆ ಉಪ ಸಂಪಾದಕರ ಕ್ರೀಯೇಟಿವಿಟಿ ಯಿಂದ ಹತ್ತು ಹಲವು ಅನಾಹುತಗಳಾಗುತ್ತೆ.
ಮತ್ತು ಅದರ ಬಲಿಪಶು ಓದುನಾಗಿರುತ್ತಾನೆ.
ತುಂಬಾ ವರ್ಷಗಳ ಹಿಂದೆ ನಾನೊಂದು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆದ ಅನುಭವ.
ಉಪ ಸಂಪಾದಕರು ಗಂಭೀರವಾಗಿ ಯೋಚನೆ ಮಾಡುತ್ತಾ ಕೂತಿದ್ದರು.
ಏನು ಎಂದು ಕೇಳಿದೆ "ಒಂಟಿ ಹೆಣ್ಣಿನ ಮೇಲೆ ೯ ಜನ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಇದರ ಭೀಕರತೆಯನ್ನು ಹೇಳುವ ತಲೆಬರಹ ಬೇಕಿತ್ತು. ಹೊಳೆಯುತ್ತಿಲ್ಲ" ಎಂದ.
"ಬರ್ಬರ ಅತ್ಯಾಚಾರ" ಎಂದು ಬರೀರಿ ಎಂದೆ.
"ಆದರೆ ಇದು ಅದಕ್ಕಿಂತಲೂ ಭೀಕರವಾದುದು. ಪಂಚ್ ಸಾಕಾಗಲ್ಲ" ಎಂದ. ಸಾಯಲಿ ಎಂದು ನಾನಲ್ಲಿಂದ ತೊಲಗಿದೆ. ಬಂದ ಹೋದವರಲ್ಲೆಲ್ಲ ಅವನು ಇಡೀ ದಿನ ತಲೆಬರಹಕ್ಕಾಗಿ ಯಾಚಿಸುತ್ತಿದ್ದ.
ಅದೇನು ಹೊಳೆಯಿತೋ, ಅದೇನು ಬರೆದನೋ ಗೊತ್ತಿಲ್ಲ.
ಮರುದಿನ ಪತ್ರಿಕೆಯಲ್ಲಿ ತಲೆಬರಹ ಹೀಗೆ ಪ್ರಕಟವಾಗಿತ್ತು "ಯುವತಿಯ ಮೇಲೆ ಒಂಬತ್ತು ಮಂದಿಯಿಂದ ರೋಮಾಂಚಕ ಅತ್ಯಾಚಾರ"
ಮರು ದಿನ ಕಚೇರಿ ಪ್ರವೇಶಿಸಿದಾಗ ಪ್ರಧಾನ ಸಂಪಾದಕರು ಆ ಉಪಸಂಪಾದಕನ ಮೇಲೆ ರೋಮಾಂಚಕವಾಗಿ ಹರಿ ಹಾಯುತ್ತಿದ್ದರು.


ದುರ್ಘಟನೆ-2
  ಇದು ಜನವಾಹಿನಿ ಪತ್ರಿಕೆಯಲ್ಲಿದ್ದಾಗ ನಡೆದ ಘಟನೆ. ಆಗ ಕಾರ್ಗಿಲ್ ಯುದ್ಧದ ಸಂದರ್ಭ. ದೇಶಪ್ರೇಮ ನಮ್ಮ ಧಮನಿ ಧಮನಿಯಲ್ಲಿ ಕುದಿಯುತ್ತಿರುವ ಹೊತ್ತು. ಈ ದೇಶದ ಮುಸ್ಲಿಮರಿಗೋ ತಮ್ಮ ದೇಶಪ್ರೇಮವನ್ನು ಪದೇ ಪದೇ ಸಾಬೀತು ಮಾಡಲೇಬೇಕಾದಂತಹ ಪರಿಸ್ಥಿತಿ. ಆದುದರಿಂದ ಬೀದಿ ಬೀದಿಯಲ್ಲಿ ವಿವಿಧ ಧಾರ್ಮಿಕ ಸಂಘಟನೆಗಳು ಪಾಕಿಸ್ತಾನದ ವಿರುದ್ಧ ಮೆರವಣಿಗೆಗಳನ್ನು ಹಮ್ಮಿಕೊಂಡು, ಕಾರ್ಗಿಲ್ ನಿಧಿಯನ್ನು ಸಂಗ್ರಹಿಸಿ ಪ್ರಧಾನಿ ನಿಧಿಗೆ ಅರ್ಪಿಸುತ್ತಿದ್ದರು. ಬಹುಶಃ ಶಿವಮೊಗ್ಗದಲ್ಲಿರಬೇಕು. ಅಲ್ಲಿನ ಮುಸ್ಲಿಮ್ ಧಾರ್ಮಿಕ ಸಂಘಟನೆಯೊಂದು ಅಂತಹದೇ ಒಂದು ದೊಡ್ಡ ಮೆರವಣಿಗೆ ನಡೆಸಿ, ಕಾರ್ಗಿಲ್ ನಿಧಿ ಸಂಗ್ರಹಿಸಿ ಜಿಲ್ಲಾಡಳಿತದ ಮೂಲಕ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯವರ ನಿಧಿಗೆ ಅರ್ಪಿಸಿತು. ಅದನ್ನು ಅಲ್ಲಿನ ವರದಿಗಾರರು ಫ್ಯಾಕ್ಸ್ ಮೂಲಕ ಕಚೇರಿಗೆ ತಲುಪಿಸಿಯೂ ಆಯಿತು. ಫ್ಯಾಕ್ಸನ್ನು ಕಂಪೋಸ್ ಮಾಡುವಾಗ ಉಪಸಂಪಾದಕರೊಬ್ಬರ ಕೈಯಲ್ಲಿ ಭಾರೀ ಅನಾಹುತವೊಂದು ನಡೆದು ಹೋಯಿತು. ‘....ಇಂತಹ ಸಂಘಟನೆಯವರು ಕಾರ್ಗಿಲ್ ನಿಧಿ ಸಂಗ್ರಹಿಸಿ ಪ್ರಧಾನಿ ನವಾಜ್ ಶರೀಫ್ ಅವರ ನಿಧಿಗೆ ಅರ್ಪಿಸಿದರು’ ಎಂದು ಬರೆದು ಬಿಟ್ಟರು. ವಾಜಪೇಯಿ ಹೆಸರಿನ ಬದಲಿಗೆ ನವಾಜ್‌ಶರೀಫ್ ಎಂದು ಕಂಪೋಸ್ ಮಾಡಿ ಬಿಟ್ಟಿದ್ದರು. ಆ ಪ್ರಮಾದ ಹೇಗಾಯಿತು ಎನ್ನುವುದು ಮಾತ್ರ ಒಂದು ಚೋದ್ಯವೇ ಆಗಿದೆ. ಆಗ ಪ್ರೂಫ್‌ರೀಡರ್‌ಗಳು ಎನ್ನುವ ಹುದ್ದೆ ಇರಲಿಲ್ಲ. ಪ್ರೂಫ್‌ರೀಡರ್ ಕೆಲಸವನ್ನು ಉಪಸಂಪಾದಕನೇ ನಿರ್ವಹಿಸಬೇಕಾಗಿತ್ತು. ಅದೇ ಉಪಸಂಪಾದಕರು ಅದಕ್ಕೆ ಪ್ರೂಫ್ ಹಾಕಿ ಕಳುಹಿಸಿ ಬಿಟ್ಟರು. ಮರುದಿನ ಮುದ್ರಣ ಆಗಿಯೇ ಬಿಟ್ಟಿತು.
ಕೇಳಬೇಕೆ? ಸಂಘಪರಿವಾರದ ಮುಖಂಡರು ಪತ್ರಿಕಾಗೋಷ್ಠಿ ಕರೆದು ಮುಸ್ಲಿಮರ ದೇಶದ್ರೋಹವನ್ನು ಖಂಡಿಸಿಯೇ ಬಿಟ್ಟರು. ಸ್ಥಳೀಯ ಠಾಣೆಯಲ್ಲಿ ದೂರೂ ದಾಖಲಾಯಿತು. ಪತ್ರಿಕೆಯ ಸಂಪಾದಕರಿಗೋ ತಾವೇ ಯುದ್ಧಭೂಮಿಯಲ್ಲಿ ಸಿಲುಕಿಕೊಂಡ ಅನುಭವ. ಕೊನೆಗೂ ಅದೇನೋ ಸ್ಪಷ್ಟೀಕರಣ ನೀಡಿ, ಮಾತುಕತೆ ನಡೆಸಿ ಪ್ರಕರಣವನ್ನು ಮುಗಿಸಲಾಯಿತು.


ಘಟನೆ-3
ಇದೂ ಜನವಾಹಿನಿ ಪತ್ರಿಕೆಯಲ್ಲಿದ್ದಾಗಲೇ ನಡೆದ ಘಟನೆ. ಆಗ ಪತ್ರಿಕೆಗೊಬ್ಬರು ಜನರಲ್ ಮ್ಯಾನೇಜರ್ ಇದ್ದರು. ಅವರು ನಿವತ್ತ ಕರ್ನಲ್ ಆಗಿದ್ದರು. ಭಯಂಕರ ಶಿಸ್ತಿನವರು ಕೂಡ. ಆದರೆ ಅವರಿಗೆ ಸರಿಯಾಗಿ ಕನ್ನಡ ಬರೋದಿಲ್ಲ. ಹೀಗಿದ್ದರೂ ಅವರು ಸಂಪಾದಕೀಯ ವಿಭಾಗದೊಳಗೆ ಆಗಾಗ ತಲೆ ಹಾಕುತ್ತಿದ್ದರು. ಯಾರಾದರೂ ತಪ್ಪುಗಳ ಬಗ್ಗೆ ದೂರು ನೀಡಿದರೆ ತಕ್ಷಣ ಸಂಪಾದಕೀಯ ಮನೆಯೊಳಗೆ ಬಂದು ಅದನ್ನು ವಿಚಾರಿಸುವುದು, ಸಂಪಾದಕೀಯ ವಿಭಾಗಕ್ಕೆ ಬಂದ ಲಕೋಟೆಗಳನ್ನು ಒಡೆಯುವುದು, ಕೆಲವನ್ನು ಸೆನ್ಸಾರ್ ಮಾಡುವುದು ಇತ್ಯಾದಿಗಳೆಲ್ಲ ನಡೆಯುತ್ತಿತ್ತು. ಪ್ರಧಾನ ಸಂಪಾದಕರಿಗಿಂತ ಈ ಮ್ಯಾನೇಜರ್‌ಗೇ ಉಪಸಂಪಾದಕರುಗಳು ಹೆಚ್ಚು ಹೆದರುತ್ತಿದ್ದರು.
ಒಂದು ದಿನ ಸಂಪಾದಕೀಯ ವಿಭಾಗದಲ್ಲಿ ಉಪಸಂಪಾದಕರೊಬ್ಬರಿಂದ ಒಂದು ದೊಡ್ಡ ಅನಾಹುತವಾಯಿತು. ಸೋನಿಯಾಗಾಂಧಿ ಇರುವ ಫೋಟೋ ಒಂದಕ್ಕೆ ಕ್ಯಾಪ್ಶನ್ ಬರೆಯುವ ಸಂದರ್ಭದಲ್ಲಿ, ಸೋ ಬದಲಿಗೆ ಯೋ (ನಂಬಿದರೆ ನಂಬಿ, ಬಿಟ್ಟರೆ ಬಿಡಿ) ಎಂದು ಕಂಪೋಸ್ ಮಾಡಿ ಬಿಟ್ಟರು. ಸ ಮತ್ತು ಯ ಕೀಲಿಗಳು ತುಂಬಾ ಹತ್ತಿರ ಇದ್ದ ಪರಿಣಾಮವಾಗಿ ಆದ ಅನಾಹುತ ಇದು. ದುರದಷ್ಟಕ್ಕೆ ಎಲ್ಲರ ಕಣ್ಣನ್ನು ತಪ್ಪಿಸಿ ಅದು ಮುದ್ರಣವಾಗಿಯೂ ಬಿಟ್ಟಿತು.
ಮರುದಿನ ಕರ್ನಲ್ ಸಾಹೇಬರು ಬಂದು ಕೂತದ್ದಷ್ಟೇ ಅವರಿಗೊಂದು ಫೋನ್ ಬಂತು. ಶಬ್ದವನ್ನು ಹೇಳಲು ಮುಜುಗರವಾಗುವುದರಿಂದ ‘‘ನಿಮ್ಮ ಪತ್ರಿಕೆಯಲ್ಲಿ ಸೋನಿಯಾ ಹೆಸರಲ್ಲಿ ಸೋ ಬದಲಿಗೆ ಯೋ ಎಂದು ಮುದ್ರಣವಾಗಿದೆ’’ ಎಂದು ಓದುಗ ದೊರೆ ದೂರು ಹೇಳಿದರು.
ಕರ್ನಲ್ ಸಾಹೇಬರಿಗೆ ಅಂದು ಯಾಕೋ ಸಂಪಾದಕೀಯ ವಿಭಾಗದ ಮೇಲೆ ಕರುಣೆ ಉಕ್ಕಿತ್ತು ‘‘ಒಂದು ಸಣ್ಣ ಅಕ್ಷರ ಆಚೆ ಈಚೆ ಆಗುವುದು ಸಹಜ. ಅದನ್ನೆಲ್ಲಾ ದೊಡ್ಡದು ಮಾಡಬಾರದು....’’ ಎಂದೆಲ್ಲ ತಮ್ಮ ಮಿಲಿಟರಿ ಇಂಗ್ಲಿಷ್‌ನಲ್ಲಿ ಫೋನ್ ಮಾಡಿದ ಓದುಗರ ಮೇಲೆಯೇ ಹರಿ ಹಾಯ್ದರು. ವಿಪರ್ಯಾಸವೆಂದರೆ, ಈ ಶಬ್ದ ಬದಲಾವಣೆಯಿಂದಾಗಿ ಆದ ಅರ್ಥ ಬದಲಾವಣೆ ಅವರಿಗೆ ಗೊತ್ತೇ ಇರಲಿಲ್ಲ. ಅಷ್ಟರಲ್ಲಿ ಯಾರೋ ಬಂದು, ಸೋ ಬದಲಿಗೆ ಯೋ ಬಳಸಿದರೆ ಏನಾಗುತ್ತದೆ ಎನ್ನುವುದನ್ನು ವಿವರಿಸಿದ್ದೇ, ಕುರ್ಚಿಯಿಂದ ಒಮ್ಮೆಲೆ ಹಾರಿಬಿದ್ದಿದ್ದರು. ಕರ್ನಲ್ ಸೀದಾ ಸಂಪಾದಕೀಯ ವಿಭಾಗಕ್ಕೆ ಹೋದವರೇ ಫೈರಿಂಗ್ ಆರಂಭಿಸಿದರು.


ದುರ್ಘಟನೆ-4

ಇದೂ ನಾನೊಂದು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವಾಗಲೇ ನಡೆದಿರುವುದು. ಪತ್ರಿಕೆಗೆ ಹೊಸ ವಿಶೇಷ ಸಂಪಾದಕರೊಬ್ಬರನ್ನು ದೊಡ್ಡ ಪತ್ರಿಕೆಯೊಂದರಿಂದ ತರಿಸಲಾಯಿತು. ಅವರು ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ಸುಮಾರು 15 ವರ್ಷ ಕೆಲಸ ಮಾಡಿದ್ದರು. ಆದರೆ ಮುಖಪುಟ ನಿರ್ವಹಿಸಿ ಅವರಿಗೆ ಅನುಭವವಿಲ್ಲ. ತಲೆಬರಹಗಳನ್ನು ನೀಡಿ ಅದೇನೇನೋ ಎಡವಟ್ಟುಗಳನ್ನು ಮಾಡುತ್ತಿದ್ದರು.
 ಅದೇ ಸಂದರ್ಭದಲ್ಲಿ ಅಹ್ಮದಾಬಾದ್‌ನಲ್ಲಿ ಮಾಜಿ ಸಚಿವ ಹರೇನ್ ಪಾಂಡ್ಯ ಅವರ ಹತ್ಯೆಯಾಯಿತು. ‘ಪಂಚ್ ಬೇಕು...ಹೆಡ್ಡಿಂಗ್ ಕ್ಯಾಚ್ ಆಗಬೇಕು...’ ಎಂದೆಲ್ಲ ಹೇಳುತ್ತಾ ಹೇಳುತ್ತಾ ‘ಹರೇನ್ ಪಾಂಡ್ಯಾ ಢಮಾರ್’ ಎಂಬ ಲೀಡ್ ತಲೆಬರಹವನ್ನು ಕೊಟ್ಟೇ ಬಿಟ್ಟರು. ಟ್ಯಾಬ್ಲಾಯಿಡ್‌ಗಳು ಬಳಸುವ ಈ ತಲೆಬರಹವನ್ನು ಒಬ್ಬ ಮಾಜಿ ಸಚಿವನ ಹತ್ಯೆಗೆ ಅವರು ಬಳಸಿದ್ದು ನಿಜಕ್ಕೂ ಆಘಾತದ ವಿಷಯ. ನಾವ್ಯಾರೂ ತುಟಿ ಬಿಚ್ಚುವಂತಿಲ್ಲ. ಪತ್ರಿಕೆಯಲ್ಲಿ ಇದು ಪ್ರಕಟವಾಗಿಯೇ ಬಿಟ್ಟಿತು.
ಕೆಲವೇ ದಿನಗಳಲ್ಲಿ ಈ ಸಂಪಾದಕರೂ ಪತ್ರಿಕಾ ಕಚೇರಿಯಿಂದ ‘ಢಮಾರ್’ ಆದರು.