Saturday, July 16, 2016

ಕಾಡಂಕಲ್ಲ್ ಮನೆ

ಈ ವರ್ಷ ನನ್ನ "ಇರುವೆ ಪ್ರಕಾಶನ''ದಿಂದ ನನ್ನದೇ ಕಾದಂಬರಿ "ಯುದ್ಧ" ಪ್ರಕಟಿಸ ಬೇಕು ಎಂದು ಯೋಜನೆ ರೂಪಿಸಿದ್ದೆ. 
ಆದರೆ ಇನ್ನೂ ಶೇಕಡಾ ೨೫ರಷ್ಟು ಬರೆಯುವ ಕೆಲಸ ಉಳಿದು ಬಿಟ್ಟಿದೆ. ಕಾದಂಬರಿ ಪೂರ್ತಿ ಮಾಡಿ ಮತ್ತೊಮ್ಮೆ ಅದನ್ನು ತಿದ್ದಿ ತೀಡುವಷ್ಟರಲ್ಲಿ ಈ ವರ್ಷ ಮುಗಿದೇ ಹೋಗಿ ಬಿಡಬಹುದು ಎನ್ನುವ ಭಯ ಇದೆ.

ಆದುದರಿಂದ ಈ ವರ್ಷ ನನ್ನ ಆತ್ಮೀಯರು, ಹಿರಿಯ ಕತೆಗಾರರು ಆಗಿರುವ ಮುಹಮ್ಮದ್ ಕುಳಾಯಿ ಅವರ "ಕಾಡಂಕಲ್ಲ್ ಮನೆ" ಕಾದಂಬರಿಯನ್ನು "ಇರುವೆ ಪ್ರಕಾಶನ''ದಿಂದ ಹೊರ ತರುವ ಆಲೋಚನೆ ಇದೆ. ಎಣಿಸಿದಂತೆ ಆದರೆ ನವೆಂಬರ್ ಹೊತ್ತಿನಲ್ಲಿ ಮುಹಮ್ಮದ್ ಕುಳಾಯಿ ಅವರ "ಕಾಡಂಕಲ್ ಮನೆ''ಯೊಳಗೆ ನೀವಿರುತ್ತೀರಿ. 
***
ಇರುವೆ ಪ್ರಕಾಶನದಿಂದ ಈಗಾಗಲೇ ಹೊರ ಬಂದಿರುವ ಎರಡು ಕೃತಿಗಳು
1. ಅಮ್ಮ ಹಚ್ಚಿದ ಒಲೆ-ಕವನ ಸಂಕಲನ- 100 ರೂ.
2. ನನ್ನ ಮಸೀದಿಯ ಧ್ವಂಸಗೈದವರಿಗೆ ಕೃತಜ್ಞ-ಸೂಫಿಯ ಕಣ್ಣಲ್ಲಿ ಹನಿಗಳು -75 ರೂ.

ಎಂದಿನಂತೆ ನಿಮ್ಮ ಪ್ರೀತಿ, ವಿಶ್ವಾಸವನ್ನು ನಿರೀಕ್ಷಿಸುವೆ.

ಸಹೃದಯರು ಈ ಕೆಳಗಿನ ವಿಳಾಸಕ್ಕೆ ಎಂ ಓ ಮಾಡಿ ಪುಸ್ತಕ ತರಿಸಿ ಕೊಳ್ಳ ಬಹುದು.ತಮ್ಮ ವಿಳಾಸವನ್ನು ಕೆಳಗಿನ ಇಮೇಲ್ iruveprakashana@gmail.com ಅಥವಾ ಮೊಬೈಲ್ ಗೆ ಮೆಸ್ಸೇಜ್ ಮಾಡಬಹುದು.ಕೊರಿಯರ್‌ನಲ್ಲಿ ಪುಸ್ತಕವನ್ನು ತಲುಪಿಸಲಾಗುತ್ತದೆ. ಅಂಚೆ ವೆಚ್ಚ ಉಚಿತ.

B.M. BASHEER
MARVEL APARTMENT,
FLAT NO. 301,
1ST CROSS, SHIVA NAGARA,
OPP. SHRINIVAS COLLAGE,
PANDESHWARA,
MANGALORE-575 001
MOBILE- 944 8835 621
*****
ಅಥವಾ ......
B.M. BASHEER
A/C-NO-3 0 9 2 8 2 4 1 6 9 9
STATE BANK OF INDIA
PORT ROAD, MANGALORE BRANCH
IFSC CODE-SBIN 0 0 0 0 8 7 1
MOBILE-944 8835 621
iruveprakashana@gmail.com

ಈ ಅಕೌಂಟಿಗೆ ಪುಸ್ತಕ ಹಣವನ್ನು ಜಮಾಗೊಳಿಸಿ, ತಮ್ಮ ವಿಳಾಸವನ್ನು ಈ ಮೇಲ್ ಮೂಲಕ ಅಥವಾ ಮೊಬೈಲ್ ಮೆಸೇಜ್ ಮೂಲಕ ನೀಡಿದರೆ, ಕೊರಿಯರ್‌ನಲ್ಲಿ ಪುಸ್ತಕವನ್ನು ತಲುಪಿಸಲಾಗುತ್ತದೆ. ಅಂಚೆ ವೆಚ್ಚ ಉಚಿತ.

‘ಇರುವೆ ಪ್ರಕಾಶನ’ ನನ್ನ ಹೊಸ ಕನಸು!
ಕವನ ಸಂಕಲನಗಳು ನನ್ನ ವಿಶೇಷ ಮಕ್ಕಳು!!
ಇವೆರಡೂ ನಿಮ್ಮಿಂದ ವಿಶೇಷ ಪ್ರೀತಿಯನ್ನು ಬೇಡುತ್ತಿವೆ.

Wednesday, July 13, 2016

ಝಾಕಿರ್ ನಾಯ್ಕ್ ನಿಷೇಧ ಯಾಕೆ ಬೇಡ?

ಝಾಕಿರ್ ನಾಯ್ಕ್  ಪ್ರಕಾರ ನಾನು ನರಕಕ್ಕೆ ಅರ್ಹ ವ್ಯಕ್ತಿ. ಇರಲಿ. ಝಾಕಿರ್ ನಾಯ್ಕ್ರಂಥವರು ಇರುವ ಸ್ವರ್ಗ ನನಗೆ ಬೇಕಾಗಿಲ್ಲ. ಆದರೂ ನಾನು ಝಾಕಿರ್ ನಾಯ್ಕ್ರನ್ನು ನಿಷೇಧಿಸಬೇಕು ಎಂದು ಒತ್ತಾಯಿಸೋದಿಲ್ಲ. ಯಾಕೆಂದರೆ, ನಾನು ನರಕಕ್ಕೆ ಅರ್ಹ ವ್ಯಕ್ತಿ ಎಂದು ಹೇಳುತ್ತಿರುವವರು ಕೇವಲ ಝಾಕಿರ್ ನಾಯ್ಕ್ ಮಾತ್ರವೇ ಅಲ್ಲ. ಎಲ್ಲ ಧರ್ಮಗಳೂ ಹೇಳುವುದು "ನಾನೇ ನಿಜ. ಉಳಿದವರು ಸುಳ್ಳು. ನಾನೇ ಶ್ರೇಷ್ಟ. ಆದುದರಿಂದ ನಮ್ಮನ್ನು ಸೇರಿಸಿಕೊಳ್ಳಿ" ಎಂದೇ ಆಗಿದೆ. "ಬೌದ್ಧ ಧರ್ಮವೇ ಜನರಿಗೆ ಇರುವ ಪರಿಹಾರ" ಎಂದು ನನ್ನ ಗೆಳೆಯರು ಹೇಳುವಾಗ ನನಗೆ ಅದರಲ್ಲಿರುವ ಧನಾತ್ಮಕ ಅಂಶ ನೆನಪಾಗುತ್ತದೆಯೇ ಹೊರತು, ಶ್ರೀಲಂಕಾ, ರೊಹಿಂಗ್ಯಾದಲ್ಲಿ ಹಿಂಸಾಚಾರ ನಡೆಸುತ್ತಿರುವ ಬೌದ್ಧ ಬಿಕ್ಕುಗಳು ನೆನಪಾಗುವುದಿಲ್ಲ. ಅದೆಷ್ಟೋ ಕ್ರಿಶ್ಚಿಯನ್ ಧಾರ್ಮಿಕ ಚಾನೆಲ್‌ಗಳು ಪ್ರತಿ ದಿನ ತನ್ನ ತನ್ನ ದೇವರ ಶ್ರೇಷ್ಠತೆಗಳನ್ನು, ಪವಾಡಗಳನ್ನು ಘೋಷಿಸುತ್ತಿರುತ್ತವೆ. ಅವೆಲ್ಲ ಪಕ್ಕಕ್ಕಿರಲಿ. ನಾವು ಬಾಲ್ಯದಲ್ಲೇ ಓದಿ ಹಾಡಿದ, ಪುರಂಧರ ದಾಸರೇ ಹೇಳುತ್ತಾರೆ ‘‘ಹರಿಯನ್ನು ಜಪಿಸದೇ ಮೋಕ್ಷ ಇಲ್ಲ’’ ಎಂದು. ಆದರೂ ನಾನು ಪುರಂಧರ ದಾಸರ ಹಾಡುಗಳನ್ನು ಇಷ್ಟ ಪಡುತ್ತೇನೆ. ಮಧ್ವಚಾರ್ಯರಂತೂ ಶೂದ್ರರನ್ನು ‘ನಿತ್ಯ ನಾರಕಿಗಳು’ ಎಂದು ಕರೆಯುತ್ತಾರೆ. ಇದರ ಅರ್ಥ, ಶೂದ್ರರಿಗೆ ಸ್ವರ್ಗಕ್ಕೆ ಹೋಗಲು ಯಾವ ದಾರಿಯೂ ಇಲ್ಲ. ಇನ್ನು ನನ್ನಂತಹ ಮ್ಲೇಚ್ಛನ ಬಗ್ಗೆ ಮಧ್ವರ ಅಭಿಪ್ರಾಯ ಹೇಗಿರಬಹುದು ಎಂದು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಈ ನಿಟ್ಟಿನಲ್ಲಿ ನೋಡಿದರೆ ಝಾಕಿರ್ ನಾಯ್ಕ್ನ ಪ್ರಕಾರ, ಅವರ ಚಿಂತನೆಗಳನ್ನು ನಾವು ಅಳವಡಿಸಿಕೊಂಡರೆ ನಮಗೆ ಸ್ವರ್ಗ ಸಿಗುತ್ತದೆ. ಮಧ್ವರಲ್ಲಿ ಆ ಅವಕಾಶವೂ ನಮಗಿಲ್ಲ. ಈ ಜಗತ್ತಿನಲ್ಲಿ ಎಲ್ಲ ಧರ್ಮಗಳು ನಮ್ಮದು ಶ್ರೇಷ್ಟ, ನಮ್ಮನ್ನು ಸೇರಿಕೊಳ್ಳಿ ಎಂದರೆ ಬ್ರಾಹ್ಮಣ ಧರ್ಮ ಮಾತ್ರ, ನಾವೇ ಶ್ರೇಷ್ಠ, ನಮ್ಮಿಂದ ದೂರ ಇರಿ ಎಂದು ಹೇಳುತ್ತದೆ. ಇಂತಹ ಬ್ರಾಹ್ಮಣ ಧರ್ಮವನ್ನೇ ನಾವು ಒಪ್ಪಿಕೊಳ್ಳುತ್ತಿರುವಾಗ, ಅದನ್ನು ಪ್ರಸಾರಿಸಲು ನೂರಾರು ಟಿವಿ ಚಾನೆಲ್‌ಗಳು ಇರುವಾಗ, ಝಾಕಿರ್ ನಾಯ್ಕ್ ಅವರನ್ನು, ಅವರ ಚಾನೆಲ್‌ಗಳನ್ನು ನಿಷೇಧಿಸಬೇಕು ಎನ್ನುವುದು ಸಂವಿಧಾನ ವಿರೋಧಿಯಾಗುತ್ತದೆ. ಈ ದೇಶದಲ್ಲಿ ರಾಮ್‌ದೇವ್, ರವಿಶಂಕರ್ ಸಹಿತ ನೂರಾರು ಸತ್ಸಂಗಿಗಳಿಗೆ ತಮ್ಮ ತಮ್ಮ ಟಿವಿ ಚಾನೆಲ್‌ಗಳಲ್ಲಿ ತಮ್ಮ ತಮ್ಮ ಧರ್ಮದ ಶ್ರೇಷ್ಟತೆಯನ್ನು ಬೋಧಿಸುವುದಕ್ಕೆ ಅವಕಾಶವಿದೆ ಎಂದಾದರೆ, ಝಾಕಿರ್ ನಾಯ್ಕ್ಗೂ ಇದೆ. ಝಾಕಿರ್ ನಾಯ್ಕ್ ತನ್ನನ್ನು ದೇವರು ಎಂದು ಘೋಷಿಸಿಲ್ಲ. ಅದೆಷ್ಟೋ ದೇವಮಾನವರು, ಅಂದರೆ ತಮ್ಮನ್ನು ತಾವು ದೇವರ ಅವತಾರ ಎಂದು ಘೋಷಿಸಿಕೊಂಡು ಲೂಟಿ ಮಾಡುವವರಿಗೆ, ಜನರನ್ನು ಮೋಸ ಗೊಳಿಸುವವರಿಗೆ ಇಲ್ಲಿ ಅವಕಾಶವಿದೆ ಎಂದ ಮೇಲೆ ಝಾಕಿರ್ ನಾಯ್ಕ್ಗೂ ಅವಕಾಶ ಇರಬೇಕು ಎಂದು ನಾನು ಹೇಳುತ್ತೇನೆ.

ಎಲ್ಲ ಧಾರ್ಮಿಕ ಚಾನೆಲ್‌ಗಳಂತೆಯೇ ಝಾಕಿರ್ ನಾಯ್ಕ್ ಕೂಡ ತನ್ನದೇ ಆಗಿರುವ ‘ಪೀಸ್ ಟಿವಿ’ಯನ್ನು ಹೊಂದಿದ್ದಾರೆ. ವಿಶೇಷವೆಂದರೆ, ಇವರು ಸೂಟುಬೂಟು ಧರಿಸುತ್ತಾರೆ. ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಭಗವದ್ಗೀತೆಯನ್ನು, ಬೈಬಲ್‌ಗಳನ್ನು ಕಂಠಪಾಠ ಮಾಡಿಕೊಂಡಿರುವ ಇವರು, ತನ್ನ ವಾದಕ್ಕೆ ಪೂರಕವಾಗಿ ಅವುಗಳನ್ನು ನಿರರ್ಗಳವಾಗಿ, ಅಧ್ಯಾಯ, ಅಂಕಿ ಸಂಕಿಗಳ ಜೊತೆಗೆ ಮಂಡಿಸುತ್ತಾರೆ. ಈ ಹಿಂದೆ ರವಿಶಂಕರ್ ಸಹಿತ ಹತ್ತು ಹಲವು ಹಿಂದೂ ಧಾರ್ಮಿಕ ನಾಯಕರ ಜೊತೆಗೆ ವೇದಿಕೆ ಹಂಚಿಕೊಂಡು ಚರ್ಚೆ, ವಿಚಾರವಿನಿಮಯ ಮಾಡಿಕೊಂಡ ಖ್ಯಾತಿಯೂ ಇವರಿಗಿದೆ. ಧಾರ್ಮಿಕ ಚಾನೆಲ್‌ಗಳಿರುವುದೇ ತನ್ನ ಧರ್ಮ ಶ್ರೇಷ್ಟ ಎಂದು ನಂಬಿ,  ಅದರ ಕುರಿತಂತೆ ಪ್ರಚಾರ ಮಾಡುವುದಕ್ಕೆ. ಹೀಗಿರುವಾಗ, ಝಾಕಿರ್ ನಾಯ್ಕ್ ತನ್ನ ಧರ್ಮಕ್ಕೆ ಮೀಸಲಾಗಿರುವ ತನ್ನ ಟಿವಿಯಲ್ಲಿ  ಅದನ್ನೇ ಮಂಡಿಸುತ್ತಾ ಇದ್ದರೆ ಅದನ್ನು ಅತಿರೇಕ ಎಂದು ಹೇಳುವುದು ಹೇಗೆ?

ಹೀಗಿರುವಾಗ ನಮಗೆ ಎರಡು ಮಾರ್ಗಗಳು ಇವೆ. ಒಂದು, ಎಲ್ಲ ಧಾರ್ಮಿಕ ಚಾನೆಲ್‌ಗಳನ್ನು ನಿಷೇಧಿಸಲು ಒತ್ತಾಯಿಸೋದು. ಅಥವಾ ಝಾಕಿರ್ ಮಂಡಿಸುವ ಇಸ್ಲಾಂ ಹೇಗೆ ಸುಳ್ಳು ಎನ್ನುವುದನ್ನು ಸಾಬೀತು ಮಾಡುವುದು. ಅದರ ಬದಲಿಗೆ ನಾವು ಝಾಕಿರ್‌ನನ್ನೇ ನಿಷೇಧಿಸಿದರೆ, ಅದು ನಮ್ಮ ಸೋಲು ಮತ್ತು ಝಾಕಿರ್‌ನ ಗೆಲುವಾಗುತ್ತದೆ. ಝಾಕಿರ್ ನಾಯ್ಕ್ನ ಮಾತುಗಳಿಗೆ ಉತ್ತರಕೊಡಲು ಸಾಧ್ಯವಿಲ್ಲದೆ ಮಾಡಿದ ಹತಾಶೆಯ ಪ್ರಯತ್ನ ಎಂದೂ ಅವರ ಅಭಿಮಾನಿಗಳು ಹೇಳಬಹುದು. ಇದು ಝಾಕಿರ್‌ಗೆ ಇನ್ನಷ್ಟು ಅಭಿಮಾನಗಳನ್ನು ಸೃಷ್ಟಿಸುತ್ತದೆ. ಕಳೆದ ಒಂದು ವಾರಗಳಿಂದ ಝಾಕಿರ್ ಕುರಿತಂತೆ ನಡೆಯುತ್ತಿರುವ ಚರ್ಚೆಯ ಪರಿಣಾಮ ಏನೂ ಎಂದರೆ, ಅವನ ಬಗ್ಗೆ ಗೊತ್ತೇ ಇಲ್ಲದ ಯುವಕರೂ ‘ಪೀಸ್’ ಟಿವಿಯನ್ನು ನೋಡುತ್ತಿದ್ದಾರೆ. ಅಂದರೆ ಪೀಸ್ ಟಿವಿಯ ವೀಕ್ಷಕರು ಅಧಿಕಗೊಂಡಿದ್ದಾರೆ. 

ಝಾಕಿರ್ ನಾಯ್ಕ್ ಮೇಲಿರುವ ಬಹುದೊಡ್ಡ ಆರೋಪ ಅಂದರೆ, ಆತ ಸಾಮೂಹಿಕವಾಗಿ ಮತಾಂತರ ಮಾಡುತ್ತಾನೆ. ಅವರಲ್ಲಿ ಯುವಕರೇ ಅಧಿಕ. ಮತಾಂತರವನ್ನು ಆತ ಕೋವಿ ಹಿಡಿದೋ, ಬಲವಂತವಾಗಿಯೋ ಮಾಡುತ್ತಿಲ್ಲ. ಅಥವಾ ಹಣದ ಆಮಿಷಗಳಿಂದಲೂ ಈತ ಮತಾಂತರ ಮಾಡುತ್ತಿಲ್ಲ. ತನ್ನ ಮಾತುಗಳಿಂದ ಅವರನ್ನು ಒಲಿಸಿ ಅಥವಾ ಮರುಳು ಮಾಡಿಯೇ ಮಾಡುತ್ತಾನೆ. ಮತಾಂತರ ಆಗುತ್ತಿರುವವರೆಲ್ಲ ವಿದ್ಯಾವಂತ ಯುವಕರೇ ಆಗಿದ್ದಾರೆ. ಒಬ್ಬನ ಮಾತು ಸರಿ ಅನ್ನಿಸಿದ ಬಳಿಕವೇ ಇನ್ನೊಬ್ಬ ಮತಾಂತರ ಆಗುತ್ತಾನೆ. ಹೀಗಿರುವಾಗ ಅದನ್ನು ನಾವು ತಪ್ಪು ಎನ್ನುವುದು ಹೇಗೆ? ಕೃಷ್ಣ ಮಠದಲ್ಲಿ ಶೂದ್ರರನ್ನು ತಮ್ಮ ಪಂಕ್ತಿಯಲ್ಲಿ ಸ್ವೀಕರಿಸದೇ ಇರುವುದನ್ನು ವ್ಯವಸ್ಥೆ ಧಾರ್ಮಿಕ ಅಭಿವ್ಯಕ್ತಿಯಾಗಿ ಸ್ವೀಕರಿಸಿಕೊಂಡಿರುವಾಗ, ಝಾಕಿರ್‌ನಾಯ್ಕ್ ತನ್ನ ಧರ್ಮಕ್ಕೆ ಬಂದವರನ್ನು ಸ್ವೀಕರಿಸುತ್ತಾನೆ ಎನ್ನುವುದು ಆಕ್ಷೇಪಾರ್ಹವಾಗುವುದು ಹೇಗೆ? ಝಾಕಿರ್ ನಾಯ್ಕ್ರನ್ನು ತೊಗಾಡಿಯಾ, ಪ್ರಮೋದ್ ಮುತಾಲಿಕ್ ಜೊತೆಗೆ ಸಮೀಕರಿಸುವುದನ್ನು ನಾನು ಒಪ್ಪುವುದಿಲ್ಲ. ಝಾಕಿರ್ ನಾಯ್ಕ್ನನ್ನು ನಾನು ಮಧ್ವ ಸಿದ್ಧಾಂತಗಳಿಗೆ ಮುಡಿಪಾಗಿರುವ ಪೇಜಾವರ ಶ್ರೀ, ಅಥವಾ ಇತರ ನೂರಾರು ಸತ್ಸಂಗಿಗಳ ಜೊತೆಗೆ ಸಮೀಕರಿಸಬಹುದು.

ಝಾಕಿರ್‌ನಾಯ್ಕ್ ಭಯೋತ್ಪಾದನೆಯನ್ನು ಸಮರ್ಥಿಸುತ್ತಾರೆ ಎನ್ನುವುದು ಬರೇ ಮಾಧ್ಯಮಗಳ ಆರೋಪ. ಆ ಕುರಿತಂತೆ ಯಾವುದೇ ದಾಖಲೆಗಳಿದ್ದಿದ್ದರೆ ಇಷ್ಟರಲ್ಲೇ ಅವರ ಮೇಲೆ ಪ್ರಕರಣ ದಾಖಲಾಗುತ್ತಿತ್ತು. ಇಸ್ಲಾಮಿಗೂ ಭಯೋತ್ಪಾದನೆಗೂ ಸಂಬಂಧವಿಲ್ಲ ಎನ್ನುವುದನ್ನು ಆತ ತನ್ನ ಭಾಷಣಗಳಲ್ಲಿ ಪದೇ ಪದೇ ಘೋಷಿಸುತ್ತಿರುತ್ತಾರೆ. ಇನ್ನೊಂದು ಧರ್ಮವನ್ನು ಝಾಕಿರ್ ತಮ್ಮ ಭಾಷಣದಲ್ಲಿ ವಿಮರ್ಶಿಸಿದ್ದನ್ನು, ಟೀಕಿಸಿದ್ದನ್ನು ಹಾಗೂ ಆ ಮೂಲಕ ತನ್ನ ಧರ್ಮವನ್ನು ಸಮರ್ಥಿಸಿಕೊಂಡಿದ್ದನ್ನು ನಾನು ಕೇಳಿದ್ದೇನೆ. ಆದರೆ ಇನ್ನೊಂದು ಧರ್ಮವನ್ನು ಯಾವತ್ತೂ ನಿಂದಿಸಿಲ್ಲ. ಬಹಿರಂಗವಾಗಿ ಇನ್ನೊಂದು ಧರ್ಮದ ಬಗ್ಗೆ ಪ್ರಚೋದನಕಾರಿ ಮಾತನಾಡಿಲ್ಲ. ಆದರೆ ತೊಗಾಡಿಯಾದಿಗಳು ಇದನ್ನು ಮಾಡುತ್ತಿದ್ದಾರಾದರೂ ಈವರೆಗೆ ಅವರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ. ಹೀಗಿರುವಾಗ ಝಾಕಿರ್ ನಾಯ್ಕ್ನ್ನು ನಿಷೇಧಿಸಲು ಹೊರಡುವ ಸರಕಾರದ ಪ್ರಯತ್ನ, ಆತನಿಗೆ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸಲು ಸಾಧ್ಯವಾಗದ ಕೆಲವು ಧಾರ್ಮಿಕ ಹಿತಾಸಕ್ತಿಗಳ ಹತಾಶೆಯ ಪ್ರಯತ್ನ ಎಂದೇ ನಾನು ಭಾವಿಸುತ್ತೇನೆ. 

ಧಾರ್ಮಿಕ ಚಾನೆಲ್‌ಗಳು ಇರಬಹುದು. ಅಥವಾ ಅದನ್ನು ಸಾಮೂಹಿಕವಾಗಿ ನಿಷೇಧಿಸಬಹುದು. ಧಾರ್ಮಿಕ ಚಾನೆಲ್‌ಗಳು ಪ್ರತ್ಯೇಕವಾಗಿರುವುದರಿಂದ ಅದರಲ್ಲಿ ಆಸಕ್ತಿಯಿದ್ದವರಷ್ಟೇ ಅದನ್ನು ನೋಡುತ್ತಾರೆ. ನಾನಂತೂ ಒಂದೆರಡು ಬಾರಿಯಷ್ಟೇ ಆ ಚಾನೆಲ್‌ನ್ನು ನೋಡಿದ್ದೇನೆ. ದೇವರನ್ನು ತಲುಪುವ ದಾರಿಯನ್ನು ಝಾಕಿರ್ ನಾಯ್ಕ್ ಮೂಲಕ ಕಲಿಯುವ ಅಗತ್ಯವಿಲ್ಲ ಎನ್ನುವುದು ನನಗೆ ಯಾವತ್ತೋ ಮನವರಿಕೆಯಾಗಿದೆ. ಆದರೆ ಇದೀಗ ನಡೆಯುತ್ತಿರುವ ಬೆಳವಣಿಗೆ ಝಾಕಿರ್‌ನಾಯ್ಕ್ಗೆ ಸಿಕ್ಕಿರುವ ಪುಕ್ಕಟೆ ಜಾಹೀರಾತುಗಳೇ ಹೊರತು ಇನ್ನೇನು ಅಲ್ಲ. ನನ್ನ ಸಮಸ್ಯೆ ಇಂತಹ ಧಾರ್ಮಿಕ ಚಾನೆಲ್‌ಗಳಲ್ಲ. ನಾವು ದಿನ ನಿತ್ಯ ನ್ಯೂಸ್ ಚಾನೆಲ್‌ಗಳು ಎಂದು ನಂಬಿಕೊಂಡು ಬಂದಿರುವ ಕನ್ನಡವೂ ಸೇರಿದಂತೆ ದೇಶದ ಚಾನೆಲ್‌ಗಳು ಧಾರ್ಮಿಕ ವಿಷಯಗಳನ್ನು, ಮೌಢ್ಯದ ವಿಷಯಗಳನ್ನು ಹರಡುತ್ತಿರುವುದು. ಎಲ್ಲ ವರ್ಗದ ಜನರೂ ನೋಡುವ ಚಾನೆಲ್‌ಗಳು ಬ್ರಾಹ್ಮಣ್ಯದ ಮೌಢ್ಯಗಳನ್ನು, ವಾಸ್ತುಗಳನ್ನು, ಜ್ಯೋತಿಷ್ಯಗಳನ್ನು ತೋರಿಸಿ ಜನರನ್ನು ಮೋಸ ಗೊಳಿಸುತ್ತಿರುವುದು. ಮೊದಲು ನ್ಯೂಸ್‌ಚಾನೆಲ್‌ಗಳಲ್ಲಿರುವ ಈ ಭಯೋತ್ಪಾದಕರಿಗೆ ತಡೆ ಬೀಳಬೇಕಾಗಿದೆ. ಹಾಗೆಯೇ ಝಾಕಿರ್ ನಾಯ್ಕ್ ತನ್ನ ಬೋಧನೆಯಲ್ಲಿ ಭಯೋತ್ಪಾದನೆಗೆ, ಉಗ್ರಗಾಮಿಗಳಿಗೆ ಬೆಂಬಲ ನೀಡಿದ್ದು ಹೌದು ಎಂದಾದರೆ ಆತನ ಮೇಲೆ ಮೊಕದ್ದಮೆ ಹೂಡಬಹುದು. ಬಂಧಿಸಬಹುದು. ಆದರೆ ಅಂತಹ ಯಾವ ಸಾಕ್ಷಿಯೂ ಇಲ್ಲದೆ, ಬರೇ ಮಾಧ್ಯಮಗಳ ವದಂತಿಗಳನ್ನು ಮುಂದಿಟ್ಟು ಝಾಕಿರ್ ನಾಯ್ಕ್ನ್ನು ನಿಷೇಧಿಸಿದರೆ ಅದರಿಂದ ಇನ್ನಷ್ಟು ಅಪಾಯವಿದೆ. ಝಾಕಿರ್ ತನ್ನ ಅಭಿಮಾನಿಗಳನ್ನು ಆ ಮೂಲಕ ಹೆಚ್ಚಿಸಿಕೊಳ್ಳುವ ಸಾಧ್ಯತೆಗಳಿವೆ. ಈಗಾಗಲೇ ಅದು ನಡೆಯುತ್ತಿದೆ ಕೂಡ.