Monday, July 30, 2012

ಪೇಂಟಿಂಗ್ ಮತ್ತು ಇತರ ಕತೆಗಳು

ಪೇಂಟಿಂಗ್
ಒಬ್ಬ ಚಿತ್ರ ಕಲಾವಿದನ ಮನೆಯ ಗೋಡೆಗಳು ಹಲವು ವರ್ಷಗಳಿಂದ ಬಣ್ಣವಿಲ್ಲದೆ ಮಾಸಿ ಹೋಗಿತ್ತು.
ಮಳೆಗಾಲದ ನೀರು ಸೋರಿ, ಪಾಚಿಗಟ್ಟಿ ಗೋಡೆ ತುಂಬ ಹರಡಿಕೊಂಡಿತ್ತು.
ಕಲಾವಿದನ ಅಭಿಮಾನಿಯೊಬ್ಬ ಆ ಮನೆಗೆ ಬಂದ.
ಗೋಡೆಯನ್ನು ನೋಡಿದ್ದೇ ಕಣ್ಣರಳಿಸಿ ಹೇಳಿದ ‘‘ಓಹ್, ಎಂತಹ ಅದ್ಭುತ ಪೇಂಟಿಂಗ್!’’

ರಾಜಕಾರಣ
‘‘ಜಾತಿ ರಾಜಕಾರಣ ಈ ನಾಡಿಗೆ ಅಂಟಿದ ಶಾಪ’’
ಸ್ವಾಮೀಜಿ ಹೀಗೆಂದು ಕರೆಕೊಟ್ಟರು.
ಊಟದ ಸಮಯದಲ್ಲಿ ಮೆಲ್ಲನೆ ತಮ್ಮ ಜಾತಿಯ ಪಂಕ್ತಿಯನ್ನು ಸೇರಿಕೊಂಡರು.

ಸರಕಾರಿ ಬಸ್ಸು
ಭಾರತ ಒಂದು ಸರಕಾರಿ ಬಸ್ ಇದ್ದ ಹಾಗೆ.
ನೀವು ಅದರೊಳಗೆ ಪ್ರವೇಶಿಸಿ ನೋಡಿ.
ಮಹಿಳೆಯರ ಮೀಸಲು ಆಸನದಲ್ಲಿ ತರುಣರು ಕೂತಿದ್ದಾರೆ.
ಸ್ವಾತಂತ್ರ ಹೋರಾಟಗಾರರ ಆಸನದಲ್ಲಿ ಇಬ್ಬರು ಠಕ್ಕರು ಮೀಸೆ ತಿರುವುತ್ತಿದ್ದಾರೆ.
ವೃದ್ಧರ ಆಸನದಲ್ಲಿ ತರುಣಿಯರು ಲಲ್ಲೆ ಹೊಡೆಯುತ್ತಿದ್ದಾರೆ.
ಅಂಗವಿಕಲರ ಆಸನದಲ್ಲಿ ಇಬ್ಬರು ಗೂಂಡಾಗಳು...
ಉಳಿದ ಒಂದೆರಡು ಸಾಮಾನ್ಯ ಆಸನಗಳಲ್ಲಿ ಯಾರದೋ ಸರಕುಗಳು...

ವೃದ್ಧರು, ಮಹಿಳೆಯರು, ಅಂಗವಿಕಲರು, ಸ್ವಾತಂತ್ರ ಹೋರಾಟಗಾರರು
ನಿಂತು, ಬಸವಳಿದು, ಹಣೆಯ ಬೆವರು ಒರೆಸಿಕೊಳ್ಳುತ್ತಾ
ಬಸ್ಸಿನೊಳಗೆ ಬರೆದಿದ್ದ ಘೋಷಣೆಯನ್ನು ಓದುತ್ತಾ ಪ್ರಯಾಣ ಬೆಳೆಸುತ್ತಿದ್ದಾರೆ...
‘‘ಮೇರಾ ಭಾರತ್ ಮಹಾನ್’’

ಕೆಸರು
ಛೀ...ಕೆಸರು ದೂರ ನಿಲ್ಲು...ಅವನೆಂದ.
ಕೆಸರು ತುಳಿಯುವುದಕ್ಕೆ ಎಲ್ಲರೂ ಹಿಂಜರಿಯುತ್ತಿದ್ದರು.
ಆ ಕೆಸರನ್ನು ರೈತನೊಬ್ಬ ತುಳಿದ.
ಕೈಯಲ್ಲಿದ್ದ ಬೀಜವನ್ನು ಬಿತ್ತಿದ.
ಈಗ ದಾರಿ ಹೋಕರೆಲ್ಲ ಹೇಳುತ್ತಾರೆ ‘‘ಆಹಾ ಎಷ್ಟು ಸುಂದರವಾದ ಗದ್ದೆ’’

ಮನೆ
ಒಂದು ದೊಡ್ಡ ಬಂಗಲೆ.
ಅದಕ್ಕೆ ಹತ್ತು ವಿಶಾಲ ಕೋಣೆಗಳು.
ಅಲ್ಲಿ ಬದುಕುತ್ತಿರುವವರು ಮಾತ್ರ ಮೂವರು.
ಗಂಡ-ಹೆಂಡತಿ ಮತ್ತು ಒಬ್ಬ ಮಗ.
ಆ ಮನೆಯಲ್ಲಿ ಗಂಡನನ್ನು ಹುಡುಕುತ್ತಾ ಹೆಂಡತಿ, ತಂದೆ ತಾಯಿಯನ್ನು ಹುಡುಕುತ್ತಾ ಮಗ ಕಾಲ ಕಳೆಯುತ್ತಿದ್ದಾರೆ.
ಅಷ್ಟು ದೊಡ್ಡ ಮನೆಯಲ್ಲಿ ಅವರು ಅಪರೂಪಕ್ಕೆ ಒಮ್ಮೆಮ್ಮೆ ಸಂಧಿಸುತ್ತಿರುತ್ತಾರೆ.
ಅಂದು ಅವರಿಗೆ ವಿಶೇಷ ದಿನ.

ಅಸ್ಪೃಶ್ಯತೆ
ಗುಬ್ಬಚ್ಚಿಗಳು ಮಹಾ ಜಾತೀಯವಾದಿಗಳು, ಮನುಷ್ಯ ಮುಟ್ಟಿದ ಗುಬ್ಬಚ್ಚಿಯನ್ನು
ಹಕ್ಕಿಗಳೆಲ್ಲ ಸೇರಿ ತಮ್ಮ
ಜಾತಿಯಿಂದ ಹೊರ ಹಾಕಿದವು


ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

Wednesday, July 25, 2012

ಮದರಸದ ದಿನಗಳು-3: ಒಂದು ಟೋಪಿ ಪ್ರಸಂಗ

ಸ್ಕಾರ್ಫ್ ಹೆಸರಲ್ಲಿ ಅನವಶ್ಯಕ ರಾಜಕಾರಣ ನಡೆಯುತ್ತಿದೆ. ಸ್ಕಾರ್ಫ್ ಎಂದರೆ ಶಾಲು. ಅದನ್ನು ಸ್ವಯಂ ಶಾಲೆಯೇ ಯುನಿಫಾರ್ಮ್ ಜೊತೆ  ಹುಡುಗಿಯರಿಗೆ ನೀಡಿದೆ.  ಮುಸ್ಲಿಮೇತರ ಹುಡುಗಿಯರು ಅದನ್ನು ಎದೆಮುಚ್ಚಿಕೊಳ್ಳಲು ಬಳಸುತ್ತಿದ್ದಾರೆ, ಮುಸ್ಲಿಂ ಹುಡುಗಿಯರು ತಲೆ ಮತ್ತು ಎದೆಯನ್ನು ಮುಚ್ಚಿಕೊಳ್ಳುತ್ತಿದ್ದಾರೆ. ನೀವು ತಲೆ ಮುಚ್ಚಿಕೊಬೇಡಿ ಅದರಿಂದ ಶಾಲೆಯ ಶಿಸ್ತಿಗೆ ತೊಂದರೆಯಾಗುತ್ತೆ ಎನ್ನೋದು ಶಾಲೆಯ ಆಡಳಿತ ಮಂಡಳಿ ತಕರಾರು. ಇದೀಗ ಈ ವಿವಾದಕ್ಕೆ ಹೊರಗಿನ ಶಕ್ತಿಗಳು ಸೇರಿಕೊಂಡು ರಣರಂಪ ಮಾಡುತ್ತಿವೆ. ತಲೆ ಮುಚ್ಚಿ ಕೊಳ್ಳೋದು ಧಾರ್ಮಿಕ ನಂಬಿಕೆ ಹೌದೋ ಅಲ್ಲವೋ ಗೊತ್ತಿಲ್ಲ, ಆದರೆ  ಭಾರತೀಯ ಸಂಪ್ರದಾಯವಂತೂ ಹೌದು.  ಅದನ್ನು ನೆಪವಾಗಿಟ್ಟು ಕೊಂಡು ಹೆಣ್ಣು ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡಬೇಡಿ ಎನ್ನೋದು ನನ್ನ ಅಭಿಪ್ರಾಯ.
ಇದೆ ಸಂದರ್ಭದಲ್ಲಿ ಒಂದಾನೊಂದು ಕಾಲದಲ್ಲಿ ನಾನು ಮದರಸದಲ್ಲಿ ಕಲಿಯುತ್ತಿದ್ದಾಗ ಟೋಪಿಗೆ ಸಂಬಂಧ  ಪಟ್ಟಂತೆ ನಡೆದ ಒಂದು ಸಣ್ಣ ತಮಾಷೆಯ ಪ್ರಸಂಗ ನೆನಪಿಗೆ ಬಂತು. ಇದನ್ನು ಎಂಟು ವರ್ಷಗಳ ಹಿಂದೆ ಅಗ್ನಿ ಪತ್ರಿಕೆಗೆ ಬರೆದಿದ್ದೆ. ಅದನ್ನು ಫೈಲ್ ನಿಂದ ಹುಡುಕಿ ಗುಜರಿ ಅಂಗಡಿಗೆ ಹಾಕಿದ್ದೇನೆ.

ನಾವು, ಮದರಸ-ಶಾಲೆಯನ್ನು ಒಟ್ಟೊಟ್ಟಿಗೇ ಕಲಿಯಬೇಕು. ಬೆಳಗ್ಗೆ ಎಂಟೂವರೆಗೆ ಮದರಸದ ಗಂಟೆ ಬಾರಿಸಿತೆಂದರೆ ನಾವು ಅಲ್ಲಿಂದ ಓಟಕ್ಕೀಳುತ್ತಿದ್ದೆವು. ಮನೆ ಮುಟ್ಟಿದ್ದೇ ತಡ ಒಂದೇ ಉಸಿರಿನಲ್ಲಿ ತಿಂಡಿ ಮುಗಿಸಿ, ಶಾಲೆ ಅಣಿಯಾಗುತ್ತಿದ್ದೆವು. ‘ಹೋಂವರ್ಕ್’ಗಳನ್ನು ಅರ್ಧಂಬರ್ಧ ಮುಗಿಸಿ ಎರಡು ಕಿ.ಮೀ. ದೂರದಲ್ಲಿರುವ ಶಾಲೆಯನ್ನು ಸೇರಬೇಕು.
ಕೆಲವಮ್ಮೆ ಈ ಮದರಸ-ಶಾಲೆಗಳ ಜಟಾಪಟಿಯಲ್ಲಿ ನಾವು ಸಿಕ್ಕಾಪಟ್ಟೆ ಹಣ್ಣಾಗುತ್ತಿದ್ದೆವು. ಒಮ್ಮೆ ನಮ್ಮ ಮದರಸಕ್ಕೆ ಹೊಸ ಮುಸ್ಲಿಯಾರರು ಬಂದರು. ಅವರ ಕೈಯಲ್ಲಿದ್ದ ಬೆತ್ತ, ಅವರು ದೂರದ ಕೇರಳದಿಂದ ಬರುವಾಗಲೇ ಹಿಡಿದುಕೊಂಡು ಬಂದಿರುವುದೆಂದು ನಾವು ನಂಬಿದ್ದೆವು. ಅವರು ಕೈಯೆತ್ತಿದರೆ ಆ ಬೆತ್ತ ಮೂರು ಸುತ್ತು ‘ಝಂಯ್ ಝುಂಯ್’ ಎಂದು ತಿರುಗುತ್ತಿತ್ತು. ಆ ಬೆತ್ತವನ್ನು ಹೇಗಾದರೂ ಅಪಹರಿಸಬೇಕೆಂದು ನಾವು ಏನೆಲ್ಲ ಕಾರ್ಯಾಚರಣೆ ನಡೆಸಿದ್ದರೂ, ಅದು ನಮ್ಮಿಂದ ಸಾಧ್ಯವಾಗಿರಲಿಲ್ಲ. ಮದರಸ ಮುಗಿದದ್ದೇ ಬೆತ್ತವನ್ನು ಜೋಪಾನವಾಗಿ ತಮ್ಮಿಂದಿಗೆ ಒಯ್ಯುತ್ತಿದ್ದರು.
ಈ ಮುಸ್ಲಿಯಾರರು ಬಂದದ್ದೇ ‘ಶಿಸ್ತು ಶಿಸ್ತು’ ಎನ್ನತೊಡಗಿದರು. ಮೊದಲು ಮದರಸದಲ್ಲಿ ಹಾಜರಿ ಪುಸ್ತಕವೆನ್ನುವುದಿರಲಿಲ್ಲ. ಇವರು ಹಾಜರಿ ಪುಸ್ತಕವನ್ನು ಜಾರಿಗೆ ತಂದರು. ಶಾಲೆಯ ಎಲ್ಲ ನಿಯಮಗಳನ್ನು ಮದರಸದಲ್ಲಿ ಜಾರಿಗೆ ತರುವ ಅತ್ಯುತ್ಸಾಹ ಅವರಲ್ಲಿದ್ದಂತಿತ್ತು. ಆದರೆ ಅವರು ಬಂದ ಒಂದು ವಾರದಲ್ಲಿ ‘ಇನ್ನು ಮುಂದೆ ಎಲ್ಲರೂ ಶಾಲೆಗೆ ಹೋಗುವಾಗಲೂ ಟೊಪ್ಪಿ ಧರಿಸಿ ಹೋಗಬೇಕು’ ಎಂದು ಘೋಷಿಸಿದಾಗ ನಾವೆಲ್ಲ ಹೈರಾಣಾಗಿ ಬಿಟ್ಟೆವು. ಆದರೇನು? ಮುಸ್ಲಿಯಾರರ ಆದೇಶ. ಇಲ್ಲವೆನ್ನಲಾಗುತ್ತದೆಯೆ? ನಮ್ಮಲ್ಲಿ ಖಾದರ್ ಎನ್ನುವ ಜೋರಿನ ಹುಡುಗನೊಬ್ಬನಿದ್ದ. ಅವನು ಯಾವ ಧೈರ್ಯದಲ್ಲೋ ಹೇಳಿಬಿಟ್ಟ ‘ಉಸ್ತಾದ್... ಟೊಪ್ಪಿ ಹಾಕಿಕೊಂಡು ಶಾಲೆಯೊಳಗೆ ಹೋದರೆ ಟೀಚರ್ ಬೈತಾರೆ’
ಅಷ್ಟೇ... ‘ಝಂಯ್ ... ಝಂಯ್...’ ಎಂದು ಮುಸ್ಲಿಯಾರರು ಬೆತ್ತವನ್ನು ಬೀಸಿದರು. ಅವನಿಗೂ, ಮುಖದ ಹಾವಭಾವದಲ್ಲೇ ಅವನನ್ನು ಸಮರ್ಥಿಸುತ್ತಿದ್ದ ನಮಗೂ ಏಟು ಬಿತ್ತು. ‘ನಮ್ಮ ದೀನಿಗಾಗಿ ನೆಬಿಯವರು, ಅವರ ಸಹಾಬಿಗಳು ಏನೆಲ್ಲ ಮಾಡಿದರು. ನಿಮಗೆ ಟೊಪ್ಪಿ ಹಾಕುವುದಕ್ಕೆ ಕಷ್ಟವಾಗುತ್ತದೆಯೇ?’ ಎಂದವರೇ ನಮಗೆ ಬದರ್‌ಯುದ್ಧದ ಕತೆಯನ್ನು ಹೇಳಿದರು. ಕೇವಲ 313 ಮಂದಿ ಸಹಾಬಿಗಳು ಒಂದು ರಾಜಪ್ರಭುತ್ವವನ್ನೇ ಎದುರು ಹಾಕಿ, ಏನೆಲ್ಲ ಕಷ್ಟ ಅನುಭವಿಸಿದರು. ಕೊನೆಗೆ ಹೇಗೆ ಯುದ್ಧದಲ್ಲಿ ವಿಜಯ ಸಾಧಿಸಿದರು ಎನ್ನುವುದನ್ನು ವಿವರಿಸಿದರು. ನಿಮಗೆ ಯಕಶ್ಚಿತ್ ಒಬ್ಬ ಟೀಚರ್‌ನ್ನು ಎದುರಿಸಲಾಗುವುದಿಲ್ಲವೆ? ಎಂದು ಪ್ರಶ್ನಿಸಿದರು.
ಮದರಸದಿಂದ ಹೊರಟಾಗ ನಮ್ಮ ಎದೆಯಲ್ಲಿ ಸಹಾಬಿಗಳು ಕುಳಿತ ಕುದುರೆಗಳ ಖುರಪುಟ ಸದ್ದುಗಳು. ಮನೆಯಿಂದ ಶಾಲೆಗೆ ಹೊರಡುತ್ತಿದ್ದಂತೆ ಧೈರ್ಯದಿಂದ ಟೊಪ್ಪಿಯನ್ನು ತಲೆಗೇರಿಸಿದೆವು. ತರಗತಿಯೊಳಗೂ ಟೊಪ್ಪಿಯನ್ನು ಕಿರೀಟದಂತೆ ಧರಿಸಿದ್ದೆವು. ನನ್ನ ತಲೆಯಲ್ಲಿದ್ದದ್ದು ನೀರು ದೋಸೆಯಂತೆ ತೂತು ತೂತಾಗಿರುವ ಟೊಪ್ಪಿ. ಪಕ್ಕದ ಗೆಳೆಯ ‘ಬ್ಯಾರಿಯ ತಲೆಯಲ್ಲಿ ನೀರು ದೋಸೆ’ ಎಂದರೂ ಕ್ಯಾರೇ ಅನಿಸಲಿಲ್ಲ. ಆ ಕ್ಷಣದಲ್ಲಿ ನಮ್ಮ ಕಣ್ಣ ಮುಂದೆ ಇದ್ದದ್ದು, ಬದರ್‌ಯುದ್ಧದಲ್ಲಿ ಭಾಗವಹಿಸಿದ ಸಹಾಬಿಗೋ, ಮುಸ್ಲಿಯಾರರ ಕೈಯಲ್ಲಿದ್ದ ನಾಗರ ಬೆತ್ತವೋ ಇನ್ನೂ ಸ್ಪಷ್ಟವಿಲ್ಲ.

 ಮೊದಲ ತರಗತಿಯೇ ರುಫೀನಾ ಟೀಚರಿದ್ದು, ತರಗತಿಯೊಳಗೆ ಬಂದವರು. ಇನ್ನೇನು ಪಾಠ ಶುರು ಮಾಡಬೇಕು ಎಂದಾಗ ಅವರ ಗಮನ ನಮ್ಮ ತಲೆಯ ಮೇಲೆ ಹೋಯಿತು. ನಿಧಾನಕ್ಕೆ ಖಾದರ್, ರಶೀದ್, ಹನೀಫ್... ಹೀಗೆ ಎಲ್ಲರ ತಲೆಯನ್ನು ಅವರ ಚೂಪಾದ ನೋಟ ಸವರುತ್ತಾ ಹೋಯಿತು. ಎಲ್ಲರ ಹೆಸರಿಡಿದು ಕರೆದು ನಿಲ್ಲಿಸಿದರು. ‘ಏನಿದು ವೇಷ... ಕ್ಲಾಸಿನೊಳಗೆ ನಿಮ್ಮ ಟೊಪ್ಪಿಯನ್ನು ತರಬಾರದು. ತೆಗೀರಿ’ ಎಂದರು.
‘ಮದರಸದ ಗುರುಗಳು ಹೇಳಿದ್ದಾರೆ. ಟೊಪ್ಪಿಯನ್ನು ತೆಗೆಯಬಾರದೆಂದು’ ಖಾದರ್ ಉತ್ತರಿಸಿದ. ‘ಈಗ ನಾನು ನಿಮ್ಮ ಶಾಲೆಯ ಗುರುಗಳು ಹೇಳುತ್ತಿದ್ದೇನೆ.. ಟೊಪ್ಪಿಯನ್ನು ತೆಗೀರಿ’ ರೂಫೀನಾ ಟೀಚರ್ ಹೂಂಕರಿಸಿದ್ದರು.
‘ಟೊಪ್ಪಿ ತೆಗೆದರೆ ಮುಸ್ಲಿಯಾರರು ಹೊಡೀತಾರೆ...’ ಇನ್ನಾರೋ ಒಬ್ಬ ಹೇಳಿದ್ದ.
‘ಟೊಪ್ಪಿ ತೆಗೆಯದೇ ಇದ್ದರೆ ನಾನು ಹೊಡೀತೇನೆ...’ ಎಂದವರೇ ಬೆತ್ತವನ್ನು ಟೇಬಲ್‌ಗೊಮ್ಮೆ ಬಡಿದರು. ಇಡೀ ತರಗತಿ ನಮ್ಮನ್ನು ನೋಡುತ್ತಿತ್ತು. ರೂಫೀನಾ ಟೀಚರ್‌ನ್ನು ಎದುರಿಸುವುದು ಬದರ್ ಯುದ್ಧವನ್ನು ಎದುರಿಸಿದಷ್ಟು ಸುಲಭವಲ್ಲ ಎನ್ನುವುದು ನಿಧಾನಕ್ಕೆ ಅರಿವಿಗೆ ಬಂದಿತು. ನಮ್ಮ ಧೈರ್ಯ ಕರಗುತ್ತಿತ್ತು.
‘ಟೊಪ್ಪಿಯನ್ನು ತೆಗೀತೀರಾ ಇಲ್ವ?’ ಟೀಚರ್ ಮತ್ತೊಮ್ಮೆ ಟೇಬಲ್‌ಗೆ ಬೆತ್ತವನ್ನು ಬಡಿದರು.
 ಎಲ್ಲರೂ ಒಬ್ಬರ ಮುಖವನ್ನು ಒಬ್ಬರು ನೋಡಿದೆವು. ಯಾರಾದರೊಬ್ಬ ಮೊದಲು ತೆಗಿಯಲಿ... ಎನ್ನುವುದು ಎಲ್ಲರ ಉದ್ದೇಶವಾಗಿತ್ತು. ರುಫೀನಾ ಟೀಚರ್ ಸಹನೆ ಕೆಡುತ್ತಿತ್ತು. ತನ್ನ ಆಜ್ಞೆಗೆ ಹುಡುಗರು ಕ್ಯಾರೇ ಅನ್ನುತ್ತಿಲ್ಲ ಎನ್ನುವುದು ಅವರಿಗೆ ಸಹಿಸಲು ಅಸಾಧ್ಯವಾಗಿತ್ತು. ‘ಟೊಪ್ಪಿಯನ್ನು ತೆಗೆಯಲು ಸಿದ್ಧರಿರುವವರು ಮಾತ್ರ ಕ್ಲಾಸಿನೊಳಗಿರಿ. ಉಳಿದವರು ಬಾಗಿಲ ಹೊರಗೆ ನಿಲ್ಲಿ’ ಎಂದು ಅಕ್ಷರಶಃ ಚೀರಿದ್ದರು. ಆ ಕಿರುಚಾಟಕ್ಕೆ ತಲ್ಲಣಿಸಿದ್ದ ನಾನು ಒಮ್ಮೆಲೆ ಟೊಪ್ಪಿಯನ್ನು ತೆಗೆದು ಉಂಡೆ ಮಾಡಿ ಕಿಸೆಯೊಳಗೆ ತುರುಕಿಸಿದ್ದೆ. ಆದರೆ ಖಾದರ್ ಒಬ್ಬ ಮಾತ್ರ ಟೊಪ್ಪಿಯೊಂದಿಗೆ ಕ್ಲಾಸಿನಿಂದ ಹೊರನಡೆದಿದ್ದ. ಇಡೀ ದಿನ ಆತ ತರಗತಿಯ ಬಾಗಿಲ ಬಳಿ ನಿಂತು ಪಾಠ ಕೇಳಿದ್ದ.

ಮರುದಿನ ಮದರಸಕ್ಕೆ ನಡುಗುತ್ತಾ ಹೆಜ್ಜೆ ಇಟ್ಟಿದ್ದೆವು. ಇವತ್ತು ಮದರಸದಲ್ಲಿ ಏನಾದರೂ ನಡೆದೇ ನಡೆಯುತ್ತದೆ ಎನ್ನುವುದು ನಮಗೆ ಗೊತ್ತಿತ್ತು. ಮದರಸ ಆರಂಭವಾಯಿತು ಎನ್ನುವಾಗ, ಮುಸ್ಲಿಯಾರರು ಖಾದರ್‌ನನ್ನು ನಿಲ್ಲಿಸಿದರು. ಅವರಿಗಾಗಲೇ ಖಾದರ್‌ನ ವಿಜಯಗಾಥೆ ತಲುಪಿತ್ತು. ಹತ್ತಿರ ಹೋದವರೇ ಖಾದರ್‌ನ ತಲೆ ಸವರಿದರು. ಖಾದರ್‌ನ ಕೈಗೆ ತಮ್ಮ ಬೆತ್ತವನ್ನು ಕೊಟ್ಟರು. ಅದೊಂದು ಅಪೂರ್ವ ಮಂತ್ರದಂಡವೇನೋ ಎಂಬಂತೆ ಖಾದರ್ ಹಿಡಿದುಕೊಂಡಿದ್ದ. ಆತನ ಅದೃಷ್ಟಕ್ಕೆ ನಾವೆಲ್ಲ ಕರುಬಿದ್ದೆವು. ಆ ಬಳಿಕ ನಮ್ಮನ್ನೂ ನಿಲ್ಲಿಸಿದರು. ಅಂಗೈಯನ್ನು ಮುಂಚಾಚಲು ಹೇಳಿದರು. ಖಾದರ್ ಬೆತ್ತದಿಂದ ಎಲ್ಲರಿಗೂ ಎರಡೆರಡು ಏಟು ನೀಡುತ್ತಾ ಹೋದ. ಅಲ್ಲಿಂದ ನಮ್ಮ ಗುಂಪಿನಿಂದ ಖಾದರ್ ಪ್ರತ್ಯೇಕವಾದ. ಅಂದೂ ಶಾಲೆಗೆ ಟೊಪ್ಪಿ ಹಾಕಿಕೊಂಡೇ ಹೊರಟೆವು. ರುಫೀನಾ ಟೀಚರ್ ಸಿದ್ಧವಾಗಿಯೇ ಬಂದಿದ್ದರು. ‘ಎಲ್ಲರೂ ನಿಮ್ಮ ನಿಮ್ಮ ಟೊಪ್ಪಿಯನ್ನು ತಂದು ಟೇಬಲ್ ಮೇಲಿಡಿ’ ಎಂದರು.
ನಾವೆಲ್ಲ ಒಲ್ಲದ ಮನಸ್ಸಿನಿಂದ ಟೊಪ್ಪಿಯನ್ನು ರುಫೀನಾ ಟೀಚರ್‌ರ ಟೇಬಲ್ ಮೇಲಿಟ್ಟೆವು. ಬಳಿಕ ಅವರು ಪಾಠ ಮುಂದುವರಿಸಿದರು. ಪಾಠ ಮುಗಿದದ್ದೇ, ಅಷ್ಟೂ ಟೊಪ್ಪಿಗಳನ್ನು ತಮ್ಮ ವ್ಯಾನಿಟಿ ಬ್ಯಾಗಿನೊಳಗೆ ಹಾಕಿ ಹೊರಟರು. ನಮ್ಮ ಟೊಪ್ಪಿಗಳಿಗೆ ಒದಗಿದ ದುಸ್ಥಿತಿಗೆ ಯಾವ ರೀತಿಯಲ್ಲೂ ಪ್ರತಿಕ್ರಿಯಿಸಲಾಗದೆ ನಾವು ಅಸಹಾಯಕರಾಗಿದ್ದೆವು.
ನಮ್ಮ ಟೊಪ್ಪಿಗಳನ್ನು ಯಕಶ್ಚಿತ್ ಒಬ್ಬಳು ಕೊಂಡೊಯ್ದದ್ದು ತಿಳಿದದ್ದೇ ಮುಸ್ಲಿಯಾರರು ಕೆಂಡಮುಂಡಲವಾದರು. ಸಿಟ್ಟಿನಿಂದ ಗಾಳಿಯಲ್ಲಿ ಬೆತ್ತವನ್ನು ‘ಝಂಯ್ ಝಂಯ್’ ಎಂದು ಬೀಸಿದರು. ನಮಗೆ ಒಳಗೊಳಗೆ ಖುಷಿ. ಇಲ್ಲಿ ನಮ್ಮ ತಪ್ಪೇನು ಇದ್ದಿರಲಿಲ್ಲ. ಜೊತೆಗೆ ಇನ್ನು ಶಾಲೆಗೆ ಧರಿಸಿಕೊಂಡು ಹೋಗಲು ನಮ್ಮಲ್ಲಿ ಟೊಪ್ಪಿಯೂ ಇದ್ದಿರಲಿಲ್ಲ.
‘ಅವರು ಕೇಳಿದರೆಂದಾಕ್ಷಣ ನೀವ್ಯಾಕೆ ತಲೆಯಿಂದ ತೆಗೆದು ಕೊಟ್ಟಿರಿ?’ ಮುಸ್ಲಿಯಾರರು ನಮ್ಮನ್ನು ಪ್ರಶ್ನಿಸಿದರು. ಎಂತಹ ಪ್ರಶ್ನೆ! ಒಂದು ಟೊಪ್ಪಿಧರಿಸುವ ಹೆಸರಿನಲ್ಲಿ ನಾವೇ ಇಷ್ಟು ಕಷ್ಟಪಟ್ಟಿರಬೇಕಾದರೆ, ಸಹಾಬಿಗಳು ಅದೆಷ್ಟು ಕಷ್ಟ ಪಟ್ಟಿರಲಿಕ್ಕಿಲ್ಲ ಎನ್ನಿಸಿತು. ಅಷ್ಟರಲ್ಲಿ ಖಾದರ್ ಉತ್ತರಿಸಿದ ‘ನಾವು ಕೊಡುವುದಿಲ್ಲ ಎಂದು ಹೇಳಿದೆವು ಉಸ್ತಾದ್. ಅವರೇ ಬಂದು ತಲೆಯಿಂದ ಕಿತ್ತುಕೊಂಡರು’ ಅವನು ಹಸಿ ಸುಳ್ಳು ಹೇಳಿದ್ದ.
‘ಕಿತ್ತುಕೊಳ್ಳುವಷ್ಟು ಧೈರ್ಯವೇ ಅವರಿಗೆ’ ಎನ್ನುತ್ತಾ ಗಾಳಿಯಲ್ಲಿ ಬೆತ್ತವನ್ನು ಮತ್ತೆ ಬೀಸಿದರು.
ನಮ್ಮ ಟೊಪ್ಪಿಯನ್ನು ಕಿತ್ತುಕೊಂಡದ್ದು, ಜಮಾತ್‌ನಲ್ಲಿ ಸುದ್ದಿಯಾಯಿತು. ಜಮಾತ್ ಪ್ರೆಸಿಡೆಂಟ್‌ರ ಮುಂದೆ, ಮುಸ್ಲಿಯಾರರು ವಿಷಯವಿಟ್ಟರು. ಶಾಲೆಗೆ ಒಂದು ಸಣ್ಣ ನಿಯೋಗ ಹೋಯಿತು. ಅಲ್ಲಿ ಎಲ್ಲ ಟೊಪ್ಪಿಗಳನ್ನು ಮರಳಿಸಲಾಯಿತು. ‘ತರಗತಿಯೊಳಗೆ ಟೊಪ್ಪಿ ಹಾಕಬಾರದು. ಹೊರಗಡೆ ಹಾಕಿದರೆ ಚಿಂತಿಲ್ಲ’ ಎಂದು ಮುಖ್ಯ ಶಿಕ್ಷಕರು ಅವರಿಗೆ ತಿಳಿಸಿದರು.

ತಮ್ಮ ಮಕ್ಕಳು ‘ಟೊಪ್ಪಿ’ಯ ದೆಸೆಯಿಂದ ಪಾಠ ತಪ್ಪಿಸಿಕೊಳ್ಳುವುದು ಜಮಾತಿನ ಯಾವ ಪಾಲಕರಿಗೂ ಇಷ್ಟವಿರಲಿಲ್ಲ. ಆದ್ದರಿಂದ ಶಾಲೆಯ ದಾರಿಯಲ್ಲಿ, ಮೈದಾನದಲ್ಲಿ ಟೊಪ್ಪಿ ಹಾಕುವುದು ಮತ್ತು ತರಗತಿ ಪ್ರವೇಶಿಸುವಾಗ ಈ ಟೊಪ್ಪಿಯನ್ನು ತೆಗೆದು ಹಾಕುವುದು ಎಂದು ತೀರ್ಮಾನವಾಯಿತು. ಈ ತೀರ್ಮಾನವೂ ತುಂಬಾ ದಿನ ಉಳಿಯಲಿಲ್ಲ. ಜಮಾತಿನ ಕಾರ್ಯದರ್ಶಿಯ ಮುಂದೆ ‘ರಾಂಗ್’ ಮಾತನಾಡಿದರೆಂದು ಮುಸ್ಲಿಯಾರರನ್ನು ಕೆಲವೇ ತಿಂಗಳಲ್ಲಿ ಕಿತ್ತು ಹಾಕಲಾಯಿತು. ಅಲ್ಲಿಗೆ ಟೊಪ್ಪಿಯ ಶಾಲೆಯ ಋಣ ತೀರಿತು. ಹೀಗೆ... ಹತ್ತು ಹಲವು ಕಾರಣಗಳಿಂದ ನೆನೆದರೆ ಮುಗಿಯಲಾರದಷ್ಟು ಮುಸ್ಲಿಯಾರರು, ಬಗೆ ಬಗೆಯ ಅತ್ತರಿನ ಪರಿಮಳದಂತೆ ನಮ್ಮ ಬಾಲ್ಯವನ್ನು ಆವರಿಸಿದ್ದಾರೆ. ಶಾಲೆಗೆ ಹೋಗದ ಹುಡುಗರನ್ನು ಪತ್ತೆ ಹಚ್ಚಿ, ಅವರನ್ನು ಎಳೆದೊಯ್ದು ಮೇಷ್ಟ್ರ ಕೈಗೆ ಒಪ್ಪಿಸಿದ ಮುಸ್ಲಿಯಾರರಿದ್ದಾರೆ. ಹುಡುಗರೊಂದಿಗೆ ಸೇರಿ, ವಾಲಿಬಾಲ್, ಕ್ರಿಕೆಟ್ ಆಡುತ್ತಿದ್ದ ಮುಸ್ಲಿಯಾರರು, ಬೆಳಗ್ಗಿನ ತಿಂಡಿಗೆ ಅಕ್ಕಿರೊಟ್ಟಿಯಲ್ಲದೆ ಬೇರೇನು ಕೊಟ್ಟರೂ ಒಲ್ಲೆಯೆನ್ನುತ್ತಿದ್ದ ಮುಸ್ಲಿಯಾರರು... ಮದರಸ ಕಲಿಸುವ ಹೊತ್ತಿನಲ್ಲಿ ತಮ್ಮ ಸಣ್ಣ ಟ್ರಾನ್ಸಿಸ್ಟರ್‌ನಲ್ಲಿ ಕ್ರಿಕೆಟ್ ಕಮೆಂಟರಿ ಕೇಳುತ್ತಿದ್ದ ಮುಸ್ಲಿಯಾರರು... ಇಸುಮು-ಮಂತ್ರತಂತ್ರವೆಂದು ಉಪವೃತ್ತಿಯನ್ನು ಮಾಡಿ ಒಂದಿಷ್ಟು ಹಣದ ದಾರಿಯನ್ನು ಹುಡುಕಿಕೊಳ್ಳುತ್ತಿದ್ದ ಮುಸ್ಲಿಯಾರರು...

ಅವರದು ಸ್ವರ್ಗ-ನರಕಗಳ ಸೇತುವೆಯನ್ನು ಕಾಯುವ ಕೆಲಸ. ನಮ್ಮಂತಹ ಮಕ್ಕಳು ತಪ್ಪಿ ನರಕದ ಸೇತುವೆಯ ಬಳಿ ಸಾಗದಂತೆ ನೋಡಿಕೊಳ್ಳಬೇಕು. ಸ್ವರ್ಗದ ಸೇತುವೆಯನ್ನು ಕೈ ಹಿಡಿದು ದಾಟಿಸಬೇಕು. ಆದರೆ ಅದೆಂತಹ ವಿಚಿತ್ರವೋ.... ಮುಸ್ಲಿಯಾರರು ಸ್ವರ್ಗವನ್ನು ಎಷ್ಟು ವರ್ಣಿಸಿದರೂ ನಮಗೆ ‘ಇಷ್ಟೇನಾ...’ ಅನ್ನಿಸುತ್ತಿತ್ತು. ಅವರು ವರ್ಣಿಸುವ ಧಗಿಸುವ ಭಯಾನಕ ನರಕ, ಅದರೊಳಗಿನಿಂದ ಕೇಳಿಸುವ ಪಾಪಿಗಳ ಆರ್ತನಾದ ಮನಸ್ಸನ್ನು ದಟ್ಟವಾಗಿ ಆವರಿಸಿಕೊಳ್ಳುತ್ತಿತ್ತು. ಆ ನರಕಕ್ಕೆ ಒಂದು ವಿಚಿತ್ರ ಸೆಳೆತವಿತ್ತು. ಆ ಆಕರ್ಷಣೆ, ಸೆಳೆತ ಒಂದು ಪ್ರತಿಮೆಯಂತೆ ಮನದಾಳದಲ್ಲಿ ಇನ್ನೂ ಅಚ್ಚೊತ್ತಿ ಕುಳಿತಿದೆ.

Friday, July 13, 2012

ನನ್ನನ್ನು ಕಾಡಿದ ‘ಈಗ’

ಕಳೆದ ವಾರ ‘ಈಗ(ನೊಣ)’ ಎನ್ನುವ ಸುದೀಪ್ ನಟಿಸಿದ ತೆಲುಗು ಚಿತ್ರ ನೋಡಿ ಬಂದೆನಲ್ಲ.
ಆ ಗುಂಗು ಇನ್ನೂ ನನ್ನೊಳಗೆ ಹಾಗೆ ಉಳಿದಿತ್ತೇನೋ...
ಸತ್ಯ ಹೇಳುತ್ತೇನೆ...ನೀವು ನಂಬಲೇಬೇಕು....
ಇದು ನಿನ್ನೆ ರಾತ್ರಿ ನಡೆದಿದ್ದು....

ಬೆಳಗಾದದ್ದೇ ಇದನ್ನು ನಿಮ್ಮಲ್ಲಿ ಯಾವಾಗ ಹಂಚಿಕೊಂಡೇನು ಎಂದು ಓಡೋಡಿ ಬಂದು ಫೇಸ್‌ಬುಕ್ ಮುಂದೆ ಕೂತಿದ್ದೇನೆ....
ವಿಷಯ ಹೀಗಿದೆ....

ರಾತ್ರಿ 12 ಗಂಟೆಗೆ ಪತ್ರಿಕೆ ಕೆಲಸ ಮುಗಿಸಿ
ಮನೆ ಸೇರಿದ್ದೆ...
ತುಸು ಹೊತ್ತು ಟಿ.ವಿ. ನೋಡಿ ಬಳಿಕ
ಕೋಣೆಯ ಟ್ಯೂಬ್‌ಲೈಟ್ ಹಚ್ಚಿ
ಜಯಂತ ಕಾಯ್ಕಿಣಿಯ ‘ಒಂದು ಜಿಲೇಬಿ’
ಕವನ ಸಂಕಲನ ಬಿಡಿಸಿ ಕೂತೆ...

ನಂಬಿದರೆ ನಂಬಿ...ಬಿಟ್ಟರೆ ಬಿಡಿ...
ಒಂದು ನೊಣ...
ನಾನು ‘ಈಗ’ ಸಿನಿಮಾದಲ್ಲಿ ನೋಡಿದೆನಲ್ಲ
ಅಂತಹದೇ ದೊಡ್ಡ ‘ಈಗ’
ಮೂತಿಯಲ್ಲಿ ಎರಡು ಕೆಂಪು ಕಣ್ಣುಗಳು
ಗಾಜಿನ ಎರಡು ಸೀಳಿನಂತೆ
ಹೊಳೆಯುತ್ತಿರುವ ಎರಡು ರೆಕ್ಕೆಗಳು...
ನನ್ನ ಪುಸ್ತಕದ ಮೇಲೆಯೇ ಬಂದು ಕೂತಿತು...

ನಾನು ಅದೇ ಮೊತ್ತ ಮೊದಲ ಬಾರಿ
ಒಂದು ನೊಣವನ್ನು ನೋಡುತ್ತಿದ್ದೇನೆ ಎಂಬ ಭಾವನೆ...
ಬೆರಳು ಹತ್ತಿರ ತಂದರೂ ಅದು ಹಾರುತ್ತಿಲ್ಲ...
ಯಾಕಿರಬಹುದು...ಏನಿರಬಹುದು..
ಎಂದು ಒಮ್ಮೆಲೆ ಭಯಭೀತನಾದೆ

ಒಮ್ಮೆ ಅದು ತನ್ನ ಮುಂಗೈಯಿಂದ
ಮುಖ ಉಜ್ಜಿಕೊಂಡಿತು
ಮತ್ತೆ ಮೂಗಿನ ಹೊಳ್ಳೆಗೆ ಕೈ ಹಾಕಿ
ತನ್ನ ರೆಕ್ಕೆಗೆ ಅದನ್ನು ಉಜ್ಜಿಕೊಂಡಿತು
ಆಮೇಲೆ ತನ್ನೆರಡು ಕೈಗಳನ್ನು ಮುಗಿದಂತೆ ಮಾಡಿತು
ನನ್ನ ಬಳಿ ಏನನ್ನಾದರೂ ಹೇಳುವುದಕ್ಕೆ
ಪ್ರಯತ್ನಿಸುತ್ತದೆಯೇ...ಎಂದೆನಿಸಿ
ಸುಮ್ಮನೆ ಕೇಳಿದೆ ‘‘ಏನಾದರೂ ಹೇಳುವುದಕ್ಕಿದೆಯೆ, ಯಾರು ನೀನು?’’

ಅದು ಗಮನಿಸಿದಂತೆ ಕಾಣಲಿಲ್ಲ
ನನಗೆ ಕುಂಡೆ ಹಾಕಿ ಪಕ್ಕದ ಟೇಬಲ್‌ಗೆ ನೆಗೆಯಿತು.
ಆದರೂ ನನ್ನ ಸುತ್ತಲೇ ಓಡಾಡುತ್ತಿತ್ತು...

ತಲೆಯೊಳಗೆ ಗುಂಯ್ ಎಂದು ನೊಣದ ಹಾಡು...
ಯಾರಿರಬಹುದು...
ಸತ್ತು ಹೋದ ನನ್ನ ತಂದೆ, ತಾಯಿ, ಅಣ್ಣ ಯಾರೂ ಆಗಿರಲಿಕ್ಕಿಲ್ಲ...
ಈ ಹಿಂದೆ ನೊಣವಾಗಿ ಬಂದಿರುವ
ಸಾಧ್ಯತೆಯಿದ್ದರೂ ನಾನು ಗಮನಿಸಿರಲಿಕ್ಕಿಲ್ಲ..
ಆದರೆ ಇಷ್ಟು ಸಮಯದ ಬಳಿಕ ಬರುವ ಸಾಧ್ಯತೆಯೇನಿಲ್ಲ..

ಎರಡು ತಿಂಗಳ ಹಿಂದೆ ಜಗಳ ಮಾಡಿ, ಸುನಾಮಿಯಂತೆ ಸಿಡಿದೆದ್ದು
ತವರು ಬಿಟ್ಟು ಹೋದ ತಂಗಿ
ನೊಣದ ರೂಪದಲ್ಲಿ ಬಂದಿರಬಹುದೆ?
ಎಂಬ ಅನುಮಾನ...
ಬಂದರು ಬಂದಾಳು...
ನನ್ನನ್ನು ಮರೆತೇ ಬಿಟ್ಟು ವೈಭವದಿಂದ
ಬಾಳುತ್ತಿದ್ದಾನೆಯೋ ಎಂಬ ಗೂಢಚಾರಿಕೆಗಾಗಿ...

ಕಪಾಟಿನಲ್ಲಿ ನಿಧಿಯಂತೆ ನನ್ನ ಅಣ್ಣ ಬಚ್ಚಿಟ್ಟಿದ್ದ
ಪುಸ್ತಕಗಳನ್ನೆಲ್ಲ ರಾಜಾರೋಷದಿಂದ ತೆರೆದು
ಓದುತ್ತಿದ್ದೇನಲ್ಲ...ಉಳಿಸಿ ಹೋದ

ಅವನ ಹಳೆಯ ಅಂಗಿಯನ್ನೆಲ್ಲ ಧರಿಸಿಕೊಳ್ಳುತ್ತಿದ್ದೇನಲ್ಲ....
ಅದನ್ನು ನೋಡುವುದಕ್ಕಾಗಿಯೇ
ಅಣ್ಣ ನೊಣವಾಗಿ ಬಂದಿರಬಹುದೆ...
ಸಿಟ್ಟಿಗೆದ್ದಿದ್ದರೆ ‘ಈಗ’ದಂತೆ ದಾಳಿ ಮಾಡುತ್ತಿದ್ದ
ಒಂದೋ ಅವನಾಗಿರಲಿಕ್ಕಿಲ್ಲ...
ಅವನಾಗಿದ್ದರೂ ಪುಸ್ತಕ ಮುಟ್ಟಿದ್ದಕ್ಕೆ
ಅವನಿಗೆ ಸಿಟ್ಟಿಲ್ಲ ಎಂಬ ಸಮಾಧಾನ

ಸುಮಾರು ವರ್ಷಗಳ ಹಿಂದೆ
ನಾನು ಸಣ್ಣವನಾಗಿದ್ದಾಗ
ಪಕ್ಕದ ಗೆಳೆಯನ ಕಂಪಾಸುಪೆಟ್ಟಿಗೆಯಿಂದ
ನೆಲ್ಲಿಕಾಯಿ ಕದ್ದು ತಿಂದಿದ್ದೆ...
ಅವನಿಗದು ಈಗ ತಿಳಿದಿರಬಹುದೆ..
ಯಾಕೆ ತಿಂದೆಯೆಂದು ಕೇಳುವುದಕ್ಕೆ
ನೊಣದ ರೂಪದಲ್ಲಿ ಬಂದಿರಬಹುದೆ?

ಕೆಲವು ತಿಂಗಳ ಹಿಂದೆ
ತನ್ನನ್ನು ತಾನು ಖ್ಯಾತ ಕತೆಗಾರನೆಂದು,
ಕವಿಯೆಂದು ಸುಮ್ಮನೆ ನಂಬಿ
ಬರೆಯುತ್ತಿದ್ದ ಒಬ್ಬ ಹಿರಿಯನನ್ನು
ಫೋನಿನಲ್ಲಿ ಸಿಕ್ಕಾಪಟ್ಟೆ ಜಾಲಾಡಿಸಿದ್ದೆ
ಅವನೇ ಈಗ ನೊಣದ ರೂಪದಲ್ಲಿ
ಬಂದಿದ್ದಾನೆಯೆ? ನನ್ನನ್ನೇ ಹೊಂಚಿ ನೋಡುತ್ತಿದ್ದಾನೆಯೆ?

ಫೇಸ್‌ಬುಕ್ಕಿನ ನನ್ನ ಗೆಳೆಯರಲ್ಲಿ
ಒಬ್ಬ ಸುಮ್ಮನೆ ತನ್ನ ಪ್ರೊಫೈಲ್‌ನಿಂದ
ನೊಣವಾಗಿ ನೆಗೆದು
ನನ್ನ ತನಿಖೆಗೆಂದು ಬಂದಿರಬಹುದೆ?
ಅಥವಾ ಯಾವನಾದರೂ ಪ್ರೊಫೈಲ್ ಹ್ಯಾಕರ್?

ಒಮ್ಮೆಲೆ ಗಂಭೀರವಾಗಿ ಯೋಚಿಸ ತೊಡಗಿದೆ
ಬಹುಶಃ
ನನ್ನುಸಿರಿನ ಮೂಲಕ ನೊಣದ
ರೂಪದಲ್ಲಿ ಹಾರಿ ಹೋದ ನನ್ನ ಆತ್ಮ
ಇದೀಗ ನನ್ನನ್ನು ನೋಡುತ್ತಿರುವುದೇ...
ಹಾಗಾದರೆ ಆ ನೊಣವನ್ನು ನೋಡುತ್ತಿರುವ ನಾನು ಯಾರು...
ಬರೆ ಹೆಣವೆ?

್ಠಹೀಗೆಲ್ಲ ಆ ಈಗವನ್ನು
ನೋಡುತ್ತಾ ನೋಡುತ್ತಾ ನಿದ್ದೆ ಹೋದೆ
ಮೊದಲ ಜಾವ ಇದ್ದಕ್ಕಿದ್ದಂತೆಯೇ ಎಚ್ಚರ
ಹಚ್ಚಿದ ಬೆಳಕು ಹಾಗೇ ಇತ್ತು
ಈಗ ಮಾತ್ರ ಅಲ್ಲೇಲ್ಲೂ ಕಾಣಲೇ ಇಲ್ಲ...
ಅದರ ಹೆಜ್ಜೆಗುರುತುಗಳೂ ಇರಲಿಲ್ಲ
ಮಡಿಲಲ್ಲಿ ಕಾಯ್ಕಿಣಿಯವರ ‘ಒಂದು ಜಿಲೇಬಿ’
ಪಾಪ ನೊಣ ನಿಜಕ್ಕೂ ಜಿಲೇಬಿಯೆಂದು
ಹತ್ತಿರ ಬಂದು ಮೋಸ ಹೋಯಿತೆ?
ಅಂದರೆ ಅದಕ್ಕೆ ಕನ್ನಡ
ಓದುವುದಕ್ಕೆ ಬರುತ್ತಿತ್ತೆ?

್ಠಹಾಗಾದರೆ ಅದು ಯಾವುದಾದರೂ ಕನ್ನಡದ ಹಿರಿಯ ವಿಮರ್ಶಕ, ಕವಿ ಯಾಕಾಗಿರಬಾರದು?
ಕೀರ್ತಿನಾಥ ಕುರ್ತಕೋಟಿಯೇ
ನೊಣವಾಗಿ ಬಂದು ಆ ಕವಿತೆಯ ಸಾಲುಗಳನ್ನು
ಓದಿ ಮರಳಿ ಹೋಯಿತೆ?

ಅಥವಾ ಜಯಂತ ಕಾಯ್ಕಿಣಿಯೇ ನೊಣ ರೂಪದಲ್ಲಿ ಬಂದು
ತನ್ನ ಕವಿತೆಗಳನ್ನು ಓದುವುದನ್ನು ನೋಡಿ
ಖುಷಿ ಪಟ್ಟು ಹೋದರೆ?

ಇರಲಿ...ನಾಳೆ ರಾತ್ರಿ ಅದೇ ಈಗ
ಮತ್ತೆ ಬಂದರೆ ನನ್ನೊಂದಿಗೆ
ಮಾತನಾಡುತ್ತದೆ ಎನ್ನುವ ನಂಬಿಕೆ ನನಗಿದೆ....
ಹಾಗೆಂದಾದರೂ ಮಾತನಾಡಿದರೆ
ಖಂಡಿತವಾಗಿಯೂ ನಿಮ್ಮಂದಿಗೆ ಹಂಚಿಕೊಳ್ಳುವೆ!

Thursday, July 12, 2012

‘ಪೊನ್ನ ಕಂಠಿ’ಯೆಂಬ ‘ವಿವೇಕ’ದೊಳಗೆ ಸೇರಿಕೊಂಡ ನಕಲಿ ಮಣಿ

ಈ ಲೇಖನವನ್ನು ನಾನು ಬರೆದಿರೋದು 5 ವರ್ಷಗಳ ಹಿಂದೆ.  ಡಿಸೆಂಬರ್ 14, 2007: ರಂದು. ಯಾಕೋ ಇದು ಇಂದಿಗೂ ಪ್ರಸ್ತುತ ಅನ್ನಿಸಿ ಗುಜರಿ ಅಂಗಡಿಗೆ ಹಾಕಿದ್ದೇನೆ.  

74ನೆ ಕನ್ನಡ ಸಾಹಿತ್ಯ ಸಮ್ಮೇಳನದ ಗದ್ದಲ, ಭಜನೆಗಳು ದಿನಪತ್ರಿಕೆಗಳಲ್ಲಿ ವರದಿಯಾಗುತ್ತಿರುವ ಸಂದರ್ಭದಲ್ಲೇ ಆಕಸ್ಮಿಕವಾಗಿ ಒಂದು ಗ್ರಂಥ ನನ್ನ ಕೈ ಸೇರಿತು. ಈ ಗ್ರಂಥದ ಹೆಸರು ‘ಪೊನ್ನಕಂಠಿ’. ಅಖಿಲ ಭಾರತ 66ನೆ ಕನ್ನಡ ಸಾಹಿತ್ಯ ಸಮ್ಮೇಳನ ಮಂಗಳೂರಿನಲ್ಲಿ ನಡೆದಾಗ ಹೊರತಂದ ಸುಮಾರು 450 ಪುಟಗಳ ಸ್ಮರಣಿಕೆ ಇದು. ಕಯ್ಯಿರ ಕಿಂಞಣ್ಣ ರೈ ಸಮ್ಮೇಳನದ ಅಧ್ಯಕ್ಷರಾಗಿದ್ದುದು ಈ ಸ್ಮರಣಿಕೆಗೆ ವಿಶೇಷ ಮಹತ್ವ ತಂದಿತ್ತು. ಸ್ಮರಣಿಕೆಯ ಪ್ರಧಾನ ಸಂಪಾದಕರು ಡಾ.ಬಿ.ಎ.ವಿವೇಕ ರೈ. ಅವರೀಗ ಹಂಪಿ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. (ಈ ಲೇಖನ ಬರೆಯುವ ಸಂದರ್ಭದಲ್ಲಿ)
ಈ ಪೊನ್ನಕಂಠಿ ಕೆಲವು ಕಾರಣಗಳಿಗಾಗಿ ಮುಖ್ಯವಾಗುತ್ತದೆ. ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಹೊರತಂದ ಸ್ಮರಣ ಸಂಚಿಕೆ ಇದಾದರೂ, ಇದರ ಸಂಪಾದಕೀಯ ಬಳಗದಲ್ಲಿರುವ ಲೇಖಕರು, ಚಿಂತಕರ ಹೆಸರುಗಳು ಹಾಗೂ ಈ ಗ್ರಂಥಕ್ಕೆ ಲೇಖನಗಳನ್ನು ಬರೆದವರ ಹೆಸರುಗಳು ‘ಪೊನ್ನಕಂಠಿ’ಯನ್ನು ಮುಖ್ಯವಾಗಿಸುತ್ತದೆ. ಹೊರನಾಡು ಮತ್ತು ಒಳನಾಡಿನ ಕನ್ನಡ ಚಟುವಟಿಕೆಗಳ ಕುರಿತು, ಕನ್ನಡ ಸಾಹಿತ್ಯ ಪರಿಷತ್ತಿನ ಕುರಿತು, ಸಮ್ಮೇಳನಾಧ್ಯಕ್ಷ ಕಯ್ಯಿರ ಕಿಂಞಣ್ಣ ರೈಗಳ ಕುರಿತು, ಸಮ್ಮೇಳನ ನಡೆಯುವ ನೆಲವಾದ ಕರಾವಳಿಯ ಕುರಿತಂತೆ ಈ ಗ್ರಂಥದಲ್ಲಿ ಲೇಖನಗಳಿವೆ. ಒಂದು ರೀತಿಯಲ್ಲಿ ಗ್ರಂಥವನ್ನು ‘ದಾಖಲೆ’ಯಾಗಿಸುವ ಪ್ರಯತ್ನವನ್ನು ಮಾಡಿದ್ದಾರೆ ವಿವೇಕ ರೈ. ಈ ಹಿನ್ನೆಲೆಯಲ್ಲೇ ಅವರು ಪುಸ್ತಕದ ಪರಿವಿಡಿಗೆ ‘ಪೊನ್ನಕಂಠಿ’ಯ ಮಣಿಗಳು ಎಂದು ಹೆಸರಿಟ್ಟಿದ್ದಾರೆ. ಕುತೂಹಲದಿಂದ ನಾನು ಪೊನ್ನಕಂಠಿಯ ಒಂದೊಂದೇ ಮಣಿಗಳನ್ನು ತಡವುತ್ತಾ ಹೋದೆ.
 ಈ ಮಣಿಗಳಲ್ಲಿ ‘ದಕ್ಷಿಣ ಕನ್ನಡ ಜಿಲ್ಲೆಯ ಈ ಶತಮಾನದ ನೋಟ’ ಎನ್ನುವ ಪ್ರಮುಖ ಅಧ್ಯಾಯವೊಂದಿದೆ. ಒಬ್ಬ ಪತ್ರಕರ್ತ, ಲೇಖಕನಾಗಿ ಆ ಅಧ್ಯಾಯದಲ್ಲಿ ನನ್ನ ಗಮನ ಸೆಳೆದ ಲೇಖನ ‘ಪತ್ರಿಕೋದ್ಯಮ’. ಇದನ್ನು ಬರೆದವರು ಖ್ಯಾತ ಪತ್ರಕರ್ತ ಈಶ್ವರ ದೈತೋಟ. ಕರಾವಳಿಯ ಪತ್ರಿಕೆ ಎಂದರೆ ಕರಾವಳಿಯ ಹಿಂಸೆ, ಕರಾವಳಿಯ ಕೋಮುಗಲಭೆ, ಕರಾವಳಿಯ ಜಾತೀಯತೆ, ಕರಾವಳಿಯ ಬದುಕು. ಕರಾವಳಿಯ ಪತ್ರಿಕೆಗಳನ್ನು ಹೊರತುಪಡಿಸಿ ಕರಾವಳಿಯ ಬದುಕನ್ನು ಚರ್ಚಿಸಲು ಸಾಧ್ಯವೇ ಇಲ್ಲ ಎಂಬ ವಾತಾವರಣದಲ್ಲಿ ನಾವಿದ್ದೇವೆ. ಆದುದರಿಂದ ಸಮ್ಮೇಳನ ಹೊರತಂದ ‘ಪೊನ್ನಕಂಠಿ’ಯಲ್ಲಿರುವ ‘ಪತ್ರಿಕೋದ್ಯಮ’ ಒಂದು ದಾಖಲೆಯಾಗಿ ಹಲವರಿಗೆ ಮಾರ್ಗದರ್ಶಿಯಾಗುತ್ತದೆ ಎಂಬ ಆಸಕ್ತಿಯಿಂದ ಆ ಲೇಖನವನ್ನು ಓದಿದೆ. ಆರೂವರೆ ಪುಟದ ಆ ಲೇಖನವನ್ನು ಒಂದೇ ದಮ್ಮಿನಲ್ಲಿ ಓದಿ ಮುಗಿಸಿದಾಗ ನನಗೆ ಆಘಾತವಾದುದ್ದು ಮಾತ್ರವಲ್ಲ. ಈ ಲೇಖನಕ್ಕೆ ಪೊನ್ನಕಂಠಿಯಲ್ಲಿ ಅವಕಾಶ ಕೊಟ್ಟ ಸಂಪಾದಕರ ಹೆಸರು ಡಾ.ವಿವೇಕ ರೈ ಆಗಿರಲಿಕ್ಕಿಲ್ಲ, ಬದಲಿಗೆ ಡಾ. ಅವಿವೇಕ ರೈ ಯಾಕಾಗಿರಬಹುದು ಎಂಬ ಅನುಮಾನ ಕಾಡಿತು.
ಈಶ್ವರ ದೈತೋಟರ ‘ಪತ್ರಿಕೋದ್ಯಮ’ ಲೇಖನದಲ್ಲಿ 19ನೆ ಶತಮಾನದ ‘ಮಂಗಳೂರು ಸಮಾಚಾರ’ದಿಂದ ಹಿಡಿದು ಸಿಂಡಿಕೇಟ್ ಬ್ಯಾಂಕಿನ ‘ಪಿಗ್ಮಿ’ ಎಂಬ ಉಚಿತ ಪತ್ರಿಕೆಗೂ ಸ್ಥಾನವಿದೆ. ಮಣಿಪಾಲದ ‘ಕಾಲೇಜು ಮ್ಯಾಗಸೀನ್’ ಇಲ್ಲಿ ದಾಖಲಿಸಲ್ಪಡುತ್ತದೆ. ಭುವನಾಭಿರಾಮ ಉಡುಪ ಎಂಬವರ ‘ಯುಗಪುರುಷ’ ಎಂಬ ಪತ್ರಿಕೆಗೂ ಇಲ್ಲಿ ಮನ್ನಣೆಯಿದೆ. ಬರೇ ಎರಡು ವರ್ಷ ಕಾಲ ಬದುಕಿದ್ದ ‘ಮೋರ್ನಿಂಗ್ ನ್ಯೂಸ್’ ಎಂಬ ಪತ್ರಿಕೆಯೂ ಇಲ್ಲಿ ಮಹತ್ವವನ್ನು ಪಡೆಯುತ್ತದೆ. ಆದರೆ ಒಂದು ದಶಕಕ್ಕೂ ಅಧಿಕ ಕಾಲ ಕರಾವಳಿಯಲ್ಲಿ ಮಾತ್ರವಲ್ಲ, ರಾಜ್ಯದ ಏಕಸ್ವಾಮ್ಯ ಪತ್ರಿಕೋದ್ಯಮದ ನಡುವೆ, ಒಂದು ವಿರೋಧ ಪಕ್ಷವಾಗಿ ಕೆಲಸ ಮಾಡಿದ ಪತ್ರಿಕೋದ್ಯಮದ ಭಾಷೆ, ನೋಟಕ್ಕೆ ಹೊಸ ಹೊಳಪನ್ನು ನೀಡಿದ, ಇಂದಿಗೂ ರಾಜ್ಯದ ಹಿರಿಯ ಚಿಂತಕರು, ಲೇಖಕರು ಮೆಲುಕು ಹಾಕುವ ‘ಮುಂಗಾರು’ ದಿನ ಪತ್ರಿಕೆಯ ಹೆಸರು ಕಾಟಾಚಾರಕ್ಕೂ ಇಲ್ಲಿ ಉಲ್ಲೇಖವಾಗುವುದಿಲ್ಲ. ಪತ್ರಿಕೋದ್ಯಮವನ್ನು ಬಂದಣಿಕೆಯಂತೆ ಸುತ್ತಿಕೊಂಡಿದ್ದ ವರ್ಣೀಯ ರಾಜಕಾರಣದ ವಿರುದ್ಧ ಒಬ್ಬಂಟಿಯಾಗಿ ಇರುವಷ್ಟು ಕಾಲ ಹೋರಾಡಿ, ಜಾತೀಯತೆಯ ವಿರುದ್ಧ ಸಮರವನ್ನೇ ಸಾರಿ, ಅಪ್ಪಟ ‘ಜಾತ್ಯತೀತ’ ಪತ್ರಿಕೆಯಾಗಿ ಬಾಳಿ ಇದೀಗ ಕಣ್ಮುಚ್ಚಿದರೂ ಜನಮಾನಸದಲ್ಲಿ ‘ಸತ್ತು ಬದುಕಿ’ರುವ ‘ಮುಂಗಾರು’ ಪತ್ರಿಕೆಗೆ ಮಂಗಳೂರಿನಲ್ಲಿ ನಡೆದ 66ನೆ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಸ್ಥಾನವಿರಲಿಲ್ಲ. ಈಶ್ವರ ದೈತೋಟ ಅವರಿಗೆ ಮುಂಗಾರು ಎನ್ನುವ ಪತ್ರಿಕೆಯ ಬಗ್ಗೆ ಯಾವುದೇ ಮಾಹಿತಿ ಇದ್ದಿರಲಿಲ್ಲವೆ? ಅಥವಾ ಅದು ಉಲ್ಲೇಖಿಸಬಹುದಾದ ಪತ್ರಿಕೆ ಅನ್ನಿಸಲಿಲ್ಲವೆ? ಆಗ ಉದಯವಾಣಿಯಲ್ಲಿ ಅಂಕಣವನ್ನೂ ಬರೆಯುತ್ತಿದ್ದ ದೈತೋಟ ಈ ಮೂಲಕ ಮಣಿಪಾಲದ ಪೈಗಳಿಗೆ ತಮ್ಮ ಕಪ್ಪವನ್ನು ಸಲ್ಲಿಸಿದರೆ? ಅಥವಾ ವೈಯಕ್ತಿಕವಾಗಿಯೂ ಅವರಿಗೆ ಮುಂಗಾರು ಕುರಿತಂತೆ ಅಸಹನೆಯಿತ್ತೆ? ಮೊದಲಾದ ಪ್ರಶ್ನೆಗಳು ಸಾಲು ಸಾಲಾಗಿ ಮೊದಲಿಟ್ಟಿತು. ಸಾಹಿತ್ಯ ಸಮ್ಮೇಳನದ ‘ಮೇಲ್ವರ್ಣ’ ಚರಿತ್ರೆಯ ಕುರಿತು ಅರಿವಿರುವ ಯಾರೂ ಈ ಸ್ಮರಣ ಸಂಚಿಕೆಯಲ್ಲಿ ‘ಮುಂಗಾರು’ ಮತ್ತು ವಡ್ಡರ್ಸೆ ರಘುರಾಮ ಶೆಟ್ಟಿಯವರಿಗೆ ಸ್ಥಾನ ಸಿಕ್ಕೀತು ಎಂದು ನಿರೀಕ್ಷಿಸಲಾರರು. ಆದರೆ ದುರದೃಷ್ಟಕ್ಕೆ ಈ ಪೊನ್ನಕಂಠಿ ಸ್ಮರಣ ಸಂಚಿಕೆಯ ಸಂಪಾದಕರಾಗಿದ್ದವರು ‘ಡಾ.ವಿವೇಕ ರೈ’. ಅಷ್ಟೇ ಅಲ್ಲ ಸಂಪಾದಕೀಯ ಬಳಗದಲ್ಲಿ ಡಾ.ಸಿ.ಹೊಸಬೆಟ್ಟು, ಡಾ.ಕೆ.ಚಿನ್ನಪ್ಪ ಗೌಡ, ಡಾ.ವಾಮನ ನಂದಾವರ ಮೊದಲಾದ ತುಳು ಸಂಸ್ಕೃತಿಯ ವಕ್ತಾರರಿದ್ದರು. ಅವರಾರಿಗೂ ಈ ಅಚಾತುರ್ಯವನ್ನು ತಪ್ಪಿಸಲು ಸಾಧ್ಯವಾಗಲಿಲ್ಲ ಎನ್ನುವುದು ಪ್ರಶ್ನಾರ್ಹ.
 ಯಾವ ಕಾರಣಕ್ಕೂ ಈ ಅಚಾತುರ್ಯ ಒಂದು ಆಕಸ್ಮಿಕ ಅಲ್ಲ. ಮುಂಗಾರು ಜೀವಂತವಿದ್ದಾಗ ಅದರ ಕಗ್ಗೊಲೆಗೆ ನಡೆದ ಸಂಚು ಒಂದೆರಡಲ್ಲ. ಕೊನೆಗೂ ಮುಂಗಾರು ಮತ್ತು ವಡ್ಡರ್ಸೆ ಆ ಸಂಚಿಗೆ ಬಲಿಯಾದರು. ಇದೀಗ ‘ಮುಂಗಾರು’ ಪತ್ರಿಕೆಯನ್ನು ಕರಾವಳಿಯ ಇತಿಹಾಸದಿಂದಲೇ ಅಳಿಸುವ ಪ್ರಯತ್ನ ನಡೆದಿದೆ. ಆ ಪ್ರಯತ್ನಕ್ಕೆ ಪೊನ್ನಕಂಠಿಯಲ್ಲಿ ವಿವೇಕ ರೈಯಂತಹ ಶೂದ್ರ ಚಿಂತಕನನ್ನೇ ಬಳಸಿರುವುದು ದುರಂತ. ಪೊನ್ನಕಂಠಿ ವಿಶ್ವವಿದ್ಯಾನಿಲಯಗಳ ಲೈಬ್ರರಿಗಳಲ್ಲಿ, ವಿವಿಧ ಶಾಲಾ ಕಾಲೇಜುಗಳಲ್ಲಿ ಹರಿದಾಡುತ್ತಿದೆ. ಎಂ.ಫಿಲ್, ಪಿಎಚ್‌ಡಿ ಎಂದು ಹೊರಡುವವರು, ಸಂಶೋಧನಾ ವಿದ್ಯಾರ್ಥಿಗಳು ಕರಾವಳಿ ಪತ್ರಿಕೋದ್ಯಮದ ಕುರಿತು ಬರೆಯುವಾಗ ‘ಪೊನ್ನಕಂಠಿ’ಯನ್ನೇನಾದರೂ ಆಧಾರವಾಗಿಟ್ಟುಕೊಂಡರೆ ಅದರ ಪರಿಣಾಮ ಏನಾಗುತ್ತದೆ ಎನ್ನುವುದು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.
  ವಿವೇಕ ರೈಗೆ ‘ಮುಂಗಾರು’ ಜೊತೆಗೆ ಕರುಳ ಬಳ್ಳಿಯ ಸಂಬಂಧವಿತ್ತು. ಕೆಲವು ವರ್ಷಗಳ ಕಾಲ ಅವರು ಮುಂಗಾರು ಪತ್ರಿಕೆಯಲ್ಲಿ ಅಂಕಣ ಬರೆಯುತ್ತಿದ್ದರು. ಶೂದ್ರ ಸಂವೇದನೆಗೆ ಹೊಸ ಜೀವವನ್ನು ಕೊಟ್ಟ ಮುಂಗಾರು ಪತ್ರಿಕೆಗೆ ವಿವೇಕ ರೈ ಸಂಪಾದಕತ್ವದ ಕೃತಿಯಲ್ಲಿ ಸ್ಥಾನವಿಲ್ಲ ಎನ್ನುವುದು ಬರೇ ಮುಂಗಾರುವಿನ ದುರಂತವನ್ನಷ್ಟೇ ಹೇಳುತ್ತದೆಯೆ? ಕನಿಷ್ಠ ಆ ಲೇಖನವನ್ನು ಪೊನ್ನಕಂಠಿಯಿಂದ ಹೊರಗಿಡುವ ಧೈರ್ಯವಿಲ್ಲದೇ ಇದ್ದರೆ, ತನ್ನ ಸಂಪಾದಕತ್ವಕ್ಕಾದರೂ ರಾಜೀನಾಮೆ ನೀಡಬೇಕಾಗಿತ್ತು. ಆ ಲೇಖನವನ್ನು ಕಸದ ಬುಟ್ಟಿಗೆ ಹಾಕದಂತೆ ವಿವೇಕ ರೈಯವರನ್ನು ತಡೆದ ಕೈಗಳಾದರೂ ಯಾವುವು?
ಮುಂಗಾರು ಬರೇ ಪತ್ರಿಕೆ ಮಾತ್ರವಾಗಿರಲಿಲ್ಲ. ಪ್ರತಿಭಾನ್ವಿತರ ಆವಾಸ ಸ್ಥಾನವಾಗಿತ್ತು ಅದು. ದಲಿತರು, ಶೂದ್ರರನ್ನು ಕರೆ ಕರೆದು ಕೆಲಸ ಕೊಡುತ್ತಿದ್ದವರು ವಡ್ಡರ್ಸೆ. ಇಂದು ಕನ್ನಡದಲ್ಲಿ ಗುರುತಿಸಿಕೊಂಡಿರುವ ಖ್ಯಾತ ಪತ್ರಕರ್ತರೆಲ್ಲ ಮುಂಗಾರುವಿನಿಂದ ಹೊರ ಬಂದವರೆನ್ನುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ. ಇಂದೂಧರ ಹೊನ್ನಾಪುರ, ದಿನೇಶ್ ಅಮೀನ್ ಮಟ್ಟು, ಟಿ.ಕೆ.ತ್ಯಾಗರಾಜ್, ಬಿ.ಎಂ.ಹನೀಫ್, ವಿಜು ಪೂಣಚ್ಚ, ಪಿ. ಮಹಮ್ಮದ್, ಚಿದಂಬರ ಬೈಕಂಪಾಡಿ, ಲೋಲಾಕ್ಷ, ಬಿ.ಬಿ.ಶೆಟ್ಟಿಗಾರ್ ಹೀಗೆ...ಒಂದು ದೊಡ್ಡ ಪತ್ರಕರ್ತರ ದಂಡೇ ಮುಂಗಾರು ಹೆಸರಿನ ಜೊತೆಗೆ ತಳಕು ಹಾಕಿಕೊಳ್ಳುತ್ತದೆ. ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ‘ಮುಂಗಾರು’ವಿಗೆ ಇಂತಹದೊಂದು ದೈನೇಸಿ ಸ್ಥಿತಿ ಒದಗಿದಾಗ ಅದರ ಕುರಿತಂತೆ ಈ ಎಲ್ಲ ಪತ್ರಕರ್ತರು ಒಂದೊಂದು ಸಾಲಿನ ಖಂಡನೆ ಹೇಳಿಕೆ ನೀಡಿದ್ದರೂ ಆ ಸ್ಮರಣ ಸಂಚಿಕೆ ಮಾರುಕಟ್ಟೆಗೆ ಬರುತ್ತಿರಲಿಲ್ಲ. ಬಂದರೂ ತಿದ್ದುಪಡಿಯಾಗಿ ಬರುತ್ತಿತ್ತು. ದುರಂತವೆಂದರೆ ಮುಂಗಾರುವಿನ ಉಪ್ಪು ತಿಂದ, ಮುಂಗಾರುವಿನಲ್ಲಿ ಹುಟ್ಟಿ ಪತ್ರಕರ್ತರೆಂದು ಗುರುತಿಸಿಕೊಂಡು ನಾಡಿನಾದ್ಯಂತ ಬೆಳೆದ ಪತ್ರಕರ್ತರು ಬಾಯಿ ಮುಚ್ಚಿ ಕೂತರು. ‘ಮುಂಗಾರು’ ನಿಜಕ್ಕೂ ಸತ್ತದ್ದು ಆಗ. ತಮ್ಮನ್ನು ಬೆಳೆಸಿದ ಮುಂಗಾರುವನ್ನು ಕರಾವಳಿ ಇತಿಹಾಸದಿಂದಲೇ ಅಳಿಸಿ ಹಾಕುವ ಹುನ್ನಾರದ ವಿರುದ್ಧ ಪ್ರತಿಭಟಿಸಲಾಗದೆ ಮುಂಗಾರುವಿನ ಮಾಜಿ ಪತ್ರಕರ್ತರು, ಅದರ ಅಂಕಣಕಾರರು, ಲೇಖಕರು, ಕರಾವಳಿಯ ಶೂದ್ರ, ದಲಿತರು ಬಾಯಿ ಮುಚ್ಚಿ ಕೂತರಲ್ಲ, ಆಗ ನಿಜವಾದ ಅರ್ಥದಲ್ಲಿ ‘ಮುಂಗಾರು’ ದಿನ ಪತ್ರಿಕೆ ಸತ್ತು ಹೋಯಿತು.

(ಡಿಸೆಂಬರ್ 14, 2007: ಶುಕ್ರವಾರ)

Wednesday, July 11, 2012

ಭವಿಷ್ಯದ ರಘುವರನ್ !

ತೆಲುಗಿನ ‘ಈಗ’ ಚಿತ್ರದಲ್ಲಿ ಸುಧೀಪ್ ಅಭಿನಯ ನೋಡಿದವರ ಮನದಲ್ಲಿ -ಸುದೀಪ್ ಅವರು ರಘುವರನ್ ಜಾಗವನ್ನು ತುಂಬಲಿದ್ದಾರೆಯೆ’ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡರೆ ಅದರಲ್ಲಿ ಅಚ್ಚರಿಯಿಲ್ಲ. ಖಳಪಾತ್ರಕ್ಕೆ ಒಂದು ಹೊಸ ‘ಇಮೇಜ್’ನ್ನು ತಂದುಕೊಟ್ಟವರು ರಘುವರನ್. ಆವರೆಗೆ ಖಳನೆಂದರೆ, ಆಜಾನುಬಾಹು, ಅಟ್ಟಹಾಸದ ನಗು ಎಂದು ನಂಬಿದವರಿಗೆ ಒಂದು ಹೊಸ ಶಾಕ್ ನೀಡಿದವರು ರಘುವರನ್. ರಾಮ್‌ಗೋಪಾಲ್‌ವರ್ಮಾ ಅವರ ತೆಲುಗಿನ ‘ಶಿವ’ ಚಿತ್ರದಲ್ಲಿ ನಾಯಕನಿಗಿಂತ ಖಳನಾಯಕನೇ ಮೊದಲಬಾರಿಗೆ ಪ್ರೇಕ್ಷಕರಿಗೆ ಇಷ್ಟವಾದ. ನಾಯಕ ನಾಗಾರ್ಜುನ್ ಈ ಚಿತ್ರದಲ್ಲಿ ಪರಿಣಾಮಕಾರಿ ಅಭಿನಯ ನೀಡಿದ್ದರೂ, ರಘುವರನ್ ಅತನನ್ನು ಮೀರಿಸಿ ಪ್ರೇಕ್ಷಕರ ಎದೆಯೊಳಗೆ ಇಳಿದರು.
ಪೀಚಲು ದೇಹ, ಗೊಗ್ಗರು ಸ್ವರ, ಎಲ್ಲಕ್ಕಿಂತ ಮುಖ್ಯವಾಗಿ ಆ ಧ್ವನಿಯಲ್ಲಿನ ಏರಿಳಿತ ಪ್ರೇಕ್ಷಕರ ಪಾಲಿಗೆ ಹೊಸ ಅನುಭವವಾಗಿತ್ತು. ಮುಂದೆ ರಘುವರನ್‌ನ್ನು ಖಳಪಾತ್ರದಲ್ಲಿ ಮೀರಿಸುವವರೇ ಇಲ್ಲ ಎನ್ನುವಂತಾಯಿತು. ಕನ್ನಡದ ಪ್ರಕಾಶ್ ರೈ ತಮಿಳು, ತೆಲುಗಿಗೆ ಕಾಲಿಡುವವರೆಗೆ ರಘುವರನ್ ಖಳ ಜಗತ್ತನ್ನು ಏಕ ವ್ಯಕ್ತಿಯಾಗಿ ಆಳಿದರು.
ವಿಶೇಷವೆಂದರೆ ರಘುವರನ್ ಕನ್ನಡದಲ್ಲೂ ನಟಿಸಿದ್ದರು. ಅವರು ನಟಿಸಿದ ‘ಪ್ರತ್ಯರ್ಥ’ ಚಿತ್ರದಲ್ಲಿ ಸುದೀಪ್ ಒಂದು ಪುಟ್ಟ ಪಾತ್ರವನ್ನು ಮಾಡಿದ್ದರು. ಅಂತಹ ಸುದೀಪ್ ಇದೀಗ ತೆಲುಗಿನಲ್ಲಿ ರಘುವರನ್ ಅವರನ್ನು ನೆನಪಿಸುವಂತಹ ಪಾತ್ರವೊಂದನ್ನು ‘ಈಗ’ ಚಿತ್ರದಲ್ಲಿ ನಿರ್ವಹಿಸಿದ್ದಾರೆ. ರಘುವರನ್ ಅವರನ್ನೇ ಹೋಲುವ ಅದೇ ಪೀಚಲು ದೇಹ. ಗೊಗ್ಗರು ಸ್ವರ. ಧ್ವನಿಯ ಏರಿಳಿತ. ಬ್ಲೇಡಿನ ಅಲಗಿನಂತಹ ನೋಟ. ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ಅಪೂರ್ವ ಖಳನಟನಾಗಿ ಸುದೀಪ್ ಮಿಂಚಿದರೆ ಅದರಲ್ಲಿ ಅಚ್ಚರಿಯಿಲ್ಲ. ಹಿಂದಿಯ ‘ರಣ್’ ಚಿತ್ರದಲ್ಲಿ ಸುದೀಪ್ ಖಳನಾಗಿ ನಟಿಸಿದ್ದರೂ, ಅದರಲ್ಲಿ ಈ ಪರಿ ಭರವಸೆಯನ್ನು ಮೂಡಿಸಿರಲಿಲ್ಲ.
ಕನ್ನಡದ ಹಲವು ನಟರು ದಕ್ಷಿಣ ಭಾರತದ ಖಳರಾಗಿ ಮಿಂಚಿದ್ದಾರೆ. ಅವರಲ್ಲಿ ಪ್ರಮುಖರು ಟೈಗರ್ ಪ್ರಭಾಕರ್ ಮತ್ತು ಪ್ರಕಾಶ್ ರೈ. ಇದೀಗ ತೆಲುಗು ಚಿತ್ರರಂಗದ ಮೂಲಕ ಸುದೀಪ್ ಗುರುತಿಸಲ್ಪಟ್ಟಿದ್ದಾರೆ. ಸುದೀಪ್‌ಗೆ ನಾಯಕನಾಗಿ ನಟಿಸುವ ಆಸೆಯಿದ್ದರೂ, ಅವರ ಪ್ರತಿಭೆ ಖಳಪಾತ್ರಗಳಿಗೆ ಪೂರಕವಾಗಿದೆ. ಆದುದರಿಂದ ನಾಯಕ ಭ್ರಮೆಯನ್ನು ಬಿಟ್ಟು, ರಘುವರನ್ ಉಳಿಸಿಹೋದ ಸಾಮ್ರಾಜ್ಯದ ಖಾಲಿ ಪೀಠವನ್ನು ಸುದೀಪ್ ಏರಬೇಕಾಗಿದೆ. ಅವರ ಪ್ರತಿಭೆಗೆ ಇನ್ನಷ್ಟು ಅವಕಾಶಗಳು ಸಿಗಬೇಕಾಗಿದೆ.

Saturday, July 7, 2012

ದಾಖಲೆ!


ಎಲ್ಲ ದಾಖಲೆಗಳನ್ನು ಒದಗಿಸಿದ ಬಳಿಕ ಆ ಬಡವನಿಗೆ ರೇಶನ್ ಕಾರ್ಡ್ ಸಿಕ್ಕಿತು.
ಅದನ್ನು ಹಿಡಿದುಕೊಂಡು ಕೇಳಿದ ‘‘ಸಾರ್...ಇದಕ್ಕೆ ಅಕ್ಕಿ, ಸೀಮೆಎಣ್ಣೆ ಸಿಗತ್ತ’’
‘‘ಮತದಾರನ ಗುರುತು ಚೀಟಿ ಮಾಡುವುದಕ್ಕೆ ಇದರಿಂದ ತುಂಬಾ ಅನುಕೂಲ ಆಗತ್ತೆ’’
ಸರಿ. ರೇಶನ್ ಕಾರ್ಡ್ ಹಿಡಿದುಕೊಂಡು ಅಲೆಯ ತೊಡಗಿದ.
ಕೊನೆಗೂ ಮತದಾರನ ಗುರುತು ಚೀಟಿ ಸಿಕ್ಕಿತು ‘‘ಸಾರ್ ಇದರಿಂದ ಏನು ಅನುಕೂಲ ...’’ ಕೇಳಿದ.
‘‘ಓಟರ್ ಐಡಿ ಇದ್ರೆ ಬ್ಯಾಂಕ್ ಅಕೌಂಟ್ ಓಪನ್ ಮಾಡೊಕ್ಕೆ ಸುಲಭವಾಗುತ್ತೆ....’’
ರೇಶನ್‌ಕಾರ್ಡ್, ಓಟರ್‌ಐಡಿ ಹಿಡಿದುಕೊಂಡು ಮತ್ತೆ ಬ್ಯಾಂಕ್‌ಗೆ ಅಲೆಯ ತೊಡಗಿದ.
ಬ್ಯಾಂಕ್ ಅಕೌಂಟ್ ಓಪನ್ ಮಾಡಿದ.
‘‘ಸಾರ್...ಈ ಅಕೌಂಟ್‌ನಿಂದ ಏನು ಲಾಭ...?’’
‘‘ಅಕೌಂಟ್ ಓಪನ್ ಮಾಡಿದರೆ ಆಧಾರ್ ಕಾರ್ಡ್ ಮಾಡ್ಲಿಕ್ಕೆ ಬಹಳ ಸುಲಭ’’
ಬಡವ ತನ್ನ ರೇಶನ್ ಕಾರ್ಡ್, ಓಟರ್ ಐಡಿ, ಬ್ಯಾಂಕ್‌ಪಾಸ್‌ಬುಕ್ ಹಿಡಿದುಕೊಂಡು ಮತ್ತೆ ಅಲೆಯ ತೊಡಗಿದ.
ಕೊನೆಗೂ ಆಧಾರ್ ಕಾರ್ಡ್ ಸಿಕ್ಕಿತು.
‘‘ಸಾರ್ ಈ ಆಧಾರ್ ಕಾರ್ಡ್‌ನಿಂದ ನನಗೆ ಏನು ಲಾಭ...?’’
‘‘ಎಂತಹ ಮೂರ್ಖ ಪ್ರಶ್ನೆ. ಆಧಾರ್ ಇಲ್ಲದೇ ಇದ್ದರೆ ಏನೂ ಇಲ್ಲ. ರೇಶನ್ ಕಾರ್ಡ್, ಓಟರ್ ಐಡಿ, ಬ್ಯಾಂಕ್ ಪಾಸ್ ಬುಕ್...ಇದೆಲ್ಲ ಮಾಡುವುದಕ್ಕೆ ಆಧಾರ್ ಬೇಕೇ ಬೇಕು....’’
‘‘ಅದಿರ್ಲಿ ಸಾರ್...ರೇಶನ್ ಕಾರ್ಡ್‌ನಿಂದ ನನಗೇನು ಲಾಭ...?’’
‘‘ಅದೇರಿ....ಆಧಾರ್ ಕಾರ್ಡ್ ಮಾಡೋದಕ್ಕೆ...ಓಟರ್‌ಐಡಿ ಮಾಡೋದಕ್ಕೆ....’’
‘‘............................’’

Monday, July 2, 2012

ಮಳೆ ಮತ್ತು ಇತರ ಕತೆಗಳು


ಮಳೆ
ಮೋಡ ಬಿತ್ತನೆ ಮಾಡುತ್ತೇವೆ ಮುಖ್ಯಮಂತ್ರಿ ಘೋಷಿಸಿದರು.
ಮೋಡ ಬಿತ್ತನೆಯಾಯಿತು.
ಅಂದು ಮುಂಜಾನೆ ಎದ್ದು ನೋಡಿದರೆ ಮಳೆ ನೀರು ಕೆಂಪಾಗಿ ಸುರಿಯುತ್ತಿತ್ತು.
ರೈತನೊಬ್ಬ ನಿಟ್ಟುಸಿರಿಟ್ಟು ಹೇಳಿದ ‘‘ಸಹಜವಾಗಿ ಆಗಬೇಕಾದ ಹೆರಿಗೆಯನ್ನು ಅವಸರದಿಂದ ಇಳಿಸಿದರೆ ಇನ್ನೇನಾಗುತ್ತೆ...’’
 
ಆಕಾಶ
ಭೂಮಿ ಆಕಾಶವನ್ನು ನೋಡಿ ನಕ್ಕು ಹೇಳಿತು ‘‘ನನ್ನಲ್ಲಿ ಸಕಲ ಜೀವ ವೈವಿಧ್ಯವಿದೆ. ನಿನ್ನಲ್ಲಿ ಏನಿದೆ? ನೀನು ಬಟಾ ಬಯಲು....’’
‘‘ನಿನ್ನಂತಹ ಕೋಟ್ಯಂತರ ಗ್ರಹಗಳನ್ನು ತುಂಬಿಕೊಂಡಿದ್ದೂ ಬಟಾಬಯಲಾಗಿರುವುದು ನನ್ನ ಹೆಗ್ಗಳಿಕೆ...’’

ತಲೆ
ರೈತರು ಯಾವತ್ತೂ ತಲೆಯೆತ್ತಿಯೇ ಓಡಾಡುತ್ತಾರೆ.
ಯಾಕೆಂದರೆ
ತೆಂಗಿನ ಮರದ ಫಸಲನ್ನು ನೋಡಬೇಕಾದರೆ ತಲೆಯೆತ್ತಲೇ ಬೇಕು.
ಗೊಬ್ಬರ ಹಾಕುವುದಕ್ಕಾಗಿ ಬಾಗುವ ರೈತ, ಫಸಲು ನೋಡುವ ನೆಪದಲ್ಲಿ ತಲೆಯೆತ್ತಿ ಬದುಕುತ್ತಾನೆ.

ಜಗತ್ತು
ಖ್ಯಾತ ಓಟಗಾರನೊಬ್ಬನ ಕಾಲು ಶಾಶ್ವತವಾಗಿ ಮುರಿದು ಹೋಯಿತು.
ಆವರೆಗೆ ಒಮ್ಮೆಯೂ ಹಿಂದೆ ತಿರುಗಿ ನೋಡದೆ ಓಡುತ್ತಿದ್ದವನು ತಟ್ಟನೆ ನಿಂತು ಬಿಟ್ಟ.
ತನ್ನ ಜೊತೆಗೆ ಜಗತ್ತು ಓಡುತ್ತಿದೆ ಎಂದು ಭಾವಿಸುತ್ತಿದ್ದವನು
ಮೊದಲ ಬಾರಿಗೆ ಜಗತ್ತು ಕುಂಟುತ್ತಿರುವುದನ್ನು ಕಂಡ.

ನೆರಳು
‘‘ನಮ್ಮ ನೆರಳು ನಮ್ಮನ್ನೇಕೆ ಹಿಂಬಾಲಿಸುತ್ತದೆ’’ ಶಿಷ್ಯ ಕೇಳಿದ.
‘‘ಹಾಗೇನಿಲ್ಲ. ನಿನ್ನಂಥಹ ಕೆಲವರು ತಮ್ಮ ನೆರಳನ್ನೇ ಹಿಂಬಾಲಿಸುತ್ತಿರುತ್ತಾರೆ..’’ ಸಂತ ಹೇಳಿದ.

ರಕ್ತ
‘‘ಸಾರ್...ನನ್ನ ತಾಯಿಗೆ ಅರ್ಜೆಂಟಾಗಿ ರಕ್ತ ಬೇಕಾಗಿದೆ ಕೊಡುತ್ತೀರಾ...’’
‘‘ನೀನೇ ಕೊಡಬಹುದಲ್ಲ ರಕ್ತವನ್ನು...ಇಷ್ಟು ಧಡೂತಿ ಶರೀರ ಹೊಂದಿದ್ದೀಯ?’’
‘‘ಇಲ್ಲ ಸಾರ್...ನಾನು ರಕ್ತ ಕೊಟ್ಟರೆ ತಾಯಿ ಬೈಯ್ತಳೆ...’’ ಮುದ್ದಿನ ಮಗ ಹೇಳಿದ.

ಸೂರು
ಒಂದು ಊರು.
ಅಲ್ಲಿಗೆ ಸರಕಾರ ಒಂದು ಆಧುನಿಕ ಶೌಚಾಲಯವನ್ನು ಕೊಟ್ಟಿತು.
ಊರಿನ ಸೂರಿಲ್ಲದ ಜನ ಅದರಲ್ಲಿ ಒಲೆ ಹೂಡಿ ಬದುಕತೊಡಗಿದರು.
ಶೌಚಕ್ಕೆ ಎಂದಿನಂತೆ ಪಕ್ಕದ ಬಯಲನ್ನೇ ಬಳಸತೊಡಗಿದರು.

ಭಿಕ್ಷುಕ
ಒಬ್ಬ ಭಿಕ್ಷುಕನನ್ನು ನೋಡಿದ ರಾಜ ಅನುಕಂಪದಿಂದ ಆತನಿಗೆ ಚಿನ್ನದ ತಟ್ಟೆಯೊಂದನ್ನು ಕೊಟ್ಟು ಹೇಳಿದ ‘‘ಇದು ಸಹಸ್ರಾರು ರೂಪಾಯಿ ಬೆಲೆಬಾಳುವ ತಟ್ಟೆ. ಇಂದಿನಿಂದ ನೀನು ನಿನ್ನ ಜೀವನವನ್ನು ಬದಲಿಸು’’
ಅಂದಿನಿಂದ ಭಿಕ್ಷುಕ ಚಿನ್ನದ ತಟ್ಟೆಯನ್ನು ಹಿಡಿದು ಭಿಕ್ಷೆ ಬೇಡ ತೊಡಗಿದ.

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.