Friday, January 16, 2015

ಫ್ರೆಂಚರಿಗೆ ನನ್ನ ಕಂಬನಿ... ಆದರೆ ಕ್ಷಮೆಯಾಚನೆಯಲ್ಲ!

ರಾಣಾ ಅಯ್ಯೂಬ್  
ಪೇಶಾವರದಲ್ಲಿ ತಾಲಿಬಾನಿಗಳು ಪಾಕಿಸ್ತಾನದ ಮಕ್ಕಳ ಮೇಲೆ ಬರ್ಬರ ದಾಳಿ ನಡೆಸಿದಾಗ ಇಡೀ ಜಗತ್ತು ಒಂದಾಗಿ ಕಂಬನಿ ಮಿಡಿಯಿತು. ವೈಯಕ್ತಿಕವಾಗಿ ನಮ್ಮ ಮಕ್ಕಳ ಮೇಲೆಯೇ ನಡೆದ ದಾಳಿ ಇದು. ಅಂದು ರಾತ್ರಿ ನಾನು ನಿದ್ದೆ ಇಲ್ಲದೆ ನರಳಿದ್ದೆ. ಅಂತಾರಾಷ್ಟ್ರೀಯ ರಾಜಕೀಯ ಅದೆಷ್ಟು ಬರ್ಬರವಾಗುತ್ತಿದೆ ಎಂದರೆ ಅದು ಯಾವುದೇ ಊಹೆಗಳಿಗೆ ನಿಲುಕದಂತಾಗಿದೆ.
ಆದರೆ ಪೇಷಾವರದ ಬರ್ಬರ ಘಟನೆಯನ್ನು ಮುಂದಿಟ್ಟುಕೊಂಡು ಒಂದು ಗುಂಪು‘ಇಸ್ಲಾಮಾಫೋಬಿಯಾ’ಯವನ್ನು ಮತ್ತೆ ಜಾಗತಗೊಳಿಸತೊಡಗಿತು. ಇದರಜೊತೆ ಜೊತೆಗೇ ಪ್ರತಿ ಮುಸ್ಲಿಮನು ಪ್ರತ್ಯೇಕವಾಗಿ ‘ಅದನ್ನು ನಾನು ಖಂಡಿಸಿದ್ದೇನೆ’ ಎನ್ನುವುದು ಕಡ್ಡಾಯವಾಗಿ ಘೋಷಿಸಬೇಕಾಯಿತು. ಮತ್ತು ಜಗತ್ತು ಮುಸ್ಲಿಮರಿಗೆ ಹೊಣೆಗಾರಿಕೆಗಳ ಪಾಠಗಳನ್ನು ಬೋಧಿಸಿದವು. ಫೇಸ್‌ಬುಕ್‌ನಲ್ಲಂತೂ ನೇರವಾಗಿ ಇಸ್ಲಾಮಿನ ಮೇಲೆ, ಮುಸ್ಲಿಮರ ಮೇಲೆ ಬರ್ಬರವಾಗಿ ದಾಳಿ ನಡೆದವು. ತಾಲಿಬಾನಿಗಳು ದಾಳಿ ನಡೆಸಿರುವುದು ಮುಸ್ಲಿಮರ ಮೇಲೆ ಅದರಲ್ಲೂ ಮುಸ್ಲಿಮರೇ ಬಹುಸಂಖ್ಯಾತವಾಗಿರುವ ದೇಶವೊಂದರ ಮೇಲೆಯೇ ಆಗಿದ್ದರೂ, ಅದಕ್ಕೂ ಧರ್ಮಕ್ಕೂ ನೇರವಾಗಿ ತಳಕು ಹಾಕಲಾಯಿತು.
ಪೇಷಾವರದ ಈ ದಾಳಿಯ ಮರುದಿನ ಇರಬೇಕು. ನನ್ನ ಮೆಚ್ಚಿನ ಪತ್ರಿಕೆಯಾಗಿರುವ ಗೌರಿ ಲಂಕೇಶ್‌ನಿಂದ ನನ್ನ ಆತ್ಮೀಯರಾಗಿರುವ ವರದಿಗಾರ ರಾ. ಸೋಮನಾಥ್ ಫೋನ್ ಮಾಡಿದ್ದರು. ಫೋನ್‌ನಲ್ಲಿ ಅವರು ನನ್ನಲ್ಲಿ ಕೇಳಿದ ಪ್ರಶ್ನೆ ‘‘ಸಾರ್...ಕುರ್‌ಆನ್‌ನ ಯಾವ ಅಧ್ಯಾಯದ ಆಧಾರದಲ್ಲಿ ಈ ತಾಲಿಬಾನಿಗಳು ಈ ಕೊಲೆಗಳನ್ನು ಮಾಡುತ್ತಿರುವುದು? ಆ ಅಧ್ಯಾಯದ ಬಗ್ಗೆ ಸ್ವಲ್ಪ ಮಾಹಿತಿ ನೀಡುತ್ತೀರಾ?’’ ಎಂದರು.
ನನಗೋ ಶಾಕ್. ಪ್ರಗತಿಪರವಾಗಿರುವ ಮನಸ್ಸುಗಳೇ ತಮಗೆ ಅರಿವಿಲ್ಲದೆ ಈ ರೀತಿಯಲ್ಲಿ ಯೋಚನೆ ಮಾಡುತ್ತಿರುವಾಗ ಉಳಿದವರ ಪಾಡೇನು? ನಾನು ನನಗೆ ಸಾಧ್ಯವಾಷ್ಟು ಅವರಿಗೆ ದೂರವಾಣಿಯಲ್ಲಿ ವಿವರಿಸಿದೆ. ಅಥವಾ ಒಂದಿಷ್ಟು ಕೊರೆದೆ.
‘‘ತಾಲಿಬಾನ್‌ನ ಈ ಕೊಲೆಗಳಿಗೆ ಕಾರಣಗಳನ್ನು ನೀವು ಕುರ್‌ಆನ್‌ನಲ್ಲಿ ಹುಡುಕಿದರೆ ನಿಮಗೆ ಸಿಗಲಾರದು. ಅಂತಾರಾಷ್ಟ್ರೀಯ ರಾಜಕೀಯಗಳನ್ನು ಒಂದಿಷ್ಟು ಅಧ್ಯಯನ ಮಾಡಿದರೆ ಅದರ ಕಾರಣಗಳನ್ನು ಗುರುತಿಸಬಹುದೇನೋ. ತಾಲಿಬಾನ್ ಹುಟ್ಟಿಕೊಂಡಿದ್ದು ಇಸ್ಲಾಮ್‌ನ ರಕ್ಷಣೆಗಾಗಿಯಲ್ಲ. ಅಫ್ಘಾನಿಸ್ತಾನವನ್ನು ಹಿಡಿತದಲ್ಲಿಟ್ಟುಕೊಂಡಿರುವ ರಷ್ಯನ್ನರನ್ನು ಓಡಿಸುವುದಕ್ಕಾಗಿ. ಎಲ್ಲಕ್ಕಿಂತ ಮುಖ್ಯವಾಗಿ ಈ ತಾಲಿಬಾನ್‌ಗಳನ್ನು ಕಟ್ಟಿದ್ದೇ ಪಾಕಿಸ್ತಾನ ಮತ್ತು ಅಮೆರಿಕ ಜೊತೆ ಸೇರಿಕೊಂಡು. ಅವರಿಗೆ ಹಣ ಮತ್ತು ತರಬೇತಿಯನ್ನು ನೀಡಿದ್ದು ಅಮೆರಿಕ ಮತ್ತು ಪಾಕಿಸ್ತಾನ ಜೊತೆ ಸೇರಿ. ತಾಲಿಬಾನ್‌ಗಳು ರಷ್ಯನ್ನರ ವಿರುದ್ಧ ಹೋರಾಟ ನಡೆಸುತ್ತಿದ್ದಾಗ ಅಮೆರಿಕದ ಅಧ್ಯಕ್ಷ ರೊನಾಲ್ಡ್ ರೇಗನ್ ಇದೇ ತಾಲಿಬಾನ್‌ಗಳನ್ನು ‘ತಾಯ್ನೆಲದ ಬಿಡುಗಡೆಗಾಗಿ ಹೋರಾಡುತ್ತಿರುವ ಸ್ವಾತಂತ್ರ ಹೋರಾಟಗಾರರು’ ಎಂದು ಕರೆದಿದ್ದರು. ಯಾವಾಗ ಅಫ್ಘಾನಿಸ್ತಾನದಿಂದ ತಾಲಿಬಾನ್‌ಗಳು ರಶ್ಯನ್ನರನ್ನು ಓಡಿಸಲು ಯಶಸ್ವಿಯಾದರೋ ಅಲ್ಲಿಂದ ಅಮೆರಿಕಕ್ಕೆ ತಾಲಿಬಾನ್‌ಗಳು ಉಗ್ರಗಾಮಿಗಳಾದರು. ಅಮೆರಿಕ ಅಫ್ಘಾನಿಸ್ತಾನದ ಮೇಲೆ ತನ್ನ ಹಿಡಿತವನ್ನು ಸಾಧಿಸುವ ಹವಣಿಕೆಯ ಫಲವಾಗಿಯೇ ತಾಲಿಭಾನ್ ಎನ್ನುವ ಮೂಲಭೂತವಾದಿ ಸಂಘಟನೆ ಹುಟ್ಟಿಕೊಂಡಿತು. ಇಂದು ಪೇಷಾವರದಲ್ಲಿ ಮಕ್ಕಳ ಮಾರಣಹೋಮಕ್ಕೆ ಪರೋಕ್ಷವಾಗಿ ಅಮೆರಿಕ ಮತ್ತು ಪಾಕಿಸ್ತಾನವೂ ಹೊಣೆ. ವಿಪರ್ಯಾಸವೆಂದರೆ ತಾಲಿಬಾನ್‌ಗೆ ಇಂದಿನ ಸಂದರ್ಭದಲ್ಲಿ ಹಣ ಹೂಡುತ್ತಿರುವುದು ಸೌದಿ ರಾಷ್ಟ್ರಗಳು. ಅಂತಹ ಸೌದಿ ಅಮೆರಿಕದ ಪಾಲಿಗೆ ಅತ್ಯಂತ ಆಪ್ತ ರಾಷ್ಟ್ರವಾಗಿದೆ. ಇದೇ ಸೌದಿಯಲ್ಲಿ ನಾಳೆ ದೊರೆಗಳ ಆಳ್ವಿಕೆ ಕೊನೆಯಾಗಿ ಜನಸಾಮಾನ್ಯರು ದಂಗೆ ಎದ್ದರೆ, ಈ ಸೌದಿಯ ವಿರುದ್ಧ ಇದೇ ಅಮೆರಿಕ ಭಯೋತ್ಪಾದನಾ ವಿರೋಧಿ ಹೋರಾಟ ಹಮ್ಮಿಕೊಳ್ಳುತ್ತದೆ.
ನೋಡಿ, ತಾಲಿಬಾನ್ ದಾಳಿ ನಡೆಸಿರುವುದು ಮುಸ್ಲಿಮ ಸಮುದಾಯದ ಮಕ್ಕಳ ಮೇಲೆಯೇ ಆಗಿದೆ. ಮತ್ತು ಅಫ್ಘಾನಿಸ್ತಾನದಲ್ಲಿ ಅಮೆರಿಕ ಉಗ್ರರ ವಿರುದ್ಧ ನಿರಂತರ ನಡೆಸುತ್ತಿರುವ ಡ್ರೋನ್ ದಾಳಿಯಲ್ಲಿ ಸಾವಿರಾರು ಮಕ್ಕಳು ಸತ್ತು ಹೋಗಿದ್ದಾರೆ. ಅವರೂ ಮಕ್ಕಳೇ ಹೌದು. ತಮ್ಮ ಮಕ್ಕಳನ್ನು ಕೊಂದದ್ದಕ್ಕೆ ನಿಮ್ಮ ಮಕ್ಕಳನ್ನು ಕೊಲ್ಲುತ್ತಿದ್ದೇವೆ ಎಂದು ತಾಲಿಬಾನ್ ಪೈಶಾಚಿಕವಾಗಿ ಸೇಡು ತೀರಿಸಿಕೊಂಡಿದೆ. ಈ ದಾಳಿ ಅಪ್ಪಟ ರಾಜಕೀಯ ಕಾರಣಗಳಿಗಾಗಿ ಹುಟ್ಟಿಕೊಂಡಿರುವುದೇ ಹೊರತು, ಧಾರ್ಮಿಕ ಕಾರಣಗಳಿಗಾಗಿ ಅಲ್ಲ....ಫೆಲೆಸ್ತೀನ್‌ನಲ್ಲಿ ಹಮಸ್ ಹುಟ್ಟುಕೊಂಡಿರುವುದೂ ಜಿಹಾದ್ ಮಾಡುವುದಕ್ಕಾಗಿ ಅಥವಾ ಧರ್ಮದ ಹೆಸರಿನಲ್ಲಿ ಕೊಲ್ಲುವುದಕ್ಕಾಗಿ ಅಲ್ಲ. ಅದು ಹುಟ್ಟಿಕೊಂಡಿರುವುದು ತಮ್ಮ ತಾಯ್ನೆಲದ ಬಿಡುಗಡೆಗಾಗಿ. ಮಧ್ಯಪ್ರಾಚ್ಯದಲ್ಲಿ ಪಶ್ಚಿಮ ರಾಷ್ಟ್ರಗಳು ಸೇರಿ ನಡೆಸಿದ ರಾಜಕೀಯ ಇಂದು ಇಡೀ ಏಶ್ಯಾವನ್ನೇ ರಕ್ತಸಿಕ್ತಗೊಳಿಸಿದೆ. ಫೆಲೆಸ್ತೀನ್‌ನ ಮೇಲೆ ನಡೆದ ಆಕ್ರಮಣವನ್ನು ಮಹಾತ್ಮಗಾಂಧೀಜಿ ‘ಏಶ್ಯಾದ ಎದೆಗೆ ನೆಟ್ಟ ಚೂರಿ’ ಎಂದು 30ರ ದಶಕದಲ್ಲಿ ಬಣ್ಣಿಸಿದ್ದರು. ಅದೀಗ ನಿಜವಾಗುತ್ತಿದೆ......’’
‘‘ಹಾಗಾದ್ರೆ ಮೂಲಭೂತವಾದಿಗಳು ಈ ಹಿಂಸೆಗೆ ಕಾರಣರು ಅಲ್ಲ ಅನ್ನುತ್ತೀರಾ?’’ ಎಂದು ಸೋಮನಾಥ್ ಕೇಳಿದರು.
‘‘ನಾನೆಲ್ಲಿ ಹಾಗೆಂದೇ? ಅಮಾಯಕ ಮಕ್ಕಳನ್ನು, ಶಸ್ತ್ರ ಹಿಡಿಯದ ಪತ್ರಕರ್ತರನ್ನು ಕೊಲ್ಲುವವರು ಮೂಲಭೂತವಾದಿಗಳಲ್ಲದೆ ಇನ್ಯಾರು? ಆದರೆ ಈ ಮೂಲಭೂತವಾದಿಗಳ ಸೃಷ್ಟಿಗೆ ಕಾರಣ ಇಸ್ಲಾಮ್ ಅಲ್ಲ. ಬದಲಿಗೆ ಅಂತಾರಾಷ್ಟ್ರೀಯ ರಾಜಕೀಯ. ಇದನ್ನು ಅರ್ಥ ಮಾಡಿಕೊಳ್ಳದೆ ಇಸ್ಲಾಮಾಫೋಬಿಯಾವನ್ನು ಸೃಷ್ಟಿಸಿ ಜಾಗತಿಕವಾಗಿ ಮುಸ್ಲಿಮರ ಮೇಲೆ, ಅವರ ನಂಬಿಕೆಗಳ ಮೇಲೆ ನಡೆಸುವ ದಾಳಿ ಇನ್ನಷ್ಟು ಅಪಾಯಗಳನ್ನು ಸೃಷ್ಟಿಸಬಹುದೇ ಹೊರತು, ಕೆಡುಕನ್ನು ನಿಯಂತ್ರಿಸಲಾರದು’’ ಎಂದು ನನ್ನ ಮಾತನ್ನು ಮುಗಿಸಿದೆ.
ಇತ್ತೀಚೆಗೆ ಫ್ರಾನ್ಸ್‌ನಲ್ಲಿ ಪತ್ರಕರ್ತರ ಮೇಲೆ ನಡೆದ ಬರ್ಬರ ದಾಳಿಯ ಬಳಿಕ ಖ್ಯಾತ ಪತ್ರಕರ್ತೆ, ರಾಜಕೀಯ ಚಿಂತಕಿ ರಾಣಾ ಆಯ್ಯೂಬ್ ಅವರು ಬರೆದ ಲೇಖನವೊಂದು ನನ್ನ ಗಮನ ಸೆಳೆಯಿತು. ಇಸ್ಲಾಮಾಫೋಬಿಯಾದಿಂದ ನರಳುತ್ತಿರುವ ಹಲವರಿಗೆ ಈ ಲೇಖನದಲ್ಲಿ ಉತ್ತರಗಳಿವೆ.ನಿಮ್ಮ ಜೊತೆ ಆ ಲೇಖನವನ್ನು ಹಂಚಿಕೊಂಡಿದ್ದೇನೆ 



ಫ್ರೆಂಚರಿಗೆ ನನ್ನ ಕಂಬನಿ... ಆದರೆ ಕ್ಷಮೆಯಾಚನೆಯಲ್ಲ!

ರಾಣಾ ಅಯ್ಯೂಬ್

ಇದು ಭಾವೋದ್ವೇಗದ ಅಥವಾ ಸಿಟ್ಟಿನ ಪತ್ರವಲ್ಲ. ನಿಜ ಹೇಳಬೇಕೆಂದರೆ ನಮ್ಮ ಭಾವನೆಗಳ ಮುಕ್ತ ಅಭಿವ್ಯಕ್ತಿಗೆ ಜಾಗತಿಕ ಮಟ್ಟದಲ್ಲಿ ಒಮ್ಮತ ಮೂಡಬೇಕು ಎನ್ನುವ ಮುಕ್ತ ಅನಿಸಿಕೆ.
ಫ್ರಾನ್ಸ್ ನ ನಿಯತಕಾಲಿಕದ ಮೇಲೆ ಗುಂಡಿನ ದಾಳಿ ನಡೆದ ಸಂದರ್ಭ ಸ್ನೇಹಿತರೊಬ್ಬರು "ನೀವು ಮುಸಲ್ಮಾನರು ಯಾಕೆ ಯಾವಾಗಲೂ ಹತ್ಯೆ ಮಾಡುತ್ತೀರಿ?" ಎಂದು ಪ್ರಶ್ನಿಸಿದರು. ಅದು ತಮಾಷೆಯಾಗಿ ಹೇಳಿದ್ದು. ಭಾರತ- ಪಾಕಿಸ್ತಾನ ಕ್ರಿಕೆಟ್ ಪಂದ್ಯಾಟಕ್ಕೆ ಮುನ್ನ ನನ್ನ ಐದನೆ ತರಗತಿಯ ಸ್ನೇಹಿತೆಯರು "ಇಂದು ಪಾಕಿಸ್ತಾನ ಅಲ್ಲವೇ?" ಎಂದು ಕಿಚಾಯಿಸುತ್ತಿದ್ದಂತೆ ಈ ಸ್ನೇಹಿತೆ ಕೂಡಾ ತೀರಾ ಲಘು ಧಾಟಿಯಲ್ಲಿ ಈ ಪ್ರಶ್ನೆ ಕೇಳಿದಳು.
ಬಹಳ ಹಿಂದಿನಿಂದಲೂ ನಾನು ಅಕೃತ ವೇದಿಕೆಗಳಲ್ಲಿ ಇಸ್ಲಾಂ ಬಗೆಗಿನ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತೇನೆ. ಏಕೆಂದರೆ ನನ್ನ ನಂಬಿಕೆ ವೈಯಕ್ತಿಕ ವಿಚಾರ. ಅದು ಪ್ರಮುಖ ಹಾಗೂ ವಿಮರ್ಶೆಗೆ ಒಳಪಡುವಂಥದ್ದು. ಇದನ್ನು ಕೇಳಿದ ತಕ್ಷಣ ನಾನು ಹೆಮ್ಮೆಯ ಮುಸ್ಲಿಂ ಎಂದುಕೊಂಡೆ, ನನ್ನ ಸಂಶೋಧನಾತ್ಮಕ ಬರಹಗಳಿಗೆ ನಾನು ಸಾಕಷ್ಟು ಕಟುವಿಮರ್ಶೆಗಳನ್ನು ಸ್ವೀಕರಿಸಿದ್ದೇನೆ. ನನ್ನ ಬಹುತೇಕ ಸಂಶೋಧನಾತ್ಮಕ ಬರಹಗಳನ್ನು ಧರ್ಮದ ದರ್ಪಣದಲ್ಲಿ ನೋಡಿ ಮಾಡುವ ಅಭಿಪ್ರಾಯಗಳು ಮತ್ತು ಪ್ರತಿಕ್ರಿಯೆಗಳು ನನ್ನನ್ನು ಹೆಚ್ಚು ಪ್ರಚೋದಿಸುತ್ತವೆ. ನನ್ನ ಲೇಖನಗಳನ್ನು ನೈಜವಾಗಿ ವಿಮರ್ಶಿಸುವ ವ್ಯಕ್ತಿಗಳಿಗಿಂತ ಇಂಥ ವ್ಯಕ್ತಿಗಳು ನನ್ನನ್ನು ಪ್ರಚೋದಿಸುತ್ತಾರೆ.
ನಕಲಿ ಎನ್‌ಕೌಂಟರ್ ಬಗ್ಗೆ ನಾನು ವರದಿ ಮಾಡಿದರೆ, ಅದನ್ನು ನಿಖರತೆಯ ಮಾನದಂಡದಿಂದ ನಿರಾಕರಿಸಿ, ಉದ್ವಿಗ್ನತೆಯನ್ನು ಸೃಷ್ಟಿಸಲಾಗುತ್ತದೆ. ನಾನು ನಂಬಿಕೆಗೆ ಅರ್ಹಳೇ ಎಂದು ತನಿಖೆ ನಡೆಸುತ್ತಾರೆ. ಆದರೆ ಬುಡಕಟ್ಟು ಜನರ ಅಥವಾ ದಲಿತರ ಮೇಲೆ ಸಂಶೋಧನಾತ್ಮಕ ಲೇಖನ ಬರೆದರೆ ನನಗೆ ಪ್ರಶಸ್ತಿಗಳು ಬರುತ್ತವೆ. ಆದರೆ ಇದು ನನ್ನ ವಿಮರ್ಶಕರಿಗಾಗಲಿ, ಸ್ನೇಹಿತರಿಗಾಗಲಿ ಗಮನಕ್ಕೆ ಬರುವುದಿಲ್ಲ.
ನನ್ನ ನಂಬಿಕೆಗಳ ಬಗ್ಗೆ ಕಪೋಲ ಕಲ್ಪಿತ ವಿಷಯಗಳನ್ನು ಎತ್ತಿದರೆ, ನನ್ನ ಮಿತವಾದ ಜ್ಞಾನದಿಂದ ಆ ತಪ್ಪುಕಲ್ಪನೆಯನ್ನು ಹೋಗಲಾಡಿಸಲು ಪ್ರಯತ್ನಿಸುತ್ತೇನೆ. ಇಸ್ಲಾಂ ಧರ್ಮದ ಬಗೆಗಿನ ನನ್ನ ತಿಳಿವಳಿಕೆ ನನಗೆ ತಂದೆಯಿಂದ ಬಂದ ಬಳುವಳಿ. ನನ್ನ ತಂದೆ ಪ್ರಗತಿಪರ ಲೇಖಕರ ಚಳವಳಿಯ ಹಿನ್ನೆಲೆಯಿಂದ ಬಂದವರು. ಅವರ ಕಮ್ಯುನಿಸ್ಟ್ ಗೆಳೆಯರು ಸಂತೋಷಕೂಟದಲ್ಲಿ ವಿಸ್ಕಿ ಮತ್ತು ಸಿಗರೇಟ್‌ನಿಂದ ಸಂತೋಷಪಡುತ್ತಿದ್ದರೆ, ನನ್ನ ತಂದೆ, ಮಬ್ಬು ಬೆಳಕಿನ ಕೊಠಡಿಗೆ ತೆರಳಿ ನಮಾಝ್‌ಮಾಡಿ ವಾಪಸ್ಸಾಗುತ್ತಿದ್ದರು. ಸ್ನೇಹಿತರ ಜತೆ ಮೋಜಿನ ದ್ವಿಪದಿಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಅವರಿಗೆ ನಮಾಝ್‌ಅವರ ಖಾಸಗಿ ಮತ್ತು ವೈಯಕ್ತಿಕ ವಿಚಾರ. ಅಂಥ ಸಂತೋಷಕೂಟದಲ್ಲಿ ನೀಡುವ ಆಲ್ಕೊಹಾಲನ್ನು ನಯವಾಗಿ ತಿರಸ್ಕರಿಸುತ್ತಿದ್ದರು. ಅವರು ಎಂದೂ ಮದ್ಯ ಮುಟ್ಟಿರಲಿಲ್ಲ. ಆದರೆ ಅವರ ಸ್ನೇಹಿತರ ಕೂಟದಲ್ಲಿ ಇದ್ದ ಇತರರನ್ನು ತಮ್ಮ ನಂಬಿಕೆಗೆ ಅನುಗುಣವಾಗಿ ನಡೆದುಕೊಳ್ಳುವಂತೆ ಎಂದೂ ಒತ್ತಡ ಹಾಕಿರಲಿಲ್ಲ. ಆ ಸಮಾನ ಮನಸ್ಕ ಕೂಟದಲ್ಲಿ ಕೈಫಿ ಅಜ್ಮಿ, ಅಲಿ ಸರ್ದಾರ್ ಜಫ್ರಿ, ಅಹ್ಮದ್ ರಾಜ್ ಅವರಂಥ ಉದಾರವಾದಿ ಲೇಖಕರು ಇದ್ದರು. ಅವರ ಇಸ್ಲಾಂ ಮತ್ತು ಕುರುಆನ್ ಇಗ್ರಾ (ಓದು/ಹಾಡು) ದೊಂದಿಗೆ ಆರಂಭವಾಗುತ್ತಿತ್ತು. ಜಮೀನ್ದಾರನ ಮಗನಾಗಿದ್ದರೂ, ನಿವೃತ್ತರಾಗುವವರೆಗೂ ಮುಂಬೈನ ಸರಕಾರಿ ಶಾಲೆಯಲ್ಲಿ ಪಾಠ ಮಾಡುವುದರಲ್ಲೇ ಸಂತೋಷ ಕಂಡವರು. ಕುಟುಂಬದ ವ್ಯಾಪಾರವನ್ನು ನಡೆಸಿಕೊಂಡು ಹೋಗುವ ಬದಲಾಗಿ, ಮುಸಲ್ಮಾನೇತರ ಮಕ್ಕಳೇ ಅಕವಾಗಿದ್ದ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಆರು ಮಂದಿಯ ನಮ್ಮ ಕುಟುಂಬ ಮುಂಬೈನ ತೀರಾ ಸಾಮಾನ್ಯ ಅಪಾರ್ಟ್‌ಮೆಂಟ್‌ನಲ್ಲಿ ಜೀವನ ಸಾಗಿಸುತ್ತಿತ್ತು. ಒಂದು ಕೊಠಡಿ ಮತ್ತು ಅಡುಗೆಮನೆಯನ್ನಷ್ಟೇ ಹೊಂದಿದ್ದ ್ಲಾಟ್ ಅದು. ಮುಂಬೈ ಆರೆಸ್ಸೆಸ್ ಕಾರ್ಯಾಲಯಕ್ಕೆ ಹೊಂದಿಕೊಂಡಿತ್ತು. ಬಹುತೇಕ ಆರೆಸ್ಸೆಸ್ ಕಾರ್ಯಕರ್ತರು ಬಹಳಷ್ಟು ಸಂಜೆಗಳನ್ನು ನಮ್ಮ ತಂದೆ (ಅವರ ಪ್ರೀತಿಯ ಮಾಸ್ಟರ್‌ಜಿ) ಜೊತೆ ಜಾಗತಿಕ ವಿದ್ಯಮಾನಗಳನ್ನು ಚರ್ಚಿಸುವುದರಲ್ಲಿ ಕಳೆಯುತ್ತಿದ್ದರು.
ನಮ್ಮಪ್ಪ ಮಾಸ್ಟರ್‌ಜಿ ಎಂದೇ ಖ್ಯಾತರಾಗಿದ್ದರು. ಶಾಲೆಗೆ ಸೇರಿದ ಎಲ್ಲ ಮಕ್ಕಳಿಗೂ ಉಚಿತ ಟ್ಯೂಷನ್ ನೀಡುತ್ತಿದ್ದರು. ಜತೆಗೆ ಆರೆಸ್ಸೆಸ್ ಜತೆಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದ್ದರೂ, ಹಲವು ಬಾರಿ ಶಾಖೆಗಳಿಗೆ ಭೇಟಿ ಕೊಡುತ್ತಿದ್ದರು. ಗುರುಪೂರ್ಣಿಮೆಯಂದು ಆ ಶಾಖಾ ಪ್ರಮುಖರು, ಕಟ್ಟುವ ಮೊದಲ ಕೆಂಪು ನೂಲು ಅವರ ಪ್ರೀತಿಯ ಮಾಸ್ಟರ್‌ಜಿಗೆ.
ನಮ್ಮ ಅಪಾರ್ಟ್‌ಮೆಂಟಿನ ಎದುರು ಅಯ್ಯಪ್ಪ ಮಂದಿರ ಇತ್ತು. ನನಗೆ ಹಾಗೂ ನನ್ನ ಸಹೋದರ/ಸಹೋದರಿಯರಿಗೆ ಅಯ್ಯಪ್ಪಮಂದಿರ ಅಚ್ಚುಮೆಚ್ಚು. ಕಾರಣ ಅಲ್ಲಿ ಸಿಗುತ್ತಿದ್ದ ಬೆಲ್ಲದ ಪ್ರಸಾದದ ರುಚಿ. ಕೆಲ ಸಂದರ್ಭದಲ್ಲಿ ನಾವು ಅಲ್ಲಿಗೆ ಹೋಗದಿದ್ದರೆ, ಆ ಮಂದಿರದ ಪೂಜಾರಿ ಬಾಳೆ ಎಲೆಯಲ್ಲಿ ನಮ್ಮ ಮನೆಗೇ ಪ್ರಸಾದ ಕಳುಹಿಸಿಕೊಡುತ್ತಿದ್ದರು. ವಾರ್ಷಿಕ ಅಯ್ಯಪ್ಪಪೂಜೆ ವೇಳೆ, ನಮ್ಮ ಉದ್ಯಾನವನದ ಎಲ್ಲ ಗಿಡಗಳನ್ನು ಮಂದಿರಕ್ಕೆ ಒಯ್ಯಲಾಗುತ್ತಿತ್ತು. ಅಲ್ಲಿನ ನೀರಿನ ಪೈಪ್‌ಗಳನ್ನು ನಮ್ಮ ಅಡುಗೆ ಮನೆಗೆ ಜೋಡಿಸಲು ನಮ್ಮಮ್ಮ ಸಹಕರಿಸುತ್ತಿದ್ದರು. ಇದು ಭಾರತದಂಥ ಬಹುಸಂಸ್ಕೃತಿಯ ದೇಶದಲ್ಲಿ ವಾಸಿಸುವ ವಿಶಿಷ್ಟ ಸಂತೋಷ.
ನಾನು ಇಂದು ಈ ಲೇಖನ ಬರೆದಾಗ ಪ್ರತಿಯೊಂದು ಶಬ್ದವನ್ನೂ ಹತಾಶೆಯಿಂದಲೇ ಬರೆಯುತ್ತಿದ್ದೇನೆ. ಏಕೆಂದರೆ ನನ್ನನ್ನು ಹಾಗೂ ನನ್ನ ಬರಹವನ್ನು ಉಗ್ರರ ಪರವಾಗಿ ಕ್ಷಮೆಯಾಚನೆ ಮಾಡುವ ದೃಷ್ಟಿಯಿಂದಷ್ಟೇ ನೋಡಲಾಗುತ್ತದೆ. ಒಂದು ನಿರ್ದಿಷ್ಟ ಜನರನ್ನು ವಿರೋಸುವ ಒಬ್ಬ ಮುಸ್ಲಿಂ ಆಗಿ ನನ್ನನ್ನು ನೋಡಲಾಗುತ್ತದೆ. ಪ್ರತಿ ಬಾರಿ ಉಗ್ರಗಾಮಿ ಕೃತ್ಯಗಳು ನಡೆದಾಗಲೂ ನಾನು ರಾಜಕೀಯವಾಗಿ ಸರಿ ಎನಿಸುವ ಚೌಕಟ್ಟನ್ನು ನಿರ್ಮಿಸಿಕೊಳ್ಳಬೇಕಾಗುತ್ತದೆ. ಕೆಲವು ಮುಸ್ಲಿಂ ಸಮುದಾಯದವರ ಕೃತ್ಯಗಳಾಗಿದ್ದರೆ ಮತ್ತೆ ಕೆಲವು ಮುಸ್ಲಿಂ ಸಿದ್ಧಾಂತದ ನಂಬಿಕೆಗಳಿಗೆ ಸಂಪೂರ್ಣ ವಿರೋಧವಾಗಿರುವವರು ಎಸಗುವ ಕೃತ್ಯ.
ಖೈರ್ಲಾಂಜಿಯಲ್ಲಿ ದಲಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಹಾಡಹಗಲೇ ಹತ್ಯೆ ಮಾಡಿದಾಗ ಅಥವಾ ದೇಶಾದ್ಯಂತ ನಂಬಿಕೆ ಹೆಸರಿನಲ್ಲಿ ಮೇಲ್ವರ್ಗದವರು ದಲಿತರ ಮೇಲೆ ದೌರ್ಜನ್ಯ ಎಸಗಿದಾಗ ದೇಶದ ಬ್ರಾಹ್ಮಣರನ್ನು ಏಕೆ ಬೆಟ್ಟು ಮಾಡಿ ತೋರಿಸಲಿಲ್ಲ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಗರ್ಭಪಾತ ಮಾಡುವ ಕ್ಲಿನಿಕ್‌ನ ಮೇಲೆ ದಾಳಿ ನಡೆದಾಗ ಕ್ರಿಶ್ಚಿಯನ್ನರನ್ನು ಯಾರೂ ಸಂಶಯದ ದೃಷ್ಟಿಯಿಂದ ನೋಡುವುದಿಲ್ಲ ಅಥವಾ ಅವರ ವಿರುದ್ಧ ಕೋಪ ವ್ಯಕ್ತವಾಗುವುದಿಲ್ಲ. ಅಮಾಯಕ ವಿದ್ಯಾರ್ಥಿಗಳ ಮೇಲೆ ಒಬ್ಬ ಬಿಳಿಯ ವ್ಯಕ್ತಿ ವಿನಾಕಾರಣ ದಾಳಿ ಮಾಡಿದ್ದಾಗಿ ಒಪ್ಪಿಕೊಂಡರೂ ಅವರ ಮೇಲೆ ಯಾರೂ ಕೋಪಗೊಳ್ಳುವುದಿಲ್ಲ. ಪ್ಯಾಲೆಸ್ತೀನಿಯನ್ನರ ಹತ್ಯಾ ಕಾಂಡಕ್ಕೆ ಕ್ಷಮೆಯಾಚಿಸಲು ಯಹೂದಿಯ ನೊಬ್ಬನಿಗೆ ಸೂಚಿಸಿದರೆ? ಅಮೆರಿಕದ ಸೇನೆ ಅಮಾಯಕ ಅ್ಘನಿಯರ ಮತ್ತು ಇರಾಕಿಗಳನ್ನು ಹತ್ಯೆ ಮಾಡಿದ ಘಟನೆಗೆ ಕ್ಷಮೆ ಕೋರಲು ಏಕೆ ಹೇಳಿಲ್ಲ ಎನ್ನುವ ಬಲವಾದ ಸಂಶಯಗಳು ನನ್ನಲ್ಲಿ ಉಳಿದುಕೊಂಡಿವೆ. ಈ ದಾಳಿಯ ಬಗ್ಗೆ ನಿಮಗೆ ಏನನ್ನಿಸುತ್ತದೆ ಎಂದು ಕೇಳುವಾಗ ನನ್ನ ನೈತಿಕತೆ ಮತ್ತು ಮಾನವೀಯತೆಯ ಬಗ್ಗೆ ಪೂರ್ವಾಗ್ರಹ ಏಕೆ?

ಹೌದು. ಪೇಶಾವರದಲ್ಲಿ ಉಗ್ರರು ನಂಬಿಕೆಯ ಹೆಸರಿನಲ್ಲಿ ಮುಗ್ಧ ಶಾಲಾ ಮಕ್ಕಳ ಹತ್ಯಾಕಾಂಡ ಮಾಡಿದಾಗ ನನಗೆ ಸಂತೋಷವಾಗಲಿಲ್ಲ. ಇಸ್ಲಾಂ ಇಂಥ ಕ್ರೌರ್ಯವನ್ನು ಬೋಧಿಸುತ್ತದೆ ಎಂದು ನೀವು ಎಣಿಸಿದ್ದೀರಾ? ಅಂದರೆ ಇಸ್ಲಾಂ ವಿಚಾರದಲ್ಲಿ ನಿಮ್ಮನ್ನೂ ದಾರಿ ತಪ್ಪಿಸಲಾಗಿದೆ. ಇಸ್ಲಾಂ ಉಗ್ರರು ಮತ್ತು ನೀವು ಈ ವಿಚಾರದಲ್ಲಿ ಏಕೆ ಕೈಜೋಡಿಸಿದ್ದೀರಿ?
ಕೆಲವೊಮ್ಮೆ ನಾನು ಅನಿವಾರ್ಯವಾಗಿ ಕೆಲ ಅಭಿಪ್ರಾಯಗಳನ್ನು ಟ್ವೀಟ್ ಮಾಡಲೇಬೇಕಾಗುತ್ತದೆ. ್ರಾನ್ಸ್‌ನಲ್ಲಿ ಪತ್ರಕರ್ತರ ಜೀವ ಉಳಿಸಲು ಹೋಗಿ ತಮ್ಮ ಜೀವ ಕಳೆದುಕೊಂಡ ಅಕಾರಿಯ ಜಾತಿ ಯಾವುದು ಎಂದು ಕೇಳಲೇಬೇಕಾಗುತ್ತದೆ. ಯಾಕೆ?
ಕೊಶೇರ್ ಸುಪರ್ ಮಾರ್ಕೆಟ್‌ನಲ್ಲಿ ವಿಕ್ಷಿಪ್ತ ದಾಳಿಕೋರನಿಂದ ಯಹೂದಿಯರ ಪ್ರಾಣರಕ್ಷಣೆಗಾಗಿ ಜೀವ ಪಣಕ್ಕಿಟ್ಟ ವ್ಯಕ್ತಿ ಮುಸ್ಲಿಂ ಎನ್ನುವುದು ಎಲ್ಲರಿಗೂ ತಿಳಿಯಬೇಡವೇ? ಗಾಳಿಯಲ್ಲಿ ಮೃತಪಟ್ಟ ಪತ್ರಕರ್ತರ ಗೌರ ವಾರ್ಥ ್ರಾನ್ಸ್‌ನಲ್ಲಿ ನಮಾಝ್ ಮಾಡುತ್ತಿರುವ ಮುಸಲ್ಮಾನರ ಚಿತ್ರಗಳನ್ನು ಪೋಸ್ಟ್ ಮಾಡಲೇಬೇಕಾದ ಕಾರಣ ಏನು?
‘ನೋಡಿ, ದಾಳಿಕೋರರ ವಿರುದ್ಧದ ಅಂತಿಮ ಕಾರ್ಯಾಚರಣೆಯಲ್ಲಿ ಕಮಾಂಡಿಂಗ್ ಆಫೀಸರ್ ಆಗಿದ್ದವರು ಮುಸ್ಲಿಂ ಎಂದು ನಾನು ಏಕೆ ಸ್ನೇಹಿತರಿಗೆ ಒತ್ತಿಹೇಳಬೇಕಾಯಿತು?
ನನ್ನ ನಂಬಿಕೆ ಇರುವುದು ಇಸ್ಲಾಂ ಧರ್ಮದ ನಂಬಿಕೆಯ ಸಂರಕ್ಷಕರು ಎಂದು ಹೇಳಿಕೊಳ್ಳುವ, ತಪ್ಪುದಾರಿ ಹಿಡಿದ ಕೆಲವರ ಕೃತ್ಯಗಳ ಬಗ್ಗೆ ಅಲ್ಲ ಎಂದು ಸಾರಿಹೇಳಿ ನನಗೆ ದಣಿವಾಗಿದೆ; ಮುಜುಗರವೂ ಆಗಿದೆ. ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಗಲಭೆಗಳಲ್ಲಿ ಮುಸಲ್ಮಾನರನ್ನು ಗುರಿಮಾಡುವ ಬೌದ್ಧಭಿಕ್ಷುಗಳಷ್ಟೇ ಇವರೂ ತಪ್ಪುಮಾರ್ಗದರ್ಶನಕ್ಕೆ ಒಳಗಾದವರು. ಅವರ ಕೃತ್ಯ ಬೌದ್ಧಧರ್ಮದ ಮೂಲ ಅಂತಃಸತ್ವಕ್ಕೆ ವಿರುದ್ಧವಾದದ್ದು.
ಪ್ರತಿಯೊಂದಕ್ಕೂ ಮುಸಲ್ಮಾನರನ್ನೇ ಹೊಣೆಮಾಡುವ ವಿಚಾರಧಾರೆಯನ್ನು ಖಂಡಿತವಾಗಿಯೂ ನಾನು ವಿರೋಸುತ್ತೇನೆ. ಮುಂದೆಯೂ ಇದೇ ಧೋರಣೆ ಹೊಂದಿರುತ್ತೇನೆ. ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ ಅದು ಉಗ್ರಗಾಮಿಗಳ ಪರ ನಿಲುವು ಆಗಿ ಪರಿವರ್ತನೆಯಾಗಲು ಸಾಧ್ಯವೇ ಇಲ್ಲ. ನಾನು ಖಂಡಿತಾ ಮಂದಗಾಮಿ ಮುಸ್ಲಿಂ ಅಲ್ಲ. ಏಕೆಂದರೆ ಆ ಪದಗುಚ್ಛವೇ ನನ್ನ ನಂಬಿಕೆಗೆ ಅವಮಾನ ತರುವಂಥದ್ದು. ಅದು ಹಿಂದೂಗಳಿರಲಿ; ಯಹೂದಿಯರು ಇರಲಿ ಅಥವಾ ಸಿಖ್ಖರಿರಲಿ, ಅವರ ನಂಬಿಕೆಯನ್ನು ಪರಿಮಾಣವಾಗಿ ಅಳೆಯಬಾದರು. ಏಕೆಂದರೆ ಅದು ನಂಬಿಕೆ.

ನಾನು ಇಂದು ಬರೆಯುವಂತೆ, ಮುಸಲ್ಮಾನರನ್ನು ಪ್ರತಿಯೊಂದಕ್ಕೂ ಹೊಣೆಮಾಡುವ ದೃಷ್ಟಿಕೋನ ಮತ್ತು ವಿವೇಚನಾರಹಿತ ಇಸ್ಲಾಂೆಬಿಯಾ ಎರಡನ್ನೂ ನಾನು ವಿರೋಸುತ್ತೇನೆ. ಧರ್ಮದ ಮುಂದಾಳುಗಳು ನನ್ನ ನಂಬಿಕೆಯನ್ನು ಬೆಂಬಲಿಸುತ್ತಾರೆ ಎನ್ನುವ ನಂಬಿಕೆ ನನಗಿದೆ. ಇಂಥ ವಿವೇಚನಾ ರಹಿತವಾಗಿ ದ್ವೇಷಿಸುವ ಜನರು ಮುಸಲ್ಮಾನೇತರರು ಎಂದು ಘಂಟಾಘೋಷವಾಗಿ ಹೇಳಬಯಸುತ್ತೇನೆ.
ಇಡೀ ಸಮುದಾಯವನ್ನು ದ್ವೇಷಿಸುವ ಮನೋಭಾವವನ್ನು ಬೆಂಬಲಿಸುವ ಪ್ರತಿ ರೂಪಕ್ ಮರ್ಡೋಕ್‌ಗಳಿಗೂ ಒಂದು ವಿಷಯ ಹೇಳಬಯಸುತ್ತೇನೆ. ನೂರಾರು ಪತ್ರಕರ್ತರು, ಹೋರಾಟಗಾರರು, ಮಾನವತಾವಾದಿಗಳು ವಿಶ್ವಾದ್ಯಂತ ಪ್ರತಿದಿನ ಇಸ್ಲಾಂ ಧರ್ಮದ ವಿರುದ್ಧ ಬೆಳೆಯುತ್ತಿರುವ ಪೂರ್ವಾಗ್ರಹದ ವಿರುದ್ಧ ಹೋರಾಡುತ್ತಿದ್ದಾರೆ ಎನ್ನುವುದೇ ಸಂತೋಷದ ವಿಚಾರ. ಇಡೀ ಸಮುದಾಯವನ್ನು ದ್ವೇಷಿಸುವ ಮನೋಭಾವದ ವಿರುದ್ಧ ನಿರಂತರ ಚಳವಳಿ ನಡೆಸುತ್ತಿರುವ ಸಹ ಪತ್ರಕರ್ತ ಇಂಡಿಪೆಂಡೆಂಡ್ ಪತ್ರಿಕೆಯ ಓವೆನ್ ಜೋನ್ಸ್ ಹೇಳುವಂತೆ, ಮುಸ್ಲಿಂ ಧರ್ಮದ ಬಗೆಗಿನ ಪೂರ್ವಾಗ್ರಹ ವಿರುದ್ಧ ಸಾರ್ವಜನಿಕವಾಗಿ ಧ್ವನಿ ಎತ್ತುವ ಕೆಲವೇ ಮಂದಿ ಈ ಚಳವಳಿ ನಡೆಸಿಕೊಂಡು ಬಂದಿದ್ದೇವೆ. ಇದು ನಾವು ಮಾಡಬೇಕಾದ ಕಾರ್ಯ ಮತ್ತು ಇತಿಹಾಸ ನಮ್ಮನ್ನು ಕೀಳಾಗಿ ಕಾಣಬಾರದು.
(ರಾಣಾ ಅಯ್ಯೂಬ್ ಪ್ರಶಸ್ತಿ ಪುರಸ್ಕೃತ ತನಿಖಾ ವರದಿಗೆ ಹೆಸರಾದ ಪತ್ರಕರ್ತೆ. ಉತ್ತಮ ರಾಜಕೀಯ ವಿಶ್ಲೇಷಕಿ. ಪ್ರಧಾನಿ ನರೇಂದ್ರ ಮೋದಿ ಬಗೆಗಿನ ಕೃತಿರಚನೆಯಲ್ಲಿ ತೊಡಗಿದ್ದು, ಈ ವರ್ಷದಲ್ಲಿ ಕೃತಿ ಬಿಡುಗಡೆಯಾಗಲಿದೆ)

3 comments:

  1. "ಖೈರ್ಲಾಂಜಿಯಲ್ಲಿ ದಲಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಹಾಡಹಗಲೇ ಹತ್ಯೆ ಮಾಡಿದಾಗ ಅಥವಾ ದೇಶಾದ್ಯಂತ ನಂಬಿಕೆ ಹೆಸರಿನಲ್ಲಿ ಮೇಲ್ವರ್ಗದವರು ದಲಿತರ ಮೇಲೆ ದೌರ್ಜನ್ಯ ಎಸಗಿದಾಗ ದೇಶದ ಬ್ರಾಹ್ಮಣರನ್ನು ಏಕೆ ಬೆಟ್ಟು ಮಾಡಿ ತೋರಿಸಲಿಲ್ಲ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. "

    ಖೈರ್ಲಾಂಜಿ ಪ್ರಕರಣದಲ್ಲಿ ಬ್ರಾಹ್ಮಣರ ಕೈವಾಡ ಪರೋಕ್ಷವಾಗಲಿ ಅಪರೋಕ್ಷವಾಗಲಿ ಇರಲಿಲ್ಲ. ಆದುದರಿಂದ ಖೈರ್ಲಾಂಜಿ ಪ್ರಕರಣದಲ್ಲಿ ಬ್ರಾಹ್ಮಣರಿಗೆ ಬೆಟ್ಟು ತೋರಿಸುವ ಸಂದರ್ಭ ಉದ್ಭವಿಸಲೇ ಇಲ್ಲ. ಆದರೆ ಶಾರ್ಲಿ ಹೆಬ್ದೋ ಪ್ರಕರಣದಲ್ಲಿ ಮುಸಲ್ಮಾನರ ಕೈವಾಡ ಸಾಬೀತಾಗಿದೆ, ಹಲ್ಲೆ ನಡೆಸಿದ ಉಗ್ರರೇ ತಾವು ಯಾವ ಕಾರಣಕ್ಕೆ ಹೇಯ ಕೃತ್ಯ ಎಸಗುತ್ತಿದ್ದೇವೆ ಅಂತ ಹೇಳಿದ್ದಾರೆ. ಇಷ್ಟು ಸರಳ ವಿಷಯ ಲೇಖಕಿಗೆ ಹೊಳೆಯದಿದ್ದದ್ದು ಆಶ್ಚರ್ಯಕರ ವಿಷಯ!

    ReplyDelete
    Replies
    1. ಚಾರ್ಲಿ ಪ್ರಕರಣದಲ್ಲಿ ಭಾಗವಹಿಸಿದ ಮುಸ್ಲಿಂ ಮತಾಂಧರನ್ನು ಖಂಡಿಸುವ ಬದಲು ಖೈರ್ಲಾಂಜಿ ಪ್ರಕರಣದ ನೆಪದಲ್ಲಿ ಬ್ರಾಹ್ಮಣರ ಮೇಲೆ ನಂಜು ಕಾರುತ್ತಿರುವ ಈ ಲೇಖಕಿಯ ಮನಸ್ಥಿತಿ ಅಸಹ್ಯಕರವಾದದ್ದು. ಇಂತಹ ಲೇಖಕಿಯ ಲೇಖನವನ್ನು ದೇವರ ಪ್ರಸಾದವೆಂಬಂತೆ ಕನ್ನಡಕ್ಕೆ ತಂದಿರುವ ಬಷೀರ್ ಮನಸ್ಥಿತಿ ಬಗ್ಗೆ ಅನುಮಾನ ಹುಟ್ಟುತ್ತಿದೆ.

      Delete
  2. ಧನ್ಯವಾದಗಳು, ಸತ್ಯವನ್ನು ಹೇಳಲು ಎಷ್ಠು ಕಷ್ಠ!!

    ReplyDelete