Friday, September 23, 2016

ನನ್ನದೇ ಧ್ವನಿಯಲ್ಲಿ .... ಹನಿಗಳು

"ನನ್ನ ಮಸೀದಿ ಧ್ವಂಸಗೈದವರಿಗೆ ಕೃತಜ್ಞ-ಸೂಫಿಯ ಕಣ್ಣಲ್ಲಿ ಹನಿಗಳು" ಕೃತಿಯ ಕೆಲವು ಹನಿಗಳು, ನನ್ನದೇ ಕಣ್ಣಲ್ಲಿ- ನನ್ನದೇ ಧ್ವನಿಯಲ್ಲಿ ....

Friday, September 16, 2016

ಮಿನಿ ಕತೆ: ಆದೇಶ

ವಿಶ್ವ ವಿದ್ಯಾಲಯದ ಮಹಿಳಾ ಶೌಚಾಲಯದಲ್ಲಿ ಕ್ಯಾಮರ ಪತ್ತೆಯಾಯಿತು. 
ಯಾರು? ಏನು? ಹೇಗೆ? ಗುಲ್ಲೆ ಗುಲ್ಲು. 
ಕೊನೆಗೂ ಜನರ ಆಕ್ರೋಶಕ್ಕೆ ಮಣಿದು ನಿಜವಾದ ಆರೋಪಿಯನ್ನು ಪತ್ತೆ ಮಾಡಲಾಯಿತು.
ಆದರೆ ಬಂಧಿಸಿದ ಸಂಜೆಯೇ ಆರೋಪಿಗೆ ಜಾಮೀನು ನೀಡಲಾಯಿತು.
ಜಾಮೀನಿಗಾಗಿ ಮಂಡಿಸಿದ ಕಾರಣಗಳು ಕೆಳಗಿನಂತಿದ್ದವು.
೧. ಮಾಂಸಾಹಾರ ಮಾತ್ರ ತಾಮಸ ಗುಣಗಳನ್ನು ಸೃಷ್ಟಿಸುತ್ತವೆ. ಈ ಕುರಿತು ಪೇಜಾವರರ ಪ್ರಮಾಣ ಪತ್ರವೂ ಇದೆ. ಹುಡುಗ ಹುಟ್ಟಿನಿಂದಲೇ ಸಸ್ಯಾಹಾರಿ ಆದುದರಿಂದ ಅವನಲ್ಲಿ ತಾಮಸ ಗುಣಗಳು ಇರುವ ಸಾಧ್ಯತೆ ಇಲ್ಲ. ಆದುದರಿಂದ ಅವನು ಕ್ಯಾಮರ ಇಟ್ಟಿರೋದು ಹುಡುಗಾಟಿಕೆಗೆ ಎನ್ನೋದು ಗೊತ್ತಾಗುತ್ತದೆ
೨. ಹುಡುಗ ಗೋಮಾಂಸ ವಿರೋಧಿಯಾಗಿದ್ದಾನೆ. ಆದುದರಿಂದ ಅವನಲ್ಲಿ ರಾಕ್ಷಸ ಗುಣ ಇಲ್ಲ ಎನ್ನೋದು ರಾಘವೇಶ್ವರ ಶ್ರೀ ಗಳ ಪ್ರಮಾಣ ಪತ್ರದಿಂದ ತಿಳಿದು ಬಂದಿದೆ. ಮಹಿಳೆಯರ ವಿಷಯದಲ್ಲಿ ಹುಡುಗ ರಾಘವೇಶ್ವರ ಶ್ರೀಗಳಷ್ಟೇ ಅಮಾಯಕನಾಗಿದ್ದಾನೆ.
೩. ಆರೋಪಿಗೆ ಆರೆಸ್ಸೆಸ್ ಹಿನ್ನೆಲೆ ಇರೋದರಿಂದ, ಹಿಂದೂ ಮಾತೆಯರ ರಕ್ಷಣೆಗಾಗಿ ಆ ಕ್ಯಾಮರಾ ವನ್ನು ಶೌಚಾಲಯದಲ್ಲಿ ಇಟ್ಟಿದ್ದಾನೆ ಎಂದೂ ಪರಿಗಣಿಸ ಬಹುದು.
ಮೇಲಿನೆಲ್ಲ ಸಾಕ್ಷ್ಯಾಧಾರಗಳನ್ನ ಪರಿಗಣಿಸಿದ ನ್ಯಾಯಾಧೀಶರು ಇಂತೆಂದು ತೀರ್ಪು ನೀಡಿದರು;
"ಆರೋಪಿಗೆ ತಕ್ಷಣ ನ್ಯಾಯಾಲಯ ಜಾಮೀನು ನೀಡಿದೆ. ಹಾಗು ಪೊಲೀಸರು ನ್ಯಾಯಯುತವಾದ ತನಿಖೆ ನಡೆಸಿ ತಕ್ಷಣ ಗೋಮಾಂಸಾಹಾರಿಯೊಬ್ಬನನ್ನು ಬಂಧಿಸಿ, ಅವನ ಮೇಲೆ ಗಂಭೀರ ಪ್ರಕರಣಗಳನ್ನು ದಾಖಲಿಸಿ ಸಂತ್ರಸ್ತ ವಿದ್ಯಾರ್ಥಿನಿಯರಿಗೆ ನ್ಯಾಯ ನೀಡಬೇಕು ಎಂದು ಆದೇಶಿಸುತ್ತದೆ"

Sunday, September 11, 2016

ಹನಿ ಕತೆಗಳು: ಗೋಮಾಂಸ ಮತ್ತು ರಕ್ತ

1
ಗೋರಕ್ಷಕರು
ಆ ಮನೆಯಲ್ಲಿ  50 ವರ್ಷಗಳಿಂದ ಗೋವು ಸಾಕುತ್ತಿದ್ದರು. 
ಒಂದು ಗುಂಪು ಮನೆಗೆ ನುಗ್ಗಿತು 
"ನೀವು ನಿಮ್ಮ ಗೋವನ್ನು ಮಾರಿದ್ದೀರಾ?''
"ಹೌದು" ಮನೆ ಮಾಲಕ ಉತ್ತರಿಸಿದ. 
ಮನೆಯ ಮೇಲೆ ಗುಂಪು ದಾಳಿ ಮಾಡಿತು. ಮನೆ ಮಾಲಕನನ್ನು ಸಾಯುವಂತೆ ಬಡಿಯಲಾಯಿತು. 
ಮಹಿಳೆಯರನ್ನು ಅರೆ ಬೆತ್ತಲೆ ಮಾಡಲಾಯಿತು. 
ಹಟ್ಟಿಯಲ್ಲಿದ್ದ ದನಗಳನ್ನೆಲ್ಲ ಎಳೆದೊಯ್ಯಲಾಯಿತು. 
ಯಾರೋ ಗುಂಪಿನ ಜೊತೆ ಕೇಳಿದರು "ಯಾರು ನೀವು ?"
ಗುಂಪು ಜೋರಾಗಿ ಹೇಳಿತು "ನಾವು ಗೋರಕ್ಷಕರು''

2
ವೆಜಿಟೇರಿಯನ್ ರಕ್ತ
ಗೆಳೆಯನೊಬ್ಬನಿಂದ ದೂರವಾಣಿ ಕರೆ "ನನ್ನ ತಂದೆಯ ಜೀವ ಅಪಾಯದಲ್ಲಿದೆ. ತುರ್ತಾಗಿ ಬಿ ನೆಗೆಟಿವ್ ರಕ್ತ ಬೇಕಾಗಿದೆ. ವೆಜಿಟೇರಿಯನ್ ರಕ್ತ ಆಗಿದ್ದರೆ ತುಂಬಾ ಉಪಕಾರ. ದಯವಿಟ್ಟು ಪ್ರಯತ್ನಿಸಿ"

3
ಪರೀಕ್ಷೆ
ಬೀಫ್ ಪರೀಕ್ಷೆಯಲ್ಲಿ ವಿಫಲ:
ಭಾರತೀಯ ಒಲಿಂಪಿಕ್ಸ್ ಆಟಗಾರ ನಾಲ್ಕು ವರ್ಷ ಅಮಾನತು
ಪೋಲೀಸರ ವಶಕ್ಕೆ ಆಟಗಾರ

4
ಫಲಕ
ಆಸ್ಪತ್ರೆಯೊಂದರ ಬ್ಲಡ್ ಬ್ಯಾಂಕ್ ನಲ್ಲಿ ಹೀಗೊಂದು ಸೂಚನಾ ಫಲಕ: 
ಬೀಫ್ ತಿಂದವರ ರಕ್ತವನ್ನು ಸ್ವೀಕರಿಸಲಾಗೂದಿಲ್ಲ 
ನಿಮ್ಮ ರಕ್ತದಲ್ಲಿ ಬೀಫ್ ಅಂಶ ಪತ್ತೆಯಾದರೆ ನಿಮ್ಮನ್ನು ಪೊಲೀಸರಿಗೆ ಒಪ್ಪಿಸಲಾಗೂದು.

5
ಚರ್ಚೆ
ಬೀಫ್ ತಿಂದರೆಂದು ಆ ಮನೆಯ ಯಜಮಾನನ ಕೊಂದು ಮಹಿಳೆಯರ ಮೇಲೆ ಗುಂಪು ಅತ್ಯಾಚಾರವೆಸಗಿತು. 
ಮಾಧ್ಯಮಗಳಲ್ಲಿ ಈಗ ದಿನ ಪೂರ್ತಿ ಚರ್ಚೆ. 
"ತಿಂದದ್ದು ಬೀಫ್ ಹೌದೋ? ಅಲ್ಲವೋ?"

6
ಭರವಸೆ
ಇದೀಗ ಬಂದ ಸುದ್ದಿ:
ರೋಗಿಗೆ ನೀಡಿದ ರಕ್ತದಲ್ಲಿ ಗೋಮಾಂಸದ ಅಂಶ ಪತ್ತೆ. 
ರಕ್ತ ದಾನದ ಸಂದರ್ಭದಲ್ಲಿ ಆದ ಎಡವಟ್ಟು. 
ಬ್ಲಡ್ ಬ್ಯಾಂಕಿನ ಪರವಾನಿಗೆ ವಜಾ. 
ಆಸ್ಪತ್ರೆ ಸಿಬ್ಬಂದಿಗಳ ಬಂಧನ. 
ಇನ್ನೆರಡು ದಿನಗಳಲ್ಲಿ ರಕ್ತ ದಾನ ಮಾಡಿದ ವ್ಯಕ್ತಿಯನ್ನು ಬಂಧಿಸುತ್ತೇವೆ : ಪೋಲೀಸರ ಭರವಸೆ

Sunday, September 4, 2016

ದೇಶ ಕಟ್ಟುವುದಕ್ಕೆ ರಿಲಯನ್ಸ್ ಸಿಮೆಂಟ್...!

ಮೋದಿ ವಿಶ್ವಕ್ಕೇ ಮೋಡೆಲ್ ಪ್ರಧಾನಿಯಾಗುತ್ತಾರೆ ಎಂದು ಸಂಘಪರಿವಾರ ಸಹಿತ ಮೋದಿ ಭಕ್ತರು ಹೇಳಿಕೆ ನೀಡುತ್ತಲೇ ಇದ್ದರು. ಇದೀಗ ಅದನ್ನು ಸಾಬೀತು ಪಡಿಸುವಂತೆ ಅವರು ಮೋಡೆಲ್ ಆಗಿಯೇ ಬಿಟ್ಟಿರುವುದು ನೋಡಿ ಪತ್ರಕರ್ತ ಎಂಜಲು ಕಾಸಿ ರೋಮಾಂಚನಗೊಂಡು ನೇರವಾಗಿ ಅನಿಲ್ ಅಂಬಾನಿಯವರ ಮನೆಯ ಬಾಗಿಲು ತಟ್ಟಿದ. 
‘‘ಯಾರು ಬೇಕಾಗಿತ್ತು?’’ ವಾಚ್‌ಮೆನ್ ಕೇಳಿದ.
‘‘ನರೇಂದ್ರ ಮೋದಿಯವರು ಬೇಕಾಗಿತ್ತು’’ ಕಾಸಿ ಹೇಳಿ ಹಲ್ಲು ಕಿರಿದ.
‘‘ಅದಕ್ಕೆ ನರೇಂದ್ರ ಮೋದಿಯವರ ಮನೆಗೆ ಹೋಗಬೇಕಾಗಿತ್ತು...’’ ವಾಚ್‌ಮೆನ್ ಹೇಳಿದ.
‘‘ಅಲ್ಲಿ ಹೋದ್ರೆ ಅನಿಲ್ ಅಂಬಾನಿ ಮನೆಯಲ್ಲಿದ್ದಾರೆ ಎಂದು ಹೇಳಿದರು. ಅದಕ್ಕೆ ಇಲ್ಲಿಗೆ ಬಂದೆ...’’
‘‘ಆದ್ರೆ ಅವರು ಸ್ಟುಡಿಯೋದಲ್ಲಿ ಶೂಟಿಂಗ್‌ನಲ್ಲಿದ್ದಾರೆ...’’ ವಾಚ್‌ಮೆನ್ ಮುಖಕ್ಕೆ ಹೊಡೆದಂತೆ ಹೇಳಿದ. ‘‘ಸಿನೆಮಾದಲ್ಲಿ ನಟಿಸುತ್ತಿದ್ದಾರಾ ಸಾರ್?’’ ಕಾಸಿ ಕುತೂಹಲದಿಂದ ಕೇಳಿದ.
‘‘ಇಲ್ಲಾರಿ. ಈಗ ಅವರು ವಿಶ್ವಕ್ಕೇ ಮೋಡೆಲ್ ಆಗಲು ಹೊರಟಿದ್ದಾರೆ...’’ ವಾಚ್‌ಮೆನ್ ಹೇಳಿದ.
‘‘ಅದಕ್ಕೆ ಇಲ್ಲೇನು ಮಾಡುತ್ತಿದ್ದಾರೆ ?’’
‘‘ಅದೇರಿ. ಅನಿಲ್ ಅಂಬಾನಿ ಪ್ರಾಡಕ್ಟ್‌ಗಳಿಗೆ ವಿಶ್ವದ ಎಲ್ಲ ದೇಶಗಳಿಗೂ ಇವರೇ ಮೋಡೆಲ್ ಆಗಲಿದ್ದಾರೆ’’ ವಾಚ್‌ಮೆನ್ ಹೇಳಿದ.
‘‘ಸಾರ್...ಅವರ ಒಂದು ಇಂಟರ್ಯೂ ಬೇಕಾಗಿತ್ತು’’ ಕಾಸಿ ಮನವಿ ಮಾಡಿದ. ‘‘ಅವರು ದೇಶ ಕಟ್ಟುವಲ್ಲಿ ಬಿಜಿಯಾಗಿದ್ದಾರೆ ಕಣ್ರೀ...ಈಗ ವಿಶ್ವಕ್ಕೇ ಮೋಡೆಲ್ ಬೇರೆ. ಬೇಕಾದ್ರೆ ನನ್ನದೇ ಇಂಟರ್ಯೂ ತೆಗೆದುಕೊಳ್ಳಿ...’’
‘‘ಅಂದರೆ ದೇಶ ಕಟ್ಟುವುದಕ್ಕೂ ಅಂಬಾನಿಗೂ ಏನು ಸಂಬಂಧ?’’ ಕಾಸಿ ಅರ್ಥವಾಗದೆ ಕೇಳಿದ.
‘‘ದೇಶ ಕಟ್ಟಬೇಕಾದರೆ ಅದಕ್ಕೆ ಭಾರೀ ಪ್ರಮಾಣದಲ್ಲಿ ಸಿಮೆಂಟ್ ಬೇಕಲ್ವಾ...ಈ ನಿಟ್ಟಿನಲ್ಲಿ ರಿಲಯನ್ಸ್ ಸಿಮೆಂಟಿನಿಂದಲೇ ದೇಶ ಕಟ್ಟುವ ಬಗ್ಗೆ ಅವರು ಯೋಚಿಸುತ್ತಿದ್ದಾರೆ. ಈ ಬಗ್ಗೆ ಮಾತುಕತೆಯೂ ನಡೆಯುತ್ತಿದೆ....ಮೋದಿಯ ದೇಶ ನಿರ್ಮಾಣದಲ್ಲಿ ರಿಲಯನ್ಸ್ ಸಿಮೆಂಟಿನ ಮಹತ್ವದ ಬಗ್ಗೆ ಈಗಾಗಲೇ ಸಂಘಪರಿವಾರ ನಾಯಕರೆಲ್ಲ ತಮ್ಮ ತಮ್ಮ ಶಾಖೆಗಳಲ್ಲಿ ಭಾಷಣ ಮಾಡುತ್ತಿದ್ದಾರೆ. ನಿಮಗೆ ಗೊತ್ತಿಲ್ಲವೆ?’’ ವಾಚ್‌ಮೆನ್ ಪ್ರಶ್ನಿಸಿದ.
‘‘ಸಿಮೆಂಟು ರಿಲಯನ್ಸಿನದ್ದಾದರೆ ಮರಳು ಯಾವ ಕಂಪೆನಿಯಿಂದ ಬಳಸುತ್ತಾರೆ ಸಾರ್....’’ ಕಾಸಿ ವಾಚ್‌ಮೆನ್‌ಗೆ ತುಸು ಮರ್ಯಾದೆ ನೀಡಿದ.
‘‘ಮರಳು ಮಾಫಿಯಾದವರಿಗೆ ಪೂರ್ಣ ಸ್ವಾತಂತ್ರವನ್ನು ನೀಡಲಾಗಿದೆ. ದೇಶಕಟ್ಟುವುದಕ್ಕಾಗಿ ಎಷ್ಟು ಬೇಕಾದರೂ ಅಕ್ರಮವಾಗಿ ಮರಳನ್ನು ನದಿಯಿಂದ ಎತ್ತಿರಿ ಎಂದು ಈಗಾಗಲೇ ಮೋದಿ ಸೂಚನೆ ನೀಡಿದ್ದಾರೆ. ರಿಲಯನ್ಸ್ ಸಿಮೆಂಟಿಗೆ ಅಕ್ರಮ ಮರಳು ಸೇರಿಸಿ ದೇಶವನ್ನು ಅತಿ ಬೇಗನೇ ಕಟ್ಟಲಾಗುತ್ತದೆ...’’ ವಾಚ್‌ಮೆನ್ ವಿವರಗಳನ್ನು ನೀಡಿದ.
‘‘ರಿಲಯನ್ಸ್‌ನ ಡಾಟಾಗಳು ಅಗ್ಗವಾಗಿವೆ...ಆದರೆ ಜನರ ರೇಶನ್‌ಗಳ ಬೆಲೆ ಏರುತ್ತಿದೆಯಲ್ಲ...ಇದರ ಬಗ್ಗೆ ಏನು ಹೇಳುತ್ತಾರೆ ಮೋದಿಯವರು?’’ ಕಾಸಿ ಅತ್ಯಾಸಕ್ತಿಯಿಂದ ಕೇಳಿದ.
 ‘‘ರೇಷನ್ ಅಂಗಡಿಯಲ್ಲಿ ಇನ್ನು ಮುಂದೆ ರಿಲಯನ್ಸ್ ಡಾಟಾಗಳು ಬಿಪಿಎಲ್, ಎಪಿಎಲ್ ಕಾರ್ಡ್‌ಗಳಿಗೆ ವಿತರಿಸುವ ಯೋಜನೆಯೊಂದು ನಡೆಯುತ್ತಿದೆ. ರಿಲಯನ್ಸ್‌ನವರಿಗೆ ಸಬ್ಸಿಡಿಯನ್ನು ನೀಡಿ ಅಗ್ಗವಾಗಿ ಡಾಟಾಗಳನ್ನು ಜನರಿಗೆ ರೇಷನ್ ಅಂಗಡಿಯಲ್ಲೇ ಪ್ರತಿ ತಿಂಗಳು ವಿತರಿಸಲಾಗುತ್ತದೆ. ಇದರ ಹೊರೆ ಸರಕಾರಕ್ಕೆ ಬೀಳುವುದರಿಂದ ವಿಶೇಷ ಡಾಟಾ ತೆರಿಗೆಯನ್ನು ಜನರ ಮೇಲೆ ವಿಧಿಸಲಾಗುತ್ತದೆ...’’ ವಾಚ್‌ಮೆನ್ ಇನ್ನಷ್ಟು ವಿವರಗಳನ್ನು ನೀಡಿದ.
‘‘ಆದರೆ ಜನರಿಗೆ ಆಹಾರಕ್ಕೆ ಏನು ಮಾಡುವುದು?’’ ಕಾಸಿ ಆತಂಕದಿಂದ ಕೇಳಿದ.
‘‘ನೋಡ್ರಿ....ಮೊಬೈಲ್‌ಗಳಲ್ಲೇ ವಿವಿಧ ಬಗೆಯ ಆಹಾರಗಳನ್ನು ಶೇರ್ ಮಾಡಿ ಹಂಚುವ ವ್ಯವಸ್ಥೆಯನ್ನು ಮಾಡಲಾಗುತ್ತದೆ...ಎಲ್ಲ ಬಡವರಿಗೆ ಬಿರಿಯಾನಿ(ಕಡ್ಡಾಯವಾಗಿ ಚಿಕನ್ ಮಾತ್ರ) ಇನ್ನಿತರ ಆಹಾರಗಳನ್ನು ಮೊಬೈಲ್ ಮೂಲಕವೇ ರಿಲಯನ್ಸ್ ಡಾಟಾಗಳಲ್ಲಿ ದೇಶಾದ್ಯಂತ ವಿತರಿಸಲಾಗುತ್ತದೆ’’ ವಾಚ್‌ಮೆನ್ ಹೇಳಿದ.
‘‘ರಿಲಯನ್ಸ್ ಮೊಬೈಲ್‌ಗಳ ಮುಖಾಂತರ ಆಹಾರ ವಿತರಣೆಯೇ...’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಹೌದ್ರೀ....ಡಾಟಾಗಳಿಗಷ್ಟೇ ಚಾರ್ಜಾಗತ್ತೆ. ಆದರೆ ಆಹಾರ ಮಾತ್ರ ಪುಕ್ಕಟೆಯಾಗಿ ವಿತರಣೆಯಾಗುತ್ತೆ...’’ ವಾಚ್‌ಮೆನ್ ಹೇಳಿದ.
‘‘ಅಂದರೆ...’’ ಕಾಸಿಗೆ ಅರ್ಥವಾಗಲಿಲ್ಲ.
‘‘ಅದೇರಿ...ಮೊಬೈಲ್‌ನಲ್ಲೇ ವಾಟ್ಸ್‌ಆ್ಯಪ್ ಮೂಲಕ ಬಗೆ ಬಗೆಯ ಆಹಾರಗಳನ್ನು ಶೇರ್ ಮಾಡಲಾಗುತ್ತೆ. ಮೊಬೈಲ್‌ಗಳಲ್ಲೇ ಬೇರೆ ಬೇರೆ ಆಹಾರಗಳನ್ನು ಡೌನ್‌ಲೋಡ್ ಮಾಡಬಹುದು...ಇದರಿಂದಾಗಿ ಆಹಾರ ಬೇಯಿಸುವ ಸಮಸ್ಯೆಯೇ ಇರುವುದಿಲ್ಲ. ಸಬ್ಸಿಡಿ ಸಿಲಿಂಡರ್‌ಗಳನ್ನೆಲ್ಲ ರದ್ದು ಮಾಡಲಾಗುತ್ತದೆ’’ ವಾಚ್‌ಮೆನ್ ಹೇಳಿದ.
‘‘ಅಲ್ಲಾರಿ...ಮೊಬೈಲ್‌ಗಳಲ್ಲಿ ಆಹಾರಗಳ ಚಿತ್ರಗಳನ್ನ ಡೌನ್‌ಲೋಡ್ ಮಾಡಿ ಅದನ್ನು ತಿನ್ನೋಕ್ಕಾಗತ್ತ?’’ ಕಾಸಿ ಅಚ್ಚರಿಯಿಂದ ಕೇಳಿದ.
 ‘‘ಏನ್ರೀ...ಮೋದಿ ಸರಕಾರ ಯಾವ ಯೋಜನೆಗಳನ್ನು ಹಾಕಿದರೂ ಅದನ್ನು ಟೀಕೆ ಮಾಡುವುದೇ ನಿಮಗೆ ಅಭ್ಯಾಸವಾಗಿ ಹೋಗಿದೆ. ಪೌಷ್ಟಿಕ ಆಹಾರಗಳನ್ನು ರಿಲಯನ್ಸ್ ಮೊಬೈಲ್‌ಗಳ ಮೂಲಕವೇ ನಾವು ಸುಲಭವಾಗಿ, ಉಚಿತವಾಗಿ ತಲುಪಿಸಲು ಯತ್ನಿಸಿದರೆ ನೀವು ಅದಕ್ಕೂ ಅಡ್ಡಗಾಲು ಹಾಕುತ್ತಿದ್ದೀರಲ್ಲ...ನಮ್ಮದು ಇ ಸರಕಾರ. ಆದುದರಿಂದ ಮೊಬೈಲ್‌ಗಳ ಮೂಲಕವೇ ಆಹಾರವನ್ನು ವಿತರಿಸುತ್ತೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅತ್ಯಗತ್ಯ ವಸ್ತುಗಳನ್ನು ಅಂದರೆ ಬೇಳೆ, ಟೊಮೆಟೊ, ಇವೆಲ್ಲವನ್ನೂ ಮೊಬೈಲ್‌ಗಳಲ್ಲೇ ಡೌನ್‌ಲೋಡ್ ಮಾಡುವ ಮೂಲಕ ಜನರಿಗೆ ತಲುಪಿಸಲಿದ್ದೇವೆ’’ ವಾಚ್‌ಮೆನ್ ತನ್ನ ಜೇಬಿನೊಳಗಿರುವ ಐಫೋನ್ ತೆಗೆದು ಡೌನ್‌ಲೋಡ್ ಮಾಡಿ ತೋರಿಸಿದ.
‘‘ಹಾಗಾದರೆ ಮುಂದಿನ ದಿನಗಳಲ್ಲಿ ನೀರಾವರಿ ವ್ಯವಸ್ಥೆಯನ್ನು ಮೊಬೈಲ್ ಮೂಲಕವೇ ಮಾಡಬಹುದಲ್ಲ?’’ ಕಾಸಿಯೂ ಸಲಹೆ ನೀಡಿದ.
ವಾಚ್‌ಮೆನ್ ಗಂಭೀರವಾಗಿ ತಲೆಯಾಡಿಸಿದ ‘‘ಹೌದು. ಅದಕ್ಕಾಗಿ ರಿಲಯನ್ಸ್ ಇನ್ನೊಂದು ವಿಶೇಷ ಡಾಟಾವನ್ನು ಹೊರ ತರುತ್ತಿದೆ. ಇದರಿಂದಾಗಿ ಜನರು ನೀರು ಬೇಕಾದಾಗೆಲ್ಲ ಮೊಬೈಲ್‌ನಿಂದಲೇ ಡೌನ್‌ಲೋಡ್ ಮಾಡಬಹುದು. ವಿಶ್ವದ ಎಲ್ಲ ನದಿಗಳನ್ನೂ ಈ ಮೊಬೈಲ್ ಮೂಲಕ ನಮ್ಮ ದೇಶದ ಹಳ್ಳಿ ಹಳ್ಳಿಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಈ ಕಾರಣದಿಂದಲೇ ಹಳ್ಳಿಹಳ್ಳಿಗಳಲ್ಲಿ ರಿಲಯನ್ಸ್ ಟವರ್‌ಗಳು ತಲೆಯೆತ್ತಲು ವಿಶೇಷ ಯೋಜನೆಗಳನ್ನು ಮಾಡಲಾಗುತ್ತಿದೆ. ಈಗಾಗಲೇ ಪಶ್ಚಿಮಘಟ್ಟದಲ್ಲಿರುವ ಬೃಹತ್ ಮರಗಳನ್ನೆಲ್ಲ ಕಡಿದು ಅಲ್ಲಿ ಟವರ್‌ಗಳನ್ನು ನೆಡುವ ಯೋಜನೆಗಳಿಗೂ ನಾವು ಚಾಲನೆ ನೀಡಲಿದ್ದೇವೆ...’’ 
ಕಾಸಿ ಆತಂಕದಿಂದ ಕೇಳಿದ ‘‘ಮರಗಳು ಕಡಿದರೆ ಮಳೆ ಬರುವುದಿಲ್ಲ ಎಂದು ಹೇಳುತ್ತಾರಲ್ಲ...’’
ವಾಚ್‌ಮೆನ್ ನಕ್ಕ ‘‘ಹೇ...ಎಂತದ್ರೀ ನೀವು. ತಲೆಯಲ್ಲಿ ಮೆದುಳು ಇಲ್ಲವೆ....ಮಳೆಯನ್ನೂ ನಾವು ಮೊಬೈಲ್ ಮೂಲಕವೇ ಡೌನ್‌ಲೋಡ್ ಮಾಡಬಹುದು. ಮಳೆಗಾಗಿ ಮಳೆಗಾಲಕ್ಕೆ ಕಾಯಬೇಕಾಗಿಲ್ಲ. ವಿಶೇಷ ಮೊಬೈಲ್ ಫೋನ್‌ಗಳನ್ನು ಸಬ್ಸಿಡಿಯಲ್ಲಿ ವಿತರಿಸುವ ಯೋಜನೆಯನ್ನೂ ಹಮ್ಮಿಕೊಂಡಿದ್ದೇವೆ....’’
ಕಾಸಿಗೆ ಸಮಾಧಾನವಾಯಿತು. ‘‘ಸಾರ್....ಸೈನಿಕರಿಗೆ ಒಂದೊಂದು ರೂಪಾಯಿ ಕೊಡಿ ಎಂದು ಜನರನ್ನು ಕೇಳಿದ್ದಾರಲ್ಲ...ಸರಿಯಾ ಸಾರ್?’’ ಮತ್ತೆ ಕೇಳಿದ ಕಾಸಿ.
‘‘ದೇಶಕಾಯುವ ಸೈನಿಕರಿಗೆ ಒಂದೊಂದು ರೂಪಾಯಿ ಕೊಡಲು ಸಾಧ್ಯವಿಲ್ಲದವರು ದೇಶದ್ರೋಹಿಗಳು...’’ ವಾಚ್‌ಮೆನ್ ಘೋಷಿಸಿದ.
‘‘ಅಲ್ಲ ಸಾರ್...ತೆರಿಗೆ ಕಟ್ಟುತ್ತೇವೆ...ಅದರಲ್ಲಿ ಬರುವ ಹಣ....’’ ತಡವರಿಸಿ ಕೇಳಿದ.
 ‘‘ನೋಡ್ರೀ...ನಿಮಗೆ ಪುಕ್ಕಟೆ ಆಹಾರ, ಪುಕ್ಕಟೆ ನೀರು, ಪುಕ್ಕಟೆ ಮಳೆ ಎಲ್ಲವನ್ನೂ ಒದಗಿಸಿ ಕೊಟ್ಟ ರಿಲಯನ್ಸ್‌ನವರಿಗೆ ಏನಾದರೂ ಕೊಡಬೇಡವೇ? ಮುಂದಿನ ದಿನಗಳಲ್ಲಿ ಪೊಲೀಸರಿಗಾಗಿ ಎರಡು ರೂಪಾಯಿ, ಗೋರಕ್ಷಕರನ್ನು ಸಾಕಲು ಐದು ರೂಪಾಯಿ, ಆರೆಸ್ಸೆಸ್‌ನ ಪ್ಯಾಂಟ್‌ಗಾಗಿ ಎಂಟಾನೆ, ಇವೆಲ್ಲವನ್ನೂ ಸಂಗ್ರಹಿಸಲು ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ದೇಶದ ಭಿಕ್ಷುಕರನ್ನೆಲ್ಲ ಜೈಲಿಗೆ ತಳ್ಳಿ, ನಮ್ಮ ಸರಕಾರ ಭಿಕ್ಷೆ ಬೇಡುವುದಕ್ಕಾಗಿಯೇ ವಿಶೇಷ ಕಚೇರಿ, ಸಚಿವಾಲಯ, ಸಿಬ್ಬಂದಿಯನ್ನು ನೇಮಕ ಮಾಡುತ್ತದೆ. ಭಿಕ್ಷೆ ಬೇಡುವ ತಟ್ಟೆಗಳಿಗಾಗಿ ತಲಾ ನಾಲ್ಕಾನೆಯನ್ನು ಜನರಿಂದಲೇ ಸಂಗ್ರಹಿಸಲಾಗುತ್ತದೆ....’’
ಕಾಸಿಗೆ ತಲೆ ಧಿಂ ಎಂದಿತು.
ಅಷ್ಟರಲ್ಲಿ ಒಳಗಿನಿಂದ ಅಂಬಾನಿಯವರ ಕೂಗು ‘‘ರೀ...ಅಮಿತ್ ಶಾ ಅವರೇ...ಒಮ್ಮೆ ಇಲ್ಲಿಗೆ ಬನ್ನಿ. ಮೋದಿಯವರ ಮೇಕಪ್ ಹೇಗಾಗಿದೆ ನೋಡಿ...’’
‘‘ಇಗೋ ಬಂದೆ ಸಾರ್...’’ ಎಂದವನೇ ವಾಚ್‌ಮೆನ್ ಒಳಗೆ ಓಡಿದ.

ಚೇಳಯ್ಯ
ಕೃಪೆ-ವಾರ್ತಾ ಭಾರತಿ