Monday, November 20, 2017

ಕುಂಡದೊಳಗಿಟ್ಟು ನಾವು ಸಾಕುತ್ತಿರುವ ಸೌಹಾರ್ದ!

ಇತ್ತೀಚೆಗೆ ಕರಾವಳಿಯಲ್ಲಿ ಜಿಲ್ಲಾ ಮಟ್ಟದ ಒಂದು ಕ್ರಿಕೆಟ್ ಪಂದ್ಯ ‘ಸೌಹಾರ್ದ’ ಕಾರಣಕ್ಕಾಗಿ ಸುದ್ದಿಯಾಯಿತು. ಈ ಪಂದ್ಯದ ಪ್ರಮುಖ ನಿಯಮಾವಳಿ ಏನೆಂದರೆ ‘ಭಾಗವಹಿಸುವ ಪ್ರತೀ ತಂಡದಲ್ಲಿ ಎಲ್ಲ ಧರ್ಮಕ್ಕೆ ಸೇರಿದ ಆಟಗಾರರು ಇರಬೇಕು” ಎನ್ನುವುದು. ಪತ್ರಿಕೆಗಳಲ್ಲೂ ಈ ಸೌಹಾರ್ದ ಕ್ರಿಕೆಟ್ ಪಂದ್ಯವನ್ನು ಶ್ಲಾಘಿಸಿ ಲೇಖನಗಳು ಪ್ರಕಟವಾದವು. ೨೦ ವರ್ಷಗಳ ಹಿಂದಿನ ಮಾತು. ನಮ್ಮ ಊರಿನ ಮೈದಾನದಲ್ಲಿ ಆಟದ ಖುಷಿಗಾಗಿ ಆಟಗಾರರು ಸೇರುತ್ತಿದ್ದರೇ ಹೊರತು, ಅವರು ತಮ್ಮ ಧರ್ಮದ ಪ್ರತಿನಿಧಿಗಳಾಗಿ ಅಲ್ಲಿ ಸೇರುತ್ತಿರಲಿಲ್ಲ. ಸಂಜೆಯಾದಾಕ್ಷಣ ಕ್ರಿಕೆಟ್ ಬ್ಯಾಟುಗಳ ಜೊತೆಗೆ ಸೇರುವ ನಝೀರ್, ಮೋಹನ, ರಾಮಕೃಷ್ಣ, ಮಜೀದ್, ಪಿಂಟೋ...ಇವರೆಲ್ಲ ತಮ್ಮ ಆಟದ ಸಾಮರ್ಥ್ಯಕ್ಕನುಗುಣವಾಗಿ ಅಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತಿದ್ದರು. ಸಂಜೆ ಏಳರವರೆಗೂ ಆಡಿ, ಬಳಿಕ ಒಂದು ಅರ್ಧ ಗಂಟೆ ‘ಪಟ್ಟಾಂಗ’ ಹೊಡೆದು ಅವರವರ ಮನೆಗೆ ತೆರಳುವುದು ಹದಿಹರೆಯದ ಹುಡುಗರ ಒಂದು ದಿನಚರಿಯೇ ಆಗಿತ್ತು. ಮುಖ್ಯವಾಗಿ, ಎಲ್ಲ ಜಾತಿ ಧರ್ಮಗಳನ್ನು ಮೀರಿ ನಾವಿಲ್ಲಿ ಒಂದಾಗಿದ್ದೇವೆ ಎನ್ನುವ ಅರಿವೂ ಅವರಿಗಿರಲಿಲ್ಲ. ಶಾಲೆಗಳನ್ನು ಹೊರತು ಪಡಿಸಿದರೆ, ನಮ್ಮೆಲ್ಲರನ್ನು ಜಾತಿ ಧರ್ಮದಾಚೆಗೆ ಒಂದಾಗಿಸುತ್ತಿದ್ದುದು ಈ ಮೈದಾನವೇ ಆಗಿತ್ತು. ಯಾವ ಸೌಹಾರ್ದದ ಭಾಷಣಗಳು, ದೇಶಭಕ್ತಿಯ ಘೋಷಣೆಗಳು ನಮಗೆ ಒಂದಾಗುವುದಕ್ಕೆ ಅಗತ್ಯವಿರಲಿಲ್ಲ. ಮನೆಯ ಬಳಿಕ ನಾವು ಹೊರಜಗತ್ತನ್ನು ಮುಖಾಮುಖಿಯಾಗುವುದೇ ಊರಿನ ಈ ಮೈದಾನಗಳ ಮೂಲಕ. ನಮ್ಮನ್ನು ಆ ಊರಿನ ಅಧಿಕೃತ ಸದಸ್ಯನಾಗಿ ಘೋಷಿಸುವುದು ಈ ಮೈದಾನಗಳೇ ಆಗಿದ್ದವು.
ನಮ್ಮ ಮನೆಯ ಹೊರಗಿನ ಸಮಾಜ ನಮಗೆ ಮೊದಲು ತೆರೆದುಕೊಳ್ಳುವುದು ಶಾಲೆಗಳ ಮೂಲಕ. ಇಲ್ಲಿ ಬೇರೆ ಬೇರೆ ಧರ್ಮ, ಸಂಸ್ಕೃತಿ, ಭಾಷೆಗಳ ಮುಖಾಮುಖಿಯಾಗುತ್ತದೆ. ಯಾರೂ ನಮಗೆ ಇನ್ನೊಂದು ಧರ್ಮವನ್ನು, ಭಾಷೆಯನ್ನು ಪರಿಚಯಿಸಬೇಕಾಗಿರಲಿಲ್ಲ. ನಾವೆಲ್ಲ ತುಳು ಭಾಷೆಯನ್ನು ಯಾವುದೇ ಶಾಲೆಯಲ್ಲಿ ಅಥವಾ ಗುರುಗಳಲ್ಲಿ ಕಲಿತಿರುವುದಲ್ಲ. ಮನೆ ಭಾಷೆ ಬ್ಯಾರಿಯಾಗಿದ್ದರೆ, ಊರ ಹುಡುಗರ ಜೊತೆಗೆ ಮೈದಾನದಲ್ಲಿ, ಶಾಲೆಯಲ್ಲಿ ಆಟವಾಡುತ್ತಲೇ ತುಳುವನ್ನು ನಮ್ಮದಾಗಿಸಿಕೊಂಡೆವು. ಜಾತ್ರೆಗಳಲ್ಲಿ, ಉರೂಸುಗಳಲ್ಲಿ ಓಡಾಡುತ್ತಾ ವಿವಿಧ ಸಂಸ್ಕೃತಿಗಳನ್ನು ಸಹಜವಾಗಿ ನಮ್ಮೊಳಗೆ ಇಳಿಸಿಕೊಳ್ಳತೊಡಗಿದೆವು. ಶಾಲೆಯಲ್ಲಿ ಒಟ್ಟಾಗಿ ಓದುತ್ತಾ, ಜಗಳ ಮಾಡುತ್ತಾ, ಆಡುತ್ತಾ ಎಲ್ಲರೂ ನಮ್ಮವರಾದರು. ನಾನು ಓದಿರುವುದು ಚರ್ಚ್ ಶಾಲೆಯಾಗಿತ್ತು. ಆ ಕಾಲದಲ್ಲಿ ಎಲ್ಲ ಧರ್ಮೀಯರು ಆದ್ಯತೆಯ ಮೇಲೆ ಚರ್ಚ್ ಶಾಲೆಗಳಿಗೇ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದರು. ಆದರೆ ಎಂದಿಗೂ ಅದು ಒಂದು ಧರ್ಮೀಯರ ಶಾಲೆ ಎಂದು ನಮಗಾಗಲಿ, ನಮ್ಮ ಪಾಲಕರಿಗಾಗಲಿ ಅನಿಸಿರಲಿಲ್ಲ. ನಾವ್ಯಾರೂ ಆ ಶಾಲೆಯಲ್ಲಿ ಕಲಿತ ಕಾರಣಕ್ಕೆ ಮತಾಂತರ ಹೊಂದಲಿಲ್ಲ. ಶಾಲೆಯಲ್ಲಿ ಕ್ರಿಸ್ಮಸ್, ದೀಪಾವಳಿ ಆಚರಿಸಿದ ಸಂದರ್ಭಗಳಲ್ಲಿ, ಅದೆಲ್ಲ ಬೇರೆಯವರದು ಎಂದೆನಿಸದೇ ನಾವೆಲ್ಲರೂ ತುಂಬು ಖುಷಿಯಿಂದ ಆಚರಿಸುತ್ತಿದ್ದೆವು. ಇಂದಿಗೂ ದೀಪಾವಳಿ ಹಬ್ಬ ಬಂದಾಗ ಹೃದಯದಲ್ಲೇನೋ ಅರಳಿದಂತಾಗುವುದು ಇದೇ ಕಾರಣಕ್ಕೆ ಇರಬಹುದು. ಇಲ್ಲಿ, ಯಾವುದೇ ಭಾಷಣ, ಸಮ್ಮೇಳನ, ಧಾರ್ಮಿಕ ಪುಸ್ತಕಗಳು ನಮ್ಮನ್ನು ಪರಸ್ಪರ ಪರಿಚಯಿಸಿ ಒಂದಾಗಿಸಿರುವುದಲ್ಲ. ಒಂದು ರೀತಿಯಲ್ಲಿ, ಸೌಹಾರ್ದವೆನ್ನುವುದು ನಮ್ಮ ಕಾಲಕ್ಕೆ, ಸಹಜವಾಗಿ ಹರಡಿಕೊಂಡ ಕಾಡುಗಳಾಗಿದ್ದವು. ಅದಕ್ಕೆ ಯಾರೂ ನೀರುಣಿಸಿರಲಿಲ್ಲ, ಯಾರೂ ಗೊಬ್ಬರ ಹಾಕಿರಲಿಲ್ಲ. ಆದರೂ ಅದು ಯಥೇಚ್ಛವಾಗಿ, ಸಮೃದ್ಧವಾಗಿ ಹರಡಿಕೊಳ್ಳುತ್ತಾ ಹೋಯಿತು. ಆದುದರಿಂದಲೇ ನಮ್ಮ ಪಾಲಿಗೆ ಯಾರೂ ಅನ್ಯರಲ್ಲ, ಯಾವುದೂ ಅನ್ಯವಾಗಿರಲಿಲ್ಲ. ನಮಗೆ ಆಗ ‘ಗೆಳೆಯ’ರಷ್ಟೇ ಇದ್ದರು. ಇಂದಿನ ಹಾಗೆ, ಮುಸ್ಲಿಮ್ ಗೆಳೆಯರು, ಹಿಂದೂ ಗೆಳೆಯರು, ಕ್ರಿಶ್ಚಿಯನ್ ಗೆಳೆಯರು ಇದ್ದಿರಲಿಲ್ಲ. ಹಿಂದೂ ಆಟಗಾರ, ಮುಸ್ಲಿಮ್ ಆಟಗಾರ ಎನ್ನುವ ಭಾಷೆಯೂ ಆಗ ಚಾಲ್ತಿಯಲ್ಲಿರಲಿಲ್ಲ. ವಿಪರ್ಯಾಸವೆಂದರೆ, ಇಂದು ಅಂತಹ ಸಹಜವಾಗಿ ಬೆಳೆದ, ಬೆಳೆಯುತ್ತಿರುವ ಕಾಡುಗಳನ್ನೆಲ್ಲ ಸಮಾಜ ಭಾಗಶಃ ಕಡಿದು ಹಾಕಿದೆ. ವಿವಿಧ ಜಾತಿ, ಧರ್ಮ, ಸಂಸ್ಕೃತಿಯ ಪುಟಾಣಿ ಮಕ್ಕಳು ಒಟ್ಟು ಸೇರುವ ಎಲ್ಲ ಮೈದಾನಗಳನ್ನು, ವೇದಿಕೆಗಳನ್ನು ನಾಶ ಮಾಡಿ, ನಾವು ನಮ್ಮ ನಮ್ಮ ಕಾಂಪೌಂಡ್‌ನೊಳಗೆ ಕುಂಡದಲ್ಲಿ ಸೌಹಾರ್ದ ಗಿಡಗಳನ್ನು ನೆಟ್ಟು ಬೆಳೆಸಲು ಹೊರಟಿದ್ದೇವೆ. 

ಇತ್ತೀಚೆಗೆ ಎಂಟನೆ ತರಗತಿಯಲ್ಲಿ ಕಲಿಯುತ್ತಿರುವ ನನ್ನ ಪರಿಚಯದ ಹುಡುಗನ ಜೊತೆಗೆ ನಾನು ಮಾತನಾಡಿದೆ. ಅವನು ಓದುತ್ತಿರುವ ಶಾಲೆಯ ಹೆಸರು ಕೇಳಿದೆ. ಅದು ಧಾರ್ಮಿಕ ಹಿನ್ನೆಲೆಯಿರುವ ಸಂಘಟನೆಯೊಂದು ನಡೆಸುವ ಶಾಲೆ. ಎಲ್‌ಕೆಜಿಯಿಂದ ಹಿಡಿದು ಎಂಟನೆಯ ತರಗತಿಯವರೆಗೂ ಅವನು ಅದೇ ಶಾಲೆಯಲ್ಲಿ ಕಲಿಯುತ್ತಾ ಬಂದಿದ್ದಾನೆ. ‘ನಿನ್ನ ಶಾಲೆಯಲ್ಲಿ ಬೇರೆ ಧರ್ಮೀಯರು ಎಷ್ಟಿದ್ದಾರೆ?” ಎಂಬ ಪ್ರಶ್ನೆಗೆ ಆಘಾತಕಾರಿ ಉತ್ತರ ದೊರಕಿತು. ಅವನ ಶಾಲೆಯಲ್ಲಿ ಒಬ್ಬನೇ ಒಬ್ಬ ಬೇರೆ ಧರ್ಮೀಯ ವಿದ್ಯಾರ್ಥಿಯಿರಲಿಲ್ಲ. ಈ ವಿದ್ಯಾರ್ಥಿ ತನ್ನ ಮನೆಯಿಂದ ಹೊರಗೆ, ಸಮಾಜಕ್ಕೆ ತೆರೆದುಕೊಳ್ಳುವುದು ಈ ಶಾಲೆಯ ಮೂಲಕವಾಗಿದೆ. ಶಾಲೆಯಿಂದ ನೇರವಾಗಿ ಈತ ಮನೆಗೆ ಬರುತ್ತಾನೆ. ಮನೆಯಿಂದ ಟ್ಯೂಶನ್‌ಗೆ ಹೋಗುತ್ತಾನೆ. ಬಳಿಕ ಮತ್ತೆ ಮನೆಗೆ. ತನ್ನ ಧರ್ಮೀಯರನ್ನು ಬಿಟ್ಟರೆ ಇನ್ನೊಂದು ಧರ್ಮದ ವಿದ್ಯಾರ್ಥಿಯನ್ನು ಭೇಟಿಯಾಗುವ ಅವಕಾಶವೇ ಅವನಿಗೆ ಈವರೆಗೆ ಸಿಕ್ಕಿಲ್ಲ. ಎಲ್ಲೋ ನೆರೆಯಲ್ಲಿ ಅಥವಾ ಹೊರಗಡೆ ಸಿಕ್ಕಿದರೂ ಅದು ಅತ್ಯಲ್ಪ. ಹಿಂದಿನಂತೆ ಮಕ್ಕಳನ್ನು ಹೊರಗಡೆ ಸಾರ್ವಜನಿಕ ಮೈದಾನಕ್ಕೆ ಆಟ ಆಡಲು ಸ್ವತಂತ್ರವಾಗಿ ಕಳುಹಿಸುವ ಪರಿಪಾಠವೂ ಈಗ ಇಲ್ಲ. ಈ ಹುಡುಗ ಹತ್ತನೇ ತರಗತಿಯವರೆಗೂ ಆ ಶಾಲೆಯಲ್ಲಿ ಕಲಿತು, ಬಳಿಕ ಕಾಲೇಜಿಗೆ ಕಾಲಿಡುತ್ತಾನೆ. ಅಂದರೆ ಹೊರಗಿನ ಸಮಾಜಕ್ಕೆ ಈತ ನಿಜವಾದ ಅರ್ಥದಲ್ಲಿ ಕಾಲಿಡುವುದು ತನ್ನ ಹತ್ತನೇ ತರಗತಿಯ ಬಳಿಕ. ಕಾಲೇಜಿಗೆ ಕಾಲಿಡುವುದೆಂದರೆ, ಈವರೆಗೆ ಅವನ ಕಣ್ಣಿಗೆ ಕಟ್ಟಿದ ಪಟ್ಟಿಯನ್ನು ಒಮ್ಮೆಲೆ ಬಿಚ್ಚಿದಂತೆ. ತನ್ನೆದುರು ಕಾಣುತ್ತಿರುವುದೆಲ್ಲವೂ ಅವನಿಗೆ ‘ಅನ್ಯ’ ಅನ್ನಿಸತೊಡಗುತ್ತದೆ. ಇನ್ನೊಂದು ಧರ್ಮೀಯರ ಹೆಸರು, ಮಾತು, ಸಂಸ್ಕೃತಿ ಯಾವುದೂ ಅವನಿಗೆ ಪರಿಚಿತವಲ್ಲ. ಅವನು ಅದನ್ನು ಆ ಹೊತ್ತಿನಲ್ಲಿ ಹೊಸದಾಗಿ ತನ್ನದಾಗಿಸಲು ಪ್ರಯತ್ನಿಸಬೇಕು. ಬಾಲ್ಯದಲ್ಲೇ ಅವರ ಜೊತೆ ಜೊತೆಯಾಗಿ ಬಾಳುತ್ತಾ ತನ್ನದಾಗಿಸಿಕೊಳ್ಳುವುದಕ್ಕೂ, ಅನಿವಾರ್ಯ ಎನ್ನುವ ಕಾರಣಕ್ಕಾಗಿ ಇನ್ನೊಬ್ಬರನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನಕ್ಕೂ ವ್ಯತ್ಯಾಸವಿದೆ. ಯಾವುದನ್ನೂ ಅವನಿಗೆ ಸಹಜವಾಗಿ ಸ್ವೀಕರಿಸುವುದು ಕಷ್ಟವಾಗುತ್ತದೆ. ಆದುದರಿಂದ, ಆತ ಬೆರೆಯುವುದಕ್ಕಾಗಿ ತನ್ನ ಧರ್ಮೀಯನನ್ನೇ ಹುಡುಕಿಕೊಂಡು ಹೋಗುತ್ತಾನೆ. ಇದು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿರುವ ಅಪಾಯ ಅಲ್ಲ. ವಿಪರ್ಯಾಸವೆಂದರೆ, ಒಂದು ಕಾಲದಲ್ಲಿ ಲಕ್ಷಾಂತರ ಶಿಕ್ಷಿತರನ್ನು ಸೃಷ್ಟಿಸಿದ ಕ್ರಿಶ್ಚಿಯನ್ ಶಾಲೆಗಳಿಗೂ ಇದೀಗ ಧರ್ಮದ ಕಳಂಕವನ್ನು ಅಂಟಿಸಲಾಗಿದೆ. ಕ್ರಿಶ್ಚಿಯನ್ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸಿದರೆ ಅವರು ತಮ್ಮ ಧರ್ಮವನ್ನು ಮಕ್ಕಳ ತಲೆಯೊಳಗೆ ತುಂಬುತ್ತಾರೆ ಎಂಬ ಅಪಪ್ರಚಾರ ಹಿಂದೂಗಳಲ್ಲೂ, ಮುಸ್ಲಿಮರಲ್ಲೂ ತಿಳಿದೂ ತಿಳಿಯದಂತೆ ಹರಡಿಕೊಂಡಿದೆ. ಇತ್ತೀಚೆಗೆ ಒಬ್ಬ ಪುಟಾಣಿ ವಿದ್ಯಾರ್ಥಿಯ ಬಳಿ ಕೇಳಿದ್ದೆ “ನಿಮ್ಮ ಮನೆಯ ಹತ್ತಿರವೇ ಆ ಶಾಲೆಯಿರುವಾಗ ನೀನೇಕೆ ಅಷ್ಟು ದೂರ ಹೋಗಿ ಕಲಿಯಬೇಕು?”. ಆತ ತಕ್ಷಣ ನೀಡಿದ ಉತ್ತರ “ಅದು ಮುಸ್ಲಿಮರ ಶಾಲೆ ಅಲ್ಲವಾ?”. 
ಇಷ್ಟೇ ಅಲ್ಲ, ಕಲ್ಲಡ್ಕದಲ್ಲಿ ಪ್ರಭಾಕರಭಟ್ಟರಂತಹ ಸಂಘಪರಿವಾರ ನಾಯಕನ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಕಲಿತ ವಿದ್ಯಾರ್ಥಿ ಈ ಸಮಾಜವನ್ನು ಹೇಗೆ ನೋಡಬಹುದು ಎನ್ನುವುದನ್ನು ನಾವು ಕಲ್ಪಿಸಿಕೊಳ್ಳೋಣ. ಬಹು ಸಂಸ್ಕೃತಿಯ ನಾಡು ಹೀಗೆ, ತನ್ನ ಬೇರಿನಲ್ಲೇ ವಿಭಜನೆಯ ರೋಗವನ್ನು ಇಟ್ಟುಕೊಂಡು ಬೆಳೆಯುತ್ತಿದೆ. ಇಂದು ಎಲ್ಲ ಧರ್ಮಗಳು, ಜಾತಿಗಳು ತಮ್ಮ ತಮ್ಮ ಸಮುದಾಯವನ್ನು ಶೈಕ್ಷಣಿಕವಾಗಿ ಮೇಲೆತ್ತಲು ತುದಿಗಾಲಿನಲ್ಲಿ ನಿಂತಿವೆ. ಆದುದರಿಂದಲೇ ಮದ್ರಸ, ಚರ್ಚು, ದೇವಸ್ಥಾನಗಳ ಅಂಗಳಗಳಲ್ಲೇ ಶಾಲೆಗಳು ತೆರೆಯುತ್ತಿವೆ. ಶಾಲೆಗಳು ತೆರೆಯುತ್ತಿರುವುದೇನೋ ಸರಿ. ಆದರೆ ಆ ಮೂಲಕ ಮಕ್ಕಳು ಧರ್ಮ, ಜಾತಿಯ ಹೆಸರಲ್ಲಿ ಸಂಪೂರ್ಣ ಬೇರ್ಪಟ್ಟು ಪರಸ್ಪರ ಅಪರಿಚಿತರಾಗಿ ಓದುವುದಕ್ಕೆ ಶುರು ಹಚ್ಚಿದರೆ ಈ ನಾಡಿನ ಬಹುತ್ವ ಉಳಿಯುವುದು ಹೇಗೆ?
ಇನ್ನೊಂದು ವಿಪರ್ಯಾಸವನ್ನೂ ನಾವು ಗಮನಿಸಬೇಕು. ಹೀಗೆ ವಿದ್ಯಾರ್ಥಿಗಳನ್ನು ವಿಭಜಿಸುವ ಧಾರ್ಮಿಕ ಸಂಘಟನೆಗಳೇ, ವರ್ಷಕ್ಕೊಮ್ಮೆ ಬೇರೆ ಬೇರೆ ಉತ್ಸವದ ಸಂದರ್ಭದಲ್ಲಿ ಸೌಹಾರ್ದ ಸಮ್ಮೇಳನಗಳನ್ನೂ ಹಮ್ಮಿಕೊಳ್ಳುತ್ತಿವೆ. ಮುಸ್ಲಿಮ್ ಧಾರ್ಮಿಕ ಸಂಘಟನೆಗಳ ಸಮಾವೇಶದಲ್ಲಿ ಪೇಜಾವರ ಶ್ರೀಗಳಂತಹ ಹಿರಿಯ ಧಾರ್ಮಿಕ ನಾಯಕರು ಭಾಗವಹಿಸುತ್ತಾರೆ. ಹಾಗೆಯೇ ಪೇಜಾವರ ಶ್ರೀಗಳ ಪರ್ಯಾಯ ಉತ್ಸವದ ಸರ್ವಧರ್ಮ ಸೌಹಾರ್ದ ಸಮ್ಮೇಳನದಲ್ಲಿ ಸಿ. ಎಂ. ಇಬ್ರಾಹೀಂರಂತಹ ಮುಸ್ಲಿಮ್ ಮುಖಂಡರು ಮಾತನಾಡಿ ಸೌಹಾರ್ದದ ಮಹತ್ವವನ್ನು ವಿವರಿಸುತ್ತಾರೆ. ಇಂತಹ ಸಮಾವೇಷಗಳಲ್ಲಿ, ಎಲ್ಲ ಧಾರ್ಮಿಕ ಮುಖಂಡರೂ ತಮ್ಮ ತಮ್ಮ ಧರ್ಮಗಳಲ್ಲಿರುವ ಸೌಹಾರ್ದದ ಮೌಲ್ಯಗಳನ್ನು ಸಮಾಜಕ್ಕೆ ಸಾರುತ್ತಾರೆ. ನಿಜ, ವಿವಿಧ ಧಾರ್ಮಿಕ ಸಂಘಟನೆಗಳು ಇಂದು ಸೌಹಾರ್ದಕ್ಕಾಗಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಹಾಕುತ್ತಿವೆ. ಸಮಾವೇಶಗಳನ್ನು ನಡೆಸುತ್ತಿವೆ. ಆದರೆ ಇದೊಂದು ರೀತಿ, ಸಹಜವಾಗಿ ಹರಡಿ ನಿಂತ ಸೌಹಾರ್ದದ ಕಾಡುಗಳನ್ನು ಕಡಿದು, ನಮ್ಮ ನಮ್ಮ ಕಾಂಪೌಂಡ್‌ಗಳೊಳಗೆ ಕುಂಡದಲ್ಲಿಟ್ಟು ಅದನ್ನು ಸಾಕಿದ ಹಾಗೆ. ಇಂತಹ ಸೌಹಾರ್ದಗಳು ಹೆಚ್ಚು ಸಮಯ ಬಾಳುವುದಿಲ್ಲ ಎನ್ನುವ ಎಚ್ಚರಿಕೆ ಬೇಕು. ಗಿಡಗಳನ್ನಾಗಲಿ, ಸೌಹಾರ್ದವನ್ನಾಗಲಿ ಕುಂಡದೊಳಗಿಟ್ಟು ಸಾಕುವುದು ದುಬಾರಿ. ಒಂದಿಷ್ಟು ಕಣ್ಣು ತಪ್ಪಿದರೂ ಆ ಗಿಡ ಬಾಡಿ ಹೋಗಬಹುದು ಅಥವಾ ಸತ್ತು ಹೋಗಬಹುದು. ಬಹುತೇಕ ಧಾರ್ಮಿಕ ಸಂಘಟನೆಗಳು ಹಮ್ಮಿಕೊಳ್ಳುವ ಸೌಹಾರ್ದ ಸಮಾವೇಶಗಳ ಉದ್ದೇಶ ತಾವು ತಮ್ಮ ಕಾಂಪೌಂಡ್‌ನೊಳಗೆ ಸಾಕಿರುವ ಸೌಹಾರ್ದದ ಕುಂಡಗಳ ಪ್ರದರ್ಶಿಸುವುದಷ್ಟೇ ಆಗಿರುತ್ತದೆ. ಈ ಮೂಲಕ, ತಮ್ಮ ಧರ್ಮದ ಸೌಹಾರ್ದ ಸಂದೇಶಗಳ ‘ಗೊಬ್ಬರ’ದ ಹಿರಿಮೆಯನ್ನು ಪ್ರದರ್ಶಿಸುವುದಾಗಿದೆ. ಅಂದರೆ “ನೋಡಿ, ನಮ್ಮ ಧರ್ಮದ ಗೊಬ್ಬರ ಹಾಕಿ ಬೆಳೆಸಿದ ಸೌಹಾರ್ದದ ಗಿಡಗಳು ಎಷ್ಟು ಸೊಂಪಾಗಿವೆ?” ಎನ್ನುವ ಮೂಲಕ ತಮ್ಮ ತಮ್ಮ ಧರ್ಮಗಳ ಗೊಬ್ಬರಗಳನ್ನು ಮಾರ್ಕೆಟ್ ಮಾಡುವ ಪರೋಕ್ಷ ಉದ್ದೇಶ ಅದರ ಹಿಂದೆ ಇರುತ್ತದೆ. ಇಷ್ಟಕೂ  ಸಹಜವಾಗಿ ಹಬ್ಬಬಲ್ಲ ಸೌಹಾರ್ದದ ಎಲ್ಲ ಬಾಗಿಲುಗಳನ್ನು ಮುಚ್ಚಿ, ಉಪದೇಶಗಳ ಮೂಲಕ, ಪುಸ್ತಕಗಳ ಮೂಲಕ, ಭಾಷಣಗಳ ಮೂಲಕ ಸಮಾಜದಲ್ಲಿ ಸೌಹಾರ್ದವನ್ನು ನಿರ್ಮಿಸಲು ಹೊರಡುವುದೇ ಒಂದು ದೊಡ್ಡ ವ್ಯಂಗ್ಯವಾಗಿದೆ.
ವಿದ್ಯಾರ್ಥಿ ಕಾಲದಲ್ಲಿ ರಾಮಾಯಣ, ಮಹಾಭಾರತ ಕತೆಗಳೆಂದರೆ ನಮಗೆ ಹಬ್ಬ. ಅಮರ ಚಿತ್ರಕತೆಗಳಿಂದ ಆರಂಭವಾದ ಮಹಾಭಾರತದ ಓದು ಪಂಪ, ರನ್ನರ ಮೂಲಕ ಮೂಲ ವ್ಯಾಸನವರೆಗೂ ನಿರಂತರವಾಗಿ ನಡೆಯುತ್ತಿತ್ತು. ಮಹಾಭಾರತ, ರಾಮಾಯಣ ಈ ದೇಶದ ಎರಡು ಮಹಾಕಾವ್ಯಗಳು ಎಂದು ನಮ್ಮ ಮೇಷ್ಟ್ರು ನಮಗೆ ಬೋಧಿಸಿದ್ದರು. ಇಂದಿಗೂ ನಮಗದು ಅದ್ಭುತ ಮಹಾಕಾವ್ಯಗಳೇ ಆಗಿವೆ. ಎಲ್ಲ  ಭಾರತೀಯರಿಗೆ ಸೇರಿದ  ಕೃತಿಗಳು ಅವು. ಇದೇ ಸಂದರ್ಭದಲ್ಲಿ, ವಿಳಾಸ ಕಳುಹಿಸಿದರೆ ಬೈಬಲ್ ಕತೆ ಪುಸ್ತಕಗಳ ಕಟ್ಟು ಕಳುಹಿಸುವ ಸಂಸ್ಥೆಯೊಂದಿತ್ತು. ನಾವೆಲ್ಲ ಪದೇ ಪದೇ ಆ ವಿಳಾಸಕ್ಕೆ ಪತ್ರ ಬರೆಯುತ್ತಿದ್ದೆವು. ಅಂಚೆಯಲ್ಲಿ ಬೈಬಲ್ ಕತೆಗಳ ಕಟ್ಟು ಬರುವುದೇ ಒಂದು ಸಂಭ್ರಮ. ಬೈಬಲ್ ಧಾರ್ಮಿಕ ಪುಸ್ತಕವೇ ಆಗಿದ್ದರೂ ನಮಗದು ಆಗ ಕತೆಪುಸ್ತಕಗಳೇ. ನನ್ನ ವಿದ್ಯಾರ್ಥಿ ಕಾಲದಲ್ಲಿ, ಕನ್ನಡ ಪಂಡಿತರಾದ ವಿ. ಆರ್. ಹೆಗಡೆ ನನ್ನ ಮೇಲೆ ವಿಶೇಷ ಪ್ರೀತಿಯಿಟ್ಟುಕೊಂಡಿರುವುದಕ್ಕೆ ‘ಮಹಾಭಾರತದ ಯಾವುದೇ ಪ್ರಶ್ನೆಗಳಿಗೂ ಚಕಚಕನೇ ಉತ್ತರಿಸುವುದೂ’  ಕಾರಣವಾಗಿರಬೇಕು. ರಾಮಾಯಣ, ಮಹಾಭಾರತ, ಬೈಬಲ್‌ನಲ್ಲಿ ಬರುವ ಕೆಲವು ನೀತಿಕತೆಗಳಿಂದ ನಾನು ಇನ್ನಷ್ಟು ಒಳ್ಳೆಯ ಮುಸ್ಲಿಮನಾಗಲು ಸಾಧ್ಯವಾಯಿತೇ ಹೊರತು, ಹಿಂದೂ ಅಥವಾ ಕ್ರೈಸ್ತನಾಗಿ ನಾನೆಂದಿಗೂ ಬದಲಾಗಲಿಲ್ಲ. 
ಇತ್ತೀಚೆಗೆ ನಾನು ಮಹಾಭಾರತದ ಒಂದು ಪಾತ್ರವನ್ನು ವಿಶ್ಲೇಷಣೆ ಮಾಡಿ ಸಾಮಾಜಿಕ ತಾಣದಲ್ಲಿ ಹಾಕಿದ್ದೆ. ಕೆಲವೇ ಕ್ಷಣದಲ್ಲಿ ಒಬ್ಬ ತರುಣ ಆಕ್ರೋಶಿತನಾಗಿ “ನಮ್ಮ ಧರ್ಮದ ಗ್ರಂಥದ ಬಗ್ಗೆ ಮಾತನಾಡಲು ನೀನು ಯಾರು?” ಎಂದವನೇ ವಾಚಾಮಗೋಚರವಾಗಿ ಕುರ್‌ಆನ್ ಗ್ರಂಥವನ್ನು ನಿಂದಿಸತೊಡಗಿದ. ನಾನು ಸಹನೆಯಿಂದಲೇ ಆ ತರುಣನಿಗೆ ಮಹಾಭಾರತದ ಕೆಲವು ಪ್ರಶ್ನೆಗಳನ್ನು ಕೇಳಿದೆ. ‘ದ್ರೌಪದಿಯ ಅಣ್ಣನ ಹೆಸರು ಏನು ಗೊತ್ತಾ?’ ಎಂದು ಕೇಳಿದೆ. ಅವನಲ್ಲಿ ಯಾವ ಪ್ರಶ್ನೆಗಳಿಗೂ ಉತ್ತರವಿರಲಿಲ್ಲ. ಅವನು ಮಹಾಭಾರತವನ್ನೇ ಸರಿಯಾಗಿ ಓದಿರಲಿಲ್ಲ. ಆದರೆ ಮಹಾಭಾರತವೆಂದರೆ ‘ಹಿಂದೂಗಳ ಧರ್ಮ ಗ್ರಂಥ’ ಎಂದು ಅವನ ತಲೆಗೆ ಯಾರೋ ತುಂಬಿಸಿದ್ದರು. 

ಮೇಲಿನೆಲ್ಲದರ ಅರ್ಥ, ಧಾರ್ಮಿಕ, ಜಾತಿ ಸಂಘಟನೆಗಳು ತಮ್ಮ ತಮ್ಮ ಪ್ರತ್ಯೇಕ ಶಾಲೆಗಳನ್ನು, ವಿದ್ಯಾರ್ಥಿ ಹಾಸ್ಟೆಲ್‌ಗಳನ್ನು ಕಟ್ಟಬಾರದು ಎಂದಲ್ಲ.  ದುರ್ಬಲ ಸಮುದಾಯ ಶಿಕ್ಷಣ ಕ್ಷೇತ್ರದಲ್ಲಿ ಕಾಲಿಡುತ್ತಿರುವುದು ಅಭಿನಂದನೀಯ. ಇದು ಇಂದಿನ ಅಗತ್ಯವೂ ಕೂಡ. ಹಾಗೆಂದು ಆ ಶಾಲೆಗಳು, ಹಾಸ್ಟೆಲ್‌ಗಳು ತಮ್ಮದೇ ಜಾತಿ, ಸಮುದಾಯದ ಘೆಟ್ಟೋಗಳು ನಿರ್ಮಾಣವಾಗಲು ಕಾರಣವಾದರೆ ಅದರಿಂದ ಸಮುದಾಯಕ್ಕೆ ಭವಿಷ್ಯದಲ್ಲಿ ಇನ್ನಷ್ಟು ಅಪಾಯವಿದೆ. ಈ ಕಾರಣಕ್ಕೇ, ದುರ್ಬಲ ವರ್ಗದ ಸಮುದಾಯಗಳನ್ನು ಪ್ರತಿನಿಧಿಸುವ ಶಾಲೆಗಳು ಕೇವಲ ತಮ್ಮ ಧರ್ಮ, ಜಾತಿಯ ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗುವಂತಹ ಸ್ಥಿತಿಯನ್ನು ಅಲ್ಲಿ ನಿರ್ಮಾಣ ಮಾಡಬಾರದು. ಇದಕ್ಕೂ ಕೆಲವರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ. ಒಂದು ಧರ್ಮದ ಸಂಘಟನೆ ನಡೆಸುವ ಶಾಲೆಯ ಮುಖ್ಯಸ್ಥರು ನನ್ನೊಂದಿಗೆ ಹೀಗೆ ಹಂಚಿಕೊಂಡರು “ನೋಡಿ, ನಮ್ಮ ಶಾಲೆಯಲ್ಲಿ ಬೇರೆ ಧರ್ಮೀಯರಿಗೂ ಧಾರಾಳ ಅವಕಾಶವಿದೆ. ಬೇರೆ ಧರ್ಮೀಯರು ಬಂದರೆ ಅವರಿಗೆ ಶುಲ್ಕದಲ್ಲೂ ನಾವು ವಿನಾಯಿತಿಯನ್ನು ಇಟ್ಟಿದ್ದೇವೆ. ಆದರೂ ಬರುತ್ತಿಲ್ಲ. ಇದು ನಮ್ಮ ತಪ್ಪೇ?”. ಅವರ ತಪ್ಪಲ್ಲ ನಿಜ. ಆದರೆ ಬೇರೆ ಧರ್ಮೀಯರು ಬರುತ್ತಿಲ್ಲ ಎನ್ನುವುದೂ ನಿಜ. ಅದರಿಂದ ಭವಿಷ್ಯದಲ್ಲಿ ಸಮಾಜ ಸಂಪೂರ್ಣವಾಗಿ ಒಡೆದು ಹೋಗಲಿದೆ ಎನ್ನುವುದೂ ಅಷ್ಟೇ ನಿಜ. ಆದುದರಿಂದ ‘ನಮ್ಮ ತಪ್ಪೇ?’ ಎನ್ನುವ ಅಸಹಾಯಕತೆ ಇದಕ್ಕೆ ಖಂಡಿತಾ ಪರಿಹಾರವಲ್ಲ. ಶಾಲೆಯೊಳಗೆ ಒಂದು ವೈವಿಧ್ಯವನ್ನು ಕಾಪಾಡಲು ಸಂಘಟಕರು ಗರಿಷ್ಠ ಪ್ರಮಾಣದಲ್ಲಿ ಶ್ರಮಿಸಿದರೆ ‘ಮುಸ್ಲಿಮ್ ಶಾಲೆ’ ‘ಹಿಂದೂ ಶಾಲೆ’ ಎನ್ನುವ ವ್ಯತ್ಯಾಸ ನಿಧಾನಕ್ಕಾದರೂ ಅಳಿಸಿ ಹೋಗಬಹುದು. ಈ ನಿಟ್ಟಿನಲ್ಲಿ ವಿವಿಧ ಧಾರ್ಮಿಕ ಸಂಘಟನೆಗಳು ನಡೆಸುವ ಶಾಲೆಗಳಲ್ಲಿ ‘ಕಡ್ಡಾಯವಾಗಿ’ ಇತರ ಧರ್ಮೀಯರು ‘ಇಷ್ಟು ಶೇಕಡ ಇರಲೇ ಬೇಕು’ ಎಂಬ ನಿಯಮವನ್ನಾದರೂ ಸರಕಾರ ತರಬೇಕು. ಇದೇ ಸಂದರ್ಭದಲ್ಲಿ, ಇದಕ್ಕಿರುವ ಇನ್ನೊಂದು ಅತ್ಯುತ್ತಮ ಪರಿಹಾರವೆಂದರೆ, ಸರಕಾರವು ಸರಕಾರಿ ಶಾಲೆಗಳನ್ನು ಮೇಲೆತ್ತುವುದು. ಮಠ, ಮಾನ್ಯಗಳಿಗೆ ಸರಕಾರ ಕೋಟಿ ಗಟ್ಟಳೆ ಅನುದಾನ ನೀಡಿ ಅದನ್ನು ಸದೃಢಗೊಳಿಸಲು ಅತ್ಯುತ್ಸಾಹ ವ್ಯಕ್ತಪಡಿಸುವಾಗ, ಅದೇ ಉತ್ಸಾಹದಲ್ಲಿ ಸರಕಾರಿ ಶಾಲೆಗಳನ್ನು ಮೇಲೆತ್ತಲು ಯಾಕೆ ಪ್ರಯತ್ನಿಸುತ್ತಿಲ್ಲ? ರಾಜ್ಯದಲ್ಲಿರುವ ಎಲ್ಲ ಸರಕಾರಿ ಶಾಲೆಗಳನ್ನು ಗುರುತಿಸಿ, ಯಾವುದೇ ಖಾಸಗಿ ಶಾಲೆಗಳಿಗಿಂತ ಅತ್ಯಾಧುನಿಕವಾಗಿ ರೂಪಿಸುವ ಮೂಲಕ ಎಲ್ಲ ಜಾತಿ ಧರ್ಮಗಳ ವಿದ್ಯಾರ್ಥಿಗಳನ್ನು ಅದರೆಡೆಗೆ ಆಕರ್ಷಿಸುವಂತೆ ಮಾಡುವುದರಿಂದ ಸಮಾಜಕ್ಕೆ ನೂರಾರು ಬಗೆಯ ಲಾಭಗಳಿವೆ. ಇಂದು ನಮ್ಮ ಮಕ್ಕಳು ಯಾವ ಮಾಧ್ಯಮಗಳಲ್ಲಿ ಕಲಿಯಬೇಕು ಎನ್ನುವುದನ್ನಷ್ಟೇ ನಾವು ಚರ್ಚಿಸುತ್ತಿದ್ದೇವೆ. ಯಾವ ಮಾಧ್ಯಮಗಳಲ್ಲಿ ಬೇಕಾದರೂ ಕಲಿಯಲಿ, ಆದರೆ ಎಲ್ಲ ಧರ್ಮ, ಜಾತಿಯ ಮಕ್ಕಳು ಒಟ್ಟಾಗಿ ಕಲಿಯುವಂತಹ ಶಾಲೆಗಳು ಇಂದಿನ ಅಗತ್ಯ. ಒಂದನೇ ತರಗತಿಯಿಂದಲೇ ಒಟ್ಟಾಗಿ ಆಡುತ್ತಾ, ಕಲಿಯುತ್ತಾ, ಜಗಳವಾಡುತ್ತಾ, ಪ್ರೀತಿಸುತ್ತಾ, ಮಧ್ಯಾಹ್ನದ ಬಿಸಿಯೂಟವನ್ನು ಒಂದೇ ಪಂಕ್ತಿಯಲ್ಲಿ ಉಣ್ಣುತ್ತಾ ಬೆಳೆಯಲಿ. ಆಗ ಯಾವ ಧರ್ಮೀಯರೂ “ನಮ್ಮ ಧರ್ಮ ಶಾಂತಿಯ ಧರ್ಮ” “ನಾವೂ ನಿಮ್ಮಂತೆಯೇ ಮನುಷ್ಯರು” ಎಂದೆಲ್ಲ ಪರಿಚಯಿಸಿಕೊಳ್ಳುವ ಅಗತ್ಯ ಬರುವುದಿಲ್ಲ. ಇಂದು ಪರಸ್ಪರ ಅನ್ಯರಂತೆ ಬಾಳುತ್ತಿರುವವರನ್ನು ಭವಿಷ್ಯದಲ್ಲಿ ಒಂದಾಗಿಸುವುದಕ್ಕೆ ಇರುವ ದಾರಿ ಇದೊಂದೆ. ಬಹುಸಂಸ್ಕೃತಿಯ ಭಾರತವನ್ನು ಉಳಿಸಿಕೊಳ್ಳಬೇಕಾದರೂ ನಮಗೆ ಇರುವ ದಾರಿ ಇದೊಂದೆ.

Thursday, November 9, 2017

ಹೌದು, ಗೌರಿ- ಲಂಕೇಶರಂತಾಗಲಿಲ್ಲ ...

ಗೌರಿ ಲಂಕೇಶ್ ತೀರಿದ ದಿನ  ಒಂದೇ ಉಸಿರಲ್ಲಿ  ಬರೆದ ಲೇಖನ. ಒಂದಿಷ್ಟು ಹಸಿಯಾಗಿದೆ.  ಇವತ್ತು ಯಾಕೋ ಮತ್ತೆ ಕಣ್ಣಿಗೆ ಬಿತ್ತು. ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.  

ಅದು ಪಿ. ಲಂಕೇಶರು ‘ಲಂಕೇಶ್ ಪತ್ರಿಕೆ’ಯನ್ನು ನಡೆಸುತ್ತಿದ್ದ ಕಾಲ. ಲಂಕೇಶ್ ಪತ್ರಿಕೆಯ ಆತ್ಮೀಯರು ಯಾರಾದರೂ ಭೇಟಿಯಾದರೆ ನಾನು ಮೊದಲು ಕೇಳುತ್ತಿದ್ದ ಪ್ರಶ್ನೆ ‘‘ಲಂಕೇಶ್‌ರ ಆನಂತರ ಲಂಕೇಶ್ ಪತ್ರಿಕೆ ಯನ್ನು ನಡೆಸುವವರು ಯಾರು?’’ 
ಆಗಾಗ ಲಂಕೇಶ ರನ್ನು ಕಾಡುತ್ತಿದ್ದ ತೀವ್ರ ಅನಾರೋಗ್ಯ ನಮ್ಮನ್ನೆಲ್ಲ ಇಂತಹ ಪ್ರಶ್ನೆ ಕೇಳುವಂತೆ ಮಾಡುತ್ತಿತ್ತು. ನಮಗೆಲ್ಲ ಲಂಕೇಶ್ ಪತ್ರಿಕೆ ಓದೋದು ಬದುಕಿನ ಅವಿಭಾಜ್ಯವಾಗಿ ಹೋಗಿದ್ದುದರಿಂದ ಇಂತಹ ಪ್ರಶ್ನೆ ನಮ್ಮನ್ನು ಪದೇ ಪದೇ ಕಾಡುತ್ತಿತ್ತು. ಅದು ನಾನು ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದ ಕಾಲ. ಮುಂಬೈ ಯ ನ್ಯಾಯಾಲಯದಲ್ಲಿ ಲಂಕೇಶರ ವಿರುದ್ಧ ಒಂದು ವರದಿಗೆ ಸಂಬಂಧಿಸಿ ದೂರು ದಾಖಲಾಗಿತ್ತು. ಈ ಸಂಬಂಧ ದ್ವಾರಕಾನಾಥ್, ತ್ಯಾಗರಾಜ್ ಆಗಾಗ ಮುಂಬೈಗೆ ಬರು ತ್ತಿದ್ದರು. ತ್ಯಾಗರಾಜ್ ಒಂದೆರಡು ಬಾರಿ ನನ್ನ ಜೊತೆ ಉಳಿದುಕೊಂಡಿದ್ದರು. ಆಗ ಅವರ ಜೊತೆಗೂ ಇಂತಹದೇ ಪ್ರಶ್ನೆಯನ್ನು ನಾನು ಇಟ್ಟಿದ್ದೆ. ಆಗ ಅವರು ತಡವರಿಸದೇ ಖಂಡತುಂಡವಾಗಿ ಹೇಳಿದ್ದರು ‘‘ಲಂಕೇಶ್ ಬಳಿಕ ಪತ್ರಿಕೆ ಮುಚ್ಚುತ್ತೆ ಬಶೀರ್’’. ಆಳದಲ್ಲಿ ಇದು ನಮ್ಮ ಅರಿವಿನಲ್ಲೂ ಇತ್ತು. ಯಾಕೆಂದರೆ ಲಂಕೇಶರ ಹೆಸರಿನ ಮೂಲಕವೇ ನಡೆಯುತ್ತಿರುವ ಪತ್ರಿಕೆಯನ್ನು ಇನ್ನಾರೂ ಮುನ್ನಡೆಸುವುದು ಕಷ್ಟ. ಯಾರೇ ಮುನ್ನಡೆಸಿದರೂ ಅದು ಲಂಕೇಶ್ ಪತ್ರಿಕೆ ಯಾಗಿ ಉಳಿಯುವುದು ಸಾಧ್ಯವಾಗುವ ಮಾತೇ ಅಲ್ಲ. 
ಮುಂಬೈಯ ನ್ಯಾಯಾಲಯವೊಂದು ಪಿ. ಲಂಕೇಶರಿಗೆ ಬಂಧನ ವಾರಂಟ್‌ನ್ನು ಹೊರಡಿಸಿದಾಗ, ಬೆಂಗಳೂರಿನಿಂದ ನನಗೆ ಒಂದು ಕರೆ ಬಂದಿತ್ತು. ‘‘ನಾನು ಗೌರಿ ಲಂಕೇಶ್ ಮಾತನಾಡ್ತ ಇದ್ದೇನೆ. ನ್ಯಾಯಾಲಯದಲ್ಲಿ ಏನು ಬೆಳವಣಿ ಗೆಯಾಗಿದೆ?’’ ಎಂದು ಕೇಳಿದ್ದರು. ನಾನೂ ಸಂಕ್ಷಿಪ್ತವಾಗಿ ಮಾತನಾಡಿ ಮುಗಿಸಿದ್ದೆ. ಆ ಧ್ವನಿಯ ಹಿಂದಿರುವ ಮುಖ ವನ್ನು ಕಂಡದ್ದು ಅದಾದ ಹತ್ತು ವರ್ಷಗಳ ಬಳಿಕ. ಲಂಕೇಶ್ ನಿಧನರಾದಾಗ ಗೌರಿ ಮುನ್ನೆಲೆಗೆ ಬಂದರು. ಲಂಕೇಶ್ ಪತ್ರಿಕೆಯ ಸಂಪಾದಕರಾಗಿ ಗೌರಿ ಹೊಣೆ ಹೊತ್ತು ಕೊಳ್ಳುತ್ತಾರೆ ಎನ್ನುವಾಗ ಬಹಳಷ್ಟು ಅನುಮಾನಗಳಿದ್ದವು. ಮೊತ್ತ ಮೊದಲಾಗಿ, ರಾಷ್ಟ್ರಮಟ್ಟದ ಮಾಧ್ಯಮಗಳಲ್ಲಿ ಗೌರಿ ಕೆಲಸ ಮಾಡುತ್ತಿದ್ದರು. ಆ ಕೆಲಸವನ್ನು ತೊರೆದು, ಈ ಪತ್ರಿಕೆಯನ್ನು ಬೆನ್ನಿಗೆ ಕಟ್ಟಿಕೊಳ್ಳುವುದೆಂದರೆ ಅಪಾಯಗಳನ್ನು ತಾನಾಗಿಯೇ ಬೆನ್ನಿಗೆ ಕಟ್ಟಿಕೊಂಡಂತೆ. ಜೊತೆಗೆ ಗೌರಿಗೆ ಅತೀ ದೊಡ್ಡ ಸವಾಲು ಸ್ವತಃ ಲಂಕೇಶ್ ಆಗಿದ್ದರು. ಲಂಕೇಶ್ ಬರೇ ಪತ್ರಕರ್ತರಲ್ಲ. ಅವರಲ್ಲೊಬ್ಬ ಕವಿ, ಸಾಹಿತಿ, ಲೇಖಕನಿದ್ದ. ಪತ್ರಿಕಾ ಬರಹಗಳಿಗೆ ಪದ್ಯದ ಲಾಲಿತ್ಯವನ್ನು ನೀಡಿದವರು ಲಂಕೇಶ್. ತಮ್ಮ ವಿಶಿಷ್ಟ ಬರಹಗಳ ಮೂಲಕ ಅವರು ಅದಾಗಲೇ ಒಂದು ಪ್ರಭಾವಳಿಯನ್ನು ತನ್ನ ಸುತ್ತ ಸೃಷ್ಟಿಸಿಕೊಂಡಿದ್ದರು. ಲಂಕೇಶರಿಗಾಗಿಯೇ ‘ಲಂಕೇಶ್ ಪತ್ರಿಕೆ’ಯನ್ನು ಕೊಂಡುಕೊಳ್ಳುತ್ತಿದ್ದವರು ಅಧಿಕ. ಅಷ್ಟೇ ಅಲ್ಲ, ಲಂಕೇಶರ ಜೊತೆಗಿದ್ದ ಬಸವರಾಜು, ನಟರಾಜ್, ತ್ಯಾಗರಾಜ್, ದ್ವಾರಕಾನಾಥ್, ರೇಷ್ಮೆ, ಗಂಗಾಧರ ಕುಷ್ಠಗಿಯಂತಹ ಪ್ರತಿಭೆಗಳನ್ನು ನಿಭಾಯಿಸುವುದು ಗೌರಿ ಲಂಕೇಶರಿಗೆ ಅಷ್ಟು ಸುಲಭವಿರಲಿಲ್ಲ. ಕನ್ನಡ ಪತ್ರಿಕೋದ್ಯಮಕ್ಕೇ ಹೊಸಬರಾಗಿದ್ದ ಗೌರಿ ಲಂಕೇಶ್‌ರ ನಿರ್ಧಾರಗಳನ್ನು, ಲಂಕೇಶರ ನಿರ್ಧಾರಗಳಂತೆ ಸ್ವೀಕರಿಸುವುದು ಈ ಹಿರಿಯರಿಗೆ ಕಷ್ಟವೇ ಸರಿ. ಇದರ ಜೊತೆ ಜೊತೆಗೇ ಅವರ ಸೋದರ ಇಂದ್ರಜಿತ್ ಇನ್ನೊಂದು ಸವಾಲಾಗಿದ್ದರು. ಗೌರಿ ಲಂಕೇಶ್ ಒಂದು ರೀತಿ ಲಂಕೇಶ್ ಪತ್ರಿಕೆಯ ಹಲವು ಉದ್ಯೋಗಿಗಳಲ್ಲಿ ಒಬ್ಬರಾಗಿದ್ದರೇ ಹೊರತು, ಅವರೇ ಅದರ ಮಾಲಕರಾಗಿರಲಿಲ್ಲ. ಇಂದ್ರಜಿತ್ ಮತ್ತು ಗೌರಿ ಇವರಿಬ್ಬರ ನಡುವಿನ ಅಭಿರುಚಿಗಳೇ ಬೇರೆ. ಬದುಕನ್ನು ಶೋಕಿಯಾಗಿ ಸ್ವೀಕರಿಸಿರುವ ಇಂದ್ರಜಿತ್, ಅದನ್ನು ಸಂಘರ್ಷವಾಗಿ ಸ್ವೀಕರಿಸಿರುವ ಗೌರಿ ಜೊತೆಗೂಡಿ ಪತ್ರಿಕೆಯನ್ನು ಮುನ್ನಡೆಸುವುದು ಅಸಾಧ್ಯವಾಗಿತ್ತು.
ಒಂದು ರೀತಿಯಲ್ಲಿ, ಪತ್ರಿಕೆ ಮುನ್ನಡೆಯಬೇಕಾದರೆ ಎಲ್ಲವನ್ನೂ ಹೊಸದಾಗಿಯೇ ಕಟ್ಟಬೇಕಾದಂತಹ ಸವಾಲು ಗೌರಿ ಅವರ ಮುಂದಿತ್ತು. ಬರೇ ಸಹೋದ್ಯೋಗಿಗಳಿಗಷ್ಟೇ ಇದು ಸೀಮಿತವಾದ ವಿಚಾರವಲ್ಲ. ಇಡೀ ಓದುಗಬಳಗವನ್ನೂ ಹೊಸದಾಗಿಯೇ ಕಟ್ಟಬೇಕಾಗಿತ್ತು. ಯಾಕೆಂದರೆ, ಲಂಕೇಶರಿಗಾಗಿ ಲಂಕೇಶನ್ನು ಓದುತ್ತಿದ್ದ ಕರ್ನಾಟಕದ ವಿದ್ವತ್ ಮಂದಿಗಳು ಲಂಕೇಶರು ತೀರಿದ ದಿನವೇ ಲಂಕೇಶ್ ಪತ್ರಿಕೆಯ ಕೈ ಬಿಟ್ಟಿದ್ದರು. ಈ ಎಲ್ಲ ಕಾರಣದಿಂದ ಲಂಕೇಶರಿಲ್ಲದ ಮೊದಲ ಸಂಚಿಕೆಗಾಗಿ ನಾನು ಚಾತಕ ಪಕ್ಷಿಯಂತೆ ಕಾದಿದ್ದೆ ಮತ್ತು ಅನಿರೀಕ್ಷಿತ ರೀತಿಯಲ್ಲಿ, ಅವರ ಸಂಪಾದಕೀಯದ ಸರಳ ಭಾಷೆ, ಸರಳ ಕನ್ನಡ ಇಷ್ಟವಾಯಿತು. ಬಳಿಕ ಅಪ್ಪ ಎನ್ನುವ ಕಾಲಂ ಕೆಲವು ವಾರಗಳ ಕಾಲ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂತು. ಬಹಳಷ್ಟು ಆತ್ಮೀಯ ಬರಹ ಅದಾಗಿದ್ದರೂ, ಆ ಕಥಾನಕವನ್ನು ಅರ್ಧದಲ್ಲೇ ಅವರು ನಿಲ್ಲಿಸಿದರು. ಆದರೆ ಲಂಕೇಶ್ ಪತ್ರಿಕೆ ನಿರಂತರವಾಗಿ ಮುಂದುವರಿಯಿತು. ಲಂಕೇಶರ ಪ್ರಭಾವಳಿಯಿಂದ ಪತ್ರಿಕೆಯನ್ನು ಹೊರಗೆ ತರುವಲ್ಲೂ ಅವರು ಹಂತಹಂತವಾಗಿ ಯಶಸ್ವಿಯಾದರು. ಭಾರೀ ಆರ್ಥಿಕ ಅಡಚಣೆಗಳ ನಡುವೆಯೂ ಅದನ್ನು ತನ್ನ ಕೊನೆಯ ಉಸಿರಿರುವವರೆಗೆ ಮುನ್ನಡೆಸಿದರು. ಲಂಕೇಶ್ ಎನ್ನುತ್ತಿದ್ದ ನಾಡಿನ ಜನರು, ಗೌರಿ ಲಂಕೇಶ್ ಎನ್ನುವ ಹೊಸ ಹೆಸರನ್ನು ರೂಢಿ ಮಾಡಿಕೊಳ್ಳತೊಡಗಿದರು.
ಲಂಕೇಶರು ಮತ್ತು ಗೌರಿ ನಡುವೆ ವ್ಯಕ್ತಿತ್ವದಲ್ಲಿ ಭಾರೀ ಅಂತರವಿದೆ. ಲಂಕೇಶ್ ತನ್ನ ಗುಹೆಯಲ್ಲಿದ್ದುಕೊಂಡೇ ಕೆಲಸ ಮಾಡಿದವರು. ಪತ್ರಿಕೆಗಳಲ್ಲಿ ಅವರಿಂದ ಎಡವಟ್ಟುಗಳಾದರೂ, ಅವರಿಗೆ ಬಚ್ಚಿಟ್ಟುಕೊಳ್ಳುವುದಕ್ಕೆ ಸಾಹಿತ್ಯ, ನಾಟಕ, ಸಿನೆಮಾ, ಕಾವ್ಯ ಹೀಗೆ ಹಲವು ಜಾಗಗಳಿವೆ ಮತ್ತು ಇವುಗಳನ್ನು ಅವರು ಕವಚವಾಗಿಟ್ಟುಕೊಂಡೇ ಪತ್ರಿಕೆಯ ವಾರದ ಯುದ್ಧದಲ್ಲಿ ಭಾಗಿಯಾಗುತ್ತಿದ್ದರು. ಒಬ್ಬೊಬ್ಬರು ಒಂದೊಂದು ಕಾರಣಕ್ಕಾಗಿ ಪತ್ರಿಕೆಯನ್ನು ಇಷ್ಟಪಡುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ವ್ಯವಹಾರ ದಲ್ಲಿ ಅವರು ಚತುರರಾಗಿದ್ದರು. ಯಾವುದೇ ವಿಷಯಗಳಲ್ಲೂ ಒಂದು ಸಣ್ಣ ಅಂತರವನ್ನು ಅವರು ಕಾಯ್ದುಕೊಳ್ಳುತ್ತಿದ್ದರು. ಸಂಪೂರ್ಣವಾಗಿ ಯಾವುದಕ್ಕೂ ಅವರು ತನ್ನನ್ನು ತೆತ್ತುಕೊಂಡಿರಲಿಲ್ಲ. ರಾಜಕಾರಣಿಗಳ ವಿರುದ್ಧ ಹಿಗ್ಗಾಮುಗ್ಗ ಬೀಳುತ್ತಿದ್ದರೂ, ಪಾರಾಗುವ ಸಣ್ಣ ದೊಂದು ‘ಜಾಗ’ವನ್ನು ಅವರು ಉಳಿಸಿ ಕೊಳ್ಳುತ್ತಿದ್ದರು. ಈ ಕಾರಣದಿಂದಲೇ, ಅವರ ವಿಪತ್ತಿನ ಸಂದರ್ಭದಲ್ಲಿ ಅವರಿಗೆ ಹಲವು ರಾಜಕಾರಣಿಗಳು ನೆರವಾದ ಉದಾಹರಣೆಗಳೂ ಇವೆ. ಆದರೆ ಗೌರಿ ಅವರು ರಕ್ತದಲ್ಲೇ ಹೋರಾಟದ ಗುಣವನ್ನು ಬೆಳೆಸಿಕೊಂಡು ಬಂದವರು. ಲಂಕೇಶ್ ಅವರ ಹತ್ತಿರದಲ್ಲಿದ್ದವರು ಹೇಳುವಂತೆ ಅವರು ಆಳದಲ್ಲಿ ತುಸು ಪುಕ್ಕರಾಗಿದ್ದರು. ಆದರೆ ಲಂಕೇಶರಿಗೆ ಹೋಲಿಸಿದರೆ ಗೌರಿ ಅಪಾರ ಧೈರ್ಯವನ್ನು ಮೈಗೂಡಿಸಿಕೊಂಡವರು. ಲಂಕೇಶರು ಒಂದು ರಾಜಕೀಯ ಪಕ್ಷವನ್ನು ಕಟ್ಟಲು ಬೀದಿಗಿಳಿದರಾದರೂ, ಅದು ಅಸಾಧ್ಯ ಎಂದು ಕಂಡಾಗ ತಕ್ಷಣವೇ ಸಾಹಸದಿಂದ ಹಿಂಜರಿದರು. ಆದರೆ ಗೌರಿ ಬೀದಿಯಲ್ಲಿ ನಿಂತೇ ತನ್ನ ಪತ್ರಿಕೆ ಕಟ್ಟ ತೊಡಗಿದರು. ಗೌರಿಯನ್ನು ಹಳಿಯುವುದಕ್ಕೋಸ್ಕರವೇ ಹಲವರು ‘ಲಂಕೇಶ್ ತೀರಿ ಹೋದ ಮೇಲೆ ಆ ಪತ್ರಿಕೆ ಸತ್ತು ಹೋಯಿತು’ ಎಂದದ್ದಿದೆ. ನಾನಾಗ ಅದನ್ನು ಒಪ್ಪುತ್ತಲೇ ಹೇಳುತ್ತಿದ್ದೆ ‘‘ಲಂಕೇಶ್ ಬೇರೆ, ಗೌರಿ ಬೇರೆ. ಲಂಕೇಶರನ್ನು ಗೌರಿಯಲ್ಲಿ ಹುಡುಕೋದನ್ನು ಬಿಡೋಣ. ಗೌರಿಯಲ್ಲಿರುವ ಸ್ವಂತಿಕೆಯನ್ನು ಗುರುತಿಸಿ ಸಾಧ್ಯವಾದರೆ ಇಷ್ಟಪಡೋಣ. ಇದು ಲಂಕೇಶ್ ಪತ್ರಿಕೆ ಅಲ್ಲ. ಇದು ಗೌರಿ ಲಂಕೇಶ್ ಪತ್ರಿಕೆ’’. ಇದಾದ ಎಷ್ಟೋ ದಿನಗಳ ಬಳಿಕ, ಇಂದ್ರಜಿತ್ ಜೊತೆ ಭಿನ್ನಾಭಿಪ್ರಾಯ ಹೊಂದಿ, ಗೌರಿಯವರು ತಮ್ಮದೇ ಹೆಸರಲ್ಲಿ ಪತ್ರಿಕೆ ನಡೆಸಿದರು ಮತ್ತು ತನ್ನದೇ ವ್ಯಕ್ತಿತ್ವದ ಮೂಲಕ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾದರು. 
ಲಂಕೇಶರ ಕಾಲಕ್ಕೂ ಗೌರಿಯ ಕಾಲಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಲಂಕೇಶರ ಕಾಲದಲ್ಲಿ ‘ಟ್ಯಾಬ್ಲಾಯಿಡ್’ ಓದುಗರ ಸಂಖ್ಯೆ ದೊಡ್ಡ ಮಟ್ಟದಲ್ಲಿತ್ತು ಮತ್ತು ಅದನ್ನು ಗಂಭೀರವಾಗಿಯೂ ಸ್ವೀಕರಿಸುತ್ತಿದ್ದರು. ಆದರೆ ಗೌರಿಯ ಕಾಲದಲ್ಲಿ ‘ಟ್ಯಾಬ್ಲಾಯಿಡ್’ ಪತ್ರಿಕೆಗಳನ್ನು ಓದುವ ಓದುಗರ ಸಂಖ್ಯೆಯೇ ಇಳಿಮುಖವಾಗಿತ್ತು. ಲಂಕೇಶರ ಕಾಲದಲ್ಲಿ ಸಂಘಪರಿವಾರ ಗಳು ಈ ಮಟ್ಟಿಗೆ ನಾಡಲ್ಲಿ ಮುಕ್ತವಾಗಿ ಬೇರಿಳಿಸಿಕೊಂಡಿರಲಿಲ್ಲ. ಗೌರಿಯ ಕಾಲ ದಲ್ಲಿ, ಸಂಘಪರಿವಾರದ ಜನರು ಕೂಗು ಮಾರಿಗಳಾಗಿ ರಾಜ್ಯಾದ್ಯಂತ ಹರಡಿ ಕೊಳ್ಳತೊಡಗಿದ್ದರು. ಇಂತಹ ಸಂದರ್ಭ ದಲ್ಲಿ ಪತ್ರಿಕೆಯನ್ನು ತನ್ನ ಹೋರಾಟದ ಅಸ್ತ್ರವಾಗಿಸಿಕೊಂಡ ವರು ಗೌರಿ ಲಂಕೇಶ್. ಅನೇಕ ಬಾರಿ, ಹಿಂದಿನ ಲಂಕೇಶ್‌ನ ಲೇಖಕರು ‘‘ಲಂಕೇಶರಿದ್ದಿದ್ದರೆ ಈ ರೀತಿ ಬರೆಯು ತ್ತಿರಲಿಲ್ಲ’’ ‘‘ಲಂಕೇಶರು ಈ ಕುರಿತಂತೆ ಬೇರೆಯೇ ನಿಲುವು ತಳೆಯುತ್ತಿದ್ದರು’’ ಎನ್ನುತ್ತಾ ಗೌರಿಯ ಬರಹಗಳಿಗೆ, ಹೋರಾಟಗಳಿಗೆ ಅಡ್ಡಗಾಲು ಹಾಕಿರುವುದನ್ನೂ ನಾನು ಗಮನಿಸಿದ್ದೇನೆ. ಲಂಕೇಶರ ವ್ಯಕ್ತಿತ್ವವನ್ನೇ ಗೌರಿಯ ವಿರುದ್ಧ ಎತ್ತಿಕಟ್ಟುವ ಹುನ್ನಾರಗಳೂ ನಡೆದಿದ್ದವು. ಆದರೆ ಈ ಎಲ್ಲ ಹುನ್ನಾರಗಳನ್ನೂ ಮೀರಿ, ಕರ್ನಾಟಕದ ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ಗೌರಿಯ ವರು ತೊಡಗಿಸಿಕೊಂಡರು. ಬಾಬಾಬುಡಾನ್‌ಗಿರಿಯ ಹೋರಾಟದಲ್ಲಿ ಗೌರಿ ಲಂಕೇಶ್‌ನ ಪಾತ್ರ ದೊಡ್ಡ ಮಟ್ಟದ್ದು. ಬಾಬಾಬುಡಾನ್‌ಗಿರಿ ಚಳವಳಿಗಾರರನ್ನು ಪೊಲೀಸರು ಅಲ್ಲಲ್ಲಿ ಬಂಧಿಸತೊಡಗಿದಾಗ ಲಾರಿಯಲ್ಲಿ ಹತ್ತಿ ಬಾಬಾಬುಡಾನ್‌ಗಿರಿಗೆ ಹೋಗಿ, ಅಲ್ಲಿಯ ಸಭೆಯಲ್ಲಿ ಭಾಗವಹಿಸಿದವರು ಮತ್ತು ಜೈಲು ಸೇರಿ, ಅಲ್ಲಿಂದಲೇ ಪತ್ರಿಕೆಯ ಸಂಪಾದಕೀಯ ಬರೆದವರು. ಕಳೆದ ಒಂದು ದಶಕದ ಈಚೆಗಿನ ಬಹುತೇಕ ಚಳವಳಿ ಹೋರಾಟಗಳಲ್ಲಿ ಗೌರಿ ಲಂಕೇಶ್ ಸಕ್ರಿಯರಾಗಿದ್ದರು. ಮುಖ್ಯವಾಗಿ, ನಕ್ಸಲೀಯರನ್ನು ಮುಖ್ಯವಾಹಿನಿಗೆ ತರುವ ಮಹತ್ತರ ಕೆಲಸವನ್ನು ಅವರು ಮಾಡಿದರು. ಎನ್‌ಕೌಂಟರ್‌ಗಳ ರಾಜ್ಯದಲ್ಲಿ ಸಾಲುಸಾಲಾಗಿ ನಕ್ಸಲರ (ಪಶ್ಚಿಮಘಟ್ಟದ ಆದಿವಾಸಿ ಹುಡುಗರು ಇವರು) ಹೆಣಗಳು ಬೀಳುತ್ತಿರುವಾಗ, ಹಿಂಸೆಯ ವಿರುದ್ಧ ಮಾತನಾಡುತ್ತಲೇ, ಹೋರಾಟದ ಹೊಸ ದಾರಿಯನ್ನು ಅವರಿಗೆ ತೆರೆದುಕೊಡಲು ಶ್ರಮಿಸಿದವರು ಗೌರಿ. ಹೀಗೆ ಇವರು ಮತ್ತು ಸಹವರ್ತಿ ಗಳ ಅಪಾರ ಶ್ರಮದಿಂದ ಕಾಡಿನಿಂದ ನಾಡಿಗೆ ಬಂದ ತರುಣರು ಇಂದು ಪ್ರಜಾಸತ್ತಾತ್ಮಕವಾಗಿ ಸಾಮಾಜಿಕ ಹೋರಾಟಗಳನ್ನು ನಡೆಸುತ್ತಾ, ನಾಡಿಗೆ ಹೊಸ ಸ್ಫೂರ್ತಿ ಯನ್ನು ಬಿತ್ತಿದ್ದಾರೆ. ಹೊಸ ಸಾಮಾಜಿಕ ಹೋರಾಟಗಳ ನಿರೀಕ್ಷೆಗಳನ್ನು ಹುಟ್ಟಿಸಿದ್ದಾರೆ. ವೌಢ್ಯಗಳ ವಿರುದ್ಧ ಕಾನೂನು ಜಾರಿಗಾಗಿ ಹೋರಾಟ, ಜನನುಡಿ, ಉಡುಪಿ ಚಲೋ, ಕಲಬುರ್ಗಿ ಪರ ಹೋರಾಟ, ಆದಿವಾಸಿಗಳ ಭೂ ಹೋರಾಟ, ಕೋಮುವಾದಿಗಳ ವಿರುದ್ಧ ಹೋರಾಟ... ಹೀಗೆ ನಾಡಿನ ಎಲ್ಲ ಪ್ರಗತಿಪರ ಹೋರಾಟಗಳಲ್ಲಿ ಪಕ್ಷಭೇದ ನೋಡದೆ ಕೈಜೋಡಿಸುತ್ತಾ ಬಂದವರು ಗೌರಿ. ಒಬ್ಬ ಹೆಣ್ಣು ಮಗಳು ಒಂದು ಪ್ರಖರ ವಿಚಾರಗಳ ಪತ್ರಿಕೆಯೊಂದರ ಸಂಪಾದಕಿಯಾಗಿ ಕೋರ್ಟು, ಕಚೇರಿಗಳನ್ನು ಎದುರಿಸುತ್ತಾ, ಸಾಮಾಜಿಕ ಹೋರಾಟಗಳಲ್ಲಿ ದಿಟ್ಟವಾಗಿ ಭಾಗವ ಹಿಸಿದ ರೀತಿ ವಿಸ್ಮಯ ಹುಟ್ಟಿಸುವಂತಹದು. ಎರಡು ತಿಂಗಳ ಹಿಂದೆ ವಾರ್ತಾಭಾರತಿ ಪತ್ರಿಕೆ ಕಚೇರಿಗೆ ಗೌರಿಯವರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ತನ್ನ ಪತ್ರಿಕೆ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ಹಂಚಿಕೊಂಡಿದ್ದರು. ಲಂಕೇಶರು, ಹೆಣ್ಣು ಮಕ್ಕಳಿಗಾಗಿ ವಿಶೇಷವಾದ ಆಸ್ತಿಯನ್ನೂ ಬಿಟ್ಟು ಹೋಗಿರಲಿಲ್ಲ. ಅಷ್ಟೇ ಏಕೆ, ಗೌರಿಗೆ ನಡುಬೀದಿಯಲ್ಲಿ ನಿಂತು ಬಡಿದಾಡುವುದಷ್ಟೇ ಗೊತ್ತಿತ್ತು. ಇವುಗಳ ನಡುವೆ ವ್ಯವಸ್ಥೆಯೊಂದಿಗೆ ಸೂಕ್ಷ್ಮವಾಗಿ ವ್ಯವಹರಿಸುವ ಕೆಲವು ‘ಜಾಣ’ ಸಂಗತಿಗಳ ಅರಿವು ಅವರಿಗಿರಲಿಲ್ಲ. ಇದ್ದಿದ್ದರೆ ಗೌರಿ ಲಂಕೇಶ್ ಪತ್ರಿಕೆಯನ್ನು ಇಟ್ಟುಕೊಂಡೇ ಸಾಕಷ್ಟು ಹಣ, ಹೆಸರು ಮಾಡಬಹುದಿತ್ತೇನೋ. ಪತ್ರಿಕೆಯೂ ಉಳಿಯುತ್ತಿತ್ತು, ಅವರ ಪ್ರಾಣವೂ ಉಳಿಯುತ್ತಿತ್ತು,  ಜೊತೆಗೆ ಈ ನಾಡಿನ ಬಹುಸಂಖ್ಯೆಯ ‘ಸಜ್ಜನ’ ‘ಸೃಜನಶೀಲ’ ‘ಸಂವೇದನಾಶೀಲ’ ಕವಿಗಳು, ಕಥೆಗಾರರು, ಸಾಹಿತಿಗಳ ಮೆಚ್ಚುಗೆ, ಮಾನ್ಯತೆಯೂ ಸಿಗುತ್ತಿತ್ತು.
ಗೌರಿ ಇನ್ನೊಂದು ಲಂಕೇಶ್ ಆಗದೇ ಪತ್ರಿಕೆಯನ್ನೂ, ತನ್ನನ್ನೂ ಸಮಾಜಕ್ಕೆ ಸಂಪೂರ್ಣ ಅರ್ಪಿಸಿದ ಕಾರಣಕ್ಕೆ ಇಂದು ದೇಶದ ಲಕ್ಷಾಂತರ ಮನಸ್ಸುಗಳು ಆ ತಾಯಿ ಮನಸ್ಸಿಗಾಗಿ ಕಣ್ಣೀರಿಡುತ್ತಿವೆ. ಗೌರಿಯವರು ಲಂಕೇಶ್ ಆಗದೇ ಇದ್ದುದು ಅವರ ಹೆಗ್ಗಳಿಕೆಯೇ ಹೊರತು ದೌರ್ಬಲ್ಯವಲ್ಲ. ಗೌರಿಯವರ ಬಲಿದಾನ ಖಂಡಿತ ವಾಗಿಯೂ ವ್ಯರ್ಥವಾಗುವುದಿಲ್ಲ. ಅದು ನಾಡಿನಲ್ಲಿ ಇನ್ನಷ್ಟು ಗೌರಿಯರನ್ನು ಹುಟ್ಟಿಸುತ್ತದೆ. ಹೊಸ ಕನ್ನಡ ನಾಡೊಂದನ್ನು ಕಟ್ಟಲು ತರುಣರ ತಂಡ ಗೌರಿಯವರ ನೆನಪಿನ ಬೆಳಕಿನಲ್ಲಿ ಮುನ್ನಡೆಯುತ್ತದೆ.
 ...............................................

ಮೂರು ವರ್ಷಗಳ ಹಿಂದೆ, ಗೌರಿ ಲಂಕೇಶ್ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ನಾನೊಂದು ಶುಭಾಶಯ ಪದ್ಯವನ್ನು ಬರೆದಿದ್ದೆ. ಅದನ್ನು ಇದೀಗ ಶ್ರದ್ಧಾಂಜಲಿ ರೂಪದಲ್ಲಿ ಮತ್ತೆ ನೆನಪಿಸಿಕೊಂಡಿದ್ದೇನೆ. 
ದಾರಿ ಹೋಕರು ಎಸೆದ ನೂರು
ಕಲ್ಲುಗಳ ತಾಳಿಕೊಂಡು 
ಹುಳಿ ಮಾವಿನ ಮರದಲ್ಲಿ ತೂಗುತ್ತಿರುವ ಹಣ್ಣು 
ಲಂಕೇಶರ ಕನಸುಗಳ 
ಕಣ್ಣ ರೆಪ್ಪೆಯೊಳಗೆ ಜೋಪಾನ ಮಾಡಿ 
ಕಾವು ಕೊಡುತ್ತಾ 
ಎರಗುವ ಹದ್ದುಗಳ ಜೊತೆಗೆ 
ಬೀದಿಗಿಳಿದು ಬಡಿದಾಡುತ್ತಾ 
ಕೋರ್ಟು ಕಚೇರಿ ಎಂದು ಅಲೆದಾಡುತ್ತ 
ಟೀಕೆ-ಟಿಪ್ಪಣಿಗಳ ಬಾಣಕ್ಕೆ ಎದೆಗೊಟ್ಟ 
ಮುಸ್ಸಂಜೆ ಕಥಾ ಪ್ರಸಂಗದ ರಂಗವ್ವ 
ಕೆಲವರ ಪಾಲಿಗೆ ಅಕ್ಕ 
ಹಲವರ ಪಾಲಿಗೆ ಅವ್ವ 
ಸಾವಂತ್ರಿ, ರಂಗವ್ವ, ಸುಭದ್ರೆ, ದೇವೀರಿ 
ನೀಲು, ನಿಮ್ಮಿ... ಎಲ್ಲರೊಳಗೂ 
ಚೂರು ಚೂರಾಗಿ ನೀವು...
ನಿಮ್ಮಿಳಗೆ ಲಂಕೇಶರು 
ಹೊಸದಾಗಿ ಹುಟ್ಟಿದರು 
ಪತ್ರಿಕೆ ನಿಮ್ಮನ್ನು ಸಿಗರೇಟಿನಂತೆ 
ಸೇದುತ್ತಿದೆ... 
ಪ್ರತಿವಾರ ಸುಡು ಕೆಂಡ
ವಿಷ ಹೀರಿದ ನಂಜುಂಡ 
ಮಾತಿಲ್ಲದವರ ಪಾಲಿಗೆ 
ಪತ್ರಿಕೆಯೇ ನಾಲಗೆ 
ನಿರೀಕ್ಷೆ, ಸಮತೆಯ ನಾಳೆಗೆ
ಇಂದು ನಿಮಗೆ ಹುಟ್ಟಿದ ದಿನ 
ನಾಡು, ನುಡಿಯನ್ನು ನೀವು ಮುಟ್ಟಿದ ದಿನ