Saturday, June 30, 2012

ದಿ ಅಮೇಝಿಂಗ್ ಸ್ಪೈಡರ್‌ಮ್ಯಾನ್: ಕಾಣೆಯಾಗಿರುವ ಭಾವ ಸಮೃದ್ಧತೆ

ಹೀಗೊಂದು ಟೈಂಪಾಸ್ ವಿಮರ್ಶೆ

ಸ್ಪೈಡರ್ ಮ್ಯಾನನ್ನು ಮತ್ತೊಮ್ಮೆ ಹೊಸದಾಗಿ ಕಟ್ಟಿಕೊಡುವ ಅಥವಾ ಮರು ನಿರೂಪಿಸುವ ಪ್ರಯತ್ನವನ್ನು ನಿರ್ದೇಶಕ ಮಾರ್ಕ್‌ವೆಬ್ ಮಾಡಿದ್ದಾರೆ. ಇದನ್ನು ನಾವು ಸ್ಪೈಡರ್ ಭಾಗ-4 ಎನ್ನುವಂತಿಲ್ಲ. ಸಾಧ್ಯವಾದರೆ ನಿರ್ದೇಶಕ ಮಾರ್ಕ್‌ವೆಬ್‌ನ ಸ್ಪೈಡರ್‌ಮ್ಯಾನ್ ಎಂದು ಕರೆಯಬಹುದು. ಯಾಕೆಂದರೆ ಇಲ್ಲಿ ಕತೆ ಆರಂಭದಿಂದಲೇ ಅಂದರೆ ಹೊಸ ಸ್ಪೈಡರ್‌ಮ್ಯಾನ್‌ನ ಹುಟ್ಟಿನೊಂದಿಗೇ ಶುರುವಾಗುತ್ತದೆ. ಹಾಗೆಯೇ ಇಲ್ಲಿ ಹೊಸ ಸ್ಪೈಡರ್‌ಮ್ಯಾನ್ ಆಂಡ್ರೂಗಾರ್‌ಫೀಲ್ಡ್ ಅವರು ಟಾಬಿ ಮಕ್ವೆರ್‌ನ ಮುಗ್ಧ ಮುಖ ಹಾಗೂ ಭಾವತೀವ್ರತೆಯನ್ನು ಕಳೆದುಕೊಂಡಿದ್ದಾನೆ. ಒಂದಿಷ್ಟು ತುಂಟನಾಗಿಯೂ, ಯುವಕನಾಗಿಯೂ ಬೆಳೆದಂತೆ ಕಾಣುತ್ತಾನೆ. ಮೊತ್ತ ಮೊದಲ ಸ್ಯಾಮ್ ರೇಮಿ ನಿರ್ದೇಶನದ ಸ್ಪೈಡರ್‌ಮ್ಯಾನ್‌ಗೂ ಇದಕ್ಕೂ ಹಲವು ಹೋಲಿಕೆಗಳಿದ್ದರೂ, ಭಿನ್ನ ನಾಯಕ-ನಾಯಕಿಯರು ಹಾಗೂ ತ್ರೀಡಿ ಸಾಹಸಗಳಿಂದ ಹೊಸ ಚಿತ್ರ ‘ಅಮೇಝಿಂಗ್’ ಆಗಿ ಕಾಣಿಸಿಕೊಳ್ಳುತ್ತದೆ. ಹೋಲಿಕೆ-ವ್ಯತ್ಯಾಸಗಳಾಚೆಗೆ ಹೊಸ ಸ್ಪೈಡರ್‌ಮ್ಯಾನ್‌ನ್ನು ಯಾವ ನಿರಾಸೆಯೂ ಇಲ್ಲದೆ ಸ್ವೀಕರಿಸಬಹುದಾಗಿದೆ.

  ಹಿಂದಿನ ಚಿತ್ರವು ತರುಣ ಪೀಟರ್ ಪಾರ್ಕರ್‌ನಿಂದ ಕತೆ ಆರಂಭವಾದರೆ, ಇದು ಅವನ ಬಾಲ್ಯದೊಂದಿಗೆ ನಂಟನ್ನು ಹೊಂದಿದೆ. ಆತನ ವಿಜ್ಞಾನಿ ತಂದೆ ತಾಯಿಗಳು ಯಾವುದೋ ಅಪಾಯ ಎದುರಾದಾಗ, ತಮ್ಮ ಮಗನನ್ನು ಅಜ್ಜನ ಬಳಿ ಒಪ್ಪಿಸಿ ಹೋಗುತ್ತಾರೆ. ಇದಾದ ಬಳಿಕ ಒಂದು ಅಪಘಾತದಲ್ಲಿ ತಂದೆ ತಾಯಿಗಳು ಸಾಯುತ್ತಾರೆ. ತನ್ನ ಬಾಲ್ಯ ಮತ್ತು ಸಾವಿನ ನಿಗೂಢತೆಯನ್ನು ಹುಡುಕುವ ಸಂದರ್ಭದಲ್ಲಿ ಆತನಿಗೆ ಡಾ. ಕರ್ಟ್(ರಿಸ್‌ಇಫಾನ್ಸ್) ಎದುರಾಗುತ್ತಾರೆ. ಆತನ ಸಂಶೋಧಾಲಯಕ್ಕೆ ಅಕ್ರಮವಾಗಿ ನುಗ್ಗಿದಾಗ ಪೀಟರ್ ಪಾರ್ಕರ್‌ಗೆ ಜೇಡವೊಂದು ಕಚ್ಚುತ್ತದೆ. ಅದು ಆತನಿಗೆ ಅಸಾಮಾನ್ಯ ಶಕ್ತಿಯನ್ನು ನೀಡುತ್ತದೆ. ಇಲ್ಲಿಂದ ಡಾ. ಕರ್ಟ್ ಮತ್ತು ಪೀಟರ್ ಪಾರ್ಕರ್ ನಡುವಿನ ಮುಖಾಮುಖಿ ಆರಂಭವಾಗುತ್ತದೆ.

 ವಿಚಿತ್ರ ದೈತ್ಯ ಪ್ರಾಣಿಯ ಸೃಷ್ಟಿಗೆ ಕಾರಣವಾಗುವ ಕರ್ಟ್, ಆ ಮೂಲಕ ಅನಾಹುತಗಳನ್ನು ಮಾಡುತ್ತಿದ್ದಾಗ ಅದನ್ನು ತಡೆಯುವ ಹೊಣೆಗಾರಿಕೆ ಸ್ಪೈಡರ್ ಮ್ಯಾನ್ ಹೆಗಲಿಗೆ ಬೀಳುತ್ತದೆ. ಇಲ್ಲಿ ಸ್ಪೈಡರ್ ಮ್ಯಾನ್‌ಗೆ ಆತನ ಸಂಗಾತಿ ಗ್ವೆನ್ ಸ್ಟಾಸಿ(ಎಮ್ಮಾ ಸ್ಟೋನ್) ನೆರವಾಗುತ್ತಾರೆ. ಆಕೆಯ ತಂದೆಯೂ ಈ ಹೋರಾಟದಲ್ಲಿ ಭಾಗಿಯಾಗುತ್ತಾರೆ. ಸಾಹಸದ ಮಟ್ಟಿಗೆ ಹೇಳುವುದಾದರೆ ಹಿಂದಿನ ಸ್ಪೈಡರ್‌ಮ್ಯಾನ್‌ಗಿಂತಲೂ ಒಂದು ಕೈ ಮಿಗಿಲಾಗಿದ್ದಾರೆ ಗಾರ್‌ಫೀಲ್ಡ್. ಇರ್ಫಾನ್ ಖಾನ್‌ಗೆ ಸಿಕ್ಕಿರುವುದು ಸಣ್ಣ ಪಾತ್ರವಾದರೂ ಅದನ್ನು ಚೊಕ್ಕವಾಗಿ ನಿರ್ವಹಿಸಿದ್ದಾರೆ. ಪಾತ್ರಕ್ಕೇ ವಿಶೇಷ ವ್ಯಾಪ್ತಿ ಇಲ್ಲದೇ ಇರುವಾಗ, ಇರ್ಫಾನ್ ಅವರಿಂದ ಹೆಚ್ಚು ನಿರೀಕ್ಷಿಸುವುದು ಸರಿಯಲ್ಲ.

ನಿರ್ದೇಶಕ ಮಾರ್ಕ್‌ವೆಬ್ ಮತ್ತು ಸ್ಯಾಮ್ ಸ್ಪೈಡರ್‌ಮ್ಯಾನ್‌ಗಳ ನಡುವೆ ಒಂದು ಮುಖ್ಯ ವ್ಯತ್ಯಾಸವನ್ನು ಗುರುತಿಸಲೇಬೇಕು. ಮೊತ್ತ ಮೊದಲ ಸ್ಯಾಮ್ ಸ್ಪೈಡರ್ ಮ್ಯಾನ್‌ನಲ್ಲಿ ಒಂದು ರೀತಿಯ ಮುಗ್ಧತೆಯಿತ್ತು. ಆ ಮುಗ್ಧತೆ ಈ ಸ್ಪೈಡರ್ ಮ್ಯಾನ್‌ನಲ್ಲಿ ಕಾಣುವುದಿಲ್ಲ. ಬದಲಿಗೆ ಒಂದು ರೀತಿಯ ತುಂಟತನ ಮತ್ತು ಒರಟುತನ ಆ ಸ್ಥಾನವನ್ನು ತುಂಬಿದೆ. ಈ ಅಮೇಝಿಂಗ್ ಸ್ಪೈಡರ್‌ಮ್ಯಾನ್‌ನಲ್ಲಿ ಆತನ ಸಂಗಾತಿಗೆ ವಿಶೇಷ ವ್ಯಕ್ತಿತ್ವವಿಲ್ಲ. ಆದರೆ ಆರಂಭದ ಸ್ಯಾಮ್‌ನ ಸ್ಪೈಡರ್‌ಮ್ಯಾನ್‌ನಲ್ಲಿ ನಾಯಕಿ ಮೇರಿ ಜೇನ್‌ಗೆ ಒಂದು ಸ್ವತಂತ್ರ ವ್ಯಕ್ತಿತ್ವವಿತ್ತು. ಅವಳೊಳಗಿನ ಪ್ರೇಮ, ತಾರುಣ್ಯ, ತಳಮಳವನ್ನು ನಿರ್ದೇಶಕರು ಸುಂದರವಾಗಿ, ಹೃದ್ಯವಾಗಿ ಕಟ್ಟಿಕೊಟ್ಟಿದ್ದರು. ಇಬ್ಬರು ಗೆಳೆಯರಲ್ಲಿ ಯಾರನ್ನು ಆರಿಸಬೇಕು ಎಂಬ ಗೊಂದಲ, ಪೀಟರ್ ಪಾರ್ಕರನೇ ಸ್ಪೈಡರ್ ಮ್ಯಾನ್ ಎಂದು ತಿಳಿಯದೆಯೇ ಸ್ಪೈಟರ್‌ನ ತುಟಿಯನ್ನಷ್ಟೇ ಮುಖವಾಡದಿಂದ ಕಳಚಿ ಅದಕ್ಕೆ ಚುಂಬಿಸುವುದು...ಪಾರ್ಕರ್‌ನನ್ನು ಎದುರಾಗುವಾಗ ಆಕೆಯಲ್ಲಿ ಉಂಟಾಗುವ ತಳಮಳ, ಮೇರಿಜೇನ್‌ಳನ್ನು ಪ್ರೀತಿಸಿಯೂ ಅದನ್ನು ಹೇಳಲಾಗದ ಪೀಟರ್‌ಪಾರ್ಕರ್‌ನ ಒದ್ದಾಟ....ಇವೆಲ್ಲ ಆರಂಭದ ಸ್ಪೈಡರ್‌ಮ್ಯಾನ್‌ನ ಹೆಗ್ಗಳಿಕೆಯಾಗಿತ್ತು. ಒಂದು ರೀತಿಯಲ್ಲಿ ಸ್ಯಾಮ್ ರೇಮಿ ಅವರ ಸ್ಪೈಡರ್ ಮ್ಯಾನ್ ಕೇವಲ ಸಾಹಸಚಿತ್ರವಾಗಿ ಮಾತ್ರವಲ್ಲ, ಭಾವನಾತ್ಮಕವಾಗಿಯೂ ಅದು ಪ್ರೇಕ್ಷಕರನ್ನು ಸೆಳೆದಿತ್ತು. ಇಲ್ಲಿ ಅಂತಹ ದಟ್ಟವಾದ ಭಾವನಾತ್ಮಕ ಅಂಶಗಳನ್ನು ಕಾಣಲಾಗುವುದಿಲ್ಲ. ಒಂದು ರೀತಿಯಲ್ಲಿ ಸ್ಪೈಡರ್ ಮ್ಯಾನ್‌ನ ಒಳಗಿನ ತಳಮಳಕ್ಕೆ ಹೆಚ್ಚು ಪ್ರಾಧಾನ್ಯತೆಯನ್ನು ನಿರ್ದೇಶಕರು ಕೊಟ್ಟಿಲ್ಲ. ತ್ರೀಡಿ ಮಾರ್ಕ್ ವೆಬ್ ಸ್ಪೈಡರ್ ಮ್ಯಾನ್‌ನ ಇನ್ನೊಂದು ಹೆಗ್ಗಳಿಕೆ. ಆದರೆ ಸ್ಯಾಮ್ ರೆಮಿ ಅವರ ಸ್ಪೈಡರ್ ಮ್ಯಾನ್ ಮನುಷ್ಯನ ತಾಕಲಾಟಗಳನ್ನು ತೆರೆದಿಡುವ ಮೂಲಕ ತ್ರಿಡಿಯಿಲ್ಲದೆಯೇ ಪ್ರೇಕ್ಷಕರನ್ನು ಅಲುಗಾಡಿಸುತ್ತಾನೆ. ಮಗುವಿನ ಮುಖದ ಮುಗ್ಧ ಟೋಬಿ ಮ್ಯಾಕ್ವರ್ ತನ್ನ ಮುಗ್ಧ ಪ್ರೀತಿಗಾಗಿ ಹಂಬಲಿಸುವ ರೀತಿ ಮನಸ್ಸನ್ನು ಕಲಕುತ್ತದೆ. ಪ್ರೀತಿ, ತ್ಯಾಗ, ಹೊಣೆಗಾರಿಕೆ ಇವೆಲ್ಲವುಗಳಿಂದ ಹಿಂದಿನ ಸ್ಪೈಡರ್ ಮ್ಯಾನ್ ಸಮೃದ್ಧವಾಗಿದೆ. ಈ ಸ್ಪೈಡರ್ ಮ್ಯಾನ್‌ನಲ್ಲಿ ಆ ಸಮೃದ್ಧತೆ ಕಾಣುತ್ತಿಲ್ಲ. ಉಳಿದಂತೆ ಹೊಸ ಸ್ಪೈಡರ್‌ಮ್ಯಾನ್ ಕೊಟ್ಟ ದುಡ್ಡಿಗೆ ರಂಜಿಸುತ್ತಾನೆ. ಇದರಲ್ಲಿ ಸಂಶಯವಿಲ್ಲ.

Monday, June 25, 2012

ಈ ದೈವ ಸಾಮ್ರಾಜ್ಯವನ್ನು ನೀವು ಕಂಡಿದ್ದೀರಾ?

ಪತ್ರಕರ್ತ, ಕವಿ ದಿ.ಬಿ. ಎಂ. ರಶೀದ್  ಲಂಕೇಶ್ ಪತ್ರಿಕೆಗೆ ಬರೆದ ಕೊನೆಯ ವರದಿ ಇದು. ಅಪಾರ ಪ್ರತಿಕ್ರಿಯೆ ವ್ಯಕ್ತವಾಗಿದ್ದ ಈ ಲೇಖನ  ಬಹುಷಃ 2002 ನವೆಂಬರ್ ತಿಂಗಳ ಲಂಕೇಶ್ ವಿಶೇಷಾಂಕದಲ್ಲಿ  ಪ್ರಕಟವಾಗಿದೆ. "ಪರುಶಮಣಿ'' ಸಂಕಲನದಿಂದ ಇದನ್ನು ಆಯ್ಕೆ ಮಾಡಲಾಗಿದೆ.

ನೀನು ಬರೆದ
ಸುಂದರ ಪುಸ್ತಕ ಈ ಜಗತ್ತು!
ನಿಜ, ಒಪ್ಪಿದೆ.
ಆದರೆ ದೇವರೇ
ರೋಗ, ರುಜಿನ, ದಾರಿದ್ರ, ಕಣ್ಣೀರು ಇವುಗಳು
ನಿನ್ನ ಪರೀಕ್ಷೆಗಳೇ?
ಅಥವಾ ಅಚ್ಚಿನ ತಪ್ಪುಗಳೇ?
                 - ಅಮೃತಾ ಪ್ರೀತಂ
 
 ಸಿಯೋನಾ!
ಹಿಬ್ರೂ ಭಾಷೆಯಲ್ಲಿ ಹಾಗೆಂದರೆ ದೇವರು ವಿಹರಿಸುತ್ತಿರುವ ಸ್ಥಳವೆಂದು ಅರ್ಥ. ಬೇಕಿದ್ದರೆ ದೇವರ ಸಾಮ್ರಾಜ್ಯವೆಂದೂ ಹೇಳಬಹುದು. ಇಂತಹದೊಂದು ದೇವಲೋಕ ಈ ಭೂಮಿಯ ಮೇಲೇ ಇದೆ. ಹೆಸರು ಸಿಯೋನ ಆಶ್ರಮ! ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲು ಎಂಬಲ್ಲಿ ಈ ದೈವ ಸಾಮ್ರಾಜ್ಯ ಜೀವ ತಲೆದಿದೆ.

  ದೇವರ ಸಾಮ್ರಾಜ್ಯವೆಂದಾಗ ಇದೊಂದು ಭೋಗ ವಿಲಾಸಗಳ ತಾಣವೆಂದು ನರ ಮನುಷ್ಯರು ಆಸೆ ಪಡಬೇಕಾಗಿಲ್ಲ. ದೇವರ ಕಾರುಣ್ಯವೆಂಬುವುದು ನಾಲ್ಕು ದಿಕ್ಕುಗಳಿಂದ ಒಸರುತ್ತ್ತಿದ್ದರೂ, ಮನುಷ್ಯ ವಿಷಯಾಸಕ್ತಿಯನ್ನು ತಣಿಸುವ ತಾಣ ಮಾತ್ರ ಇದಲ್ಲ. ದೇವರ ಸೃಷ್ಟಿಯಲ್ಲಿ ಆತನದೇ ಅಚ್ಚಿನ ತಪ್ಪುಗಳಂತಿರುವ ಮನುಷ್ಯ ಜೀವಗಳ ದುರಂತಗಳಿಗೆ ಸಾಂತ್ವನ ಲಭಿಸುವಂತ ಅಭಯಾಶ್ರಮವಿದು. ಜಗತ್ತಿನ ದೈವ ಭಕ್ತರು ಪೂಜೆ,ಗದ್ದಲಗಳ ಮೂಲಕ ದೇವರನ್ನು ತಲುಪುತ್ತೇನೆಂದು ಹೊರಟಿರುವಾಗ ಯು.ಸಿ. ಪೌಲಸ್ ಎಂಬ ಅನಕ್ಷರಸ್ಥ ಕ್ರೈಸ್ತ, ಪರಿತ್ಯಕ್ತರ ಸೇವೆಯ ಮೂಲಕ ದೇವರನ್ನು ತಲುಪುತ್ತೇನೆಂದು ಹಂಬಲಿಸಿದಾಗ ಜನ್ಮ ತಾಳಿದ್ದೇ ಸಿಯೋನ ಆಶ್ರಮ.

 ಮನುಷ್ಯ ಸಾಯುವ ಮುನ್ನ ಒಮ್ಮೆ ಕಂಡು ಬಿಡಬೇಕಾಗಿರುವುದು ಪುಣ್ಯ ಕ್ಷೇತ್ರಗಳನ್ನಲ್ಲ; ಸಿಯೋನದಂತಹ ಒಂದು ಆಶ್ರಮವನ್ನು ! ಬೆಳ್ತಂಗಡಿ ಎಂಬ ಗ್ರಾಮಾಂತರ ತಾಲೂಕಿನ ಗರ್ಭದೊಳಗಿರುವ ಸಿಯೋನದಂತಹ ಆಶ್ರಮ ಮನುಷ್ಯರ ಕಣ್ಣಿಗೆ ಬೀಳುವುದು ಅಷ್ಟು ಸುಲಭವೂ ಅಲ್ಲ. ತಮ್ಮ ಆತ್ಮ ಸಾಕ್ಷಿಯನ್ನು ತಿವಿಯುವಂತಹ ಮಾನವ ದುರಂತಗಳನ್ನು ಕಾಣುವುದು ಯಾರಿಗೂ ಬೇಕಿಲ್ಲವಾದ್ದರಿಂದ ಇಂತಹ ಆಶ್ರಮಗಳು ಯಾರ ಆಸಕ್ತಿಯನ್ನೂ ಕೆರಳಿಸುವುದಿಲ್ಲ. ಸಿಯೋನಾಶ್ರಮ ಎಂಬ ಕರುಣೆಯ ಒರತೆ ಒರೆಸುವ ಜಾಗಕ್ಕೆ ತಲುಪಬೇಕಾದರೆ. ಉಜಿರೆಯಿಂದ 20. ಕಿ.ಮೀ. ದೂರದಲ್ಲಿರುವ ಗಂಡಿ ಬಾಗಿಲು ಎಂಬಲ್ಲಿಗೆ ಬರಬೇಕು. ಆಶ್ರಮದ ಒಳಹೊಕ್ಕು ನೋಡಿದರೆ ನಿಮ್ಮ ಎದೆಯೇ ಒಡೆದು ಹೋಗುವಂತಹ ವಿಭಿನ್ನ ಬಗೆಯ ಭಗ್ನ ಚಿತ್ರಗಳು. ಬದುಕಿನ ಲಯವೇ ತಪ್ಪಿ ಹೋಗಿ ಅಲ್ಲಲ್ಲಿ ಮಿಸುಕಾಡುವ ಜೀವಿಗಳಿಗೆ ಮನುಷ್ಯರೆಂಬ ಘನತೆಯನ್ನು ತಂದು ಕೊಡಲು ಅನುಕ್ಷಣವೂ ಹೋರಾಡುತ್ತಿರುವ ಯು.ಸಿ. ಪೌಲಸ್ ಮತ್ತು ಮೇರಿ ದಂಪತಿಗಳು, ಒಂದೊಂದು ಜೀವದ ಮುಂದೆಯೂ ನಿಮ್ಮನ್ನು ನಿಲ್ಲಿಸಿ ಪರಿಚಯಿಸಿ ಕೊಡುವಾಗ ನೀವು ನಿಮಗರಿವಿಲ್ಲದೇ ನಿಮ್ಮ ಆಕಾಶ ಕೋಟೆಯಿಂದ ಭೂಮಿಗಿಳಿದಿರುತ್ತೀರಿ. ನಿಮ್ಮ ಅಟ್ಟಹಾಸ, ಮದ, ಅಹಂಕಾರಗಳೆಲ್ಲವೂ ಅದೆಲ್ಲೋ ಬಾಲ ಮುದುರಿ ಅಡಗಿಕೊಳ್ಳುತ್ತವೆ. ನೀವು ನಿಮ್ಮೋಳಗೇ ಕುಸಿದು ಹೋಗಲಿಲ್ಲ ಎಂದಾದರೆ ನೀವು ಮನುಷ್ಯರೇ ಅಲ್ಲವೆಂದು ಅರ್ಥ.

  ಕುಷ್ಠರೋಗದಿಂದ ಮಂಜುಗಡ್ಡೆಯಂತೆ ಕರಗುತ್ತಿರುವವರು, ಇಹಪರದ ಅರಿವಿಲ್ಲದೆ ಶೂನ್ಯದಲ್ಲಿ ದೃಷ್ಟಿ ನೆಟ್ಟು ಹೋದ ಮತಿವಿಕಲರು, ಕಿವಿ, ಕಣ್ಣು, ಕೈಕಾಲು ಕಳೆದು ಬದುಕಿನ ಊರುಗೋಲನ್ನೇ ಕಳೆದು ಕೊಂಡವರು, ಅಂತಿಮ ಕರೆಗೆ ತಮ್ಮ ಕಿವಿಗಳನ್ನು ಆನಿಸಿ ಕೂತ ವಯೋವೃದ್ಧರು- ತಮ್ಮ ಬಂಧುಗಳಿಗೆ ಬೇಡವಾಗಿ ಬೀದಿಗೆ ಬಿದ್ದ ಇವರು ಯು.ಸಿ.ಪೌಲಸರ ಮಾತಿನಲ್ಲಿ ಸಿಯೋನಾಶ್ರಮದ ಮಕ್ಕಳು. ನಾವು ಅಂಧರ, ಅನಾಥರ, ಮತಿವಿಕಲರ ಅನೇಕ ಬಗೆಯ ಆಶ್ರಮಗಳನ್ನು ಕಂಡಿರುತ್ತೇವೆ. ಆದರೆ ಕಸದ ತೊಪ್ಪೆಯಂತೆ ಬೀದಿಯಲ್ಲಿ ಬಿದ್ದ ಮನುಷ್ಯ ಜೀವಗಳನ್ನು ಎತ್ತಿತಂದು ಪೌಲಸ್ ಮಾಡುವ ಸೇವೆಗೆ ಯಾವುದೂ ಸಾಟಿಯಿಲ್ಲ. ಕಸದ ತೊಟ್ಟಿಯಲ್ಲಿನ ಎಂಜಲೆಲೆ ನೆಕ್ಕುತ್ತಿದ್ದವರನ್ನು, ಬಸ್‌ಸ್ಟಾಂಡ್ ಕಟ್ಟೆಯಲ್ಲಿ ಮೈಯಿಡೀ ವ್ರಣಗಳಾಗಿ ಕರಗುತ್ತಿರುವವರನ್ನು, ಬೀದಿಗೆ ಬಿದ್ದು ಕಂಡವರ ತೆವಲಿಗೆ ಈಡಾಗುತ್ತಿದ್ದ ಹರೆಯದ ಮತಿಭ್ರಮಿತ ಹೆಣ್ಣು ಮಕ್ಕಳನ್ನು ವಾಸನೆ, ಮೈಲಿಗೆಗೆ ಅಂಜದೆ ಪೌಲಸರು ತನ್ನ ಎರಡೂ ಕೈಗಳಲ್ಲಿ ಎತ್ತಿತಂದು ತನ್ನ ಆಶ್ರಮದಲ್ಲಿಟ್ಟು ಸಾಕಿದ್ದಾರೆ. ಈಗಲೂ ಸಾಕುತ್ತಿದ್ದಾರೆ. ಅವರ ಘನ ಘೋರ ವ್ರಣಗಳನ್ನು ತೊಳೆದು, ವರ್ಷಗಟ್ಟಳೆ ನೀರು ಎಣ್ಣೆ ಕಾಣದ ತಲೆಯನ್ನು ಸ್ವಯಂ ತಾನೇ ನಿಂತು ಕ್ಷೌರಮಾಡಿ ಸ್ನಾನಮಾಡಿಸಿ ತನ್ನ ಮನೆಯ ಒಲೆಯಲ್ಲಿ ಬೆಂದ ಅನ್ನವನ್ನೇ ಮಕ್ಕಳಿಗೆ ಉಣಿಸುವಂತೆ ಉಣಿಸಿದ್ದಾರೆ. ಸಿಯೋನಾಶ್ರಮದಲ್ಲಿ ದೇವರಿಲ್ಲ ಎಂದಾದರೆ ಈತ ಇನ್ನೆಲ್ಲಾದರೂ ಇರುವುದಾದರು ಸಾಧ್ಯವೇ?

ಸಿಯೋನಾಶ್ರಮದ ಕೆಲವು ದೃಶ್ಯಗಳು

  ಮತಿ ವಿಕಲರು ಆಗಿದ್ದ ವೃದ್ಧ ಕರಿಯ ಶೆಟ್ಟಿ ತನ್ನ ಮನೆ ಮಂದಿಯ ನಿರ್ಲಕ್ಷದಿಂದಾಗಿ ಬೀದಿ ಪಾಲಾಗಿದ್ದರು. ಉಡುಪಿ ಮೂಲದವರಾಗಿದ್ದ ಕರಿಯ ಶೆಟ್ಟಿ ಅದೇನೋ ಕಕ್ಕಿಂಜೆಯ ಹಳೆ ಸಿಂಡಿಕೇಟ್ ಬ್ಯಾಂಕ್ ಕಟ್ಟೆಯಲ್ಲಿ ಬಂದು ಬಿದ್ದಿದ್ದರು. ಕುತ್ತಿಗೆಯ ಬಳಿಯಿದ್ದ ಕ್ಯಾನ್ಸರ್ ಗಡ್ಡೆಯಿಂದ ಕೀವೊಡೆದು ಮಾರು ದೂರಕ್ಕೆ ದುರ್ವಾಸನೆ ಹಬ್ಬಿತ್ತು. ಮೈಯಿಡೀ ಊದಿ ಕುಂಬಳಕಾಯಂತಾಗಿತ್ತು. ಮೂರು ಹಗಲು, ಮೂರು ರಾತ್ರಿ ಆ ಕಟ್ಟೆಯಲ್ಲಿ ಅನಾಥರಾಗಿ ಬಿದ್ದಿದ್ದ ಕರಿಯ ಶೆಟ್ಟಿ ಕೊನೆಗೆ ಪೌಲಸರ ಕಣ್ಣಿಗೆ ಬಿದ್ದು ಸಿಯೋನಾಶ್ರಮ ಸೇರಿದರು. ಮೂರು ತಿಂಗಳು ಕರಿಯ ಶೆಟ್ಟಿಯ ಆರೈಕೆ ಮಾಡಿದ ಪೌಲಸ್ ದಂಪತಿಗಳು ವಾಸಿಯಾದ ಬಳಿಕ ಅವರ ಮನೆಗೆ ಕಳಿಸಿಕೊಟ್ಟರು.

 ಮಂಗಳೂರಿನ ಜ್ಯೋತಿ ಸರ್ಕಲಿನಲ್ಲಿ ಮೈಗೆ ಬರೇ ಪ್ಲಾಸ್ಟಿಕ್ ಸುತ್ತಿಕೊಂಡು ಅಲೆದಾಡುತ್ತಿದ್ದ ಹುಚ್ಚಿಯೊಬ್ಬಳಿದ್ದಳು. ಕಾಸರಗೋಡಿನವಳಾದ ಈಕೆ ಅಲ್ಲಿ ಹಿಂದಿ ಟೀಚರಾಗಿದ್ದಳು. ಯಾರೋ ಒಬ್ಬ ಪ್ರೀತಿಸಿ ಕೈ ಕೊಟ್ಟಾಗ ಇವಳಿಗೆ ಮತಿ ಭ್ರಾಂತಿಯಾಯಿತು. ಮತಿ ಭ್ರಾಂತಳನ್ನು ಮನೆಯಲ್ಲಿಟ್ಟು ಚಿಕಿತ್ಸೆ ಮಾಡುವ ವ್ಯವಧಾನ ವಿಲ್ಲದ ಮನೆಯವರು ಬೀದಿಗಟ್ಟಿದರು. ಬೀದಿಗೆ ಬಿದ್ದವಳು ಇನ್ನೂ ಒಂದಷ್ಟು ಮಹನೀಯರ ತೆವಲಿಗೆ ಬಲಿಯಾಗಿ ಪೂರ್ತಿ ಪ್ರಮಾಣದ ಹುಚ್ಚಿಯಾಗಿ ಮಂಗಳೂರಿಗೆ ಬಂದು ತಲುಪಿದಳು. ತಿಪ್ಪೆಯಲ್ಲಿದ್ದ ಎಂಜಲು ಬಾಚುತ್ತಾ ಮೈಗೆ ಪ್ಲಾಸ್ಟಿಕ್ ಸುತ್ತಿಕೊಂಡು ಮಳೆ -ಗಾಳಿಯೆನ್ನದೆ ಬೀದಿಯಲ್ಲಿ ಅಲೆಯುತ್ತಿದ್ದವಳನ್ನು ಪೌಲಸ್ ತನ್ನ ಆಶ್ರಮಕ್ಕೆ ತಂದು ಅನ್ನ -ಬಟ್ಟೆ -ಔಷಧಿ ನೀಡಿದರು. ಈಗ ಗುಣಮುಖಳಾಗಿರುವ ಈಕೆ ತನ್ನ ಸೇವೆಯನ್ನು ಆಶ್ರಮಕ್ಕೇ ಮುಡಿಪಾಗಿಟ್ಟಿದ್ದಾಳೆ.

ಶಿಬಾಜೆಯ ಸೀತಾ ಎಂಬವಳಿಗೆ ಮತಿಭ್ರಮಣೆಯಾದಾಗ ಮನೆಯವರು ಅವಳನ್ನು ಬೀದಿಗಟ್ಟಿ ಬಿಟ್ಟರು. ಹುಚ್ಚಿಯನ್ನೂ ಬಿಡದ ಕೆಲವು ಪುರುಷಾಗ್ರೇಸರು ಆಕೆಗೆ ಗರ್ಭ ವನ್ನು ದಯಪಾಲಿಸಿ ಬಿಟ್ಟರು. ಸರಿಯಾದ ಪೋಷಕಾಂಶವೂ ಇಲ್ಲದ ತುಂಬು ಬಸುರಿ; ಬೀದಿಯಲ್ಲಿ ಸ್ಮೃತಿ ತಪ್ಪಿ ಬಿದ್ದವಳನ್ನು ಯಾರೋ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸೇರಿಸಿದರು. ತಾಯಿ ಮಗು ಎರಡೂ ಉಳಿಯಲಾರದು ಎಂದು ಲೆಕ್ಕಹಾಕಿದ ವೈದ್ಯರು ಮೆಲ್ಲಗೆ ಸಿಯೋನಾಶ್ರಮಕ್ಕೆ ಸಾಗಹಾಕಿದರು. ಪೌಲಸರ ಕರುಣಾಶ್ರಮದಲ್ಲಿ ತಾಯಿ - ಮಗು ಇಬ್ಬರೂ ಬದುಕಿಕೊಂಡರು. ಮಗುವಿಗೀಗ ಒಂದೂವರೆ ವರ್ಷ. ಇಷ್ಟೆಲ್ಲಾ ಆದರೂ ಆಶ್ರಮಕ್ಕೆ ಕೂಗಳತೆ ದೂರದಲ್ಲಿರುವ ಸೀತಾಳ ಮನೆಯವರು ಈ ಕಡೆ ಇಣುಕಿ ನೋಡಿಲ್ಲ.

  ಜ್ಯೋತಿ ಎಂಬ ಆರು ವರ್ಷದ ಪುಟ್ಟ ಬಾಲೆಯದ್ದು ಬೇರೆಯೇ ಒಂದು ದುರಂತ ಕಥೆ. ಐದು ತಿಂಗಳ ಹಿಂದೆ ಹಾಸನದ ಚೊಕ್ಕಪಟ್ಟಣದವರಾದ ಜ್ಯೋತಿಯ ತಂದೆ -ತಾಯಿ ಮಗಳ ಸಮೇತ ಧರ್ಮಸ್ಥಳಕ್ಕೆ ಬಂದಿದ್ದವರು, ಸ್ಥಳೀಯ ಜ್ಯೋತಿಷಿಯೊಬ್ಬನಲ್ಲಿ ತನ್ನ ಗೃಹಗತಿ ಬಗ್ಗೆ ವಿಚಾರಿಸಿದ್ದರು. ಆತ ‘ಮಗಳೇ ನಿಮ್ಮ ಕಂಟಕದ ಮೂಲ’ ಎಂದು ಬೊಗಳಿ ಬಿಟ್ಟನಂತೆ. ಪರಿಣಾಮವಾಗಿ ಆ ಮುಠ್ಠಾಳ ತಂದೆ - ತಾಯಿ ಮಗಳನ್ನು ಬಸ್ ಸ್ಟಾಂಡ್‌ನಲ್ಲಿಯೇ ಬಿಟ್ಟು ತಾವಿಬ್ಬರೇ ಹಾಸನದ ಬಸ್ಸು ಹತ್ತಿದರು. ತಮ್ಮ ಬೆನ್ನ ಹಿಂದೆಯೇ ಓಡಿ ಬಂದ ಮಗುವಿನ ಎದೆಗೆ ಒದ್ದು ದೂರ ತಳ್ಳಿದರು. ಗದ್ದಲ ಕಂಡು ವಿಚಾರಿಸಿದವರಿಗೆ, ‘ಯಾರದೋ ಬಿಕನಾಸಿ ಮಗು’ ಎಂದು ಉತ್ತರಿಸಿದರು. ಹಾಗೇ ಬಸ್‌ಸ್ಟಾಂಡ್‌ನಲ್ಲಿ ಮೂರು ದಿನ ಅನ್ನ ನೀರಿಲ್ಲದೆ ಅತ್ತು ಕರೆದು ಬಿದ್ದಿದ್ದವಳನ್ನು ಯಾರೋ ಸಿಯೋನಾಶ್ರಮಕ್ಕೆ ಸೇರಿಸಿದರು. ಪೌಲಸ್ ಎರಡೂ ಕೈ ನೀಡಿ ಮಗುವನ್ನು ಸ್ವೀಕರಿಸಿದರು. ಜ್ಯೋತಿ ಈಗ ಆಶ್ರಮದಲ್ಲಿದ್ದೇ ಒಂದನೇ ಕ್ಲಾಸು ಓದುತ್ತಿದ್ದಾಳೆ. ಕಲಿಯುವುದರಲ್ಲಿ ಚೂಟಿ.

 ಮೈಸೂರಿನ ಒಬ್ಬ ಮಹಾ ತಾಯಿಗೆ ಕಣ್ಣು -ಕಾಲು- ಬಾಯಿ ಸರಿ ಇಲ್ಲದ ಮಗು ಹುಟ್ಟಿ ಬಿಟ್ಟಿತು. ನೋಡುವಷ್ಟು ದಿನ ನೋಡಿದಳು. ಒಂದು ದಿನ ಮಗುವನ್ನು ಅನಾಮತ್ತು ನದಿಗೆತ್ತಿ ಬಿಟ್ಟಳು. ಅದ್ಯಾರೋ ಕಾಪಾಡಿ ಸಿಯೋನಾಶ್ರಮಕ್ಕೆ ತಲುಪಿದ ಬಸವರಾಜನೆಂಬ ಹೆಸರಿನ ಆ ಮಗು ಈಗ ಮಾತು ನಡಿಗೆ ಎರಡನ್ನೂ ಕಲಿಯುತ್ತ್ತಿದೆ.

   ಮನುಷ್ಯ ಜೀವನದ ಭಗ್ನ ಚಿತ್ರಗಳೇ ಲಭ್ಯವಾಗುವ ಸಿಯೋನಾಶ್ರಮದಲ್ಲಿ ಒಮ್ಮಮ್ಮೆ ವಿಶೇಷ ಘಟನೆಗಳು ನಡೆಯುವುದಿದೆ. ತಿಮ್ಮಪ್ಪ ಪೂಜಾರಿ ಬಂಟ್ವಾಳ ಕಡೆಯ ಮತಿ ಭ್ರಮಿತ ವ್ಯಕ್ತಿ. ಈತನ ಹಾವಳಿ ತಡೆಯಲಾರದ ಮನೆಯವರು ಈತನ ಕೈ ಕಾಲುಗಳನ್ನು ಕಟ್ಟಿ ಸಿಯೋನಾಶ್ರಮಕ್ಕೆ ಎಸೆದು ಹೋದರು. ಪೌಲಸ್ ದಂಪತಿಗಳ ಆರೈಕೆಯಲ್ಲಿ ಗುಣ ಮುಖವಾದ ತಿಮ್ಮಪ್ಪ ಪೂಜಾರಿ ಬಳಿಕ ಆಶ್ರಮದಲ್ಲೇ ಸೇವೆಗೆ ನಿಂತನು. ಅದೇ ಹೊತ್ತಿನಲ್ಲಿ ಕೂಳೂರಿನ ನಮಿತಾ ಎಂಬ ಕ್ರಿಶ್ಚಿಯನ್ ಹುಡುಗಿ ಮತಿಭ್ರಮಣೆಗೀಡಾದವಳನ್ನು ಯಾರೋ ಸಿಯೋನಾಶ್ರಮಕ್ಕೆ ತಂದು ಬಿಟ್ಟರು. ಅಲ್ಲಿ ಆಕೆ ಗುಣ ಮುಖಳಾದಳು. ಕ್ರಮೇಣ ತಿಮ್ಮಪ್ಪ ಪೂಜಾರಿ ಮತ್ತು ನಮಿತಾ ನಡುವೆ ಪ್ರೇಮಾಂಕುರವಾಗಿ ಮದುವೆಯಾಗುವ ಇಚ್ಛೆಯನ್ನು ಪೌಲಸ್ ಬಳಿ ಹೇಳಿಕೊಂಡರು. ಆದರೆ ಇಬ್ಬರದೂ ವಿಭಿನ್ನ ಧರ್ಮಗಳಾಗಿದುದರಿಂದ ಅವರಿಬ್ಬರ ಮನೆಯವರ ಅನುಮತಿ ಪಡೆದ ಪೌಲಸ್ ಮಂಗಳೂರು ರಿಜಿಸ್ಟ್ರಾರ್ ಆಫೀಸಿನಲ್ಲಿ ಮದುವೆ ಮಾಡಿಕೊಟ್ಟರು. ಗಂಡ ಹೆಂಡತಿ ಇಬ್ಬರೂ ಈಗ ಆಶ್ರಮದ ಸೇವೆಯಲ್ಲಿ ಭಾಗಿ. ನಮಿತಾ ಈಗ ತುಂಬಿದ ಬಸುರಿ, ಹೆರಿಗೆಗೆಂದು ತವರಿಗೆ ಹೋಗಿದ್ದಾಳೆ.

ಹೀಗೆ ಸಿಯೋನಾಶ್ರಮದಲ್ಲಿ ತಮಗೆ ದ್ರೋಹ ಬಗೆದ ವಿಧಿಯೆದುರೇ ಸಡ್ಡು ಹೊಡೆದು ಜೀವನ್ಮುಖಿಯಾಗುವ ನೂರಾರು ಜೀವಗಳ ಚಿತ್ರವಿದೆ. ಹಾಗೆಯೇ ತಪ್ಪಿ ಹೋದ ಬದುಕಿನ ತಾಳ ಇನ್ನೆಂದಿಗೂ ಸರಿಹೋಗಲಾರದೇನೋ ಎಂಬಂತಹ ನಿರಾಶದಾಯಕ ಚಿತ್ರಗಳೂ ಇವೆ. ಎಲ್ಲೆಂದರಲ್ಲಿ ಮಲ ಮೂತ್ರ ಮಾಡುವವರು, ಊಟ ಬೇಡವೆಂದು ರಚ್ಚೆ ಹಿಡಿಯುವವರು, ಅನ್ನವನ್ನು ಬಾಚಿ ಮುಕ್ಕುವವರು, ವಿನಾಃಕಾರಣ ನಗುವವರು, ಅರಚುವವರು. ಆಂಧ್ರ ಪ್ರದೇಶದ ಕಡೆಯ ಹೆಸರಿಲ್ಲದ ಅಜ್ಜಿಯೊಬ್ಬಳಿದ್ದಾಳೆ. ಸದಾ ಕೊಳಕಾಗಿರ ಬೇಕೆನ್ನುವುದೇ ಅವಳ ಹವ್ಯಾಸ. ಸ್ನಾನ ಮಾಡಿಸಿದ, ಒಗೆದ ಬಟ್ಟೆ ಹಾಕಿಸಿದ ಮರುಕ್ಷಣವೇ ಮಣ್ಣಲ್ಲಿ ಹೊರಳಾಡಿ ಎಲ್ಲವನ್ನು ಗಲೀಜು ಮಾಡಿಕೊಳ್ಳುವಳು. ಅನ್ನಕ್ಕೆ ಕಲ್ಲು ಮಣ್ಣು ಬೆರೆಸಿ ತಿನ್ನುವಳು. ಇನ್ನೊಬ್ಬ ಅನ್ನಕ್ಕೆ ಉಚ್ಚೆಯನ್ನೇ ಹೊಯ್ದು ತಿನ್ನುವನು. ಆದರೆ ಪೌಲಸ್ ದಂಪತಿಗಳ ಸಹನೆ ದೊಡ್ಡದು. ಆ ಸೀಮಾತೀತ ಸಹನೆಯ ಮುಂದೆ ಮನೋರೋಗಿಗಳ ವಿಕೃತಿ ಗೆಲ್ಲುವುದು ವಿರಳ.

 ಈ ಕಡೆಯ ಬಹುತೇಕ ಮಲಯಾಳಿ ಕ್ರೈಸ್ತರಂತೆ ಯು.ಸಿ.ಪೌಲಸರ ಪೂರ್ವಜರು ಕೇರಳದಿಂದ ವಲಸೆ ಬಂದವರು. ಪೌಲಸರ ಹೆತ್ತವರು ಗಂಡಿಬಾಗಿಲು ಎಂಬಲ್ಲಿ ನೆಲೆಯೂರಿ ಕಾಡುಕಡಿದು ಹತ್ತಿಪ್ಪತ್ತು ಎಕರೆ ಭೂಮಿಯನ್ನು ಕೃಷಿಯೋಗ್ಯ ಮಾಡಿದ್ದರು. ಬಳಿಕ ತೋಟವನ್ನೆ ನೆಚ್ಚಿಕೊಂಡು ಕುಟುಂಬದ ಪೋಷಣೆ ಮಾಡುತ್ತಿದ್ದ ಪೌಲಸ್‌ಗೆ ಸಿಯೋನದಂತಹ ಆಶ್ರಮ ಮಾಡಬೇಕೆಂದು ಉಂಟಾದ ಪ್ರೇರಣೆ ಆಕಸ್ಮಿಕವಾದುದು.

 ಮೂರುವರೆ ವರ್ಷಗಳ ಹಿಂದೆ ಕೆಲಸ ನಿಮಿತ್ತ ಪಾಲಕ್ಕಾಡ್‌ಗೆ ಹೋಗಿದ್ದ ಪೌಲಸ್ ಪಾಲಕ್ಕಾಡ್ ರೈಲ್ವೇ ನಿಲ್ದಾಣದಲ್ಲಿ ಕಾಯುತ್ತಿದ್ದರು. ಆಗ ಅಲ್ಲಿದ್ದ ಹೊಟೇಲೊಂದರ ಮಾಣಿ ಎಂಜಲು ಎಲೆಗಳನ್ನು ಡಸ್ಟ್‌ಬಿನ್‌ಗೆ ತಂದು ಸುರಿದನು. ಒಮ್ಮೆಲೇ ಅದೆಲ್ಲಿದ್ದರೋ ಏಳೆಂಟು ಜನ ಹುಚ್ಚರ ದಂಡು ಡಸ್ಟ್‌ಬಿನ್‌ಗೆ ಮುಗಿ ಬಿದ್ದು ಎಂಜಲೆಲೆಯ ಕೊಳೆತ ವಸ್ತುವಿಗಾಗಿ ಕಿತ್ತಾಡತೊಡಗಿದರು. ಈ ಯಮಯಾತನೆಯ ದೃಶ್ಯವನ್ನು ಕಂಡು ತಲ್ಲಣಿಸಿ ಹೋದ ಪೌಲಸ್ ವೇದನೆಯಿಂದ ಮುಖ ಕಿವುಚಿ ಕೊಂಡರು. ಅಲ್ಲಿಂದ ಊರಿಗೆ ಮರಳಿದರೂ ಆ ದೃಶ್ಯ ಮಾತ್ರ ಪೌಲಸರ ಮನಸ್ಸಿನಿಂದ ಮರೆಯಾಗಲಿಲ್ಲ. ಕೊನೆಗೆ ಅಂಥವರಿಗಾಗಿ ಆಶ್ರಮವೊಂದನ್ನು ತೆರೆಯುವ ತನ್ನ ಯೋಜನೆಯನ್ನು ಪತ್ನಿ ಮೇರಿಯಲ್ಲಿ ಹೇಳಿಕೊಂಡರು. ಪೌಲಸರ ಪತ್ನಿಗೂ ಇದು ಸಮ್ಮತವೆಂದು ತೋಚಿತು ಪೌಲಸ್ ದಂಪತಿಗಳ ಓದುತ್ತಿದ್ದ ಮಕ್ಕಳಾದ ಶೋಭಾ, ಸುಭಾಷ್, ಸೌಮ್ಯ,ಶೈನಿಯವರು ಕೂಡ ಈ ನಿರ್ಧಾರವನ್ನು ವಿರೋಧಿಸಲಿಲ್ಲ.

 ತನ್ನ ಆಶ್ರಮದ ಆರಂಭದ ಹೆಜ್ಜೆಯಾಗಿ ಪೌಲಸ್, ಕಳಸ ಕಡೆಯ ಯಶೋಧ ಎಂಬ ಅನಾಥ ಯುವತಿಯನ್ನು ತನ್ನ ಮನೆಯಲ್ಲಿಟ್ಟು ಸಾಕತೊಡಗಿದರು. ಈ ಯಶೋಧ ಪೊಲೀಯೋದಿಂದ ಸೊಂಟದ ಕೆಳಗಿನ ಭಾಗವನ್ನೇ ಕಳೆದುಕೊಂಡಿದ್ದಳು ಬೇರೆ. ಎರಡನೆ ಸದಸ್ಯರಾಗಿ ಕಕ್ಕಿಂಜೆಯಲ್ಲಿ ಅನಾಥವಾಗಿ ಬಿದ್ದುಕೊಂಡಿದ್ದ ಕರಿಯ ಶೆಟ್ಟರ ಸೇರ್ಪಡೆಯಾಯಿತು. ಹುಚ್ಚ ರಾಮ ಸಿಯೋನಾಶ್ರಮಕ್ಕೆ ಕಾಲಿಟ್ಟ ಮೂರನೆಯ ಸದಸ್ಯ. ಹೀಗೆ ದಿನೇ ದಿನೇ ಸಿಯೋನಾಶ್ರಮದ ಸದಸ್ಯರ ಸಂಖ್ಯೆ ಏರತೊಡಗಿತು. ಪುಕ್ಕಟೆ ಸಾಕುತ್ತಾರೆಂದ ತಕ್ಷಣ ಕೊಳೆತ ತರಕಾರಿ ಎಸೆದು ಹೋದಂತೆ ಮನುಷ್ಯರನ್ನು ಎಸೆದು ಹೋಗುವವರಿಗೆ ಕಡಿಮೆಯಿರಲಿಲ್ಲ. ಹಾಗೆ ಬಿಟ್ಟು ಹೋದ ಬಂಧುಗಳನ್ನು ಮತ್ತೆ ಆಶ್ರಮದ ಪರಿಸರದಲ್ಲಿ ಕಂಡವರಿಲ್ಲ.

ಈಗ ಆಶ್ರಮದಲ್ಲಿ ಪುರುಷರೂ, ಮಹಿಳೆಯರೂ ಸೇರಿ 162 ಮಂದಿಯಿದ್ದಾರೆ. ಹಿಂದೆ ಇದ್ದ ಸೋಗೆ ಮಾಡಿನ ಕಟ್ಟಡ ಹೋಗಿ ಈಗ ಕಾಂಕ್ರೀಟ್ ಕಟ್ಟಡ ನಿರ್ಮಾಣವಾಗಿದೆ. ಅಕ್ಕಿ, ಬಟ್ಟೆ, ಔಷಧಿ ಎಂದು ತಿಂಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಬೀಳುತ್ತದೆ. ಎಲ್ಲವೂ ದಾನಿಗಳ ಕೃಪೆಯಿಂದ ನಡೆದಿದೆ ಎಂದು ಸ್ಮರಿಸಿಕೊಳ್ಳಲು ಪೌಲಸ್ ಮರೆಯುವುದಿಲ್ಲ.ಸರಕಾವೇನಾದರೂ ಸಹಾಯ ಮಾಡಿದರೆ ಇನ್ನೂ ವ್ಯವಸ್ಥಿತವಾಗಿ ಆಶ್ರಮ ನಡೆಸಬಹುದೆಂದು ಪೌಲಸ್ ನುಡಿಯುತ್ತಾರೆ.

ಈ ನಡುವೆ ಏರ್ವಾಡಿ ದುರಂತದಲ್ಲಿ 26 ಜನ ಸಜೀವ ದಹನಗೊಂಡ ಬಳಿಕ ಸುಪ್ರೀಂಕೋರ್ಟ್ ಇಂತಹ ಆಶ್ರಮಗಳಲ್ಲಿ ಹುಚ್ಚರನ್ನು ಸಾಕುವುದಕ್ಕೆ ಕಟ್ಟು ನಿಟ್ಟಾದ ನಿಯಮಗಳನ್ನು ಹೇರಿದೆ. ಹಾಗಾಗಿ ಇಲ್ಲಿದ್ದ 43 ಜನ ಹುಚ್ಚರನ್ನು ಈಗ ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸದ್ಯಕ್ಕೆ ಪೌಲಸರು ತನ್ನ ಆಶ್ರಮಕ್ಕೆ ಹುಚ್ಚರನ್ನು ಸೇರಿಸಿ ಕೊಳ್ಳುವಂತಿಲ್ಲ. ಸುಪ್ರೀಂಕೋರ್ಟ್ ಆಗ್ರಹಿಸುವ ಸವಲತ್ತುಗಳನ್ನು ಯಾರಾದರೂ ತನಗೆ ಒದಗಿಸಿಕೊಟ್ಟಲ್ಲಿ ತಾನು ಮತಿ ವಿಕಲರನ್ನು ಸಾಕಿಕೊಳ್ಳಲು ಸಿದ್ಧನಿದ್ದೇನೆ ಎಂದು ಪೌಲಸ್ ಮಾಧ್ಯಮಗಳಿಗೆ ತಿಳಿಸುತ್ತಾರೆ. ಪೌಲಸ್ ದಂಪತಿಗಳದ್ದು ನಿರ್ಗತಿಕರ ಸೇವೆಯಲ್ಲಿ ದಣಿವು ಕಾಣದ ಜೀವ. ಪೌಲಸರ ನಾಲ್ವರು ಮಕ್ಕಳು ಕೂಡ ಬಿಡುವಿನ ವೇಳೆಯಲ್ಲಿ ಆಶ್ರಮದ ಸೇವೆಯಲ್ಲಿ ಕಾಲ ಕಳೆಯುತ್ತಾರೆ, ಪೌಲಸರ ಅನೇಕ ಬಂಧುಗಳು ಕೂಡ ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆಯಲ್ಲಿ ತಲ್ಲೀನರಾಗಿದ್ದಾರೆ.

ಪೌಲಸರ ಮಾನವೀಯ ಸೇವೆಯನ್ನು ಅನುಮಾನದ ಕಣ್ಣುಗಳಿಂದ ಕಾಣುವ ವಿಕೃತರಿಗೂ ಸುತ್ತಮುತ್ತಲ ಪರಿಸರದಲ್ಲಿ ಬರವಿಲ್ಲ, ಸೇವೆಯ ಹೆಸರಿನಲ್ಲಿ ಅದೆಂಥದೋ ಲಾಭಗಳಿಸುತ್ತಿದ್ದಾರೆ ಎನ್ನುವುದು ಜನರ ಗುಮಾನಿ. ಆ ಲಾಭದ ಸ್ವರೂಪ ವೆಂತಹದೆನ್ನುವುದು ಈ ಜನರಿಗೆ ಸ್ಪಷ್ಟವಿಲ್ಲ. ಆಶ್ರಮದ ಹೆಸರಿನಲ್ಲಿ ಅದೆಲ್ಲಿಂದಲೋ ಹಣ ಸುರಿದು ಬರುತ್ತದೆನ್ನುವುದು ಕೆಲವರ ಶಂಕೆ. ಹಣ ಸಿಕ್ಕರೆ ಕಂಡವರ ವ್ರಣ ತೊಳೆಯಲು ನೀನು ಸಿದ್ಧ ನಿರುವೆಯಾ? ಎಂದು ಶಂಕಿಸಿದವನಲ್ಲಿ ಕೇಳಿದರೆ ಮಾರುತ್ತರ ಬರುವುದಿಲ್ಲ. ಇನ್ನು ಕೆಲವರದ್ದು ಪೌಲಸ್ ಸೇವೆಯ ಹೆಸರಿನಲ್ಲಿ ಮತಾಂತರ ಮಾಡುತ್ತಾನೆ ಎನ್ನುವ ಆರೋಪ. ಕೊಳೆತು ನಾರುತ್ತಿರುವ ಮಾಂಸದ ಮುದ್ದೆಗಳನ್ನು ಶುದ್ಧೀಕರಿಸಿ ಮಾನವ ರೂಪಕ್ಕೆ ತರುವ ಪೌಲಸ್, ಒಂದು ವೇಳೆ ಅಂತಹವರನ್ನು ಮತಾಂತರ ಗೊಳಿಸಿದರೆ ಅದರಲ್ಲಿ ತಪ್ಪೇನಿದೆ. ಹಾಗೆಂದು ಪೌಲಸ್ ಮತಾಂತರಗೊಳಿಸಿದ್ದಕ್ಕೆ ಯಾವ ನಿದರ್ಶನಗಳೂ ಇಲ್ಲ. ಲಾಭವಿಲ್ಲದೇ ಯಾರೂ ಯಾವುದನ್ನೂ ಮಾಡುವುದಿಲ್ಲ ಎಂಬ ವಿಕೃತಿಯನ್ನೇ ಜೀವನ ವೌಲ್ಯವನ್ನಾಗಿ ಸ್ವೀಕರಿಸಿ ಕೊಂಡ ಮನುಷ್ಯ ಇನ್ನೊಬ್ಬರಲ್ಲಿ ಒಳಿತನ್ನು ಗುರುತಿಸುವುದು ಎಂದಾದರೂ ಸಾಧ್ಯವಿದೆಯೆ?
ಸಿಯೋನಾಶ್ರಮದ ವಿಳಾಸ : ಯು.ಸಿ. ಪೌಲಸ್, ಸಿಯೋನ ಆಶ್ರಮಗಂಡಿಬಾಗಿಲು ಅಂಚೆ - 574228 ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.


 

Saturday, June 23, 2012

ಗ್ಯಾಂಗ್ಸ್ ಆಫ್ ವಸ್ಸೇಪುರ್: ಕಲ್ಲಿದ್ದಲ ಗಣಿಯ ಕತ್ತಲ ಕೂಪದಲ್ಲಿ....

ಹೀಗೊಂದು ಚಿತ್ರ ವಿಮರ್ಶೆ 

 ‘ಗ್ಯಾಂಗ್ಸ್ ಆಫ್ ವಸ್ಸೇಪುರ್’ ವಸ್ಸೇಪುರ್ ಮತ್ತು ಧನಬಾದ್‌ನ ಸ್ವಾತಂತ್ರ ಪೂರ್ವ ರಕ್ತಸಿಕ್ತ ದಾಖಲೆಗಳು. ದಂಡಕಾರಣ್ಯದಂತಿರುವ ವಸ್ಸೇಪುರ್ ಮತ್ತು ಧನ್‌ಬಾದ್ ಜನರ ಬದುಕಿನ ಕಪ್ಪು ರೂಪಕ ಇಲ್ಲಿನ ಕಲ್ಲಿದ್ದಲು ಗಣಿಗಳು. ಕಲ್ಲಿದ್ದಲು, ರಕ್ತ ಮತ್ತು ಸೇಡು ಇಲ್ಲಿಯ ಜನರ ಭಾಷೆ. ಸ್ವಾತಂತ್ರಪೂರ್ವದಿಂದ ಹಿಡಿದು 90ರ ದಶಕದ ವರೆಗಿನ ಇಲ್ಲಿನ ಬದುಕನ್ನು ಬಿಡಿ ಬಿಡಿಯಾಗಿ ಸಂಗ್ರಹಿಸುತ್ತಾ, ಅದನ್ನು ಸೇಡಿನ ಕರುಳಮಾಲೆಯಲ್ಲಿ ಬೆಸೆಯುತ್ತಾ ಹೋಗುತ್ತಾರೆ ಅನುರಾಗ್ ಕಶ್ಯಪ್. ಸ್ವಯಂ ನಿರ್ದೇಶಕರೇ ಈ ಚಿತ್ರವನ್ನು ವಸ್ಸೇಪುರ್‌ನ ಮುಸ್ಲಿಮರ ಮಹಾಭಾರತ ಇದು ಎಂದು ಕರೆದಿದ್ದಾರೆ.
    
 ಹಾಗೆ ನೋಡಿದರೆ ಈ ಚಿತ್ರಕ್ಕೆ ಒಂದು ಕತೆಯೇ ಇಲ್ಲ. ಸೇಡು ಇಲ್ಲಿನ ಮುಖ್ಯವಸ್ತು. ಆರಂಭದಲ್ಲಿ ವಸ್ಸೇಪುರ್ ಮತ್ತು ಧನ್‌ಬಾದ್‌ನ್ನು ಸುತ್ತುವರಿದಿರುವ ಕಲ್ಲಿದ್ದಲು ಮಾಫಿಯಾ ಮತ್ತು ಅದನ್ನು ಬೆಸೆದಿರುವ ಇಲ್ಲಿನ ಪಠಾಣ್ ಮತ್ತು ಖುರೇಷಿ ಮುಸ್ಲಿಮರ ರಕ್ತಸಿಕ್ತ ವಂಶಾವಳಿಗಳ ಪುಟಗಳನ್ನು ಅಸವಸರವಾಗಿ ಬಿಡಿಸುತ್ತಾ ಹೋಗುತ್ತಾರೆ. ಅದಕ್ಕೆ ಒತ್ತಿಕೊಂಡ ಲೂಟಿ, ಡಕಾಯಿತಿ, ರಾಜಕೀಯಗಳನ್ನು ಕಪ್ಪುಬಿಳುಪಿನಲ್ಲಿ ತೆರೆದಿಡುತ್ತಾರೆ. ಅಲ್ಲಿನ ಅರಣ್ಯ ಕಾನೂನನ್ನು ಸಣ್ಣ ಸಣ್ಣ ಘಟನೆಗಳ ಮೂಲಕ ಎದೆ ಝಲ್ಲೆನಿಸುವಂತೆ ಮುಂದಿಡುತ್ತಾರೆ. ಹೀಗೆ ಮೊದಲ ಮೂವತ್ತು ನಿಮಿಷ ಹತ್ತು ಹಲವು ಹೆಸರುಗಳು, ಪಾತ್ರಗಳು ನಮ್ಮ ಮುಂದೆ ಪಟಪಟನೆ ಸರಿಯುತ್ತಾ ಹೋಗುತ್ತವೆ. ಕಟ್ಟಕಡೆಗೆ ಚಿತ್ರ ಶಾಹಿದ್ ಖಾನ್‌ನ ಮಗ ಸರ್ದಾರ್ ಖಾನ್(ಮನೋಜ್ ಭಾಜ್‌ಪೈ)ಯಲ್ಲಿಗೆ ಬಂದು ನಿಲ್ಲುತ್ತದೆ. ವಸ್ಸೇಪುರ್ ಡಕಾಯಿತಿ ಬದುಕಿನಿಂದ ಕಳಚಿಕೊಂಡು ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುವ ಶಾಹಿದ್ ಖಾನ್(ಜೈದೀಪ್ ಅಹ್ಲಾವತ್) ತನ್ನ ಪತ್ನಿಯ ಹೆರಿಗೆಯ ಸಮಯದಲ್ಲಿ, ಪತ್ನಿಯನ್ನು ಭೇಟಿಮಾಡಲು ಅವಕಾಶ ನೀಡದ ಗಣಿ ಮಾಲಿಕರ ವಿರುದ್ಧ ತಿರುಗಿ ನಿಲ್ಲುತ್ತಾನೆ. ಬಳಿಕ ಅಲ್ಲಿನ ಕಾರ್ಮಿಕರನ ಜೊತೆ ನಿಂತು ಮಾಲಿಕರಿಗೆ ಸೆಡ್ಡು ಹೊಡೆಯುತ್ತಾನೆ. ಮುಂದೆ ಇದೇ ಗಣಿಯ ಮಾಲಿಕ ರಾಮ್‌ಧೀರ್ ಸಿಂಗ್(ತಿಗ್ಮಾಂಶು ಧುಲಿಯಾ), ಶಾಹಿದ್‌ನನ್ನು ತನ್ನ ಬಲಗೈ ಬಂಟನನ್ನಾಗಿಸಿ ಕಾರ್ಮಿಕರನ್ನು ಬಗ್ಗು ಬಡಿಯುತ್ತಾನೆ. ಕಾಲ ಸರಿದಂತೆ ಬಂಟ ಶಾಹಿದ್ ಮುಂದೊಂದು ದಿನ ತನಗೆ ಮುಳುವಾಗಬಹುದು ಎಂದು ರಾಮ್‌ಧೀರ್ ಸಿಂಗ್ ಆತನನ್ನು ಕೊಲ್ಲಿಸುತ್ತಾನೆ. ಶಾಹಿದ್‌ನ ಪುಟ್ಟ ಮಗನ ಜೊತೆಗೆ ಆತನ ಸಹಾಯಕ ಅಲ್ಲಿಂದ ಪರಾರಿಯಾಗುತ್ತಾನೆ. ಮುಂದೆ ಶಾಹಿದ್‌ನ ಪುಟ್ಟಮಗ ಸರ್ದಾರ್ ಖಾನ್ ಬೆಳೆದು ರಾಮ್‌ಧೀರ್‌ನ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕೆ ಅಣಿಯಾಗುತ್ತಾನೆ. ಮೇಲ್ನೋಟಕ್ಕೆ ಇಡೀ ಕತೆ ರಾಮ್‌ಧೀರ್ ಮತ್ತು ಸರ್ದಾರ್ ಖಾನ್‌ನ ನಡುವಿನ ಸೇಡಿನ ಕತೆಯಂತೆ ಭಾಸವಾದರೂ, ಅದನ್ನಿಟ್ಟುಕೊಂಡು ವಸ್ಸೇಪುರ್-ಧನ್‌ಬಾದ್ ಮುಸ್ಲಿಮರೊಳಗಿನ ಕ್ರೌರ್ಯವನ್ನೇ ಧಾತುವಾಗಿಸಿಕೊಂಡ ರಕ್ತಸಿಕ್ತ ಬದುಕನ್ನು ನಿರೂಪಿಸುತ್ತಾ ಹೋಗುತ್ತಾರೆ ಅನುರಾಗ್ ಕಶ್ಯಪ್. 

1941ರ ಕಾಲಘಟ್ಟದಲ್ಲಿ ಕಲ್ಲಿದ್ದಲ ಗಣಿಯಿಂದ ಭುಗಿಲೆದ್ದ ದ್ವೇಷದ ಬೆಂಕಿ ಇಡೀ ವಸ್ಸೇಪುರ್‌ನ್ನು ಕೌಟುಂಬಿಕವಾಗಿ, ರಾಜಕೀಯವಾಗಿ ಹಬ್ಬುತ್ತಾ ಹೋಗುತ್ತದೆ. ಕುರೇಶಿಗಳು ಮತ್ತು ಫಠಾಣ್ ಮುಸ್ಲಿಮರ ನಡುವಿನ ಈ ದ್ವೇಷ ಮತ್ತು ಹಿಂಸೆಯ ಬೆಂಕಿ ಮೂರು ತಲೆಮಾರುಗಳಳವರೆಗೂ ಹಿಂಬಾಲಿಸುತ್ತದೆ. ಕತ್ತಲು, ಮಳೆ, ರಕ್ತ ಮತ್ತು ಕಲ್ಲಿದ್ದಲು ಇವುಗಳನ್ನೆಲ್ಲ ಕಶ್ಯಪ್ ಅತ್ಯದ್ಭುತವಾಗಿ ಬಳಸಿಕೊಂಡಿದ್ದಾರೆ. ವಸ್ಸೇಪುರ್‌ನ ಇತಿಹಾಸವನ್ನು ಮಂಡಿಸುವಾಗ ಆರಂಭದಲ್ಲಿ ಪಾತ್ರಗಳ ಕುರಿತಂತೆ ಗೊಂದಲಗಳು ಎದುರಾಗುತ್ತವೆಯಾದರೂ ಸರ್ದಾರ್ ಖಾನ್‌ಗೆ ಬಂದು ನಿಂತ ತಲೆಮಾರಿನ ಕತೆ, ಕೊನೆಗೂ ನಿರ್ದಿಷ್ಟ ಉದ್ದೇಶಕ್ಕೆ ಬರುತ್ತದೆ. 

ಚಿತ್ರದ ಮುಖ್ಯಪಾತ್ರ(ಸರ್ದಾರ್‌ಖಾನ್)ದಲ್ಲಿ ನಟಿಸಿರುವ ಮನೋಜ್ ಬಾಜ್‌ಪೈ ಈಗಷ್ಟೇ ಕಲ್ಲಿದ್ದಲ ಗಣಿಯಿಂದ ಎದ್ದು ಬಂದವನ ಕಾಠಿಣ್ಯವನ್ನು, ಕ್ರೌರ್ಯವನ್ನು, ಅರಾಜಕತೆಯನ್ನು ಮೈಗೂಡಿಸಿಕೊಂಡು ನಟಿಸಿದ್ದಾರೆ. ಸತ್ಯ ಚಿತ್ರದಲ್ಲಿ ಬಿಕ್ಕೂ ಭಾಯಿಯಾಗಿ ಚಿರಪರಿಚಿತರಾದ ಭಾಜ್‌ಪೈಯ ಚಿತ್ರ ಬದುಕಿನ ಇನ್ನೊಂದು ಮಗ್ಗುಲು ಸರ್ದಾರ್ ಪಾತ್ರದ ಮೂಲಕ ತೆರೆದುಕೊಂಡಿದೆ. ಸರ್ದಾರ್ ಪಾತ್ರ ಚಿತ್ರದ ಹೆಗ್ಗಳಿಕೆಯಾಗಿದೆ. ಮಹಾಭಾರತದ ಧುರ್ಯೋಧನ ಮತ್ತು ಭೀಮನ ವ್ಯಕ್ತಿತ್ವಗಳನ್ನು ಹೋಲುವ ಈತನೊಳಗಿನ ಕ್ರೌರ್ಯ, ಹೆಣ್ಣುಬಾಕತನ, ಸೇಡು ಹಾಗೂ ಪ್ರೀತಿ ಇಡೀ ವಸೇಪುರ್‌ನ ಅರಾಜಕ ಗುಣಲಕ್ಷಣಗಳಿಗೆ ಪೂರಕವಾಗಿದೆ. ಆತನ ಮೊದಲ ಹೆಂಡತಿ ನಗ್ಮಾ ಪಾತ್ರದಲ್ಲಿ ರಿಚಾ ಚಡ್ಡಾ ಕೂಡ ಅಷ್ಟೇ ಸ್ಫೋಟಕವಾಗಿ ಕಾಣುತ್ತಾಳೆ. ಸರ್ದಾರ್ ಖಾನ್‌ಗೆ ಸರಿಸಾಟಿಯಾಗಿ ನಟಿಸಿರುವ ರಿಚಾ, ವಸ್ಸೇಪುರ್‌ನ ಕಲ್ಲಿದ್ದಲ ಗಣಿಯಿಂದ ಚಿಮ್ಮಿದ ಸ್ಫೋಟಕಗಳ ಚೂರಿನಂತೆ ಪ್ರತಿ ದೃಶ್ಯಗಳಲ್ಲಿ ಚಲಿಸುತ್ತಾಳೆ. ದುರ್ಗಾ ಪಾತ್ರದಲ್ಲಿ ರಿಮಾಸೇನ್‌ನ ವೌನ-ಸಿಟ್ಟು ಕೂಡ ಚಿತ್ರವನ್ನು ಇನ್ನಷ್ಟು ತೀವ್ರವಾಗಿಸುತ್ತದೆ. ಸರ್ದಾರ್ ಖಾನ್‌ನ ಓರ್ವ ಮಗನಾಗಿ ನವಾಝುದ್ದೀನ್ ಸಿದ್ದೀಕ್ ಪಾತ್ರ ಸಣ್ಣದಾದರು ಬಹಳಷ್ಟು ಕಾಡುವಂತಹದ್ದು. ಬಹುಶಃ ಚಿತ್ರದ ಮುಂದಿನ ಭಾಗದಲ್ಲಿ ಈ ಪಾತ್ರ ಇನ್ನಷ್ಟು ಬೆಳೆಯುವ ಸಾಧ್ಯತೆಗಳಿವೆ. ಅದಕ್ಕಾಗಿಯೇ ನಿರ್ದೇಶಕ ಈ ಪ್ರತಿಭಾವಂತನನ್ನು ಆಯ್ಕೆ ಮಾಡಿಕೊಂಡಿರಬೇಕು. ಚಿತ್ರದ ಇನ್ನೊಂದು ಮುಖ್ಯಪಾತ್ರದಲ್ಲಿ ತಿಗ್‌ಮಾಂಶು ದುಲಿಯಾ ಕಾಣಿಸಿಕೊಂಡಿದ್ದಾರೆ. ರಾಮ್‌ಧೀರ್ ಸಿಂಗ್‌ನ ಗಾಂಭೀರ್ಯ, ತಣ್ಣಗಿನ ಕೌರ್ಯವನ್ನು ದುಲಿಯಾ ಪಳಗಿದ ನಟನಂತೆ ವ್ಯಕ್ತಪಡಿಸಿದ್ದಾರೆ.

ಜಿ.ವಿ. ಪ್ರಕಾಶ್ ಅವರ ಹಿನ್ನೆಲೆ ಸಂಗೀತ, ಸ್ನೇಹ ಖಾನ್‌ವಾಲ್ಕರ್ ಅವರ ಜಾನಪದ ಸಂಗೀತದ ಸೊಗಡು ಚಿತ್ರವನ್ನು ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗಿಸುತ್ತದೆ. ಕತೆಗೆ ಹಾಡು ಪೂರಕವಾಗಿದೆ. ಸಂಗೀತದ ಮೂಲಕ ವಸ್ಸೇಪುರ್ ಇನ್ನಷ್ಟು ಆಳಕ್ಕೆ ಇಳಿಯುತ್ತದೆ. ನಮ್ಮೆಳಗಿನ ಒಳ್ಳೆಯತನ, ನಯ, ವಿನಯಗಳನ್ನೆಲ್ಲವನ್ನೂ ಒಂದು ಕ್ಷಣ ಅಲುಗಾಡಿಸಿ ಬಿಡುವ ಈ ಚಿತ್ರ ದುರ್ಬಲ ಹೃದಯದವರಿಗಲ್ಲ. ಚಿತ್ರ ಮುಗಿದಾಗಲೂ ಕತೆ ಮುಗಿಯುವುದಿಲ್ಲ. ಸೇಡಿನ ಹೆಡೆ ಮತ್ತೆ ಬಿಚ್ಚಿ ನಿಲ್ಲುತ್ತದೆ. ಇನ್ನೇನು ನಮ್ಮನ್ನು ಕಚ್ಚಿಯೇ ಬಿಡಬೇಕು ಎನ್ನುವಷ್ಟರಲ್ಲಿ ಸಿನಿಮಾಮಂದಿರದೊಳಗೆ ಬೆಳಕಾಗುತ್ತದೆ. ಕಲ್ಲಿದ್ದಲ ಗಣಿಯ ಆಳದ ಕತ್ತಲಿಂದ ಹೊರಬಂದಂತೆ ನಾವು ನಿಟ್ಟಿಸಿರುಡುತ್ತೇವೆ. ಚಿತ್ರ ಮುಗಿಯುವುದು ಮುಂದಿನ ಭಾಗಕ್ಕೆ ನಮ್ಮನ್ನು ತಯಾರು ಮಾಡುವ ಮೂಲಕ. ಈ ಚಿತ್ರವನ್ನು ನೋಡಿದವರು, ಇದರ ಮುಂದಿನ ಭಾಗಕ್ಕಾಗಿ ಚಿತ್ರಮಂದಿರದ ಬಾಗಿಲಲ್ಲೇ ಕುಕ್ಕರು ಕೂತರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಏನೇ ಇರಲಿ. ವಸ್ಸೇಪುರ್ ಗ್ಯಾಂಗ್‌ಗಳನ್ನು ಮುಖಾಮುಖಿಯಾಗುವ ಮುನ್ನ ನಿಮ್ಮ ಎಚ್ಚರದಲ್ಲಿ ನೀವಿರಿ.

Tuesday, June 12, 2012

ತೋಟ ಮತ್ತು ಇತರ ಕತೆಗಳು


ತೋಟ
ಒಬ್ಬ ರೈತನಿಗೆ ಸಲಹೆ ನೀಡಿದ ‘‘ಹೀಗೆ ಒಂದು ಗಿಡವನ್ನು ನೆಟ್ಟರೆ ಪ್ರಯೋಜನವಿಲ್ಲ. ದೊಡ್ಡ ತೋಟವನ್ನು ಮಾಡಬೇಕು. ಆಗ ಲಾಭ’’
ರೈತ ಹೇಳಿದ ‘‘ಒಂದು ಬೀಜದೊಳಗೆ ಒಂದು ದೊಡ್ಡ ತೋಟವೇ ಅಡಗಿದೆ’’
ಬೀಜ ಬಿತ್ತಿದ ರೈತ ತೋಟವನ್ನು ಬೆಳೆದ.
ತೋಟದ ಕನಸು ಕಾಣುತ್ತಿದ್ದವ ಒಂದು ಗಿಡವನ್ನೂ ಬೆಳೆಯಲಿಲ್ಲ.

ಮಳೆ
‘‘ಈ ಸಾರಿ ಮಳೆ ಸರಿಯಾದ ಸಮಯಕ್ಕೆ ಬೀಳುತ್ತದೆಯೋ ಇಲ್ಲವೋ...’’ ಅವನು ಆತಂಕದಿಂದ ಪ್ರಶ್ನಿಸಿದ.
‘‘ದೇವರು ಕೋಟಿ ವರ್ಷಗಳಿಂದ ತನ್ನ ಕರ್ತವ್ಯವನ್ನು ಸರಿಯಾಗಿಯೇ ಮಾಡುತ್ತಾ ಬಂದಿದ್ದಾನೆ...ಮೊದಲು ನೀನು ಮಳೆಗಾಲಕ್ಕೆ ಸಿದ್ಧನಾಗಿದ್ದೀಯ ಎನ್ನುವುದನ್ನು ಹೇಳು’’ ಇವನು ಉತ್ತರಿಸಿದ.

ಕಂಬಿಗಳು
ಕಳ್ಳನೊಬ್ಬ ಜೈಲುಕಂಬಿಗಳನ್ನು ಮುರಿಯಲು ನೋಡಿದ.
‘‘ಬಲವಾಗಿದೆ ಕಂಬಿಗಳು’’ ಕಳ್ಳ ಪರಿತಪಿಸಿದ.
‘‘ಹೌದು. ಇದನ್ನು ಮುರಿದು ಬಿಡುಗಡೆ ಪಡೆಯಲು ಕೆಲಸಕ್ಕೆ ಸೇರಿದ ದಿನದಿಂದ ಪ್ರಯತ್ನಿಸುತ್ತಿದ್ದೇನೆ. ಸಾಧ್ಯವಾಗಿಲ್ಲ’’ ಜೈಲು ವಾರ್ಡನ್ ನುಡಿದ.

ಸಂಭ್ರಮ
‘‘ಈ ಬಾರಿಯ ದೀಪಾವಳಿ ಕಳೆದ ಬಾರಿಯಷ್ಟು ಸಂಭ್ರಮವಿಲ್ಲ’’
ಆಕೆ ನಿರಾಸೆಯಿಂದ ಪತಿಗೆ ಹೇಳಿದಳು.
ಅವನು ವೌನವಾಗಿದ್ದ.
ಕಳೆದ ದೀಪಾವಳಿಯಂದು ಪಕ್ಕದ ಮನೆಗೆ ಬೆಂಕಿ ಬಿದ್ದದ್ದು ಅವನಿಗಿನ್ನೂ ನೆನಪಿದೆ.

ಮರ
ಕಟುಕನ ಕೊಡಲಿಗೆ ಉರುಳುತ್ತಿದ್ದ ಮರ ಹೇಳಿತು
‘‘ಕಬ್ಬಿಣದ ಕೊಡಲಿಯೇ, ನೀನು ನನ್ನನ್ನು ಕತ್ತರಿಸುವುದಕ್ಕೆ ನನಗೆ ನೋವಿಲ್ಲ. ನಿನಗೆ ಹಿಡಿಯ ರೂಪದಲ್ಲಿ ಸಹಕರಿಸುತ್ತಿದೆಯಲ್ಲ ಮತ್ತೊಂದು ಮರ, ಅದಕ್ಕಾಗಿ ನಾನು ನೊಂದಿದ್ದೇನೆ...’’

ಆಟದ ಖುಷಿ
ಅವನೊಬ್ಬ ವೃತ್ತಿಪರ ಆಟಗಾರ.
ಒಬ್ಬ ಹುಡುಗ ಕೇಳಿದ ‘‘ನೀವು ಯಾವಾಗಲೂ ಆಡುತ್ತೀರಲ್ಲ, ಕೆಲಸ ಯಾವಾಗ ಮಾಡುತ್ತೀರಿ?’’
‘‘ಆಡುವುದೇ ನನ್ನ ಕೆಲಸ’’ ಆಟಗಾರ ಹೇಳಿದ.
‘‘ಆಡುವುದು ಒಂದು ಕೆಲಸವೆ?’’ ಹುಡುಗ ಕೇಳಿದ.
‘‘ಹೌದು. ಅದಕ್ಕಾಗಿಯೇ ನನಗೆ ಕೋಟಿ ಕೋಟಿ ರೂ. ಕೊಡುತ್ತಾರೆ’’
‘‘ಆಡುವುದು ಕೆಲಸವಾದರೆ, ಅದರಿಂದ ಆಡುವ ಖುಷಿ ಸಿಗುವುದು ಹೇಗೆ?’’ ಹುಡುಗ ವಿಚಿತ್ರ ಪ್ರಶ್ನೆ ಕೇಳಿದ.

ರೋಗ
ಆ ಊರಲ್ಲಿ ವೈದ್ಯರೇ ಇರಲಿಲ್ಲ.
ಆದುದರಿಂದ ಅಲ್ಲಿ ರೋಗಗಳೂ ಇರಲಿಲ್ಲ.
ವೈದ್ಯನೊಬ್ಬ ಬಂದು ಅಲ್ಲಿ ಆಸ್ಪತ್ರೆ ತೆರೆದ.
ಅಂದಿನಿಂದ ಆ ಊರಲ್ಲಿ ಯಾರಾದರೊಬ್ಬರಿಗೆ ಹೊಟ್ಟೆನೋವು, ತಲೆನೋವು.

ಕೃಷಿ
‘‘ಈ ಬಾರಿಯ ಮಳೆಗಾಲಕ್ಕೆ ಸರಕಾರ ಸಂಪೂರ್ಣ ಸಿದ್ಧವಾಗಿದೆ’’ ಮುಖ್ಯಮಂತ್ರಿ ನುಡಿದರು.
ಹೌದು.
ಕಳೆದ ಬಾರಿಯಂತೆ ಈ ಬಾರಿ ಬೀಜ, ಗೊಬ್ಬರಕ್ಕಾಗಿ ರೈತರು ಆಕ್ರೋಶ ವ್ಯಕ್ತ ಪಡಿಸಲಾರರು.
ಯಾಕೆಂದರೆ ಬೀದಿ ಬೀದಿಯಲ್ಲಿ ಪೊಲೀಸ್ ಪಡೆಗಳು ಕೋವಿ ಹಿಡಿದು ಸಿದ್ಧವಾಗಿ ನಿಂತಿವೆ.

Saturday, June 2, 2012

ವಿಷಾದದ ಹನಿಗಳು

ಇಲ್ಲಿರುವ ಹನಿಗಳನ್ನು ಬರೆದವರು ಪತ್ರಕರ್ತ, ಕವಿ, ದಿ. ಬಿ.ಎಂ. ರಶೀದ್. ಅವರ "ಪರುಷ ಮಣಿ' ಸಂಕಲನದಿಂದ ಆರಿಸಿ ಕೊಡಲಾಗಿದೆ. 

ವಿಷಾದದ ಹನಿಗಳು

1
ಈ ಜಗತ್ತಿನಲ್ಲಿ ಗಾಯಕಿಯಂತೆ
ಮೈ ಮರೆತು ಬದುಕು
‘‘ಜಗತ್ತು ನಿನಗೆ ಅಪೂರ್ವ ಸಂಗೀತ’’
ಶ್ರೋತೃಳಂತೆ ಮನ ತೆರೆದೆಯೋ
ವಿಷಾದದಿಂದ ಉದ್ಗರಿಸಲಿರುವೆ;
‘‘ಜಗತ್ತು ಅಪೂರ್ವ ಸಂಗೀತ ನಿಜ
ಆದರೆ, ಅವೆಷ್ಟೊಂದು ಅಪಸ್ವರಗಳು’’

2
ನಿನ್ನೆದೆಯೊಳಗೆ
ಗರ್ಭ ಕಟ್ಟಿದ ದುಃಖ
ಹಡೆದದ್ದು ಆ ಕಣ್ಣೀರು

ನನ್ನೆದೆಯ ಅಸಹಾಯಕ
ಕೈಗಳು ಹೊಸೆದದ್ದು
ಈ ಕವನದ ಕರವಸ್ತ್ರ

ತಗೋ ಇದನ್ನು
ಒರೆಸಿ ಪಕ್ಕಕ್ಕೆಸೆ ಅದನ್ನು

3
ಸಾವು ಸಹಿ ಮಾಡಿದ
ಖಾಲಿ ಚೆಕ್ಕು
ಈ ಬದುಕು!

ಕಂಡ ಕನಸುಗಳೇ ಬರೆಯಬಹುದಾದ
ಅಖಂಡ ಅಂಕೆಗಳು...

ಆದರೆ ನನಗೆ ದಕ್ಕಿದ್ದು ಮಾತ್ರ
ಖೋಟಾ ಚೆಕ್ಕು!!

4
ನಿನಗೆಲ್ಲವೂ ಇದೆ
‘ಇದೆ’ಯೆನ್ನುವುದೊಂದರ
ಹೊರತು...

ನನಗೆಲ್ಲವೂ ಇಲ್ಲ
‘ಇಲ್ಲ’ವೆನ್ನುವುದೊಂದರ
ಹೊರತು...

5
ನಿನ್ನ ಹೃದಯದ ಬಾಗಿಲೆಂದು
ಮುಚ್ಚಿಕೊಂಡವೋ
ನಿರ್ದಾಕ್ಷಿಣ್ಯವಾಗಿ...

ಹೆಂಡದಂಗಡಿಯ ಬಾಗಿಲಂದು
ತೆರೆದುಕೊಂಡವು
ಹಾರ್ದಿಕವಾಗಿ...

6
ನಾನು ತುಟಿ ತೆರೆದು ಕಾದಂದು
ನೀನು ಕಿವಿ ಮುಚ್ಚಿ ನಡೆದೆ
ನೀನು ಕಿವಿ ತೆರೆದು ನಿಂತಂದು
ನಾನು ತುಟಿ ಮುಚ್ಚಿ ನಡೆದೆ

7
ಕಣ್ಣು ಬಿಡಲಾರದ
ಅಂಧಕಾರದೊಳಗೆ
ನನ್ನ ದಾರಿ
ಕಳೆದು ಹೋಗಿದೆ
ಬೆಳಗಿ ಮೊರೆವ
ದಾರಿ ಕೊರೆವ
ಮಿಂಚಿಗಾಗಿ
ಕಾಯುತ್ತಿದ್ದೇನೆ

8
ಸಾವಿಗವಳು
ಕೊನೆಯ ಕಂತನ್ನು
ಒಪ್ಪಿಸಲಿದ್ದಾಳೆ
ಒಪ್ಪಿಸಲಿ ಬಿಡು, ವಿಷಾದವಿಲ್ಲ!
ಸಾವಿಗೆಷ್ಟೊಂದು
ಕಂತುಗಳನ್ನು
ತೆತ್ತಳವಳು, ಲೆಕ್ಕವಿಲ್ಲ!!

9
ಗತವನ್ನು
ಕೆದಕಲು
ನಾನು ಇಚ್ಛಿಸುವುದಿಲ್ಲ!
ಯಾಕೆಂದರೆ ಗತದ ಹಿನ್ನೆಲೆಯಲ್ಲಿ
ಭೂಗತಗೊಂಡ
ನನ್ನ ಕನಸುಗಳಿವೆ

10
ಶಬ್ದಗಳು
ಒಲ್ಲೆನೆಂದರೂ
 
ನಿನ್ನ ಕವನಿಸಿದೆ ನಲ್ಲೇ
ಆದರದು ಕವನವಾಗಲಿಲ್ಲ!
ಒಂದು 
ಅಪಚಾರವಾಯಿತು. 

Saturday, May 26, 2012

ಆಕೆ ಮತ್ತು ಇತರ ಕತೆಗಳು

ಮಂಚ
‘‘ಇದು ನಾನು ವಿದೇಶದಿಂದ ತಂದ ಅತ್ಯಂತ ಬೆಲೆಬಾಳುವ ಮಂಚ’’
‘‘ಹೌದಾ? ಬಹುಶಃ ಇದರಲ್ಲಿ ಮಲಗಿದಾಕ್ಷಣ ನಿದ್ದೆ ಬರಬಹುದಲ್ವಾ?’’
‘‘ಹಾಗೇನೂ ಇಲ್ಲ...ನಿದ್ರೆ ಮಾತ್ರೆ ತೆಗೆದುಕೊಳ್ಳದೇ ನನಗೆ ನಿದ್ದೆ ಬರುವುದಿಲ್ಲ...’’
‘‘ಯಾವ ಮಂಚದಲ್ಲಿ ಮಲಗಿದಾಕ್ಷಣ ನಿದ್ದೆ ಬರುವುದೋ ಅದೇ ಹೆಚ್ಚು ಬೆಲೆಬಾಳುವ ಮಂಚ. ಅಂತಹ ಮಂಚವನ್ನು, ನಾನು ಹಲವು ಗುಡಿಸಲುಗಳಲ್ಲಿ ನೋಡಿದ್ದೇನೆ’’

ಬಾಡಿಗೆ ಮನೆ
‘‘ಯಾವಾಗ ನೋಡಿದರೂ ಬಾಡಿಗೆ ಮನೆಯಲ್ಲೇ ಇರುತ್ತೀರಲ್ಲ...ಒಂದು ಸ್ವಂತ ಮನೆ ಮಾಡಿಕೊಳ್ಳಬಾರದೆ?’’ ಅವರು ಕೇಳಿದರು.
‘‘ಸ್ವಂತ ಮನೆ ಮಾಡಿಕೊಳ್ಳುವ ಆಸೆಯಿದೆ. ಹಾಗೆಂದು ಹೊರಟಾಗಲೆಲ್ಲ ಯಾರದೋ ಬಾಡಿಗೆ ಮನೆಯಂತಿರುವ ಈ ಭೂಮಿಯಲ್ಲಿ ಕಟ್ಟಿದ್ದು ನನ್ನ ಸ್ವಂತ ಮನೆ ಹೇಗಾದೀತು? ಎಂಬ ಪ್ರಶ್ನೆ ಕಾಡುತ್ತದೆ’’

ಅಹಿಂಸೆ
ಅಂದು ಅಹಿಂಸೆಯ ಪ್ರತಿಪಾದಿಸಿದ ಮಹಾವೀರ ಜಯಂತಿಯ ದಿನ.
ಸೌಹಾರ್ದ ಮೆರೆಯಲು ಸರಕಾರ ಒಂದಿಡೀ ದಿನ ಮಾಂಸ ನಿಷೇಧ ಘೋಷಿಸಿತು.
ನಗರದಲ್ಲಿ ಮಾಂಸ ಮಾರುಕಟ್ಟೆ ಸಂಪೂರ್ಣ ಬಂದ್ ಆಗಿತ್ತು.
ಕಟುಕನ ಮನೆಯಲ್ಲಿ ಅಂದಿಡೀ ಮಕ್ಕಳು ಹಸಿದು ಅಳುತ್ತಿದ್ದರು.
ಆತನ ಕದ್ದು ಮಾಂಸ ಮಾರಲು ಹೋಗಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ.
ಅವರ ಹೊಡೆತ ಬೀಳಬಾರದದಲ್ಲಿಗೆ ಬಿದ್ದು ಲಾಕಪ್‌ನಲ್ಲಿ ಸತ್ತು ಹೋಗಿದ್ದ.
ಮರುದಿನ ಮಹಾವೀರ ಜಯಂತಿಯ ಅಹಿಂಸೆ ಸಂದೇಶ ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಯಿತು.
ಮಹಾವೀರ ಜಯಂತಿ ಯಶಸ್ವಿಯಾಗಿ ಆಚರಿಸಲ್ಪಟ್ಟಿತು.
ಸೌಹಾರ್ದ ಎತ್ತಿ ಹಿಡಿಯಲಾಗಿತ್ತು.
ಕಟುಕನ ಮನೆಯ ಹೆಂಡತಿ ಮಕ್ಕಳು ತಮ್ಮ ತಂದೆಗಾಗಿ ಇನ್ನೂ ಹುಡುಕುತ್ತಲೇ ಇದ್ದಾರೆ.

ಬೆಂಕಿ
‘‘ಭೂಮಿಯ ಒಡಲಲ್ಲಿ ಬೆಂಕಿ ಇದೆಯಂತೆ ಹೌದ?’’
‘‘ಹೌದು. ತಾಯಿಯ ಒಡಲಲ್ಲಿ ಸಿಟ್ಟಿರುವಂತೆ’’

ಕನಸು
‘‘ನಿನ್ನೆ ನನ್ನ ತಾಯಿ ತುಂಬಾ ದಿನಗಳ ಬಳಿಕ ನನ್ನ ಕನಸಲ್ಲಿ ಬಂದಿದ್ದರು...ನನ್ನ ಬಗ್ಗೆ ಅವರಿಗೆ ತುಂಬಾ ಪ್ರೀತಿ’’
‘‘ಹೌದೆ...ಅವರು ತೀರಿ ಹೋಗಿ ಎಷ್ಟು ವರ್ಷವಾಯಿತು..?’’
‘‘ಹಾಗೇನಿಲ್ಲ...ಅವರು ವೃದ್ಧಾಶ್ರಮದಲ್ಲಿದ್ದಾರೆ...’’

ಹೃದಯ
ಹಿಮಾಲಯ ಕರಗುತ್ತಿತ್ತು.
ಗಂಗಾನದಿ ದಿನದಿಂದ ವಿಶಾಲವಾಗುತ್ತಿತ್ತು.
‘ನೀನೇಕೆ ಕರಗುತ್ತಿದ್ದೀಯ?’ ಗಂಗೆ ಕೇಳಿದಳು.
‘ಬೆಟ್ಟವಾದರೇನು...ನನಗೂ ಹೃದಯ ಇರಬಾರದೇನು?’ ಹಿಮಾಲಯ ಕೇಳಿತು.

ಮಕ್ಕಳು
ಆರು ಮಂದಿ ತಾಯಂದಿರು ಒಟ್ಟು ಸೇರಿದ್ದರು.
ತಮ್ಮ ತಮ್ಮ ಮಕ್ಕಳ ಬಗ್ಗೆ ಗುಣಗಾನ ಮಾಡುತ್ತಿದ್ದರು.
‘‘ನನ್ನ ಮಗನಿಗೆ ನಾನೆಂದರೆ ತುಂಬಾ ಇಷ್ಟ...ಗೊತ್ತಾ...ಅವನು ದೊಡ್ಡ ಇಂಜಿನಿಯರ್...ದೊಡ್ಡ ದೊಡ್ಡ ಸೇತುವೆಗಳನ್ನು ಕಟ್ಟಿದ್ದಾನೆ...ತಿಂಗಳಿಗೆ ಹತ್ತು ಲಕ್ಷ ಸಂಪಾದಿಸುತ್ತಾನೆ...’’
‘‘ನನ್ನ ಮಗ ಬರಹಗಾರ...ಮೊನ್ನೆಯಷ್ಟೇ ಅವನು ಬರೆದ ಕಾದಂಬರಿಯ ಒಂದು ಲಕ್ಷ ಪ್ರತಿ ಮಾರಾಟವಾಯಿತು...ನನ್ನ ಮಗನಿಗೆ ಸಮಾಜ ತುಂಬಾ ಗೌರವ ನೀಡುತ್ತದೆ...’’
‘‘ನನ್ನ ಮಗನಿಗೂ ಅಷ್ಟೇ...ಅವನು ಪ್ರಖ್ಯಾತ ಹೃದಯ ತಜ್ಞ. ಎಂತಹ ಹೃದಯವನ್ನು ಅರೆಕ್ಷಣದಲ್ಲಿ ಬಿಚ್ಚಿ ಅದರ ರೋಗವನ್ನು ವಾಸಿ ಮಾಡುತ್ತಾನೆ...’’
ಹೀಗೆ ಮಾತನಾಡುತ್ತಿರುವಾಗ ಸಂಜೆಯಾಯಿತು. ಅಷ್ಟರಲ್ಲಿ ವಾರ್ಡನ್ ಬಂದು ಚೀರಿದಳು ‘‘ಸಮಯವಾಯಿತು...ಎಲ್ಲರೂ ಅವರವರ ಕೋಣೆಗೆ ತೆರಳಿ’’
ಅಂದ ಹಾಗೆ ಅದೊಂದು ವೃದ್ಧಾಶ್ರಮವಾಗಿತ್ತು.

ಆಕೆ
ಒಬ್ಬ ಮಹಿಳೆ ಆ ಬೀದಿಯಲ್ಲಿ ಒಬ್ಬಂಟಿಯಾಗಿ ನಿಂತಿದ್ದಳು.
‘‘ಅವಳು ವೇಶ್ಯೆಯಾಗಿರಬಹುದೆ?’’ ಶಿಷ್ಯ ಕೇಳಿದ.
‘‘ಆಗದೆಯೂ ಇರಬಹುದು....’’ ಸಂತ ಹೇಳಿದ.
‘‘ಅವಳ ವರ್ತನೆ ವೇಶ್ಯೆಯಂತೆ ಕಾಣುತ್ತಿದೆ...’’ ಶಿಷ್ಯ ಹೇಳಿದ.
‘‘ಅಲ್ಲ. ನಿನ್ನ ಒಳಗಿನ ವರ್ತನೆ ಆಕೆಯನ್ನು ನಿನಗೆ ವೇಶ್ಯೆಯಂತೆ ಕಾಣಿಸುತ್ತಿದೆ’’ ಸಂತ ಸಮಾಧಾನಿಸಿದ.

Tuesday, May 22, 2012

ಬಾಡೂಟದ ಜೊತೆಗೆ ಗಾಂಧಿಜಯಂತಿ!

5 ವರ್ಷಗಳ ಹಿಂದೆ ಬರೆದ ಲೇಖನ ಇದು. ಪೇಜಾವರ ಶ್ರೀಗಳ ವಿವಾದಾತ್ಮಕ ಹೇಳಿಕೆ ಹಾಗು ಅಂಬೇಡ್ಕರ್ ಜಯಂತಿ ದಿನ ಮಾಂಸ ನಿಷೇಧ ಆದೇಶದ ಹಿನ್ನೆಲೆಯಲ್ಲಿ ಈ ಲೇಖನ ಪ್ರಸ್ತುತವಾಗಬಹುದು ಎಂದು ಹಾಕಿದ್ದೇನೆ. 

ಮೊನ್ನೆ ಗಾಂಧಿ ಜಯಂತಿ ದಿನ ಸಚಿವನ ಮಗನೊಬ್ಬ ಸಾರ್ವಜನಿಕ ಸ್ಥಳದಲ್ಲಿ ತನ್ನ ಗೆಳೆಯರೊಂದಿಗೆ ‘ಬಾಡೂಟ’ ಮಾಡಿ ಉಂಡದ್ದು ಸಾಕಷ್ಟು ಸುದ್ದಿಯಾಯಿತು. ಒಂದು ಟಿ.ವಿ. ಚಾನೆಲ್ ಅಂತೂ ಇದನ್ನು ಅನಾಹುತವೋ ಎಂಬಂತೆ ವರದಿ ಮಾಡಿತು. ಕೆಲವು ಗಾಂಧಿವಾದಿಗಳು ಇದಕ್ಕೆ ಆಘಾತ ವ್ಯಕ್ತಪಡಿಸಿದರು. ಸಚಿವನ ಮಗನೇ ಬಾಡೂಟ ಮಾಡಿ ಉಂಡಿರುವುದು ಗಾಂಧಿಗಾದ ಅವಮಾನ ಎಂಬಂತೆ ಚಿತ್ರಿತವಾಯಿತು. ಸಂಸ್ಕೃತಿಯನ್ನು ಕ್ರೆಡಿಟ್ ಕಾರ್ಡಿನಂತೆ ಕಿಸೆಯೊಳಗಿಟ್ಟು ಓಡಾಡುವ ಬಿಜೆಪಿಯ ಸಚಿವನಿಗೆ ತನ್ನ ಸುಪುತ್ರನ ಕೆಲಸದಿಂದ ಸಾಕಷ್ಟ ಮುಜುಗರವಾಯಿತು. ‘ಗಾಂಧಿ ದಿನದಂದು ಹಿಂಸೆ ಗಾಂಧಿ ದಿನದಂದು ಮಾಂಸ’! ಇತ್ಯಾದಿ ಉದ್ಗಾರಗಳು ಕೇಳಿ ಬಂದವು.

ಬಾಡೂಟವೆನ್ನುವ ಮೂರಕ್ಷರದ ಶಬ್ದಕ್ಕೆ ಸಾಂಸ್ಕೃತಿಕ ಹಿನ್ನೆಲೆಯಿದೆ. ಈ ದೇಶದ ಬಹುಜನರ ಆಹಾರ ಸಂಸ್ಕೃತಿ. ದಲಿತರು, ಶೂದ್ರರು, ಮುಸ್ಲಿಮರು, ಕ್ರಿಶ್ಚಿಯನ್ನರೂ ಮಾತ್ರವಲ್ಲ ದೇಶದ ಕೆಲವು ಭಾಗಗಳಲ್ಲಿ ಬ್ರಾಹ್ಮಣರೂ ಅತಿಯಾಗಿ ಇಷ್ಟಪಡುವ ಊಟ ಬಾಡೂಟ. ಬಾಡೂಟವನ್ನು ಅವಮಾನಿಸುವುದೆಂದರೆ ಗತಿಸಿಹೋದ ನಮ್ಮ ಹಿರಿಯರನ್ನು ಅವಮಾನಿಸುವುದೆಂದರ್ಥ.ತುಳುನಾಡಿನಲ್ಲಿ ಬಾಡೂಟಕ್ಕೆ ಹಲವು ಸಂಕೇತಗಳಿವೆ. ಅರ್ಥಗಳಿವೆ. ಬಾಡೂಟ ದುಡಿಮೆಯ, ಬೆವರಿನ ಸಂಕೇತ. ನೆಲದ ಮಣ್ಣಿನ ಸೊಗಡು ಅದರಲ್ಲಿ ಮಿಳಿತವಾಗಿದೆ. ಕಾಡು, ಬೇಟೆ, ಶೌರ್ಯ, ಹೋರಾಟ ಇತ್ಯಾದಿಗಳು ಈ ಬಾಡೂಟದೊಂದಿಗೆ ತಳಕು ಹಾಕಿಕೊಂಡಿವೆ. ಕೆದಂಬಾಡಿ ಜತ್ತಪ್ಪ ರೈಯವರ ‘ಬೇಟೆಯ ನೆನಪುಗಳು’ ಓದಿದರೆ ಬಾಡೂಟದ ಸೊಗಸನ್ನು, ಪರಿಮಳವನ್ನು ಅಸ್ವಾದಿಸಬಹುದು. ಈ ಊಟವನ್ನು ಆಗಷ್ಟೇ ತಾಳೆಮರದಿಂದ ಇಳಿಸಿದ ಕಳ್ಳ ಇನ್ನಷ್ಟು ಅರ್ಥಪೂರ್ಣಗೊಳಿಸುತ್ತದೆ. ಈ ಊಟದ ಜೊತೆಗೆ ಸಂಬಂಧ ಸಂಬಂಧಗಳು ಹತ್ತಿರವಾಗುತ್ತವೆ. ಬಾಡೂಟವನ್ನು ಅವಮಾನಿಸುದೆಂದರೆ ಮಣ್ಣಿನ ಮಕ್ಕಳ ದುಡಿಮೆಯನ್ನು, ಬೆವರನ್ನು ಅವಮಾನಿಸಿದಂತೆ.
  
   ಗಾಂಧಿ ಈ ದೇಶದ ಬಹುಸಂಸ್ಕೃತಿಯನ್ನು ಅತಿಯಾಗಿ ಗೌರವಿಸಿದವರು ಮಾತ್ರವಲ್ಲ. ಅದರ ಬಗ್ಗೆ ಗಟ್ಟಿ ನಂಬಿಕೆಯನ್ನು ಹೊಂದಿದ್ದರು. ಈ ದೇಶದ ಬಹು ಸಂಸ್ಕೃತಿ ಶಾಶ್ವತವಾಗಿ ಉಳಿಯಬೇಕೆಂದೇ ಗಾಂಧೀಜಿ ಜಾತಿಯನ್ನು ಬೆಂಬಲಿಸುತ್ತಿದ್ದರು. ಗಾಂಧಿ ಮಾಂಸ ತಿನ್ನದೇ ಇದ್ದುದು ಬರೇ ‘ಅಹಿಂಸೆ’ಯ ಕಾರಣಕ್ಕಾಗಿಯಲ್ಲ. ಅದು ಅವರ ಮನೆಯ ಸಂಪ್ರದಾಯವೂ ಆಗಿತ್ತು. ಕ್ರಮೇಣ ಆ ಸಂಪ್ರದಾಯ ಆಹಿಂಸೆಯೊಂದಿಗೆ ತಳಕು ಹಾಕಿಕೊಂಡಿತು. ಆಹಾರಕ್ಕಾಗಿ ಕೋಳಿ, ಕುರಿಗಳನ್ನು ಬಳಸುವುದನ್ನು ಭಾರತೀಯ ಸಂಸ್ಕೃತಿ ಯಾವತ್ತು ಹಿಂಸೆ ಎಂದು ಗುರುತಿಸಿಲ್ಲ. ಹಸಿವಿಗಿಂತ ಹಿಂಸೆ ಇನ್ನಾವುದಿದೆ? ಆ ಹಿಂಸೆಯನ್ನು ವಿರೋಧಿಸುವ ಪ್ರಕ್ರಿಯೆಯಲ್ಲಿ ಗಾಂಧೀಜಿಯ ಉಪವಾಸ ಕಲ್ಪನೆ ಹುಟ್ಟಿಕೊಂಡಿತು. ಗಾಂಧೀಜಿಯ ಹುಟ್ಟು ಹಬ್ಬದ ದಿನ ಈ ದೇಶದ 17ಕೋಟಿ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರಲ್ಲ, ಅದು ಹಿಂಸೆ. ಗಾಂಧೀಜಿಯ ಈ ದೇಶದಲ್ಲಿ ಒಂದು ಮಗು ಹಸಿವಿನಿಂದ ಸತ್ತು ಹೋದರೆ, ಅದು ಬರ್ಬರ ಹಿಂಸೆ. ಅಪೌಷ್ಟಿಕತೆ, ಹಸಿವು ತುಂಬಿದ ನಾಡಿನಲ್ಲಿ ಬಹು ಸಂಖ್ಯಾತರ ಆಹಾರ ಪದ್ಧತಿಯನ್ನು ತಿರಸ್ಕರಿಸುವುದು ಬಹುದೊಡ್ಡ ಹಿಂಸೆ. ನಿಮಗೆ ನೆನಪಿರಬಹುದು ಕೆಲವು ವರ್ಷಗಳ ಹಿಂದೆ ಬಕ್ರೀದ್ ಹಬ್ಬ ಮತ್ತು ಮಹಾವೀರ ಜಯಂತಿ ಜೊತೆ ಜೊತೆಯಾಗಿಯೇ ಬಂತು. ಆಗ ರಾಜ್ಯದ ಮೂರ್ಖ ಸರಕಾರ (ಬಾಡೂಟವನ್ನು ಅತಿಯಾಗಿ ಪ್ರೀತಿಸುತ್ತಿದ್ದ ಜೆ.ಎಚ್. ಪಟೇಲರೇ ಆಗ ಮುಖ್ಯಂತ್ರಿಯಾಗಿದ್ದದು ದುರಂತ) ಮಹಾವೀರ ಜಯಂತಿ ದಿನ ಮಾಂಸ ಮಾರಾಟವನ್ನು ನಿಷೇಧಿಸಿತು. ಒಂದು ಧರ್ಮವನ್ನು ಗೌರವಿಸುವ ಹೆಸರಿನಲ್ಲಿ ಇನ್ನೊಂದು ಧರ್ಮದ ವೌಲ್ಯವನ್ನು ಅವಮಾನಿಸಿತು. ಬಕ್ರೀದ್ ಹಬ್ಬದಂದು ಶ್ರೀಮಂತರು ಮಾಂಸವನ್ನು ದೇವರ ಹೆಸರಿನಲ್ಲಿ ಬಡವರಿಗೆ ದಾನವಾಗಿ ಹಂಚುತ್ತಾರೆ. ಮನೆಮನೆಗಳಲ್ಲಿ ಬಾಡೂಟದ ಪರಿಮಳ ಆವರಿಸಿಕೊಂಡಿರುತ್ತದೆ. ಮಹಾವೀರನ ಹೆಸರಿನಲ್ಲಿ ಮುಸ್ಲಿಮರು ತಮ್ಮ ಹಬ್ಬವನ್ನೇ ಆಚರಿಸಿಕೊಳ್ಳಲಾಗದಂತಹ ಸನ್ನಿವೇಶ ನಿರ್ಮಾಣವಾಯಿತು. ಮುಸ್ಲಿಮರು ಇನ್ನೊಂದು ಧರ್ಮದ ನಂಬಿಕೆಗಳನ್ನು ಗೌರವಿಸಬೇಕು ಎಂಬ ಅತೀ ದೊಡ್ಡ ಸುಳ್ಳು ಘೋಷಣೆಯನ್ನು ಸಾರ್ವಜನಿಕವಾಗಿ ಹರಡಲಾಯಿತು. ಒಂದು ಧರ್ಮದ ಹಬ್ಬ ಇನ್ನೊಂದು ಧರ್ಮದ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತದೆಯೆಂದಾದರೆ ಅದನ್ನು ಸೌಹಾರ್ದ ಎಂದು ಕರೆಯಬಹುದೆ?

ಇನ್ನೊಂದು ಘಟನೆಯನ್ನು ಇಲ್ಲಿ ಸ್ಮರಿಸಬೇಕು. ಗುಜರಾತ್‌ನಲ್ಲಿ ಜೈನಧರ್ಮೀಯರ ಹಬ್ಬವೊಂದರ ನೆಪದಲ್ಲಿ ಅಲ್ಲಿನ ಮಹಾನಗರ ಪಾಲಿಕೆ ಒಂದು ವಾರ ಕಾಲ ಮಾಂಸ ನಿಷೇಧಿಸಿ ಹೊರಡಿಸಿದ ಅಧಿಸೂಚನೆಯನ್ನು ಸುಪ್ರೀಂ ಕೋರ್ಟ್‌ನ ಪೀಠವೊಂದು ಸಮರ್ಥಿಸಿತು. 1998ರಲ್ಲಿ ಜೈನರ ‘ಪರ್‌ಯೂಶನ್’ ಹಬ್ಬದ ಹಿನ್ನೆಲೆಯಲ್ಲಿ ಗುಜರಾತ್‌ನ ಅಹ್ಮದಾಬಾದ್ ಮಹಾನಗರ ಪಾಲಿಕೆಯು ಆಗಸ್ಟ್ 19ರಿಂದ 26ರವರೆಗೆ ನಗರದಲ್ಲಿ ಮಾಂಸವನ್ನು ನಿಷೇಧಿಸಿ ಅಧಿಸೂಚನೆಯನ್ನು ಹೊರಡಿಸಿತ್ತು. ಈ ಅಧಿಸೂಚನೆಯಿಂದ ಮೂರು ಸಾವಿರಕ್ಕೂ ಅಧಿಕ ಮಾಂಸದ ವ್ಯಾಪಾರಿಗಳು ಸಂಕಷ್ಟವನ್ನು ಎದುರಿಸಬೇಕಾಯಿತು. ಇಷ್ಟು ವ್ಯಾಪಾರಿಗಳ ಕುಟುಂಬಗಳು ಇನ್ನೊಂದು ಧರ್ಮದ ಹಬ್ಬಕ್ಕಾಗಿ ತಮ್ಮ ದೈನಂದಿನ ಬದುಕನ್ನು ತೆತ್ತುಕೊಳ್ಳುವಂತಹ ಸನ್ನಿವೇಶ ಒದಗಿ ಬಂತು. ಸಹಜವಾಗಿಯೇ ಮಹಾನಗರ ಪಾಲಿಕೆಯ ವಿರುದ್ಧ ವ್ಯಾಪಾರಿಗಳ ಸಂಘ ನ್ಯಾಯಾಲಯದ ಮೆಟ್ಟಿಲೇರಿತು. 2005 ಜೂನ್ 22ರಂದು ಹೈಕೋರ್ಟ್ ಪೀಠವೊಂದು ಈ ಅಧಿಸೂಚನೆಯ ವಿರುದ್ಧ ತೀರ್ಪನ್ನು ನೀಡಿತು. ವ್ಯಾಪಾರಿಗಳ ಮೂಲಭೂತ ಹಕ್ಕನ್ನು ಈ ಅಧಿಸೂಚನೆ ಕಸಿದುಕೊಳ್ಳುತ್ತದೆ ಎಂದಿತು ಹೈಕೋರ್ಟ್. ಆದರೆ ಹೈಕೋರ್ಟ್‌ನ ತೀರ್ಪಿನ ವಿರುದ್ಧ ಅಹ್ಮದಾಬಾದ್‌ನ ‘ಹಿಂಸಾವಿರೋಧಕ್ ಸಂಘ್’ ಸುಪ್ರೀಂಕೋರ್ಟ್‌ಗೆ ಹೋಯಿತು. ಕಳೆದ ಮಾರ್ಚ್ 14ರಂದು ತನ್ನ ತೀರ್ಪನ್ನು ನೀಡಿದ ಸುಪ್ರೀಂಕೋರ್ಟ್ ಪೀಠ, ಮಹಾನಗರ ಪಾಲಿಕೆಯ ತೀರ್ಪನ್ನು ಸಮರ್ಥಿಸಿಕೊಂಡಿತು.ಸುಪ್ರೀಂಕೋರ್ಟ್‌ನ ವಿಭಾಗೀಯ ಪೀಠದ ನ್ಯಾಯಾಧೀಶರು ತನ್ನ ತೀರ್ಪಿನಲ್ಲಿ ನೀಡಿದ ಹೇಳಿಕೆ ಏನು ಗೊತ್ತೆ ‘‘ಅಕ್ಬರ್ ಮಹಾರಾಜನು ಗುಜರಾತಿನಲ್ಲಿ ಆರು ತಿಂಗಳ ಕಾಲ ಮಾಂಸಾಹಾರದಿಂದ ದೂರವಿದ್ದಿರುವಾಗ, ಇನ್ನೊಂದು ಹಬ್ಬವನ್ನು ಗೌರವಿಸಲು ದೂರವಿರುವುದಕ್ಕಾಗುವುದಿಲ್ಲವೇ?’’ ಒಂದಾನೊಂದು ಕಾಲದಲ್ಲಿ ಅಕ್ಬರ್ ಮಹಾರಾಜನ ‘ನಾನ್‌ವೆಜಿಟೇರಿಯನ್’ ಕತೆಯನ್ನು ಮುಂದಿಟ್ಟುಕೊಂಡು ಈ ದೇಶದ ಬಹುಸಂಖ್ಯಾತ ಜನರ ಆಹಾರದ ಹಕ್ಕುಗಳ ಮೇಲೆ ದಾಳಿ ನಡೆಸುವ ನ್ಯಾಯವನ್ನು ‘ನ್ಯಾಯ’ವೆಂದು ಒಪ್ಪಿಕೊಳ್ಳಲು ಸಾಧ್ಯವೆ? ಎಲ್ಲಕ್ಕಿಂತ ಮುಖ್ಯವಾಗಿ, ಒಂದು ಸಮುದಾಯ ಹಬ್ಬ ಆಚರಿಸುತ್ತಿರುವಾಗ ಇನ್ನೊಂದು ಸಮುದಾಯ ತನ್ನ ಬದುಕುವ ಹಕ್ಕುಗಳನ್ನು ಕಳೆದುಕೊಳ್ಳುವುದು ಹೇಗೆ ‘ಸೌಹಾರ್ದ’ದ ಸಂಕೇತವಾಗಾತ್ತದೆ?

ಈ ದೇಶದ ಆಹಾರದ ಕೊರತೆಯನ್ನು ಎದುರಿಸುತ್ತಿರುವ ದಿನಗಳಲ್ಲಿ ‘ಮಾಂಸ’ವನ್ನು ಆಹಾರದ ಮುಖ್ಯವಾಹಿನಿಯಿಂದ ಹೊರಗಿಡುವ ಹುನ್ನಾರಕ್ಕೆ ನ್ಯಾಯಾಲಯ ತೀರ್ಪು ಪರೋಕ್ಷ ಬೆಂಬಲವನ್ನು ನೀಡಿತು. ಈ ದೇಶದ ಮುಖ್ಯ ಆಹಾರ ಮೀನು, ಕೋಳಿ, ಆಡು, ಕುರಿ, ಹಸು, ಮೊಟ್ಟೆ ಇತ್ಯಾದಿಗಳು. ಜನ ಸಾಮಾನ್ಯರ ಬದುಕಿನಲ್ಲಿ ಆಹಾರವಾಗಿ ಮಾತ್ರವಲ್ಲ, ಸಂಸ್ಕೃತಿಯಾಗಿ ಸೇರಿಕೊಂಡಿದೆ. ಲಕ್ಷಾಂತರ ಮೊಗವೀರರು ಮೀನಿನ ಜೊತೆಗೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಮೀನುಗಾರಿಕೆ ಅವರ ‘ಧರ್ಮ’ವಾಗಿದೆ. ಅವರ ಬದುಕನ್ನು ಪೊರೆಯುವ ಕಡಲನ್ನು ಹೊರತುಪಡಿಸಿದ ಧರ್ಮ ಅವರಿಗಿಲ್ಲ. ಹಾಗೆಯೇ ಕೋಳಿಯ ಉದ್ಯಮವೂ ಈ ದೇಶದಲ್ಲಿ ಲಕ್ಷಾಂತರ ಜನರನ್ನು ಪೊರೆಯುತ್ತಿದೆ. ಕುರಿ, ಆಡಿನ ಮಾಂಸವೂ ಒಂದು ಉದ್ಯಮವಾಗಿ ಈ ದೇಶದಲ್ಲಿ ಬೆಳೆದಿದೆ. ಕುರಿ, ಆಡಿನ ಮಾಂಸ ತನ್ನ ದರದಿಂದಾಗಿ ಕೆಳವರ್ಗದ ಜನರ ಕೈಗೆಟಕದೇ ಇದ್ದಾಗ, ಗೋಮಾಂಸ ಅದನ್ನು ಪೊರೆದಿದೆ.

ತಳವರ್ಗದ ಜನರ ಹಬ್ಬ ಮಾಂಸವಿಲ್ಲದೆ ಪೂರ್ತಿಯಾಗುವುದಿಲ್ಲ. ಮಾಂಸದ ಪರಿಮಳದೊಂದಿಗೇ ಅವರ ಹಬ್ಬ ಸಂಭ್ರಮವನ್ನು ಪಡೆದುಕೊಳ್ಳುತ್ತದೆ. ಸಸ್ಯಾಹಾರಿಗಳ ಹಬ್ಬ ಸಸ್ಯಾಹಾರದ ಖಾದ್ಯಗಳ ಜೊತೆಗೆ ನಡೆಯುತ್ತದೆ. ಒಬ್ಬರ ಹಬ್ಬಗಳನ್ನು ಇನ್ನೊಬ್ಬರ ಆಹಾರದ ಜೊತೆಗೆ ತಳಕು ಹಾಕುವುದೇ ತಪ್ಪು. ಸಸ್ಯಾಹಾರಿಗಳ ಹಬ್ಬದ ದಿನ ಮಾಂಸಾಹಾರಿಗಳು ಮಾಂಸ ತ್ಯಜಿಸಬೇಕೆಂದು ಬಯಸುವುದು, ಮಾಂಸಾಹಾರಿಗಳ ಹಬ್ಬದ ದಿನ ಸಸ್ಯಾಹಾರಿಗಳು ಮಾಂಸವನ್ನು ಸೇವಿಸಿ ‘ಸೌಹಾರ್ದ’ವನ್ನು ಮೆರೆಯಬೇಕೆಂದು ಬಯಸಿದಷ್ಟೇ ಹಾಸ್ಯಾಸ್ಪದ. ಕನಿಷ್ಠ ಹಬ್ಬದ ದಿನವಾದರೂ ಮಾಂಸಹಾರವನ್ನು ತ್ಯಜಿಸಬೇಕು ಎಂಬ ಹೇಳಿಕೆಯಲ್ಲಿ ಪರೋಕ್ಷವಾಗಿ ಮಾಂಸಾಹಾರಿಗಳನ್ನು ‘ಅಪರಾಧಿ’ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರವಿದೆ. ‘ಮಾಂಸ’ವನ್ನು ಮುಖ್ಯವಾಹಿನಿಯಿಂದ ಹೊರಗಿಡುವ ಸಂಚಿದೆಈ ದೇಶದಲ್ಲಿ ಮಾಂಸ ಮತ್ತು ಮದ್ಯವನ್ನು ಒಂದೇ ತಕ್ಕಡಿಯಲ್ಲಿಡುವ ಪ್ರಯತ್ನ ಮೊದಲಿನಿಂದಲೂ ನಡೆದು ಬಂದಿದೆ. ಮಾಂಸ ಆಹಾರ, ಆದರೆ ಮದ್ಯ ಆಹಾರವಲ್ಲ. ಅದನ್ನು ಜೋಡಿಪದವಾಗಿ ಬಳಸುವುದೇ ಒಂದು ರಾಜಕೀಯ. ಜನರನ್ನು ಅವಿವೇಕದೆಡೆ ನಡೆಸುವ, ಅವರ ವಿವೇಕವನ್ನು, ಪ್ರಜ್ಞೆಯನ್ನು ನಾಶ ಮಾಡುವ ಪಾನೀಯ ಮದ್ಯ. ಅದನ್ನು ಸಾಧಾರಣವಾಗಿ ಅಕ್ಟೋಬರ್ 2, ಸೇರಿದಂತೆ ವಿವಿಧ ಹಬ್ಬಗಳ ಸಂದರ್ಭದಲ್ಲಿ ನಿಷೇಧಿಸುವ ಪದ್ಧತಿಯಿದೆ. ಚುನಾವಣೆಯ ಸಂದರ್ಭದಲ್ಲೂ ಮದ್ಯದಂಗಡಿಗಳನ್ನು ನಿಷೇಧಿಸಲಾಗುತ್ತಿದೆ. ಕಾನೂನು, ಶಾಂತಿ ಸುವ್ಯವಸ್ಥೆಗೆ ಇದು ಅತ್ಯಗತ್ಯ. ಆದರೆ ಮಾಂಸ ತಿಂದು ಯಾರೂ ಹಿಂಸೆಗಿಳಿದ ಘಟನೆ ಈವರೆಗೆ ನಡೆದ ಉದಾಹರಣೆಯಿಲ್ಲ.

   ಈ ಸಂದರ್ಭದಲ್ಲಿ ಯುವ ದಲಿತ ಕವಿಯೊಬ್ಬರು ಬರೆದ ‘ಗೋವು ತಿಂದು ಗೋವಿನಂತಾದವನು...’ ಎಂಬ ಕವಿತೆಯ ಸಾಲು ನೆನಪಾಗುತ್ತದೆ. ಈ ಸನಾತನ ದೇಶದಲ್ಲಿ ಬ್ರಾಹ್ಮಣರು ಮಾಂಸ ತಿನ್ನದೇ ಬದುಕಿದರು. ದಲಿತರು ದನ ತಿಂದು ಬದುಕಿದರು. ಆದರೆ ಇತಿಹಾಸದಲ್ಲಿ ದಲಿತರು ಬ್ರಾಹ್ಮಣರು ಹಲ್ಲೆ ನಡೆಸಿದ ಉದಾಹರಣೆಯೇ ಇಲ್ಲ. ಆದರೆ ಬ್ರಾಹ್ಮಣರು ದಲಿತರ ಮೇಲೆ ನಡೆಸಿದ ದೌರ್ಜನ್ಯಕ್ಕೆ ಲೆಕ್ಕವೇ ಇಲ್ಲ. ದನದ ಮಾಂಸ ತಿಂದು ದಲಿತರು ದನದ ಹಾಗೆ ಸಾತ್ವಿಕವಾಗಿ ಬದುಕಿದರು. ಸೊಪ್ಪು ಕಡ್ಡಿ ತಿಂದರೂ ಬ್ರಾಹ್ಮಣರೂ ವ್ಯಾಘ್ರರಂತೆ ಅವರ ಮೇಲೆ ಎರಗಿದರು. ಈಗ ಹೇಳಿ ಗಾಂಧಿ ಜಯಂತಿಯ ದಿನ ಬಾಡೂಟ ಮಾಡಿದ ಕಾರಣದಿಂದ ಗಾಂಧಿಗೆ ಅವಮಾನವಾಯಿತೆನ್ನುವುದು ನಂಬುವುದಕ್ಕೆ ಅರ್ಹ ವಿಷಯವೇ?

ಹಸಿವು ತಡೆಯಲಾಗದೆ ವಿಶ್ವಾಮಿತ್ರ ನಾಯಿ ಮಾಂಸವನ್ನೇ ತಿಂದ ಕತೆಯನ್ನು ಹೊಂದಿದ ದೇಶ ನಮ್ಮದು. ಇಂತಹ ದೇಶದಲ್ಲಿ ಸಾವಿರಾರು ಜನರ ಹೊಟ್ಟೆಯ ಮೇಲೆ ಹೊಡೆದು, ಲಕ್ಷಾಂತರ ಜನರ ಆಹಾರವನ್ನು ಕಿತ್ತುಕೊಂಡು ಅದಕ್ಕೆ ಸೌಹಾರ್ದದ ಹೆಸರನ್ನು ನೀಡುವುದು ಅಮಾನವೀಯ. ಮತ್ತು ಈ ಅಮಾನವೀಯತೆಗೆ ಅಕ್ಬರನ ಕತೆಯನ್ನು ಸಮರ್ಥನೆಯಾಗಿ ನೀಡುವುದು ನಮ್ಮ ನ್ಯಾಯ ವ್ಯವಸ್ಥೆಯ ವಿಡಂಬನೆಯೇ ಸರಿ. ಅಂತಹ ತೀರ್ಪನ್ನು ನ್ಯಾಯಾಧೀಶ ತನ್ನ ವೈಯಕ್ತಿಕ ನಂಬಿಕೆಯ ಆಧಾರದಲ್ಲಿ ನೀಡಿದ್ದಾನೆಯೇ ಹೊರತು, ಸಂವಿಧಾನದ ಆಧಾರದ ಮೇಲಲ್ಲ ಎನ್ನುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಧಾರ್ಮಿಕ ಹಬ್ಬಗಳೆನ್ನುವುದು ಆಯಾ ಧರ್ಮಗಳ ಖಾಸಗಿ ವಿಷಯಳು. ಹಬ್ಬದ ಹೆಸರಿನಲ್ಲಿ ಮೆರವಣಿಗೆ ಇತ್ಯಾದಿಗಳನ್ನು ಮಾಡಿ, ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಮಾಡಿದಷ್ಟೇ ಪ್ರಮಾದದಿಂದ ಕೂಡಿದೆ, ಹಬ್ಬದ ಹೆಸರಿನಲ್ಲಿ ಮಾಂಸಾಹಾರ ನಿಷೇಧ ಮಾಡುವುದು. ಇನ್ನೊಬ್ಬರ ಹಬ್ಬಕ್ಕಾಗಿ ಉಳಿದ ಧರ್ಮೀಯರು ತಮ್ಮ ಜೀವನಾವಶ್ಯಕ ಆಹಾರವನ್ನು ತ್ಯಜಿಸಬೇಕೆಂದು ಆದೇಶಿಸುವುದು. ಇದರಿಂದ ಸೌಹಾರ್ದ ಹೆಚ್ಚುವುದಿಲ್ಲ. ಪರಸ್ಪರ ಅಸಹನೆ ಬೆಳೆಯುತ್ತದೆ. ಹಸಿವಿಗಿಂತ ದೊಡ್ಡ ಹಿಂಸೆ ಬೇರಿಲ್ಲ. ಈ ದೇಶದಲ್ಲಿ 17 ಕೋಟಿ ಮಕ್ಕಳು ಆಹಾರದ ಕೊರತೆಯಿಂದ ನರಳುತ್ತಿದ್ದಾರೆ. ಇದು ಹಿಂಸೆ. ಇವರ ಉದರ ಯಾವತ್ತು ಸಂಪೂರ್ಣ ತುಂಬುತ್ತದೋ, ಅಂದು ಈ ದೇಶಕ್ಕೆ ನಿಜವಾದ ಹಬ್ಬ. ಅದುವೇ ನಿಜವಾದ ಸೌಹಾರ್ದ. ಅಂದು ಆಚರಿಸುವ ಗಾಂಧೀಜಯಂತಿಯೇ ನಿಜವಾದ ಅರ್ಥದ ಗಾಂಧೀಜಯಂತಿ.
(ಅಕ್ಟೋಬರ್ 5, 2007, ಶುಕ್ರವಾರ)