Thursday, November 1, 2012

ಮುಂಬೈ ಕನ್ನಡಿಗರು, ಕುದ್ರೋಳಿ ದೇವಸ್ಥಾನ ಮತ್ತು ವೈದಿಕ ಶಕ್ತಿಗಳ ಹುನ್ನಾರ!

ಶ್ರೀ ನಾರಾಯಣ ಗುರು
ಮುಂಬೈ ಕನ್ನಡ ಮತ್ತು ಅಲ್ಲಿನ ಗೆಳೆಯರು ನನ್ನ ಪಾಲಿಗೆ ಜೀವ ದ್ರವ್ಯವಿದ್ದಂತೆ. ವಾರಕ್ಕೊಮ್ಮೆ ಮುಂಬೈಯ ಯಾರಾದರೊಬ್ಬ ಗೆಳೆಯರು ಫೋನ್ ಕರೆ ಮಾಡಿದರೆ, ಮಂಗಳೂರಿನ ಬಿಸಿಲಿಗೆ ಒಣಗಿದ ನನ್ನ ಬರಡು ಬದುಕಲ್ಲಿ ಜೀವ ಚಿಮ್ಮಿ ಬಿಡುತ್ತದೆ. ಸಾಧಾರಣವಾಗಿ ವಾರಕ್ಕೊಮ್ಮೆ ಅಣ್ಣನಂತಹ ಗೆಳೆಯ ಸಾ.ದಯಾ(ದಯಾನಂದ ಸಾಲ್ಯಾನ್) ‘ಹೇಗಿದ್ದೀರಿ, ಏನು ಬರೆದಿದ್ದೀರಿ?’’ ಎಂಬ ಎರಡು ಶಬ್ದಗಳನ್ನು ಕೇಳದೇ ಇದ್ದಲ್ಲಿ ಏನೋ ಕಳೆದುಕೊಂಡ ಭಾವನೆ. ದಯಾ, ಗೋಪಾಲ್, ರವಿ ರ.ಅಂಚನ್, ಅರುಷಾ, ಕುಸುಮಾ ಹೀಗೆ ನನ್ನ ಹತ್ತು ಹಲವು ಗೆಳೆಯರು ನನ್ನನ್ನು ಮುಂಬೈ ಕನ್ನಡದ ಗಲ್ಲಿಗಳಲ್ಲಿ ಕೈ ಹಿಡಿದು ನಡೆಸಿದ್ದಾರೆ. ಒಂದು ರೀತಿಯಲ್ಲಿ ಮುಂಬೈಯ ಈ ಕನ್ನಡ ಜಗತ್ತು ನನ್ನ ಏಕಾಂತದ ಕನಸು. ಈ ಕನಸನ್ನು ಭಗ್ನಗೊಳಿಸುವ ರೀತಿಯಲ್ಲಿ ಎರಡು ದಿನಗಳ ಹಿಂದೆ ಮುಂಬೈಯಿಂದ ಫೋನ್ ಕರೆಯೊಂದು ಬಂದಿತ್ತು. ಮುಂಬೈಯಲ್ಲಿ ನಡೆದ ಒಂದು ಸಮಾವೇಶದ ಕುರಿತಂತೆ ಆತ್ಮೀಯರೊಬ್ಬರು ನನ್ನೊಂದಿಗೆ ಕೆಲವು ಮಾತುಗಳನ್ನು, ವಿಚಾರಗಳನ್ನು ಹಂಚಿಕೊಂಡರು. ನನ್ನ ಮುಂಗನ್ನಡದ ಮಾನಸ ಸರೋವರವನ್ನು ಅಪರಿಚಿತರಾರೋ ಕಲ್ಲು ಚೂರುಗಳನ್ನೆಸೆದು ಕಲಕಿದಂತೆ ಆ ಮಾತುಗಳಿಂದ ದುಗುಡಗೊಂಡೆ.

ಕರಾವಳಿಯ ತುಳುವರಿಗೆ ಮುಂಬಯಿ ಕಾಯಕದ ನಗರ. ತಾಯ್ನೆಲದ ಸಾಮಾಜಿಕ ಸಂಘರ್ಷಗಳು ಹೊಸ ಬಿಕ್ಕಟ್ಟನ್ನು ಸೃಷ್ಟಿಸಿದಾಗ, ಇಲ್ಲಿನ ಮೊಗವೀರರು, ಬಂಟರು, ಬಿಲ್ಲವ ತರುಣರು ಮುಂಬೈಯನ್ನು ಸೇರಿ, ಅಲ್ಲಿ ನೆಲೆಕಂಡು, ಬೇರು ಬಿಟ್ಟು, ಮುಂಗನ್ನಡವೆಂಬ ವಿಶಿಷ್ಟ ಸಂಸ್ಕೃತಿ ಕಟ್ಟಿ ಬೆಳೆಸಿದರು. ನಗರ ಶೈಲಿಯ ಹಿಂದಿ ಮಿಶ್ರಿತ ತುಳುಭಾಷೆಯೊಂದನ್ನು ರೂಢಿಸಿಕೊಂಡರು. ಜಾತಿಯ ನೆಲೆಯಲ್ಲೇ ಸಂಘಟಿತರಾಗಿ, ಆ ಮೂಲಕವೇ ತಮ್ಮ ಅಸ್ತಿತ್ವವನ್ನು ಮರಳಿ ಗಳಿಸಿಕೊಂಡರು. ಊರವರಿಂದ ಸೈ ಅನ್ನಿಸಿ ಕೊಂಡರು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಬಲರಾಗಿ, ಬಳಿಕ ಕನ್ನಡದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡರು.ಮುಂಬೈಯ ಜಾತಿ ಸಂಘಟನೆಗಳು ಇಲ್ಲಿನ ಕನ್ನಡತನಕ್ಕೆ ಎಲ್ಲೂ ಧಕ್ಕೆ ತರಲಿಲ್ಲ. ಬದಲಿಗೆ ಪೂರಕವಾಯಿತು. ಬಿಲ್ಲವರು, ಬಂಟರು, ಮೊಗವೀರರು ಕರ್ನಾಟಕ ಸಂಘದಲ್ಲಿ ಕನ್ನಡದ ಛತ್ರಿಯ ನೆರಳೊಳಗೆ ಸೇರಿಕೊಳ್ಳುವವರು. ಬದುಕಿನ ಅಳಿವು ಉಳಿವಿನ ಸಂದರ್ಭದಲ್ಲಿ ಮುಂಬೈಯನ್ನು ಆರಿಸಿಕೊಂಡಿದ್ದರೇ ಹೊರತು, ಹಣದ ದಾಹಕ್ಕಾಗಿ ಅವರು ಮುಂಬೈಗೆ ತೆರಳಿದವರಲ್ಲ. ತೆರಳಿದ ಬಳಿಕವೂ ತನ್ನ ತಾಯ್ನೆಲದ ಜೀವಜಲ ವನ್ನು ಉಳಿಸಿಕೊಂಡವರು.

ಆದರೆ ಒಂದು ವಾರದ ಹಿಂದೆ ಇಲ್ಲಿ ಒಂದು ಸಮಾವೇಶ ನಡೆಯಿತು. ಯಾವುದೇ ಅಧಿಕೃತ ಹೆಸರಿನಲ್ಲಿ ಗುರುತಿಸಿಕೊಳ್ಳದ ಕೆಲವರು ಒಟ್ಟು ಸೇರಿ ಮುಂಬೈಯಲ್ಲಿ ಭಾರತ ಭಾರತಿ ಎನ್ನುವ ಸಮಾವೇಷವನ್ನು ಕಳೆದವಾರ ಹಮ್ಮಿಕೊಂಡರು. ಅದಕ್ಕೆ ‘ಹಿಂದೂ ಕೌಟುಂಬಿಕ ಸಮ್ಮಿಲನ’ ಎಂಬ ಇನ್ನೊಂದು ಹೊರ ಮುಖವಾಡವನ್ನೂ ಹಾಕಲಾಯಿತು.ಇದೊಂದು ಸಾಂಸ್ಕೃತಿಕ ಸಮಾವೇಷವೆಂದು ಅಲ್ಲಿನ ವಿವಿಧ ಜಾತಿ ಸಂಘಟನೆಗಳನ್ನು, ಕನ್ನಡ ಸಂಘಟನೆಗಳನ್ನು ವಂಚಿಸಿ ಅವರನ್ನೆಲ್ಲ ಒಂದೆಡೆ ಸೇರಿಸಿ ಅವರಿಗೆ ಕೋಮು ವಿಷವನ್ನು ಉಣಿಸುವ ಪ್ರಯತ್ನವೊಂದು ಅಲ್ಲಿ ನಡೆಯಿತು. ಈ ಭಾರತ ಭಾರತಿ ಸಮಾವೇಶದಲ್ಲಿ ಮುಂಬೈಯ ಹಿರಿಯ ಕನ್ನಡಿಗರಿಗೆ ಹಿಂದುತ್ವದ ಉಪದೇಶ ನೀಡಲು ನಾಡಿನಿಂದ ತೆರಳಿದವರು ಇನ್ನಾರೂ ಅಲ್ಲ. ಉಪ್ಪಿನಂಗಡಿಯ ಸೌಹಾರ್ದವನ್ನು ಕೆಡಿಸಿ, ಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡಿರುವ ಪ್ರಭಾಕರ ಭಟ್, ಕೋಮು ರಾಜಕೀಯ ಮಾಡುವುದಕ್ಕಾಗಿಯೇ ಸೃಷ್ಟಿಯಾದ ಕರಾವಳಿಯ ಸುಬ್ರಹ್ಮಣ್ಯ ಭಟ್, ಆರೆಸ್ಸೆಸ್ ಮುಖಂಡ ಮೈ.ಚ.ಜಯದೇವ ಮೊದಲಾದವರು ಮುಂಬೈಯ ಕನ್ನಡಿಗರಿಗೆ ಹಿಂದುತ್ವದ ಬಾಲ ಬೋಧೆಗಳನ್ನು ಮಾಡಿದರು. ಯಾವುದೇ ಅಧಿಕೃತ ವಾರಸುದಾರರಿಲ್ಲದ ಈ ಭಾರತ ಭಾರತಿ ಸಮಾವೇಶದ ಉದ್ದೇಶವೇ ಮುಂಬೈ ಕನ್ನಡದ ಸೌಹಾರ್ದಮಯ ಬದುಕಿಗೆ ರಾಜಕೀಯ, ಕೋಮು ಮತ್ತು ಜಾತೀಯತೆಯ ವಿಷವನ್ನು ಬೆರೆಸುವುದು. ಇದನ್ನು ಎಷ್ಟು ಜಾಣತನದಿಂದ ಹಮ್ಮಿಕೊಳ್ಳಲಾಯಿತು ಎಂದರೆ ಕೆಲವರಿಗೆ ಪ್ರಭಾಕರ ಭಟ್ಟರು ಮತ್ತು ಅವರ ರಾಜಕೀಯ ಸಂಗಡಿಗರು ಇದರಲ್ಲಿ ಪಾಲುಗೊಳ್ಳುವ ವಿಷಯವನ್ನೇ ಮುಚ್ಚಿಡಲಾಗಿತ್ತು. ಕೊನೆಯ ಗಳಿಗೆಯಲ್ಲಿ ಇದನ್ನು ಪ್ರಕಟಪಡಿಸಲಾಯಿತು. ಈ ಕೋಮು ರಾಜಕೀಯ ಸಮಾವೇಶಕ್ಕೆ ಮುಂಬೈಯ ಎಲ್ಲ ಕನ್ನಡ ಸಂಘಗಳನ್ನು ಜಾಣತನದಿಂದ ಸದಸ್ಯರನ್ನಾಗಿ ಮಾಡಿಕೊಳ್ಳಲಾಯಿತು.ಮನುವಾದ ಮತ್ತು ವೈದಿಕಶಾಹಿಯ ನೇರ ಬಲಿಪಶುಗಳಾಗಿರುವ ಬಿಲ್ಲವರು, ಮೊಗವೀರರು ಮತ್ತು ಬಂಟ ಸಮುದಾಯಗಳ ಮೇಲಿನ ಹಿಡಿತವನ್ನು ಮತ್ತೆ ಗಟ್ಟಿ ಮಾಡಿಕೊಳ್ಳುವುದು, ಈ ಸಮುದಾಯದ ಜುಟ್ಟನ್ನು ಮತ್ತೆ ತಮ್ಮ ಕೈ ವಶ ಮಾಡಿಕೊಳ್ಳುವ ಏಕಮೇವ ಉದ್ದೇಶದಿಂದ ಮುಂಬೈಯಲ್ಲಿ ಇಂತಹದೊಂದು ಸಮಾವೇಶವನ್ನು ಮಾಡಲಾಗಿತ್ತು.

ಅತ್ಯಂತ ವಿಷಾದನೀಯ ಸಂಗತಿಯೆಂದರೆ, ಈ ಸಮವೇಶದಲ್ಲಿ ಮುಂಬೈ ಕನ್ನಡಿಗರ ತಾಯಿಯಂತಹ ಸುನೀತಾ ಶೆಟ್ಟಿ ಅಥವಾ ಎಲ್ಲರ ಮೆಚ್ಚಿನ ಸುನೀತಕ್ಕ(ನನ್ನ ಕವನ ಸಂಕಲವೊಂದನ್ನು ಇವರೇ ಬಿಡುಗಡೆ ಮಾಡಿದ್ದರು), ಅತ್ಯಂತ ನಿಷ್ಠುರ ವ್ಯಕ್ತಿತ್ವವೆಂದು ಗುರುತಿಸಲ್ಪಟ್ಟ ಡಾ.ಸಂಜೀವ ಶೆಟ್ಟಿ(ಮುಂಬೈಯಲ್ಲಿ ಎಂ.ಎ. ಕಲಿಯುತ್ತಿರುವ ಹೊತ್ತಿನಲ್ಲಿ ಇವರು ನನಗೆ ಗುರುಗಳು) ಈ ಸಮಾವೇಶದಲ್ಲಿ ಬಲಿಪಶುಗಳಾದುದು.ಹಿಂದುತ್ವದ ಕುರಿತಂತೆ ಪ್ರಭಾಕರ ಭಟ್ಟರು ಮತ್ತು ಅವರ ಶಿಷ್ಯರಿಗೆ 48ಗಂಟೆ ನಿರಂತರ ಪಾಠ ಹೇಳುವ ಸಾಮರ್ಥ್ಯವಿರುವವರು ಇವರು. ಈ ದೇಶದ ಸೌಹಾರ್ದ, ಸಂಸ್ಕೃತಿ, ಪರಂಪರೆ ಮೊದಲಾದವುಗಳ ಕುರಿತಂತೆ ಸುನೀತಕ್ಕ, ಸಂಜೀವ ಶೆಟ್ಟಿಯಂಥವರೇ ಪ್ರಭಾಕರ ಭಟ್, ಜಯದೇವ, ಸುಬ್ರಹ್ಮಣ್ಯ ಭಟ್‌ನಂತವರಿಗೆ ಸಮಾವೇಶದಲ್ಲಿ ಪಾಠ ತೆಗೆದುಕೊಂಡಿದ್ದಿದ್ದರೆ ಸಮಾವೇಶದ ಉದ್ದೇಶ ಸಾರ್ಥಕವಾಗುತ್ತಿತ್ತು. ನಿಜವಾದ ಹಿಂದುತ್ವವೆಂದರೆ ಏನು ಎನ್ನುವುದನ್ನು ಮುಂಬೈ ಕನ್ನಡಿಗರೇ ಈ ಪ್ರಭಾಕರ ಭಟ್ಟರಿಗೆ ಚೆನ್ನಾಗಿ ಕಲಿಸಿಕೊಡುತ್ತಿದ್ದರು. ಆದರೆ ದುರದೃಷ್ಟವಶಾತ್, ಹಿಂದುತ್ವದ ಬಗ್ಗೆ ಭಟ್ಟರು ಮುಂಬೈ ಕನ್ನಡಿಗರಿಗೆ ವಿವರಿಸಿಕೊಟ್ಟರು.

ಈ ವೇದಿಕೆಯಲ್ಲಿ ಇನ್ನೊಂದು ಅವಮಾನಕಾರಿ ವಿಷಯ ನಡೆಯಿತು. ಊರಿನಿಂದ ಸಾಮಾಜಿಕವಾಗಿ, ಧಾರ್ಮಿಕವಾಗಿ ತಿರಸ್ಕೃತರಾಗಿ, ಮುಂಬೈಯಲ್ಲಿ ನೆಲೆಕಂಡು, ಅಲ್ಲಿ ಮತ್ತೆ ತಮ್ಮ ಸ್ವಾಭಿಮಾನಿ ಬದುಕನ್ನು ಕಟ್ಟಿಕೊಂಡ ಬಿಲ್ಲವರಿಗೆ ಪ್ರಭಾಕರ ಭಟ್ಟರು ಛೀಮಾರಿ ಹಾಕಿದರಂತೆ. ಯಾಕೆಂದು ಕೇಳುತ್ತೀರಾ? ಕುದ್ರೋಳಿ ದೇವಸ್ಥಾನಕ್ಕೆ ಸೋನಿಯಾ ಗಾಂಧಿಯನ್ನು ಕರೆಸಿ ರುವುದಕ್ಕೆ? ಆ ಛೀಮಾರಿಯನ್ನು ಹಿರಿಯ ಬಿಲ್ಲವ ನಾಯಕರು ತಲೆತಗ್ಗಿಸಿ ಸ್ವೀಕರಿಸಿದರಂತೆ. ನಾರಾಯಣ ಗುರುವಿನ ಬದುಕು, ತತ್ವ, ಸಿದ್ಧಾಂತವನ್ನು ಒಂದಿಷ್ಟು ತಿಳಿದುಕೊಂಡಿದ್ದಿದ್ದರೆ ಆ ಬಿಲ್ಲವ ಮುಖಂಡರು ತಲೆತಗ್ಗಿಸುವ ಪ್ರಶ್ನೆ ಬರುತ್ತಿರಲಿಲ್ಲವೇನೋ? ಭಟ್ಟರಿಗೆ ಬಿಲ್ಲವರನ್ನು ಛೀಮಾರಿ ಮಾಡುವ ಧೈರ್ಯವೂ ಬರುತ್ತಿರಲಿಲ್ಲ ವೇನೋ?ಜಾತಿ, ಧರ್ಮ, ಮೇಲು, ಕೀಳು ಇತ್ಯಾದಿಗಳನ್ನೆಲ್ಲ ಮೀರಿ ಮಾನವೀಯ ತಳಹದಿಯಲ್ಲಿ ನಾರಾಯಣ ಗುರು ಸ್ಥಾಪಿಸಿದ ಕುದ್ರೋಳಿ ದೇವಸ್ಥಾನದ ಮೆಟ್ಟಿಲ ಮೇಲೆ ಕಾಲಿಡಲೂ ಯೋಗ್ಯತೆಯಿಲ್ಲದ ಪ್ರಭಾಕರ ಭಟ್ಟರಿಗೆ, ಪ್ರತಿಯಾಗಿ ಛೀಮಾರಿ ಹಾಕದೆ ಅವರನ್ನು ಹಾಗೆಯೇ ಮರಳಿ ಊರಿಗೆ ತಲುಪಿಸಿರುವುದು ಮುಂಬೈಯ ಬಿಲ್ಲವರ ಸಜ್ಜನಿಕೆಯನ್ನು, ಹಿರಿಮೆಯನ್ನು ಹೇಳುತ್ತದೆ. ಆದರೆ ಇಡೀ ಘಟನೆ ಕರಾವಳಿಯ ಬಹುಸಂಖ್ಯಾತರಾದ ಬಿಲ್ಲವರ ರಾಜಕೀಯ ದುರಂತವನ್ನು ಮಾತ್ರ ಹೊರಗೆಡಹಿತು. ಕರಾವಳಿಯ ಬಿಲ್ಲವರ ರಾಜಕೀಯ ಏಳು-ಬೀಳುಗಳ ಹಿಂದಿರುವ ಕುದ್ರೋಳಿ ದೇವಸ್ಥಾನ, ನಾರಾಯಣ ಗುರುಗಳ ಮಂಗಳೂರು ಭೇಟಿ, ಈ ದೇವಸ್ಥಾನವನ್ನು ಮುಂದಿಟ್ಟು ವೈದಿಕ ಶಕ್ತಿಗಳು ಹೂಡಿದ ಸಂಚು ಇವೆಲ್ಲವನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವುದು ನನ್ನ ಈ ಬರಹದ ಉದ್ದೇಶ.

***
ನಾರಾಯಣ ಗುರುಗಳು ಮಂಗಳೂರಿಗೆ ಮೊತ್ತ ಮೊದಲು ಪಾದವೂರಿದ್ದು ಸುಮಾರು 1908ರಲ್ಲಿ. ಅವರು ಮಂಗಳೂರಿಗೆ ಆಗಮಿಸುವುದಕ್ಕೆ ಕಾರಣಕರ್ತರಾದ ಹಲವು ಬಿಲ್ಲವ ನಾಯಕರಿದ್ದರೂ, ಅದರಲ್ಲಿ ಮುಖ್ಯ ಹೆಸರು ಸಾಹುಕಾರ್ ಕೊರಗಪ್ಪ ಪೂಜಾರಿಯವರದು. ನಾರಾಯಣ ಗುರುಗಳು ಮತ್ತು ಕೊರಗಪ್ಪ ಪೂಜಾರಿಯವರ ಭೇಟಿ ಒಂದು ಯೋಗಾಯೋಗ ಎನ್ನಬೇಕು. ಕರಾವಳಿಯ ಬಿಲ್ಲವರು ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ತಲೆಯೆತ್ತಿ ನಿಲ್ಲುವುದಕ್ಕೆ ಈ ಭೇಟಿ ಒಂದು ಪೀಠಿಕೆಯಾಯಿತು.

 ಅಬ್ದುಂಞಿ ರಝಾಕಾರ್ ಎಂಬ ಹಿರಿಯ ಮುಸ್ಲಿಂ ಉದ್ಯಮಿ ಅಂದು ಮಂಗಳೂರಿನ ಹಿರಿಯ ವ್ಯಾಪಾರಿಗಳೆಂದು ಗುರುತಿಸಲ್ಪಟ್ಟವರು. ಒಣ ಮೀನು, ಸಾಂಬಾರ ಪದಾರ್ಥ ಇತ್ಯಾದಿಗಳನ್ನು ಅವರು ಶ್ರೀಲಂಕಾ, ಸೌದಿ ಅರೇಬಿಯಾ ಮೊದಲಾದೆಡೆಗೆ ಹಡಗಿನ ಮೂಲಕ ಸಾಗಿಸುತ್ತಿದ್ದರು. ರಝಾಕಾರ್‌ರ ಜೊತೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದವರು ಕೊರಗಪ್ಪ ಪೂಜಾರಿ.ಕುದ್ರೋಳಿ ದೇವಸ್ಥಾನದ ಉಗಮದ ಹಿಂದೆ ಬಿಲ್ಲವ-ಮುಸ್ಲಿಮರ ನಡುವಿನ ಒಂದು ಸೌಹಾರ್ದ ಬಂಧವೂ ಕೆಲಸ ಮಾಡಿದೆ. ರಝಾಕಾರ್ ಮತ್ತು ಕೊರಗಪ್ಪ ಅವರ ನಡುವಿನ ಸಂಬಂಧ ಎಷ್ಟು ಹತ್ತಿರವಿತ್ತು ಎಂದರೆ ಅದು ರಝಾಕಾರ್ ಅವರ ಮಕ್ಕಳ ಕಾಲದಲ್ಲೂ ಮುಂದುವರಿಯಿತು. ರಝಾಕಾರ್ ಅವರ ಪುತ್ರ ರಹಿಮಾನ್ ಅವರು ಕೊರಗಪ್ಪ ಪೂಜಾರಿಯವರನ್ನು ತಮ್ಮ ವ್ಯಾಪಾರದ ಪಾಲುದಾರರಾಗಿ ಮಾಡಿಕೊಂಡರು. ಹೀಗೆ ಕೆಲಸದವರಾಗಿ ಸೇರಿದ್ದ ಕೊರಗಪ್ಪ ಪೂಜಾರಿಗಳು ಮುಂದೆ ಸಾಹುಕಾರ್ ಕೊರಗಪ್ಪರಾಗಿ ಬದಲಾದರು. ಸಿ.ಅಬ್ದುಲ್ ರಹಿಮಾನ್ ಎಂಡ್ ಕೊರಗಪ್ಪ ಕಂಪೆನಿ ಎಂಬ ಪಾಲುದಾರಿಕೆಯ ಸಂಸ್ಥೆಯೊಂದನ್ನು ಮಾಡಿಕೊಂಡು ತಮ್ಮ ವ್ಯಾಪಾರವನ್ನು ಇನ್ನಷ್ಟು ವಿಸ್ತರಿಸಿದರು. ಶ್ರೀಲಂಕಾ, ಅರೇಬಿಯಾದಲ್ಲಿ ವ್ಯಾಪಾರ ಇನ್ನಷ್ಟು ಕುದುರಿತು.


ಕೊರಗಪ್ಪ ಪೂಜಾರಿಯವರು ಕುದ್ರೋಳಿಯಲ್ಲಿ ಗೋಕರ್ಣ ದೇವಸ್ಥಾನ ನಿರ್ಮಾಣ ಮಾಡಿದುದರ  ಹಿಂದೆ ಒಂದು ವಿಷಾದನೀಯ ಘಟನೆ ಇದೆ. ಕೊರಗಪ್ಪ ಅವರು ಸಾಹುಕಾರರಾದ ಮೇಲೆ ಗೋಕರ್ಣಕ್ಕೆ ಹೋದಾಗ ಅಲ್ಲಿಯ ದೇವಸ್ಥಾನಕ್ಕೂ ಭೇಟಿ ನೀಡಿದರು. ಇವರ ವ್ಯಕ್ತಿತ್ವ, ಅಂತಸ್ತು ಕಂಡು ದೇವಸ್ಥಾನದ ಅರ್ಚಕರು ಸ್ವಾಗತಿಸಿ, ಊಟ, ಪ್ರಸಾದ ನೀಡಿದರು. ಹೊರಡುವ ಹೊತ್ತಲ್ಲಿ, ಕೊರಗಪ್ಪ ಪೂಜಾರಿಯವರು ಬಿಲ್ಲವ ಜಾತಿಗೆ ಸೇರಿದವರು ಎನ್ನೋದು ಗೊತ್ತಾಗಿ, ಅವರನ್ನು ತಡೆದು ದಂಡ ಕಾಣಿಕೆಯನ್ನು ಪಡೆದರು. ಇದರಿಂದ ಕೊರಗಪ್ಪ ಪೂಜಾರಿಯವರಿಗೆ ತೀವ್ರ ಅವಮಾನವಾಯಿತು. ಆರ್ಥಿಕವಾಗಿ ಉನ್ನತ ಸ್ಥಾನದಲ್ಲಿದ್ದರೂ ಅವರಿಗೆ ಅಲ್ಲಿ ಜಾತಿ ಕಾರಣಕ್ಕಾಗಿ ಅವಮಾನವಾಯಿತು.

ಇದೇ ಸಂದರ್ಭದಲ್ಲಿ ಸಾಹುಕಾರ್ ಕೊರಗಪ್ಪ ಪೂಜಾರಿಯವರ ಸೋದರನಿಗೆ ಮಾರಕ ಕಾಯಿಲೆಯೊಂದು ಎರಗಿತು. ಯಾವ ಔಷಧಿಯಿಂದಲೂ ಅವರ ಕಾಯಿಲೆ ಗುಣವಾಗಲಿಲ್ಲ. ಆಗ ಯಾರೋ ಅವರಿಗೆ ‘ಕೇರಳದಲ್ಲಿ ಒಬ್ಬ ಭಟ್ರು ಇದ್ದಾರೆ. ಅವರು ಬಲ್ಮೆ ಹೇಳಿ ಗುಣಪಡಿಸುತ್ತಾರೆ’ ಎಂದು ಹೇಳಿದರಂತೆ. ಹಾಗೆ ತಮ್ಮ ಸೋದರನನ್ನು ಅವರು ಕೇರಳಕ್ಕೆ ಕರೆದುಕೊಂಡು ಹೋದರು. ಅಲ್ಲಿ ನೋಡಿದರೆ ಯಾವುದೇ ಭಟ್ರು, ಜೋಯಿಸರು ಇರಲಿಲ್ಲ. ಬದಲಿಗೆ, ಇವರನ್ನು ತಮ್ಮಂತೆಯೇ ಸ್ವೀಕರಿಸುವ ನಾರಾಯಣ ಗುರುಗಳಿದ್ದರು. ಆಯುರ್ವೇದದಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ್ದ ನಾರಾಯಣ ಗುರುಗಳು ಇವರನ್ನು ತಮ್ಮ ಬಾಹುಗಳಲ್ಲಿ ತೆಗೆದುಕೊಂಡದ್ದು ಅಚ್ಚರಿಯನ್ನುಂಟು ಮಾಡಿತು. ಸಾಹುಕಾರ ಕೊರಗಪ್ಪನವರು ಅದೆಷ್ಟೇ ಶ್ರೀಮಂತರಾಗಿದ್ದರೂ ವೈದಿಕರಿಗೆ ಅಸ್ಪೃಶ್ಯರಾಗಿದ್ದರು. ಸಾಮಾಜಿಕವಾಗಿ ವೈದಿಕರ ಮುಂದೆ ತಲೆಯೆತ್ತಿ ನಿಲ್ಲುವುದು ಅಸಾಧ್ಯವಾಗಿತ್ತು. ಅದರಲ್ಲೂ ಕೊರಗಪ್ಪರಿಗೆ ಮಂಗಳೂರಿನ ಮುಸ್ಲಿಮರ ಜೊತೆಗೆ ವ್ಯಾಪಾರ ಸಂಬಂಧ, ಒಡನಾಟ, ಸ್ನೇಹ ಇತ್ಯಾದಿಗಳಿವೆ. ಆದುದರಿಂದ ಮೇಲ್ವರ್ಗಕ್ಕೆ ಕೊರಗಪ್ಪನವರು ಸದಾ ಅಸಹನೆಯ ವಿಷಯವೇ ಆಗಿದ್ದರು. ಈವರೆಗೆ, ಸ್ವಾಮೀಜಿಗಳೆಂದರೆ ಮೇಲ್ಜಾತಿಯವರು ಎಂದು ತಿಳಿದವರಿಗೆ ಮೊದಲ ಬಾರಿಗೆ ಜಾತಿರಹಿತ ಸ್ವಾಮೀಜಿಯೊಬ್ಬರು ಮುಖಾಮುಖಿಯಾಗಿದ್ದರು. ಕೆಲವೇ ದಿನಗಳಲ್ಲಿ ಕೊರಗಪ್ಪ ಪೂಜಾರಿಯ ಸೋದರ ಗುಣಮುಖರಾದರು.

ಈ ಅವಧಿಯಲ್ಲಿ ನಾರಾಯಣಗುರುಗಳು ಎಲ್ಲ ಜಾತಿಯನ್ನು ಒಂದೇ ಎಂದು ಬಗೆಯುವ, ಮೇಲು-ಕೀಳೆನ್ನುವುದನ್ನು ಯೋಚಿಸದ, ನಮ್ಮದೇ ಬಿಲ್ಲವ ಸಮುದಾಯಕ್ಕೆ ಸೇರಿದ ಸ್ವಾಮಿ ಎನ್ನುವುದನ್ನು ಅರಿತಾಗ ಅವರು ರೋಮಾಂಚಿತರಾದರು. ಗುರುಗಳನ್ನು ಮಂಗಳೂರಿಗೆ ಬರಬೇಕು ಎಂದು ಆಹ್ವಾನಿಸಿದರು. ಆಗ ಗುರುಗಳು ತನ್ನದೇ ಆದ ಅಪೇಕ್ಷೆಯನ್ನು ಮುಂದಿಟ್ಟರು. ಅದರಲ್ಲಿ ಮುಖ್ಯವಾದುದು ಮೂರು. 1. ಬಿಲ್ಲವರು ಮೂರ್ತೆಧಾರಿಕೆಯನ್ನು ಬಿಡಬೇಕು. ಅಂದರೆ ಶೇಂದಿ ಮಾರುವುದನ್ನು ನಿಲ್ಲಿಸಬೇಕು. ಕೈಮಗ್ಗ, ಕೃಷಿ, ವ್ಯಾಪಾರ ಮೊದಲಾದ ಮುಖ್ಯವಾಹಿನಿಯ ಕಸುಬುಗಳನ್ನು ಮಾಡುತ್ತಾ ಸಾಮಾಜಿಕವಾಗಿ ಎತ್ತರದ ಸ್ಥಾನಕ್ಕೆ ಏರಬೇಕು.
2. ಮಂಗಳೂರಿನಲ್ಲಿ ಎಲ್ಲ ಜಾತಿ, ಧರ್ಮದ ವಿದ್ಯಾರ್ಥಿಗಳು ಕಲಿಯಲು ಅನುಕೂಲವಾಗುವಂತೆ ಒಂದು ಶಾಲೆಯನ್ನು ತೆರೆಯಬೇಕು.
3. ಕೀಳು-ಮೇಲುಗಳಿಲ್ಲದ, ಎಲ್ಲ ಜಾತಿಗಳನ್ನು ಒಂದೇ ಎಂದು ಬಗೆಯುವುದಕ್ಕಾಗಿ ಒಂದು ದೇವಸ್ಥಾನವನ್ನು ನಿರ್ಮಾಣ ಮಾಡಬೇಕು.

ಕೊರಗಪ್ಪ ಪೂಜಾರಿಯವರು ಅದಕ್ಕೆ ಒಪ್ಪಿ ಮಂಗಳೂರಿಗೆ ಮರಳಿದರು. ಬಂದವರೇ ಬಿಲ್ಲವ ಹಿರಿಯರನ್ನು ಒಟ್ಟು ಸೇರಿಸುವ ಕೆಲಸದಲ್ಲಿ ತೊಡಗಿದರು. ಜಾತೀಯತೆಯ ಕುರಿತ ಜಾಗೃತಿಯನ್ನು ಹಂಚುತ್ತಾ, ನಾರಾಯಣ ಗುರುಗಳನ್ನು ಕರೆಸುವ ಕುರಿತು ನೀಲನಕ್ಷೆಯನ್ನು ಹಾಕಿದರು. ಅಂತೆಯೇ 1908ರಲ್ಲಿ ನಾರಾಯಣಗುರುಗಳ ಸಮ್ಮುಖದಲ್ಲಿ ಬಿಲ್ಲವ ಹಿರಿಯರ ಸಭೆಯೊಂದು ನಡೆಯಿತು. ಶೆಡ್ಡೆ ಸೋಮಯ್ಯ ಮೇಸ್ತ್ರಿ, ಐತಪ್ಪ ಪೂಜಾರಿ, ಅಮ್ಮಣ್ಣ ಮೇಸ್ತ್ರಿ, ಕಾಂಟ್ರಾಕ್ಟರ್ ಧೂಮಪ್ಪ ಪೂಜಾರಿ ಹೀಗೆ ಎಲ್ಲ ಗಣ್ಯರು ಆ ಸಭೆಯಲ್ಲಿ ಭಾಗವಹಿಸಿದ್ದರು.ಆ ಸಂದರ್ಭದಲ್ಲಿ ಮಂಗಳೂರಿನ ನೆಹರೂ ಮೈದಾನದ ಸ್ಥಳ ಬಿಲ್ಲವರ ಕೈಯಲ್ಲಿತ್ತು. ದೇವಸ್ಥಾನ ಎಲ್ಲಿ ನಿರ್ಮಿಸಬಹುದು ಎನ್ನುವಾಗ ಹಲವರಲ್ಲಿ ಈ ಸ್ಥಳದ ಕುರಿತಂತೆ ಸಮ್ಮತಿಯ ಅಭಿಪ್ರಾಯವಿತ್ತು. ಆದರೆ ನಾರಾಯಣ ಗುರುಗಳು ಕುದ್ರೋಳಿಯನ್ನು ಆರಿಸಿದರು. ವಿಶೇಷವೆಂದರೆ, ಕುದ್ರೋಳಿ ಮುಸ್ಲಿಂ ಬಾಹುಳ್ಯದ ಸ್ಥಳ. ಅದರಲ್ಲೂ ಕಸಾಯಿಖಾನೆಯಿರುವ ಸ್ಥಳ. ಕುದುರೆಗಳನ್ನು ಕಟ್ಟುತ್ತಿದ್ದ ಸ್ಥಳ. ಆದರೆ ಇಂತಹ ಸ್ಥಳವನ್ನೇ ನಾರಾಯಣ ಗುರುಗಳು ಆರಿಸುವಾಗ ಅವರಲ್ಲಿ ದೂರದೃಷ್ಟಿಯೊಂದು ಕೆಲಸ ಮಾಡಿತ್ತು. ಇತರ ಸಮುದಾಯಗಳೊಂದಿಗೆ ಬೆರೆಯುವ ಆಶಯ ಅದರಲ್ಲಿತ್ತು. ಕುದ್ರೋಳಿ ಮುಸ್ಲಿಮರ ಜೊತೆಗೆ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದ ಕೊರಗಪ್ಪ ಪೂಜಾರಿಯವರಿಗೆ ಅಲ್ಲಿ ದೇವಸ್ಥಾನ ನಿರ್ಮಿಸುವುದು ಕಷ್ಟವಾಗಿರಲಿಲ್ಲ.ಕುದ್ರೋಳಿಯ ಮುಸ್ಲಿಮರು ಕೊರಗಪ್ಪ ಪೂಜಾರಿಯವರಿಗೆ ಸಂಪೂರ್ಣ ಸಹಕಾರ ನೀಡಿದರು. ಅಂದೇ ನಾರಾಯಣ ಗುರುಗಳು ದೇವಸ್ಥಾನಕ್ಕೆ ಚೌಕಟ್ಟು ಹಾಕಿದರು. 1912ರಲ್ಲಿ ಕರಾವಳಿಯ ಬಿಲ್ಲವರ ಪಾಲಿಗೆ ಮಾತ್ರವಲ್ಲ, ದೇವಸ್ಥಾನ ಪ್ರವೇಶಿಸಲು ಅವಕಾಶವಿಲ್ಲದ ಎಲ್ಲ ಶೂದ್ರರ ಪಾಲಿಗೆ ಸಾಮಾಜಿಕವಾಗಿ ಬಿಡುಗಡೆಯ ಸಂಕೇತವೊಂದನ್ನು ತೋರಿಸಿಕೊಟ್ಟರು. ಅಂದು ಫೆಬ್ರವರಿ ತಿಂಗಳಲ್ಲಿ ನಾರಾಯಣ ಗುರುಗಳು ಮಂಗಳೂರಿನ ಕುದ್ರೋಳಿಯಲ್ಲಿ ಶಿವಲಿಂಗವನ್ನು ಪ್ರತಿಷ್ಠೆ ಮಾಡಿದರು. ಸ್ವಾತಂತ್ರ ಹೋರಾಟದ ಕಾವು ಮಂಗಳೂರಿನಲ್ಲಿ ಜಾಗೃತವಾಗಿದ್ದಾಗಲೇ ಈ ಪ್ರಕ್ರಿಯೆಯೂ ನಡೆದಿರುವುದು ಮುಂದಿನ ಬೆಳವಣಿಗೆಗಳಿಗೆ ಅನುಕೂಲವಾಯಿತು.

ದೇವಸ್ಥಾನ ಮೊತ್ತಮೊದಲು ಎದುರಿಸಿದ್ದು ಅರ್ಚಕರ ಸಮಸ್ಯೆಯನ್ನು. ಕೇರಳದಲ್ಲಿ ನಂಬೂದ್ರಿಗಳು, ಹೊರಗಿನಿಂದ ಬಂದ ಬ್ರಾಹ್ಮಣರಿಗೆ ಪೋತಿ ಎಂದು ಕರೆಯುತ್ತಿದ್ದರು. ಅದಕ್ಕೆ ಪರ್ಯಾಯವಾಗಿ ನಾರಾಯಣ ಗುರುಗಳು ಶಾಂತಿ ಎಂಬ ಪದವನ್ನು ಬಳಸಿದರು. ನಂಬೂದರಿಗಳ ಪೋತಿ ಜನಿವಾರ ಹಾಕುತ್ತಿದ್ದರೆ, ನಾರಾಯಣ ಗುರುಗಳ ಶಾಂತಿ ಜನಿವಾರ ರಹಿತನಾಗಿದ್ದ. ಆರಂಭದಲ್ಲಿ ಪುತ್ಥಳಿ ಬಾಳಪ್ಪ ಅರ್ಚಕರಾದರು. ಮುಂದೆ ಕೃಷ್ಣ ಶಾಂತಿ ಅರ್ಚಕರಾಗಿ ಮುಂದುವರಿದರು. ಕೃಷ್ಣ ಶಾಂತಿಗೆ ನಾರಾಯಣಗುರುಗಳೇ ತರಬೇತಿಯನ್ನೂ ನೀಡಿದ್ದರು. ಹೀಗೆ ಮಂಗಳೂರಿನಲ್ಲಿ ಮೊತ್ತ ಮೊದಲ ಬಾರಿಗೆ ಬಿಲ್ಲವರಿಂದ ವೈದಿಕರ ವಿರುದ್ಧ ಒಂದು ಬಂಡಾಯ ಆರಂಭವಾಯಿತು. ಜನಿವಾರವಿಲ್ಲದ ಶಾಂತಿ ಅವರ ಪೂಜೆ ಪುರಸ್ಕಾರಗಳನ್ನು ನಿರ್ವಹಿಸುವಂತಾದರು. ಆದರೆ ಕುದ್ರೋಳಿ ದೇವಸ್ಥಾನದ ವಿರುದ್ಧ ವೈದಿಕರಿಂದ ಒಳಸಂಚುಗಳು ನಡೆಯುತ್ತಲೇ ಇದ್ದವು. ಬಿಲ್ಲವ ಮುಖಂಡರನ್ನೇ ಬಳಸಿಕೊಂಡು ಅವರು ಅದನ್ನು ತಮ್ಮ ಕೈಗೆ ತೆಗೆದುಕೊಳ್ಳುವ ವಿಫಲ ಪ್ರಯತ್ನ ಮಾಡಿದರು. ಆದರೆ ದುರದೃಷ್ಟವಶಾತ್ ಕೆಲವು ವಿಷಯಗಳಲ್ಲಿ ಅವರು ಯಶಸ್ವಿಯಾದರು. ಮೊತ್ತ ಮೊದಲಾಗಿ, ಅರ್ಚಕರಿಗೆ ಜನಿವಾರ ಹಾಕಿಸುವ ಅವರ ಯತ್ನ ಯಶಸ್ವಿಯಾಯಿತು.

 ಕುದ್ರೋಳಿಯ ದೇವಸ್ಥಾನದ ವಿಷಯದಲ್ಲಿ ಮೊತ್ತ ಮೊದಲು ಬಿಲ್ಲವರೊಳಗೆ ಒಡಕು ಕಾಣಿಸಿಕೊಂಡದ್ದು 1947ರಲ್ಲಿ. ಆಗ ಕರ್ಕೇರ ಎಂಬವರು ದೇವಸ್ಥಾನ ಮಂಡಳಿಯ ಅಧ್ಯಕ್ಷರಾಗಿದ್ದರು. ಮೊದಲ ಬಾರಿಗೆ ದಲಿತರನ್ನು ದೇವಸ್ಥಾನಕ್ಕೆ ಪ್ರವೇಶಿಸುವ ಪ್ರಯತ್ನವೊಂದು ಈ ಸಂದರ್ಭದಲ್ಲಿ ನಡೆಯಿತು. ಆಗ ಇಲ್ಲಿನ ಕೆಲವು ವೈದಿಕ ಶಕ್ತಿಗಳು ಬಿಲ್ಲವರೊಂದಿಗೆ ಸೇರಿಕೊಂಡು ಒಡಕು ಬಿತ್ತುವುದಕ್ಕೆ ಆರಂಭಿಸಿದರು.ಕೆಲವು ಬಿಲ್ಲವ ಹಿರಿಯರು ದಲಿತರು ದೇವಸ್ಥಾನ ಪ್ರವೇಶಿಸುವುದನ್ನು ವಿರೋಧಿಸಿದರು. ಕೊನೆಗೂ ಭಿನ್ನಾಭಿಪ್ರಾಯಗಳ ನಡುವೆಯೇ ದಲಿತರು ದೇವಸ್ಥಾನವನ್ನು ಪ್ರವೇಶಿಸಿದರು. ದಲಿತರು ದೇವಸ್ಥಾನವನ್ನು ಪ್ರವೇಶಿಸುವುದನ್ನು ತಡೆಯುವುದೆಂದರೆ ಸ್ವತಃ ನಾರಾಯಣ ಗುರುಗಳೇ ದೇವಸ್ಥಾನ ಪ್ರವೇಶಿಸುವುದನ್ನು ತಡೆದಂತೆ ಎಂಬ ಸತ್ಯವನ್ನು ಕೆಲ ಬಿಲ್ಲವರು ವೈದಿಕಶಕ್ತಿಗಳ ಮಾತಿಗೆ ಕಿವಿಯಾಗಿ ಮರೆತು ಬಿಟ್ಟರು. ಯಾಕೆಂದರೆ, ನಾರಾಯಣ ಗುರುಗಳಿಗೆ ಅಡುಗೆ ಕೆಲಸವನ್ನು ಮಾಡುತ್ತಿದ್ದವರು ದಲಿತರೇ ಆಗಿದ್ದರು. ಆ ಕಾಲದಲ್ಲಿ ಅಡುಗೆ ಕೆಲಸಕ್ಕೆ ನಾರಾಯಣಗುರುಗಳು ದಲಿತರನ್ನು ನೇಮಕ ಮಾಡಿಕೊಂಡಿದ್ದರು. ಇದಾದ ಬಳಿಕ ವೈದಿಕಶಕ್ತಿ ವಾಮನನಂತೆ ಬಿಲ್ಲವರ ಮೇಲೆ ತನ್ನ ಮೂರನೆ ಪಾದವನ್ನು ಊರಿದ್ದು 1989ರಲ್ಲಿ. ಅದಕ್ಕೆ ನೇರ ಹೊಣೆ ಇಂದಿನ ಮಾಜಿ ಸಚಿವ ಜನಾರ್ದನ ಪೂಜಾರಿ. ಆ ಮೂರನೆ ಪಾದವನ್ನು ತನ್ನ ತಲೆಯ ಮೇಲೆ ಊರಲು ಬಿಟ್ಟ ಕಾರಣವೇ ಇಂದು ಜನಾರ್ದನ ಪೂಜಾರಿ, ರಾಜಕೀಯವಾಗಿ ಸಂಪೂರ್ಣ ಬೀದಿಪಾಲಾಗಿ ಅಂಡಲೆಯುತ್ತಿದ್ದಾರೆ. ತಮ್ಮ ಸ್ವಯಂಕೃತಾಪರಾಧಕ್ಕೆ ಬೆಲೆ ತೆರುತ್ತಿದ್ದಾರೆ. ಇದನ್ನು ನಾನು ಮುಂದಿನ ವಾರ ಬರೆಯುತ್ತೇನೆ.

3 comments:

  1. ಲೇಖನ ಒಳ್ಳೆಯದಾಗಿದೆ. ಲೇಖನದ ಆಶಯವು ಒಳ್ಳೆಯದಾಗಿದೆ...

    ReplyDelete
  2. ತಮ್ಮ ಇಡೀ ಬರಹ, ತಮ್ಮ ವಿಚಾರಗಳು ಮೆಚ್ಚುವಂತಹದ್ದು. ಬಹಳ ಚೆನ್ನಾಗಿ ಬರೆದಿದ್ದೀರಿ. ತುಂಬಾ ಧನ್ಯವಾದಗಳು....

    ReplyDelete
  3. ಇದೇ ರೀತಿ ಮುಸ್ಲಿಂರ ಬಗ್ಗೆ ಬರೆದು ನೀವು ನೆಮ್ಮದಿಯಿಂದ ಕೈ ಕಾಲು ಸರಿ ಇಟ್ಟುಕೊಂಡು ತಿರುಗಾಡುವುದಕ್ಕೆ ಉಂಟಾ? ಪಾಕಿಸ್ತಾನಿ ಉಗ್ರರ ಹಿಟ್ ಲಿಸ್ಟ್ ಗೆ ನಿಮ್ಮ ಹೆಸರು ಸೇರುತ್ತಿತ್ತು. ಹಿಂದುಗಳ ಬಗ್ಗೆ ವಿಮರ್ಶೆ ಮಾಡಿ ಇನ್ನೂ ನೀವು ನೆಟ್ಟಗೆ ನಿಂತಿರುವುದಾದರೆ ಅದಕ್ಕೆ ಕಾರಣ ಹಿಂದುಗಳ ಮತ ಸಹಿಷ್ಣುತೆ ಸ್ವಾಮಿ. ಸುಮ್ಮನೇ ವಿಮರ್ಷೆಮಾಡುವುದು ಸುಲಭ.

    ReplyDelete