Thursday, November 22, 2012

ಎದೆಯ ಧ್ವನಿಯನ್ನು ಆಲಿಸೋಣ....

ಸಮೂಹದೊಂದಿಗೆ ಸೇರಿ ರಾಕ್ಷಸನಂತಾಡುವ ಮನುಷ್ಯನನ್ನು ನೀವು ಯಾವತ್ತಾದರೂ ಖಾಸಗಿ ಯಾಗಿ ಭೇಟಿಯಾಗಿ ನೋಡಿ. ನಿಮಗೆ ಕೆಲವು ಆಘಾತಕಾರಿಯಾದ ಅಂಶಗಳು ದೊರೆಯುತ್ತವೆ. ಅರೆ! ನಾನು ಈವರೆಗೆ ಓದಿರುವುದು, ಕೇಳಿರುವುದು ಇದೇ ಮನುಷ್ಯನ ಕುರಿತೆ? ಎಂಬ ಅಚ್ಚರಿಗೆ ನೀವು ಒಳಗಾಗುತ್ತೀರಿ. ಗಾಂಧೀಜಿ ಈ ಕಾರಣಕ್ಕೆ ಸಮೂಹಕ್ಕಿಂತಲೂ ಮನುಷ್ಯನನ್ನು ಖಾಸಗಿಯಾಗಿ ಮುಖಾಮುಖಿಯಾಗಲು ಇಷ್ಟ ಪಡುತ್ತಿದ್ದರು. ಆದುದರಿಂದಲೇ, ಅವರು ಎಂತಹ ರಾಕ್ಷಸ ಗುಣದ ಮನುಷ್ಯನನ್ನು ಎದುರಿಸಲೂ ಅಂಜುತ್ತಿರಲಿಲ್ಲ. ಯಾಕೆಂದರೆ ಒಂಟಿ ಮನುಷ್ಯನ ಕುರಿತಂತೆ ಅವರಿಗೆ ಅಗಾಧ ಭರವಸೆಯಿತ್ತು. ಹೃದಯದ ಜೊತೆಗೆ ಮಾತನಾಡುವುದು ಅವರಿಗೆ ಕರತಲಾಮಲಕ ವಾಗಿತ್ತು.
   
ನಾನು ಮಂಗಳೂರಿನಲ್ಲಿ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿರುವಾಗ ಒಂದು ಘಟನೆ ನಡೆಯಿತು. ಸುರತ್ಕಲ್ ಗಲಭೆಯ ಕುರಿತಂತೆ ಮಂಗಳೂರಿನಲ್ಲಿ ಸದಾಶಿವ ಆಯೋಗ ತನಿಖೆ, ವಿಚಾರಣೆ ನಡೆಸುತ್ತಿತ್ತು. ನಾನು ಪತ್ರಿಕೆಯೊಂದಕ್ಕೆ ಅದರ ವರದಿಯನ್ನು ಮಾಡಲು ತೆರಳಿದ್ದೆ. ಪತ್ರಕರ್ತರ ಗ್ಯಾಲರಿಯಲ್ಲಿ ಕಿಕ್ಕಿರಿದ ಜನ. ಒಬ್ಬ ಮನುಷ್ಯ ನನ್ನ ಪಕ್ಕದಲ್ಲೇ ನಿಂತಿದ್ದ. ನಾನು ಅವರಿಗೆ ಇದ್ದುರದಲ್ಲೇ ತುಸು ಜಾಗ ಮಾಡಿಸಿ, ನನ್ನ ಪಕ್ಕದಲ್ಲೇ ಕುಳ್ಳಿರಿಸಿದೆ. ವಿಚಾರಣೆ ನಡೆಯುತ್ತಾ ನಡೆಯುತ್ತಾ ಮಧ್ಯಾಹ್ನವಾಯಿತು. ಒಳಗಿನ ಸೆಕೆಯಿಂದಲೂ, ವಿಚಾರಣೆಯಿಂದಲೂ ನಾವೆಲ್ಲರೂ ಕುದ್ದು ಹೋಗಿದ್ದೆವು. ಹೊರಗೆ ಬಂದದ್ದೇ ತಣ್ಣನೆಯ ಗಾಳಿ. ‘ಉಸ್ಸಪ್ಪ’ ಎನ್ನುವಾಗ ನನ್ನ ಪಕ್ಕದಲ್ಲಿ ಕುಳಿತಿದ್ದ ಆ ಮನುಷ್ಯ ನನ್ನನ್ನು ನೋಡಿ ನಕ್ಕಿತು. ‘‘ಪತ್ರಕರ್ತರ?’’ ಎಂದು ಕೇಳಿತು. ಹೌದು ಎಂದೆ. ಸರಿ, ಅದು ಇದು, ಮಾತನಾಡುತ್ತಾ, ಅವನು ತನ್ನ ಹೆಸರನ್ನೂ ಹೇಳಿದ. ನಾನು ‘ನನ್ನ’ ಹೆಸರನ್ನೂ ಪ್ರತಿಯಾಗಿ ವಿನಿಮಯಿಸಿದೆ. ‘‘ಬನ್ನಿ ಊಟಕ್ಕೆ ಹೋಗುವ’’ ಎಂದ. ಅವನದೇ ಬೈಕ್‌ನಲ್ಲಿ ಕುಳಿತು ಊಟಕ್ಕೆ ಹೋದೆ. ಹೊಟೇಲಲ್ಲಿ ಜೊತೆಯಾಗಿ ಊಟ ಮಾಡಿದೆವು. ದುಡ್ಡು ನಾನು ಪಾವತಿಸಿದೆ. ಅಪರಾಹ್ನ ಮತ್ತೆ ಆಯೋಗದ ವಿಚಾರಣೆಯ ಸಮಯ ಆರಂಭ ವಾಯಿತು. ನಾನು ಪತ್ರಕರ್ತರ ಜಾಗದಲ್ಲಿ ಹೋಗಿ ಕೂತೆ. ಆದರೆ ಆ ಮನುಷ್ಯ ಕಾಣಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ನೋಡಿದರೆ ಅವನು ಕಟಕಟೆಯಲ್ಲಿ ನಿಂತಿದ್ದ. ನನ್ನ ಎದೆ ಧಗ್ ಎಂದಿತು. ಸುರತ್ಕಲ್ ಗಲಭೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ, ಕುಖ್ಯಾತ ಗೂಂಡ, ಸಂಘಪರಿವಾರದ ವ್ಯಕ್ತಿ ಅವನಾಗಿದ್ದ. ಅವನ ಜೊತೆಗೆ ನಾನು ಉಂಡಿದ್ದೆ. ಮಾತನಾಡಿದ್ದೆ. ನಗುವನ್ನು ಹಂಚಿಕೊಂಡಿದ್ದೆ. ಆದರೆ ಅವೆಲ್ಲವನ್ನೂ ಚೆಲ್ಲಾಪಿಲ್ಲಿಗೊಳಿಸುವಂತೆ... ಇದೀಗ ನನ್ನ ಮುಂದೆ ಬೇರೆಯೇ ವ್ಯಕ್ತಿಯಾಗಿ ನಿಂತಿದ್ದಾನೆ. ಇಲ್ಲಿ ನಾನು ಅವನ ಯಾವ ಮುಖವನ್ನು ಸ್ವೀಕರಿಸಬೇಕು? ಬಹುಶಃ ಅವನೀಗ ಸಾರ್ವಜನಿಕ ವ್ಯಕ್ತಿಯಾಗಿ, ಸಮೂಹದ ವ್ಯಕ್ತಿಯಾಗಿ ನಿಂತಿದ್ದಾನೆ.

ಬಾಳಠಾಕ್ರೆಯ ಕೊನೆಯ ಐದು ವರ್ಷಗಳಲ್ಲಿ ಅವನನ್ನು ಚಿಕಿತ್ಸೆ ಉಪಚರಿಸಿದ್ದ ಡಾಕ್ಟರ್ ಒಬ್ಬ ಮುಸ್ಲಿಮ್ ಆಗಿದ್ದ. ಅವನ ಹೆಸರು ಡಾ. ಜಲೀಲ್. ಅವನಿಗೆ ಮಾತ್ರವಲ್ಲ, ಅವನ ಮಗನಿಗೂ ಮೆಚ್ಚಿನ ವೈದ್ಯನಾಗಿದ್ದ ಡಾಕ್ಟರ್ ಜಲೀಲ್. ಒಬ್ಬ ಡಾಕ್ಟರ್ ನನ್ನು ನಾವು ಮುಸ್ಲಿಮ್ ಡಾಕ್ಟರ್, ಹಿಂದೂ ಡಾಕ್ಟರ್ ಎಂದು ಕರೆಯುವುದು ತಪ್ಪು. ಅಮಾನವೀಯ. ಬಾಳಾಠಾಕ್ರೆಗೂ ಇದು ಚೆನ್ನಾಗಿ ಗೊತ್ತಿತ್ತು. ಡಾಕ್ಟರ್‌ಗಳಲ್ಲಿ ಮುಸ್ಲಿಮ್-ಹಿಂದೂ ಎಂದು ಇರುವುದಿಲ್ಲ. ಬರೇ ಡಾಕ್ಟರ್ ಎನ್ನುವ ಜಾತಿ, ಧರ್ಮ ಮಾತ್ರವಿರುತ್ತದೆ. ಇಷ್ಟು ಗೊತ್ತಿರುವ ಠಾಕ್ರೆ ಬೀದಿಗಳಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದ ಡ್ರೈವರ್‌ಗಳಲ್ಲಿ ಬಿಹಾರಿ-ಕನ್ನಡಿಗ ಎಂದು ವರ್ಗ ಮಾಡುತ್ತಿದ್ದ. ಒಬ್ಬ ಚಾಲಕನ ಧರ್ಮ ಕಾರ್ ಚಾಲನೆ ಮಾಡುವುದಷ್ಟೇ ಆಗಿರುತ್ತದೆ. ಅವನಲ್ಲಿ ಬಿಹಾರಿ, ಕನ್ನಡ ಚಾಲಕ, ಅಥವಾ ಹಿಂದೂ- ಮುಸ್ಲಿಮ್ ಚಾಲಕ ಎಂದಿರುವುದಿಲ್ಲ. ಹಾಗೆಯೇ ಮುಂಬಯಿ ನಗರದ ಬೀದಿ ವ್ಯಾಪಾರಿಗಳಿಗೂ ಧರ್ಮವಿರುವುದಿಲ್ಲ. ಹಿಂದೂ ವ್ಯಾಪಾರಿ, ಮುಸ್ಲಿಮ್ ವ್ಯಾಪಾರಿ, ತಮಿಳು ವ್ಯಾಪಾರಿ, ಬಿಹಾರದ ವ್ಯಾಪಾರಿ ಎಂದು ಯಾರನ್ನೂ ಕರೆಯುವುದಿಲ್ಲ. ಇದು ಠಾಕ್ರೆಗೆ ಖಾಸಗಿಯಾಗಿ ಚೆನ್ನಾಗಿ ಗೊತ್ತಿತ್ತು. ಆದುದರಿಂದಲೇ ಅವನ ಖಾಸಗಿ ವೈದ್ಯರಾಗಿ ಕೊನೆಯ ವರ್ಷಗಳಲ್ಲಿ ಒಬ್ಬ ‘ಮುಸ್ಲಿಮ್’ ವೈದ್ಯ ಚಿಕಿತ್ಸೆ ನೀಡಲು ಸಾಧ್ಯ ವಾಯಿತು.
 ಠಾಕ್ರೆಯ ಕುರಿತಂತೆ ಇನ್ನೊಂದು ಉದಾಹರಣೆ ಯನ್ನು ನೀಡಬಹುದು. 80ರ ದಶಕದಲ್ಲಿ ಠಾಕ್ರೆ ತಮಿಳರು ಮತ್ತು ಕನ್ನಡಿಗರ ವಿರುದ್ಧ ಶಂಖ ಊದಿದ ಸಮಯ. ಆದರೆ ಆ ಸಂದರ್ಭದಲ್ಲಿ ಠಾಕ್ರೆಯ ಎಡಬಲದ ಅಂಗರಕ್ಷಕರು ಕನ್ನಡಿಗರು, ಅದರಲ್ಲೂ ಮುಖ್ಯವಾಗಿ ತುಳುನಾಡಿನ ಬಂಟರಾಗಿದ್ದರು. ಅಲ್ಲಿ ಠಾಕ್ರೆಗೆ ಭಾಷೆ ಅಡ್ಡಿ ಬರಲಿಲ್ಲ. ಯಾಕೆಂದರೆ ಅದು ಠಾಕ್ರೆಯ ಖಾಸಗಿ ಬದುಕು. ಅಲ್ಲಿ ಅವರ ಮನಸ್ಸು ಹೇಳುವುದಷ್ಟೇ ಮುಖ್ಯ. ಸಾರ್ವಜನಿಕವಾಗಿ ಆಡುವ ರಾಜಕಾರಣ ಯಾವ ಪ್ರಯೋಜನಕ್ಕೂ ಬರುವು ದಿಲ್ಲ. ಪಾಕಿಸ್ತಾನ-ಕ್ರಿಕೆಟ್ ಮ್ಯಾಚ್ ಸಂದರ್ಭ ದಲ್ಲಿ ಪಿಚ್ ಅಗೆಸಿದ ಠಾಕ್ರೆಯೇ, ‘ಪುಂಡ’ ಕ್ರಿಕೆಟಿಗನೆಂದೇ ಹೆಸರಾದ ಪಾಕಿಸ್ತಾನದ ಮಿಯಾಂದಾದ್ ಅವರನ್ನು ಮನೆಗೆ ಕರೆಸಿ ಆತಿಥ್ಯ ನೀಡಿದ್ದನ್ನೂ ಇಲ್ಲಿ ನೆನಪಿಸಬಹುದಾಗಿದೆ.
  
ಇತ್ತೀಚೆಗೆ ನೀವು ಪತ್ರಿಕೆಗಳಲ್ಲಿ ಓದುತ್ತಿರಬ ಹುದು. ಕರಾವಳಿಯಲ್ಲಿ ಒಬ್ಬ ಹಿಂದೂ ವಿದ್ಯಾರ್ಥಿ ಮುಸ್ಲಿಮ್ ವಿದ್ಯಾರ್ಥಿನಿಯೊಂದಿಗೆ ಅಥವಾ ಒಬ್ಬ ಮುಸ್ಲಿಮ್ ವಿದ್ಯಾರ್ಥಿ ಹಿಂದೂ ವಿದ್ಯಾರ್ಥಿನಿಯ ಜೊತೆಗೆ ಮಾತನಾಡಿದರೆ ಅಥವಾ ಪಿಕ್‌ನಿಕ್‌ಗೆ ತೆರಳಿದರೆ ಸಾಕು ಸಂಘ ಪರಿವಾರ ಕೆರಳಿ ನಿಲ್ಲುತ್ತದೆ. ಅಮಾಯಕ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಲ್ಲೆ ನಡೆಸುತ್ತದೆ. ಅಂತರ್ಧಮೀಯ ಮದುವೆ ಇಡೀ ಊರಿಗೆ ಕಿಚ್ಚು ಹಚ್ಚುವಂತಹ ಸನ್ನಿವೇಶ ಕರಾವಳಿಯಲ್ಲಿದೆ. ಸಾರ್ವಜನಿಕ ಸಮಾವೇಶದಲ್ಲಿ ಸಂಘಪರಿವಾರ ನಾಯಕರ ಮುಖ್ಯ ಅಜೆಂಡಾವೇ ‘ಹಿಂದೂ ಹೆಣ್ಣು ಮಕ್ಕಳನ್ನು ಅಪಹರಿಸಿ, ಮುಸ್ಲಿಮರು ಮದುವೆಯಾಗುತ್ತಾರೆ’ ಎಂಬುದಾಗಿದೆ. ಇಂತಹದೇ ವಿಕಾರ ರಾಜಕೀಯವನ್ನು ಮಾಡುತ್ತಾ ಠಾಕ್ರೆ ತನ್ನ ಪಕ್ಷವನ್ನೂ ಕಟ್ಟಿದ್ದರು. ಆದರೆ ಅವರ ಖಾಸಗಿ ಬದುಕಿನ ಪುಟಗಳಲ್ಲಿ ಮಾತ್ರ, ನಾವು ಬೇರೆಯದೇ ಆದ ನಂಬಿಕೆಯನ್ನು ಓದುತ್ತೇವೆ. ಅದು ಅವರ ಸಾರ್ವಜನಿಕ ವಿಕಾರ ಮುಖಕ್ಕಿಂತ ಭಿನ್ನವಾದ ಆದ್ರ‰ ಮುಖ. ಅವರು ತನ್ನ ಮೊಮ್ಮಗಳನ್ನು ಆಕೆ ಪ್ರೀತಿಸಿದ ಮುಸ್ಲಿಮ್ ಯುವಕನಿಗೆ ದಾರೆಯೆರೆದುಕೊಟ್ಟರು. ಬಾಳಾ ಠಾಕ್ರೆಯವರ ಹಿರಿಯ ಮಗ ಬಿಂದುಮಾಧವ ಅವರ ಪುತ್ರಿ ನೇಹಾ ಅವರು ಮನಾನ್ ಎಂಬ ಮುಸ್ಲಿಮ್ ಹುಡುಗನನ್ನು ಪ್ರೀತಿಸಿದಳು. ಈ ಮನಾನ್‌ನ ತಂದೆ ಇನ್ನಾರೂ ಅಲ್ಲ. ಬಿಂದು ಮಾಧವ ಮತ್ತು ರಾಜ್ ಠಾಕ್ರೆಯವರ ಮೆಚ್ಚಿನ, ಹಿರಿಯ ಗೆಳೆಯನ ಮಗ. ತನ್ನ ಮೊಮ್ಮಗಳು ಮುಸ್ಲಿಮ್ ಹುಡುಗನನ್ನು ಪ್ರೀತಿಸಿದಳು ಎಂದು ಠಾಕ್ರೆ ಸಾರ್ವಜನಿಕ ಬೀದಿಯಲ್ಲಿ ಗರ್ಜಿಸಲಿಲ್ಲ. ಅಥವಾ ಶಿವಸೈನಿಕ ಗೂಂಡಾಗಳನ್ನು ಬಿಟ್ಟು ಹುಡುಗನನ್ನೋ, ಹುಡುಗನ ಕುಟುಂಬವನ್ನೋ ಥಳಿಸಲಿಲ್ಲ. ಲವ್‌ಜಿಹಾದ್ ಎಂದು ಬಂಬ್ಡ ಬಜಾಯಿಸಲಿಲ್ಲ. ರಾಜ್‌ಠಾಕ್ರೆ ಕುಟುಂಬ ಸೇರಿದಂತೆ ಶಿವಸೇನೆಯ ಹಲವಾರು ಮುಖಂಡರು ತಾಜ್‌ಹೊಟೇಲ್‌ನಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಿದ್ದರು. ಬಾಳಾಠಾಕ್ರೆ ಈ ಮದುವೆಯಲ್ಲಿ ಸಾರ್ವಜನಿಕವಾಗಿ ಭಾಗ ವಹಿಸಲಿಲ್ಲ ಎನ್ನುವ ಮಾತಿದೆ. ಆದರೆ ಖಾಸಗಿಯಾಗಿ ಮಾತೋಶ್ರೀಯಲ್ಲಿ ಠಾಕ್ರೆ ವಧೂವರರನ್ನು ಆಶೀರ್ವದಿಸಿದ್ದರು. ಇದು ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾಯಿತು.

ಪ್ರೀತಿ, ಪ್ರೇಮ ಎಂತಹ ಗಡಿ, ಕೋಟೆ ಗಳನ್ನೂ ನುಚ್ಚು ನೂರು ಮಾಡಬಹುದು ಎನ್ನುವುದಕ್ಕೆ ಇನ್ನೊಂದು ಉದಾಹರಣೆ, ಬಿಜೆಪಿಯ ಸರ್ವೋಚ್ಚ ನೇತಾರ ಅಡ್ವಾಣಿ. ಇವರು ಸಿಂಧಿ. ಇವರ ಸೋದರ ತಂಗಿ ಮದುವೆಯಾಗಿರುವುದು ಒಬ್ಬ ಮುಸ್ಲಿಮ್ ಹುಡುಗನನು.್ನ ವಿಶೇಷವೆಂದರೆ ಈ ಮದುವೆಗೆ ಅಡ್ವಾಣಿ ಖುದ್ದಾಗಿ ಹಾಜರಾಗಿ, ವಧೂವರರನ್ನು ಹಾರೈಸಿದ್ದರು. ಈ ಮದುವೆ ಇಡೀ ಕುಟುಂಬ ಒಂದಾಗಿ ಒಪ್ಪಿ ನಡೆಸಿದ ಆರೇಂಜ್‌ಡ್ ಮದುವೆಯಾಗಿತ್ತು. ಇಲ್ಲಿ ಹಿಂದೂ ಮುಸ್ಲಿಮ್ ಎನ್ನುವ ಯಾವುದೇ ಗಡಿಗಳಿರಲಿಲ್ಲ. ಯಾರಲ್ಲೂ ದ್ವೇಷ, ಸಿಟ್ಟು ಇರಲಿಲ್ಲ. ಎಲ್ಲವನ್ನೂ ‘ಪ್ರೀತಿ’ ಅಳಿಸಿ ಹಾಕಿತ್ತು. ಎಲ್.ಕೆ. ಅಡ್ವಾಣಿಯ ಡ್ರೈವರ್‌ಗಳಲ್ಲಿ ಮುಸ್ಲಿಮರಿದ್ದರು. ಆದರೆ ಇದೇ ಸಂದರ್ಭದಲ್ಲಿ, ಕೇರಳದಲ್ಲಿ ಅಡ್ವಾಣಿ ಆಗಮಿಸಿದಾಗ, ಭದ್ರತೆಗಾಗಿ ಇಲ್ಲಿನ ಸರಕಾರ ಇಬ್ಬರು ಮುಸ್ಲಿಮ್ ಚಾಲಕರನ್ನು ತಂಡದಿಂದ ತೆಗೆದು ಹಾಕಿತು.

ಗೋಹತ್ಯೆಯನ್ನು ರಾಜಕಾರಣ ಮಾಡಿಯೇ ಬಿಜೆಪಿ ಮತ್ತು ಸಂಘಪರಿವಾರ ಸಾಕಷ್ಟು ಮತಗಳನ್ನು ಬಾಚಿಕೊಂಡಿದೆ. ಆದರೆ ಈ ದೇಶದಲ್ಲಿ ಅತ್ಯಧಿಕ ಗೋಮಾಂಸ ರಫ್ತಾಗಿರು ವುದು ಎನ್‌ಡಿಎ ಆಡಳಿತ ಕಾಲದಲ್ಲಿ. ಆಗ ಈ ದೇಶದ ಪ್ರಧಾನಿಯಾಗಿದ್ದವರು ಅಟಲ್ ಬಿಹಾರಿ ವಾಜಪೇಯಿ. ಸಾರ್ವ ಜನಿಕವಾಗಿ ಗೋವು ನಿಷೇಧ ವಾಗಿದ್ದರೂ, ಖಾಸಗಿ ಯಾಗಿ ಅಟಲ್ ಬಿಹಾರಿ ವಾಜಪೇಯಿ ಗೋಮಾಂಸ ತಿನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿತ್ತು. ಈ ಕುರಿತಂತೆಯೇ ಒಮ್ಮೆ ವಿದೇಶದಲ್ಲಿ ಅಟಲ್ ಜೊತೆಗೆ ಯಾರೋ ಕೇಳಿದ್ದರಂತೆ ‘‘ಅಟಲ್‌ಜೀ...ದೇವತೆಗಳು ಆವಾಹಿಸಿಕೊಂಡಿ ರುವ ಗೋಮಾಂಸವನ್ನು ನೀವು ಭಕ್ಷಿಸುತ್ತಿದ್ದೀರಿ...’’
ಅದಕ್ಕೆ ಅಷ್ಟೇ ಲವಲವಿಕೆಯಿಂದ ಉತ್ತರಿಸಿದ ಅಟಲ್ ಬಿಹಾರಿ ವಾಜಪೇಯಿ ‘‘ಭಾರತದ ಗೋವುಗಳಲ್ಲಿ ಮಾತ್ರ ದೇವತೆಗಳಿರುತ್ತವೆ. ಇದು ವಿದೇಶಿ ಗೋವು’’ ಎಂದು ನಕ್ಕರಂತೆ. ಹೀಗೆ ಮಾತನಾಡುವಾಗ ಅವರ ಮುಂದೆ ಸಾರ್ವಜನಿಕ ವೇದಿಕೆಯಿರಲಿಲ್ಲ. ಲಕ್ಷಾಂತರ ಮತದಾರರಲಿಲ್ಲ. ಅದು ಅವರ ಖಾಸಗಿ ಕ್ಷಣವಾಗಿತ್ತು. ಅವರ ಅತ್ಯಂತ ಖಾಸಗಿ ಮಾತಾಗಿತ್ತು. ಸಾರ್ವಜನಿಕ ಸಮಾರಂಭದಲ್ಲಿ ನಾವು ನಮಗೆ ಬೇಕಾದುದನ್ನು ಮಾತನಾಡುವುದಕ್ಕಿಂತ, ಸಾರ್ವಜನಿಕರಿಗೆ ಬೇಕಾದುದನ್ನೇ ಮಾತನಾಡಬೇಕಾದ ಅನಿವಾರ್ಯತೆ ಇರುತ್ತದೆ.

ಚಿದಾನಂದಮೂರ್ತಿ ಕನ್ನಡದ ಖ್ಯಾತ ಚಿಂತಕರು. ಆದರೆ ಕಳೆದ ಎರಡು ದಶಕಗಳಿಂದ ಅವರು ಸಂಶೋಧನೆಗೆ ರಾಜೀನಾಮೆ ನೀಡಿ, ಅಪ್ಪಟ ಸಂಘಪರಿವಾರ ಕಾರ್ಯಕರ್ತರಾಗಿ ಕೆಲಸ ಮಾಡತೊಡಗಿದ್ದಾರೆ. ಅದರ ಹಿಂದೆ ಯಾವ ರಾಜಕೀಯ ಉದ್ದೇಶವಿದೆಯೋ, ಮುಸ್ಲಿಮರ ವಿರುದ್ಧ ದ್ವೇಷ ಕಾರುವುದನ್ನೇ ಅವರು ತನ್ನ ಬದುಕಿನ ಪರಮ ಗುರಿಯಾಗಿಸಿ ಕೊಂಡಿದ್ದಾರೆ. ಇಂಥವರ ಜೀವನದಲ್ಲಿ ಒಬ್ಬ ಮುಸ್ಲಿಮ್ ಬಹುಮುಖ್ಯ ಪಾತ್ರ ವಹಿಸಿದ್ದ ಎನ್ನುವುದನ್ನು ನೀವು ನಂಬುತ್ತೀರ? ಇದನ್ನು ಸ್ವತಃ ಚಿದಾನಂದಮೂರ್ತಿಯವರೇ ಹಿಂದೆ ಹಂಚಿ ಕೊಂಡಿದ್ದರು.
ಈ ಚಿದಾನಂದಮೂರ್ತಿಯವರು ಒಮ್ಮೆ ಜೀವನದಲ್ಲಿ ತೀವ್ರ ಖಿನ್ನತೆಗೊಳಗಾಗಿ, ಆತ್ಮಹತ್ಯೆಗೆ ಯತ್ನಿಸಿದ್ದರು.
ಕನ್ನಡದ ಭಾಷೆಯ ಕುರಿತಂತೆ, ಭವಿಷ್ಯದ ಕುರಿತಂತೆ ತೀವ್ರ ಭ್ರಮನಿರಸನಕ್ಕೊಳಗಾಗಿ, ಸುದೀರ್ಘ ಪತ್ರವೊಂದನ್ನು ಬರೆದಿಟ್ಟು ಅವರು ತುಂಗಾ ನದಿಗೆ ಹಾರಿದರು. ಈ ಸಂದರ್ಭದಲ್ಲಿ ಅವರು ಸತ್ತೇ ಹೋಗಬೇಕಾಗಿತ್ತು. ಆಗ ಒಬ್ಬ ಅಂಬಿಗ ಅವರ ಪ್ರಾಣವನ್ನು ರಕ್ಷಿಸಿದ. ಆ ಅಂಬಿಗ ಒಬ್ಬ ಮುಸಲ್ಮಾನನಾಗಿದ್ದ. ಸದ್ಯಕ್ಕೆ ಮುಸ್ಲಿಮರನ್ನು ಶತಾಯಗತಾಯ ದ್ವೇಷಿಸುತ್ತಿರುವ ಚಿದಾನಂದಮೂರ್ತಿ ಆ ಅಂಬಿಗನ ವಿರುದ್ಧ ಈ ಮೂಲಕ ಸೇಡು ತೀರಿಸುತ್ತಿದ್ದಾರೆಯೇ ಎಂಬ ಅನುಮಾನ ನನ್ನನ್ನು ಆಗಾಗ ಕಾಡಿದ್ದಿದೆ. ಚಿದಾನಂದಮೂರ್ತಿಯ ಬದುಕಿನ ಈ ಕತೆಯನ್ನು ನಾನು ಒಬ್ಬ ಮಿತ್ರರಿಗೆ ಹೇಳಿದಾಗ, ಆತ ಸಿಟ್ಟನ್ನು ನಟಿಸುತ್ತಾ ಹೇಳಿದ್ದ ‘‘ಎಲ್ಲಿದ್ದಾನೆ ಆ ಮುಸ್ಲಿಮ್ ಅಂಬಿಗ. ನಾವು ಮೊದಲು ಅವನಿಗೊಂದು ಪಾಠ ಕಲಿಸಬೇಕಾಗಿದೆ’’ ಸಾರ್ವಜನಿಕವಾಗಿ ಮುಸ್ಲಿಮರ ಕುರಿತಂತೆ ಅತ್ಯಂತ ಕಠೋರವಾಗಿ ರಾಜಕಾರಣ ಮಾಡುತ್ತಿರುವ ಚಿದಾನಂದ ಮೂರ್ತಿ, ಖಾಸಗಿಯಾಗಿಯೂ ಅಷ್ಟೇ ಕಟುವಾಗಿ ಮುಸ್ಲಿಮರನ್ನು ದ್ವೇಷಿಸುತ್ತಾರೆಯೆ? ಈ ಕುರಿತಂತೆ ನನಗೆ ಅನುಮಾನವಿದೆ.

ಸಂಘಪರಿವಾರ ಹೇಳುವಂತೆ ಪಾಕಿಸ್ತಾನಕ್ಕೆ ಕಾರಣ ಮಹಮ್ಮದ್ ಅಲಿ ಜಿನ್ನಾ. ಇವರ ಎದೆಯ ಒಳಬಾಗಿಲನ್ನು ತಟ್ಟಿದರೆ ತೆರೆದುಕೊಳ್ಳುವ ಅಚ್ಚರಿಗಳೋ ನಂಬಲು ಅಸಾಧ್ಯವಾದಂತಹವುಗಳು. ಜಿನ್ನಾ ಸಾಹೇಬರ ಅಜ್ಜನ ಹೆಸರು ಪೂಂಜ ಗೋಕುಲ್ ದಾಸ್ ಮೇಘ್‌ಜಿ. ಇವರು ಹಿಂದೂ ಭಾಟಿಯಾ ರಜ್‌ಪೂತ್. ಬಳಿಕ ಇವರು ಇಸ್ಲಾಂಗೆ ಮತಾಂತರವಾದರು. ಕಟ್ಟಾ ಮುಸ್ಲಿಂ ಎಂದು ಎಲ್ಲರೂ ನಂಬಿರುವ ಜಿನ್ನಾ ಅವರ ಪತ್ನಿಯ ಹೆಸರು ರತ್ನಾಬಾಯಿ. ಈಕೆ ಪಾರ್ಸಿ. ಇವರ ಮಗ ಖ್ಯಾತ ಉದ್ಯಮಿ ನುಸ್ಲುವಾಡಿಯಾ. ಇವರು ಭಾರತೀಯರಲ್ಲಿ ಒಂದಾಗಿ ಬಿಟ್ಟಿದ್ದಾರೆ. ಅಂದ ಹಾಗೆ ಅಪ್ಪಟ್ಟ ಪಾಶ್ಚಿಮಾತ್ಯ ಅನುಕರಣೆಯ ವ್ಯಕ್ತಿ ಜಿನ್ನಾ. ಇವರು ನಮಾಝ್ ಮಾಡುವುದು ತೀರಾ ಅಪರೂಪವಾಗಿತ್ತು. ಮದ್ಯ ಇವರಿಗೆ ತುಂಬಾ ಪ್ರೀತಿ. ಹಂದಿಮಾಂಸವೂ ಇವರ ಇಷ್ಟದ ಆಹಾರವಾಗಿತ್ತು ಎಂದು ಆಪ್ತರು ಹೇಳುತ್ತಾರೆ. ಗಾಂಧೀಜಿಗೆ ‘ಬಾಲ’ವಾಗಿ ಸೇರಿದ್ದ ‘ಮಹಾತ್ಮ’ ಎಂಬ ಪದವನ್ನು ದಿಟ್ಟವಾಗಿ ನೀವಾಳಿಸಿ ತೆಗೆದವರು ಜಿನ್ನಾ. ಸಭೆಯೊಂದರಲ್ಲಿ ಮಹಾತ್ಮಗಾಂಧಿಯ ಬಳಿಕ ಮಾತನಾಡುವಾಗ ಜಿನ್ನಾ ದಿಟ್ಟವಾಗಿ ‘‘ಮಿ. ಗಾಂಧಿ’ ಎಂದು ಕರೆಯುತ್ತಾರೆ. ಸೇರಿದ ಜನರೆಲ್ಲ ಇದನ್ನು ಪ್ರತಿಭಟಿಸಿ, ಮಹಾತ್ಮಗಾಂಧಿ ಎಂದು ಕರೆಯಲು ಒತ್ತಾಯಿಸುತ್ತಾರೆ. ಆದರೆ ಅದನ್ನು ಗಟ್ಟಿಯಾಗಿ ಅಲ್ಲಗಳೆದ ಜಿನ್ನಾ ‘ಮಿ. ಗಾಂಧಿ’ ಎಂದೇ ಕರೆದು ತನ್ನ ಮಾತನ್ನು ಮುಂದುವರೆಸುತ್ತಾರೆ.

 ವಿಪರ್ಯಾಸವನ್ನು ಗಮನಿಸಿ. ಇಂದು ಮದ್ರಸಗಳನ್ನು ಸಂಘಪರಿವಾರ ಸಹಿತ ಬಿಜೆಪಿ ನಾಯಕರು ಕಟುವಾಗಿ ಟೀಕಿಸುತ್ತಾರೆ. ಮದ್ರಸ ದೇಶದ್ರೋಹಿಗಳನ್ನು ಸೃಷ್ಟಿಸುತ್ತಿದೆ ಎಂದು ಅನುಮಾನಿಸುತ್ತಿದ್ದಾರೆ. ಸ್ವಾತಂತ್ರಪೂರ್ವದಲ್ಲಿ ಬ್ರಿಟಿಷ ವಿರುದ್ಧ ಹೋರಾಡಿದ ಮುಸ್ಲಿಮರಲ್ಲಿ ಹೆಚ್ಚಿನವರು ಮದ್ರಸದಿಂದ ಬಂದ ವಿದ್ಯಾರ್ಥಿಗಳು ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಜಿನ್ನಾ ಮದ್ರಸದ ವಿದ್ಯಾರ್ಥಿಯಾಗಿರಲಿಲ್ಲ. ಅವನು ಅಪ್ಪಟ ಪಾಶ್ಚಿಮಾತ್ಯ ದೃಷ್ಟಿವುಳ್ಳ ನಾಯಕ. ವೌಲಾನ ಅಬುಲ್ ಕಲಾಂ ಅಝಾದ್ ಅಪ್ಪಟ ಮದ್ರಸದಿಂದ ಬಂದ, ಇಸ್ಲಾಮಿ ವಿದ್ವಾಂಸ. ಆದರೆ ಜಿನ್ನಾ ಪಾಕಿಸ್ತಾನದ ಜೊತೆಗೆ ನಿಂತರು. ಆಝಾದ್ ಭಾರತದ ಜೊತೆಗೆ ನಿಂತರು. ಎಷ್ಟೆಂದರೆ, ಗಾಂಧಿಯ ಪಕ್ಕದಲ್ಲಿ ಆಝಾದ್ ಅವರನ್ನು ಕಲ್ಪಿಸಿಕೊಳ್ಳದೆ ಗಾಂಧಿಯ ಚಿತ್ರ ಪೂರ್ತಿಯಾಗುವುದಿಲ್ಲ ಎನ್ನುವವರೆಗೆ.

ಜಿನ್ನಾ ಪಾಕಿಸ್ತಾನವನ್ನು ಪಡೆದದ್ದು ಮುಸ್ಲಿಂ ಮತಾಂಧತೆಯ ಮೂಲಕ ಅಲ್ಲ. ಕೇವಲ ಒಂದು ಟೈಪ್‌ರೈಟರ್ ಮಶಿನ್ ಮೂಲಕ ಎನ್ನುವ ಹೇಳಿಕೆ ಈಗಾಗಲೇ ಜನಜನಿತವಾಗಿದೆ. ಸಂದರ್ಭವನ್ನಷ್ಟೇ ಅವರು ಬಳಸಿಕೊಂಡರು. ಪಾಕಿಸ್ತಾನ ನಿರ್ಮಾಣ ಸಂದರ್ಭದಲ್ಲಿ ಅವರಿಗೆ ಅದು ಮುಸ್ಲಿಮ್ ಮೂಲಭೂತವಾದಿಗಳ ಕೈ ಸೇರಬೇಕೆಂಬ ಯಾವ ಇಚ್ಛೆಯೂ ಇರಲಿಲ್ಲ. ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಬರೆದದ್ದೇ ಒಬ್ಬ ಭಾರತೀಯ. ಹಿಂದೂ. ಜಿನ್ನಾ ಅವರ ಆರಂಭದ ಭಾಷಣವೇ ಅವರ ಒಳಗಿನ ತಳಮಳವನ್ನು ಸೂಚ್ಯವಾಗಿ ಹೇಳುತ್ತದೆ. ಇತ್ತೀಚೆಗೆ ಅಡ್ವಾಣಿ ಪಾಕಿಸ್ತಾನಕ್ಕೆ ಹೋದಾಗ ಅವರು ಬಹುಶಃ ಜಿನ್ನಾ ಅವರ ಎದೆಯ ಖಾಸಗಿ ಬಾಗಿಲನ್ನು ತಟ್ಟಿದರು. ಜಿನ್ನಾ ಅವರನ್ನು ಸೆಕ್ಯುಲರ್ ಎಂದು ಕರೆಯುವ ಮೂಲಕ, ಇಡೀ ಪಾಕಿಸ್ತಾನ ಅವರನ್ನು ಮಾದರಿಯಾಗಿಟ್ಟುಕೊಂಡು ಸೆಕ್ಯುಲರ್ ದೇಶವಾಗಬೇಕು ಎಂಬ ಆಶಯ ಅಡ್ವಾಣಿ ಅವರ ಬಳಿಯಿತ್ತು. ಈ ಮೂಲಕ, ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ಸರಕಾರ ತನ್ನ ರಕ್ಷಣೆಯನ್ನು ಇನ್ನಷ್ಟು ಬಲಪಡಿಸಬೇಕು ಎನ್ನುವುದನ್ನು ಸೂಚ್ಯವಾಗಿ ತಿಳಿಸಿದ್ದರು. ಈ ಮಾತಿನ ಉದ್ದ-ಅಗಲ ಅರಿಯದೇ ಭಾರತದಲ್ಲಿ ಸಂಘಪರಿವಾರ ನಾಯಕರು ಕಿರುಚಾಡಿದರು.

ಕಮಲ್‌ಹಾಸನ್ ಭಾರತದ ಶ್ರೇಷ್ಠ ಕಲಾವಿದ. ಈತನ ಹೆಸರಿನ ಮುಂದಿರುವ ಹಾಸನ್ ಕಾರಣದಿಂದ ಅವರು ಹಲವು ಬಾರಿ ತೊಂದರೆಗೆ ಸಿಲುಕಿಕೊಂಡಿದ್ದಾರೆ. ವಿದೇಶಗಳಲ್ಲಿ ಹಲವು ಬಾರಿ ಹಾಸನ್ ಎನ್ನುವ ಕಾರಣಕ್ಕಾಗಿ ಇವರನ್ನು ತನಿಖೆಗೊಳಪಡಿಸಲಾಗಿದೆ. ಅವಮಾನ ಪಡಿಸಲಾಗಿದೆ. ಎಷ್ಟೋ ಭಾರತೀಯರು ಕಮಲ್ ಹಾಸನ್ ಅವರನ್ನು ಮುಸ್ಲಿಮರೆಂದೇ ತಿಳಿದುಕೊಂಡಿದ್ದಾರೆ. ಆದರೆ ಕಮಲ್ ಅವರು ಮೂಲತಃ ಬ್ರಾಹ್ಮಣರು. ಹಾಸನ್ ಎನ್ನುವ ಹೆಸರು ಅವರಿಗೆ ದೊರಕಿರುವುದರ ಹಿಂದೆ ಒಂದು ಹೃದಯಸ್ಪರ್ಶಿ ಕತೆಯಿದೆ.
 ಕಮಲ್ ಹಾಸನ್ ತಂದೆಯ ಹೆಸರು ಶ್ರೀನಿವಾಸನ್. ಅವರ ಆತ್ಮೀಯ ಮಿತ್ರರ ಹೆಸರು ಯಾಕೂಬ್ ಹಸನ್. ಇವರಿಬ್ಬರೂ ಸ್ವಾತಂತ್ರ ಹೋರಾಟಗಾರರು. ಬ್ರಿಟಿಷರ ವಿರುದ್ಧ ಧ್ವನಿಯೆತ್ತಿದ ಕಾರಣ ಇವರನ್ನು ಜೊತೆಯಾಗಿಯೇ ಜೈಲಲ್ಲಿಡಲಾಗಿತ್ತು. ಆಗ ತಮಿಳಿನಾಡಿನಲ್ಲಿ ಬ್ರಿಟಿಷರ ವಿರುದ್ಧ ಯಾವ ರೀತಿಯ ಆಕ್ರೋಶವಿತ್ತೋ, ಹಾಗೆಯೇ ಬ್ರಾಹ್ಮಣರ ವಿರುದ್ಧವೂ ಆಕ್ರೋಶವಿತ್ತು. ತಮಿಳುನಾಡಿನಲ್ಲಿ ದ್ರಾವಿಡ ಚಳವಳಿಯ ಕಾಲ ಅದು. ಆಗ ಜೈಲಿನಲ್ಲಿ ಉಳಿದ ಕೈದಿಗಳು ಶ್ರೀನಿವಾಸನ್ ವಿರುದ್ಧ ತಿರುಗಿ ಬಿದ್ದರು. ಇಂತಹ ಸಂದರ್ಭದಲ್ಲಿ ಯೂಕಬ್ ಹಸನ್ ಜೈಲಿನಲ್ಲಿರುವವರೆಗೂ ಶ್ರೀನಿವಾಸನ್ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದರು. ಈ ಯಾಕೂಬ್ ಹಸನ್ ಅವರನ್ನು ಬಳಿಕ ಶ್ರೀನಿವಾಸ್ ಎಷ್ಟು ಹಚ್ಚಿಕೊಂಡರು ಎಂದರೆ, ತನ್ನ ಮೂರು ಗಂಡು ಮಕ್ಕಳಿಗೂ ಹಸನ್ ಹೆಸರನ್ನು ನೀಡಿದರು. ಚಂದ್ರ ಹಾಸನ್, ಚಾರು ಹಾಸನ್, ಕಮಲ ಹಾಸನ್. ಇಂದು ದೇಶ ಕಮಲ್‌ನನ್ನು ಗುರುತಿಸುವುದು ಅವರ ತಂದೆಯ ಹೆಸರಿನ ಮೂಲಕ ಅಲ್ಲ, ಬದಲಿಗೆ ಅವರ ಮಿತ್ರ ಯಾಕೂಬ್ ಹಸನ್ ಮೂಲಕ. ಇದನ್ನು ಸ್ವತಃ ಕಮಲ್ ಹಾಸನ್ ಅವರೇ ಹೃದ್ಯವಾಗಿ ಟಿವಿ ಮಾಧ್ಯಮವೊಂದರಲ್ಲಿ ಹಂಚಿಕೊಂಡಿದ್ದಾರೆ. ಕಮಲ್ ಹಾಸನ್ ಅವರ ಹೆಚ್ಚಿನ ಚಿತ್ರಗಳಲ್ಲಿ ಹಿಂದೂ-ಮುಸ್ಲಿಮ್ ಸಂಬಂಧ ಆತ್ಮೀಯವಾಗಿ ಕಾಣಿಸಿಕೊಳ್ಳುವುದಕ್ಕೆ ಇದೂ ಕಾರಣವಿರಬಹುದು. ‘ಹೇ ರಾಮ್’ ಚಿತ್ರದಲ್ಲಿ ಮುಸ್ಲಿಮ್ ಸ್ನೇಹಿತನ ಸಂಸರ್ಗದಿಂದ ಗಾಂಧಿಯನ್ನು ಕೊಲ್ಲುವುದನ್ನು ಸಾಕೇತ್‌ರಾಮ್ ಕೈ ಬಿಡುತ್ತಾನೆ. ಅಷ್ಟೇ ಅಲ್ಲ, ತನ್ನ ಪ್ರಾಣವನ್ನು ಒತ್ತೆಯಿಟ್ಟು ಸ್ನೇಹಿತನ ಕುಟುಂಬವನ್ನು ರಕ್ಷಿಸುತ್ತಾನೆ. ತನ್ನ ತಂದೆಯನ್ನು ರಕ್ಷಿಸಿದ ಯೂಕೂಬ್ ಹಸನ್ ಅವರು ಕಮಲ್ ಹಾಸನ್ ಎದೆಯಲ್ಲಿ ಜೀವಂತವಾಗಿದ್ದುದೇ ಹೇರಾಮ್ ಚಿತ್ರಕ್ಕೆ ಕಾರಣವಾಗಿರಬಹುದು.

ನಾವು ಒಬ್ಬಂಟಿಯಾಗಿದ್ದಾಗ ಮನುಷ್ಯರಾಗಿಯೇ ಇರುತ್ತೇವೆ. ಆದರೆ ಸಾರ್ವಜನಿಕವಾಗಿ, ಸಮೂಹವಾಗಿ ಗುರುತಿಸಿಕೊಳ್ಳುವಾಗ ನಾವು ಮೃಗವಾಗಿ ಬಿಡುವ ಅಪಾಯ ಇಂದಿನ ರಾಜಕೀಯ ಸಂದರ್ಭಗಳಲ್ಲಿ ಹೆಚ್ಚುತ್ತಾ ಇದೆ. ಸಾರ್ವಜನಿಕ ವೇದಿಕೆಯಲ್ಲಿ ಒಬ್ಬ ಉನ್ಮತ್ತ ವ್ಯಕ್ತಿ ಆಡುವ ಭಾಷಣವನ್ನು ನಿಜವೆಂದೇ ಭಾವಿಸಿ, ಅದನ್ನು ಆವಾಹಿಸಿಕೊಂಡು ಇನ್ನೊಬ್ಬನನ್ನು ದ್ವೇಷಿಸಲು ಹೊರಡುತ್ತೇವೆ. ಈ ದೇಶದ ಎಲ್ಲ ಕೋಮುಗಲಭೆಗಳು ನಡೆದಿರುವುದು ಇಂತಹದೇ ಸಂದರ್ಭಗಳಲ್ಲಿ. ನಾವು ಒಬ್ಬಂಟಿಯಾಗಿದ್ದಾಗ ರಕ್ತಕ್ಕೆ ಅಂಜುತ್ತೇವೆ. ಸಾವಿಗೆ ಮರುಗುತ್ತೇವೆ. ಯಾವುದೇ ಬರ್ಬರ ಕೊಲೆ ನಡೆದಾಗ ಅದಕ್ಕೆ ಅಸಹ್ಯ ಪಟ್ಟುಕೊಳ್ಳುತ್ತೇವೆ. ಆದರೆ ಸಮೂಹದೊಂದಿಗೆ ಉನ್ಮತ್ತರಾಗಿರುವಾಗ ಹಾಗಿರಬೇಕೆಂದೇನೂ ಇಲ್ಲ. ಸಣ್ಣ ರಕ್ತ ಹನಿಗೆ ಅಂಜುವ ನಾವು ಸಮೂಹದೊಂದಿಗೆ ಸೇರಿ ಒಂದು ಕೊಲೆಯನ್ನೇ ಮಾಡಿ ಬಿಡಬಹುದು. ಈ ಕಾರಣದಿಂದಲೇ ಸಾರ್ವಜನಿಕ ಭಾಷಣಗಳನ್ನು ಆಲಿಸುವಾಗ ನಾವು ಸದಾ ಎಚ್ಚರವಾಗಿರಬೇಕು.

ವೇದಿಕೆಯಲ್ಲಿ ಮಾತನಾಡುವವ ತನ್ನ ಹೃದಯದ ಮಾತುಗಳನ್ನು ಆಡುತ್ತಿಲ್ಲ. ತಾನು ಏನು ಮಾತನಾಡಬೇಕೋ ಅದನ್ನು ಆಡುತ್ತಿಲ್ಲ. ಬದಲಿಗೆ ಸಮೂಹಕ್ಕೆ ಏನು ಬೇಕೋ ಅದನ್ನು ಆಡುತ್ತಿದ್ದಾನೆ ಎಂಬ ಪ್ರಜ್ಞೆ ಇಟ್ಟುಕೊಂಡು ಅದನ್ನು ಒಂದು ಕಿವಿಯಲ್ಲಿ ಕೇಳಿ, ಇನ್ನೊಂದು ಕಿವಿಯಲ್ಲಿ ಬಿಡಬೇಕು. ನಾನು ನಮ್ಮ ಎದೆಯ ಒಳಗಿನ ಖಾಸಗಿ ಧ್ವನಿಯನ್ನು ಆಲಿಸಲು ಕಲಿಯಬೇಕು. ನಮಗೆ ಕಮಲ್ ಹಸನ್‌ನ ತಂದೆಯಂಥವರು ಮಾದರಿಯಾಗಬೇಕು. ಸೌಹಾರ್ದ ಯಾವುದೇ ವೇದಿಕೆಗಳಲ್ಲಿ, ಸಮಾರಂಭಗಳಲ್ಲಿ ಹುಟ್ಟುವಂತಹದ್ದಲ್ಲ. ಅದು ಎರಡು ವ್ಯಕ್ತಿಗಳು ಪರಸ್ಪರರ ಹೃದಯವನ್ನು ಆಲಿಸುವಾಗ ಹುಟ್ಟುವಂಥದ್ದು. ಈ ಕಾರಣದಿಂದ ನಾವು, ಹೃದಯದ ಧ್ವನಿಯನ್ನು ಆಲಿಸುವುದಕ್ಕೆ ಶುರುಮಾಡೋಣ. ಸಾಧ್ಯವಾದರೆ, ಸಾರ್ವಜನಿಕ ವೇದಿಕೆಯ ಅಬ್ಬರದ ಭಾಷಣಗಳಿಗೆ ಶಾಶ್ವತ ಕಿವುಡರಾಗೋಣ.

9 comments:

  1. ಆತ್ಮೀಯರೆ,

    ಒಂದು ಹೃದಯ ಸ್ಪರ್ಷೀ ಲೇಖನ... ಧನ್ಯವಾದಗಳು... ಇಂದಿನ ದಿನದಲ್ಲಿ ಎಲ್ಲಿ ನೋಡಿದರೂ ದ್ವೇಷ, ಹಿಂಸೆ, ರಕ್ತಪಾತ. ಇಂತಹ ಸಮಯದಲ್ಲೇ ನಾವು ನಮ್ಮ ಹೃದಯದ ಬಾಗಿಲನ್ನು ತೆರೆದು ಎದುರಿಗಿನ ವ್ಯಕ್ತಿಗಳನ್ನ ಕಾಣಬೇಕಿದೆ. ನಿಮ್ಮ ಲೇಖನ ಬಹಳ ಇಷ್ಟವಾಯಿತು.....
    ಇಂತಿ
    ಅರವಿಂದ

    ReplyDelete
  2. ಬಷೀರ್‍ ಭಾಯಿ ನಿಮ್ಮ ಈ ಲೇಖನದಿಂದ ಬಹಳಷ್ಟು ಮಾಹಿತಿ ಲಭ್ಯವಾಯಿತು. ಜತೆಗೆ ಲೇಖನ ಇಷ್ಟು ಬೇಗನೆ ಮುಗಿಯಿತೇ ಎನ್ನುವಂತಾಯಿತು. ಈ ನಿಮ್ಮ ಪೂರ್ತಿ ಲೇಖನವನ್ನು ನಾನು ಕಣ್ಣುರೆಪ್ಪೆ ಹೊಡೆಯದೇ ಓದಿದ್ದೇನೆ. ಧನ್ಯವಾದಗಳು.

    ReplyDelete
  3. ಬಶೀರ್, ನಿಮ್ಮ ಆಲೋಚನೆ, ತರ್ಕ ತುಂಬಾ ಚೆನ್ನಾಗಿದೆ. ಜತೆಗೆ ನನಗೆ ನಿಮ್ಮ ಬರವಣಿಗೆಯ ಧಾಟಿ ಕೂಡ ಅಷ್ಟೇ ಇಷ್ಟವಾಯಿತು. ಸುಮ್ಮನೆ ಮುಗ್ದವಾಗಿ ಓದುತ್ತಾ ಹೋದೆ. ಹೀಗೆ ಸೂಜಿ ದಾರ ಹಿಡಿದು ಆಗಾಗ ಹರಿಯುವ ಮನಸ್ಸುಗಳ, ಬಿರುಕು ಬಿಡುವ ಹೃದಯಗಳ ಹೊಲಿಯುವ ಅಗತ್ಯವಿದೆ. ಹೀಗೆ ಬೆಳಕು ನೀಡುವ ಚಿಂತನೆ ಈಗ ಬೇಕಾಗಿತ್ತು. ಕಲೀಮ್ ಉಲ್ಲಾ, ಶಿವಮೊಗ್ಗ.

    ReplyDelete
  4. ಈ ಮೇಲಿನ ಮೂವರು ಸಹೋದರರ ಅಭಿಪ್ರಾಯವೇ ನನ್ನದು.ನಿಮ್ಮ ಭಾವನೆಗಳಲ್ಲಿ ಹರಿಯುವ ಸ್ನೇಹ ಸಂದೇಶ ಮಲಿನ ಕಲ್ಮಶ (ಹೃದಯಗಳ) ನೀರಿನ ಮಧ್ಯೆ ಸಿಟಿಲೊಡೆದು ಉದ್ಭವವಾಗುವ ಶುದ್ಧ ನೀರಿನ ಸ್ವಾದವಿದೆ.
    ಕಮರ್.

    ReplyDelete
  5. priya Basheeravare,nimma hrudayasparshi lekhanakke antaananta dhanyavaadagalu...

    ReplyDelete
  6. ಎಂದಿನಂತೆ ಕಾಮಾಲೆ ಹಳದಿ ಲೇಖನ!

    ReplyDelete
    Replies
    1. ನಮ್ಮ ಮಾತುಗಳು ನಮ್ಮೊಳಗೆ ತಪ್ಪೆಂದು ಸೂಚಿಸುವಾಗ ನಾವು ಅನಾಮಿಕರಾಗುತ್ತೇವೆ.

      Delete
    2. ನಮ್ಮ ಮಾತುಗಳು ನಮ್ಮೊಳಗೆ ತಪ್ಪೆಂದು ಸೂಚಿಸುವಾಗ ನಾವು ಅನಾಮಿಕರಾಗುತ್ತೇವೆ.

      Delete
  7. ಫಾರೂಕ್ ಕುಕ್ಕಾಜೆJanuary 31, 2013 at 7:53 AM

    ಬಷೀರ್‍ ಭಾಯಿ....ಧನ್ಯವಾದಗಳು.

    ನಿಮ್ಮ ಮಾಹಿತಿ ಪೂರ್ಣ ಬರಹ ಓದಿ ತುಂಬಾ ಮೆಚ್ಚಿಗೆಯಾಯಿತು.ಸತ್ಯವನ್ನು ದಿಟ್ಟವಾಗಿ ಬರೆಯುವ ನಿಮ್ಮ ಮನಮೋಹಕ ಶೈಲಿಯ ಬರಹದಲ್ಲಿ ಉದ್ದೀಪನವಿಲ್ಲ .ಸತ್ಯವನ್ನು ಅರಿಯಿರಿ ಎಂಬ ಕಳಕಳಿ ಇದೆ.

    ಬರೆಯಿರಿ, ಇನ್ನಷ್ಟು ಬರೆಯಿರಿ ...ಸುಳ್ಳಿನ ಸಾಮ್ರಾಜ್ಯ ಅಳಿದು ಹೋಗಲಿ.

    ಸತ್ಯಮೇವ ಜಯತೆ...


    ReplyDelete