Tuesday, July 15, 2014

ಫೆಲೆಸ್ತೀನ್-ಇಸ್ರೇಲ್ ಸಂಘರ್ಷ ಗಾಂಧಿ ಕಂಡಂತೆ

ಕೃಪೆ -ವಾರ್ತಾಭಾರತಿ ದಿನ ಪತ್ರಿಕೆ

ಫೆಲೆಸ್ತೀನ್ ನೆಲದಲ್ಲಿ ಯುರೋಪ್ ರಾಷ್ಟ್ರಗಳು ಇಸ್ರೇಲ್ ದೇಶವನ್ನು ಸ್ಥಾಪಿಸಿದ ಕುರಿತಂತೆ ಮಹಾತ್ಮಗಾಂಧೀಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದು 1938 ನವೆಂಬರ್ 26ರ ‘ಹರಿಜನ’ ಪತ್ರಿಕೆಯಲ್ಲಿ ಪ್ರಕಟಗೊಂಡ ಮಹಾತ್ಮಾ ಗಾಂಧಿಯ ಲೇಖನ



ಫೆಲೆಸ್ತೀನ್‌ನ ಅರಬ್-ಯಹೂದಿ ಸಂಘರ್ಷ ಮತ್ತು ಜರ್ಮನಿಯಲ್ಲಿ ಯಹೂದಿಗಳ ವಿರುದ್ಧ ನಡೆಯುತ್ತಿರುವ ಹಿಂಸಾಚಾರ- ಇದರ ಬಗ್ಗೆ ನಾನು ನನ್ನ ನಿಲುವನ್ನು ಘೋಷಿಸಬೇಕೆಂದು ಕೋರಿ ಹಲವರು ನನಗೆ ಪತ್ರ ಬರೆದಿದ್ದಾರೆ. ಈ ಅತ್ಯಂತ ಜಟಿಲ ವಿಷಯದ ಕುರಿತ ನನ್ನ ನಿಲುವನ್ನು ಘೋಷಿಸಲು ಹಿಂಜರಿಕೆಯಿಂದಲೇ ಮುಂದಡಿಯಿಡುತ್ತಿದ್ದೇನೆ.

ಯಹೂದಿಯರ ಪರವಾಗಿ ನನ್ನ ಸಹಾನುಭೂತಿಯಿದೆ. ದಕ್ಷಿಣ ಆಫ್ರಿಕದಲ್ಲಿ ನಾನು ಅವರನ್ನು ಹತ್ತಿರದಿಂದ ಬಲ್ಲೆ. ಅವರ ಪೈಕಿ ಕೆಲವರು ನನ್ನ ಜೀವನಪೂರ್ತಿ ಸಂಗಾತಿಗಳಾದರು. ಶತಮಾನಗಳಿಂದ ಅವರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯ ಬಗ್ಗೆ ನನ್ನ ಈ ಸ್ನೇಹಿತರಿಂದಲೇ ನಾನು ಹೆಚ್ಚಾಗಿ ತಿಳಿದುಕೊಂಡಿದ್ದೇನೆ. ಅವರು ಕ್ರೈಸ್ತರಿಂದ ಅಸ್ಪೃಶ್ಯತೆಗೊಳಗಾಗಿದ್ದರು. ಕ್ರೈಸ್ತರು ಅವರನ್ನು ನಡೆಸಿಕೊಂಡ ರೀತಿಗೂ ಹಿಂದೂಗಳು ಅಸ್ಪೃಶ್ಯರನ್ನು ನಡೆಸಿಕೊಳ್ಳುತ್ತಿರುವ ರೀತಿಗೂ ನಿಕಟ ಸಾಮ್ಯವಿದೆ. ಎರಡೂ ಪ್ರಕರಣಗಳಲ್ಲಿ ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ರೀತಿಗೆ ಧಾರ್ಮಿಕ ಸಮ್ಮತಿಯನ್ನು ನೀಡಲಾಗಿದೆ. ಹಾಗಾಗಿ, ಸ್ನೇಹಕ್ಕೆ ಹೊರತಾಗಿಯೂ, ಯಹೂದಿಯರ ಬಗೆಗಿನ ನನ್ನ ಸಹಾನುಭೂತಿಗೆ ವ್ಯಾಪಕ ಜಾಗತಿಕ ಕಾರಣವೂ ಇದೆ.
ಆದರೆ ಯಹೂದಿಯರ ಬಗ್ಗೆ ನಾನು ಹೊಂದಿರುವ ಸಹಾನುಭೂತಿ ನ್ಯಾಯದ ಕಡೆಗೆ ನಾನು ಕುರುಡಾಗಿ ವರ್ತಿಸುವಂತೆ ಮಾಡಿಲ್ಲ. ಯಹೂದಿಯರಿಗೆ ಒಂದು ದೇಶವನ್ನು ನೀಡಬೇಕೆನ್ನುವ ಕೂಗಿನ ಬಗ್ಗೆ ನಾನು ಆಕರ್ಷಿತನಾಗಿಲ್ಲ. ಅದನ್ನು ನಾನು ಬೆಂಬಲಿಸುವುದಿಲ್ಲ. ಭೂಮಿಯ ಮೇಲಿನ ಇತರ ಜನರಂತೆ, ಯಹೂದಿಗಳು ತಾವು ಹುಟ್ಟಿದ ಹಾಗೂ ಜೀವನೋಪಾಯ ಗಳಿಸುತ್ತಿರುವ ದೇಶವನ್ನೇ ತಮ್ಮ ಮನೆಯನ್ನಾಗಿ ಯಾಕೆ ಮಾಡಿಕೊಳ್ಳಬಾರದು? ಎನ್ನುವುದು ನನ್ನ ಪ್ರಶ್ನೆ.
ಇಂಗ್ಲೆಂಡ್ ಇಂಗ್ಲಿಷರಿಗೆ ಮತ್ತು ಫ್ರಾನ್ಸ್ ಫ್ರೆಂಚರಿಗೆ ಹೇಗೆ ಸೇರಿದೆಯೋ, ಅದೇ ರೀತಿ ಫೆಲೆಸ್ತೀನ್ ಅರಬ್ಬರಿಗೆ ಸೇರಿದೆ. ಅರಬ್ಬರ ಮೇಲೆ ಯಹೂದಿಯರನ್ನು ಹೇರುವುದು ತಪ್ಪು ಮತ್ತು ಅಮಾನವೀಯ. ಇಂದು ಫೆಲೆಸ್ತೀನ್‌ನಲ್ಲಿ ಏನು ನಡೆಯುತ್ತಿದೆಯೋ ಅದನ್ನು ಯಾವುದೇ ನೈತಿಕ ಮಾನದಂಡದಿಂದ ಸಮರ್ಥಿಸಲಾಗದು. ಫೆಲೆಸ್ತೀನನ್ನು ಆಂಶಿಕವಾಗಿ ಅಥವಾ ಪೂರ್ಣವಾಗಿ ಯಹೂದಿಯರ ದೇಶವನ್ನಾಗಿಸುವುದು ಹಾಗೂ ಆ ಮೂಲಕ ಅರಬ್ಬರ ಘನತೆಯನ್ನು ತಗ್ಗಿಸುವುದು ಖಂಡಿತವಾಗಿಯೂ ಮನುಕುಲದ ವಿರುದ್ಧ ಮಾಡಿದ ಅಪರಾಧವಾಗುತ್ತದೆ.

ಇದಕ್ಕೆ ಸರಿಯಾದ ಪರಿಹಾರವೆಂದರೆ ಯಹೂದಿಗಳು ಎಲ್ಲಿ ಹುಟ್ಟಿ ಬೆಳೆದಿದ್ದಾರೋ ಅಲ್ಲೇ ಅವರಿಗೆ ನ್ಯಾಯಯುತವಾದ ಸ್ಥಾನಮಾನ ಸಿಗುವಂತೆ ನೋಡಿಕೊಳ್ಳುವುದು. ಫ್ರಾನ್ಸ್‌ನಲ್ಲಿ ಹುಟ್ಟಿದ ಯಹೂದಿಗಳು ಫ್ರೆಂಚರು. ಯಹೂದಿಯರಿಗೆ ಫೆಲೆಸ್ತೀನ್ ಅಲ್ಲದೆ ಬೇರೆ ಮನೆ ಇಲ್ಲ ಎಂದಾದರೆ, ತಮ್ಮ ಮನೆಗಳನ್ನು ತೊರೆಯುವಂತೆ ಜಗತ್ತಿನ ಇತರ ಭಾಗಗಳಲ್ಲಿ ನೆಲೆ ಕಂಡುಕೊಂಡಿರುವ ಯಹೂದಿಗಳನ್ನು ಒತ್ತಾಯಿಸಬಹುದೇ? ಹಾಗೂ ಇಂಥ ಒತ್ತಾಯವನ್ನು ಅವರು ಸ್ವೀಕರಿಸುತ್ತಾರೆಯೇ? ಅಥವಾ ಅವರಿಗೆ ಎರಡು ಮನೆಗಳು ಬೇಕೇ ಹಾಗೂ ತಮಗೆ ಇಷ್ಟಬಂದಂತೆ ಅವರು ಆ ಮನೆಗಳಲ್ಲಿ ಇರಬಹುದೇ? ಈ ಪ್ರತ್ಯೇಕ ಇಸ್ರೇಲ್ ರಾಷ್ಟ್ರಕ್ಕಾಗಿನ ಕೂಗು ಜರ್ಮನಿಯಿಂದ ಯಹೂದಿಗಳನ್ನು ಉಚ್ಚಾಟಿಸುವ ಕ್ರಮವನ್ನು ಸಮರ್ಥಿಸುತ್ತದೆ.
 ಆದರೆ, ಜರ್ಮನಿಗರ ಕೈಯಲ್ಲಿ ಯಹೂದಿಗಳು ಅನುಭವಿಸಿದ ಹಿಂಸೆಗೆ ಇತಿಹಾಸದಲ್ಲಿ ಸಾಟಿಯೇ ಇಲ್ಲ. ಹಿಂದಿನ ಕಾಲದ ನಿರಂಕುಶ ಆಡಳಿತಗಾರರು ಕೂಡ ಹಿಟ್ಲರ್‌ನ ಹುಚ್ಚನ್ನು ಸರಿಗಟ್ಟಲಾರರು. ಹಿಟ್ಲರ್ ಇದನ್ನು ಧಾರ್ಮಿಕ ಉತ್ಸಾಹದಿಂದ ಮಾಡುತ್ತಿದ್ದಾನೆ. ಹಿಂಸಾ ವಿನೋದಿ ರಾಷ್ಟ್ರೀಯತೆಗಾಗಿಯೇ ಮುಡುಪಾಗಿಟ್ಟಿರುವ ನೂತನ ಧರ್ಮವೊಂದನ್ನು ಆತ ಸ್ಥಾಪಿಸುತ್ತಿದ್ದಾನೆ ಹಾಗೂ ಈಗ ಮತ್ತು ಇನ್ನು ಮುಂದೆ ಈ ಧರ್ಮದಲ್ಲಿ ಯಾವುದೇ ಅಮಾನವೀಯತೆಯ ಕತ್ಯ , ಮಾನವೀಯತೆಯ ಕತ್ಯವಾಗಿ ಪುರಸ್ಕರಿಸಲ್ಪಡುತ್ತದೆ. ಓರ್ವ ಹುಚ್ಚ, ಆದರೆ ಅಸಾಧಾರಣ ಧೈರ್ಯಶಾಲಿ ಯುವಕನೊಬ್ಬನ ಅಪರಾಧವನ್ನು ಆತನ ಜನಾಂಗದ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಮನುಕುಲದ ಹೆಸರಿನಲ್ಲಿ ಮನುಕುಲಕ್ಕಾಗಿ ಎಂದಾದರೂ ಸಮರ್ಥನೀಯ ಯುದ್ಧ ನಡೆಯುತ್ತದೆ ಎಂದಾದರೆ, ಇಡೀ ಜನಾಂಗವೊಂದನ್ನು ಹಿಂಸೆಯಿಂದ ಪಾರು ಮಾಡಲು ಜರ್ಮನಿಯ ವಿರುದ್ಧ ಯುದ್ಧ ನಡೆಯಬೇಕಾಗಿದೆ ಹಾಗೂ ಅದು ಸಂಪೂರ್ಣ ಸಮರ್ಥನೀಯವಾಗಿದೆ. ಆದರೆ, ಯಾವುದೇ ಯುದ್ಧದಲ್ಲಿ ನನಗೆ ನಂಬಿಕೆಯಿಲ್ಲ. ಹಾಗಾಗಿ, ಇಂಥ ಯುದ್ಧದ ಸಾಧಕ-ಬಾಧಕಗಳು ನನ್ನ ವ್ಯಾಪ್ತಿಗೆ ಬರುವುದಿಲ್ಲ.
  ಯಹೂದಿಗಳ ವಿರುದ್ಧ ನಡೆಸಲಾಗುತ್ತಿರುವ ಇಂಥ ಅಪರಾಧದ ಹೊರತಾಗಿಯೂ ಜರ್ಮನಿಯ ವಿರುದ್ಧ ಯುದ್ಧ ಮಾಡುವುದು ಸಾಧ್ಯವಿಲ್ಲವಾದರೆ, ಖಂಡಿತವಾಗಿಯೂ ಜರ್ಮನಿಯೊಂದಿಗೆ ಮೈತ್ರಿಯೂ ಸಾಧ್ಯವಿಲ್ಲ. ನ್ಯಾಯ ಮತ್ತು ಪ್ರಜಾಪ್ರಭುತ್ವದ ಪರವಾಗಿರುವೆನೆಂದು ಹೇಳಿಕೊಳ್ಳುವ ದೇಶ ಹಾಗೂ ನ್ಯಾಯ ಮತ್ತು ಪ್ರಜಾಪ್ರಭುತ್ವದ ಘೋಷಿತ ಶತ್ರುವಾಗಿರುವ ದೇಶವೊಂದರ ನಡುವೆ ಮೈತ್ರಿ ಹೇಗೆ ಸಾಧ್ಯ? ಮಾನವೀಯತೆಯ ಮುಖವಾಡದಲ್ಲಿ ಸೋಗಲಾಡಿತನ ಅಥವಾ ದೌರ್ಬಲ್ಯವು ಮಧ್ಯಪ್ರವೇಶಿಸದಿದ್ದರೆ ಹಿಂಸೆಯನ್ನು ಎಷ್ಟು ದಕ್ಷತೆಯಿಂದ ನಿರ್ವಹಹಿಸಬಹುದು ಎಂಬುದನ್ನು ಜರ್ಮನಿ ವಿಶ್ವಕ್ಕೆ ತೋರಿಸಿಕೊಟ್ಟಿದೆ. ಇದನ್ನು ನಿಜರೂಪದಲ್ಲಿ ನೋಡಿದಾಗ ಅವು ಎಷ್ಟು ಅಗೋಚರವಾಗಿ, ಭಯಾನಕವಾಗಿ ಕಾಣಿಸುತ್ತದೆ ಎನ್ನುವುದೂ ಇದರಿಂದ ಗೊತ್ತಾಗುತ್ತದೆ.
ಈ ಸಂಘಟಿತ ಹಾಗೂ ಅನಾಗರಿಕ ಹಿಂಸೆಯನ್ನು ಯಹೂದಿಗಳು ವಿರೋಧಿಸಬಲ್ಲರೇ? ತಮ್ಮ ಸ್ವಾಭಿಮಾನವನ್ನು ರಕ್ಷಿಸಲು ಹಾಗೂ ತಾವು ಅಸಹಾಯಕರು, ನಿರ್ಲಕ್ಷಿತರು ಮತ್ತು ಅನಾಥರು ಎಂಬ ಭಾವನೆಯನ್ನು ಹೋಗಲಾಡಿಸಲು ಏನಾದರೂ ಮಾರ್ಗವಿದೆಯೇ? ಹೌದು, ಮಾರ್ಗವಿದೆ. ದೇವರ ಮೇಲೆ ನಂಬಿಕೆ ಇರುವ ಯಾವುದೇ ವ್ಯಕ್ತಿ ಅಸಹಾಯಕ ಅಥವಾ ಅನಾಥ ಭಾವನೆಯಿಂದ ನರಳುವ ಅಗತ್ಯವಿಲ್ಲ.
    ದೇವರು ಒಂದೇ, ಎಲ್ಲರಿಗೂ ಒಬ್ಬನೆ ಹಾಗೂ ವರ್ಣನೆಗೆ ಅತೀತ ಎಂಬುದಾಗಿ ಸಾಮಾನ್ಯ ನಂಬಿಕೆಯಿದ್ದರೂ, ಯಹೂದಿಗಳ ಜಿಹೋವಾ ಕ್ರೈಸ್ತರು, ಮುಸಲ್ಮಾನರು ಅಥವಾ ಹಿಂದೂಗಳ ದೇವರಿಗಿಂತ ಹೆಚ್ಚು ಆಪ್ತ. ಆದರೆ, ಯಹೂದಿಗಳು ದೇವರಿಗೆ ವ್ಯಕ್ತಿತ್ವವನ್ನು ನೀಡಿದ್ದಾರೆ ಹಾಗೂ ಆತ ತಮ್ಮ ಎಲ್ಲ ಕತ್ಯಗಳ ಮೇಲೆ ದೇವರು ನಿಯಂತ್ರಣ ಹೊಂದಿದ್ದಾನೆ ಎಂದು ಭಾವಿಸುತ್ತಾರೆ. ಹಾಗಾಗಿ, ಅವರು ಅಸಹಾಯಕ ಭಾವನೆಯನ್ನು ಹೊಂದುವ ಅಗತ್ಯವಿಲ್ಲ. ನಾನು ಯಹೂದಿಯಾಗಿದ್ದರೆ, ಜರ್ಮನಿಯಲ್ಲಿ ಹುಟ್ಟಿದ್ದರೆ ಹಾಗೂ ನನ್ನ ಜೀವನೋಪಾಯವನ್ನು ಅಲ್ಲೇ ಸಂಪಾದಿಸುತ್ತಿದ್ದರೆ, ಜರ್ಮನಿಯನ್ನು ನನ್ನ ಮನೆ ಎಂಬುದಾಗಿ ನಾನು ಘೋಷಿಸುತ್ತಿದ್ದೆ. ನನಗೆ ಗುಂಡು ಹಾರಿಸುವುದಾಗಿ ಹಾಗೂ ಕತ್ತಲ ಕೂಪಕ್ಕೆ ತಳ್ಳುವುದಾಗಿ ಎತ್ತರದ ಜರ್ಮನಿ ಜನಾಂಗೀಯನೊಬ್ಬ ನನಗೆ ಬೆದರಿಕೆ ಹಾಕಿದರೂ ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. ಉಚ್ಚಾಟನೆಗೊಳ್ಳಲು ಅಥವಾ ತಾರತಮ್ಯಪೂರಿತ ನಡವಳಿಕೆಗೆ ಒಳಗಾಗಲು ನಾನು ಒಪ್ಪುತ್ತಿರಲಿಲ್ಲ. ಹೀಗೆ ಮಾಡುವಾಗ ನನ್ನ ಸಹ ಯಹೂದಿಗಳು ನನಗೆ ಬೆಂಬಲ ನೀಡಬೇಕೆಂದು ನಾನು ಕಾಯುವುದಿಲ್ಲ, ಆದರೆ, ಕೊನೆಯಲ್ಲಿ ಇತರರು ನನ್ನ ಉದಾಹರಣೆಯನ್ನು ಅನುಸರಿಸುತ್ತಾರೆ ಎಂಬ ವಿಶ್ವಾಸವನ್ನು ನಾನು ಹೊಂದುತ್ತೇನೆ. ಇಲ್ಲಿ ನೀಡಿರುವ ಸಲಹೆಯನ್ನು ಒಬ್ಬ ಯಹೂದಿ ಅಥವಾ ಯಹೂದಿಗಳು ಒಪ್ಪಿಕೊಂಡರೆ, ಆತ ಅಥವಾ ಅವರು ಈಗಿನದಕ್ಕಿಂತ ಕೆಟ್ಟ ಪರಿಸ್ಥಿತಿಗೆ ಯಾವತ್ತೂ ಬೀಳುವುದಿಲ್ಲ. ಸ್ವಯಂ ದಂಡನೆ ಯಹೂದಿಗಳಿಗೆ ಆಂತರಿಕ ಶಕ್ತಿಯನ್ನು ತುಂಬುತ್ತದೆ. ಜರ್ಮನಿಯಿಂದ ಹೊರಗಿನ ಜಗತ್ತಿನಲ್ಲಿ ಎಷ್ಟೇ ಸಂಖ್ಯೆಯ ಅನುಕಂಪ ನಿರ್ಣಯಗಳನ್ನು ಅಂಗೀಕರಿಸಿದರೂ ಅವು ಈ ಶಕ್ತಿಗೆ ಸಮವಾಗಲಾರದು. ಈ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್‌ಗಳು ಜರ್ಮನಿ ವಿರುದ್ಧ ಯುದ್ಧ ಸಾರಿದರೂ ಅದು ಯಹೂದಿಗಳಿಗೆ ಆತ್ಮ ಶಕ್ತಿ ಮತ್ತು ಆತ್ಮ ಸಂತೋಷವನ್ನು ತರಲಾರದು. ಯುದ್ಧ ಘೋಷಣೆಗೆ ಹಿಟ್ಲರ್‌ನ ಪ್ರಥಮ ಪ್ರತಿಕ್ರಿಯೆಯನ್ನು ಗಮನಿಸಿದರೆ ಆತನ ಲೆಕ್ಕಾಚಾರದ ಹಿಂಸಾಚಾರ ಯಹೂದಿಗಳ ಸಾಮೂಹಿಕ ಮಾರಣಹೋಮದಲ್ಲೂ ಪರ್ಯಾವಸಾನಗೊಳ್ಳಬಹುದು. ಆದರೆ, ಸ್ವಯಂ ದಂಡನೆಗೆ ಯಹೂದಿಗಳು ಸಿದ್ಧರಿದ್ದರೆ ನಾನು ಊಹಿಸಿದ ಮಾರಣಹೋಮವೂ ಸಂತೋಷ ಮತ್ತು ಧನ್ಯವಾದ ಸಮರ್ಪಣೆಯ ದಿನವಾಗಿ ಮಾರ್ಪಡಬಹುದು. ಯಾಕೆಂದರೆ, ದೇವರಿಗೆ ಭಯಪಡುವವರಿಗೆ ಸಾವು ಭಯ ಹುಟ್ಟಿಸುವುದಿಲ್ಲ. ಅದೊಂದು ಸುಖದಾಯಕ ನಿದ್ರೆ.
ನನ್ನ ಪರಿಹಾರದ ಪ್ರಕಾರ ನಡೆಯುವುದು ಝೆಕ್‌ಗಳಿಗಿಂತಲೂ ಯಹೂದಿಗಳಿಗೆ ಹೆಚ್ಚು ಸುಲಭ ಎಂದು ಹೇಳುವ ಅಗತ್ಯವೇನೂ ಇಲ್ಲ. ಅವರು ದಕ್ಷಿಣ ಆಫ್ರಿಕದಲ್ಲಿ ನಡೆದ ಭಾರತೀಯ ಸತ್ಯಾಗ್ರಹ ಚಳವಳಿಯಲ್ಲಿ ಭಾಗವಹಿಸಿದ್ದರು. ಜರ್ಮನಿಯಲ್ಲಿ ಯಹೂದಿಯರು ಪಡೆದ ಸ್ಥಾನವನ್ನೇ ದಕ್ಷಿಣ ಆಫ್ರಿಕದಲ್ಲಿ ಭಾರತೀಯರು ಪಡೆದುಕೊಂಡರು. ಹಿಂಸಾಚಾರದಲ್ಲೂ ಧಾರ್ಮಿಕತೆಯ ಮುದ್ರೆಯಿದೆ. ಬಿಳಿ ಕ್ರೈಸ್ತರು ದೇವರ ಆಯ್ದ ಸಷ್ಟಿ ಹಾಗೂ ಭಾರತೀಯರು ಬಿಳಿಯರ ಸೇವೆ ಮಾಡುವುದಕ್ಕಾಗಿ ಸಷ್ಟಿಸಲಾದ ಕೆಳ ಮಟ್ಟದ ಮಾನವರು ಎಂಬುದಾಗಿ ಅಧ್ಯಕ್ಷ ಕ್ರುಗರ್ ಹೇಳುತ್ತಿದ್ದರು. ಬಿಳಿಯರು ಹಾಗೂ ಏಶ್ಯನ್ನರು ಸೇರಿದಂತೆ ವರ್ಣೀಯ ಜನಾಂಗಗಳ ನಡುವೆ ಸಮಾನತೆ ಇರಕೂಡದು ಎಂಬುದಾಗಿ ಟ್ರಾನ್ಸ್‌ವಾಲ್ ಸಂವಿಧಾನದ ಮೂಲಭೂತ ವಿಧಿಯೊಂದು ಹೇಳುತ್ತದೆ. ಅಲ್ಲಿಯೂ ಭಾರತೀಯರನ್ನು ಕೊಳೆಗೇರಿಗಳಿಗೆ ನೂಕಲಾಗುತ್ತಿತ್ತು. ಅವರು ದಕ್ಷಿಣ ಆಫ್ರಿಕದಲ್ಲಿ ಎದುರಿಸುವ ಇತರ ಸಮಸ್ಯೆಗಳು ಜರ್ಮನಿಯಲ್ಲಿ ಯಹೂದಿಗಳು ಎದುರಿಸುತ್ತಿರುವ ಸಮಸ್ಯೆಯಂತೆಯೇ ಇದೆ. ಬೆರಳೆಣಿಕೆಯಷ್ಟಿದ್ದ ಭಾರತೀಯರು ಬಾಹ್ಯ ಜಗತ್ತು ಅಥವಾ ಭಾರತ ಸರಕಾರದ ಬೆಂಬಲವಿಲ್ಲದೆಯೇ ಸತ್ಯಾಗ್ರಹ ಆರಂಭಿಸಿದರು. ಬ್ರಿಟಿಶ್ ಅಧಿಕಾರಿಗಳು ಸತ್ಯಾಗ್ರಹಿಗಳ ಮನವೊಲಿಕೆಗೆ ಮುಂದಾಗಿದ್ದು ಮುನ್ನೋಟದ ಕ್ರಮವಾಗಿತ್ತು. ಎಂಟು ವರ್ಷಗಳ ಹೋರಾಟದ ಬಳಿಕ ಭಾರತ ಸರಕಾರ ಮತ್ತು ಜಾಗತಿಕ ನಿಲುವು ಸತ್ಯಾಗ್ರಹಿಗಳ ಪರವಾಗಿ ನಿಂತವು. ಇದು ಸಾಧ್ಯವಾದದ್ದು ರಾಜತಾಂತ್ರಿಕ ಒತ್ತಡದಿಂದಲೇ ಹೊರತು ಯುದ್ಧದ ಬೆದರಿಕೆಯಿಂದಲ್ಲ.
 ಆದರೆ, ಜರ್ಮನಿಯ ಯಹೂದಿಗಳು ದಕ್ಷಿಣ ಆಫ್ರಿಕದ ಭಾರತೀಯರಂತಲ್ಲದೆ ಅಸಂಖ್ಯಾತ ಉತ್ತಮ ವೇದಿಕೆಗಳ ಮೂಲಕ ಸತ್ಯಾಗ್ರಹ ನಡೆಸಬಹುದಾಗಿದೆ. ಯಹೂದಿಗಳು ಜರ್ಮನಿಯಲ್ಲಿರುವ ಸಮಾನತೆ ಹೊಂದಿದ ಸಮುದಾಯ. ಅವರು ದಕ್ಷಿಣ ಆಫ್ರಿಕದ ಭಾರತೀಯರಿಗಿಂತ ಅತಿ ಹೆಚ್ಚು ಪ್ರತಿಭಾವಂತರು. ಅವರ ಬೆನ್ನ ಹಿಂದೆ ಸಂಘಟಿತ ವಿಶ್ವಾಭಿಪ್ರಾಯವಿದೆ. ಧೈರ್ಯ ಮತ್ತು ದೂರದಷ್ಟಿ ಹೊಂದಿದ ವ್ಯಕ್ತಿಯೊಬ್ಬ ಅವರ ನಡುವೆ ಹುಟ್ಟಿ ಅಹಿಂಸಾತ್ಮಕ ಚಳವಳಿಯನ್ನು ಮುನ್ನಡೆಸಿದರೆ ಅವರ ಬದುಕಿನಲ್ಲಿ ಭರವಸೆಯ ಹೊಂಗಿರಣಗಳು ಮೂಡಲು ಸಾಧ್ಯ. ಅಂದು ಜರ್ಮನಿಯ ಯಹೂದಿಗಳು ಜರ್ಮನಿಯ ಯಹೂದಿಯೇತರರ ವಿರುದ್ಧ ಶಾಶ್ವತ ಗೆಲುವನ್ನು ಪಡೆಯುತ್ತಾರೆ. ಯಾಕೆಂದರೆ, ಮಾನವ ಘನತೆಯನ್ನು ಗೌರವಿಸುವ ಬಗ್ಗೆ ಅಂದು ಅವರು ಜರ್ಮನಿಯ ಯಹೂದಿಯೇತರರ ಮನವೊಲಿಸುತ್ತಾರೆ. ಅಂದು ಅವರು ತಮ್ಮ ಸಹ ಜರ್ಮನೀಯರ ಪ್ರತಿಷ್ಠೆಯನ್ನು ಹೆಚ್ಚಿಸಲಿದ್ದಾರೆ ಹಾಗೂ ಇಂದು ಜರ್ಮನ್ ಹೆಸರನ್ನು ವಿವಾದಕ್ಕೆ ಎಳೆದುಕೊಂಡು ಹೋಗುತ್ತಿರುವವರ ನಡುವೆ ನಿಜವಾದ ಜರ್ಮನೀಯರು ಯಾರು ಎಂಬುದನ್ನು ತೋರಿಸಿಕೊಡಲಿದ್ದಾರೆ.
ಈಗ ಫೆಲೆಸ್ತೀನ್‌ನಲ್ಲಿ ಇರುವ ಯಹೂದಿಯರಿಗೆ ಒಂದು ಮಾತು. ಅವರು ಇಲ್ಲಿ ತಪ್ಪು ಮಾಡುತ್ತಿದ್ದಾರೆ ಎಂದು ಹೇಳುವುದರಲ್ಲಿ ನನ್ನಲ್ಲಿ ಯಾವುದೇ ಗೊಂದಲಗಳಿಲ್ಲ. ಬೈಬಲ್‌ನಲ್ಲಿ ಉಲ್ಲೇಖಗೊಂಡಿರುವ ಫೆಲೆಸ್ತೀನ್ ವಾಸ್ತವದಲ್ಲಿ ಭೂಪ್ರದೇಶವಲ್ಲ. ಅದು ಯಹೂದಿಗಳ ಹದಯಗಳಲಿ ಮಾತ್ರ ಇದೆ. ಇಷ್ಟಾಗಿಯೂ ಫೆಲೆಸ್ತೀನ್ ಭೂಪ್ರದೇಶವನ್ನು ಯಹೂದಿಗಳು ತಮ್ಮ ರಾಷ್ಟ್ರೀಯ ಮನೆ ಎಂಬುದಾಗಿ ಪರಿಗಣಿಸುವುದಾದರೆ, ಬ್ರಿಟಿಶ್ ಬಂದೂಕಿನ ನೆರಳಿನಲ್ಲಿ ಅದನ್ನು ಪ್ರವೇಶಿಸುವುದು ತಪ್ಪು. ಧಾರ್ಮಿಕ ಕಾರ್ಯವೊಂದನ್ನು ಬಯೋನೆಟ್ (ಬಂದೂಕಿನ ತುದಿಯಲ್ಲಿರುವ ಚಾಕು) ಅಥವಾ ಬಾಂಬ್‌ಗಳ ನೆರವಿನಿಂದ ನಿರ್ವಹಿಸುವುದು ಸಾಧ್ಯವಿಲ್ಲ. ಅರಬ್ಬರ ಸದ್ಭಾವನೆಯೊಂದಿಗೆ ಮಾತ್ರ ಅವರು ಫೆಲೆಸ್ತೀನ್‌ನಲ್ಲಿ ನೆಲೆಸಲು ಸಾಧ್ಯ. ಅವರು ಅರಬ್ ಹದಯವನ್ನು ಪರಿವರ್ತಿಸಬೇಕು. ಯಹೂದಿ ಹದಯವನ್ನು ನಿಯಂತ್ರಿಸುವ ದೇವರೇ ಅರಬ್ ಹದಯವನ್ನು ನಿಯಂತ್ರಿಸುತ್ತಾನೆ. ಅವರು ಅರಬ್ಬರ ಸಮ್ಮುಖದಲ್ಲಿ ಸತ್ಯಾಗ್ರಹ ನಡೆಸಬಹುದು ಹಾಗೂ ಅವರ ಬಂದೂಕಿಗೆ ಎದೆಯೊಡ್ಡಲು ಮುಂದಾಗಬೇಕು. ಅರಬ್ಬರು ತಮ್ಮನ್ನು ಮತ ಸಮುದ್ರಕ್ಕೆ ಎತ್ತಿ ಬಿಸಾಡಿದರೂ ಅದನ್ನು ಸ್ವೀಕರಿಸಬೇಕು ಹಾಗೂ ಅವರ ವಿರುದ್ಧ ಕಿರು ಬೆರಳನ್ನೂ ಎತ್ತಬಾರದು. ಹೀಗೆ ಮಾಡಿದರೆ ವಿಶ್ವದ ಅಭಿಪ್ರಾಯ ಅವರ ಪರವಾಗಿ ಬರುತ್ತದೆ.
ನಾನು ಅರಬ್ಬರ ಅತಿರೇಕಗಳನ್ನು ಸಮರ್ಥಿಸುತ್ತಿಲ್ಲ. ಆದರೆ ತಮ್ಮ ದೇಶವನ್ನು ಆಕ್ರಮಿಸಲು ಪ್ರಯತ್ನಗಳು ನಡೆದಿವೆ ಎಂಬ ಅಭಿಪ್ರಾಯಕ್ಕೆ ಅರಬ್ಬರು ಬಂದಿದ್ದರೆ ಅದು ಸರಿಯಾಗಿಯೇ ಇದೆ. ಅದನ್ನು ವಿರೋಧಿಸಲು ಅವರು ಅಹಿಂಸಾ ಕ್ರಮಕ್ಕೆ ಮುಂದಾಗಿದ್ದರೆ ಚೆನ್ನ. ಆದರೆ, ಸ್ವೀಕತ ತಪ್ಪು-ಒಪ್ಪುಗಳ ಮಾನದಂಡದ ಆಧಾರದಲ್ಲಿ, ಪ್ರಸಕ್ತ ನಡೆಯುತ್ತಿರುವ ಅಸಹಜ ವಿದ್ಯಮಾನಗಳ ಹಿನ್ನೆಲೆಯಲ್ಲಿ ಅರಬ್ ಪ್ರತಿರೋಧವನ್ನು ಟೀಕಿಸಲು ಸಾಧ್ಯವಾಗದು.
ತಮ್ಮನ್ನು ದೇವರ ಆಯ್ದ ಜನಾಂಗ ಎಂಬುದಾಗಿ ಬಣ್ಣಿಸಿಕೊಳ್ಳುವ ಯಹೂದಿಗಳು ಜಗತ್ತಿನಲ್ಲಿ ತಮ್ಮ ಸ್ಥಾನವನ್ನು ಪಡೆಯಲು ಅಹಿಂಸಾ ಹಾದಿಯಲ್ಲಿ ಸಾಗಲಿ. ಫೆಲೆಸ್ತೀನ್ ಸೇರಿದಂತೆ ಪ್ರತಿ ದೇಶವೂ ಅವರ ಮನೆ; ಆಕ್ರಮಣದಿಂದಲ್ಲ, ಪ್ರೀತಿಯ ಸೇವೆಯಿಂದ.
ಸೆಗಾಂವ್
ನವೆಂಬರ್ 20, 1938

Tuesday, July 8, 2014

ಹನಿಗಳಲ್ಲಿ ಇರುವೆಗಳು



1
ಗುಬ್ಬಿಯ
ತಲೆ ಮೇಲಿನ ನೆರಳಿಗೆ
ಒಂದು ಪುಟ್ಟ ಎಲೆ ಸಾಕು
ಮನುಷ್ಯನಿಗೋ
ಎಲ್ಲೆ ಇಲ್ಲ
ಆಕಾಶವೂ ಸಾಲೋದಿಲ್ಲ
2
ಹರಿದು ಬಿದ್ದ
ಕರಿಮಣಿ ಸರದಂತೆ
ಚೆಲ್ಲಾಪಿಲ್ಲಿಯಾಗಿರುವ
ಇರುವೆಗಳು
3
ಈ ಭೂಮಿ
ಯಾವ ಭಗದಿಂದ
ಉದುರಿ ಬಿದ್ದ
ಬೀಜ!?
4
ದೇವರೇ
ನನ್ನ ಉಪವಾಸ
ಬಡವರ ಹಸಿವಿನ
ಅಣಕವಾಗದಿರಲಿ!
5
ದೇವರೇ,
ಪುಟ್ಟ ಇರುವೆಗೆ
ದೊಡ್ಡ ದುಃಖ ಕೊಡಬೇಡ
ಅದರ ಕಣ್ಣೀರಲ್ಲೇ ಅದು
ಮುಳುಗಿ ಸತ್ತೀತು ಪಾಪ!
6
ಅವಳು ಅತ್ತ
ಇವನು ಅತ್ತ !!
7
ನಿನ್ನೆ ಸಂಜೆ
ಮನಸು ಚದುರಿದ ರಂಗೋಲಿ
ಚೆಲ್ಲಾಪಿಲ್ಲಿಯಾದ ಬಣ್ಣ
ಇಂದು ಮುಂಜಾನೆ
ಕಣ್ಣು ತೆರೆದರೆ ಮನಸು
ಸಾರಿಸಿಟ್ಟ ಅಂಗಳ !
8
ಸಕ್ಕರೆ ಕಾಯಿಲೆ
ಎಂದು ವೈದ್ಯರ ಮನೆಯ
ಬಾಗಿಲು ತಟ್ಟಿದರೆ
ಅಲ್ಲಿ ಇರುವೆಗಳು
ಸಾಲು ಗಟ್ಟಿ ನಿಂತಿವೆ !
9
ಅನಂತದಲ್ಲಿ ನೀನು
ತೇಲಿ ಬಿಟ್ಟ ಹಡಗು
ಈ ಭೂಮಿ
ಕಣದಲ್ಲಿ ಕಣವಾಗಿದ್ದ
ನನ್ನನ್ನು ಗುರುತಿಸಿ
ಹತ್ತಿಸಿಕೊಂಡೆಯಲ್ಲ
ಶರಣು ನನ್ನ ದೊರೆಯೇ
10
ಮದ್ಯದಂಗಡಿಯಲ್ಲಿ ಲೆಕ್ಕ ಬರೆದು
ಆತ ಪ್ರತಿ ದಿನ
ಮಗುವಿಗೆ ಹಾಲು
ಕೊಂಡೊಯ್ಯುತ್ತಾನೆ
12

ಇಷ್ಟಗಲ ಚಾಚಿರುವ
ಈ ಆಕಾಶ
ಯಾವ ಮರದ ಎಲೆ?

13
ಕವಿತೆಗಳು
ಸಿಹಿಯಾಗಿದ್ದರೆ
ಅಕ್ಷರಗಳು
ಇರುವೆಗಳಂತೆ
ಬಂದು ಮುತ್ತಿ ಕೊಳ್ಳುತ್ತವೆ

Sunday, July 6, 2014

ಹೀಗೊಂದು ಬ್ಲಾಕ್ ಲಿಸ್ಟ್

 ಪತ್ರಕರ್ತರಾದ ಎನ್. ಎ. ಎಂ. ಇಸ್ಮಾಯಿಲ್ ಅವರು ಪ್ರಜಾವಾಣಿಯಲ್ಲಿ ‘‘ಎಲ್ಲಿದೆ ನಮ್ ಮನೆ’’ ( http://www.prajavani.net/article/%E0%B2%8E%E0%B2%B2%E0%B3%8D%E0%B2%B2%E0%B2%BF%E0%B2%A6%E0%B3%86-%E0%B2%A8%E0%B2%AE%E0%B3%8D-%E0%B2%AE%E0%B2%A8%E0%B3%86#.U7j9oc9Clwk.facebook) ಬರಹದಲ್ಲಿ ಮುಸ್ಲಿಮನೊಬ್ಬ ಬಾಡಿಗೆ ಮನೆ ಹುಡುಕಬೇಕಾದಾಗ ಎದುರಿಸಬೇಕಾದ ಕೆಲವು ತಮಾಷೆಗಳನ್ನು ಹೃದಯ ಮುಟ್ಟುವಂತೆ ಬರೆದಿದ್ದಾರೆ. ಇದಕ್ಕೆ ಪೂರಕವಾಗಿ ನನ್ನದೊಂದು ಅನುಭವವನ್ನು ವಿವರಿಸುತ್ತೇನೆ.
ಒಂದಾರು ತಿಂಗಳ ಹಿಂದೆ ನಾನೊಂದು ಆಕ್ಟೀವಾ ತೆಗೆಯಲು ಹೊರಟಿದ್ದೆ. ಅದಕ್ಕೆ ಬೇಕಾದ ಎಲ್ಲ ದಾಖಲೆಗಳನ್ನೂ, ಜೊತೆಗೆ 25 ಸಾವಿರ ಡೌನ್ ಪೇಮೆಂಟ್‌ನ್ನೂ ಕಟ್ಟಿದ್ದೆ. ಹೆಚ್ಚೆಂದರೆ ಫೈನಾನ್ಸ್‌ನವರು ೆ ಒಂದು 25 ಸಾವಿರ ಕೊಡಬೇಕಾಗುತ್ತಿತ್ತು. ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿ ನಾನು ಯಾವ ಪ್ರದೇಶದಲ್ಲಿ ವಾಸ ಮಾಡುತ್ತಿದ್ದೇನೆ ಎನ್ನುವುದು ಸಾಲಕ್ಕೆ ತೊಡಕಾಗಿ ಪರಿಣಮಿಸಿತು. ‘‘ಇಲ್ಲಾ ಸಾರ್...ಆ ಏರಿಯಾ ಬ್ಲಾಕ್ ಲಿಸ್ಟ್‌ನಲ್ಲಿದೆ...’’ ಎಂದು ಬಿಟ್ಟ. ಹಾಗೆಂದು ಅವನು ಸುಳ್ಳೇನೂ ಹೇಳುತ್ತಿಲ್ಲ. ‘‘ಸಾರ್...ಆ ಊರಿನ ವಿಳಾಸ ಬೇಡ ಸಾರ್...ಬೇರೆ ಯಾವುದಾದರೂ ವಿಳಾಸ ಇದ್ರೆ ಹೇಳಿ...ಇಲ್ಲಾಂದ್ರೆ ನಿಮ್ಮ ಲೋನ್ ಸಾಂಕ್ಷನ್ ಆಗೋಲ.್ಲ ಬೇರೆ ವಿಳಾಸಕ್ಕೆ ಯಾವುದಾದರೂ ಒಂದು ದಾಖಲೆ ಕೊಡಿ ಸಾಕು’’ ಅಂದ.
 ಅರೆ! ನಾನಿರುವ ನಿಜ ವಿಳಾಸವನ್ನು ತಿರಸ್ಕರಿಸಿ ಇವನೇ ಸುಳ್ಳು ವಿಳಾಸವನ್ನು ಕೇಳುತ್ತಿದ್ದಾನೆ. ಇದೇನು ವಿಚಿತ್ರ!
‘‘ಅಲ್ಲಪ್ಪಾ...ನಾನಿರುವ ಊರು ತುಂಬಾ ಒಳ್ಳೆಯ ಏರಿಯಾದಲ್ಲಿದೆ. ತುಂಬಾ ಒಳ್ಳೆಯ ಜನರೇ ಇದ್ದಾರೆ. ಯಾಕೆ ಅದನ್ನು ಬ್ಲಾಕ್ ಲಿಸ್ಟ್‌ಗೆ ಹಾಕಿದ್ದೀರಾ?’’
‘‘ಸಾರ್...ಯಾವ ಊರಲ್ಲಿ ಸರಿಯಾಗಿ ಮರುಪಾವತಿ ಆಗುವುದಿಲ್ಲವೋ ಅಂತಹ ಊರನ್ನು ಬ್ಲಾಕ್ ಲಿಸ್ಟ್‌ನಲ್ಲಿ ಸೇರಿಸುತ್ತೇವೆ...’’
‘‘ಅಂದರೆ ಅದನ್ನು ಶಾಶ್ವತವಾಗಿ ಬ್ಲಾಕ್ ಲಿಸ್ಟ್‌ಗೆ ಸೇರಿಸುತ್ತೀರಾ?’’
‘‘ಹೌದು ಸಾರ್’’
‘‘ಅಲ್ಲ ಕಣ್ರೀ...ನಾನೀಗ ಸಾಲ ಪಡೆದು ಅದನ್ನು ಸರಿಯಾಗಿ ಮರುಪಾವತಿ ಮಾಡಿದ್ರೆ ನನ್ನ ಊರನ್ನು ಬ್ಲಾಕ್ ಲಿಸ್ಟ್‌ನಿಂದ ತೆಗೀತೀರಾ?’’
‘‘ಇಲ್ಲ ಸಾರ್. ಅದು ನಮ್ಮ ಕೈಯಲ್ಲಿಲ್ಲ’’
‘‘ಬ್ಲಾಕ್ ಲಿಸ್ಟ್‌ಗೆ ಸೇರಿಸಲು ನಿಮ್ಮಲ್ಲಿ ಮಾನದಂಡಗಳಿವೆಯಾ?’’
‘‘ಹಾಗೇನೂ ಇಲ್ಲ ಸಾರ್. ಆದರೆ ಕೆಲವು ದೊಡ್ಡ ಜನರಿಗೆ ಸಾಲ ಕೊಡುವ ಸಂದರ್ಭದಲ್ಲಿ ಇದನ್ನು ಪರಿಗಣಿಸುವುದಿಲ್ಲ’’
‘‘ಈ ದೊಡ್ಡ ಜನಗಳು ಅಂದರೆ...’’
ಅವನು ವೌನವಾದ. ಮತ್ತೆ ಹೇಳಿದ ‘‘ನೀವೇನೂ ತಲೆ ಬಿಸಿ ಮಾಡಬೇಡಿ. ಬೇರೆ ವಿಳಾಸ ನಮೂದಿಸಿ ನಾನು ನಿಮಗೆ ಲೋನ್ ತೆಗೆಸಿಕೊಡುತ್ತೇನೆ...’’
ನನ್ನ ತಲೆಕೆಟ್ಟು ಹನ್ನೆರಡಾಣೆಯಾಯಿತು. ‘‘ಸರಿ, ಯಾವುದೆಲ್ಲ ಏರಿಯಾಗಳನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಿದ್ದೀರಿ, ಅದನ್ನಾದರೂ ಹೇಳಿ’’
ಅವನು ಒಂದೊಂದೇ ಏರಿಯಾವನ್ನು ಹೇಳುತ್ತಾ ಹೋದ. ನನಗೆ ಅಚ್ಚರಿ ಮತ್ತು ತಮಾಷೆ ಎನ್ನಿಸಿತು. ಅವನು ಹೇಳಿದ ಎಲ್ಲಾ ಏರಿಯಾಗಳು ಮುಸ್ಲಿಮ್ ಜನಸಂಖ್ಯೆ ಪ್ರಾಬಲ್ಯ ಇರುವ ಏರಿಯಾ ಆಗಿತ್ತು. ‘‘ಇಷ್ಟು ಏರಿಯಾಗಳನ್ನು ಬ್ಲಾಕ್ ಲಿಸ್ಟ್‌ನಲ್ಲಿ ಸೇರಿಸಿದ್ದೀರಲ್ಲ....ಅಲ್ಲಿ ಎಷ್ಟು ಅಲ್ಲಿ ಎಷ್ಟು ಸಲ ಪ್ರಕರಣಗಳು  ಮರುಪಾವತಿಯಾಗಿಲ್ಲ ಎನ್ನುವುದರ ಬಗ್ಗೆ ವಿವರ ನೀಡುತ್ತೀರಾ?’’
ಅವನು ಒಂದು ಕ್ಷಣ ವೌನವಾದ. ‘‘ಸಾರ್...ಅದೆಲ್ಲ ಬಿಡಿ. ನಿಮಗೆ ಲೋನ್ ಕೊಟ್ರೆ ಆಯ್ತಲ್ಲ. ನೀವು ಸ್ವಲ್ಪ ಸಹಕರಿಸಿ ಅಷ್ಟೇ...’’
‘‘ನಾನು ಸುಳ್ಳು ವಿಳಾಸ ಕೊಡೋದಿಲ್ಲ. ನನಗೆ ನನ್ನ ಮನೆ ಇರುವ ಏರಿಯಾದ ವಿಳಾಸದಲ್ಲೇ ಸಾಲ ಕೊಡುವುದಾದರೆ ಕೊಡಿ...ಇಲ್ಲಾಂದ್ರೆ ಬೇಡ...’’ ಎಂದೆ.
ಅವನು ತನ್ನ ಮ್ಯಾನೇಜರ್‌ಗೆ ಫೋನ್ ಮಾಡಿದ. ತುಸು ಹೊತ್ತು ಮಾತನಾಡಿ ಹೇಳಿದ ‘‘ಇಲ್ಲಾ ಸಾರ್...ಕಂಪ್ಯೂಟರ್‌ನಲ್ಲಿ ಫೀಡ್ ಆಗಿದೆ. ಏನು ಮಾಡೋ ಹಾಗಿಲ್ಲ. ಬೇರೆ ವಿಳಾಸ ಕೊಟ್ರೆ ನಿಮಗೆ ಲೋನ್ ಸಾಂಕ್ಷನ್ ಆಗತ್ತೆ...’’

ನಾನು ಅಲ್ಲಿಂದ ಎದ್ದು ಹೋದೆ. ಕೊನೆಗೂ ಒಂದು ಬ್ಯಾಂಕ್ ಮೂಲಕ ಆಕ್ಟೀವಾ ಸಿಗುವಂತಾಯಿತು ಬಿಡಿ.

Saturday, July 5, 2014

ಮಗು!

 ಹಣೆಗೆ ಅಂಟಿದ್ದ ಬೆವರನ್ನು ಒರೆಸುತ್ತಾ ಅವನು ಆಸ್ಪತ್ರೆಯಿಂದ ಹೊರ ಬರುತ್ತಿದ್ದಾನೆ. ಫೇಲಾದ ಮಗು ನಡುಗುವ ಕೈಯಲ್ಲಿ ಅಂಕಪಟ್ಟಿ ಹಿಡಿದುಕೊಂಡಂತೆ, ಅವನ ಕೈಯಲ್ಲಿ ಆ ರಿಪೋರ್ಟ್ ಕಂಪಿಸುತ್ತಿತ್ತು. ಕಾದ ಸರಳಿನಿಂದ ಬರೆ ಎಳೆಯುವಂತೆ ವೈದ್ಯರು ಹೇಳಿದ್ದರು ‘‘ಬೇಸರಿಸಬೇಡಿ. ನಿಮಗೆ ಮಗು ಆಗುವ ಸಾಧ್ಯತೆ ಇಲ್ಲ. ನಿಮ್ಮ ಪತ್ನಿಗೆ ಸಮಸ್ಯೆಯನ್ನು ವಿವರಿಸಿ ಒಂದು ಮಗುವನ್ನು ದತ್ತು ತೆಗೆದುಕೊಳ್ಳಿ...’’
ಆಸ್ಪತ್ರೆಯಿಂದ ನೇರವಾಗಿ ಅವನು ಗೊಂಬೆಯ ಅಂಗಡಿಗೆ ಹೋದ. ಅಲ್ಲಿ ಸಣ್ಣದು, ದೊಡ್ಡದು ಎಂದು ವಿಧ ವಿಧದ ಗೊಂಬೆಗಳು ತೂಗುತ್ತಿದ್ದವು. ಎರಡು ಗೊಂಬೆಗಳನ್ನು ಆರಿಸಿ ಕೊಂಡ. ಒಂದು ಹೆಣ್ಣು. ಇನ್ನೊಂದು ಗಂಡು. ಹಾಗೆಯೇ ಜೊತೆಗೇ ಒಂದು ಗಿಲಗಿಲಕಿಯನ್ನು ಕೊಂಡು ಆಡಿಸಿದ. ಗಿಲಿಗಿಲಿ ಎಂದು ಸದ್ದು ಮಾಡತೊಡಗಿತು. ಆ ಸದ್ದಿಗೆ ಜೊತೆಗಿರುವ ಗೊಂಬೆಗಳು ನಕ್ಕಂತೆ ಭಾಸವಾಯಿತು.
ಪ್ರಥಮ ರಾತ್ರಿ ಆಕೆಯ ಮುಗ್ಧ ಮುಖವನ್ನು ಬೊಗಸೆಯಲ್ಲಿಟ್ಟು ಹೇಳಿದ್ದ ‘‘ನನಗೆ ಹತ್ತು ಮಕ್ಕಳು ಬೇಕು’’
ಅವಳೋ ಕಣ್ಣ ರೆಪ್ಪೆಯನ್ನು ತೆರೆಯದೆಯೇ ಗಂಭೀರವಾಗಿ ಉತ್ತರಿಸಿದ್ದಳು ‘‘ಸರಿ’’
ಅವನೋ ಹೆದರಿ ಬಿಟ್ಟಿದ್ದ ‘‘ನಾನು ಸುಮ್ಮಗೇ ಹೇಳಿದೆ. ನಮಗೆ ಎರಡು ಮಕ್ಕಳು ಸಾಕು...’’
ಅವಳಾಗ ರೆಪ್ಪೆ ತೆರೆದಳು ‘‘ನನಗೆ ಮಕ್ಕಳೆಂದರೆ ಇಷ್ಟ. ಹತ್ತಾದರೆ ಹತ್ತು...ಹೆತ್ತು ಕೊಡುವೆ...’’
  ಮದುವೆಯಾಗಿ ನಾಲ್ಕು ವರ್ಷ ಕಳೆಯಿತು. ನಿರೀಕ್ಷೆಗಳು ಬತ್ತಿ ಹೋಗ ತೊಡಗಿದವು. ಇನ್ನು ಮಕ್ಕಳೇ ಆಗುವುದಿಲ್ಲವೇನೋ ಎಂಬ ಭಯ ಕಾಡಿದಾಗ ಪತ್ನಿಯ ಜೊತೆಗೆ ಗೆಳೆಯನ ಆಸ್ಪತ್ರೆಗೆ ತೆರಳಿದ. ಮೊದಲು ಪತ್ನಿಯ ಪರೀಕ್ಷೆಯಾಯಿತು. ಬಳಿಕ ಅವನದು. ಫಲಿತಾಂಶಕ್ಕೆ ಅವನು ಬೆಚ್ಚಿ ಬಿದ್ದಿದ್ದ ‘‘ನಿನ್ನಲ್ಲಿ ಸ್ವಲ್ಪ ಸಮಸ್ಯೆ ಇದೆ’’ ಗೆಳೆಯ ಹೇಳಿದ್ದ.
ಇವನೋ ಪತ್ನಿಗೆ ಎಲ್ಲವನ್ನೂ ಮುಚ್ಚಿಟ್ಟ ‘‘ನಿಧಾನಕ್ಕೆ ಮಕ್ಕಳಾದೀತು ಎಂದಿದ್ದಾರೆ ವೈದ್ಯರು’’
ಅವಳೂ ಒಪ್ಪಿದ್ದಳು ‘‘ಆದೀತು...’’
ಇದಾದ ಮೇಲೆ ಎರಡು ಬಾರಿ ಅವನು ಬೇರೆ ಬೇರೆ ವೈದ್ಯರನ್ನು ಸಂಪರ್ಕಿಸಿದ್ದ. ಎಲ್ಲ ಕಡೆಯೂ ಒಂದೇ ಫಲಿತಾಂಶ. ಇದೀಗ ಮತ್ತೆ ಎರಡು ವರ್ಷ ಕಳೆದ ಬಳಿಕ ನಡುಗುತ್ತಾ ಮರು ಪರೀಕ್ಷೆ ಬರೆಯುವ ವಿದ್ಯಾರ್ಥಿಯಂತೆ ಆಸ್ಪತ್ರೆಯ ಬಾಗಿಲು ತಟ್ಟಿದ್ದ. ವೈದ್ಯರು ಅಂಕ ಹಾಕಿ ಕೊಟ್ಟ ಫಲಿತಾಂಶ ಕೈಯ ಹಿಡಿತಕ್ಕೆ ಮುದುಡಿ ಹೋಗಿತ್ತು.
ಕೊಂಡುಕೊಂಡ ಎರಡು ಗೊಂಬೆಗಳನ್ನು, ಗಿಲಕಿಗಳನ್ನು ಪ್ಯಾಕ್ ಮಾಡಿಸಿದ. ಅಲ್ಲಿಂದ ಆತ ಸಿಹಿ ಅಂಗಡಿಗೆ ತೆರಳಿದ. ಒಂದಿಷ್ಟು ಸಿಹಿತಿನಸುಗಳನ್ನು ಕೊಂಡುಕೊಂಡ. ಅಲ್ಲಿಂದ ನೇರ ಮಕ್ಕಳ ಬಟ್ಟೆಯಂಗಡಿಗೆ ತೆರಳಿದ. ಈಗಷ್ಟೇ ಹುಟ್ಟಿದ ಮಗುವಿಗೆ ಬೇಕಾಗುವ ಎಲ್ಲ ವಸ್ತುಗಳೂ ಅಲ್ಲಿದ್ದವು. ಅಂಗೈಯಗಲದ ಫ್ರಾಕು. ಅದಕ್ಕೆ ಹೊಂದಿಕೆಯಾಗುವ ಬಟ್ಟೆಯ ಶೂ. ಕರಿಮಣಿಯ ಬಳೆ. ಎಲ್ಲವನ್ನು ಜೋಡಿಸಿ ಪ್ಯಾಕ್ ಮಾಡಿಸಿ ಮನೆಯ ಕಡೆಗೆ ಹೊರಟ.
ಮನೆಯ ಅಂಗಳಕ್ಕೆ ಕಾಲಿಟ್ಟರೆ ನೆಂಟರಿಷ್ಟರು, ನೆರೆಹೊರೆಯ ಜನರು ಒಬ್ಬೊಬ್ಬರಾಗಿ ಬರುತ್ತಿದ್ದಾರೆ.
ಅವಳು ಸಡಗರದಿಂದ ಬಾಗಿಲ ಬಳಿಗೆ ಬಂದಳು ‘‘ರೀ...ಎಷ್ಟು ಹೊತ್ತು. ಎಲ್ಲರೂ ಬರುತ್ತಿದ್ದಾರೆ...ಮಗುವನ್ನು ತೊಟ್ಟಿಲಿಗೆ ಹಾಕುವ ಹೊತ್ತಾಯಿತು...ಬನ್ನಿ...’’
ತಿಂಡಿ, ಬಟ್ಟೆ, ಗೊಂಬೆಗಳನ್ನೆಲ್ಲ ಅವಳ ಕೈಗೆ ಕೊಟ್ಟ. ಕೈಯಲ್ಲಿದ್ದ ರಿಪೋರ್ಟ್‌ನ್ನು ಮಾತ್ರ ಹಾಗೆಯೇ ತನ್ನ ಕಿಸೆಗೆ ತುರುಕಿಕೊಂಡ.
ಜೀವನದಲ್ಲಿ ಮೊದಲ ಬಾರಿ ಅವಳ ಮುಖದಲ್ಲಿ ಸಡಗರವನ್ನು ನೋಡುತ್ತಿದ್ದಾನೆ. ಬಸುರಾದ ಸಂಭ್ರಮ. ಹೆತ್ತ ಸಂಭ್ರಮ. ಇದೀಗ ಮಗುವನ್ನು ತೊಟ್ಟಿಲಿಗೆ ಹಾಕಿ ಜೀಕುವ ಸಂಭ್ರಮ. ಮನೆಗೆ ಒಬ್ಬೊಬ್ಬರಾಗಿ ಬರುತ್ತಿರುವ ನೆರೆಹೊರೆಯ ಗಂಡಸರ
ನ್ನು  ಅವನು ಇದೇ ಮೊದಲ ಬಾರಿ ನೋಡುವವನಂತೆ ಕಣ್ಣಿಟ್ಟು ನೋಡತೊಡಗಿದ.
‘‘ನನ್ನ ಮಗು ಯಾರಂತೆ?’’ ತನಗೆ ತಾನೆ ಕೇಳಿಕೊಂಡ.
ಅಷ್ಟರಲ್ಲಿ ಅವನ ತಾಯಿ ಒಳಗಿನಿಂದ ಮಾತನಾಡುವುದು ಕೇಳಿಸಿತು ‘‘ಥೇಟ್ ಅಪ್ಪನಂತೆಯೇ ಇದ್ದಾನೆ...ಅದೇ ಹಣೆ, ಅದೇ ಕಣ್ಣು, ಅದೇ ಗಾಂಭೀರ್ಯ...ಇಷ್ಟು ವರ್ಷದ ಬಳಿಕ ಹುಟ್ಟಿದ ಮಗು, ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾನೆ...’’
ಅಷ್ಟರಲ್ಲಿ ಅವಳು ಅವನನ್ನ ಕೈ ಹಿಡಿದು ಅಲುಗಾಡಿಸಿದಳು ‘‘ಯಾಕ್ರೀ...ಹೀಗೆ ಹೊರಗೆ ಕಲ್ಲಿನಂತೆ ನಿಂತಿದ್ದೀರಿ...ಬನ್ನಿ ಒಳಗೆ...’’
ಹೆಂಡತಿಯನ್ನೇ ಕಣ್ಣಿಟ್ಟು ನೋಡಿದ. ಅವಳ ಕಣ್ಣ ಕೊಳದಲ್ಲಿ ಒಂದಿಷ್ಟು ಕಲ್ಮಶವಿಲ್ಲ. ಅಲ್ಲಿ ತನ್ನದೇ ಪ್ರತಿಬಿಂಬ.
‘‘ಥ್ಯಾಂಕ್ಸ್ ಕಣೇ...ನನ್ನಷ್ಟೇ ಮುದ್ದಾದ ಮಗುವೊಂದನ್ನು ಹೆತ್ತುಕೊಟ್ಟದ್ದಕ್ಕೆ. ಇಂಥಹ ಹತ್ತು ಮಗು ಬೇಕು ನನಗೆ’’ ಅವಳ ಮೊಗವನ್ನು ಬೊಗಸೆಯಲ್ಲಿ ತೆಗೆದುಕೊಂಡು ಹೇಳಿದ.
ಅವಳ ಕಣ್ಣು ಅದೇಕೋ ತುಳುಕಿತು. ‘‘ಬೇಡ. ಇದೊಂದೆ ಸಾಕು. ಈ ಜನ್ಮಕ್ಕೂ, ಮುಂದಿನ ನೂರು ಜನ್ಮಕ್ಕೂ ನಮಗಿಬ್ಬರಿಗೆ ಈ ಒಂದು ಮಗುವೇ ಸಾಕು...’’ ಎನ್ನುತ್ತಾ ಅವನ ಎದೆಗೆ ಒರಗಿ ಬಿಕ್ಕತೊಡಗಿದಳು.

Saturday, June 21, 2014

ಗೊಬ್ಬರ ಮತ್ತು ಇತರ ಕತೆಗಳು

ಅಂತರ್ಜಲ
ಮಗುವೊಂದು ಪಾಳು ಬಿದ್ದ ಕೊಳವೆ ಬಾವಿಗೆ ಬಿತ್ತು.
ಅಂತರ್ಜಲ ಭೂಮಿಯದ್ದಷ್ಟೇ ಅಲ್ಲ, ಮನುಷ್ಯರದ್ದೂ ಬತ್ತಿ ಹೋಗಿರುವುದು ಸಾಬೀತಾಯಿತು.

ಲೆಕ್ಕ
ಅವನು ಆ ಮರದ ಬುಡಕ್ಕೆ ಹೋಗಿದ್ದು ನೆರಳನ್ನು ಅರಸಿ.
ಒಂದಿಷ್ಟು ಹೊತ್ತು ವಿಶ್ರಾಂತಿ ಪಡೆದ. ಬಿಸಿಲು ಇಳಿದದ್ದೇ, ಇಡೀ ಮರವನ್ನು ಕಡಿದರೆ ಎಷ್ಟು ಲಾಭವಾಗಬಹುದು ಎನ್ನುವುದನ್ನು ಲೆಕ್ಕ ಹಾಕ ತೊಡಗಿದ.

ಗೊಬ್ಬರ
ಕಳಪೆ ಗೊಬ್ಬರಗಳಿಂದ ಬೆಳೆ ನಾಶವಾಗಿ ರೈತ ನಾಶ ನಷ್ಟಕ್ಕೊಳಗಾಗಿ ನಗರಕ್ಕೆ ಬಂದು ಇಳಿದ.
ಅಲ್ಲಿ ನೋಡಿದರೆ ಭವ್ಯ ಕಟ್ಟಡವೊಂದು ಮುಗಿಲೆತ್ತರ ಬೆಳೆದು ನಿಂತಿತ್ತು.
ವಿಸ್ಮಿತನಾದ ರೈತ, ‘‘ಇದಕ್ಕೆ ಬಳಸಿದ ಗೊಬ್ಬರ ಎಲ್ಲಿ ಸಿಗುತ್ತದೆ?’’ ಎಂದು ವಿಚಾರಿಸ ತೊಡಗಿದ.

ಪರಿಸರ
ಜೈಲಿನಲ್ಲಿ ಹತ್ತು ವರ್ಷ ಕಳೆದ ಆತ ಆ ಪರಿಸರಕ್ಕೆ ಒಗ್ಗಿ ಹೋಗಿದ್ದ.
ಎಷ್ಟೆಂದರೆ, ಬಿಡುಗಡೆಯ ದಿನ ಹತ್ತಿರವಾಗುತ್ತಿದ್ದಂತೆಯೇ ಜೈಲಿಗೆ ತೆರಳಲಿರುವ ಹೊಸ ಕೈದಿಯಂತೆ ನಡುಗತೊಡಗಿದ.

ಪಾಲು
ಅವನು ಹಸಿವಿನಿಂದ ಕಂಗೆಟ್ಟು ಕಳವು ಮಾಡಿದ.
ಪೊಲೀಸರಿಗೆ ಸಿಕ್ಕಿ ಹಾಕಿಕೊಂಡ.
ಜೈಲು ಸೇರಿದ. ಪೊಲೀಸರು ಅವನಿಗೆ ದರೋಡೆ ಮಾಡುವ ನಿಜವಾದ ತರಬೇತಿ ಕೊಟ್ಟರು. ಜೈಲಿನಿಂದ ಹೊರಬಂದ ಬಳಿಕ ಅವನು ಕಳತನವನ್ನೇ ಉದ್ಯೋಗ ಮಾಡಿಕೊಂಡ. ಆದರೆ ಕದ್ದುದನ್ನು ಪೊಲೀಸರ ಜೊತೆಗೆ ಹಂಚುವುದನ್ನು ಕಲಿತುಕೊಂಡ.

ನಂಬಿಕೆ
‘‘ದೆವ್ವಗಳು ಮೂಢನಂಬಿಕೆಯೆ?’’ ಶಿಷ್ಯ ಕೇಳಿದ.
‘‘ಮನುಷ್ಯರೆನ್ನುವುದು ಕೂಡ ಒಂದು ಮೂಢನಂಬಿಕೆ ಎಂದು ದೆವ್ವಗಳು ಆಡಿಕೊಳ್ಳುವುದನ್ನು ಕೇಳಿದ್ದೇನೆ’’ ಸಂತ ಉತ್ತರಿಸಿದ

ಸರ್ಚ್
ಆತ ಕಂಪ್ಯೂಟರ್ ಎಂಜಿನಿಯರ್. ಕ್ಯಾಂಟೀನ್‌ನಲ್ಲಿ ಉಣ್ಣುವ ಹೊತ್ತಲ್ಲಿ ಯಾರೋ ಕೇಳಿದರು ‘‘ಅಕ್ಕಿ ಯಾವ ಮರದಲ್ಲಿ ಬೆಳೆಯುತ್ತೆ...’’
‘‘ಗೂಗಲ್‌ಗೆ ಹೋಗಿ ಸರ್ಚ್ ಮಾಡಿ. ತಕ್ಷಣ ಸಿಗತ್ತೆ’’ ಕಂಪ್ಯೂಟರ್ ಎಂಜಿನಿಯರ್ ಹೇಳಿದ.

ತೆರಿಗೆ
‘‘ಅದ್ದೂರಿಗೆ ಮದುವೆಗೆ ತೆರಿಗೆ’’ ಸರಕಾರ ಘೋಷಿಸಿತು.
ವರ ವರದಕ್ಷಿಣೆಯ ಜೊತೆಗೆ ತೆರಿಗೆಯ ಹಣವನ್ನು ಮಾವನಿಂದ ಇಸಿದುಕೊಂಡ.

ಗುರಿ
ಸೈನಿಕನೊಬ್ಬ ಎದೆಗೆ ಗುರಿ ಇಡುವುದಕ್ಕೂ
ಪ್ರೇಮಿಯೊಬ್ಬ ಎದೆಗೆ ಗುರಿಯಿಡುವುದಕ್ಕೂ
ವ್ಯತ್ಯಾಸವಿದೆ.

Saturday, May 24, 2014

ನಾಲ್ವರು ಶಿಷ್ಯರ ಕತೆ

ಮೋದಿ ಗೆದ್ದಾಗ ನನಗೆ ನೆನಪಾದ ಕತೆ ಇದು.

ನಾಲ್ವರು ಶಿಷ್ಯರು ಅದಾಗಲೇ ಶಿಕ್ಷಣ ಮುಗಿಸಿ ಗುರುಕುಲದಿಂದ ತಮ್ಮ ಗುರಿಯೆಡೆಗೆ ಹೊರಟಿದ್ದರು. ನಾಲ್ವರಲ್ಲಿ ಒಬ್ಬ ಮಾತ್ರ ಶತ ದಡ್ಡ. ಉಳಿದವರೆಲ್ಲ ಪ್ರಾಜ್ಞರು. ಅಪಾರ ಜ್ಞಾನವುಳ್ಳವರು. ಹೀಗೆ ದಾರಿ ಸಾಗುತ್ತಿದ್ದಂತೆ...ಒಂದೆಡೆ ಅವರಿಗೆ ಅದೇನೋ ಎಲುಬುಗಳ ಅವಶೇಷ ಕಂಡಿತು. ಒಬ್ಬ ಶಿಷ್ಯ ತನ್ನ ಶಕ್ತಿಯನ್ನು ಪ್ರದರ್ಶಿಸುವುದಕ್ಕೆ ಮುಂದಾದ. ಚೂರು ಚೂರಾಗಿರುವ ಎಲುಬುಗಳನ್ನೆಲ್ಲ ಅವನು ಮರು ಜೋಡಿಸಿದ. ನೋಡುತ್ತಲೇ ಗೊತ್ತಾಗಿ ಹೋಯಿತು ಅದೊಂದು ಹುಲಿಯ ಎಲುಬುಗಳು ಎನ್ನುವುದು. ಇನ್ನೊಬ್ಬ ಶಿಷ್ಯ ಇನ್ನೂ ಶಕ್ತಿವಂತ. ಅವನು ಅದಕ್ಕೆ ರಕ್ತಮಾಂಸವನ್ನು ನೀಡಿದ. ಈಗ ಅದು ಸಂಪೂರ್ಣ ಹುಲಿಯೇ ಆಗಿತ್ತು. ಪ್ರಾಣ ಒಂದು ಇರಲಿಲ್ಲ. ಆಗ ಮೂರನೇಯವ ತನ್ನ ಶಕ್ತಿ ಪ್ರದರ್ಶಿಸಲು ಹೊರಟ. ಅವನ ಶಕ್ತಿ ಎಷ್ಟಿತ್ತೆಂದರೆ ಅವನು ಅದಕ್ಕೆ ಪ್ರಾಣ ಅಥವಾ ಜೀವ ಕೊಡಲು ಹೊರಟ. ಆದರೆ ದಡ್ಡ ಶಿಷ್ಯನಿಗೆ ಇಷ್ಟೆಲ್ಲ ಜ್ಞಾನ, ಶಕ್ತಿ ಇರಲಿಲ್ಲ. ಅವನು ‘ಒಂದು ನಿಮಿಷ’ ಎಂದವನೇ ಪಕ್ಕದಲ್ಲೇ ಒಂದು ಮರವನ್ನು ನೋಡಿದ. ನೇರವಾಗಿ ಅವನು ಆ ಮರವನ್ನು ಹೋಗಿ ಹತ್ತಿಕೊಂಡ. ಇದೀಗ ಮೂರನೇ ಶಿಷ್ಯ ಹುಲಿಗೆ ಜೀವವನ್ನು ನೀಡಿದ. ಹುಲಿ ಜೀವ ಪಡೆದದ್ದೇ ಗರ್ಜಿಸಿ ಮೂವರ ಮೇಲೆ ಹಾರಿ ಅವರನ್ನು ತಿಂದು ಹಾಕಿ, ಕಾಡಿನ ಕಡೆಗೆ ನಡೆಯಿತು. ದಡ್ಡ ಶಿಷ್ಯ ಮರದಿಂದ ಇಳಿದು ತನ್ನ ಊರಿನ ಕಡೆಗೆ ಹೊರಟ.
ಮೋದಿಗೆ ಜೀವ ಕೊಡುವ ಮೂಲಕ ಮಾಧ್ಯಮಗಳು ತಮ್ಮ ಶಕ್ತಿಯನ್ನು ಪ್ರದರ್ಶಿಸಿವೆ. ಆದರೆ ಸರ್ವಾಧಿಕಾರ ಮನಸ್ಥಿತಿ ಮೊತ್ತ ಮೊದಲು ಎರಗುವುದು, ಅದುಮಿ ಹಿಡಿಯುವುದು ಮಾಧ್ಯಮಗಳ ಶಕ್ತಿಯನ್ನೇ. ಇದು ನಿಜ ಆಗದಿರಲಿ ಎನ್ನುವುದು ನನ್ನ ಆಶಯ.

Thursday, May 22, 2014

‘ಗಾಂಧೀಜೀ’ಗೆ ‘ಮೋದೀಜೀ’ ಪತ್ರ...

ಇದು ವಾರ್ತಾ ಭಾರತಿ ಪತ್ರಿಕೆಯಲ್ಲಿ ಗುರುವಾರ ಪ್ರಕಟವಾದ ಬೊಳುವಾರು ಮಹಮ್ಮದ್  ಕುನ್ಜಿ ಅವರ ಬರಹ 

ಕಳೆದೆರಡು ದಿನಗಳಿಂದ ಸುದ್ದಿ ಮಾಧ್ಯಮಗಳಲ್ಲಿ ವಿಪರೀತ ಸದ್ದು ಮಾಡುತ್ತಿರುವ ಶ್ರೀ ಗೋಪಾಲಕೃಷ್ಣ ಗಾಂಧಿಯವರು ದಿನ ಪತ್ರಿಕೆಯೊಂದರಲ್ಲಿ ಶ್ರೀ ನರೇಂದ್ರ ಮೋದಿಯವರಿಗೆ ಬರೆದ ಪತ್ರವನ್ನು ಹಾಗೂ ಮೇ 20ರಂದು ಮೋದಿಯವರು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಮಾಡಿದ ಸಮಯೋಚಿತ ಭಾಷಣವನ್ನು ಕೇಳಿದಾಗ, ಹೊಳೆದ ಕಾಲ್ಪನಿಕ ಪತ್ರವಿದು. ದಿನಪತ್ರಿಕೆಗಳಲ್ಲಿ ನಾವು ಓದುವುದು, ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಆಲಿಸುವುದು, ಆ ಮಾತುಗಳನ್ನು ಬರೆದವರು ಅಥವಾ ಹೇಳಿದವರು ಯಾರು ಎಂಬ ಪ್ರಭಾವಳಿಯಲ್ಲಿ ಮಾತ್ರ. ನಮ್ಮ ಮಾತುಗಳನ್ನು ಅವರು ಬರೆದಾಗ, ಅಥವಾ ಹೇಳಿದಾಗ ಮಾತ್ರ ನಮಗದು ಸುಲಭಸಮ್ಮತವಾಗುತ್ತದೆ. ಶ್ರೀ ಗೊಪಾಲಕೃಷ್ಣ ಗಾಂಧಿಯವರ ಪತ್ರದ ಒಂದಕ್ಷರವನ್ನೂ ಬದಲಾಯಿಸದೆ, ನೀವು ಎಂಬಲ್ಲಿ ನಾನು ಎಂದಷ್ಟೇ ಬದಲಾಯಿಸಿಕೊಂಡು ಬರೆದ ಈ ಕಾಲ್ಪನಿಕ ಪತ್ರದ ಎಲ್ಲ ಮಾತುಗಳು, ನಮ್ಮ ಮಾತುಗಳೂ ಆದಾಗ, ಕೊನೆಯ ಪಾರಾದಲ್ಲಿರುವ ಕೆಲವು ಹೆಸರು ಸಲಹೆ ಇತ್ಯಾದಿಗಳನ್ನು ಹೊರತುಪಡಿಸಿ, ಶ್ರೀ ಮೋದಿಯವರ ಸ್ವಂತ ಮಾತುಗಳಂತೆಯೇ ಅನ್ನಿಸುತ್ತದಲ್ಲವೆ?- ಹಾಗಾದರೆ ಸಾರ್ವಜನಿಕವಾಗಿ ನಾವು ಆಡುವ ಮಾತುಳೆಲ್ಲವೂ ಬರಿಯ ಮಾತು ಮಾತ್ರವೇ?
- ಬೊಳುವಾರು ಮುಹಮ್ಮದ್ ಕುಂಞಿ


***
ಪ್ರೀತಿಯ ಗಾಂಧೀಜೀ,

ಹೃತ್ಪೂರ್ವಕ ಕೃತಜ್ಞತೆಯಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ. ಆದರೆ, ಕೃತಜ್ಞತೆಗಳನ್ನು ಅಷ್ಟು ಸುಲಭದಲ್ಲಿ ಸಲ್ಲಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಯಾಕೆಂದರೆ, ನಾನು ಈಗ ತಲುಪಿರುವ ಈ ಅತ್ಯುನ್ನತ ಹುದ್ದೆಯಲ್ಲಿ ನನ್ನನ್ನು ಕಾಣಬಯಸದ ವ್ಯಕ್ತಿಗಳಲ್ಲಿ ನೀವೂ ಒಬ್ಬರು. ನಾನು ಪ್ರಧಾನಿಯಾಗಿದ್ದೇನೆಂದು ಕೋಟ್ಯಂತರ ಮಂದಿ ಭಾವಪರವಶರಾಗಿದ್ದರೆ, ವಾಸ್ತವಿಕವಾಗಿ ಇನ್ನೂ ಹಲವು ಕೋಟ್ಯಂತರ ಮಂದಿ ದುಗುಡದಲ್ಲಿದ್ದಾರೆಂಬುದು ಎಲ್ಲರಿಗಿಂತ ಹೆಚ್ಚು ಚೆನ್ನಾಗಿ ನನಗೆ ಗೊತ್ತಿದೆ. ನಾನು ಇಲ್ಲಿಗೆ ತಲುಪುತ್ತೇನೆಂದು ಹಲವು ಮಂದಿ ಹೇಳಿದ್ದರಾದರೂ, ತೀರಾ ಇತ್ತೀಚಿನವರೆಗೂ ನಿಮಗದನ್ನು ನಂಬಲು ಸಾಧ್ಯವಾಗಿದ್ದಿರಲಾರದು. ಜವಾಹರಲಾಲ್ ನೆಹರೂ, ಲಾಲ್ ಬಹಾದೂರ್ ಶಾಸ್ತ್ರಿ ಹಾಗೂ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯ ವಿರುದ್ಧ ಐತಿಹಾಸಿಕ ಹೋರಾಟ ನಡೆಸಿದ ಇನ್ನೋರ್ವ ಗುಜರಾತಿ ಮೊರಾರ್ಜಿ ದೇಸಾಯಿ ಮತ್ತು ನನ್ನ ಅಚ್ಚುಮೆಚ್ಚಿನ ರಾಜಕೀಯ ಗುರುವಾದ ಅಟಲ್ ಬಿಹಾರಿ ವಾಜಪೇಯಿಯವರು ಆಸೀನರಾಗಿದ್ದ ಈ ಪೀಠದಲ್ಲಿಯೇ ನಾನು ಕುಳಿತುಕೊಳ್ಳಲಿದ್ದೇನೆ. ನಾನು ಈ ಸ್ಥಾನವನ್ನೇರುವುದನ್ನು ಬಯಸದವರೂ ನಾನು ಇಲ್ಲಿರುವೆನೆಂಬ ಸತ್ಯವನ್ನು ಒಪ್ಪಿಕೊಳ್ಳಲೇಬೇಕು.
ಈ ಅಪರೂಪದ ಸುಯೋಗವು ನನಗೆ ದೊರೆತಿರುವ ಬಗ್ಗೆ ನಿಮಗೆ ಭಾರೀ ಕಳವಳವಾಗಿರುವ ಹೊರತಾಗಿಯೂ ನನ್ನಂತಹ ಅತ್ಯಂತ ಅವಕಾಶವಂಚಿತ ಸಮುದಾಯ ಹಾಗೂ ಕುಟುಂಬದಿಂದ ಬಂದ ವ್ಯಕ್ತಿಯೊಬ್ಬ ಭಾರತದ ಪ್ರಧಾನಿಯಾಗುವುದನ್ನು ನೀವು ಗೌರವಿಸಲೇಬೇಕು. ಇದು ಸಮಾನತೆಯನ್ನು ಪ್ರತಿಪಾದಿಸುವ ನಮ್ಮ ಸಂವಿಧಾನದ ಆಶಯವನ್ನು ಅತ್ಯಂತ ಪರಿಪೂರ್ಣತೆಯೊಂದಿಗೆ ಈಡೇರಿಸುತ್ತದೆ. ನಾನೊಬ್ಬ ‘ಚಾಯ್ ವಾಲಾ’ ಆಗಿದ್ದೇನೆಂದು ಕೆಲವರು ಅಂತ್ಯಂತ ಒರಟಾಗಿ ಹಾಗೂ ಕೀಳಾಗಿ ಮಾತನಾಡಿದಾಗ ನಿಮಗೆ ಹೊಟ್ಟೆ ತೊಳಸಿದಂತಾಗಿರಬಹುದು. ಜೀವನೋಪಾಯಕ್ಕಾಗಿ ಚಾ ಮಾರಾಟ ಮಾಡಿ, ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬ ಭಾರತ ಸರಕಾರದ ನೇತೃತ್ವ ವಹಿಸಲು ಸಮರ್ಥನಾಗುವುದು ಎಷ್ಟು ದೊಡ್ಡ ಅದ್ಭುತವೆಂದು ನಿಮ್ಮಲ್ಲೇ ನೀವು ಹೇಳಿಕೊಳ್ಳುತ್ತಿದ್ದಿರಿ. ಓರ್ವನ ‘ಚಮಚಾ’ ಆಗುವ ಬದಲು ಹಲವರಿಗೆ ‘ಚಹಾ ಪಾತ್ರೆ’ ಆಗುವುದು ಎಷ್ಟೋ ಒಳ್ಳೆಯದು.
ಆದರೆ, ನಾನು ಭಾರತದ ಅತ್ಯುನ್ನತ ಪದವಿಯನ್ನೇರಿದ್ದರಿಂದ ಕೋಟ್ಯಂತರ ಭಾರತೀಯರು ಯಾಕೆ ಆತಂಕಗೊಂಡಿದ್ದಾರೆ ಎಂಬ ವಿಷಯದೆಡೆಗೆ ಬರುತ್ತೇನೆ. 2014ರ ಚುನಾವಣೆಯಲ್ಲಿ ಮತದಾರರು ಮುಖ್ಯವಾಗಿ ನನ್ನ ಪರವಾಗಿ ಅಥವಾ ನನ್ನ ವಿರುದ್ಧವಾಗಿ ಎಂಬ ನಿಲುವಿನೊಂದಿಗೆ ಮತ ಚಲಾಯಿಸಿದ್ದರು. ನಾನು ದೇಶದ ಅತ್ಯುತ್ತಮ ಸಂರಕ್ಷಕ ಅಥವಾ ಅಲ್ಲವೇ? ಎಂಬುದೇ ಈ ಚುನಾವಣೆಯ ವಿಷಯವಾಗಿತ್ತು. ನಾನು ದೇಶದ ಅತ್ಯುತ್ತಮ ಸಂರಕ್ಷಕನೆಂಬುದಾಗಿ ನಮ್ಮ ಶೇ.31ರಷ್ಟು ಮತದಾರರು ಕಲ್ಪಿಸಿಕೊಳ್ಳುವಂತೆ ಮಾಡುವಲ್ಲಿ ನಾನು ಸಫಲನಾಗಿರುವುದರಿಂದ ಬಿಜೆಪಿಯು ಸ್ಥಾನಗಳನ್ನು ಗೆದ್ದಿತು. ಆದರೆ ಶೇ.69ರಷ್ಟು ಮತದಾರರು ನನ್ನನ್ನು ಅವರ ‘ರಖ್‌ವಾಲಾ’ನನ್ನಾಗಿ ನೋಡಬಯಸಲಿಲ್ಲ. ಏಕತೆ ಮತ್ತು ಸ್ಥಿರತೆ ಮಂತ್ರವನ್ನು ಜಪಿಸುವಾಗ ನಾನು ಆಗಾಗ್ಗೆ ಸರ್ದಾರ್ ಪಟೇಲರ ಹೆಸರು ಮತ್ತು ವ್ಯಕ್ತಿತ್ವದೆಡೆಗೆ ಹೊರಳುತ್ತಿದ್ದೆ. ತಮಗೆ ಗೊತ್ತಿರುವಂತೆ, ಸರ್ದಾರ್ ಪಟೇಲ್ ಅವರು ಸಂವಿಧಾನ ರಚನಾ ಅಸೆಂಬ್ಲಿಯ ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಒಂದು ವೇಳೆ ಭಾರತದ ಸಂವಿಧಾನವು ಭಾರತದ ಅಲ್ಪಸಂಖ್ಯಾತರಿಗೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ನಿರ್ಣಾಯಕವಾದ ಖಾತರಿಯನ್ನು ನೀಡುತ್ತಿದೆಯೆಂದಾದರೆ ಅದಕ್ಕಾಗಿ ಸರ್ದಾರ್ ಪಟೇಲ್ ಅವರಿಗೆ ಕೃತಜ್ಞತೆ ಸಲ್ಲಿಸಬೇಕಾಗುತ್ತದೆ. ಹಾಗೆಯೇ ಸಮಿತಿಯ ಇತರ ಸದಸ್ಯೆಯಾದ ಕಪೂರ್‌ತಲಾದ ಸಿಖ್ಖ್ ಒಬ್ಬರ ಕ್ರೈಸ್ತ ಪುತ್ರಿಯಾದ ರಾಜ್‌ಕುಮಾರಿ ಅಮೃತ್ ಕೌರ್‌ಗೂ ಕೃತಜ್ಞತೆ ವ್ಯಕ್ತಪಡಿಸಬೇಕು. ಒಟ್ಟಾರೆಯಾಗಿ, ಅಲ್ಪಸಂಖ್ಯಾತರ ಬಗ್ಗೆ ಸಂವಿಧಾನದ ಆಶಯವನ್ನು ನಾನು ಬದಲಾಯಿಸಕೂಡದು, ತಿರುಚಬಾರದು ಅಥವಾ ಕಲಬೆರಕೆಗೊಳಿಸಬಾರದು ಎಂದು ನೀವು ಬಯಸುತ್ತೀರಿ. ಆ ಸಮಿತಿಯಲ್ಲಿ ಬಲಿಷ್ಠ ಸರ್ದಾರ್ ಪಟೇಲ್ ಏನು ಹೇಳಿದ್ದಾರೆಂಬುದನ್ನು ನಾನು ಗಮನಿಸುವೆ. ಯಾಕೆ ಅಲ್ಲಿ ಅಷ್ಟೊಂದು ಭಯ ಭೀತಿಗಳು ನೆಲೆಸಿವೆ? ಅವರಿಗೆ ಯಾಕೆ ತಮ್ಮ ಭಯದ ಬಗ್ಗೆ ಧ್ವನಿಯೆತ್ತಲು ಸಾಧ್ಯವಾಗುತ್ತಿಲ್ಲ? ಯಾಕೆಂದರೆ, ನಾನು ಸಭೆಗಳನ್ನುದ್ದೇಶಿಸಿ ಭಾಷಣ ಮಾಡುವಾಗ ಭಾರತದ ಜನತೆಯನ್ನು ತನ್ನೊಂದಿಗೆ ಕೊಂಡೊಯ್ಯುವಂತಹ ಪ್ರಜಾಪ್ರಭುತ್ವವಾದಿಯೊಬ್ಬನ ಮಾತನ್ನು ಕೇಳಲು ಅವರು ಬಯಸುತ್ತಿದ್ದಾರೆಯೇ ಹೊರತು ಕಟ್ಟಾಜ್ಞೆಗಳನ್ನು ವಿಧಿಸುವ ಚಕ್ರವರ್ತಿಯ ಭಾಷಣವನ್ನಲ್ಲ. ಅಭಿವೃದ್ಧಿ ಎಂಬ ಪದವು ಭದ್ರತೆಗೆ ಪರ್ಯಾಯವಲ್ಲ. ಅಲ್ಪಸಂಖ್ಯಾತರಲ್ಲಿ ಮರುಭರವಸೆಯನ್ನು ಮೂಡಿಸಬೇಕು. ‘ಒಂದು ಕೈಯಲ್ಲಿ ಕುರಾನ್, ಇನ್ನೊಂದು ಕೈಯಲ್ಲಿ ಲ್ಯಾಪ್ ಟಾಪ್’ ಬಗ್ಗೆ ಅಥವಾ ಅಂಥಹದೇ ಪರಿಣಾಮವನ್ನು ಬೀರುವ ಇನ್ನಿತರ ಮಾತುಗಳು, ಅಂಥ ದೃಶ್ಯಗಳು ಮರು ಭರವಸೆಗಳನ್ನು ಮೂಡಿಸುವುದಿಲ್ಲ. ಯಾಕೆಂದರೆ ಅದರ ವಿರುದ್ಧವಾದ ಇನ್ನೊಂದು ದೃಶ್ಯವು ಅವರನ್ನು ಭಯಗ್ರಸ್ತಗೊಳಿಸುತ್ತದೆ. ರೌಡಿಯೊಬ್ಬ ಒಂದು ಕೈಯಲ್ಲಿ ಹಿಂದೂ ಪೌರಾಣಿಕ ಡಿವಿಡಿ, ಇನ್ನೊಂದು ಕೈಯ್ಯಲ್ಲಿ ಆಯುಧವನ್ನು ಹಿಡಿದು ಅಡ್ಡಾಡುತ್ತಿರುವ ದೃಶ್ಯಗಳು ಅವರನ್ನು ಭೀತಿಗೊಳಿಸುತ್ತಿವೆ. ಹಿಂದೆಯೆಲ್ಲ, ಶಾಲಾ ಮುಖ್ಯೋಪಾಧ್ಯಾಯರು ತರಗತಿಯ ಕೊಠಡಿಯ ಮೂಲೆಯಲ್ಲಿ ಉಪ್ಪನ್ನು ಸವರಿಗೆ ಬೆತ್ತವನ್ನು ಇರಿಸುತ್ತಿದ್ದರು.

ಯಾವ ವಿದ್ಯಾರ್ಥಿಯನ್ನೂ ಬಯಸಿದಾಗ ಹೊಡೆಯಲು ತನಗೆ ಸಾಮರ್ಥ್ಯವಿದೆಯೆಂಬುದನ್ನು ನೆನಪಿಸುವ ಈ ದೃಶ್ಯವು ಮಕ್ಕಳಲ್ಲಿ ಭಯವನ್ನು ಹುಟ್ಟಿಸುತ್ತಿತ್ತು. ಕೆಲವು ತಿಂಗಳ ಹಿಂದೆ ನಡೆದ, ಕನಿಷ್ಠ 42 ಮಂದಿ ಮುಸ್ಲಿಮರು ಹಾಗೂ 20 ಮಂದಿ ಹಿಂದೂಗಳನ್ನು ಬಲಿ ತೆಗೆದುಕೊಂಡ ಹಾಗೂ 50 ಸಾವಿರಕ್ಕೂ ಅಧಿಕ ಮಂದಿಯ ಸ್ಥಳಾಂತರಕ್ಕೆ ಕಾರಣವಾದ ‘ಮುಝಪ್ಫರ್ ನಗರ ಗಲಭೆಯ ನೆನಪುಗಳು ಕೂಡ ಈ ಉಪ್ಪು ಸವರಿದ ಬೆತ್ತವನ್ನು ನೆನಪಿಸುತ್ತದೆ’. ಜಾಗ್ರತೆ. ಇದನ್ನು ನಾವು ನಿಮಗೂ ಮಾಡಬಹುದಾಗಿದೆ’ ಎಂಬ ಈ ಬೆದರಿಕೆಯು, ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಬದುಕುತ್ತಿರುವ ಎಲ್ಲರನ್ನೂ ಭಯಗೊಳಿಸುತ್ತದೆ. ಕೇವಲ ಮುಸ್ಲಿಮರು ಮಾತ್ರವಲ್ಲ. ಕಾಶ್ಮೀರಿ ಪಂಡಿತರು ಸೇರಿದಂತೆ ಭಾರತದಲ್ಲಿರುವ ಎಲ್ಲ ಧಾರ್ಮಿಕ ಅಲ್ಪಸಂಖ್ಯಾತರು ಅಲ್ಲದೆ, ಭಾರತ ವಿಭಜನೆಯ ಸಂದರ್ಭದಲ್ಲಿ ಪಶ್ಚಿಮ ಪಂಜಾಬಿನಿಂದ ನಿರ್ವಸಿತರಾದ ಹಿಂದೂ ಹಾಗೂ ಸಿಖ್ಖರ ಮನಸ್ಸಿನಲ್ಲೂ ಭಯ ನೆಲೆಸಿದೆ. ನೈಜವಾದ ಅಥವಾ ಪೂರ್ವಯೋಜಿತವಾದ ಪ್ರಚೋದನೆಯಿಂದ ಹಠಾತ್ತನೆ ಗಲಭೆ ಸ್ಫೋಟಿಸಬಹುದೆಂಬ ಭೀತಿಯಿಂದಲೇ ಅವರು ದಿನಗಳೆಯುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಮಹಿಳೆಯರು ತಮ್ಮ ಬದುಕಿನ ಪ್ರತಿ ನಿಮಿಷವನ್ನು ಅಪಮಾನ, ಶೋಷಣೆಯೊಂದಿಗೆ ಕಳೆಯುತ್ತಿದ್ದಾರೆ. ತಾರತಮ್ಯ, ಪೌರತ್ವವನ್ನು ತುಚ್ಚೀಕರಣಗೊಳಿಸುವುದು, ನೈತಿಕ ಸ್ಥೈರ್ಯವನ್ನು ಕೆಡಿಸುವ ಮೂಲಕ ನಿರಂತರವಾಗಿ ಅವರನ್ನು ಘಾಸಿಗೊಳಿಸಲಾಗುತ್ತಿದೆ. ಸಂವಿಧಾನದ 370ನೆ ವಿಧಿ, ಸಮಾನ ನಾಗರಿಕ ಸಂಹಿತೆ, ಅಯೋಧ್ಯೆಯಲ್ಲಿ ರಾಮ ಮಂದಿರದಂತಹ ಸವಕಲು ಹಾಗೂ ಆಧಾರರಹಿತ ಬೇಡಿಕೆಗಳ ಬಗ್ಗೆ ನನ್ನ ನಿಲುವುಗಳು ಹಾಗೂ ನಮ್ಮ ಉತ್ತರ ಹಾಗೂ ವಾಯವ್ಯ ಪ್ರಾಂತ್ಯದಲ್ಲಿರುವ ಹಿಂದೂ ನಿರಾಶ್ರಿತರ ಮತ್ತು ಪೂರ್ವ ಹಾಗೂ ಈಶಾನ್ಯ ಭಾರತದಲ್ಲಿರುವ ಮುಸ್ಲಿಮ್ ನಿರಾಶ್ರಿತರ ಬಗ್ಗೆ ನಾನು ನೀಡಿರುವ ಹೇಳಿಕೆಗಳು ಭಯವನ್ನು ಹೊರತು ವಿಶ್ವಾಸವನ್ನು ಮೂಡಿಸಲಿಲ್ಲ. ಈ ಸಾಮೂಹಿಕ ಭಯವು ಭಾರತದ ಗಣರಾಜ್ಯಕ್ಕೆ ಶೋಭೆ ತರುವಂತದ್ದಲ್ಲ.
ಭಾರತದ ಅಲ್ಪಸಂಖ್ಯಾತರು ಭಾರತದ ಒಂದು ಪ್ರತ್ಯೇಕ ಭಾಗವಲ್ಲ. ಅವರು ಮುಖ್ಯವಾಹಿನಿಯಲ್ಲೇ ಮಿಳಿತವಾಗಿರುವವರು. ಯಾರೂ ಕೂಡ ಹಗ್ಗವನ್ನು ಸುಟ್ಟು ಬೂದಿ ಮಾಡಬಹುದು. ಆದರೆ, ಬೂದಿಯಿಂದ ಹೊಸ ಹಗ್ಗವನ್ನು ತಯಾರಿಸಲು ಸಾಧ್ಯವಿಲ್ಲ. ನಮಗೊಂದು ಐತಿಹಾಸಿಕ ವಿಜಯ ದೊರೆತಿದೆ. ಅದಕ್ಕಾಗಿ ನೀವು ಅಭಿನಂದಿಸಬೇಕು. ನನ್ನ ಬೆಂಬಲಿಗರಿಗೆ ಬೇಡದಿದ್ದರೂ, ಹಲವಾರು ಮಂದಿ ನಾನು ಅನಾವರಣಗೊಳ್ಳುವುದನ್ನು ಬಯಸುತ್ತಿದ್ದಾರೆ. ನಾನು ಅಪಾರ ಬುದ್ಧಿವಂತ ಹಾಗೂ ಹಿಂದಿನ ತಲೆಮಾರಿನ ವ್ಯಕ್ತಿಯೊಬ್ಬರಿಂದ ಆಸಕ್ತಿಕರವಲ್ಲದ ಹಾಗೂ ಅಪ್ರಿಯವಾದ ಸಲಹೆಯನ್ನು ನಾನು ಇಷ್ಟಪಡುವುದಿಲ್ಲ. ಆದರೆ, ನನ್ನನ್ನು ಬೆಂಬಲಿಸಿದವರ ಋಣ ಸಂದಾಯ ಮಾಡುವೆ. ಅಷ್ಟೇ ಸಮಾನವಾಗಿ ನನ್ನ ನನ್ನನ್ನು ಬೆಂಬಲಿಸದವರ ವಿಶ್ವಾಸವನ್ನೂ ಗೆದ್ದುಕೊಳ್ಳುವೆ. ಅಲ್ಪಸಂಖ್ಯಾತ ಆಯೋಗವನ್ನು ರಚಿಸುವಾಗ ನಾನು ಯೋಗ್ಯ ವ್ಯಕ್ತಿಗಳ ಪಟ್ಟಿಯನ್ನು ನೀಡುವಂತೆ ಪ್ರತಿಪಕ್ಷಗಳನ್ನು ಕೇಳಿಕೊಳ್ಳುವೆ ಹಾಗೂ ಯಾವುದೇ ಬದಲಾವಣೆ ಮಾಡದೆ ಅದನ್ನು ಒಪ್ಪಿಕೊಳ್ಳುವೆ. ಪರಿಶಿಷ್ಟ ಜಾತಿ, ಬುಡಕಟ್ಟುಗಳು ಹಾಗೂ ಭಾಷಾ ಅಲ್ಪಸಂಖ್ಯಾತರ ಸಮಿತಿಯ ನೇಮಕದಲ್ಲೂ ಹಾಗೆಯೇ ನಡೆದುಕೊಳ್ಳುವೆ. ಮುಂದಿನ ಮಾಹಿತಿ ಆಯುಕ್ತ, ಸಿಎಜಿ, ಸಿವಿಸಿ ಮತ್ತಿತರ ಹುದ್ದೆಗಳ ನೇಮಕದಲ್ಲೂ ಆಯ್ಕೆ ಸಮಿತಿಯ ಸರಕಾರೇತರ ಸದಸ್ಯರ ಶಿಫಾರಸ್ಸುಗಳು ಪಕ್ಷಪಾತರಹಿತವಾಗಿದ್ದರೆ, ಅದನ್ನು ಕ್ರೀಡಾಸ್ಫೂರ್ತಿಯೊಂದಿಗೆ ಪುರಸ್ಕರಿಸುವೆ. ನಾನು ಗಟ್ಟಿಯಾಗಿರುವೆ ಹಾಗೂ ಅಂತಹ ಅಪಾಯಗಳನ್ನು ನಿರ್ವಹಿಸಲು ಸಮರ್ಥನಿರುವೆ. ನಮ್ಮ ಅಖಿಲ ಭಾರತ ಮಟ್ಟದ ವರ್ಚಸ್ಸಿನಲ್ಲಿ ದಕ್ಷಿಣ ಪ್ರಾಂತ್ಯದ ಕೊರತೆ ಎದ್ದು ಕಾಣುತ್ತಿದೆ. ನಮ್ಮ ವಿಜಯಕ್ಕೆ ಹಿಂದಿ ಬೆಲ್ಟ್ ಪ್ರದೇಶಗಳು ನೀಡಿದ ಕೊಡುಗೆಯು, ಉತ್ತರ ಭಾರತದ ನಡುವೆ ಕಂದರವನ್ನು ಸೃಷ್ಟಿಸದಂತೆ ನೋಡಿಕೊಳ್ಳುವೆ. ದಕ್ಷಿಣ ಭಾರತದಿಂದ ರಾಜಕೀಯ ಹಿನ್ನೆಲೆಯಿರದ, ಆದರೆ ಪರಿಣಿತ ಸಮಾಜ ವಿಜ್ಞಾನಿ, ಪರಿಸರವಾದಿ, ಅರ್ಥ ಶಾಸ್ತ್ರಜ್ಞ ಅಥವಾ ಜನಸಂಖ್ಯಾ ಶಾಸ್ತ್ರಜ್ಞರೊಬ್ಬರನ್ನು ಪರಿಗಣಿಸುವೆ. ನೆಹರೂ ಸಂಪುಟದಲ್ಲಿ ಷಣ್ಮುಖನ್ ಚೆಟ್ಟಿ, ಜಾನ್ ಮಥಾಯ್, ಸಿ.ಎ. ದೇಶಮುಖ್ ಹಾಗೂ ಕೆ.ಎಲ್.ರಾವ್ ಇದ್ದರು. ಅವರು ಕಾಂಗ್ರೆಸ್ಸಿಗರಾಗಿರಲಿಲ್ಲ. ಅಷ್ಟೇಕೆ, ಅವರು ರಾಜಕಾರಿಣಿಗಳೂ ಆಗಿದ್ದಿರಲಿಲ್ಲ. ಇಂದಿರಾ ಗಾಂಧಿ ಸಂಪುಟದಲ್ಲಿ ಎಸ್. ಚಂದ್ರಶೇಖರ್ ಹಾಗೂ ವಿ.ಕೆ.ವಿ.ಆರ್. ರಾವ್ ಇದ್ದರು. ‘ಯುಪಿಎ’ ಸರಕಾರದ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾದ ಪ್ರೊ. ಎಂ.ಎಸ್. ಸ್ವಾಮಿನಾಥನ್ ಅಥವಾ ಶ್ಯಾಮ್ ಬೆನೆಗಲ್ ಸದಸ್ಯರನ್ನಾಗಿ ಯಾಕೆ ನೇಮಿಸಲಿಲ್ಲವೆಂದು ನನಗಿನ್ನೂ ಅರ್ಥವಾಗಿಲ್ಲ.
ರಾಜ್ಯ ಸಭೆಯ ನಾಮ ನಿರ್ದೇಶಿತ ಸದಸ್ಯರಾಗಿದ್ದ ನೂರುಲ್ ಹುಸೇನ್, ಭಾರತ ಕಂಡ ಅತ್ಯುತ್ತಮ ಶಿಕ್ಷಣ ಸಚಿವರಲ್ಲೊಬ್ಬರಾಗಿದ್ದರು. ಸಾಮ್ರಾಜ್ಯವಾದಿ ಹಾಗೂ ಸೈಧಾಂತಿಕ ಅನುಕರಣೀಯತೆಗಳು ನನಗೆ ಇಷ್ಟವಾಗುತ್ತವೆ. ರಾಣಾ ಪ್ರತಾಪನಂತೆ ಹೋರಾಟ ನಡೆಸಿದರೂ ಆಡಳಿತದಲ್ಲಿ ಅಕ್ಬರನಂತಾಗುವೆ. ಹೃದಯದಲ್ಲಿ ‘ಸಾವರ್‌ಕರ್ ಆಗಿರುವ ನಾನು ಚಿಂತನೆಯಲ್ಲಿ ಅಂಬೇಡ್ಕರ್ ಆಗುವೆ.’ ಒಂದು ವೇಳೆ ನನ್ನ ‘ಡಿಎನ್‌ಎ’ನಲ್ಲಿ ಆರೆಸ್ಸೆಸ್ ಪ್ರಣೀತ ಹಿಂದುತ್ವವಿದ್ದರೂ, ನನಗೆ ಮತ ಚಲಾಯಿಸಿರದ ದೇಶದ ಶೇ.69ರಷ್ಟು ಮತದಾರರ ಪಾಲಿಗೆ ನಾನು ‘ವಝೀರ್ ಎ ಅಝಾಮ್’ ಕೂಡಾ ಆಗುವೆ. ನಮ್ಮ ದೇಶದ ಅತ್ಯುನ್ನತ ಸ್ಥಾನವನ್ನು ನಾನು ವಹಿಸಿಕೊಳ್ಳುವ ಸಂದರ್ಭದಲ್ಲಿ ನಿಮ್ಮ ಶುಭ ಹಾರೈಕೆಗಳನ್ನು ಕೋರುವೆ.
- ನರೇಂದ್ರ ಮೋದಿ