Monday, March 28, 2016

ಪ್ರಧಾನಿಯ ಮೌನದ ಹಿನ್ನೆಲೆಯಲ್ಲಿ ಅಝಾನ್!

ರವಿವಾರ ಅಝಾನ್ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣವನ್ನು ನಿಲ್ಲಿಸಿ ಮೌನವಾದರಂತೆ. ಮತ್ತು ‘‘ನಮ್ಮಿಂದಾಗಿ ಯಾರದೇ ಪ್ರಾರ್ಥನೆಗೆ ಯಾವುದೇ ತೊಂದರೆಯಾಗಬಾರದು. ಅದಕ್ಕಾಗಿ ನಾನು ಕೆಲ ಕ್ಷಣ ಭಾಷಣ ನಿಲ್ಲಿಸಿದೆ’’ ಎಂದು ಔದಾರ್ಯವನ್ನು ಮೆರೆದಿದ್ದಾರೆ. ಇದು ಒಳ್ಳೆಯ ವಿಷಯವೇ ಸರಿ. ಅವರ ಮೌನದ  ಹಿಂದಿರುವ ಆಶಯವನ್ನು ನಾನು ಈ ಸಂದರ್ಭದಲ್ಲಿ ತಿರಸ್ಕರಿಸುವುದಿಲ್ಲ. ಬದಲಿಗೆ ಗೌರವಿಸುತ್ತೇನೆ. ಮುಸ್ಲಿಮರೆಂದಲ್ಲ, ಯಾರದೇ ಪ್ರಾರ್ಥನೆ, ಆರಾಧನೆಗಳಿಗೆ ಯಾರೇ ಆಗಿದ್ದರೂ ತೊಂದರೆ ಮಾಡುವುದು ಸರಿಯಲ್ಲ. ಆದರೆ, ಕೋಮುಗಲಭೆಗಳ ಹೆಸರಲ್ಲಿ ನೂರಾರು ಮಸೀದಿ, ದರ್ಗಾಗಳನ್ನು ಧ್ವಂಸಗೊಳಿಸುವುದಕ್ಕೆ ಪರೋಕ್ಷವಾಗಿ ಕಾರಣರಾದ, ಸಾವಿರಾರು ಮುಸ್ಲಿಮ್ ಮಹಿಳೆ, ಮಕ್ಕಳ ಹತ್ಯಾಕಾಂಡದಲ್ಲಿ ಪರೋಕ್ಷ ಆರೋಪಿಯಾಗಿರುವ ಮೋದಿಯವರ ಈ ಮೌನ, ಆ ಗುಜರಾತ್‌ನ ಬಲಿಪಶುಗಳಿಗಾಗಿ ವ್ಯಕ್ತಪಡಿಸಿದ "ಶೋಕ ಮೌನ"ವಾಗಿದ್ದರೆ ಇನ್ನಷ್ಟು ಅರ್ಥ ಪೂರ್ಣವಾಗಿತ್ತೇನೋ. ಯಾಕೆಂದರೆ, ಸದ್ಯದ ಸಂದರ್ಭದಲ್ಲಿ ಪ್ರಧಾನಿಯ ‘ಮೌನ’ ದೇಶದೊಳಗೆ ಹಲವು ಅನಾಹುತಗಳಿಗೆ ಕಾರಣವಾಗುತ್ತಿದೆ. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಪರವಾಗಿ ಪ್ರಧಾನಿ ಮೋದಿ ತನ್ನ ಮೌನವನ್ನು ಮುರಿಯುವ ಅಗತ್ಯವಿದೆಯೇ ಹೊರತು, ಇನ್ನಷ್ಟು ಮೌನದ ಅಗತ್ಯ ದೇಶಕ್ಕೆ, ಅದರಲ್ಲೂ ಮುಖ್ಯವಾಗಿ ಮುಸ್ಲಿಮರಿಗೆ ಖಂಡಿತಾ ಇಲ್ಲ.
 ಅಝಾನ್ ಸಂದರ್ಭದಲ್ಲಿ ತಮ್ಮ ಭಾಷಣವನ್ನು ನಿಲ್ಲಿಸಿ, ಜಾತ್ಯತೀತತೆಯನ್ನು ಮೆರೆಯುವ, ಆ ಮೂಲಕ ಮುಸ್ಲಿಮರನ್ನು ಭಾವನಾತ್ಮಕವಾಗಿ ಮರುಳು ಮಾಡುವ ಹಲವು ನಾಯಕರು ಹಲವು ಪಕ್ಷಗಳಲ್ಲಿದ್ದಾರೆ. ಅವರ ಕೊರತೆಯಂತೂ ದೇಶಕ್ಕೆ ಇಲ್ಲ.  ಆದರೆ, ಮುಸ್ಲಿಮರ ಮೂಲಭೂತ ಅಭಿವೃದ್ಧಿ ಸಂದರ್ಭದಲ್ಲಿ ಅವರ ಈ ಮೌನ ಯಾವ ಪ್ರಯೋಜನಕ್ಕೂ ಬರುವುದಿಲ್ಲ.
ಇಷ್ಟಕ್ಕೂ ಅಝಾನ್ ಎಂದರೆ ಮುಸ್ಲಿಮೇತರ ರಾಜಕಾರಣಿಗಳಲ್ಲಿ ಮಾತ್ರವಲ್ಲ, ಮುಸ್ಲಿಮರಲ್ಲೂ ತಪ್ಪು ಕಲ್ಪನೆಗಳಿವೆ. ಮುಸ್ಲಿಮೇತರರು ಆಗಾಗ ಮುಸ್ಲಿಮರಲ್ಲಿ ಕೇಳುವ ವ್ಯಂಗ್ಯ ಪ್ರಶ್ನೆಯೊಂದಿದೆ ‘‘ನಿಮ್ಮ ಅಲ್ಲಾಹನಿಗೆ ಕಿವಿ ಕೇಳಿಸುವುದಿಲ್ಲವಾ? ಮೈಕ್‌ನಲ್ಲಿ ಅಷ್ಟು ಜೋರಾಗಿ ಬೊಬ್ಬೆ ಹೊಡೆದು ಪ್ರಾರ್ಥನೆ ಮಾಡುವುದು ಯಾಕೆ?’’
ನರೇಂದ್ರ ಮೋದಿ ತಿಳಿದುಕೊಂಡಂತೆ ‘ಅಝಾನ್’ ಎಂದರೆ ಪ್ರಾರ್ಥನೆಯಲ್ಲ. ಬದಲಿಗೆ ‘ಪ್ರಾರ್ಥನೆಯ ಹೊತ್ತಾಯಿತು, ಬನ್ನಿ’ ಎಂದು ಜನರಿಗೆ ನೀಡುವ ಕರೆ ಅದು. ಈ ಅಝಾನ್ ಆರಂಭವಾದುದು, ಪ್ರವಾದಿ ಮುಹಮ್ಮದ್ ಮದೀನಾಕ್ಕೆ ವಲಸೆ ಹೋದ ಅನಂತರದ ಎರಡನೇ ವರ್ಷದಲ್ಲಿ. ಮಕ್ಕಾದಲ್ಲಿ ಅವರ ವಿರೋಧಿಗಳು ಕೊಲ್ಲೂದಕ್ಕೆ ಹೊಂಚು ಹಾಕುತ್ತಿರುವ ಹಿನ್ನೆಲೆಯಲ್ಲಿ ಅವರು ಮದೀನಕ್ಕೆ ವಲಸೆ ಹೋಗೂದು ಅನಿವಾರ್ಯವಾಯಿತು. ಮದೀನದ ಜನರು ಪ್ರವಾದಿಗೆ ಆಶ್ರಯ ನೀಡಿದ್ದೆ ಅಲ್ಲದೆ, ಅವರ ಸಂದೇಶಗಳಿಗೆ ಮನ ಸೋಲ ತೊಡಗಿದರು.  ಆರಂಭದಲ್ಲಿ ಬೆರಳೆಣಿಕೆಯಲ್ಲಿದ್ದ ಪ್ರವಾದಿಯ ಸಂಗಾತಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚ ತೊಡಗಿತು. ಎಲ್ಲರೂ ಜೊತೆಯಾಗಿ ನಮಾಝ್ ನಿರ್ವಹಿಸುವುದು ಹೆಚ್ಚು ಪುಣ್ಯಕರ ಎಂದು ಇಸ್ಲಾಮ್ ಧರ್ಮ ನಂಬಿದೆ. ಆದರೆ ನಮಾಝಿನ ಸಮಯದ ಗೊಂದಲದಿಂದಾಗಿ ಅವರ ಸಂಗಾತಿಗಳಲ್ಲಿ ಒಬ್ಬೊಬ್ಬರು ಒಂದೊಂದು ಸಮಯಕ್ಕೆ ಬಂದು ನಮಾಝ್ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಪ್ರವಾದಿ ಮತ್ತು ಅವರ ಸಂಗಾತಿಗಳು ನಮಾಝ್ ಸಮಯವನ್ನು ಎಲ್ಲರಿಗೂ ಗೊತ್ತು ಪಡಿಸಲು ಯಾವುದಾದರೂ ಒಂದು ಕ್ರಮವನ್ನು ಅನುಸರಿಸಬೇಕು ಎಂದು ಚರ್ಚಿಸತೊಡಗಿದರು. ಈ ಕುರಿತಂತೆ ಪ್ರವಾದಿ ಮತ್ತು ಸಂಗಾತಿಗಳ ನಡುವೆ ಒಂದು ಸಭೆ ನಡೆಯಿತು.
ಯಹೂದಿಗಳು ಪ್ರಾರ್ಥನೆಯ ಸಂದರ್ಭದಲ್ಲಿ ‘ಶಬ್ದ’ ಹೊರಡಿಸುವಂತೆ ಯಾವುದಾರೂ ಶಬ್ದ ಮಾಡಿದರೆ ಹೇಗೆ ಎಂಬ ಸಲಹೆಯನ್ನು ಕೆಲವರು ನೀಡಿದರು. ಆದರೆ ಅದು ಯಹೂದಿಗಳ ಅನುಕರಣೆಯಾಗಿ ಬಿಡುವ ಸಾಧ್ಯತೆ ಇದೆ ಎಂದು ಅದನ್ನು ನಿರಾಕರಿಸಲಾಯಿತು. ಪ್ರಾರ್ಥನೆಯ ಸಮಯವಾದಾಕ್ಷಣ ಗಂಟೆ ಬಾರಿಸಿ ಜನರನ್ನು ಎಚ್ಚರಿಸಿದರೆ ಹೇಗೆ? ಎಂದು ಕೆಲವರು ಕೇಳಿದರು. ‘ಅದು ಕ್ರಿಶ್ಚಿಯನ್ನರ ಅನುಕರಣೆಯಾಗುತ್ತದೆ’ ಎಂದು ಕೈ ಬಿಡಲಾಯಿತು. ‘ಪ್ರಾರ್ಥನೆಯ ಹೊತ್ತಿನಲ್ಲಿ ಎತ್ತರ ಪ್ರದೇಶದಲ್ಲಿ ದೊಂದಿಯನ್ನು ಹಚ್ಚಿದರೆ ಹೇಗೆ?’ ಎಂಬ ಪ್ರಸ್ತಾಪವೂ ತಿರಸ್ಕೃತವಾಯಿತು. ಯಾಕೆಂದರೆ, ಕೊನೆಯಲ್ಲಿ ಅದು ‘ಅಗ್ನಿ ಆರಾಧನೆ’ಗೆ ಕಾರಣವಾಗಬಹುದು ಎಂಬ ಭಯದಿಂದ. ಹೀಗೆ ಕೆಲವು ದಿನ ಚರ್ಚೆಗಳು ಮುಂದುವರಿದವು. ಒಂದು ದಿನ ಪ್ರವಾದಿ ಸಂಗಾತಿ ಅಬ್ದುಲ್ಲಾ ಬಿನ್ ಝೈದ್ ಒಂದು ಪ್ರಸ್ತಾಪವನ್ನಿಟ್ಟರು. ಅದೇ ಅಝಾನ್. ಈ ವರೆಗೆ ‘ಪ್ರಾರ್ಥನೆಯ ಸಮಯವಾಯಿತು ಬನ್ನಿ’ ಎಂದು ಜೋರಾಗಿ ಕೂಗಿ ಹೇಳಲಾಗುತ್ತಿತ್ತು. ಆದರೆ, ಅಬ್ದುಲ್ಲಾ ಬಿನ್ ಝೈದ್ ಅವರು ಸಂಪೂರ್ಣವಾದ  ಅಝಾನ್ ಪಠ್ಯವೊಂದನ್ನು ತೆರೆದಿಟ್ಟರು. ‘‘ದೇವರು ಸರ್ವಶಕ್ತನು, ದೇವರು ಒಬ್ಬನೇ, ಪ್ರವಾದಿ ಮುಹಮ್ಮದ್ ಅವನ ಸಂದೇಶವಾಹಕ, ನಮಾಝಿಗೆ(ಪ್ರಾರ್ಥನೆ) ಬನ್ನಿ, ಆ ಮೂಲಕ ವಿಜಯದೆಡೆಗೆ ಬನ್ನಿ, (ಮುಂಜಾವಿನ ಅಝಾನ್ ಸಂದರ್ಭದಲ್ಲಿ ‘ಮಲಗುವುದಕ್ಕಿಂತ ಪ್ರಾರ್ಥನೆ ಅತ್ಯುತ್ತಮ’ ಎನ್ನುವ ಸಾಲುಗಳು ಸೇರ್ಪಡೆಯಾಗುತ್ತದೆ), ದೇವರು ಮಹಾಮಹಿಮನು, ಅವನು ಒಬ್ಬನೇ’’ ಇದು ಅವರು ಪ್ರಸ್ತಾಪಿಸಿದ ಅಝಾನ್‌ನ ಭಾವಾನುವಾದ. ಇದನ್ನು ಪ್ರವಾದಿಯೂ ಸೇರಿದಂತೆ ಎಲ್ಲ ಸಂಗಾತಿಗಳು ಒಪ್ಪಿಕೊಂಡರು. ಮತ್ತು, ಮೊತ್ತ ಮೊದಲ ನಮಾಝ್ ಕರೆಯನ್ನು ನೀಡುವ ಹೊಣೆಗಾರಿಕೆಯನ್ನು ಬಿಲಾಲ್ ಅವರಿಗೆ ವಹಿಸಲಾಯಿತು. ( ಬಿಲಾಲ್ ಒಬ್ಬ ನೀಗ್ರೋ ಗುಲಾಮರಾಗಿದ್ದರು. ಇಸ್ಲಾಮ್ ಸ್ವೀಕರಿಸಿದ ಕಾರಣಕ್ಕಾಗಿ ಅತ್ಯಧಿಕ ದೌರ್ಜನ್ಯವನ್ನು ವಿರೋಧಿಗಳಿಂದ ಎದುರಿಸಿದವರಲ್ಲಿ ಬಿಲಾಲ್ ಒಬ್ಬರು. ಇಸ್ಲಾಮ್ ಸ್ವೀಕರಿಸಿದ ಮೊತ್ತ ಮೊದಲ ನೀಗ್ರೋ ಅವರಾಗಿದ್ದಾರೆ). ಬಿಲಾಲ್ ಮೊತ್ತ ಮೊದಲ ಬಾರಿ ನೀಡಿದ ಅಝಾನ್ ಕರೆ, ಮುಂದೆ ಸಂಪ್ರದಾಯವಾಗಿ ಮುಂದುವರಿಯಿತು.
 ಮೈಕ್‌ನ ಸಂಶೋಧನೆಯಾದ ಮೇಲೆ ಹಲವರು ಮೈಕ್ ಬಳಸುವುದಕ್ಕೆ ತೊಡಗಿದರು. ಅದೂ ತುಂಬಾ ದೂರದವರೆಗೆ ಎಲ್ಲರ ಕಿವಿಗಳನ್ನು ತಲುಪುತ್ತದೆ ಎನ್ನುವ ಕಾರಣಕ್ಕೆ ಹೊರತು ದೇವರಿಗೆ ತಲುಪುತ್ತದೆ ಎನ್ನುವ ಕಾರಣಕ್ಕಾಗಿ ಅಲ್ಲ. ಹಾಗೆ ನೋಡಿದರೆ, ನಮ್ಮೂರ ಎಷ್ಟೋ ಮಸೀದಿಗಳಲ್ಲಿ ವಿದ್ಯುತ್ ಬಂದದ್ದೇ ಮೂರು ದಶಕಗಳ ಹಿಂದೆ. ಕೆಲವು ಮಸೀದಿಗಳಲ್ಲಿ ‘ವಿದ್ಯುತ್ ಸಂಪರ್ಕ ಕೊಡಬೇಕೆ, ಬೇಡವೇ’ ಎನ್ನುವ ವಿಷಯದಲ್ಲೇ ತಕರಾರುಗಳು ನಡೆದು, ಎಷ್ಟೋ ವರ್ಷಗಳ ಬಳಿಕ ಮಸೀದಿಗಳಿಗೆ ವಿದ್ಯುತ್ ಸಂಪರ್ಕ ಬಂತು. ಮೈಕ್ ವ್ಯವಸ್ಥೆಗಳಿಗೆ ಎರಡು-ಮೂರು-ನಾಲ್ಕು ದಶಕಗಳ ಇತಿಹಾಸವಷ್ಟೇ ಇದೆ. ಆರಂಭದಲ್ಲಿ ‘ಅಝಾನ್’ ಕರೆ ನೀಡುವುದಕ್ಕೆ ಮೈಕ್ ಬಳಸುವುದು, ಸರಿಯೋ ತಪ್ಪೋ ಎಂಬ ಬಗ್ಗೆಯೂ ಚರ್ಚೆ ನಡೆದಿದ್ದವು. ಹಲವರು ಮೈಕ್ ಬಳಸುವುದನ್ನು ವಿರೋಧಿಸಿದ್ದರು ಕೂಡ. ಈಗಲೂ ಕರೆಂಟ್ ಹೋದಾಗ, ಮೈಕ್ ಇಲ್ಲದೆಯೇ ಅಝಾನ್ ನೀಡಲಾಗುತ್ತದೆ. ವಿದ್ಯುತ್ ಸಂಪರ್ಕವಿಲ್ಲದ ಎಷ್ಟೋ ಮಸೀದಿಗಳಲ್ಲಿ, ಅಝಾನ್‌ನ್ನು ಮೈಕ್ ಮೂಲಕ ಕೊಡುವುದಿಲ್ಲ. ಸಾಧಾರಣವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮೈಕ್ ಮೂಲಕ ಅಝಾನ್ ಕೊಟ್ಟರೆ ಇತರರಿಗೆ ವಿಶೇಷ ತೊಂದರೆಯಾಗುವುದಿಲ್ಲ.  ಮುಸ್ಲಿಮೇತರರು ಕೂಡ ಹಳ್ಳಿಗಳಲ್ಲಿ ‘‘ಓ..ಮಧ್ಯಾಹ್ನದ.ಬಾಂಗ್ ಆಯಿತು ಮಾರಾಯರೆ, ನನ್ನ ಕೆಲಸ ಇನ್ನೂ ಮುಗಿಯಲಿಲ್ಲ...’’ ಎಂದು ಸಮಯ ಗುರುತಿಸುವುದಕ್ಕೂ ಬಾಂಗ್ ಅಥವಾ ಅಝಾನನ್ನು ಬಳಸುವುದಿದೆ. ಅಷ್ಟು ಅವಿನಾಭಾವವಾಗಿ ಅವರು ಅದನ್ನು ಸ್ವೀಕರಿಸಿದ್ದಾರೆ.   ಬರೇ ಒಂದು ನಿಮಿಷದ ಅಝಾನ್ ಕರೆ  ಮೈಕ್ ಮೂಲಕ ನೀಡಿದರೆ ಇಡೀ ಊರಿಗೆ ತೊಂದರೆಯಾಗುತ್ತದೆ ಎನ್ನುವ ಅಪಸ್ವರಗಳು ಕೇಳಿಸಲಾರಂಭಿಸಿರುವುದು ಇತ್ತೀಚಿನ ದಿನಗಳಲ್ಲಿ. ಅದಕ್ಕೆ ತನ್ನದೇ ಆದ ರಾಜಕೀಯ ಕಾರಣಗಳೂ ಇವೆ. ಆದರೂ, ಜನನಿಬಿಡ ನಗರಗಳಲ್ಲಿ ಎರಡೆರಡು ಮಸೀದಿಗಳು ಹತ್ತಿರವಿದ್ದಾಗ, ಕಿವಿಗೆ ಅಪ್ಪಳಿಸುವಂತೆ ಅಝಾನ್‌ಗಳು ಅಬ್ಬರಿಸಿದಾಗ ಹಲವರಿಗೆ ಕಿರಿಕಿರಿಯಾಗುವ ಸಾಧ್ಯತೆಗಳು ಖಂಡಿತ ಇವೆ. ಎರಡೆರಡು ಮಸೀದಿಗಳ ಅಝಾನ್‌ಗಳು ಮೈಕ್‌ನಲ್ಲಿ ಅಬ್ಬರಿಸುವಾಗ ಮುಸ್ಲಿಮರಿಗೆ ಅದು ಹಿತವಾಗಿಯೇ ಕಂಡರೂ, ಮುಸ್ಲಿಮೇತರರಿಗೆ, ಅದರ ಮೇಲೆ ನಂಬಿಕೆಯಿಲ್ಲದವರಿಗೆ ಕಿರಿಕಿರಿಯಾಗುವುದು ಸಹಜವೇ ಆಗಿದೆ. ಇಂತಹ ಸಂದರ್ಭದಲ್ಲಿ, ಮೈಕ್‌ನ ಸದ್ದುಗಳನ್ನು ಇಳಿಸುವ ತಂತ್ರಜ್ಞಾನವನ್ನು ಬಳಸುವುದು ಅತ್ಯಗತ್ಯ. ನಗರಗಳಲ್ಲಿ ನಮಾಝ್ ಸಮಯ ಊಹಿಸುವುದಕ್ಕೆ ಜನರು ಅಝಾನನ್ನೇ ಅವಲಂಬಿಸುವುದಿಲ್ಲ. ಕರೆಂಟ್ ಇಲ್ಲದಾಗ ಅಝಾನ್ ಕೇಳಿಸದಿದ್ದರೂ, ನಮಾಝ್ ಸಮಯ ಊಹಿಸಿ ಮಸೀದಿಗೆ  ದಾವಿಸಲು ಹಲವು ದಾರಿಗಳು ಈಗ ತೆರೆದುಕೊಂಡಿವೆ. ನಗರಗಳಲ್ಲಿರುವ ಎಲ್ಲ ಮಸೀದಿಗಳು ತಮ್ಮ ತಮ್ಮ ಮೈಕ್‌ಗಳ ಸ್ವರವನ್ನು ಇಳಿಸುವುದು ಈ ಹಿನ್ನೆಲೆಯಲ್ಲಿ ಅತ್ಯಗತ್ಯ. ಮಸೀದಿಯ ಆವರಣ, ಪರಿಸರಕ್ಕೆ ಸೀಮಿತವಾಗುವಂತೆ ಸೌಂಡ್‌ಬಾಕ್ಸ್, ಸ್ಪೀಕರ್‌ಗಳನ್ನು ಬಳಸುವುದು ಅತ್ಯುತ್ತಮ. ಹಾಗೆಯೇ ನಮಾಝ್ ಸಮಯವನ್ನು ತಿಳಿಸುವುದಕ್ಕೆ ವಾಟ್ಸಪ್, ಎಸ್‌ಎಂಎಸ್ ಸಂದೇಶ ಇವುಗಳನ್ನೆಲ್ಲ ಪರಿಣಾಮಕಾರಿಯಾಗಿ ಬಳಸಬಹುದು. ಹೇಗೆ ಆಧುನಿಕ ತಂತ್ರಜ್ಞಾನವಾದ ಮೈಕ್‌ಗಳನ್ನು ಬಳಸಿಕೊಳ್ಳಲಾಯಿತೋ, ಹಾಗೆಯೇ ಮೊಬೈಲ್, ವಾಟ್ಸಪ್ ಮೊದಲಾದವುಗಳನ್ನು ಪೂರಕವಾಗಿ ಬಳಸಿಕೊಳ್ಳಬೇಕು. ಇಲ್ಲಿ, ಪ್ರಾರ್ಥನೆಯ ಸಮಯವಾಯಿತೆಂದು ಎಚ್ಚರಿಸುವುದಕ್ಕೋಸ್ಕರ ಅಝಾನ್ ಇದೆಯೇ ಹೊರತು, ಅಝಾನ್‌ನನ್ನೇ ಪ್ರಾರ್ಥನೆ ಎಂದು ಜನರು ತಪ್ಪು ತಿಳಿದುಕೊಳ್ಳುವಂತೆ ಆಗಬಾರದು. ಹಾಗೆಯೇ, ಜನರು ನಮಾಝ್ ಸಮಯಕ್ಕೆ ಪೂರಕವಾಗಿ ಅಝಾನ್‌ನ್ನು ತಮ್ಮ ತಮ್ಮ ಮೊಬೈಲ್‌ಗಳಲ್ಲೇ ಅಳವಡಿಸಿಕೊಳ್ಳಬಹುದು. ಇದು ಅತ್ಯಂತ ಸುಲಭ ಮತ್ತು ಯಶಸ್ವೀ ಮಾರ್ಗ. ಅಝಾನ್‌ನ ಸಂದರ್ಭದಲ್ಲಿ ಕೆಲವು ಮುಸ್ಲಿಮರು ಗೌರವಪೂರ್ವಕವಾಗಿ ಮೌನವಾಗಿರುತ್ತಾರೆ. ಆದರೆ ಅದರ ಮುಖ್ಯ ಉದ್ದೇಶ, ಅಝಾನ್ ಇತರರಿಗೂ ಕೇಳಿಸಲಿ ಎನ್ನುವ ಕಾರಣಕ್ಕಾಗಿ. ಆದುದರಿಂದ, ಅಝಾನ್ ಸಂದರ್ಭದಲ್ಲಿ ಮೋದಿ ಭಾಷಣ ಮಾಡಿದರೂ ಅದರಿಂದ ಮುಸ್ಲಿಮರ ಪ್ರಾರ್ಥನೆಗೆ ಯಾವ ತೊಂದರೆಯೂ ಆಗುತ್ತಿರಲಿಲ್ಲ. ಮುಸ್ಲಿಮರಿಗೆ ಇಂದು ಬೇಕಾಗಿರುವುದು, ನರೇಂದ್ರ ಮೋದಿಯ ಔದಾರ್ಯದ ‘ಮೌನ’ವಲ್ಲ. ಬದಲಿಗೆ ಮುಸ್ಲಿಮರ ಮೇಲೆ ದೇಶಾದ್ಯಂತ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಅವರು ತಮ್ಮ ವೌನ ಮುರಿಯಬೇಕು. ಹಾಗೆಯೇ ಸಂವಿಧಾನದತ್ತ ಹಕ್ಕುಗಳು ಅವರಿಗೆ ತಲುಪುವ ಕುರಿತಂತೆ ಮೋದಿ ಆಸಕ್ತಿ ವಹಿಸಬೇಕು. ಒಬ್ಬ ಪ್ರಧಾನಿಯಾಗಿ, ಅದುವೇ ಅವರು ಮಾಡಬೇಕಾಗಿರುವ ಆದ್ಯತೆಯ ಕೆಲಸ. ಈ ದೇಶದ ಮುಸ್ಲಿಮರು ಪ್ರಧಾನಿಯಿಂದ ನಿರೀಕ್ಷಿಸುವುದು ಮೌನವನ್ನಲ್ಲ, ಮಾತುಗಳನ್ನು.

2 comments:

  1. ನಾವು 'ಬಾಂಗ್' ಎಂದಷ್ಟೇ ತಿಳಿದಿದ್ದ ಈ ಶಬ್ದದ ಬಗ್ಗೆ ಬೇಸಿಕ್ ಮಾಹಿತಿ ನಿಡಿದ್ದೀರಿ, ಬದಲಾವಣೆಗಳಿಗೆ ತೆರೆದುಕೊಳ್ಳುವ ಸಜೆಷನ್ ಅತ್ಯತ್ತಮ

    ReplyDelete