Monday, December 15, 2014

ಲಿಂಗಾ: ರಜನಿಯಿಂದ ರಜನಿಗಾಗಿ...

ರಜನಿಕಾಂತ್ ಚಿತ್ರವೆಂದರೆ ಅದರ ದೌರ್ಬಲ್ಯವೂ, ಶಕ್ತಿಯೂ ರಜನೀಕಾಂತ್ ಅವರೇ ಆಗಿರುವುದು. ಅನೇಕ ಸಂದರ್ಭದಲ್ಲಿ ಒಳ್ಳೆಯ ಕತೆಗಳು ರಜನಿಯನ್ನು ಎತ್ತಿ ನಿಲ್ಲಿಸಿವೆ. ಅರುಣಾಚಲಂ, ಪಡೆಯಪ್ಪ, ಎಂದಿರನ್ ಇವೆಲ್ಲ ಚಿತ್ರಗಳು ಕೇವಲ ರಜನಿಯಿಂದಾಗಿಯೇ ಗೆದ್ದಿರುವುದಲ್ಲ. ಉತ್ತಮ ಕತೆ, ನಿರ್ದೇಶನವೇ ಆ ಚಿತ್ರವನ್ನು ಗೆಲ್ಲಿಸಿದೆ. ತನ್ನನ್ನು ತಾನೇ ವೈಭವೀಕರಿಸಲು ಹೋದಾಗೆಲ್ಲ ರಜನಿಕಾಂತ್ ತಳತಪ್ಪಿ ಬಿದ್ದಿದ್ದಾರೆ. ಅವರ ಅತಿ ನಿರೀಕ್ಷೆಯ ಚಿತ್ರಗಳಾಗಿರುವ ಬಾಬಾ, ಕೋಚಾಡಯ್ಯನ್ ಮೊದಲಾದವುಗಳಿಗೆ ಒದಗಿದ ಗತಿಯೇ ಇದನ್ನು ಪುಷ್ಟೀಕರಿಸುತ್ತದೆ. ಕೋಚಾಡಯ್ಯನ್ ಸೋಲಿನ ಬಳಿಕ ರಜನೀಕಾಂತ್ ತುಸು ಮಂಕಾಗಿದ್ದರು. ಇಂತಹ ಸಂದರ್ಭದಲ್ಲಿ ಅವರ ವರ್ಚಸ್ಸನ್ನು ಮರಳಿ ಗಳಿಸಿಕೊಡುವ ತರಾತುರಿಯಲ್ಲಿ ‘ಲಿಂಗಾ’ ಚಿತ್ರವನ್ನು ಬಿಡುಗಡೆಗೊಳಿಸಲಾಗಿದೆ.

 ಹಾಗೆ ನೋಡಿದರೆ ‘ಲಿಂಗ’ ಚಿತ್ರದ ಕತೆ ಹದಯಸ್ಪರ್ಶಿಯಾದುದು. ಹಿಂದಿಗೂ, ಇಂದಿಗೂ, ಮುಂದಿಗೂ ಸಲ್ಲುವಂತಹ ಒಂದು ವಸ್ತುವನ್ನು ಇಟ್ಟುಕೊಂಡು ಚಿತ್ರವನ್ನು ಮಾಡಲಾಗಿದೆ. ರಾಜವಂಶಸ್ಥನೂ ಆಗಿರುವ ಒಬ್ಬ ಜಿಲ್ಲಾಧಿಕಾರಿ ಜನರಿಗಾಗಿ ಅಣೆಕಟ್ಟು ಕಟ್ಟಲು ಹೊರಡುವ, ಅದಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡುವ ಕತೆಯೇ ಲಿಂಗ. ಆದರೆ ಚಿತ್ರದುದ್ದಕ್ಕೂ ಎರಡೆರಡು ರಜನಿಕಾಂತ್‌ರನ್ನು ಪ್ರೇಕ್ಷಕರಿಗೆ ಬಲವಂತವಾಗಿ ಬಡಿಸುವ ಅನಿವಾರ್ಯತೆಗೆ ನಿರ್ದೇಶಕ ಸಿಕ್ಕಿಕೊಂಡಿರೋದರಿಂದ ಕತೆ ಬದಿಗೆ ತಳ್ಳಲ್ಪಡುತ್ತದೆ. ‘ಮುತ್ತು’ ಚಿತ್ರದಲ್ಲಿ ಎಲ್ಲವನ್ನೂ ತನ್ನ ಜನರಿಗಾಗಿ ತ್ಯಾಗ ಮಾಡುವ ಜಮೀನ್ದಾರನಂತೆಯೇ ಇಲ್ಲಿ ರಾಜವಂಶಸ್ಥ ಜಿಲ್ಲಾಧಿಕಾರಿಯನ್ನು ಚಿತ್ರೀಕರಿಸಲಾಗಿದೆ. ಜನಸಾಮಾನ್ಯರ ಬದುಕನ್ನು ಕೇಂದ್ರವಾಗಿಟ್ಟುಕೊಳ್ಳದೇ, ರಜನೀ ಎನ್ನುವ ಸೂಪರ್‌ಸ್ಟಾರ್‌ನ್ನು ಮುಂದಿಟ್ಟುಕೊಂಡು ಚಿತ್ರ ಕತೆಯನ್ನು ನಿರೂಪಿಸಿರುವುದರಿಂದ, ಅಣೆಕಟ್ಟಿನ ಕತೆ ಮೇಲಿಂದ ಮೇಲೆ ತೇಲಿ ಹೋದಂತೆ ಅನಿಸುತ್ತದೆ. ಆದರೆ ಇಡೀ ಚಿತ್ರದಲ್ಲಿ ರಜನೀಕಾಂತ್ ತನ್ನ ಯೌವನವನ್ನು ಇನ್ನೂ ಉಳಿಸಿಕೊಂಡು ಕುಣಿಯುವುದು, ಫೈಟ್ ಮಾಡುವುದು ಅವರ ಸೂಪರ್ ಸ್ಟಾರ್ ಗರಿಮೆಗೆ ಇನ್ನೊಂದು ಸ್ಟಾರ್‌ನ್ನು ಸೇರಿಸುತ್ತದೆ. ಇವೆಲ್ಲವುಗಳಿಗೆ ಪೂರಕವಾಗಿ ರಜನೀ ಹುಟ್ಟುಹಬ್ಬದ ದಿನವೇ ಚಿತ್ರ ಬಿಡುಗಡೆಯಾಗಿದೆ. ರಜನೀ ಅಭಿಮಾನಿಗಳಿಗೆ ಈ ಚಿತ್ರದಲ್ಲಿ ಯಥೇಚ್ಛ ಉಡುಗೊರೆಗಳಿವೆ. ಆದರೆ ಒಂದು ಚಿತ್ರವಾಗಿ ಲಿಂಗ ಕಾಡುವುದು ಕೇವಲ 45 ನಿಮಿಷಗಳು ಮಾತ್ರ.


 ಅಣೆಕಟ್ಟೊಂದರ ಪರಿಶೀಲನೆ ನಡೆಸುತ್ತಿರುವ ಸರಕಾರಿ ಅಧಿಕಾರಿಯೊಬ್ಬನ ಕೊಲೆಯೊಂದಿಗೆ ಲಿಂಗಾ ಚಿತ್ರದ ಕತೆ ಅನಾವರಣಗೊಳ್ಳುತ್ತದೆ. ಅಣೆಕಟ್ಟಿನ ಪಕ್ಕದಲ್ಲಿದ್ದ ದೇವಸ್ಥಾನವನ್ನು ತೆರೆಯಬೇಕೆನ್ನುವ ಅನಿವಾರ್ಯತೆ ಊರಿಗೆ ಒದಗಿ ಬರುತ್ತದೆ. ಅದನ್ನು ತೆರೆಯಬೇಕಾದರೆ, ಅದನ್ನು ಸ್ಥಾಪಿಸಿದ ಅಂದಿನ ರಾಜ ಲಿಂಗೇಶ್ವರ ವಂಶಸ್ಥರು ಬೇಕು. ಆದರೆ ಆತ ಎಲ್ಲಿದ್ದಾನೆ? ಆತ ಸಣ್ಣ ಪುಟ್ಟ ಕಳ್ಳತನ ಮಾಡುತ್ತಾ ಜೈಲಿನಲ್ಲಿ ಕನಸಿನ ಲೋಕದಲ್ಲಿ ಬದುಕುತ್ತಿದ್ದಾನೆ. ಕಳ್ಳನಾದ ಲಿಂಗಾ, ಕಳ್ಳತನದ ಪ್ರಕರಣವೊಂದಕ್ಕೆ ಸಂಬಂಧಿಸಿ ತನ್ನ ಹಿಂಬಾಲಕ (ಸಂತಾನಂ, ಕರುಣಾಕರನ್)ರೊಂದಿಗೆ ಜೈಲು ಸೇರಿರುತ್ತಾನೆ. ಇವರೆಲ್ಲರಿಗೂ ಟಿವಿ ವರದಿಗಾರ್ತಿ ಲಕ್ಷ್ಮಿ (ಅನುಷ್ಕಾ ಶೆಟ್ಟಿ) ಜಾಮೀನು ನೀಡಿ, ಜೈಲಿನಿಂದ ಹೊರತರುತ್ತಾಳೆ. ಲಿಂಗಾ, ಆತನ ಹುಟ್ಟೂರಾದ ಸೊಲೈಯೂರ್‌ಗೆ ಹಿಂತಿರುಗಿ, ಆತನ ತಾತಾ ರಾಜಾಲಿಂಗೇಶ್ವರನ್ (ರಜನಿಕಾಂತ್ ದ್ವಿಪಾತ್ರ) ನಿರ್ಮಿಸಿದ್ದ ಶಿವ ದೇವಾಲಯವನ್ನು ಮರಳಿ ತೆರೆಯಬೇಕೆಂಬುದೇ ಆಕೆಯ ಉದ್ದೇಶವಾಗಿರುತ್ತದೆ. ಆದರೆ ಲಿಂಗಾ ಅದಕ್ಕೆ ನಿರಾಕರಿಸುತ್ತಾನೆ. ಯಾಕೆಂದರೆ ಆತನಿಗೆ ತನ್ನ ತಾತನ ಬಗ್ಗೆ ತೀವ್ರ ದ್ವೇಷವಿರುತ್ತದೆ. ತನ್ನ ಸಂಪತ್ತೆಲ್ಲವನ್ನೂ ಜನರಿಗೆ ದಾನಮಾಡುವ ಮೂಲಕ ರಾಜಾಲಿಂಗೇಶ್ವರ, ಮೊಮ್ಮಗನಾದ ತನಗೆ ಚಿಕ್ಕಾಸು ಹಣವನ್ನು ಉಳಿಸಿಲ್ಲವೆಂಬುದೇ ಆತನ ಅಸಮಾಧಾನಕ್ಕೆ ಕಾರಣ. ಆದರೆ ಕೆಲವು ಸನ್ನಿವೇಶಗಳಿಂದಾಗಿ ಆತ ಸೊಲೈಯೂರಿಗೆ ತೆರಳಬೇಕಾಗುತ್ತದೆ. ಅಲ್ಲಿ ಆತನಿಗೆ ತನ್ನ ತಾತನ ಮಹಾತ್ಯಾಗದ ಅರಿವಾಗುತ್ತದೆ.   ಅಲ್ಲಿಂದ ತೆರೆಯ ಮೇಲೆ ಫ್ಲಾಶ್‌ಬ್ಯಾಕ್‌ನಲ್ಲಿ ರಾಜಾಲಿಂಗೇಶ್ವರನ್‌ನ ಕತೆ ಅನಾವರಣಗೊಳ್ಳುತ್ತದೆ.

ಕಥಾನಾಯಕ ‘ರಾಜಾ ಲಿಂಗೇಶ್ವರನ್’ ಇಡೀ ದಕ್ಷಿಣ ಭಾರತವನ್ನು ಆಳಿದ ಪ್ರತಿಷ್ಠಿತ ರಾಜವಂಶದ ಕುಡಿ. ರಾಜಮನೆತನಕ್ಕೆ ಸೇರಿದ್ದರೂ ರಾಜಾ ಲಿಂಗೇಶ್ವರನ್, ಅಪ್ಪನ ಇಚ್ಛೆಯಂತೆ ಸಿವಿಲ್ ಇಂಜಿನಿಯರ್ ಪದವಿ ಪಡೆದು ಮಧುರೈಗೆ ಕಲೆಕ್ಟರ್ ಆಗಿ ಎಂಟ್ರಿಕೊಡುತ್ತಾನೆ. ಆದರೆ ಸೊಲೈಯೂರ್‌ನ ಜನತೆಗೆ ಪ್ರಯೋಜನಕಾರಿಯಾದ ಅಣೆಕಟ್ಟನ್ನು ನಿರ್ಮಿಸಲು ಬ್ರಿಟಿಶರು ಬಿಡದೆ ಇದ್ದಾಗ ಆತ ಕಲೆಕ್ಟರ್ ಹುದ್ದೆಗೆ ರಾಜೀನಾಮೆ ನೀಡುತ್ತಾನೆ. ಆನಂತರ ಆತ ತನ್ನ ಪಿತ್ರಾರ್ಜಿತ ಹಣವನ್ನೇ ಬಳಸಿಕೊಂಡು ,ಜನರನ್ನು ಒಗ್ಗೂಡಿಸಿ ಅಣೆಕಟ್ಟು ನಿರ್ಮಿಸುತ್ತಾನೆ. ಆದರೆ ದುರಹಂಕಾರಿ ಬ್ರಿಟಿಶ್ ಕಲೆಕ್ಟರ್, ರಾಜಾಲಿಂಗೇಶ್ವರನಿಗೆ ಪ್ರತಿಯೊಂದು ಹಂತದಲ್ಲಿಯೂ ಅಡ್ಡಪಡಿಸಲು ಯತ್ನಿಸುತ್ತಾನೆ. ಇದಕ್ಕಾಗಿ ಆತ ಹಣ, ಜಾತಿ ಹಾಗೂ ಅಧಿಕಾರದ ಬಲವನ್ನು ದುರುಯೋಗಪಡಿಸಿಕೊಳ್ಳುತ್ತಾನೆ. ಲಿಂಗೇಶ್ವರನ್ ಅಣೆಕಟ್ಟನ್ನು ಪೂರ್ತಿಗೊಳಿಸಲು ತನ್ನ ಇಡೀ ಸಂಪತ್ತನ್ನು ಕಲೆಕ್ಟರ್‌ಗೆ ಧಾರೆಯೆರೆಯುತ್ತಾನೆ.

ಆನಂತರ ಕತೆ ಫ್ಲಾಶ್‌ಬ್ಯಾಕ್‌ನಿಂದ ಹೊರಬರುತ್ತದೆ.ಕಿತ್ತು ತಿನ್ನುವ ಬರಗಾಲ, ಸಹಸ್ರಾರು ಜನರ ಪರಿಶ್ರಮದಿಂದ ನಿರ್ಮಾಣವಾಗುವ ಅಣೆಕಟ್ಟು, ಅದನ್ನ ತಪ್ಪಿಸುವುದಕ್ಕೆ ರಾಜಕಾರಣಿಗಳ ಕುತಂತ್ರ, ಎಪ್ಪತ್ತೈದು ವರ್ಷಗಳಿಂದ ಮುಚ್ಚಲ್ಪಟ್ಟಿರುವ ಪುರಾತನ ಶಿವನ ದೇವಸ್ಥಾನ, ಈ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸುವುದಕ್ಕೆ ಪ್ರತ್ಯಕ್ಷವಾಗುತ್ತಾನೆ ಲಿಂಗಾ.
  ಚಿತ್ರದಲ್ಲಿ 64ನೇ ವಯಸ್ಸಲ್ಲೂ 24ರಂತೆ ಕಾಣಿಸುವ ರಜನಿ ತೆರೆಮೇಲೆ ಮ್ಯಾಜಿಕ್ ಮಾಡಿದ್ದಾರೆ. ಡಬ್ಬಲ್ ರೋಲ್‌ನಲ್ಲಿ ಅವರು ಕಮಾಲ್ ಮಾಡಿದ್ದಾರೆ. ‘ರಾಜಾ ಲಿಂಗೇಶ್ವರನ್ ಆಗಿ ರಾಜಗಾಂಭೀರ್ಯ ಮೆರೆಯುವ ರಜನಿ, ‘ಲಿಂಗಾ’ ಆಗಿ ಅಷ್ಟೇ ಸ್ಟೆೃಲಿಶ್ ಆಗಿ ಗಮನಸೆಳೆಯುತ್ತಾರೆ.
      
ರಿಪೋರ್ಟರ್ ಆಗಿ ಅನುಷ್ಕಾಶೆಟ್ಟಿ ನಟನೆ ಆಟಕ್ಕುಂಟು ಲೆಕ್ಕಕ್ಕಿಲ್ಲ. ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೋನಾಕ್ಷಿ ತಮ್ಮ ಎಂದಿನ ಅಚ್ಚುಕಟ್ಟು ಅಭಿನಯ ನೀಡಿದ್ದಾರೆ. ಸಂತಾನಂ ಲವಲವಿಕೆಗೆ ಕಾರಣವಾಗುತ್ತಾರೆ. ಖಳನಾಯಕ ಹಾಗೂ ಕುತಂತ್ರಿ ರಾಜಕಾರಣಿಯಾಗಿ ಜಗಪತಿ ಬಾಬು ಮಿಂಚಿದ್ದಾರೆ.  ರತ್ನವೇಲು ಅವರ ಕ್ಯಾಮರಾ ಕೈಚಳಕ ಚಿತ್ರದ ಇನ್ನೊಂದು ಹೈಲೈಟ್. ಕರ್ನಾಟಕದ ಕೆಲವು ಸ್ಥಳಗಳನ್ನು ಅತ್ಯಂತ ರಮಣೀಯವಾಗಿ ಚಿತ್ರಿಸಿದ್ದಾರೆ. ರೆಹಮಾನ್ ಹಾಡು ಮತ್ತು ಸಂಗೀತ ಎರಡೂ ಇಂಪಾಗಿವೆ. ರಜನಿಯ ಇಮೇಜ್‌ಗೆ ಹೆಚ್ಚು ಮಹತ್ವ ನೀಡಿರುವ ನಿರ್ದೇಶಕ ರವಿಕುಮಾರ್ ನೈಜತೆಗೆ ಹೆಚ್ಚು ಒತ್ತು ನೀಡಿದಂತಿಲ್ಲ. ಹಲವು ದಶ್ಯಗಳಲ್ಲಿ ‘ಲಿಂಗಾ’, ರಜನಿಯ ಸೂಪರ್ ಹಿಟ್ ಚಿತ್ರಗಳಾದ ಪಡೈಯಪ್ಪ ಹಾಗೂ ಮುತ್ತುವನ್ನು ನೆನಪಿಸುತ್ತಾನೆ.


ಚಲಿಸುತ್ತಿರುವ ರೈಲೊಂದರಲ್ಲಿ ಫೈಟಿಂಗ್ ದಶ್ಯ ಪರವಾಗಿಲ್ಲ. ಆದರೆ ಲಿಂಗಾದ ಕ್ಲೆೃಮಾಕ್ಸ್‌ನಲ್ಲಿ ಸ್ಟಂಟ್ ದಶ್ಯಗಳು ಮಾತ್ರ ಪ್ರೇಕ್ಷಕರನ್ನು ನಿರಾಶೆಯ ಕೂಪಕ್ಕೆ ದೂಡುತ್ತದೆ.ಲಿಂಗಾ ಬೈಕ್‌ನಿಂದ ಗಾಳಿಬಲೂನ್ ಮೇಲೆೆ ಜಿಗಿಯುವುದು,ಬಲೂನ್‌ನಲ್ಲಿ ನೇತಾಡುತ್ತಲೇ ಬಾಂಬನ್ನು ತುಳಿಯುವುದು ಇವೆಲ್ಲವೂ ಅತ್ಯಂತ ಅಸಹಜವಾಗಿ ಹಾಗೂ ಹಾಸ್ಯಾಸ್ಪದವಾಗಿ ಮೂಡಿಬಂದಿದೆ. ಇಂತಹ ಕಾಮಿಡಿಗಳಿಗಾಗಿ ರಜನಿಕಾಂತ ಈಗಾಗಲೇ ಪ್ರಸಿದ್ಧರಾಗಿರೋದರಿಂದ ಅವರ ಚಿತ್ರಕ್ಕೆ ಇದು ತಕ್ಕಂತೆ ಇದೆ ಎಂದು ಸಹಿಸಿ ಕೊಳ್ಳಬೇಕಷ್ಟೇ. 

1 comment: