Friday, February 14, 2014

ದೃಶ್ಯಂ: ಒಂದು ಫ್ಯಾಮಿಲಿ ಥ್ರಿಲ್ಲರ್ ಚಿತ್ರ

ಕಾನೂನು ಮತ್ತು ನ್ಯಾಯ ಬೇರೆ ಬೇರೆಯಾದುದು. ಮಧ್ಯಮ ವರ್ಗದ ಒಂದು ಕುಟುಂಬ ಎದುರಾದ ವಿಪತ್ತನ್ನು ಪ್ರತಿರೋಧಿಸುವ ಸಂದರ್ಭದಲ್ಲಿ ಒಂದು ಕೊಲೆ ನಡೆದು ಹೋಗುತ್ತದೆ. ಕೊಲೆಗೀಡಾದ ವ್ಯಕ್ತಿ ಹಿರಿಯ ಪೊಲೀಸ್ ಅಧಿಕಾರಿ ದಂಪತಿ ಪುತ್ರ. ಇಡೀ ಪೊಲೀಸ್ ವ್ಯವಸ್ಥೆ ಒಂದಾಗಿ ಅವರ ಮೇಲೆ ಮುಗಿ ಬಿದ್ದಾಗ, ಆ ಕುಟುಂಬ ತಮ್ಮೆಲ್ಲ ಶಕ್ತಿಯನ್ನು ಒಟ್ಟು ಸೇರಿಸಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಕತೆಯೇ ‘ದಶ್ಯಂ’. ನಿಜಕ್ಕೂ ಇದೊಂದು ಫ್ಯಾಮಿಲಿ ಥ್ರಿಲ್ಲರ್ ಚಿತ್ರ. ಅಭಿನಯ, ಚಿತ್ರಕತೆ ಮತ್ತು ಅದಕ್ಕೆ ಪೂರಕವಾದ ಬಿಗಿ ನಿರ್ದೇಶನ ಒಟ್ಟು ಸೇರಿದರೆ ಅದಕ್ಕೆ ಹೆಸರು ‘ದೃಶ್ಯಂ’.

ಮಧ್ಯಮವರ್ಗಕ್ಕೆ ಸೇರಿದ ಜಾರ್ಜ್ ಕುಟ್ಟಿ(ಮೋಹನ್ ಲಾಲ್) ಒಬ್ಬ ಕೇಬಲ್ ಟಿವಿ ನೆಟ್‌ವರ್ಕ್ ಕಚೇರಿ ನಡೆಸುತ್ತಿದ್ದಾನೆ. ಮೂಲತಃ ಅನಾಥನಾಗಿ ಹುಟ್ಟಿದ ಜಾರ್ಜ್ 5ನೇ ತರಗತಿಯಷ್ಟೇ ಓದಿದಾತ. ಟಿವಿಗಳಲ್ಲಿ ಸತತ ಸಿನಿಮಾಗಳನ್ನು ನೋಡುವುದು ಇವನ ಅಭ್ಯಾಸ. ಆ ಸಿನಿಮಾಗಳ ಮೂಲಕವೇ ಸಾಮಾನ್ಯ ಜ್ಞಾನಗಳನ್ನು ತನ್ನದಾಗಿಸಿಕೊಂಡವ. ಇವನದೊಂದು ಪುಟ್ಟ ಸಂಸಾರ. ಅಪಾರವಾಗಿ ಪ್ರೀತಿಸುವ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳು. ಒಬ್ಬಾಕೆ ಹೈಸ್ಕೂಲ್ ಓದುತ್ತಿದ್ದರೆ, ಇನ್ನೊಬ್ಬಳು ಪುಟ್ಟ ಹುಡುಗಿ. ಚಿತ್ರದ ಅರ್ಧಭಾಗ ಇವರ ಸುಂದರ ಸಂಸಾರದ ಕಡೆಗೆ ನಮ್ಮ ಮನಸ್ಸನ್ನು ಚಲಿಸುವಂತೆ ಮಾಡುತ್ತದೆ. ಇದೊಂದು ಸಾಂಸಾರಿಕ ಚಿತ್ರವೇನೋ ಅನ್ನಿಸುವಷ್ಟರಲ್ಲಿ, ಆ ಪುಟ್ಟ ಗುಬ್ಬಚ್ಚಿ ಗೂಡಿನ ಮೇಲೆ ಹದ್ದಿನ ಮರಿಯೊಂದು ಎರಗುತ್ತದೆ. ತಮ್ಮನ್ನು ರಕ್ಷಿಸಿಕೊಳ್ಳುವ ಧಾವಂತದಲ್ಲಿ ಕೊಲೆಯೊಂದು ನಡೆದು ಹೋಗುತ್ತದೆ. ಕೊಲೆಯಾಗಿರುವುದು ಹಿರಿಯ ಪೊಲೀಸ್ ಅಧಿಕಾರಿ ದಂಪತಿಯ ಮಗನದು. ಇಡೀ ಪೊಲೀಸ್ ಇಲಾಖೆ ಒಂದಾಗಿ ಮಗನಿಗಾಗಿ ಹುಡುಕಾಡುತ್ತದೆ. ಜಾಲಾಡುತ್ತಾ ಅದು ಜಾರ್ಜ್ ಕುಟ್ಟಿಯ ಮನೆಯವರೆಗೆ ಬರುತ್ತದೆ. ಇತ್ತ ಇಡೀ ಘಟನೆಯನ್ನು ಸುಳ್ಳಾಗಿಸಲು ಜಾರ್ಜ್‌ಕುಟ್ಟಿ ಒಂದೊಂದೇ ತಂತ್ರಗಳನ್ನು ಹಾಕುತ್ತಾ ಹೋಗುತ್ತಾನೆ. ಕುಟುಂಬ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಒಂದಾಗಿ ನಿಲ್ಲುತ್ತದೆ. ತಾನು ನೋಡಿದ ಸಿನಿಮಾಗಳ ದೃಶ್ಯಂಗಳ ಎಳೆ ಹಿಡಿದುಕೊಂಡು, ಕೊಲೆಯ ದಿನ ತಾವು ಊರಲ್ಲೇ ಇರಲಿಲ್ಲ ಎನ್ನುವುದನ್ನು ಸಷ್ಟಿಸುತ್ತಾನೆ ಜಾರ್ಜ್‌ಕುಟ್ಟಿ. ಸತ್ಯ ಮತ್ತು ಸುಳ್ಳಿನ ನಡುವೆ ತಿಕ್ಕಾಟ ಆರಂಭವಾಗುವುದೇ ಈಗ. 


ಒಂದೆಡೆ ಜಾರ್ಜ್‌ಕುಟ್ಟಿ ಕುಟುಂಬ. ಮಗದೊಂದೆಡೆ ಪೊಲೀಸ್ ಅಧಿಕಾರಿ ಮತ್ತು ಆತನ ಪೊಲೀಸ್ ಅಧಿಕಾರಿಯೇ ಆಗಿರುವ ಪತ್ನಿ. ಪೊಲೀಸ್ ಅಧಿಕಾರಿಗಳಾದರೂ, ಆಳದಲ್ಲಿ ಅವರು ಒಬ್ಬ ಮಗನನ್ನು ಕಳೆದುಕೊಂಡ ತಂದೆ ಮತ್ತು ತಾಯಿಯೂ ಆಗಿರುತ್ತಾರೆ. ಆದುದರಿಂದ ಸರ್ವಶಕ್ತಿಯನ್ನು ಪ್ರಯೋಗಿಸಿ ಆ ಕುಟುಂಬದಿಂದ ಸತ್ಯವೇನು ಎನ್ನುವದನ್ನು ಬಯಲಿಗೆಳೆಯಲು ಐಜಿಯ ಪತ್ನಿ ಪ್ರಯತ್ನಿಸಿದರೆ, ಇತ್ತ ಜಾರ್ಜ್‌ಕುಟ್ಟಿ ತನ್ನ ಕುಟುಂಬವನ್ನು ರಕ್ಷಿಸಲು ಅಷ್ಟೇ ಪ್ರತಿರೋಧವನ್ನು ತೋರಿಸುತ್ತಾನೆ.
ಕಟ್ಟ ಕಡೆಯಲ್ಲಿ ಪೊಲೀಸ್ ಇಲಾಖೆ ಈ ಕುಟುಂಬದ ವಿರುದ್ಧ ಸೋಲೊಪ್ಪಬೇಕಾಗುತ್ತದೆ. ಐಜಿ ರಾಜೀನಾಮೆ ನೀಡಬೇಕಾಗುತ್ತದೆ. ಕ್ಲೆೃಮಾಕ್ಸ್‌ನಲ್ಲಿ ಐಜಿ ದಂಪತಿ ಮತ್ತು ಜಾರ್ಜ್‌ಕುಟ್ಟಿಯ ಭೇಟಿ ಹದಯಸ್ಪರ್ಶಿಯಾಗಿದೆ. ಪೊಲೀಸ್ ಧಿರಿಸುಗಳನ್ನು ಧರಿಸದೇ ಜಾರ್ಜ್ ಕುಟ್ಟಿಯನ್ನು ಭೇಟಿಯಾಗುವ ಐಜಿ ದಂಪತಿಗಳು ಜಾರ್ಜ್ ಕುಟ್ಟಿಯಲ್ಲಿ ಕೇಳಿಕೊಳ್ಳುತ್ತಾರೆ ‘‘ಮನೆಯ ಬಾಗಿಲ ಬಳಿ ಸದ್ದು ಕೇಳಿದರೆ, ಯಾರಾದರೂ ಕರೆಗಂಟೆ ಬಾರಿಸಿದರೆ ನಮ್ಮ ಮಗನೇ ಬಂದನೇನೋ ಎಂದೆನಿಸುತ್ತದೆ. ಹೇಳು. ನಾವಿನ್ನು ಅವನಿಗಾಗಿ ಕಾಯಬೇಕೋ ಬೇಡವೋ?’’ ಆ ಪ್ರಶ್ನೆಗೆ ಮೋಹನ್ ಲಾಲ್ ನೀಡುವ ಉತ್ತರ ಇಡೀ ಚಿತ್ರದ ಸಾರವೂ ಆಗಿದೆ. ಕಟ್ಟಕಡೆಗೆ ಪೊಲೀಸ್ ಅಧಿಕಾರಿ ದಂಪತಿಗಳ ಜೊತೆಗೆ ಜಾರ್ಜ್‌ಕುಟ್ಟಿಯ ಕ್ಷಮಾಯಾಚನೆ ಚಿತ್ರದ ಧೋರಣೆಯನ್ನು ಹೇಳುತ್ತದೆ.


  ಚಿತ್ರದಲ್ಲಿ ಜಾರ್ಜ್‌ಕುಟ್ಟಿಯ ಪಾತ್ರದಲ್ಲಿ ಮೀನಾ ಹಾಗೂ ಹಿರಿಯ ಪೊಲೀಸ್ ಅಧಿಕಾರಿಣಿಯಾಗಿ ಆಶಾ ಶರತ್ ಅಭಿನಯ ಹದಯ ಮುಟ್ಟುವಂತಹದು. ಮುಗ್ಧ ಗಹಿಣಿಯಾಗಿ ಮೀನಾ ಯಶಸ್ವಿಯಾಗಿದ್ದರೆ, ಒರಟು ಪೊಲೀಸ್ ಅಧಿಕಾರಿ ಮತ್ತು ಮಗನನ್ನು ಕಳೆದುಕೊಂಡ ತಾಯಿಯಾಗಿ ಆಶಾಶರತ್ ಅಭಿನಯವೂ ಅಷ್ಟೇ ಪರಿಣಾಮಕಾರಿ.ಒಬ್ಬ ತಂದೆಯಾಗಿ ಮೋಹನ್ ಲಾಲ್ ಅಭಿನಯದ ಕುರಿತಂತೆ ಮಾತೆ ಇಲ್ಲ. ಚಿತ್ರದ ಸಂಗೀತ ಮತ್ತು ಛಾಯಾಗ್ರಹಣ ಒಟ್ಟು ಚಿತ್ರ ಸಜಿಸುವ ಮಾನವೀಯ ಭಾವಗಳಿಗೆ ಪೂರಕವಾಗಿವೆ. ದೃಶ್ಯಂನಂತಹ ಚಿತ್ರಗಳು ಮಲಯಾಳಂ, ತಮಿಳು ಯಾವ ಭಾಷೆಯಲ್ಲೇ ಬರಲಿ ಅದಕ್ಕೆ ಭಾಷೆಯ ಗಡಿಯಿರುವುದಿಲ್ಲ. ಹೀಗೆ ಭಾಷೆಯ ಗಡಿ ಮೀರಿದ ಚಿತ್ರಗಳು ಕನ್ನಡದಲ್ಲೂ ಬರಬೇಕು. ಅದನ್ನು ಮಲಯಾಳಿಗಳು, ತಮಿಳರು, ತೆಲುಗರು ಮುಗಿ ಬಿದ್ದು ನೋಡುವಂತಾಗಬೇಕು. ಆಗ ಕನ್ನಡ ಸಿನಿಮಾ ಉದ್ಯಮ ತನ್ನಷ್ಟಕ್ಕೆ ಗಟ್ಟಿಯಾಗುತ್ತದೆ. ಬೆಳೆಯುತ್ತದೆ.


1 comment:

  1. A superb review on a Superb movie.. I doubt, any malayalm journal has written this kind of review on Drishyam.. I loved movie and your review as well.. Thank you sir...

    ReplyDelete