Monday, February 10, 2014

ಕನ್ನಡ ತೋಟದಲ್ಲಿ ಮತ್ತೆ ಅರಳಿದ ‘‘ಪಾಪದ ಹೂವುಗಳು’’!

ಫ್ರಾನ್ಸಿನಿಂದ ಬೋದಿಲೇರ್‌ನನ್ನು ಕನ್ನಡಕ್ಕೆ ತಂದು, ಯುವಕರ ಎದೆಕುಂಡಗಳಿಗೆ ಬೆಂಕಿ ಹಚ್ಚಿದ್ದು ಲಂಕೇಶ್. ‘ಪಾಪದ ಹೂವುಗಳು’ ಒಂದು ಕಾಲದಲ್ಲಿ ಕಾವ್ಯದ ಅಲಗನ್ನು ಇನ್ನಷ್ಟು ಹರಿತವಾಗಿಸಿತು. ಮಾದಕವಾಗಿಸಿತು. ನವ್ಯರನ್ನು ಇನ್ನಷ್ಟು ದಿವ್ಯರನ್ನಾಗಿಸಿತು. ಅವರ ಕಾವ್ಯದ ಅಮಲು ಇನ್ನಷ್ಟು ಏರುವಂತೆ ಮಾಡಿತು. ಇಂದಿಗೂ ಬೋದಿಲೇರ್ ಎನ್ನುವಾಗ, ಕನ್ನಡದ ಸಹದಯರು ಲಂಕೇಶ್ ಅವರ ‘ಪಾಪದ ಹೂವುಗಳೆಡೆಗೆ’ ಕಣ್ಣು ತಿರುಗಿಸುತ್ತಾರೆ. ಇದೀಗ ‘ಪಾಪದ ಹೂವುಗಳಿಗೆ’ ಪೂರಕವಾಗಿ, ಇನ್ನಷ್ಟು ಗದ್ಯಕವಿತೆಗಳನ್ನು ಬೊಗಸೆಯಲ್ಲಿ ತುಂಬಿದ್ದಾರೆ, ಹಿರಿಯ ಲೇಖಕ ಎಸ್. ಎಫ್. ಯೋಗಪ್ಪನವರ್.
ಲಂಕೇಶ್ ಜೀವಿತಾವಧಿಯಲ್ಲಿ ಲಂಕೇಶ್‌ಗೆ ನಿಯಮಿತವಾಗಿ ಬರೆಯುತ್ತಿದ್ದ ಯೋಗಪ್ಪನವರ್ ಅವರ ಕನ್ನಡ ಅತ್ಯಂತ ಹದ್ಯವಾದುದು. ಲಂಕೇಶರ ಮೂಲಕ ಗಮಿಸಿದ ಕನ್ನಡವದು. ಲಂಕೇಶರು ಮುಡಿದ ಪಾಪದ ಹೂವುಗಳ ತೋಟಕ್ಕೆ, ಯೋಗಪ್ಪನವರ್ ಪ್ರವೇಶಿಸಿದ್ದಾರೆ. ಸುಮಾರು ಐವತ್ತು ಗದ್ಯ ಕವಿತೆಗಳನ್ನು ಕೊಯ್ದು ಮಾಲೆಯಾಗಿಸಿ ಅದಕ್ಕೆ ‘ಮಾಯಾ ಕನ್ನಡಿ’ ಎಂದು ಹೆಸರಿಸಿದ್ದಾರೆ. 1821ರಿಂದ 1867ರವರೆಗೆ ಬದುಕಿ ಬಾಳಿದ್ದ ಈ ಫ್ರೆಂಚ್ ಸಾಹಿತ್ಯದ ಕಪ್ಪು ಸೂರ್ಯ, ಸಾರ್ತ್‌ನಿಂದ ‘ಬಾಯಿ ತೆರೆದ ಹುಣ್ಣು’ ಕರೆಯಲ್ಪಟ್ಟಿದ್ದ. ಬೋದಿಲೇರ್‌ನನ್ನು ಕನ್ನಡಕ್ಕಿಳಿಸುವುದಕ್ಕೆ ಅಸಾಧ್ಯ ಧೈರ್ಯ ಬೇಕು. ಒಂದು ರೀತಿಯಲ್ಲಿ ಕನ್ನಡಿ ಕೈ ಜಾರದಂತೆ ನೋಡಿಕೊಳ್ಳುವ ಧೈರ್ಯ. ಅದರಲ್ಲಿ ಯೋಗಪ್ಪನವರ್ ಯಶಸ್ವಿಯಾಗಿದ್ದಾರೆ.
‘‘ಕಾರಾಗಹದಲ್ಲಿ ಕಾವ್ಯ ದಂಗೆ ಏಳುತ್ತದೆ, ಆಸ್ಪತ್ರೆಯ ಕಿಟಕಿಗಳಲ್ಲಿ ಆರೋಗ್ಯದ ಉತ್ಸಾಹ ಪೂರ್ಣ ಆಶೆಯಾಗಿ ಕಾಣುತ್ತದೆ...’’ ಎಂದು ಬರೆಯುವ ಬೋದಿಲೇರ್ ಇಲ್ಲಿ ಹನಿ ಹನಿಯಾಗಿ ತೊಟ್ಟಿಕ್ಕಿದ್ದಾನೆ. ‘ಒಬ್ಬ ಸ್ನೇಹಿತ ಹಾಸಿಗೆ ಹಿಡಿದರೆ, ಅವನ ಉಳಿದೆಲ್ಲ ಸ್ನೇಹಿತರು ಅವನು ಸಾಯಲೆಂದು ಗುಪ್ತವಾಗಿ ಆಶೆ ಪಡುತ್ತಾರೆ....’’
ಬೋದಿಲೇರ್ ತನ್ನ ಕವಿತೆಗಳ ಮೂಲಕ ಹಸಿ ವಾಸ್ತವಗಳಿಗೆ ಮುಖಾಮುಖಿಯಾದ. ತನ್ನ ಸ್ವಾರ್ಥ, ದುರಾಸೆ, ಮೋಹ, ಪ್ರೀತಿ ಎಲ್ಲವುಗಳನ್ನು ಒಪ್ಪಿಕೊಂಡು, ಅದನ್ನು ಇಷ್ಟು ಪಟ್ಟು ಬರೆದ ಕಾರಣದಿಂದಲೇ ಅವರ ಗದ್ಯ ಕವಿತೆಗಳು ಅಷ್ಟರ ಮಟ್ಟಿಗೆ ತೀವ್ರವಾಗಿದೆ. ಹಾಗೆಯೇ ಸಭ್ಯ ಸಾಹಿತ್ಯ ಜಗತ್ತಿಗೆ ಅಸ್ಪೃಶ್ಯವಾಗಿವೆ. ಯೋಗಪ್ಪನವರ್ (99005 44199)ಸೊಗಸಾದ ಭಾಷೆಯಲ್ಲಿ, ಅದು ಭಟ್ಟಿಯಿಂದ ಇಳಿದ ಬನಿಯಂತೆ ನಮಗೆ ಅಮಲೇರಿಸುತ್ತದೆ. ಪಲ್ಲವ ಪ್ರಕಾಶನ(94803 53507)ಈ ಕೃತಿಯನ್ನು ಅಷ್ಟೇ ಕಾಳಜಿಯಿಂದ ಮುದ್ರಿಸಿದೆ. ಕನ್ನಡದ ಸಾಹಿತ್ಯ ತೋಟದಲ್ಲಿ ಮತ್ತೆ ಪಾಪದ ಹೂವುಗಳು ಅರಳಿವೆ. ಇದರ ಮುಖಬೆಲೆ 200 ರೂ.

No comments:

Post a Comment