Monday, July 22, 2013

ನಿಯಮ ಮತ್ತು ಇತರ ಕತೆಗಳು

ಯುದ್ಧ
ಖ್ಯಾತ ರಂಗನಟನೊಬ್ಬ ಪ್ರಾಥಮಿಕ ಶಾಲೆಯೊಂದಕ್ಕೆ ನಾಟಕ ತರಬೇತಿ ನೀಡಲು ಬಂದಿದ್ದ. ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಎಷ್ಟಿದೆ ಎಂದು ಗುರುತಿಸಲು ‘‘ಮಕ್ಕಳೇ...ನೀವು ಯುದ್ಧದ ದೃಶ್ಯವನ್ನು ಅಭಿನಯಿಸಿ ತೋರಿಸಿ’’ ಎಂದು ಹೇಳಿದ.
ಮಕ್ಕಳೆಲ್ಲರೂ ಬಯಲಲ್ಲಿ ಹೆಣಗಳಂತೆ ಸುಮ್ಮಗೆ ಮಲಗಿ ಬಿಟ್ಟರು.

ಮೈದಾನ
ಒಬ್ಬ ರಾಜಕಾರಣಿಯ ಭರವಸೆ ‘‘ನಾನು ಚುನಾವಣೆಯಲ್ಲಿ ಗೆದ್ದರೆ, ಪ್ರತಿ ಊರಲ್ಲೊಂದು ಕ್ರಿಕೆಟ್ ಮೈದಾನ ಮಾಡುತ್ತೇನೆ’’
ಪತ್ರಿಕೆಯವರು ಕೇಳಿದರು ‘‘ಸಾರ್, ಪ್ರತಿ ಊರಿನಲ್ಲಿ ಕ್ರಿಕೆಟ್ ಮೈದಾನ ಮಾಡುವುದಕ್ಕೆ ಜಾಗ ಎಲ್ಲಿದೆ?’’
ರಾಜಕಾರಣಿ ತಣ್ಣಗೆ ಉತ್ತರಿಸಿದ ‘‘ರೈತರ ಗದ್ದೆಗಳನ್ನು ವಶಕ್ಕೆ ತೆಗೆದುಕೊಂಡಾದರೂ ನಾನು ನನ್ನ ಭರವಸೆ ಈಡೇರಿಸುವೆ’’

ನಿಯಮ
‘‘ನೀನು ಕರಾಟೆ ಕಲಿತಿದ್ದರೂ ಕಳ್ಳ ನಿನ್ನನ್ನು ಹೇಗೆ ಹೊಡೆದ.’’ ಕರಾಟೆ ಪಟುವಿಗೆ ಆತ ಕೇಳಿದ.
ಕರಾಟೆ ಪಟು ಸಿಟ್ಟಿನಿಂದ ನುಡಿದ ‘‘ಕಳ್ಳ, ಕರಾಟೆಯ ನಿಯಮಗಳನ್ನು ಪಾಲಿಸಲಿಲ್ಲ...’’

ಅಪ್ಪ
ಅಪ್ಪ ಮಗುವನ್ನು ಆಡಿಸುತ್ತಿದ್ದ
‘‘ನನ್ನ ಬಂಗಾರ, ನನ್ನ ಚಿನ್ನ, ನನ್ನ ಸಿಂಗಾರ’’
ಅಷ್ಟರಲ್ಲಿ ಮಗು ಸೂಸು ಮಾಡಿತು.
ಸಿಟ್ಟಿನಿಂದ ಅಪ್ಪ ಕೂಗಿದ ‘‘ಲೇ...ನಿನ್ನ ಮಗು ಇಲ್ಲಿ ಸೂಸು ಮಾಡುತ್ತಿದೆ...ತೆಗೊಂಡು ಹೋಗು’’


ಕರೆ
ದಟ್ಟ ಜನಸಂದಣಿಯ ನಗರದಲ್ಲಿ ಯಾರೋ ಕೂಗಿದಂತಾಯಿತು.
ತಿರುಗಿ ನೋಡಿದ.
ಅಷ್ಟರಲ್ಲೇ ಎದುರಿಂದ ಒಂದು ವಾಹನ ಅವನಿಗೆ ಅಪ್ಪಳಿಸಿತು.
ಅವನು ಹೆಣವಾದ.
ಹಾಗಾದರೆ ಹಿಂದಿನಿಂದ ಕೂಗಿದವರು ಯಾರು?

ನಿಧಿ
ರೈತನೊಬ್ಬ ಹೊಲ ಉಳುತ್ತಿದ್ದ.
ನೇಗಿಲಿಗೆ ಅದೇನೋ ತಾಗಿತು. ಅಗೆದ. ನೋಡಿದರೆ ಪೆಟ್ಟಿಗೆ. ಅದನ್ನು ತೆರೆಯದೆಯೇ ಪಕ್ಕದ ತೋಡಿಗೆ ಎಸೆದ.
ಮಗ ಅದನ್ನೇ ನೋಡುತ್ತಿದ್ದ. ಅವನು ಕೂಗಿ ಹೇಳಿದ
‘‘ಅಪ್ಪ ಅದನ್ನು ತೆರೆದು ನೋಡಬೇಕಾಗಿತ್ತು. ನಿಧಿ ಇದ್ದರೂ ಇದ್ದೀತು...’’
‘‘ಹೌದು ಮಗು. ಆ ಭಯದಿಂದಲೇ ನಾನು ತೆರೆದು ನೋಡಲಿಲ್ಲ’’ ತಣ್ಣಗೆ ಉತ್ತರಿಸಿದ ತಂದೆ ಉಳುವುದನ್ನು ಮುಂದುವರಿಸಿದ.

ಗುರುತು 

ಫೇಸ್ಬುಕ್ಕಲ್ಲಿ ಅಷ್ಟೆಲ್ಲ ಮಾತನಾಡಿಕೊಂಡವರು....
ಭೇಟಿಯಾದಾಗ ಪರಸ್ಪರ ಗುರುತಿಸದೇ ಹೋದರು.

1 comment: