Wednesday, December 12, 2012

ನಮ್ಮ ನೆಲದ ಶಿವಾಜಿ: ಶಿವಾಜಿಯ ಹಿಂದುತ್ವ ವರ್ಸಸ್ ಪೇಶ್ವೆ ಹಿಂದುತ್ವ

ಮಹಾಸ್ತಂಭ
ಶಿವಾಜಿಯ ಕಾಲದಲ್ಲಿ ನಡೆದ ಒಂದು ವಿಸ್ಮಯ ವೆಂದರೆ, ಆತನ ಹೋರಾಟ ಅಪ್ರಜ್ಞಾಪೂರ್ವಕವಾಗಿ ಒಂದು ಜಾತ್ಯತೀತ ಭಾರತೀಯ ಕಲ್ಪನೆ ತನಗೆ ತಾನೆ ಸಹಜವಾಗಿ ಅರಳಿಕೊಳ್ಳಲು ಕಾರಣವಾದುದು. ಶಿವಾಜಿ ಎಂದೂ ತನ್ನ ಹೋರಾಟ ಸಂದರ್ಭದಲ್ಲಾಗಲಿ, ಪತ್ರ ವ್ಯವಹಾರ ಸಂದರ್ಭ ದಲ್ಲಾಗಲಿ ‘ಹಿಂದೂ’ ಎನ್ನುವ ಶಬ್ದವನ್ನು ಬಳಸಿಲ್ಲ. ಹಿಂದೂ ಎನ್ನುವ ಶಬ್ದ ಆಗ ರಾಜಕೀಯ, ಧಾರ್ಮಿಕ ಅರ್ಥವನ್ನೂ ಪಡೆದುಕೊಂಡಿರಲಿಲ್ಲ. ಅವನ ಮಗ ಸಾಂಭಾಜಿ ಪತ್ರದಲ್ಲಿ ಒಂದೆಡೆ ಹೈಂದವ ಎನ್ನುವ ಶಬ್ದವನ್ನು ಬಳಸುತ್ತಾನೆ. ಹಾಗೆಂದು ನಾವು ಶಿವಾಜಿ ಯನ್ನು ಸಮತಾವಾದಿ, ಜಾತ್ಯತೀತ ಎಂಬಿತ್ಯಾದಿ ಆಧುನಿಕ ಪರಿಭಾಷೆಗಳಿಂದ ಗುರುತಿಸುವುದೂ ಹಾಸ್ಯಾಸ್ಪದ. ಅವನ ಕಾಲ ಮತ್ತು ಸಂದರ್ಭ ಎಲ್ಲರನ್ನು ಒಳಗೊಂಡ ಭಾರತೀಯತೆಯೊಂದನ್ನು ಅವನ ಮೂಲಕ ಕಂಡುಕೊಂಡಿತು. ಶಿವಾಜಿ ಮರಾಠರು, ಕುಣಬಿಗಳು, ಬ್ರಾಹ್ಮಣರು, ಕ್ಷತ್ರಿಯರು, ಮಹಾರ ದಲಿತರು, ಮುಸ್ಲಿಮರು, ಕೋಳಿ, ಭಂಡಾರಿ, ಕುರುಬ, ಪ್ರಭು, ರಾಮೋಶಿ, ನಾವಲಿಗ, ಶೆಣವಿ ಹೀಗೆ ಸುಮಾರು 56 ಜಾತಿಯ ಜನರನ್ನು ತನ್ನ ಪಡೆಯಲ್ಲಿ ಸೇರಿಸಿಕೊಂಡಿದ್ದ. ಜಾತಿ ವ್ಯವಸ್ಥೆ ಉಲ್ಬಣಾವಸ್ಥೆಯಲ್ಲಿದ್ದ ಹೊತ್ತಿನಲ್ಲಿ ಶಿವಾಜಿ ಇವರೆಲ್ಲರನ್ನು ಸಂಘಟಿಸಿ ಒಂದು ವೇದಿಕೆಗೆ ತಂದುದು ಸಣ್ಣ ವಿಷಯವಲ್ಲ. ಆದರೆ ಇದು ಮುಂದೆ ಶಿವಾಜಿಯ ವಂಶಸ್ಥ ರಿಂದ ರಾಜ್ಯವನ್ನು ಮೋಸದಿಂದ ಕೈವಶಮಾಡಿ ಕೊಂಡ ಬ್ರಾಹ್ಮಣ ಪೇಶ್ವೆಗಳಿಗೆ ಸಾಧ್ಯವಾಗಲಿಲ್ಲ. ಶಿವಾಜಿಯ ಹಿಂದುತ್ವವೇ ಬೇರೆ. ಪೇಶ್ವೆಗಳ ಹಿಂದುತ್ವವೇ ಬೇರೆ. ಶಿವಾಜಿಯ ಸುಮಾರು ಎಂಟು ವರ್ಷದ ಆಳ್ವಿಕೆ ಮುಗಿದು, ಮೂರು ತಲೆಮಾರುಗಳಲ್ಲೇ ಈ ಜಾತ್ಯತೀತ ಸಂಘಟನೆ ಪೇಶ್ವೇ ಗಳಿಂದಾಗಿ ಒಡೆದು ಹೋಯಿತು. ಯಾವಾಗ ಶಿವಾಜಿ ವಂಶಸ್ಥರಿಂದ ಆಡಳಿತ ಚಿತ್ಪಾವನ ಬ್ರಾಹ್ಮಣವಂಶಜರಾದ ಪೇಶ್ವೆಗಳ ಕೈಗೆ ಹಸ್ತಾಂತರವಾಯಿತೋ ಅಲ್ಲಿಂದಲೇ ಮತ್ತೆ ಜಾತೀಯತೆ ಭುಗಿಲೆದ್ದಿತು. ಶಿವಾಜಿಯ ಹಿಂದುತ್ವ, ಧಾರ್ಮಿಕತೆ ಎಲ್ಲ ಧರ್ಮೀಯರನ್ನು ಒಟ್ಟು ಸೇರಿಸಿ ಒಂದು ನಾಡನ್ನು ಕಟ್ಟಲು ಕಾರಣವಾದರೆ, ಪೇಶ್ವೆಗಳ ಬ್ರಾಹ್ಮಣ್ಯ ರೂಪದ ಹಿಂದುತ್ವ ಸೇನೆಯನ್ನು ಒಡೆಯಿತು. ಜಾತೀಯತೆಯನ್ನು ಬೆಳೆಸಿತು. ದಲಿತರು ಬಂಡೆದ್ದು ಬ್ರಿಟಿಷರ ಸೇನೆಯನ್ನು ಸೇರಿ, ಪೇಶ್ವೆಗಳನ್ನು ಸೋಲಿಸುವಲ್ಲಿಗೆ ಇದು ಅಂತ್ಯವಾಯಿತು. ಶಿವಾಜಿಯ ಕನಸು ಪೇಶ್ವೆಗಳ ದೆಸೆಯಿಂದ ಸುಟ್ಟು ಬೂದಿ ಯಾಯಿತು.
 
 ಶಿವಾಜಿ ಪೇಶ್ವೆಗಳಂತೆ ಯಾವತ್ತೂ ಧರ್ಮಾಂಧ ನಾಗಿರಲಿಲ್ಲ. ಆದುದರಿಂದಲೇ ಶಿವಾಜಿಯನ್ನು ಮುಸ್ಲಿಮರು, ದಲಿತರೂ ಎದೆ ತುಂಬಿ ಪ್ರೀತಿಸಿದರು. ಅವನಿಗಾಗಿ ಪ್ರಾಣವನ್ನು ತೆತ್ತರು. ಸೇನೆಯಲ್ಲಿ ಮುಸ್ಲಿಮರ ಕುರಿತಂತೆ ಶಿವಾಜಿಗೆ ಅದೆಷ್ಟು ಹೆಮ್ಮೆಯಿತ್ತೆಂದರೆ ರಾಯಗಡದಲ್ಲಿ ಮುಸ್ಲಿಮ್ ಸೈನಿಕರಿಗಾಗಿಯೇ ಮಸೀದಿಯನ್ನು ಕಟ್ಟಿಸಿದ್ದ. ಜಿಝಿಯಾ ಕರವನ್ನು ವಿರೋಧಿಸಿ ಶಿವಾಜಿಯು ಔರಂಗಜೇಬನಿಗೆ ಬರೆದ ಪತ್ರದ ಸಾಲುಗಳು ಶಿವಾಜಿಯ ವ್ಯಕ್ತಿತ್ವವನ್ನು, ಅವನ ಆಡಳಿತದ ಮುನ್ನೋಟವನ್ನು ತಿಳಿಸುತ್ತದೆ. ಅವನು ಎಷ್ಟು ಸೂಕ್ಷ್ಮವಾಗಿ, ಹೃದ್ಯವಾಗಿ ಆ ಪತ್ರವನ್ನು ಬರೆಯು ತ್ತಾನೆಂದರೆ, ಅಕ್ಬರ್, ಜಹಂಗೀರ್ ಮೊದಲಾದ ವರನ್ನು ಆ ಪತ್ರದಲ್ಲಿ ಮನಬಿಚ್ಚಿ ಹೊಗಳುತ್ತಾನೆ. ಅದರ ಆಯ್ದ ಕೆಲವು ಸಾಲುಗಳನ್ನು ಇಲ್ಲಿವೆ ‘‘.....ಈ ಹಿಂದೆ ಅಕಬರ ಬಾದಶಹಾ ನ್ಯಾಯದಿಂದ ಐವತ್ತೆರಡು ವರ್ಷ ರಾಜ್ಯವಾಳಿದರು. ಇದರಿಂದ ಈಸವಿ, ದಾವುದಿ, ಮಹಮದಿ ಮುಂತಾದವರು, ಬ್ರಾಹ್ಮಣ, ಶೆವಡೆ ವಗೈರೆ ಧರ್ಮ ಚೆನ್ನಾಗಿ ನಡೆಯಿತು. ಆ ಧರ್ಮಕ್ಕೆ ಬಾದಶಹಾ ಸಹಾಯ ಮಾಡಿದ್ದರಿಂದ ಜಗದ್ಗುರು ಎಂದು ಪ್ರಸಿದ್ಧರಾದರು. ಇಂತಹ ಸದ್ವಿವೇಕದ ನೋಟ ಎಲ್ಲೆಡೆ ಇರುತ್ತಿತ್ತು. ಯಶವೂ ಸಿಗುತ್ತಿತ್ತು.....ಆ ಬಳಿಕ ನೂರುದ್ದೀನ ಜಹಂಗೀರ್ ಬಾದಶಹಾ ಅವರು ದೇವರ ಮೇಲೆ ನಂಬಿಕೆಯಿಟ್ಟು ಇಪ್ಪತ್ತೆರಡು ವರ್ಷ ರಾಜ್ಯವಾಳಿ ದರು......ಶಹಜಹಾನ ಸಾಹೇಬ ಕಿರಾನ ಅವರು ಮೂವತ್ತೆರಡು ವರ್ಷ ರಾಜ್ಯವಾಳಿ ಪ್ರಸಿದ್ಧರಾದರು. ಒಳ್ಳೆಯ ರೀತಿಯಲ್ಲಿ ಬದುಕಿ ಕೀರ್ತಿ ಸಂಪಾದಿಸಿ ದರು..... ಆ ಬಾದಶಹರೂ ಜಿಝಿಯಾ ಕರ ಹೇರಲು ಸಮರ್ಥರಾಗಿದ್ದರು. ಆದರೆ ಚಿಕ್ಕವರು ದೊಡ್ಡವರು ತಂತಮ್ಮ ಧರ್ಮದಲ್ಲಿದ್ದಾರೆ. ಅದೆಲ್ಲ ದೇವರದ್ದು ಎಂದು ಭಾವಿಸಿ ಯಾರ ಮೇಲೂ ಅನ್ಯಾಯವಾಗದಂತೆ ನೋಡಿಕೊಂಡರು. ಅವರ ಉಪಕಾರ ಇವತ್ತಿಗೂ ಉಳಿದಿದೆ... ಎಲ್ಲರ ಬಾಯಲ್ಲಿ ಅವರ ಸ್ತುತಿಯಿದೆ...’’ ಹೀಗೆ ಬಾಯಿ ತುಂಬಾ ಅಕ್ಬರ್, ಜಹಂಗೀರ್, ಶಹಜಹಾನ್ ಅವರನ್ನು ಹೊಗಳುತ್ತಾ, ಔರಂಗಜೇಬನನ್ನು ಪರೋಕ್ಷವಾಗಿ ಟೀಕಿಸುತ್ತಾ ಹೋಗುತ್ತಾನೆ ಶಿವಾಜಿ. ವಿಶೇಷವೆಂದರೆ ತನ್ನ ಪತ್ರದಲ್ಲಿ ಕುರ್‌ಆನನ್ನು ಸ್ಮರಿಸಿ ಔರಂಗಜೇಬನಿಗೆ ಉಪದೇಶ ಮಾಡುತ್ತಾನೆ ಶಿವಾಜಿ ‘‘ಕುರ್‌ಆನ್ ಇದು ಆಕಾಶವಾಣಿಯ ಗ್ರಂಥ. ಅದು ದೇವರ ವಾಣಿ. ಅದರಲ್ಲಿ ಆಜ್ಞಾಪಿಸಿ ದ್ದೇನೆಂದರೆ, ದೇವರು ಜಗತ್ತಿನವನು, ಇಲ್ಲವೇ ಮುಸಲ್ಮಾನವರನು, ಒಳ್ಳೆಯವರಿರಲಿ, ಕೆಟ್ಟವರಿರಲಿ, ಅವರೆಲ್ಲ ಈಶ್ವರನ ಸೃಷ್ಟಿ...ಮಸೀದಿಯಲ್ಲಿ ದೇವರನ್ನು ಕೂಗಿ ಕರೆದು ಸ್ಮರಣೆ ಮಾಡುತ್ತಾರೆ. ದೇಗುಲದಲ್ಲಿ ಗಂಟೆ ಬಾರಿಸುತ್ತಾರೆ...’’ ಶಿವಾಜಿ ಕಟ್ಟಿದ ಸಾಮ್ರಾಜ್ಯದ ಪತನ ಆರಂಭ ವಾದದ್ದು ಪೇಶ್ವೆಗಳಿಂದ. ಶಿವಾಜಿ ವಂಶಸ್ಥರಿಂದ ಚಿತ್ಪಾವನ ಬ್ರಾಹ್ಮಣರು- (ಮಹಾತ್ಮಾ ಗಾಂಧೀಜಿಯನ್ನು ಕೊಂದ ನಾಥೂರಾಂ ಗೋಡ್ಸೆ ಕೂಡ ಚಿತ್ಪಾವನ ಬ್ರಾಹ್ಮಣನಾಗಿದ್ದ) ಚುಕ್ಕಾಣಿ ಯನ್ನು ಕೈ ವಶ ಮಾಡಿದ್ದೇ, ದಲಿತರ ಸ್ಥಿತಿ ಸೇನೆ ಯಲ್ಲಿ ಹೀನಾಯವಾಗತೊಡಗಿತು. ಜಾತಿವ್ಯವಸ್ಥೆ ಮತ್ತೆ ತಾಂಡವವಾಡತೊಡಗಿತು. ಒಂದು ಕಾಲದಲ್ಲಿ ಸಂತ ತುಕರಾಮರು ತಮ್ಮ ಅಭಂಗದಲ್ಲಿ ‘‘ಮಹಾರಾಸಿ ಶಿವೇ-ಕೋಪೇತೋ ಬ್ರಾಹ್ಮಣ ನವ್ಹೆ’’ ಎಂದು ಹೇಳಿದ್ದರು. ಬ್ರಾಹ್ಮಣರಿಗಿಂತ ಮಹಾರರು ಮಹಾ ಮಹಿಮರು ಎಂದು ಇದರ ಅರ್ಥ. ಶಿವಾಜಿಯ ಸೇನೆಯಲ್ಲಿ ದಲಿತ ಮಹಾರರ ಪಾತ್ರವನ್ನು ಇದು ಎತ್ತಿ ಹಿಡಿಯುತ್ತದೆ. ಮಹಾರರ ಮೇಲೆ ಶಿವಾಜಿಗೆ ಅಪಾರ ನಂಬಿಕೆಯಿತ್ತು. (ಇದೇ ಮಹಾರ್ ಜಾತಿಯಲ್ಲಿ ಮುಂದೆ ಬಿ. ಆರ್. ಅಂಬೇಡ್ಕರ್ ಹುಟ್ಟುತ್ತಾರೆ. ದಲಿತರ ಹಕ್ಕಿಗಾಗಿ ಹೋರಾಡುತ್ತಾರೆ)ಅವರದೇ ಆದ ವಿಶೇಷ ತುಕಡಿಯೂ ಶಿವಾಜಿಯ ಸೇನೆಯಲ್ಲಿತ್ತು. ಮಹಾರರನ್ನು ಕಿಲ್ಲೇದಾರರು ಎಂಬ ಜವಾಬ್ದಾರಿ ಯುತ್ತ ಪದವಿಗೆ ಆಯ್ದುಕೊಳ್ಳುತ್ತಿದ್ದ್ದ. ಆದರೆ ಪೇಶ್ವೆಕಾಲದಲ್ಲಿ ಇದು ತಿರುವು ಮುರುವಾಯಿತು. ಜಾತಿ ಮತ್ತೆ ಪ್ರಾಬಲ್ಯವನ್ನು ಪಡೆಯಿತು. ಇದನ್ನು ಸಹಿಸಿ ಸಾಕಾದ ದಲಿತರು ಅಂತಿಮವಾಗಿ ಬಂಡೆದ್ದರು. ಬ್ರಿಟಿಷರ ಸೇನೆ ಸೇರಿದರು. ಪೇಶ್ವೆಗಳ ನಾಶಕ್ಕೆ ಅದುವೇ ಕಾರಣ ವಾಯಿತು. ಪೇಶ್ವೆಗಳು ನಾಶವಾದ ಈ ದಿನವನ್ನು ಇಂದಿಗೂ ದಲಿತರು ಸಂಭ್ರಮದ ರೂಪದಲ್ಲಿ ಆಚರಿಸುತ್ತಾರೆ. ಕೋರೆಗಾವ ಕದನದಲ್ಲಿ ದಲಿತರು ಪಡೆದ ದಿಗ್ವಿಜಯ, ಜಾತೀಯತೆಯ ವಿರುದ್ಧ ಪಡೆದ ಜಯವೂ ಹೌದು. ಈ ಕೋರೆಗಾವ ಯುದ್ಧದಲ್ಲಿ ಅಂತಿಮವಾಗಿ ಗೆದ್ದಿರುವುದು ಬ್ರಿಟಿಷರೇ ಆದರೂ, ಪೇಶ್ವೆಗಳ ಜಾತೀಯತೆ ಈ ಯುದ್ಧದಲ್ಲಿ ತಕ್ಕ ಫಲವನ್ನು ಅನುಭವಿಸಿತು.
ಶಿವಾಜಿಯ ಸಂಯಮ, ಹೃದಯ ವೈಶಾಲ್ಯತೆ ಪೇಶ್ವೆಗಳಲ್ಲಿ ಇರಲಿಲ್ಲ. ಒಂದು ರಾಜ್ಯವನ್ನು ಗೆಲ್ಲುವ ಸಂದರ್ಭದಲ್ಲಾಗಲಿ, ಅದನ್ನು ಲೂಟಿ ಮಾಡುವ ಸಂದರ್ಭದಲ್ಲಾಗಲಿ ಇದು ಎದ್ದು ಕಾಣುತ್ತಿತ್ತು. ಶೃಂಗೇರಿ ಮಠದ ಮೇಲೆ ಪೇಶ್ವೆಗಳು ನಡೆಸಿದ ದಾಳಿ, ಮತ್ತು ಮಠದ ದರೋಡೆಯೇ ಇದಕ್ಕೆ ಅತ್ಯುತ್ತಮ ಉದಾಹರಣೆ. ಈ ಸಂದರ್ಭದಲ್ಲಿ ಶೃಂಗೇರಿ ಮಠದ ನೆರವಿಗೆ ನಿಂತದ್ದು ಟಿಪ್ಪು ಸುಲ್ತಾನ್ ಎನ್ನುವುದು ಇತಿಹಾಸ.


    ಮೊದಲನೆ ಬಾಜಿರಾಯನ ಕಾಲದಲ್ಲಿ ಪೇಶ್ವೆಗಳ ತಂತ್ರ ಕುತಂತ್ರಗಳು ಪರಾಕಾಷ್ಠೆಯನ್ನು ತಲುಪಿತು.. ಪುಣೆ ಸಾಂಸ್ಕೃತಿಕವಾಗಿ ವಿಜೃಂಭಿಸಿದ್ದೂ ಇದೇ ಕಾಲದಲ್ಲಿ ಎನ್ನುವುದನ್ನು ನಾವು ಗಮನಿಸಬೇಕು. ಆದರೆ ಇದೇ ಸಂದರ್ಭದಲ್ಲಿ ಜಾತೀಯತೆ ಸೇನೆಯಲ್ಲಿ ತಾಂಡವವಾಡತೊಡಗಿತು. ದಲಿತರ ಕುರಿತಂತೆ ತಾರತಮ್ಯಗಳು ಹೆಚ್ಚಾಗತೊಡಗಿದವು. ದಲಿತರಲ್ಲಿ, ಮುಖ್ಯವಾಗಿ ಮಹಾರ್ ಯೋಧರು ಒಳಗೊಳಗೆ ಭುಸುಗುಡತೊಡಗಿದರು. ಇದು ಎರಡನೆ ಬಾಜಿರಾಯನ ಕಾಲದಲ್ಲಿ ಸ್ಫೋಟಿಸಿತು. ಭೀಮಾ ಕೋರೆಗಾವ ಕದನದಲ್ಲಿ ದಲಿತರು ಬಂಡೆದ್ದು ಬ್ರಿಟಿಷರನ್ನು ಸೇರಿಕೊಂಡರು. ಬ್ರಿಟಿಷರ ಪಡೆಯಲ್ಲಿ ಮರಾಠರು, ಮುಸ್ಲಿಮರು, ಕ್ರಿಶ್ಚಿಯನ್ನರು ಇದ್ದರೂ, ದೊಡ್ಡ ಮಟ್ಟದಲ್ಲಿ ಮಹಾರರಿದ್ದರು. ಕೋರೆಗಾವ ಕದನದಲ್ಲಿ 20 ಸಾವಿರದಷ್ಟಿದ್ದ ಮರಾಠ ಸೇನೆಯನ್ನು ಪುಟ್ಟ ಮಹಾರ ಪಡೆ ಸೋಲಿಸಿತು. ಕೋರೆಗಾವ ಕದನದಲ್ಲಿ ಹುತಾತ್ಮರಾದ ದಲಿತರು ಮತ್ತು ಇತರರಿಗಾಗಿ ಬ್ರಿಟಿಷರು ಸ್ಮಾರಕಸ್ತಂಭವೊಂದನ್ನು ನಿರ್ಮಿಸಿದರು. 26 ಮಾರ್ಚ್ 1821ರಲ್ಲಿ ಈ ಸ್ತಂಭಕ್ಕೆ ಅಡಿಗಲ್ಲು ಹಾಕಲಾಯಿತು. ಇದಕ್ಕೆ ಮಹಾ
ಸ್ತಂಭ ಎಂದೂ ಕರೆಯಲಾಗುತ್ತದೆ. ಮಹಾರರ ಬೆಂಬಲವಿಲ್ಲದೇ ಇರುತ್ತಿದ್ದರೆ ಪೇಶ್ವೆಗಳನ್ನು ಗೆಲ್ಲುವುದಕ್ಕೆ ಯಾವ ಕಾರಣದಿಂದಲೂ ಸಾಧ್ಯವಾಗುತ್ತಿರಲಿಲ್ಲ ಎನ್ನುವುದನ್ನು ಬ್ರಿಟಿಷರೇ ಒಪ್ಪಿಕೊಂಡಿದ್ದಾರೆ.

   ಪೇಶ್ವೆಗಳನ್ನು ಬ್ರಿಟಿಷರು ಸೋಲಿಸಿದ ಈ ಘಟನೆ ನಿಜಕ್ಕೂ ವಿಶಿಷ್ಟವಾದುದು. ಭಾರತೀಯ ಸಾಮಾಜಿಕ ಪರಿಸ್ಥಿತಿಯನ್ನು ಅವಲೋಕಿಸುವಲ್ಲಿ ಇದು ಸಹಾಯ ಮಾಡುತ್ತದೆ. ಶಿವಾಜಿ ಮಹಾರರನ್ನು ತನ್ನವರೆಂದು ಬಗೆದು ಸಾಮ್ರಾಜ್ಯವನ್ನು ಕಟ್ಟಿದ. ಆದರೆ ದಲಿತರನ್ನು ಪರಕೀಯರೆಂದು ಬಗೆದ ಪೇಶ್ವೆಗಳು ತಮ್ಮ ರಾಜ್ಯವನ್ನು ಕಳೆದು ಕೊಂಡರು. ಪರಕೀಯರಾದ ಬ್ರಿಟಿಷರು ತಮಗೆ ಗೌರವನೀಡಿದರೆಂಬ ಒಂದೇ ಕಾರಣಕ್ಕೆ ಮಹಾರರು ಬ್ರಿಟಿಷರ ಪರವಾಗಿ ನಿಂತು, ಪೇಶ್ವೆಗಳನ್ನು ಸೋಲಿಸಿದರು. ದೇಶದ ಪಾಲಿಗೆ ಇದು ಬ್ರಿಟಿಷರ ಗೆಲುವಾಗಿರಬಹುದು. ಆದರೆ ದಲಿತರ ಪಾಲಿಗೆ ಇದು ಶೋಷಿತರ, ನೊಂದವರ ಗೆಲುವು. ಡಾ. ಬಿ.ಆರ್. ಅಂಬೇಡ್ಕರ್ ಜನವರಿ1, 1927ರಲ್ಲಿ ತಮ್ಮ ಅನುಯಾಯಿಗಳೊಂದಿಗೆ ಭೀಮಾ-ಕೋರೆಗಾವಕ್ಕೆ ಬಂದು ಮಹಾರ್ ಸ್ತಂಭಕ್ಕೆ ಗೌರವ ವಂದನೆ ಸಲ್ಲಿಸಿದರು. ಆ ದಿನವನ್ನು ಅಂದಿನಿಂದ ಕೋರೆಗಾವ ಕದನದ ಮಹಾರ ಕಲಿಗಳ ಸ್ಮತಿ ದಿನವನ್ನಾಗಿ ಆಚರಿಸಲಾ ಯಿತು. ಇಂದಿಗೂ ಜನವರಿ 1ರಂದು ದೇಶದ ದಲಿತರೆಲ್ಲ ಕೋರೆಗಾವ ಕದನವನ್ನು ನೆನಪಿಸಿಕೊಂಡು, ಹುತಾತ್ಮರಾದ ಮಹಾರರಿಗೆ ತಮ್ಮ ಶೃದ್ಧಾಂಜಲಿಯನ್ನು ಸಲ್ಲಿಸುತ್ತಾರೆ.


ಇಂದು ಆರೆಸ್ಸೆಸ್ ಸೇರಿದಂತೆ ಸಂಘಪರಿವಾರ ಪೇಶ್ವೆ ಹಿಂದುತ್ವವನ್ನು ದೇಶದ ಮೇಲೆ ಹೇರಲು ಪ್ರಯತ್ನಿಸುತ್ತಿದೆ. ಶಿವಾಜಿಯ ನಿಜವಾದ ವ್ಯಕ್ತಿತ್ವವನ್ನು ಕುರೂಪಗೊಳಿಸಿ, ಅವನ ವ್ಯಕ್ತಿತ್ವಕ್ಕೇ ಕಳಂಕ ಎಸಗುತ್ತಿದೆ. ಶಿವಾಜಿ ಕೇವಲ ಮಹಾರಾಷ್ಟ್ರೀಯನಲ್ಲ. ಕೇವಲ್ಲ ಬೋಸಲೆಯೂ ಅಲ್ಲ. ಕೇವಲ ಹಿಂದೂ ಕೂಡ ಅಲ್ಲ. ಅವನು ಅಪ್ಪಟ ಭಾರತೀಯ. ಈ ದೇಶದ ಪ್ರತಿಯೊಬ್ಬರಿಗೂ ಸೇರಿದವನು ಶಿವಾಜಿ. ಅವನನ್ನು ತಮ್ಮ ಕ್ಷುಲ್ಲಕ ಭಾಷಾ ರಾಜಕೀಯಕ್ಕೆ, ಬ್ರಾಹ್ಮಣ್ಯ ರಾಜಕೀಯಕ್ಕೆ ಬಳಸಿಕೊಳ್ಳುವುದು ಭಾರತೀಯತೆಗೆ ಮಾಡುವ ಅಪಚಾರ. ನಮಗಿಂದು ಬೇಕಾದುದು ಶಿವಾಜಿಯ ಹಿಂದುತ್ವವೇ ಹೊರತು ಪೇಶ್ವೆಗಳ ಹಿಂದುತ್ವವಲ್ಲ. ಪೇಶ್ವೆಗಳ ಹಿಂದುತ್ವ ಶಿವಾಜಿ ಸಾಮ್ರಾಜ್ಯವನ್ನು ಸರ್ವನಾಶ ಮಾಡಿ, ಬ್ರಿಟಿಷರಿಗೆ ತಲೆಬಾಗುವಂತೆ ಮಾಡಿತು. ನಮಗಿಂದು ಬೇಕಾದುದು ಪೇಶ್ವೆ ವಂಶಜನಾದ ನಾಥೂರಾಂ ಗೋಡ್ಸೆ ಹಿಂದುತ್ವವಲ್ಲ. ದಲಿತ ಮಾಹಾರರ ವಂಶಜರಾದ ಬಿ. ಆರ್. ಅಂಬೇಡ್ಕರ್ ಹಿಂದುತ್ವ. ನಾಥೂರಾಂನಿಂದ ಕಗ್ಗೊಲೆಗೀಡಾದ ಮಹಾತ್ಮಗಾಂಧೀಜಿಯ ಹಿಂದುತ್ವ. ಅದು ಮಾತ್ರ ಈ ದೇಶವನ್ನು ಒಂದಾಗಿರುವಂತೆ ಮಾಡೀತು. ದಲಿತರು, ಬ್ರಾಹ್ಮಣರು, ಮುಸ್ಲಿಮರು, ಕ್ರಿಶ್ಚಿಯನ್ನರನ್ನು ಒಟ್ಟಾಗಿ ಕೊಂಡು ಹೋಗುವ ಶಿವಾಜಿಯಂತಹ ನಾಯಕನ ದೂರದೃಷ್ಟಿ ರಾಜಕಾರಣ ಮಾತ್ರ ಈ ದೇಶವನ್ನು ಉಳಿಸೀತು. ಬೆಳೆಸೀತು.
ಆಕರ ಗ್ರಂಥ: ಸರ್ಕಾರ್ ಜೆ.ಎನ್.ಶಿವಾಜಿ ಎಂಡ್ ಹಿಸ್ ಟೈಮ್ಸ್
ಗ್ರಾಂಡ್ ಡಫ್-ಹಿಸ್ಟರಿ ಆಫ್ ಮರಾಠಾಸ್
ಭಾವರೆ ಎನ್. ಜಿ: ಕಾಸ್ಟ್ಸ್ ಫೇವರ್ಸ್‌, ಪ್ಯಾಟರ್ನೇಜ್ ಎಂಡ್ ಪ್ರಿವಿಲೇಜಸ್ ಅಂಡರ್ ಶಿವಾಜಿಸ್ ರೂಲ್
ಶಕಕರ್ತಾ ಶಿವಾಜಿ
ಗೋವಿಂದ ಪಾನಸರೆ ‘ಶಿವಾಜಿ ಯಾರು?’
ಸುಧಾಕರ ಖಾಂಬೆ: ಭೀಮಾ ಕೋರೆಗಾವಾಚಾ ವಿಜಯಸ್ತಂಭ

10 comments:

  1. ಶಿವಕುಮಾರDecember 12, 2012 at 8:31 AM

    ಸ್ವಾಮಿಗಳೇ, ಯಾಕೆ ಸುಮ್ನೆ ಮುಸ್ಲಿಂರು, ದಲಿತರು ಅಂತ ಪರಪರ ಕೆರ್ಕೊತಾ ಇದಿರಿ. ಶಿವಾಜಿ ಯಾವ ಧರ್ಮ ವಿರೋಧಿಯೂ ಆಗಿರಲಿಲ್ಲ. ಮುಸ್ಲಿಮರ ವಿರೋಧಿಯಂತೂ ಅಲ್ಲವೇ ಅಲ್ಲ. ಅದು ಎಲ್ಲರಿಗೂ ಗೊತ್ತು. ಆತ ಮುಸ್ಲಿಂ ಅರಸರ ವಿರುದ್ಧ (ಮೊಗಲರ ವಿರುದ್ಧ) ಹೋರಾಟ ಮಾಡಿದ. ಮುಸ್ಲಿಂ ಅರಸರ ವಿರುದ್ಧ ಮುಸ್ಲಿಂ ಆಳ್ವಿಕೆಯ ವಿರುದ್ಧ ಇರುವುದಕ್ಕೂ ಮುಸ್ಲಿಂ ಜನ ಅಥವಾ ಧರ್ಮದ ವಿರುದ್ಧ ಇರುವುದಕ್ಕೂ ವ್ಯತ್ಯಾಸವಿದೆ. ಇದು ಎಲ್ಲರಿಗೂ ಗೊತ್ತಿದೆ. ನೀವು ಏನೋ ಹೊಸ ಸಂಶೋಧನೆ ಮಾಡಿರುವಂತೆ ಹೇಳಿಕೊಂಡು ಗುಜರಿ ಜಾಸ್ತಿ ಮಾಡ್ಕೋತಾ ಇದೀರಿ ! :) ನಿಮ್ಮ ಕೋಮುವಾದಿ ಜಾತಿವಾದಿ ಲೇಖನಗಳಿಗೆ ಬಂದ ಪ್ರತಿಕ್ರಿಯೆಗಳಿಗೆ ಉತ್ತರ ಕೊಡುವ ಜವಾಬ್ದಾರಿ ಇಲ್ಲದೇ ನೀವು ಹೀಗೆ ಕೊರೆಯುವುದನ್ನು ನಿಲ್ಲಿಸಿದರೆ ಒಳ್ಳೆಯದು.

    ReplyDelete
  2. ಸಾರ್, ಚೆನ್ನಾಗಿದೆ. ಆದರೆ ಈ ಶಿವಾಜಿ ವ್ಯಕ್ತಿತ್ವವನ್ನು ನೀವು ಭಾರತೀಯತೆ ಎಮ್ದು ಹೇಗೆ ಹೇಳುತ್ತೀರಾ? ಅವನದು ಮರಾಠಾ ವ್ಯಕ್ತಿತ್ವ ಎನ್ನುವುದನ್ನು ಹೇಗೆ ನಿರಾಕರಿಸುತ್ತೀರಾ ತಿಳಿಸಿ. ಅವನೊಬ್ಬ ಸ್ವಾಭಿಮಾನಿ ಜಾತ್ಯಾತೀತ ಮನಸ್ಥಿತಿಯ ರಾಜ. ಒಬ್ಬ ಮರಾಠಿ ಮನುಷ್ಯ. ಬಹುಶಃ ಆಗ ನೀವು ಹೇಳುತ್ತಿರುವ ಭಾರತವೂ ಇರಲಿಲ್ಲ! ಭಾರತೀಯತೆಯೂ ಇರಲಿಲ್ಲ!

    ಆನಂದ್

    ReplyDelete
  3. ಹೌದು, ನಿಮಗೆ ಮರಾಠಿ ಬರುತ್ತದೆ ಎಂದು ನನಗೆ ಈವಾಗಲೇ ಗೊತ್ತಾಯ್ತು ನೋಡಿ ! ಸುಧಾಕರ ಖಾಂಬೆಯವರ ಕೃತಿ ಮೂಲ ಮರಾಠಿಯಲ್ಲಿಯೇ ಇದೆ ; ಅದಕ್ಕೆ ಹೇಳಿದ್ದು !

    ReplyDelete
    Replies
    1. ಶಿವಾಜಿಯವರು ಮೂಲತಹ ಯಾವ ಸಮಾಜದವರು

      Delete
  4. priya anand..''... ಅಪ್ರಜ್ಞಾಪೂರ್ವಕವಾಗಿ ಒಂದು ಜಾತ್ಯತೀತ ಭಾರತೀಯ ಕಲ್ಪನೆ ತನಗೆ ತಾನೆ ಸಹಜವಾಗಿ ಅರಳಿಕೊಳ್ಳಲು ಕಾರಣವಾದುದು....'' ಎಂದು ಮೊದಲೇ ಹೇಳಿದ್ದೇನೆ...

    ReplyDelete
  5. ಪ್ರಿಯ ಕಾರ್ನಿಕ್ ಅವರಿಗೆ...ನಾನು 5 ವರ್ಷ ಮರಾಥಿಗರ ನಡುವೆ ಇದ್ದೆ. ನಾನು ದುಡಿಯುತ್ತಿದ್ದ ಮುಂಬೈ ಕರ್ನಾಟಕ ಮಲ್ಲ ಮರಾಥಿಗರ ಮಾಲಕತ್ವದ ಪತ್ರಿಕೆ. ನಮ್ಮದೇ ಕಚೇರಿಯಲ್ಲಿ ಅವರ ಆಪಲಾ ವಾರ್ಥಹಾರ್, ಮುಂಬೈ ಚೌಪೆರ್ ಮರಾಥಿ ಪತ್ರಿಕೆ ಮುದ್ರಣ ವಾಗುತ್ತಿತ್ತು. ಆದುದರಿಂದ ಮರಾಠಿಯ ಪರಿಚಯ ಇದೆ. ನಿಮ್ಮ ಷ್ಟಲ್ಲ. ತೊದಲು, ತೊದಲಾಗಿ. ನೀವು ಈ ಪ್ರಶ್ನೆ ಯಾಕೆ ಕೇಳಿದ್ದೀರೆಂದು ತಿಳಿಯಿತು. ಕೊರೆಗಾವ ಕದನ....ಸುಧಾಕರ ಕಾಮ್ಬೆಯ ಕೃತಿಯನ್ನು ನೀವು ಕನ್ನಡಕ್ಕೆ ತುಂಬಾ ಸುಂದರವಾಗಿ ತಂದಿದ್ದೀರಿ. ಅದನ್ನೂ ನಾನು ಓದಿದ್ದೇನೆ. ನಿಮಗೂ ಕೃತಜ್ಞತೆಗಳು.

    ReplyDelete
  6. ಬಶೀರ್ ಅವರೇ,
    ನನ್ನ ಮಾತು ನಿಮಗೆ ಅರ್ಥವಾದಂತಿಲ್ಲ. "ಶಿವಾಜಿಯ ಹಿಂದುತ್ವ" ಎಂದು ನೀವು ಬಳಸಿರುವುದೇ ತಪ್ಪು! ಶಿವಾಜಿಯದು ಹಿಂದುತ್ವವೇ ಅಥವಾ ಸಾಮಾನ್ಯ ಮಹತ್ವಾಕಾಂಕ್ಷಿ ಮನುಜನಲ್ಲಿನ ಮನುಷ್ಯತ್ವವೇ? ವಾಸ್ತವವಾಗಿ ನಿಮ್ಮ ಬರಹ ಹೇಳಹೊರಟಿರುವುದು "ಅಂದಿನ ಎಲ್ಲಾ ಜಾತಿ ತಾರತಮ್ಯದ ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ ಸಾಮ್ರಾಜ್ಯ ಕಟ್ಟಿದ್ದನು" ಎನ್ನುವುದು ಮಾತ್ರವೇ ಆಗಿದೆಯಲ್ಲವೇ? ಅಥವಾ ಶಿವಾಜಿ ಇಂದು ಸಮಾಜದಲ್ಲಿ ಚಾಲ್ತಿಯಲ್ಲಿರುವ "ಜಾತ್ಯಾತೀತತೆ"ಯ ಸಿದ್ಧಾಂತಿಯಾಗಿದ್ದ ಎಂದೇ? ನನ್ನ ಅನಿಸಿಕೆಯಂತೆ ಶಿವಾಜಿ ಎಂಬ ಮಹತ್ವಾಕಾಂಕ್ಷಿಯಾದ ವ್ಯಕ್ತಿ ತನ್ನ ಸಾಮ್ರಾಜ್ಯ ಸ್ಥಾಪನೆಯ ಗುರಿಯನ್ನು ತನಗೆ ಲಭ್ಯವಿರುವ ಸಂಪನ್ಮೂಲಗಳನ್ನು ಯುಕ್ತವಾಗಿ ಬಳಸಿ ಕಟ್ಟಿದ. ಈ ರಾಜ್ಯ ಕಟ್ಟುವಿಕೆಗೆ ಎದುರಾದ ಎಲ್ಲಾ ಸವಾಲುಗಳನ್ನೂ ಜಾಣ್ಮೆಯಿಂದ, ಹೊಸತನದ ತಂತ್ರಗಳಿಂದ ಸಾಧಿಸಿದ. ಆದರೆ ನೀವಂದಂತೆ ಅವನು ಜಾತ್ಯಾತೀತನೇ ಆಗಿದ್ದರೆ ಯಾಕಾಗಿ ಉಪನಯನ ಮಾಡಿಸಿಕೊಂಡು ಸಿಂಹಾಸನವೇರಿದ? ಯಾಕಾಗಿ ಅದೇ ಬ್ರಾಹ್ಮಣರ ಮೊರೆಹೊಕ್ಕು ಛತ್ರಪತಿಯಾದ? ಆ ಬ್ರಾಹ್ಮಣ ಸ್ಥಳೀಯ ಮರಾಟಿಯಲ್ಲದಿದ್ದರೇನಂತೆ ಬನಾರಸಿಯಾದರೇನಂತೆ? ಹಾಗಾಗಿ ಶಿವಾಜಿಯನ್ನು ಹಿಂದೂ ಶಕ್ತಿ ಸಂಕೇತ ಎಂದು ತಪ್ಪಾಗಿ ಬಿಂಬಿಸುತ್ತಿರುವವರಂತೆಯೇ ಅವನೊಬ್ಬ ನಿಜವಾದ ಜಾತ್ಯಾತೀತ ಎಂದು ಬಿಂಬಿಸುತ್ತಿರುವುದೂ ಸರಿ ಎಂದೆನ್ನಿಸುತ್ತಿಲ್ಲ!
    ವಂದನೆಗಳು

    ಆನಂದ್

    ReplyDelete
  7. ಮತ್ತೊಂದು ವಿಷಯ, ದಯವಿಟ್ಟು ಮಹಾತ್ಮಗಾಂಧಿಯವರನ್ನು ಮತ್ತೊಮ್ಮೆ ಓದಿ. ಅವರ ಹಿಂದುತ್ವವನ್ನು ನೀವು ಬೇಕೆನ್ನುತ್ತಿದ್ದೀರಾ.... ನನಗ್ಯಾಕೋ ಇದು ಸರಿಯೆನ್ನಿಸುತ್ತಿಲ್ಲ. ಮಹಾತ್ಮಾಗಾಂಧಿಯೂ ಕೂಡಾ ಹಿಂದುತ್ವದ ಎಲ್ಲಾ ಮೇಲುಕೀಳುಗಳ ಪ್ರದಿಪಾದಕರು ಎನ್ನುವಂತೆ ಅವರ ಜಾತಿ ಪದ್ದತಿ ಸಮರ್ಥನೆಯನ್ನು ಕಂಡಾಗ ಅನ್ನಿಸುತ್ತದೆ.

    ಮಹಾತ್ಮಗಾಂಧಿಯವರು ಸಮಾಜದಲ್ಲಿ ಶೋಷಣೆಗೆ ಒಳಗಾದವರನ್ನು ಹರಿಜನರೆಂದು ಕರೆಯುವುದೂ ಕೂಡಾ ಸಮಾಜದಿಂದ ಅವರನ್ನು ಹೊರಗಿಡುವುದನ್ನು ಸಮರ್ಥನೆ ಮಾಡಿದಂತೆಯೇ ಎಂದು ನನಗನ್ನಿಸುತ್ತದೆ. ಬಹುಶಃ ಅವರ ಒಳಗೂ ಎಲ್ಲೋ ತಾನು ಹುಟ್ಟಿನಿಂದ ಸೇರಿದ ವರ್ಗದ ಜನರು ಕೆಳವರ್ಗದವರನ್ನು ಕೀಳಾಗಿ ನಡೆಸಿಕೊಳ್ಳುತ್ತಿರುವುದು ಅಸಹನೀಯವಾಗಿಯೇ ಇಂತಹ ನಿಲುವಿಗೆ ಬಂದಿದ್ದರು ಎನ್ನಿಸುತ್ತದೆ. ಇದು ಅವರನ್ನು ಎಂದಿಗೂ ಪ್ರಾಮಾಣಿಕ ಎಂದು ಒಪ್ಪಲು ಕಷ್ಟ ಮಾಡುತ್ತದೆ. ನಿಜವಾಗಿಯೂ ನಮಗೆ ಹಿಂದುತ್ವ ನಿಯಂತ್ರಿಸುವಂತಹ ಸಮಾಜವೇ ಬೇಡ. ಯಾಕೆಂದರೆ ಹಿಂದುತ್ವ ಅನ್ನುವುದು ಮನುಷ್ಯ ಮನುಷ್ಯರ ನಡುವಿನ ತಾರತಮ್ಯವನ್ನು ಆಚರಣೆಯಲ್ಲಿ ಎತ್ತಿಹಿಡಿಯುವ, ಬಾಯಿಮಾತಲ್ಲಿ ಸರ್ವೇಜನಾಃ ಸುಖಿನೋ ಭವಂತು ಎನ್ನುವ ಸಮಾಜ. ಜಾತಿ, ಮತ, ಧರ್ಮ ಇವೆಲ್ಲಾ ವೈಯುಕ್ತಿಕ ನಂಬಿಕೆಗಳು ಮಾತ್ರಾ. ಸಾರ್ವಜನಿಕ ಜೀವನದಲ್ಲಿ ಇವು ಇದ್ದಷ್ಟೂ ಅಪಾಯ ಎನ್ನುವ ನಿಲುವು ಯಾಕೋ ಆಪ್ತವೆನ್ನಿಸುತ್ತದೆ. ನಿನ್ನ ಮನೆಯಲ್ಲಿ ನೀನು ಯಾವ ದೇವರನ್ನಾದರೂ ಪೂಜಿಸು, ಅಥವಾ ಬಿಡು... ಮನೆಯೊಳಗೆ ಇನ್ನೊಬ್ಬರಿಗೆ ತೊಂದರೆಯಾಗದ ಯಾವ ಆಚರಣೆಯನ್ನಾದರೋ ಮಾಡಿಕೋ... ನಿನ್ನಿಷ್ಟ! ಆದರೆ ಸಮಾಜದ ಜೊತೆ ವ್ಯವಹರಿಸುವಾಗ ಅದನ್ನೆಲ್ಲಾ ಕಟ್ಟಿಡು...ಅನ್ನುವುದು ಹೆಚ್ಚು ಸರಿ ಎನ್ನಿಸುತ್ತದೆ!

    ಆನಂದ್

    ReplyDelete
  8. ಇಲ್ಲಿ ಒ೦ದು ಸತ್ಯವನ್ನು ಗುರುತಿಸಬೇಕು;

    ಮುಸ್ಲಿಮರು ಅನರ್ಹರು ಎ೦ದು ಬಿ೦ಬಿಸಲ್ಪಡುವ
    ಕೆಲವರ ಬಗೆಗೆ ಆಳವಾಗಿ ಅಭ್ಯಸಿಸಿ
    ಅರ್ಹರು ಎ೦ಬ ತೀರ್ಪಿತ್ತರೆ,
    ಹಿ೦ದೂ ಸ೦ಘಟಕರು
    ಒಳ್ಳೆಯವರನ್ನು ಕೆಟ್ಟವರನ್ನಾಗಿ ಬಿ೦ಬಿಸಲು ಹೆಣಗುತ್ತಿರುತ್ತಾರೆ....

    ReplyDelete
  9. ಕರ್ನಾಟಕ ಮರಾಠರಿಗೂ ಮತ್ತು ಮಹಾರಾಸ್ಟ್ರ ಮರಾಠರಿಗೂ ಸಂಬಂಧವೇನು

    ReplyDelete