Sunday, August 16, 2015

ನೆಹರೂ ಸರ್ವಶ್ರೇಷ್ಠ ಭಾಷಣ: ವಿಧಿಯೊಂದಿಗಿನ ವಚನ

ದೇಶದ ಮೊದಲ ಸ್ವಾತಂತ್ರದಿನದ ಮುನ್ನಾದಿನದಂದು (ಆಗಸ್ಟ್ 14, 1947) ನಿಯೋಜಿತ ಪ್ರಧಾನಿ ಜವಹರಲಾಲ್ ನೆಹರೂರವರು ಮರುದಿನ ಮಧ್ಯರಾತ್ರಿ ವೇಳೆಗೆ ಮಾಡಲಿದ್ದ ತಮ್ಮ ಭಾಷಣವನ್ನು ಬರೆಯಲು ಕೂತರು. ದಿನವಿಡೀ ನೂರಾರು ಕೆಲಸಗಳು. ರಾತ್ರಿ ಹತ್ತು ಗಂಟೆಗೆ ಭಾಷಣ ಬರೆಯಲೆಂದು ಕೂತಾಗ ಕುಟುಂಬ ಸದಸ್ಯರೆಲ್ಲ ಒಟ್ಟಾಗಿ ಒತ್ತಾಯಪೂರ್ವಕವಾಗಿ ಊಟಕ್ಕೆ ಕರೆದರು. ಊಟಕ್ಕೆ ಕೂತಾಗ ಲಾಹೋರ್‌ನಿಂದ ತುರ್ತು ದೂರವಾಣಿ ಕರೆ. ಫೋನ್‌ನಲ್ಲೇ ಅರ್ಧ ಗಂಟೆ ಕಳೆದು ಹೋಯಿತು.
ಲಾಹೋರ್‌ನಲ್ಲಿ ನಡೆದಿದ್ದ ಗಲಭೆಗಳು (ದೇಶ ವಿಭಜನೆಯ ಗಲಭೆ) ದೂರವಾಣಿ ಕರೆಯ ವಿಷಯವಾಗಿತ್ತು. ಈ ಸುದ್ದಿ ಕೇಳಿ ನೆಹರು ಬಹಳ ನೊಂದುಕೊಂಡರು. ತಳವಿಲ್ಲದ ಕೆರೆಯಲ್ಲಿ ಮುಳುಗುತ್ತಿರುವ ಸ್ಥಿತಿ ನೆಹರೂ ಅವರದಾಗಿತ್ತು. ಕೊನೆಗೆ ಅವರಿಗೆ ಭಾಷಣ ಬರೆಯುವಷ್ಟು ವ್ಯವಧಾನವಾಗಲಿ, ಶಕ್ತಿಯಾಗಲಿ, ಸಮಯವಾಗಲೀ ಲಭಿಸಲಿಲ್ಲ.
 ಆದರೆ, ಮರುದಿನ ಮಧ್ಯರಾತ್ರಿ ಹೊತ್ತಿಗೆ ನೆಹರೂ ತಮ್ಮನ್ನು ತಾವೇ ಸಮರ್ಥಿಸಿಕೊಳ್ಳುವ ಸ್ಥಿತಿಯಲ್ಲಿದ್ದರು. ಅತ್ಯಂತ ಶ್ರೇಷ್ಠವಾದ ಭಾಷಣವೊಂದನ್ನು ಅವರು ಮಾಡಿದ್ದರು. ನಾಲಿಗೆಯಿಂದ ಶಬ್ದಗಳು ಸಂದರ್ಭೋಚಿತವಾಗಿ ಹರಿದುಬಂದವು. ನುಡಿಗಟ್ಟುಗಳು ಹೃದಯಕ್ಕೆ ನಾಟುವಂತಿದ್ದವು. ಅವರ ಮಾತಿನ ಹುರುಪು ಸಂಸತ್‌ಭವನದ ಮೂಲೆಮೂಲೆಯನ್ನು ಮುಟ್ಟುವಂತಿತ್ತು.
ಭಾರತದ ಪ್ರಥಮ ಪ್ರಧಾನಿಯೊಬ್ಬರು ಅತ್ಯುತ್ತಮ ಭಾಷಣವೊಂದನ್ನು ಮಾಡುತ್ತ ಜಗತ್ತಿನಾದ್ಯಂತ ಕೋಟ್ಯಂತರ ಜನರ ಹೃದಯವನ್ನು ತಟ್ಟಿದ್ದರು ಎಂಬುದು ನಾವೆಲ್ಲ ಹೆಮ್ಮೆ ಪಡುವಂತಹ ಸಂಗತಿಯಾಗಿದೆ. ಅಂದು ನೆಹರುರವರು ಮಾಡಿದ್ದ ಭಾಷಣವು 20ನೆ ಶತಮಾನದ ಶ್ರೇಷ್ಠ ಭಾಷಣಗಳ (11ನೆ ಸ್ಥಾನ) ಸಾಲಿಗೆ ಸೇರಿದೆ.
ಕೃಪೆ-ವಾರ್ತಾ ಭಾರತಿ 

ವಿಧಿಯೊಂದಿಗಿನ ವಚನ(Tryst with Destiny ):
ಬಹಳಷ್ಟು ವರ್ಷಗಳಿಂದಲೇ ನಾವು ವಿಧಿಗೆ ವಚನ ನೀಡುತ್ತಾ ಬಂದಿದ್ದೆವು. ಇದೀಗ ನಮ್ಮ ವಚನವನ್ನು ಸಂಪೂರ್ಣವಾಗಿ ಅಲ್ಲದಿದ್ದರೂ, ಅತ್ಯಂತ ಗಣನೀಯ ಪ್ರಮಾಣದಲ್ಲಿ ಈಡೇರಿಸುವ ಕಾಲ ಕೂಡಿಬಂದಿದೆ.
ಇಂದು ರಾತ್ರಿ 12 ಗಂಟೆಗೆ ಇಡೀ ಜಗತ್ತು ನಿದ್ರಿಸುತ್ತಿದೆ. ಆದರೆ ಭಾರತವು ಸ್ವಾತಂತ್ರ ಹಾಗೂ ಬದುಕಿನ ಹೊಸ ಮುಂಜಾವಿನೊಂದಿಗೆ ಎದ್ದೇಳಲಿದೆ.ಇಂತಹ ಸುಸಂದರ್ಭ ಇತಿಹಾಸದಲ್ಲಿ ತೀರಾ ಅಪರೂಪ. ನಾವು ಹಳೆಯದನ್ನು ತೊರೆದು ಹೊಸತಿನೆಡೆಗೆ ಸಾಗಿದಾಗ, ಯುಗವೊಂದು ಅಂತ್ಯಗೊಂಡಾಗ ಹಾಗೂ ಹಲವು ವರ್ಷಗಳಿಂದ ಶೋಷಿಸಲ್ಪಟ್ಟ ದೇಶವೊಂದರ ಆತ್ಮವು, ಈಗ ಮಾತನಾಡುತ್ತಿದೆ..
ಈ ಪವಿತ್ರ ಕ್ಷಣದಲ್ಲಿ ಭಾರತ ಹಾಗೂ ಅದರ ಜನತೆಯ ಸೇವೆಗೆ ನಮ್ಮನ್ನು ಸಮರ್ಪಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡುವ ಸುಯೋಗ ನಮಗೆ ದೊರೆತಿದೆ ಮತ್ತು ಇದಕ್ಕಿಂತಲೂ ಮಿಗಿಲಾಗಿ, ಇಡೀ ಮಾನವಕುಲದ ಸೇವೆಗೈಯುವ ಪ್ರತಿಜ್ಞೆಯನ್ನು ಕೈಗೊಳ್ಳುತ್ತಿದ್ದೇವೆ.
ಇತಿಹಾಸದ ಆರಂಭದಿಂದಲೇ ಭಾರತವು ತನ್ನ ಅಂತ್ಯವಿಲ್ಲದ ಅನ್ವೇಷಣೆಯನ್ನು ಆರಂಭಿಸಿತ್ತು ಹಾಗೂ ಎಷ್ಟು ಶತಮಾನಗಳಿಂದ ಅದು ಸಫಲತೆಯ ಹಾಗೂ ವಿಫಲತೆಯ ಕ್ಷಣಗಳನ್ನು ಕಂಡಿದೆೆಯೆಂಬುದನ್ನು ತಿಳಿಯಲು ಸಾಧ್ಯವಿಲ್ಲ. ಸಮಯ ಒಳ್ಳೆಯದಿರಲಿ ಇಲ್ಲವೇ ಕೆಟ್ಟದಿರಲಿ, ಭಾರತ ಯಾವತ್ತೂ ತನ್ನ ಅನ್ವೇಷಣಾ ದೃಷ್ಟಿಯನ್ನು ಕಳೆದುಕೊಳ್ಳಲಿಲ್ಲ ಅಥವಾ ತನಗೆ ಶಕ್ತಿ ತುಂಬುವ ಆದರ್ಶಗಳನ್ನು ಮರೆಯಲಿಲ್ಲ. ಇಂದು ನಾವು ದೌರ್ಭಾಗ್ಯದ ಒಂದು ಯುಗವನ್ನು ಕೊನೆಗೊಳಿಸಿದ್ದೇವೆ ಹಾಗೂ ಭಾರತವು ಮತ್ತೊಮ್ಮೆ ತನ್ನನ್ನು ತಾನೇ ಶೋಧಿಸಿಕೊಳ್ಳುತ್ತಿದೆ.
ಇಂದು ನಾವು ಈ ಸಾಧನೆಯ ಉತ್ಸವವನ್ನು ಆಚರಿಸುತ್ತಿದ್ದೇವೆ. ಇದೊಂದು ಹೊಸ ಅವಕಾಶವನ್ನು ತೆರೆದಿಡುವ ಹೆಜ್ಜೆಯಾಗಿದೆ. ಇದಕ್ಕಿಂತಲೂ ಮಿಗಿಲಾದ ಗೆಲುವು ಹಾಗೂ ಸಾಧನೆಗಳು ನಮಗಾಗಿ ಕಾಯುತ್ತಿವೆ. ಈ ಅವಕಾಶವನ್ನು ಮನನಮಾಡಿಕೊಳ್ಳಲು ಹಾಗೂ ಭವಿಷ್ಯದ ಸವಾಲನ್ನು ಸ್ವೀಕರಿಸುವಷ್ಟು ದೃಢತೆ ಹಾಗೂ ಬೌದ್ಧಿಕತೆ ನಮ್ಮಲ್ಲಿದೆಯೇ?.
ಸ್ವಾತಂತ್ರ ಹಾಗೂ ಅಧಿಕಾರವು ನಮಗೆ ಹೊಣೆಗಾರಿಕೆಯನ್ನು ತಂದುಕೊಡುತ್ತದೆ. ಈ ಹೊಣೆಗಾರಿಕೆಯು ಈಗ ಭಾರತದ ಸಾರ್ವಭೌಮ ಜನತೆಯನ್ನು ಪ್ರತಿನಿಧಿಸುವ ಂತಹ ಸಾರ್ವಭೌಮ ಘಟಕವೊಂದರ ಮೇಲಿದೆ. ಸ್ವಾತಂತ್ರದ ಜನನಕ್ಕೆ ಮುನ್ನ ನಾವು ಎಲ್ಲಾ ರೀತಿಯ ನೋವನ್ನು ಅನುಭವಿಸಿದ್ದೇವೆ. ಈ ನೋವಿನ ನೆನಪಿನಿಂದಾಗಿ ನಮ್ಮ ಹೃದಯಗಳು ಭಾರವಾಗಿವೆ.ಕೆಲವೊಂದು ನೋವುಗಳು ಈಗಲೂ ಮುಂದುವರಿದಿವೆ. ಏನೇ ಇರಲಿ, ಭೂತಕಾಲವು ಮುಕ್ತಾಯಗೊಂಡಿದೆ ಹಾಗೂ ಭವಿಷ್ಯವು ನಮ್ಮನ್ನು ೆಬೀಸಿ ಕರೆಯುತ್ತಿದೆ,. ಆ ಭವಿಷ್ಯತ್ತು ನಮಗೆ ಆರಾಮವಾಗಿರಲು ಅಥವಾ ನೆಮ್ಮದಿಯಿಂದ ಕುಳಿತುಕೊಳ್ಳಲು ಇರುವುದಕ್ಕಲ್ಲ. ಬದಲಿಗೆ ನಿರಂತರವಾಗಿ ಪರಿಶ್ರಮ ಪಡುವುದಕ್ಕೆ ಇರುವಂತಹದ್ದಾಗಿದೆ.ಹಾಗಾದಲ್ಲಿ ಮಾತ್ರ ನಾವು ಪದೇ ಪದೇ ಘೋಷಿಸುತ್ತಿದ್ದ ಹಾಗೂ ಈಗಲೂ ಘೋಷಿಸುತ್ತಿರುವ ವಾಗ್ದಾನವನ್ನು ಈಡೇರಿಸಲು ಸಾಧ್ಯವಾಗಲಿದೆ. ಭಾರತದ ಸೇವೆಯೆಂದರೆ ಯಾತನೆಗಳನ್ನು ಅನುಭವಿಸುತ್ತಿರುವ ಕೋಟ್ಯಂತರ ಜನರ ಸೇವೆಯಾಗಿದೆ. ಬಡತನ ಹಾಗೂ ಅಜ್ಞಾನವನ್ನು ತೊಲಗಿಸುವುದು, ರೋಗ ಮತ್ತು ಅಸಮಾನತೆಯನ್ನು ಕೊನೆಗೊಳಿಸುವುದೆಂಬುದೇ ಇದರ ಅರ್ಥವಾಗಿದೆ.
 ಪ್ರತಿಯೊಬ್ಬನ ಕಣ್ಣೀರನ್ನೂ ಒರೆಸುವುದೇ ನಮ್ಮ ತಲೆಮಾರಿನ ಮಹಾನ್ ವ್ಯಕ್ತಿಯ ಮಹತ್ವಾಕಾಂಕ್ಷೆಯಾಗಿದೆ. ಬಹುಶಃ ಅದು ನಮಗೆ ಸಾಧ್ಯವಾಗದೇ ಇರಬಹುದು. ಆದರೆ ಎಲ್ಲಿಯ ವರೆಗೆ ಕಣ್ಣೀರು ಹಾಗೂ ಯಾತನೆ ಇರುವುದೋ ಅಲ್ಲಿಯವರೆಗೆ ನಮ್ಮ ಕೆಲಸ ಮುಗಿಯುವುದಿಲ್ಲ.
 ಇದಕ್ಕಾಗಿ ನಾವು ದುಡಿಯಬೇಕಾಗಿದೆ ಹಾಗೂ ಕಠಿಣವಾದ ಪರಿಶ್ರಮಪಡಬೇಕಾಗಿದೆ. ಇಲ್ಲದಿದ್ದಲ್ಲಿ ನಮ್ಮ ಕನಸುಗಳು ಸಾಕಾರಗೊಳ್ಳಲಾರವು. ಆ ಕನಸುಗಳು ಭಾರತಕ್ಕಾಗಿ ಇರುವಂತಹದ್ದಾಗಿದೆ. ಜೊತೆಗೆ ಇಡೀ ವಿಶ್ವಕ್ಕೂ ಇರುವಂತಹದ್ದಾಗಿದೆ. ಇಂದು ಎಲ್ಲಾ ರಾಷ್ಟ್ರಗಳು ಹಾಗೂ ಜನರು ಅತ್ಯಂತ ನಿಕಟವಾಗಿ ಬೆಸೆದುಕೊಂಡಿರುವುದರಿಂದ ಯಾರೂ ಕೂಡಾ ಪ್ರತ್ಯೇಕವಾಗಿ ಬುದುಕು ಯೋಚನೆಯನ್ನು ಮಾಡಲಾರರು.
ಶಾಂತಿಯು ಅವಿಭಾಜ್ಯವೆಂದು ಹೇಳಲಾಗುತ್ತದೆ ಹಾಗೆಯೇ ಸ್ವಾತಂತ್ರ ಕೂಡಾ. ಅಂತೆಯೇ ಸಮೃದ್ಧಿ ಮತ್ತು ವಿನಾಶವೂ ಸಹ.ಈಗ ಈ ಜಗತ್ತನ್ನು ಸಣ್ಣ ಸಣ್ಣ ತುಂಡುಗಳಾಗಿ ಹರಿದುಹಂಚಲು ಸಾಧ್ಯವಿಲ್ಲ. ನಾವು ಪ್ರತಿನಿಧಿಸುತ್ತಿರುವ ಭಾರತದ ಜನತೆಗೆ ನಾವು ಮನವಿ ಮಾಡುವುದೇನೆಂದರೆ, ಈ ಮಹಾನ್ ಸಾಹಸದಲ್ಲಿ ನಂಬಿಕೆ ಹಾಗೂ ವಿಶ್ವಾಸದೊಂದಿಗೆ ನಮ್ಮ ಜೊತೆಗೂಡಿರಿ. ಕ್ಷುಲ್ಲಕವಾದ ಹಾಗೂ ವಿನಾಶಕಾರಿಯಾದ ಟೀಕೆಗಳನ್ನು ಮಾಡಲು ಈಗ ಸಮಯವಿಲ್ಲ. ಇತರರ ಬಗ್ಗೆ ಕೆಟ್ಟದಾಗಿ ಯೋಚಿಸಲು ಅಥವಾ ದೋಷಾರೋಪ ಮಾಡುವ ಸಮಯ ಇದಲ್ಲ. ಸ್ವತಂತ್ರ ಭಾರತಕ್ಕೊಂದು ಪವಿತ್ರವಾದ ಸೌಧವನ್ನು ನಿರ್ಮಿಸಬೇಕಾಗಿದ್ದು, ಅಲ್ಲಿ ಆಕೆಯ ಮಕ್ಕಳು ಮುಕ್ತವಾಗಿ ವಾಸಿಸುವಂತಿರಬೇಕು.
       ಇಂದು ಆ ನಿರ್ಣಾಯಕ ದಿನವು ಆಗಮಿಸಿದೆ. ವಿಧಿಯು ನಿರ್ಣಯಿಸಿದ ದಿನ ಇದಾಗಿದೆ. ದೀರ್ಘಕಾಲದ ಜಾಡ್ಯತೆ ಹಾಗೂ ಸಂಘರ್ಷದ ಬಳಿಕ ಭಾರತವು ಜಾಗೃತಿ ಹಾಗೂ ಸ್ವಾತಂತ್ರದೊಂದಿಗೆ ಎದ್ದುನಿಂತಿದೆ. ಒಂದು ಹಂತದವರೆಗೆ ಈಗಲೂ ನಮ್ಮ ಭೂತಕಾಲವು ನಮ್ಮನ್ನು ಕಚ್ಚಿಕೊಂಡು ನಿಂತಿದೆ. ನಾವು ಹಲವು ಬಾರಿ ನೀಡಿದ್ದ ವಾಗ್ದಾನವನ್ನು ಈಡೇರಿಸುವ ಮೊದಲು ಸಾಧಿಸಬೇಕಾದುದು ಬಹಳಷ್ಟಿದೆ. ನಮಗಾಗಿ ಹೊಸ ಇತಿಹಾಸವೊಂದು ಆರಂಭಗೊಂಡಿದೆ. ನಾವು ಬದುಕುವ, ಕಾರ್ಯಾಚರಿಸುವ ಹಾಗೂ ಇತರರು ಆ ಬಗ್ಗೆ ಬರೆಯುವಂತಹ ಇತಿಹಾಸ ಆದಾಗಿದೆ.
   ಭಾರತದಲ್ಲಿರುವ ನಮಗೆಲ್ಲರಿಗೂ, ಇಡೀ ಏಶ್ಯಾಗೆ ಹಾಗೂ ಜಗತ್ತಿಗೆ ಇದೊಂದು ಸೌಭಾಗ್ಯದ ಕ್ಷಣವಾಗಿದೆ. ಹೊಸ ತಾರೆಯೊಂದು ಉದಯಿಸಿದೆ. ಪೂರ್ವದಲ್ಲಿ ಸ್ವಾತಂತ್ರದ ನಕ್ಷತ್ರವು ಮೂಡಿದೆ. ಹೊಸ ಭರವಸೆಯೊಂದು ಜನಿಸಿದೆ. ದೂರದೃಷ್ಟಿಯೊಂದು ಅಸ್ತಿತ್ವಕ್ಕೆ ಬಂದಿದೆ. ಈ ನಕ್ಷತ್ರವು ಎಂದೂ ಮುಳುಗದಿರಲಿ ಹಾಗೂ ಭರವಸೆಗೆ ಎಂದೂ ದ್ರೋಹವಾಗದಿರಲಿ.
      ಕಾರ್ಮುಗಿಲುಗಳು ನಮ್ಮನ್ನು ಸುತ್ತುವರಿದಿದ್ದರೂ, ನೋವುತುಂಬಿದ ಹಾಗೂ ಕಠಿಣವಾದ ಸಮಸ್ಯೆಗಳು ನಮ್ಮನ್ನು ಆವರಿಸಿದ್ದರೂ ನಾವು ಆ ಸ್ವಾತಂತ್ರವನ್ನು ಸದಾ ಆನಂದಿಸೋಣ. ಆದರೆ ಸ್ವಾತಂತ್ರವು ನಮಗೆ ಹೊಣೆಗಾರಿಕೆಗಳನ್ನು ಹಾಗೂ ಹೊರೆಗಳನ್ನು ತರುತ್ತದೆ. ಮುಕ್ತ ಹಾಗೂ ಶಿಸ್ತುಬದ್ಧ ಪ್ರಜೆಗಳಾಗಿ ನಾವು ಅವುಗಳನ್ನು ಎದುರಿಸಬೇಕಾಗಿದೆ.
  ಈ ದಿನ ನಮ್ಮ ಮೊದಲ ಚಿಂತನೆಗಳು ಈ ಸ್ವಾತಂತ್ರದ ಶಿಲ್ಪಿಯೆಡೆಗೆ ಸಾಗುತ್ತವೆ. ಭಾರತದ ಪ್ರಾಚೀನ ಚೈತನ್ಯವನ್ನು ಅವಿರ್ಭಸಿಕೊಂಡಿರುವ ನಮ್ಮ ರಾಷ್ಟ್ರಪಿತನು ಸ್ವಾತಂತ್ರದ ಜ್ಯೋತಿಯನ್ನು ಎತ್ತಿಹಿಡಿದು, ನಮ್ಮ ಸುತ್ತಲೂ ಆವರಿಸಿದ್ದ ಕತ್ತಲನ್ನು ಬೆಳಗಿದನು.
    ನಾವು ಅನೇಕ ಸಲ ಅವರ ನಿಷ್ಪ್ರಯೋಜಕ ಅನುಯಾಯಿಗಳಾಗಿ ಬಿಟ್ಟಿದ್ದೆವು. ಅವರ ಸಂದೇಶದಿಂದ ದೂರ ಸರಿದಿದ್ದೆವು. ಆದರೆ ನಾವು ಮಾತ್ರವಲ್ಲ, ನಮ್ಮ ಮುಂದಿನ ತಲೆಮಾರು ಕೂಡಾ ಈ ಸಂದೇಶವನ್ನು ನೆನಪಿಸಿಕೊಳ್ಳಲಿದೆ ಹಾಗೂ ಅದ್ಭುತವಾದ ನಂಬಿಕೆ, ಶಕ್ತಿ, ದಿಟ್ಟತನವನ್ನು ಹೊಂದಿರುವ ಭಾರತದ ಈ ಮಹಾನ್ ಪುತ್ರನನ್ನು, ಹಾಗೂ ಆತನ ಧೀಮಂತಿಕೆಯನ್ನು ತಮ್ಮ ಹೃದಯದಲ್ಲಿ ಛಾಪಿಸಲಿದ್ದಾರೆ. ಯಾವುದೇ ಬಿರುಗಾಳಿ,ಚಂಡಮಾರುತ ಬಂದರೂ ಈ ಸ್ವಾತಂತ್ರದ ಜ್ಯೋತಿ ಆರುವುದಕ್ಕೆ ನಾವು ಎಂದೂ ಬಿಡಬಾರದು.
   ಆನಂತರ ನಾವು ಯಾವುದೇ ಪ್ರಶಂಸೆ ಹಾಗೂ ಪುರಸ್ಕಾರ ಬಯಸದೆ ಸಾವಿನ ತನಕವೂ ಭಾರತಕ್ಕಾಗಿ ಸೇವೆ ಸಲ್ಲಿಸಿದ ಸ್ವಾತಂತ್ರದ ಅಜ್ಞಾತ ಸ್ವಯಂಸೇವಕರು ಹಾಗೂ ಸೈನಿಕರನ್ನು ಸ್ಮರಿಸಬೇಕಾಗಿದೆ. ರಾಜಕೀಯ ಗಡಿಗಳಿಂದಾಗಿ ನಮ್ಮಿಂದ ದೂರವಾಗಿರುವ ಹಾಗೂ ದೊರೆತ ಸ್ವಾತಂತ್ರದ ಸಂಭ್ರಮವನ್ನು ಹಂಚಿಕೊಳ್ಳಲು ಈಗ ನಮ್ಮಾಂದಿಗಿರದ ನಮ್ಮ ಸಹೋದರರು ಹಾಗೂ ಸಹೋದರಿಯರನ್ನೂ ಕೂಡಾ ನಾವು ನೆನೆಯಬೇಕಾಗಿದೆ.ಅವರು ನಮ್ಮವರೇ ಆಗಿದ್ದಾರೆ ಹಾಗೂ ಏನೇ ಆದರೂ ಅವರು ನಮ್ಮವರೇ ಆಗಿ ಉಳಿಯಲಿದ್ದಾರೆ. ಅವರ ಒಳಿತು ಹಾಗೂ ಕೆಡುಕಿನ ಕ್ಷಣಗಳನ್ನು ನಾವು ಜೊತೆಯಾಗಿಯೇ ಹಂಚಿಕೊಳ್ಳಬೇಕಾಗಿದೆ.
     ಭವಿಷ್ಯವು ನಮ್ಮನ್ನು ಕರೆಯುತ್ತಿದೆ. ನಾವು ಎಲ್ಲಿಗೆ ಸಾಗಬೇಕು ಹಾಗೂ ಯಾವುದಕ್ಕೆ ಶ್ರಮಿಸಬೇಕಾಗಿದೆ?. ಶ್ರೀಸಾಮಾನ್ಯನಿಗೆ, ಭಾರತದ ರೈತರು ಹಾಗೂ ಕಾರ್ಮಿಕರಿಗೆ ಸ್ವಾತಂತ್ರ ಹಾಗೂ ಅವಕಾಶಗಳನ್ನು ತಂದುಕೊಡಲು, ಬಡತನ, ಅಜ್ಞಾನ ಹಾಗೂ ರೋಗರುಜಿನಗಳನ್ನು ಕೊನೆಗೊಳಿಸಲು, ಸಮೃದ್ಧಿದಾಯಕವಾದ, ಪ್ರಜಾತಾಂತ್ರಿಕ ರಾಷ್ಟ್ರ ನಿರ್ಮಿಸಲು, ಪ್ರತಿಯೊಬ್ಬ ಪುರುಷನಿಗೂ, ಮಹಿಳೆಗೂ ನ್ಯಾಯ ಹಾಗೂ ಪರಿಪೂರ್ಣತೆಯನ್ನು ಖಾತರಿಪಡಿಸುವಂತಹ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಂಸ್ಥೆಗಳನ್ನು ಸೃಷ್ಟಿಸಲು ನಾವು ಪರಿಶ್ರಮಪಡಬೇಕಿದೆ.
   ನಾವೆಲ್ಲರೂ ಈ ಮಹಾನ್ ರಾಷ್ಟ್ರದ ಪ್ರಜೆಗಳಾಗಿದ್ದೇವೆ. ನಾವು ತೀವ್ರ ಪ್ರಗತಿಯ ತಿರುವಿನಲ್ಲಿದ್ದೇವೆ. ನಾವು ಅದನ್ನು ಉನ್ನತ ಮಟ್ಟದೆಡೆಗೆ ಕೊಂಡೊಯ್ಯಬೇಕು. ನಾವು ಯಾವುದೇ ಧರ್ಮಕ್ಕೆ ಸೇರಿದವರಾದರೂ, ಸಮಾನ ಹಕ್ಕುಗಳನ್ನು, ಅವಕಾಶಗಳನ್ನು ಹಾಗೂ ಬಾಧ್ಯತೆಗಳನ್ನು ಹೊಂದಿರುವ ಭಾರತಾಂಬೆಯ ಮಕ್ಕಳಾಗಿದ್ದೇವೆ. ನಾವು ಕೋಮುವಾದವನ್ನು ಹಾಗೂ ಸಂಕುಚಿತ ಮನೋಭಾವವನ್ನು ಉತ್ತೇಜಿಸಕೂಡದು. ಚಿಂತನೆ ಹಾಗೂ ಕೃತಿಯಲ್ಲಿ ಸಂಕುಚಿತತೆಯನ್ನು ಪ್ರದರ್ಶಿಸುವ ಯಾವುದೇ ದೇಶವೂ ಮಹಾನ್ ಆಗಲು ಸಾಧ್ಯವಿಲ್ಲ.
ವಿಶ್ವದ ರಾಷ್ಟ್ರಗಳಿಗೆ ಹಾಗೂ ಜನತೆಗೆ ನಾನು ಶುಭಾಶಯಗಳನ್ನು ಕಳುಹಿಸೋಣ ಹಾಗೂ ಶಾಂತಿ, ಸ್ವಾತಂತ್ರ ಹಾಗೂ ಪ್ರಜಾತಂತ್ರವನ್ನು ಮುನ್ನಡೆಸಲು ಅವರೊಂದಿಗೆ ಸಹಕರಿಸುವುದಾಗಿ ನಾವಾಗಿಯೇ ಪ್ರತಿಜ್ಞೆಗೈಯೋಣ.
 ನಮ್ಮ ಪ್ರೀತಿಯ ಮಾತೃಭೂಮಿ, ಪ್ರಾಚೀನ,ಶಾಶ್ವತ ಹಾಗೂ ನಿತ್ಯನೂತನವಾದ ಭಾರತಕ್ಕೆ ಅತ್ಯಂತ ಗೌರವದೊಂದಿಗೆ ಶ್ರದ್ಧಾಂಜಲಿಯನ್ನು ಅರ್ಪಿಸೋಣ ಹಾಗೂ ನಾವೆಲ್ಲಾ ಜೊತೆಗೂಡಿ, ನವೋಲ್ಲಾಸದೊಂದಿಗೆ ಆಕೆಗೆ ಸೇವೆಯನ್ನು ಸಲ್ಲಿಸೋಣ.
ಜೈ ಹಿಂದ್
ಕೃಪೆ-ವಾರ್ತಾ ಭಾರತಿ 

No comments:

Post a Comment