Thursday, January 30, 2014

ಕನ್ನಡದಲ್ಲಿ ಕುರ್‌ಆನ್ ಅನುವಾದ

 
ಒಂದು ಕಾಲವಿತ್ತು. ಕುರ್‌ಆನ್‌ನ್ನು ಕನ್ನಡ ಭಾಷೆಯಲ್ಲಿ ಕಲ್ಪಿಸಿಕೊಳ್ಳಲು ಆ ಕಾಲದಲ್ಲಿ ಮುಸ್ಲಿಮರಿಗೆ ಸಾಧ್ಯವಿರಲಿಲ್ಲ. ಕುರ್‌ಆನ್‌ನ್ನು ಕನ್ನಡದಲ್ಲಿ ಅನುವಾದಿಸುವುದೇ, ಕನ್ನಡದಲ್ಲಿ ಓದುವುದೇ? ಎಂದು ಪ್ರಶ್ನಿಸುವ ಕಾಲ. ಆ ದಿನಗಳಲ್ಲಿ ಯಾರ ಕೈಯಲ್ಲಾದರೂ ಕನ್ನಡದಲ್ಲಿ ಅನುವಾದಗೊಂಡ ಕುರ್‌ಆನನ್ನು ನೋಡಿದರೆ ಅಸ್ಪೃಶ್ಯರಂತೆ ಮುಸ್ಲಿಮ್ ಸಮಾಜ ನೋಡುತ್ತಿತ್ತು. ನನ್ನ ಪಿಯುಸಿಯ ದಿನಗಳಲ್ಲಿ ಗ್ರಂಥಾಲಯವೊಂದರಲ್ಲಿ ನನಗೆ ಕನ್ನಡ ಕುರ್‌ಆನ್ ಸಿಕ್ಕಿತು. ಅದನ್ನು ನಾನು ಮನೆಗೆ ಕೊಂಡು ಹೋದೆ. ಮರುದಿನ ನೋಡಿದರೆ ನನ್ನ ತಂದೆಗೆ ದೂರು ಹೋಗಿತ್ತು ‘‘ನಿಮ್ಮ ಮಗ ಜಮಾತೆ ಇಸ್ಲಾಮ್ ಆಗುತ್ತಿದ್ದಾನೆ. ಎಚ್ಚರ’’ ಎಂದು. ಅಂತಹ ಸಂದರ್ಭದಲ್ಲಿ ಕೆಲವೇ ಕೆಲವು ಹಿರಿಯ ಮುಸ್ಲಿಮ್ ವಿದ್ವಾಂಸರು ಕನ್ನಡದಲ್ಲಿ ಕುರ್‌ಆನನ್ನು ತರಲು ಪ್ರಯತ್ನಿಸಿದರು. ಜಮಾಅತೆ ಇಸ್ಲಾಮ್ ಸಂಘಟನೆಯೂ ಕನ್ನಡ ಕುರ್‌ಆನ್ ಅನುವಾದದಲ್ಲಿ ಮುಂಚೂಣಿಯಲ್ಲಿ ನಿಂತಿತ್ತು. ಆದರೆ ಇವರು ಬಳಸಿದ ಕ್ಲಿಷ್ಟ ಕನ್ನಡ ಅಥವಾ ಬ್ರಾಹ್ಮಣ ಕನ್ನಡ ಸಂವನಕ್ಕೆ ಒಂದಿಷ್ಟು ತೊಡಕಾದುದು ಸತ್ಯ. ಆದರೂ ಕಾಲಾನಂತರ ಈ ಅನುವಾದದಲ್ಲಿ ಬೇರೆ ಬೇರೆ ಪ್ರಯತ್ನಗಳು ನಡೆಯುತ್ತಲೇ ಬಂದವು. ಕುರ್‌ಆನ್‌ನ ಕನ್ನಡಾನುವಾದವನ್ನು ವಿರೋಧಿಸುತ್ತಿದ್ದ ಕರಾವಳಿಯ ಇನ್ನಿತರ ಸುನ್ನಿ ಸಂಘಟನೆಗಳೂ ಕನ್ನಡದಲ್ಲಿ ಕುರ್‌ಆನ್ ಅನುವಾದವನ್ನು ಇತ್ತೀಚೆಗೆ ತಂದಿರುವುದು ಶ್ಲಾಘನೀಯ.
 ಕುರ್‌ಆನ್‌ನಲ್ಲಿ ನಾನು ಗಮನಿಸಿದ್ದು ಅದು ಕ್ರಿಯೆಗೆ ಹೆಚ್ಚು ಒತ್ತುಕೊಟ್ಟಿರುವುದು. ಈ ಮೂಲಕ ಕುರ್‌ಆನ್ ಉಳಿದೆಲ್ಲ ಧಾರ್ಮಿಕ ಗ್ರಂಥಗಳಿಗಿಂತ ಹೆಚ್ಚು ಲೌಕಿಕವಾಗಿದೆ ಎನ್ನುವುದು ನನ್ನ ವೈಯಕ್ತಿಕ ಅನ್ನಿಸಿಕೆ. ಮೋಕ್ಷಗಳ ಕುರಿತಂತೆ ಅರ್ಥವಾಗದ್ದನ್ನು ವಿವರಿಸುವುದಿಲ್ಲ. ಒಬ್ಬನಿಗೆ ಸ್ವರ್ಗ-ನರಕವನ್ನು ಈ ಲೋಕದ ವ್ಯವಹಾರಕ್ಕನುಗುಣವಾಗಿಯೇ ಕುರ್‌ಆನ್ ನಿರ್ದೇಶಿಸುತ್ತದೆ. ಕುರ್‌ಆನ್ ಒಬ್ಬ ಶ್ರೀಮಂತನಿಗೆ ದಾನದ ಮಹತ್ವವನ್ನು ಮಾತ್ರ ಹೇಳುವುದಿಲ್ಲ. ನೀನು ಕಡ್ಡಾಯವಾಗಿ ದಾನಮಾಡಬೇಕಾದ ಹಣ ಅಥವಾ ಸಂಪತ್ತಿನ ಪ್ರಮಾಣವೆಷ್ಟು ಎನ್ನುವುದನ್ನು ಹೇಳುತ್ತದೆ. ಆಸ್ತಿ ಪಾಲು ಮಾಡುವಾಗ ಹೆಣ್ಣೆಗೆಷ್ಟು, ಗಂಡಿಗೆಷ್ಟು ಎನ್ನುವುದನ್ನು ವಿವರಿಸುತ್ತದೆ. ಮದುವೆಯ ಸಂದರ್ಭದಲ್ಲಿ ಹೆಣ್ಣಿಗೆ ನೀಡಬೇಕಾದ ಮೆಹರ್‌ನ್ನು ವಿವರಿಸುತ್ತದೆ. ಯಾವುದನ್ನು ತಿನ್ನಬೇಕು, ತಿನ್ನಬಾರದು ಎನ್ನುವುದನ್ನು ಕುರ್‌ಆನ್ ತಿಳಿಸುತ್ತದೆ. ಅನಾಥ ಬಾಲಕನ ಆಸ್ತಿಯ ಹೊಣೆಗಾರಿಕೆಯನ್ನು ಯಾರು ತೆಗೆದುಕೊಳ್ಳಬೇಕು, ಅದನ್ನು ಯಾವಾಗ ಆತನಿಗೆ ಮರಳಿಸಬೇಕು ಎಂಬ ಅಪ್ಪಟ ಲೌಕಿಕ ಸಂಗತಿಗಳೇ ಕುರ್‌ಆನ್‌ನ ಉದ್ದಕ್ಕೂ ಇವೆ. ಅವೆಲ್ಲವೂ ನ್ಯಾಯ ಮತ್ತು ಸಮಾನತೆಯ ತಳಹದಿಯ ಮೇಲೆ ನಿಂತಿವೆ. ಮತ್ತು ಇದನ್ನು ಮೀರಿದವರಿಗೆ ನರಕವನ್ನು ನಿರ್ದೇಶಿಸುತ್ತದೆ. ಆದುದರಿಂದ ಕುರ್‌ಆನ್ ಪ್ರತಿಪಾದಿಸುವ ಸ್ವರ್ಗ, ನರಕ ನೇರವಾಗಿ ಲೌಕಿಕತೆಯೊಂದಿಗೆ ಸಂಬಂಧವಿರುವಂತಹದು. ಕಾಡಿನಲ್ಲಿ ಕೂತು ತಪ್ಪಸ್ಸು ಮಾಡುವುದನ್ನು, ಸನ್ಯಾಸಿಯಾಗುವುದನ್ನು ಕುರ್‌ಆನ್ ಎಲ್ಲೂ ವೈಭವೀಕರಿಸುವುದಿಲ್ಲ. ಮದುವೆ, ಸಂಸಾರ, ವ್ಯಾಪಾರ, ದುಡಿಮೆ ಇಂತಹ ಲೌಕಿಕ ಅಂಶಗಳಿಗೆ ಒತ್ತುಕೊಟ್ಟು ಮನುಷ್ಯನಿಗೆ ಪೂರಕವಾಗಿ ಕುರ್‌ಆನ್ ರಚನೆಗೊಂಡಿದೆ. ಕಾಯಕಕ್ಕೆ ಕುರ್‌ಆನ್ ಹೆಚ್ಚು ಆದ್ಯತೆ ನೀಡಿದೆ. ಮಸೀದಿಯಲ್ಲೇ ಹಗಲು ರಾತ್ರಿ ಇರುವುದನ್ನು ಕುರ್‌ಆನ್ ನಿರ್ದೇಶಿಸುವುದಿಲ್ಲ. ಪ್ರಾರ್ಥನೆ ಮುಗಿಸಿ ನಿಮ್ಮ ನಿಮ್ಮ ಬದುಕನ್ನು
ರಸಿ ಹೊರಗೆ ನಡೆಯಿರಿ ಎಂದು ಆದೇಶಿಸುತ್ತದೆ. ಪ್ರತಿ ದಿನ ಉಪವಾಸ ಹಿಡಿಯುವುದನ್ನು ಕುರ್‌ಆನ್ ನಿರಾಕರಿಸುತ್ತದೆ. ಉಪವಾಸ ಮಾಡಲೇಬೇಕಾದರೆ ಅದರ ನಡುವೆ ಅಂತರ ಇರಲಿ ಎಂದು ಹೇಳುತ್ತದೆ(ರಮಝಾನ್ ತಿಂಗಳ ಹೊರತಾಗಿ). ಅಲ್‌ಮಾವೂನ್ ಎನ್ನುವ ಕೆಲವೇ ಸಾಲುಗಳ ಪುಟ್ಟ ಅಧ್ಯಾಯ ‘ನಮಾಝ್ ಮಾಡುವನನ್ನೇ ಶಪಿಸುತ್ತದೆ. ಬಡವರಿಗೆ, ಅನಾಥರಿಗೆ ಏನನ್ನೂ ನೀಡದೆ ತೋರಿಕೆಯ ನಮಾಝ್ ಮಾಡುವವನೆಗೆ ಶಾಪವಿದೆ’ ಎಂದು ಕುರ್‌ಆನ್ ಘೋಷಿಸುತ್ತದೆ.ಈ ನಿಟ್ಟಿನಲ್ಲಿ ೧೨ನೆ ಶತಮಾನದ ಕಾಯಕವೇ ಕೈಲಾಸ ತತ್ವದೊಂದಿಗೆ ವೀರ ಶೈವ ಧರ್ಮ ಮತ್ತು ಇಸ್ಲಾಂ ಹೆಚ್ಚು ಹತ್ತಿರದಲ್ಲಿದೆ ಅನ್ನಿಸುತ್ತದೆ. ಬಸವಣ್ಣ ಏಕದೇವ ತತ್ವದೊಂದಿಗೆ ನಂಬಿಕೆ ಹೊಂದಿದ್ದ. ಕಲ್ಲಿಗೆ ಹಾಲೆರಯೂದನ್ನು ವಿರೋಧಿಸಿದ್ದ. ಬಸವಣ್ಣನ ಅನುಯಾಯಿಗಳನ್ನು ಶರಣರು ಎಂದು ಕರೆಯುತ್ತಿದ್ದರು. ಮುಸ್ಲಿಮರು ಎಂದರೆ ಶರಣರು ಎಂದೇ ಅರ್ಥ. (ಮುಸ್ಲಿಂ ಎಂದರೆ ಅರ್ಥ ಶರಣ)
   
 ಕುರ್‌ಆನ್‌ನ ಅತಿ ದೊಡ್ಡ ಹೆಗ್ಗಳಿಕೆಯೆಂದರೆ ಅದು ಸರಳ ಭಾಷೆಯಲ್ಲಿರುವುದು. ಮತ್ತು ಅದು ಪ್ರಜ್ಞಾಪೂರ್ವಕವಾಗಿಯೇ ನಡೆದಿದೆ ಎನ್ನುವುದನ್ನು ಸ್ವತಃ ಕುರ್‌ಆನ್‌ನಲ್ಲೇ ವಿವರಿಸಲಾಗುತ್ತದೆ. ಅಂದರೆ ಜನರಿಗೆ ತಲುಪಬೇಕು ಎನ್ನುವ ಸ್ಪಷ್ಟ ಉದ್ದೇಶದಿಂದಲೇ ಆ ಸರಳ ಭಾಷೆ ಮತ್ತು ನಿರೂಪಣೆಯನ್ನು ಬಳಸಲಾಗಿದೆ. ಅಂದರೆ ಜನರಭಾಷೆಯಲ್ಲಿ ಕುರ್‌ಆನ್ ಇದೆ. ಎಲ್ಲೂ ಭಾಷೆಯ ವೈಭವೀಕರಣವಿಲ್ಲ. ಆದರೆ, ಈ ಸರಳತೆಯ ಒಳಗೇ ಅರ್ಥಗಳು ಹಿಗ್ಗುವ ಗುಣಗಳನ್ನೂ ಪಡೆದಿವೆ. ಆದುದರಿಂದಲೇ, ಕುರ್‌ಆನ್‌ನ ಅನುವಾದವೆಂದರೆ, ತಂತಿಯ ಮೇಲೆ ನಡೆದಂತೆ. ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವ ಅರೇಬಿಕ್ ತನ್ನ ಗರ್ಭದೊಳಗೆ ಅಡಗಿಸಿಕೊಂಡಿರುವ ಅರ್ಥ ವೈಶಾಲ್ಯತೆಯನ್ನು, ಇನ್ನೊಂದೆ ಭಾಷೆಗೆ ತರುವುದೆಂದರೆ ಸಣ್ಣ ವಿಷಯವಲ್ಲ. ಆದುದರಿಂದ ಯಾವುದೇ ಕುರ್‌ಆನ್ ಅನುವಾದಗಳನ್ನೂ ನಾವು ಪರಿಪೂರ್ಣ ಎಂದು ಕರೆಯುವಂತಿಲ್ಲ. ಕನ್ನಡದಲ್ಲಿ ಈ ಕಾರಣಕ್ಕೇ ಇರಬಹುದು. ಹಲವು ಕುರ್‌ಆನ್ ಅನುವಾದಗಳು ಬಂದಿವೆ. ಇವುಗಳಲ್ಲಿ, ಮುಖ್ಯವಾದುದು ಇತ್ತೀಚೆಗೆ ಮಾಧ್ಯಮ ಪ್ರಕಾಶನ ಬೆಂಗಳೂರು ಹೊರತಂದಿರುವ, ಹಿರಿಯ ಪತ್ರಕರ್ತ, ಲೇಖಕ ಅಬ್ದುಸ್ಸಲಾಮ್ ಪುತ್ತಿಗೆ ಅನುವಾದಿಸಿರುವ ‘ಕನ್ನಡದಲ್ಲಿ ಕುರ್‌ಆನ್ ಅನುವಾದ’. ಬಹುಶಃ ಅತ್ಯಂತ ಸರಳ ಮತ್ತು ಸುಂದರ ಕಸ್ತೂರಿ ಕನ್ನಡದಲ್ಲಿ ಬಂದ ಅನುವಾದ ಇದೇ ಮೊದಲಿರಬೇಕು. ಎಲ್ಲೂ ವಾಕ್ಯಗಳನ್ನು ಶಬ್ದಗಳ ಮೂಲಕ ವೈಭವೀಕರಿಸುವ ಹಟವಿಲ್ಲದೆ, ಒಂದು ಪುಟ್ಟ ಮಗುವಿಗೆ ಹಾಲುಣಿಸುವಂತೆ, ಇಲ್ಲಿ ಅನುವಾದವನ್ನು ಓದುಗರಿಗೆ ಉಣಿಸುತ್ತಾರೆ. ಈ ಕಾರಣಕ್ಕಾಗಿಯೇ ಕಿರಿಯರಿಗೂ, ಹಿರಿಯರಿಗೂ ಅನುವಾದ ಇಷ್ಟವಾಗಬಹುದು.
ಹಾಗೆಯೇ ಕುರ್‌ಆನ್‌ಗೆ ಸಂಬಂಧ ಪಟ್ಟ ಮಾಹಿತಿಗಳ ಪಟ್ಟಿಯೊಂದು ಕೃತಿಯ ಕೊನೆಯಲ್ಲಿದೆ. ಇದು ಲೇಖಕರ ಅಪಾರ ಅಧ್ಯಯನಕ್ಕೆ ಸಾಕ್ಷಿಯಾಗಿದೆ. ಈ ಕುರ್‌ಆನ್ ಅನುವಾದ, ಇಸ್ಲಾಮನ್ನು ಕನ್ನಡದ ನೆಲಕ್ಕೆ ಇನ್ನಷ್ಟು ಹತ್ತಿರವಾಗಿಸಿದೆ.

3 comments:

  1. ಒಂದು ರೀತಿಯಲ್ಲಿ ಕುರ್ ಆನ್ ಅನ್ನು ‘ಸಮಾಜ ಸಂಹಿತೆ’ ಎನ್ನಬಹುದೇನೊ? ಕುರ್ ಆನ್ ಪದದ ಅರ್ಥವನ್ನು ತಿಳಿಸಬಹುದೆ?

    ReplyDelete
  2. ಬಶೀರ್ ಸರ್ ಬರಹ ಚನ್ನಾಗಿದೆ. ನಿಮ್ಮ ಲೇಖನಿಯಿಅಂ ಕುರ್ಆನ್ ಕುರಿತ ಮತ್ತಷ್ಟು

    ReplyDelete