Tuesday, December 24, 2013

ತೆಂಗಿನ ಕಾಯಿ ಮತ್ತು ಇತರ ಕತೆಗಳು .

ಆಸ್ವಾದ
ಚಿಕನ್ ತಂದೂರಿ ತಿನ್ನುತ್ತಾ ಅವನು ಬರೆದ ‘ಸಸ್ಯಾಹಾರದ ಮಹತ್ವ’ ಕೃತಿಯನ್ನು ಜನರು ಮಟನ್ ಬಿರಿಯಾನಿ ತಿನ್ನುತ್ತಾ ಓದಿ ಆಸ್ವಾದಿಸಿದರು.

ಸ್ಫೋಟ
ಮನೆಯ ಸ್ಟೌ ಬ್ಲಾಸ್ಟ್ ಆಯಿತು. ಆಕೆ ಸುಟ್ಟ ಗಾಯಗಳೊಂದಿಗೆ ಸತ್ತಳು.
ಪತ್ರಿಕೆಗಳು ಬರೆದವು.
ಸ್ಟೌ ಬ್ಲಾಸ್ಟ್ ಆಗುವ ಮೊದಲೇ ಅವಳ ಹೃದಯ ಛಿದ್ರವಾಗಿದ್ದ ಕತೆ ಅವಳೊಂದಿಗೇ ಮುಕ್ತಾಯವಾಯಿತು.

ತೆಂಗಿನ ಕಾಯಿ
ಭಯಾನಕ ನೆರೆ. ಅವನ ಮನೆ ಕೊಚ್ಚಿ ಹೋಗುತ್ತಿತ್ತು. ಅದರಾಸೆ ಬಿಟ್ಟು ತೇಲಿ ಬರುತ್ತಿರುವ ತೆಂಗಿನಕಾಯಿಗಾಗಿ ಅವನು ಈಜುತ್ತಿದ್ದ.

ಬಿಡುಗಡೆ
ಒಬ್ಬ ಕೊಲೆ ಮಾಡಿದ. ಆದರೆ ನ್ಯಾಯವಾದಿಗಳ ಜಾಣಕ್ಷತೆಯಿಂದ ಬಿಡುಗಡೆಗೊಂಡ.
‘‘ನಾನು ಬಿಡುಗಡೆಗೊಂಡೆ’’ ಅಪರಾಧಿ ಹೇಳಿದ.
‘‘ನೀನು ಬಿಡುಗಡೆಗೊಂಡಿದ್ದು ನ್ಯಾಯಾಲಯದಿಂದ. ಆದರೆ ನಿನ್ನಿಂದ ಅಲ್ಲ’’ ಸಂತ ಉತ್ತರಿಸಿದ.

ಸಮಯ
ಗಡಿಯಾರ ಬಿದ್ದು ಪುಡಿಯಾಯಿತು.
ಅವನು ವ್ಯಥೆ ಪಟ್ಟ.
ಆದರೆ ಅದೆಷ್ಟೋ ಸಮಯವನ್ನು ಅವನು ಕೈಯಾರೆ ಕೊಂದಿದ್ದ.
ಅದಕ್ಕಾಗಿ ಅವನು ಎಂದೂ ಪಶ್ಚಾತ್ತಾಪ ಪಟ್ಟಿರಲಿಲ್ಲ.

ಹೆಸರು
ವೇಶ್ಯೆಯೊಬ್ಬಳ ಜೊತೆಗೆ ಯಾರೋ ಹೆಸರು ಕೇಳಿದರು.
ಆಕೆ ವಿಷಾದದಿಂದ ಹೇಳಿದಳು ‘‘ನನಗೆ ಹೆಸರಿಲ್ಲ. ನಿನಗೆ ಯಾವ ಹೆಸರು ಚಂದವೋ ಅದನ್ನೇ ನನಗೆ ಇಟ್ಟುಕೋ’’

2 comments: