Thursday, December 5, 2013

ಕಣ್ಣುಗಳೆಡೆಗೆ ಕಣ್ಣಾಯಿಸೋಣ...

ಕಣ್ಣು ಇರುವುದು ಯಾಕೆ? ಇದು ಹೊರಗಿನದ್ದನ್ನು ನೋಡುವುದಕ್ಕೆ ಮಾತ್ರವಲ್ಲ. ನಮ್ಮೆಳಗನ್ನು ನೋಡುವುದಕ್ಕೂ ಸಹಾಯ ಮಾಡುತ್ತದೆ. ನಮ್ಮೆಳಗನ್ನು ನೋಡುವುದು ಎಂದಾಕ್ಷಣ ಅದು ಆಧ್ಯಾತ್ಮ ಅರ್ಥ ಪಡೆಯುತ್ತದೆ. ಆದರೆ ಇದಕ್ಕೆ ಲೌಕಿಕ ಅರ್ಥವೂ ಇದೆ.

 ‘ದೈಹಿಕ ಕಾಯಿಲೆಗಳು ಮತ್ತು ಕಣ್ಣು’ ಡಾ. ಎಚ್. ಎಸ್. ಮೋಹನ್ ಬರೆದ ಕೃತಿ. ಕಣ್ಣು ಮತ್ತು ದೇಹಕ್ಕಿರುವ ಸಂಬಂಧ, ಹಾಗೆಯೇ ನಮ್ಮ ದೇಹದ ಕಾಯಿಲೆಗಳಿಗೆ ಸುಲಭದಲ್ಲಿ ಈಡಾಗುವ ಕಣ್ಣಿನ ಕುರಿತಂತೆ ಆರೋಗ್ಯಕರವಾದ ಅಪಾರ ಮಾಹಿತಿಗಳು ಈ ಕೃತಿಯಲ್ಲಿವೆ. ಕಣ್ಣು ಎನ್ನುವುದು ದೇವರ ಅತಿ ಅಮೂಲ್ಯವಾದ ಕೊಡುಗೆ. ನಮ್ಮ ದೇಹ ಕುಸಿದಾಗ, ಅನಾರೋಗ್ಯಕ್ಕೀಡಾದಾಗ ಕಣ್ಣುಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎನ್ನುವುದನ್ನು ಲೇಖಕರು ಬರೆಯುತ್ತಾರೆ. ಕಣ್ಣಿನ ಏರುಪೇರುಗಳ ಮೂಲಕವೇ ದೇಹದ ಕಾಯಿಲೆಗಳನ್ನು ಹೇಗೆ ಪತ್ತೆ ಮಾಡಬಹುದು ಎನ್ನುವುದನ್ನು ಕುತೂಹಲಕರವಾಗಿ ಮಂಡಿಸಿದ್ದಾರೆ ಡಾ. ಮೋಹನ್ ಅವರು. ಕಣ್ಣಿನ ಮೂಲಕ ನಾವು ಬಹಳಷ್ಟನ್ನು ನೋಡಿದ್ದೇವೆ. ಕಣ್ಣುಗಳಿಲ್ಲದ ನಾವುಗಳನ್ನು ನಮಗೆ ಕಲ್ಪಿಸಿಕೊಳ್ಳಲು ಸಾಧ್ಯವೂ ಇಲ್ಲ. ಹೀಗಿರುವಾಗ, ನಮ್ಮ ಬದುಕನ್ನು ಅರ್ಥಪೂರ್ಣಗೊಳಿಸಿದ ಕಣ್ಣಿನ ಕಡೆಗೊಮ್ಮೆ ನೋಡುವುದು, ಅದರ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ಈ ಕಾರಣಕ್ಕಾಗಿ ಈ ಕೃತಿಯನ್ನು ನೀವೊಮ್ಮೆ ಓದಲೇ ಬೇಕು. ನಿಮ್ಮ ಕಣ್ಣಿನ ಕುರಿತ ಕಾಳಜಿಯ ಜೊತೆಗೇ ದೈಹಿಕ ಆರೋಗ್ಯದ ಕುರಿತ ಕಾಳಜಿಯನ್ನೂ ಈ ಕೃತಿ ಹೊಂದಿದೆ. ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಈ ಕೃತಿಯ ಮುಖಬೆಲೆ 90 ರೂಪಾಯಿ. ಆದರೆ ಕಣ್ಣಿನ ಬೆಲೆಗೆ ಹೋಲಿಸಿದರೆ ಈ ಬೆಲೆ ನಗಣ್ಯ.

No comments:

Post a Comment