Friday, December 13, 2013

ಆಯಿಶಾಳಿಗೆ ಉಗ್ರರೊಂದಿಗೆ ಸಂಬಂಧವಿಲ್ಲವಂತೆ!!


 
ಸಾಧಾರಣವಾಗಿ ಒಬ್ಬ ನಿರಪರಾಧಿಯನ್ನು ಪೊಲೀಸ್ ಅಧಿಕಾರಿ ಬಂಧಿಸಿರುವುದು ಬೆಳಕಿಗೆ ಬಂದರೆ, ಅಧಿಕಾರಿಯನ್ನು ಇಲಾಖೆ ಅಮಾನತು ಮಾಡಬಹುದು. ಆತನ ಮೇಲೆ ಬೇರೆ ರೀತಿಯಲ್ಲೂ ಕ್ರಮ ತೆಗೆದುಕೊಳ್ಳುವ ವ್ಯವಸ್ಥೆಯಿದೆ. ಒಬ್ಬ ಗ್ರಾಮ ಕರಣಿಕ ತಪ್ಪಾಗಿ ಒಂದು ಆರ್ಟಿಸಿ ತೆಗೆದುಕೊಟ್ಟಿರುವುದು ಬೆಳಕಿಗೆ ಬಂದರೆ ಅವನನ್ನು ವಜಾ ಮಾಡಲಾಗುತ್ತದೆ. ಎಲ್ಲ ವ್ಯವಸ್ಥೆಯಲ್ಲೂ ತಪ್ಪು ಮಾಡಿದವರಿಗೆ ತಕ್ಷಣ ಶಿಕ್ಷೆಯಿದೆ. ಆದರೆ ಮಾಧ್ಯಮ ಗಳಲ್ಲಿ ಮಾತ್ರ, ವರದಿಗಾರರು, ಸಂಪಾದಕರು ತಪ್ಪು ಮಾಹಿತಿಗಳನ್ನು ನೀಡುವುದು, ವದಂತಿಗಳನ್ನು ಹರಡುವುದು ತಮ್ಮ ಕರ್ತವ್ಯದ ಭಾಗ ಎಂದೇ ತಿಳಿದುಕೊಂಡು ಬರುತ್ತಿದ್ದಾರೆ. 
ಉದ್ದೇಶಪೂರ್ವಕ ವಾಗಿ ಸುಳ್ಳು ಕಂತೆಗಳನ್ನು ವರದಿಯ ರೂಪದಲ್ಲಿ ಕೊಟ್ಟ ವರದಿಗಾರನ ಮೇಲೆ ಕ್ರಮ ತೆಗೆದು ಕೊಳ್ಳುವುದಿರಲಿ, ಹಿಂದೆ ಮಾಡಿದ ವರದಿಗಾಗಿ ಸಣ್ಣದೊಂದು ಕ್ಷಮೆಯಾಚನೆ ಮಾಡುವ ಔದಾರ್ಯವನ್ನೂ ಪತ್ರಿಕೆಗಳು ಮಾಡುವುದಿಲ್ಲ. ಪತ್ರಿಕೆ ಉದ್ಯಮ ಮತ್ತು ಕೋಮುವಾದಿಯಾದಂತೆ ಅದು ಹೆಚ್ಚು ಹೆಚ್ಚು ಕ್ರೂರವಾಗುತ್ತಾ ಹೋಗುತ್ತಿದೆ. ಅದರ ಎದೆ ಕಲ್ಲಾಗಿದೆ. ನಾಚಿಕೆಯನ್ನಂತೂ ಅದು ಬಿಟ್ಟೇ ಬಿಟ್ಟಿದೆ. 
ಆಯಿಶಾ ಹವಾಲಾ ಪ್ರಕರಣಕ್ಕೆ ಸಂಬಂಧಿಸಿ ದಂತೆ ಇದನ್ನು ಬರೆಯಬೇಕಾಯಿತು. ಮೋದಿ ಸಮಾವೇಶದ ದಿನ ಪಾಟ್ನಾ ದಲ್ಲಿ ನಿಗೂಢ ರೀತಿಯಲ್ಲಿ ಸರಣಿ ಸ್ಫೋಟಗಳು ನಡೆದವು. ಇದರ ಬೆನ್ನಿಗೇ ಒಬ್ಬ ಬಿಜೆಪಿ ಕಾರ್ಯಕರ್ತನನ್ನು ಬಂಧಿಸಲಾಯಿತು. ಆದರೆ ಮಾಧ್ಯಮ ಗಳು ಇದನ್ನು ಮುಚ್ಚಿ ಹಾಕಿದವು. ಇದಾದ ಬಳಿಕ ಮೂವರು ತರುಣರನ್ನು ಬಂಧಿಸ ಲಾಯಿತು. ಅವರ ಹೆಸರು ಮುಸ್ಲಿಮರದಲ್ಲ ಎನ್ನುವ ಒಂದೇ ಕಾರಣಕ್ಕೆ ಮಾಧ್ಯಮಗಳು ಅವರನ್ನು ರಕ್ಷಿಸಿದವು. ಅಮಾಯಕರೆಂದು ಕರೆದವು.
ಆದರೆ ಯಾವಾಗ ಬಂಧನ ಮಂಗಳೂರಿನ ಆಯಿಶಾ ಕಡೆಗೆ ತಿರುಗಿತೋ, ಆಯಿಶಾಳಿಗೆ ಅಂತಾರಾಷ್ಟ್ರೀಯ ಉಗ್ರರೂ ಸೇರಿದಂತೆ ಎಲ್ಲ ಸಂಬಂಧವನ್ನು ಕಟ್ಟಿ ಮಾಧ್ಯಮಗಳು ಪುಂಖಾನು ಪುಂಖವಾಗಿ ವರದಿ ಮಾಡತೊಡಗಿದವು. ಕರಾವಳಿಯಲ್ಲಿ ಒಂದು ದಿನಪತ್ರಿಕೆಯಂತೂ ಮುಖಪುಟದಲ್ಲಿ ಎಂಟು ಕಾಲಂಗಳಲ್ಲಿ ಎರಡು ಸಾಲುಗಳಲ್ಲಿ ಬೃಹತ್ ತಲೆಬರಹವೊಂದನ್ನು ಬರೆದು, ಆಯಿಶಾಳಿಗೂ ಪಾಟ್ನಾ ಸ್ಫೋಟಕ್ಕೂ ಸಂಬಂಧವನ್ನು ಕಲ್ಪಿಸಿತು. ಆಕೆ ಹವಾಲಾ ಮೂಲಕ ಉಗ್ರರಿಗೆ ಹಣ ಪೂರೈಸುತ್ತಿದ್ದಳು ಎಂದು ಬರೆಯಿತು. ಅಷ್ಟೇ ಅಲ್ಲ, ಆಕೆ ಹಣ ಪೂರೈಸಿದ ಇಬ್ಬರ ಕುರಿತಂತೆ ಇನ್ನೇನೇನೋ ಬರೆದು, ಅವರ ಚಾರಿತ್ರವನ್ನು ಬೀದಿಗೆ ಹಾಕಿತು. ಒಬ್ಬ ಕ್ಯಾನ್ಸರ್ ರೋಗಿಯ ತಲೆಗೂ ಉಗ್ರನ ಪಟ್ಟವನ್ನು ಕಟ್ಟಿತು. ಅವರನ್ನು ಅನಗತ್ಯವಾಗಿ ಪಾಟ್ನಾಕ್ಕೆ ಒಯ್ಯ ಲಾಯಿತು. ಅದರಿಂದ ಆಘಾತಗೊಂಡು ಆತನ ಸೋದರ ರೈಲಿನಲ್ಲೇ ಮೃತಪಟ್ಟರು. ಕ್ಯಾನ್ಸರ್ ರೋಗಿಯ ಮಕ್ಕಳು ಶಾಲೆ ತೊರೆಯಬೇಕಾಯಿತು. ಗರ್ಭಿಣಿ ಪತ್ನಿ ಆಘಾತದಿಂದ ಆಸ್ಪತ್ರೆ ಸೇರಬೇಕಾ ಯಿತು. ಇಡೀ ಕುಟುಂಬ ಜರ್ಝರಿತವಾಯಿತು. ಆಯಿಶಾ ಎನ್ನುವ ತರುಣಿಯ ಕುರಿತಂತೆ ಪುಂಖಾನುಪುಂಖವಾಗಿ ಕತೆಗಳನ್ನು ಹೆಣೆಯ ಲಾಯಿತು. ಯಾಸೀನ್ ಭಟ್ಕಳನಿಗೂ ಆಯಿಶಾ ರಿಗೂ ಸಂಬಂಧ ಇದೆ ಎಂದೂ ವರದಿ ಮಾಡಿ ದವು. ಆದರೆ ಹೀಗೆಲ್ಲ ವರದಿ ಮಾಡಿದ ಪತ್ರಿಕೆ, ಇಂದು ಮುಖಪುಟದಲ್ಲಿ, ಕೆಳಗಡೆ ಸಣ್ಣದಾಗಿಆಯಿಶಾಳಿಗೂ ಉಗ್ರರಿಗೂ ಯಾವುದೆ ಸಂಬಂಧ ಇಲ್ಲಎಂಬ ವರದಿಯೊಂದನ್ನು ಬರೆದು ಕೈ ತೊಳೆದುಕೊಂಡಿದೆ.ಹಾಗಾದರೆ ತಮ್ಮ ಪತ್ರಿಕೆಯ ಮುಖಪುಟದಲ್ಲಿ ಪುಂಖಾನುಪುಂಖವಾಗಿ ಆಕೆಗೂ ಉಗ್ರರಿಗೂ ಇರುವ ವಿವಿಧ ನಂಟಿನ ಕುರಿತಂತೆ ವರದಿಗಳು ಬಂತಲ್ಲ, ವಿವರ ನಿಮಗೆ ಎಲ್ಲಿಂದ ಸಿಕ್ಕಿತು? ಅದನ್ನು ವರದಿ ಮಾಡಿದ ವರದಿಗಾರ ಯಾರು? ಅದಕ್ಕೆ ಜವಾಬ್ದಾರಿ ಯಾರು? ವದಂತಿಗಳನ್ನು ಸುದ್ದಿಯೆಂದು ಪ್ರಕಟ ಮಾಡಿದ ರಲ್ಲ, ಈಗ ತಪ್ಪು ವರದಿ ಮಾಡಿದ ಪತ್ರಕರ್ತನ ವಿರುದ್ಧ ಏನು ಕ್ರಮ ತೆಗೆದುಕೊಂಡಿರಿ? ತಪ್ಪು ವರದಿಗಳು ಒಂದು ಕುಟುಂಬವನ್ನು ಸರ್ವನಾಶ ಮಾಡಿದೆ. ಒಂದು ಜೀವವನ್ನು ಕೊಂದು ಹಾಕಿದೆ. ಮಕ್ಕಳನ್ನು ಶಾಲೆ ತೊರೆಯುವಂತೆ ಮಾಡಿದೆ. ಇಷ್ಟೆಲ್ಲ ಅನಾಹುತ ನಡೆಯಿತಲ್ಲ, ಇದನ್ನು ಹೇಗೆ ತುಂಬಿ ಕೊಡುತ್ತೀರಿ? ಹವಾಲಾ ಎನ್ನುವುದು ಉರುಳು ಹಾಕಿದಂತೆ ತಪ್ಪಿಸಿಕೊಳ್ಳುವ ಒಂದು ಅವ್ಯವಹಾರ. ಇಲ್ಲಿ ಆಯಿಶಾಳಿಗೆ ಸಿಗುವುದು ಸಣ್ಣ ಕಮಿಶನ್ ಮಾತ್ರ. ಇದರಿಂದ ಕೋಟಿ ಕೋಟಿ ಉಳಿತಾಯ ಮಾಡುವವರು ಭಾರೀ ಶ್ರೀಮಂತರು. ಇಂದು ಆಯಿಶಾ ಅಪರಾಧಿ ಹೌದು. ಹಾಗೆಯೇ ಅವಳಿಂದ ಹಣ ಪಡೆದುಕೊಂಡ ಎಲ್ಲ ಉದ್ಯಮಿ ಗಳೂ ಅಪರಾಧಿಗಳೇ.ಗುಜರಾತ್ ಸೇರಿದಂತೆ ಹಲವು ಉದ್ಯಮಿಗಳಿಗೆ ಇವರು ಹವಾಲಾ ಹಣ ಪೂರೈಸಿದ್ದಾರೆ. ಈಕೆಯಿಂದ ಪ್ರಯೋಜನ ಪಡೆದಿರುವುದು ಕೇವಲ ಮುಸ್ಲಿಮರಷ್ಟೇ ಅಲ್ಲ. ಗುಜರಾತಿನ ಮಾರ್ವಾಡಿಗಳಿಗೂ ಈಕೆಯಿಂದ ಹಣ ಪೂರೈಕೆಯಾಗಿದೆ. ಒಂದು ಕಾಲದಲ್ಲಿ ಅಂದಿನ ಗೃಹ ಸಚಿವ ಎಲ್.ಕೆ.ಅಡ್ವಾಣಿ ಮೇಲೆಯೂ ಹವಾಲಾ ಆರೋಪ ಬಂದಿರುವು ದನ್ನು ನಾವು ನೆನಪಿನಲ್ಲಿಡಬೇಕು. ಹೀಗಿರುವಾಗ ಹವಾಲಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸ ಲ್ಪಟ್ಟ ಆಯಿಶಾಳ ತಲೆಗೆ ಪಾಟ್ನಾ ಸ್ಫೋಟದ ಕಳಂಕವನ್ನು ಯಾಕೆ ಕಟ್ಟಲಾಯಿತು.ಎನ್ಐಎ ಮಾಡಬೇಕಾದ ತನಿಖೆಯನ್ನು ಏಕಾಏಕಿ ಪೊಲೀಸರು ಮಂಗಳೂರಿಗೆ ಬಂದು ಯಾಕೆ ವಿಚಾರಣೆ ನಡೆಸತೊಡಗಿದರು. ಆಕೆಯ ತಲೆಗೆ ಉಗ್ರರ ಪಟ್ಟವನ್ನು ಕಟ್ಟಿ ಆಕೆಯನ್ನು ಇನ್ನಿತರರನ್ನು ಪಾಟ್ನಾಕ್ಕೆ ಯಾಕೆ ಹೊತ್ತೊಯ್ಯಲಾಯಿತು? ಉತ್ತರ ಸ್ಪಷ್ಟ. ಕೇವಲ ರಾಜಕೀಯ ಕಾರಣಕ್ಕಾಗಿ ಮಾತ್ರ. ಪಾಟ್ನಾದಲ್ಲಿ ನಡೆದ ಸರಣಿ ಸ್ಫೋಟಕ್ಕೂ ಮಂಗಳೂರಿಗೂ ನಂಟು ಕಲ್ಪಿಸುವುದು ಮೋದಿ ನೇತೃತ್ವದ ಬಿಜೆಪಿಗೆ ಅತ್ಯಗತ್ಯವಾಗಿತ್ತು.

ಪಾಟ್ನಾದ ಬಳಿಕ ಮೋದಿಯ ಸಮಾವೇಶ ಕರ್ನಾಟಕದಲ್ಲಿ ನಡೆಯುವುದಿತ್ತು. .17ರಂದು ರಾಜ್ಯದಲ್ಲಿ ನಡೆದ ಮೋದಿಯ ಸಮಾವೇಶಕ್ಕೆ ಪ್ರಚಾರದ ರೂಪದಲ್ಲಿ ಪಾಟ್ನಾ ಸ್ಫೋಟಕ್ಕೂ ಮಂಗಳೂರಿಗೂ ನಂಟು ಕಲ್ಪಿಸಲಾಗಿತ್ತು. ಪತ್ರಿಕೆಗಳೆಲ್ಲ ಮೂಲಕ ಮೋದಿಯನ್ನು ಹುತಾತ್ಮ ಮಾಡಲು ಹೊರಟಿ ದ್ದವು.
ಹವಾಲ ಎನ್ನುವ ಹಣದ ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣವನ್ನು ಅನ್ಯಾಯವಾಗಿ ಪಾಟ್ನಾ ಸ್ಫೋಟಕ್ಕೆ ನಂಟು ಕಲ್ಪಿಸಿ, ಕರಾವಳಿ ಸೇರಿದಂತೆ ಇಡೀ ಕರ್ನಾಟಕದಲ್ಲಿ ತಲ್ಲಣವನ್ನು ಸೃಷ್ಟಿಸಲಾಯಿತು. ಮೋದಿಯ ರಾಜಕೀಯ ಸಮಾವೇಶದ ಬಲಿಪಶುಗಳಾಗಿ ಆಯಿಶಾ, ಝಬೇರ್ ಮತ್ತು ಇನ್ನಿತರ ಮೂವರನ್ನು ಬಳಸಲಾಯಿತು. ಮೋದಿಯ ಸಮಾವೇಶ ಯಶಸ್ವಿಯಾಯಿತು. ಇದೀಗ ಪಾಟ್ನಾದಲ್ಲಿ ನಡೆದ ಸ್ಫೋಟದ ಹಿಂದೆ ಯಾರಿದ್ದಾರೆ ಎನ್ನುವುದು ಇನ್ನೂ ಗೊತ್ತಾಗಿಲ್ಲ ಎಂದು ರಾಷ್ಟ್ರೀಯ ತನಿಖಾ ತಂಡ ಹೇಳಿದೆ.
ಇದೇ ಸಂದರ್ಭದಲ್ಲಿ ಬಿಹಾರ ಪೊಲೀಸರು ಬಂಧಿಸಿದ 10ಕ್ಕೂ ಅಧಿಕ ಮಂದಿಗೆ ಸ್ಫೋಟದೊಂದಿಗೆ ಯಾವುದೇ ಸಂಬಂಧ ಇಲ್ಲ ಎಂದೂ ತನಿಖಾ ತಂಡ ಹೇಳಿದೆ. ಪೊಲೀಸರಿಗೆ ಛೀಮಾರಿ ಹಾಕಿದೆ. ‘ಯಾವ ಅಧಾರದಲ್ಲಿ ಬಂಧಿಸಿದ್ದೀರಿ?’ ಎಂದು ಪೊಲೀಸರನ್ನು ಎನ್ಐಎ ಕೇಳಿದೆ. ಬಿಹಾರ ಪೊಲೀಸರು ಒಂದು ನಿರ್ದಿಷ್ಟ ರಾಜಕೀಯ ಕಾರಣಕ್ಕಾಗಿ ಪಾಟ್ನಾದ ಸ್ಫೋಟಕ್ಕೂ ಹವಾಲಾ ಪ್ರಕರಣಕ್ಕೂ ನಂಟು ಹಾಕಲು ಪ್ರಯತ್ನಿಸಿದ್ದರು ಎನ್ನುವುದು ಇದೀಗ ಬಯಲಾ ಗಿದೆ.
ಪೊಲೀಸರಿಗೆ ಮುಜುಗರ ಉಂಟಾಗಿದೆ. ಇದೇ ಸಂದರ್ಭದಲ್ಲಿ, ಆಯಿಶಾ ಮತ್ತು ಆಕೆಯೊಂದಿಗೆ ಹಣದ ವ್ಯವಹಾರ ಮಾಡಿದ ಹಲವು ಮುಸ್ಲಿಮ್ ಯುವಕರನ್ನು ಉಗ್ರರು ಎಂದು ಕರೆದ ಪತ್ರಿಕೆಯೇ, ಪುರಾವೆ ಇಲ್ಲ ಎನ್ನುವ ವರದಿ ಮಾಡಿದೆ. ಉಳಿದ ಪತ್ರಿಕೆಗಳು ಅಷ್ಟನ್ನೂ ಪ್ರಕಟಿಸಲು ಹಿಂದೇಟು ಹಾಕಿದೆ.
ನಾಳೆ ಆಯಿಶಾ ಮತ್ತು ಇನ್ನಿತರರು ಬಿಡುಗಡೆ ಆಗಬಹುದು. ಆದರೆ ಅವರಿಗೆ ಅಂಟಿದ ಉಗ್ರರು ಎನ್ನುವ ಕಳಂಕದಿಂದ ಅವರಿಗೆ ಬಿಡುಗಡೆ ಯಾಗಲು ಸಾಧ್ಯವೆ? ಸಮಾಜ ಆಕೆಯನ್ನು ನೆಮ್ಮದಿಯಿಂದ ಬದುಕುವುದಕ್ಕೆ ಬಿಡುತ್ತದೆಯೆ? ಮುಷ್ತಾಕ್ ಎನ್ನುವ ಕ್ಯಾನ್ಸರ್ ರೋಗಿ ಉಗ್ರ ಎನ್ನುವ ಪಟ್ಟದೊಂದಿಗೆ ಜೈಲಿನಲ್ಲಿ ಅನುಭವಿಸಿದ ಮಾನಸಿಕ ಹಿಂಸೆಗೆ ಪರಿಹಾರ ನೀಡುವವರು ಯಾರು? ತನ್ನ ಸೋದರನನ್ನು ನೋಡಲು ಪಾಟ್ನಾಗೆ ತೆರಳಿ, ಅದು ಸಾಧ್ಯವಾಗದೆ ರೈಲಿನಲ್ಲೇ ಮೃತಪಟ್ಟವನನ್ನು ಮರಳಿ ತರುವುದು ಸಾಧ್ಯವೆ? ಇದಕ್ಕೆಲ್ಲ ಯಾರು ಹೊಣೆ? ನಿಜಕ್ಕೂ ಉಗ್ರರು ಯಾರು? ಅಕ್ಷರವೆನ್ನುವ ಅಸ್ತ್ರವನ್ನು ಸ್ಫೋಟಕ ಗಳಾಗಿ ಬಳಸಿಕೊಂಡು, ತಮ್ಮ ದುರುದ್ದೇಶಕ್ಕಾಗಿ ಸಮಾಜದಲ್ಲಿ ಅದನ್ನು ಸ್ಫೋಟಿಸುವ ಪತ್ರಕರ್ತರು ಉಗ್ರರಲ್ಲವೆ?

3 comments:

  1. muchcha saak maadu..

    ReplyDelete
  2. Time changes everything. Everything must see the end and the new start.... World will be united under one religion...and one goD..

    ReplyDelete
  3. ಇದು ಸುಳ್ಳಿನ ಪ್ರಾರಂಭವಷ್ಟೆ. ಮೋದಿ ಮಾದರಿಯ ಆಡಳಿತದಲ್ಲಿ ಸುಳ್ಳಿನ ಸರಮಾಲೆಯೇ ಪ್ರಾರಂಭವಾಗಲಿದೆ. ಸುಳ್ಳಿನ ಪುಂಗಿ ಊದುವ ಪತ್ರಕರ್ತರು ಆಗಲೇ ಸಿದ್ಧರಾಗಿದ್ದಾರೆ! ಎಚ್ಚರಿಕೆ!!

    ReplyDelete