Tuesday, March 13, 2012

ಪರುಷ ಮಣಿ

ಇದು ನಾನು ಬರೆದ ಕವಿತೆಯಲ್ಲ. ಕವಿ, ಪತ್ರಕರ್ತ, ದಿವಂಗತ ಬಿ. ಎಂ. ರಶೀದ್ ಬರೆದ ಕವಿತೆ. ಜನವಾಹಿನಿ ದೈನಿಕದಲ್ಲಿ 1999ರಲ್ಲಿ ಪ್ರಕಟವಾಗಿತ್ತು. ಆತನ 'ಪರುಷಮಣಿ' ಸಮಗ್ರ ಬರಹದಿಂದ ಇದನ್ನು ಆರಿಸಲಾಗಿದೆ.

ನಿನ್ನ ನೆಮ್ಮದಿಗಳಿಗೆ ಅತಿಥಿಯಾಗಿ ಕರೆದು
ಕಣ್ಣು ವಂಚಿಸಿ ನೀನು ನನ್ನ ಜೇಬಿಗೆ ಇಣುಕಿದೆ
ನಾನದನ್ನು ಅರಿತೆನೆಂದು ನಿನಗೆ ತಿಳಿಸಲಿಲ್ಲ
ಕಾಣಿಸುವುದೇನಿದೆಯೆಂದು ಕ್ಷಣ ಚಿಂತಿಸಿದೆ ಮಾತ್ರ...

ಹೆಚ್ಚೆಂದರೆ ಗೆಳೆಯಾ...
'ಪತ್ರಿಕೆ'ಯೊಂದರ ಐಡೆಂಟಿಟಿ ಕಾರ್ಡು
ಪೂರ್ತಿಯಾಗದೇ ಉಳಿದ ಒಂದು ಪದ್ಯ,
ನೂರಾ ನಾಲ್ಕನೆ ಬಾರಿ ಓದಿ ಮುಗಿಸಿದ ಪ್ರೇಯಸಿಯ ಪತ್ರ,
ಮತ್ತು ಮುಖ್ಯವಾಗಿ ನಿನ್ನ ಮುಖಕ್ಕೆ ನಿರಾಸೆಯ ರಾಹು ಕವಿಸುವ
ಎಲ್ಲ ಶೂನ್ಯಕ್ಕೂ ಭಾಷ್ಯವಾಗುವ ಒಂದು ಬ್ಯಾಂಕು ಪಾಸು ಪುಸ್ತಕ!

ಆದರೆ...
ಸ್ವಲ್ಪ ಅದರಾಚೆಯ ಆಳಕ್ಕೆ ಇಳಿಯುವ ಕಣ್ಣುಗಳಿದ್ದರೆ
ನೀನು ಬೆರಗುಗೊಂಡು ಕಾಣಬಹುದಿತ್ತು;
ಸ್ಪರ್ಶಕ್ಕೆ ದಕ್ಕಿದೆಲ್ಲಕ್ಕೂ ಬೆಳಕೆರೆದು
ಹೊಳೆಯಿಸುವ ಒಂದು ಪರುಷ ಮಣಿ!
ಕುಲುಮೆಯಿಂದ ಅದಾಗ ಮೇಲೆದ್ದ ಖಡ್ಗದ ಧಾರೆಯಂತೆ
ಬೆಳಗುವ ಪರುಷ ಮಣಿ!

ಮತ್ತೂ ನಿನಗೆ ನಾನು ತಿಳಿಸಲಿಲ್ಲ,
ಬದುಕಿನ ಎಲ್ಲಾ ಬೆಂಕಿಗಳಿಗೂ ತೆರೆದು
ಪುಟಗೊಂಡ ಈ ಪರುಷ ಮಣಿಯನ್ನೂ ಕೂಡಾ
ಇಲ್ಲಿ ನಡುಗಿಸುವುದೊಂದಿದ್ದರೆ ಗೆಳೆಯಾ,
ಅದು ತಣ್ಣನೆಯ ಬಾಹುಗಳ ಈ ನೆಮ್ಮದಿ!

ಕೇಡನ್ನು ಶಂಕಿಸುವ ಶಕುನದ ಹಕ್ಕಿಯಂತೆ
ರೆಕ್ಕೆ ಬಡಿಯುತ್ತಾ ತಲ್ಲಣಗೊಳಿಸುವ ನೆಮ್ಮದಿ!!
ನಿನ್ನ ಸಕಲ ಸೌಭಾಗ್ಯಕ್ಕೂ ನೀನು ದೇವಸ್ತುತಿ
ಸಲ್ಲಿಸುವಾಗ ನಾನು ಮೊರೆಯಿಡುತ್ತೇನೆ;
'ಇಲ್ಲವಾಗಲು ನನಗೆ ಒಂದೂ ಇಲ್ಲದಿರಲಿ ದೇವರೇ...'
ಆಗ ನನ್ನೆದೆಯ ಪರುಷಮಣಿ,
ಕ್ಯಾಲೆಂಡರಿನಂತೆ ನಿನ್ನ ಮುಖಕ್ಕೆ ತಗುಲಿ ಹಾಕಿದ್ದ
ಆ ಸೂಳೆ ನಗುವಿನ ವಿರುದ್ಧ ದಿಕ್ಕಿಗೆ
ತನ್ನ ದಿವ್ಯ ಬೆಳಕಿನ ತೋರು ಬೆರಳನ್ನು ಹಿರಿಯುತ್ತಾ
ನನಗೆ ನಿರ್ದೇಶಿಸುತ್ತದೆ;
'ಮಗನೇ, ಈ ದಾರಿಯಲ್ಲಿ ನೀನು ನಡೆ
ಇದು ಮಾತ್ರ ನೀನು ನಡೆಯಬಹುದಾದ ದಾರಿ'

1 comment: