Saturday, March 10, 2012

ಕಹಾನಿ: ನೋಡಬಹುದಾದ ಥ್ರಿಲ್ಲರ್ ಚಿತ್ರ

ಒಂದು ಟೈಂಪಾಸ್ ಚಿತ್ರ ವಿಮರ್ಶೆ

 ‘ಕಹಾನಿ’ ನಾಯಕಿ ಪ್ರಧಾನ ಚಿತ್ರ. ಜೊತೆಗೆ ಏಳು ತಿಂಗಳ ಗರ್ಭಿಣಿ ಮಹಿಳೆಯ ಸುತ್ತ ತಿರುಗುವ ಚಿತ್ರ ಇದಾದುದರಿಂದ, ಭಾವನಾತ್ಮಕ ಕತೆಯೊಂದರ ನಿರೀಕ್ಷೆಯಲ್ಲಿ ಚಿತ್ರಮಂದಿರದೊಳಗೆ ಕಾಲಿಡುವ ಪ್ರೇಕ್ಷಕರಿಗೆ ಈ ಚಿತ್ರ ಸಣ್ಣದೊಂದು ಶಾಕ್ ಕೊಡುತ್ತದೆ. ತುಂಬು ಗರ್ಭಿಣಿ ವಿದ್ಯಾ ಬಾಗ್ಚಿ(ವಿದ್ಯಾಬಾಲನ್) ಲಂಡನ್‌ನಿಂದ ಕೊಲ್ಕತಾಕ್ಕೆ ಬಂದಿಳಿಯುವಲ್ಲಿಂದ ಕತೆ ಆರಂಭವಾಗುತ್ತದೆ. ತನ್ನ ಸಂಸ್ಥೆಯ ರೀಸರ್ಚ್ ಕೆಲಸಕ್ಕೆಂದು ಕೊಲ್ಕತಾಗೆ ಹೋಗಿರುವ ಆಕೆಯ ಪತಿ ಅನಿರೀಕ್ಷಿತವಾಗಿ ಕಾಣೆಯಾಗಿರುತ್ತಾನೆ. ಈ ಹಿನ್ನೆಲೆಯಲ್ಲಿ ತನ್ನ ಪತಿಯನ್ನು ಹುಡುಕುತ್ತಾ ಆಕೆ ಕೊಲ್ಕತಾ ನಗರಕ್ಕೆ ಬಂದಿಳಿಯುತ್ತಾಳೆ. ಏರ್‌ಪೋರ್ಟ್‌ನಿಂದ ಆಕೆ ನೇರವಾಗಿ ಪೊಲೀಸ್ ಸ್ಟೇಷನ್‌ಗೆ ತೆರಳುತ್ತಾಳೆ. ಕತೆ ಇಲ್ಲಿಂದಲೇ ಬಿಚ್ಚಿಕೊಳ್ಳುತ್ತದೆ. ಇಲ್ಲಿ ಆಕೆಯ ನೆರವಿಗೆ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ರಾನಾ(ಪರಂಬ್ರತ ಚಟರ್ಜಿ) ಮುಂದಾಗುತ್ತಾನೆ. ಇವರ ಹುಡುಕಾ
ದ ಪ್ರಯತ್ನ ಆಕೆಯ ಪತಿಯ ಇರವನ್ನು ಇನ್ನಷ್ಟು ನಿಗೂಢವಾಗಿಸುತ್ತಾ ಹೋಗುತ್ತದೆ. ಮುಂದೆ ಹೋದಂತೆ ಆಕೆಯ ಪತಿಯನ್ನೇ ಹೋಲುವ ಇನ್ನೊಬ್ಬನ ಜೊತೆಗೆ ಪ್ರಕರಣ ತಳಕು ಹಾಕುತ್ತದೆ. ಅವನನ್ನು ಹುಡುಕಿದರೆ ತನ್ನ ಪತಿ ಸಿಗುತ್ತಾನೆ ಎನ್ನುವ ಗುರಿಯಿಟ್ಟು ವಿದ್ಯಾ ಬಾಗ್ಚಿ ತನ್ನದೇ ದಾರಿಯಲ್ಲಿ ಅನ್ವೇಷಣೆಗೆ ತೊಡಗುತ್ತಾಳೆ. ಪ್ರೆಡಿಕ್ಟೆಬಲ್ ಕತೆಯೊಂದರ ನಿರೀಕ್ಷೆಯಲ್ಲಿ ಕುಳಿತರನ್ನು ಚಿತ್ರ ನಿಧಾನಕ್ಕೆ ಕೊಲ್ಕತಾದ ನಿಗೂಢತೆಯೊಳಗೆ ಕೊಂಡೊಯ್ಯತೊಡಗುತ್ತದೆ. ಇದೊಂದು ಥ್ರಿಲ್ಲರ್ ಚಿತ್ರವಾಗಿ ಮುಂದೆ ಸಾಗುತ್ತಿರುವುದು ಅರಿವಿಗೆ ಬರುತ್ತದೆ. ಚಿತ್ರದ ಕ್ಲೈಮಾಕ್ಸ್ ನಮ್ಮೆಲ್ಲರ ನಿರೀಕ್ಷೆಯನ್ನೂ ಬುಡಮೇಲೂ ಮಾಡುತ್ತದೆ. ಅಪ್ಪಟ ನಾಟಕೀಯ, ಕಮರ್ಶಿಯಲ್ ಕೊನೆಯೊಂದನ್ನು ನೀಡುವ ಮೂಲಕ ಎಲ್ಲ ವರ್ಗಕ್ಕೂ ಸಲ್ಲುವ ಚಿತ್ರವಾಗಿ ತನ್ನ ‘ಕಹಾನಿ’ಯನ್ನು ನಿರ್ದೇಶಕ ಸುಜೊಯ್ ಘೋಷ್ ಮುಗಿಸಿದ್ದಾರೆ.

ತುಂಬು ಗರ್ಭಿಣಿ ಹೆಣ್ಣು-ಜನನಿಬಿಡ ಕೊಲ್ಕತಾದ ಬದುಕು-ದುರ್ಗಾಪೂಜೆ ಇದನ್ನು ತನ್ನ ಕತೆಗೆ ಒಂದು ರೀತಿಯಲ್ಲಿ ರೂಪಕದಂತೆ ಬಳಸಿದ್ದಾರೆ ನಿರ್ದೇಶಕರು. ಕೊಲ್ಕತಾದ ತುಂಬು ನಗರದ ಬದುಕಿನಲ್ಲಿ ದಾರಿ ಮಾಡಿಕೊಳ್ಳುತ್ತಾ ತನ್ನ ಪತಿಯ ಹುಡುಕಾಟಕ್ಕೆ ತೊಡಗುತ್ತಾಳೆ. ಆ ಹುಡುಕಾಟದ ಜೊತೆಗೆ ಕೊಲ್ಕತಾದ ದೈನಂದಿನ ಬದುಕೂ ಈ ಚಿತ್ರದ ಮೂಲಕ ಹಂತಹಂತವಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಚಾಯ್ ವಾಲಾ ಹುಡುಗ, ಲಾಡ್ಜ್ ಮ್ಯಾನೇಜರ್, ಪೊಲೀಸ್ ವ್ಯವಸ್ಥೆ, ರೈಲು ನಿಲ್ದಾಣದ ಜನಜಂಗುಳಿ, ಕ್ರಿಮಿನಲ್‌ಗಳ ಅಡ್ಡೆ ಇವೆಲ್ಲವನ್ನೂ ದಾಟುತ್ತಾ ತನ್ನ ಗುರಿಯೆಡೆಗೆ ಸಾಗುವ ಗರ್ಭಿಣಿ ಮಹಿಳೆಯ ಪಯಣ ನಿಜಕ್ಕೂ ಥ್ರಿಲ್ ಹುಟ್ಟಿಸುತ್ತದೆ. ಆಕೆಯ ಸಮಸ್ಯೆ ನಿಧಾನಕ್ಕೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸುತ್ತಾ ಅದು ವಿವಿಧ ಅಧಿಕಾರಿಗಳು, ರಾಜಕಾರಣಿಗಳ ಬೇರನ್ನೂ ಸಣ್ಣಗೆ ಅಲುಗಾಡಿಸುತ್ತದೆ. ಒಂದು ರೀತಿಯಲ್ಲಿ ಈ ಥ್ರಿಲ್ಲರ್ ಪತ್ತೇದಾರಿಯಂತಹ ಕತೆಯೊಂದನ್ನು ಹೋಲುವ ಕಹಾನಿ ಆರಂಭದಿಂದ ಕೊನೆಯವರೆಗೂ ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುತ್ತದೆ.

ಚಿತ್ರದಲ್ಲಿ ನಿರ್ದೇಶಕ ಸುಜೊಯ್ ಘೋಷ್ ಅವರ ಯಶಸ್ಸಿಗೆ ಅವರ ಮೂರು ಆಯ್ಕೆಗಳು ಮುಖ್ಯ ಕಾರಣ. ಒಂದು, ಬಿಗಿಯಾಗಿರುವ ಕತೆ. ಎರಡು, ಪಾತ್ರಧಾರಿಗಳು. ಮೂರು, ಚಿತ್ರದ ಕ್ಲೈಮಾಕ್ಸ್. ಚಿತ್ರದಲ್ಲಿ ವಿದ್ಯಾಬಾಲನ್ ತನ್ನ ಪಾತ್ರವನ್ನು ಅತ್ಯದ್ಭುತವಾಗಿ ನಿರ್ವಹಿಸಿದ್ದಾರೆ. ಒಬ್ಬ ಅಬಲೆ ಹೆಣ್ಣು ನಿಧಾನಕ್ಕೆ ಬೆಳೆಯುತ್ತಾ ಬೆಳೆಯುತ್ತಾ ದುರ್ಗಾ ಪೂಜೆಯ ದಿನ ತನ್ನ ಗುರಿಯನ್ನು ಸಾಧಿಸುವ ಕ್ಲೈಮಾಕ್ಸ್ ಪ್ರೇಕ್ಷಕರ ಎಲ್ಲೂ ಊಹೆಗಳನ್ನು ಬುಡಮೇಲು ಮಾಡುವಲ್ಲಿ ಯಶಸ್ವಿಯಾಗುತ್ತದೆ. ಕೊನೆ ಒಂದು ರೀತಿ ನಾಟಕೀಯವಾಗಿದೆ. ಆದರೆ ಒಂದು ಕಮರ್ಶಿಯಲ್ ಚಿತ್ರಕ್ಕೆ ತಕ್ಕುದಾಗಿದೆ. ಚಿತ್ರದಲ್ಲಿ ಗಮನ ಸೆಳೆಯುವ ಇನ್ನೊಂದು ಪಾತ್ರ ಬಂಗಾಳಿ ನಟ ಪರಂಬ್ರತ ಚಟರ್ಜಿಯವರದು. ಸಬ್‌ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಅತ್ಯಂತ ಹೃದಯಸ್ಪರ್ಶಿಯಾಗಿ ನಟಿಸುತ್ತಾರೆ. ಮುಗ್ಧ, ಸುಂದರ ಮುಖದ ಈ ತರುಣ, ಪಾತ್ರದ ವ್ಯಕ್ತಿತ್ವಕ್ಕೆ ಪೂರಕವಾಗಿದ್ದಾರೆ. ಇನ್ನಾರೂ ಈ ಪಾತ್ರವನ್ನು ನಿರ್ವಹಿಸಲು ಸಾಧ್ಯವಿರಲಿಲ್ಲವೇನೋ ಎನ್ನುವಷ್ಟು ಚೆನ್ನಾಗಿ ಇನ್ಸ್‌ಪೆಕ್ಟರ್ ದಿರಿಸಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಚಿತ್ರದ ಯಶಸ್ಸಿಗೆ ಕಾರಣವಾಗುವ ಮೂರನೆಯ ಪಾತ್ರ ಇಂಟೆಲಿಜೆನ್ಸ್ ಅಧಿಕಾರಿ ಖಾನ್. ನವಾಝುದ್ದೀನ್ ಸಿದ್ದೀಖಿ ಈ ಒರಟು ಪಾತ್ರದಲ್ಲಿ ಅಷ್ಟೇ ತೀವ್ರವಾಗಿ ಕಾಣಿಸಿಕೊಳ್ಳುತ್ತಾರೆ. ಗರ್ಭಿಣಿ ಮಹಿಳೆಯೊಂದಿಗಿನ ಈತನ ಮೊದಲ ಮುಖಾಮುಖಿ ಈ ಪಾತ್ರದ ಕುರಿತಂತೆ ಪ್ರೇಕ್ಷಕರಲ್ಲಿ ಪೂರ್ವಾಗ್ರಹವೊಂದನ್ನು ಬಿತ್ತುತ್ತದೆ. ಆದರೆ ನಿಧಾನಕ್ಕೆ ಕತೆ ಮುಂದುವರಿಯುತ್ತಾ ಹೋದ ಹಾಗೆ ಪಾತ್ರ ಇನ್ನಷ್ಟು ಗಟ್ಟಿಯಾಗುತ್ತಾ, ಬೆಳೆಯುತ್ತಾ ಹೋಗುತ್ತದೆ. ಬಹುಶಃ ಚಿತ್ರಕತೆಯ ಹೆಗ್ಗಳಿಕೆಯೇ ಇದು. ಇಲ್ಲಿ ಎಲ್ಲ ಪಾತ್ರಗಳೂ ನಿಂತಲ್ಲಿ ನಿಲ್ಲದೆ, ಕತೆ ಮುಂದುವರಿದ ಹಾಗೆ ಬೆಳೆಯುತ್ತಾ, ತಿರುವುಗಳನ್ನು ಕಾಣುತ್ತಾ ಮುಂದೆ ಸಾಗುವುದು. 


ವಿದ್ಯಾಬಾಲನ್ ಪಾಲಿಗೆ ಇದು ನಿಜಕ್ಕೂ ಒಳ್ಳೆಯ ಹೆರಿಗೆ. ಮಗು ಆರೋಗ್ಯಪೂರ್ಣವಾಗಿದೆ.

1 comment:

  1. Very nice review. saw it day before yesterday….i am glad u have not given out the climax. but the movie had great potential…script innaStu bigi maaDabahudittu annistu. film mugiyuva ardha ganTe munche naanu plot guess maaDi…nange swalpa niraashe aaytu…howdu timepass movie…
    sathyuki tumbaa isTaa aada!!

    malathi S
    (this is copy paste of my comment in Avadhi...came here to ask whether i can add u to my blog list??)

    ReplyDelete