Thursday, March 1, 2012

ಗೋರಿಗಳ ತೋಟದ ಕಾವಲುಗಾರರು

ರಸ್ತೆ ಅಗಲೀಕರಣಕ್ಕೆ ಶಿವರಾಮಕಾರಂತರ ಮನೆ ನೆಲಸಮ! ಈ ಕುರಿತಂತೆ ಕಾರಂತರ ಅಭಿಮಾನಿಯೊಬ್ಬರು ಗೋಳಾಡುತ್ತಿದ್ದರು. ದಕ್ಷಿಣ ಕನ್ನಡದಲ್ಲಿ ರಸ್ತೆ ಅಗಲೀಕರಣ, ಸೆಝ್, ಕೈಗಾರಿಕೆ ಇತ್ಯಾದಿಗಳ ಹೆಸರು ಸಹಸ್ರಾರು ಮನೆಗಳು ನೆಲ ಸಮವಾಗಿವೆ. ಹಸಿರು ತೋಟಗಳು ಬುಡ ಕಳಚಿ ಬಿದ್ದಿವೆ. ಎಲ್ಲಕ್ಕಿಂತ ಮುಖ್ಯವಾಗಿ ಸಾವಿರಾರು ಬಡ ಕುಟುಂಬಗಳು ಬೀದಿ ಪಾಲಾಗಿವೆ. ಶಿವರಾಮಕಾರಂತರ ಮನೆ ನೆಲಸಮವಾಗಿರುವುದು ಇವೆಲ್ಲಕ್ಕಿಂತ ಭಿನ್ನವೆಂದು ಸ್ವೀಕರಿಸಲು ನನಗೆ ಸಾಧ್ಯವಾಗುತ್ತಿಲ್ಲ. ಒಂದು ರೀತಿಯಲ್ಲಿ, ಪ್ರದರ್ಶನಕ್ಕಷ್ಟೇ ಇದ್ದ ಈ ಮನೆ ಬಿದ್ದರೂ, ಹೋದರು ದೊಡ್ಡ ನಷ್ಟವೆಂದು ಅನ್ನಿಸುತ್ತಿಲ್ಲ. ಕಾರಂತರ ಸಾಹಿತ್ಯಕ್ಕೂ ಆ ಮನೆಗೂ ಯಾವ ಸಂಬಂಧವನ್ನೂ ಕಲ್ಪಿಸಲು ನನಗೆ ಸಾಧ್ಯವಾಗುತ್ತಿಲ್ಲ.ಕರಾವಳಿಯ ಸಹಸ್ರಾರು ಜನರ ಬದುಕೇ ಈ ಅಭಿವೃದ್ಧಿಯ ಪಾಲಾಗುತ್ತಿರುವಾಗ, ಸ್ಮಾರಕದಂತಿರುವ ಈ ಮನೆ ಹೋದರೆಷ್ಟು ಬಿದ್ದರೆಷ್ಟು? ಎಲ್ಲಿಯವರೆಗೆ ನಮ್ಮ ನಾಡುವೆ ಕಾರಂತರ ಕೃತಿಗಳು, ಚಿಂತನೆಗಳು ಜೀವಂತವಿರುತ್ತದೋ ಅಲ್ಲಿಯವರೆಗೆ ನಾವು ಈ ಸ್ಮಾರಕಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ.

 ತುಂಬಾ ವರ್ಷಗಳ ಹಿಂದೆ ಮೂಡಿಗೆರೆಯ ತೇಜಸ್ವಿ ಅಭಿಮಾನಿಯೊಬ್ಬರು ಇತ್ತೀಚೆಗೆ ದೂರವಾಣಿಯಲ್ಲಿ ಮಾತನಾಡುತ್ತಾ, ತೇಜಸ್ವಿ ಅವರ ಮನೆ, ತೋಟವನ್ನು ಮಾರುತ್ತಿದ್ದಾರಂತೆ ಎಂದು ಆತಂಕದಿಂದ ನುಡಿದರು. ‘ನಾವು ಈ ಕುರಿತಂತೆ ಅವರ ಕುಟುಂಬದ ಜೊತೆಗೆ ವಿಚಾರಿಸಿದೆವು. ಅಂತಹ ಪ್ರಸ್ತಾಪವಿಲ್ಲ ಎಂದು ಅವರು ನಮಗೆ ಸಮಜಾಯಿಶಿ ನೀಡಿದರು. ಅವರ ಸಮಜಾಯಿಶಿ ಕೇಳಿ ಒಂದಿಷ್ಟು ಸಮಾಧಾನವಾಯಿತು ’ ಎಂದೆಲ್ಲ ಬಡಬಡಿಸಿದರು. ಈ ಹಿಂದೆ ಲಂಕೇಶರ ಮಾವಿನ ತೋಟವನ್ನು ಅವರ ಪುತ್ರ ಮಾರಿದ್ದಾರಂತೆ ಎಂದು ಲಂಕೇಶ್ ಅಭಿಮಾನಿಯೊಬ್ಬರು, ಅಘಾತದಂದ ತಮ್ಮ ದುಃಖವನ್ನು ತೋಡಿಕೊಂಡಿದ್ದರು. ‘ನೋಡಿ ಸಾರ್, ಲಂಕೇಶ್‌ಗೆ ಎಂತಹ ಅವಮಾನ ಮಾಡಿ ಬಿಟ್ರು...?’ ಎಂದು ಗೋಳಾಡಿದ್ದರು. ಲಂಕೇಶರ ಅಲೋಚನೆಗಳಿಗೆ, ಚಿಂತನೆಗಳಿಗೆ ದ್ರೋಹವಾದಾಗ ಇದೇ ಮನುಷ್ಯ ಲಂಕೇಶ್ ವಿರೋಧಿಗಳ ಗುಂಪಿನಲ್ಲಿ ನಿಂತು ಮಾತನಾಡಿದ್ದು, ನಂತರದ ವಿಷಯ.
 
 ಒಬ್ಬ ಸಾಹಿತಿಯ ಆಸ್ತಿ, ಮನೆ ಇತ್ಯಾದಿಗಳನ್ನು ಅವರ ಕುಟುಂಬ ಮಾರುವುದನ್ನು ತಡೆಯುವುದರಿಂದ ಸಾಹಿತ್ಯಕ್ಕೆ ಯಾವ ರೀತಿಯಲ್ಲಿ ಲಾಭವಾಗುತ್ತದೆ ಎನ್ನುವುದು ನನಗೆ ಅರ್ಥವಾಗಲಿಲ್ಲ. ತೋಟ, ಆಸ್ತಿ ಇತ್ಯಾದಿಗಳನ್ನು ಮಾಡುವುದು ಸಾಹಿತ್ಯಿಕ ಕಾರಣಗಳಿಗಾಗಿ ಅಲ್ಲ. ಅದರ ಹಿಂದೆ ಆರ್ಥಿಕ ಕಾರಣಗಳಿರುತ್ತವೆ. ತೇಜಸ್ವಿ, ಲಂಕೇಶರು ಪಕ್ಕಾ ವ್ಯವಹಾರಿಗಳೂ ಆಗಿದ್ದರು. ತೇಜಸ್ವಿಯಲ್ಲಿ ಯಾವುದೇ ಭೂಮಾಲಕನಿಗೆ ಸಲ್ಲುವ ಸಿಟ್ಟು, ಸಿಡುಕು, ಅಹಂಕಾರ ಅವರಲ್ಲಿತ್ತು. ಅವರ ‘ಪುಸ್ತಕ ಪ್ರಕಾಶನ’ ಮತ್ತು ಅವರ ತೋಟ ಪಕ್ಕಾ ವ್ಯಾವಹಾರಿಕ ಲಾಭನಷ್ಟಗಳ ಲೆಕ್ಕಾಚಾರದಲ್ಲಿ ರೂಪುಗೊಂಡದ್ದು. ತೇಜಸ್ವಿಯವರ ತೋಟವನ್ನು ಮಾರಬೇಕೋ ಬೇಡವೋ ಎಂದು ತೀರ್ಮಾನಿಸುವವರು ತೇಜಸ್ವಿಯ ನಂತರದ ವಾರಸುದಾರರೇ ಹೊರತು ಸ್ವಯಂಘೋಷಿತ ತೇಜಸ್ವಿ ಅಭಿಮಾನಿಗಳಲ್ಲ. ತನ್ನ ತೋಟದ ವಿಷಯದಲ್ಲಿ ‘ಅಭಿಮಾನಿ’ಗಳೆಂದು ಕರೆಸಿಕೊಂಡವವರು ಮೂಗು ತೂರಿಸುವುದು ತೇಜಿಸ್ವಿಗೆ ಇಷ್ಟವಾಗುವ ವಿಷಯವೂ ಅಲ್ಲ. ನಾವು ಭೂಮಾಲಕ ತೇಜಸ್ವಿ ಮತ್ತು ಸಾಹಿತಿ ತೇಜಸ್ವಿಯನ್ನು ಈ ಸಂದರ್ಭದಲ್ಲಿ ಬೇರೆ ಬೇರೆಯಾಗಿ ನೋಡಲೇ ಬೇಕಾಗುತ್ತದೆ. ತೇಜಸ್ವಿಯ ತೋಟದಲ್ಲಿ ಒಂದು ವೇಳೆ, ಅವರ ಗೋರಿ ಇದ್ದಿದ್ದರೂ ಅದಕ್ಕಾಗಿ ನಾವು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿದ್ದಿರಲಿಲ್ಲ. ನಾವು ನಿಜವಾಗಿಯೂ ತೇಜಸ್ವಿಯ ಅಭಿಮಾನಿಗಳಾಗಿದ್ದರೆ, ನಾವು ತೇಜಸ್ವಿಯನ್ನು ಹುಡುಕಬೇಕಾದದ್ದು, ತೇಜಸ್ವಿಯನ್ನು ಉಳಿಸಬೇಕಾದದ್ದು ಅವರ ಚಿಂತನೆ, ಬರಹಗಳು, ಕೃತಿಗಳ ಮೂಲಕ. ತೇಜಸ್ವಿ ಬೆಳೆಸಿದ ವಾಣಿಜ್ಯ ತೋಟದಲ್ಲಿ ಸಾಹಿತ್ಯಾಭಿಮಾನಿಗಳಿಗೇನು ಕೆಲಸ? ಆ ತೋಟದಲ್ಲಿ ತೇಜಸ್ವಿಯ ಬೆವರಿಗಿಂತ ಹೆಚ್ಚು ಅನಾಮಿಕ ಕಾರ್ಮಿಕರ ಬೆವರೇ ಹರಿದಿದೆ. ತೋಟದ ಒಡೆಯ ತೇಜಸ್ವಿಯೇ ಆಗಿರಬಹುದು. ಆದರೆ ಆ ಮರಗಿಡಗಳನ್ನು ಕೇಳಿದರೆ ಅದು ತನಗೆ ನೀರುಣಿಸಿದ ಯಾವನೋ ಕಾರ್ಮಿಕನನ್ನು, ತನಗೆ ನೆರಳು ಕೊಟ್ಟ ಯಾವುದೋ ಕೂಲಿಯವನ ಹೆಸರನ್ನು ಪಿಸುಗುಟ್ಟಬಹುದು. ತೇಜಸ್ವಿ ಎಂಬ ಮಹಾನ್ ಸಾಹಿತಿಯ ಹೆಸರು ಆ ತೋಟದ ಮರಗಿಡಗಳಿಗೆ ಗೊತ್ತಿದೆಯೋ ಇಲ್ಲವೋ ಎನ್ನುವುದನ್ನು ಅರಿತವರು ಯಾರು? ತೇಜಸ್ವಿ ತಮ್ಮ ತೋಟದ ಪ್ರತಿ ಗಿಡಗಳನ್ನು ಪ್ರೀತಿಸಿರಬಹುದು. ಆದರೆ ಯಾರು ಯಾರನ್ನು ಹೆಚ್ಚು ಪ್ರೀತಿಸಿರಬಹುದು? ಆ ಮರಗಿಡಗಳು ತೇಜಸ್ವಿಯನ್ನು ಅಷ್ಟೇ ಪ್ರೀತಿಯಿಂದ ಕಾಣುವುದಕ್ಕೆ ಅವುಗಳ ಬಳಿಯೂ ಒಂದಿಷ್ಟು ಕಾರಣಗಳು ಬೇಡವೇ? ಯಾವ ಕೂಲಿ ಕಾರ್ಮಿಕನ ಬೆರಳ ಸ್ಪರ್ಶದಿಂದ ಆ ಗಿಡಗಳು ಅರಳಿದವೋ, ಯಾವ ರೈತನ ಬೆವರ ಪರಿಮಳದಿಂದ ಗಿಡಗಳು ಚಿಗುರಿದವೋ, ಯಾವ ಕೆಲಸದಾಳು ಸುರಿದ ನೀರಿನಿಂದ ಆ ಗಿಡಗಳು ತಮ್ಮ ದಾಹ ಇಂಗಿಸಿಕೊಡವೋ ಆ ಜನರ ಸ್ಮಾರಕ ಆ ಗಿಡಗಳು. ಅಷ್ಟೇ ಹೊರತು, ಆ ತೋಟ ಯಾವ ಕಾರಣಕ್ಕೂ ತೇಜಸ್ವಿಯ ಸ್ಮಾರಕವಾಗಲಾರದು. ತೇಜಸ್ವಿ ಅದರ ಮಾಲಕರು ಅಷ್ಟೇ. ಸದ್ಯ ತೇಜಸ್ವಿ ಇಲ್ಲ. ಅದರ ವಾರಸುದಾರರು ತೇಜಸ್ವಿ ಕುಟುಂಬ. ಸಹಜವಾಗಿಯೇ ಅದನ್ನು ಮಾರಲು ಹೊರಟಿದ್ದಾರೆ. ಇಲ್ಲಿ ಸಾಹಿತ್ಯ, ಭಾವನೆ ಇತ್ಯಾದಿಗಳ ಪ್ರಶ್ನೆ ಎಲ್ಲಿ ಬಂತು?

ಸಾಹಿತಿ, ಚಿಂತಕನೊಬ್ಬ ಸತ್ತಾಕ್ಷಣ ಅವರು ಬದುಕಿದ ಮನೆ, ತೋಟ ಅವನನ್ನು ಮಣ್ಣು ಮಾಡಿದ ಸ್ಥಳ ಇತ್ಯಾದಿಗಳಲ್ಲಿ ಆತನನ್ನು ಹುಡುಕುವ ಪ್ರಯತ್ನ ನಡೆಸುತ್ತೇವೆ. ಒಂದು ಸಂಸಾರ ಬಾಳಿ ಬದುಕಿ, ಜೀವ ತುಂಬ ಬೇಕಾದ ಮನೆಯನ್ನು ಸಾಹಿತಿಯ ಹೆಸರಿನಲ್ಲಿ ನಾವು ‘ಗೋರಿ’ಯನ್ನಾಗಿ ಪರಿವರ್ತಿಸುತ್ತೇವೆ. ಯಾವ ಸಾಹಿತಿಯೂ ತಾನು ಬದುಕಿ, ಬಾಳಿದ ಮನೆ ಮನುಷ್ಯರಿಲ್ಲದ, ಮಕ್ಕಳ ಚಿಲಿಪಿಲಿಯಿಲ್ಲದ, ನಗು, ಅಳುವಿಲ್ಲದ ಶ್ಮಶಾನವಾಗಲು ಬಯಸುವುದಿಲ್ಲ. ನಾವು ಯಾವ ಕಾರಣಕ್ಕಾಗಿ ಆತ ಬದುಕಿದ ಮನೆಯನ್ನು ನೋಡಬೇಕು. ಒಬ್ಬ ಸಾಹಿತಿಯ ಕುರಿತಂತೆ ನಮಗೆ ನಿಜಕ್ಕೂ ಕಾಳಜಿಯಿದ್ದರೆ, ನಾವು ಉಳಿಸಬೇಕಾದದ್ದು ಆತನ ಚಿಂತನೆಗಳನ್ನು, ಆಲೋಚನೆಗಳನ್ನು ಆತನ ಕೃತಿಗಳನ್ನು, ಸಾಹಿತಿಗಳ ಆಲೋಚನೆ, ಚಿಂತನೆಗಳು, ಆತನ ಸಾಹಿತ್ಯಕ ಕೊಡುಗೆಗಳು ನಮ್ಮ ಕಣ್ಮುಂದೆಯೇ ಇಲ್ಲವಾಗುತ್ತಿರುವಾಗ, ನಾವು ಆತನ ಮನೆ, ಕಕ್ಕಸು, ಬಚ್ಚಲು ಮನೆ, ತೋಟ ಇತ್ಯಾದಿಗಳನ್ನು ಉಳಿಸಿ, ಅದನ್ನು ಸ್ಮಾರಕವಾಗಿಸಿ ಸಾಧಿಸುವುದಾದರೂ ಏನನ್ನು? ಈ ನಾಡನ್ನು ನಾವು ಸಾಹಿತಿಗಳ ಗೋರಿಗಳ ತೋಟವನ್ನಾಗಿಸಲು ಹೊರಟಿದ್ದೇವೆಯೇ? ಎಲ್ಲಿ ಕವಿಯನ್ನು ಜೀವಂತವಾಗಿ ಉಳಿಸಲು ನಮಗೆ ಸಾಧ್ಯವಿತ್ತೋ ಅಲ್ಲಿ ಆತನನ್ನು ಉಳಿಸುವ ಪ್ರಯತ್ನ ಮಾಡದೇ, ಆತನ ಮನೆ, ತೋಟ ಇತ್ಯಾದಿಗಳನ್ನು ಗೋರಿಗಳನ್ನಾಗಿಸಿ ಆರಾಧಿಸಲು ಹೊರಟಿರುವ ನಾವು ಕವಿ, ಸಾಹಿತಿಗಳಿಗೆ ನಿಜಕ್ಕೂ ಗೌರವ ಸಲ್ಲಿಸುತ್ತಿದ್ದೇವೆ ಎಂದೆನಿಸುತ್ತದೆಯೇ?

ತೇಜಸ್ವಿ, ಲಂಕೇಶ್ ಇಲ್ಲದ ಈ ದಿನಗಳ ಕುರಿತಂತೆ ನಾವು ಒಂದಿಷ್ಟು ಯೋಚಿಸೋಣ. ಅವರು ಯಾವ ಶಕ್ತಿಯನ್ನು ವಿರೋಧಿಸುತ್ತಿದ್ದರೋ ಆ ಶಕ್ತಿ ಇಂದು ಕರ್ನಾಟಕದಲ್ಲಿ ವಿಜೃಂಭಿಸುತ್ತಿದೆ. ಬಿಜೆಪಿಯ ವಿರುದ್ಧ ತನ್ನ ಜೀವಮಾನದುದ್ದಕ್ಕೂ ತೇಜಸ್ವಿ ಮಾತನಾಡಿದರು.. ಆದರೆ ಇಂದು ಆಗುತ್ತಿರುವುದೇನು? ತೇಜಸ್ವಿಯ ನೆಲದಲ್ಲಿ ಸಂಘಪರಿವಾರ ತನ್ನ ಹೆಡೆಯನ್ನು ಬಿಚ್ಚಿದೆ. ಲಂಕೇಶ್, ರಾಮ್‌ದಾಸ್, ತೇಜಸ್ವಿ ಇಲ್ಲದ ಈ ದಿನಗಳಲ್ಲಿ ‘ಗಬ್ಬು’ ಸಾಹಿತಿಗಳಿಗೆ ಹುಚ್ಚು ಧೈರ್ಯ ಬಂದಿದೆ. ಕೆ.ವಿ.ತಿರುಮಲೇಶ್, ಸರಜೂಕಾಟ್ಕರ್, ಚಿದಾನಂದ ಮೂರ್ತಿ, ಟಿ.ಎನ್.ಸೀತಾರಾಂ, ಭೈರಪ್ಪ... ಹೀಗೆ... ಪರಸ್ಪರರ ನಡುವಿನ ಪರದೆ ತೆಳುವಾಗಿದೆ. ಇಂತಹ ದಿನಗಳಲ್ಲಿ ನಾವು ತೇಜಸ್ವಿ, ಲಂಕೇಶ್, ಕಾರಂತರ ಬರಹಗಳನ್ನು, ಕೃತಿಗಳನ್ನು ಜೀವಂತವಾಗಿಡಲು ಶ್ರಮಿಸಬೇಕು ಹೊರತು ಅವರ ಗೋರಿಗಳನ್ನಲ್ಲ. ಶಿವರಾಮ ಕಾರಂತರು ಬಾಳಿ ಬದುಕಿದ ಕರಾವಳಿಯ ಇಂದಿನ ಸ್ಥಿತಿ ಹೇಗಿದೆ? ಅಭಿವೃದ್ಧಿ ದಾಪುಗಾಲಿಡುತ್ತಿದೆ. ಪರಿಸರ ಕೆಟ್ಟು ಕೆರಹಿಡಿಯುತ್ತಿದೆ. ಇಂತಹ ವಾತಾವರಣದಲ್ಲಿ ಶಿವರಾಮಕಾರಂತರ ಮನೆ ನೆಲಸಮವಾಗುವುದು ಒಂದು ರೂಪಕದಂತಿದೆ. ಅಷ್ಟೇ.

ನಾವು ಈ ನಾಡಿನಲ್ಲಿ ಸಾಹಿತಿಗಳ, ಕವಿಗಳ, ಚಿಂತಕರ ಗೋರಿಗಳ ತೋಟವನ್ನು ಬೆಳೆಯುವುದು ಬೇಡ. ಅದರ ಕಾವಲುಗಾರರಾಗುವುದು ಬೇಡ. ಕುವೆಂಪು ಬಾಳಿದ ಮನೆಗೂ, ಮಲೆನಾಡಿನ ಒಬ್ಬ ‘ಗುತ್ತಿ’ ಬಾಳಿದ ಮನೆಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಬರೇ ಕಲ್ಲು ಗೋಡೆಗಳವು. ಈ ನಾಡಿನಲ್ಲಿ ಎಲ್ಲ ಸಾಹಿತಿಗಳ ಸ್ಮಾರಕಗಳು, ಮನೆಗಳು ಬಿದ್ದು ಹೋಗಲಿ. ಉಳಿವುದಿದ್ದರೆ ಅವರ ಆಲೋಚನೆಗಳು, ಚಿಂತನೆಗಳು, ಬರಹಗಳು, ಕೃತಿಗಳು ಉಳಿಯಲಿ. ಅವುಗಳ ತಳಹದಿಯಲ್ಲಿ ಸುಭದ್ರ ಕನ್ನಡ ನಾಡು ರೂಪು ಪಡೆಯಲಿ. ಕವಿ, ಸಾಹಿತಿಗಳ ಗೋರಿಗಳ ಮೇಲೆ ಈ ನಾಡನ್ನು ಕಟ್ಟುವ ಆಲೋಚನೆಗಳನ್ನು ಬಿಟ್ಟು ಬಿಡೋಣ. ಒಂದು ವೇಳೆ ಒಬ್ಬ ಕವಿಯ ಗೋರಿ, ಮನೆ, ತೋಟ ಮಹತ್ವವನ್ನು ಪಡೆಯುತ್ತದೆಯೆಂದಾದರೆ ಆ ಮಹತ್ವ ಆ ಕವಿಯ ಕುಟುಂಬಕ್ಕೆ ಮಾತ್ರ ಸೀಮಿತವಾಗಿರಲಿ. ಅದರ ಮಹತ್ವವನ್ನು ನಿರ್ಧರಿಸುವ ಸ್ವಾತಂತ್ಯ ಅವರಿಗೆ ಮಾತ್ರ ಇರಲಿ.

16 comments:

  1. ಮಹನೀಯರೇ, ನಿಮ್ಮ ನೋವಿನ ದನಿ ನಮಗೆಲ್ಲಾ ವೇದ್ಯ, ಆದರೂ ಕಾರಂತರು ಕಾರಂತರೇ. ಕಾರಂತರ ಮನೆಯನ್ನು ಕೆಡವಿದಂತೇ ಕುವೆಂಪು ಮನೆಯನ್ನು ಕೆಡವಿದರೂ ನಿಮಗೇನೂ ಅನ್ನಿಸುವುದಿಲ್ಲ ಎಂಬುದು ನೀವು ಶುದ್ಧ ಸಾಹಿತ್ಯವನ್ನು ಇನೂ ಅರಿತಿಲ್ಲಾ ಎಂಬುದನ್ನು ಸ್ಪಷ್ಟಪಡಿಸುತ್ತದೆ! ಸಾವಿರಾರು ಕುಟುಂಬಗಳು ಬೀದೀ ಪಾಲಾಗಿದ್ದಕ್ಕೂ ಕಾರಂತರ ಮನೆ ಕೆಡವಿದ್ದಕ್ಕೂ ಕಾರಂತರು ಕಾರಣರಲ್ಲವಲ್ಲ ? ಹಾಗೆ ನೋಡಿದರೆ ಕುಪ್ಪಳಿಯ ಕುವೆಂಪು ಮನೆ ಕೂಡ ಪ್ರದರ್ಶನಕ್ಕೇ ಇದೆ! ನಿಮಗೆ ಸಾಹಿತಿಗಳ ಬಗ್ಗೆ ಇರುವ ಗೌರವ ಎಷ್ಟು ಎಂಬುದು ಇಲ್ಲಿ ವ್ಯಕ್ತವಾಗುತ್ತದೆ !! ಕಾರಂತರು ನಮ್ಮ-ನಿಮ್ಮಂತೇ ಪುಡಿಸಾಹಿತಿಯಲ್ಲ! ಅವರೊಂದು ವಿಶ್ವಕೋಶವೇ ಆಗಿದ್ದರು ! ಅವರ ಮನೆ ಕೆಡವಿದ್ದಕ್ಕೆ ಅನುಮೋದಿಸಿದ ನಿಮ್ಮ ಬರವಣಿಗೆಗೆ ನನ್ನ ಧಿಕ್ಕಾರವಿದೆ.

    ReplyDelete
    Replies
    1. V R Bhat... nimma dikkara nive ittukolli

      Delete
    2. https://www.facebook.com/photo.php?fbid=2436914821868&set=a.1495284041687.58127.1821676861&type=1&theater

      ಮೇಲಿನ ಲಿಂಕ್ ನೋಡಿ.. ನೀವು ಸಮರ್ಥಿಸುವ ವ್ಯಕ್ತಿಯ ನಿಜ ಬಂಡವಾಳ.. ಗುಜರಿ ಆಯುವುದಕ್ಕೆ ಸ್ವತಂತ್ರರು ಅದನ್ನ ಎಲ್ಲೆಂದರಲ್ಲಿ ಸುರಿದು ಕೊಚ್ಚೆ ಮಾಡುವುದು ಬೇಡ

      Delete
    3. V R ಭಟ್ ಸರ್.. ಇಂತಹ ಕಜ್ಜಿ ನಾಯಿಗಳಿಗೇಕೆ ವಿಮರ್ಶಿಸಲು ಹೋಗುತ್ತೀರಿ... ಭಾರತಾಂಭೆಯ ಬೆತ್ತಲೆ ಚಿತ್ರಕ್ಕೆ ಬೆತ್ತಲೆ ಕವನ ಪ್ರಕಟಿಸಿ ಹಲ್ಲು ಕಿಸಿಯುವ ಹಂದಿ ಜನ್ಮ ಅದು

      Delete
  2. "ಕಾರಂತರ ಮನೆಯನ್ನೇ ಸ್ಮಾರಕದಂತೆ ಉಳಿಸಿಕೊಳ್ಳಲಾಗದ ಸಮಾಜ ಇನ್ನು ಅವರ ಕೃತಿ ಚಿಂತನೆಗಳು ಹಾಗೂ ಬೋಧನೆಗಳನ್ನು ಜೀವಂತವಾಗಿರಿಸಿಕೊಳ್ಳಲು ಸಾಧ್ಯವಿದೆಯಾ?" ಎಂಬುದನ್ನು ನಾವು ಚಿಂತಿಸಬೇಕು.!! ಅವರ ಬರಹಗಳಿಗೂ ಮನೆಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ನಾನು ಒಪ್ಪಲಾರೆ. ಯಾಕೆಂದರೆ ಪ್ರತಿಯೊಬ್ಬರೂ ಸಂಪೂರ್ಣವಾಗಿ ಒಬ್ಬಸಾಹಿತಿಯನ್ನು ಅಧ್ಯಯನ ಮಾಡುವುದು ಅಸಾಧ್ಯ ಅಥವಾ ಭಾಗಶಃ ಮಾತ್ರ ಸಾಧ್ಯ ಎನ್ನಬಹುದು, ಅಲ್ಲದೇ ಒಬ್ಬ ಸಾಹಿತಿ/ಕವಿಯನ್ನು ಅಧ್ಯಯನ ಮಾಡುತ್ತಾ ಅವರು ಬೆಳೆದ ಪರಿಸರ ಮನೆ ಹಾಗೂ ಸುತ್ತಮುತ್ತಲಿನ ಸಾಂಸ್ಕೃತಿಕ ಹಾಗೆಯೇ ವೈಚಾರಿಕ ವೈವಿಧ್ಯತೆಗಳನ್ನು ಗಮನಿಸಿದಾಗ ಕೂಲಂಕುಶವಾಗಿ ಪರೀಕ್ಷಿಸಿದಾಗ ನಿಜವಾದ ಕವಿಹೃದಯದವನಿಗಾಗುವ ಆನಂದ ಅನುಭವಗಳು ಬೇರೆಯವೇ ಆಗಿದೆ. ಒಬ್ಬ ಸಾಹಿತಿಯ ಬೋಧನೆ ಚಿಂತನೆಗಳು ಅವನು ಬೆಳೆದ ವಾತಾವರಣ ಹಾಗೂ ಆಗಿನ ಸಾಮಾಜಿಕ ಪರಿಸ್ಥಿತಿಗಳಿಂದ ಪ್ರಭಾವಿತವಾಗಿರುತ್ತದೆಯೆನ್ನುವುದಕ್ಕೆ ಯಾವುದೇ ಸಂಶಯವಿಲ್ಲ! ಅದನ್ನು ಅರಿಯಲು ಕನಿಷ್ಠ ಅವರ ಮನೆಯಾದರೂ ಮುಂದಿನ ಸಮಾಜಕ್ಕೆ ಉಳಿದುಕೊಂಡಿತ್ತು, ಅದನ್ನೂ ನಾಶಮಾಡುವುದು ನಮ್ಮ ಸಮಾಜದಲ್ಲಿರುವ ಅಂಧಃಕಾರವನ್ನು ಅಥವಾ ಬೇಜವಾಬ್ದಾರಿಯನ್ನು ತೋರುತ್ತದೆ ಎಂಬುದರಲ್ಲಿ ಲೇಶಮಾತ್ರವೂ ಮಿಥ್ಯೆಯಿಲ್ಲ. ಒಬ್ಬವ್ಯಕ್ತಿಯ ಬರಹ ಅವನ ಇತಿಹಾಸ ಹಾಗೂ ವರ್ತಮಾನವನ್ನು ಅವಲಂಬಿಸಿರುತ್ತದೆಯಷ್ಟೇ! ಹಾಗೇ ಯಾವುದೇ ರೀತಿಯಲ್ಲಿ ಸಾಹಿತ್ಯದಲ್ಲಿ ಗಟ್ಟಿತನ ಇರಬೇಕು ಎಂತಾದರೆ ಹಿಂದಿನ ಸಾಹಿತಿಗಳ ಅಧ್ಯಯನ ತುಂಬಾ ಅವಶ್ಯಕ. ಅರ್ಥವಿಲ್ಲದ ನಾಲ್ಕು ಸಾಲು ಬರೆಯುವುದೇ ದೊಡ್ಡ ಸಾಹಿತ್ಯವೆಂದು ಗಣಿಸಲ್ಪಡುತ್ತಿರುವ ಇಂದಿನ ಸಮಾಜದಲ್ಲಿ "ನಡೆದಾಡುವ ವಿಶ್ವಕೋಶ" ಎಂದೇ ಕಡಲತೀರದ ಭಾರ್ಗವರೆಂದೇ ಖ್ಯಾತರಾಗಿದ್ದವರ ಮನೆಯನ್ನು ನೆಲಸಮ ಮಾಡಿದ ಘಟನೆ ತುಂಬಾ ಅವಮಾನದಾಯಕ ಖೇದಕರ. ಅದರಲ್ಲೂ ನೀವು ಸ್ಮಾರಕಸ್ವರೂಪಿ ಮನೆಗಳನ್ನು ಕೆಡವುತ್ತಿರುವುದನ್ನು ನೀವು ಬೆಂಬಲಿಸುತ್ತೀರಾದರೆ ನಿಮಗೂ ನನ್ನ ಧಿಕ್ಕಾರ!!
    ನೀವಂದಂತೆ ಅವರ ಕೃತಿಗಳು ಹಾಗೂ ಚಿಂತನೆಗಳನ್ನು ಜೀವಂತವಾಗಿರಿಸಿಕೊಳ್ಳಬೇಕಾದದ್ದು ಆದ್ಯಕರ್ತವ್ಯ. ನಿಜ ಒಪ್ಪುತ್ತೇನೆ. ಆದರೆ ಅದು ಇಂದು ಸಾಧ್ಯವಾಗುತ್ತಿದೆಯಾ?? ಯಾರು ಅವರನ್ನೆಲ್ಲಾ ಓದುತ್ತಾ ಇದ್ದಾರೆ. ನನ್ನ ನಿಮ್ಮ ಹಾಗೇ ಕೇವಲ ಬ್ಲಾಗ್ ಲೋಕಗಳ ಮೂಲಕ ಸಾಹಿತ್ಯದ ಮೆಟ್ಟಿಲೇರುತ್ತಿರುವವರೇ ಅಲ್ಲವೇ ಪ್ರಸ್ತುತ ಅವರ ಚಿಂತನೆಬರಹಗಳನ್ನು ಜೀವಂತವಾಗಿಟ್ಟುಕೊಳ್ಳಬೇಕಾದವರು??

    ReplyDelete
  3. ನಿಜ, ನಿಮ್ಮ ಅಭಿಪ್ರಾಯ ಕೊಂಚ ಬಿರುಸು ಅಂತ ಅನ್ನಿಸಿದರೂ ನಿಮ್ಮ ವಾದದಲ್ಲಿ ಹುರುಳಿದೆ. ಅದರಲ್ಲೂ ತೀರ್ಥಹಳ್ಳಿ ಮೂಲದ ನನ್ನಂತವರಿಗೆ ಇವತ್ತು ಕುವೆಂಪು ಪ್ರತಿಷ್ಠಾನ ಎಂಬ ಬಿಜಿನೆಸ್ ಸೆಂಟರ್ ನೋಡಿದಾಗೆಲ್ಲ ಸಂಕಟವಾಗುತ್ತದೆ. ಇಲ್ಲಿ ಗಮನಿಸಬೇಕಾಗಿದ್ದು ಏನೆಂದರೆ ತೇಜಸ್ವಿ ಬದುಕಿದ್ದಾಗಲೇ ಕುಪ್ಪಳ್ಳಿಗೆ ಹೀಗೊಂದು ಟಚ್ ಸಿಕ್ಕಿತ್ತ ಎಂಬುದು! ಬಿಡಿ, ಕಾರಂತರದ್ದೊ ಇನ್ಯಾರದ್ದೊ ಸ್ಮಾರಕಗಳಿಗೆ ಇವತ್ತಿನ ಮಾರುಕಟ್ಟೆ ಸಂಸ್ಕೃತಿಯಲ್ಲಿ ಸಿಗುವ ಬೆಲೆ ಇದು ಅಂತ ಸಿನಿಕತೆಯ ಮಾತುಗಳನ್ನೂ ಆಡಿಬಿಡಬಹುದು.
    ಆದರೆ ಬಷೀರ್ ತರಹದ ಸಹೃದಯರೂ ಯೋಚಿಸಬೇಕಾದ ಕೆಲವು ವಿಚಾರಗಳು ಇಲ್ಲಿವೆ ಅನ್ನಿಸುತ್ತವೆ. ಒಬ್ಬ ರಾಜಕಾರಣಿಯ ಪ್ರತಿಮೆ, ಸ್ಮಾರಕ ಇರುವುದಕ್ಕಿಂತ ಹೆಚ್ಚಾಗಿ ಒಬ್ಬ ಸಾಹಿತಿಯ ಸ್ಮಾರಕ ಇರುವುದು ಲೇಸು. ಅದು ಏನಾಗುತ್ತೊ, ಅವರ ಆಶಯಗಳು ಏನಾಗುತ್ತವೊ ಅದು ಬೇರೆ ಮಾತು..ಆದರೆ ಹಾಗೊಂದು ಕುರುಹು ಮುಂದಿನ ಪೀಳಿಗೆಗೆ ಕೊಂಚ ಚಿಂತೆಗೆ ಹಚ್ಚಬಲ್ಲದು ಎಂಬುದು ನನ್ನ ನಂಬಿಕೆ.
    ಇನ್ನು ವಿ.ಆರ್. ಭಟ್ ತರಹದ ಸ್ವಘೋಷಿತ ಸಾಹಿತಿ ಕಂ ವಿಕೃತಿ ವಾದದ ಬಗ್ಗೆ ವ್ಯಾಕ್..ವ್ಯಾಕ್..ವ್ಯಾಕ್....

    ReplyDelete
  4. ಪ್ರಸ್ತುತವಾಗಿ ತಾವೂ ಆರಾಧಿಸುವಂತೆ. ಹಲವಾರೂ ಗೋರಿಗಳಿವೆ. ಆ ಗೋರಿಗಳಿಗೆ ಪೂಜೇ ಸಲ್ಲಿಸುವುದಿಲ್ಲವೆ. ಅದು ಪವಿತ್ರವಾದ ಸ್ಥಳವಲ್ಲವೆ. ಪ್ರಯಾಣಿಸುತ್ತ ಕಷ್ಟ ನಷ್ಟಗಳೊಂದಿಗೆ ಹೋಗಿ ತಮ್ಮ ಗೌರವವನ್ನು ತೋರ್ಪಡಿಸಿಕೊಳ್ಳುವುದಿಲ್ಲವೆ. ಹಾಗಿದ್ದಲ್ಲಿ ಎಲ್ಲಾ ಗೋರಿಗಳನ್ನು ನೆಲೆಸಮಮಾಡಿಸಿ ಕೇವಲ ಗ್ರಂಥಗಳನಷ್ಟೆ ಪೂಜಿಸಬಹುದಲ್ಲ ?. ಮೊದಲಿಗೆ ಗೋರಿ ಅನ್ನೋ ಪದ ಹಿಯ್ಯಾಳಿಸುವಂತಿದೆ. ಒಬ್ಬ ವ್ಯಕ್ತಿಯ ಮೌಲ್ಯವನ್ನು ಕುಗ್ಗಿಸುವಂತಿದೆ. ಇದು ಖಂಡನೀಯ. ಶಿವರಾಮ ಕಾರಂತರನ್ನು ಬದುಕ್ಕಿದಾಗಷ್ಟೆ ಗೌರವಿಸಿ ಸತ್ತ ನಂತರ ಗೋರಿ ಎಂದು ಅಪಮಾನ ಗೈಯುವುದು ಯಾವ ನ್ಯಾಯ ?. ಅವರು ಬಾಳಿ ಬೆಳದ ಮನೆ ಸ್ವಾರಕಗಳನ್ನು ಕೆಡವಿ ಬರೀ ಪುಸ್ತಕಗಳನ್ನಷ್ಟಕ್ಕೆ ಗೌರವ ಸಲ್ಲಿಸುವುದು ಅಡಿಪಾಯವೇ ಇಲ್ಲದ ಅರಮನೆಯಂತೆ....

    ReplyDelete
    Replies
    1. ಭಾಷೀರ್ ಹೇಳಿದುದರ ಸಾರ ಪುಸ್ತಕಗಳನ್ನ ಗೌರವಿಸಿ ಅಂತಲ್ಲ. ಪುಸ್ತಕಗಳನ್ನ ಓದಿ ಅಂತ.

      Delete
    2. ವಸಂತ್ ಅವರೇ,
      ಯಾವನೋ ಹೆಸರಿಲ್ಲದ ಮುಸಲ್ಮಾನನ ಘೋರಿ ರಸ್ತೆಯ ನಡುಮಧ್ಯೆಯಿದ್ದರೂ ಅದನ್ನು ಕೆಡುವುದಕ್ಕೆ ವಿರೋಧಿಸುವ ಬಷೀರರಂತಹವರು ಶಿವರಾಮ ಕಾರಂತರಂಥಹ ಹಿರಿಯರ ಸ್ಮಾರಕವನ್ನು ಗೋರಿ ಎಂದು ಕರೆಯುತ್ತಾರೆ. ಅವರ ಮುಕ್ತ ಚಿಂತನೆಗಳನ್ನು!? ಅನಾಮಿಕನಾಗಿರುವ ಚಂದ್ರಶೇಖರ್ ಐಜೂರರಂತವರು ಸಮರ್ಥಿಸುತ್ತಾರೆ. ಬಷೀರ್ ಅವರು ಹೇಳಿದ್ದು ಪುಸ್ತಕಗಳನ್ನು ಓದಿ ಎನ್ನುವುದು ಸರಿಯಾಗಿಯೇ ಇದೆ ಆದರೆ ಅದನ್ನು ವ್ಯಕ್ತಪಡಿಸುವ ಹಿಂದೆ ಅವರ ವಿಕೃತ ಮನೋಭಾವವನ್ನೂ ವ್ಯಕ್ತ ಮಾಡುತ್ತಿರುವುದು ಅಸಹ್ಯಕರವಾಗಿದೆ.

      Delete
  5. ಪೂರ್ವಗ್ರಹ ಪೀಡಿತ ಬರಹಕ್ಕೆ ಚಂದದ ನಿರೂಪಣೆ.ಎಂದಿನಂತೆಯೇ ಬಲಪಂತೀಯರನ್ನ ಬಯ್ಯುವದರ ಮೂಲಕ ಕೊನೆಗೊಂಡಿದೆ.

    ReplyDelete
    Replies
    1. ಯಾಕೋ ಹಲವರು ಬುದ್ದಿಜೀವಿಗಳಾಗುವ ತವಕದಲ್ಲಿದ್ದಾರೆ.. ಗುಜರಿ ಆಯುವ ಹುಡುಗ ಯಾವನೋ ತಿರಬೋಕಿ ಬಿಡಿಸಿ ಭಾರತಾಂಬೆಯ ಬೆತ್ತಲೆ ಚಿತ್ರಕ್ಕೆ ಕವನ ಬರೆದು ಬಡಕಲು ದೇಹಸ ಸೂಳೆ ಎಂದು ಬರೆದರೂ ಅತ್ತ ಒಂದು ವಿಮರ್ಶೆಯೂ ಮಾಡದೆ.. ಗುಜರಿಯಲ್ಲಿ ಸಿಗುವುದೆಲ್ಲಾ ಕಡಿಮೆ ಬೆಲೆಗೆ ಸಿಗುವುದೆಂಬ ಭ್ರಮೆಯಿಂದಲೋ ಏನೋ ಸಮರ್ಥಿಸಿಕೊಳ್ಳೋಕೆ ನಾ ಮುಂದು ತಾ ಮುಂದು ಅಂತ ಸ್ಪರ್ಧೆಗಿಳೀತಾರೆ... ಅಂತಹವರಿಗೆ ನನ್ನ ಧಿಕ್ಕಾರ

      Delete
  6. ನಾನು ಸಾಹಿತ್ಯವನ್ನು ತುಂಬಾ ಆಳದಿಂದ ಅಭ್ಯಸಿಸಿದವನಲ್ಲ ಆದರೂ ನನಗನ್ನಿಸುವ ಕೆಲವು ಮಾತುಗಳನ್ನೇಳಲಿಚ್ಚಿಸುತ್ತೇನೆ.. ಸೂಕ್ಷ್ಮ ವಿಷಯದ ಕುರಿತಾದ ಬರಹ ಇದು. ಒಬ್ಬ ಸಾಹಿತಿ ತನ್ನ ಚಿಂತನೆಗಳು, ಸಾಹಿತ್ಯ ಮತ್ತು ಆಲೋಚನೆಗಳ ಮೂಲಕ ಮುಂದಿನ ಪೀಳಿಗೆಗೆ ಬಳುವಳಿಯಾಗಲಿ ಎಂಬ ಆಶಯ ಹೊತ್ತ ನಿಮ್ಮ ಲೇಖನ ಚೆನ್ನಾಗಿ ನಿರೂಪಿತವಾಗಿದೆ ಬಷೀರ್ ರವರೆ.. ನನಗನ್ನಿಸಿದಂತೆ ನಿಮ್ಮ ಲೇಖನದಲ್ಲಿ ಯಾವುದೇ ಪೂರ್ವಾಗ್ರಹ ಪೀಡಿತ ನಡವಳಿಕೆಯೂ ನನಗೆ ಕಾಣಿಸಲಿಲ್ಲ, ನಿಮಗನ್ನಿಸಿದ್ದನ್ನು ಹಾಗೇ ಹೇಳಿದ್ದೀರಿ.. ಒಂದೇ ಒಂದು ಹಿಡಿಸದ ವಿಚಾರ ರಾಜಕೀಯವನ್ನು ಅಡ್ಡ ತಂದಿದ್ದು, ಸಾಹಿತಿಗಳನ್ನು ಸಾಹಿತಿಗಳಾಗಿರುವಂತೆಯೇ ಬಿಡೋಣ ರಾಜಕೀಯ ಗಬ್ಬು ನಾರುತ್ತಿದೆ ಹಾಗಿರುವಾಗ ಸ್ವರ್ಗಸ್ಥರಾದವರನ್ನು ಇಲ್ಲಿ ತಂದು ನಾರಿಸುವ ಅಗತ್ಯವಿಲ್ಲ.. ಇನ್ನು ಸರ್ಕಾರದ ಕುಕೃತ್ಯದಿಂದ ಕಾರಂತರ ಮನೆ ನೆಲಸಮ ಹೊಂದಿದ್ದನ್ನು ವಿಡಂಬನಾತ್ಮಕವಾಗಿ ಖಂಡಿಸಿದ್ದೀರಿ ಅದು ಮನಮುಟ್ಟುತ್ತದೆ.. ಇನ್ನು ಮನೆಯನ್ನು ಹೊರತುಪಡಿಸಿದಂತೆ ಉಳಿದ ಆಸ್ತಿಯ ಮಾರಾಟದ ವಿಚಾರದಲ್ಲಿ ನೀವು ಹೇಳಿರುವ ಮಾತುಗಳಲ್ಲಿ ಉರುಳಿದೆ.. ಹಣದ ತುರ್ತಿನ ವಿಷಯದಲ್ಲಿ ಅವರ ಕಷ್ಟಗಳ ಪರಿಹಾರವೇ ಮುಖ್ಯವಾಗುತ್ತದೆಯೇ ಹೊರತು ಜೀವವಿಲ್ಲದ ಸ್ಮಾರಕಗಳನ್ನು ಉಳಿಸಿಕೊಳ್ಳುವುದಲ್ಲ ಎಂಬುದು ಸತ್ಯ.. ಆದರೆ ಸಾಹಿತಿಗಳನ್ನು ಅರಿಯಲು ಅವರು ಒಡನಾಡಿದ ಪರಿಸರ ಮತ್ತು ಮನೆಗಳು ಸಹಕಾರಿಯಾಗುತ್ತವೆ.. ತೋಟ, ಇತರೆ ಆಸ್ತಿಗಳ ವಿಚಾರ ಅವರ ಮನೆಯವರಿಗೇ ಇರಲಿ ಆದರೆ ಮನೆಗಳಾದರೂ ಸ್ಮಾರಕಗಳಾಗಿ ಉಳಿಯುವಂತಾಗಿದ್ದರೆ ಚೆಂದವಿತ್ತು ಎಂಬುದು ನನ್ನ ಅನಿಸಿಕೆ.. ಚಿಂತನೆಗಚ್ಚುವ ಲೇಖನ..

    ReplyDelete
  7. ಗೆಳೆಯ ಬಿ.ಎಮ್.ಬಷೀರರ ಈಚಿನ ಬರಹಗಳಿಗೆ ನಾನು ಎಷ್ಟೊಂದು ಮಾರುಹೋಗಿದ್ದೇನೆ ಎಂದರೆ ಒಮ್ಮೆ ಯು.ಆರ್.ಅನಂತಮೂರ್ತಿಯವರು ದೇವನೂರ ಮಹಾದೇವರ ಕುರಿತು ಹೇಳಿದ ಮಾತುಗಳನ್ನೇ ಬಷೀರರ ಬರಹಗಳ ಕುರಿತು ಹೇಳಬೇಕು ಅನ್ನಿಸುತ್ತಿದೆ. ಅವರ ಮಾತು ಹೀಗಿದೆ: "ನಾನು ಬಹುವಾಗಿ ಮೆಚ್ಚುವ ದೇವನೂರ ಮಹಾದೇವರಲ್ಲೂ ದಲಿತನ ವೈರಿಯ ಅಂತಃಕರಣವನ್ನು ಮುಟ್ಟಿ, ಅವನ ಮಾನವತ್ವವನ್ನು ಅವನಿಗೆ ನೆನಪು ಮಾಡುವ ಶಕ್ತಿ ಇದೆ."
    -ಚಂದ್ರಶೇಖರ್ ಐಜೂರ್

    ReplyDelete
  8. ಯಾಕೋ ಹಲವರು ಬುದ್ದಿಜೀವಿಗಳಾಗುವ ತವಕದಲ್ಲಿದ್ದಾರೆ.. ಗುಜರಿ ಆಯುವ ಹುಡುಗ ಯಾವನೋ ತಿರಬೋಕಿ ಬಿಡಿಸಿ ಭಾರತಾಂಬೆಯ ಬೆತ್ತಲೆ ಚಿತ್ರಕ್ಕೆ ಕವನ ಬರೆದು ಬಡಕಲು ದೇಹಸ ಸೂಳೆ ಎಂದು ಬರೆದರೂ ಅತ್ತ ಒಂದು ವಿಮರ್ಶೆಯೂ ಮಾಡದೆ.. ಗುಜರಿಯಲ್ಲಿ ಸಿಗುವುದೆಲ್ಲಾ ಕಡಿಮೆ ಬೆಲೆಗೆ ಸಿಗುವುದೆಂಬ ಭ್ರಮೆಯಿಂದಲೋ ಏನೋ ಸಮರ್ಥಿಸಿಕೊಳ್ಳೋಕೆ ನಾ ಮುಂದು ತಾ ಮುಂದು ಅಂತ ಸ್ಪರ್ಧೆಗಿಳೀತಾರೆ... ಅಂತಹವರಿಗೆ ನನ್ನ ಧಿಕ್ಕಾರ

    ReplyDelete