Thursday, January 12, 2012

ಹುಚ್ಚ ಮತ್ತು ಇತರ ಕತೆಗಳು

ಹುಚ್ಚ
ಅವನೊಬ್ಬ ಹುಚ್ಚ. ಅಥವಾ ಅವನನ್ನು ಹಾಗೆಂದು ಕರೆಯುತ್ತಿದ್ದರು. 
ತನ್ನಷ್ಟಕ್ಕೆ ಮಾತನಾಡುತ್ತಿದ್ದ. ತನಗೆ ತಾನೆ ನಗುತ್ತಿದ್ದ. ಎಲೆ, ಸೊಪ್ಪುಗಳನ್ನು ವಿಚಿತ್ರವಾಗಿ ಅಚ್ಚರಿಯಿಂದ ನೋಡುತ್ತಿದ್ದ. ಮಣ್ಣನ್ನು ಏನೋ ಅಮೂಲ್ಯ ವಸ್ತುವೋ ಎಂಬಂತೆ ಪರೀಕ್ಷಿಸುತ್ತಿದ್ದ. ಬಟ್ಟೆಗಳು ಕೊಳಗಾಗಿದ್ದವು. ಹರಿದಿದ್ದವು. ಗಡ್ಡ ಕೂದಲನ್ನು ತೆಗೆಯದೆ ವರ್ಷ ಕಳೆದಿತ್ತು. ಅಂತಹ ಹುಚ್ಚನ ಜೊತೆಗೆ ಸಂತ ಪ್ರತಿ ದಿನ ಒಂದೆರಡು ಗಂಟೆ ಕಳೆಯುತ್ತಿದ್ದ. ಹುಚ್ಚನ ಹುಚ್ಚು ಮಾತುಗಳನ್ನು ಕಿವಿಗೊಟ್ಟು ಕೇಳುತ್ತಿದ್ದ. ಕೆಲವುಗಳಿಗೆ ಉತ್ತರಿಸಲು ಪ್ರಯತ್ನಿಸುತ್ತಿದ್ದ. ಅಧ್ಯಾತ್ಮದ ಬಗ್ಗೆಯೂ ಚರ್ಚಿಸುತ್ತಿದ್ದ. ಇದು ಶಿಷ್ಯರಿಗೆಲ್ಲ ಅಸಹನೀಯವೆನ್ನಿಸಿತು. ಆದರೆ ಸಂತನನ್ನು ಪ್ರಶ್ನಿಸುವ ಧೈರ್ಯ ಸಾಲದೆ ಸುಮ್ಮಗಿದ್ದರು.
ಒಂದು ದಿನ ಸಂತ ಹುಚ್ಚನ ಜೊತೆ ಕಳೆದು ಆಶ್ರಮದಲ್ಲಿ ಮಂಕಾಗಿ ಕುಳಿತಿದ್ದ. ಶಿಷ್ಯರು ಕೇಳಿದರು. ‘‘ಏನಾಯಿತು ಗುರುಗಳೇ?’’
ಸಂತ ಆಕಾಶ ನೋಡಿ ಉತ್ತರಿಸಿದ ‘‘ನಾನು ಅವನಂತಾಗಲು ಇನ್ನೂ ಅದೆಷ್ಟು ಸಾಧನೆ ಮಾಡಬೇಕೋ?’’

ಕಲಿಕೆ
‘‘ಗುರುಗಳೇ...ನಾನು ಈ ಆಶ್ರಮಕ್ಕೆ ಸೇರಿ ಇಂದಿಗೆ ಒಂದು ವರ್ಷವಾಯಿತು. ನೀವೇಕೆ ಏನನ್ನೂ ಕಲಿಸುತ್ತಿಲ್ಲ?’’
‘‘ನನ್ನದೂ ಅದೇ ಪ್ರಶ್ನೆ. ಈ ಆಶ್ರಮಕ್ಕೆ ಸೇರಿ ನೀನು ಒಂದು ವರ್ಷವಾಯಿತು. ನೀನೇಕೆ ಏನೂ ಕಲಿಯುತ್ತಿಲ್ಲ?’’ ಸಂತ ಮರು ಪ್ರಶ್ನಿಸಿದ.?

ದರೋಡೆ
ಕಳ್ಳ ಮದುವೆ ಮನೆಗೆ ನುಗ್ಗಿದ.
ಹಣದ ತಿಜೋರಿಯ ಕೋಣೆ ಹೊಕ್ಕಾಗ ಅಲ್ಲಿ ದಂಪತಿಗಳು ಬಂದು ಬಿಟ್ಟರು.
ಬಂದವರು ಮದುವೆ ಹೆಣ್ಣಿನ ತಂದೆ ತಾಯಿ.
ಅವರಿಬ್ಬರು ತುಂಬಾ ಹೊತ್ತು ಪರಸ್ಪರ ಮಾತನಾಡಿ, ಬಳಿಕ ಕಣ್ಣೊರೆಸುತ್ತಾ ಅಲ್ಲಿಂದ ತೆರಳಿದರು.
ಕಳ್ಳ ತನಗೆ ತಾನೆ ನಿರಾಸೆಯಿಂದ ನುಡಿದ ‘‘ಈ ಮನೆಯನ್ನು ಈಗಾಗಲೇ ದರೋಡೆಕೋರರು ದೋಚಿ ಬಿಟ್ಟಾಗಿದೆ’’

ಶುಚಿ
ದಲಿತನೊಬ್ಬ ದೇವಸ್ಥಾನದ ಆವರಣವನ್ನು ಪ್ರವೇಶಿಸುತ್ತಿದ್ದ.
ಪುರೋಹಿತ ಆತನನ್ನು ತಡೆದ ‘‘ನಿಲ್ಲು. ನೀನು ಪ್ರವೇಶಿಸುವಂತಿಲ್ಲ. ಅಪವಿತ್ರವಾಗುತ್ತದೆ’’
ದಲಿತ ವಿನೀತನಾಗಿ ನುಡಿದ ‘‘ನಾನು ದೇವಸ್ಥಾನದ ಆವರಣವನ್ನು ಶುಚಿಗೊಳಿಸುವುದಕ್ಕೆ ಬಂದಿದ್ದೇನೆ...’’
‘‘ಓಹೋ..ಶುಚಿಗೊಳಿಸುವುದಕ್ಕೆ ಬಂದಿದ್ದೀಯ? ಹಾಗಾದರೆ ಹೋಗು....ಬೇಗ ಕೆಲಸ ಮುಗಿಸು....’’

ಊರು
‘‘ಗುರುಗಳೇ ಕನಸುಗಳಿಲ್ಲದ ಊರಿದೆಯೆ?’’
‘‘ಇದೆ. ಆ ಊರಿಗೆ ಸ್ಮಶಾನ ಎಂದು ಹೆಸರು’’

ಅನ್ನ
‘‘ಕೃತಘ್ನ, ನನ್ನ ಅನ್ನ ತಿಂದು ನೀನು ಬೆಳೆದಿದ್ದೀಯ, ಅದನ್ನು ಮರೆತೆಯ?’’
ಅವನು ಅಬ್ಬರಿಸಿದ.
‘‘ನಿಮ್ಮ ಅನ್ನವನ್ನು ನಾನು ತಿಂದದ್ದು ನಿಜವಾದರೆ ನೀವು ಹುಲ್ಲು ತಿಂದು ಬೆಳೆದಿರಾ?’’
ಅವನು ತಣ್ಣಗೆ ಮರು ಪ್ರಶ್ನಿಸಿದ.

ಪುನರ್ಜನ್ಮ
‘‘ನಿಮಗೆ ಪುನರ್‌ಜನ್ಮದಲ್ಲಿ ನಂಬಿಕೆ ಇದೆಯೆ?’’ ಶಿಷ್ಯ ಕೇಳಿದ.
‘‘ಇದೆ. ಮನುಷ್ಯ ತಾಯಿಯ ಹೊಟ್ಟೆಯಿಂದ ಒಮ್ಮೆ ಹುಟ್ಟಿದರೆ ಪರಿಸ್ಥಿತಿಗಳ ಹೊಟ್ಟೆಯಿಂದ ಪ್ರತಿ ಬಾರಿ ಹುಟ್ಟುತ್ತಾ, ಸಾಯುತ್ತಾ ಇರುತ್ತಾನೆ. ನಾನು ಈಗಾಗಲೇ ಹಲವು ಬಾರಿ ಹುಟ್ಟಿ, ಹಲವು ಬಾರಿ ಸತ್ತಿದ್ದೇನೆ’’ ಸಂತ ಉತ್ತರಿಸಿದ.

2 comments:

  1. ಕಲಿಕೆ, ದರೋಡೆ, ಶುಚಿ, ಊರು , ಅನ್ನ,ಪುನರ್ಜನ್ಮ...ಎಲ್ಲವೂ ಒಂದಕ್ಕಿಂತ ಒಂದು ಮಿಗಿಲು..ತಣ್ಣಗೆ ಆಲೋಚನೆಗೆ ಹಚ್ಚುತ್ತವೆ ಸರ್...ಹುಚ್ಚ ಅಷ್ಟು ಚೆನ್ನಾಗಿ ಅರ್ಥವಾಗಲಿಲ್ಲ.. ಮಿಕ್ಕವೆಲ್ಲವೂ ಸೂಪೆರ್ಬ್...

    ReplyDelete
  2. ಚುಟುಕು ಕಥೆಗಳು ಬೆಚ್ಚನೆಯಾ ಭಾವವರಳಿಸುತ್ತವೆ ಮತ್ತೆ ಚಿಂತನೆಗೆ ಹಚ್ಹುತ್ತವೆ.

    ReplyDelete