Thursday, September 29, 2011

ಸುಡುವ ನೆನಪುಗಳು..........

ಕೆಲವು ನೆನಪುಗಳೇ ಹಾಗೆ. ಅದರಿಂದ ಪಾರಾಗೂದಕ್ಕೆ ಎಷ್ಟು ಪ್ರಯತ್ನಿಸಿದರೂ ಮತ್ತೆ ಮತ್ತೆ ಕಾಲಿಗೆ ತೊಡರಿಕೊಳ್ಳುತ್ತಲೇ ಹೋಗುತ್ತದೆ. ಅಣ್ಣ ತೀರಿ ಹೋದ ಸುಮಾರು ಎರಡು ವರ್ಷಗಳ ಬಳಿಕ, ನಾನು ಅವನ ಅಳಿದುಳಿದ ಕತೆ, ಕವಿತೆ, ಹನಿಕವಿತೆ ಮತ್ತು ಒಂದೆರಡು ವರದಿಗಳನ್ನು ಒಟ್ಟು ಸೇರಿಸಿ ‘ಪರುಷ ಮಣಿ’ ಎಂಬ ಪುಸ್ತಕ ಮಾಡುವುದಕ್ಕೆ ಹೊರಟೆ. ಆಗ ಬೆಂಗಳೂರಿನಿಂದ ಆತ್ಮೀಯರಾದ ಶಿವರಾಮಯ್ಯ ಅವರನ್ನು ಸಂಪರ್ಕಿಸಿದ್ದೆ. ಒಂದು ಕಾಲದಲ್ಲಿ ಶಿವರಾಮಯ್ಯ ಮತ್ತು ಅಣ್ಣ ರಶೀದ್ ನಡುವೆ ಸುಮಾರು ಎರಡು ವರ್ಷಗಳ ಕಾಲ ಸುದೀರ್ಘ ಪತ್ರ ವ್ಯವಹಾರ ನಡೆದಿತ್ತು. ಆದರಲ್ಲಿ ಖಾಸಗಿಯಲ್ಲದ, ಸಾರ್ವತ್ರಿಕವಾಗಬಲ್ಲ ಒಂದಿಷ್ಟು ಪತ್ರಗಳು, ಬರಹಗಳನ್ನು ನನಗೆ ಕಳುಹಿಸಿಕೊಟ್ಟರು. ‘‘ಇವೆಲ್ಲ ರಶೀದ್ ನನಗೆ ಬರೆದದ್ದು. ಇದರಲ್ಲಿ ಕೆಲವನ್ನು ಆಯ್ಕೆ ಮಾಡಿ ನೀವು ಪ್ರಕಟಿಸುವ ಪುಸ್ತಕದಲ್ಲಿ ಬಳಸಿಕೊಳ್ಳಬಹುದು’’ ಎಂದರು. ಒಂದು ರಾಶಿ ಪತ್ರಗಳು ನನ್ನ ಮುಂದಿದ್ದವು. ಬಹುಶಃ ಅದೆಲ್ಲವೂ ಆತ ಅಂತಿಮ ಬಿ.ಎ.ಯಲ್ಲಿ ಕಲಿಯುತ್ತಿರುವಾಗ ಬರೆದಿರುವ ಪತ್ರಗಳು. ಅವನ ಪ್ರಪ್ರಥಮ ಕವನ ‘ಅಶಾಂತಿ ಪರ್ವ’ ರಾಜ್ಯ ಮಟ್ಟದಲ್ಲಿ ಬಹುಮಾನವನ್ನು ಪಡೆದು, ಪತ್ರಿಕೆಯೊಂದರಲ್ಲಿ ಪ್ರಕಟವಾದಾಗ ಅದಕ್ಕೆ ಶಿವರಾಮಯ್ಯ ಆಕಸ್ಮಿಕವಾಗಿ ಅವನಿಗೆ ಪತ್ರದ ಮೂಲಕ ಪ್ರತಿಕ್ರಿಯಿಸಿದ್ದರು. ಹಾಗೆ ಆಕಸ್ಮಿಕವಾಗಿ ಆರಂಭವಾದ ಅವರ ನಡುವಿನ ಪತ್ರ ವ್ಯವಹಾರ ಸುಮಾರು ಎರಡು ಮೂರು ವರ್ಷ ಮುಂದುವರಿದು, ಒಂದು ದಿನ ಅಷ್ಟೇ ಆಕಸ್ಮಿಕವಾಗಿ ನಿಂತು ಹೋಯಿತು. ಅಂದ ಹಾಗೆ ಈ ಪತ್ರಗಳನ್ನೇ ಇಟ್ಟುಕೊಂಡು ಆತ ‘ಪರ್ಯಾಯ’ ಎಂಬ ಕತೆಯನ್ನು ಬರೆದಿದ್ದ. ಅದು ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

ಶಿವರಾಮಯ್ಯ ಕಳುಹಿಸಿದ ಅಷ್ಟು ರಾಶಿ ಪತ್ರಗಳಿಂದ ನಾನು ಒಂದು ಹತ್ತು ಹನಿಗವಿತೆಗಳನ್ನು ಹಾಗೂ ಪತ್ರದ ರೂಪದಲ್ಲಿದ್ದ ಕತೆಯಾಗುವ ಸಾಧ್ಯತೆಯುಳ್ಳ ‘ಗರ್ಭಪಾತ-2’ ಎಂಬ ಪುಟ್ಟ ಕತೆಯನ್ನೂ ಆಯ್ಕೆ ಮಾಡಿಕೊಂಡೆ. ಉಳಿದಂತೆ ಆ ಪತ್ರಗಳ ರಾಶಿಯನ್ನು ಏನು ಮಾಡುವುದೆಂದು ಹೊಳೆಯದೆ ಬೆಂಕಿ ಕೊಟ್ಟು ಸುಟ್ಟು ಹಾಕಿ ಬಿಟ್ಟೆ. ಮತ್ತು ಶಿವರಾಮಯ್ಯ ಅವರಿಗೂ ದೂರವಾಣಿಯಲ್ಲಿ ಹೇಳಿದೆ ‘‘ಅವೆಲ್ಲವನ್ನೂ ಸುಟ್ಟು ಹಾಕಿದೆ’’ ಎಂದು. ಅವರಿಗೆ ಏನನಿಸಿರಬಹುದು ಎನ್ನುವುದರ ಬಗ್ಗೆ ನನಗೆ ಕಲ್ಪನೆಯಿಲ್ಲ. ‘‘ಆ ಪತ್ರಗಳ ‘ಕೆಲವು ಸಾಲುಗಳನ್ನೆಲ್ಲ ಬಳಸಿಕೊಳ್ಳಬಹುದಿತ್ತು ‘’ಎಂದಿದ್ದರು. ನನಗ್ಯಾಕೋ ಅವನ್ನೆಲ್ಲ ಸುಟ್ಟು ಹಾಕಬೇಕು ಅನ್ನಿಸಿತ್ತು. ಹಾಗೇ ಮಾಡಿದ್ದೆ.

ಮೊನ್ನೆ, ಯಾವು
ದೋ ಒಂದು ಹಳೆ ಫೋಟೋವನ್ನು ಹುಡುಕುತ್ತಿದ್ದಾಗ, ಫೈಲೊಳಗೆ ಆ ಒಂದು ಪತ್ರ ಮಾತ್ರ ಅದು ಹೇಗೆ ಉಳಿದಿತ್ತೋ ನನಗೆ ಗೊತ್ತಿಲ್ಲ. ಸುಮ್ಮನೆ ನನ್ನನ್ನು ನೋಡಿ ಹಲ್ಲು ಕಿರಿಯುತ್ತಿತ್ತು. ಫೈಲುಗಳ ರಾಶಿಯ ನಡುವೆ ಸವೆದು ಹೋಗಿತ್ತು. ಕಾಗದ ಪುಡಿಪುಡಿಯಾಗುವ ಹಂತದಲ್ಲಿತ್ತು. ಬಹುಶಃ ಇದು ಲಂಕೇಶ್ ಪತ್ರಿಕೆ ಆತನ ಮೊತ್ತ ಮೊದಲ ‘ಗರ್ಭ’ ಎನ್ನುವ ಪುಟ್ಟ ಕತೆಯನ್ನು ಪ್ರಕಟಿಸಿದ ಸಂದರ್ಭದಲ್ಲಿ, ಶಿವರಾಮಯ್ಯ ಅವರಿಗೆ ಬರೆದ ಪತ್ರವಿರಬೇಕು. ಆರಂಭದ ಮತ್ತು ಕೊನೆಯ ಪುಟಗಳು ಇರಲಿಲ್ಲ. ಯಾವುದೋ ಒಂದು ಜೆರಾಕ್ಸ್ ಪ್ರತಿಯ ಖಾಲಿ ಜಾಗಗಳಲ್ಲಿ ಆ ಪತ್ರವನ್ನು ಬರೆದಿದ್ದ. ಅದರ ನಕಲು ಪ್ರತಿಯನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಹಾಗೆಯೇ ಆ ಪತ್ರದ ಸಾಲುಗಳನ್ನು ಯಥಾವತ್ ಇಲ್ಲಿ ದಾಖಲಿಸಿದ್ದೇನೆ.

.................ಲಂಕೇ
ಶ್ ಪತ್ರಿಕೆ ನನ್ನ ಪ್ರೀತಿಯ ಪತ್ರಿಕೆ. ನಿಮ್ಮ ಅಭಿಪ್ರಾಯ ಏನು? ಕರ್ನಾಟಕದಂತಹ ಒಂದು ರಾಜ್ಯಕ್ಕೆ ಇಂತಹ ಒಂದು ಪತ್ರಿಕೆ ಬೇಕು ಎಂದು ಅನ್ನಿಸುವುದಿಲ್ಲವೆ? ಬಹುಶಃ ಇದರ ನಷ್ಟ ಜನರಿಗೆ ಅರಿವಾಗುವುದು ಇದು ನಿಂತು ಹೋದ ಮೇಲೆ. ಯಾವುದರ ವೌಲ್ಯವೇ ಆಗಲಿ, ನಮಗದು ಅರಿವಾಗಬೇಕೆಂದರೆ ನಾವದನ್ನೊಮ್ಮೆ ಕಳೆದುಕೊಳ್ಳಬೇಕಲ್ಲ.... ಸಾರ್, ಇಲ್ಲಿ ಕೆಲವು ‘ವಿಮರ್ಶೆ’ ಬಯಸದ ‘ತುಣಕು-ಚೂರು’ಗಳಿವೆ. ಸುಮ್ಮನೆ ಕಳಿಸಿರುವೆ. ಸುಮ್ಮನೆ ಓದಿ. ನನಗೆ ಪತ್ರಿಕೆಗೆ ಲೇಖನಗಳನ್ನು ಕಳಿಸುವುದರಲ್ಲಿ ವಿಶ್ವಾಸವಿಲ್ಲ. ಇಂದಿನ ಪ್ರತಿ ಪತ್ರಿಕೆಯೂ ಮೂತಿ ನೋಡಿ ಮಣೆ ಹಾಕುವ ಸಂಪ್ರದಾಯಗಳನ್ನು ಪಾಲಿಸುತ್ತಿವೆ. ಇವುಗಳ ಧೋರಣೆಯನ್ನು ನೋಡಿದರೆ (ಕೆಲವು ಲೇಖಕರ ‘ಕಹಿ’ ಅನುಭವಗಳನ್ನು ಗಮನಕ್ಕೆ ತೆಗೆದುಕೊಂಡಂತೆ...) ನಮ್ಮ ಬರಹಗಳನ್ನು ಓದಿ ಯಾರು ಉದ್ಧಾರ ಆಗಬೇಕಾಗಿದೆ ಎಂಬ ವೈರಾಗ್ಯ ಬಂದು ಬಿಡುತ್ತದೆ. ಆದರೂ ಪತ್ರಿಕೆಗಳಿಗೆ ಲೇಖನಗಳನ್ನು ಕಳಿಸುವುದರಿಂದ ಒಂದು ಅನುಕೂಲವಿದೆ. ಸುಮ್ಮನೆ ನಿರೀಕ್ಷೆಯಲ್ಲಿ ಕಾಲ ಕಳೆಯಬಹುದಾದ್ದು. ಲಾಟರಿ ಕೊಂಡು ಫಲಿತಾಂಶ ಕಾಯುವ ಹಾಗೆ...ಕಾಯುವುದರಲ್ಲಿ ಖುಷಿಯಿದೆ ಸಾರ್...ಸುಮ್ಮನೆ ಬದುಕಿನಲ್ಲಿ ಯಾವುದಕ್ಕಾದರೂ ಕಾಯುತ್ತಿರಬೇಕು. ಹಾಗೆ ನೋಡಿದರೆ ಕನಿಷ್ಠ ನಿರೀಕ್ಷೆಗಳಾದರೂ ಇಲ್ಲದವನ ಬಾಳಿನಲ್ಲಿ ಏನಿದೆ ಸಾರ್? ನಿರೀಕ್ಷೆಗಳು ಮನುಷ್ಯನನ್ನು ಜೀವಿಸುವಂತೆ ಮಾಡುತ್ತದೆ. ಅವನಿಗರಿವಿಲ್ಲದಂತೆ...ಉದಾಹರಣೆಗೆ ನಾಳೆಗಳ ನಿರೀಕ್ಷೆಯಲ್ಲಿ ತೊಡಗುವುದರಿಂದ ಆಗುವ ಒಂದು ಉಪಯೋಗ ಏನು ಗೊತ್ತೆ? ಸುಲಭವಾಗಿ ಕಳೆದು ಹೋಗುವ ‘ಇಂದು’! ಆದುದರಿಂದ ಪತ್ರಿಕೆಗಳಿಗೆ ಲೇಖನ ಕಳಿಸಬೇಕು. ಆದರೆ ‘ರಿಟರ್ನ್ ಸ್ಟಾಂಪ್’ ಮಾತ್ರ ಇಡಬಾರದು. ಇಟ್ಟರೇ...ಗೊತ್ತೆ ಇದೆಯಲ್ಲ! ನನ್ನ ಎರಡು ಫೋಟೋಗಳನ್ನು ಇಟ್ಟಿದ್ದೇನೆ. ಇದರೊಟ್ಟಿಗೆ. ಒಂದು ಮೊನ್ನೆಯಷ್ಟೇ ತೆಗೆಸಿದ್ದು. ಮತ್ತೊಂದು ಸುಮಾರು ನಾಲ್ಕು ವರ್ಷ ಹಿಂದಿನದು. ಕಮ್ಯುನಿಸ್ಟ್ ಪ್ರಪಂಚದಲ್ಲಿದ್ದಾಗಿನ ಫೋಸ್! ಎಪ್ರಿಲ್ 23ಕ್ಕೆ ನನ್ನ ಪರೀಕ್ಷೆಗಳು ಮುಗಿಯುತ್ತದೆ. ಪರೀಕ್ಷೆಗಳನ್ನು ‘ಭಕ್ತಿ-ವಿಧೇಯತೆ’ಯಿಂದ ನಾನು ನಡೆಸಿಕೊಂಡಿಲ್ಲದ ಕಾರಣ ನೀವು ನಿರಾಶೆಪಡಬಹುದಾದ ಫಲಿತಾಂಶ ಬರಬಹುದೋ ಏನೋ? ಪರೀಕ್ಷೆಗಳಿಗೆ ಓದುವುದು ನನ್ನಿಂದ ಸಾಧ್ಯವಾಗುತ್ತಾ ಇಲ್ಲ ಸಾರ್. ಆಯಾ ಪರೀಕ್ಷೆಯ ಮುಂಚಿನ ಒಂದು ದಿನದಲ್ಲಿ ಓದುವುದು ನನ್ನ ಶೈಲಿ. ಆದುದರಿಂದ ‘ಪರೀಕ್ಷೆ’ ನನ್ನ ಮೇಲೆ ತಕ್ಕ ‘ಪ್ರತೀಕಾರ’ ಕೈಗೊಳ್ಳದೇ ಇರದು. ನನಗೆ ಚಿಂತೆ ಅದಲ್ಲ- ನಿಮಗಾಗ ಬಹುದಾದ ನಿರಾಶೆಯ ಬಗ್ಗೆ ಮಾತ್ರ. ನೋಡೋಣ ಏನಾಗುತ್ತದೆಯೆಂದು. ಮುಖೇಶನ ಪದ್ಯಗಳನ್ನು ಕೇಳಿ ಮುಗಿಸಿದ್ದೀರಾ ಸಾರ್? ಕೇಳಿ ಕೇಳಿ ಅಡಿಕ್ಟ್ ಆಗಿ ಬಿಡ್ತೀರಿ ಜೋಕೆ...ಆದರೆ ಅಪಾಯ ಏನೂ ಇಲ್ಲ. (ಜಾಗ ಇಲ್ಲವಲ್ಲ...ಎಲ್ಲಿ ಬರೀಲಿ...?)........
ಯುವರ್ಸ್‌,
ರಶೀದ್


ಸಾವಿನ ಕುರಿತಂತೆ ಆತ ಬರೆದ ಕವಿತೆಯೊಂದರ ಕೊನೆಯ ಸಾಲೊಂದು ಇಲ್ಲಿದೆ
........ನೀನು
ಬದುಕಿಗೆ
ರುಜುವಾಗುವ

ಹೊತ್ತಿಗೆ

ಬದುಕ ಬೊಗಸೆ

ಸದ್ದಿಲ್ಲದೇ ಸೋರಿ ಬರಿದು;

ನೀನು ಬದುಕಿಗೆ ಕೊಡುವರ್ಥ ಹಿರಿದು;

ಬದುಕಲುಂಟೆ

ಬದುಕಿಂದ ನಿನ್ನ ತೊರೆದು?

ಹಾಗಾಗಿ ನಾನು

ಮೆಚ್ಚಿಕೊಂಡಿದ್ದೇನೆ

ನಿನ್ನ ಕಣ್ಣುಗಳ

ಬೀಭತ್ಸ ಪ್ರೀತಿಗೆ

ನನ್ನೊಳಗೇ ಬೆಚ್ಚಿ ಬಿದ್ದಿದ್ದೇನೆ.......


ನನ್ನಿಂದ ತಲೆಮರೆಸಿ ಹೀಗೆ ಫೈಲಲ್ಲಿ ಕಳೆದ ಹತ್ತು ವರ್ಷಗಳಿಂದ ಜೀವ ಉಳಿಸಿಕೊಂಡಿದ್ದ ಈ ಪತ್ರದ ಚೂರನ್ನೂ ಸುಟ್ಟು ಹಾಕುವ ಮುನ್ನ ನನ್ನ ಬ್ಲಾಗಿನಲ್ಲಿ ದಾಖಲಿಸಬೇಕು ಅನ್ನಿಸಿತು. ಜೊತೆಗೆ ಆ ಪತ್ರದ ಜೆರಾಕ್ಸನ್ನೂ ಇಲ್ಲಿ ಲಗತ್ತಿಸಿದ್ದೇನೆ. ಪಿ. ಲಂಕೇಶ್, ಶಿವರಾಮಯ್ಯ ಸೇರಿದಂತೆ ಅವನ ಹತ್ತು ಹಲವು ಗೆಳೆಯರು ಅವನಿಗೆ ಬರೆದಿರುವ ಪತ್ರಗಳನ್ನು ಅವನ ಕಪಾಟಿನಲ್ಲಿ ನೋಡಿದ್ದೇನೆ. ಅದಕ್ಕೆ ಅವನು ಜೋಪಾನ ಬೀಗ ಹಾಕಿ
ಟ್ಟಿದ್ದ. ನಾನು ಮುಂಬಯಿಯಲ್ಲಿ ಎಂ.ಎ. ಮುಗಿಸಿ ಐದು ವರ್ಷ ಅಲ್ಲೇ ಪತ್ರಿಕೆಯೊಂದರಲ್ಲಿ ಕೆಲಸ ಮಾಡಿ, ಮರಳಿ ಮನೆ ಸೇರಿದೆ. ಕೆಲ ವರ್ಷಗಳ ಬಳಿಕ ನನ್ನ ಅರಿವಿಗೆ ಬಂತು. ಆ ಪತ್ರಗಳ ರಾಶಿಗಳನ್ನೆಲ್ಲ ಅವನು ಎಂದೋ ಸುಟ್ಟು ಹಾಕಿದ್ದ.

ಅಂದಹಾಗೆ ನಾನು ನನ್ನ ದೊಡ್ಡಪ್ಪ(ನನ್ನ ತಂದೆಯ ಅಣ್ಣ) ಕವಿ ದಿ. ಬಿ. ಎಂ. ಇದಿನಬ್ಬರ ಕುರಿತ ಸಂಸ್ಮರಣಾ ಗ್ರಂಥವೊಂದನ್ನು ತರಲು ಯೋಜನೆ ಹಾಕಿದ್ದೇನೆ. ಅವರು ತಮ್ಮ ಹರೆಯದಲ್ಲಿ ಸ್ಥಾಪಿಸಿದಮಾನವತಾ ಸಾಹಿತ್ಯ ಮಾಲೆಎನ್ನುವ ಪ್ರಕಾಶನಕ್ಕೆ ಮರುಜೀವ ಕೊಟ್ಟು ಅದರ ಮೂಲಕವೇ ಗ್ರಂಥವನ್ನು ಹೊರತರಲು ಸಿದ್ಧತೆ ನಡೆಸುತ್ತಿದ್ದೇನೆ. ಅವರ ಆತ್ಮೀಯರಿಗೆ ಪತ್ರಗಳನ್ನು ಬರೆಯಲು ಶುರು ಹಚ್ಚಿದ್ದೇನೆ. ಕೃತಿಗೆ ‘‘ಕಡಲ ಹಕ್ಕಿಯ ಹಾಡು-ದಿ. ಬಿ. ಎಂ. ಇದಿನಬ್ಬರ ಸಂಸ್ಮರಣಾ ಗ್ರಂಥ’’ ಎಂದು ಹೆಸರಿಟ್ಟರೆ ಹೇಗೆ ಎಂದು ಯೋಚಿಸುತ್ತಿದ್ದೇನೆ. ಅಂದ ಹಾಗೆ ಬಿ. ಎಂ. ಇದಿನಬ್ಬರು ಕಯ್ಯಿರ ಕಿಂಞಣ್ಣ ರೈಯವರಐಕ್ಯಗಾನವನ್ನು ವಿವಿಧ ಸಮಾರಂಭಗಳಲ್ಲಿ ಸುಮಾರು 4000 ಬಾರಿ ಹಾಡಿದ್ದರಂತೆ. ಹಾಗೆಯೇ ಕುವೆಂಪು ಅವರ ‘‘ಎಲ್ಲಾದರು ಇರು...’’ ಕವಿತೆಯನ್ನು ಒಂದು ಸಾವಿರಕ್ಕೂ ಅಧಿಕ ಬಾರಿ ಹಾಡಿದ್ದರಂತೆ. ‘ಇದು ನನ್ನ ಬದುಕಿನ ದೊಡ್ಡ ಸಾಧನೆ...ನಾನು ಮಾಡಿದ ಭಾಷಣಗಳಿಗಿಂತ ನನಗೆ ಇದೇ ದೊಡ್ಡದು...’ ಸ್ವತಃ ದೊಡ್ಡಪ್ಪ ಅವರೇ ನನ್ನೊಂದಿಗೆ ಹಂಚಿಕೊಂಡದ್ದು.

ಅವರ ಹಿರಿಯ ಮಗ ಬಿ. ಎಂ. ಭಾಷಾ ತಂದೆಯನ್ನು ನೆನೆದುಕೊಳ್ಳುವಾಗ ಒಂದು ವಿಷಯವನ್ನು ಹೇಳುತ್ತಾರೆ. ವೇದಿಕೆಯೊಂದರಲ್ಲೂ ಅದನ್ನು ಹಂಚಿಕೊಂಡಿದ್ದಾರೆ, ‘‘ನನ್ನ ತಂದೆ ನಮಗೆ ಯಾವಾಗಲೂ ಒಂದು ಮಾತನ್ನು ಹೇಳುತ್ತಿದ್ದರು. ನಿಮ್ಮನ್ನು ನೀವು ಪರಿಚಯಿಸಿಕೊಳ್ಳುವಾಗ
ಮಾಜಿ ಶಾಸಕ ಇದಿನಬ್ಬರ ಮಗ ಎಂದು ಪರಿಚಯಿಸಿಕೊಳ್ಳಬೇಡಿ. ಬದಲಿಗೆ ಕವಿ ಬಿ. ಎಂ. ಇದಿನಬ್ಬರ ಮಗ ಎಂದು ಪರಿಚಯಿಸಿಕೊಳ್ಳಿ. ನಿಮಗೆ ಗೌರವ ಸಿಗುತ್ತದೆ’’
ಅವರ ಆತ್ಮಕತೆಯನ್ನು ನಾನು ಬರೆಯಬೇಕು ಎನ್ನುವುದು ಅವರ ಆಸೆಯಾಗಿತ್ತು. ಆದರೆ ಕೆಲವು ಕಾರಣಗಳಿಂದ ಅದನ್ನು ಈಡೇರಿಸುವುದಕ್ಕೆ ನನ್ನಿಂದ ಸಾಧ್ಯವಾಗಲಿಲ್ಲ. ದೊಡ್ಡಪ್ಪ ಈಗ ಇಲ್ಲ. ಅವರ ಆಸೆಯನ್ನು ಈಡೇರಿಸಲಾಗದ ಕೊರಗು ನನ್ನಲ್ಲಿ ಇನ್ನೂ ಹಾಗೆಯೇ ಉಳಿದುಕೊಂಡಿದೆ.

No comments:

Post a Comment