Sunday, July 3, 2011

ಸಂತನ ಜೋಳಿಗೆಯಿಂದ ಇನ್ನೊಂದಿಷ್ಟು ಕತೆಗಳು

















ಕ್ಷಮೆ ಮತ್ತು ಭಯ
ತನ್ನ ಪ್ರೀತಿಯ ಶಿಷ್ಯನೊಬ್ಬ ಗಂಭೀರವಾದ ತಪ್ಪೊಂದನ್ನು ಮಾಡಿದ ಕುರಿತು ಸಂತನಿಗೆ ಮಾಹಿತಿ ಸಿಕ್ಕಿತು.
ಶಿಷ್ಯನ ಕುರಿತು ಅಸೂಯೆಯನ್ನು ಹೊಂದಿದ್ದ ಇತರ ಶಿಷ್ಯರು ಸಂತನೊಂದಿಗೆ ಇದನ್ನು ಚುಚ್ಚಿ ಆಡಿದರು.
ಅಂದು ಸಂತನಿಗೆ ದೇವರ ಕ್ಷಮೆಯ ಕುರಿತಂತೆ ಮಾತನಾಡಬೇಕೆನಿಸಿತು.
ಹಾಗೆಂದು ನಿರ್ಧರಿಸಿ ತನ್ನೆಲ್ಲ ಶಿಷ್ಯರನ್ನು ತನ್ಮುಂದೆ ಕುಳ್ಳಿರಿಸಿ ಕೊಂಡ. ಸಂತ ಪ್ರವಚನ ಮಾಡುವುದು ತೀರಾ ಅಪರೂಪ.
ಯಾವಾಗಲೂ ಗದ್ದೆ, ತೋಟ ಎಂದು ಕೆಲಸದಲ್ಲೇ ತೊಡಗಿರುತ್ತಾರೆ. ಆದುದರಿಂದ ಶಿಷ್ಯರೆಲ್ಲ ಸಂತನ ಮುಂದೆ ಕುತೂಹಲದಿಂದ ನೆರೆದರು.
ಮಾತನಾಡಲು ಹೊರಟ ಸಂತನ ಗಂಟಲು ಯಾಕೋ ಕಟ್ಟಿತು. ತುಂಬಾ ಹೊತ್ತು ವೌನದಿಂದ ಕುಳಿತ.
ಬಳಿಕ ಏನೋ ಹೇಳಲು ಬಾಯಿ ತೆರೆದ.
ಆಡಲಾಗದೆ ಸಂಕಟ ಪಟ್ಟ. ಆಮೇಲೆ ನಿಟ್ಟುಸಿರಿಟ್ಟು ಹೇಳಿದ ‘‘ದೇವರ ಕ್ಷಮೆಯ, ಕರುಣೆಯ ಆಳ, ಅಗಾಧತೆಯನ್ನು ನೆನೆದರೆ ನನಗೆ ಭಯವಾಗುತ್ತದೆ’’
ಶಿಷ್ಯರು ಅಚ್ಚರಿಯಿಂದ ಕೇಳಿದರು ‘‘ಕ್ಷಮೆ, ಕರುಣೆಯ ಬಗ್ಗೆ ಭಯ ಯಾಕೆ ಗುರುಗಳೇ?’’
‘‘ಅವನ ಕ್ಷಮೆ ಕರುಣೆ ಅದೆಷ್ಟು ದೊಡ್ಡದೆಂದರೆ, ಅದರ ಧೈರ್ಯದಿಂದ ಎಲ್ಲಿ ನಾನು ಕೆಡುಕಿನೆಡೆಗೆ ಹೆಜ್ಜೆ ಹಾಕಿ ಬಿಡುವೆನೋ ಎಂಬ ಭಯ’’ ಹೀಗೆಂದ ಸಂತ ತನ್ನ ಪ್ರವಚನ ಮುಗಿಸಿದ.

ರಸ್ತೆ
ಮರದ ಕೆಳಗೆ ನಿಂತ ಸಂತನಲ್ಲಿ ಆತ ಕೇಳಿದ
‘‘ಈ ರಸ್ತೆ ಎಲ್ಲಿಗೆ ಹೋಗುತ್ತದೆ?’’
‘‘ಈ ರಸ್ತೆ ಇದ್ದಲ್ಲೇ ಇದೆ. ರಸ್ತೆಯ ಹಿಂದೆ ಹೋದರೆ ನೀನೂ ಇದ್ದಲ್ಲೇ ಇರುವೆ’’
‘‘ಹಾಗಾದರೆ ನಾನೇನು ಮಾಡಬೇಕು?’’
‘‘ನೀನು ಮುಂದೆ ಹೋಗು. ರಸ್ತೆ ನಿನ್ನನ್ನು ಹಿಂಬಾಲಿಸುತ್ತದೆ’’

ಗಳಿಕೆ
‘‘ಬರೆದು ನೀನು ಏನನ್ನು ಪಡೆದುಕೊಂಡೆ? ಬಡತನ, ದುಃಖ, ದಾರಿದ್ರ...ನಿನ್ನ ಬರಹದಿಂದ ನೀನು ಸಂಪಾದಿಸಿದ್ದು ಇಷ್ಟೇ...ಮತ್ತೂ ಯಾಕೆ ಬರಹ ಬರಹ ಅಂತ ಸಾಯ್ತ ಇದ್ದೀಯ?’’
‘‘ನೀನು ತಪ್ಪು ಹೇಳುತ್ತಿದ್ದೀಯ, ಬಡತನ ದುಃಖ, ದಾರಿದ್ರದಿಂದ ನಾನು ಬರಹವನ್ನು ಸಂಪಾದಿಸಿದೆ’’

ಕವಿತೆ ಮತ್ತು ಮಂಚ
ಆತ ದೊಡ್ಡ ಕವಿ. ಸದಾ ಭಾವನೆಗಳ ಭಾರವನ್ನು ಹೊತ್ತು ತಿರುಗುವವನು.
ಜಗತ್ತು ತನ್ನನ್ನು ಗೌರವಿಸುತ್ತದೆಯೆಂಬ ಜಂಬ ಬೇರೆ.
ಒಮ್ಮೆ, ಆತನಿಗೆ ಒಂದು ಸುಂದರ ಮಂಚ ಬೇಕಾಯಿತು. ಅದಕ್ಕಾಗಿ ಆತ ಒಂದು ದಿನ ಬಡಿಗನಲ್ಲಿ ಹೋದ. ಬಡಿಗ ಒಂದು ಸುಂದರ ಮಂಚವನ್ನು ನಿರ್ಮಿಸುತ್ತಿದ್ದ. ಬಡಿಗನ ಸ್ಪರ್ಶಕ್ಕೆ ಮರ, ಗಿಡ, ಬಳ್ಳಿ, ಹೂವುಗಳು, ಚಿಟ್ಟೆ ಹೀಗೆ...ಅರಳುತ್ತಿದ್ದವು.
ಕವಿ ಆ ಪವಾಡಕ್ಕೆ ಮಾರು ಹೋದ.
ಭಾವುಕನಾಗಿ, ಸಣ್ಣಗೆ ಕಂಪಿಸುತ್ತಾ ‘‘ಅಯ್ಯೋ, ಇದು ಮಂಚವಲ್ಲ, ಒಂದು ಸುಂದರ ಕವಿತೆ...’’ ಎಂದು ಜೋರಾಗಿ ಉದ್ಗರಿಸಿದ.
ಕೆಲಸದಲ್ಲಿ ಮಗ್ನನಾಗಿದ್ದ ಬಡಿಗ ತಲೆ ಎತ್ತಿದ.
ಕವಿಯಲ್ಲಿ ಕೇಳಿದ ‘‘ಕವಿತೆ! ಹಾಗೆಂದರೇನು ಸ್ವಾಮಿ?’’

ಕವಿಗೆ ಒಂದು ಕ್ಷಣ ಮುಖಭಂಗವಾದರೂ ಹೇಳಿದ ‘‘ಕವಿತೆಯನ್ನು ಕವಿಯಷ್ಟೇ ಕಟ್ಟಬಲ್ಲ. ಕವಿತೆಗೆ ವ್ಯಾಖ್ಯಾನಗಳೇ ಇಲ್ಲ. ಜಗತ್ತಿನಲ್ಲಿ ಅದಕ್ಕೆ ಬೆಲೆಕಟ್ಟುವುದಕ್ಕಾಗದು’’
ಬಡಿಗನಿಗೆ ಅಚ್ಚರಿ ‘‘ನೀವು ಹೇಳಿದ ಆ ಕವಿತೆಯಲ್ಲಿ ಕುಳಿತುಕೊಳ್ಳುವುದಕ್ಕಾಗುತ್ತದೆಯೆ?’’ ಪ್ರಶ್ನಿಸಿದ.
‘‘ಇಲ್ಲ’’ ಕವಿ ಉತ್ತರಿಸಿದ.
‘‘ಸರಿ, ಆ ಕವಿತೆಯ ಮೇಲೆ ವಸ್ತುಗಳನ್ನಿಡಲು ಆಗುತ್ತದೆಯೆ?’’ ಪ್ರಶ್ನಿಸಿದ ಬಡಗಿ.
‘‘ಇಲ್ಲ’’ ಕವಿ ಉತ್ತರಿಸಿದ.
‘‘ಸರಿ, ಆ ಕವಿತೆಯನ್ನು ತಿನ್ನಲಿಕ್ಕೆ, ಕುಡಿಯಲಿಕ್ಕೆ ಏನಾದರೂ ಆಗುತ್ತದೆಯೆ?’’
‘‘ಇಲ್ಲ’’ ಕವಿ ಅವಮಾನದಿಂದ ನುಡಿದ.
‘‘ಬೇಡ, ಆ ಕವಿತೆಯ ಮೇಲೆ ಸವಾರಿ ಮಾಡಲಿಕ್ಕಾದರೂ ಆಗುತ್ತದೆಯೆ?’’ ಬಡಗಿ ಕೊನೆಯದಾಗಿ ಕೇಳಿದ.
‘‘ಇಲ್ಲ’’ ಕವಿ ಹೇಳಿದ.
ಬಡಗಿಗೆ ಸಿಟ್ಟು ಬಂತು ‘‘ಮತ್ಯಾಕೆ ಆ ನಿಷ್ಪ್ರಯೋಜಕ ವಸ್ತುವಾದ ಕವಿತೆಗೆ ನನ್ನ ಈ ಸುಂದರ ಮಂಚವನ್ನು ಹೋಲಿಸಿದಿರಿ?’’

ಲೆಕ್ಕ
ಸಂತ ಮತ್ತು ಶಿಷ್ಯರು ಒಂದು ಮಾವಿನ ಮರದಡಿಯಲ್ಲಿ ತಂಗಿದ್ದರು.
ಶಿಷ್ಯನೊಬ್ಬ ತುಂಟನದಿಂದ ಕೇೀಳಿದ ‘‘ಗುರುಗಳೇ, ಈ ಮರದಲ್ಲಿ ಅದೆಷ್ಟು ಮಾವಿನಕಾಯಿಗಳಿವೆ. ನೀವು ಲೆಕ್ಕ ಹಾಕಿ ಹೇಳಬಲ್ಲಿರಾ?’’
ಸಂತ ನಕ್ಕು ಉತ್ತರಿಸಿದ ‘‘ಒಂದು ಮಾವಿನ ಕಾಯಿಯೊಳಗೆ ಅದೆಷ್ಟು ಮಾವಿನ ಮರಗಳಿವೆ ಎನ್ನುವುದನ್ನು ನಾನು ಲೆಕ್ಕ ಹಾಕುತ್ತಿದ್ದೇನೆ. ಬಳಿಕ ನಿನ್ನ ಪ್ರಶ್ನೆಗೆ ಉತ್ತರಿಸುತ್ತೇನೆ’’

ತಾಯಿ
‘‘ಪೋಸ್ಟ್...’’ ಅಂಚೆಯವನ ಧ್ವನಿ.
ಆಕೆ ಹೊರಗೆ ಓಡಿ ಬಂದಳು.
ದೂರದ ಹಾಸ್ಟೆಲ್‌ನಲ್ಲಿಂದ ಮಗ ಬರೆದ ಪತ್ರ
‘‘ಕಾಲೇಜಿಗೆ ಫೀಸು ಕಟ್ಟಲಿಕ್ಕಿದೆ. ತಕ್ಷಣ ಹಣ ಕಳಿಸು’’ ಒಂದೇ ವಾಕ್ಯ.
ಅವಳ ಆರೋಗ್ಯ ಕೆಟ್ಟು ಕೂತಿತ್ತು.
ಆಕೆ ಜೀವವಿಮೆಯನ್ನು ಮಾಡಿದ್ದಳು.
ಮಗನಿಗೆ ಬರೆದಳು ‘‘ಚಿಂತೆ ಮಾಡಬೇಡ. ಇನ್ನೊಂದು ತಿಂಗಳಲ್ಲಿ ನಿನ್ನ ಹಣ ಸೇರುತ್ತದೆ. ಅಲ್ಲಿಯವರೆಗೆ ಸ್ವಲ್ಪ ತಡಕೋ ಮಗಾ...’’

ವ್ಯಾಪಾರ
ಫಕೀರನೊಬ್ಬ ನಟ್ಟ ನಡು ಬಿಸಿಲಿನಲ್ಲಿ ವೇಗದ ಹೆಜ್ಜೆಯಿಡುತ್ತಾ ಸಾಗುತ್ತಿದ್ದನು. ಅದೇ ದಾರಿಯಲ್ಲಿ ಫಕೀರನಿಗೆ ರೈತನೊಬ್ಬ ಜೊತೆಯಾದ. ಫಕೀರನ ಅವಸರ ನೋಡಿ ಈತ ಯಾವುದೋ ಘನಕಾರ್ಯಕ್ಕೆ ಹೋಗುತ್ತಿದ್ದಾನೆ ಅನ್ನಿಸಿತು. ರೈತ ತಡೆಯಲಾರ
ದೆ ಕೇಳಿದ.
‘‘ಇಷ್ಟು ವೇಗವಾಗಿ ಎಲ್ಲಿಗೆ ಹೋಗುತ್ತಿದ್ದೀರಿ?’’
ಫಕೀರ ಮುಂದೆ ಬಿದ್ದುಕೊಂಡಿರುವ ದಾರಿಯನ್ನು ನೋಡುತ್ತಾ ಹೇಳಿದ

‘‘ ಎಲ್ಲಿಂದ ಬಂದೆನೋ ಅಲ್ಲಿಗೆ’’.
ರೈತ ಅಚ್ಚರಿಯಿಂದ ಮರುಪ್ರಶ್ನಿಸಿದ. ‘‘ಎಲ್ಲಿಂದ ಬಂದಿರಿ?’’
ಫಕೀರ ತನ್ನ ವೇಗವನ್ನು ಒಂದಿಷ್ಟೂ ಇಳಿಸದೆ ಹೇಳಿದ. ‘‘ಎಲ್ಲಿಗೆ ಹೋಗಲಿದ್ದೇನೋ ಅಲಿಂ್ಲದ’’.
ರೈತನಿಗೆ ಫಕೀರನಲ್ಲಿ ಏನೋ ವಿಶಿಷ್ಟ ಕಂಡಿತು. ‘‘ಇದೇ ದಾರಿಯಲ್ಲಿ ನನ್ನ ಮನೆ ಸಿಗುತ್ತದೆ. ಅಲ್ಲಿ ಒಂದಿಷ್ಟು ಹೊತ್ತು ತಂಗಿ ಹೋಗಿ’’ ಮನವಿ ಮಾಡಿದ.
‘‘ಆ ಮನೆಯನ್ನು ಶಾಶ್ವತವಾಗಿ ನನಗೆ ಕೊಡುವುದಿದ್ದರೆ ಅಲ್ಲಿ ತಂಗಿಯೇನು’’ ಫಕೀರ ಉತ್ತರಿಸಿದ.

‘‘ಅದಕ್ಕೆ ಪ್ರತಿಯಾಗಿ ನನಗೇನು ನೀಡುತ್ತೀರಿ?’’ ರೈತ ದುರಾಸೆಯಿಂದ ಕೇಳಿದ.
‘‘ನಾನು ಈಗ ಹೊರಟಿರುವ ದಾರಿಯನ್ನು ನಿನಗೆ ಪ್ರತಿಫಲವಾಗಿ ನೀಡುತ್ತೇನೆ. ವ್ಯಾಪಾರಕ್ಕೆ ಸಿದ್ಧನಿದ್ದೀಯ?’’ ಫಕೀರ ಉದ್ದಕ್ಕೆ ನಡೆಯುತ್ತಲೇ ಕೇಳಿದ.


ದುಖ-ಸಂತೋಷ
ಕೋಗಿಲೆ ಇಂಪಾಗಿ ಹಾಡುವುದು ನವಿಲಿನ ಕಿವಿಗೆ ಬಿತ್ತು. ತನ್ನ ಕುರೂಪಿ ಸ್ವರಕ್ಕಾಗಿ ದುಕ್ಹಗೊಂದ್ ನವಿಲು, ಏಕಾಏಕಿ ಖಿನ್ನವಾಯಿತು. ಒಮ್ಮೆ ನವಿಲು ಕುಣಿಯುವುದು ಕೋಗಿಲೆಯ ಕಣ್ಣಿಗೆ ಬಿತ್ತು. ಸರೋವರದ ಕನ್ನಡಿಯಲ್ಲಿ ತನ್ನ ಕುರೂಪಿ ದೇಹವನ್ನು ಕಂಡು ಕೋಗಿಲೆ ಅಳ ತೊಡಗಿತು. ನವಿಲು - ಕೋಗಿಲೆ ಒಂದು ದಿನ ಪರಸ್ಪರ ಭೇಟಿಯಾದವು. ನವಿಲು ಹೇಳಿತು ‘‘ನಿನ್ನ ಧ್ವನಿಯನ್ನು ನನಗೆ ಕೊಟ್ಟರೆ ಜಗತ್ತಿನಲ್ಲೇ ನನ್ನಷ್ಟು ಸಂತೋಷದ ಜೀವಿ ಯಾರೂ ಇರುವುದಿಲ್ಲ’’
ಕೋಗಿಲೆ ಹೇಳಿತು ‘‘ಖಂಡಿತಾ ಕೊಡುವೆ. ಆದರೆ ನಿನ್ನ ರೂಪವನ್ನು ನನಗೆ ಕೊಡಬೇಕು. ಅದು ನನಗೆ ಸಿಕ್ಕಿದರೆ ನನ್ನಷ್ಟು ಸಂತೋಷದ ಜೀವಿ ಇನ್ನಾರೂ ಇರುವುದಿಲ್ಲ’’
ಹಾಗೆಯೇ ಪರಸ್ಪರ ರೂಪ-ಧ್ವನಿಯನ್ನು ಅದಲು ಬದಲು ಮಾಡಿಕೊಂಡವು. ಸ್ವಲ್ಪ ದಿನದ ಬಳಿಕ ನವಿಲು ಮೊದಲಿಗಿಂತಲೂ ಹೆಚ್ಚು ದುಖಿಯಾಗಿತ್ತು.
‘‘ ಛೆ, ನನ್ನ ಅಷ್ಟು ಚಂದದ ರೂಪವನ್ನು ಕೊಟ್ಟು ಬಿಟ್ಟೆನಲ್ಲ’’
ಕೋಗಿಲೆ ಮೊದಲಿಗಿಂತಲೂ ಜೋರಾಗಿ ಅಳತೊಡಗಿತು.
‘‘ಛೆ, ನನ್ನ ಅಷ್ಟು ಇಂಪಾದ ಧ್ವನಿಯನ್ನು ಕಳೆದು ಕೊಂಡೆನಲ್ಲ’’

1 comment:

  1. ನಿಮ್ಮ ಲೇಖನಗಳು ಉತ್ತಮವಾಗಿದೆ,
    ನೀವು ನನ್ನ ಜಾಲತಾಣಕ್ಕೆ ಬೇಟಿ ನೀಡಿ,
    ****
    ವೈಶಷ್ಟ್ಯಗಳು
    ***
    ಲೈವ್ ಕ್ರಿಕೇಟ್ ಕನ್ನಡದ ಪತ್ರಕೆ (ದಿನ, ವಾರ, ಮಾಸ)ಗಳು,
    ಎಲ್ಲ ದೇಶಗಳ ಸಮಯ, 1 ಜಾನಪದ ವಿಡಿಯೋ, ಪ್ರಮುಖ U-Tube ವಿಡಿಯೋಗಳು,
    ಇರುವೆಗಳ ಜಗತ್ತು, ನಿಮ್ಮ ಮಾತು ಕೇಳುವ ಮೀನು,
    ನೀವು ಹುಟ್ಟಿದ ವಾರ ತಿಳಿಯಿರಿ, ಮತ್ತು ಹಲವಾರು ಮಾಹಿತಿಗಳು ಒಂದೇ ಜಾಲತಾಣದಲ್ಲಿ ಲಬ್ಯವಿದೆ.
    **
    ನೀವೂ ನೋಡಿ ಇತರರಿಗೂ ತಿಳಿಸಿರಿ.
    **
    www.spn3187.blogspot.in

    ReplyDelete