Wednesday, January 30, 2013

ಮಅದನಿಯ ಕೈಬೆರಳುಗಳಿಗೆ ವ್ಯವಸ್ಥೆ ಜೋಡಿಸಿದ ಕೃತಕ ಉಗುರುಗಳು...!

ಮದನಿ ಕುರಿತು ಸತ್ಯಗಳನ್ನು ಬಯಲಿಗೆಳೆದ ಕೆ. ಕೆ. ಶಾಹಿನ.

(ಕಳೆದ ಗುರುವಾರದಿಂದ)
ಮಅದನಿ ಕಾನ್ಶೀರಾಮ್ ಜೊತೆಗೆ ರಾಜಕೀಯ ಮಾತುಕತೆ ನಡೆಸಲು ಮುಂದಾದಾಗ ಕೇರಳದ ರಾಜಕೀಯ ವಲಯದಲ್ಲಿ ಸಣ್ಣ ಕಲರವ ಆರಂಭವಾಯಿತು. ಬಿಎಸ್‌ಪಿ ಮತ್ತು ಪಿಡಿಪಿ ಒಂದಾಗಿದ್ದರೆ ಬಹುಶಃ ಕೇರಳದಲ್ಲಿ ಒಂದು ರಾಜಕೀಯ ಕ್ರಾಂತಿಯೇ ನಡೆದು ಬಿಡುತ್ತಿತ್ತೋ ಏನೋ. (ಮಅದನಿ ತನ್ನ ರಾಜಕೀಯ ಪಕ್ಷವನ್ನು ಹುಟ್ಟು ಹಾಕಿದ್ದೇ ಅಂಬೇಡ್ಕರ್ ಜಯಂತಿ ದಿನ)ಆದರೆ ಅದಕ್ಕೆ ಮೊದಲೇ ಮಅದನಿಯನ್ನು ಮಟ್ಟ ಹಾಕಲು ಎಲ್ಲ ರಾಜಕೀಯ ಪಕ್ಷಗಳು ಒಂದಾಗಿ ಬಿಟ್ಟಿದ್ದವು.

 ಮಅದನಿಯ ದುರದೃಷ್ಟ ಮೊದಲು ತೆರೆದುಕೊಂಡದ್ದು ಮುಸ್ಲಿಮ್ ಲೀಗನ್ನು ಎದುರು ಹಾಕಿಕೊಂಡ ಕಾರಣ. ಕ್ಯಾಲಿಕಟ್ ಐಸ್‌ಕ್ರೀಮ್ ಪಾರ್ಲರ್ ಪ್ರಕರಣದಲ್ಲಿ ಮುಸ್ಲಿಮ್ ಲೀಗ್‌ನ ಕುಂಞಾಲಿಕುಟ್ಟಿ ಹೆಸರು ಕೇಳಿ ಬಂದ ಕಾರಣ, ಮಅದನಿ ಅಂದು ತನ್ನ ಪಿಡಿಪಿ ಮೂಲಕ ಕುಂಞಾಲಿಕುಟ್ಟಿಯ ವಿರುದ್ಧ ಅಭಿಯಾನ ಆರಂಭಿಸಲು ವೇದಿಕೆಯನ್ನು ಸಿದ್ಧಪಡಿಸಿಕೊಂಡಿದ್ದರು. ಬೀದಿಯಲ್ಲಿ ನಿಂತು ಅಮಾಯಕ ಮುಸ್ಲಿಮರನ್ನು ಪ್ರಚೋದಿಸಿದಂತಲ್ಲ, ರಾಜಕಾರಣಿ ಗಳನ್ನು ಮುಟ್ಟುವುದು ಎನ್ನುವುದು ಮಅದನಿಗೆ ತಿಳಿಯುವಾಗ ತಡವಾಗಿತ್ತು. ಅಂದಿನ ಕಮ್ಯುನಿಷ್ಟ್‌ನ ನಾಯಕರಾದ ನಾಯನಾರ್ ನೇತೃತ್ವದ ಸರಕಾರ 1992ರಲ್ಲಿ ಬಾಕಿ ಉಳಿದಿದ್ದ ಒಂದು ಕೇಸನ್ನು ಎತ್ತಿ ಹಾಕಿತ್ತು. 1992ರ ಮಾರ್ಚ್‌ನಲ್ಲಿ ಮಅದನಿ ಮಾಡಿದ ಭಾಷಣಕ್ಕಾಗಿ ಅವರಿಗೆ ವಾರಂಟ್ ಆಗಿತ್ತು. ಆದರೆ ಆ ವಾರಂಟ್ ಇಶ್ಯೂ ಅಗಿದ್ದು 1998ರಲ್ಲಿ. ಕುಂಞಾಲಿ ಕುಟ್ಟಿಯ ತಂಟೆಗೆ ಹೋದ ಒಂದೇ ಒಂದು ಕಾರಣಕ್ಕೆ ಅವರು ಜೈಲು ಸೇರಿದರು. ಆರು ತಿಂಗಳು ಜೈಲು ಶಿಕ್ಷೆಯೂ ಆಯಿತು. ಆದರೆ ಆ ಆರು ತಿಂಗಳು ಹತ್ತು ವರ್ಷವಾಗಿ ಮಾರ್ಪಡುತ್ತದೆ ಎಂದು ಮಅದನಿ ತಿಳಿದುಕೊಂಡಿರಲಿಲ್ಲ. 


1998ರಲ್ಲಿ ತಮಿಳು ನಾಡಿನಲ್ಲಿ ಭೀಕರ ಕೋಮು ಗಲಭೆ, ಅದರಲ್ಲಿ ಮುಸ್ಲಿಮರ ಮೇಲೆ ನಡೆದ ದೌರ್ಜನ್ಯ ಮಾಧ್ಯಮಗಳಲ್ಲಿ ಸುದ್ದಿಯಾಯಿತು. 20ಕ್ಕೂ ಅಧಿಕ ಮುಸ್ಲಿಮರು ಇದರಲ್ಲಿ ಬರ್ಬರವಾಗಿ ಕೊಲ್ಲಲ್ಪ ಟ್ಟಿದ್ದರು. ಇದಾದ ಬಳಿಕ ಕೊಯಮತ್ತೂರು ಬಾಂಬ್ ಸ್ಫೋಟ ನಡೆಯಿತು. ಈ ಪ್ರಕರಣದಲ್ಲಿ ಮಅದನಿಯನ್ನು ಒಂದು ಫೋನ್ ಕರೆಯ ಆಧಾರದ ಮೇಲೆ ಸಿಲುಕಿಸಲಾಯಿತು. ಮಅದನಿ ಅದರಲ್ಲಿ 84ನೆ ಆರೋಪಿಯಾಗಿ ಗುರುತಿಸಲ್ಪಟ್ಟರು. ಇದರಲ್ಲಿ ಮಅದನಿಯ ವಿರುದ್ಧ ಯಾವೆಲ್ಲ ನಕಲಿ ದಾಖಲೆಗಳು ಸೃಷ್ಟಿಯಾದವೋ ಆ ದಾಖಲೆಗಳೇ ಮುಂದೆ ಮಅದನಿಯನ್ನು ನಿರಪರಾಧಿ ಎಂದು ಘೋಷಿಸಿತು. ಆದರೆ ಸುದೀರ್ಘ ಹತ್ತು ವರ್ಷ ಅವರು ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿ ಕಳೆದರು. ಅವರು ನಿರಪರಾಧಿ ಎಂದು ಸಾಬೀತಾದ ಬಳಿಕವೂ ಅವರಿಗೆ ಜಾಮೀನು ಸಿಕ್ಕಿರಲಿಲ್ಲ. ಅಲ್ಲಿ ಅವರ ಜೀವ ಚೈತನ್ಯವನ್ನು ಸಂಪೂರ್ಣವಾಗಿ ಹೀರಿ ತೆಗೆಯಲಾಗಿತ್ತು. ಒಂದಂತೂ ಸತ್ಯ. ಅವರಿಗೆ ಶಿಕ್ಷೆಯಾಗುತ್ತದೆ ಎಂಬ ಭರವಸೆ ಪೊಲೀಸರೂ, ರಾಜಕಾರಣಿಗಳಿಗೂ ಇದ್ದಿರಲಿಲ್ಲ. ಆದರೆ ಹತ್ತು ವರ್ಷಗಳ ಜೈಲು ಬದುಕಿನಲ್ಲಿ ನಾಸರ್ ಮಅದನಿ ಮುಗಿದು ಹೋಗಬೇಕು ಎನ್ನುವ ಉದ್ದೇಶ ಎಲ್ಲರದ್ದೂ ಆಗಿತ್ತು. ಅಂತೆಯೇ ಅವರನ್ನು ಭೀಕರವಾಗಿ ಜೈಲಿನಲ್ಲಿ ನಡೆಸಿಕೊಳ್ಳಲಾಗಿತ್ತು. 100 ಕೆ.ಜಿ.ಗೂ ಅಧಿಕ ಇದ್ದ ಮಅದನಿ 50 ಕೆ.ಜಿ.ಗೆ ಇಳಿದಿದ್ದರು. ಆದರೆ ಅವರು ಜೈಲಿನಲ್ಲಿ ಸಾಯದೆ ಬದುಕಿ ಬಂದರು. ಇದು ನಿಜಕ್ಕೂ ರಾಜಕಾರಣಿ ಗಳಿಗೆ ತಲೆನೋವೇ ಆಗಿ ಬಿಟ್ಟಿತ್ತು.

 ಜೈಲಿನ ಶಿಕ್ಷೆ ಮಅದನಿಯನ್ನು ಇನ್ನಷ್ಟು ಪಳಗಿಸಿತ್ತು ಎನ್ನುವುದಂತೂ ಸತ್ಯ. ಅವರ ಧ್ವನಿಯ ಆವೇಶ ಪೂರ್ಣ ಇಳಿದಿತ್ತು. ಮಾತುಗಳು ಸೌಮ್ಯತೆಯನ್ನು ಪಡೆದಿತ್ತು. ಯಾವುದೇ ರಾಜಕೀಯ ಅಥವಾ ಧಾರ್ಮಿಕ ಹೇಳಿಕೆಯನ್ನು ನೀಡುವಾಗ ತೂಗಿ ತೂಗಿ ಮಾತನಾಡುತ್ತಿದ್ದರು. 10 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ ಬಳಿಕ ಅವರು ಮಾಧ್ಯಮಗಳಿಗೆ ಹೇಳಿದ್ದು ‘‘ನನಗೆ ಜೈಲು ಶಿಕ್ಷೆ ತುಂಬಾ ಕಲಿಸಿದೆ. ಅದು ನನ್ನನ್ನು, ನನ್ನ ಹೃದಯವನ್ನು ಪರಿವರ್ತನೆಗೊಳಿಸಿದೆ. ಮುಂದಿನ ಜೀವನವನ್ನು ಬಡವರಿಗಾಗಿ, ಹಿಂದುಳಿದ ವರ್ಗದವರಿಗಾಗಿ, ಶೋಷಿತರಿಗಾಗಿ ಮುಡಿಪಾಗಿಡುತ್ತೇನೆ...’’ ಮಅದನಿ ಅವರ ಉಗುರು, ಹಲ್ಲುಗಳು ಸಂಪೂರ್ಣ ಉದುರಿ ಹೋಗಿದ್ದವು. ಜೈಲಿನಿಂದ ಅವರು ಹೊರಬಂದಾಗ ಅವರ ಅನುಯಾಯಿ ಗಳೆಲ್ಲ ಭಾಗಶಃ ದೂರವಾಗಿ ಬಿಟ್ಟಿದ್ದರು. ಆವೇಶಮಯ ಭಾಷಣಗಳಿಲ್ಲದ ಮಅದನಿ ತನ್ನ ಆಕರ್ಷಣೆಯನ್ನು ಕಳೆದುಕೊಂಡಿದ್ದರು. ಬಹುಶಃ ಅವರನ್ನು ಅವರಷ್ಟಕ್ಕೆ ಬಿಟ್ಟಿದ್ದರೆ ಮುಂದಿನ ದಿನಗಳಲ್ಲಿ ಮಅದನಿ ಹೇಳ ಹೆಸರಿಲ್ಲದಂತಾಗುತ್ತಿದ್ದರು. ಯಾಕೆಂದರೆ ರಾಜಕೀಯವಾಗಿ ಸಂಘಟಿತರಾಗಲೂ ಅವರಲ್ಲಿ ಶಕ್ತಿಯಿರಲಿಲ್ಲ. ಆದರೆ ಅವರು ಅಳಿದುಳಿದ ಪಿಡಿಪಿ ಯನ್ನು ಸಂಘಟಿಸಿ, ಕಮ್ಯುನಿಷ್ಟ್ ಪಕ್ಷದತ್ತ ತನ್ನ ಒಲವನ್ನು ಯಾವಾಗ ವ್ಯಕ್ತ ಪಡಿಸಿದರೋ, ಅವರ ವಿರುದ್ಧ ರಾಜಕೀಯ ಪಕ್ಷಗಳು ಮತ್ತೆ ಒಂದಾದವು. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸರಣಿ ಸ್ಫೋಟ ಸಂಭವಿಸಿ ಒಬ್ಬರು ಮೃತರಾದರು. ಈ ಸ್ಫೋಟ ಕರ್ನಾಟಕದ ಅತಂತ್ರ ಬಿಜೆಪಿ ಸರಕಾರಕ್ಕೆ ಭಾರೀ ವರವಾಯಿತು. ‘ಉಗ್ರರು, ಭಯೋತ್ಪಾದನೆ’ಯ ಕಡೆಗೆ ಬೆರಳು ತೋರಿಸಿ, ಸರಕಾರದೊಳಗಿನ ಭಿನ್ನಮತ, ಒಡಕು, ಭ್ರಷ್ಟಾಚಾರ ಇವನ್ನೆಲ್ಲ ಮುಚ್ಚಿ ಹಾಕಲು ಯತ್ನಿಸಿದರು. ಇದೇ ಸಂದರ್ಭದಲ್ಲಿ ಕೇರಳದ ರಾಜಕಾರಣಿಗಳಿಗೂ ಮಅದನಿ ಮತ್ತೆ ಭಯೋತ್ಪಾದಕನಾಗಿ ಗುರುತಿಸಲ್ಪಡಬೇಕಾಗಿತ್ತು. ಕೇರಳ ಮತ್ತು ಕರ್ನಾಟಕ ಸರಕಾರ ಒಟ್ಟು ಸೇರಿ ಮಅದನಿಯಲ್ಲಿ ಸರಣಿ ಸ್ಫೋಟದ ಆರೋಪಿ ಯನ್ನು ಹುಡುದವು. ಮಅದನಿಯನ್ನು ಬೆಂಗಳೂರು ಸ್ಫೋಟಕ್ಕೆ ಆರೋಪಿಯನ್ನಾಗಿ ಮಾಡುವ ಮೂಲಕ, ಅದಾಗಲೇ ಅರ್ಧ ಜೀವಚ್ಛವವಾಗಿದ್ದ ಒಂದು ದೇಹಕ್ಕೆ ಕೃತಕ ಉಗುರು, ಹಲ್ಲುಗಳನ್ನು ನೀಡುವ ಪ್ರಯತ್ನ ನಡೆಸಿದವು ಉಭಯ ಸರಕಾರಗಳು. ಇದೆಷ್ಟು ಅಪಾಯಕಾರಿ ಕೆಲಸವಾಗಿತ್ತೆಂದರೆ, ಅದಾಗಲೇ ಜೈಲಿನಲ್ಲಿ ಸತ್ತು ಹೋಗಿದ್ದ ಹಳೆಯ ಮಅದನಿಯ ಪ್ರತಿಕೃತಿಯ ಪುನರ್‌ಸೃಷ್ಟಿಯಾಗಿತ್ತು. ಜನರು ಆ ಹಳೆಯ ಮಅದನಿಯನ್ನು ಎಂದೋ ಮರೆತು ಬಿಟ್ಟಿದ್ದರು. ಆದರೆ ಇದೀಗ ಸರಕಾರವೇ ಆ ಮಅದನಿಯನ್ನು ಸೃಷ್ಟಿಸಿ ಜನರ ಮುಂದೆ ನಿಲ್ಲಿಸಿದೆ. ಜೈಲಿನಲ್ಲಿಟ್ಟು ಅಲ್ಲೇ ಅವರನ್ನು ಹೂತು ಹಾಕಲು ನಿರ್ಧರಿಸಿದಂತಿದೆ. ಜನರನ್ನು ಪ್ರಚೋದಿಸುವ ಅಪಾಯಕಾರಿ ಕೆಲಸಕ್ಕೆ ವ್ಯವಸ್ಥೆಯೇ ಇಳಿದು ಬಿಟ್ಟಿದೆ.
 ಗಮನಿಸಿ. ಬೆಂಗಳೂರಿನ ಸರಣಿ ಸ್ಫೋಟ ನಡೆಸಿರುವುದು ಯಾರು ಎನ್ನುವುದು ಇನ್ನೂ ನಿಗೂಢವಾಗಿಯೇ ಇದೆ. ಆದರೆ ಸರಕಾರಕ್ಕೆ ಅದು ಮಅದನಿಯಂತಹ ಯಾರಾದರೂ ನಡೆಸಿದರೆ ಹೆಚ್ಚು ಅನುಕೂಲ. ಪೊಲೀಸರಿಗೆ ತನಿಖೆ ನಡೆಸುವ ಕಷ್ಟ ಉಳಿಯಿತು. ಮಅದನಿಯ ವಿರುದ್ಧವಿರುವ ಸಾಕ್ಷಗಳು ಎಷ್ಟು ತೆಳುವಾದುದು ಎನ್ನುವುದನ್ನು ಒಮ್ಮೆ ನೋಡಿ. ಅವರು ಬಾಡಿಗೆಗಿರುವ ಮನೆಯ ಮಾಲಕ ಜೋಸ್ ವರ್ಗೀಸ್. ಪೊಲೀಸರು ಇವನನ್ನು ಠಾಣೆಗೆ ಕರೆಸಿ ಅವನಿಂದ ಒಂದು ಹೇಳಿಕೆಯನ್ನು ಬರೆಸಿದರು. ಅದೇನೆಂದರೆ, ‘‘ಒಮ್ಮೆ ನಾನು ಮನೆ ಬಾಡಿಗೆ ವಸೂಲು ಮಾಡಲು ಹೋದಾಗ ಮಅದನಿ ಯಾರೊಂದಿಗೋ ಮಾತನಾಡುತ್ತಾ ‘ಬಾಂಬ್’ ‘ಸ್ಫೋಟ’ ಎಂಬ ಶಬ್ದವನ್ನು ಹೊರಡಿಸಿದ್ದರು’’ ಎಂದು. ಆದರೆ ಮುಂದೆ ಇದೇ ಜೋಸ್ ವರ್ಗೀಸ್ ‘ಅಂತಹದು ಸಂಭವಿಸಿಯೇ ಇಲ್ಲ’’ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಮುಖ್ಯವಾಗಿ, ಮನೆಬಾಡಿಗೆ ವಸೂಲಿಗೆ ನಾನು ಮಅದನಿಯ ಮನೆಗೆ ಒಮ್ಮೆಯೂ ಹೋಗಿಲ್ಲ. ಯಾಕೆಂದರೆ ಅವರು ಬಾಡಿಗೆಯನ್ನು ಬ್ಯಾಂಕ್ (ಎಚ್‌ಡಿಎಫ್‌ಸಿ)ಗೆ ಪಾವತಿಸುತ್ತಾರೆ ಎಂದು ಮಾಧ್ಯಮಗಳಿಗೆ ಮುಖ್ಯ ವಾಗಿ ತೆಹಲ್ಕಾಗೆ ಸ್ಪಷ್ಟ ಪಡಿಸಿದ್ದಾರೆ. ತೆಹಲ್ಕಾ ವರದಿಗಾರ್ತಿ ಕೆ.ಕೆ.ಶಾಹಿನಾ ಅವರೊಂದಿಗೆ ಜಾರ್ಜ್ ಎಲ್ಲವನ್ನು ಬಾಯಿ ಬಿಡುತ್ತಾರೆ. ಇದರಿಂದ ಸಿಟ್ಟಿಗೆದ್ದ ಕರ್ನಾಟಕ ಪೊಲೀಸರು ಮುಂದೆ, ತನಿಖಾ ವರದಿಗಾರ್ತಿ ಶಾಹಿನಾ ವಿರುದ್ಧವೇ ಪ್ರಕರಣವನ್ನು ದಾಖಲಿಸುತ್ತಾರೆ. ಅಷ್ಟೇ ಅಲ್ಲ, ಜಾರ್ಜ್ ಈ ಕುರಿತಂತೆ ಪೊಲೀಸರ ವಿರುದ್ಧವೇ ನ್ಯಾಯಾಲಯದ ಮೆಟ್ಟಿಲೇರಿದ್ದರು. ತನ್ನ ಹೇಳಿಕೆಯನ್ನು ಪೊಲೀಸರು ತಿರುಚಿದ್ದಾರೆ ಎಂದೂ ಹೇಳಿದ್ದರು.
ಕೊಯಮತ್ತೂರು ಸ್ಫೋಟದ ಆರೋಪದಿಂದ ಬಿಡುಗಡೆ ಯಾದ ಬಳಿಕ ಸರಕಾರ ಅವರಿಗೆ ಇಬ್ಬರು ಅಂಗರಕ್ಷಕರನ್ನು ಕೊಟ್ಟಿತ್ತು. ಇದು, ಮಅದನಿಯ ರಾಜಕೀಯ ನಡೆಯ ಬಗ್ಗೆ ಕಣ್ಣಿಡಲು ಹೊರತು, ಮಅದನಿಯ ರಕ್ಷಣೆಗಾಗಿರಲಿಲ್ಲ. ಇವರನ್ನೆಲ್ಲ ಕಣ್ಣು ತಪ್ಪಿಸಿ ಒಂಟಿ ಕಾಲಿನ ಮಅದನಿ ಕೊಡಗಿಗೆ ಹೋಗಿ, ಅಲ್ಲಿರುವ ನಝೀರ್ ಎಂಬವನ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನುವುದೇ ತಮಾಷೆಯ ವಿಷಯವಾಗಿದೆ. ಇದನ್ನು ತನಿಖೆ ನಡೆಸಲು ತೆಹಲ್ಕಾ ಪತ್ರಕರ್ತೆ ಶಾಹಿನಾ ಕೊಡಗಿಗೆ ಹೋದಾಗ ಪೊಲೀಸರು ಆಕೆಯನ್ನು ಬಂಧಿಸಿ, ಆಕೆಯ ಮೇಲೆ ಮೊಕದ್ದಮೆಯನ್ನು ದಾಖಲಿಸಿ ಅವರ ಕೈಗಳನ್ನು ಕಟ್ಟಿ ಹಾಕಿದರು. ಇದರ ವಿರುದ್ಧ ಅಂತಾರಾಷ್ಟ್ರೀಯ ಮಾಧ್ಯಮ ಗಳು ತಮ್ಮ ಖಂಡನೆಯನ್ನು ವ್ಯಕ್ತಪಡಿಸಿವೆ.


 ಇದೀಗ ಮಅದನಿಯ ಬೆಂಬಲಿಗರು ಹೇಳುವುದು ಇಷ್ಟೇ. ‘‘ಸರಣಿ ಸ್ಫೋಟ ನಡೆಸಿದ್ದರೆ ಅವರಿಗೆ ಮರಣದಂಡನೆ ಯಾಗಲಿ. ಆದರೆ ವಿಚಾರಣೆಯ ಹೆಸರಿನಲ್ಲಿ ಅವರನ್ನು ಜೈಲಿನಲ್ಲಿ ಸಾಯಿಸುವುದು ಬೇಡ’’.
ಇಂದು ಅನುಕಂಪದ ಬಲದ ಮೇಲೆ ಮತ್ತೆ ಮಅದನಿಯ ಅಭಿಮಾನಿಗಳು ಹುಟ್ಟಿಕೊಳ್ಳು ತ್ತಿದ್ದಾರೆ. ಒಂದು ವೇಳೆ, ಮಅದನಿ ವಿಚಾರಣೆಯ ಹೆಸರಿನಲ್ಲಿ ಅನಾರೋಗ್ಯದಿಂದ ಸತ್ತೇ ಹೋದರೆ, ಅದು ಕೇರಳದ ಒಂದು ವರ್ಗದ ಮುಸ್ಲಿಮರ ಮೇಲೆ ಭೀಕರ ಪರಿಣಾಮವನ್ನು ಬೀರಬಹುದು. ಇದರಿಂದ ಮಅದನಿಗೆ ಯಾವುದೇ ನಷ್ಟವಾಗುವು ದಿಲ್ಲ. 92ರ ದಶಕದ ಮಅದನಿಯನ್ನು ಮತ್ತೆ ಪೊಲೀಸರೇ ಜೀವಂತಗೊಳಿಸಿದಂತಾಗು ತ್ತದೆಯಷ್ಟೇ. ಈ ಪ್ರಕರಣದಲ್ಲಿ ಮಅದನಿಯ ಪಾತ್ರ ಗುರುತಿಸಿ ನ್ಯಾಯಾಲಯ ಅವರನ್ನು ಶಿಕ್ಷಿಸಿದರೆ ಅದು ಸ್ವಾಗತಾರ್ಹ. ಆದರೆ ನಿರಪರಾಧಿಯಾಗಿ ಜೈಲಲ್ಲೇ ಅವರು ಸತ್ತು ಹೋದರೆಂದರೆ, ಕೇರಳದಲ್ಲಿ 92ರ ದಶಕದ ಮಅದನಿಗಳು ಮತ್ತೆ ಚಿಗುರುವ ಸಾಧ್ಯತೆಯಿದೆ. ಅಂತಹದ್ದು ಯಾವುದೂ ಘಟಿಸದಿರಲಿ. ಈ ದೇಶ, ಈ ಸಂವಿಧಾನದ ಮೇಲಿರುವ ಭರವಸೆ ನಮ್ಮ ಯುವಕರಲ್ಲಿ ಅಜರಾಮರವಾಗಿ ಇರಲಿ ಎನ್ನುವುದೇ ನನ್ನ ಆಶಯ.

1 comment:

  1. ಯಾವ ರೀತಿ ಒಂದು ವ್ಯವಸ್ತೆ ಓರ್ವ ಅಮಾಯಕನ ರಕ್ತ ಹೀರುತ್ತದೆ ಎಂದು ಮದನಿ ಪ್ರಕರಣ ದಲ್ಲಿ ನೋಡ ಬಹುದು. ಆದರು ಮದನಿ ಯವರ ಸಹನೆಗೆ ಬೇಷ್ ಅನ್ನಲೇ ಬೇಕು. ಅಲ್ಲಾಹನು ಅವರನ್ನು ಕಾಪಾಡಿದನು. ಈ ವ್ಯವಸ್ತೆಗೆ ಕೇವಲ ಪಿಸ್ತೂಲಿನ ಗುಂಡಿ ಒತ್ತುವ ಬೆರಳು ಗಳು ಬೇಕು , ಉಳಿದ ಎಲ್ಲ ಕಾರ್ಯ ಅದು ತಾನಾಗಿಯೇ ನೆರವೇರಿಸುತ್ತದೆ. ಇಂದು ನಮ್ಮ ಸುತ್ತ ಮುತ್ತ ನಡೆಯುವ ಘಟನೆ ಗಳೇ ಇದಕ್ಕೆ ಸಾಕ್ಷಿ, ವ್ಯವಸ್ತೆಯು ಒಂದು ಸಮುದಾಯವನ್ನು ಯಾವ ರೀತಿ ಹತಾಶೆ ಗೆ ತಳ್ಳಿ ಅದರ ಯುವಕರನ್ನು ದಾರಿ ತಪ್ಪಿಸುವ ಹುನ್ನಾರ ನಡೆಸುತ್ತಿದೆ ಎಂದು ಸ್ಪಷ್ಟವಾಗಿ ನೋಡಬಹುದು . ಒಂದು ವೇಳೆ ಅದರಿಂದ ಸಫಲತೆ ಸಿಗಲಿಲ್ಲವಾದರೆ ಸಂಜ್ಹೊತ ರೈಲು ಸ್ಪೋಟ, ಮಾಲೆ ಗಾವ್, ಮೆಕ್ಕಾ ಮಸ್ಜಿದ್, ಅಜ್ಮೀರ್ ಸ್ಪೋಟ ಗಳು ಹೆಣೆಯ ಲಾಗುತ್ತದೆ. ಈ ನಿಟ್ಟಿನಲ್ಲಿ ಸಮುದಾಯದ ಯುವಕರಿಗೆ "ಸಹನೆಯೇ ಸಫಲತೆಯ ಹಾದಿ" ಎಂದು ಹೇಳ ಬಯಸುತ್ತೇನೆ.

    ReplyDelete