
ಬಿಂದು
ನನ್ನ ಮುಂದಿದ್ದ ಖಾಲಿ ಕಾಗದದ ಮೇಲೆ ಪೆನ್ನಿಂದ ಒಂದು ಬಿಂದುವನ್ನಿಟ್ಟೆ.
ಆಲದ ಬೀಜದಂತಿರುವ ಒಂದು ಬಿಂದು.
ಆ ಬಿಂದುವಿನ ಗರ್ಭದೊಳಗಿಂದ ಹೊರಬರುವ ಜೀವಕ್ಕಾಗಿ ಕಾಯುತ್ತಿದ್ದೇನೆ.
ದಾರಿ
ದೊಡ್ಡ ನಗರದಲ್ಲಿ ಸಂತ ಮತ್ತು ಶಿಷ್ಯ ದಾರಿ ತಪ್ಪಿದರು.
ತಮ್ಮ ಆಶ್ರಮದೆಡೆಗೆ ದಾರಿ ಹುಡುಕುತ್ತಾ ಗಲ್ಲಿ ಗಲ್ಲಿ ಅಲೆದರು.
ಕೊನೆಗೆ ಒಂದು ಕಟ್ಟಡದ ಕೆಳಗೆ ಸುಸ್ತಾಗಿ ಬಿದ್ದುಕೊಂಡರು.
ಶಿಷ್ಯ ಕೇಳಿದ ‘‘ಗುರುಗಳೇ, ಯಾರಲ್ಲಾದರೂ ದಾರಿ ಕೇಳೋಣವೆ?’’
ಸಂತ ಹೇಳಿದ ‘‘ನಮ್ಮ ಆಶ್ರಮದ ದಾರಿಯನ್ನು ಇನ್ನೊಬ್ಬರಲ್ಲಿ ಕೇಳುವುದು ನಾಚಿಕೆಗೇಡು. ಮೊದಲು ನಮ್ಮನ್ನು ದಾರಿ ತಪ್ಪಿಸಿದ ನಗರದ ಮೋಹದಿಂದ ಬಿಡಿಸಿಕೊಳ್ಳೋಣ. ದಾರಿ ತನ್ನಷ್ಟಕ್ಕೆ ತೆರೆದುಕೊಳ್ಳುತ್ತದೆ’’
ಗಾಜು
ಅವನಿಗೆ ಸಿಟ್ಟು ಬಂತು.
ಸಿಟ್ಟಿನಿಂದ ತನ್ನ ಕೈಯಲ್ಲಿದ್ದ ಗಾಜಿನ ಲೋಟವನ್ನು ನೆಲಕ್ಕಪ್ಪಳಿಸಿದ.
ಲೋಟ ಚೂರು ಚೂರಾಯಿತು.
ತುಸು ಹೊತ್ತಲ್ಲಿ ಆತ ಸಮಾಧಾನಗೊಂಡ. ಶಾಂತನಾದ.
ಆದರೆ ಚೂರಾದ ಲೋಟ ಒಂದಾಗಲಿಲ್ಲ.
ಕಲ್ಲು
ಕಾರ್ಮಿಕನೊಬ್ಬ ಹೊತ್ತು ತಂದ ಅತಿ ಭಾರವಾದ, ದೊಡ್ಡ ಕಲ್ಲು.
ಶಿಲ್ಪಿಗಳ ಕೈಯಲ್ಲಿ ದೇವರಾಯಿತು.
ದೇವಾಲಯ ಸೇರಿತು.
ಒಂದು ದಿನ ಕಾರ್ಮಿಕನಿಗೆ ತಾನು ಹೊತ್ತು ತಂದ ಆ ಕಲ್ಲನ್ನು ನೋಡಬೇಕೆಂದು ಮನಸ್ಸಾಯಿತು.
ದೇವಾಲಯಕ್ಕೆ ಬಂದ.
‘‘ನೀನು ಕೆಳ ಜಾತಿ. ಮುಟ್ಟಬಾರದು. ದೇವರು ಅಪವಿತ್ರವಾಗುತ್ತಾನೆ’’ ಅರ್ಚಕರು ನುಡಿದರು.
ಅದು ತಾನು ತಂದ ‘ಕಲ್ಲು’ ಎನ್ನುವುದು ಅವನಿಗೆ ಮನವರಿಕೆಯಾಯಿತು.
ಸಹಾಯ
ಒಂದು ಹುಲಿ.
ವಯಸ್ಸಾಗಿತ್ತು. ಅದಕ್ಕೆ ನಡೆದಾಡಲೂ ಸಾಧ್ಯವಾಗುತ್ತಿರಲಿಲ್ಲ.
ಆದುದರಿಂದ ಬೇಟೆ ಕಷ್ಟವಾಯಿತು. ಹಸಿವಿನಿಂದ ಕಂಗಾಲಾಗಿತ್ತು.
ಒಂದು ದಿನ ಅದರ ಮುಂದೆ ಎರಡು ಜಿಂಕೆಗಳು ಬಂದು ನಿಂತವು.
ಹುಲಿಯನ್ನು ಕಂಡು ಒಂದು ಜಿಂಕೆಗೆ ದುಃಖವಾಯಿತು. ಸಹಾಯ ಮಾಡಬೇಕು ಅನ್ನಿಸಿತು.
‘‘ನಾನೇನಾದರೂ ಸಹಾಯ ಮಾಡಲಾ?’’ ಜಿಂಕೆ ಕೇಳಿತು.
ಇನ್ನೊಂದು ಜಿಂಕೆ ಕೇಳಿತು ‘‘ಅದರ ಒಂದು ಹೊತ್ತಿನ ಆಹಾರವಾಗುವುದಕ್ಕೆ ನಿನಗೆ ಸಾಧ್ಯವಿದೆಯೆ?’’
ಮೊದಲ ಜಿಂಕೆ ಭಯದಿಂದ ‘‘ಇಲ್ಲ, ಇಲ್ಲ’’ ಎಂದಿತು.
‘‘ಹಾಗಾದರೆ ಬಾಯಿ ಮುಚ್ಚಿ ಸುಮ್ಮನಿರು. ಹುಲಿಗೆ ಜಿಂಕೆಗಳು ಸಹಾಯವಾಗುವುದು ಆಹಾರದ ಮೂಲಕ ಮಾತ್ರ. ನಡಿ, ಇಲ್ಲಿಂದ ಮೊದಲು ಹೋಗೋಣ’’
ಸ್ನೇಹ
‘‘ಗುರುಗಳೇ, ನನ್ನ ಪ್ರಾಣ ಮಿತ್ರ ಆಂತರಿಕವಾಗಿ ದುಷ್ಟನೆನ್ನುವುದು ತಿಳಿದು ಹೋಗಿದೆ. ನಾನವನ ಸ್ನೇಹವನ್ನು ಬಿಡಲೆ?’’
‘‘ದುಷ್ಟನಾಗಿದ್ದೂ ಅವನು ನಿನ್ನ ಸ್ನೇಹ ಮಾಡಿದ್ದಾನೆಂದರೆ ನಿನ್ನಲ್ಲೇನೋ ದುಷ್ಟತನವಿದೆ. ಮೊದಲು ಅದನ್ನು ಬಿಡು. ಆಗ ನಿನ್ನ ಸ್ನೇಹವನ್ನು ಅವನು ತಾನಾಗಿಯೇ ಬಿಡುತ್ತಾನೆ’’ ಸಂತ ತಣ್ಣಗೆ ಹೇಳಿದ.
ಹುಚ್ಚು
ನಗರದಲ್ಲಿ ಅಂದು ಬಂದ್ ಘೋಷಿಸಲಾಗಿತ್ತು.
ಅಲ್ಲಲ್ಲಿ ಪೊಲೀಸ್ ಪಹರೆ.
ಹುಚ್ಚನೊಬ್ಬ ಆ ದಾರಿಯಲ್ಲಿ ಯಾವ ಭಯವೂ ಇಲ್ಲದೆ ನಡೆದು ಹೋಗುತ್ತಿದ್ದ.
ಆತನಿಗೆ ಇನ್ನೊಬ್ಬ ಹುಚ್ಚ ಎದುರಾದ.
ಆತ ಕೇಳಿದ ‘ಇಂದೇಕೆ ಬೀದಿ ನಿರ್ಜನವಾಗಿದೆ. ಜನರೇಕೆ ನಮ್ಮ ಕಡೆಗೆ ಕಲ್ಲು ತೂರುತ್ತಿಲ್ಲ. ನಮ್ಮನ್ನು ನೋಡಿ ನಗುತ್ತಿಲ್ಲ? ನಮ್ಮನ್ನು ನೋಡಿ ಓಡಿಸುವುದಕ್ಕೆ ಯಾರೂ ಬರುತ್ತಿಲ್ಲ?’’
‘‘ಇಂದು ನಗರದಲ್ಲಿ ದಂಗೆ, ಗಲಾಟೆಯಂತೆ’’
‘‘ಯಾಕೆ ಗಲಾಟೆ?’’
‘‘ಜನರಿಗೆ ಹುಚ್ಚು, ಅದಕ್ಕೆ’’
ಗ್ರಂಥ
‘‘ಆ ಬೃಹತ್ ಧರ್ಮಶಾಸ್ತ್ರ ಗ್ರಂಥವನ್ನು ತಾವು ಓದಿಲ್ಲವೆ?’’ ಆ ಪಂಡಿತ ಸಂತನಲ್ಲಿ ಕೇಳಿದ.
‘‘ಇಲ್ಲ’’ ಎಂದ ಸಂತ.
‘‘ನಾನು ಓದಿದ್ದೇನೆ’’ ಪಂಡಿತ ಎದೆಯುಬ್ಬಿಸಿ ಹೇಳಿದ.
‘‘ಇಲ್ಲ...ನಾನು ಓದಿಲ್ಲ’’ ಸಂತನೂ ಹೆಮ್ಮೆಯಿಂದ ಪುನರುಚ್ಚರಿಸಿದ.
ಕಲ್ಲುಗಳು
ಅದೊಂದು ಬಂಡೆ.
ಇನ್ನೊಂದು ಬಂಡೆಯೊಂದಿಗೆ ವಿಚಿತ್ರವೊಂದನ್ನು ಹಂಚಿಕೊಳ್ಳುತ್ತಿತ್ತು.
‘‘ನನ್ನದೇ ಕಲ್ಲಿನಿಂದ ಇಲ್ಲಿನ ಮಸೀದಿಯನ್ನು ಕಟ್ಟಲಾಯಿತು. ಪಕ್ಕದ ದೇವಸ್ಥಾನಕ್ಕೆ ನನ್ನ ಕಲ್ಲನ್ನೇ ಬಳಸಿ ದೇವರ ಮೂರ್ತಿಯನ್ನು ನಿರ್ಮಿಸಲಾಯಿತು. ನನ್ನದೇ ಕಲ್ಲುಗಳನ್ನು ಬಳಸಿ ಉಭಯ ಸ್ಥಳಗಳಿಗೂ ರಸ್ತೆಯನ್ನು ನಿರ್ಮಿಸಲಾಯಿತು.
ಇದೀಗ,
ನನ್ನವೇ ಕಲ್ಲು ಚೂರುಗಳನ್ನು ಹಿಂದೂಗಳು ಮಸೀದಿಗೂ, ಮುಸ್ಲಿಮರು ದೇವಳಕ್ಕೂ ಎಸೆಯುತ್ತಿದ್ದಾರೆ...’’
ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.
ಮಂಗಳೂರಿನಲ್ಲಿ ‘ಜನವಾಹಿನಿ’ ಆಗ ಹುಟ್ಟಿದ್ದಷ್ಟೇ. ನನ್ನನ್ನು ಕೊಡಗು ಜಿಲ್ಲೆಯವರದಿಗಾರನಾಗಿ ರವಾನಿಸಲಾಯಿತು. ಅಲ್ಲೊಂದು ಕಚೇರಿಯನ್ನು ಹುಡುಕುವುದೂ ನನ್ನ ಹೆಗಲ ಮೇಲೆಯೇ ಬಿತ್ತು. ಕೊನೆಗೂ ಮಡಿಕೇರಿಯ ಟೋಲ್ಗೇಟ್ ಸಮೀಪ ಒಂದು ಕೊಠಡಿ ಸಿಕ್ಕಿತು. ಆ ಕೊಠಡಿ ಪ್ರವೇಶಿಸಿದಾಗ ಅಲ್ಲೊಂದು ಮುಚ್ಚಿದ ಗೋಡೆ ಕಪಾಟನ್ನು ನೋಡಿದೆ. ಅದರ ಬಾಗಿಲನ್ನು ತೆರೆದಾಗ ಒಂದು ವಿಶಿಷ್ಟ ಅನುಭವವೊಂದು ನನ್ನದಾಯಿತು. ಸುಮಾರು ಎರಡು ವರ್ಷಗಳ ಬಳಿಕ ಆ ಅನುಭವ ಕವಿತೆಯ ರೂಪ ಪಡೆಯಿತು. ಬಾಲಸುಬ್ರಹ್ಮಣ್ಯ ಕಂಜರ್ಪಣೆ ಮತ್ತು ಪಟ್ಟಾಭಿರಾಮ ಸೋಮಯಾಜಿಯವರ ಜೊತೆಗೆ ಟೀ ಕುಡಿಯುತ್ತಾ ಅದೇ ಕಚೇರಿಯಲ್ಲಿ ಆ ಕವಿತೆಯನ್ನು ಅವರ ಮುಂದಿಟ್ಟೆ. ಅವರೂ ಇಷ್ಟಪಟ್ಟರು. ಬಳಿಕ ಆ ಕವಿತೆಗೆ ಕತೆಯ ರೂಪಕೊಟ್ಟು, ‘ಗೋಡೆಕಪಾಟು’ ಎಂಬ ಹೆಸರಿಟ್ಟು ನನ್ನ ‘ಬಾಳೆಗಿಡ ಗೊನೆ ಹಾಕಿತು’ ಸಂಕಲನದಲ್ಲಿ ಪ್ರಕಟಿಸಿದೆ. ಎಸ. ದಿವಾಕರ್ ಸಂಪಾದಕತ್ವದ ಕನ್ನಡದ ಶತಮಾನದ ಅತಿ ಸಣ್ಣ ಕತೆಗಳು ಸಂಕಲನದಲ್ಲೂ ಇದು ಪ್ರಕಟವಾಗಿದೆ.
ಮುಂದೆ ಆ ಕತೆಯನ್ನು ಆಧರಿಸಿ ಯುವ ಪ್ರತಿಭಾವಂತ ಕಲಾವಿದ, ನಿರ್ದೇಶಕ ಆಸಿಫ್ ಫಾರೂಖಿ ಒಂದು ಸಣ್ಣ ಟೆಲಿ ಫಿಲಂ ಮಾಡಿದರು. ಒಂದಿಷ್ಟು ವಾಚ್ಯವಾಗಿತ್ತಾದರೂ, ಬಹುಶಃ ದೃಶ್ಯ ರೂಪಕ್ಕಿಳಿಸುವಾಗ ಅದು ಅನಿವಾರ್ಯ ಅನ್ನಿಸಿತು.ಆ ಕತೆಯನ್ನು ಇಲ್ಲಿ ಸುಮ್ಮಗೆ ಹಂಚಿಕೊಂಡಿದ್ದೇನೆ.
ಬದುಕಿನ ದಾರಿಯಲ್ಲಿ ನನ್ನನ್ನು ಕೈ ಹಿಡಿದು ನಡೆಸುತ್ತಿದ್ದ ಈ ಕಥೆಗಾರನ ಮನೆಯ ವಿಳಾಸ ಹುಡುಕಿ, ಆತನ ಮನೆ ಬಾಗಿಲ ಮುಂದೆ ಎದೆ ಬಡಿತವನ್ನು ಒತ್ತಿ ಹಿಡಿದು ನಿಂತೆ. ತುಸು ಹೊತ್ತಲ್ಲಿ ‘ಯಾರದು?’ ಎನ್ನುತ್ತಾ ಬಾಗಿಲ ಸೆರೆಯಿಂದ ಇಣುಕಿದ ವ್ಯಕ್ತಿ ಉತ್ತರಕ್ಕಾಗಿ ಕಾಯತೊಡಗಿತು.
ಉದ್ದಕ್ಕೆ ಆರಿದ ಗಾಯದಂತೆ..ಸೀಳು ಬಿಟ್ಟ ಬಾಗಿಲಲ್ಲಿ ಹೊಳೆಯುವ ಒಂದು ಕಣ್ಣು ನನ್ನ ಗಾಬರಿಬಿದ್ದ ಕಣ್ಣುಗಳೊಂದಿಗೆ ಮಾತನಾಡಿ ತೃಪ್ತವಾದ ಬಳಿಕ ಬಾಗಿಲು ಪೂರ್ಣವಾಗಿ ತೆರೆದುಕೊಂಡವು.
‘ಬನ್ನಿ’ ಎಂದು ಅರೆ ನರೆತ ಗಡ್ಡ, ಬತ್ತಿದ ಮುಖದ ವ್ಯಕ್ತಿಯೊಂದು ಒಳಗೆ ಕರೆಯಿತು.
‘ನಾ... ನಾನು ನಿಮ್ಮ ಅಭಿಮಾನಿ’ ನನ್ನ ಪರಿಚಯ ಪತ್ರವನ್ನು ಮತ್ತೆ ಕಣ್ಣಲ್ಲಿಟ್ಟು ಹೇಳಿದೆ. ಆ ಮಾತಿಗೆ ಒಮ್ಮೆಗೆ ಅಳುಕಿ ಬಿದ್ದವನಂತೆ ‘ಬನ್ನಿ. ಬನ್ನಿ’ ಎಂದು ಒಳಕರೆದು, ಒಳಗೆಲ್ಲಾ ನೆಲದ ಮೇಲೆ ಬಿದ್ದ ಕಸಕಡ್ಡಿಗಳನ್ನು ನಾನು ನೋಡುನೋಡುತ್ತಿದ್ದಂತೆಯೇ ಕಾಲಿನಿಂದ ಸರಿಸತೊಡಗಿದ.
ಕುರ್ಚಿಯಲ್ಲಿ ಒಣಗಲೆಂದಿಟ್ಟ ಎರಡು ನಿಕ್ಕರುಗಳನ್ನು ಒಮ್ಮೆಲೆ ಬಾಚಿ ಮುದ್ದೆ ಮಾಡಿ ಪ್ಯಾಂಟ್ ಕಿಸೆಗೆ ತುರುಕಿಕೊಂಡ. ‘ಕೂರಿ ಕೂರಿ’ಎನ್ನುತ್ತಲೇ ಯಾರೋ ಉಂಡು ಬಿಟ್ಟ ಬಟ್ಟಲನ್ನು ಎತ್ತಿ ‘ಈಗ ಬಂದೆ’ ಎಂದು ಒಳಹೋಗಿ ಇಟ್ಟು ಬಂದ.
ಕಥೆಗಾರ ಯಾಕೋ ತಪ್ಪು ಮಾಡಿದವನಂತೆ ಸಂಕೋಚದಿಂದ ನನ್ನ ಮುಂದೆ ನಿಂತಿದ್ದ. ‘ಪರವಾಗಿಲ್ಲ ಸಾರ್, ಸುಮ್ನೆ ಬಂದೆ. ನಿಮ್ಮೆಂದಿಗೆ ಮಾತನಾಡಬೇಕೆನ್ನುವುದು ಬಹಳ ದಿನದ ಕನಸಾಗಿತ್ತು’ ಎಂದು ಪರಿಸ್ಥಿತಿಯನ್ನು ಕೈಯೊಳಗೆ ತರುವ ವ್ಯರ್ಥ ಪ್ರಯತ್ನ ಮಾಡಿದೆ.
ಅವನು ನಿಂತೆ ಇದ್ದ. ಅಲ್ಲಿದ್ದ ಒಂದೇ ಒಂದು ಮರದ ಕುರ್ಚಿಯಲ್ಲಿ ನಾನು ಕುಳಿತಿದ್ದೆ. ಆತ ಒಳಗಿಂದ ಬೇರೆ ಕುರ್ಚಿ ತಂದುಕೂರಬಹುದೆಂದು ನಾನು ತಿಳಿದಿದ್ದೆ. ಆದರೆ ಆತ ಆ ಪ್ರಯತ್ನ ಮಾಡಲೇ ಇಲ್ಲ. ನಾನು ಒಮ್ಮೆಲೆ ನಿಂತು ‘ಸಾರ್, ನೀವು ಕೂರಿ’ ಎಂದೆ. ‘ಬೇಡ, ಬೇಡ. ಅಪರೂಪ ಬಂದಿದ್ದೀರಿ. ನೀವೇ ಕೂರಿ’ ಎಂದ. ಆಮೇಲೆ ಒಳ ಹೋಗಿ ಚಾಪೆ ತಂದು ಹಾಸಿದ. ಅಲ್ಲಿ ಅವನು ಕೂರುವ ಮುನ್ನವೇ ನಾನು ಕೂತೆ. ಆತ ಕುರ್ಚಿಯಲ್ಲೂ, ನಾನು ಚಾಪೆಯಲ್ಲೂ ಕೂತ ಕ್ಷಣದಿಂದ ವಾತಾವರಣ ಹದಕ್ಕೆ ಬಂತು ಅನ್ನಿಸಿ ‘ಹೇಗಿದ್ದೀರಿ ಸಾರ್?’ ಕೇಳಿದೆ. ಮತ್ತೆ ದಿಗಿಲುಗೊಂಡು ‘ಚೆ..ಚೆನ್ನಾಗಿದ್ದೇನೆ’ ಎಂದ. ‘ಏನಾದರೂ ಕುಡೀತೀರಾ?’ಎಂದು ಆತ ಕೇಳದಿದ್ದುದಕ್ಕೆ ನನಗೇನು ಅನ್ನಿಸಲಿಲ್ಲ. ತೀರಾ ಆತ್ಮೀಯನಂತೆ ‘ಸಾರ್, ಕುಡಿಯುವುದಕ್ಕೆ ನೀರು ಬೇಕಾಗಿತ್ತು’ ಎಂದೆ. ಕಥೆಗಾರ ದಡಬಡಿಸಿ ಎದ್ದು ಒಳನಡೆದ. ಹಲವು ಕ್ಷಣಗಳು ಕಳೆದರೂ ಹೊರ ಬರಲಿಲ್ಲ.
ನಾನು ಬಣ್ಣ ಮಾಸಿದ ಗೋಡೆಯಗಲಕ್ಕೂ ಕಣ್ಣಾಯಿಸಿದೆ. ಯಾವುದೋ ಅವ್ಯಕ್ತ ಪಾತ್ರವೊಂದನ್ನು ಕಥೆಗಾರ ಗೋಡೆತುಂಬಾ ಸ್ವತಂತ್ರವಾಗಿರಲು ಬಿಟ್ಟಂತೆ ಗೋಡೆಯ ಬಣ್ಣ ಬಗೆ ಬಗೆಯ ಆಕಾರವಾಗಿ ಕಣ್ಣೊಳಗೆ ಇಳಿಯತೊಡಗಿತು.
‘ಈ ಸಾರಿಯ ಮಳೆಗಾಲ ಮುಗಿಯಲಿ ಅಂತ ಕಾಯ್ತ ಇದ್ದೇನೆ, ಗೋಡೆಗೆ ಸುಣ್ಣ ಬಳಿಯಲು’ ಕಥೆಗಾರನ ದನಿ ಕೇಳಿ ಅತ್ತ ಹೊರಳಿದೆ. ಅವನ ಕೈಯಲ್ಲಿ ನೀರಿನ ಪಾತ್ರೆಯಿರಲಿಲ್ಲ. ಸುಮ್ಮನಾದೆ. ಆತ ಮತ್ತೆ ಕುರ್ಚಿಯಲ್ಲಿ ಕೂತ. ಆಮೇಲೆ ಏನೋ ಹೊಳೆದವನಂತೆ ‘ಒಮ್ಮೆ ಪೇಪರ್ ಕೊಡ್ತೀರಾ?’ ಅಂದ. ಈ ಕೋರಿಕೆಯನ್ನು ಪ್ರಸಾದವೆಂಬಂತೆ ಸ್ವೀಕರಿಸಿ ನನ್ನ ಕೈಯಲ್ಲಿದ್ದ ದೈನಿಕವನ್ನು ನೀಡಿದೆ. ಆತ ನೇರವಾಗಿ ಅದರ ಎರಡನೇ ಪುಟವನ್ನು ಬಿಡಿಸಿದ. ಬಳಿಕ ಕಿಸೆಯೊಳಗೆ ಏನನ್ನೋ ಹುಡುಕಾಡತೊಡಗಿದ. ಶರ್ಟಿನ ಕಿಸೆಯೊಳಗಿದ್ದ ಎಲ್ಲವನ್ನು ಹೊರಗೆಳೆದ. ಆಮೇಲೆ ಕಂಪಿಸುವ ಕೈಗಳಲ್ಲಿ ಒಂದು ಚೀಟಿಯನ್ನು ಎತ್ತಿಕೊಂಡು ‘ಕರ್ನಾಟಕ ಲಾಟರಿ ಟಿಕೆಟ್’ ಎಂದು ನಕ್ಕ. ಲಾಟರಿ ಟಿಕೆಟ್ ಅಂಕಿಗಳನ್ನು ಪತ್ರಿಕೆಯೊಂದಿಗೆ ತಾಳೆ ನೋಡುವುದರಲ್ಲಿ ಮುಳುಗಿದ.
ಒಮ್ಮೆಲೆ ಪೆಚ್ಚಾಗಿ ಅವನನ್ನೇ ನೋಡಿದೆ. ಅವನು ಅದನ್ನು ಅನುಭವಿಸುವುದಕ್ಕೆ ಸಾಕ್ಷಿಯಾಗಿ ಅವನ ತುಟಿಯಂಚಿನಲ್ಲಿ ಜೊಲ್ಲು ಕೆಳಬಾಗಿ ತೂಗುತ್ತಿತ್ತು. ಬಳಿಕ ‘ಶಿಟ್’ ಅಂತ ಟಿಕೆಟನ್ನು ಮುಷ್ಠಿಯೊಳಗೆ ಹಿಚುಕಿ ಎಸೆದ. ಒಮ್ಮೆಲೆ ಅರಿವಿಗೆ ಬಂದು ಜೊಲ್ಲನ್ನು ಕೈಯಿಂದ ಒರೆಸಿಕೊಂಡ. ‘ಕೆಲವೊಮ್ಮೆ ಕರ್ನಾಟಕ ಲಾಟರಿಯವರದ್ದೂ ಕೂಡ ಮೋಸವೇನೋ ಅಂತನಿಸ್ತದೆ’ ಎಂದು ಮತ್ತೇನನ್ನೋ ಗೊಣಗಿದ. ವೌನವಾದ. ಕಥೆಗಾರನ ದುಃಖ ಅರ್ಥವಾಯಿತು.
‘ಸಾರ್, ನಿಮ್ಮಟ್ಟಿಗೆ ಮಾತಾಡ್ಬೇಕೂಂತ ಬಂದೆ’ ಎಂದೆ.
‘ಹಾಂ..ಮಾ..ಮಾತಾಡಿ. ಆದ್ರೆ ಸಂಜೆ ಸ್ವಲ್ಪ ಅರ್ಜೆಂಟ್ ಕೆಲ್ಸ ಇದೆ’ ಅವನಿಗೆ ಅವನು ಪಿಸುಗುಟ್ಟಿದ.
‘ಏನ್ಸಾರ್ ಕೆಲ್ಸ, ಹೊಸತೇನಾದ್ರೂ ಬರೀತಾ ಇದೀರಾ?’ ಕುತೂಹಲದಿಂದ ಕೇಳಿದೆ. ‘ಹಾಗೇನಿಲ್ಲಾ...’ ಎಂದು ಹೇಳಿದವನು ಯಾವುದೋ ಅನುಮಾನದಿಂದ ತಡೆದು ಮತ್ತೆ ಮುಂದುವರಿಸಿದ ‘ಸಿಟೀಲಿ ಹೊಸ ಫಿಲ್ಮ್ ಬಂದಿದೆ..ನೋಡಿದ್ರಾ?’
‘ಯಾವ ಫಿಲ್ಮ್ ಸಾರ್?’ ನನ್ನ ಪ್ರಶ್ನೆಗೆ ಒಮ್ಮೆಲೆ ಜೀವ ಪಡೆದ ಅವನು ‘ನಾನಾ ಪಾಟೇಕರಿದ್ದು. ನಿಮ್ಗೆತ್ತಾ? ಈಗವನು ಮತ್ತೆ ರಂಗಭೂಮಿಯತ್ತ ತಿರುಗಿದ್ದಾನಂತೆ. ಏನೇ ಆಗ್ಲಿ ಅವನಿಗೆ ಒಳ್ಳೆ ಡೈರೆಕ್ಟರ್ ಸಿಗ್ಲಿಲ್ಲ ನೋಡಿ’ ಕೊರಗು ತೋಡಿಕೊಂಡ.
ಮಾತನಾಡುತ್ತಿದ್ದವನು ಒಮ್ಮೆಲೆ ನನ್ನ ಆಕಾಶ ನೀಲಿ ಬಣ್ಣದ ಶರ್ಟನ್ನು ನೋಡುತ್ತಾ ‘ಅಂಗಿ ಚೆನ್ನಾಗಿದೆ. ಬಟ್ಟೆ ಎಲ್ಲಿ ಕೊಂಡ್ಕೊಂಡ್ರಿ’ ಎನ್ನುತ್ತಾ ಬಾಗಿ ಬಟ್ಟೆಯ ಗುಣಮಟ್ಟವನ್ನು ಕೈಯಲ್ಲಿ ಉಜ್ಜಿ ನೋಡತೊಡಗಿದ. ಆಮೇಲೆ ಮಾತಿನಲ್ಲೇ ಆಸೆಯನ್ನು ತುಂಬಿಕೊಂಡು ‘ಇನ್ನೊಮ್ಮೆ ಈ ಕಡೆ ಬಂದಾಗ ನನಗೊಂದು ಜೊತೆ ಬಟ್ಟೆ ತನ್ನಿ ಆಗದ?’ ಎಂದ. ತಲೆಯಾಡಿಸಿದೆ. ಕುರ್ಚಿಗೆ ಒರಗಿದಾತ ಮತ್ತೇನನ್ನೋ ಯೋಚಿಸತೊಡಗಿದ.
ನನಗೆ ಅಳು ಬಂದಂತಾಯಿತು. ನಾನು ಹೊತ್ತು ತಂದಿದ್ದ ಮಾತಿನ ಸರಕುಗಳು ಗಿರಾಕಿಗಳಿಲ್ಲದೆ ಒಣಗತೊಡಗಿದವು. ಆದರೂ ಮೆಲ್ಲಗೆ ಚೌಕಾಶಿಗಿಳಿದೆ. ‘ನಿಮ್ಮ ಮೆಚ್ಚಿನ ಲೇಖಕ ಯಾರು ಸಾರ್?’ಬಂದ ಪ್ರಶ್ನೆಗೆ ಒಮ್ಮೆಲೆ ದಡಬಡಾಯಿಸಿ ನನ್ನನ್ನೇ ನೋಡತೊಡಗಿದ.
‘ನಿಮ್ಮ ಮೇಲೆ ಪ್ರಭಾವ ಬೀರಿದ ಲೇಖಕ ಯಾರು ಸಾರ್?’ ಮತ್ತೆ ಕೇಳಿದೆ. ಅವನು ತಡವರಿಸತೊಡಗಿದ.
‘ಹೋಗ್ಲಿ ಸಾರ್, ನಿಮ್ಮ ಲೈಬ್ರರಿ ತೋರಿಸ್ತೀರಾ’ ಎಂದೆ. ಅವನು ಯಾಕೋ ತಲ್ಲಣಿಸಿದವನಂತೆ ಕಂಡ. ಏನೂ ಹೇಳದ ವೌನದ ಬಳಿಕ ‘ಬನ್ನಿ, ಲೈಬ್ರರಿ ತೋರಿಸ್ತೀನಿ’ ಎನ್ನುತ್ತಾ ಒಳ ನಡೆದ. ನಾನು ಅವನ ಹಿಂದೆ.
ಎರಡನೆ ಕೋಣೆಯಲ್ಲಿ ಮುರುಕು ಸ್ಟೌವ್, ಮಸಿ ಹಿಡಿದ ಪಾತ್ರೆ ಪಗಡಿಗಳು, ಯಾರೋ ಉಂಡು ಬಿಟ್ಟ ತಟ್ಟೆ ಎಲ್ಲಾ ಸ್ವತಂತ್ರವಾಗಿ ಬಿದ್ದುಕೊಂಡಿದ್ದವು. ಬಹುಶಃ ಅಡುಗೆ ಕೋಣೆಯಿರಬೇಕು.
ನೋಡು ನೋಡುತ್ತಿದ್ದಂತೆಯೇ ಒಳಕೋಣೆಯೊಳಗೆ ಬಂದೆವು. ಅದೊಂದು ಕೂರುವುದಕ್ಕೆ ಕುರ್ಚಿಯೇ ಇಲ್ಲದ ಖಾಲಿ ಕೋಣೆ.. ಥೇಟ್ ಬಿಳಿ ಹಾಳೆಯಂತೆ. ಒಂದು ಭಾಗದಲ್ಲಿ ಗೋಡೆಯಲ್ಲಿ ಅಂಟಿಕೊಂಡಿರುವ ಕಪಾಟು. ಆ ಗೋಡೆ ಕಪಾಟಿಗೆ ಬೀಗ ಜಡಿಯಲಾಗಿತ್ತು. ಕುತೂಹಲದಿಂದ ಅದನ್ನೇ ದಿಟ್ಟಿಸತೊಡಗಿದೆ.
‘ಇದೇ ನನ್ನ ಲೈಬ್ರರಿ’ ಗೋಡೆ ಕಪಾಟಿನತ್ತ ಕೈ ತೋರಿಸಿ ಕಥೆಗಾರ ಹೇಳಿದ. ಬಳಿಕ ತನ್ನ ಪ್ಯಾಂಟಿನ ಕಿಸೆಯಿಂದ ತಡಕಾಡಿ ಸಣ್ಣ ಕೀಲಿ ಕೈಯೊಂದನ್ನು ಹೊರತೆಗೆದು ನನ್ನ ಕೈಯೊಳಗಿಟ್ಟ. ‘ನಿಧಾನಕ್ಕೆ ನೋಡಿ ಬಳಿಕ ಬನ್ನಿ’ ಎಂದವನೇ ಹೊರ ನಡೆದ.
ಸಣ್ಣ ಕೀಲಿ ಕೈಯೊಂದು ಮಾಂತ್ರಿಕನೊಬ್ಬನ ಮಂತ್ರದಂಡದಂತೆ ನನ್ನ ಕೈಯಲ್ಲಿತ್ತು. ಅದರ ಆಕರ್ಷಣೆಗೆ ನನ್ನ ಕೈ ಕಂಪಿಸುತ್ತಿತ್ತು. ಮೆಲ್ಲಗೆ ಗೋಡೆ ಕಪಾಟಿನ ಬಾಗಿಲು ತೆರೆದೆ.
ನೋಡಿದರೆ ಕಕ್ಕಾಬಿಕ್ಕಿ
ಅದೊಂದು ಕಿಟಕಿಯಾಗಿತ್ತು. ಹೊರಗಡೆ ಬೆಟ್ಟ, ಗುಡ್ಡ, ಆಕಾಶ, ಮರ ಗಿಡ, ಹಕ್ಕಿ ಕೂಡ ಇತ್ತು!