Sunday, February 26, 2012

ಕಳೆದು ಹೋದ ಬಾಲ್ಯ....

ಕಟ್ಟಕಡೆಗೆ ನ್ಯಾಯಾಲಯ ಹೇಳಿತು
‘‘ಅಗೆಯಿರಿ’’

ದೇವಾಲಯವೊಂದನ್ನು ಹುಡುಕುತ್ತಾ
ಮಸೀದಿಯ ಅಗೆದರು
ಮಸೀದಿಯ ಹುಡುಕುತ್ತಾ
ದೇವಾಲಯವ ಬಗೆದರು

ಅಗೆದಂತೆ ಅವರಿಗೆ
ಓಣಿಯೊಂದು ತೆರೆಯಿತು

ಇಬ್ಬದಿಯಲ್ಲೂ ಸುಟ್ಟು ಹೋದ ಕಾಡು
ನಡೆದಂತೆ ಮುಂದೆ...
ಮುರಿದು ಬಿದ್ದ ಒಂದು ನಾಡು!
ಆ ಪಾಳು ನಗರದಲ್ಲಿ
ಅಶಾಂತ ಆತ್ಮಗಳ ಊಳು
ಅರೆ! ಭೂತವನ್ನು ಅಗೆಯುತ್ತಾ
ಭವಿಷ್ಯವನ್ನು ತಲುಪುತ್ತಿದ್ದೇವೆಯೋ
ಯಾರೋ ಅನುಮಾನಪಟ್ಟರು!

ಅಗೆಯುತ್ತಾ ಹೋದವರು
ಥಟ್ಟನೆ ನಿಂತರು
ಒಂದಾಗಿ ಚೀರಿದರು
‘‘ಕೊನೆಗೂ ಸಿಕ್ಕಿತು’’
ಸಿಕ್ಕಿದ್ದಾದರೂ ಏನು?
ಶಂಖಾಕಾರವಾಗಿದೆ ಎಂದರು
ಅರ್ಧಚಂದ್ರನನ್ನು ಹೋಲುತ್ತಿದೆ ಎಂದರು
 ಉಜ್ಜಿದಂತೆ ಹೊಳೆಯತೊಡಗಿತು
ಅದರ ಬೆಳಕಿಗೆ ಕಣ್ಣು ಕುರುಡಾಯಿತು
ಮೂಸಿ ನೋಡಿದರು
ಮೊದಲ ಮಳೆ ಬಿದ್ದ
ಮಣ್ಣಿನ ಪರಿಮಳದ ಕಂಪು...
ಕವಿಯೊಬ್ಬ ಸ್ಪರ್ಶ ಮಾತ್ರದಿಂದ ಹೇಳಿದ
‘‘ಇದು ಕಳೆದು ಹೋದ ನಮ್ಮ ಬಾಲ್ಯ’’
(2002)

1 comment:

  1. ಮೊದಲ ಮಳೆ ಬಿದ್ದ
    ಮಣ್ಣಿನ ಪರಿಮಳದ ಕಂಪು...
    ಕವಿಯೊಬ್ಬ ಸ್ಪರ್ಶ ಮಾತ್ರದಿಂದ ಹೇಳಿದ
    ‘‘ಇದು ಕಳೆದು ಹೋದ ನಮ್ಮ ಬಾಲ್ಯ’’
    ಬಷೀರ್ ಅವರೇ ಹೃದಯ ಸ್ಪರ್ಷಿಯಾಗಿದೆ ನಿಮ್ಮ ಕವನ

    ReplyDelete