Saturday, December 20, 2014

ಪೀಕೆ: ಲವಲವಿಕೆಯ ನಿರೂಪಣೆ, ದಟ್ಟ ಅನುಭವ

 ಮುನ್ನಾ ಭಾಯಿ ಎಂಬಿಬಿಎಸ್, ಲಗೇರಹೋ ಮುನ್ನಾ ಭಾಯಿ, ತ್ರೀ ಈಡಿಯಟ್ಸ್ ಬಾಲಿವುಡ್‌ನಲ್ಲಿ ವಿಭಿನ್ನವಾದ ಸಂದೇಶ ಮತ್ತು ಸಂತೋಷವನ್ನು ಹರಡಿದ ಮೂರು ಚಿತ್ರಗಳು. ಈ ಮೂರೂ ಚಿತ್ರಗಳ ನಿರ್ದೇಶಕರು ರಾಜ್‌ಕುಮಾರ್ ಹಿರಾನಿ. ಮುನ್ನಾಭಾಯಿ ಎಂಬಿಬಿಎಸ್ ವೈದ್ಯಕೀಯ ಶಿಕ್ಷಣದ ವಿಪರ್ಯಾಸಗಳನ್ನು ತೆರೆದಿಟ್ಟರೆ, ಲಗೇರಹೋ ಮುನ್ನಾಭಾಯಿ ಗಾಂಧಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಹೊಸತೊಂದು ಪರಿಭಾಷೆಯನ್ನು ಬಳಸಿಕೊಂಡ ಚಿತ್ರ. ತ್ರೀ ಇಡಿಯಟ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಂಕಟಗಳನ್ನು ತಮಾಷೆಯಾಗಿ ನಿರೂಪಿಸುತ್ತಲೇ, ಶಿಕ್ಷಣಕ್ಕೆ ಹೊಸತೊಂದು ವ್ಯಾಖ್ಯಾನಕೊಟ್ಟ ಚಿತ್ರ. ಅತ್ಯಂತ ಗಂಭೀರ ವಿಷಯಗಳನ್ನು ಹಾಸ್ಯ ನಿರೂಪಣೆಯ ಮೂಲಕ ಕಟ್ಟಿಕೊಟ್ಟ ಚಾಣಾಕ್ಷ ನಿರ್ದೇಶಕ ರಾಜ್‌ಕುಮಾರ್ ಹಿರಾನಿ. ಈ ಕಾರಣದಿಂದಲೇ ಅವರ ಪೀಕೆ ಚಿತ್ರದ ಕುರಿತಂತೆ ಪ್ರೇಕ್ಷಕರು ಭಾರೀ ನಿರೀಕ್ಷೆಗಳು ಇಟ್ಟು ಕಾಯುತ್ತಿದ್ದರು. ಮತ್ತು ಆ ನಿರೀಕ್ಷೆಗಳು ಹಿರಾನಿ ಹುಸಿ ಮಾಡಿಲ್ಲ. ‘ಪೀಕೆ’ ಅವರು ನಿರ್ದೇಶಿಸಿದ ಇತರ ಚಿತ್ರಗಳ ಸಾಲಿನಲ್ಲಿ ಯಾವ ಕೀಳರಿಮೆಯೂ ಇಲ್ಲದೆ ನಿಲ್ಲಬಲ್ಲ ಇನ್ನೊಂದು ಅಪರೂಪದ ಚಿತ್ರ.

ಪೀಕೆ ಚಿತ್ರದ ಕತೆ ಒಂದು ಸಾಲಿನಲ್ಲಿ ಹೇಳಿ ಮುಗಿಸಬಹುದಾದಷ್ಟು ತೆಳುವಾದದ್ದು. ಆದರೆ ಅದು ಹೊರಡಿಸುವ ಧ್ವನಿ ಮಾತ್ರ ನಮ್ಮಳಗೆ ಶಾಶ್ವತ ಅನುರಣಿಸುತ್ತಲೇ ಇರುವಂತಹದ್ದು. ತಮ್ಮ ಎಂದಿನ ಹಾಸ್ಯ ಮತ್ತು ನವಿರು ನಿರೂಪಣೆಯ ಮೂಲಕ ದೇವರು, ಧರ್ಮಗಳಂತಹ ಸೂಕ್ಷ್ಮ, ಗಂಭೀರ ವಿಷಯಗಳ ಬಗ್ಗೆ ಮಾತನಾಡಿದ್ದಾರೆ ಹಿರಾನಿ. ಈ ಜಗತ್ತಿನ ಧರ್ಮ ಪುರೋಹಿತರು, ಬಾಬಾಗಳು ದೇವರ ಜೊತೆ ಮಾತನಾಡುತ್ತಿದ್ದೇವೆ ಎಂದು ಭ್ರಮಿಸುತ್ತಾ ‘ರಾಂಗ್‌ನಂಬರ್’ ಜೊತೆಗೆ ಮಾತನಾಡುತ್ತಿದ್ದಾರೆ. ಆದುದರಿಂದಲೇ ಅದರ ಕೆಟ್ಟ ಫಲಿತಾಂಶವನ್ನು ಜನರು ಅನುಭವಿಸುತ್ತಿದ್ದಾರೆ ಎನ್ನುವುದನ್ನು ಒಬ್ಬ ಮಗುಮನಸ್ಸಿನ ಮುಗ್ಧ ಕಥಾನಾಯಕನ ಮೂಲಕ ನಿರೂಪಿಸುತ್ತಾರೆ ನಿರ್ದೇಶಕರು.

 ಈ ಭೂಮಿಗೆ ಅನ್ಯಗ್ರಹದ ಜೀವಿಯೊಂದು ಕಾಲಿಡುತ್ತದೆ. ಒಂದು ಪುಟ್ಟ ಮಗು ಈಗಷ್ಟೇ ತಾಯ ಗರ್ಭದಿಂದ ಹೊರಬಂದು ಈ ಭೂಮಿಯನ್ನು ಅಚ್ಚರಿ, ಚೋದ್ಯದ ಕಣ್ಣುಗಳಿಂದ ನೋಡುವಂತೆ ಆ ಜೀವಿ ಈ ಭೂಮಿಯ ಜನಜೀವನವನ್ನು ನೋಡುತ್ತದೆ. ಮತ್ತು ಅವುಗಳನ್ನು ಅಷ್ಟೇ ಮುಗ್ಧವಾಗಿ ಪ್ರಶ್ನಿಸ ತೊಡಗುತ್ತದೆ. ಇಲ್ಲಿರುವ ವಿಪರ್ಯಾಸಗಳು, ವಿರೋಧಾಭಾಸಗಳು ಅದಕ್ಕೆ ತೀರಾ ತೀರಾ ಗೊಂದಲವನ್ನುಂಟು ಮಾಡುತ್ತದೆ. ಬೆತ್ತಲೆಯಾಗಿ ಕಾಲಿಟ್ಟ ಆ ಜೀವಿ ನಿಧಾನಕ್ಕೆ ಭೂಮಿಯೊಳಗಿರುವ ಮನುಷ್ಯನನ್ನು, ಮುಖ್ಯವಾಗಿ ಅವನು ನಂಬುವ ದೇವರು ಮತ್ತು ಧರ್ಮಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದೇ ಚಿತ್ರದ ಮುಖ್ಯ ಕತೆ. ಅನ್ಯಗ್ರಹದ ಆ ಜೀವಿಯಾಗಿ ಆಮೀರ್ ಖಾನ್ ಅವರ ನಟನೆ  ನಮ್ಮನ್ನು ಆವರಿಸಿಕೊಳ್ಳುತ್ತದೆ.
  
  ಅನ್ಯಗ್ರಹದ ಜೀವಿ ಭೂಮಿಗೆ ಕಾಲಿಟ್ಟಾಕ್ಷಣ ಅವನಿಗೆ ಎದುರಾಗುವ ಮೊತ್ತ ಮೊದಲ ಮನುಷ್ಯ, ಆ ಬೆತ್ತಲೆ ಜೀವಿಯ ಕುತ್ತಿಗೆಯಲ್ಲಿದ್ದ ಏಕೈಕ ಹೊಳೆಯುವ ರಿಮೋಟ್ ಕಂಟ್ರೋಲನ್ನು ಕದ್ದು ಓಡುತ್ತಾನೆ. ಅಲ್ಲಿಂದ ಅನ್ಯ ಜೀವಿಯ ತಾಪತ್ರಯಗಳು ಆರಂಭವಾಗುತ್ತವೆ. ಆತನಿಗೆ ಮರಳಿ ತನ್ನ ಮನೆಗೆ ಹೋಗಬೇಕು. ಹೋಗಬೇಕಾದರೆ ತನ್ನ ಕುತ್ತಿಗೆಯಲ್ಲಿದ್ದ ರಿಮೋಟ್ ಕಂಟ್ರೋಲ್ ಯಂತ್ರ ಸಿಗಬೇಕು. ಅದರ ಹುಡುಕಾಟ ನಿಧಾನಕ್ಕೆ ದೇವರ ಹುಡುಕಾಟವಾಗಿ ಪರಿವರ್ತನೆಯಾಗುವದೇ ಚಿತ್ರಕತೆಯ ಹೆಗ್ಗಳಿಕೆ. ರಿಮೋಟ್ ಕಂಟ್ರೋಲ್ ಹುಡುಕಿ, ಮರಳಿ ತನ್ನೂರಿಗೆ ಹೋಗುವ ಅವನ ಅನ್ವೇಷಣೆ ಕಟ್ಟ ಕಡೆಗೆ, ಕಪಟ ಬಾಬಾನ ಬಳಿಗೆ ಅವನನ್ನು ತಲುಪಿಸುತ್ತದೆ. ದೇವರು ಧರ್ಮದ, ನೈಜ ಮುಖಾಮುಖಿಗೆ ಇದು ಕಾರಣವಾಗುತ್ತದೆ. ಅಷ್ಟೇ ಅಲ್ಲ, ಮನುಷ್ಯ ಮನುಷ್ಯನ ನಡುವಿನ ಸಂಬಂಧ, ಪಾಕಿಸ್ತಾನ-ಭಾರತದ ನಡುವಿನ ತಿಕ್ಕಾಟ ಇವೆಲ್ಲವೂ ಅತ್ಯಂತ ಸಹಜವಾಗಿ ಆತನ ಹುಡುಕಾಟದ ಭಾಗವಾಗಿ ಸೇರಿಕೊಳ್ಳುತ್ತದೆ.


ಈ ಅನ್ಯ ಜೀವಿಯನ್ನು ಗುರುತಿಸಿ ಅವನ ಹುಡುಕಾಟಕ್ಕೆ ಜೊತೆ ನೀಡುವ ಪಾತ್ರದಲ್ಲಿ ಜಗಜ್ಜನನಿ ಯಾನೆ ಜಗ್ಗು (ಅನುಷ್ಕಾ ಶರ್ಮಾ) ಅವರು ತುಂಬಾ ಲವಲವಿಕೆಯಿಂದ ನಟಿಸಿದ್ದಾರೆ.  ಆಕೆಯ ಪಾಕಿಸ್ತಾನಿ ಪ್ರಿಯಕರನಾಗಿ ಸರ್ಫುರಾಜ್ ಪಾತ್ರದಲ್ಲಿ ಸುಶಾಂತ್ ರಾಜಪೂತ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸಣ್ಣ ಪಾತ್ರವಾದರೂ, ಚಿತ್ರಕ್ಕೆ ಮುಖ್ಯ ತಿರುವು ಕೊಡುವ ಪಾತ್ರವೂ ಇದಾಗಿರುವುದರಿಂದ ನಮ್ಮನ್ನು ತಟ್ಟುತ್ತದೆ. ಸಂಜಯ್ ದತ್, ಬೊಮನ್ ಇರಾನಿ ಇವರದು ಪೋಷಕ ಪಾತ್ರಗಳು. ಆಯಾ ಸನ್ನಿವೇಶಕ್ಕೆ ನ್ಯಾಯಕೊಡುವ ಪಾತ್ರಗಳು. ತಪಸ್ವಿ ಮಹಾರಾಜ್ ಪಾತ್ರದಲ್ಲಿ ಸೌರಭ್ ಶುಕ್ಲಾ ಅಭಿನಯ ಯಾವ ನಕಲಿ ಬಾಬಾಗಳ ನಟನೆಗಳಿಗಿಂತ ಕಮ್ಮಿಯಿಲ್ಲ. ಎಳೆದುಕಟ್ಟಿದ ವೀಣೆಯ ತಂತಿಯಂತೆ ಒಂದೇ ಸಾಲಿನ ಚಿತ್ರಕತೆ ಇದಾಗಿರುವುದರಿಂದ, ಆರಂಭದಿಂದ ಕೊನೆಯವರೆಗೆ ನಿಮ್ಮನ್ನು ಅಲುಗಾಡದಂತೆ ಹಿಡಿದು ನಿಲ್ಲಿಸುತ್ತದೆ. ಚಿತ್ರ ಮುಂದುವರಿದಂತೆಯೇ ಕೊಡುವ ದರ್ಶನದ ವ್ಯಾಪ್ತಿ ಹಿಗ್ಗುತ್ತಾ ಹೋಗುತ್ತದೆ. ಜೊತೆಗೆ ನಿಮ್ಮ ಸಂತೋಷವೂ ಕೂಡ. ಅಜಯ್ ಅತುಲ್, ಶಂತನು ಮೊಯಿತ್ರ, ಅಂಕಿತ್ ತಿವಾರಿ ಸಂಗೀತ ಚಿತ್ರದ ಲವಲವಿಕೆಗೆ ಇನ್ನಷ್ಟು ಜೀವತುಂಬುತ್ತದೆ. ಚಿತ್ರದ ಧ್ವನಿಯನ್ನು, ಆರ್ದ್ರತೆಯನ್ನು ಸಂಗೀತ ನಮಗೆ ಮೊಗೆದುಕೊಡುತ್ತದೆ. ಸಿ. ಕೆ. ಮುರಳೀಧರನ್ ಅವರ ಛಾಯಾಗ್ರಹಣ ನಿಮ್ಮ ಕಣ್ಣುಗಳನ್ನು ತಂಪಾಗಿಸುತ್ತದೆ.


ಚಿತ್ರ ಮುಗಿದಾಗ ನಿಮಗೆ ‘ಓ ಮೈ ಗಾಡ್’ ಸಿನಿಮಾ ನೆನಪಾಗಿದ್ದರೆ ಅದು ಆಕಸ್ಮಿಕ ಅಲ್ಲ. ಆದರೆ ‘ಓ ಮೈ ಗಾಡ್’ ಚಿತ್ರದಷ್ಟು ಆಳವಾಗಿ ಧರ್ಮ, ದೇವರುಗಳನ್ನು ‘ಪೀಕೆ’ ಚರ್ಚಿಸುವುದಿಲ್ಲ. ಇಲ್ಲಿ ದೇವರ ಕುರಿತಂತೆ ವೈಚಾರಿಕ ಪ್ರಶ್ನೆಗಳಿಲ್ಲ. ಬದಲಿಗೆ ಒಂದು ಮಗು ಕೇಳುವ ಮುಗ್ಧ ಮತ್ತು ಸತ್ಯಕ್ಕೆ ಹೆಚ್ಚು ಹತ್ತಿರವಾದ ಪ್ರಶ್ನೆಗಳಿವೆ. ತೀರಾ ಸರಳವಾದ, ಲವಲವಿಕೆಯ ನಿರೂಪಣೆಯ ಮೂಲಕ ದೇವರನ್ನು ಒಂದು ಅನುಭವವಾಗಿ ಪೀಕೆ ನಿಮ್ಮೊಳಗೆ ತಲುಪಿಸುತ್ತಾನೆ. ಚಿತ್ರಮಂದಿರದಿಂದ ಹೊರಬಂದಾಗ ಕತೆ ನಿಮ್ಮೊಳಗೆ ಉಳಿಯದೇ ಇರಬಹುದು. ಆದರೆ ಆ ಚಿತ್ರ ನಿಮಗೆ ನೀಡುವ ದರ್ಶನ ನಿಮ್ಮನ್ನು ನಿಮ್ಮ ಮನೆಯ ತನಕ ತಲುಪಿಸುವುದು ಖಂಡಿತ.

Monday, December 15, 2014

ಲಿಂಗಾ: ರಜನಿಯಿಂದ ರಜನಿಗಾಗಿ...

ರಜನಿಕಾಂತ್ ಚಿತ್ರವೆಂದರೆ ಅದರ ದೌರ್ಬಲ್ಯವೂ, ಶಕ್ತಿಯೂ ರಜನೀಕಾಂತ್ ಅವರೇ ಆಗಿರುವುದು. ಅನೇಕ ಸಂದರ್ಭದಲ್ಲಿ ಒಳ್ಳೆಯ ಕತೆಗಳು ರಜನಿಯನ್ನು ಎತ್ತಿ ನಿಲ್ಲಿಸಿವೆ. ಅರುಣಾಚಲಂ, ಪಡೆಯಪ್ಪ, ಎಂದಿರನ್ ಇವೆಲ್ಲ ಚಿತ್ರಗಳು ಕೇವಲ ರಜನಿಯಿಂದಾಗಿಯೇ ಗೆದ್ದಿರುವುದಲ್ಲ. ಉತ್ತಮ ಕತೆ, ನಿರ್ದೇಶನವೇ ಆ ಚಿತ್ರವನ್ನು ಗೆಲ್ಲಿಸಿದೆ. ತನ್ನನ್ನು ತಾನೇ ವೈಭವೀಕರಿಸಲು ಹೋದಾಗೆಲ್ಲ ರಜನಿಕಾಂತ್ ತಳತಪ್ಪಿ ಬಿದ್ದಿದ್ದಾರೆ. ಅವರ ಅತಿ ನಿರೀಕ್ಷೆಯ ಚಿತ್ರಗಳಾಗಿರುವ ಬಾಬಾ, ಕೋಚಾಡಯ್ಯನ್ ಮೊದಲಾದವುಗಳಿಗೆ ಒದಗಿದ ಗತಿಯೇ ಇದನ್ನು ಪುಷ್ಟೀಕರಿಸುತ್ತದೆ. ಕೋಚಾಡಯ್ಯನ್ ಸೋಲಿನ ಬಳಿಕ ರಜನೀಕಾಂತ್ ತುಸು ಮಂಕಾಗಿದ್ದರು. ಇಂತಹ ಸಂದರ್ಭದಲ್ಲಿ ಅವರ ವರ್ಚಸ್ಸನ್ನು ಮರಳಿ ಗಳಿಸಿಕೊಡುವ ತರಾತುರಿಯಲ್ಲಿ ‘ಲಿಂಗಾ’ ಚಿತ್ರವನ್ನು ಬಿಡುಗಡೆಗೊಳಿಸಲಾಗಿದೆ.

 ಹಾಗೆ ನೋಡಿದರೆ ‘ಲಿಂಗ’ ಚಿತ್ರದ ಕತೆ ಹದಯಸ್ಪರ್ಶಿಯಾದುದು. ಹಿಂದಿಗೂ, ಇಂದಿಗೂ, ಮುಂದಿಗೂ ಸಲ್ಲುವಂತಹ ಒಂದು ವಸ್ತುವನ್ನು ಇಟ್ಟುಕೊಂಡು ಚಿತ್ರವನ್ನು ಮಾಡಲಾಗಿದೆ. ರಾಜವಂಶಸ್ಥನೂ ಆಗಿರುವ ಒಬ್ಬ ಜಿಲ್ಲಾಧಿಕಾರಿ ಜನರಿಗಾಗಿ ಅಣೆಕಟ್ಟು ಕಟ್ಟಲು ಹೊರಡುವ, ಅದಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡುವ ಕತೆಯೇ ಲಿಂಗ. ಆದರೆ ಚಿತ್ರದುದ್ದಕ್ಕೂ ಎರಡೆರಡು ರಜನಿಕಾಂತ್‌ರನ್ನು ಪ್ರೇಕ್ಷಕರಿಗೆ ಬಲವಂತವಾಗಿ ಬಡಿಸುವ ಅನಿವಾರ್ಯತೆಗೆ ನಿರ್ದೇಶಕ ಸಿಕ್ಕಿಕೊಂಡಿರೋದರಿಂದ ಕತೆ ಬದಿಗೆ ತಳ್ಳಲ್ಪಡುತ್ತದೆ. ‘ಮುತ್ತು’ ಚಿತ್ರದಲ್ಲಿ ಎಲ್ಲವನ್ನೂ ತನ್ನ ಜನರಿಗಾಗಿ ತ್ಯಾಗ ಮಾಡುವ ಜಮೀನ್ದಾರನಂತೆಯೇ ಇಲ್ಲಿ ರಾಜವಂಶಸ್ಥ ಜಿಲ್ಲಾಧಿಕಾರಿಯನ್ನು ಚಿತ್ರೀಕರಿಸಲಾಗಿದೆ. ಜನಸಾಮಾನ್ಯರ ಬದುಕನ್ನು ಕೇಂದ್ರವಾಗಿಟ್ಟುಕೊಳ್ಳದೇ, ರಜನೀ ಎನ್ನುವ ಸೂಪರ್‌ಸ್ಟಾರ್‌ನ್ನು ಮುಂದಿಟ್ಟುಕೊಂಡು ಚಿತ್ರ ಕತೆಯನ್ನು ನಿರೂಪಿಸಿರುವುದರಿಂದ, ಅಣೆಕಟ್ಟಿನ ಕತೆ ಮೇಲಿಂದ ಮೇಲೆ ತೇಲಿ ಹೋದಂತೆ ಅನಿಸುತ್ತದೆ. ಆದರೆ ಇಡೀ ಚಿತ್ರದಲ್ಲಿ ರಜನೀಕಾಂತ್ ತನ್ನ ಯೌವನವನ್ನು ಇನ್ನೂ ಉಳಿಸಿಕೊಂಡು ಕುಣಿಯುವುದು, ಫೈಟ್ ಮಾಡುವುದು ಅವರ ಸೂಪರ್ ಸ್ಟಾರ್ ಗರಿಮೆಗೆ ಇನ್ನೊಂದು ಸ್ಟಾರ್‌ನ್ನು ಸೇರಿಸುತ್ತದೆ. ಇವೆಲ್ಲವುಗಳಿಗೆ ಪೂರಕವಾಗಿ ರಜನೀ ಹುಟ್ಟುಹಬ್ಬದ ದಿನವೇ ಚಿತ್ರ ಬಿಡುಗಡೆಯಾಗಿದೆ. ರಜನೀ ಅಭಿಮಾನಿಗಳಿಗೆ ಈ ಚಿತ್ರದಲ್ಲಿ ಯಥೇಚ್ಛ ಉಡುಗೊರೆಗಳಿವೆ. ಆದರೆ ಒಂದು ಚಿತ್ರವಾಗಿ ಲಿಂಗ ಕಾಡುವುದು ಕೇವಲ 45 ನಿಮಿಷಗಳು ಮಾತ್ರ.


 ಅಣೆಕಟ್ಟೊಂದರ ಪರಿಶೀಲನೆ ನಡೆಸುತ್ತಿರುವ ಸರಕಾರಿ ಅಧಿಕಾರಿಯೊಬ್ಬನ ಕೊಲೆಯೊಂದಿಗೆ ಲಿಂಗಾ ಚಿತ್ರದ ಕತೆ ಅನಾವರಣಗೊಳ್ಳುತ್ತದೆ. ಅಣೆಕಟ್ಟಿನ ಪಕ್ಕದಲ್ಲಿದ್ದ ದೇವಸ್ಥಾನವನ್ನು ತೆರೆಯಬೇಕೆನ್ನುವ ಅನಿವಾರ್ಯತೆ ಊರಿಗೆ ಒದಗಿ ಬರುತ್ತದೆ. ಅದನ್ನು ತೆರೆಯಬೇಕಾದರೆ, ಅದನ್ನು ಸ್ಥಾಪಿಸಿದ ಅಂದಿನ ರಾಜ ಲಿಂಗೇಶ್ವರ ವಂಶಸ್ಥರು ಬೇಕು. ಆದರೆ ಆತ ಎಲ್ಲಿದ್ದಾನೆ? ಆತ ಸಣ್ಣ ಪುಟ್ಟ ಕಳ್ಳತನ ಮಾಡುತ್ತಾ ಜೈಲಿನಲ್ಲಿ ಕನಸಿನ ಲೋಕದಲ್ಲಿ ಬದುಕುತ್ತಿದ್ದಾನೆ. ಕಳ್ಳನಾದ ಲಿಂಗಾ, ಕಳ್ಳತನದ ಪ್ರಕರಣವೊಂದಕ್ಕೆ ಸಂಬಂಧಿಸಿ ತನ್ನ ಹಿಂಬಾಲಕ (ಸಂತಾನಂ, ಕರುಣಾಕರನ್)ರೊಂದಿಗೆ ಜೈಲು ಸೇರಿರುತ್ತಾನೆ. ಇವರೆಲ್ಲರಿಗೂ ಟಿವಿ ವರದಿಗಾರ್ತಿ ಲಕ್ಷ್ಮಿ (ಅನುಷ್ಕಾ ಶೆಟ್ಟಿ) ಜಾಮೀನು ನೀಡಿ, ಜೈಲಿನಿಂದ ಹೊರತರುತ್ತಾಳೆ. ಲಿಂಗಾ, ಆತನ ಹುಟ್ಟೂರಾದ ಸೊಲೈಯೂರ್‌ಗೆ ಹಿಂತಿರುಗಿ, ಆತನ ತಾತಾ ರಾಜಾಲಿಂಗೇಶ್ವರನ್ (ರಜನಿಕಾಂತ್ ದ್ವಿಪಾತ್ರ) ನಿರ್ಮಿಸಿದ್ದ ಶಿವ ದೇವಾಲಯವನ್ನು ಮರಳಿ ತೆರೆಯಬೇಕೆಂಬುದೇ ಆಕೆಯ ಉದ್ದೇಶವಾಗಿರುತ್ತದೆ. ಆದರೆ ಲಿಂಗಾ ಅದಕ್ಕೆ ನಿರಾಕರಿಸುತ್ತಾನೆ. ಯಾಕೆಂದರೆ ಆತನಿಗೆ ತನ್ನ ತಾತನ ಬಗ್ಗೆ ತೀವ್ರ ದ್ವೇಷವಿರುತ್ತದೆ. ತನ್ನ ಸಂಪತ್ತೆಲ್ಲವನ್ನೂ ಜನರಿಗೆ ದಾನಮಾಡುವ ಮೂಲಕ ರಾಜಾಲಿಂಗೇಶ್ವರ, ಮೊಮ್ಮಗನಾದ ತನಗೆ ಚಿಕ್ಕಾಸು ಹಣವನ್ನು ಉಳಿಸಿಲ್ಲವೆಂಬುದೇ ಆತನ ಅಸಮಾಧಾನಕ್ಕೆ ಕಾರಣ. ಆದರೆ ಕೆಲವು ಸನ್ನಿವೇಶಗಳಿಂದಾಗಿ ಆತ ಸೊಲೈಯೂರಿಗೆ ತೆರಳಬೇಕಾಗುತ್ತದೆ. ಅಲ್ಲಿ ಆತನಿಗೆ ತನ್ನ ತಾತನ ಮಹಾತ್ಯಾಗದ ಅರಿವಾಗುತ್ತದೆ.   ಅಲ್ಲಿಂದ ತೆರೆಯ ಮೇಲೆ ಫ್ಲಾಶ್‌ಬ್ಯಾಕ್‌ನಲ್ಲಿ ರಾಜಾಲಿಂಗೇಶ್ವರನ್‌ನ ಕತೆ ಅನಾವರಣಗೊಳ್ಳುತ್ತದೆ.

ಕಥಾನಾಯಕ ‘ರಾಜಾ ಲಿಂಗೇಶ್ವರನ್’ ಇಡೀ ದಕ್ಷಿಣ ಭಾರತವನ್ನು ಆಳಿದ ಪ್ರತಿಷ್ಠಿತ ರಾಜವಂಶದ ಕುಡಿ. ರಾಜಮನೆತನಕ್ಕೆ ಸೇರಿದ್ದರೂ ರಾಜಾ ಲಿಂಗೇಶ್ವರನ್, ಅಪ್ಪನ ಇಚ್ಛೆಯಂತೆ ಸಿವಿಲ್ ಇಂಜಿನಿಯರ್ ಪದವಿ ಪಡೆದು ಮಧುರೈಗೆ ಕಲೆಕ್ಟರ್ ಆಗಿ ಎಂಟ್ರಿಕೊಡುತ್ತಾನೆ. ಆದರೆ ಸೊಲೈಯೂರ್‌ನ ಜನತೆಗೆ ಪ್ರಯೋಜನಕಾರಿಯಾದ ಅಣೆಕಟ್ಟನ್ನು ನಿರ್ಮಿಸಲು ಬ್ರಿಟಿಶರು ಬಿಡದೆ ಇದ್ದಾಗ ಆತ ಕಲೆಕ್ಟರ್ ಹುದ್ದೆಗೆ ರಾಜೀನಾಮೆ ನೀಡುತ್ತಾನೆ. ಆನಂತರ ಆತ ತನ್ನ ಪಿತ್ರಾರ್ಜಿತ ಹಣವನ್ನೇ ಬಳಸಿಕೊಂಡು ,ಜನರನ್ನು ಒಗ್ಗೂಡಿಸಿ ಅಣೆಕಟ್ಟು ನಿರ್ಮಿಸುತ್ತಾನೆ. ಆದರೆ ದುರಹಂಕಾರಿ ಬ್ರಿಟಿಶ್ ಕಲೆಕ್ಟರ್, ರಾಜಾಲಿಂಗೇಶ್ವರನಿಗೆ ಪ್ರತಿಯೊಂದು ಹಂತದಲ್ಲಿಯೂ ಅಡ್ಡಪಡಿಸಲು ಯತ್ನಿಸುತ್ತಾನೆ. ಇದಕ್ಕಾಗಿ ಆತ ಹಣ, ಜಾತಿ ಹಾಗೂ ಅಧಿಕಾರದ ಬಲವನ್ನು ದುರುಯೋಗಪಡಿಸಿಕೊಳ್ಳುತ್ತಾನೆ. ಲಿಂಗೇಶ್ವರನ್ ಅಣೆಕಟ್ಟನ್ನು ಪೂರ್ತಿಗೊಳಿಸಲು ತನ್ನ ಇಡೀ ಸಂಪತ್ತನ್ನು ಕಲೆಕ್ಟರ್‌ಗೆ ಧಾರೆಯೆರೆಯುತ್ತಾನೆ.

ಆನಂತರ ಕತೆ ಫ್ಲಾಶ್‌ಬ್ಯಾಕ್‌ನಿಂದ ಹೊರಬರುತ್ತದೆ.ಕಿತ್ತು ತಿನ್ನುವ ಬರಗಾಲ, ಸಹಸ್ರಾರು ಜನರ ಪರಿಶ್ರಮದಿಂದ ನಿರ್ಮಾಣವಾಗುವ ಅಣೆಕಟ್ಟು, ಅದನ್ನ ತಪ್ಪಿಸುವುದಕ್ಕೆ ರಾಜಕಾರಣಿಗಳ ಕುತಂತ್ರ, ಎಪ್ಪತ್ತೈದು ವರ್ಷಗಳಿಂದ ಮುಚ್ಚಲ್ಪಟ್ಟಿರುವ ಪುರಾತನ ಶಿವನ ದೇವಸ್ಥಾನ, ಈ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸುವುದಕ್ಕೆ ಪ್ರತ್ಯಕ್ಷವಾಗುತ್ತಾನೆ ಲಿಂಗಾ.
  ಚಿತ್ರದಲ್ಲಿ 64ನೇ ವಯಸ್ಸಲ್ಲೂ 24ರಂತೆ ಕಾಣಿಸುವ ರಜನಿ ತೆರೆಮೇಲೆ ಮ್ಯಾಜಿಕ್ ಮಾಡಿದ್ದಾರೆ. ಡಬ್ಬಲ್ ರೋಲ್‌ನಲ್ಲಿ ಅವರು ಕಮಾಲ್ ಮಾಡಿದ್ದಾರೆ. ‘ರಾಜಾ ಲಿಂಗೇಶ್ವರನ್ ಆಗಿ ರಾಜಗಾಂಭೀರ್ಯ ಮೆರೆಯುವ ರಜನಿ, ‘ಲಿಂಗಾ’ ಆಗಿ ಅಷ್ಟೇ ಸ್ಟೆೃಲಿಶ್ ಆಗಿ ಗಮನಸೆಳೆಯುತ್ತಾರೆ.
      
ರಿಪೋರ್ಟರ್ ಆಗಿ ಅನುಷ್ಕಾಶೆಟ್ಟಿ ನಟನೆ ಆಟಕ್ಕುಂಟು ಲೆಕ್ಕಕ್ಕಿಲ್ಲ. ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೋನಾಕ್ಷಿ ತಮ್ಮ ಎಂದಿನ ಅಚ್ಚುಕಟ್ಟು ಅಭಿನಯ ನೀಡಿದ್ದಾರೆ. ಸಂತಾನಂ ಲವಲವಿಕೆಗೆ ಕಾರಣವಾಗುತ್ತಾರೆ. ಖಳನಾಯಕ ಹಾಗೂ ಕುತಂತ್ರಿ ರಾಜಕಾರಣಿಯಾಗಿ ಜಗಪತಿ ಬಾಬು ಮಿಂಚಿದ್ದಾರೆ.  ರತ್ನವೇಲು ಅವರ ಕ್ಯಾಮರಾ ಕೈಚಳಕ ಚಿತ್ರದ ಇನ್ನೊಂದು ಹೈಲೈಟ್. ಕರ್ನಾಟಕದ ಕೆಲವು ಸ್ಥಳಗಳನ್ನು ಅತ್ಯಂತ ರಮಣೀಯವಾಗಿ ಚಿತ್ರಿಸಿದ್ದಾರೆ. ರೆಹಮಾನ್ ಹಾಡು ಮತ್ತು ಸಂಗೀತ ಎರಡೂ ಇಂಪಾಗಿವೆ. ರಜನಿಯ ಇಮೇಜ್‌ಗೆ ಹೆಚ್ಚು ಮಹತ್ವ ನೀಡಿರುವ ನಿರ್ದೇಶಕ ರವಿಕುಮಾರ್ ನೈಜತೆಗೆ ಹೆಚ್ಚು ಒತ್ತು ನೀಡಿದಂತಿಲ್ಲ. ಹಲವು ದಶ್ಯಗಳಲ್ಲಿ ‘ಲಿಂಗಾ’, ರಜನಿಯ ಸೂಪರ್ ಹಿಟ್ ಚಿತ್ರಗಳಾದ ಪಡೈಯಪ್ಪ ಹಾಗೂ ಮುತ್ತುವನ್ನು ನೆನಪಿಸುತ್ತಾನೆ.


ಚಲಿಸುತ್ತಿರುವ ರೈಲೊಂದರಲ್ಲಿ ಫೈಟಿಂಗ್ ದಶ್ಯ ಪರವಾಗಿಲ್ಲ. ಆದರೆ ಲಿಂಗಾದ ಕ್ಲೆೃಮಾಕ್ಸ್‌ನಲ್ಲಿ ಸ್ಟಂಟ್ ದಶ್ಯಗಳು ಮಾತ್ರ ಪ್ರೇಕ್ಷಕರನ್ನು ನಿರಾಶೆಯ ಕೂಪಕ್ಕೆ ದೂಡುತ್ತದೆ.ಲಿಂಗಾ ಬೈಕ್‌ನಿಂದ ಗಾಳಿಬಲೂನ್ ಮೇಲೆೆ ಜಿಗಿಯುವುದು,ಬಲೂನ್‌ನಲ್ಲಿ ನೇತಾಡುತ್ತಲೇ ಬಾಂಬನ್ನು ತುಳಿಯುವುದು ಇವೆಲ್ಲವೂ ಅತ್ಯಂತ ಅಸಹಜವಾಗಿ ಹಾಗೂ ಹಾಸ್ಯಾಸ್ಪದವಾಗಿ ಮೂಡಿಬಂದಿದೆ. ಇಂತಹ ಕಾಮಿಡಿಗಳಿಗಾಗಿ ರಜನಿಕಾಂತ ಈಗಾಗಲೇ ಪ್ರಸಿದ್ಧರಾಗಿರೋದರಿಂದ ಅವರ ಚಿತ್ರಕ್ಕೆ ಇದು ತಕ್ಕಂತೆ ಇದೆ ಎಂದು ಸಹಿಸಿ ಕೊಳ್ಳಬೇಕಷ್ಟೇ. 

Tuesday, December 9, 2014

ಭೂತದ ಬಾಯಲ್ಲಿ ಭಗವದ್ಗೀತೆ.....

" ಭೂತದ ಬಾಯಲ್ಲಿ ಭಗವದ್ಗೀತೆ'' ಎಂಬ ಒಂದು ಗಾದೆಯಿದೆ. ಕರಾವಳಿ ಭಾಗದಲ್ಲಿ ತುಳು ದೈವಗಳಿಗೆ "ಭೂತಗಳು'' ಎಂದು ಕರೆಯುತ್ತಾರೆ. ಭೂತದ ಕೋಲಗಳಲ್ಲಿ ದೈವಗಳು ಮನುಷ್ಯರ ಮೇಲೆಯೇ ಆವಾಹನೆಯಾಗಿ, ಭಕ್ತರ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತವೆ. ಭೂತಗಳ ಇತಿಹಾಸ, ಮಹಿಮೆಗಳನ್ನು ಹೇಳುವ ಹಾಡು ಗಳನ್ನು "ಪಾಡ್ದನ'' ಎಂದು ಕರೆಯುತ್ತಾರೆ. ಭೂತಗಳು ಪಾಡ್ದನಗಳೊಂದಿಗೆ ಚೈತನ್ಯವನ್ನು ಪಡೆದುಕೊಳ್ಳುತ್ತವೆ. ಭೂತದ ಕೋಲಗಳಲ್ಲಿ ಭಗವದ್ಗೀತೆಗೆ ಯಾವ ಸಂಬಂಧವೂ ಇಲ್ಲ. ಒಂದಕ್ಕೊಂದು ಕೂಡಿಕೊಳ್ಳದ ಸಂಸ್ಕೃತಿಗಳು ಅವು. ಭೂತಸ್ಥಾನಗಳಲ್ಲಿ ಜಾಗಟೆ, ಶಂಖ, ಭಜನೆಗಳಿಗೂ ಸ್ಥಾನವಿಲ್ಲ. ಆದುದರಿಂದಲೇ "ಭೂತದ ಬಾಯಲ್ಲಿ ಭಗವದ್ಗೀತೆ'' ಎಂಬ ಗಾದೆ ಹುಟ್ಟಿತು. ಭೂತಗಳು ಭಗವದ್ಗೀತೆಯನ್ನು ಆಡು ವುದು ಎಷ್ಟು ಅಭಾಸ ಎನ್ನುವುದನ್ನು ಈ ಗಾದೆ ಧ್ವನಿಸುತ್ತದೆ. ತುಳುವರ ಧಾರ್ಮಿಕ ಬದುಕಿನಲ್ಲಿ ಬ್ರಾಹ್ಮಣರ ಪ್ರವೇಶ ಕಾಣಿಸಿಕೊಳ್ಳುತ್ತಿರುವುದು ಈಚಿನ ಶತಮಾನಗಳಲ್ಲಿ. ತುಳುವರ ಯಾವುದೇ ಧಾರ್ಮಿಕ ಆಚರಣೆಗಳಲ್ಲಿ ವೈದಿಕ ಹಿನ್ನೆಲೆಯಿರಲಿಲ್ಲ. ಈ ಕಾರಣದಿಂದಲೇ ಭೂತಗಳಿಗೆ ಭಗವದ್ಗೀತೆ ಬಹು ದೂರ.

ಇತ್ತೀಚೆಗೆ ಸರಕಾರ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವನ್ನಾಗಿಸುವ ಹುನ್ನಾರಕ್ಕಿಳಿದಿದೆ. ಇಲ್ಲಿ ಪ್ರಶ್ನೆ ಕೇವಲ ಭಗವದ್ಗೀತೆ ಎನ್ನುವ ಒಂದು ಗ್ರಂಥಕ್ಕೆ ಸಂಬಂಧಿಸಿದುದು ಮಾತ್ರವಲ್ಲ. ಅದು ಪ್ರತಿಪಾದಿಸುವ ಮೌಲ್ಯಗಳಿಗೆ ಸಂಬಂಧಿಸಿದ್ದೂ ಆಗಿರುವುದರಿಂದ, ಇದನ್ನು ನಾವು ಗಂಭೀರವಾಗಿ ಸ್ವೀಕರಿಸಬೇಕಾಗಿದೆ. ಈ ದೇಶದ ಎರಡು ಮಹಾಕಾವ್ಯಗಳು ರಾಮಾಯಣ ಮತ್ತು ಮಹಾಭಾರತ ಎನ್ನುವುದರಲ್ಲಿ ಎರಡು ಮಾತಿಲ್ಲ. ಇವುಗಳು ತಮ್ಮ ಕಾವ್ಯ ಶಕ್ತಿಯ ಮೂಲಕವೇ ವಿಶ್ವ ವ್ಯಾಪಿಯಾಗಿ ಹರಡಿಕೊಂಡಿವೆ. ಮೋದಿ ಅದಕ್ಕೆ ಮಾನ್ಯತೆ ನೀಡಲಿ, ನೀಡದಿರಲಿ ಅವರೆಡೂ ಕಾವ್ಯಗಳು ವಿಶ್ವಕ್ಕೆ ನೀಡಿದ ಕೊಡುಗೆ ಪ್ರಶ್ನಾತೀತ.  ಆದರೆ ಇದೇ ಸಂದರ್ಭದಲ್ಲಿ ಭಗವದ್ಗೀತೆಯನ್ನು ಈ ನೆಲದ ಜನ ಆ ದೃಷ್ಟಿಯಿಂದ ನೋಡಿಕೊಂಡು ಬಂದಿಲ್ಲ. ಭಗವದ್ಗೀತೆ ತನ್ನ ಆಳದಲ್ಲಿ ಕಾವ್ಯೇತರವಾದ ಕೆಲವು ಅಜೆಂಡಾಗಳನ್ನು ಹೊಂದಿದೆ. ಮತ್ತು ಆ ಅಜೆಂಡಾಗಳು  ಈ ದೇಶವನ್ನು ತಲೆತಲಾಂತರಗಳಿಂದ ಗುಲಾಮಗಿರಿಗೆ ಈಡು ಮಾಡುತ್ತಾ ಬಂದಿದೆ. ಅದು ಪ್ರತಿಪಾದಿಸುವ ಹಲವು ನೀತಿ ಸಂಹಿತೆಗಳು ಭಾರತದ ಸಂವಿಧಾನಕ್ಕೆ ವಿರುದ್ಧವಾಗಿವೆ. ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥ ಎಂದು ಕರೆಯುವುದೆಂದರೆ, ಗೀತೆ ಪ್ರತಿಪಾದಿಸುವ ವರ್ಣಾಶ್ರಮ ವೌಲ್ಯಗಳನ್ನು ರಾಷ್ಟ್ರದ ಮೇಲೆ ಹೇರುವುದು ಎಂದೇ ಅರ್ಥ. ಅದರ ಲಾಭ ಯಾರಿಗೆ, ನಷ್ಟ ಯಾರಿಗೆ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ. ಸದ್ಯಕ್ಕೆ ಆರೆಸ್ಸೆಸ್ ಬಳಗ ಭಾರತದ ಶಿಕ್ಷಣವನ್ನು ಬುಡಮೇಲು ಮಾಡುತ್ತಿರುವ ಸಂದರ್ಭದಲ್ಲೇ, ಅದಕ್ಕೆ ಪೂರಕವಾಗಿ ಭಗವದ್ಗೀತೆಯನ್ನು ನೆಲೆಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇದು ಕೇವಲ ಸರಕಾರದ ಒಂದು ರಾಜಕೀಯ ತಂತ್ರವಾಗಿರದೆ, ಆರೆಸ್ಸೆಸ್ ಅಜೆಂಡಾದ ಒಂದು ಭಾಗ ಆಗಿದೆ.


 ಭಗವದ್ಗೀತೆ ಮಹಾಭಾರತದ ಒಂದು ಭಾಗ ಎಂದು ಬ್ರಾಹ್ಮಣರು ದೇಶವನ್ನು ನಂಬಿಸಿಕೊಂಡು ಬಂದಿದ್ದಾರಾದರೂ ಇಂದಿಗೂ ಈ ಕುರಿತಂತೆ ಹಲವು ಶ್ರೇಷ್ಠ ವಿದ್ವಾಂಸರು ತಮ್ಮ ಆಕ್ಷೇಪಗಳನ್ನು ಎತ್ತಿದ್ದಾರೆ. "ಮಹಾಭಾರತ ಕಾವ್ಯ''ದೊಳಗೆ ಕಾಲಾಂತರದಲ್ಲಿ "ಭಗವದ್ಗೀತೆ''ಯನ್ನು ತುರುಕಿಸಲಾಯಿತು ಎನ್ನುವುದನ್ನು ಹಲವು ವಿದ್ವಾಂಸರು ಈಗಾಗಲೇ ಬರೆದಿದ್ದಾರೆ. ಈ ಕುರಿತಂತೆ ಚರ್ಚಿಸಿದ್ದಾರೆ. ಇರಾವತಿ ಕರ್ವೆಯವರ ಕೃತಿಯಲ್ಲೂ ಭಗವದ್ಗೀತೆ ಮಹಾಭಾರತದ ಭಾಗ ಹೌದೋ, ಅಲ್ಲವೋ ಎಂಬ ಕುರಿತಂತೆ ಚರ್ಚೆ ಬರುತ್ತದೆ. ಮಹಾಭಾರತಕ್ಕೆ ಕಾವ್ಯವೇ ಮುಖ್ಯ. ಅಲ್ಲಿ ಕಲೆಯೇ ಅಜೆಂಡಾ. ಆದರೆ ಭಗವದ್ಗೀತೆ ಕಾವ್ಯದ ಉದ್ದೇಶವನ್ನು ಮೀರಿ, ಒಂದು ನಿರ್ದಿಷ್ಟ ಸಂಹಿತೆಯನ್ನು ಪ್ರತಿಷ್ಠಾಪಿಸುವ ಉದ್ದೇಶದಿಂದ ರಚಿತವಾಗಿರುವುದು ಮೇಲ್ನೋಟಕ್ಕೆ ಅರ್ಥವಾಗುತ್ತದೆ. ಕರ್ಮ ಸಿದ್ಧಾಂತ ಮತ್ತು ವರ್ಣಾಶ್ರಮ ಸಿದ್ಧಾಂತಗಳ ತಳಹದಿಯ ಮೇಲೆಯೇ ಇಂದು ಜಾತಿ ವ್ಯವಸ್ಥೆ ನಮ್ಮನ್ನು ವಿಷ ವಕ್ಷದಂತೆ ಸುತ್ತಿಕೊಂಡಿದೆ ಎನ್ನುವುದನ್ನು ಅರ್ಥ ಮಾಡಿಕೊಂಡಾಗಲೇ, ಭಗವದ್ಗೀತೆ ಹೇಗೆ ಮಹಾಭಾರತದೊಳಗೆ ನುಸುಳಿಕೊಂಡಿತು ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಭಗವದ್ಗೀತೆ ಇಡೀ ಮನುಷ್ಯ ಕುಲವನ್ನು ಚರ್ಚಿಸುತ್ತದೆ ಎಂದೋ ಅಥವಾ ಅದು ಮನುಷ್ಯ ವಿರೋಧಿಯಾಗಿದೆ ಎಂದೋ ಒಂದೇ ಏಟಿಗೆ ನಿರ್ಧರಿಸುವುದು ತಪ್ಪು. ಆದರೆ, ಅದು ಬ್ರಾಹ್ಮಣರ ಹಕ್ಕುಗಳನ್ನು, ಹಿತಾಸಕ್ತಿಗಳನ್ನು ಕಾಪಾಡುತ್ತದೆಯಾದುದರಿಂದ, ಅದು ಬ್ರಾಹ್ಮಣ ಧರ್ಮದ ಗ್ರಂಥವಾಗುತ್ತದೆ ಮತ್ತು ಅದರ ಅನುಷ್ಠಾನದ ಸರ್ವ ಲಾಭಗಳನ್ನು ತಮ್ಮದಾಗಿಸಿಕೊಂಡು ಬಂದಿರುವುದು ಈ ದೇಶದ ಬ್ರಾಹ್ಮಣರೇ ಹೊರತು, ಶೂದ್ರ, ಚಂಡಾಲ, ಮ್ಲೇಚ್ಛ ಸಮುದಾಯಗಳಲ್ಲ. ಅದು ಇಡೀ ಹಿಂದೂ ಸಮುದಾಯದ ಹಿತಾಸಕ್ತಿ ಯನ್ನು ತನ್ನದಾಗಿಸಿ ಕೊಂಡು ರಚಿಸಲ್ಪಟ್ಟಿಲ್ಲ. ಆದುದರಿಂದಲೇ ಇಂದು ಭಗವದ್ಗೀತೆಯನ್ನು ರಾಷ್ಟ್ರೀಯ ಕೃತಿಯಾಗಿ ಒಪ್ಪಲು ವ್ಯಾಪಕ ಪ್ರತಿಭಟನೆ ವ್ಯಕ್ತವಾ ಗುತ್ತಿದೆ.

  ಇಷ್ಟಕ್ಕೂ ಭಗವದ್ಗೀತೆ ರಚನೆಯಾಗಿ ಐದು ಸಾವಿರ ವರ್ಷಗಳು ಕಳೆದಿವೆ ಎಂದೂ ನಾವೆಲ್ಲ ನಂಬಿದ್ದೇವೆ ಮತ್ತು ಅದನ್ನು ಆಚರಿಸುತ್ತಿದ್ದೇವೆ. ಆದರೆ "ಹಿಂದೂ''ಎನ್ನುವ ಶಬ್ದಕ್ಕೆ ಒಂದು ಸಾವಿರಕ್ಕಿಂತ ಅಧಿಕ ವರ್ಷಗಳ ಇತಿಹಾಸವಿಲ್ಲ. ಹೊರಗಿನಿಂದ ಬಂದವರು, ಈ ನೆಲವನ್ನು ಸಮಗ್ರವಾಗಿ ಗುರುತಿಸಲು ಹಿಂದೂ ಎನ್ನುವ ಶಬ್ದವನ್ನು ಬಳಸಿದರು. ಹೀಗಿರುವಾಗ ಹಿಂದೂ ಧರ್ಮದ ಏಕೈಕ ಪವಿತ್ರ ಗ್ರಂಥವಾಗಿ ನಾವು ಭಗವದ್ಗೀತೆಯನ್ನು ಗುರುತಿಸುವುದು ಒಂದು ಅಭಾಸ. ಇಂದು ನಾವು ಗ್ರಹಿಸುವ ಹಿಂದೂ ಧರ್ಮಕ್ಕೆ ಒಂದು ನಿರ್ದಿಷ್ಟ ಧರ್ಮ ಗ್ರಂಥವೆನ್ನುವುದು ಇಲ್ಲವೇ ಇಲ್ಲ. ಅದು ನೂರಾರು ವೈವಿಧ್ಯಗಳಲ್ಲಿ ಅರಳಿ ನಿಂತ ಧರ್ಮ. ವೇದಗಳು, ಉಪನಿಷತ್‌ಗಳು, ರಾಮಾಯಣ, ಮಹಾಭಾರತಗಳು ಹೀಗೆ...ಬೇರೆ ಬೇರೆ ಗ್ರಂಥಗಳು, ತತ್ವಗಳು ಈ ಧರ್ಮವನ್ನು ರೂಪಿಸಿವೆ. ಅವೆಲ್ಲವನ್ನು ಬದಿಗೆ ತಳ್ಳಿ, ಭಗವದ್ಗೀತೆಯನ್ನು ಮುಂದಕ್ಕೆ ತಂದಿರುವುದು ಬ್ರಾಹ್ಮಣ್ಯ ಮನಸ್ಸುಗಳು. ಬ್ರಾಹ್ಮಣ್ಯದ ಹಿರಿಮೆಯನ್ನು ಎತ್ತಿ ಹಿಡಿಯುವ ಏಕೈಕ ಉದ್ದೇಶದಿಂದ ಅದನ್ನು ಮುನ್ನೆಲೆಗೆ ತರಲಾಯಿತು. ಇದೀಗ ಅದೇ ಮನಸ್ಸುಗಳು ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿ ಘೋಷಿಸುವ ಮೂಲಕ, ಅದು ಪ್ರತಿಪಾದಿಸುವ ವರ್ಣಾಶ್ರಮ ವ್ಯವಸ್ಥೆಯನ್ನು ಮರು ಸ್ಥಾಪಿಸಲು ಯತ್ನಿಸುತ್ತಿವೆ.


  ದಲಿತರಿಗೆ ಮಂಟೇಸ್ವಾಮಿ ಕಾವ್ಯ ಪರಮ ವೌಲ್ಯಗಳಿಂದ ಕೂಡಿದೆ. ತುಳುವರಿಗೆ ಪಾಡ್ದನಗಳಲ್ಲಿ ಸತ್ಯಗಳಿವೆ. ಲಿಂಗಾಯತರಿಗೆ, ವೀರಶೈವ ಸಮಾಜದ ಜನರಿಗೆ ವಚನ ಸಾಹಿತ್ಯದಲ್ಲೇ ಬದುಕಿನ ಪರಮ ವೌಲ್ಯಗಳಿವೆ. ಈ ದೇಶದ ಬುಡಕ್ಕಟ್ಟು ಜನರು, ಆದಿವಾಸಿಗಳಿಗೆ ಅವರದೇ ಆದರ್ಶಗಳುಳ್ಳ ಜಾನಪದೀಯವಾಗಿರುವ ದರ್ಶನಗಳಿವೆ. ಅಂತೆಯೇ ಸಿಖ್ಖರ ಧರ್ಮಗ್ರಂಥ "ಗ್ರಂಥ ಸಾಹೇಬ'' ಅತ್ಯಂತ ವಿಶಿಷ್ಟ ವೌಲ್ಯಗಳನ್ನು ತನ್ನದಾಗಿಸಿಕೊಂಡಿದೆ. ಸೂಫಿ ಸಂತರ ಶಬದ್‌ಗಳು, ದೋಹೆಗಳ ಸಾರವೂ ಅಲ್ಲಿವೆ. ಶೇಖ್ ಫರೀದ್, ಸಂತ ಕಬೀರರಂತಹ ಮಹಾನ್ ಸಂತರ ಸಾಲುಗಳನ್ನು ತನ್ನದಾಗಿಸಿಕೊಂಡಿರುವ ಗ್ರಂಥ ಅದು. ಭಗವದ್ಗೀತೆಯೊಂದೇ ಈ ದೇಶದ ಜನರಿಗೆ ಬದುಕುವ ಮಾರ್ಗವನ್ನು ಕೊಟ್ಟುದೇ ಆಗಿದ್ದರೆ, ಈ ದೇಶಕ್ಕೆ ಪರಕೀಯರು ಆಗಮಿಸುತ್ತಲೇ ಇರಲಿಲ್ಲ. ಅಸ್ಪೃಶ್ಯತೆ ತಾಂಡವವಾಡುತ್ತಾ, ಬಹುಸಂಖ್ಯಾತ ಕೆಳ ಜಾತಿಯ ಜನರು ಬೆರಳೆಣಿಕೆ ಜನರ ಕೈಯಲ್ಲಿ ಗುಲಾಮರಾಗಿ ಕೀಳಾದ ಬದುಕನ್ನು ಬದುಕುವ ಸ್ಥಿತಿ ಬರುತ್ತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಜಾಸತ್ತಾತ್ಮಕ ಹೋರಾಟದ ಮೂಲಕ ಸಂವಿಧಾನವೊಂದನ್ನು ರಚಿಸುವ ಅಗತ್ಯವೂ ಇರಲಿಲ್ಲ. ಈ ಕಾರಣದಿಂದಲೇ, ಈ ದೇಶದ ಜನರನ್ನು ಎಲ್ಲ ಧರ್ಮ ಗ್ರಂಥಗಳಿಂದ ಸ್ವತಂತ್ರಗೊಳಿಸಿದ ಸಂವಿಧಾನವೇ ರಾಷ್ಟ್ರೀಯ ಗ್ರಂಥ. ಇದಕ್ಕೆ ಪರ್ಯಾಯವಾಗಿ ಇನ್ನೊಂದು ಗ್ರಂಥವನ್ನು ತಂದಿಡುವ ಯಾವುದೇ ಹುನ್ನಾರ ಪ್ರಜಾಸತ್ತಾತ್ಮಕ ವ್ಯವಸ್ಥೆಯ ವಿರುದ್ಧ ನಡೆಸುವ ದಾಳಿಯಾಗಿದೆ.

Sunday, December 7, 2014

ಕುರ್‌ಆನ್‌ನ ಆ ಏಳು ಸಾಲುಗಳು....

ನನ್ನ ಬಾಲ್ಯವನ್ನು ರಮ್ಯಗೊಳಿಸಿದ್ದು ಮಹಾಭಾರತ, ರಾಮಾಯಣದ ಕತೆಗಳು. ನಾನು ಕುರ್‌ಆನ್ ಓದುವ ಮೊದಲೇ ರಾಮಾಯಣ, ಮಹಾಭಾರತಗಳನ್ನು ಓದಿ ಮುಗಿಸಿದ್ದೆ ಮಾತ್ರವಲ್ಲ, ಆ ರಮ್ಯ ಲೋಕದಲ್ಲಿ ನಾನೂ ಒಂದು ಪಾತ್ರವಾಗಿ ಬದುಕುತ್ತಿದ್ದೆ. ಹಾಗೆಯೇ ನನ್ನ ಪ್ರಾಥಮಿಕ ಮತ್ತು ಹೈಸ್ಕೂಲ್ ವಿದ್ಯಾಭ್ಯಾಸವನ್ನು ಚರ್ಚ್ ಶಾಲೆಗಳಲ್ಲಿ ಮುಗಿಸಿರುವುದರಿಂದ ಕೆಲವು ಬೈಬಲ್‌ಗಳ ಕತೆಗಳನ್ನೂ ನನ್ನದಾಗಿಸಿಕೊಂಡಿದ್ದೆ. ಆದರೆ ಕುರ್‌ಆನ್ ಮಾತ್ರ ನನಗೆ ಹತ್ತಿರವಿದ್ದೂ ತುಂಬಾ ದೂರವಿತ್ತು. ಅದಕ್ಕೆ ಅದರದೇ ಕಾರಣಗಳಿದ್ದವು. ನನ್ನಿಂದ ಕುರ್‌ಆನ್ ದೂರವಿರುವುದಕ್ಕೆ ಅಂದಿನ ವೌಲ್ವಿಗಳೇ ಪ್ರಧಾನ ಕಾರಣವಾಗಿದ್ದರು ಎನ್ನುವುದೇ ಕುತೂಹಲಕರ ಅಂಶವಾಗಿತ್ತು.

 ನಾನು ಶಾಲೆಗೆ ಹೆಜ್ಜೆಯಿಡುವ ಹೊತ್ತಿನಲ್ಲೇ ಮದರಸಕ್ಕೂ ಪಾದವೂರಿದ್ದೆ. ಬೆಳ್ಳಂಬೆಳಗ್ಗೆ 6 ಗಂಟೆಗೆ ಮದರಸಕ್ಕೆ ಹೋಗಿ ಅಲ್ಲಿ ಎರಡುಗಂಟೆ ಧಾರ್ಮಿಕ ಶಿಕ್ಷಣ ಕಲಿತು ಅಲ್ಲಿಂದ ಮನೆಗೆ ತೆರಳಿ ತಿಂಡಿ ತಿಂದು ಮತ್ತೆ ಶಾಲೆಗೆ ಹೊರಡಬೇಕಾಗಿತ್ತು. ಹೀಗೆ ಆಗಿನ ಐದನೇ ತರಗತಿಯವರೆಗೆ ನಾನು ಮದರಸದಲ್ಲಿ ಕಲಿತೆನಾದರೂ ಕುರ್‌ಆನ್ ಎಂದರೆ ಏನು ಎನ್ನುವುದು ನನಗೆ ಸ್ಪಷ್ಟವಾಗದೇ ಹೋದುದಕ್ಕೆ ನನ್ನ ವೈಯಕ್ತಿಕ ಪಾಲು ಏನೂ ಇರಲಿಲ್ಲ. ಮದರಸದಲ್ಲಿ ನಮಗೆ ಕುರ್‌ಆನ್ ಕಲಿಸುತ್ತಿದ್ದ ವೌಲ್ವಿಗಳು ಕೇರಳದಿಂದ ಬಂದವರು. ಅವರು ಅರಬೀ ಅಕ್ಷರಗಳನ್ನು ಓದಲು ಮಾತ್ರ ನಮಗೆ ಕಲಿಸುತ್ತಿದ್ದರು. ಅರಬೀ ಅರ್ಥಗಳನ್ನು ಹೇಳಿಕೊಡುತ್ತಿರಲಿಲ್ಲ. ಕುರ್‌ಆನನ್ನು ರಾಗವಾಗಿ ಓದುತ್ತಿದ್ದೆನಾದರೂ ನನಗೆ ಅದರೊಳಗೆ ಏನಿದೆ ಎನ್ನುವುದು ತಿಳಿದದ್ದು ಮದರಸ ತೊರೆದ ಬಳಿಕ. ಮದರಸದಲ್ಲಿ ವೌಲ್ವಿಗಳು ಕುರ್‌ಆನನ್ನು ಓದಲು, ಕಂಠಪಾಠ ಮಾಡಲು, ಗೌರವಿಸಲು ಅಷ್ಟೇ ಕಲಿಸಿದರು. ಎಲ್ಲಾದರೂ ಅರಬೀ ಅಕ್ಷರಗಳಿದ್ದ ಕಾಗದದ ಚೂರುಗಳನ್ನು ಕಂಡರೂ ನಾವು ಅದನ್ನು ಕಣ್ಣಿಗೊತ್ತಿ ಬಾವಿಗೆ ಹಾಕಿ ಬಿಡುತ್ತಿದ್ದೆವು. ಕುರ್‌ಆನ್ ಕಾಗದದ ಚೂರುಗಳು ನೆಲ್ಲದಲ್ಲಿ, ಧೂಳಿನಲ್ಲಿ , ಹೊಲಸಿನಲ್ಲಿ ಬೆರೆತು ಹೋಗಬಾರದು ಎನ್ನುವ ಕಾರಣಕ್ಕೆ. ಅರಬೀ ಅಕ್ಷರಗಳಿರುವ ಎಲ್ಲ ಕಾಗದಗಳೂ ಕುರ್‌ಆನ್ ಎಂದೇ ಭಾವಿಸಿದ್ದೆವು. ಅರಬೀ ಅಕ್ಷರಗಳಲ್ಲಿ ಸಿನಿಮಾ ಹಾಡುಗಳನ್ನು ಬರೆಯಬಹುದು ಎನ್ನುವುದೆಲ್ಲ ನಮಗೆ ಆಗ ಗೊತ್ತಿರಲಿಲ್ಲ. ಒಟ್ಟಿನಲ್ಲಿ ಕುರ್‌ಆನ್‌ನ ಗಮಕ ಹೊರತು ಪಡಿಸಿ, ಅದರೊಳಗಿರುವ ಒಂದು ಶಬ್ದದ ಅರ್ಥವೂ ನನಗೆ ಗೊತ್ತಿರಲಿಲ್ಲ. ನಾವು ಮದರಸದಲ್ಲಿ ಎಲ್ಲೂ ಸಲ್ಲದ ಒಂದು ವಿಶಿಷ್ಟ ಮಾಧ್ಯಮದಲ್ಲಿ ಕಲಿತೆವು. ನಮ್ಮ ಮನೆ ಭಾಷೆ ಬ್ಯಾರಿ. ಇದು ಮಲಯಾಳಕ್ಕಿಂತ ಭಿನ್ನ. ಆಗಿನ ಕಾಲದಲ್ಲಿ ನಮ್ಮ ಮದರಸಗಳಿಗೆ ಕೇರಳದಿಂದ ವೌಲ್ವಿಗಳನ್ನು ನೇಮಕ ಮಾಡಲಾಗುತ್ತಿತ್ತು. ನಮ್ಮೂರಿನಲ್ಲಿ ವೌಲ್ವಿ ಕಲಿತ ವಿದ್ವಾಂಸರು ಇಲ್ಲದೆ ಇರುವುದು ಅದಕ್ಕೆ ಕಾರಣವಿರಬೇಕು. ಅವರಿಗೆ ಮಲಯಾಳಂ ಬಿಟ್ಟರೆ ಬೇರೆ ಭಾಷೆಯೇ ಗೊತ್ತಿಲ್ಲ. ಆದುದರಿಂದ ನಮಗೆ ಮಲಯಾಳಂ ಮಾಧ್ಯಮದಲ್ಲೇ ಕಲಿಸುತ್ತಿದ್ದರು. ಅಕ್ಷರಗಳು ಅರೆಬಿಕ್‌ನಲ್ಲಿ ಬರೆಯಲಾಗುತ್ತಿತ್ತು. ಇದೊಂದು ರೀತಿ ಅರೇಬಿಕ್ ಮಲಯಾಳಂ ಮಾಧ್ಯಮ. ಐದನೆಯ ತರಗತಿಯವರೆಗೂ ಮದರಸದಲ್ಲಿ ಕಲಿತ ನನ್ನ ಸ್ಥಿತಿ ಇದಾಗಿತ್ತು. 


ಅದೊಂದು ದಿನ ನನ್ನ ತಂದೆಗೆ ಯಾರೋ ವೌಲವಿಯೊಬ್ಬರು ಸಿಕ್ಕಿದವರು ‘ಕುರ್‌ಆನ್‌ನ ‘ಸೂರಾ ವಾಕಿಯಾ’ ಅಧ್ಯಾಯವನ್ನು ಪ್ರತಿ ದಿನ ರಾತ್ರಿ ಪಠಿಸಿದರೆ ಆ ಮನೆಯಲ್ಲಿ ಶ್ರೀಮಂತಿಕೆ ತುಂಬಿ ತುಳುಕುತ್ತದೆ’’ ಎಂದು ಹೇಳಿದ್ದರು. ಅಂದು ರಾತ್ರಿ ಮನೆಗೆ ಬಂದವರೇ ‘‘ಇನ್ನು ಮುಂದೆ ಪ್ರತಿ ರಾತ್ರಿ ನೀನು ಸೂರಾ ವಾಕಿಯಾವನ್ನು ಓದಬೇಕು’’ ಎಂದು ಆಜ್ಞೆ ಮಾಡಿದರು. ಅಷ್ಟೇ ಅಲ್ಲ, ಪ್ರತಿ ರಾತ್ರಿ ತಮ್ಮ ಅಂಗಡಿಯಿಂದ ಬಂದವರು ತಾಯಿಯಲ್ಲಿ ‘‘ಮಗ ವಾಕಿಯಾ ಓದಿದನೋ?’’ ಎಂದು ವಿಚಾರಿಸುತ್ತಿದ್ದರು. ನನಗೋ ಹಿಂಸೆ. ಕೆಲವೊಮ್ಮೆ ಓದದೇ ಹಾಗೇ ಮಲಗಿ ಬಿಟ್ಟರೆ, ತಂದೆ ಬಂದು ನನ್ನನ್ನು ಎಬ್ಬಿಸಿ, ಗದರಿಸಿ ಓದಿಸುತ್ತಿದ್ದರು. ಸುಮಾರು ಎರಡು ಮೂರು ವರ್ಷ ನಾನು ಈ ಅಧ್ಯಾಯವನ್ನು ಪ್ರತಿ ರಾತ್ರಿ ಓದುತ್ತಿದ್ದೆ. ಈ ಅಧ್ಯಾಯ ಅದೆಷ್ಟು ಚೆನ್ನಾಗಿ ನನಗೆ ಕಂಠಪಾಠವಾಗಿತ್ತು ಎಂದರೆ, ಕುರ್‌ಆನ್ ಬಿಡಿಸದಯೇ ಈ ಅಧ್ಯಾಯವನ್ನು ಪಟಪಟ ಓದುತ್ತಿದ್ದೆ. ಒಮ್ಮೆ ಮುಗಿಸಿ ಬಿಟ್ಟರೆ ಸಾಕು ಎನ್ನುವ ಹಾಗೆ. ಆದರೆ ಈ ಅಧ್ಯಾಯ ಓದಿದ ಬಳಿಕ ತಂದೆ ಶ್ರೀಮಂತನಾದದ್ದು ನನ್ನ ಗಮನಕ್ಕೇನೂ ಬಂದಿರಲಿಲ್ಲ. ಇತ್ತೀಚೆಗೆ ಇದನ್ನು ನನ್ನ ಗೆಳೆಯರೊಬ್ಬರಲ್ಲಿ ಹೇಳಿ ನಕ್ಕಾಗ ಅವರು ಹೀಗೆ ವಿವರಿಸಿದರು ‘‘ಓದಿದ್ದು ನೀನು. ಅದರಿಂದ ನಿನಗೆ ಒಳ್ಳೆಯದಾಗಿದೆ. ನಿನ್ನ ತಂದೆ ಓದಿದ್ದರೆ ಅವರಿಗೆ ಒಳ್ಳೆಯದಾಗಿತ್ತು. ಯಾರು ಓದಿದ್ದಾರೆಯೋ ಅವರಿಗೆ ತಾನೆ ಅದರ ಫಲ’’.
 

 ವಾಕಿಯಾ ಆಧ್ಯಾಯವನ್ನು ಪಟಪಟ ಓದುತ್ತಿದ್ದೆನಾದರೂ ನನಗೆ ಅದರ ಅರ್ಥ ಏನು ಎನ್ನುವುದು ಗೊತ್ತೇ ಇರಲಿಲ್ಲ. ಅದರ ಒಳಗೆ ಏನಿರಬಹುದು? ಅದು ಏನು ಹೇಳುತ್ತಿರಬಹುದು? ಇದನ್ನು ಓದಿದರೆ ಶ್ರೀಮಂತನಾಗುವುದು ಹೇಗೆ? ಬರ್ಕತ್ತು ಬರುವುದು ಹೇಗೆ? ಎಂದೆಲ್ಲ ಆಗ ಯೋಚಿಸುತ್ತಿದ್ದೆ. ಆದರೆ ಅದರ ಅರ್ಥವನ್ನು ವಿವರಿಸುವ, ಹೇಳಿಕೊಡುವ ಯಾರೂ ನನ್ನ ಸುತ್ತಮುತ್ತಲಿರಲಿಲ್ಲ. ನನ್ನ ತಂದೆಗೂ ಅದರ ಅರ್ಥಗೊತ್ತಿರಲಿಲ್ಲ. ದಿನಾ ರಾತ್ರಿ ‘ಯಾಸೀನ್’ ಅಧ್ಯಾಯ ಓದಿ ಮಲಗುವ ಅಮ್ಮನಿಗೂ ಅದರ ಅರ್ಥಗೊತ್ತಿರಲಿಲ್ಲ. ಅರ್ಥಗೊತ್ತಿರಬೇಕಾಗಿಲ್ಲ ಎಂದು ನಾವು ಬಲವಾಗಿ ನಂಬಿದ್ದೆವು. ಎಲ್ಲಕ್ಕಿಂತ ಮುಖ್ಯವಾಗಿ ನಾವು ಅದರ ಅರ್ಥವನ್ನು ಕಲಿಯುವುದರ ಕುರಿತಂತೆಯೇ ಆ ಕಾಲದಲ್ಲಿ ಒಂದು ಋಣಾತ್ಮಕ ಭಾವನೆಯಿತ್ತು. ಅದು ವೌಲ್ವಿಗಳ ಸಂಗತಿಗಳು ಎಂದು ನಂಬಿಕೊಂಡಿದ್ದೆವು. ಅರ್ಥ ಗೊತ್ತಿಲ್ಲದ ಕಾರಣಕ್ಕಾಗಿಯೇ, ನಾವು ಅದನ್ನೊಂದು ಅತೀತ ಸಂಗತಿಯೆಂದು ತಿಳಿದು ಹೆದರಿ, ಬೆದರಿ ನಡೆಯುತ್ತಿದ್ದೆವೇನೋ.

 ನಾನು ಒಂಬತನ್ನೇ ತರಗತಿ ಅಥವಾ ಎಸ್ಸೆಸ್ಸೆಲ್ಸಿಗೆ ಕಾಲಿಡುವ ಹೊತ್ತಿಗೆ ಮದರಸವನ್ನು ತೊರೆದಿದ್ದೆ. ಶಾಲೆಯ ಕಡೆಗೆ ಗಮನಹರಿಸತೊಡಗಿದ್ದೆ. ನಾನು ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಕಾಲ. ಉಪ್ಪಿನಂಗಡಿಯ ಪಂಚಾಯತ್‌ನ ಹಳೆ ಕಟ್ಟಡದಲ್ಲಿರುವ ಲೈಬ್ರರಿ ಆಗ ನನ್ನ ಪ್ರೀತಿಯ ತಾಣವಾಗಿತ್ತು. ನನ್ನ ಬಹುತೇಕ ಓದಿಗೆ ಪ್ರೇರಣೆ ನೀಡಿದ ಸ್ಥಳ ಅದು. ಯಾವುದೇ ಮದರಸ, ಶಾಲೆ, ಕಾಲೇಜುಗಳು ನೀಡಿದ್ದಕ್ಕಿಂತ ದೊಡ್ಡದನ್ನು ನನಗೆ ನೀಡಿದ ಸ್ಥಳ ಅದು. ಒಂದು ದಿನ ಉಪ್ಪಿನಂಗಡಿ ಗ್ರಂಥಾಲಯದಲ್ಲಿ ಒಂದು ಬಹತ್ ಗ್ರಂಥವನ್ನು ನೋಡಿದೆ. ಕುರ್‌ಆನ್‌ನ ರೂಪವನ್ನು ಹೊಂದಿದ್ದರೂ ಅದು ಕನ್ನಡದಲ್ಲಿತ್ತು. ‘ಕನ್ನಡದಲ್ಲಿ ಕುರ್‌ಆನ್’ ಎಂದೂ ಬರೆದಿತ್ತು. ನನಗೋ ಕುತೂಹಲ. ನಾನು ಈವರೆಗೆ ಓದಿದ್ದ ಅಪೂರ್ವ ಮಂತ್ರಶಕ್ತಿಗಳುಳ್ಳ ಕುರ್‌ಆನ್ ನನಗೆ ಅರ್ಥವಾಗುವ ಕನ್ನಡದೊಳಗಿದೆ ಎನ್ನುವುದನ್ನು ನೆನೆದೇ ನಾನು ಕಂಪಿಸಿದ್ದೆ. ಅಷ್ಟೊತ್ತಿಗೆ, ನಮ್ಮೂರಿಗೂ ಈ ಜಮಾತೆ ಇಸ್ಲಾಮ್ ಎನ್ನುವ ಸಂಘಟನೆ ಕಾಲಿಟ್ಟಿತ್ತು. ಅಂದಿನ ಮುಸ್ಲಿಮ್ ಸಮಾಜ ಇವರನ್ನು ತೀವ್ರವಾಗಿ ಪ್ರತಿರೋಧಿಸುತ್ತಿತ್ತು. ಅದಕ್ಕೆ ಒಂದು ಮುಖ್ಯ ಕಾರಣ, ಇವರು ಕುರ್‌ಆನ್‌ನ್ನು ಕನ್ನಡದಲ್ಲಿ ಓದುತ್ತಾರೆ ಎನ್ನುವುದು ಕೂಡ. ಹೇಗೆ ಕರಾವಳಿಯ ಹೊರಗೆ ಉರ್ದು ಭಾಷೆಯನ್ನು ಮುಸ್ಲಿಮರ ಭಾಷೆ ಎಂದು ತಿಳಿದುಕೊಂಡಿದ್ದಾರೆಯೋ, ಹಾಗೆಯೇ ಕರಾವಳಿಯಲ್ಲಿ ಮಲಯಾಳಂ ಮಾತ್ರ ಮುಸ್ಲಿಮರ ಭಾಷೆ ಎಂದು ನಾವು ತಿಳಿದುಕೊಂಡಿದ್ದೆವು. ಕನ್ನಡ, ತುಳು ಇತ್ಯಾದಿಗಳು ಕಾಫಿರ್ ಭಾಷೆಯಾಗಿರುವುದರಿಂದ ಧಾರ್ಮಿಕವಾಗಿ ಬಳಕೆ ಮಾಡಲು ಅದು ಅನರ್ಹ ಎಂದು ಆ ಕಾಲಘಟ್ಟದಲ್ಲಿ ಮುಸ್ಲಿಮರ ನಡುವೆ ಒಂದು ಬಹುಸಂಖ್ಯಾತ ಗುಂಪು ನಂಬಿತ್ತು. ನಾವು ಈ ಜಮಾತೆ ಇಸ್ಲಾಮಿಗಳನ್ನು, ಮುಕ್ಕಾಲುಗಂಟೆ, ಭೂಗಿ ಎಂದೆಲ್ಲ ತಮಾಷೆ ಮಾಡುತ್ತಿದ್ದೆವು. ಆಗ ಉಪ್ಪಿನಂಗಡಿ ಆಸುಪಾಸಿನಲ್ಲಿ ಒಂದೆರಡು ಬೆರಳೆಣಿಕೆಯ ಕುಟುಂಬ ಜಮಾತೆ ಇಸ್ಲಾಮ್ ಸೇರಿತ್ತು. ಅವರ ಮನೆಯ ಹುಡುಗರು ನಮ್ಮ ಸಹಪಾಠಿಗಳಾಗಿದ್ದರು. ಅವರನ್ನು ಸದಾ ನಾವು ಮುಕ್ಕಾಲು ಗಂಟೆ ಎಂದು ಗೇಲಿ ಮಾಡುತ್ತಿದ್ದೆವು. ಅವರು ಅದನ್ನು ವೌನವಾಗಿ ಸಹಿಸುತ್ತಿದ್ದರು. ಜಮಾತೆ ಇಸ್ಲಾಮಿನ ಜನರನ್ನು ಮುಕ್ಕಾಲು ಗಂಟೆ ಎಂದು ಕರೆಯುವುದಕ್ಕೆ ಒಂದು ಕತೆಯಿದೆ. ಅದನ್ನು ಇಲ್ಲಿ ಬರೆದರೆ ಲೇಖನ ಇನ್ನಷ್ಟು ಉದ್ದವಾದೀತು. 

ಲೈಬ್ರರಿಯಲ್ಲಿ ಸಿಕ್ಕಿದ ಆ ಕುರ್‌ಆನನ್ನು ಅದು ಹೇಗೋ ಧೈರ್ಯ ಮಾಡಿ ಮನೆಗೆ ಕೊಂಡೊಯ್ಯುವ ನಿರ್ಧಾರ ಮಾಡಿದೆ. ಲೈಬ್ರೇರಿಯನ್ ನನಗೆ ಪರಿಚಿತರಾಗಿದ್ದುದರಿಂದ, ಆ ದೊಡ್ಡ ಗ್ರಂಥವನ್ನು ಮನೆಗೆ ಕೊಂಡೊಯ್ಯಲು ಅನುಮತಿ ಕೊಟ್ಟರು. ಬಸ್ಸಿನಲ್ಲೂ ನನಗೆ ನನ್ನ ಕೈಯಲ್ಲಿರುವ ಕುರ್‌ಆನ್‌ನ ಕುರಿತಂತೆ ಒಂದು ರೋಮಾಂಚನ. ನನ್ನ ಗೆಳೆಯರು ನನ್ನ ಕೈಯಲ್ಲಿರುವ ಕನ್ನಡದ ಕುರ್‌ಆನ್ ನೋಡಿದ್ದೇ ಆಘಾತಗೊಂಡರು. ‘‘ಎಂತದಾ? ಇದು ಎಲ್ಲಿ ಸಿಕ್ಕಿತು? ಜಮಾತೆ ಇಸ್ಲಾಮ್ ಸೇರಿದ್ದೀಯ?’ ಹೀಗೆ ವಿಚಾರಣೆಗಳು ಆರಂಭವಾದವು. ಕನ್ನಡದಲ್ಲಿ ಕುರ್‌ಆನ್ ಓದುವ ಆ ಮೊದಲ ಪಾಪ ನನ್ನನ್ನು ನಿಜಕ್ಕೂ ಕಂಪಿಸುವಂತೆ ಮಾಡಿತ್ತು. ಮನೆಯಲ್ಲಿ ಯಾರಿಗೂ ಗೊತ್ತಾಗದಂತೆ ಅದನ್ನು ಬಿಡಿಸಿ ಓದ ತೊಡಗಿದೆ. ಯಾಕೋ ರಾಮಾಯಣ, ಮಹಾಭಾರತದಂತೆ ನೇರವಾಗಿ ಓದಿಸಿಕೊಂಡು ಹೋಗಲಿಲ್ಲ. ಓದುತ್ತಿರುವಂತೆಯೇ ಅದೇನೋ ಒಂದು ಜಾದು ತೆರೆದುಕೊಳ್ಳಬಹುದು ಎಂದುಕೊಂಡವನಿಗೆ ನಿರಾಸೆ. ಮೊತ್ತಮೊದಲು ನಾನು ಪುಟ ಬಿಡಿಸಿದ್ದು, ವಾಕಿಯಾ ಅಧ್ಯಾಯವನ್ನಾಗಿತ್ತು. ತಂದೆ ಪ್ರತಿ ದಿನ ಕೋವಿ ಹಿಡಿದು ಓದಿಸುವಂತಹದ್ದು ಅದರಲ್ಲೇನಿದೆ ಎಂಬ ಕುತೂಹಲ ನನಗೆ. ಅಲ್ಲಿ ಮುಖ್ಯವಾಗಿ ಪರಲೋಕದ ಕುರಿತಂತೆ ವಿವರಗಳಿದ್ದವು. ಸ್ವರ್ಗ, ನರಕಗಳನ್ನು ಅಲ್ಲಿ ವರ್ಣಿಸಲಾಗಿತ್ತು. ನಾನು ಅದಾಗಲೇ ಕಂಠ ಪಾಠ ಮಾಡಿದ್ದ ಯಾಸೀನ್ ಎನ್ನುವ ಅಧ್ಯಾಯವನ್ನೂ ಓದಿದೆ. ಅಲ್ಲಿಯೂ ಭೂಮಿಯಲ್ಲಿ ಅತಿರೇಕ ಎಸಗಿದವರಿಗೆ ಪರಲೋಕದಲ್ಲಿ ಎದುರಾಗುವ ಸ್ಥಿತಿಯನ್ನು ಬಣ್ಣಿಸಲಾಗಿತ್ತು. ತನ್ನನ್ನು ತಾನು ಸ್ವತಂತ್ರನು ಎಂದು ಭ್ರಮಿಸಿಕೊಳ್ಳುವ ಮನುಷ್ಯ ಮಿತಿಯನ್ನು ಎತ್ತಿ ತೋರಿಸಲಾಗಿತ್ತು. ನೀರಿನ ಒಂದು ಹನಿಯಿಂದ ಸಷ್ಟಿಸಲಾಗಿರುವ ಮನುಷ್ಯನ ಕೃತಘ್ನತೆಯ ಬಗ್ಗೆ, ಪರಲೋಕದಲ್ಲಿ ಆತನ ಅಸಹಾಯಕತೆಯ ಕುರಿತಂತೆ ಬರೆಯಲಾಗಿತ್ತು. ಯಾವ ಸಾಲುಗಳೂ ನನ್ನನ್ನು ವಿಶೇಷವಾಗಿ ಸೆಳೆದಿರಲಿಲ್ಲ. ಒಂದೆರಡು ದಿನ ಕುರ್‌ಆನನ್ನು ಬಿಡಿಸಿ, ಇದು ನನಗಲ್ಲ ಎಂದು ಹಾಗೆಯೇ ಲೈಬ್ರೇರಿಯನ್‌ಗೆ ಒಪ್ಪಿಸಿದ್ದೆ.
 

 ಆದರೆ ಇದಾದ ಬಳಿಕ ನಾನು ಲೈಬ್ರರಿಯಲ್ಲೇ ಆಗಾಗ ಆ ಕೃತಿಯ ಪುಟಗಳನ್ನು ಬಿಡಿಸುತ್ತಲೇ ಇದ್ದೆ. ಯಾಕೆಂದರೆ, ಅದನ್ನು ನಾನು ಬದುಕಿನ ಪ್ರತಿ ಘಟ್ಟದಲ್ಲೂ ಮುಖಾಮುಖಿಯಾಗಬೇಕಾಗಿತ್ತು. ಆದುದರಿಂದ ಇಡೀ ಕುರ್‌ಆನನ್ನು ಯಾವ ವಿದ್ವಾಂಸರ ಸಹಾಯವಿಲ್ಲದೇ, ಕೇವಲ ನನ್ನ ಕನ್ನಡದ ಊರುಗೋಲಿನ ಆಸರೆಯಿಂದ ಕುರುಡನಂತೆ ತಡವುತ್ತಾ ಹೋದೆ. ಮುಂದೆ ಬಿಎ ತರಗತಿಯಲ್ಲಿದ್ದಾಗ, ಇಡೀ ಗ್ರಂಥವನ್ನು ನಾನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ. ಕೆಲವು ವ್ಯಾಖ್ಯಾನಗಳನ್ನು ತನ್ನದಾಗಿಸಿಕೊಂಡೆ. ಏಕದೇವ ವಿಶ್ವಾಸ, ಪರಲೋಕದ ಮೇಲಿನ ನಂಬಿಕೆ ಒಬ್ಬ ಶರಣನ ಪ್ರಧಾನ ಲಕ್ಷಣವೆಂದು ಕುರ್‌ಆನ್ ಹೇಳುತ್ತದೆ. ಆ ನಂಬಿಕೆಯನ್ನು ಗಟ್ಟಿಯಾಗಿಸಿಕೊಳ್ಳಲು ನಮಾಝ್‌ನ್ನು ನಿರ್ವಹಿಸಬೇಕು ಎಂದು ಆಜ್ಞಾಪಿಸುತ್ತದೆ. ಇದು ಮೇಲ್ನೋಟಕ್ಕೆ ನಾನು ಕುರ್‌ಆನನ್ನು ಗ್ರಹಿಸಿದ ರೀತಿ. ಮತ್ತೆ ಹಲವು ಬಾರಿ ಕುರ್‌ಆನ್‌ನ ಕನ್ನಡ ಅನುವಾದವನ್ನು ಓದುವ ಸಂದರ್ಭ ಒದಗಿತು. ಕುರ್‌ಆನ್‌ನಲ್ಲಿ ಅತಿ ದೊಡ್ಡ ಅಧ್ಯಾಯದ ಹೆಸರು ‘ಅಲ್ ಬಕರಾ’ ಅಂದರೆ ‘ದನ ಅಥವಾ ಹೋರಿ’ ಎಂದು ಅರ್ಥ. ಹಾಗೆಂದು ಇದು ದನದ ಮಹತ್ವವನ್ನು ಹೇಳುವ ಅಧ್ಯಾಯವೇನೂ ಅಲ್ಲ. ಈ ಅಧ್ಯಾಯ ಬದುಕನ್ನೇ ಕೇಂದ್ರವಾಗಿರಿಸಿಕೊಂಡಿದೆ. ಬದುಕುವ ನೀತಿ ಸಂಹಿತೆಗಳ ತಳಹದಿಯ ಮೇಲೆ ಇಲ್ಲಿನ ಪರಲೋಕದ ಕಲ್ಪನೆಯೂ ನಿಂತಿದೆ. ಅನಾಥರಿಗೆ ವಂಚಿಸಬಾರದು, ಅವರ ಆಸ್ತಿಯನ್ನು ಯಾರು, ಹೇಗೆ ನಿರ್ವಹಿಸಬೇಕು, ಪತ್ನಿಯೊಂದಿಗೆ ಪತಿ ಹೇಗೆ ನಡೆದುಕೊಳ್ಳಬೇಕು, ತಲಾಕ್‌ನ ನಿಯಮಗಳು, ಮೋಸ ರಹಿತ ವ್ಯಾಪಾರ, ಬಡವರ ಮೇಲಿನ ಬಡ್ಡಿಯ ನಿಷೇಧ, ಕಡ್ಡಾಯ ಝಕಾತ್ ಇವೆಲ್ಲ ನೀತಿ ಸಂಹಿತೆಗಳನ್ನು ಒಳಗೊಂಡ ದೊಡ್ಡ ಅಧ್ಯಾಯ ಇದು. ಇವೆಲ್ಲವುಗಳನ್ನೂ ಕುರ್‌ಆನ್ ಸ್ಪಷ್ಟವಾಗಿ ಹೇಳುತ್ತದೆ. ಕುರ್‌ಆನ್ ಎಂದರೆ ಯಾವುದೇ ತತ್ವ ಶಾಸ್ತ್ರಗಳಂತೆ ಜಟಿಲವಾಗಿಲ್ಲ. ‘ತಾನು ಸರಳವಾಗಿದ್ದೇನೆ’ ಎಂದು ಸ್ವಯಂ ಘೋಷಿಸಿಕೊಂಡ ಗ್ರಂಥ ಇದು. ಪರಲೋಕ, ಸ್ವರ್ಗ, ನರಕಗಳೆಲ್ಲವೂ ನಾವು ಬದುಕಿದ ರೀತಿಯ ಆಧಾರದ ಮೇಲೆ ನಿಂತುಕೊಂಡಿದೆ ಎನ್ನುವುದನ್ನು ಸ್ಪಷ್ಟವಾಗಿ ಕುರ್‌ಆನ್ ಪದೇ ಪದೇ ಹೇಳುತ್ತದೆ. ಕುರ್‌ಆನ್ ಬಡವರಿಗೆ ಶ್ರೀಮಂತರು ನೀಡಬೇಕಾದ ಸಂಪತ್ತಿನ ಪಾಲನ್ನು ಸ್ಪಷ್ಟವಾಗಿ ಹೇಳುತ್ತದೆ. ಆದರೆ ಅದು ಒಬ್ಬ ಶರಣ, ನಿರ್ವಹಿಸಬೇಕಾದ ನಮಾಝಿನ ಲೆಕ್ಕವನ್ನು ಎಲ್ಲೂ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ ಎನ್ನೂವುದನ್ನೂ ನಾವು ಗಮನಿಸಬೇಕು. ಈ ಕಾರಣದಿಂದಲೇ ನಮಾಝ್ ಎಷ್ಟು ಬಾರಿ ನಿರ್ವಹಿಸಬೇಕು ಎನ್ನುವ ಕುರಿತಂತೆ ಮುಸ್ಲಿಮರಲ್ಲೇ ಭಿನ್ನಾಭಿಪ್ರಾಯಗಳಿವೆ. ಬದುಕುವ ಕ್ರಮಕ್ಕೆ ನಮಾಝ್ ಪೂರಕವಾಗಿದೆಯೇ ಹೊರತು, ನಮಾಝ್‌ಗೆ ಪೂರಕವಾಗಿ ಬದುಕು ಎಂದು ಕುರ್‌ಆನ್‌ನಲ್ಲಿ ಎಲ್ಲೂ ಪ್ರಸ್ತಾಪವಾಗಿಲ್ಲ. ನಮಾಝ್ ನಿರ್ವಹಿಸುವ ದಿಕ್ಕನ್ನು ಹೇಳುವ ಗ್ರಂಥವೇ ಮತ್ತೆ ಸ್ಪಷ್ಟಪಡಿಸುತ್ತದೆ, ನೀವು ಯಾವ ದಿಕ್ಕಿಗೆ ಮುಖಮಾಡಿ ನಮಾಝ್ ನಿರ್ವಹಿಸಿದರೂ ಅದು ನನ್ನನ್ನೇ ತಲುಪುತ್ತದೆ ಎಂದು. ಕುರ್‌ಆನ್ ಮೋಕ್ಷವನ್ನು ಪಡೆಯುವ ವಿಧಾನವನ್ನು ಚರ್ಚಿಸುವುದಿಲ್ಲ. ಆ ನೆಪದಲ್ಲಿ ಬದುಕುವ ವಿಧಾನವನ್ನು ಚರ್ಚಿಸುತ್ತದೆ. ಬಡ್ಡಿ ನಿಷೇಧ, ಮದ್ಯಪಾನ ನಿಷೇಧ, ಶ್ರೀಮಂತರ ಮೇಲೆ ವಿಧಿಸಿದ ಝಕಾತ್ ತೆರಿಗೆ, ಬಡವರ ಝಕಾತಿನ ಹಕ್ಕು(ಶ್ರೀಮಂತರ ಸಂಪತ್ತಿನಲ್ಲಿ ಪಾಲು), ಹೆಣ್ಣಿಗೆ ಪ್ರಪ್ರಥಮವಾಗಿ ಆಸ್ತಿಯ ಮೇಲೆ ಹಕ್ಕಿನ ಘೋಷಣೆ, ಹೆಣ್ಣಿಗೆ ಮೆಹರ್‌ನ ಹಕ್ಕು, ವಿಧವಾ ವಿವಾಹದ ಹಕ್ಕು, ಶಿಕ್ಷಣದ ಹಕ್ಕು, ಗುಲಾಮರ ಕುರಿತಂತೆ ಅದು ತಳೆದ ಧೋರಣೆ, ಸಹೋದರತೆ, ವಿಗ್ರಹಾರಾಧನೆಯ ನಿರಾಕರಣೆ ಅತ್ಯಾಧುನಿಕವಾದುದು. ಕ್ರಾಂತಿಕಾರಿಯಾದುದು. ಮತ್ತು ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆ ಇಂದಿಗೂ ಅವುಗಳ ಅನುಷ್ಠಾನಕ್ಕೆ ತಿಣುಕಾಡುತ್ತಿದೆ ಎನ್ನುವುದು ಮುಖ್ಯವಾದ ಅಂಶ. 

ಕುರ್‌ಆನ್ ಏಕಕಾಲದಲ್ಲಿ ದಾಖಲಿಸಲ್ಪಟ್ಟ ಗ್ರಂಥ ಅಲ್ಲ ಎನ್ನುವ ಅಂಶವನ್ನು ನಾವು ನೆನಪಿಲ್ಲಿಡಬೇಕು. ಪ್ರವಾದಿಯವರ ಇಸ್ಲಾಂ ಚಳವಳಿಯ 23 ವರ್ಷಗಳ ಅವಧಿಯಲ್ಲಿ, ಬೇರೆ ಬೇರೆ ಸಂಧರ್ಭಗಳಲ್ಲಿ ದಾಖಲಿಸಲ್ಪಟ್ಟ ಸಣ್ಣ, ದೊಡ್ಜ ಅಧ್ಯಾಯಗಳಿರುವ ಗ್ರಂಥ ಇದುು. ಪ್ರವಾದಿಯವರು ಅನಕ್ಷರಸ್ಥರಾಗಿದ್ದುದರಿಂದ ಅವರ ಮೂಲಕ ಬೇರೆ ಬೇರೆ ಸಂಗಾತಿಗಳು ಅದನ್ನು ದಾಖಲಿಸಿದ್ದರು. ಅವುಗಳನ್ನು ಒಟ್ಟುಗೂಡಿಸುವ ಕೆಲಸ ನಡೆದದ್ದು ಪ್ರವಾದಿಯವರನಂತರ ಖಲೀಫ ಅಬೂಬಕರ್ ಸಿದ್ದೀಕ್ ಅವರ ಕಾಲಘಟ್ಟದಲ್ಲಿ. ಝೈದ್‌ಬಿನ್ ಸಾಬಿತ್ ಸಂಗ್ರಹಿಸುವ  ಉಸ್ತುವಾರಿ ವಹಿಸಿಕೊಂಡರು. ಕುರ್‌ಆನ್‌ನ ಒಂದು ಸಮಗ್ರ ಮೂಲಪ್ರತಿ ನಿರ್ಮಾಣವಾದುದು ಇದೇ ಸಂದರ್ಭದಲ್ಲಿ. ಮುಂದೆ ಖಲೀಫಾ ಉಸ್ಮಾನ್ ಅವರ ಕಾಲಘಟ್ಟದಲ್ಲಿ ಅದೇ ಝೈದ್ ಬಿನ್ ಸಾಬಿದ್ ನೇತೃತ್ವದಲ್ಲಿ ಒಂದು ಸಮಿತಿ ರಚನೆಯಾಗಿ, ಮೂಲಪ್ರತಿಯ ನಕಲುಗಳನ್ನು ತಯಾರಿಸಿ, ವಿವಿಧೆಡೆ ಕಳುಹಿಸಿಕೊಡಲಾಯಿತು. ಪ್ರವಾದಿಯವರ ಬದುಕಿನ ಬೇರೆ ಬೇರೆ ಘಟ್ಟಗಳ ಜೊತೆಗೆ ನೇರ ಸಂಬಂಧವನ್ನು ಕುರ್‌ಆನ್ ಅಧ್ಯಾಯ ಹೊಂದಿದೆ. ಅವರ ಬದುಕಿನ ಸಂಕಟಗಳಲ್ಲಿ, ಸವಾಲುಗಳ ಮುಖಾಮುಖಿಯಲ್ಲಿ ಕುರ್‌ಆನ್‌ನ ಬಹುತೇಕ ಅಧ್ಯಾಯಗಳು ಉದ್ಭವವಾಗಿವೆ. ಪ್ರವಾದಿಯವರ ಬದುಕಿನ ತೀರಾ ಖಾಸಗಿ ಸಮಸ್ಯೆಗಳನ್ನು ಪರಿಹರಿಸುವ ಸಂದರ್ಭದಲ್ಲೂ ಕುರ್‌ಆನ್ ನೆರವಾಗಿದೆ. ಅದಕ್ಕೊಂದು ಅತ್ಯುತ್ತಮ ಉದಾಹರಣೆ, ಪ್ರವಾದಿ ಮಹಮ್ಮದ್ ಅವರ ಪತ್ನಿ ಆಯಿಶಾ ಅವರ ವೈಯಕ್ತಿಕ ಬದುಕಿಗೆ ಸಂಬಂಧಪಟ್ಟ ಅಧ್ಯಾಯ. ಹೇಗೆ ರಾಮಾಯಣದಲ್ಲಿ ಸೀತೆಯ ಮೇಲೆ ಅಪವಾದ ಬಂತೋ ಅಂತೆಯೇ ಪ್ರವಾದಿಯ ಪತ್ನಿ ಆಯಿಶಾರ ಮೇಲೂ ಅಂತಹದೇ ವ್ಯಭಿಚಾರದ ಆಪಾದನೆ ಬಂತು. ರಾಮನೇನೋ ಸೀತೆಯನ್ನು ಕಾಡಿಗೆ ಕಳುಹಿಸಿದ. ಆದರೆ ಪ್ರವಾದಿಗೆ ಮಾತ್ರ ಅದು ಸಾಧ್ಯವಿರಲಿಲ್ಲ. ಆದರೆ ಪತ್ನಿಯ ಮೇಲಿನ ಈ ಆಪಾದನೆ ಪ್ರವಾದಿ ಮಹಮ್ಮದರನ್ನು ನಿಜಕ್ಕೂ ಕಂಗೆಡಿಸಿತ್ತು. ಅವರ ಇಡೀ ಬಳಗಕ್ಕೆ  ಈ ಘಟನೆ ಮಂಕು ಕವಿಸಿತ್ತು. ಕೆಲವು ದಿನ ಪ್ರವಾದಿಯವರು ಪತ್ನಿಯ ಜೊತೆ ಮಾತೇ ಆಡಲಿಲ್ಲವಂತೆ. ಇಂತಹ ಹೊತ್ತಿನಲ್ಲೇ, ಒಂದು ಹೆಣ್ಣಿನ ಮೇಲೆ ವ್ಯಭಿಚಾರ ಆಪಾದನೆ ಬಂದಾಗ ಏನು ಮಾಡಬೇಕು ಎನ್ನುವ ಅಧ್ಯಾಯ ‘ಅನ್ನೂರ್’ ಹುಟ್ಟಿಕೊಂಡಿತು. ಒಂದು ಹೆಣ್ಣಿನ ಮೇಲೆ ಸುಳ್ಳಾರೋಪ ಮಾಡುವಾತ, ಅದಕ್ಕೆ ಸಂಬಂಧ ಪಟ್ಟಂತೆ ನಾಲ್ಕು ನಿಜವಾದ ಸಾಕ್ಷಿಯನ್ನು ತರದೇ ಇದ್ದರೆ, ಎಂಭತ್ತು ಛಡಿಯೇಟುಗಳನ್ನು ಹೊಡೆಯಲು ಈ ಅಧ್ಯಾಯ ಆದೇಶಿಸುತ್ತದೆ. ಮಹಿಳೆಯ ಮೇಲೆ ಸುಳ್ಳಾರೋಪಗಳನ್ನು ಹೊರಿಸುವುದನ್ನು ತಡೆಯದವರನ್ನೂ ಈ ಅಧ್ಯಾಯ ಪ್ರಶ್ನಿಸುತ್ತದೆ. ಖಂಡಿಸುತ್ತದೆ. ಈ ಅಧ್ಯಾಯ ಆಯಿಶಾರವರನ್ನು ನಿರಪರಾಧಿಯೆಂದು ಘೋಷಿಸುತ್ತದೆ.

  ಕುರ್‌ಆನ್ ಪ್ರವಾದಿಯವರು ಬದುಕಿದ ಕಾಲದ ಸಂದರ್ಭವನ್ನು ಕೇಂದ್ರೀಕರಿಸಿ ಮಾತನಾಡುವುದರಿಂದ, ಕುರ್‌ಆನ್ ಕಾಲ ಕಾಲಕ್ಕೆ ತನ್ನ ವ್ಯಾಖ್ಯಾನಗಳನ್ನು ಹಿರಿದಾಗಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಒಂದೂವರೆ ಸಾವಿರ ವರ್ಷಗಳ ಹಿಂದಿನ ಕಾಲಕ್ಕೂ ಇಂದಿನ ಕಾಲಕ್ಕೂ ಅಜಗಜಾಂತರವಿರುವುದರಿಂದ, ಕುರ್‌ಆನ್‌ನ ಮಾತುಗಳನ್ನು ಇನ್ನಷ್ಟು ಸಾರ್ವಕಾಲಿಕಗೊಳಿಸಬೇಕು. ನಮ್ಮ ಬದುಕು ವಿಸ್ತಾರಗೊಂಡ ಹಾಗೆಯೇ ಕುರ್‌ಆನ್‌ನ ಅರ್ಥಗಳೂ ವಿಸ್ತಾರಗೊಳ್ಳುತ್ತದೆ. ವಿಸ್ತಾರಗೊಳ್ಳಬೇಕು. ವರ್ತಮಾನಕ್ಕೆ ಇನ್ನಷ್ಟು ಪೂರಕವಾಗಿ, ಅರ್ಥಪೂರ್ಣವಾಗಿ ಆ ವ್ಯಾಖ್ಯಾನವನ್ನು ಅಳವಡಿಸಿಕೊಳ್ಳಬೇಕು. ಮತ್ತು ಅದಕ್ಕೆ ಯಥೇಚ್ಛವಾದ ಅವಕಾಶ ಕುರ್‌ಆನ್‌ನಲ್ಲಿದೆ. ಇಲ್ಲವಾದರೆ, ಅದರ ಎಷ್ಟೋ ಸಾಲುಗಳು ನಮಗೆ ಅಪ್ರಸ್ತುತ ಎನ್ನಿಸುವ ಸಾಧ್ಯತೆಗಳಿವೆ. ಅಥವಾ ಅಂತಹ ಟೀಕೆಗಳನ್ನು ಎದುರಿಸಬೇಕಾದ ಸಂದರ್ಭಗಳಿಗೆ ಮುಸ್ಲಿಮರು ಮುಖಕೊಡಬೇಕಾಗುತ್ತದೆ. 


ಕುರ್‌ಆನ್‌ನ ಓದು ನನ್ನನ್ನು ಅಂತಿಮವಾಗಿ ತಲುಪಿಸಿದ್ದು ‘ಅಲ್ ಮಾಊನ್’ ಅಧ್ಯಾಯದ ಕಡೆಗೆ. ಅಲ್ ಮಾಊನ್ ಎಂದರೆ ಅರ್ಥ ‘ಕನಿಷ್ಟ ನೆರವು’ ಅಥವಾ ಅತ್ಯಗತ್ಯವಾದ ‘ಸಣ್ಣ ನೆರವು’. ಇದೊಂದು ಏಳು ಸಾಲುಗಳ ಒಂದು ಪುಟ್ಟ ಅಧ್ಯಾಯ. ಆದರೆ ಇಡೀ ಕುರ್‌ಆನ್‌ನ ಸಾರ ಸರ್ವಸ್ವವನ್ನೂ ತನ್ನೊಳಗೆ ಇಟ್ಟುಕೊಂಡ ಅಧ್ಯಾಯ. ಪರಲೋಕ ಮತ್ತು ನಮಾಝ್ ಅಂದರೆ ಏನು ಎನ್ನುವುದನ್ನು ಈ ಅಧ್ಯಾಯ ಅತ್ಯಂತ ಸ್ಪಷ್ಟವಾಗಿ ಹೇಳುತ್ತದೆ. ಈ ಅಧ್ಯಾಯದ ವಿಶೇಷವೆಂದರೆ, ನಮಾಝ್ ಮಾಡುವವರನ್ನು ಈ ಅಧ್ಯಾಯ ಶಪಿಸುತ್ತದೆ. ಇನ್ನೊಬ್ಬರಿಗೆ ತೀರಾ ಸಣ್ಣ ನೆರವನ್ನು ನೀಡಲೂ ಹಿಂಜರಿಯುವ ವ್ಯಕ್ತಿ ಮಾಡುವ ನಮಾಝನ್ನು ತೋರಿಕೆಯ ನಮಾಝ್ ಎಂದು ಈ ಅಧ್ಯಾಯ ಹೇಳುತ್ತದೆ. ಅಂತಹ ನಮಾಝನ್ನು ಡಂಭಾಚಾರ ಎಂದು ಕರೆಯುತ್ತಾ, ಆ ನಮಾಝ್ ನಿರ್ವಹಿಸುವವರಿಗೆ ಶಾಪವಿದೆ ಎಂದು ಘೋಷಿಸುತ್ತದೆ. ಹಾಗೆಯೇ ಪರಲೋಕದಲ್ಲಿ ನಂಬಿಕೆ ಎಂದರೆ ಏನು ಎನ್ನುವುದನ್ನೂ ಈ ಪುಟ್ಟ ಅಧ್ಯಾಯ ವಿಷದ ಪಡಿಸುತ್ತದೆ. ಅನಾಥರನ್ನು ದೂರ ದಬ್ಬುವವನು ಮತ್ತು ಬಡವನಿಗೆ ಉಣಿಸುವುದಕ್ಕೆ ಪ್ರೇರಣೆ ನೀಡದವನೇ ಪರಲೋಕವನ್ನು ತಿರಸ್ಕರಿಸುವವನು ಎಂದು ಅಲ್‌ಮಾವೂನ್ ಎನ್ನುವ ಪುಟ್ಟ ಅಧ್ಯಾಯದ ಸಾಲುಗಳು ತೀಕ್ಷ್ಣ ವ್ಯಂಗ್ಯದಿಂದ ಸ್ಪಷ್ಟಪಡಿಸುತ್ತವೆ. ಪರಲೋಕವನ್ನು ನಂಬುವುದೆಂದರೆ ಇನ್ನೇನೂ ಅಲ್ಲ, ಅನಾಥರನ್ನು ಹತ್ತಿರವಾಗಿಸಿಕೊಳ್ಳುವುದು. ಹಾಗೆಯೇ ಬಡವರಿಗೆ, ಹಸಿದವರಿಗೆ ಉಣಿಸುವುದು. ನಮಾಝ್ ಎಂದರೆ ಇನ್ನೊಬ್ಬರಿಗೆ ನೆರವಾಗುವುದು. ಈ ಎರಡೂ ಕೆಲಸವನ್ನು ಮಾಡದವನ ನಮಾಝ್ ಡಂಭಾಚಾರವಾದುದು. ಆತನ ಪರಲೋಕದ ನಂಬಿಕೆಯೂ ಹುಸಿಯಾದುದು. ಅಲ್‌ಮಾಊನ್ ಅಧ್ಯಾಯದ ಈ ಏಳು ಸಾಲುಗಳನ್ನು ಅರ್ಥ ಮಾಡಿಕೊಂಡರೆ ಇಡೀ ಕುರ್‌ಆನ್‌ನ್ನೇ ಅರ್ಥ ಮಾಡಿಕೊಂಡಂತೆ ಎನ್ನುವುದು ನನ್ನ ಈಗಿನ ನಂಬಿಕೆ.

Friday, November 28, 2014

ಆರ್ಯ ಸಮಾಜದ ವಿರುದ್ಧ ಬಂಡೆದ್ದ ಸ್ವಘೋಷಿತ ಸಂತ ರಾಮ್ ಪಾಲ್

ಈ ದೇಶ ಸ್ವ ಘೋಷಿತ ದೇವಮಾನವರಿಂದ ಗಬ್ಬೆದ್ದು ಹೋಗಿದೆ. ಇಲ್ಲಿ ಹಲವು ಮೊಕದ್ದಮೆಗಳನ್ನು, ಆರೋಪಗಳನ್ನು ಹೊತ್ತ ಬಾಬ ರಾಮ ದೇವ್ ನಂತಹ ಕಪಟ ರಾಜಕೀಯ ಸನ್ಯಾಸಿಗಳಿಗೆ ಸರಕಾರದ ವತಿಯಿಂದ ವಿಶೇಷ ಭದ್ರತೆ ನೀಡಲಾಗುತ್ತದೆ. ಅತ್ಯಾಚಾರ ಆರೋಪಿ ಸ್ವಾಮೀಜಿಗಳನ್ನು ರಕ್ಷಿಸಲು ನ್ಯಾಯಾಂಗವನ್ನೆ ದುರ್ಬಳಕೆ ಮಾಡಲಾಗುತ್ತದೆ. ಆದರೆ ಇವುಗಳ ನಡುವೆಯೂ ಹಿಸ್ಸಾರ್ ನ ದೇವ ಮಾನವ ರಾಮ್ ಪಾಲ್ ವಿರುದ್ಧ ಸರಕಾರ ಸೇನೆಯನ್ನು ಬಳಸಿ ಅವನನ್ನು ಜೈಲಿಗೆ ತಳ್ಳಿತು. ಇಂತಹ ದಿಟ್ಟ ನಿಲುವನ್ನು ಸರಕಾರ ತಳೆಯೂದಕ್ಕೆ ಹೇಗೆ ಸಾಧ್ಯವಾಯಿತು? ಈ ಕಾರ್ಯಾಚರಣೆಯ ಹಿಂದೆ ಯಾರಿದ್ದಾರೆ ? ಎನ್ನೋ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ, ನಮಗೆ ಎದುರಾಗೋದು ರಾಮ್ ಪಾಲ್ ಮತ್ತು ಆರೆಸ್ಸೆಸ್ ನಡುವಿನ ಶೀತಲ ಸಮರ. ಆರ್ಯ ಸಮಾಜವನ್ನು ರಾಮ್ ಪಾಲ್ ಎದುರು ಹಾಕಿಕೊಂಡ ಒಂದೇ ಕಾರಣಕ್ಕೆ, ಆತನನ್ನು ಸರಕಾರ ಮಟ್ಟ ಹಾಕಲು ಯೋಚಿಸಿತು. ಆರ್ಯ ಸಮಾಜವನ್ನು ಎದುರು ಹಾಕಿಕೊಳ್ಳದೆ ಆರೆಸ್ಸೆಸ್ ಮೂಗಿನ ನೇರಕ್ಕೆ ತನ್ನ ಆಶ್ರಮವನ್ನು ಬೆಳೆಸಿದ್ದರೆ ರಾಂಪಾಲ್ ಗೆ ಈ ಸ್ಥಿತಿ ಬರುತ್ತಿರಲಿಲ್ಲವೇನೋ? ರಾಮಪಾಲ್ ಮತ್ತು ಆರ್ಯ ಸಮಾಜದ ನಡುವಿನ ತಿಕ್ಕಾಟದ ಕುರಿತಂತೆ ಜಸ್ಪಾಲ್ ಸಿದ್ದು ಅವರು ಬರೆದಿರುವ ಲೇಖನ ನಿಮ್ಮ ಜೊತೆ ಹಂಚಿಕೊಂಡಿದ್ದೇನೆ. ಸ್ವಘೋಷಿತ ದೇವಮಾನವ ರಾಮ್ ಪಾಲ್ ಬಂಧನದ ಇನ್ನೊಂದು ಮುಖವನ್ನು ಈ ಲೇಖನ ಹೇಳುತ್ತದೆ. 
 
ಲೇಖಕ-ಜಸ್ಪಾಲ್ ಸಿದ್ದು

ಸ್ವಘೋಷಿತ ‘ದೇವಮಾನವ’, 63 ವರ್ಷ ವಯಸ್ಸಿನ ರಾಮ್‌ಪಾಲ್‌ನನ್ನು ಹಿಸ್ಸಾರ್‌ನ ಬರ್ವಾಲಾದಲ್ಲಿರುವ ಆತನ ಆಶ್ರಮದಿಂದ ಬಂಧಿಸುವುದರೊಂದಿಗೆ ಎರಡುವಾರಗಳಿಂದ ಭಾರೀಪ್ರಚಾರ ಪಡೆದಿದ್ದ, ಹರ್ಯಾಣ ಪೊಲೀಸರುವ್ ಯವಸ್ಥಿತವಾಗಿ ಹೆಣೆದಿದ್ದ ನಾಟಕಕ್ಕೆಅಂತಿಮ ತೆರೆಬಿದ್ದಿದೆ. ಆದರೆ ಈ ಘಟನೆಯು ಪ್ರಾಂತ್ಯದ ಜನತೆಯ ನಡುವಿನ ಸಾಮಾಜಿಕ ಹಾಗೂ ಧಾರ್ಮಿಕ ಅಂತರವನ್ನು ಇನ್ನಷ್ಟು ವಿಸ್ತರಿಸಿದೆ. ರಾಮ್‌ಪಾಲ್‌ರ ಸತ್‌ಲೋಕ್ ಅಶ್ರಮದಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯು ಐವರು ಮಹಿಳೆಯರು ಹಾಗೂ ಒಂದು ಮಗುವಿನ ಪ್ರಾಣವನ್ನು ಬಲಿಪಡೆದುಕೊಂಡಿದೆ. ಈ ಘಟನೆಯನ್ನು ವರದಿ ಮಾಡುತ್ತಿದ್ದ ಎರಡು ಡಜನ್‌ಗೂ ಅಧಿಕ ಪತ್ರಕರ್ತರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ಕ್ರಿಮಿನಲ್ ಪ್ರಕರಣವೊಂದಕ್ಕೆ ಸಂಬಂಧಿಸಿ ರಾಮ್‌ಪಾಲ್ ನ್ಯಾಯಾಲಯದ ಮುಂದೆ ಹಾಜರಾಗಲು ಪದೇಪದೇ ನಿರಾಕರಿಸಿದ್ದರೆಂಬಕಾರಣಕ್ಕಾಗಿ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ಅವರ ವಿರುದ್ಧ ನ್ಯಾಯಾಂಗ ನಿಂದನೆಯ ಆರೋಪ ಹೊರಿಸಿ, ಅವರ ಬಂಧನಕ್ಕೆ ಆದೇಶಿಸಿತ್ತು.
ಮಾಧ್ಯಮಗಳಲ್ಲಿ  ಪ್ರಕಟವಾದ ವಿಷಯಗಳಿಗಿಂತಲೂ ಹೆಚ್ಚಿನ ಒಳಸುಳಿಗಳು ಬಾರ್ವಾಲಾ ಘಟನೆಯ ಹಿಂದೆ ಅಡಗಿದೆ. ಆರ್ಯಜನಾಂಗೀಯ ಹಾಗೂ ಆರ್ಯೇತರರೆಂದು ಭಾರತೀಯರನ್ನು ವಿಭಜಿಸುವ ಸಂಘಪರಿವಾರದ ಸಿದ್ಧಾಂತವನ್ನು ರಾಮ್‌ಪಾಲ್ ತಿರಸ್ಕರಿಸಿದ್ದರು.ಬರ್ವಾಲಾ ಘಟನೆಯ ಹಿಂದಿರುವ ಮೂಲಕಾರಣಕ್ಕೆ ಕನಿಷ್ಠ ಒಂದೂವರೆ ಶತಮಾನದ (150 ವರ್ಷ) ಇತಿಹಾಸವಿದೆ. ಹರ್ಯಾಣವು ಪ್ರತ್ಯೇಕ ರಾಜ್ಯವಾಗುವ ಮುನ್ನ ಅದು ಪಂಜಾಬ್‌ನ ಒಂದು ಭಾಗವೇ ಆಗಿತ್ತು. ಆ ಕಾಲಘಟ್ಟದಲ್ಲಿ ಪಂಜಾಬ್‌ನಲ್ಲಿ ಆರ್ಯಸಮಾಜವು ಪ್ರಬಲವಾಗಿತ್ತು. ಆರ್ಯಸಮಾಜವು, ಏಕದೇವ ಸಿದ್ಧಾಂತವನ್ನು ಪ್ರತಿಪಾದಿಸುವ ಇತರ ಎಲ್ಲಾಧರ್ಮಗಳನ್ನು ದೂಷಿಸುತ್ತಿತ್ತು. ಆರ್ಯಸಮಾಜದ ಸ್ಥಾಪಕ ದಯಾನಂದಸರಸ್ವತಿ 1870ರಲ್ಲಿ ಪಂಜಾಬ್‌ಗೆ ಆಗಮಿಸಿ, ಆರ್ಯಸಮಾಜದ ಸಿದ್ಧಾಂತಗಳನ್ನು ಪ್ರಚಾರಮಾಡಿದರು. ಅವರು ವೇದ,ಶಾಸಗಳಲ್ಲಿ ನಂಬಿಕೆಯಿಡದ ಜೈನ, ಬೌದ್ಧ ಹಾಗೂ ಸಿಖ್ಖ್ ಮತ್ತಿತರ ಧರ್ಮಗಳನ್ನು ಪ್ರಬಲವಾಗಿ ಖಂಡಿಸುತ್ತಿದ್ದರು. ಈ ಧರ್ಮಗಳು ತಮ್ಮ ವಿಚಾರಗಳನ್ನು ಬೋಧಿಸಲು ಸ್ಥಳೀಯ ಭಾಷೆಗಳನ್ನು ಬಳಸಿರುವುದನ್ನೂ ಅವರು ಹೀಗಳೆದಿದ್ದರು. ವೇದಗಳ ಶ್ರೇಷ್ಠತೆಯನ್ನು ಸಾರುತ್ತಿದ್ದ ದಯಾನಂದ ಸರಸ್ವತಿಯವರು ಸಂಸ್ಕೃತವೊಂದೇ ಅಧ್ಯಾತ್ಮ, ತತ್ವ ಶಾಸ್ತ್ರ ಹಾಗೂ ಉನ್ನತವಾದ ಚಿಂತನೆಗಳ ಪ್ರಸಾರಕ್ಕೆ ಸಮರ್ಥವಾದ ಭಾಷೆಯೆಂದು ಪ್ರತಿಪಾದಿಸುತ್ತಿದ್ದರು. 1875ರಲ್ಲಿ ಸ್ವಾಮಿದಯಾನಂದಸರಸ್ವತಿ ‘ಸತ್ಯಾರ್ಥಪ್ರಕಾಶ’ ಗ್ರಂಥವನ್ನುಪ್ರಕಟಿಸಿದರು.ಈ ಕೃತಿಯಲ್ಲಿ ಅವರು ಗುರುನಾನ್‌ಕರನ್ನು ಕಟುವಾಗಿ ನಿಂದಿಸಿದ್ದಾರೆ ಹಾಗೂ ಆತ ಓರ್ವಧೂರ್ತನೆಂದು ಟೀಕಿಸಿದ್ದಾರೆ. ಸಿಖ್ಖರ ಪರಮಪವಿತ್ರ ಧಾರ್ಮಿಕಗ್ರಂಥ ‘ಗುರುಗ್ರಂಥಸಾಹೇಬ್’ ಸುಳ್ಳುಗಳಿಂದ ಕೂಡಿದೆಯೆಂದು ಅವರು ದೂಷಿಸಿದ್ದರು ಮತ್ತುಸಿಖ್ ಧರ್ಮದ ನಂಬಿಕೆಗಳನ್ನು ಅವರು ಟೀಕಿಸಿದ್ದರು. ದಯಾನಂದ ಅವರಸಿಖ್ಖ್ ಧರ್ಮನಿಂದನೆಯು, ಆರ್ಯಸಮಾಜದ ಬೆಂಬಲಿಗರು ಹಾಗೂಸಿಖ್ಖ್ ಧರ್ಮೀಯರ ನಡುವೆ ಘರ್ಷಣೆಗೆ ಕಾರಣವಾಯಿತು. ಆರ್ಯಸಮಾಜದ ಬೆಂಬಲಿಗರಲ್ಲಿ ಹೆಚ್ಚಿನವರು ಮೇಲ್ಜಾತಿಯ ಹಿಂದುಗಳಾಗಿದ್ದು ಅವರಲ್ಲಿ ಅನೇಕ ಮಂದಿ ಲಾಹೋರ್ ಮತ್ತು ಅಮೃತಸರಗಳಲ್ಲಿ ನೆಲೆಸಿರುವ ಉದ್ಯಮಿಗಳಾಗಿದ್ದರು.ಸಿಖ್ಖರುಹಾಗೂ ಅರ್ಯಸಮಾಜದ ಧಾರ್ಮಿಕಚಿಂತನೆಗಳನ್ನು ಬೆಂಬಲಿಸುತ್ತಿರುವ ಪಂಜಾಬಿ ಹಿಂದೂಗಳ ನಡುವಣ ಸಂಘರ್ಷವು ಈಗಲೂ ಮುಂದುವರಿದಿದೆ. ಇತ್ತೀಚಿನ ಪಂಜಾಬ್ ಸಮಸ್ಯೆ ಹಾಗೂ 1984ರಲ್ಲಿ ನಡೆದಸಿಖ್ ಹತ್ಯಾಕಾಂಡ ಸೇರಿದಂತೆ ವಿವಿಧಕಾಲ ಘಟ್ಟಗಳಲ್ಲಿ ಈ ಸಂಘರ್ಷವು ಅಭಿವ್ಯಕ್ತಗೊಂಡಿದೆ.
ಸಿಖ್ಖರ ಪವಿತ್ರಗ್ರಂಥ ಗುರುಗ್ರಂಥ ಸಾಹೇಬ್, ಸಂತ ಕಬೀರ್ ರಚಿಸಿದ ನೂರಕ್ಕೂ ಅಧಿಕ ದೋಹೆ (ದ್ವಿಪದಿ)ಗಳನ್ನು ಒಳಗೊಂಡಿದೆ. ವೇದಾಂತ ಹಾಗೂ ವೈಷ್ಣವಪಂಥವು ಪ್ರತಿಪಾದಿಸುವ ಜಾತಿವ್ಯವಸ್ಥೆ, ಮಡಿವಂತಿಕೆ ಹಾಗೂ ವೈರಾಗ್ಯವನ್ನು ಗುರುಗ್ರಂಥಸಾಹೇಬ್ ಬಲವಾಗಿ ವಿರೋಧಿಸುತ್ತದೆ.
1877-78ರಲ್ಲಿ ದಯಾನಂದ ಸರಸ್ವತಿ ಪಂಜಾಬ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಿಖ್ಖ್ ಧರ್ಮಕ್ಕೆ ಮತಾಂತರಗೊಂಡಿದ್ದ ಕ್ರೈಸ್ತರನ್ನು ಹಿಂದೂಧರ್ಮಕ್ಕೆ ಸೇರ್ಪಡೆಗೊಳಿಸಲು ಶುದ್ಧೀಕರಣ ಚಳವಳಿಯನ್ನು ಆರಂಭಿಸಿದರು. ಆನಂತರ ಅವರ ಉತ್ತರಾಕಾರಿಗಳು ಬಡಸಿಖ್ಖರನ್ನು ಸಾರ್ವಜನಿಕ ಸಮಾರಂಭಗಳಲ್ಲಿ ನೇರವಾಗಿ ಹಿಂದೂಧರ್ಮಕ್ಕೆ ಮತಾಂತರಿಸುವ ಕಾರ್ಯವನ್ನು ಆರಂಭಿಸಿದರು.ಆ ಮೂಲಕ ಆರ್ಯಸಮಾಜವು ಹಿಂದೂಗಳು ಹಾಗೂ ಸಿಕ್ಖರ ಬಾಂಧವ್ಯಗಳಿಗೆ ಶಾಶ್ವತವಾಗಿ ದ್ವೇಷದಬೀಜಗಳನ್ನು ಬಿತ್ತಿತು.
ರಾಮ್‌ಪಾಲ್‌ರನ್ನು ಅವರಶಿಷ್ಯರುಪೂಜ್ಯಭಾವನೆಯಿಂದಾಗಿ ‘ಸಂತ ರಾಮ್‌ಪಾಲ್’ ಎಂದುಕರೆಯುತ್ತಾರೆ. ಆರ್ಯಸಮಾಜದ ಯಜಮಾನಿಕೆಯ ಧೋರಣೆಯನ್ನು ಪ್ರಶ್ನಿಸುವ ಮೂಲಕ ರಾಮ್‌ಪಾಲ್ ವಿವಾದದ ಕಿಡಿಯನ್ನು ಹೊತ್ತಿಸಿದ್ದಾರೆ. ಆರೆಸ್ಸೆಸ್‌ನ ನಿಕಟಮಿತ್ರನಾದ ಆರ್ಯಸಮಾಜವು ಈಗಹರ್ಯಾಣದಲ್ಲಿ ಮುಖ್ಯಮಂತ್ರಿ ಮೋಹನ್‌ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರಕಾರದ ಮೇಲೆ ನೇರವಾದ ನಿಯಂತ್ರಣವನ್ನು ಹೊಂದಿದೆ. 1947ರಲ್ಲಿ ದೇಶವಿಭಜನೆಯಾದ ಬಳಿಕಆರೆಸ್ಸೆಸ್ ಸಿದ್ಧಾಂತವನ್ನು ವಸ್ತುಶಃ ಆರ್ಯಸಮಾಜವು ಒಪ್ಪಿಕೊಂಡು, ಸಂಘಪರಿವಾರದೊಂದಿಗೆವಿಲೀನಗೊಂಡಿತ್ತು.
25 ವರ್ಷಗಳಕಾಲ ರಾಮ್‌ಪಾಲ್ ಅವರು ಹಿಂದೂ ದೇವತೆಗಳಾದ ಹನುಮಾನ್ ಹಾಗೂ ಶ್ರೀಕೃಷ್ಣನ ಮಹಾಭಕ್ತರಾಗಿದ್ದರು. ಅವರು ತಾಸುಗಟ್ಟಲೆ ದೇವರಧ್ಯಾನದಲ್ಲಿ ನಿರತರಾಗಿರುತ್ತಿದ್ದರು ಹಾಗೂ ಧಾರ್ಮಿಕ ಸಂಪ್ರದಾಯಗಳನ್ನು ಚಾಚೂತಪ್ಪದೆ ಆಚರಿಸುತ್ತಿದ್ದರು. ಆದರೆರಾಮ್‌ಪಾಲ್‌ಗೆ ಅವರು ಹಂಬಲಿಸುತ್ತಿದ್ದ ಅಧ್ಯಾತ್ಮಿಕ ಶಾಂತಿದೊರೆಯಲೇ ಇಲ್ಲ. ಆಗ ಅವರು ಹರ್ಯಾಣದ ನೀರಾವರಿ ಇಲಾಖೆಯಲ್ಲಿ ಜ್ಯೂನಿಯರ್ ಎಂಜಿನಿಯರ್ ಆಗಿದ್ದರು. ಈ ಸಮಯದಲ್ಲಿ ಅವರಿಗೆ 13ನೆ ಶತಮಾನದಲ್ಲಿ ಜೀವಿಸಿದ್ದ ಸಂತ, ಏಕದೇವವಾದವನ್ನು ಬೋಧಿಸಿದ ಕಬೀರನ ಭಕ್ತರಾದ, ಸ್ವಾಮಿರಾಮ್‌ ದೇವಾನಂದ ಅವರ ಪರಿಚಯವಾಯಿತು.
ಸ್ವಾಮಿ ರಾಮದೇವಾನಂದರ ವಿಚಾರಧಾರೆಗಳಿಂದ ರಾಮ್‌ಪಾಲ್ ಪ್ರಭಾವಿತರಾಗಿ, ಅವರ ಶಿಷ್ಯರಾದರು.1994ರಲ್ಲಿ ರಾಮದೇವಾನಂದರು ರಾಮ್‌ಪಾಲ್‌ಗೆ ಕಬೀರನ ಸಂದೇಶಗಳನ್ನು ಪ್ರಚಾರಪಡಿಸುವಂತೆ ಆದೇಶನೀಡಿದ ಹಿನ್ನೆಲೆಯಲ್ಲಿ ಅವರು ಸರಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿದರು.
‘ದೇವಮಾನವ’ನಾಗಿ ರಾಮ್‌ಪಾಲ್‌ ಅವರ ಬಾಳ ಪಯಣವು ರೋಹ್ಟಕ್‌ನಿಂದ 15 ಕಿ.ಮೀ. ದೂರದಲ್ಲಿರುವ ಕರೊಂತಾ ಗ್ರಾಮದಲ್ಲಿರುವ 4 ಎಕರೆ ಜಮೀನಿನಲ್ಲಿ ಆರಂಭಗೊಂಡಿತು.ಈ ಪ್ರದೇಶದಲ್ಲಿಈಗಲೂ ಆರ್ಯಸಮಾಜದ ಪ್ರಭಾವವು ದಟ್ಟವಾಗಿದೆ.
ರಾಮ್‌ಪಾಲ್‌ರ ಬೋಧನೆಗಳಿಂದಾಗಿ ಸಹಜವಾಗಿಯೇ ಈ ಪ್ರದೇಶದಲ್ಲಿಕಬೀರ್ ಪಂಥವು ಚಿಗುರೊಡೆಯ ತೊಡಗಿತು. ಈ ಸನ್ನಿವೇಶದಲ್ಲಿ ರಾಮ್‌ಪಾಲ್‌ರ ಆಶ್ರಮ ಹಾಗೂ ಆರ್ಯ ಸಮಾಜದ ನಡುವೆ ನೇರಸಂಘರ್ಷ ಏರ್ಪಟ್ಟಿತು. ರಾಮ್‌ಪಾಲ್ ಹಾಗೂ ಆರ್ಯ ಸಮಾಜದ ಬೆಂಬಲಿಗರ ನಡುವೆ ಘರ್ಷಣೆಯಲ್ಲಿ 20 ವರ್ಷ ವಯಸ್ಸಿನ ಸೋನುಎಂಬ ಯುವಕ ಹತ್ಯೆಯಾದ. ಈ ಕೊಲೆಪ್ರಕರಣಕ್ಕೆ ಸಂಬಂಧಿಸಿ ರಾಮ್‌ಪಾಲ್ 18 ತಿಂಗಳು ಜೈಲಿನಲ್ಲಿಬೇಕಾಯಿತು.ಈಗಲೂ ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರಿದಿದೆ. 2006ರಲ್ಲಿ ನಡೆದ ಈ ಕೊಲೆಪ್ರಕರಣದ ಬಳಿಕ ರಾಮ್‌ಪಾಲ್‌ ರಕಬೀರ್‌ಪಂಥ ಹಾಗೂಆರ್ಯ ಸಮಾಜದ ಬೆಂಬಲಿಗರ ನಡುವೆ ಹಲವು ಬಾರಿ ಘರ್ಷಣೆಗಳು ನಡೆದಿವೆ.ಈ ಸಂಘರ್ಷಗಳಿಂದಾಗಿ ಪ್ರದೇಶದ ಜನತೆಯ ನಡುವೆ ತೀವ್ರವಾದ ಸಾಮಾಜಿಕ ಹಾಗೂ ಧಾರ್ಮಿಕ ವಿಭಜನೆಉಂಟಾಗಿದೆ.
ವಿವಾಹಿತರಾದ ರಾಮ್‌ಪಾಲ್‌ಗೆ ಇಬ್ಬರುಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಇವರೆಲ್ಲರೂವಿವಾಹವಾಗಿದ್ದಾರೆ. ರಾಮ್‌ಪಾಲ್ ಅವರು ಕಬೀರ್ ಭಜನೆಗಳ ಗಾಯಕರಾಗಿ ಹರ್ಯಾಣದಲ್ಲಿ ಪ್ರವಾಸಮಾಡಿದ ಬಳಿಕ ಜನಪ್ರಿಯರಾದರೆಂದು ಅವರ ಅಧಿಕೃತ ವೆಬ್‌ಸೈಟ್ ಹೇಳಿಕೊಂಡಿದೆ. 1999ರಲ್ಲಿ ಸತ್ಲೋಕ್ ಅಶ್ರಮವನ್ನುಸ್ ಸ್ಥಾಪಿಸಿದ ಬಳಿಕ ರಾಮ್‌ಪಾಲ್‌ರ ಅನುಯಾಯಿಗಳ ಸಂಖ್ಯೆಯು ಹೆಚ್ಚಿತೆಂದು ವೆಬ್‌ಸೈಟ್ ಹೇಳಿದೆ.
ರಾಮ್‌ಪಾಲ್ ಅವರು  ದೇವದೇವತೆಗಳ ಅಸ್ತಿತ್ವವನ್ನು ಪ್ರಶ್ನಿಸಿದ್ದರು ಮತ್ತು ಹಿಂದೂ ಧರ್ಮಗ್ರಂಥಗಳಲ್ಲಿ ಪ್ರತಿಪಾದಿಸುವ ವಿಚಾರಗಳನ್ನು ಟೀಕಿಸುತ್ತಿದ್ದರು.
ತನ್ನ ಎಲ್ಲಾಪ್ರವಚನ ಸಭೆಗಳಲ್ಲಿ ರಾಮ್‌ಪಾಲ್ ಅಕ್ರಮಣಕಾರಿಯಾದ ರೀತಿಯ ಭಾಷೆಯನ್ನು ಬಳಸುತ್ತಿದ್ದರು. ಪುರಾತನಕಾಲದಲ್ಲಿ ಧಾರ್ಮಿಕಗ್ರಂಥಗಳ ವ್ಯಾಖ್ಯಾನವನ್ನು ಮಾಡಿರುವ ಗುರುಗಳು ಹಾಗೂ ಚಿಂತಕರು, ನಿಜವಾದ ಸತ್ಯವನ್ನು ಬಚ್ಚಿಟ್ಟಿದ್ದಾರೆಂದು ಹೇಳುತ್ತಿದ್ದರು. ದಲಿತರು, ಜಾಟ್‌ ಸಮದಾಯಕ್ಕೆ ಸೇರಿರದ ಹಿಂದುಳಿದವರ್ಗಗಳು ಸೇರಿದಂತೆ ಮೇಲ್ಜಾತಿಯಿಂದ ಶೋಷಿತರಾದ ಪಂಗಡಗಳವರು ರಾಮ್‌ಪಾಲ್ ಅವರ ಬೋಧನೆಗಳಿಂದ ಆಕರ್ಷಿತರಾಗಿದ್ದರು.
ಮಾನವರೆಲ್ಲರೂ ಒಂದೇಕುಲಕ್ಕೆ ಸೇರಿದವರು. ಹಿಂದೂ, ಮುಸ್ಲಿಂ, ಸಿಖ್ಖ್, ಕ್ರೈಸ್ತರೆಲ್ಲರೂ ಒಬ್ಬನೇ ಸೃಷ್ಟಿಕರ್ತನ ಮಕ್ಕಳು ಎಂದು ಅವರು ತನ್ನ ವೆಬ್‌ಸೈಟ್‌ನಲ್ಲಿ ಹೇಳಿದ್ದಾರೆ.
ಸಾಂಪ್ರದಾಯಿಕ ವೈದಿಕತತ್ವಜ್ಞಾನದಲ್ಲಿ ನಂಬಿಕೆಯಿರಿಸಿರುವ ಆರ್ಯಸಮಾಜದ ಚಿಂತನೆಗಳನ್ನು ರಾಮ್‌ಪಾಲ್ ಪ್ರಬಲವಾಗಿ ವಿರೋಸಿದ್ದರು. ಆರ್ಯಸಮಾಜದ ಸ್ಥಾಪಕ ದಯಾನಂದಸರಸ್ವತಿಯರ ವಿಚಾರಧಾರೆಗಳನ್ನು ಒಳಗೊಂಡಿರುವ ಗ್ರಂಥವಾದ ಸತ್ಯರ್ಥಪ್ರಕಾಶವನ್ನು 2006ರಲ್ಲಿ ರಾಮ್‌ಪಾಲ್ ಟೀಕಿಸಿದ ಬಳಿಕ, ಆರ್ಯಸಮಾಜದ ಬೆಂಬಲಿಗರು ಅವರ ವಿರುದ್ಧ ಸಂಘರ್ಷಕ್ಕಿಳಿದಿದ್ದರು.
ಸತ್ಯಾರ್ಥಪ್ರಕಾಶ ಗ್ರಂಥವು ಸತ್ಯದಬೆಳಕನ್ನು ಚೆಲ್ಲುವುದಿಲ್ಲ ಬದಲು ಅದು ಮಿಥ್ಯೆಯ ಪ್ರಕಾಶವಾಗಿದೆಯೆಂದು ಎಂದುರಾಮ್‌ಪಾಲ್ ಟೀಕಿಸಿದ್ದುದು ಭಾರೀ ವಿವಾದಕ್ಕೆಕಾರಣವಾಗಿತ್ತು. 2006ರ ಜುಲೈನಲ್ಲಿ ಕರೊಂತಾದ ಆಶ್ರಮದಲ್ಲಿ ನಡೆದ ಘರ್ಷಣೆಯ ಬಳಿಕ ರಾಮ್ ಹಾಗೂ ಅವರ 38 ಬೆಂಬಲಿಗರ ವಿರುದ್ಧ ಕೊಲೆ ಆರೋಪವನ್ನು ಹೊರಿಸಲಾಗಿತ್ತು. 2008ರಲ್ಲಿ ರಾಮ್‌ಪಾಲ್ ಜಾಮೀನಿನಲ್ಲಿ ಬಿಡುಗಡೆಗೊಂಡರು.
ಆದರೂ ಹಿಮ್ಮೆಟ್ಟದ ರಾಮ್‌ಪಾಲ್ ಆನಂತರ ಹರ್ಯಾಣದ ಹಿಸ್ಸಾರ್‌ನಲ್ಲಿ ಇನ್ನೊಂದು ದೇರಾ (ಆಶ್ರಮ) ವನ್ನು ಸ್ಥಾಪಿಸಿದರು. ಇಂದು ಕರೊಂತಾದಲ್ಲಿರುವ ರಾಮ್‌ಪಾಲ್ ಅವರಸತ್ಲೋಕ್ ಅಶ್ರಮವು 71 ಎಕರೆಜಮೀನನ್ನು ಹೊಂದಿದೆ. ಪಂಜಾಬ್, ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದಲ್ಲೂ ರಾಮ್‌ಪಾಲ್ ಸಾವಿರಾರು ಅನುಯಾಯಿಗಳನ್ನು ಹೊಂದಿದ್ದಾರೆ.
ಕಳೆದವಾರ ಹಿಸ್ಸಾರ್ ಆಶ್ರಮದಲ್ಲಿ ರಾಮ್‌ಪಾಲ್ ಬಂಧನವನ್ನು ವಿರೋಧಿಸುತ್ತಿದ್ದ ಅವರ ಬೆಂಬಲಿಗರನ್ನು ಹರ್ಯಾಣ ಪೊಲೀಸರು ವಿದ್ಯುತ್ ಹಾಗೂ ನೀರು ಪೂರೈಕೆಯನ್ನು ಕಡಿತ ಹಾಗೂ ಆಹಾರ ಪೂರೈಕೆ ಸ್ಥಗಿತಗೊಳಿಸುವುದು ಮತ್ತಿತರ ತಂತ್ರಗಾರಿಕೆಯನ್ನು ಅನುಸರಿಸಿ ಆಶ್ರಮದಿಂದ ಹೊರಹೋಗುವಂತೆ ಮಾಡಿದ್ದಾರೆ. ಇನ್ನು ಕೆಲವು ಅನುಯಾಯಿಗಳನ್ನು ಬಸ್‌ನಿಲ್ದಾಣ ಹಾಗೂ ರೈಲು ನಿಲ್ದಾಣಗಳಿಗೆ ಬಲವಂತವಾಗಿ ಎಳೆದೊಯ್ಯಲಾಗಿದೆ.
ಭಾರತೀಯ ಸಮಾಜವು ಜಾತಿಆಧಾರಿತವಾಗಿದ್ದು, ಬದಲಾವಣೆಯನ್ನುಬಯಸುವುದಿಲ್ಲವೆಂಬ ನಂಬಿಕೆಯನ್ನು ಈ ಬೆಳವಣಿಗೆಗಳು ಪ್ರಶ್ನಿಸಿವೆ.
ಕೃಪೆ: ಕೌಂಟರ್ ಕರೆಂಟ್ಸ್. ಆರ್ಗ್

Tuesday, November 25, 2014

ಇನ್ನೊಂದಿಷ್ಟು ಇರುವೆಗಳು

1
ಈ ಜಗತ್ತಿನಲ್ಲಿ ನನಗೆ
ಯಾರನ್ನೂ ಕಳೆದು ಕೊಳ್ಳೋದಕ್ಕಿಲ್ಲ
ಒಂದು ಸಣ್ಣ
ಇರುವೆಯನ್ನೂ ಕೂಡ
2
ಒಂದು ಇರುವೆ
ನನ್ನ ಬಲವಾಗಿ ಕಚ್ಚಿತು
ಯಾವ ಜನ್ಮದ ಸಾಲವೋ
ಈ ಜನ್ಮದಲ್ಲಿ ತೀರಿತು
3
ನದಿಯಲ್ಲಿ ಉಸಿರಿಲ್ಲದೆ
ತೇಲುತ್ತಿರುವ ದೇಹದ ಮೇಲೆ
ಉಸಿರಾಡುತ್ತಾ
ಇರುವೆ
4
ಆನೆಯ ಮೇಲೆ
ಕುಳಿತ ರಾಜ
ಅವನ ಕಿರೀಟದ
ತುತ್ತ ತುದಿಯ ಮೇಲೆ
ಪಾದ ಊರಿ
ಇರುವೆ !
5
ಅವನು ಇರುವೆಯನ್ನು ತುಳಿದ
ನನ್ನ ಪ್ರಾಣ ಇರುವೆಯೊಳಗಿರುವ
ಗುಟ್ಟು
ಅವನಿಗೆ ತಿಳಿದು ಹೋಗಿರಬೇಕು

Monday, November 24, 2014

ದೀಪದ ಸನ್ನೆಗಾಗಿ ಕಾಯುತ್ತಾ....

'ಇರುವೆ ಪ್ರಕಾಶನ' ದ ಮೂಲಕ ನನ್ನ ಎರಡನೇ ಕವನ ಸಂಕಲನ "ಅಮ್ಮ ಹಚ್ಚಿದ ಒಲೆ" ಕೃತಿ ಸಿದ್ಧ ಗೊಳ್ಳುತ್ತಿದೆ. ಕೆಲಸ ಬಹುತೇಕ ಮುಗಿದಿದೆ. ಎಲ್ಲ ಎಣಿಸಿದಂತೆ ಆದರೆ ಡಿಸೆಂಬರ್ ನಲ್ಲಿ ನಿಮ್ಮ ಕೈ ಸೇರಲಿದೆ. ಕೃತಿಯ ಕುರಿತಂತೆ ನನ್ನ ಮೆಚ್ಚಿನ ಕವಿ ಜಯಂತ್ ಕಾಯ್ಕಿಣಿ ಆತ್ಮೀಯವಾಗಿ ಬರೆದಿದ್ದಾರೆ. ಅದನ್ನು ನಿಮ್ಮ ಮುಂದೆ ಹಂಚಿಕೊಂಡಿದ್ದೇನೆ.

ಪ್ರೀತಿಯ ಬಶೀರ್,
ಎಷ್ಟೋ ವರುಷಗಳ ಹಿಂದೆ ಮಾಟುಂಗಾದ ಕನ್ನಡ ಸಂಘದ ಪುಟ್ಟ ಕೋಣೆಯಲ್ಲಿ ಪುಸ್ತಕಗಳ ಕಪಾಟುಗಳ ನಡುವೆ ಪುಸ್ತಕಗಳಂತೆ ಕೂತ ಹತ್ತಿಪ್ಪತ್ತು ಆಪ್ತರ ನಡುವೆ ನೀನು ಕವಿತೆ ಓದಿದ್ದು ನನ್ನ ಉಜ್ವಲ ನೆನಪುಗಳಲ್ಲಿ ಒಂದು. ಭೋರ್ಗರೆಯುವ ಮಳೆಗಾಳಿಯ ನಡುವೆ ಹೆಮ್ಮರವೊಂದರಲ್ಲಿ ಸಿಕ್ಕಿಕೊಂಡು ಒದ್ದಾಡುವ ಗಾಳಿಪಟದ ಚಿತ್ರಣವಿತ್ತು ಅದರಲ್ಲಿ. ಊರಿನಿಂದ ತಂಗಿ ಬರೆದ ಪತ್ರದ ಒಕ್ಕಣಿಕೆಯಿತ್ತು. ನಂತರ ಬಂದ ನಿನ್ನ ಕವನ ಸಂಕಲನಕ್ಕೆ ನಿನ್ನದೇ ತೀವ್ರ ಸಾಲುಗಳನ್ನೇ ಪೋಣಿಸಿ ಹಿನ್ನುಡಿಯ ರೂಪದಲ್ಲಿ ಶುಭಾಶಯ ಹೇಳಿದ್ದೆ. ಅಮ್ಮ ಹಚ್ಚಿದ ಒಲೆೆಯ ಈ ಕವಿತೆಗಳೂ ಸಹ ಅದೇ ಕಾವಿನಲ್ಲಿ ನನ್ನನ್ನು ಆವರಿಸಿಕೊಂಡಿದೆ.
ಅಮ್ಮ ಹಚ್ಚಿದ ಒಲೆಯಿಂದಲೇ ಎಲ್ಲ ಜೀವಗಳ ಪಯಣದ ಶುರುವಾತು. ಅಕ್ಷರ ಕೇಂದ್ರವೇ ಆ ಒಲೆ. ಆ ಕಾವಿನ ವಿಸ್ತರಣೆಯೇ ನಮ್ಮೆಲ್ಲರ ವಿಕಾಸ. ಸ್ನಾನಕ್ಕೆ ನೀರೂ ಅಲ್ಲೇ ಕುದಿಯಬೇಕು, ಒಣಮೀನೂ ಅಲ್ಲೇ ಸುಡಬೇಕು, ಹಬ್ಬದ ಖೀರೂ ಅಲ್ಲೇ ಉಕ್ಕಬೇಕು...ಮಗುವಿನ ಹಾಲುಗೆನ್ನೆಯ ದಿಟ್ಟಿ ಬೊಟ್ಟಿನ ಕಪ್ಪೂ ಅಲ್ಲಿಂದಲೇ ಬರಬೇಕು... ರೂಪಕ ಎಂದು ಕರೆದರೆ ಜುಜುಬಿಯಾಗಿ ಬಿಡಬಹುದಾದ ಒಂದು ಪರಮ ಮೌಲ್ಯ ಈ ಒಲೆ. ಮತ್ತು ಅದರ ಹಿಂದಿನ ಮಸಿ ಹಿಡಿದ ಗೋಡೆ. ಸಾಮಾಜಿಕ ಸಂಬಂಧಗಳೆಲ್ಲ ವ್ಯಸ್ತಗೊಂಡಿರುವ, ವ್ಯಗ್ರಗೊಂಡಿರುವ ಈ ನಮ್ಮ ಸಮಯದಲ್ಲಿ ಎಲ್ಲ ಗಾಯಗಳನ್ನೂ ಮಾಯಿಸಬಲ್ಲ ಏಕಮೇವ ಮದ್ದು ಪ್ರತಿ ಜೀವಿಯಲ್ಲಿರಬೇಕಾದ ತಾಯ್ತನ. ನಿನ್ನ ಈ ಎಲ್ಲ ರಚನೆಗಳೂ ಈ ತಾಯ್ತನವೆಂಬ ಆವರಣಕ್ಕಾಗಿನ ತೀವ್ರ ತುಡಿತಗಳಾಗಿವೆ. ಅವುಗಳ ಅಮೃತ ಹಸ್ತ ಸಹಜೀವಗಳನ್ನು ಸ್ಪರ್ಶಿಸಲು ಬೆಳಕಿನಂತೆ ಚಾಚುತ್ತಿವೆ.
ನಿನ್ನ ವೈಖರಿ ಚತುರೋಕ್ತಿಯದು. ಅನುರಣನಶೀಲವಾದ ಪುಟ್ಟ ಪುಟ್ಟ ಚಿತ್ರಿಕೆಗಳ ಮೂಲಕ ಈ ರಚನೆಗಳು ಜೀವಂತವಾದ ಒಂದು ಆವರಣವನ್ನು ಕಲ್ಪಿಸುತ್ತವೆ.
ಒಳಗೆ ಅಮ್ಮ
ಅವಳ ನಿಟ್ಟುಸಿರಿನಂತೆ

ದೋಸೆ ಹುಯ್ಯುವ ಸದ್ದು....

ಗೋಡೆಯ ಮೇಲೆ ಹೊಸ ಬಟ್ಟೆ
ಹೆಣದಂತೆ ತೂಗುತ್ತಿತ್ತು....


ತೊಟ್ಟು ಕಳಚಿ ಬಿದ್ದ ಕಂಬನಿ...

ಇಂಥ ಚಿತ್ರಗಳು ವಾಚ್ಯಾರ್ಥ ತಿಳಿಯುವ ಮೊದಲೇ ಒಂದು ಆಳವಾದ ಅನುಭವವನ್ನು ಉಕ್ಕಿಸಬಲ್ಲವು. ಅದು ಹಾಗಾದಾಗಲೇ ಕವಿತೆ. ಹಾಗಂತ ಇದು ಹುಸಿ ರಮ್ಯತೆಯಿಂದ ಆಪ್ತವಾಗುವ ಭಾವುಕತೆಯಲ್ಲ. ಏಕೆಂದರೆ ಚಿಂತನೆಯ ಅಥವಾ ವೈಚಾರಿಕತೆಯ ಹಂಗಿಲ್ಲದ ಹುಸಿ ಭಾವುಕತೆಗೆ ಸಾಹಿತ್ಯದಲ್ಲಿ ಸ್ಥಾನವೇ ಇಲ್ಲ. ಮುಂಬಯಿಯ ಇನ್ನೊಬ್ಬ ಕವಿ ಮರಿಯಪ್ಪ ನಾಟೇಕರರ ಒಂದು ಸಾಲಿನಲ್ಲಿ, ನೀರಿನಲ್ಲೆಸೆದ ಕಲ್ಲಿನ ತರಂಗದ ಚಲನೆಯ ವರ್ಣನೆ ಬರುತ್ತದೆ. ಅಂದರೆ ಆಕಾರದಿಂದ ನಿರಾಕಾರದೆಡೆಗೆ ಚಲನೆ. ಒಳ್ಳೆಯ ಬರವಣಿಗೆಯ ಮುಖ್ಯ ಲಕ್ಷಣವೇ ಈ ನಿರಾಕಾರದೆಡೆಗಿನ ಚಲನೆ. ನಿನ್ನ ಸಾರ್ಥಕ ರಚನೆಗಳಲ್ಲಿ ಈ ಗುಣವಿದೆ. ಒಂದು ಚಿತ್ರ, ಒಂದು ಯೋಚನೆ, ಒಂದು ಲಹರಿ ಆಕಾರ ತೊಡುತ್ತಿರುವಾಗಲೇ... ನಿರಾಕಾರದೆಡೆ ಚಲಿಸುವಂಥ ಧ್ವನಿ ತರಂಗ ಅದು. ಅದರ ಆಸ್ವಾದವೇ ಕವಿತೆಯ ಓದು. ಹೊರತು ವ್ಯಾಖ್ಯಾನವಲ್ಲ.
ದೇವರ ಪಾದದ ಬಳಿ
ಚಿಟ್ಟೆಗಳಂತಿರುವ ಮಕ್ಕಳು
ಗಿಡಗಿಡಗಳಿಗೆ ಹಾರಿ
ಕಿತ್ತು ತಂದ ಹೂಗಳು...


ಅವಳ ಮಡಿಲಲ್ಲಿ ಮುಳುಗೇಳುತ್ತಿದ್ದ ಮಗು
ಪಕ್ಕನೆ ಅವಳ ಮುಖ ಪರಚಿಬಿಟ್ಟಿತು......


ಇನ್ನೂ ಹೆರಿಗೆ ನೋವಿಗೆ ತೆರಿಗೆ
ಕಟ್ಟುತ್ತಿರುವ ಅಮ್ಮ.......


ದೇವರೇ..ಇನ್ನು ಮುಂದೆ
ಹೆಸರಿರುವ ಎಲ್ಲ ತಾಯಂದಿರುವ ಬಂಜೆಯರಾಗಲಿ
ಕೊಡುವುದಾದರೆ
ಕಸದ ತೊಟ್ಟಿಗಳಿಗೆ, ಗಟಾರಗಳಿಗೆ, ಬಸ್ ನಿಲ್ದಾಣಗಳಿಗೆ

ಹೆರಿಗೆ ಬೇನೆ ಕೊಡು...

ಎಲ್ಲವನ್ನೂ ಬಲ್ಲ ಜೀವದ ಗೆಳೆಯನಿಗೇ, ತನ್ನ ಗೆಳೆತನದ ಬಗ್ಗೆ ಪುರಾವೆ ಕೊಡಬೇಕಾದ ಪ್ರಸಂಗ ಬಂದರೆ ಅದೆಂಥ ನೋವಿನದಾದೀತು. ಅಂಥ ಅವ್ಯಕ್ತ ಕಳವಳವೇ ನಿನ್ನ ಈ ಕವಿತೆಗಳನ್ನು ನಡುಗುವ ಕೈಗಳಲ್ಲಿ ಒಟ್ಟಿಗೆ ಹಿಡಿದಿವೆ. ಆ...ಲಯದೊಳಗೆ, ಚಿತ್ತಾಲರ ಜೊತೆ ಸಂಜೆ, ಗುಜರಿ ಆಯುವ ಹುಡುಗ, ರಮಝಾನ್ ಪದ್ಯಗಳು, ಸ್ನೇಹ, ಮೂರು ಬೆರಳುಗಳು, ಧ್ಯಾನ, ಅಮ್ಮನ ಕೊಳಲು, ಭಾಮಿಯಾನ್‌ನಲ್ಲಿ ಬುದ್ಧ, ಎರಡು ಮಂಚಗಳು, ಕಳೆದು ಹೋದ ಬಾಲ್ಯ, ಹುಷಾರು, ನಮ್ಮ ಎದೆ, ಮನೆ ಸೇರೂದರೊಳಗೆ, ಹೆಣ್ಣು ಮಲಗೋದು, ಕಾಗೆ ಮರಿಯ ಹಾಡು ಓದಿನಲ್ಲೂ ಬೆಳೆಯಬಲ್ಲ ರಚನೆಗಳಾಗಿವೆ. ಕವಿತೆಯೊಳಗಿನ ಅವ್ಯಕ್ತ, ಓದುಗನ ಅವ್ಯಕ್ತದೊಂದಿಗೆ ಸಜೀವ ಸಂಬಂಧ ಹೊಂದುವಂತಾಗುವ ರಚನೆಗಳಿವು. 

ಮಗುವಿನ ಗಾಢ ನಿದ್ದೆ 
ಅವಳಿಗೆ ಧ್ಯಾನದಂತೆ ಭಾಸವಾಗಿದೆ 
ಮೌನಕ್ಕೆ ತಂದೆಯ ಗತ್ತು...- 
ಇಂಥ ಸಾಲುಗಳು ಒಂದು ರಚನೆಗೆ ನೀಡುವ ಶಾರೀರ ಸೂಕ್ಷ್ಮವಾದದ್ದು. ಈ ಸಾಲುಗಳು ಅನುಭವದಿಂದ ಹೊಮ್ಮಿದಷ್ಟೂ ಚತುರೋಕ್ತಿಗಳು ಚತುರತೆಯಿಂದ ಮೇಲೇಳುತ್ತವೆ.

...ಹಸಿವನ್ನು ಹೂಡಿ ದಿನಸಿ ಅಂಗಡಿ ತೆರೆದ
ಗೆಲುವನ್ನು ಜವಳಿ ಅಂಗಡಿಗೆ ಮಾರಿ ಸೋತ
ಸೋರುವ ಸೂರನ್ನು ದಿಟ್ಟಿಸುತ್ತಾ ಹೆಂಚಿನ ವ್ಯಾಪಾರಕ್ಕಿಳಿದ
ದುಂದುಗಾರ ಅಪ್ಪ...ಸವಕಲು ಮಾತುಗಳನ್ನೇ

ನಾಣ್ಯಗಳಂತೆ ಚಲಾವಣೆಗೆ ಬಿಟ್ಟ
 ಅಮ್ಮನ ಮೌನದ ತಿಜೋರಿಯನ್ನೇ ದೋಚಿದ...
ನೋಡಲು ಸರಳವಾಗಿ ಕಾಣುವ ಇಂತಹ ಸಾಲುಗಳಿಗೆ ತೀವ್ರವಾದ ಕಥನ ವಿಸ್ತಾರವಿದೆ. ಏಕೆಂದರೆ, ಇವು ವರದಿಗಾರ ಕಲೆ ಹಾಕಿದ ವಿವರಗಳಲ್ಲ. ಇವು ಜೀವನವನ್ನು ಹಣ್ಣಾಗಿಸಿದ ಬಾಳಿನ ವಿವರಗಳು. ಕೊನೆಗೂ ನಮ್ಮೆಲ್ಲರ ಕಾಯಕ, ಸವಕಲು ಮಾತುಗಳನ್ನೇ ಉಜ್ಜಿ ಮತ್ತೆ ಚಲಾವಣೆಗೆ ಬಿಡುವುದಲ್ಲವೆ? ಮೌನದ ತಿಜೋರಿಯನ್ನೆಲ್ಲ ದೋಚುವುದಲ್ಲವೆ?
 ನೀನು ಪೂರ್ವನಿಯೋಜಿತ ನಿಲುವನ್ನು ತೆಗೆದುಕೊಂಡು ತುಂಬಾ ನಿಷ್ಠನಾಗಿ ಬರೆದಾಗ ನಿನ್ನ ರಚನೆಗೆ ನಿಬಂಧ ರೂಪ ಬರುತ್ತದೆ.  ಬಲಿ ಹಬ್ಬದ ಬೆಳಗು, ಮೊಬೈಲ್ ಹಾಡು ಅಮ್ಮ ಹಚ್ಚಿದ ಒಲೆ ಈ ಕವಿತೆಗಳಿಗೆ ಭಿನ್ನವಾದ ಉದಾಹರಣೆಗೆ ಹೌದು, ನಿಮ್ಮ ಅನುಮಾನ ಸರಿ, ರಾವಣಾಯನ, ಸಿಹಿಸುದ್ದಿ ಕವಿತೆಗಳಲ್ಲಿ ಒಬ್ಬ ವಕ್ತಾರನಂತೆ ನೀನು ಮಾತನಾಡ ತೊಡಗಿದಾಗೆಲ್ಲ ಕವಿತೆ ತಾನಾಗಿಯೇ ನೀನು ಮಾತಾಡಿಕೋ ಮಾರಾಯ, ನಾನು ಆಮೇಲೆ ಸಿಗ್ತೇನೆ ಎಂದು ಸದ್ದಿಲ್ಲದೆ ಮಾಯವಾಗುತ್ತದೆ. ನಿನ್ನ ಹವಣಿಕೆ ಮೀರಿದ ಕ್ಷಣಗಳಲ್ಲೇ ನಿನ್ನ ಅತ್ಯುತ್ತಮ ಕಾವ್ಯ ಭಾಗಗಳಿವೆ. ಉದಾಹರಣೆ ನನ್ನನ್ನು ತುಂಬಾ ಸೆಳೆದ ಈ ಸಾಲು:

....ಉಂಡ ಎಲೆಯಿಂದ ಬೇರ್ಪಡುವಂತೆ ಅವರು
ಪರಸ್ಪರ ಕಳಚಿಕೊಂಡಾಗ
ಅವನ ಮುಷ್ಟಿಯಿಂದ ಮೊಲೆಯನ್ನು ಬಿಡಿಸಿಕೊಂಡ ಅವಳು

ಕಳಚಿಟ್ಟ ಇಸ್ತ್ರಿಪೆಟ್ಟಿಗೆ ತುಂಬಾ ಮತ್ತೆ ಸುರಿವಳು ಕೆಂಡ....

ಎವೆ ಕಳಚಿ, ಮುಷ್ಟಿ, ಮೊಲೆ, ಇಸ್ತ್ರಿ ಪೆಟ್ಟಿಗೆ, ಸುರಿವ ಕೆಂಡ-ಇವೆಲ್ಲ ತಂತಮ್ಮ ವೈಯಕ್ತಿಕ ಧ್ವನಿಯನ್ನಿಟ್ಟುಕೊಂಡೇ ಒಟ್ಟಿಗೇ ಸಾಧಿಸುವ ಪರಿಣಾಮ ವಿಶಿಷ್ಟ. ನಿನ್ನ ಕವಿತೆಯ ಉಸಿರಾಟ ಇಂಥಭಾಗಗಳಲ್ಲೇ ಇದೆ. ಇವೆಲ್ಲ ಹವಣಿಕೆಯಿಂದ, ಆಲೋಚನೆಯಿಂದ, ಎಚ್ಚರದ ವಿನ್ಯಾಸದಿಂದ ಆಗುವಂತಹದಲ್ಲ. ಗೊತ್ತಿರುವ ಬಿಡಿಗಳ ಮೂಲಕ ಗೊತ್ತಿರದ ಇಡಿಗಾಗಿ ಒದ್ದಾಡುವಾಗಲೇ ಆಗುವಂಥದ್ದು.

....ಎಳೆ ಕಂಬನಿಯಂತಿರುವ ಆ ನಾಕು ಸಾಲುಗಳು...
....ಫ್ರಿಜ್ಜಿನಲ್ಲಿಟ್ಟ ತರಕಾರಿಯಂತೆ 

ಅಕ್ಕಪಕ್ಕ ಕುಳಿತ ಕಣ್ಣುಗಳು....
ಇಂತಹ ಬಿಡಿಗಳು ಆಯಾ ಕ್ಷಣದಲ್ಲಿ ತಾಜಾ ಅನಿಸುತ್ತಾ ಬೇರೊಂದು ಆಳವಾದ ವ್ಯಾಪಕವಾದ ಅನುಭವದೆಡೆ ನಮ್ಮನ್ನು ನೂಕಿದಾಗಲೇ ಅವುಗಳ ಸಾರ್ಥಕತೆ. ನಮ್ಮ ಅಕ್ಕರೆಯ ಮುಂಬಯಿಯ ಹಿರಿ ಕವಿ ವಿ.ಜಿ. ಭಟ್ಟರ ಒಂದು ಸಾಲು ಹೀಗಿದೆ- ಅಮರ ಲೋಕದ ಕಿಡಕಿಗಳಂಥ ಕಣ್ಣುಗಳನ್ನು ಕಂಡೆನು...  ಪ್ರಪಂಚದ ಎಲ್ಲ ಕವಿತೆಗಳೂ ತಮ್ಮದೇ ರೀತಿಯಲ್ಲಿ ತಮ್ಮದೇ ಆದ ಅಮರಲೋಕವೊಂದಕ್ಕೆ ತೆರೆದ ಕಿಡಕಿಗಳೇ ಆಗಿವೆ. ಅಂಥ, ನಮ್ಮೆಲ್ಲರನ್ನೂ ಉಳಿಸುವಂತಹ, ಬೆಳೆಸುವಂಥ ಗಹನವಾದ, ಘನವಾದ, ಅಮರಲೋಕವೊಂದು ನಿನ್ನ ಮನದೊಳಗೇ ನಿನ್ನ ಬರವಿಗಾಗಿ ಕಾದಿದೆ. ಈ ಪೇಸ್‌ಬುಕ್ಕು, ಟ್ವಿಟ್ಟರು, ಒಂದೊಂದು ಸಾಲನ್ನು ಎರಡೆರಡು ಸಲ ಓದಿ ಶ್ರುತಿ ಕಳೆದುಕೊಂಡಿರುವ ನೀರಸ ಕರ್ಕಶಗೊಂಡಿರುವ ಕವಿಗೋಷ್ಠಿಗಳು, ಬಿಡುಗಡೆ ಸಮಾರಂಭದ ರೂಪಕರು...ಇಂಥದೆಲ್ಲ ನರ್ತನವನ್ನು ಚೂರು ಬದಿಗಿಟ್ಟು ನಾವೆಲ್ಲ ಖಾಲಿ ಕಾಗದದ ಅಸೀಮ ಚಡಪಡಿಕೆಗೆ ಶರಣಾಗಬೇಕಾಗಿದೆ. ಯಾವ ದೀಪದ ಸನ್ನೆಗಾಗಿಯೂ ಕಾಯದೆ...ಅಮ್ಮನ ಒಲೆಯೆದುರಿನ ಊದುಗೊಳವೆಯ ನಾದದ ಜಾಡಿನಲ್ಲೇ, ಅಶರೀರದ ಅಂಚಿನಲ್ಲಿರುವ ನಿರಾಕಾರದ ಎಟುಕಿನಲ್ಲಿರುವ ಆವರಣದೆಡೆಗೆ ಚಲಿಸಬೇಕಾಗಿದೆ.

ಇಬ್ಬರೆಂದರೆ ಬರೇ ಇಬ್ಬರು
ನಾನು ಮತ್ತು ಅವರು
ಹಾಯಿ ದೋಣಿಯಂತೆ ತೇಲುತ್ತಿರುವ
ಕತೆಯ ಸಾಲೊಂದನ್ನು ಏರಿ ಕುಳಿತಿದ್ದೇವೆ

ಮೊರೆವ ಎದೆಯೊಳಗೆ
ಭೋರ್ಗರೆವ ಅಕ್ಷರದ ಕಡಲು
ಕತೆಗಾರ ನನ್ನ ಪಕ್ಕದಲ್ಲೇ ಅಂಬಿಗನಂತೆ
ಹುಟ್ಟು ಹಾಕುತ್ತಿರುವಾಗ
ನನಗೇಕೆ ಮುಳುಗುವ ಚಿಂತೆ...

ನಿನ್ನ ಈ ಸರಳ ಸಾಲುಗಳಲ್ಲಿರುವ ಅಭಯ, ಸಮಾಧಾನ ಅದ್ವಿತೀಯವಾದದ್ದು. ಹೆಗಲ ಮೇಲೆ ಆಧಾರಕ್ಕೆಂದು ಇಟ್ಟಿದ್ದ ಸೋದರನ ಹೂವಿನ ಎಸಳಿನಷ್ಟೇ ಭಾರವಾದ ಮೂರು ಬೆರಳಿನಷ್ಟೇ ಭಂಗುರವಾದದ್ದು.
  ಇದನ್ನು ಜೋರು ಮಳೆಯಲ್ಲಿ ಗೋಕರ್ಣದಲ್ಲಿ ಬರೆಯುತ್ತಿದ್ದೇನೆ. ಮಳೆಯಲ್ಲಿ ಭೋರ್ಗರೆವ ಸಮುದ್ರದಲ್ಲಿ ಉರುವಲು ಒಲೆ ಸೌದೆಗಾಗಿ ಮನುಜಾಕೃತಿಗಳು ಯುದ್ಧೋಪಾದಿಯಲ್ಲಿ, ಉಕ್ಕುವ ತೆರೆಗಳೊಂದಿಗೆ ಸೆಣಸಾಡುತ್ತಿವೆ. ತಮ್ಮ ತಮ್ಮ ಒಲೆಗಳನ್ನು ಬೆಚ್ಚಗಿಡಲು ನಡೆಯುತ್ತಿರುವ ಒಂದು ಮಹಾ ಜಲ ಯಜ್ಞ ಇದು. ಇದೇ ಮಳೆ ಧಾರಾವಿಯಲ್ಲೂ ಬೀಳುತ್ತಿದೆ. ಅಲ್ಲಿ ಮಳೆಯಿಂದ ಒಲೆಯನ್ನು ಬಚಾವು ಮಾಡಲು ಅಮ್ಮಂದಿರು ಹೋರಾಡುತ್ತಿದ್ದಾರೆ. ಎಲ್ಲ ರಾಜಕೀಯ ಸಮರ್ಪಕತೆಯ ಮೂತಿಗೆ ತಿವಿಯುವಂಥ ಸಮರ ಇದು. ಮಾನವೀಯತೆಬಗ್ಗೆ ಚಂದವಾಗಿ ಎಲ್ಲರೂ ಮಾತಾಡಿದ್ದೇವೆ. ಚಿತ್ತಾಲರು ಪದೇ ಪದೇ ಹೇಳುವ ಮಾನವಂತಿಕೆ ನಮ್ಮೆಲ್ಲರ ಪದಯಾತ್ರೆಯ ಜೀವಾಳವಾಗಲಿ ಎಂದು ಹಾರೈಸೋಣ.

ವಾತ್ಸಲ್ಯಪೂರ್ವಕ,
ಜಯಂತ ಕಾಯ್ಕಿಣಿ


Sunday, November 23, 2014

ಇಂಟರ್‌ಸ್ಟೆಲ್ಲಾರ್: ಅಂತರಿಕ್ಷದಲ್ಲಿ ಭಾವನೆಗಳ ತಾಕಲಾಟ...

ಭೂಮಿ ಮರಣ ಶಯ್ಯೆಯಲ್ಲಿ ಮಲಗಿದೆ. ಮನುಷ್ಯನ ಎಲ್ಲ ತಂತ್ರಜ್ಞಾನಗಳು, ಯಂತ್ರಗಳು ಅಸಹಾಯಕವಾಗಿವೆ. ಎಲ್ಲಿ ನೋಡಿದರಲ್ಲಿ ಧೂಳು. ಮನುಷ್ಯನಿಗೆ ಬೇಕಾಗಿರುವುದು ಕೇವಲ ಆಹಾರ ಮಾತ್ರ. ಅದಕ್ಕಾಗಿ ಕೃಷಿಕರನ್ನಷ್ಟೇ ಭೂಮಿ ತನ್ನ ಕಟ್ಟ ಕಡೆಯ ದಿನಗಳಲ್ಲಿ ನಂಬಿ ಕೊಂಡಿದೆ. ಎಂಜಿನಿಯರ್‌ಗಳು ಅದಕ್ಕೆ ಬೇಡವಾಗಿದೆ. ವ್ಯವಸ್ಥೆಗೆ  ಅತ್ಯುತ್ತಮ ಕೃಷಿಕರು ಬೇಕು. ರೋಗ ಪೀಡಿತ ಭೂಮಿಯ ಒಡಲೊಳಗಿಂದ ಆಹಾರ ಬೆಳೆಗಳನ್ನು ಹೊರತೆಗೆಯುವ ಅನಕ್ಷರಸ್ಥ ರೈತರು ಮಾತ್ರ ಅದರ ತಕ್ಷಣದ ಆವಶ್ಯಕತೆ. ಇಂತಹದೊಂದು ಸಂದರ್ಭವನ್ನಿಟ್ಟುಕೊಂಡು ‘ಇಂಟರ್‌ಸ್ಟೆಲ್ಲರ್’ ಸಿನೆಮಾದ ಕತಾವಸ್ತುವನ್ನು ಹೆಣೆಯಲಾಗಿದೆ. 

ಇಂತಹ ಹೊತ್ತಿನಲ್ಲಿ ತಂತ್ರಜ್ಞಾನದ ಕುರಿತಂತೆ ಇನ್ನೂ ಭರವಸೆಯನ್ನು, ಆಸಕ್ತಿಯನ್ನು ಉಳಿಸಿಕೊಂಡಿರುವ ಕೂಪರ್(ಮಕಾನಹೆ) ಮತ್ತು ಆತನ ಮಗಳು ಮರ್ಫ್(ಫಾಯ್) ಅಪ್ರಸ್ತುತರಾಗಿ ಬದುಕುತ್ತಿದ್ದಾರೆ. ಆದರೆ ಅವರ ಹುಡುಕಾಟ ಅವರ ಬದುಕಿನಲ್ಲಿ ಹೊಸ ಜಗತ್ತೊಂದನ್ನು ತೆರೆಯುತ್ತದೆ. ಕೂಪರ್‌ಗೆ ಅನಿರೀಕ್ಷಿತವಾಗಿ ಬಾಹ್ಯಾಕಾಶ ಯಾನದ ಅವಕಾಶವನ್ನು ತೆರೆದು ಕೊಡುತ್ತದೆ. ಇದೇ ಸಂದರ್ಭದಲ್ಲಿ ಬಾಲಕಿ ಮರ್ಫ್‌ಗೆ ಸಿಗುವ ಅಗೋಚರ ಸಂಕೇತಗಳು ಭೂಮಿಯ ಅಳಿದುಳಿದ ಭರವಸೆಯಾಗಿ ಕಾಣಿಸಿಕೊಳ್ಳುತ್ತದೆ. ಒಂದೆಡೆ ಹೊಸ ಮನುಕುಲದ ಉಳಿವಿಗಾಗಿ ಹೊಸ ಗ್ರಹವನ್ನು ಹುಡುಕುತ್ತಾ ಗ್ಯಾಲಕ್ಸಿಯಾಚೆಗೆ ಹೊರಟಿರುವ ಗಗನಯಾತ್ರಿಗಳ ತಂಡ. ಮಗದೊಂದೆಡೆ ತಂದೆಯನ್ನು ಹೋಗದಂತೆ ತಡೆಯುವಲ್ಲಿ ವಿಫಲಳಾಗಿ, ಆತನ ನಿರೀಕ್ಷೆಯಲ್ಲಿ ಹೊಸತೊಂದರ ಹುಡುಕಾಟದಲ್ಲಿರುವ ಮಗಳು. ಇವರಿಬ್ಬರ ನಡುವಿನ ಭಾವನಾತ್ಮಕ ಸಂಬಂಧವನ್ನು ತೆರೆದಿಡುವ ಚಿತ್ರವಾಗಿ ಇಂಟರ್‌ಸ್ಟೆಲ್ಲರ್ ನಮ್ಮನ್ನು ಸೆಳೆಯುತ್ತದೆ. 

ಇತ್ತೀಚೆಗೆ ಬಾಹ್ಯಾಕಾಶಯಾನಕ್ಕೆ ಸಂಬಂಧಿಸಿದ ಚಿತ್ರಗಳು ಸಾಲು ಸಾಲಾಗಿ ಬರುತ್ತಿವೆ. ಗ್ರಾವಿಟಿಯಂತೂ ಅಂತಹ ಉತ್ತಮ ಚಿತ್ರಗಳಲ್ಲಿ ಒಂದು. ಇಂಟರ್‌ಸ್ಟೆಲ್ಲರ್ ಚಿತ್ರ ಅಂತಹ ಹಲವು ಬಾಹ್ಯಾಕಾಶ ಸಂಬಂಧಿ ಚಿತ್ರಗಳ ಕೊಂಡಿಯನ್ನು ತನ್ನೊಳಗೆ ಇರಿಸಿಕೊಂಡಿದೆ. ಈ ಹಿಂದೆ ತೆರೆಕಂಡ ವಿವಿಧ ವೈಜ್ಞಾನಿಕ ಚಿತ್ರಗಳನ್ನು ಒಟ್ಟಿಗೆ ನೋಡಿದ ಅನುಭವವನ್ನು ‘ಇಂಟರ್‌ಸ್ಟೆಲ್ಲರ್’ ನೀಡುತ್ತದೆ.ಈ ಚಿತ್ರದಲ್ಲಿ ‘2001: ಎ ಸ್ಪೇಸ್ ಒಡೆಸ್ಸಿ ’ಚಿತ್ರದ ದಟ್ಟ ಛಾಯೆ ಕಾಣುತ್ತದೆ. ಜೊತೆಜೊತೆಗೆ ಕಂಟ್ಯಾಕ್ಟ್, ಗ್ರಾವಿಟಿ ಚಿತ್ರಗಳೂ ನೆನಪಾಗುತ್ತವೆ. ಇಂಟರ್‌ಸ್ಟೆಲ್ಲರ್ ಮೂಲಕ ನಿರ್ದೇಶಕ ನೊಲಾನ್ ಪ್ರೇಕ್ಷಕರಲ್ಲಿ ಬಾಹ್ಯಾಕಾಶದ ಬಗ್ಗೆ ಕುತೂಹಲವನ್ನು ಕೆರಳಿಸುವಲ್ಲಿ ಸಫಲರಾಗಿದ್ದಾರೆ. ಒಂದು ವೈಜ್ಞಾನಿಕ ಕಥಾಪ್ರಧಾನ ಚಿತ್ರದಲ್ಲೂ ಮಾನವೀಯ ಸಂಬಂಧಗಳನ್ನು ಎಷ್ಟು ಸುಂದರ ವಾಗಿ ಹಾಗೂ ನವಿರಾಗಿ ತೋರಿಸ ಬಹುದೆಂಬುದನ್ನು ಅವರು ಈ ಚಿತ್ರದಲ್ಲಿ ಸಾಬೀತುಪಡಿಸಿದ್ದಾರೆ.ಅತ್ಯದ್ಭುತ ದೃಶ್ಯವೈಭವದ ಜೊತೆ ಸಮರ್ಥ ಕತೆ, ಪ್ರತಿಭಾವಂತ ತಾರೆಯರ ಭಾವಪೂರ್ಣ ಅಭಿನಯ ಇವೆಲ್ಲವೂ ಇಂಟರ್‌ಸ್ಟೆಲ್ಲರ್‌ನ್ನು, ಒಂದು ನೋಡಬಹುದಾದ ಚಿತ್ರವಾಗಿ ಪರಿವರ್ತಿಸಿದೆ. ಇಡೀ ಚಿತ್ರದ ಕುತೂಹಲಕಾರಿ ಘಟ್ಟವೆಂದರೆ, ಭೂಮಿಯಾಚೆಗಿರುವ ತಂದೆ ಮತ್ತೆ ಮಗಳನ್ನು ಸೇರುತ್ತಾನೆಯೋ ಇಲ್ಲವೋ ಎನ್ನುವುದು. ಚಿತ್ರದ ಕ್ಲೈಮಾಕ್ಸ್ ಕೂಡ ಹೃದಯಂಗಮವಾಗಿದೆ. ಮನುಷ್ಯ ಸಂಬಂಧಗಳನ್ನು ಎತ್ತಿ ಹಿಡಿಯುವಂತಿದೆ.

 ಆದರೆ ಇಡೀ ಭೂಮಿಯನ್ನು ತಂತ್ರಜ್ಞಾನದ ಅಡಿಯಾಳನ್ನಾಗಿ ಈ ಚಿತ್ರ ನೋಡುತ್ತದೆ. ಕೂಪರ್‌ನನ್ನು ಈ ತಂತ್ರಜ್ಞಾನದ ಪ್ರತಿನಿಧಿಯಾಗಿ ವೈಭವೀಕರಿಸುತ್ತದೆಯೋ ಎಂಬ ಅತೃಪ್ತಿ ಕಾಡುತ್ತದೆ. ಕೃಷಿಯೇ ಅಂತಿಮವೆನ್ನುವ ಸ್ಥಿತಿಯನ್ನು ಒಪ್ಪಿಕೊಳ್ಳುವ ದಿನಗಳ ಕಡೆಗೆ ವಾಲುವ ಭೂಮಿಯನ್ನು ಇನ್ನಷ್ಟು ಮಾನವೀಯ ನೆಲೆಯಲ್ಲಿ ಕಟ್ಟಿಕೊಡುವ ಅವಕಾಶ ನಿರ್ದೇಶಕನಿಗಿತ್ತು. ಆದರೆ ಚಿತ್ರದ ಗುರಿ ಬಾಹ್ಯಾಕಾಶವೇ ಆಗಿರುವುದರಿಂದ ಭೂಮಿಯ ಕೆಲವು ವಾಸ್ತವಗಳನ್ನು ನಿರ್ದೇಶಕರು ಉದ್ದೇಶಪೂರ್ವಕವಾಗಿ ಬದಿಗೆ ಸರಿಸುತ್ತಾರೆ ಎನ್ನಿಸುತ್ತದೆ.  ಚಿತ್ರದ ಮಿತಿಯೂ ಇದೇ ಆಗಿದೆ. ಅನ್ನದಾತ ರೈತರು ಮುಖ್ಯ ಎನ್ನುವುದನ್ನು ಭೂಮಿ ಒಪ್ಪಿಕೊಳ್ಳುವ ಸಂದರ್ಭವನ್ನು ಭೂಮಿಯ ಸೋಲು ಎಂದು ನಿರ್ದೇಶಕರು ಚಿತ್ರಿಸಲು ಹೊರಟಿರುವುದು ಚಿತ್ರದ ವೈಫಲ್ಯವೂ ಆಗಿದೆ.

 ನಾಸಾದ ಮಾಜಿ ಪೈಲಟ್ ಆಗಿ ಕೂಪರ್ ಪಾತ್ರದಲ್ಲಿ ಮ್ಯಾಕ್ ಹೃದಯಂಗಮವಾಗಿ ನಟಿಸಿದ್ದಾರೆ. ಮರ್ಫ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಫಾಯ್ ಈ ಚಿತ್ರದ ಇನ್ನೊಂದು ಹೆಗ್ಗಳಿಕೆ. ಕೂಪರ್ ಜೊತೆಗಿರುವ ಗಗನಯಾತ್ರಿಕರಾದ ಅಮೆಲಿಯಾ (ಹ್ಯಾತ್‌ವೆ), ರೊಮಿಲ್ಲಿ (ಗ್ಯಾಸಿ), ಡೊಯ್ಲಾ (ಬೆಂಟ್ಲೆ) ಕೂಡ ತಮ್ಮ ಪಾತ್ರಕ್ಕೆ ನ್ಯಾಯವನ್ನು ಕೊಟ್ಟಿದ್ದಾರೆ. 169 ನಿಮಿಷಗಳ ಈ ಚಿತ್ರವು ನಿಧಾನಗತಿಯಲ್ಲಿ ಸಾಗುತ್ತಿದೆಯೇನೋ ಎಂದು ಅಲ್ಲಲ್ಲಿ ಅನ್ನಿಸುತ್ತದೆ. ಚಿತ್ರದಲ್ಲಿ ಅದ್ಬುತವಾದ ವಿಶ್ಯುವಲ್ ಎಫೆಕ್ಟ್ (ದೃಶ್ಯ ಪರಿಣಾಮ)ಗಳಿವೆ. ಐಮ್ಯಾಕ್ಸ್ ತಂತ್ರಜ್ಞಾನದ ಪರದೆಯಲ್ಲಿ ಇಂಟರ್‌ಸ್ಟೆಲ್ಲರ್ ವೀಕ್ಷಿಸಿದಲ್ಲಿ ಅದರ ಅನುಭವವೇ ಬೇರೆ. ಹ್ಯಾನ್ಸ್‌ಝಿಮ್ಮರ್ ಅವರ ಹಿನ್ನೆಲೆ ಸಂಗೀತ, ಚಿತ್ರಕ್ಕೆ ವಿಶಿಷ್ಟವಾದ ಮೆರುಗನ್ನು ನೀಡುತ್ತದೆ. ಒಮ್ಮೆ ನೋಡಲೇ ಬೇಕಾದ ಚಿತ್ರ ಇಂಟರ್‌ಸ್ಟೆಲ್ಲರ್.

Saturday, November 22, 2014

ಅಮ್ಮ ಹೇಳಿದ ಕಥೆ


ಇದು ತುಂಬಾ ವರ್ಷಗಳ ಹಿಂದೆ ನನ್ನ ತಾಯಿ ನನಗೆ ಹೇಳಿದ ಕತೆ ಇದು.
ಅಂದು ಸಂಜೆ ಶಾಲೆ ಬಿಟ್ಟು ಮನೆಗೆ ಬಂದಿದ್ದೆ. ಅಮ್ಮ ಎಂದಿನಂತೆ ನನಗಾಗಿ ಬಾಗಿಲ ಬಳಿ ಕಾದು ಕುಳಿತಿರಲಿಲ್ಲ. ಅಮ್ಮನನ್ನು ಹುಡುಕುತ್ತಾ ಒಳ ಮನೆಗೆ ಹೋದೆ. ಅಲ್ಲೂ ಇಲ್ಲ. ಅಡುಗೆ ಮನೆಯಲ್ಲೂ ಇಲ್ಲ. 
ಭಯವಾಯಿತು. "ಅಮ್ಮ" ಎಂದು ಕರೆದೆ. ಉತ್ತರವೇ ಇಲ್ಲ. 
ಮನೆಯ ಹಿತ್ತಲಲ್ಲಿ ನೋಡಿದರೆ ಬಟ್ಟೆ ಒಗೆಯುವ ಕಲ್ಲಿನ ಮೇಲೆ ಕಡೆದಿಟ್ಟ ಕಲ್ಲಿನಂತೆ ಕುಳಿತಿದ್ದಳು. 
"ಅಮ್ಮ" ಎಂದು ಕರೆದೆ. ಒಮ್ಮೆಲೇ ಬೆಚ್ಚಿ ನನ್ನ ಕಡೆ ನೋಡಿದಳು. 
ಅವಳ ಕಣ್ಣು ಒದ್ದೆಯಾಗಿತ್ತು. ಅಥವಾ ನನಗೆ ಹಾಗೆ ಕಂಡಿರ ಬೇಕು. ಅಂದು ರಾತ್ರಿ ಮಲಗುವಾಗ ಹೇಳಿದ ಕಥೆ ಇದು. ಒಂದು ರೀತಿಯಲ್ಲಿ ಅಪೂರ್ಣವಾದ ಕಥೆ. ಅಥವಾ ಈ ಅಪೂರ್ಣತೆಯೇ ಕಥೆಯ ಪೂರ್ಣತೆಯೂ ಆಗಿರಬಹುದು. ಕಥೆ ಹೀಗಿದೆ. 
ಇಬ್ಬರು ಗಂಡ-ಹೆಂಡತಿ ಇದ್ದರಂತೆ. ಅವರಿಗೆ ಒಬ್ಬ ಪುಟಾಣಿ ಮಗು. ಮಗುವಿಗೆ ತಂದೆ ತಾಯಿಗಳ ಮೇಲೆ ಸಮಾನ ಪ್ರೀತಿ. ಗಂಡ ಇದ್ದಾನಲ್ಲ ಅವನಿಗೆ ಮೂಗಿನಲ್ಲೇ ಕೋಪ. ಸಣ್ಣ ತಪ್ಪಿಗೂ ಭಯಂಕರ ಸಿಟ್ಟು ಮಾಡಿ, ಆಕೆಗೆ ಥಳಿಸುತ್ತಿದ್ದನಂತೆ. ಒಂದು ದಿನ ಪೇಟೆಗೆ ದುಡಿಯಲೆಂದು ಹೋದ ಆತ, ಮಧ್ಯಾಹ್ನ ಆಡಿನ ಮಾಂಸ ಹಿಡಿದುಕೊಂಡು ಬಂದನಂತೆ. ಅವನಿಗೆ ಸಿಕ್ಕಾಪಟ್ಟೆ ಹಸಿವು. ಹೆಂಡತಿಯ ಕೈಗೆ ಮಾಂಸವನ್ನು ಕೊಟ್ಟು ‘‘ಬೇಗ ಅಡುಗೆ ಮಾಡಿ ಇಡು. ನಾನು ಇಲ್ಲೇ ನದಿಯಲ್ಲಿ ಸ್ನಾನ ಮಾಡಿ ಬರುವೆ. ಸಿಕ್ಕಾಪಟ್ಟೆ ಹಸಿವಾಗುತ್ತಿದೆ’’ ಎಂದನಂತೆ. ಅವಳು ಮಾಂಸವನ್ನು ತೆಗೆದುಕೊಂಡು ಅಡುಗೆಗೆ ಸಿದ್ಧ ಮಾಡತೊಡಗಿದಳು. ಗಂಡ ನದಿಗೆ ಸ್ನಾನಕ್ಕೆಂದು ಹೋದ. ಮಾಂಸವನ್ನು ಕತ್ತರಿಸಬೇಕಲ್ಲ. ಅದಕ್ಕೆಂದು ಕತ್ತಿ ತರಲೆಂದು ಅವಳು ಒಳ ಹೋದಳು. ಅಷ್ಟರಲ್ಲಿ ಒಂದು ನಾಯಿ ಅದೆಲ್ಲಿತ್ತೋ, ಅಲ್ಲಿದ್ದ ಎಲ್ಲಾ ಮಾಂಸವನ್ನೂ ತಿಂದು ಬಿಟ್ಟಿತು. ಹೆಂಡತಿ ಬಂದು ನೋಡುತ್ತಾಳೆ, ನಾಯಿ ಮಾಂಸವನ್ನೆಲ್ಲ ತಿಂದು ಬಿಟ್ಟಿದೆ. ಆಕೆಯ ಎದೆ ಒಡೆದು ಹೋಯಿತು. ಗಂಡ ಬಂದು ನನ್ನನ್ನು ಕೊಂದೇ ಬಿಡುವನು ಎಂದು ಅವಳು ಭಯಭೀತಳಾದರು. ಮಾಡುವುದೇನು? ನಾಯಿಯನ್ನು ನೋಡಿದಳು. ಸಿಟ್ಟಿನಿಂದ ಕೈಯಲ್ಲಿರುವ ಕತ್ತಿಯಿಂದ ನಾಯಿಗೆ ಒಂದೇಟು ಬಿಗಿದಳು. ನಾಯಿ ಅಲ್ಲಿಯೇ ಸತ್ತು ಹೋಯಿತು. ಅವಳಿಗೆ ಬೇರೆ ಉಪಾಯವೇ ಇರಲಿಲ್ಲ. ನಾಯಿಯನ್ನೇ ಮಾಂಸ ಮಾಡಿ, ಅಡುಗೆ ಮಾಡಿದಳು. ಉಳಿದ ಅವಶೇಷವನ್ನು ದೂರ ಎಸೆದು ಬಂದಳು. ಆದರೆ ಇದನ್ನೆಲ್ಲ ಆಕೆಯ ಮುದ್ದು ಮಗ ಕಣ್ಣು ಬಿಟ್ಟು ನೋಡುತ್ತಿದ್ದ.

ಅಪ್ಪ ಬಂದ. ‘‘ಹಸಿವಾಗುತ್ತಿದೆ. ಬೇಗ ಬಡಿಸು....’’ ಅಬ್ಬರಿಸಿದ. ಅವಳು ಒಳಗೊಳಗೆ ನಡುಗುತ್ತಾ ನಾಯಿ ಮಾಂಸದ ಸಾರನ್ನು ಮತ್ತು ಅನ್ನವನ್ನು ಬಡಿಸಿದಳು.
ಮಗ ನೋಡುತ್ತಲೇ ಇದ್ದ.
ಅಪ್ಪ ಮಾಂಸದ ತುಂಡಿನ ಜೊತೆ ತುತ್ತನ್ನು ಕಲಸಿ ಬಾಯಿಗಿಡಬೇಕು.
ಮಗ ‘‘ಅಪ್ಪಾ....’’ ಎಂದು ಕೂಗಿದ. ತಾಯಿ ಆತಂಕದಿಂದ ಮಗನ ನೋಡಿದಳು.

ಅಪ್ಪ ‘ಏನು?’’ ಎನ್ನುತ್ತಾ ಮಗನ ಕಡೆಗೆ ನೋಡಿದ. ಮಗು ಪಾಪ ಏನು ಮಾಡಬೇಕು?
ಸುಳ್ಳು ಹೇಳಿದರೆ ಅಪ್ಪ ನಾಯಿ ತಿನ್ನುತ್ತಾನೆ. ಸತ್ಯ ಹೇಳಿದರೆ ಅಮ್ಮ ಸಾಯುತ್ತಾಳೆ.....

ನನ್ನ ಅಮ್ಮ ಹೇಳಿದ ಈ ಕತೆ ನನಗೆ ಈಗಲೂ ನೆನಪಿದೆಯಾದರೂ  ಆ ಕತೆಯಲ್ಲಿ ಮಗ ಸುಳ್ಳು ಹೇಳಿದನೋ, ಸತ್ಯ ಹೇಳಿದನೋ ಎನ್ನುವುದು ಮಾತ್ರ ನೆನಪಿಲ್ಲ. ಅಥವಾ ಅಮ್ಮ ಅದನ್ನು ನನಗೆ ಅವತ್ತು ಹೇಳಿರಲೇ ಇಲ್ಲ. ಅಥವಾ ಅವಳು ಕತೆ ಪೂರ್ಣ ಗೊಳಿಸುವ ಮೊದಲೇ ನಾನು ನಿದ್ದೆ ಹೋಗಿರಬೇಕು 

13 ಮತ್ತು 14 ಡಿಸೆಂಬರ್ ಮಂಗಳೂರು : “ಜನನುಡಿ 2014”




ಬಾಯ್‌ಹುಡ್: ನೋವು, ನಲಿವುಗಳ ಮೆರವಣಿಗೆ

ಸಿನಿಮಾದ ಬೇರೆ ಬೇರೆ ಸಾಧ್ಯತೆಗಳನ್ನು ಹಾಲಿವುಡ್ ಪರಿಣಾಮಕಾರಿಯಾಗಿ ತನ್ನದಾಗಿಸಿ ಕೊಂಡು ಬೆಳೆಯುತ್ತಾ ಬಂದಿದೆ. ಬಾಯ್ ಹುಡ್ ಚಿತ್ರ  ಕೂಡ ಅಂಥಹದೆ ಒಂದು ಪ್ರಯೋಗದ ಮೂಲಕ ರೂಪ ಪಡೆದಿರುವ ಚಿತ್ರ. ಬಾಲ್ಯದಿಂದ ತಾರುಣ್ಯದ ಕಡೆಗೆ ಚಲಿಸುವ ಕಾಲವನ್ನು ಇಲ್ಲಿ ನಿರ್ದೇಶಕ ಅದರ ಜೊತೆ ಜೊತೆಗೆ ನಡೆಯುತ್ತಲೇ ಸೆರೆ ಹಿಡಿಯುವ ಪ್ರಯತ್ನ ಮಾಡಿದ್ದಾನೆ. ಈ ಚಿತ್ರ ಬರೋಬ್ಬರಿ ೧೨ ವರ್ಷಗಳ ಕಾಲ ಚಿತ್ರೀಕರಣಗೊಂಡಿದೆ. ಒಬ್ಬ ಬಾಲಕ ಬೆಳೆಯುತ್ತಾ ತಾರುಣ್ಯಕ್ಕೆ ತಲುಪುವ ವರೆಗಿನ ಕಾಲಘಟ್ಟ ಇಲ್ಲಿದೆ. ಇಲ್ಲಿ ನಾಯಕ ಪಾತ್ರಕ್ಕೆ ಬೇರೆ ಬೇರೆ ನಟರನ್ನು ಆಯ್ದುಕೊಳ್ಳದೆ ಒಬ್ಬನೇ ಬಾಲ ನಟನನ್ನು ಬಳಸಿಕೊಂಡಿದ್ದಾರೆ. ಯುವಕನ ಪಾತ್ರವನ್ನು ಅವನೇ ನಟಿಸಿದ್ದಾನೆ. 

 ‘ಬಾಯ್‌ಹುಡ್’, ಈ ದಶಕದ ಅಪರೂಪದ ಚಿತ್ರಗಳಲ್ಲೊಂದೆಂಬುದನ್ನು ನಿಸ್ಸಂಕೋಚವಾಗಿ ಹೇಳಬಹುದು. ಕಥಾನಾಯಕ ಮೇಸನ್ (ಎಲ್ಲರ್ ಕಾಲ್ಟ್ರೇನ್) ಆರು ವರ್ಷದ ಬಾಲಕನಾಗಿರುವಾಗಿನಿಂದ ಹಿಡಿದು,ಆತ 18 ವರ್ಷದ ಕಾಲೇಜ್ ವಿದ್ಯಾರ್ಥಿಯಾಗುವವರೆಗಿನ ಆತನ ಬದುಕಿನ ನೋವು,ನಲಿವು, ತುಮುಲ,ತಲ್ಲಣಗಳ ಬದುಕನ್ನು ಈ ಚಿತ್ರವು ಹೃದಯಂಗಮವಾಗಿ ಪ್ರೇಕ್ಷಕರ ಮುಂದಿಡುತ್ತದೆ.

 ಈ ಚಿತ್ರವನ್ನು ಬರೋಬ್ಬರಿ 12 ವರ್ಷಗಳ ಕಾಲ, ಒಂದೇ ತಾರಾಬಳಗದೊಂದಿಗೆ ಚಿತ್ರೀಕರಿಸಿರುವ ನಿರ್ದೇಶಕ ರಿಚರ್ಡ್ ಲಿಂಕ್‌ಲೇಟರ್ ಸಾಧನೆ ಬೆರಗುಮೂಡಿಸುತ್ತದೆ.
ಮಾನವ ಬೆಳೆದಂತೆಲ್ಲಾ ಸಂದರ್ಭಕ್ಕೆ ತಕ್ಕಂತೆ ಆತನ ವ್ಯಕ್ತಿತ್ವವು ಹೇಗೆ ರೂಪುಗೊಳ್ಳುತ್ತಾ ಹೋಗುತ್ತದೆ ಯೆಂಬುದನ್ನು ಬಹಳ ಮಾರ್ಮಿಕವಾಗಿ ತೋರಿಸಿದ್ದಾರೆ. ಹೀಗೆ ಈ ಚಿತ್ರದ ತಾರೆಯರು, ಸಿನೆಮಾ ಮುಂದಕ್ಕೆ ಸಾಗಿದಂತೆ ನಮ್ಮ ಕಣ್ಣೆದುರೇ ಬೆಳೆಯುತ್ತಾ ಹೋಗುವುದು ವಾಸ್ತವಕ್ಕೆ ತೀರ ಹತ್ತಿರದ ಅನುಭವವನ್ನು ನೀಡುತ್ತದೆ.
    1995ರಲ್ಲಿ ತೆರೆಕಂಡ ಸೂಪರ್‌ಹಿಟ್ ಹಾಲಿವುಡ್ ಚಿತ್ರ ‘ಬಿಫೋರ್ ಸನ್‌ರೈಸ್’ನ ನಿರ್ದೇಶಕ ರಿಚರ್ಡ್ ಲಿಂಕ್‌ಲೇಟರ್, ‘ಬಾಯ್‌ಹುಡ್’ ಚಿತ್ರವನ್ನು ಹನ್ನೆರಡು ವರ್ಷಗಳ ಸುದೀರ್ಘ ಅವಧಿಗೆ, ಒಂದೇ ತಾರಾಬಳಗದೊಂದಿಗೆ ಚಿತ್ರಿಸುವ ಮೂಲಕ ಯಾವ ಸಿನೆಮಾ ತಂತ್ರಜ್ಞನೂ ಕನಸುಮನಸಿನಲ್ಲೂ ಯೋಚಿಸಿರದಂತಹ ಸಾಹಸ ಮಾಡಿದ್ದಾರೆ.
  ಈ ಚಿತ್ರಕ್ಕಾಗಿ ಲಿಂಕ್‌ಲೆಟರ್ ವಹಿಸಿದ್ದ ತಾಳ್ಮೆ ಹಾಗೂ ತೆಗೆದುಕೊಂಡಿರುವ ರಿಸ್ಕ್ ಪ್ರೇಕ್ಷಕರನ್ನು ಅಚ್ಚರಿಗೊಳಿಸುತ್ತದೆ. 2002ರಲ್ಲಿ ಚಿತ್ರೀಕರಣ ಆರಂಭವಾದಾಗ ಕಥಾನಾಯ ಕ ಎಲ್ಲಾರ್‌ಕೊಲ್ಟ್ರೇನ್‌ಗೆ ಕೇವಲ ಏಳು ವರ್ಷ ವಯಸ್ಸು. ಆ ಸಮಯದಲ್ಲಿ 12 ವರ್ಷಗಳ ಬಳಿಕ ಆತ ಹೇಗಿರಬಹುದೆಂಬ ನಿರ್ದೇಶಕರಿಗೆ ಯಾವುದೇ ಸುಳಿವು ಇರಲಾರದು. ಪತಿಯಿಂದ ಪರಿತ್ಯಕ್ತಳಾದ ಕೊಲ್ಟ್ರಿನ್‌ನ ತಾಯಿ ಒಲಿವಿಯಾಳ ಪಾತ್ರದಲ್ಲಿ ಪ್ಯಾಟ್ರಿಶಿಯಾ ಅರ್ಕ್ವೆಟ್ ಅದ್ಭುತವಾಗಿ ನಟಿಸಿದ್ದಾರೆ. ತನ್ನ ಇಬ್ಬರು ಮಕ್ಕಳ ಬದುಕಿನಲ್ಲಿ ಆಗೊಮ್ಮೆ ಈಗೊಮ್ಮೆ ಬಂದು ಬಿರುಗಾಳಿ ಎಬ್ಪಿಸಿ ಹೋಗುವ ಪರಿತ್ಯಕ್ತ ತಂದೆಯ ಪಾತ್ರದಲ್ಲಿ ಎಥಾನ್ ಹಾಕ್ ನಟನೆಯೂ ಮೆಚ್ಚುಗೆ ಗಳಿಸುತ್ತದೆ. ಆದಾಗ್ಯೂ, ಚಿತ್ರದುದ್ದಕ್ಕೂ ಬಾಲನಟ ಎಲ್ಲಾರ್ ಕೊಲ್ಟ್ರೇನ್ ಪ್ರೇಕ್ಷಕರ ಮನಸ್ಸನ್ನು ಆವರಿಸಿಬಿಡುತ್ತಾನೆ. ಗೊಂದಲ, ಬಂಡಾಯ ಪ್ರವೃತ್ತಿ, ವೇದನೆ ಹಾಗೂ ಭಾವುಕತೆಯ ಸನ್ನಿವೇಶಗಳಲ್ಲಿ ಆತ ಅವಿಸ್ಮರಣೀಯವಾಗಿ ನಟಿಸಿದ್ದಾನೆ. ಇವನ ತುಮುಲ, ಸಂಕಟಗಳಲ್ಲಿ ನಾವು ಜೊತೆಯಾಗಿರುತ್ತೇವೆ.  ಕಥೆಗೆ ಅನುಗುಣವಾಗಿ ಈ ಚಿತ್ರವು ಡಾಕ್ಯುಮೆಂಟರಿ ಚಿತ್ರದ ಹಾಗೆ ಆಮೆನಡಿಗೆಯಲ್ಲಿ ಸಾಗುತ್ತದೆ. ಆದರೆ ಎರಡು ತಾಸುಗಳ ಈ ಚಿತ್ರವು ಭಾವನಾತ್ಮಕವಾಗಿ ನಮ್ಮನ್ನು ನಿಧಾನಕ್ಕೆ ಆವರಿಸಿಕೊಳ್ಳುತ್ತಾ, ಚಿತ್ರದ ಭಾಗವಾಗಿಸಿಕೊಳ್ಳುತ್ತದೆ. ಈ ಚಿತ್ರದಲ್ಲಿ ಕಥಾಪಾತ್ರಗಳ ದೈನಂದಿನ ಬದುಕಿನ ಉಜ್ವಲ ಕ್ಷಣಗಳು ಅತ್ಯಂತ ಸುಂದರ ವಾಗಿ ಮೂಡಿಬಂದಿವೆ.
‘‘ಇಂತಹದ್ದೊಂದು ಚಿತ್ರವನ್ನು ನೀವು ಹಿಂದೆಂದೂ ಕಂಡಿರಲಾರಿರಿ. ಪ್ರಾಯಶಃ ಮತ್ತೊಮ್ಮೆ ಕಾಣಲಾರಿರಿ’’ ಎಂದು ನಿರ್ದೇಶಕ ಲಿಂಕ್‌ಲೇಟರ್ ಹೇಳಿರುವುದು ಅಕ್ಷರಶಃ ನಿಜವೆಂದು ಚಿತ್ರ ನೋಡಿ ಹೊರಬಂದ ಪ್ರೇಕ್ಷಕನಿಗೆ ಮನವರಿಕೆಯಾಗುವುದು ಖಂಡಿತ.
 2002ನೆ ಇಸವಿಯಲ್ಲಿ ಆರು ವರ್ಷದ ಬಾಲಕ ಮೇಸನ್ ಹಾಗೂ ಆತನ ಸಹೋದರಿ ಸಮಂತಾ (ನಿರ್ದೇಶಕರ ಪುತ್ರಿ ಲೊರೆಲಿ ಲಿಂಕ್‌ಲೇಟ್) ಟೆಕ್ಸಾಸ್‌ನಲ್ಲಿರುವ ತಮ್ಮ ಮನೆಯಲ್ಲಿ ತುಂಟಾಟವಾಡುತ್ತಿರುವ ದೃಶ್ಯದೊಂದಿಗೆ ಚಿತ್ರ ಆರಂಭವಾಗುತ್ತದೆ. ಈ ಚಿಣ್ಣರ ತಾಯಿ ಒಲಿವಿಯಾ (ಪ್ಯಾಟ್ರಿಶಿಯಾ ಆರ್ಕ್ವೆಟ್) ಪತಿಯಿಂದ ಪರಿತ್ಯಕ್ತಳಾಗಿರುತ್ತಾಳೆ. ತನ್ನ ಮಕ್ಕಳನ್ನು ನೋಡಿಕೊಳ್ಳುವ ಪೂರ್ಣ ಜವಾಬ್ದಾರಿ ಈಕೆಯ ಹೆಗಲೇರಿರುತ್ತದೆ. ಅರ್ಧದಲ್ಲೇ ಕೈಬಿಟ್ಟಿರುವ ತನ್ನ ವ್ಯಾಸಂಗವನ್ನು ಪೂರ್ತಿಗೊಳಿಸಲು ಆಕೆ ಮಕ್ಕಳೊಂದಿಗೆ ಟೆಕ್ಸಾಸ್ ತೊರೆದು ಹ್ಯೂಸ್ಟನ್ ನಗರಕ್ಕೆ ಬಂದು ನೆಲೆಸುತ್ತಾಳೆ. ಹ್ಯೂಸ್ಟನ್‌ನಲ್ಲಿ, ಮೇಸನ್‌ನ ತಂದೆ, ಒಲಿಯಾಳ ಮಾಜಿ ಪತಿ (ಎಥಾನ್ ಹೌಕ್) ಮಕ್ಕಳನ್ನು ತನ್ನೊಂದಿಗೆ ಕರೆದೊಯ್ಯುತ್ತಾನೆ. ಆತನ ಹೊಣೆಗೇಡಿತನ ಹಾಗೂ ಅಲೆದಾಟದ ವರ್ತನೆಯನ್ನು ಕಂಡು ಒಲಿವಿಯಾ ಸಿಡಿಮಿಡಿಗೊಳ್ಳುತ್ತಾಳೆ. ತಮ್ಮ ತಂದೆತಾಯಿಗಳು ಹಾವುಮುಂಗುಸಿಗಳಂತೆ ತಮ್ಮ ಕಣ್ಣೆದುರೇ ಜಗಳವಾಡುವುದನ್ನು ಕಂಡು ಮಕ್ಕಳು ಬೆಚ್ಚಿಬೀಳುತ್ತಾರೆ. ಆನಂತರ ಒಲಿವಿಯಾ ಎರಡನೆ ವಿವಾಹವಾಗುತ್ತಾಳೆ. ಮೇಸನ್‌ನ ಬದುಕು ಇನ್ನೊಂದು ಆಯಾಮವನ್ನು ಪಡೆಯುತ್ತದೆ.

ಹೀಗೆ 6ನೆ ವಯಸ್ಸಿನಿಂದ 18ನೆ ವಯಸ್ಸಿನವರೆಗೆ ಮೇಸನ್ ಬೆಳೆದಂತೆ, ಆತನಿಗೆ ಎದುರಾಗುವ ನೋವು, ನಲಿವುಗಳಲ್ಲಿ, ಸುಖ, ದು:ಖಗಳಲ್ಲಿ ನಾವೂ ಸಹಭಾಗಿಗಳಾಗುತ್ತೇವೆ. ತನ್ನ ಹೆತ್ತವರ ಸಂಘರ್ಷ, ಒಡಹುಟ್ಟಿದವರೊಂದಿಗೆ ವೈಮನಸ್ಸು, ಮೊದಲ ಪ್ರೇಮ, ಆನಂತರ ಎದುರಿಸುವ ಪ್ರೇಮ ವೈಫಲ್ಯ ಇವೆಲ್ಲವೂ ಆತನನ್ನು ಓರ್ವ ಪರಿಪಕ್ವ ವ್ಯಕ್ತಿಯನ್ನಾಗಿ ರೂಪಿಸುತ್ತವೆ. . ಛಾಯಾಗ್ರಹಣವೂ ಉತ್ಕೃಷ್ಟವಾಗಿದ್ದು, ಚಿತ್ರದ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ.

ಏನೇ ಇರಲಿ, ನಿರ್ದೇಶಕ ಲಿಂಕ್‌ಲೇಟರ್ ಬಾಯ್‌ಹುಡ್ ಚಿತ್ರವನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟಿದ್ದಾರೆ. ನವಿರಾದ ಭಾವನೆಗಳನ್ನು ಮೂಡಿಸುತ್ತಲೇ ಈ ಚಿತ್ರವು ನಮ್ಮ ಮೇಲೆ ಗಾಢ ಪರಿಣಾಮವನ್ನು ಬೀರುತ್ತದೆ. ಸಣ್ಣಪುಟ್ಟ ಸಂಗತಿಗಳಲ್ಲೇ ಜೀವನದ ಸ್ವಾರಸ್ಯ ಅಡಗಿದೆಯೆಂಬುದನ್ನು ನಿರ್ದೇಶಕರು ಅತ್ಯಂತ ಸೊಗಸಾಗಿ ನಿರೂಪಿಸಿದ್ದಾರೆ.

Monday, November 17, 2014

ಕಳ್ಳರು ಮತ್ತು ಇತರ ಕತೆಗಳು


ಸ್ವಚ್ಛತಾ ಆಂದೋಲನ
ಅವನು ತನ್ನ ಮನೆ ಮುಂದಿನ ಬೀದಿಯನ್ನು ದಿನಾ ಗುಡಿಸಿ ಸ್ವಚ್ಛವಾಗಿಡುತ್ತಿದ್ದ. ಒಂದು ದಿನ ಇದ್ದಕ್ಕಿದ್ದಂತೆಯೇ ಮುನ್ಸಿಪಾಲಿಟಿ ವ್ಯಾನ್ ಬಂದು ಒಂದಿಷ್ಟು ಕಸ ಸುರಿಯಿತು.
‘‘ಏನಯ್ಯ ಇದು?’’ ಅವನು ಕೇಳಿದ.
‘‘ನಾಳೆ ಗಾಂಧೀಜಯಂತಿ ಹೆಸರಲ್ಲಿ ಸ್ವಚ್ಛತಾ ಆಂದೋಲನ ನಡೆಯುತ್ತದೆ. ಮಿನಿಸ್ಟರ್ ಬಂದು ಕಸ ಗುಡಿಸಲಿದ್ದಾರೆ. ಮಿನಿಷ್ಟರ್ ಬರೋವರೆಗೆ ಇದನ್ನು ಗುಡಿಸಿದರೆ ಹುಷಾರ್!’’ ಅವನು ಉತ್ತರಿಸಿದ.

ಕಾಗೆಗಳು
ಪಕ್ಷದ ಕಚೇರಿಯಲ್ಲಿ ‘ಕಮ್ಯುನಿಸಂ ಎಂದರೇನು?‘ ಎನ್ನುವುದನ್ನು ತನ್ನ ನಾಯಕನಿಂದ ಗಂಟೆಗಟ್ಟಳೆ ಕೊರೆಸಿಕೊಂಡ. ಆದರೂ ತಲೆ ಬುಡ ಅರ್ಥವಾಗಲಿಲ್ಲ.
ತಲೆಗೆಟ್ಟು ಮನೆಗೆ ಬಂದ ಮಗನನ್ನು ಅಪ್ಪ ಪ್ರೀತಿಯಿಂದ ಬಳಿಗೆ ಕರೆದ. ಬಳಿಕ ಅಂಗಳದ ಕಡೆಗೆ ಕೈ ತೋರಿಸಿ ಹೇಳಿದ ‘‘ನೋಡು, ಇದೇ ಕಮ್ಯುನಿಸಂ’’
ಅಲ್ಲಿ ಕಾಗೆಗಳು ಜೊತೆಯಾಗಿ ಹಂಚಿ ತಿನ್ನುತ್ತಿದ್ದವು.

ಕಳ್ಳರು
ಶ್ರೀಮಂತನ ಮನೆಯ ಕಾಂಪೌಂಡ್‌ಗೆ ಕಳ್ಳರು ನುಗ್ಗಿದರು.
ಆತ ಪೊಲೀಸರನ್ನು ಕರೆದ. ಕೋವಿ ಸಮೇತ ಬಂದ ಪೊಲೀಸರು ಕಳ್ಳರನ್ನು ಗುಂಡಿಟ್ಟುಕೊಂದರು.
ಬಡವನ ಜಮೀನಿಗೆ ಕಳ್ಳರು ನುಗ್ಗಿದರು.
ಪೊಲೀಸರು ಬಂದರು. ತಡೆದ ಬಡವನನ್ನು ಗುಂಡಿಟ್ಟು ಕೊಂದರು.

ವಿಷಯ
‘‘ಹೇ...ವಿಷಯ ಗೊತ್ತಾಯಿತಾ? ಅವತ್ತು ಹಿಂದೂ ಹುಡುಗಿ ಮತ್ತು ಮುಸ್ಲಿಮ್ ಹುಡುಗ ಮದುವೆ ಮಾಡ್ಕೊಂಡು ಓಡಿ ಹೋದ್ರಲ್ಲ...’’
‘‘ಹೌದು...ಏನಾಯಿತು? ಎಂತ ಕಥೆ?’’
‘‘ಅವರಿಗೀಗ ಮುದ್ದಾದ ಇಬ್ಬರು ಮಕ್ಕಳಂತೆ’’

ಬಂಗಾರದ ಮಂಚ

ಶ್ರೀಮಂತನೊಬ್ಬ ವಿದೇಶದಿಂದ ಬಂಗಾರದ ಮಂಚವೊಂದನ್ನು ಮಾಡಿಸಿ ತರಿಸಿದ. ಎಲ್ಲರನ್ನೂ ಕರೆದು ಆ ಮಂಚವನ್ನು ತೋರಿಸಿದ. ಎಲ್ಲರೂ ಬೆಕ್ಕಸ ಬೆರಗಾದರು.
ರಾತ್ರಿ ಆ ಮಂಚದಲ್ಲಿ ಮಲಗಿದ ಶ್ರೀಮಂತನಿಗೆ ನಿದ್ದೆಯೇ ಇಲ್ಲ. ಹೊರಳಾಡಿ ಸುಸ್ತಾಗಿ, ಎದ್ದು ಹೊರ ಬಂದ.
ಅಂಗಳದಲ್ಲಿ ಮಂಚವನ್ನು ಹೊತ್ತು ತಂದ ಕೆಲಸದಾಳು ಗೋಣಿ ರಾಶಿಯ ಮೇಲೆ ಗೊರಕೆ ಹೊಡೆಯುತ್ತಿದ್ದ.

Sunday, November 16, 2014

ಹೊಳೆದದ್ದು ಹೊಳೆದಂತೆ-8

1
ಕುಡಿತ ಮತ್ತು ಸೆಕ್ಸ್ ಗಳನ್ನ ಎಲ್ಲಿಯವರೆಗೆ ಒಂದು ಖಾಸಗಿ ಅನುಭೂತಿಯಾಗಿ ಉಳಿಸಿ ಕೊಳ್ಳುತ್ತೇವೋ ಅಲ್ಲಿಯವರೆಗೆ ಅದು ನಮ್ಮ ಸೃಜನ ಶೀಲತೆಗೆ ಪೂರಕವಾಗಿರುತ್ತದೆ. ಆದರೆ ಹೆಚ್ಚಿನ ಲೇಖಕರು ಇವೆರಡನ್ನೂ ತಮ್ಮ ಅಹಂನ ಭಾಗವಾಗಿಸಿ ಕೊಂಡಿದ್ದಾರೆ
2
ಕವಿಯೊಬ್ಬನ ಆತ್ಮ ಕತೆ ಒಂದು ದೊಡ್ಡ ಆತ್ಮ ವಂಚನೆ. ಕವಿತೆಯಲ್ಲಿ ಮಾತ್ರ ಅವನು ಸತ್ಯ ಹೇಳಬಲ್ಲ
3
ಹತ್ತು ಪುಸ್ತಕಗಳ ಓದು, ನಮಗೆ ಒಂದು ಬರಹವನ್ನು ಬರೆಯುವ ನೈತಿಕತೆಯನ್ನು ತಂದು ಕೊಡುತ್ತದೆ
4
ನಮ್ಮನ್ನು ನಾವು ಹತ್ತು ಬಾರಿ ವಿಮರ್ಶೆಗೆ ಒಳ ಪಡಿಸಿದ ಬಳಿಕವಷ್ಟೇ ನಮ್ಮ ಹೊರಗನ್ನು ಒಂದು ಬಾರಿ ವಿಮರ್ಶೆಗೆ ಒಳ ಪಡಿಸುವ ಹಕ್ಕನ್ನು ಪಡೆದು ಕೊಳ್ಳುತ್ತೇವೆ
5
ಕನ್ನಡಿಗೆ ಅಂಜಿದಷ್ಟೂ ನಮ್ಮ ಕುರೂಪ ಹೆಚ್ಚುತ್ತಾ ಹೋಗುತ್ತದೆ.

Friday, November 14, 2014

ಹೊಳೆದದ್ದು ಹೊಳೆದಂತೆ-7

 1
ದೇವರಿಗೆ ತಕ್ಕವನಾಗಿ  ಬದುಕೋದಕ್ಕೆ ನಿಮಗೆ ಸಾಧ್ಯವಿಲ್ಲವೆಂದರೆ, ದೇವರನ್ನೇ ನಿಮಗೆ ತಕ್ಕವನಾಗಿ ಬದಲಿಸೋದು ಸುಲಭ ಉಪಾಯ
2
ಅದೆಂಥಹ ಕಠೋರ  ಕಮ್ಯುನಿಸ್ಟನ  ಮನೆಯಾದರೂ ಸರಿ. ಕಿಟಕಿ, ಬಾಗಿಲು ತೆರೆದಿಡದಿದ್ದರೆ ನಿಧಾನಕ್ಕೆ ಮನೆ ತುಂಬಾ ಜೇಡ, ಹಳ್ಳಿ, ಚೇಳು ವಾಸ ಮಾಡಲಾರಂಭಿಸುತ್ತವೆ.
3
ಕಳ್ಳರಿಗೆ  ಅಂಜಿ ಮುಂಬಾಗಿಲನ್ನು ಮುಚ್ಚಿದರೆ, ಕೆಲವೊಮ್ಮೆ ಮುಚ್ಚಿದ ಬಾಗಿಲು ನೋಡಿ ನಮ್ಮವರೇ ಮರಳಿ ಹೋಗುವ ಸಾಧ್ಯತೆ ಇದೆ. ಕಳ್ಳ ಹಿಂಬಾಗಿಲಿಂದ ಬಂದು ದೋಚಿ ಹೋಗುವ ಸಾಧ್ಯತೆಯೂ ಇದೆ. 

4
ದೇವರು ನಿರಾಕಾರನಾಗಿರುವ ಸಮಸ್ಯೆ, ಮತ್ತು ಲಾಭ ಏನು ಎಂದರೆ ನಮಗೆ ಬೇಕಾದ ಆಕಾರವನ್ನು ಅವನಿಗೆ ನೀಡಬಹುದು.

Wednesday, November 12, 2014

ಇಂತಿ ನಮಸ್ಕಾರಗಳು: ಅವರ ತಲೆ-ಇವರ ದೇಹಗಳ ನಡುವೆ

 ‘ಇಂತಿ ನಮಸ್ಕಾರಗಳು’ ಕನ್ನಡದ ಖ್ಯಾತ ಲೇಖಕ ನಟರಾಜ್ ಹುಳಿಯಾರ್ ಅವರು ಬರೆದಿರುವ ಲಂಕೇಶ್ ಮತ್ತು ಡಿ. ಆರ್. ನಾಗರಾಜ್ ಕುರಿತ ಸೃಜನಶೀಲ ಕಥಾನಕ. ಪಿ. ಲಂಕೇಶ್ ಮತ್ತು ಡಿ. ಆರ್. ನಾಗರಾಜ್ ಅವರು ಕನ್ನಡ ಸಾಹಿತ್ಯ ಕಂಡ ಎರಡು ವಿಸ್ಮಯಗಳು. ಈ ಎರಡೂ ಲೇಖಕರು ಒಬ್ಬರ ಜೊತೆ ಇನ್ನೊಬ್ಬರು ಇದ್ದೂ ಇಲ್ಲದಂತೆ ಬದುಕಿದರು. ಪರಸ್ಪರರಿಗೆ ಹೆದರಿಕೊಂಡು, ಪರಸ್ಪರ ಹೆಮ್ಮೆಪಟ್ಟುಕೊಂಡು, ಪರಸ್ಪರ ವಿಮರ್ಶೆಗೊಳಪಡಿಸಿಕೊಳ್ಳುತ್ತಾ ಸಮಕಾಲೀನರಾಗಿ ಬದುಕಿದವರು ಡಿ. ಆರ್. ನಾಗರಾಜ್ ಮತ್ತು ಲಂಕೇಶ್. ಒಂದು ರೀತಿಯಲ್ಲಿ ಲಂಕೇಶ್ ಅವರು ನಾಗರಾಜ್ ಜೊತೆಗೆ ಅಂತರ ಕಾಯುತ್ತಾ ಬರೆದರು. ಹಾಗೆಯೇ ನಾಗರಾಜ್ ಕೂಡ ಲಂಕೇಶ್ ಜೊತೆಗೆ ಒಂದು ಅಂತರವನ್ನು ಕೊನೆಯವರೆಗೂ ಉಳಿಸಿಕೊಂಡರು. ಹೀಗಿದ್ದರೂ ಅವರು ಪರಸ್ಪರ ದೂರವಾಗಲು ಯಾವತ್ತೂ ಇಷ್ಟಪಡಲಿಲ್ಲ.

ಈ ಎರಡು ದಿಗ್ಗಜರ ಜೊತೆಗೆ ಒಬ್ಬ ಸೃಜನಶೀಲ ಯುವ ಬರಹಗಾರ ಸಿಕ್ಕಿ ಹಾಕಿಕೊಂಡರೆ ಆತ ತನ್ನ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುವುದಕ್ಕಿಂತ ಮುದುಡಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಆದರೆ ನಟರಾಜ್ ಹುಳಿಯಾರ್ ಅದಕ್ಕೆ ಅವಕಾಶ ಕೊಡದೆ, ಈ ಎರಡು ದೈತ್ಯ ಪ್ರತಿಭೆಗಳ ಜೊತೆಗೆ ತನ್ನತನವನ್ನು ಉಳಿಸಿಕೊಳ್ಳಲು ಏಗಾಡಿದವರು. ಈ ಎರಡೂ ಮೇಷ್ಟ್ರುಗಳು ತಮ್ಮನ್ನು ಆಹುತಿ ತೆಗೆದುಕೊಳ್ಳದ ಹಾಗೆ ಕೊನೆಯವರೆಗೂ ಜಾಗರೂಕತೆಯಿಂದ ತನ್ನ ಸೃಜನಶೀಲ ಚಟುವಟಿಕೆಗಳಿಗೆ ಪೂರಕವಾಗಿ ಆ ಬೆಂಕಿಯ ಕಾವನ್ನು ತಮ್ಮದಾಗಿಸುತ್ತಾ  ಬಂದವರು. ಒಂದೆಡೆ ನಾಗರಾಜ್ ಅವರ ಮೆದುಳು ಮತ್ತು ಲಂಕೇಶ್ ಅವರ ದೇಹ ಎರಡನ್ನೂ ತನ್ನದಾಗಿಸಿಕೊಳ್ಳುವ ಹಪಹಪಿಕೆ ಅವರ ಬಹುತೇಕ ಬರಹಗಳಲ್ಲಿ ಕಾಣುತ್ತದೆ. ‘ಗಾಳಿ-ಬೆಳಕು’ ಅಂಕಣವನ್ನು ನಟರಾಜ್ ಅವರು ಲಂಕೇಶ್ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಇತ್ತೀಚೆಗೆ ಅದು ಸಂಕಲನವಾಗಿ ಹೊರಬಂದಿದೆ. ಅಲ್ಲಿನ ಬರಹಗಳಲ್ಲಿ ಇಬ್ಬರೂ ಮೇಧಾವಿಗಳ ಪ್ರಭಾವ, ಪರಿಣಾಮಗಳು ಎದ್ದು ಕಾಣುತ್ತವೆ. ಹಾಗೆಯೇ ಅದರಿಂದ ಕಳಚಿಕೊಳ್ಳುವ ಹವಣಿಕೆ ಕೂಡ. ಗಿರೀಶ್ ಕಾರ್ನಾಡರ ಹಯವದನ ನಾಟಕದಲ್ಲಿ ಪದ್ಮಿನಿ ಎನ್ನುವ ಕಥಾನಾಯಕಿ ಕಪಿಲನ ದೇಹ ಮತ್ತು ದೇವದತ್ತನ ತಲೆ ಎರಡನ್ನೂ ತನ್ನದಾಗಿಸಿಕೊಂಡು ಪೂರ್ಣತೆಯನ್ನು ಪಡೆಯುವ ವಿಫಲ ಹೋರಾಟದಂತೆಯೇ ಇದು. ಈ ಹೋರಾಟದಲ್ಲೇ ಅವರ ಬರಹಗಳು ತನ್ನತನವನ್ನು ಕಂಡುಕೊಳ್ಳುತ್ತವೆ.


 ಮೇಲಿನೆಲ್ಲ ಕಾರಣಗಳಿಂದ ನಟರಾಜ್ ಹುಳಿಯಾರ್ ಅವರು ಲಂಕೇಶ್ ಮತ್ತು ಡಿ. ಆರ್. ನಾಗರಾಜ್ ಅವರನ್ನು ಹೇಗೆ ನೋಡುತ್ತಾರೆ ಎನ್ನುವುದು ಹೆಚ್ಚು ಕುತೂಹಲವನ್ನು ಹುಟ್ಟಿಸುತ್ತದೆ. ಎರಡು ಬೆಂಕಿಯ ಕುಲುಮೆಯ ನಡುವೆ ತನ್ನನ್ನು ತಾನು ಸುಟ್ಟು ಹೋಗದಂತೆ ಕಾಪಾಡಿಕೊಳ್ಳುತ್ತ ಅವರ ಕಾವನ್ನು ತನ್ನದಾಗಿಸಿಕೊಂಡ ನಟರಾಜ್ ಕಥಾನಕ ನಿಜಕ್ಕೂ ಎಲ್ಲ ಸೃಜನಶೀಲ ಬರಹಗಾರರಿಗೂ ಒಂದು ಕೈ ದೀವಿಗೆಯಾಗಬಹುದು. ನಾಗರಾಜ್ ಮತ್ತು ಲಂಕೇಶ್ ಬರಹಗಳಿಗೆ ಒಂದು ಒಳ್ಳೆಯ ಪ್ರವೇಶವಾಗಿಯೂ ಈ ಕತಿಯನ್ನು ನಾವು ಸ್ವೀಕರಿಸಬಹುದು. ಲಂಕೇಶ್ ಮತ್ತು ನಾಗರಾಜ್ ಎಂಬ ಎರಡು ಮಾರ್ಗಗಳು ಸೇರುವ ಕೊಂಡಿಗಳನ್ನು ಗುರುತಿಸುತ್ತಲೇ ಅದು ಪ್ರಜ್ಞೆಗೆ ಮಾತ್ರ ಸೀಮಿತವಾಗಿದೆ ಎನ್ನುವೂದನ್ನೂ ನಟರಾಜ್ ಉಲ್ಲೇಖಿಸುತ್ತಾರೆ. ಬಹುಶಃ ನಟರಾಜ್ ಅಂತಹ ಒಂದು ಪ್ರಮುಖ ಕೊಂಡಿಯಾಗಿಯೂ ನಮಗಿಲ್ಲಿ ಭಾಸವಾಗುತ್ತಾರೆ.

 ಈ ಕೃತಿಯಲ್ಲಿ ಸುಮಾರು 11 ಅಧ್ಯಾಯಗಳನ್ನು ಲಂಕೇಶರಿಗೂ, 13 ಅಧ್ಯಾಯಗಳನ್ನು ಡಿ. ಆರ್. ನಾಗರಾಜರಿಗೂ ಮೀಸಲಿಟ್ಟಿದ್ದಾರೆ ಹುಳಿಯಾರ್. ಲಂಕೇಶರ ಕೃತಿಗಳನ್ನು ಪರಿಚಯಿಸುತ್ತಲೇ ಅದರೊಳಗಿನ ಪಾತ್ರಗಳ ಮೂಲಕ ಲಂಕೇಶರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ. ವಸಾಹತು ಶಾಹಿಯನ್ನು ಹಾಗೂ ದೇಶೀ ಲೋಕಗಳನ್ನು ಗ್ರಹಿಸುವ ಆಳವಾದ ಬೌದ್ಧಿಕ ಚಿಂತನೆಯನ್ನು ಬೆಳೆಸಿದ ಡಿ. ಆರ್. ನಾಗರಾಜ್ ಎನ್ನುವ ಗುರುವಿನ ಕುರಿತಂತೆ ಬರೆಯುವಾಗಲೂ ಅವರು, ಒಂದು ಅಂತರವನ್ನು ಇಟ್ಟುಕೊಂಡೇ ಬರೆಯುತ್ತಾರೆ. ಎಲ್ಲೂ ಭಾವನಾತ್ಮಕವಾಗಿ ಕೊಚ್ಚಿ ಹೋಗದೆ ಅಥವಾ ತನ್ನನ್ನು ಉಳಿಸಿಕೊಳ್ಳುವ ಭರದಲ್ಲಿ ಬರಹಗಳನ್ನು ಬರೇ ವರದಿಯಾಗಿಯೂ ಉಳಿಸಿಕೊಳ್ಳದೇ ಹೊಸ ಕಥನ ಶೈಲಿಯ ಮೂಲಕ ಲಂಕೇಶ್ ಮತ್ತು ಡಿ. ಆರ್. ನಾಗರಾಜ್ ಅವರನ್ನು ಪರಿಚಯಿಸುತ್ತಾರೆ. ನಟರಾಜ್ ಅವರೇ ಹೇಳುವ ರೀತಿಯಲ್ಲಿ ಈ ಕೃತಿ ವಿವಿಧ ಪ್ರಕಾರಗಳು ಬೆರೆತ ಆಧುನಿಕೋತ್ತರ ಸಾಂಸ್ಕೃತಿಕ ಕಾದಂಬರಿಯೂ ಹೌದು. ಲಂಕೇಶ್ ಮತ್ತು ನಾಗರಾಜ್ ಅವರ ಕುರಿತಂತೆ ಹೊಸ ಓದಿಗೆ ನಿಮ್ಮನ್ನು ಈ ಕತಿ ಎಳೆಯುತ್ತದೆ. ಅದುವೇ ಈ ಕೃತಿಯ ಹೆಚ್ಚುಗಾರಿಕೆ. ಪಲ್ಲವ ಪ್ರಕಾಶನ ಹೊರತಂದಿರುವ ಈ ಪುಸ್ತಕದ  ಮುಖಬೆಲೆ 180 ರೂ. ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ-94803 53507

ಅಶಾಂತಿ ಪರ್ವ

ಅತ್ಯಾಚಾರ ಸುದ್ದಿಗಳು ಭಾರತದ ನೈತಿಕ ಬುಡವನ್ನೇ ಅಲುಗಾಡಿಸುತ್ತಿರುವ ಇಂದಿನ ಸಂದರ್ಭಕ್ಕೆ ಅನ್ವಯವಾಗುವ ಕವಿತೆ ದಿವಂಗತ ಬಿ. ಎಂ. ರಶೀದ್ ಬರೆದಿರುವ ‘ಅಶಾಂತಿ ಪರ್ವ’. ಅತ್ಯಾಚಾರವೆನ್ನುವುದು ಇಲ್ಲಿ ರಾಜಕೀಯ ರೂಪವನ್ನೂ ಪಡೆಯುತ್ತದೆ. ಶತಶತಮಾನಗಳಿಂದ ಹೇಗೆ ಭಾರತ ಬೇರೇ ಬೇರೆ ಶಕ್ತಿಗಳಿಂದ ದೌರ್ಜನ್ಯಕ್ಕೊಳಗಾಗುತ್ತಾ ಬಂತು ಮತ್ತು ಈಗ ತನ್ನವರಿಂದಲೇ ಹೇಗೆ ಶೋಷಣೆಗೀಡಾಗುತ್ತಿದೆ ಎನ್ನುವುದನ್ನು ತಿಳಿಸುವ ಪದ್ಯ ಇದು. ಬಿ. ಎಂ. ರಶೀದ್ ಅವರ ಪ್ರಪ್ರಥಮ ಪ್ರಕಟಿತ ಕವಿತೆ ಇದು. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಬರೆದಿರುವುದು. ಮಣಿಪಾಲ ಸಾಹಿತ್ಯ  ಸಂಘಟನೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಡಾ. ಟಿ. ಎಂ. ಎ. ಪೈ ಸ್ಮಾರಕ ಕನ್ನಡ ಆಶುಕವಿತಾ ರಚನೆಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕವನ. ಆಗ ಕವಿ ಉಪ್ಪಿನಂಗಡಿ ಸರಕಾರಿ ಕಾಲೇಜಿನ ವಿದ್ಯಾರ್ಥಿಯಾಗಿದ್ದ. ಈ ಕವಿತೆ ಮುಂದೆ ತರಂಗ ವಾರಪತ್ರಿಕೆಯಲ್ಲಿ 1992ರಲ್ಲಿ ಪ್ರಕಟವಾಯಿತು. ಈ ಕವನವನ್ನು ದಿ. ಬಿ. ಎಂ. ರಶೀದ್ ಅವರ ಸಮಗ್ರ ಬರಹಗಳ ಸಂಕಲನ ‘ಪರುಷಮಣಿ’ ಸಂಕಲನದಿಂದ ಆರಿಸಲಾಗಿದೆ.


ಅಶಾಂತಿ ಪರ್ವ
1
ಅಂದು ನೀನು ಹರೆಯದ ಬಾಲೆ
ಸಮೃದ್ಧ ದೇಹದ ಲಲನೆ
ನಿನ್ನ ಕೈ ಕಾಲು ಬಿಗಿದು; ಮೈ ಬರಿದು-
ಮಾಡಿದರು ಅತ್ಯಾಚಾರ...
ಬಿಳಿಯ-ಕರಿಯ
ದಿವಾನ-ಜವಾನ
ಹಗಲೂ-ರಾತ್ರಿ ಎನ್ನದೇ...
ನಿನ್ನ ಉಬ್ಬು-ತಗ್ಗು, ಏರಿಳಿತಗಳಲ್ಲಿ
ಕೈಯಿಳಿಸಿ, ಧ್ವಜವ ನೆಟ್ಟರು ಕಿತ್ತಾಡಿ
ಬಾಯಿಯಿಲ್ಲದ ಕೋಟಿಯಲ್ಲಿ ಯಾರೋ
ಕೆಲವು ಮಕ್ಕಳು ನಿನ್ನ ಬಾಯಾದರು

2
ಕಳಚಿ ಬಿತ್ತು ನಿನ್ನ ಸುತ್ತಿದ ಸಂಕಲೆ
ನರ ಸತ್ತವರಿಗಾಗ ಬಂತು ಉಸಿರು
ಉದ್ಘೋಷಿಸಿದರು ನಿನ್ನ ಹೆಸರು ಮೇಲೆ
ನಿನ್ನ ಬಾಯಾದವರು ಹುಡುಕಿದರೆ ತೆಪ್ಪಗೆ ಮೂಲೆ
ನೀನು ಪೊರೆವ ತೊಟ್ಟಿಲಾದವಳು; ಮೆರೆವ ಮಡಿಲಾದವಳು
ಬೆದೆಗೆ ಬಂದ ನಿನ್ನ ಹೈಕಳೋ ‘ಈಡಿಪಸ್’ಗಳಾದರು
ಸರಿ ರಾತ್ರಿಯಲಿ ನಿನ್ನ ಉಡಿಗೆ ಕೈಯಿಕ್ಕಿದರು
ಹಾರಿದರು; ಏರಿದರು; ಊರಿದರು
ಬರಿ ಬರಿದು ಮಾಡಿ ತೋಡಿದರು
ಖಾದಿ-ಗಾದಿಗಾಗಿ ನಿನ್ನ ಅಡವಿಟ್ಟು ಮಾರಿದರು

3
ಈಗೆಲ್ಲಿ ನಿನ್ನೊಳಗಿನ ಲಾಲಿತ್ಯದ ಬಾಲೆ...?
ನೀನೋ ಈಗ ಮೂರು ಕಾಸಿಗೂ ಬೇಡದ
ಬಡಕಲು ಮೈಯ ಸೂಳೆ!
ಬಹು ಪರಾಕು; ಭಟ್ಟಂಗಿತನದ ‘ಬ್ರಾ’ದೊಳಗಿರುವ
ನಿನ್ನ ಬತ್ತಿ ಬರಡಾದ ಮೊಲೆಗಾಗಿ
ಹಂಬಲಿಸಿ ಬರುವ ಹೈಕಳಿಗೆ ಏನನ್ನಿಡುವೆ ನಾಳೆ...?

4
ನಿನ್ನ ತಲೆ ಕಾಶ್ಮೀರ,
ಹೃದಯ ಪಂಜಾಬ
ಭುಜದಲ್ಲೊಂದು ಅಯೋಧ್ಯೆ,
ಕಾಲ ಬುಡದಲ್ಲೊಂದು ಲಂಕೆ
ಮೈಯ ನರನರಗಳಲ್ಲೂ ಕುಲುಮೆ ಬೆಂಕಿ
ಮುಖದ ಸುಕ್ಕುಗಳಲ್ಲಿ ಹೃದಯದ ಬಿಕ್ಕು
ತನ್ನೊಡನೆ ಗರ್ಭದಲ್ಲಿ
ಜೀವ ಸೆಲೆಯೊರತೆಯ ಕೊರತೆಗೆ
ಸುಟ್ಟು ಕರಕಲಾದ ರಾಷ್ಟ್ರಪಿತನ ಕನಸಿನ ಬೀಜಗಳು
ಮತ್ತೆ ಚಿಗುರೀತೆ... ? ಚಿಗಿತು ಅರಳೀತೇ... ?

Tuesday, November 11, 2014

ಮಲಾಲಾ ಆತ್ಮಕತೆ: ಅರ್ಧಸತ್ಯ

" ಐ ಆ್ಯಮ್ ಮಲಾಲ’’ ಕೃತಿ ಮಲಾಲಾ ಯೂಸುಫ್ ಝಾಯಿಯ ಆತ್ಮಕತೆ. 2014ರ ನೊಬೆಲ್ ಶಾಂತಿ ಪುರಸ್ಕೃತ ಬಾಲಕಿ, ಇಂದು ಹಲವು ಅಂತಾರಾಷ್ಟ್ರೀಯ ಕಾರಣಗಳಿಗಾಗಿ ಜಗತ್ತಿನಾದ್ಯಂತ ಸುದ್ದಿಯಾಗಿದ್ದಾರೆ.ತಾಲಿಬಾನ್ ಮತ್ತು ಮುಸ್ಲಿಮ್ ಮೂಲಭೂತವಾದದ ವಿರುದ್ಧಸೆಡ್ಡು ಹೊಡೆದ ಬಾಲಕಿಯಾಗಿ ಪಶ್ಚಿಮ ದೇಶಗಳು ಈಕೆಯನ್ನು ಗೌರವಿಸುತ್ತಿದೆ. ಇದೇ ಸಂದರ್ಭದಲ್ಲಿ ಪಶ್ಚಿಮ ದೇಶದ ಸೋಗಲಾಡಿತನ ಮತ್ತು ದ್ವಂದ್ವಗಳ ಸೃಷ್ಟಿಯಾಗಿಯೂ ಮಲಾಲಾ ಗುರುತಿಸಲ್ಪಡುತ್ತಿದ್ದಾಳೆ. ಭಯೋತ್ಪಾದನೆಯ ವಿರುದ್ಧದ ತನ್ನ ಹೋರಾಟಕ್ಕೆಮಲಾಲ ಎನ್ನುವ ಹೆಣ್ಣು ಮಗಳನ್ನು ಪಶ್ಚಿಮ ದೇಶಗಳುಗುರಾಣಿಯಾಗಿಸಿಕೊಳ್ಳುತ್ತಿದೆ ಎನ್ನುವುದು ಒಂದುಟೀಕೆ.ಇದೇಸಂದರ್ಭದಲ್ಲಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಂತಹ ದೇಶಗಳಲ್ಲಿ ಮಹಿಳೆಯಶೋಷಣೆಯ ವಿರುದ್ಧ ಹುಟ್ಟಿಕೊಂಡ ಧ್ವನಿಯಾಗಿಯೂ ಮಲಾಲಾ ನಮ್ಮ ನಡುವೆ ಗುರುತಿಸಲ್ಪಡುತ್ತಾಳೆ. ಪಶ್ಚಿಮ ದೇಶಗಳು ಕಟ್ಟಿಕೊಡುತ್ತಿರುವ ಮಲಾಲಾ ಆಚೆಗೂ ಆಕೆಯಿಂದ ಈ ಜಗತ್ತು ಪಡೆದುಕೊಳ್ಳುವಂತಹದ್ದು ದೊಡ್ಡದಿದೆ. ಆದುದರಿಂದ, ಈ ಬಾಲಕಿಯ ಧ್ವನಿ ಯಾವ ರೀತಿಯಲ್ಲೂ ತಿರಸ್ಕಾರಕ್ಕೆಒಳಗಾಗುವಂತಹದ್ದಲ್ಲ.ಈ ಸಂದರ್ಭದಲ್ಲೇ ಮಲಾಲಾ ಆತ್ಮಕತೆ ಸುದ್ದಿಯಾಗತೊಡಗಿತು. ಈ ಕೃತಿ ಕೆಲವು ಕಾರಣಗಳಿಂದ ಮುಖ್ಯವಾಗುತ್ತದೆ. ಇದೇ ಸಂದರ್ಭದಲ್ಲಿ ಒಂದು ಆತ್ಮಕತೆಯಾಗಿ ಇದನ್ನು ಓದುವಾಗ ಹಲವು ಸಂಶಯಗಳನ್ನೂ ಹುಟ್ಟಿಸುತ್ತದೆ. ಇದು ಮಲಾಲಾ ಆತ್ಮಕತೆಯಾಗಿದ್ದರೂ ಅದನ್ನು ನಿರೂಪಿಸಿರುವುದು ಕ್ರಿಸ್ಟಿನಾಲ್ಯಾಂಬ್ ಎನ್ನುವ ಪಶ್ಚಿಮ ದೇಶದ ಪತ್ರಕರ್ತೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳ ವಿದೇಶಿ ವರದಿಗಾರ್ತಿಯಾಗಿ ಕೆಲಸಮಾಡಿರುವವರು ಲ್ಯಾಂಬ್. ಇದೊಂದು ಬೃಹತ್ ಕೃತಿ.ಇದು ಕೇವಲ ಮಲಾಲಾ ಆತ್ಮಕತೆಯಲ್ಲ.ಬದಲಿಗೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹೆಣ್ಣುಮಕ್ಕಳಶೋಚನೀಯ ಸ್ಥಿತಿಗಳ ಕುರಿತಂತೆಯೂ ಕೃತಿ ಪ್ರೌಢವಾಗಿ ಮಾತನಾಡುತ್ತದೆ. ಅಲ್ಲಿಯ ರಾಜಕೀಯ ಬದಲಾವಣೆಗಳ ಬಗ್ಗೆ ಚರ್ಚಿಸುತ್ತದೆ. ಆದುದರಿಂದ ಲ್ಯಾಂಬ್ ಅವರು ಮಲಾಲಾಮಾತುಗಳನ್ನು ಕೇವಲ ನಿರೂಪಿಸಿದ್ದಾರಷ್ಟೇ ಎಂದು ನಂಬುವಂತೆ ಈ ಕೃತಿ ಇಲ್ಲ. ತನ್ನ ಮಾತುಗಳನ್ನು ಕ್ರಿಸ್ಟಿನಾಲ್ಯಾಂಬ್ ಮಲಾಲಾ ಬಾಯಿಯಲ್ಲಿ ಆಡಿಸಿದ್ದಾಳೆಯೋ ಎಂಬ ಅತೃಪ್ತಿ ಪುಟಪುಟಗಳಲ್ಲೂ ನಮಗೆ ಕಾಣಿಸುತ್ತದೆ. ಏಷ್ಯಾದ ರಾಜಕೀಯ ಮಗ್ಗುಲುಗಳನ್ನು ಪಶ್ಚಿಮ ದೇಶದ ಕಣ್ಣಿನಲ್ಲಿ ನೋಡಲಾಗಿರುವ ಕೃತಿ ಇದಾಗಿರಬಹುದೇ ಎಂಬ ಅನುಮಾನ ನಮ್ಮನ್ನು ಕಾಡುತ್ತದೆ. ಆದುದರಿಂದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ದುಃಸ್ಥಿತಿಗೆ ಕಾರಣವಾದ ಪಶ್ಚಿಮ ದೇಶಗಳ ಆಷಾಢಭೂತಿತನ ಇಲ್ಲಿ ಕಾಣ ಸಿಗುವುದಿಲ್ಲ. ತಾಲಿಬಾನ್‌ಗಳ ಕ್ರೌರ್ಯದ ಕುರಿತಂತೆ ಮಾತನಾಡುವ ಮಲಾಲ ಕೃತಿ, ತಾಲಿಬಾನ್ ಹುಟ್ಟಿಗೆ ಕಾರಣವಾಗಿರುವ ಅಮೆರಿಕದಂತಹ ದೇಶಗಳಸಂಚುಗಳ ಕುರಿತಂತೆ ಮೌನವಾಗುತ್ತದೆ. ಆದುದರಿಂದ ಒಂದು ದೊಡ್ಡ  ಕೃತಿಯಾಗಿಯೂ ಇದು ಪಾಕಿಸ್ತಾನ, ಅಫ್ಘಾನಿಸ್ತಾನದ ವಾಸ್ತವಗಳ ಆಳಕ್ಕಿಳಿಯದೆ ಮೇಲಿಂದ ಮೇಲೆ ನಿರೂಪಿತವಾಗುತ್ತಾ ಹೋಗುತ್ತದೆ. 
ಇಡೀ ಕೃತಿ ರೋಚಕವಾಗಿದೆ. ನಿರೂಪಣೆ ಅಷ್ಟೇ ನಾಟಕೀಯವೂ ಆಗಿದೆ. ಮಲಾಲಾಳ ಮುಗ್ಧತೆ ಇಲ್ಲಿ ಕಾಣುವುದಿಲ್ಲ. ಪ್ರಬುದ್ಧ ಪತ್ರಕರ್ತೆಯ ಧ್ವನಿ ಆತ್ಮಕತೆಯಲ್ಲಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ರಾಜಕೀಯ ಹೇಗೆ ಅಲ್ಲಿನ ಶಿಕ್ಷಣ ಮತ್ತು ಮಹಿಳೆಯ ಮೇಲೆ ಪ್ರಭಾವ ಬೀರಿತು, ತಾಲಿಬಾನಿಗಳು ಹೇಗೆ ಸಂಗೀತದ ತುಟಿಯನ್ನು ಹೊಲಿದರು ಎನ್ನುವುದನ್ನು ಕೃತಿ ಹೇಳುತ್ತದೆ. ಪಾಕಿಸ್ತಾನದ ಆಡಳಿತದ ಇತಿಹಾಸವನ್ನು ಮುಟ್ಟುತ್ತಾ, ಹೇಗೆ ಅಲ್ಲಿ ಮೂಲಭೂತವಾದ ಹಂತಹಂತವಾಗಿ ತನ್ನ ಕಬಂಧ ಬಾಹುವನ್ನು ಚಾಚಿತು ಎನ್ನುವುದನ್ನು ಹೇಳುತ್ತದೆ. ಹಲವು ವಾಸ್ತವಗಳನ್ನು ಮುಟ್ಟೂದಕ್ಕೆ, ವಿಪರ್ಯಾಸಗಳ ತೊಡಕುಗಳನ್ನು ಮುಟ್ಟಲು ಈ ಕೃತಿಗೆ  ಯಾಕೆ ಸಾಧ್ಯವಾಗಲಿಲ್ಲ ಎಂದರೆ ಇದನ್ನು ಮಲಾಲಾ ಮತ್ತು ಲ್ಯಾಂಬ್ ಜೊತೆಗೂಡಿ ಬರೆದಿದ್ದಾರೆ. ಅಥವಾ ಮಲಾಲಾಳನ್ನು ನೆಪವಾಗಿಟ್ಟುಕೊಂಡು ಲ್ಯಾಂಬ್ ನಿರೂಪಿಸಿದ ಕತೆಯಿದು.ಪಶ್ಚಿಮದ ಪತ್ರಕರ್ತೆ ತನ್ನ ಕಣ್ಣಿನ ಮೂಲಕಕಂಡ ಪಾಕಿಸ್ತಾನ, ಅಫ್ಘಾನಿಸ್ತಾನದ ಚರಿತ್ರೆಯನ್ನು ಮಲಾಲ ಮೂಲಕ ನಿರೋಪಿಸಿದ್ದಾರೆ. .ಈ ಎಲ್ಲ ಮಿತಿಗಳನ್ನು ಅರಿತು ಈ ಕೃತಿಯನ್ನು ಓದಿದರೆ ಹೆಣ್ಣಿನ ಶೋಷಣೆಯ ಹಿಂದಿರುವ ರಾಜಕೀಯದ ಒಂದು ಮುಖವನ್ನು ನಾವು ನಮ್ಮದಾಗಿಸಿಕೊಳ್ಳುವಲ್ಲಿ ಸಂಶಯವಿಲ್ಲ.
ಇದನ್ನು ಕನ್ನಡಕ್ಕಿಳಿಸಿದ ಬಿ.ಎಸ್. ಜಯಪ್ರಕಾಶ್ ನಾರಾಯಣ ಅವರ ಪ್ರಯತ್ನವನ್ನು ನಾವುಮೆಚ್ಚಬೇಕಾಗಿದೆ. ಒಂದು ಭಾಷೆಯಿಂದ ಮತ್ತೊಂದು ಭಾಷೆಗೆಇಂತಹ ಆತ್ಮಕತೆಗಳನ್ನು ಇಳಿಸುವುದು ಸುಲಭವಲ್ಲ.ಇಂತಹ ಸಂದರ್ಭದಲ್ಲಿ ತನ್ನ ಸರಳಗನ್ನಡದಲ್ಲಿ ಮಲಾಲಾ ಕತೆಯ ರೋಚಕತೆ ಸಡಿಲವಾಗದಂತೆ ಜೋಪಾನವಾಗಿ ಅನುವಾದಿಸಿದ್ದಾರೆ. ಕನ್ನಡಕ್ಕೆ ಬಂದ ಒಂದು ಅಪರೂಪದಇಂಗ್ಲಿಷ್ ಅನುವಾದಇದು ಎನ್ನುವುದರಲ್ಲಿ ಎರಡು ಮಾತಿಲ್ಲ.
***
ಆಕೃತಿ ಪುಸ್ತಕ ಬೆಂಗಳೂರು ಈ ಅನುವಾದಿತ ಕೃತಿಯನ್ನು ಹೊರತಂದಿದೆ. ಕೃತಿಯ ಮುಖ ಬೆಲೆರೂ. 250/- ಕೃತಿಗಾಗಿ  080-2340 9479
ದೂರವಾಣಿ ಸಂಖ್ಯೆ ಯನ್ನು ಸಂಪರ್ಕಿಸಬಹುದು. 


ಹೊಳೆದದ್ದು ಹೊಳೆದಂತೆ-6

 1
ವಿಚಾರ ಮತ್ತು ವಿಜ್ಞಾನ ಹೃದಯ ಶೂನ್ಯವಾದರೆ ಮನುಷ್ಯನ ಪಾಲಿಗೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತದೆ.
2
ಮನುಷ್ಯ ಗಡಿಯಾರವನ್ನಷ್ಟೇ ಸೃಷ್ಟಿಸಿದ. ಆದರೆ ಸಮಯವನ್ನು ಸೃಷ್ಟಿಸಿದವನಂತೆ ವರ್ತಿಸುತ್ತಾನೆ.
3
"ಗಂಡು-ಹೆಣ್ಣು ಸಮಾನರು'' ಈ ಸವಕಲು ಹೇಳಿಕೆಯನ್ನು ಹುಟ್ಟು ಹಾಕಿದಾತನೆ ಗಂಡು.  ಆತನ ಕೀಳರಿಮೆ, ಆತಂಕ ಹುಟ್ಟು ಹಾಕಿದ ಪದ ಇದು. ಗಂಡು ಹೆಣ್ಣು ಸಮಾನರಾಗಲಾರರು. ಗಂಡು ಯಾವತ್ತೂ ಹೆಣ್ಣಿಗೆ ಸಾಟಿಯಾಗಲಾರ. ತನ್ನ ರೆಟ್ಟೆಯ ಬಲವೊಂದನ್ನಷ್ಟೇ ನೆಚ್ಚಿಕೊಂಡು ಹೆಣ್ಣಿಗೆ ಸಮನಾಗಲು ತುಡಿಯುವ ಗಂಡು ದೊಡ್ಡ ಆತ್ಮ ವಂಚಕ

Saturday, November 8, 2014

ಮುಂಬೈಯ ಬದುಕು-ಮರೆತೇನೆಂದರೆ ಮರೆಯಲಿ ಹ್ಯಾಂಗ...

ನನ್ನ ಬಿ ಎ ಮುಗಿದಾಕ್ಷಣ ನಾನು ಊರಿಂದ ಮುಂಬೈಗೆ ಪಲಾಯನ ಮಾಡಿದೆ. ಮುಂಬೈ ಕನ್ನಡ ನನ್ನನ್ನು ಮನೆ ಮಗನಂತೆ ಪ್ರೀತಿಯಿಂದ ಸ್ವೀಕರಿಸಿತು.(ಈ ಕುರಿತ ಹಲವು ವಿವರಗಳನ್ನು ಹಿಂದೆ ಹಲವು ಬಾರಿ ಗುಜರಿ ಅಂಗಡಿಯಲ್ಲಿ ಬರೆದಿದ್ದೆ). ಕರ್ನಾಟಕ ಮಲ್ಲ ಕನ್ನಡ ದೈನಿಕದಲ್ಲಿ ಕೆಲಸ ಮಾಡುತ್ತಲೇ ಮುಂಬೈ ವಿ ವಿ ಯಲ್ಲಿ ಚಿನ್ನದ ಪದಕದ ಜೊತೆಗೆ ಕನ್ನಡ ಎಂ ಎ ಮುಗಿಸಿದೆ. ನೂರಾರು ಕನ್ನಡ ಮನಸ್ಸಿನ ಆತ್ಮೀಯ ಗೆಳೆಯರನ್ನು ಪಡೆದೆ. ಚಿತ್ತಾಲ, ವ್ಯಾಸ ರಾಯ ಬಲ್ಲಾಳ, ಬಿ ಎ ಸನದಿ, ರವಿ ರಾ ಅಂಚನ್, ಬನ್ನಂಜೆ ಬಾಬು ಆಮೀನ್, ಸುನೀತಕ್ಕ, ಜಯಂತ್ ಕಾಯ್ಕಿಣಿ  ಮೊದಲಾದ ಹಿರಿ ಮರಗಳ ನೆರಳನ್ನು ಪಡೆದೆ.  ನಾನು ಹುಟ್ಟಿದ್ದೇ ಮುಂಬೈಯಲ್ಲಿ ಎಂಬಂತೆ ಸುಮಾರು ಐದು ವರ್ಷಗಳನ್ನು ಅಲ್ಲಿ ಬದುಕಿದೆ.  ಅಲ್ಲಿಂದ ಮರಳಿದ ಬಳಿಕವೂ ಮುಂಬೈಯನ್ನು ಮರೆಯಲು ನನ್ನಿಂದ ಸಾಧ್ಯವಾಗಿಲ್ಲ. ಅದು ನನಗೆ ಆಶ್ರಯ, ಅನ್ನವನ್ನು ಕೊಟ್ಟ ನೆಲ. ನನ್ನ ಸಾಹಿತ್ಯಾಸಕ್ತಿಯ ಬುಡಕ್ಕೆ ನೀರೆರೆದ ಗೆಳೆಯರನ್ನು ಮರೆಯೋದು ಹೇಗೆ ಸಾಧ್ಯ? ಬಹುಶ ಮುಂಬೈ ಬದುಕು ನನ್ನ ಪಾಲಿನ ಒಂದು ಜನ್ಮವೇ ಆಗಿರಬಹುದು.  ಮೊನ್ನೆ ಹಳೆ ಆಲ್ಬಮ್ ಗಳನ್ನ ತಡವುತ್ತಿದ್ದಾಗ ಎಲ್ಲ ನೆನಪುಗಳು ಒದ್ದು ಬಂದವು. ಕಣ್ಣು ಹನಿಯಾಯಿತು. ಧಾರಾವಿ ಸಮೀಪದ 90 ಫೀಟ್ ರಸ್ತೆಯಲ್ಲಿ ಮುಂಬೈ ವಿ ವಿ ಕಡೆ ಹೋಗುವ ೩೧೨ ಬಸ್ಸಿಗಾಗಿ ಕಾಯುತ್ತಿರುವ ನನ್ನನ್ನು ನಾನು ಮತ್ತೊಮ್ಮೆ ಈ ಫೋಟೋ ಗಳಲ್ಲಿ ನೋಡಿದೆ. 90 ಫೀಟ್ ರಸ್ತೆಯ ಉದ್ದಕ್ಕೂ ನಡೆಯುತ್ತಾ ಮಾಟುಂಗಾದ ಕರ್ನಾಟಕ ಸಂಘವನ್ನು ತಲುಪುತ್ತಿರುವ ಆ ಬಶೀರ ನಿಜಕ್ಕೂ ನಾನೇ ಆಗಿರಬಹುದೇ ಎಂಬ ಕುರಿತು ಸಣ್ಣದೊಂದು ಅನುಮಾನ ಕಾಡಿತು.  ಫೋಟೋಗಳಲ್ಲಿ ಅದೇನು ಸಿಹಿಯಿತ್ತೋ ಕೆಲವನ್ನು ನನ್ನ ಪ್ರೀತಿಯ ಇರುವೆಗಳು ತಿಂದು ಹಾಕಿದ್ದವು. ಉಳಿದವುಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. 

ನಾವೇ ಒಂಬತ್ತು ಮಂದಿ ಗೆಳೆಯರು  ಕಟ್ಟಿಕೊಂಡ "ಮುಂಬೈ ಚುಕ್ಕಿ ಸಂಕುಲ" ಗುಂಪು ಸಂಪಾದಿಸಿದ "ಚುಕ್ಕಿ ಕತೆಗಳು" ಕೃತಿಯ ಬಿಡುಗಡೆ ಸಮಾರಂಭದಲ್ಲಿ ಕವನ ಓದುವ ಮೂಲಕ ಕಾರ್ಯಕ್ರಮ ಆರಂಭಿಸುತ್ತಿರೋದು.
 
ಮುಂಬೈ ವಿಶ್ವ ವಿದ್ಯಾಲಯ ಕುಲಪತಿಗಳಿಂದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಸ್ನಾತ್ತಕೋತ್ತರ ಪದವಿ ಪತ್ರ ಸ್ವೀಕರಿಸುತ್ತಿರೋದು

ಗೆಳೆಯ ಸಾ. ದಯಾ ನಿರ್ದೇಶಿದ "ಉಬರ್" ತುಳು ನಾಟಕದಲ್ಲಿ. ಮಧ್ಯದಲ್ಲಿರುವ ಹುಡುಗನೊಬ್ಬ(ಕಪ್ಪು ಅಂಗಿ) ಅದೇನೋ ಹೇಳಲು ಪ್ರಯತ್ನಿಸುತ್ತಿದ್ದಾನಲ್ಲ, ಅದು ನಾನು 

ಮುಂಬೈಯ ಕರ್ನಾಟಕ ವಿಶ್ವ ಕರ್ಮ ಅಸೋಸಿಯೇಶನ್ ಹಮ್ಮಿಕೊಂಡ ಕವಿಗೋಷ್ಠಿಯಲ್ಲಿ ನಾನು ಕವಿತೆ ವಾಚಿಸುತ್ತಿರೋದು
ಮುಂಬೈ ವಿವಿ ಕನ್ನಡ ವಿಭಾಗದ ಕಾರ್ಯಕ್ರಮದಲ್ಲಿ ನಾನು ಮಾತಾಡ್ತಾ ಇರೋದು. ವೇದಿಕೆಯಲ್ಲಿ ಆಗಿನ ವಿಭಾಗದ ಮುಖ್ಯಸ್ಥರಾದ ತಾಳ್ತಜೆ ವಸಂತ ಕುಮಾರ್, ಹಿರಿಯ ಕನ್ನಡ ಸಂಘಟದ, ಲೇಖಕ ಜಿ ಡಿ ಜೋಷಿ ಮೊದಲಾದವರು ಇದ್ದಾರೆ.

೧೯೯೬ ರಲ್ಲಿ ಮುಂಬೈಯಲ್ಲಿ ಇರುವಾಗಲೇ, ನನ್ನ ಕವನ ಸಂಕಲನ "ಪ್ರವಾದಿಯ ಕನಸು" ಹಸ್ತಪ್ರತಿಗೆ ಮುದ್ದಣ ಕಾವ್ಯ ಪ್ರಶಸ್ತಿ ದೊರಕಿತು. ಕಾಂತಾವರದಲ್ಲಿ ಹರಿಕೃಷ್ಣ ಪುನರೂರು ಅವರು ಶಾಲು ಹೊದಿಸಿ ಸನ್ಮಾನಿಸಿ, ಪ್ರಶಸ್ತಿ ನೀಡಿದರು. ಹೇಗಿದೆ ಫೋಟೋ !?
ಮಹಾರಾಷ್ಟ್ರ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿತೆ ಓದುತ್ತಿರೋದು.
ಗೋರೆಗಾಂವ್ ಕರ್ನಾಟಕ ಸಂಘ ಹಮ್ಮಿಕೊಂಡ ವಿಚಾರ ಭಾರತಿ ಸಮ್ಮೇಳನದಲ್ಲಿ
ಮುಂಬೈಯ ಕರ್ನಾಟಕ ಮಲ್ಲ ಕನ್ನಡ ದೈನಿಕ ಕಚೇರಿಯಲ್ಲಿ ಒಂದು ಭಂಗಿ
ನಮ್ಮದೇ ಮುಂಬೈ ಚುಕ್ಕಿ ಸಂಕುಲ ಹಮ್ಮಿಕೊಂಡ ಕಾರ್ಯಕ್ರಮವೊಂದರಲ್ಲಿ
ಮುಂಬೈಯ ತೌಳವ ಸಂಘಗಳ ತುಳು ಪರ್ಬದಲ್ಲಿ
ಯಾವ ಕಾರ್ಯಕ್ರಮದಲ್ಲಿ ಎಂದು ನೆನಪಿಲ್ಲ
ಕರ್ನಾಟಕ ಮಲ್ಲ ದೈನಿಕದ ಪಿಕ್ ನಿಕ್ ನಲ್ಲಿ, ಹಳದಿ ಟೀ ಶರ್ಟ್ ಹಾಕಿ, ಬೈರಾಸ್ ಉಟ್ಟು ಎರಡು ಕೈ ಮೇಲೆತ್ತಿರೋದು ನಾನೇ 
ಆನಗಳ್ಳಿ ನಿರ್ದೇಶಿಸಿದ ಕಂಬಾರರ ಸಿರಿಸಂಪಿಗೆ ನಾಟಕದಲ್ಲಿ ಅವಳಿ ಜವಳಿ ಪಾತ್ರದಲ್ಲಿ ಜವಳಿ ಪಾತ್ರವನ್ನು ನಾನು ನಿರ್ವಹಿಸಿದ್ದೆ. ಸುರೇಶ ಆನಗಳ್ಳಿ ಹಿಂದೆ ಎರಡು ಜೋಕರ್ ಗಲಿದ್ದಾರಲ್ಲ ಅದರಲ್ಲಿ ಬಲಭಾಗದಲ್ಲಿ ಹಲ್ಲು ಕಿರಿಯುತ್ತಿರೋದು ನಾನು. ಸಿರಿ ಸಂಪಿಗೆ ಪಾತ್ರವನ್ನು ಹಾ. ಮಾ ಕನಕ ನಿರ್ವಹಿಸಿದ್ದರು
ನನ್ನ ಪ್ರವಾದಿಯ ಕನಸು ಸಂಕಲನಕ್ಕೆ ದೊರಕಿದ ಮುದ್ದಣ ಕಾವ್ಯ ಪ್ರಶಸ್ತಿ ಫಲಕಗಳ ಜೊತೆಗೆ
ಮುಂಬೈ ಕರ್ನಾಟಕ ಸಂಘದಲ್ಲಿ ವ್ಯಾಸರಾಯ ನಿಂಜೂರು ಅವರಿಂದ ಅದ್ಯಾವುದೋ ಪ್ರಮಾಣ ಪತ್ರ
ಮುಂಬೈ ಚುಕ್ಕಿ ಸಂಕುಲದ ಕಾರ್ಯಕ್ರಮವೊಂದರಲ್ಲಿ ಸಮೂಹ ಗಾಯನ. ಗೆಳೆಯ ಸಾ ದಯಾ, ಕುಸುಮ, ಗೋಪಾಲ್, ಶಾಂತಲಾ ಮೊದಲಾದವರು ಇದ್ದಾರೆ
ಗೆಳೆಯ ಸಾ ದಯಾ ನಿರ್ದೇಶಿಸಿದ "ಗರ್ಭ" ನಾಟಕದಲ್ಲಿ. ಕೊಡೆ ರಿಪೇರಿ ಮಾಡುತ್ತಿರೋದು ನಾನು
ಕರ್ನಾಟಕ ಮಲ್ಲದ ಗೆಳೆಯರ ಜೊತೆ. ಕುಳಿತವರಲ್ಲಿ ಎರಡನೆಯವನು ನಾನು. ಜೊತೆಗೆ ಹರೀಶ್, ಭಾರತಿ, ಉಮೇಶ್, ದಯಾನಂದ್ ಪೆರ್ಮುದೆ ಮೊದಲಾದವರು ಇದ್ದಾರೆ