Monday, December 31, 2012

ಹೊನ್ನೆಮರಡು ನಡುಗಡ್ಡೆಯಲ್ಲಿ ಪತ್ರಕರ್ತರು ಮತ್ತು ಸೂರ್ಯನ ಪತ್ರಿಕಾಗೋಷ್ಠಿ!

 ಪ್ರಾರ್ಥನೆ ಎಂದರೇನು?
ಕಣ್ತೆರೆದು ನೋಡೋದು
ಕಿವಿತೆರೆದು ಕೇಳೋದು
ನನ್ನ ದೊರೆಯೇ...
ನಿನ್ನ ಅನುಭವದಿಂದ
ರೋಮಾಂಚನಗೊಳ್ಳುವುದು...!

                             -ಒಬ್ಬ ಸೂಫಿ ಕವಿಯ ಹಾಡು

ಸಾಧಾರಣವಾಗಿ ವಾರ್ತಾ ಇಲಾಖೆಗಳಿರುವುದು, ಸರಕಾರಿ ಕಾರ್ಯಕ್ರಮ ಗಳಿಗೆ ಪತ್ರಕರ್ತರನ್ನು ಸಾಗಿಸುವ ಮಾಧ್ಯಮ ವಾಗಿ ಮಾತ್ರ ಎಂದು ಕೆಲವು ಅಧಿಕಾರಿಗಳು ನಂಬಿರುತ್ತಾರೆ. ರಾಜಕಾರಣಿಗಳ ಕಾರ್ಯ ಕ್ರಮಗಳಿಗೆ ಪತ್ರಕರ್ತ ರನ್ನು ಕೊಂಡೊಯ್ಯುವುದು. ಸದಾ ಜಿಲ್ಲಾ ಉಸ್ತುವಾರಿಯ ನೆರಳಲ್ಲಿ ಓಡಾಡಿಕೊಂಡು, ತಮ್ಮ ಸ್ಥಾನವನ್ನು ಕಾಪಾಡಿಕೊಳ್ಳುವುದು, ಇಷ್ಟಾದರೆ ನಮ್ಮ ಕೆಲಸ ಮುಗಿಯಿತು ಎಂದು ನಂಬಿದವರ ದೊಡ್ಡ ಸಂಖ್ಯೆಯೇ ಇದೆ.. ಆದರೆ ಎಲ್ಲ ವಾರ್ತಾಧಿ ಕಾರಿಗಳು ಹೀಗೆಯೇ ಇರಬೇಕೆಂದಿಲ್ಲ. ತನ್ನ ಸೀಮಿತ ಅಧಿಕಾರ ಮತ್ತು ವ್ಯಾಪ್ತಿಯಲ್ಲಿ ಪತ್ರಿಕೋ ದ್ಯಮದ ಅನಂತ ಸಾಧ್ಯತೆಗಳಿಗೆ ತಮ್ಮನ್ನು ತೆರೆದು ಕೊಂಡ ಹಲವು ಅಧಿಕಾರಿಗಳನ್ನು ನಮ್ಮ ನಡುವೆ ಗುರುತಿ ಸಬಹುದಾಗಿದೆ. ಡಿಸೆಂಬರ್ 27, 28ರಂದು ಇಂತಹದೇ ಒಂದು ಯಶಸ್ವೀ ಪ್ರಯೋಗವನ್ನು ಶಿವಮೊಗ್ಗ ಜಿಲ್ಲಾ ವಾರ್ತಾಧಿಕಾರಿಯೊಬ್ಬರು ನಡೆಸಿದರು. ಪತ್ರಕರ್ತರು ಮತ್ತು ಪರಿಸರದ ನಡುವೆ ಒಂದು ಕೊಂಡಿಯಾಗಿ, ಪತ್ರಕರ್ತರಲ್ಲಿ ಪರಿಸರದ ಕುರಿ ತಂತೆ ಹೊಸ ಒಳನೋಟವನ್ನು ನೀಡಲು ಪ್ರಯತ್ನಿಸಿದವರು ಶಿವಮೊಗ್ಗ ವಾರ್ತಾಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು. ಅವರ ಈ ‘ಸಾಹಸ’ಕ್ಕೆ ಕೈ ಜೋಡಿಸಿದ್ದು ಭಾರತೀಯ ಸಾಹಸ ಸಮನ್ವಯ ಕೇಂದ್ರ ಹೊನ್ನೆಮರಡು. ಮುಖ್ಯವಾಗಿ ಶಿವಮೊಗ್ಗ ಜಿಲ್ಲಾ ಪತ್ರಕರ್ತರನ್ನೇ ಕೇಂದ್ರವಾಗಿಟ್ಟುಕೊಂಡು ಮಾಡಿದ ಈ ಕಾರ್ಯಕ್ರಮದಲ್ಲಿ, ಬೆಂಗಳೂರು, ಮಂಗಳೂರಿನ ಪತ್ರಕರ್ತರೂ ಸೇರಿಕೊಂಡಿದ್ದರು. ‘‘ಶಿವಮೊಗ್ಗದ ಹೊನ್ನೆಮರಡುವಿನಲ್ಲಿ ವಿಚಾರ ಸಂಕಿರಣ ಇದೆ. ಹೋಗ್ತೀರಾ?’’ ಎಂದು ಗೆಳೆಯರೊಬ್ಬರು ಕೇಳಿದಾಗ ನಾನು ನಿರಾಕರಿಸಿದ್ದೆ. ಆದರೆ ಅದೇ ಕ್ಷಣದಲ್ಲಿ ‘‘ನೋಡ್ರೀ...ಅರ್ಧ ಗಂಟೆ ದೋಣಿಯಲ್ಲಿ ಪಯಣ....ರಾತ್ರಿ ಹೊನ್ನೆಮರಡು ದ್ವೀಪದಲ್ಲಿ ಟೆಂಟು.... ಬೆಳದಿಂಗಳ ರಾತ್ರಿಯ ಊಟ...’’ ಎಂಬಿತ್ಯಾದಿ ಯಾಗಿ ಹೇಳಿದ್ದೆ....ಧಿಗ್ಗನೆ ಎದ್ದು ಕೂತು ‘‘ಇಗೋ ಹೊರಟೆ’’ ಎಂದು ಸಿದ್ಧನಾಗಿ ಬಿಟ್ಟಿದ್ದೆ.
ಹೊನ್ನೆಮರಡುವಿಗೆ ಶಿವಮೊಗ್ಗದಿಂದ ಸುಮಾರು ಒಂದೂವರೆ ಗಂಟೆಯ ಪ್ರಯಾಣ ಬೇಕು. ಸಾಗರ ತಲುಪಿದರೆ, ಕೇವಲ ಇಪ್ಪತ್ತು ನಿಮಿಷದಲ್ಲಿ ಹೊನ್ನೆಮರಡನ್ನು ತಲುಪಬಹುದು. ಈ ಹೊನ್ನೆಮರಡುವಿನ ವಿಶೇಷ ಆಕರ್ಷಣೆ ಯೆಂದರೆ ಇಲ್ಲಿನ ಪುಟ್ಟ ದ್ವೀಪ, ದೋಣಿಯ ಪಯಣ... ನಡುಗಡ್ಡೆಯಲ್ಲಿ ವಾಸ್ತವ್ಯ... ಸೂರ್ಯೋದಯ, ಸೂರ್ಯಾಸ್ತ...ಪ್ರಕೃತಿ.... ಶರಾವತಿ ಅಣೆಕಟ್ಟಿನ ಹಿನ್ನೀರು...ಎಲ್ಲಕ್ಕಿಂತ ವಿಶೇಷ ವೆಂದರೆ...ಇಲ್ಲಿ ಯಾವುದೇ ಕೃತಕ ನಿರ್ಮಾಣಗಳಿಲ್ಲ. ಧಾಬಾಗಳಿಲ್ಲ. ಒಂದು ಪ್ರವಾಸಿಧಾಮವೆಂದಾಕ್ಷಣ, ಬೆಲ್ಲಕ್ಕೆ ನೊಣ ಮುತ್ತಿ ದಂತೆ ಮುತ್ತಿಕೊಳ್ಳುವ ಅಂಗಡಿ ಮುಂಗಟ್ಟು ಗಳಿಲ್ಲ. ಹೊಟೇಲು ಗಳಿಲ್ಲ. ಅದಕ್ಕೆ ಮುಖ್ಯ ಕಾರಣವೇ ಭಾರತೀಯ ಸಾಹಸ ಸಮನ್ವಯ ಕೇಂದ್ರ ಮತ್ತು ಅದರ ಮುಖ್ಯ ರೂವಾರಿ ಗಳಾಗಿರುವ ಡಾ. ಎಸ್. ಎಲ್. ಎನ್. ಸ್ವಾಮಿ ಮತ್ತು ಅವರ ಪತ್ನಿ ನೊಮಿತೋ ಕಮ್ದಾರ್ ಅವರು ಕಾವಲು.
ಈ ಕೇಂದ್ರ ಈ ಭಾಗದಲ್ಲಿ ಸ್ಥಾಪನೆಯಾಗಿ ಇಪ್ಪತ್ತು ವರ್ಷ ಗಳಾಗಿವೆ. ಬಂಗಾರಪ್ಪ ಕಾಲದಲ್ಲಿ ಇದಕ್ಕೆ ಅನುಮತಿ ದೊರಕಿತು. ಇವರಿಗೆ ಅನುಮತಿ ನೀಡುವ ಸಂದರ್ಭದಲ್ಲಿ ಅನೇಕ ಟೀಕೆ, ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಇದೊಂದು ಪ್ರವಾಸಿ ತಾಣವಾಗುತ್ತದೆ, ಇದರಿಂದ ಇವರು ದುಡ್ಡು ಬಾಚಿಕೊಳ್ಳುತ್ತಾರೆ...ಪರಿಸರ ಕೆಡುತ್ತದೆ ಎಂಬಿತ್ಯಾದಿಯಾಗಿ. ಆದರೆ ಎಲ್ಲ ಪ್ರತಿಭಟನೆ ಯನ್ನು ಮೀರಿ, ಬಂಗಾರಪ್ಪ ಅವರು ಸ್ವಾಮಿ ತಂಡಕ್ಕೆ ಅನುಮತಿಯನ್ನು ನೀಡಿದ್ದರು. ಮಾತ್ರವಲ್ಲ ಹೊನ್ನೆಮರಡುವಿನಲ್ಲಿ ಮೊದಲ ಬಾರಿಗೆ ಬೋಟಿಂಗ್ ಮಾಡಿದ್ದೇ ಬಂಗಾರಪ್ಪ ಅವರಂತೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಹೊನ್ನೆಮರಡುವಿಗೆ ಈ ಕೇಂದ್ರ ಸಲ್ಲಿಸಿದ ಅತಿ ದೊಡ್ಡ ಕೊಡುಗೆ ಯೆಂದರೆ, ಪ್ರವಾಸಿಗರಿಂದ ಪರಿಸರ ಕೆಡುವುದನ್ನು ತಪ್ಪಿಸಿರುವುದು. ಒಂದು ಸಣ್ಣ ಮನೆ ಮತ್ತು ಅಂಗಳದಂತಹ ಪುಟ್ಟ ವೃತ್ತಾಕಾರದ ವೇದಿಕೆ ಹೊರತು ಪಡಿಸಿ ಯಾವುದೇ ನಿರ್ಮಾಣಗಳು ಇಲ್ಲಿ ಆಗಿಲ್ಲ. ಅದಕ್ಕಿಂತ ಮುಖ್ಯವಾಗಿ... ಹೊನ್ನೆಮರಡು ಪ್ರದೇಶದಲ್ಲಿ ಒಂದು ತುಂಡು ಪ್ಲಾಸ್ಟಿಕ್ ಕೂಡ ನೋಡುವುದಕ್ಕೆ ಸಿಕ್ಕಿಲ್ಲ. ಬಹುಶಃ ಇವರ ಕಾವಲು ಇಲ್ಲದೇ ಇದ್ದಿದ್ದರೆ ಇಂದು ಪ್ರವಾ ಸಿಗರು ಈ ಪ್ರದೇಶವನ್ನು ಲೂಟಿ ಹೊಡೆಯುತ್ತಿ ದ್ದರೋ ಏನೋ.

 ಡಿಸೆಂಬರ್ 27 ಮತ್ತು 28 ಎರಡು ದಿನಗಳ ಕಾಲ ವಾರ್ತಾ ಇಲಾಖೆ ಮತ್ತು ಸಾಹಸ ಸಮನ್ವಯ ಕೇಂದ್ರದ ವತಿಯಿಂದ ಪರಿಸರ ಮತ್ತು ಮಾಧ್ಯಮ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಹಮ್ಮಿ ಕೊಳ್ಳಲಾಯಿತು. ಆದರೆ ಡಿಸೆಂಬರ್ 27ರಂದು ಪತ್ರಕರ್ತರು ಒಟ್ಟು ಸೇರುವುದು ತಡವಾದುದರಿಂದ ಮೊದಲ ದಿನದ ಕಾರ್ಯಕ್ರಮ ತಡವಾಗಿಯೇ ಆರಂಭವಾಯಿತು. ಹೊನ್ನೆಮರಡು ಮುಟ್ಟುವಾಗಲೇ ಸಂಜೆಯಾಗಿತ್ತು. ಅಲ್ಲಿ ನಮಗಾಗಿ ಪರಿಸರ ಲೇಖಕ ನಾಗೇಶ್ ಹೆಗಡೆ ಬಳಗ ಕಾಯುತ್ತಿತ್ತು. ನಾಗೇಶ್ ಹೆಗಡೆ ಯವರ ಮಾತುಗಳು ಮತ್ತು ಪತ್ರಕರ್ತರ ಸಂವಾದ ಜೊತೆ ಜೊತೆಯಾಗಿ ನಡೆಯಿತು. ಪರಿಸರ ಪತ್ರಿಕೋದ್ಯಮ, ಜಿಲ್ಲಾ ವರದಿಗಾರರ ಕಾಳಜಿ, ಅವರ ಅಸಹಾಯಕತೆ ಇತ್ಯಾದಿಗಳೆಲ್ಲ ಆ ಸಂಜೆ ಚರ್ಚೆಗೊಳಗಾದವು. ಮುಂದಿನ ಕಾರ್ಯಕ್ರಮಕ್ಕೆ ಅದೊಂದು ಪೀಠಿಕೆಯಂತೆ ಇತ್ತು. 

ಸಂವಾದ ಕಾರ್ಯಕ್ರಮ ಮುಗಿದಂತೆಯೇ ಪೂರ್ಣಚಂದ್ರ ನಿಧಾನ ತನ್ನ ಬೆಳಕನ್ನು ಚೆಲ್ಲ ಹತ್ತಿದ್ದ. ರಾತ್ರಿ ದಟ್ಟವಾಗುತ್ತಾ ಹೋದ ಹಾಗೆ, ಬೆಳದಿಂಗಳು ಮಲ್ಲಿಗೆಯಂತೆ ಹರಡ ತೊಡಗಿದವು. ಸ್ವಾಮಿ ಅವರಿಂದ ಮಾರ್ಗದರ್ಶನ, ನೊಮಿತೋ ನೇತೃತ್ವದಲ್ಲಿ ದೋಣಿ ಚಲಾಯಿಸುವ ಕುರಿತು ಮಾಹಿತಿಗಳೂ ಸಿಕ್ಕಿದವು. ಸರಿ, ನಮ್ಮ ನಮ್ಮ ದೋಣಿಗಳನ್ನು ನಾವೇ ಆಯ್ಕೆ ಮಾಡಿಕೊಂಡೆವು. ನಮ್ಮ ನಮ್ಮ ಹುಟ್ಟುಗಳನ್ನೂ ಕೈಗೆತ್ತಿಕೊಂಡೆವು. ನಮ್ಮ ದೋಣಿಯಲ್ಲಿ ನಾನು, ಬೆಂಗಳೂರಿನ ಹೊಸ ದಿಗಂತ ಪತ್ರಿಕೆಯ ಪ್ರಮೋದ್, ಮಂಜುನಾಥ್ ಮತ್ತು ಸಹರಾ ಪತ್ರಿಕೆಯ ವರದಿಗಾರರು ಜೊತೆಗಿದ್ದರು. ಶರಾವತಿ ಅಣೆಕಟ್ಟಿನ ಹಿನ್ನೀರು ತಣ್ಣಗೆ ನಿದ್ದೆಯ ಮೂಡಿನಲ್ಲಿತ್ತು. ಚಳಿ ವಿಶೇಷವಾಗಿರಲಿಲ್ಲ. ಬೆಳದಿಂಗಳ ರಾತ್ರಿಯ ಪ್ರಕೃತಿಯ ವೌನದ ಮುಂದೆ ಪತ್ರಕರ್ತರ ಈಗೋಗಳು, ದುಷ್ಟತನ ಗಳೆಲ್ಲ ಸದ್ದಡಗಿ ಕುಳಿತಿದ್ದವು. ನನಗೋ ಹುಟ್ಟು ಚಲಾಯಿಸುತ್ತಿರುವ ರೋಮಾಂಚನ. ಹೆಗಲಲ್ಲಿ ಕ್ಯಾಮರಾ ಬೇರೆ. ಮಧ್ಯೆ ಮಧ್ಯೆ ಕ್ಲಿಕ್ಕಿಸುತ್ತಿದೆ. ಆದರೆ ಅದಕ್ಕಿಂತಲೂ, ಸುಮ್ಮಗೆ ಇವನ್ನೆಲ್ಲ ದೋಣಿಯಲ್ಲಿ ಕುಳಿತು ಆಸ್ವಾದಿಸುವುದೇ ಹಿತವೆನಿಸಿತ್ತು. ನಡುಗಡ್ಡೆ ತಲುಪಿದಾಗ ಗಂಟೆ ಸುಮಾರು ಹತ್ತಾಗಿತ್ತು. ನಮ್ಮ ನಮ್ಮ ಸಾಮಾನು ಸರಂಜಾ ಮುಗಳನ್ನು ನಾವೇ ಹೊತ್ತು ಕೊಂಡು, ಒಂದು ಕೊಡ ನೀರಿನ ಜೊತೆಗೆ ನಡುಗಡ್ಡೆ ಏರಿದೆವು. ಅಲ್ಲಿ ಟೆಂಟ್ ಹಾಕಬೇಕಾ ಗಿದೆ. ಸರಿ. ಅದಕ್ಕೂ ಸ್ವಾಮಿಯವರ ಪತ್ನಿ ನೊಮಿತೋ ಮಾರ್ಗ ದರ್ಶನ ನೀಡಿದರು. ನಮ್ಮ ನಮ್ಮ ಟೆಂಟ್ ಗಳನ್ನು ನಾವೇ ಸಿದ್ಧ ಪಡಿಸಿದೆವು. ಅಷ್ಟರಲ್ಲಿ ಎಲ್ಲರನ್ನು ಸುತ್ತು ಸೇರಿಸಿ ನೊಮಿತೋ ಅವರು ತಮ್ಮ ಆದೇಶ ವನ್ನು ಹೊರಡಿಸಿಯೇ ಬಿಟ್ಟರು. ‘‘ಯಾರೂ ಯಾವ ಕಾರಣಕ್ಕೂ ಸಿಗರೇಟು ಸೇದಬಾರದು. ಮದ್ಯ ಸೇವಿಸಬಾರದು. ನಾನ್‌ವೆಜ್ ತಿನ್ನೋ ಹಂಗಿಲ್ಲ...’’ ಇದಕ್ಕೆಲ್ಲ ಸಹಿ ಹಾಕಿದ ಬಳಿಕವೇ ಸಾಹಸ ಕೇಂದ್ರದವರು ನಮ್ಮನ್ನು ಇಲ್ಲಿಗೆ ಕರೆದೊಯ್ಯುತ್ತಾರೆ. ಆದರೂ ಮತ್ತೊಂದು ಮುಂಜಾಗೃತಾ ಎಚ್ಚರಿಕೆಯನ್ನು ನೀಡಿದರು.
 
ಅಂದಿನ ಇಡೀ ಬೆಳದಿಂಗಳ ರಾತ್ರಿಯನ್ನು ಅರೇಬಿಯನ್ ನೈಟ್ಸ್‌ನ ರಾತ್ರಿಯಂತೆ ರಮ್ಯವಾಗಿ ಸಿದ್ದು ಗುಡ್ಡಪ್ಪ ಜೋಗಿ ತಂಡದ ಜೋಗೇರಾಟ. ಮೈಕ್ ಇಲ್ಲ. ಯಾವುದೇ ವಿದ್ಯುತ್ ಬೆಳಕಿಲ್ಲ. ಆದರೆ ಗುಡ್ಡಪ್ಪ ಜೋಗಿ ಯವರ ಶಂಖದ ಕಂಠಕ್ಕೆ ರಾತ್ರಿ ಥಕ್ಕಾಗಿ ಬಿಟ್ಟಿತ್ತು. ಅವರು ಒಂದು ರಮ್ಯ ಜಗತ್ತನ್ನು ತನ್ನ ಕಂಠ, ಹಾಡುಗಳ ಮೂಲಕ ಆ ನಡುಗಡ್ಡೆಗೆ ತಂದು ನಿಲ್ಲಿಸಿದ್ದರು. ಅವರ ಬಳಗ, ಹಾಡುತ್ತಾ, ಕುಣಿಯು ತ್ತಿದ್ದರೆ, ಎಲ್ಲ ಪಾತ್ರಗಳೂ ಥಕಥಕನೆ ಜೀವ ತಳೆದು ಕುಣಿಯುತ್ತಿದ್ದವು. ಶೀಲಾವತಿ ಪ್ರಸಂಗವನ್ನು ತಮ್ಮ ಜೋಗಿ ಹಾಡಿಗೆ ವಸ್ತುವಾಗಿರಿಸಿಕೊಂಡಿದ್ದರೂ ಗೀಗೀ ಪದಗಳು, ಜಾನಪದ ಹಾಡುಗಳು, ಶಿಶುನಾಳ ಶರೀಫರ ಹಾಡು....ಎಲ್ಲರನ್ನು ತನ್ಮಯಗೊಳಿಸಿದ್ದವು. ಸುಮಾರು ಎರಡು-ಎರಡೂವರೆ ಗಂಟೆಗಳ ಕಾಲ ಅವರು ನಮ್ಮನ್ನು ಆ ನಡುಗಡ್ಡೆ ಯಿಂದ ತಮ್ಮ ನಾದಲೋಕಕ್ಕೆ ಕರೆದೊಯ್ದಿದ್ದರು. ಅವರ ತಂಬೂರಿ ನಾದಕ್ಕೆ ನಾವೆಲ್ಲ ಶರಣೆಂದಿದ್ದೆವು. ಜೋಗೇರಾಟ ಮುಗಿದದ್ದೇ ನಮಗೆಲ್ಲ ಅವರ ಜೊತೆಗೆ ಫೋಟೋ ತೆಗೆಸಿಕೊಳ್ಳುವ ಸಂಭ್ರಮ. ಇವರು ಸಲ್ಮಾನ್, ಆಮೀರ್‌ಖಾನ್‌ಗೂ ಹೆಚ್ಚು ನಮಗೆ. ಇದಾದ ಬಳಿಕ ಪತ್ರಕರ್ತ ಬದುಕಿಗೆ ತೀರಾ ಅಪರಿಚಿತವಾದ ‘ಸಸ್ಯಾಹಾರಿ’ ಊಟ. ಆದರೆ ನೊಮಿತೋ ಮತ್ತು ಬಳಗದ ಪ್ರೀತಿ ಆ ಊಟವನ್ನು ತುಂಬಾ ತುಂಬಾ ರುಚಿಯಾಗಿಸಿತ್ತು. ಆ ಬಳಿಕ ಪುರುಳೆಗಳನ್ನೆಲ್ಲ ತಂದು ಬೆಂಕಿ ಹಾಕಿ ಮಾತುಕತೆ. ಬಳಿಕ ಬೆಳದಿಂಗಳನ್ನು ನೋಡುತ್ತಾ, ಹಿಮದ ಕಚಗುಳಿಯ ನಡುವೆಯೇ ನಿದ್ದೆ. ಮರುದಿನ ಸೂರ್ಯೋದಯವನ್ನು ನೋಡುವ ಕನಸಿನ ಜೊತೆಗೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ನಾನು ಸೂರ್ಯೋದಯವನ್ನು ನೋಡಿಯೇ ಇಲ್ಲ. ಸೂರ್ಯೋದಯವನ್ನು ನೋಡದೆ ಸುಮಾರು ಎರಡು ವರ್ಷಗಳಾಗಿರಬಹುದೇನೋ. ಆದುದರಿಂದ, ಯಾವನೋ ವಿವಿಐಪಿಯನ್ನು ನೋಡುವ ಸಂಭ್ರಮವನ್ನು ಕಣ್ಣಲ್ಲಿ ತುಂಬಿಕೊಂಡು ನಾವೆಲ್ಲ ನಿದ್ದೆ ಹೋದೆವು. ಬೆಳಗ್ಗೆ 5.30ಕ್ಕೆ ಎಚ್ಚರ. ಸರಿ....ಮತ್ತೆ ಹಾಕಿದ ಟೆಂಟನ್ನು ಕೀಳಬೇಕು. ಬೆಂಕಿಯ ಕಿಡಿಯನ್ನು ಹಾರಿಸಿ, ಬೂದಿಗೆ ನೀರು ಹಾಕಿ, ಅವನ್ನೆಲ್ಲ ಪರಸ್ಪರ ಮುಖಕ್ಕೆ ಫ್ಯಾರನ್‌ಲವ್ಲಿ ಥರ ಹಚ್ಚಿಕೊಂಡೆವು. ಸೂರ್ಯನನ್ನು ಎದುರುಗೊಳ್ಳುವುದಕ್ಕೆ ಮೇಕಪ್ ಮಾಡಿಕೊಳ್ಳುವ ರೀತಿಯಲ್ಲಿ. ಸರಿ 6 ಗಂಟೆಯ ಹೊತ್ತಿಗೆ ಪೂರ್ವದಲ್ಲಿ ಸೂರ್ಯನ ಪತ್ರಿಕಾಗೋಷ್ಠಿ. ರಾಜಕಾರಣಿಗಳಂತೆ ಅವನು ಕಾಯಿಸಿಲ್ಲ. ಸರಿಯಾದ ಸಮಯಕ್ಕೆ ಹಾಜರ್. ಚಕಚಕನೆ ಕ್ಲಿಕ್ಕಿಸಿದವು ಕ್ಯಾಮರಾಗಳು. ಕಣ್ಣುಗಳು. ಹೃದಯಗಳು.
  ನಮ್ಮ ತಂಡದಲ್ಲಿ ಎಲ್ಲರೂ ತರುಣರೇ. ಆದರೆ ಇವರ ನಡುವೆ ಹಿರಿಯ ಪತ್ರಕರ್ತ ದಿವಾಕರ ಹೆಗ್ಡೆ ತಮ್ಮ ಪ್ರಾಯ, ಆರೋಗ್ಯಕ್ಕೆ ಸವಾಲು ಹಾಕಿ ನಮ್ಮೆಡನೆ ಸೇರಿಕೊಂಡಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ತಂಡದ ಪ್ರಧಾನ ಆಕರ್ಷಣೆ ಕಾಮ್ರೇಡ್ ಎಂ. ಲಿಂಗಪ್ಪ. ಅವರಿಗೆ ವರ್ಷ 86. ಆದರೆ ದೇಹ ಜಗ್ಗಿಲ್ಲ. ಹಲ್ಲು ಉದುರಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಒಳಗಿನ ಬೆಂಕಿ ಇನ್ನೂ ಉರಿಯುತ್ತಲೇ ಇದೆ. ಶಿವಮೊಗ್ಗದಲ್ಲಿ ಇವರದೊಂದು ಎರಡು ಪುಟದ ದಿನ ಪತ್ರಿಕೆಯಿದೆ. ಅದರ ಹೆಸರು ‘ಕ್ರಾಂತಿ ಭಗತ್’. ಸುಮಾರು ಮೂರು ದಶಕಗಳಿಂದ ಅದು ಪ್ರಕಟವಾಗುತ್ತಾ ಬರುತ್ತಿದೆ ಎಂದರೆ ಸಣ್ಣ ಮಾತಲ್ಲ. ಮಾತು ಮಾತಿಗೆ ಇವರು ಕ್ರಾಂತಿಯನ್ನೇ ಘೋಷಣೆ ಮಾಡುವವರು. ಒಂದಾನೊಂದು ಕಾಲದಲ್ಲಿ ಜಾರ್ಜ್ ಫೆರ್ನಾಂಡಿಸ್ ಜೊತೆಗೆ ಓಡಾಡಿದವರಂತೆ. ಮರಾಠಿ ಕ್ರಾಂತಿಗೀತೆಗಳನ್ನು ಹಾಡುತ್ತಾರೆ. ಆದರೆ ಇವರು ಹಾಡಲು ಬಾಯಿ ತೆರೆದರೆ, ಉಳಿದ ಯುವಕರು ಅವರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಾರೆ. ನಿಂಗಪ್ಪ ಮಾತನಾಡಲು ಶುರು ಹಚ್ಚಿದರೆ ಅದಕ್ಕೆ ನಿಲ್ದಾಣವೇ ಇರುತ್ತಿರಲಿಲ್ಲ. ಆದುದರಿಂದ ಇವರನ್ನು ಯಾರೂ ಬಾಯಿ ತೆರೆಯಲು ಬಿಡುತ್ತಿರಲಿಲ್ಲ. ಒಂದು ರೀತಿಯಲ್ಲಿ, ಆ ನಡುಗಡ್ಡೆಯಲ್ಲಿ ಅವರು ಇಂದಿನ ಕಮ್ಯುನಿಸಂನ ರೂಪಕದಂತೆ ನನಗೆ ಕಂಡರು. ಅವರೊಂದು ಅಸಹಾಯಕ, ಅಪ್ರಸ್ತುತ ಒಂಟಿ ದನಿ. ಅದು ಅವರಿಗೇ ಗೊತ್ತಿಲ್ಲ. ಕಡಿದಾಳು ಶಾಮಣ್ಣರ ಮೇಲೆ ನಕ್ಸಲ್ ಬೆಂಬಲಿಗ ಎಂದು ಕೇಸು ದಾಖಲಿಸಿದಾಗ, ನಿಂಗಪ್ಪನವರು ಈಶ್ವರಪ್ಪನವರನ್ನು ತಡೆದು ನಿಲ್ಲಿಸಿ ‘‘ನನ್ನ ಮೇಲೆ ಯಾಕೆ ನಕ್ಸಲ್ ಬೆಂಬಲಿಗ ಎಂದು ಕೇಸು ದಾಖಲಿಸಿಲ್ಲ?’’ ಎಂದು ತರಾಟೆಗೆ ತೆಗೆದುಕೊಂಡರಂತೆ. ಇದಾದ ಬಳಿಕ ಈಶ್ವರಪ್ಪ ಅವರು ಕೈ ಮುಗಿದು ‘‘ನಿಂಗಪ್ಪ ಅವರೇ, ನಿಮ್ಮ ಮೇಲೂ ಕೇಸು ದಾಖಲಿಸಲಾಗುತ್ತದೆ. ಪೊಲೀಸರು ಭರವಸೆ ನೀಡಿದ್ದಾರೆ. ಬೇಗನೆ ನಿಮ್ಮನ್ನೂ ಬಂಧಿಸುತ್ತೇವೆ’’ ಎಂದ ಬಳಿಕವಷ್ಟೇ ನಿಂಗಪ್ಪ ನಿರುಮ್ಮಳರಾದರಂತೆ. ನಿಂಗಪ್ಪರ ಜೊತೆಗೂ ನಾನು ಫೋಟೋ ತೆಗೆಸಿಕೊಂಡೆ. ಮಾತನಾಡುತ್ತಾ ಅವರಿಗೆ ನಾನು ಹೇಳಿದೆ ‘‘ನಿಂಗಪ್ಪ ಅವರೇ, ನೀವು ಯಯಾತಿ ಇದ್ದ ಹಾಗೆ. ಶಿವಮೊಗ್ಗದ ಎಲ್ಲ ಯುವಕರ ಪ್ರಾಯವನ್ನೂ ನೀವು ತೆಗೆದುಕೊಂಡು ನಳನಳಿಸುತ್ತಿದ್ದೀರಿ. ಯುವಕರೆಲ್ಲ ಮುದುಕರಂತೆ ಸುಸ್ತಾಗಿ ಹೋಗಿದ್ದಾರೆ’’
 
ಸೂರ್ಯಾಸ್ತ ಮುಗಿದ ಬಳಿಕ ನಡುಗಡ್ಡೆಯಿಂದ ಮತ್ತೆ ಹೊನ್ನೆಮರಡು ತೀರ ಸೇರಿದೆವು. ಅಲ್ಲಿ ತಿಂಡಿ ಇತ್ಯಾದಿಗಳೆಲ್ಲ ಮುಗಿಸಿ ಮತ್ತೆ ಈಜು. ಈ ಎಲ್ಲ ಸಂದರ್ಭದಲ್ಲೂ ಸ್ವಾಮಿ ಬಳಗದ ಕಣ್ಗಾವಲು, ಎಚ್ಚರಿಕೆ, ಜಾಗರೂಕತೆಯಿತ್ತು. ಈ ಕಾರಣದಿಂದಲೇ ಕಳೆದ ಎರಡು ದಶಕದಲ್ಲಿ ಒಂದೇ ಒಂದು ಅವಘಡ ಈ ಭಾಗದಲ್ಲಿ ನಡೆದಿಲ್ಲ. ಪ್ರಕೃತಿಯ ಜೊತೆಗೆ ಪತ್ರಕರ್ತರ ಈ ಕೂಡುವಿಕೆ ನಿಜಕ್ಕೂ ಅವರಲ್ಲಿ ಒಂದು ಹೊಸ ಒಳನೋಟವನ್ನು ತೆರೆಸಲಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಯಾವುದೇ ಒಣ ವಿಚಾರಸಂಕಿರಣಕ್ಕಿಂತಲೂ ಈ ಒಡನಾಟ ಪತ್ರಕರ್ತರನ್ನು ಹೆಚ್ಚು ಪ್ರಬುದ್ಧರನ್ನಾಗಿಸಬಹುದು. ಸೂಫಿ ಕವಿಯೊಬ್ಬ ಹೇಳುತ್ತಾನೆ. ‘‘ಪ್ರಾರ್ಥನೆಯೆಂದರೆ, ಕಣ್ತೆರೆದು ನೋಡೋದು, ಕಿವಿ ತೆರೆದು ಕೇಳೋದು...’’ ಹೌದು...ಸೂರ್ಯಾಸ್ತ, ಸೂರ್ಯೋದಯವನ್ನು ನೋಡುವ ಕಣ್ಣು, ಪ್ರಕೃತಿಯನ್ನು ಕಣ್ತುಂಬಿಸಿಕೊಳ್ಳುವ ಮನುಷ್ಯ, ಹಕ್ಕಿಗಳ ಚಿಲಿಪಿಲಿ, ನೀರಿನ ಜುಳುಜುಳುವನ್ನು ಆಲಿಸುವ ಕಿವಿ...ಈ ಮೂಲಕವೇ ದೇವರ ಅನುಭವವನ್ನು ತನ್ನದಾಗಿಸಿಕೊಂಡು ರೋಮಾಂಚನಗೊಳ್ಳಬೇಕು. ಅದುವೇ ನಿಜವಾದ ಪ್ರಾರ್ಥನೆ. ಹೊನ್ನೆಮರಡುವಿನಲ್ಲಿ ಕಳೆದ ಎರಡು ದಿನಗಳಲ್ಲಿ ದೇವರ ಅನುಭವವನ್ನು ನಮ್ಮದಾಗಿಸಿಕೊಂಡು ನಾವೆಲ್ಲ ರೋಮಾಂಚನ ಗೊಂಡೆವು.

Sunday, December 30, 2012

ಚಪ್ಪಲಿ ಮತ್ತು ನಾನು...

ಬಸ್ಸಲ್ಲಿ ನನಗೆ ಕಿಟಕಿ ಪಕ್ಕದಲ್ಲೇ ಕೂರೋದು ಚಟ. ಅಂದು ಆಫೀಸ್ ಕಡೆಗೆಂದು 2ಸಿ ಬಸ್ಸನ್ನು ಏರಿದ್ದೇ...ಎದುರು ಸೀಟಲ್ಲಿ ಸುಮಾರು ಹತ್ತು ವರ್ಷದ ಹುಡುಗ ಕಿಟಕಿಗೆ ಅಂಟಿ ಕೂತಿದ್ದ. ಹರಿದ ಸ್ಕೂಲ್ ಬ್ಯಾಗ್, ಹರಿದ ಬಟ್ಟೆ, ಕೊಳಕು ಚಡ್ಡಿ....‘‘ಏ ಈ ಕಡೆ ಬಾರೋ...’’ ಎಂದು ಅವನನ್ನು ಎಳೆದು ಅಲ್ಲಿ ನಾನು ಕುಳಿತೆ. ಹುಡುಗ ಮುಖ ಸಪ್ಪಗೆ ಮಾಡಿ ನನ್ನ ಪಕ್ಕದಲ್ಲಿ ಕೂತ.
ಟೈಂಪಾಸ್‌ಗೆ ಒಬ್ಬ ಹುಡುಗ ಸಿಕ್ಕಿದ ಎಂದು ಮಾತಿಗೆ ಶುರು ಹಚ್ಚಿದೆ ‘‘ಏನೋ...ಹೆಸರು?’’
ಅದೇನೋ ಹೇಳಿದ. ಕೇಳಲಿಲ್ಲ ‘‘ಜೋರಾಗಿ ಹೇಳು’’ ಎಂದೆ. ‘‘ರಾಜು’’ ಎಂದ.
‘‘ಎಷ್ಟು ಕ್ಲಾಸು...?’’
‘‘ನಾಲ್ಕನೆ ಇಯತ್ತೆ’’ ಎಂದ. ‘‘ಅಪ್ಪನ ಹೆಸರೇನೋ?’’ ಎಂದು ಕೇಳಿದೆ. ಹುಡುಗ ವೌನವಾದ. ಅಪ್ಪನ ಹೆಸರನ್ನು ಹೇಳೋದು ಅಗೌರವ ಅನ್ನಿಸಿರಬೇಕೋ ಏನೋ...‘‘ಹೇಳೋ...ಅಪ್ಪನ ಹೆಸರೇನು?’’ ಮತ್ತೆ ಕುಕ್ಕಿ ಕೇಳಿದೆ.
‘‘ಯಂಕ್ಟೇಸ’’ ಒಲ್ಲದ ಮನಸ್ಸಿನಿಂದ ಉತ್ತರಿಸಿದ.
‘‘ಏನು ಕೆಲ್ಸ ಮಾಡ್ತಾನೆ...’’ ಹುಡುಗ ವೌನವಾಗಿದ್ದ ‘‘ಹೇಳೋ..ಅಪ್ಪ ಏನು ಕೆಲಸ ಮಾಡ್ತಾನೆ...’’
 ‘‘ಕೂಲಿ ಕೆಲಸ’’ ಹುಡುಗ ಬಾಯಿ ಬಿಟ್ಟ. ಹುಡುಗನನ್ನೊಮ್ಮೆ ಹೆದರಿಸುವುದಕ್ಕೆಂದು ಸುಮ್ಮನೆ ದುರುಗುಟ್ಟಿ ನೋಡಿದೆ. ಅವನು ಹೆದರಿದಂತೆ ಕಾಣಲಿಲ್ಲ. ಅವನಷ್ಟಕ್ಕೆ ಕಾಲಾಡಿಸುತ್ತಾ ಕಿಟಕಿಯ ಕಡೆಗೇ ನೋಡುತ್ತಿದ್ದ. ಆಗ ನನ್ನ ಗಮನಕ್ಕೆ ಬಂತು. ಹುಡುಗನ ಕಾಲಲ್ಲಿ ಚಪ್ಪಲಿ ಇರಲಿಲ್ಲ. ಪುಟ್ಟ ಪಾದ...ಚಪ್ಪಲಿ ಇಲ್ಲದೆ ಇರುವುದು ಯಾಕೋ ನನ್ನನ್ನು ಕಳವಳಕ್ಕೀಡು ಮಾಡಿತು.
‘‘ಏನೋ...ಚಪ್ಪಲಿ ಯಾಕೆ ಹಾಕಿಲ್ಲ...?’’ ಕೇಳಿದೆ.
ಹುಡುಗ ವೌನವಾಗಿದ್ದ. ‘‘ಹೇಳಿದ್ದು ಕೇಳ್ಳಿಲ್ವ? ಸ್ಕೂಲಿಗೆ ಹೋಗೋವಾಗ ಚಪ್ಪಲಿ ಹಾಕೋಬೇಡ್ವಾ...ಚಪ್ಪಲಿ ಏನಾಯ್ತು?’’
‘‘ಹರ್ದೋಯ್ತು?’’ ಹುಡುಗ ಚುಟುಕಾಗಿ ಉತ್ತರಿಸಿದ.
‘‘ಎಷ್ಟು ಸಮಯವಾಯಿತು ಹರ್ದು?’’ ಹುಡುಗ ಮತ್ತೆ ವೌನವಾದ. ‘‘ಏಯ್ ಬಾಯಿ ಬರಲ್ವಾ...? ಚಪ್ಪಲಿ ಹರ್ದು ಎಷ್ಟು ಸಮಯ ಆಯ್ತು?’’
‘‘ಒಂದು ವರ್ಸ...’’
ನನ್ನ ಎದೆ ಒಮ್ಮೆ ಹಾರಿತು ‘‘ಅಂದ್ರೆ...ಒಂದು ವರ್ಷದಿಂದ ಚಪ್ಪಲಿ ಹಾಕದೆ ಓಡಾಡ್ತ ಇದ್ದೀಯ...ಯಾಕೆ ಹೊಸ ಚಪ್ಪಲಿ ತೆಗೀಲಿಲ್ಲ...?’’
ಹುಡುಗ ಮತ್ತೆ ವೌನ. ‘‘ಯಾಕೋ ತೆಗೀಲಿಲ್ಲ?’’
‘‘ಹೀಗೆ....’’
‘‘ಹೀಗೆ ಅಂದ್ರೆ...ಯಾಕೆ ತೆಗೀಲಿಲ್ಲ...ಹೇಳು?’’
‘‘ಹೀಗೆ...’’ ಎಂದು ಮತ್ತೆ ಉತ್ತರಿಸಿದ. ಸ್ವಲ್ಪ ಹೊತ್ತು ವೌನವಾಗಿದ್ದೆ. ಮತ್ತೆ ಕೇಳಿದೆ ‘‘ಯಾಕೆ ತೆಗೀಲಿಲ್ಲ...ದುಡ್ಡಿರ್ಲಿಲ್ವ?’’
ಹುಡುಗ ವೌನವಾಗಿದ್ದ. ಅವನ ಮುಖವನ್ನು ಸ್ಪಷ್ಟವಾಗಿ ನೋಡಿದೆ. ಹುಡುಗನೊಳಗೊಂದು ಗಾಂಭೀರ್ಯವಿದೆ. ಆತ್ಮಾಭಿಮಾನವಿದೆ ಅನ್ನಿಸಿತು. ಬಸ್ಸು ಚಲಿಸುತ್ತಲೇ ಇತ್ತು. ನನ್ನ ಇಳಿಯುವ ಸ್ಟಾಪ್ ಹತ್ತಿರವಾಗುತ್ತಿತ್ತು. ಕಿಸೆಯಿಂದ ನೂರು ರೂಪಾಯಿ ತೆಗೆದು ಹೇಳಿದೆ ‘‘ನೋಡು...ಈ ನೂರು ರೂಪಾಯಿಯಿಂದ ಚಪ್ಪಲಿ ತೆಗೋ...’’ ಎಂದೆ. ಅವನು ನನ್ನ ಮುಖವನ್ನು ನೋಡಿದ. ಅವನ ಕಣ್ಣಲ್ಲಿ ಹೊಳಪಿತ್ತು. ಅಥವಾ ಬೆಳಕಿತ್ತು. ತೆಗೆದುಕೊಳ್ಳಬೇಕೋ...ಅಥವಾ ತಮಾಷೆಯೋ ಎಂಬ ಪ್ರಶ್ನೆಯೂ ಅಲ್ಲಿತ್ತು. ನಾನು ನೂರು ರೂಪಾಯಿಯನ್ನು ಅವನ ಕಿಸೆಗೆ ಹಾಕಿ ಹೇಳಿದೆ ‘‘ಮರ್ಯಾದೆಯಲ್ಲಿ ಈ ನೂರು ರೂಪಾಯಿಯಿಂದ ಚಪ್ಪಲಿ ತೆಗೋ ಬೇಕು. ಅಪ್ಪಂಗೆ ಕೊಟ್ಟು ಚಪ್ಪಲೀನೇ ತಗಳೋಕೆ ಹೇಳ್ಬೇಕು. ಏನಾದ್ರೂ...ಅಪ್ಪಂಗೆ ಕೊಡದೆ ಐಸ್‌ಕ್ರೀಮ್...ಅದು ಇದೂಂತ ಖರ್ಚು ಮಾಡಿದ್ರೆ...ನಿನ್ ಶಾಲೆಗೆ ಬಂದು ಮೇಷ್ಟ್ರಲ್ಲಿ ಕಂಪ್ಲೇಂಟ್ ಮಾಡ್ತೀನಿ ಅಷ್ಟೇ...ಗೊತ್ತಾಯ್ತ?...ಇನ್ನೊಮ್ಮೆ ಬರೋವಾಗ ನಿನ್ನ ಕಾಲಲ್ಲಿ ಚಪ್ಪಲಿ ಇರ್ಲೇ ಬೇಕು....’’ ಖಡಕ್ಕಾಗಿ ನುಡಿದೆ. ಹುಡುಗ ತಲೆಯಾಡಿಸಿದ. ಅಷ್ಟರಲ್ಲಿ ನನ್ನ ಸ್ಟಾಪ್ ಬಂತು. ನಾನು ಇಳಿದೆ.
 

***
ಕಚೇರಿಗೆ ಹೋದದ್ದೆ ನನ್ನ ಮಾನವೀಯತೆಯನ್ನು, ಹೃದಯವಂತಿಕೆಯನ್ನು ನಾನು ನನ್ನ ಗೆಳೆಯನಲ್ಲಿ ಹಂಚಿಕೊಂಡೆ. ‘‘ಮನಸ್ಸು ತಡೆಯಲಿಲ್ಲ. ನೂರು ರೂಪಾಯಿ ಕೊಟ್ಟು ಚಪ್ಪಲಿ ತೆಗೋ ಎಂದೆ ಕಣೋ..’’ ಎಂದು ವಿವರಿಸಿದೆ.
ನನ್ನ ಕತೆ ಕೇಳಿ ಗೆಳೆಯ ಕಿಸಕ್ಕನೆ ನಕ್ಕ. ‘‘ಅಲ್ವೋ...ಚಪ್ಪಲಿ ಹಾಕೋದು...ಹಾಕದೇ ಇರೋದು ಅವರಿಗೆ ವಿಷಯವೇ ಅಲ್ಲ...ಆ ಹಣವನ್ನು ಹುಡುಗ ಮಜಾ ಮಾಡ್ತಾನೆ...ಇಲ್ಲಾ ಅವನಪ್ಪ ತಗೊಂಡು ಹೆಂಡ ಕುಡೀತಾನೆ...ಹೆಂಡದ ಅಮಲಲ್ಲಿ ನಿನಗೆ ಒಂದಿಷ್ಟು ಉಗೀತಾನೆ...ತನ್ನ ಸ್ನೇಹಿತರ ಜೊತೆಗೆ ಆಡ್ಕೊಂಡು ನಗ್ತಾನೆ....ಅಷ್ಟೇ...ಆ ಹುಡುಗನಿಗೆ ಭಿಕ್ಷೆ ಬೇಡುವುದನ್ನು ಕಲಿಸಿದೆ ನೀನು...ಅವನಿನ್ನೆಂದೂ ಚಪ್ಪಲಿ ಹಾಕಲ್ಲ...ತಿಳ್ಕೋ...ಎಲ್ಲರ ಕೈಯಲ್ಲಿ ಚಪ್ಪಲಿಗೆ ದುಡ್ಡು ಕೇಳೋಕೆ ಶುರು ಮಾಡ್ತಾನೆ...’’
ಹೌದಲ್ಲ ಅನ್ನಿಸ್ತು. ಆ ಹುಡುಗನ ಕುರಿತಂತೆ ಮೈಯೆಲ್ಲ ಕುದಿಯ ತೊಡಗಿತು.
 

***
ಇದು ನಡೆದು ಒಂದು ವಾರವಾಗಿರಬಹುದು. ಮತ್ತೊಮ್ಮೆ ಅದೇ 2ಸಿ ಬಸ್ಸಲ್ಲಿ ಆ ಹುಡುಗನನ್ನು ನೋಡಿ ಬಿಟ್ಟೆ. ಅದೇ ಹರಿದ ಸ್ಕೂಲ್ ಬ್ಯಾಗ್. ಕೊಳಕು ಬಟ್ಟೆ, ಹರಿದ ಚೆಡ್ಡಿ. ಕಾಲಲ್ಲಿ....ಓಹ್...ಕಾಲಲ್ಲಿ ನೋಡಿದರೆ ಚಪ್ಪಲಿ ಇಲ್ಲ! ನನಗೆ ಸಿಟ್ಟು ಉಕ್ಕಿ ಬಂತು. ‘‘ಏಯ್ ಇಲ್ಲಿ ಬಾರೋ...’’ ಕರೆದೆ. ಅವನು ನನ್ನನ್ನು ನೋಡಿದ್ದೇ ಅಡಗಿಕೊಳ್ಳ ತೊಡಗಿದ. ನಾನೇ ಎದ್ದು ಅವನ ಕಿವಿ ಹಿಡಿದು ನನ್ನ ಪಕ್ಕ ಕೂರಿಸಿದೆ.
‘‘ಲೋ...ದುಡ್ದೇನು ಮಾಡಿದೆ...?’’ ಅವನು ಅಳುಮುಖ ಮಾಡಿದ್ದ. ನನ್ನ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ.
‘‘ಹೇಳು...ದುಡ್ಡೇನು ಮಾಡಿದೆ...? ಇಲ್ಲಾಂದ್ರೆ...ನಾಳೆ ನಿನ್ನ ಶಾಲೆಗೇ ಬಂದು ಕಂಪ್ಲೇಂಟ್ ಮಾಡ್ತೀನಿ....ಹೇಳೋ...ಆ ನೂರು ರೂಪಾಯಿ ಏನು ಮಾಡಿದೆ...?’’
ಹುಡುಗನಲ್ಲಿ ಉತ್ತರವೇ ಇರಲಿಲ್ಲ. ಅವನು ನನ್ನ ಮುಖವನ್ನೇ ನೋಡುತ್ತಿದ್ದ.
‘‘ಉತ್ತರ ಹೇಳದೇ ಇದ್ರೆ ಬಾರಿಸಿ ಬಿಡ್ತೇನೆ...’’ ಎಂದೆ.
ಈಗ ಬಾಯಿ ಬಿಟ್ಟ ‘‘ದುಡ್ಡು ಅಪ್ಪಂಗೆ ಕೊಟ್ಟೆ’’
‘‘ಚಪ್ಪಲಿ ಯಾಕೆ ತೆಗೀಲಿಲ್ಲ ಆ ಬೋಳಿಮಗ?’’
ಹುಡುಗ ಅಳುಧ್ವನಿಯಲ್ಲಿ ಉತ್ತರಿಸಿದ ‘‘ಮನೇಲಿ ಅಕ್ಕಿ ಮುಗಿದು ಎರಡು ದಿನ ಆಗಿತ್ತು. ಆ ದುಡ್ಡಲ್ಲಿ ಅಪ್ಪ ಅಕ್ಕಿ ತಂದ. ರಾತ್ರಿ ನಾನು, ಅಪ್ಪ, ಅವ್ವ, ತಮ್ಮ, ತಂಗಿ ಎಲ್ಲ ಸೇರಿ ಊಟ ಮಾಡಿದ್ವು’’
ಬಸ್ಸು ಚಲಿಸುತ್ತಲೇ ಇತ್ತು. ಹೊರಗಿನ ಗಾಳಿ, ಧೂಳು ಮುಖಕ್ಕೆ ಅಪ್ಪಳಿಸುತ್ತಿತ್ತು. ಯಾವುದೂ ನನ್ನ ಅರಿವಿಗೆ ಬರುತ್ತಿರಲಿಲ್ಲ. ಹುಡುಗನ ಮುಖ ನೋಡುವುದಕ್ಕೂ ಅಂಜಿಕೆ.
ಅಷ್ಟರಲ್ಲಿ ಹುಡುಗನೇ ಹೇಳಿದ ‘‘ಸಾರ್...ನಿಮ್ಮ ಸ್ಟಾಪ್ ಬಂತು...’’

ಅಹಿಂದ ಎನ್ನುವ ಕರುಳ ಬಂಧ!

 ಬಹಳ ಹಿಂದಿನ ಮಾತಿದು. ಮೋಂಟ ನಮ್ಮ ಮನೆಗೆ ತುಂಬಾ ಆಪ್ತ. ಆತ ನಮ್ಮ ಮನೆಗೆ ಕಟ್ಟಿಗೆಗಳನ್ನು ಹೊತ್ತು ತರುತ್ತಿದ್ದ. ತೆಂಗಿನ ಗಿಡಗಳ ಬುಡಗಳನ್ನು ಬಿಡಿಸುವುದಕ್ಕೆ ಬರುತ್ತಿದ್ದ. ನನ್ನ ಮನೆಯ ಜಮೀನಿನಲ್ಲಿ ನನ್ನ ಮತ್ತು ನನ್ನ ತಂದೆಯ ಬೆವರು ಬೀಳುವುದಕ್ಕಿಂತ ಹೆಚ್ಚಾಗಿ ಮೋಂಟನ ಬೆವರು ಹರಿದಿದೆ. ನಾನು ತೀರಾ ಸಣ್ಣವನಿರುವಾಗಲೇ ಆತ ನನ್ನ ಮನೆಗೆ ಬರುತ್ತಿದ್ದ. ನಾನು ಬೆಳಗ್ಗೆ ತಡವಾಗಿ ಎದ್ದು ಹಲ್ಲುಜ್ಜಿ ಟೇಬಲ್ ಮೇಲೆ ರೊಟ್ಟಿ ತಿನ್ನುತ್ತಿದ್ದರೆ ಆತ, ಬೆವರಿಳಿಸಿ ದುಡಿದು ನಮ್ಮ ಮನೆಯ ಹೊರಗೆ ಮೆಟ್ಟಿಲಲ್ಲಿ ಕೂತು ರೊಟ್ಟಿ ತಿನ್ನುತ್ತಿದ್ದ. ವಿಶೇಷವೆಂದರೆ ತೀರಾ ಸಣ್ಣವನಿದ್ದ ನನ್ನನ್ನು ಅವನು ಬಹುವಚನದಿಂದ ಕರೆಯುತ್ತಿದ್ದ. ನಾನು ಆತನನ್ನು ಏಕವಚನದಿಂದ ಕರೆಯುತ್ತಿದ್ದೆ. ಪಿಯುಸಿಗೆ ಕಾಲಿಡುತ್ತಿದ್ದ ಹಾಗೆ ನನಗೆ ನಿಧಾನಕ್ಕೆ ವಿಪರ್ಯಾಸ ಅರ್ಥವಾಗತೊಡಗಿತು. ಬಳಿಕ ಆತನನ್ನು ಮನೆಯ ಒಳಗೆ ಕರೆದು ರೊಟ್ಟಿ ಕೊಡುವಷ್ಟು ನಾನು ಸುಧಾರಿಸಿದೆ. ನಿಧಾನಕ್ಕೆ ಅವನಿಗೆ ಹತ್ತಿರವಾಗಲು ಪ್ರಯತ್ನಿಸಿದೆ. ದುರದಷ್ಟವಶಾತ್, ನಾವು ಹತ್ತಿರವಾಗುವುದು ಅಷ್ಟು ಸುಲಭವಿರಲಿಲ್ಲ. ‘‘ನನ್ನನ್ನು ಏಕವಚನದಿಂದ ಕರಿ’’ ಎಂದು ಅವನಲ್ಲಿ ಹೇಳುವುದಾಗಲಿ, ಅವನನ್ನು ಬಹುವಚನದಿಂದ ಕರೆಯುವುದಾಗಲಿ ನನ್ನಿಂದ ಸಾಧ್ಯವೇ ಆಗಲಿಲ್ಲ. ಎಷ್ಟೋ ಸಮಯದ ಬಳಿಕ, ಅಲ್ಲಿಲ್ಲಿ ಅವನು ಎದುರಾದರೆ ಅವನಿಗೆ ಐವತ್ತೋ, ನೂರೋ ಹಣ ಕೊಡುತ್ತಿದ್ದೆ. ಅವನದನ್ನು ನೇರ ಹೆಂಡದಂಗಡಿಗೆ ದಾಟಿಸುತ್ತಿದ್ದ ಎನ್ನುವುದು ಗೊತ್ತಿದ್ದರೂ. ಅದು ನನ್ನ ಪಾಪ ಪ್ರಜ್ಞೆಯ ಫಲವಾಗಿರಬಹುದು. ಇತ್ತೀಚೆಗೆ ಮೋಂಟ ತೀರಿಕೊಡ. ಆದರೆ ಪ್ರಶ್ನೆ ಈಗಲೂ ನನ್ನಲ್ಲಿ ಉಳಿದಿದೆ. ಯಾಕೆ ಅವನನ್ನು ಬಹುವಚನದಿಂದ ನನಗೆ ಕರೆಯಲು ಸಾಧ್ಯವಾಗಲಿಲ್ಲ? ಈ ಕ್ಷಣದಲ್ಲೂ ಆತನನ್ನು ‘‘ನೀವು’’ ಎಂದು ಕರೆಯಲಾಗದಂತೆ ನನ್ನನ್ನು ಕಟ್ಟಿ ಹಾಕಿದ ಶಕ್ತಿ ಯಾವುದು? ನಿಜಕ್ಕೂ ನನ್ನನ್ನು ನಾನು ಜಾತ್ಯತೀತ ಎಂದು ಕರೆದುಕೊಳ್ಳಲು ಅರ್ಹನೆ...ಈ ಪ್ರಶ್ನೆಗಳು ಈ ಕ್ಷಣದಲ್ಲೂ ನನ್ನನ್ನು ಕಾಡುತ್ತಿದೆ.

 ಇತ್ತೀಚಿನ ದಿನಗಳಲ್ಲಿ ದಲಿತರು-ಮುಸ್ಲಿಮರು-ಕ್ರಿಶ್ಚಿಯನ್ನರು-ಹಿಂದುಳಿದ ವರ್ಗಗಳು ಒಂದಾಗುವ ಮಾತುಗಳು ಕೇಳಿ ಬರುತ್ತಿವೆ. ಹಲವು ರಾಜಕೀಯ ಪಕ್ಷಗಳ ಸಮಾರಂಭಗಳಲ್ಲೂ ಇದು ನಡೆಯುತ್ತಿದೆ. ಆದರೆ ಈ ಒಂದಾಗುವ ಮಾತುಗಳು ಕೇಳಿ ಬರುತ್ತಿರುವುದಾದರೂ ಯಾವ ಉದ್ದೇಶಕ್ಕೆ? ಈ ಮೂರು ಗುಂಪಿಗೂ ಒಬ್ಬ ಸಮಾನವಾದ ಶತ್ರುವಿದ್ದಾನೆ. ಆ ಶತ್ರುವಿನ ಕಾರಣಕ್ಕಾಗಿ ನಾವು ಒಂದಾಗಿದ್ದೇವೆ. ಒಂದು ವೇಳೆ ಈ ಶತ್ರು ಇಲ್ಲದೇ ಇರುತ್ತಿದ್ದರೆ ಅಥವಾ ಹುಟ್ಟಿಕೊಳ್ಳದೇ ಇರುತ್ತಿದ್ದರೆ ಮುಸ್ಲಿಮರು, ದಲಿತರು ಅಥವಾ ಹಿಂದುಳಿದವರ್ಗ -ದಲಿತರು ಒಂದಾಗುವ ಮಾತುಗಳು ಬರುತ್ತಿತ್ತೆ? ಒಂದು ರೀತಿಯಲ್ಲಿ ಪೇಜಾವರಶ್ರೀಗಳಿಗೂ ದಲಿತರು ಬೇಕಾಗಿರುವುದು ಇದೇ ಕಾರಣಕ್ಕೆ. ದಲಿತರ ಕೇರಿಗೆ ಕಾಲಿಡದೇ ಇದ್ದರೆ, ಮುಂದಿನ ದಿನಗಳಲ್ಲಿ ಅಪಾಯ ತನ್ನ ಕಾಲ ಬುಡಕ್ಕೇ ಬರಬಹುದು ಎನ್ನುವ ಆತಂಕದಿಂದ, ತನ್ನ ಪೀಠದಿಂದ ಕೆಳಗಿಳಿದು ದಲಿತ ಕೇರಿಯೆಡೆಗೆ ದಾವಿಸಿದ್ದಾರೆ. ಇಂದು ಮುಸ್ಲಿಮರು, ಕ್ರಿಶ್ಚಿಯನ್ನರು ತಮ್ಮ ತಮ್ಮ ಪೀಠದಿಂದ ಕೆಳಗಿಳಿದು ದಲಿತರ ಜೊತೆ ಒಂದಾಗುವುದಕ್ಕೂ ಇಂತಹದೇ ಇನ್ನೊಂದು ಬಗೆಯ ಆತಂಕ. ಬಹುಶಃ ಅಹಿಂದ ಚಳವಳಿಯ ಬಹುದೊಡ್ಡ ಬಿರುಕು ಕೂಡ ಇದೇ ಆಗಿದೆ. ಈ ದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ದಲಿತರು ಒಟ್ಟು ಸೇರುವುದಕ್ಕೆ ಒಬ್ಬ ಸಮಾನ ಶತ್ರುವಿನ ಅಗತ್ಯವಿತ್ತೆ? ಎನ್ನುವ ಪ್ರಶ್ನೆಯನ್ನು ಎಲ್ಲರೂ ಹಾಕಿಕೊಳ್ಳಬೇಕಾಗಿದೆ. ಮುಸ್ಲಿಮರು ಮತ್ತು ದಲಿತರ ನಡುವಿನ ಸಂಬಂಧ ಕರುಳಬಳ್ಳಿಯದು. ಆ ಸಂಬಂಧವನ್ನು ಉಭಯ ಸಮುದಾಯ ಜೋಪಾನವಾಗಿ, ಗಟ್ಟಿ ಮಾಡಿಕೊಂಡಿದ್ದಿದ್ದರೆ ಯಾವ ಶತ್ರುವಿನ ಭಯವೂ ಈ ಸಮುದಾಯಗಳಿಗೆ ಸದ್ಯದ ದಿನಗಳಲ್ಲಿ ಇರುತ್ತಿರಲಿಲ್ಲ. ಶತ್ರುವಿದ್ದರೂ ತಲೆಯೆತ್ತುವ ಧೈರ್ಯ ಮಾಡುತ್ತಿರಲಿಲ್ಲ. ಮುಖ್ಯವಾಗಿ ಅಲ್ಪಸಂಖ್ಯಾತರು ದಲಿತರ ಜೊತೆಗಿನ ಕರುಳ ಸಂಬಂಧವನ್ನು ಮರೆತರು. ಅದರ ಪರಿಣಾಮವನ್ನು ಇದೀಗ ದಲಿತರೂ ಉಣ್ಣುತ್ತಿದ್ದಾರೆ. ಅಲ್ಪಸಂಖ್ಯಾತರೂ ಉಣ್ಣುತ್ತಿದ್ದಾರೆ.

ದಲಿತರು ಎನ್ನುವ ಶಬ್ದಕ್ಕೆ ವಿರುದ್ಧಾರ್ಥ ಬ್ರಾಹ್ಮಣ ಎಂದು ಬಹುತೇಕ ಜನರು ತಿಳಿದುಕೊಂಡಿದ್ದಾರೆ. ಆದರೆ ಬ್ರಾಹ್ಮಣ್ಯ ಎನ್ನುವುದು ಒಂದು ಆಲೋಚನೆ ಎನ್ನುವ ಪ್ರಜ್ಞೆ ನಮ್ಮಲ್ಲಿರಬೇಕಾಗಿದೆ. ಆ ಆಲೋಚನೆ ನಮ್ಮ ನಿಮ್ಮಲ್ಲೆಲ್ಲ ಗುಟ್ಟಾಗಿ ಮನೆ ಮಾಡಿಕೊಂಡಿರಬಹುದು. ಮನು ಸಂವಿಧಾನದ ಫಲವನ್ನು ಕೇವಲ ಬ್ರಾಹ್ಮಣರು ಮಾತ್ರ ಉಂಡಿಲ್ಲ. ಇಂದು ಅಹಿಂದ ಜೊತೆಗೆ ಗುರುತಿಸಿಕೊಳ್ಳಲು ತಹತಹಿಸುವ ಶೂದ್ರರು, ಮುಸ್ಲಿಮರು, ಕ್ರಿಶ್ಚಿಯನ್ನರೂ ಈ ದೇಶದಲ್ಲಿ ಉಂಡಿದ್ದಾರೆ. ಇಂದು ಬ್ರಾಹ್ಮಣ್ಯವಾದ ನೇರ ಕಾರ್ಯಾಚರಣೆಯನ್ನು ನಿಲ್ಲಿಸಿ, ಬ್ರಾಹ್ಮಣೇತರ ಕೈಗಳ ಮೂಲಕ ತನ್ನ ಹಿತಾಸಕ್ತಿಯನ್ನು ಸಾಧಿಸಿಕೊಳ್ಳುತ್ತಿದೆ. ಮನುಸಂವಿಧಾನವನ್ನು ಬರೆದು ಅದನ್ನು ಉಳಿದವರ ಕೈಯಲ್ಲಿಟ್ಟು, ಅವರು ದೂರದಲ್ಲಿ ನಿಂತು ಅದನ್ನು ಗಮನಿಸುತ್ತಿದ್ದಾರೆ. ಅಂದರೆ ಅದರ ಲಾಭಗಳನ್ನು ಇತರ ಮೇಲ್ವರ್ಗಗಳೊಂದಿಗೆ ಹಂಚಿಕೊಳ್ಳುವಷ್ಟು ಉದಾರರಾಗಿದ್ದಾರೆ. ಇದರ ಪರಿಣಾಮವನ್ನು ನಾವು ಅಲ್ಲಲ್ಲಿ ನೋಡುತ್ತಿದ್ದೇವೆ. ಖೈರ್ಲಾಂಜಿ, ಗುಜರಾತ್, ಧರ್ಮಪುರಿ...ಹೀಗೆ. ದಲಿತರ ಮೇಲಿನ ದೌರ್ಜನ್ಯದಲ್ಲಿ ಶೂದ್ರರೂ ಸೇರಿಕೊಂಡಿದ್ದಾರೆ. ಮುಸ್ಲಿಮರೂ ದಲಿತರನ್ನು ತುಳಿದಿದ್ದಾರೆ. ಕ್ರಿಶ್ಚಿಯನ್ನರ ಪಾಲೇನು ಸಣ್ಣದಲ್ಲ. ಬ್ರಾಹ್ಮಣ್ಯವೆನ್ನುವುದು ಶೂದ್ರರಲ್ಲಿ, ಮುಸ್ಲಿಮರಲ್ಲಿಯೂ ವಿಷದ ಹಾವಿನಂತೆ ತಣ್ಣಗೆ ಮಲಗಿರುವುದನ್ನು ನಾನು ನೋಡಿದ್ದೇನೆ.
   
ಮುಸ್ಲಿಮರು ತಮ್ಮ ಧರ್ಮ ಸಹೋದರತೆಯನ್ನು, ಸಮಾನತೆಯನ್ನು ಬೋಧಿಸುತ್ತದೆ ಎಂದು ಗಾಢವಾಗಿ ನಂಬಿದ್ದಾರೆ. ಹಾಗಿದ್ದರೂ ಇಸ್ಲಾಂ ತಾನು ಸ್ವೀಕರಿಸಬಹುದಾದ ಧರ್ಮ ಎಂದು ಅಂಬೇಡ್ಕರ್‌ಗೆ ಯಾಕೆ ಅನ್ನಿಸಲಿಲ್ಲ? ಇದೇ ಪ್ರಶ್ನೆಯನ್ನು ನನ್ನೊಬ್ಬ ಆತ್ಮೀಯ ಧರ್ಮಗುರುವಿಗೆ ಕೇಳಿದ್ದೆ. ಅವರು ಹೇಳಿದರು ‘‘ಬಹುಶಃ ಇಸ್ಲಾಮನ್ನು ಅವರು ಅರ್ಥ ಮಾಡಿಕೊಳ್ಳಲು ವಿಫಲರಾಗಿರಬೇಕು’’ ವಿಪರ್ಯಾಸವೆಂದರೆ, ಇಸ್ಲಾಮನ್ನು ಅಂಬೇಡ್ಕರ್ ಅರ್ಥ ಮಾಡಿಕೊಳ್ಳಲು ವಿಫಲರಾದುದಲ್ಲ. ಇಲ್ಲಿನ ಮುಸ್ಲಿಮರು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇಸ್ಲಾಮಿನೊಳಗೆ ಗಡ್ಡವೇ ಹೊರತು, ಗಡ್ಡದೊಳಗೆ ಇಸ್ಲಾಮ್ ಅಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಅವರು ಬಹುತೇಕ ವಿಫಲರಾಗಿದ್ದಾರೆ. ಭಾರತದ ಜಾತೀಯತೆಯ ಚರಂಡಿ ಈ ದೇಶದ ಮುಸ್ಲಿಮರ ಮನದಾಳದಲ್ಲಿ ಇನ್ನೂ ಅಂತರ್‌ಗಂಗೆಯಂತೇ ಹರಿಯುತ್ತಿದೆ. ಇಸ್ಲಾಂ ತಾನು ಸ್ವೀಕರಿಸಬಹುದಾದ ಧರ್ಮ ಎಂದು ಅಂಬೇಡ್ಕರ್‌ಗೆ ಆ ಕಾಲದಲ್ಲಿ ಅನ್ನಿಸದೇ ಇರುವುದು ಭಾರತದ ಇಂದಿನ ಸಂದರ್ಭದಲ್ಲಿ ನೋಡಿದರೆ, ಅದು ಇಲ್ಲಿನ ಮುಸ್ಲಿಮರ ಅತಿ ದೊಡ್ಡ ಸೋಲು. ಅದಕ್ಕಾಗಿ ಇಲ್ಲಿನ ಮುಸ್ಲಿಮರು ಈಗಲೂ ಬೆಲೆ ತೆರುತ್ತಲೇ ಇದ್ದಾರೆ. ಇದು ಮುಸ್ಲಿಮರಿಗಷ್ಟೇ ಸೀಮಿತವಾಗಿಲ್ಲ. ಕ್ರೈಸ್ತ ಧರ್ಮಕ್ಕೆ ಮತಾಂತರವಾದ ದಲಿತರ ಶವ ದಫನ ಹಲವು ಚರ್ಚುಗಳಲ್ಲಿ ವಿವಾದವಾದುದನ್ನು ನಾವು ನೋಡಿದ್ದೇವೆ. ದಲಿತ ಪಾದ್ರಿಗಳೇ ಅಲ್ಲಿ ಕೀಳರಿಮೆಯಿಂದ ಬದುಕುವ ಸನ್ನಿವೇಶವಿದೆ. ದಲಿತರು ದಲಿತರಾಗಿದ್ದುಕೊಂಡು ಅವಮಾನ ಅನುಭವಿಸುವುದಕ್ಕಿಂತ ಇದು ಕ್ರೂರವಾದುದು. ಇವೆಲ್ಲವೂ ಯಾಕೆ ಸಂಭವಿಸುತ್ತಿದೆಯೆಂದರೆ, ಇಂದು ನಾವು ರಾಜಕೀಯ ಕಾರಣಗಳಿಗಾಗಿ ದಲಿತರನ್ನು ಪ್ರೀತಿಸತೊಡಗಿರುವುದು. ದಲಿತರನ್ನು ಪ್ರೀತಿಸುವುದಕ್ಕೆ ಈ ದೇಶದ ಅಲ್ಪಸಂಖ್ಯಾತರಿಗೆ ರಾಜಕೀಯ ಕಾರಣಗಳ ಅಗತ್ಯವಿಲ್ಲ. ಕರುಳ ಸಂಬಂಧವೊಂದೇ ಸಾಕು. ಅವರೊಂದಿಗೆ ನೂರಾರು ಜನ್ಮ ಜೊತೆ ಜೊತೆಯಾಗಿ ಬಾಳುವುದಕ್ಕೆ.

ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿರಬಹುದು. ಬೌದ್ಧರಾಗಿದ್ದರೂ ಅವರು ಅತ್ಯುತ್ತಮ ಮುಸ್ಲಿಮರಾಗಿಯೂ, ಅತ್ಯುತ್ತಮ ಕ್ರಿಶ್ಚಿಯನ್ನರಾಗಿಯೂ ಬಾಳಿದರು. ಆದುದರಿಂದಲೇ ನಮಗಾರಿಗೂ ಅಂಬೇಡ್ಕರ್ ಇಲ್ಲದ ಭಾರತವನ್ನು ಕಲ್ಪಿಸಲು ಸಾಧ್ಯವಾಗುವುದಿಲ್ಲ. ಈ ದೇಶದ ಅಹಿಂದ ವರ್ಗ ನಿಜ ಕಾರಣಕ್ಕಾಗಿ ಒಂದುಗೂಡುವ ಅಗತ್ಯವಿದೆ. ಒಬ್ಬ ದಲಿತನಿಗೆ ನೋವಾದಾಗ ಅದಕ್ಕಾಗಿ ಈ ದೇಶದ ಸರ್ವ ಶೋಷಿತರ ಕರುಳೂ ಸಹಜವಾಗಿ ಮಿಡಿಯಬೇಕು. ಅಂತಹ ಪ್ರಾಮಾಣಿಕ ಸಂಬಂಧವಷ್ಟೇ ಅಹಿಂದವನ್ನು ಬಲವಾಗಿ ಜೋಡಿಸೀತು. ಇದಕ್ಕೆ ಹೊರತು ಪಡಿಸಿದ ಎಲ್ಲ ಸಮಾಗಮಗಳೂ ಸಭೆ ಮುಗಿದು ವಿಸರ್ಜನೆಯಾಗುವವರೆಗೆ ಮಾತ್ರ ಉಳಿದೀತು. ಅದು ಈ ದೇಶದ ಬಿಕ್ಕಟ್ಟಿಗೆ ಪರಿಹಾರವನ್ನು ನೀಡಲಾರದು.

Tuesday, December 25, 2012

2009ರಲ್ಲಿ ತೆರೆದ ನನ್ನ ಗುಜರಿ ಅಂಗಡಿ ಇದೀಗ 2013ಕ್ಕೆ ಕಾಲಿಡುವ ಸಿದ್ಧತೆಯಲ್ಲಿದೆ. ವ್ಯಾಪಾರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ...ನೂರಾರು ಗೆಳೆಯರನ್ನು ಈ ಬ್ಲಾಗ್ ನನಗೆ ಕೊಟ್ಟಿದೆ. ಇಲ್ಲಿರುವ ಸರಕುಗಳನ್ನು ಮೆಚ್ಚಿದವರು, ಚಚ್ಚಿದವರು, ಚುಚ್ಚಿದವರು...ಎಲ್ಲರು ನನ್ನ ಗೆಳೆಯರೇ...ಅವರಿಗೆ ಹೃದಯ ತುಂಬಿದ ಕೃತಜ್ಞತೆಗಳು....ಈ ಬ್ಲಾಗ್ ಬರೆಯಲು ಸ್ಫೂರ್ತಿಯಾದ ಅವಧಿ ಮ್ಯಾಗ್ ಮತ್ತು ಜಿ. ಎನ್. ಮೋಹನ್ ಸೇರಿದಂತೆ, ಉಳಿದ ಬ್ಲಾಗ್ ಬರಹಗಾರರಿಗೂ ಋಣಿ. ಅಂದ ಹಾಗೆ ಗೆಳೆಯ ಸತೀಶ್ ಕಲ್ಮಾಡಿ ಅವರು ಮಾತು ಕೊಟ್ಟಂತೆ ಗುಜರಿ ಅಂಗಡಿಗೆ ಹೊಸ ಬೋರ್ಡ್ ಬರೆದು ಕೊಟ್ಟಿದ್ದಾರೆ. ಅವರ ಕಲೆಗೆ ಬೆಲೆ ಕಟ್ಟಲು ಅಸಾಧ್ಯ.  ಹೊಸ ಬೋರ್ಡ್ ಹೇಗೆ ಲಕ ಲಕಿಸುತ್ತಿದೆ ಎನ್ನುದನ್ನು ನೀವೇ ನೋಡಿ...

Monday, December 24, 2012

ಮೈಸೂರ್ ಪಾಕ್ ಮತ್ತು ಇತರ ಕವಿತೆಗಳು

ಗಾಯ
ಹಳೆಗಾಯಗಳೆ ಬೇಗ
ಒಣಗಿಬಿಡಿ
ಹೊಸ ಗಾಯಗಳಿಗೆ
ತುಸು ಜಾಗ ಕೊಡಿ!
2
ಮೈಸೂರ್ ಪಾಕ್
ಈದ್ ದಿನ ಮುಸ್ತಫಾ
ಕಚೇರಿಯಲ್ಲಿ
ಮೈಸೂರ್ ಪಾಕ್ ಹಂಚಿದ....
ಮೈಸೂರ್ ಏನೋ
ಚೆನ್ನಾಗಿದೆ
ಆದರೆ "ಪಾಕ್'' ಕುರಿತಂತೆ
ಕೆಲವರಿಗೆ
ಸಣ್ಣದೊಂದು ಅನುಮಾನ...
3
ಹಾರ್ಮೋನಿಯಂ
ಕುರುಡನೊಬ್ಬ ಹಾರ್ಮೋನಿಯಂನ್ನು
ಅದ್ಭುತವಾಗಿ ನುಡಿಸುತ್ತಿದ್ದ.
ಅದೆಷ್ಟೋ ಕಾಲದ
ಬಳಿಕ ಅವನಿಗೆ ಕಣ್ಣು ಬಂತು
ಇದೀಗ ಅದೇ ಹಾರ್ಮೋನಿಯಂ
ಕೀ ಬೋರ್ಡ್ ಮುಂದೆ
ಅವನ ಬೆರಳುಗಳು
 ತಡವರಿಸುತ್ತಿವೆ....!
ಕಣ್ಣು ಮುಚ್ಚದೆ ಅವನು
ಹಾರ್ಮೋನಿಯಂ ನುಡಿಸಲಾರ!!
4
ಬಾಹುಗಳು
ಗೆಳೆಯನ ಬಾಹುಗಳಲ್ಲಿ
ಆಸರೆಗೆಂದು ಅವಳು ಧಾವಿಸಿದಳು..
ಸುತ್ತಿಕೊಂಡ ತೋಳುಗಳು
ನಿಧಾನಕ್ಕೆ ಬಂಧನಿಕೆಯಂತೆ
ಬಿಗಿಯಾಗ ತೊಡಗಿದವು...
ಶತಮಾನಗಳ ಬಳಿಕ
ಆ ತೋಳನ್ನು ಬಿಡಿಸಿದಾಗ
ಸತ್ತು ಹೋದ ಮರಗಳಂತೆ
ಅಲ್ಲಿ ನೂರಾರು ಅಸ್ಥಿ ಪಂಜರಗಳು...!
5
ಅನಾಥ ಹೆಣ
ರೈಲ್ವೆ ಹಳಿಯ ಮೇಲೆ
ಒಂದು ಅನಾಥ ಹೆಣ ಸಿಕ್ಕಿದೆ....
ಶರ್ಟ್ ಮೇಲೆ
ಅಂಬೇಡ್ಕರ್ ಟೈಲರ್
ಅಂಗಡಿಯ ಹೆಸರಿದೆ...
ಬೆನ್ನಿಗೆ ಚುಚ್ಚಿದ ಚೂರಿಯ  ಮೇಲೆ
ಮೋದಿ ಕಂಪೆನಿಯ ಲಾಂಛನವಿದೆ...
ಅಂದ ಹಾಗೆ ಈ ರೈಲ್ವೆ ಹಳಿ
ಗುಜರಾತ್ ಕಡೆಗೆ ಹೋಗುತ್ತದೆ.....
6
ಸ್ಫೋಟ
ಹೀಗೊಂದು ವಿಚಿತ್ರ ಕನಸು....
ಸಬ್ಸಿಡಿಯಿಲ್ಲದೆ ಖಾಲಿ ಬಿದ್ದಿದ್ದ
ಬಡವರ ಮನೆಯ ಗ್ಯಾಸ್ ಸಿಲಿಂಡರ್ಗಳು
ಇದ್ದಕ್ಕಿದ್ದಂತೆಯೇ ಸ್ಫೋಟಗೊಂಡವು
ಆ ಸ್ಫೋಟ ಎಷ್ಟು ಪ್ರಬಲವಾಗಿತ್ತೆಂದರೆ
ಸರಕಾರಗಳೆಲ್ಲ
ಛಿದ್ರ ಛಿದ್ರವಾಗಿ ಬಿದ್ದಿವೆ..!!

Tuesday, December 18, 2012

ಬೆಂಕಿ ಮತ್ತು ಇತರ ಕತೆಗಳು

ಕಣ್ಣು
ತನ್ನ ಕುರುಡ ಮಗನಲ್ಲಿ ತಾಯಿ ಹೇಳಿದಳು
‘‘ನಾನು ಬೇಗ ಸಾಯ್ತೇನೆ. ಸತ್ತ ಬಳಿಕ ನನ್ನೆರಡು ಕಣ್ಣುಗಳನ್ನು ನೀನು ತೆಗೆದುಕೊ...’’
ಕುರುಡು ಮಗ ವಿಷಾದದಿಂದ ಹೇಳಿದ
‘‘ನನ್ನ ತಾಯಿಯನ್ನು ಕೊಟ್ಟು ಎರಡು ಕಣ್ಣುಗಳನ್ನು ಖರೀದಿಸುವಷ್ಟು ಕುರುಡುತನ ನನ್ನದಲ್ಲ...ಈಗಾಗಲೇ ನಿನ್ನ ಕಣ್ಣಿನ ಮೂಲಕ ನಾನು ಜಗತ್ತನ್ನು ನೋಡುತ್ತಿದ್ದೇನೆ...’’

ಬೆಂಕಿ
ಗ್ಯಾಸ್ ಸಿಲಿಂಡರ್‌ಗೆ ಸಬ್ಸಿಡಿ ನಿರಾಕರಣೆಯಾದದ್ದೇ...ಒಬ್ಬ ಅಸಹಾಯಕನಾಗಿ ಗೊಣಗಿದ ‘‘ಇನ್ನು ನಾನು ಗಂಜಿ ಬೇಯಿಸುವುದು ಯಾವುದರಿಂದ?’’
ಪಕ್ಕದಲ್ಲೇ ಇದ್ದ ಶ್ರೀ ಸಾಮಾನ್ಯ ನಿಟ್ಟುಸಿರಿಟ್ಟು ಉತ್ತರಿಸಿದ ‘‘ಒಡಲೊಳಗೆ ಧಗಿಸುತ್ತಿರುವ ಬೆಂಕಿಯಿಂದ’’

ಊಟ
ಸಚಿವೆ ಹೇಳಿದಳು ‘‘600 ರೂಪಾಯಿ ಇದ್ದರೆ ಐದು ಜನರಿರುವ ಕುಟುಂಬ ಒಂದು ತಿಂಗಳು ಊಟ ಮಾಡಬಹುದು’’
ಮರುದಿನ ಬೆಳಗ್ಗೆ ಶಾಲೆಗೆ ಹೋಗುವ ತನ್ನ ಪುಟಾಣಿ ಮಗಳಿಗೆ ‘ಒಂದು ಸಾವಿರ ರೂಪಾಯಿಯನ್ನು’ ಪಾಕೆಟ್ ಮನಿ ಎಂದು ಕೊಟ್ಟಳು.

ಬದುಕು
‘‘ಬದುಕುವ ಕಲೆ’’ ಎಂಬ ಪುಸ್ತಕವನ್ನು ತಂದು ಅವನು ಓದ ತೊಡಗಿದ.
ಪುಸ್ತಕದಲ್ಲಿ ಮೊದಲ ಪುಟದಲ್ಲೇ ಸಲಹೆಯಿತ್ತು ‘‘ಬದುಕನ್ನು ಪುಸ್ತಕ ಓದಿ ಕಲಿಯಬೇಡಿ, ಬದುಕಿ ಕಲಿಯಿರಿ’’

ಜಾಮೀನು
ಅದು ಜನಾರ್ದನ ಪೂಜಾರಿಯವರು ಹಣಕಾಸು ಸಚಿವರಾಗಿದ್ದ ಕಾಲ.
ಸಾಲಮೇಳ ಘೋಷಣೆಯಾಗಿದ್ದೂ ಅದೇ ಕಾಲದಲ್ಲಿ. ಜನಸಾಮಾನ್ಯರಿಗೆ ಬ್ಯಾಂಕ್‌ನ ಮೆಟ್ಟಿಲು ಏರುವ ಸ್ವಾತಂತ್ರ ಸಿಕ್ಕಿದ್ದು ಆಗ.
ರೈತನೊಬ್ಬ ದನ ಕೊಳ್ಳಲು ಸಾಲ ಕೇಳಲು ಬ್ಯಾಂಕ್‌ಗೆ ಹೋದ.
ಮ್ಯಾನೇಜರ್ ಗುರಾಯಿಸಿ ಕೇಳಿದರು ‘‘ಜಾಮೀನು ಯಾರು ಕೊಡ್ತಾರೆ?’’
ರೈತ ಹೇಳಿದ ‘‘ಜನಾರ್ದನ ಪೂಜಾರಿ’’

ಕುರುಡ
ಕುರುಡ ಮಗುವೊಂದು ಸಂತೆಯಲ್ಲಿ ಕಳೆದು ಹೋಯಿತು.
ತಾಯಿ ಎಲ್ಲೆಡೆ ಹುಡುಕ ತೊಡಗಿದಳು.
ಊಹುಂ...ಪತ್ತೆಯಿಲ್ಲ.
ಕಟ್ಟ ಕಡೆಗೆ ತನ್ನೆರಡು ಕಣ್ಣುಗಳನ್ನು ಮುಚ್ಚಿಕೊಂಡಳು.
ದಟ್ಟ ಕತ್ತಲೆ....
ನೋಡು ನೋಡುತ್ತಿದ್ದಂತೆಯೇ ಆ ದಟ್ಟ ಕತ್ತಲೆಯನ್ನು ಸೀಳಿಕೊಂಡು ಮಗ ನಡೆದು ಬರುತ್ತಿರುವುದನ್ನು ಅವಳು ಕಂಡಳು.

ವರ್ಚಸ್ಸು
ಅವನು ಕಚೇರಿಗೆ ಬಂದ ಹೊಸ ಎಂಡಿ
‘‘ಕೋಣೆಗೆ ಎಸಿ ಯಾಕೆ ಹಾಕಿಲ್ಲ’’ ಎಂದು ಸಹಾಯಕನಲ್ಲಿ ಕೇಳಿದ.
‘‘ಗಾಳಿ, ಬೆಳಕು ಕಿಟಕಿಯಿಂದ ಚೆನ್ನಾಗಿ ಬರುತ್ತದೆಯೆಂದು ಹಳೆ ಎಂಡಿ ಕಿಟಕಿಯನ್ನು ಹಾಕಿಲ್ಲ’’ ಎಂದು ಸಹಾಯಕ ಉತ್ತರಿಸಿದ.
‘‘ಗಾಳಿ, ಬೆಳಕಿಗಿಂತ ನನಗೆ ನನ್ನ ವರ್ಚಸ್ಸು ಮುಖ್ಯ’’ ಹೊಸ ಎಂಡಿ ಆದೇಶಿಸಿದ.
ಕಿಟಕಿಯನ್ನು ಮುಚ್ಚಿ ಕೋಣೆಗೆ ಎಸಿ ಹಾಕಲಾಯಿತು.

ವ್ಯಾಪಾರ
 ಅವಳು ತನ್ನ ಆಗಷ್ಟೇ ಹುಟ್ಟಿದ ಕೂಸನ್ನು ಹಿಡಿದು ಕೇಳಿದಳು ‘‘ಸ್ವಾಮಿ, ಒಂದು ಸಾವಿರ ರೂಪಾಯಿ ಕೊಡಿ...ಕೂಸು ಕೊಡ್ತೇನೆ...’’
‘‘ತುಂಬಾ ಜಾಸ್ತಿಯಾಯಿತು’’
‘‘ಹಾಗಾದ್ರೆ 500 ರೂ. ಕೊಡಿ ಸಾಮಿ’’
‘‘ಅದೂ ಜಾಸ್ತಿಯಾಯಿತು...’’
‘‘ನೂರು ರೂ. ಕೊಡಿ ಸಾಮಿ’’
‘‘ಊಹುಂ...ಅದೂ ಜಾಸ್ತಿಯಾಯಿತು...’’
‘‘ಹಾಗಾದ್ರೆ...ಮಧ್ಯಾಹ್ನ ಊಟ ಕೊಡಿ...ಮಗು ಕೊಡ್ತೀನಿ...’’
‘‘ಊಹುಂ....’’
‘‘ಸರಿ...ಹಂಗಾರೆ...ಈ ಮಗುವಿಗಾದರೂ ಹಾಲು ಕುಡಿಸಿ...ತಗೊಂಡೋಗಿ...’’

ನಿರ್ಮಾಪಕ
ನಿರ್ಮಾಪಕ ಹೇಳಿದ ‘‘ನಾನು ‘ಬಡವ’ರ ಬದುಕನ್ನು ಅನುಭವಿಸಿ ಬಡವರ ಕುರಿತಂತೆ ಒಂದು ಹೊಸ ಚಿತ್ರವನ್ನು ತೆಗೆದಿದ್ದೇನೆ’’
‘‘ಹೌದಾ, ಏನಾಯ್ತು’’
‘‘ನಾನೀಗ ಬಡವನಾಗಿ ಅನುಭವಿಸುತ್ತಿದ್ದೇನೆ’’

ನನ್ನ ಕತೆ, ಕವಿತೆ ಬರಹಗಳಿಗೆ ಬಳಸಿರುವ ಹೆಚ್ಚಿನ ಚಿತ್ರಗಳು, ಪೇಂಟಿಂಗ್‌ಗಳು ಗೂಗಲ್ ಇಮೇಜ್‌ನ ಅನ್ವೇಷನೆಯಾಗಿದೆ. ನನ್ನ ಸರಕುಗಳ ತೂಕವನ್ನು ಹೆಚ್ಚಿಸಿದ ಆ ಎಲ್ಲ ಅನಾಮಿಕ ಕಲಾವಿದರಿಗೆ ಹೃದಯ ತುಂಬಿದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

Monday, December 17, 2012

ಮೂರು ಹನಿಗಳು

 1
ಸಮಯ


ಜೀಸಸ್ ನ ಮೊಳೆ ಹೊಡೆದ
ಎರಡು ಕೈಗಳಂತೆ
ಗಡಿಯಾರದ ಮುಳ್ಳುಗಳು
ಸಮಯವನ್ನು ತೋರಿಸುತ್ತಿತ್ತು
ಟಿಕ್
ಟಿಕ್
ಟಿಕ್
ರಕ್ತ ತೊಟ್ಟಿಕ್ಕುತ್ತಿತ್ತು....


2
ಮರು ಹುಟ್ಟು


ರಾತ್ರಿ ಕನಸಲ್ಲಿ
ಭೀಕರ ಅಪಘಾತಕ್ಕೆ
ಸಿಲುಕಿ ಒಂದೇ ಏಟಿಗೆ ನಾನು ಸತ್ತೆ !
ಮುಜಾನೆ ಎದ್ದು
ಕಣ್ಣು ತೆರೆದಾಗ
ನನಗೆ ಮರು ಹುಟ್ಟು !!


3
ಮುಗ್ಧ


ಕನಸಲ್ಲಿ ವೇಶ್ಯೆಯ ಜೊತೆ
ಮಲಗಿದ ಮುಗ್ಧ ಗೋಪಿ
ಬೆಳಗಾದದ್ದೇ
ಎಚ್ ಐ ವಿ ಪರೀಕ್ಷೆಗೆಂದು
ವೈದ್ಯರೆಡೆಗೆ ಧಾವಿಸಿದ !

Wednesday, December 12, 2012

ನಮ್ಮ ನೆಲದ ಶಿವಾಜಿ: ಶಿವಾಜಿಯ ಹಿಂದುತ್ವ ವರ್ಸಸ್ ಪೇಶ್ವೆ ಹಿಂದುತ್ವ

ಮಹಾಸ್ತಂಭ
ಶಿವಾಜಿಯ ಕಾಲದಲ್ಲಿ ನಡೆದ ಒಂದು ವಿಸ್ಮಯ ವೆಂದರೆ, ಆತನ ಹೋರಾಟ ಅಪ್ರಜ್ಞಾಪೂರ್ವಕವಾಗಿ ಒಂದು ಜಾತ್ಯತೀತ ಭಾರತೀಯ ಕಲ್ಪನೆ ತನಗೆ ತಾನೆ ಸಹಜವಾಗಿ ಅರಳಿಕೊಳ್ಳಲು ಕಾರಣವಾದುದು. ಶಿವಾಜಿ ಎಂದೂ ತನ್ನ ಹೋರಾಟ ಸಂದರ್ಭದಲ್ಲಾಗಲಿ, ಪತ್ರ ವ್ಯವಹಾರ ಸಂದರ್ಭ ದಲ್ಲಾಗಲಿ ‘ಹಿಂದೂ’ ಎನ್ನುವ ಶಬ್ದವನ್ನು ಬಳಸಿಲ್ಲ. ಹಿಂದೂ ಎನ್ನುವ ಶಬ್ದ ಆಗ ರಾಜಕೀಯ, ಧಾರ್ಮಿಕ ಅರ್ಥವನ್ನೂ ಪಡೆದುಕೊಂಡಿರಲಿಲ್ಲ. ಅವನ ಮಗ ಸಾಂಭಾಜಿ ಪತ್ರದಲ್ಲಿ ಒಂದೆಡೆ ಹೈಂದವ ಎನ್ನುವ ಶಬ್ದವನ್ನು ಬಳಸುತ್ತಾನೆ. ಹಾಗೆಂದು ನಾವು ಶಿವಾಜಿ ಯನ್ನು ಸಮತಾವಾದಿ, ಜಾತ್ಯತೀತ ಎಂಬಿತ್ಯಾದಿ ಆಧುನಿಕ ಪರಿಭಾಷೆಗಳಿಂದ ಗುರುತಿಸುವುದೂ ಹಾಸ್ಯಾಸ್ಪದ. ಅವನ ಕಾಲ ಮತ್ತು ಸಂದರ್ಭ ಎಲ್ಲರನ್ನು ಒಳಗೊಂಡ ಭಾರತೀಯತೆಯೊಂದನ್ನು ಅವನ ಮೂಲಕ ಕಂಡುಕೊಂಡಿತು. ಶಿವಾಜಿ ಮರಾಠರು, ಕುಣಬಿಗಳು, ಬ್ರಾಹ್ಮಣರು, ಕ್ಷತ್ರಿಯರು, ಮಹಾರ ದಲಿತರು, ಮುಸ್ಲಿಮರು, ಕೋಳಿ, ಭಂಡಾರಿ, ಕುರುಬ, ಪ್ರಭು, ರಾಮೋಶಿ, ನಾವಲಿಗ, ಶೆಣವಿ ಹೀಗೆ ಸುಮಾರು 56 ಜಾತಿಯ ಜನರನ್ನು ತನ್ನ ಪಡೆಯಲ್ಲಿ ಸೇರಿಸಿಕೊಂಡಿದ್ದ. ಜಾತಿ ವ್ಯವಸ್ಥೆ ಉಲ್ಬಣಾವಸ್ಥೆಯಲ್ಲಿದ್ದ ಹೊತ್ತಿನಲ್ಲಿ ಶಿವಾಜಿ ಇವರೆಲ್ಲರನ್ನು ಸಂಘಟಿಸಿ ಒಂದು ವೇದಿಕೆಗೆ ತಂದುದು ಸಣ್ಣ ವಿಷಯವಲ್ಲ. ಆದರೆ ಇದು ಮುಂದೆ ಶಿವಾಜಿಯ ವಂಶಸ್ಥ ರಿಂದ ರಾಜ್ಯವನ್ನು ಮೋಸದಿಂದ ಕೈವಶಮಾಡಿ ಕೊಂಡ ಬ್ರಾಹ್ಮಣ ಪೇಶ್ವೆಗಳಿಗೆ ಸಾಧ್ಯವಾಗಲಿಲ್ಲ. ಶಿವಾಜಿಯ ಹಿಂದುತ್ವವೇ ಬೇರೆ. ಪೇಶ್ವೆಗಳ ಹಿಂದುತ್ವವೇ ಬೇರೆ. ಶಿವಾಜಿಯ ಸುಮಾರು ಎಂಟು ವರ್ಷದ ಆಳ್ವಿಕೆ ಮುಗಿದು, ಮೂರು ತಲೆಮಾರುಗಳಲ್ಲೇ ಈ ಜಾತ್ಯತೀತ ಸಂಘಟನೆ ಪೇಶ್ವೇ ಗಳಿಂದಾಗಿ ಒಡೆದು ಹೋಯಿತು. ಯಾವಾಗ ಶಿವಾಜಿ ವಂಶಸ್ಥರಿಂದ ಆಡಳಿತ ಚಿತ್ಪಾವನ ಬ್ರಾಹ್ಮಣವಂಶಜರಾದ ಪೇಶ್ವೆಗಳ ಕೈಗೆ ಹಸ್ತಾಂತರವಾಯಿತೋ ಅಲ್ಲಿಂದಲೇ ಮತ್ತೆ ಜಾತೀಯತೆ ಭುಗಿಲೆದ್ದಿತು. ಶಿವಾಜಿಯ ಹಿಂದುತ್ವ, ಧಾರ್ಮಿಕತೆ ಎಲ್ಲ ಧರ್ಮೀಯರನ್ನು ಒಟ್ಟು ಸೇರಿಸಿ ಒಂದು ನಾಡನ್ನು ಕಟ್ಟಲು ಕಾರಣವಾದರೆ, ಪೇಶ್ವೆಗಳ ಬ್ರಾಹ್ಮಣ್ಯ ರೂಪದ ಹಿಂದುತ್ವ ಸೇನೆಯನ್ನು ಒಡೆಯಿತು. ಜಾತೀಯತೆಯನ್ನು ಬೆಳೆಸಿತು. ದಲಿತರು ಬಂಡೆದ್ದು ಬ್ರಿಟಿಷರ ಸೇನೆಯನ್ನು ಸೇರಿ, ಪೇಶ್ವೆಗಳನ್ನು ಸೋಲಿಸುವಲ್ಲಿಗೆ ಇದು ಅಂತ್ಯವಾಯಿತು. ಶಿವಾಜಿಯ ಕನಸು ಪೇಶ್ವೆಗಳ ದೆಸೆಯಿಂದ ಸುಟ್ಟು ಬೂದಿ ಯಾಯಿತು.
 
 ಶಿವಾಜಿ ಪೇಶ್ವೆಗಳಂತೆ ಯಾವತ್ತೂ ಧರ್ಮಾಂಧ ನಾಗಿರಲಿಲ್ಲ. ಆದುದರಿಂದಲೇ ಶಿವಾಜಿಯನ್ನು ಮುಸ್ಲಿಮರು, ದಲಿತರೂ ಎದೆ ತುಂಬಿ ಪ್ರೀತಿಸಿದರು. ಅವನಿಗಾಗಿ ಪ್ರಾಣವನ್ನು ತೆತ್ತರು. ಸೇನೆಯಲ್ಲಿ ಮುಸ್ಲಿಮರ ಕುರಿತಂತೆ ಶಿವಾಜಿಗೆ ಅದೆಷ್ಟು ಹೆಮ್ಮೆಯಿತ್ತೆಂದರೆ ರಾಯಗಡದಲ್ಲಿ ಮುಸ್ಲಿಮ್ ಸೈನಿಕರಿಗಾಗಿಯೇ ಮಸೀದಿಯನ್ನು ಕಟ್ಟಿಸಿದ್ದ. ಜಿಝಿಯಾ ಕರವನ್ನು ವಿರೋಧಿಸಿ ಶಿವಾಜಿಯು ಔರಂಗಜೇಬನಿಗೆ ಬರೆದ ಪತ್ರದ ಸಾಲುಗಳು ಶಿವಾಜಿಯ ವ್ಯಕ್ತಿತ್ವವನ್ನು, ಅವನ ಆಡಳಿತದ ಮುನ್ನೋಟವನ್ನು ತಿಳಿಸುತ್ತದೆ. ಅವನು ಎಷ್ಟು ಸೂಕ್ಷ್ಮವಾಗಿ, ಹೃದ್ಯವಾಗಿ ಆ ಪತ್ರವನ್ನು ಬರೆಯು ತ್ತಾನೆಂದರೆ, ಅಕ್ಬರ್, ಜಹಂಗೀರ್ ಮೊದಲಾದ ವರನ್ನು ಆ ಪತ್ರದಲ್ಲಿ ಮನಬಿಚ್ಚಿ ಹೊಗಳುತ್ತಾನೆ. ಅದರ ಆಯ್ದ ಕೆಲವು ಸಾಲುಗಳನ್ನು ಇಲ್ಲಿವೆ ‘‘.....ಈ ಹಿಂದೆ ಅಕಬರ ಬಾದಶಹಾ ನ್ಯಾಯದಿಂದ ಐವತ್ತೆರಡು ವರ್ಷ ರಾಜ್ಯವಾಳಿದರು. ಇದರಿಂದ ಈಸವಿ, ದಾವುದಿ, ಮಹಮದಿ ಮುಂತಾದವರು, ಬ್ರಾಹ್ಮಣ, ಶೆವಡೆ ವಗೈರೆ ಧರ್ಮ ಚೆನ್ನಾಗಿ ನಡೆಯಿತು. ಆ ಧರ್ಮಕ್ಕೆ ಬಾದಶಹಾ ಸಹಾಯ ಮಾಡಿದ್ದರಿಂದ ಜಗದ್ಗುರು ಎಂದು ಪ್ರಸಿದ್ಧರಾದರು. ಇಂತಹ ಸದ್ವಿವೇಕದ ನೋಟ ಎಲ್ಲೆಡೆ ಇರುತ್ತಿತ್ತು. ಯಶವೂ ಸಿಗುತ್ತಿತ್ತು.....ಆ ಬಳಿಕ ನೂರುದ್ದೀನ ಜಹಂಗೀರ್ ಬಾದಶಹಾ ಅವರು ದೇವರ ಮೇಲೆ ನಂಬಿಕೆಯಿಟ್ಟು ಇಪ್ಪತ್ತೆರಡು ವರ್ಷ ರಾಜ್ಯವಾಳಿ ದರು......ಶಹಜಹಾನ ಸಾಹೇಬ ಕಿರಾನ ಅವರು ಮೂವತ್ತೆರಡು ವರ್ಷ ರಾಜ್ಯವಾಳಿ ಪ್ರಸಿದ್ಧರಾದರು. ಒಳ್ಳೆಯ ರೀತಿಯಲ್ಲಿ ಬದುಕಿ ಕೀರ್ತಿ ಸಂಪಾದಿಸಿ ದರು..... ಆ ಬಾದಶಹರೂ ಜಿಝಿಯಾ ಕರ ಹೇರಲು ಸಮರ್ಥರಾಗಿದ್ದರು. ಆದರೆ ಚಿಕ್ಕವರು ದೊಡ್ಡವರು ತಂತಮ್ಮ ಧರ್ಮದಲ್ಲಿದ್ದಾರೆ. ಅದೆಲ್ಲ ದೇವರದ್ದು ಎಂದು ಭಾವಿಸಿ ಯಾರ ಮೇಲೂ ಅನ್ಯಾಯವಾಗದಂತೆ ನೋಡಿಕೊಂಡರು. ಅವರ ಉಪಕಾರ ಇವತ್ತಿಗೂ ಉಳಿದಿದೆ... ಎಲ್ಲರ ಬಾಯಲ್ಲಿ ಅವರ ಸ್ತುತಿಯಿದೆ...’’ ಹೀಗೆ ಬಾಯಿ ತುಂಬಾ ಅಕ್ಬರ್, ಜಹಂಗೀರ್, ಶಹಜಹಾನ್ ಅವರನ್ನು ಹೊಗಳುತ್ತಾ, ಔರಂಗಜೇಬನನ್ನು ಪರೋಕ್ಷವಾಗಿ ಟೀಕಿಸುತ್ತಾ ಹೋಗುತ್ತಾನೆ ಶಿವಾಜಿ. ವಿಶೇಷವೆಂದರೆ ತನ್ನ ಪತ್ರದಲ್ಲಿ ಕುರ್‌ಆನನ್ನು ಸ್ಮರಿಸಿ ಔರಂಗಜೇಬನಿಗೆ ಉಪದೇಶ ಮಾಡುತ್ತಾನೆ ಶಿವಾಜಿ ‘‘ಕುರ್‌ಆನ್ ಇದು ಆಕಾಶವಾಣಿಯ ಗ್ರಂಥ. ಅದು ದೇವರ ವಾಣಿ. ಅದರಲ್ಲಿ ಆಜ್ಞಾಪಿಸಿ ದ್ದೇನೆಂದರೆ, ದೇವರು ಜಗತ್ತಿನವನು, ಇಲ್ಲವೇ ಮುಸಲ್ಮಾನವರನು, ಒಳ್ಳೆಯವರಿರಲಿ, ಕೆಟ್ಟವರಿರಲಿ, ಅವರೆಲ್ಲ ಈಶ್ವರನ ಸೃಷ್ಟಿ...ಮಸೀದಿಯಲ್ಲಿ ದೇವರನ್ನು ಕೂಗಿ ಕರೆದು ಸ್ಮರಣೆ ಮಾಡುತ್ತಾರೆ. ದೇಗುಲದಲ್ಲಿ ಗಂಟೆ ಬಾರಿಸುತ್ತಾರೆ...’’ ಶಿವಾಜಿ ಕಟ್ಟಿದ ಸಾಮ್ರಾಜ್ಯದ ಪತನ ಆರಂಭ ವಾದದ್ದು ಪೇಶ್ವೆಗಳಿಂದ. ಶಿವಾಜಿ ವಂಶಸ್ಥರಿಂದ ಚಿತ್ಪಾವನ ಬ್ರಾಹ್ಮಣರು- (ಮಹಾತ್ಮಾ ಗಾಂಧೀಜಿಯನ್ನು ಕೊಂದ ನಾಥೂರಾಂ ಗೋಡ್ಸೆ ಕೂಡ ಚಿತ್ಪಾವನ ಬ್ರಾಹ್ಮಣನಾಗಿದ್ದ) ಚುಕ್ಕಾಣಿ ಯನ್ನು ಕೈ ವಶ ಮಾಡಿದ್ದೇ, ದಲಿತರ ಸ್ಥಿತಿ ಸೇನೆ ಯಲ್ಲಿ ಹೀನಾಯವಾಗತೊಡಗಿತು. ಜಾತಿವ್ಯವಸ್ಥೆ ಮತ್ತೆ ತಾಂಡವವಾಡತೊಡಗಿತು. ಒಂದು ಕಾಲದಲ್ಲಿ ಸಂತ ತುಕರಾಮರು ತಮ್ಮ ಅಭಂಗದಲ್ಲಿ ‘‘ಮಹಾರಾಸಿ ಶಿವೇ-ಕೋಪೇತೋ ಬ್ರಾಹ್ಮಣ ನವ್ಹೆ’’ ಎಂದು ಹೇಳಿದ್ದರು. ಬ್ರಾಹ್ಮಣರಿಗಿಂತ ಮಹಾರರು ಮಹಾ ಮಹಿಮರು ಎಂದು ಇದರ ಅರ್ಥ. ಶಿವಾಜಿಯ ಸೇನೆಯಲ್ಲಿ ದಲಿತ ಮಹಾರರ ಪಾತ್ರವನ್ನು ಇದು ಎತ್ತಿ ಹಿಡಿಯುತ್ತದೆ. ಮಹಾರರ ಮೇಲೆ ಶಿವಾಜಿಗೆ ಅಪಾರ ನಂಬಿಕೆಯಿತ್ತು. (ಇದೇ ಮಹಾರ್ ಜಾತಿಯಲ್ಲಿ ಮುಂದೆ ಬಿ. ಆರ್. ಅಂಬೇಡ್ಕರ್ ಹುಟ್ಟುತ್ತಾರೆ. ದಲಿತರ ಹಕ್ಕಿಗಾಗಿ ಹೋರಾಡುತ್ತಾರೆ)ಅವರದೇ ಆದ ವಿಶೇಷ ತುಕಡಿಯೂ ಶಿವಾಜಿಯ ಸೇನೆಯಲ್ಲಿತ್ತು. ಮಹಾರರನ್ನು ಕಿಲ್ಲೇದಾರರು ಎಂಬ ಜವಾಬ್ದಾರಿ ಯುತ್ತ ಪದವಿಗೆ ಆಯ್ದುಕೊಳ್ಳುತ್ತಿದ್ದ್ದ. ಆದರೆ ಪೇಶ್ವೆಕಾಲದಲ್ಲಿ ಇದು ತಿರುವು ಮುರುವಾಯಿತು. ಜಾತಿ ಮತ್ತೆ ಪ್ರಾಬಲ್ಯವನ್ನು ಪಡೆಯಿತು. ಇದನ್ನು ಸಹಿಸಿ ಸಾಕಾದ ದಲಿತರು ಅಂತಿಮವಾಗಿ ಬಂಡೆದ್ದರು. ಬ್ರಿಟಿಷರ ಸೇನೆ ಸೇರಿದರು. ಪೇಶ್ವೆಗಳ ನಾಶಕ್ಕೆ ಅದುವೇ ಕಾರಣ ವಾಯಿತು. ಪೇಶ್ವೆಗಳು ನಾಶವಾದ ಈ ದಿನವನ್ನು ಇಂದಿಗೂ ದಲಿತರು ಸಂಭ್ರಮದ ರೂಪದಲ್ಲಿ ಆಚರಿಸುತ್ತಾರೆ. ಕೋರೆಗಾವ ಕದನದಲ್ಲಿ ದಲಿತರು ಪಡೆದ ದಿಗ್ವಿಜಯ, ಜಾತೀಯತೆಯ ವಿರುದ್ಧ ಪಡೆದ ಜಯವೂ ಹೌದು. ಈ ಕೋರೆಗಾವ ಯುದ್ಧದಲ್ಲಿ ಅಂತಿಮವಾಗಿ ಗೆದ್ದಿರುವುದು ಬ್ರಿಟಿಷರೇ ಆದರೂ, ಪೇಶ್ವೆಗಳ ಜಾತೀಯತೆ ಈ ಯುದ್ಧದಲ್ಲಿ ತಕ್ಕ ಫಲವನ್ನು ಅನುಭವಿಸಿತು.
ಶಿವಾಜಿಯ ಸಂಯಮ, ಹೃದಯ ವೈಶಾಲ್ಯತೆ ಪೇಶ್ವೆಗಳಲ್ಲಿ ಇರಲಿಲ್ಲ. ಒಂದು ರಾಜ್ಯವನ್ನು ಗೆಲ್ಲುವ ಸಂದರ್ಭದಲ್ಲಾಗಲಿ, ಅದನ್ನು ಲೂಟಿ ಮಾಡುವ ಸಂದರ್ಭದಲ್ಲಾಗಲಿ ಇದು ಎದ್ದು ಕಾಣುತ್ತಿತ್ತು. ಶೃಂಗೇರಿ ಮಠದ ಮೇಲೆ ಪೇಶ್ವೆಗಳು ನಡೆಸಿದ ದಾಳಿ, ಮತ್ತು ಮಠದ ದರೋಡೆಯೇ ಇದಕ್ಕೆ ಅತ್ಯುತ್ತಮ ಉದಾಹರಣೆ. ಈ ಸಂದರ್ಭದಲ್ಲಿ ಶೃಂಗೇರಿ ಮಠದ ನೆರವಿಗೆ ನಿಂತದ್ದು ಟಿಪ್ಪು ಸುಲ್ತಾನ್ ಎನ್ನುವುದು ಇತಿಹಾಸ.


    ಮೊದಲನೆ ಬಾಜಿರಾಯನ ಕಾಲದಲ್ಲಿ ಪೇಶ್ವೆಗಳ ತಂತ್ರ ಕುತಂತ್ರಗಳು ಪರಾಕಾಷ್ಠೆಯನ್ನು ತಲುಪಿತು.. ಪುಣೆ ಸಾಂಸ್ಕೃತಿಕವಾಗಿ ವಿಜೃಂಭಿಸಿದ್ದೂ ಇದೇ ಕಾಲದಲ್ಲಿ ಎನ್ನುವುದನ್ನು ನಾವು ಗಮನಿಸಬೇಕು. ಆದರೆ ಇದೇ ಸಂದರ್ಭದಲ್ಲಿ ಜಾತೀಯತೆ ಸೇನೆಯಲ್ಲಿ ತಾಂಡವವಾಡತೊಡಗಿತು. ದಲಿತರ ಕುರಿತಂತೆ ತಾರತಮ್ಯಗಳು ಹೆಚ್ಚಾಗತೊಡಗಿದವು. ದಲಿತರಲ್ಲಿ, ಮುಖ್ಯವಾಗಿ ಮಹಾರ್ ಯೋಧರು ಒಳಗೊಳಗೆ ಭುಸುಗುಡತೊಡಗಿದರು. ಇದು ಎರಡನೆ ಬಾಜಿರಾಯನ ಕಾಲದಲ್ಲಿ ಸ್ಫೋಟಿಸಿತು. ಭೀಮಾ ಕೋರೆಗಾವ ಕದನದಲ್ಲಿ ದಲಿತರು ಬಂಡೆದ್ದು ಬ್ರಿಟಿಷರನ್ನು ಸೇರಿಕೊಂಡರು. ಬ್ರಿಟಿಷರ ಪಡೆಯಲ್ಲಿ ಮರಾಠರು, ಮುಸ್ಲಿಮರು, ಕ್ರಿಶ್ಚಿಯನ್ನರು ಇದ್ದರೂ, ದೊಡ್ಡ ಮಟ್ಟದಲ್ಲಿ ಮಹಾರರಿದ್ದರು. ಕೋರೆಗಾವ ಕದನದಲ್ಲಿ 20 ಸಾವಿರದಷ್ಟಿದ್ದ ಮರಾಠ ಸೇನೆಯನ್ನು ಪುಟ್ಟ ಮಹಾರ ಪಡೆ ಸೋಲಿಸಿತು. ಕೋರೆಗಾವ ಕದನದಲ್ಲಿ ಹುತಾತ್ಮರಾದ ದಲಿತರು ಮತ್ತು ಇತರರಿಗಾಗಿ ಬ್ರಿಟಿಷರು ಸ್ಮಾರಕಸ್ತಂಭವೊಂದನ್ನು ನಿರ್ಮಿಸಿದರು. 26 ಮಾರ್ಚ್ 1821ರಲ್ಲಿ ಈ ಸ್ತಂಭಕ್ಕೆ ಅಡಿಗಲ್ಲು ಹಾಕಲಾಯಿತು. ಇದಕ್ಕೆ ಮಹಾ
ಸ್ತಂಭ ಎಂದೂ ಕರೆಯಲಾಗುತ್ತದೆ. ಮಹಾರರ ಬೆಂಬಲವಿಲ್ಲದೇ ಇರುತ್ತಿದ್ದರೆ ಪೇಶ್ವೆಗಳನ್ನು ಗೆಲ್ಲುವುದಕ್ಕೆ ಯಾವ ಕಾರಣದಿಂದಲೂ ಸಾಧ್ಯವಾಗುತ್ತಿರಲಿಲ್ಲ ಎನ್ನುವುದನ್ನು ಬ್ರಿಟಿಷರೇ ಒಪ್ಪಿಕೊಂಡಿದ್ದಾರೆ.

   ಪೇಶ್ವೆಗಳನ್ನು ಬ್ರಿಟಿಷರು ಸೋಲಿಸಿದ ಈ ಘಟನೆ ನಿಜಕ್ಕೂ ವಿಶಿಷ್ಟವಾದುದು. ಭಾರತೀಯ ಸಾಮಾಜಿಕ ಪರಿಸ್ಥಿತಿಯನ್ನು ಅವಲೋಕಿಸುವಲ್ಲಿ ಇದು ಸಹಾಯ ಮಾಡುತ್ತದೆ. ಶಿವಾಜಿ ಮಹಾರರನ್ನು ತನ್ನವರೆಂದು ಬಗೆದು ಸಾಮ್ರಾಜ್ಯವನ್ನು ಕಟ್ಟಿದ. ಆದರೆ ದಲಿತರನ್ನು ಪರಕೀಯರೆಂದು ಬಗೆದ ಪೇಶ್ವೆಗಳು ತಮ್ಮ ರಾಜ್ಯವನ್ನು ಕಳೆದು ಕೊಂಡರು. ಪರಕೀಯರಾದ ಬ್ರಿಟಿಷರು ತಮಗೆ ಗೌರವನೀಡಿದರೆಂಬ ಒಂದೇ ಕಾರಣಕ್ಕೆ ಮಹಾರರು ಬ್ರಿಟಿಷರ ಪರವಾಗಿ ನಿಂತು, ಪೇಶ್ವೆಗಳನ್ನು ಸೋಲಿಸಿದರು. ದೇಶದ ಪಾಲಿಗೆ ಇದು ಬ್ರಿಟಿಷರ ಗೆಲುವಾಗಿರಬಹುದು. ಆದರೆ ದಲಿತರ ಪಾಲಿಗೆ ಇದು ಶೋಷಿತರ, ನೊಂದವರ ಗೆಲುವು. ಡಾ. ಬಿ.ಆರ್. ಅಂಬೇಡ್ಕರ್ ಜನವರಿ1, 1927ರಲ್ಲಿ ತಮ್ಮ ಅನುಯಾಯಿಗಳೊಂದಿಗೆ ಭೀಮಾ-ಕೋರೆಗಾವಕ್ಕೆ ಬಂದು ಮಹಾರ್ ಸ್ತಂಭಕ್ಕೆ ಗೌರವ ವಂದನೆ ಸಲ್ಲಿಸಿದರು. ಆ ದಿನವನ್ನು ಅಂದಿನಿಂದ ಕೋರೆಗಾವ ಕದನದ ಮಹಾರ ಕಲಿಗಳ ಸ್ಮತಿ ದಿನವನ್ನಾಗಿ ಆಚರಿಸಲಾ ಯಿತು. ಇಂದಿಗೂ ಜನವರಿ 1ರಂದು ದೇಶದ ದಲಿತರೆಲ್ಲ ಕೋರೆಗಾವ ಕದನವನ್ನು ನೆನಪಿಸಿಕೊಂಡು, ಹುತಾತ್ಮರಾದ ಮಹಾರರಿಗೆ ತಮ್ಮ ಶೃದ್ಧಾಂಜಲಿಯನ್ನು ಸಲ್ಲಿಸುತ್ತಾರೆ.


ಇಂದು ಆರೆಸ್ಸೆಸ್ ಸೇರಿದಂತೆ ಸಂಘಪರಿವಾರ ಪೇಶ್ವೆ ಹಿಂದುತ್ವವನ್ನು ದೇಶದ ಮೇಲೆ ಹೇರಲು ಪ್ರಯತ್ನಿಸುತ್ತಿದೆ. ಶಿವಾಜಿಯ ನಿಜವಾದ ವ್ಯಕ್ತಿತ್ವವನ್ನು ಕುರೂಪಗೊಳಿಸಿ, ಅವನ ವ್ಯಕ್ತಿತ್ವಕ್ಕೇ ಕಳಂಕ ಎಸಗುತ್ತಿದೆ. ಶಿವಾಜಿ ಕೇವಲ ಮಹಾರಾಷ್ಟ್ರೀಯನಲ್ಲ. ಕೇವಲ್ಲ ಬೋಸಲೆಯೂ ಅಲ್ಲ. ಕೇವಲ ಹಿಂದೂ ಕೂಡ ಅಲ್ಲ. ಅವನು ಅಪ್ಪಟ ಭಾರತೀಯ. ಈ ದೇಶದ ಪ್ರತಿಯೊಬ್ಬರಿಗೂ ಸೇರಿದವನು ಶಿವಾಜಿ. ಅವನನ್ನು ತಮ್ಮ ಕ್ಷುಲ್ಲಕ ಭಾಷಾ ರಾಜಕೀಯಕ್ಕೆ, ಬ್ರಾಹ್ಮಣ್ಯ ರಾಜಕೀಯಕ್ಕೆ ಬಳಸಿಕೊಳ್ಳುವುದು ಭಾರತೀಯತೆಗೆ ಮಾಡುವ ಅಪಚಾರ. ನಮಗಿಂದು ಬೇಕಾದುದು ಶಿವಾಜಿಯ ಹಿಂದುತ್ವವೇ ಹೊರತು ಪೇಶ್ವೆಗಳ ಹಿಂದುತ್ವವಲ್ಲ. ಪೇಶ್ವೆಗಳ ಹಿಂದುತ್ವ ಶಿವಾಜಿ ಸಾಮ್ರಾಜ್ಯವನ್ನು ಸರ್ವನಾಶ ಮಾಡಿ, ಬ್ರಿಟಿಷರಿಗೆ ತಲೆಬಾಗುವಂತೆ ಮಾಡಿತು. ನಮಗಿಂದು ಬೇಕಾದುದು ಪೇಶ್ವೆ ವಂಶಜನಾದ ನಾಥೂರಾಂ ಗೋಡ್ಸೆ ಹಿಂದುತ್ವವಲ್ಲ. ದಲಿತ ಮಾಹಾರರ ವಂಶಜರಾದ ಬಿ. ಆರ್. ಅಂಬೇಡ್ಕರ್ ಹಿಂದುತ್ವ. ನಾಥೂರಾಂನಿಂದ ಕಗ್ಗೊಲೆಗೀಡಾದ ಮಹಾತ್ಮಗಾಂಧೀಜಿಯ ಹಿಂದುತ್ವ. ಅದು ಮಾತ್ರ ಈ ದೇಶವನ್ನು ಒಂದಾಗಿರುವಂತೆ ಮಾಡೀತು. ದಲಿತರು, ಬ್ರಾಹ್ಮಣರು, ಮುಸ್ಲಿಮರು, ಕ್ರಿಶ್ಚಿಯನ್ನರನ್ನು ಒಟ್ಟಾಗಿ ಕೊಂಡು ಹೋಗುವ ಶಿವಾಜಿಯಂತಹ ನಾಯಕನ ದೂರದೃಷ್ಟಿ ರಾಜಕಾರಣ ಮಾತ್ರ ಈ ದೇಶವನ್ನು ಉಳಿಸೀತು. ಬೆಳೆಸೀತು.
ಆಕರ ಗ್ರಂಥ: ಸರ್ಕಾರ್ ಜೆ.ಎನ್.ಶಿವಾಜಿ ಎಂಡ್ ಹಿಸ್ ಟೈಮ್ಸ್
ಗ್ರಾಂಡ್ ಡಫ್-ಹಿಸ್ಟರಿ ಆಫ್ ಮರಾಠಾಸ್
ಭಾವರೆ ಎನ್. ಜಿ: ಕಾಸ್ಟ್ಸ್ ಫೇವರ್ಸ್‌, ಪ್ಯಾಟರ್ನೇಜ್ ಎಂಡ್ ಪ್ರಿವಿಲೇಜಸ್ ಅಂಡರ್ ಶಿವಾಜಿಸ್ ರೂಲ್
ಶಕಕರ್ತಾ ಶಿವಾಜಿ
ಗೋವಿಂದ ಪಾನಸರೆ ‘ಶಿವಾಜಿ ಯಾರು?’
ಸುಧಾಕರ ಖಾಂಬೆ: ಭೀಮಾ ಕೋರೆಗಾವಾಚಾ ವಿಜಯಸ್ತಂಭ

Wednesday, December 5, 2012

ನಮ್ಮ ನೆಲದ ಶಿವಾಜಿ: ಮುಸ್ಲಿಂ ವಿರೋಧಿಯೆಂಬ ಸುಳ್ಳಿನ ಮುಳ್ಳು ಕಿರೀಟ

ಶಿವಾಜಿ ಸಮಾಧಿ
ಹಿಂದಿನ ವಾರದಿಂದ ಮುಂದುವರೆಯುದು

ಶಿವಾಜಿಯ ಹೋರಾಟ, ಸಂಘರ್ಷಗಳಿಗೆ ‘ಹಿಂದುತ್ವ’ ವನ್ನು ಆರೋಪಿಸಿದ್ದು ಆತನ ಆನಂತರದ ಕಾಲದಲ್ಲಿ. ಅದನ್ನು ವೈಭವೀಕರಿಸಿ ಆತನನ್ನು ಹಿಂದೂನಾಯಕನಾಗಿ ಪರಿವರ್ತಿಸಿದ್ದು ಬಾಲ ಗಂಗಾಧರ ತಿಲಕ್‌ರ ರಾಷ್ಟ್ರೀಯವಾದದ ಸಂದರ್ಭದಲ್ಲಿ. ಜನರಲ್ಲಿ ಹಿಂದೂ ರಾಷ್ಟ್ರೀಯತೆಯನ್ನು ಬಿತ್ತುವ ಉದ್ದೇಶದಿಂದ, ಇತಿಹಾಸವನ್ನು ವೈಭವೀಕರಿಸಲಾಯಿತು. ಮುಂದೆ ಇದನ್ನು ಸಂಘಪರಿವಾರ ಮುಸ್ಲಿಮರನ್ನು ವಿರೋಧಿಸುವು ದಕ್ಕಾಗಿ ಬಳಸಿಕೊಂಡಿತು. ಒಂದು ರೀತಿಯಲ್ಲಿ ಇತಿಹಾಸವನ್ನು ತಿರುಚಲಾಯಿತು. ಪುರಾಣವೂ ಇತಿಹಾಸದೊಂದಿಗೆ ಅನೈತಿಕ ಸಂಬಂಧ ಬೆಳೆಸಿತು. ಈ ಕಾರಣದಿಂದಲೇ ಶಿವಾಜಿಯ ಕೈಯಲ್ಲಿರುವ ಕತ್ತಿಯನ್ನು ಭವಾನಿಯೇ ಪ್ರತ್ಯಕ್ಷಳಾಗಿ ನೀಡಿದಳು ಎನ್ನಲಾಯಿತು. ಆದರೆ ಆತನ ಕೈಯಲ್ಲಿರುವ ಕತ್ತಿ ಪೋರ್ಚುಗೀಸರ ಕಾಲದ್ದು ಎಂದು ಇತಿಹಾಸಕಾರರು ಸಾಬೀತು ಪಡಿಸಿದ್ದಾರೆ. ಆ ಸಂದರ್ಭದಲ್ಲಿ ಪೋರ್ಚುಗೀಸರ ಕಾಲದ ಖಡ್ಗಗಳು ಯುದ್ಧ ಭೂಮಿಯಲ್ಲಿ ಪ್ರಸಿದ್ಧವಾಗಿದ್ದವು.

ಶಿವಾಜಿಯು ಮೊಗಲರ ವಿರುದ್ಧ ನಡೆಸಿದ ಯುದ್ಧ ಹಿಂದೂಗಳು ಮುಸ್ಲಿಮರ ವಿರುದ್ಧ ನಡೆಸಿದ ಯುದ್ಧವೇ ಆಗಿದ್ದರೆ ಶಿವಾಜಿಯ ಸೇನೆಯಲ್ಲಿ ಮುಸ್ಲಿಮ್ ಯೋಧರು ಇರುವುದಕ್ಕೆ ಸಾಧ್ಯವಿರಲಿಲ್ಲ. ಹಾಗೆಯೇ ಮೊಗಲರ ಸೇನೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಹಿಂದೂಗಳು ಯೋಧರಾಗಿ ಇರುವುದಕ್ಕೆ ಸಾಧ್ಯ ವಿರಲಿಲ್ಲ. ಶಿವಾಜಿಯ ಸೇನೆಯ ಮಹತ್ವದ ವಿಭಾಗಗಳ ಉಸ್ತುವಾರಿಯನ್ನೆಲ್ಲ ಮುಸ್ಲಿಮರೇ ನೋಡಿಕೊಳ್ಳುತ್ತಿದ್ದರು. ಶಿವಾಜಿಯ ಸೇನೆಯಲ್ಲಿದ್ದ ಹೆಚ್ಚಿನ ಮುಸ್ಲಿಮರು ಮಹತ್ವದ ಪದವಿಯನ್ನು ಹೊಂದಿದ್ದರು. ಶಿವಾಜಿಯ ಸೇನೆಯ ಮುಖ್ಯ ಅಂಗ ತೋಪುಖಾನೆ. ಅದರ ನಿಯಂತ್ರಣ ಇಬ್ರಾಹೀಂ ಖಾನ್ ಬಳಿಯಿತ್ತು. ಶಿವಾಜಿ ಮುಸ್ಲಿಮರ ವಿರುದ್ಧ, ಹಿಂದೂ ಧರ್ಮದ ಪರವಾಗಿ ಯುದ್ಧ ನಡೆಸಿದ್ದು ನಿಜವೇ ಆಗಿದ್ದರೆ ಇದು ಸಾಧ್ಯವಾಗುವ ಮಾತಾಗಿತ್ತೆ? ಇನ್ನೊಂದು ಬಹುಮುಖ್ಯ ವಿಭಾಗ ನೌಕಾಸೇನೆ. ಯಾಕೆಂದರೆ ಕೊಂಕಣದ ಬಹುತೇಕ ಭೂಮಿ ಸಮುದ್ರಕ್ಕೆ ಅಂಟಿಕೊಂಡಿತ್ತು. ಈ ನೌಕಾಸೇನೆಯ ಮುಖ್ಯಸ್ಥನಾಗಿ ದರ್ಯಾಸಾರಂಗ ದೌಲತ್‌ಖಾನ್ ಎಂಬ ಸರದಾರನನ್ನು ಶಿವಾಜಿ ನೇಮಕ ಮಾಡಿದ್ದ. ಶಿವಾಜಿಯ ಖಾಸಾ ಅಂಗರಕ್ಷಕರಲ್ಲಿ 11 ಮಂದಿ ಮುಸ್ಲಿಮರಿದ್ದರು. ಅವರಲ್ಲಿ ಮುಖ್ಯನಾದ ಮಲಾರಿ ಮ್ಹೇತರ ಎಂಬ ವ್ಯಕ್ತಿಯ ಪ್ರಸ್ತಾಪವಿದೆ. ಆಗ್ರಾದಲ್ಲಿ ಶಿವಾಜಿಯ ಬಿಡುಗಡೆಗಾಗಿ ಅತಿ ದೊಡ್ಡ ಸಹಾಯ ವನ್ನು ಮಾಡಿದಾತ ಇದೇ ಮುಸ್ಲಿಮ್ ಅಂಗರಕ್ಷಕ ನಾಗಿದ್ದ. ಶಿವಾಜಿಯ ಹೋರಾಟ ಮುಸ್ಲಿಮರ ಅಥವಾ ಸಂಘಪರಿವಾರ ಹೇಳುವಂತೆ ಮ್ಲೇಚ್ಛರ ವಿರುದ್ಧದ ಹೋರಾಟವಾಗಿದ್ದರೆ ಇದು ಸಂಭವಿಸಲು ಸಾಧ್ಯವಿತ್ತೆ? ಸಾಲೇರಿಯಾ ಕಾಳಗದ ಬಳಿಕ ಮಾತುಕತೆಗಾಗಿ ಶಿವಾಜಿಯು ಔರಂಗಜೇಬನ ಅಧಿಕಾರಿಗಳ ಬಳಿಗೆ ಕಳಿಸಿದ ದೂತನ ಹೆಸರು ಖಾಝಿ ಹೈದರ್. ಇದೇ ಸಂದರ್ಭದಲ್ಲಿ ಔರಂಗಜೇಬನ ಅಧಿಕಾರಿಗಳು ಶಿವಾಜಿಯ ಬಳಿಗೆ ಕಳುಹಿಸಿದ ವಕೀಲ ಒಬ್ಬ ಬ್ರಾಹ್ಮಣನಾಗಿದ್ದ. ಶಿವಾಜಿಗಾಗಿ ಅನೇಕ ಮುಸ್ಲಿಮ್ ಸರದಾರರು ಪ್ರಾಣಾರ್ಪಣೆ ಮಾಡಿದ್ದಾರೆ. 1660ರಲ್ಲಿ ಸಿದ್ದಿ ಜೌಹರನು ಪನ್ಙಾಳಗಡವನ್ನು ಮುತ್ತಿದಾಗ ಶಿವಾಜಿಯ ಪರವಾಗಿ ಸಿದ್ದಿ ಹಿಲಾಲ ಎಂಬ ಮುಸಲ್ಮಾನ ಸರದಾರ ತನ್ನ ಮಗನ ಜೊತೆಗೆ ಹೋರಾಡಿದ. ಈ ಹೋರಾಟದಲ್ಲಿ ಹಿಲಾಲನ ಮಗ ವಾಹವಾಹನು ಗಾಯಗೊಂಡು ಶತ್ರುಗಳಿಗೆ ಸೆರೆಸಿಕ್ಕ. ಶಿವಾಜಿಯ ನಂಬಿಗಸ್ಥ ಮುಖ್ಯ ಹನ್ನೊಂದು ಮುಸ್ಲಿಮ್ ಸರದಾರರ ಹೆಸರು ಕೆಳಗಿನಂತಿವೆ.
1. ಸಿದ್ದಿ ವಾಹ್‌ವಾಹ್2.ನೂರ್‌ಖಾನ್ ಬೇಗ್ 3.ಶಮಾ ಖಾನ್4. ಹುಸೈನ್ ಖಾನ್ ಮಿಯಾನಿ5. ದಾರ್ಯ ಸಾರಂಗ್6. ಇಬ್ರಾಹೀಂ ಖಾನ್7. ದೌಲತ್ ಖಾನ್8. ಸಿದ್ದಿ ಮಿಸ್ತ್ರಿ 9. ಸುಲ್ತಾನ್ ಖಾನ್ 10. ಇಬ್ರಾಹೀಂ ಖಾನ್11. ದಾವೂದ್ ಖಾನ್
1672ರಲ್ಲಿ ಇಂಗ್ಲೆಂಡ್‌ನ ರಾಣಿಗೆ ಇಂಗ್ಲಿಷ್ ಅಧಿಕಾರಿ ಜೋನ್ ಫೈರ್ ಬರೆದ ಪತ್ರದಲ್ಲಿ 66 ಸಾವಿರ ಮುಸ್ಲಿಮರು ಶಿವಾಜಿಯ ಸೇನೆಯಲ್ಲಿ ರುವುದನ್ನು ಉಲ್ಲೇಖಿಸುತ್ತಾನೆ.

ಮನುಸ್ಮತಿ ವಿರೋಧಿ ಶಿವಾಜಿ:
ಶಿವಾಜಿಯನ್ನು ಮನು ವಿರೋಧಿ ಅಥವಾ ಬ್ರಾಹ್ಮಣ ವಿರೋಧಿ ಎಂದು ಮಹಾರಾಷ್ಟ್ರದ ದಲಿತ ಹೋರಾಟಗಾರರು, ಇತಿಹಾಸಕಾರರು ಕರೆಯುವುದಿದೆ. ಶಿವಾಜಿ ಮನು ವಿರೋಧಿ ಎನ್ನುವುದಕ್ಕಿಂತ ಮನುಷ್ಯ ಪರನಾಗಿದ್ದ.. ಆ ಹಿನ್ನೆಲೆಯಲ್ಲಿ ಅವನು ತೆಗೆದುಕೊಂಡ ಕ್ರಮಗಳೆಲ್ಲ ಮನು ವಿರೋಧಿಯಾಗಿದ್ದವು. ಪ್ರಜ್ಞಾಪೂರ್ವಕವಾಗಿ ಹೇಗೆ ಆತ ಮುಸ್ಲಿಮ್ ವಿರೋಧಿಯಾಗಿರಲಿಲ್ಲವೋ ಹಾಗೆಯೇ ಮನು ವಿರೋಧಿಯೂ ಆಗಿರಲಿಲ್ಲ. ಆದರೆ ಶಿವಾಜಿಯು ಶೈವ ಪಂಥದವನಾಗಿದ್ದ. ಆದುದರಿಂದ ಒಳಗೊಳಗೆ ವೈದಿಕ ಗುಂಪುಗಳು ಅವನನ್ನು ದ್ವೇಷಿಸಿದವು. ಆದರೂ ಶಿವಾಜಿಯ ಮನು ವಿರೋಧಿ ಗುರುತಿಸಬಹುದಾದ ನಿಲುವುಗಳನ್ನು ಕೆಳಗಿನಂತೆ ಪಟ್ಟಿ ಮಾಡಬಹುದಾಗಿದೆ.
1. ಶೂದ್ರರು, ದಲಿತರಿಗೆ ಸೇನೆಯಲ್ಲಿ ಅವಕಾಶ:
ಮನುಸೃತಿಯ ಪ್ರಕಾರ ಶೂದ್ರರು ಅತಿ ಶೂದ್ರರು ಸೇನೆಗೆ ಸೇರಲು ಸಾಧ್ಯವಿಲ್ಲ. ಆದರೆ ಶಿವಾಜಿಯ ಸೇನೆಯಲ್ಲಿ ಶೂದ್ರರು ಮತ್ತು ದಲಿತರು ಬಹುಸಂಖ್ಯೆಯಲ್ಲಿದ್ದರು. ರೈತರನ್ನು, ಬುಡಕಟ್ಟು ಜನರನ್ನು ಸಂಘಟಿಸಿ ಅವನು ಸೇನೆಯನ್ನು ಕಟ್ಟಿದ. ಜೊತೆಗೆ ಮ್ಲೇಚ್ಛರು ಎಂದು ಬ್ರಾಹ್ಮಣರು ತಿಳಿದುಕೊಂಡಿರುವ ಮುಸ್ಲಿಮರು ಶಿವಾಜಿಗೆ ತುಂಬಾ ಆಪ್ತರಾಗಿದ್ದರು. ಅವರ ವಿಶೇಷ ಅಂಗರಕ್ಷಕ ಪಡೆಯಲ್ಲಿ ಮುಸ್ಲಿಮರು ಅಥವಾ ಮ್ಲೇಚ್ಛರು ದೊಡ್ಡ ಸಂಖ್ಯೆಯಲ್ಲಿದ್ದರು.
2. ಸತಿ ಪದ್ಧತಿಯನ್ನು ವಿರೋಧಿಸಿದ:
ಶಿವಾಜಿಯ ತಂದೆ ಶಾಹಜಿ ಸತ್ತಾಗ ಜೀಜಾಬಾಯಿ ಸತಿ ಹೋಗಲು ನಿರ್ಧರಿಸಿದಳು. ಆದರೆ ಇದನ್ನು ಶಿವಾಜಿ ವಿರೋಧಿಸಿ, ತನ್ನ ತಾಯಿಯನ್ನು ರಕ್ಷಿಸಿಕೊಂಡ. ಈ ಮೂಲಕ ಸತಿ ಪದ್ಧತಿಯನ್ನು ಖಾಸಗಿ ನೆಲೆಯಲ್ಲೇ ವಿರೋಧಿಸಿದ. ಹಾಗೆಯೇ ಸಮುದ್ರ ದಾಟಬಾರದು ಎಂಬ ವಾದವನ್ನು ಮೀರಿ, ಸಮುದ್ರದಲ್ಲಿ ನೌಕಾ ಸೇನೆಯನ್ನು ಕಟ್ಟಿದ. ಅದರ ನೇತೃತ್ವವನ್ನು ಮುಸ್ಲಿಮ್ ಸರದಾರರಿಗೆ ವಹಿಸಿದ.
3. ಮತಾಂತರ:
ನೇತಾಜಿ ಪಾಲೇಕರ್ ಶಿವಾಜಿಯ ಸೇನೆಯಲ್ಲಿದ್ದ ಅಧಿಕಾರಿಗಳಲ್ಲೊಬ್ಬ. ಆದರೆ ಅವನು ಬಹು ವರ್ಷಗಳ ಹಿಂದೆಯೇ ಇಸ್ಲಾಮ್ ಸ್ವೀಕರಿಸಿದ್ದ. ಕಾಲಾನಂತರ ಇವನು ಮತ್ತೆ ಹಿಂದೂ ಧರ್ಮವನ್ನು ಸ್ವೀಕರಿಸಲು ಇಷ್ಟಪಟ್ಟಾಗ ಶಿವಾಜಿ ಅದನ್ನು ಹಾರ್ದಿಕವಾಗಿ ಅಂಗೀಕರಿಸಿದ. ಹಾಗೆಯೇ ಬಾಜಾಜಿ ನಿಂಬಾಳ್ಕರ್ ಸುಮಾರು 40 ವರ್ಷಗಳ ಕಾಲ ಮುಸ್ಲಿಮಾಗಿ ಬದುಕಿದ್ದ. ಹೋರಾಟದ ಸಂದರ್ಭದಲ್ಲಿ ಕಾಲು ಕಳೆದುಕೊಂಡು ಎಲ್ಲರಿಂದ ಕುಂಟನೆಂದು ಅಪಮಾನಕ್ಕೂ ಒಳಗಾಗಿದ್ದ. ಅವನನ್ನು ಮರು ಮತಾಂತರಗೊಳಿಸಿದ ಶಿವಾಜಿ, ತನ್ನ ಅಳಿಯನನ್ನಾಗಿ ಮಾಡಿಕೊಂಡ.
4. ದಲಿತ ಹೆಣ್ಣನ್ನು ವಿವಾಹವಾದ:
ಶಿವಾಜಿಯ ಪಟ್ಟಾಭಿಷೇಕಕ್ಕೆ ಸ್ಥಳೀಯ ಬ್ರಾಹ್ಮಣರು ವಿರೋಧವನ್ನು ವ್ಯಕ್ತಪಡಿಸಿದ್ದನ್ನು ಈ ಹಿಂದೆ ಬರೆದಿದ್ದೇನೆ. ಇದಾದ ಬಳಿಕ ಶೈವರು ಮತ್ತೊಮ್ಮೆ ಶಿವಾಜಿಗೆ ಪಟ್ಟಾಭಿಷೇಕ ಮಾಡಿದರು. ಶಾಕ್ತ ನಿಯಮದ ಪ್ರಕಾರ ಪಟ್ಟಾಭಿಷೇಕದ ಸಂದರ್ಭದಲ್ಲಿ ಅತಿಶೂದ್ರ ಅಥವಾ ದಲಿತ ಹೆಣ್ಣನ್ನು ಶಿವಾಜಿ ಮದುವೆಯಾದ. ಈ ಮೂಲಕ ಮನುಸ್ಮತಿಯ ಅಡಿಗಲ್ಲನ್ನೇ ಅಲುಗಾಡಿಸಿದ.

5. ಬ್ರಾಹ್ಮಣರ ಕಗ್ಗೊಲೆ:
ಶಿವಾಜಿ ತನ್ನ ಸಾಮ್ರಾಜ್ಯ ವಿಸ್ತರಣೆಗೆ ಅಡ್ಡಿ ಬಂದವರನ್ನೆಲ್ಲ ಕತ್ತರಿಸಿ ಹಾಕಿದ. ಮುಸ್ಲಿಮರು- ಬ್ರಾಹ್ಮಣರೆಂದು ಅವನು ನೋಡಲಿಲ್ಲ.
ಶಿವಾಜಿಯ ಇತಿಹಾಸದಲ್ಲಿ ಅಫ್ಝಲ್ ಖಾನ್‌ನನ್ನು ಆತ ಕೊಂದಿರುವುದು ಬಹುಮುಖ್ಯ ಪ್ರಸಂಗ. ಸಂಘಪರಿವಾರದ ಕಣ್ಣಲ್ಲಿ ಇದು ಹಿಂದು- ಮುಸ್ಲಿಮ್ ಮುಖಾಮುಖಿ. ಆದರೆ ಗಮನಿಸಿ. ಅಂದು ಅಫ್ಜಲ್‌ಖಾನ್‌ನ ಅಂದಿನ ಅಂಗರಕ್ಷಕನಾಗಿ ಬಂದುದು ಒಬ್ಬ ಬ್ರಾಹ್ಮಣ. ಅವನ ಹೆಸರು ಕೃಷ್ಣಜೀ ಭಾಸ್ಕರ್ ಕುಲಕರ್ಣಿ. ಅಫ್ಝಲ್ ಖಾನ್‌ನನ್ನು ಶಿವಾಜಿ ಕೊಲ್ಲುತ್ತಿರುವ ಸಂದರ್ಭದಲ್ಲಿ ಈ ಕುಲಕರ್ಣಿ ಶಿವಾಜಿಯ ಮೇಲೆ ಹಿಂದಿನಿಂದ ದಾಳಿ ನಡೆಸಿದ. ಶಿವಾಜಿಯ ತಲೆಗೆ ಗಾಯ ಮಾಡಿದ. ಆಗ ಶಿವಾಜಿ ಮತ್ತು ಆತನ ಅಂಗರಕ್ಷಕ ಇಬ್ರಾಹೀಂ ಖಾನ್ ಜೊತೆ ಸೇರಿ ಕೃಷ್ಣಜೀ ಭಾಸ್ಕರ್ ಕುಲಕರ್ಣಿಯನ್ನು ಬರ್ಬರವಾಗಿ ಕೊಂದು ಹಾಕಿದರು.

  ಶಿವಾಜಿ ಮಾತ್ರವಲ್ಲ, ಶಿವಾಜಿಯ ಮಗ ಸಾಂಭಾಜಿ ಕೂಡ ಬ್ರಾಹ್ಮಣರನ್ನು ಕೊಂದ ಕುರಿತಂತೆ ಇತಿಹಾಸದಲ್ಲಿ ದಾಖಲೆಗಳು ಸಿಗುತ್ತವೆ. ಸಾಂಭಾಜಿಗೆ ಕೆಲ ಬ್ರಾಹ್ಮಣರು ಸೇರಿ ವಿಷಪ್ರಾಷಣ ಪ್ರಯತ್ನ ನಡೆಸಿ ದಾಗ, ಸಿಟ್ಟಿಗೆದ್ದ ಸಾಂಭಾಜಿ ಬ್ರಾಹ್ಮಣರ ಹತ್ಯಾಕಾಂಡವನ್ನೇ ನಡೆಸಿದ್ದ. ಶಿವಾಜಿಯನ್ನೂ ಅವನ ಮಗನನ್ನೂ ಸೋಲಿಸಿ ಆಗ್ರಾದ ಸೆರೆಯಲ್ಲಿಟ್ಟಿದ್ದು ಯಾವುದೇ ಮುಸ್ಲಿಮ್ ಅರಸನಲ್ಲ. ಅವನ ವಿರುದ್ಧ ಯುದ್ಧ ಘೋಷಿಸಿದವನು ಮಿರ್ಝಾ ರಾಜೇ ಜಯಸಿಂಹ, ಅಸಲಿ ರಜಪೂತ ಹಿಂದು. ಮೊಗಲರ ಸೇನಾಪತಿ ಈತ. ಶಿವಾಜಿಯ ವಿರುದ್ಧ ಹೋರಾಡುವಾಗ ಜಯಸಿಂಹನ ಸೇನೆಯಲ್ಲಿ ಜಾಠರು, ಮರಾಠರು, ರಜಪೂತರಿದ್ದರು. ರಾಜಾ ರಾಯಸಿಂಗ್, ಸುಜನ್ ಸಿಂಗ್, ಹರಿಭಾನ್ ಸಿಂಗ್, ಉದಯಭಾನ್ ಗೌರ, ಶೇರ್ ಸಿಂಹ್ ರಾಥೋಡ್, ಚತುರ್ಭುಜ ಚೌಹಾನ್, ಮಿತ್ರಸೇನ, ಬಾಜಿರಾವ ಚಂದ್ರರಾವ್ ಇವರೆಲ್ಲ ಶಿವಾಜಿಯ ವಿರುದ್ಧ ಹೋರಾಡಿದ್ದರು. ಇದೇ ಸಂದರ್ಭದಲ್ಲಿ ಮುಸ್ಲಿಮ್ ಸರದಾರರು ಶಿವಾಜಿಯ ರಕ್ಷಣೆಯಲ್ಲಿ ಬಹುದೊಡ್ಡ ಪಾತ್ರವಹಿಸಿದ್ದರು.

ಅಂದ ಹಾಗೆ ರಾಜಾ ಜಯಸಿಂಹ, ಮೊಗಲರ ಪರವಾಗಿ ಶಿವಾಜಿಯ ವಿರುದ್ಧ ಯುದ್ಧಕ್ಕೆ ಬಂದಾಗ ಶಿವಾಜಿಯ ಸೋಲಿಗೆ ಏನು ಮಾಡಬೇಕು ಎಂದು ಸ್ಥಳೀಯ ಬ್ರಾಹ್ಮಣರ ಸಲಹೆ ಕೇಳಿದನಂತೆ. ಬಳಿಕ ಬ್ರಾಹ್ಮಣರ ಸಲಹೆಯಂತೆ ಕೋಟಿ ಚಂಡಿಹವನ ಮಾಡಿದ ಕತೆಯೂ ಇತಿಹಾಸದಲ್ಲಿ ದಾಖಲಾಗಿದೆ. ಹನ್ನೊಂದು ಕೋಟಿ ಲಿಂಗ ತಯಾರಿಸಲಾಯಿತಂತೆ. ಕಾಮನಾರ್ಥಕ್ಕಾಗಿ ಬಗಲಾಮುಖಿ ಕಾಳರಾತ್ರಿ ಪ್ರೀತ್ಯರ್ಥ ಜಪ ಮಾಡಲಾಯಿತಂತೆ. ನಾನೂರು ಬ್ರಾಹ್ಮಣರು ಈ ಯಾಗದಲ್ಲಿ ಭಾಗವಹಿಸಿದರು. ಇದಕ್ಕಾಗಿ ಜಯಸಿಂಹ ಎರಡು ಕೋಟಿ ರೂಪಾಯಿಯನ್ನು ತೆಗೆದಿರಿಸಿದನಂತೆ. ಮೂರು ತಿಂಗಳ ಕಾಲ ಈ ಅನುಷ್ಠಾನ ನಡೆಯಿತು. ಅನುಷ್ಠಾನದ ಪೂರ್ಣಾಹುತಿ ಮುಗಿಸಿ ಬ್ರಾಹ್ಮಣರಿಗೆ ದಾನ ದಕ್ಷಿಣೆ ನೀಡಿ ಅನ್ನ ಸಂತರ್ಪಣೆ ಮಾಡಲಾಯಿತು. ಇದೇ ಯುದ್ಧದಲ್ಲಿ ಶಿವಾಜಿ ಮತ್ತು ಅವನ ಮಗ ಸಾಂಭಾಜಿ ಸೋತು ಜಯಸಿಂಹನಿಗೆ ಸೆರೆ ಸಿಕ್ಕರು. 


ಆಕರ ಗ್ರಂಥ: ಸರ್ಕಾರ್ ಜೆ.ಎನ್.ಶಿವಾಜಿ ಎಂಡ್ ಹಿಸ್ ಟೈಮ್ಸ್
ಗ್ರಾಂಡ್ ಡಫ್-ಹಿಸ್ಟರಿ ಆಫ್ ಮರಾಠಾಸ್
ಭಾವರೆ ಎನ್. ಜಿ: ಕಾಸ್ಟ್ಸ್ ಫೇವರ್ಸ್‌, ಪ್ಯಾಟರ್ನೇಜ್ ಎಂಡ್ ಪ್ರಿವಿಲೇಜಸ್ ಅಂಡರ್ ಶಿವಾಜಿಸ್ ರೂಲ್
ಶಕಕರ್ತಾ ಶಿವಾಜಿ
ಗೋವಿಂದ ಪಾನಸರೆ ‘ಶಿವಾಜಿ ಯಾರು?’

Tuesday, December 4, 2012

ಗುರಿತಲುಪದ ತಲಾಶ್

ಒಂದು ಆ್ಯಕ್ಸಿಡೆಂಟಿನ ಸಣ್ಣ ಎಳೆಯನ್ನು ಇಟ್ಟುಕೊಂಡು ತನಿಖೆಗಿಳಿಯುವ ಪೊಲೀಸ್ ಅಧಿಕಾರಿಯೊಬ್ಬ ಒಂದು ಕೊಲೆ ಪ್ರಕರಣವನ್ನು ಬಯಲುಗೆಳೆಯುವುದಲ್ಲದೆ, ತನ್ನೊಳಗಿನ ಸಂಘರ್ಷಗಳಿಂದ ಪಾರಾಗಿ ಹೊಸ ಬದುಕಿಗೆ ಅಣಿಯಾಗುವುದು ತಲಾಶ್ ಚಿತ್ರದ ಮುಖ್ಯ ಕತೆ. ಈ ಕತೆಯ ಕೇಂದ್ರ ಬಿಂದು ಒಬ್ಬ ವೇಶ್ಯೆ. ಆಕೆಯ ಹೆಸರು ರೋಸಿ ಅಥವಾ ಸಿಮ್ರಾನ್(ಕರೀನಾ ಕಪೂರ್). ಈ ಚಿತ್ರದ ಸಸ್ಪೆನ್ಸ್ ಅವಳೇ ಆಗಿದ್ದಾಳೆ.

ಕಣ್ಣೆದುರೇ ನೀರಿನಲ್ಲಿ ಮುಳುಗಿ ಸತ್ತ ಪುಟ್ಟ ಮಗನ ಕುರಿತು ಪಾಪಪ್ರಜ್ಞೆಯಿಂದ ನರಳುವ ಸುರ್‌ಜನ್ ಸಿಂಗ್ ಶೆಖಾವತ್, ಅದರಿಂದ ಪಾರಾಗಲು ರಾತ್ರಿ ನಿದ್ದೆ ಗೆಟ್ಟು  ಕೆಲಸ ಮಾಡುತ್ತಿರುವ ಪೊಲೀಸ್ ಅಧಿಕಾರಿ. ಇಂತಹ ಹೊತ್ತಿನಲ್ಲೇ ಸಿನಿಮಾ ನಟ ಅರ್ಮಾನ್ ಕಪೂರ್ ಒಂದು ನಿಗೂಢ ಅಪಘಾತದಲ್ಲಿ ಸಾಯುತ್ತಾನೆ. ಅದರ ತನಿಖೆಯನ್ನು ಮಾಡುವ ಹಂತದಲ್ಲಿ ಶೆಖಾವತ್ಗೆ ನೆರವವಾಗುವವಳೇ ವೇಶ್ಯೆ ರೋಸಿ. ಇಲ್ಲಿಂದ ಮುಂಬಯಿಯ ಒಂದೊಂದೇ ಪಾತ್ರಗಳನ್ನು ಚಿತ್ರ ಪರಿಚಯಿಸುತ್ತಾ ಹೋಗುತ್ತದೆ. ಒಂದು ರೀತಿಯಲ್ಲಿ ‘ಕಹಾನಿ’ ಚಿತ್ರದಂತೆಯೇ ತಲಾಶ್ ಕೂಡ ಬೆಳೆಯುತ್ತಾ ಹೋಗುತ್ತದೆ. ಅಲ್ಲಿ ಕೊಲ್ಕತಾ ಮುಖ್ಯ ವಸ್ತುವಾದರೆ, ಇಲ್ಲಿ ಮುಂಬಯಿ ರಾತ್ರಿಗಳು ಮುಖ್ಯ ಪಾತ್ರವಹಿಸುತ್ತದೆ. ಆ ರಾತ್ರಿಯ ಜಗಮಗಿಸುವ ಬೆಳಗಿನಲ್ಲೇ ಶೆಖಾವತ್‌ನ ಬದುಕಿನ ತಲಾಶ್ ನಡೆಯುತ್ತದೆ. ಆದರೆ ಕಹಾನಿ ಚಿತ್ರದ ಜನಪ್ರಿಯ ಮಾದರಿಯ ಸಸ್ಪೆನ್ಸ್ ಇಲ್ಲಿಲ್ಲ. ಕಹಾನಿಯ ಕ್ಲೈಮಾಕ್ಸ್ ಸ್ಫೋಟಿಸಿದಂತೆ ಇಲ್ಲಿ ತಲಾಶ್ ಸ್ಫೋಟಿಸುವುದಿಲ್ಲ.


 ಒಂದನ್ನು ನಾವು ಸ್ಪಷ್ಟವಾಗಿಟ್ಟುಕೊಳ್ಳಬೇಕಾಗಿದೆ. ಇದು ಜನಪ್ರಿಯ ಮಾದರಿಯ ಸಸ್ಪೆನ್ಸ್ ಥ್ರಿಲ್ಲರ್ ಅಲ್ಲ. ಇದರ ಜೊತೆಗೆ ಹೇಳಬೇಕಾದುದನ್ನು ಹೇಳುವ ಸಂದರ್ಭದಲ್ಲಿ, ನಿರ್ದೇಶಕಿ ಚಿತ್ರದಲ್ಲಿ ಬಿಗಿಯನ್ನು ಕಳೆದುಕೊಂಡಿದ್ದಾರೆ. ಅದಕ್ಕೆ ನಿಜವಾದ ಚಿತ್ರ-ಕತೆಯಲ್ಲಿರುವ ತೊಡಕುಗಳು. ಅಲ್ಲಲ್ಲಿ ಚಿತ್ರದ ನಿರೂಪಣೆ ಬೋರ್ ಎನಿಸುತ್ತದೆ. ಆದುದರಿಂದಲೇ ತಲಾಶ್ ಚಿತ್ರ ಒಟ್ಟು ಸಿನಿಮಾವಾಗಿ ಇಷ್ಟವಾಗುವುದಕ್ಕಿಂತ, ಇಲ್ಲಿನ ಕೆಲವು ಬಿಡಿ ಬಿಡಿ ಪಾತ್ರಗಳು ಕಟ್ಟಿಕೊಡುವ ದೃಶ್ಯಗಳಷ್ಟೇ ನಮ್ಮನ್ನು ಹೆಚ್ಚು ತಟ್ಟುತ್ತವೆ. ಒಂದು ಸಸ್ಪೆನ್ಸ್ ಚಿತ್ರದ ನಿರೀಕ್ಷೆಯಿಟ್ಟು ಚಿತ್ರವನ್ನು ನೋಡುತ್ತಾ ಹೋದರೆ, ಕ್ಲೈಮಾಕ್ಸ್‌ನ ನಿರಾಸೆ ನಮ್ಮನ್ನು ಎತ್ತಿ ಕುಕ್ಕುತ್ತದೆ. ಚಿತ್ರ ಏನೋ ಹೇಳಲು ಹೋಗಿ ದಾರಿ ತಪ್ಪಿ ಬಿಟ್ಟಿತೆ ಎಂಬ ಅನಿಸಿಕೆ ಚಿತ್ರಮಂದಿರದಿಂದ ಹೊರತೆರಳುವ ನಮ್ಮನ್ನು ಕಾಡುತ್ತದೆ. ತಲಾಶ್ ತನ್ನ ನಿಜವಾದ ಗುರಿಯನ್ನು ತಲುಪಿಲ್ಲವೆಂಬ ಭಾವನೆ ನಮ್ಮನ್ನು ಕಾಡುತ್ತದೆ.


 ಇಲ್ಲಿ ನಾಯಕ ಶೆಖಾವತ್ ಬರೇ ಕೊಲೆಯನ್ನು ಪತ್ತೆ ಮಾಡುವುದಕ್ಕಾಗಿ ಇರುವ ಅಧಿಕಾರಿಯಲ್ಲ. ಒಂದು ಭಿನ್ನ ಮನಸ್ಥಿತಿಯುಳ್ಳ, ಸ್ವಂತ ವ್ಯಕ್ತಿತ್ವವುಳ ಪೊಲೀಸ್ ಅಧಿಕಾರಿ ಆತ. ಆ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ ಆಮಿರ್ ಅಭಿನಂದನಾರ್ಹರು. ಆಮಿರ್ ಬಿಟ್ಟರೆ, ಚಿತ್ರದ ಇನ್ನೊಂದು ಹೆಗ್ಗಳಿಕೆ ನವಾಜುದ್ದೀನ್ ಸಿದ್ದೀಕಿ. ಪಿಂಪ್‌ನ ಪಾತ್ರಕ್ಕೆ ಗರಿಷ್ಠ ನ್ಯಾಯವನ್ನು ನೀಡಿದ್ದಾರೆ ಅವರು. ಶೆಖಾವತ್ ಪತ್ನಿಯ ಪಾತ್ರದಲ್ಲಿ ರಾಣಿ ಮುಖರ್ಜಿ ಸಹನೆಯಿಂದ ನಟಿಸಿದ್ದಾರೆ. ಪಾತ್ರದ ಗಾಂಭೀರ್ಯಕ್ಕೆ ಒಪ್ಪುವಂತಿದೆ ಅವರ ವ್ಯಕ್ತಿತ್ವ. ರಾಮ್ ಸಂಪತ್ ಸಂಗೀತ ಅಲ್ಲಲ್ಲಿ ಕುಂಟುವ ಚಿತ್ರವನ್ನು ಮುನ್ನಡೆಸುತ್ತದೆ. ಫರ್ಹಾನ್ ಅಖ್ತರ್ ಸಂಭಾಷಣೆ ಹರಿತವಾಗಿದೆ. ತಲಾಶ್ ತನ್ನ ಗುರಿಯನ್ನು ತಲುಪದೇ ಇದ್ದರೂ, ಒಂದು ಒಳ್ಳೆಯ ಚಿತ್ರ ಕೊಡುವ ಪ್ರಯತ್ನ ಮಾಡಿದ್ದಾರೆಂಬ ಕಾರಣಕ್ಕೆ ತಂಡವನ್ನು ಅಭಿನಂದಿಸಬೇಕಾಗಿದೆ.

Monday, December 3, 2012

ಒಂದು ನಿಮಿಷ ಮತ್ತು ಇತರ ಕತೆಗಳು

ಹಬ್ಬ
ಒಂದು ಪುಟ್ಟ ಗುಡಿಸಲಲ್ಲಿ ದಂಪತಿ.
ಅವರಿಗೆ ಮಕ್ಕಳಿರಲಿಲ್ಲ. ಒಂದು ಆಡನನ್ನು ಸಾಕುತ್ತಿದ್ದರು.
ಹಬ್ಬ ಬಂತು. ಬಡವರು. ಉಣ್ಣುವುದಕ್ಕೆ ಅನ್ನವಿಲ್ಲ.
ಯಾರೋ ಬಂದು ಕೇಳಿದರು ‘‘ನಿನ್ನ ಆಡನ್ನು ಕೊಡು...ಮೂರು ಸಾವಿರ ರೂ. ಕೊಡುತ್ತೇವೆ....’’
ದಂಪತಿ ಆಡನ್ನೇನೋ ಮಾರಿದರು.
ಆದರೆ ಹಬ್ಬವನ್ನು ಆಚರಿಸಲಾಗದೆ ಇಡೀ ದಿನ ದುಃಖದಲ್ಲಿ ಕಳೆದರು.

ಸಂಬಂಧ
ಅವನೊಬ್ಬ ಅನಾಥ. ದಿಕ್ಕಿಲ್ಲದವನು. ಸತ್ತು ಹೋದ.
ಯಾರೋ ಹೇಳಿದರು ‘‘ಅವನ ಗೋಣಿಚೀಲದ ತುಂಬಾ ದುಡ್ಡಿದೆ’’
ಅದ ಕೇಳಿದ್ದೇ...ನೂರಾರು ಜನ ಬಂದರು. ಸಂಬಂಧಗಳು ಕೂಡಿಕೊಂಡವು.
ಎಲ್ಲರೂ ಹೆಣಕ್ಕೆ ಹೆಗಲು ಕೊಟ್ಟರು. ಸಂಸ್ಕಾರ ಮುಗಿದದ್ದೇ ಗೋಣಿ ಚೀಲಕ್ಕಾಗಿ ಬಡಿದಾಟವಾಯಿತು.
ನೋಡಿದರೆ...
ಚೀಲದೊಳಗೆ ಹರಿದ ಚಿಂದಿ ಮಾತ್ರ ಇತ್ತು.
ವದಂತಿ ಹಬ್ಬಿಸಿದಾತ ಮರೆಯಲ್ಲಿ ನಿಂತು ಕಿಸಕ್ಕನೆ ನಕ್ಕ.

ಕನ್ನಡಿ
ತಲೆಯಲ್ಲಿ ಒಂದು ಕೂದಲು ಹಣ್ಣಾಗಿತ್ತು.
ಕಳೆದ ಒಂದು ವಾರದಿಂದ ಅದನ್ನು ಕಿತ್ತು ಹಾಕಲು ಪ್ರಯತ್ನಿಸುತ್ತಿದ್ದೆ.
ಕಪ್ಪು ಕೂದಲುಗಳ ನಡುವೆ ಅದು ಜಾರಿಕೊಳ್ಳುತ್ತಿತ್ತು. ಬಚ್ಚಿಟ್ಟುಕೊಳ್ಳುತ್ತಿತ್ತು.
ಎಳೆದರೂ ಇನ್ನಾವುದೋ ಕಪ್ಪು ಕೂದಲು ಕಿತ್ತು ಬರುತ್ತಿತ್ತು.
ನಿನ್ನೆ ರಾತ್ರಿ ಅದು ಹೇಗೋ ಕನ್ನಡಿಯ ಮುಂದೆ ಈ ಬಿಳಿ ಕೂದಲು ನನ್ನ ಕೈಗೆ ಸಿಕ್ಕು ಬಿಟ್ಟಿತು. ಎಳೆದೇ ಬಿಟ್ಟೆ. ಆ ಹಣ್ಣು ಕೂದಲು ಕೊನೆಗೂ ನನ್ನ ಕೈ ಸೇರಿತು.
ಮರುದಿನ ಜಂಬದಿಂದ ಕನ್ನಡಿ ನೋಡಿದರೆ ನಾಲ್ಕು ಬಿಳಿ ಕೂದಲು ನನ್ನ ನೋಡಿ ನಗುತ್ತಿತ್ತು.

ಒಂದು ನಿಮಿಷ
ಗಲ್ಲು ವಿಧಿಸುವ ಕಟುಕನನ್ನು ಯಾರೋ ಕೇಳಿದರು ‘‘ಬರೇ ಒಂದು ನಿಮಿಷದ ಸಾಯಿಸುವ ಕೆಲಸಕ್ಕೆ ನಿನಗೆ ಎರಡು ಸಾವಿರ ರೂಪಾಯಿ ಕೊಡ್ತಾರಾ?’’
‘‘ಸಾಯಿಸುವ ಕೆಲಸಕ್ಕಲ್ಲಪ್ಪ...ಆ ಒಂದು ನಿಮಿಷ ನಾನೂ ಅವನೊಂದಿಗೆ ಸಾಯಬೇಕಲ್ಲ...ಅದಕ್ಕೆ ಅವರು ಕೊಡುವ ಹಣ ಅದು...’’

ಅಚ್ಚರಿ
ಹಳ್ಳಿಯ ಹುಡುಗ ನಗರದ ತನ್ನ ಬಂಧುಗಳ ಮನೆಗೆ ಹೋಗಿದ್ದ.
ನಗರದ ಹುಡುಗ ಅಚ್ಚರಿಯಿಂದ ಕೇಳಿದ ‘‘ನಿಮ್ಮ ಊರಿನಲ್ಲಿ ನದಿಯಿದೆಯಂತೆ ಹೌದಾ?’’
ಹಳ್ಳಿ ಹುಡುಗ ಅಷ್ಟೇ ಅಚ್ಚರಿಯಿಂದ ಪ್ರಶ್ನಿಸಿದ ‘‘ಹೌದು. ಅದರಲ್ಲೇನು ವಿಶೇಷ?’’

ಸಂಕಟ 

ಗಲ್ಲು ವಿಧಿಸುವ ಕಟುಕನನ್ನು ಹುಡುಗನೊಬ್ಬ ಕೇಳಿದ ‘‘ಸಾಯುವವನ ಒದ್ದಾಟ ನೋಡುವುದಕ್ಕೆ ತುಂಬಾ ಸಂಕಟವಾಗಿರುವುದಿಲ್ವೆ?’’
ಕಟುಕ ಹೇಳಿದ ‘‘ಸಾಯಿಸುವವನ ಒದ್ದಾಟ ಅದಕ್ಕಿಂತಲೂ ಸಂಕಟವಾಗಿರುತ್ತದಪ್ಪಾ’’

Saturday, December 1, 2012

ಜೂಜುಗಾರನ ಹಾಡು....

೧ 
ನಾನೊಬ್ಬ ಜೂಜುಗಾರ
ಕಾಣುವ ದೊರೆಗಳನ್ನು ನಂಬದೆ
ಕಾಣದ ನಿನ್ನ ಮೇಲೆ
ನನ್ನದೆಲ್ಲವನ್ನು ಹೂಡಿದೆ...

ಭಕ್ತಿಯೆನ್ನೂದು
ಜೂಜಿನ ಚಟದಂತೆ
ನನ್ನನ್ನು ಅಂಟಿಕೊಂಡಿದೆ ದೊರೆಯೇ...
ಕಳೆದುಕೊಂಡಷ್ಟು 
ಇನ್ನಷ್ಟು ಕಳೆದು ಕೊಳ್ಳಲು
ಮನಸ್ಸು ಚಡಪಡಿಸುತ್ತಿದೆ...

ಕಳೆದು ಕೊಳ್ಳುವವರೆಗೆ
ಕಳೆದು ಕೊಳ್ಳುವ
ಸುಖ ನನಗೆ
ಗೊತ್ತಿರಲಿಲ್ಲ ನನ್ನ ದೊರೆಯೇ...

ಒಬ್ಬ ಜೂಜುಗಾರ
ಯಾರನ್ನು ನಂಬಿ
ತನ್ನದನ್ನೆಲ್ಲ ಒತ್ತೆ ಇಟ್ಟು ಆಡಿದ...?
ಕನಿಷ್ಠ
ಆ ಜೂಜುಗಾರನಿಗಿರುವ
ನಿಯತ್ತಾದರೂ ನನ್ನದಾಗಲಿ  ದೊರೆಯೇ,
ನನ್ನ ಬದುಕಿನ ಕಟ್ಟ ಕಡೆಯ
ಕವಡೆಯನ್ನೂ
ಇಟ್ಟು ಆಡುವ ಭಕ್ತಿ ನನ್ನದಾಗಲಿ...

ಭಕ್ತಿ ಎಂದರೆ
ಜೂಜು ಎನ್ನೋದು
ಗೊತ್ತಿರಲಿಲ್ಲ ದೊರೆಯೇ..
ಪಡೆದುಕೊಳ್ಳುತ್ತ
ಕಳೆದು ಕೊಳ್ಳುವ ಖುಷಿಗೆ
ನನ್ನನ್ನು ಇಗೋ
ತೆತ್ತು ಬಿಟ್ಟಿದ್ದೇನೆ...
ಪಣಕ್ಕಿಡಲು ಇನ್ನೇನು ಇಲ್ಲ
ಎನ್ನುವವರೆ
ಗೂ ಆಡುವ ಖುಷಿಯನ್ನು 
ನನಗೆ ಭಿಕ್ಷೆಯಾಗಿ ಕೊಡು

Wednesday, November 28, 2012

ನಮ್ಮ ನೆಲದ ಶಿವಾಜಿ....

ಒಂದು ಐತಿಹಾಸಿಕ ಉದ್ಯಾನವನವನ್ನು ಶ್ಮಶಾನ ಮಾಡಿದ ಹೆಗ್ಗಳಿಕೆ ನಿಜಕ್ಕೂ ಮಹಾರಾಷ್ಟ್ರ ಸರಕಾರದ್ದು. 1925ರಲ್ಲಿ ಬ್ರಿಟಿಷರ ಕಾಲದಲ್ಲಿ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ನಿರ್ಮಿಸಿದ ಈ ಶಿವಾಜಿ ಪಾರ್ಕ್‌ನಲ್ಲಿ ಬಾಳಾ ಠಾಕ್ರೆಯ ಅಂತ್ಯಕ್ರಿಯೆ ನಡೆಸಲು ಅನುಮತಿಯನ್ನು ನೀಡುವ ಮೂಲಕ, ತಾನೆಂತಹ ತಪ್ಪು ಮಾಡಿದ್ದೇನೆ ಎನ್ನುವುದು ಸರಕಾರಕ್ಕೆ ಈಗಲಾದರೂ ಮನವರಿಕೆಯಾಗಿರಬಹುದು. ಠಾಕ್ರೆ ಅಂತ್ಯಕ್ರಿಯೆ ನಡೆದ ಕೆಲವೇ ದಿನಗಳಲ್ಲಿ, ‘ಅಂತ್ಯಕ್ರಿಯೆ’ ನಡೆದ ಸ್ಥಳದ ಮೇಲೆ ಮಹಾರಾಷ್ಟ್ರದ ಶಿವಸೇನೆ ಪುಂಡರು ಹಕ್ಕು ಸ್ಥಾಪಿಸಲು ಹೊರಟಿದ್ದಾರೆ. ಅಷ್ಟೇ ಅಲ್ಲ, ಆ ಸ್ಥಳ ನಮಗೆ ‘ಅಯೋಧ್ಯೆ’ಯಷ್ಟೇ ಪವಿತ್ರ. ಅಂತ್ಯಕ್ರಿಯೆ ಸ್ಥಳದಲ್ಲಿ ನಿರ್ಮಿಸಿರುವ ರಚನೆಯನ್ನು ಶಿವಸೇನೆ ತೆರವುಗೊಳಿಸುವುದಿಲ್ಲ ಎಂದು ಸಂಜಯ್ ರಾವತ್ ಗುಡುಗಿದ್ದಾರೆ. ಈ ಮೂಲಕ, ಭವಿಷ್ಯದಲ್ಲಿ ಮುಂಬೈಯೊಳಗೆ ವಿವಾದಿತ ಅಯೋಧ್ಯೆಯೊಂದನ್ನು ಸೃಷ್ಟಿಸುವ ಸಂದೇಶವನ್ನೂ ನೀಡಿದ್ದಾರೆ. ಅತ್ಯಂತ ವಿಷಾದನೀಯ ಸಂಗತಿಯೊಂದನ್ನು ಈ ಸಂದರ್ಭದಲ್ಲಿ ನಾವು ನೆನಪು ಮಾಡಿಕೊಳ್ಳಬೇಕಾಗಿದೆ. ಈ ಹಿಂದೆ ಡಾ. ಬಿ. ಆರ್. ಅಂಬೇಡ್ಕರ್ ಅವರು ನಿಧನರಾದಾಗ ಇದೇ ಶಿವಾಜಿ ಪಾರ್ಕ್‌ನಲ್ಲಿ ಅವರ ಅಂತ್ಯ ಕ್ರಿಯೆ ನಡೆಸಲು ಅನುಮತಿ ಬೇಡಲಾಗಿತ್ತು. ಆದರೆ ಅಂದಿನ ಸರಕಾರ ಅದಕ್ಕೆ ಅನುಮತಿ ನೀಡಲಿಲ್ಲ. ಈ ದೇಶದ ತುಳಿಯಲ್ಪಟ್ಟ ಒಂದು ದೊಡ್ಡ ಸಮುದಾಯದ ಆತ್ಮಾಭಿಮಾನವನ್ನು ಎಚ್ಚರಿಸಿದ, ಅವರನ್ನು ತುಳಿದ ಮಂದಿಯಲ್ಲಿ ಪಾಪಪ್ರಜ್ಞೆಯನ್ನು ಬಿತ್ತಿ, ಅವರನ್ನೂ ಉನ್ನತಿಗೇರಿಸಿದ ಅಂಬೇಡ್ಕರ್‌ಗೆ ಸಿಗದ ಅವಕಾಶ, ಹಿಂಸೆಯ ತಳಹದಿಯಲ್ಲಿ ರಾಜಕೀಯ ನಡೆಸುತ್ತಾ, ಭಾಷೆ, ಧರ್ಮದ ಹೆಸರಲ್ಲಿ ದ್ವೇಷವನ್ನು ಬಿತ್ತಿ ರಾಜಕೀಯ ಪಕ್ಷವನ್ನು ಕಟ್ಟಿದ ನಾಯಕನಿಗೆ ಸಿಕ್ಕಿತು. ಇದೀಗ ಶಿವಾಜಿ ಪಾರ್ಕ್‌ನಲ್ಲಿ ಬಾಳಾಠಾಕ್ರೆಯ ಸ್ಮಾರಕವನ್ನು ನಿರ್ಮಿಸಲು ಪ್ರಯತ್ನ ನಡೆಯುತ್ತಿದೆ. ಈ ಶಿವಾಜಿ ಪಾರ್ಕ್‌ನಲ್ಲಿ ಈ ನೆಲದ ನಿಜವಾದ ಹೋರಾಟಗಾರ, ಬಂಡಾಯಗಾರ ಶಿವಾಜಿಯ ಪ್ರತಿಮೆಯಿದೆ. ಒಂದು ವೇಳೆ, ಠಾಕ್ರೆಯ ಪ್ರತಿಮೆ ಇದಕ್ಕೆ ಸ್ಪರ್ಧೆ ನೀಡಿದರೆ, ಶಿವಾಜಿಗೆ ಮಾಡುವ ಅತಿ ದೊಡ್ಡ ಅವಮಾನ.

ಶಿವಾಜಿಯ ವ್ಯಕ್ತಿತ್ವವನ್ನು ವಿರೂಪಗೊಳಿಸಿ, ಆತನನ್ನು ತನ್ನ ರಾಜಕೀಯ ಅಜೆಂಡಾಗಳಿಗೆ ಬಳಿಸಿದ ಹೆಗ್ಗಳಿಕೆ ಬಾಳಾಠಾಕ್ರೆಯದು. ಶಿವಾಜಿ ಪಾರ್ಕ್‌ನಲ್ಲಿ ಯಾಕೆ ಬಾಳಾಠಾಕ್ರೆಗೆ ಅವಕಾಶ ನೀಡಬಾರದು ಎನ್ನುವುದಕ್ಕೆ ನಾವೊಮ್ಮೆ ಶಿವಾಜಿಯ ಬದುಕಿನ ಪುಟಗಳನ್ನು ಹಿಂದಕ್ಕೆ ಬಿಡಿಸಿದರೆ ಸಾಕು, ತಿಳಿದು ಬಿಡುತ್ತದೆ. ಬಾಳಾಠಾಕ್ರೆ ಮಾತ್ರವಲ್ಲ, ಇಡೀ ಸಂಘಪರಿವಾರ ಶಿವಾಜಿಯ ವ್ಯಕ್ತಿತ್ವಕ್ಕೆ ಮಾಡಿದ ಅನ್ಯಾಯ ಬಯಲಾಗಿ ಬಿಡುತ್ತದೆ. ಇಂದು ಈ ದೇಶದ ಹೊಸತಲೆಮಾರಿಗೆ ಶಿವಾಜಿಯೆಂದರೆ, ಮೊಗಲರ ವಿರುದ್ಧ, ಮುಸ್ಲಿಮರ ವಿರುದ್ಧ ಹೋರಾಡಿದ ಒಬ್ಬ ಹಿಂದೂ ಸಾಮ್ರಾಟ ಮಾತ್ರ. ಇದು ಸಂಘಪರಿವಾರ ಮತ್ತು ಠಾಕ್ರೆ ಬಳಗ ಶಿವಾಜಿಯನ್ನು ವಿರೂಪಗೊಳಿಸಿದ ಪರಿ. ಮಳೆ ಬಿದ್ದ ನೆಲದಲ್ಲಿ ಬೀಜ ಸಹಜವಾಗಿ ಪುಟಿಯೊಡೆಯು ವಂತೆ ಶಿವಾಜಿ ಈ ನೆಲದಿಂದ ಎದ್ದು ಬಂದ. ಅವನನ್ನು ತಿಳಿಯದೇ ಇರುವ ಮಕ್ಕಳು, ಈ ನೆಲದ ಸ್ಪರ್ಶವನ್ನು ತನ್ನದಾಗಿಸಿಕೊಳ್ಳಲಾರರು. ಠಾಕ್ರೆ ಮತ್ತು ಸಂಘಪರಿವಾರದ ಹೀನ ರಾಜಕೀಯವನ್ನು ಅರ್ಥ ಮಾಡಿಕೊಳ್ಳುವ ಒಂದೇ ಒಂದು ಸುಲಭ ವಿಧಾನವೆಂದರೆ, ಶಿವಾಜಿಯ ಬದುಕಿನ ಪುಟಗಳನ್ನು ಬಿಡಿಸುವುದು. ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದು.
***
ಕರ್ನಾಟಕದ ಪಾಲಿಗೆ ಟಿಪ್ಪು ಸುಲ್ತಾನ್ ಹೇಗೆಯೋ ಹಾಗೆಯೇ ಮಹಾರಾಷ್ಟ್ರಕ್ಕೆ ಶಿವಾಜಿ. ಇವರ ನೋವು, ದುಮ್ಮಾನ, ಹೋರಾಟ, ಸಂಘರ್ಷ, ಇವರಿಗಾದ ವಂಚನೆ ಮತ್ತು ಇವರ ಅಂತ್ಯಗಳಲ್ಲಿ ಹಲವು ಸಾಮ್ಯತೆಗಳಿವೆ. ಶಿವಾಜಿಗೂ ಟಿಪ್ಪುವಿಗೂ ಇರುವ ಎರಡು ಮುಖ್ಯ ವ್ಯತ್ಯಾಸಗಳೆಂದರೆ, ಟಿಪ್ಪುವಿಗೆ ಹೈದರಾಲಿಯ ಮೂಲಕ ರಾಜ್ಯ ಸಿಕ್ಕಿತು. ಆದರೆ ಶಿವಾಜಿ ಆದಿವಾಸಿಗಳು, ದಲಿತರು, ಬುಡಕಟ್ಟು ಜನರು ಮತ್ತು ಮುಸ್ಲಿಮರನ್ನು ಕಟ್ಟಿಕೊಂಡು ಒಂದು ಹೊಸ ಸಾಮ್ರಾಜ್ಯವನ್ನು ಕಟ್ಟಿದ. ಟಿಪ್ಪು ವಿದ್ಯಾವಂತನಾಗಿದ್ದ. ಅವನಲ್ಲಿ ವೈಜ್ಞಾನಿಕ ದೂರದೃಷ್ಟಿಯಿತ್ತು. ಶಿವಾಜಿ ನೆಲದಿಂದ ಸಿಡಿದು ಬಂದ ಸಹಜ ಮರ. ಶೌರ್ಯ, ಎದೆಗಾರಿಕೆಯೇ ಅವನ ಪಾಲಿನ ವರ. ಇಬ್ಬರಲ್ಲೂ ಇನ್ನೊಂದು ಮುಖ್ಯ ಸಾಮ್ಯತೆಯಿತ್ತು. ಈ ನೆಲದ ಮೇಲ್ವರ್ಣೀಯರ ಪಾಲಿಗೆ ಟಿಪ್ಪು ಮ್ಲೇಚ್ಛನಾಗಿ ದ್ದರೆ, ಶಿವಾಜಿ ಮೇಲ್ಜಾತಿಯವರ ಕಣ್ಣಲ್ಲಿ ಶೂದ್ರ ಅದರಲ್ಲೂ ಹೀನ ಜಾತಿಯವನಾಗಿದ್ದ. ಹಲವರ ಕಣ್ಣಲ್ಲಿ ಹಲವು ರೂಪಗಳನ್ನು ಶಿವಾಜಿ ಪಡೆದಿದ್ದ. ಸಂಘಪರಿವಾರದ ಕಣ್ಣಲ್ಲಿ ಶಿವಾಜಿ ಹಿಂದೂ ಸಾಮ್ರಾಟ. ದಲಿತರ ಕಣ್ಣಲ್ಲಿ ಶಿವಾಜಿ ಅಪ್ಪಟ ಬ್ರಾಹ್ಮಣ ವಿರೋಧಿ. ಬ್ರಾಹ್ಮಣರು ಶಿವಾಜಿಗೆ ಮಾಡಿದ ವಂಚನೆ, ಮತ್ತು ಶಿವಾಜಿಯಿಂದ ನಡೆದ ಹಲವು ಬ್ರಾಹ್ಮಣರ ಹತ್ಯೆಯನ್ನು ಇಟ್ಟುಕೊಂಡು ತಮ್ಮ ವಾದವನ್ನು ಮಂಡಿಸುತ್ತಾರೆ. ಮುಸ್ಲಿಮರು ಶಿವಾಜಿಯ ಕುರಿತಂತೆ ವೌನವನ್ನು ತಳೆದಿದ್ದಾರೆ. ಬಹುಶಃ ಸಂಘಪರಿವಾರ ಶಿವಾಜಿಯನ್ನು ವಿರೂಪಗೊಳಿಸಿದ ಕಾರಣ ವಿರಬಹುದು. ಶಿವಾಜಿ ನಡೆಸಿದ ಗೆರಿಲ್ಲಾ ಯುದ್ಧದ ಕಾರಣಕ್ಕಾಗಿ ಅವನನ್ನು ಡಕಾಯಿತ ಗುಂಪಿನ ನಾಯಕ ಎಂದು ವಾದ ಮಂಡಿಸುವವರೂ ಇದ್ದಾರೆ. ಒಂದಂತೂ ಸತ್ಯ. ಶಿವಾಜಿ ಯಾವುದೇ ನಿರ್ದಿಷ್ಟವಾದ ಸಿದ್ಧಾಂತ, ಅಜೆಂಡಾಗಳನ್ನು ಇಟ್ಟುಕೊಂಡು ಹೊರಟವನಲ್ಲ. ಬಂಡಾಯ ಶಿವಾಜಿಯ ಮೂಲಗುಣ. ಅವನ ದಾರಿಯಲ್ಲಿ ಎದುರಾದ ಎಲ್ಲರ ವಿರುದ್ಧವೂ ಹೋರಾಡಿದ. ಮರಾಠರು, ಮೊಗಲರು, ಬ್ರಾಹ್ಮಣರು ಎಲ್ಲರೂ ಅವನ ದಾರಿಯಲ್ಲಿ ಎದುರಾದರು. ಇದೇ ಸಂದರ್ಭದಲ್ಲಿ ಅವನ ಬೆಂಬಲವಾಗಿ ಮುಸ್ಲಿಮರು, ಬ್ರಾಹ್ಮಣರು, ಮರಾಠರೂ ಇದ್ದರು.

ಶಿವಾಜಿಯ ಬದುಕು ಹೋರಾಟದಲ್ಲೇ ಮುಗಿಯಿತು. ಅವನು ರಾಜ್ಯಾಭಿಷೇಕವಾದ ಬಳಿಕ ಬದುಕಿದ್ದು ಬರೇ ಆರು ವರ್ಷ. ರಾಜ್ಯ ಪದವಿಯನ್ನು ಅನುಭವಿಸುವುದಕ್ಕೆ ಅವನಿಂದಾಗ ಲಿಲ್ಲ. ಅಕಾಲ ಮರಣಕ್ಕೆ ಶಿವಾಜಿ ತುತ್ತಾದ. ಸತ್ತು ಒಂದು ವಾರದ ಬಳಿಕವಷ್ಟೇ ಜನರಿಗೆ ಗೊತ್ತಾಯಿತು ಶಿವಾಜಿ ಸತ್ತ ವಿಷಯ. ಆತನಿಗೆ ವಿಷ ಉಣಿಸಿ ಕೊಲ್ಲಲಾಯಿತು ಎನ್ನುತ್ತಾರೆ. ಟಿಪ್ಪುವಿನ ಮರಣವೂ ನಡೆದಿರುವುದು ವಂಚನೆ ಯಿಂದಲೇ ತಾನೆ. ನಿಜಾಮರು, ಮರಾಠರು, ಮೀರ್‌ಸಾದಿಕ್, ಪೂರ್ಣಯ್ಯ ಎಲ್ಲರೂ ಸೇರಿ ಮಾಡಿದ ವಿಷಪ್ರಾಷಣದ ಫಲ, ಟಿಪ್ಪುವಿನ ಭೀಕರ ಸೋಲು ಮತ್ತು ಮರಣ.

 ಶಿವಾಜಿಯ ಪಟ್ಟಾಭಿಷೇಕವೇ ಒಂದು ದುರಂತವಾಗಿ ಹೋಯಿತು. ಅವನ ಪಟ್ಟಾಭಿಷೇಕ ನಡೆಸಲು ಅಂದಿನ ಬ್ರಾಹ್ಮಣರು ಒಪ್ಪಲಿಲ್ಲ. ಯಾಕೆಂದರೆ ಶಿವಾಜಿ ಭೋಸಲೆ ಕೀಳು ಜಾತಿಗೆ ಸೇರಿದಾತ. ರಾಜ್ಯದ ಚಕ್ರವರ್ತಿಯಾಗಬೇಕಾದರೆ ಆತ ಕ್ಷತ್ರಿಯನಾಗಿರಬೇಕು. ಅಂತಿಮವಾಗಿ ಕಾಶಿಯ ಗಾಗಾಭಟ್ಟನನ್ನು ಅತಿ ಹಣದ ಆಮಿಶವೊಡ್ಡಿ ಕರೆತರಲಾಯಿತು. ಅವನಿಗೂ ಅವನ ಶಿಷ್ಯರಿಗೂ ಶಿವಾಜಿ ನೀಡಿದ ದಕ್ಷಿಣೆಯನ್ನು ಕೋಟೆಯಿಂದ ಒಯ್ಯುವುದಕ್ಕೇ ಶ್ರಮ ಪಡಲಾಯಿತು ಎಂಬ ಮಾತಿದೆ. ಗಾಗಾ ಭಟ್ಟ ಶಿವಾಜಿಯನ್ನು ಶುದ್ಧೀಕರಿಸಿದ ಮಾತ್ರವಲ್ಲ, ಆತನಿಗೆ ನಲವತ್ತರ ವಯಸ್ಸಿನಲ್ಲಿ ಹೊಸದಾಗಿ ಉಪನಯನ ಮಾಡಿದ. ಅಷ್ಟೇ ಅಲ್ಲ, ಹೊಸದಾಗಿ ವೈದಿಕ ಪದ್ಧತಿಯ ಪ್ರಕಾರ ಮದುವೆ ಮಾಡಿಸಿದ. ಇದಾದ ಬಳಿಕವಷ್ಟೇ ಶಿವಾಜಿಗೆ ಪಟ್ಟಾಭಿಷೇಕ ಮಾಡಲಾಯಿತು.

  ಸರಿ. ಹೀಗಾದರೂ ಈ ಪಟ್ಟಾಭಿಷೇಕ ಯಶಸ್ವಿಯಾಯಿತೇ? ಎಂದರೆ ಅದೂ ಇಲ್ಲ. ಶಿವಾಜಿಯ ಮೊದಲ ರಾಜ್ಯಾಭಿಷೇಕ ನಡೆದದ್ದು ರಾಯಗಡದಲ್ಲಿ. ಜೂನ್ 6, 1674ರಲ್ಲಿ. ಇದಾದ ಬಳಿಕ ಮತ್ತೆ ಶೈವರು ತಗಾದೆ ತೆಗೆದರು. ಶಿವಾಜಿಯ ಪಟ್ಟಾಭಿಷೇಕ ಸರಿಯಾಗಿ ನಡೆದಿಲ್ಲ ಎಂದು ಟೀಕಿಸತೊಡಗಿ ದರು. ಇದೇ ಸಂದರ್ಭದಲ್ಲಿ ಶಿವಾಜಿಯ ತಾಯಿ ಜೀಜಾಬಾಯಿ ತೀರಿಕೊಂಡರು. ಇನ್ನೋರ್ವ ಸೇನಾಪತಿ ಅಸುನೀಗಿದ್ದ. ಪತ್ನಿ ಕಾಶಿಬಾಯಿ ಮೃತ್ಯುವಶರಾದರು. ಇದೆಲ್ಲಕ್ಕೂ ಕಾರಣ ಗಾಗಾ ಭಟ್ಟ ಮಾಡಿದ ರಾಜ್ಯಾಭಿಷೇಕ ಎಂದು ಪುಕಾರು ಹಬ್ಬಿಸಲಾಯಿತು. ಜನರನ್ನು ಸಂತುಷ್ಟಿಗೊಳಿಸುವುದಕ್ಕಾಗಿಯೇ ಮೂರೇ ತಿಂಗಳಲ್ಲಿ ಮತ್ತೊಮ್ಮೆ ರಾಜ್ಯಾಭಿಷೇಕವನ್ನು ಮಾಡಿಸಿಕೊಳ್ಳಬೇಕಾಯಿತು. ಯಜುರ್ವೇದಿ ತಾಂತ್ರಿಕ ಗೋಸ್ವಾಮಿಯೊಬ್ಬನ ನೇತೃತದಲ್ಲಿ ಈ ರಾಜ್ಯಾಭಿಷೇಕ ನಡೆಯಿತು. ಇದು ಶಿವಾಜಿ ಆಡಳಿತದಲ್ಲಿ ಶೈವರು ಮತ್ತು ವೈದಿಕ ಬ್ರಾಹ್ಮಣರ ನಡುವಿನ ತಿಕ್ಕಾಟಕ್ಕೆ ಕಾರಣವಾಯಿತು. ಆಳದಲ್ಲಿ ಬ್ರಾಹ್ಮಣರು ಶಿವಾಜಿ ಯನ್ನು ಒಪ್ಪಿಕೊಂಡಿರಲೇ ಇಲ್ಲ. ಈ ಎಲ್ಲ ಸಂಘರ್ಷದ ನಡುವೆ ಆರು ವರ್ಷ ಆಡಳಿತ ನಡೆಸಿದ ಶಿವಾಜಿ ಅಕಾಲಿಕವಾಗಿ ಮರಣವಪ್ಪಿದ.

ಶಿವಾಜಿಯನ್ನು ಜಾತಿಯ ಕಾರಣಕ್ಕಾಗಿ ಕೆಲವು ಮೇಲ್ವರ್ಣೀ ಯರು ರಾಜನೆಂದು ಒಪ್ಪಿಕೊಂಡಿರಲೇ ಇಲ್ಲ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಇಲ್ಲಿದೆ.ರಾಂಝ್ಯದ ಪಾಟೀಲನೊಬ್ಬ ರೈತನ ಮಗಳನ್ನು ಬಲಾತ್ಕಾರ ಮಾಡಿದನೆಂಬ ಕಾರಣಕ್ಕೆ ಅವನನ್ನು ಹೆಡೆಮುರಿ ಕಟ್ಟಿ ಪುಣೆಯಲ್ಲಿ ಶಿವಾಜಿಯ ಎದುರಿಗೆ ತರಲಾಯಿತು. ಶಿವಾಜಿ ಪಾಟೀಲನಿಗೆ ಶಿಕ್ಷೆಯನ್ನು ಆದೇಶಿದ. ಆಗ ಪಾಟೀಲ, ಸಭೆಯಲ್ಲಿ ಹಾಜರಾಗಿದ್ದ ದಾದೋಜಿ ಕೊಂಡದೇವನಿಗೆ ಹೇಳಿದ ‘‘ಪಂತ ಕುಲೀನ ಮನೆತನದವರು ನ್ಯಾಯ ನೀಡಲಿ’’
 ನೇರವಾಗಿ ಶಿವಾಜಿಯನ್ನು ಪಾಟೀಲ ನಿಂದಿಸಿದ್ದ. ‘‘ಶಿವಾಜಿ ಕೆಳಜಾತಿಯವನಾಗಿ ರುವುದರಿಂದ ನನ್ನ ವಿರುದ್ಧ ನ್ಯಾಯ ನೀಡಲು ಅವನಿಗೆ ಅರ್ಹತೆಯಿಲ್ಲ’’ ಎಂದು ಹೇಳಿದ್ದ. ಮರಾಠ ಸರದಾರರಲ್ಲೂ ಹಲವರಿಗೆ ಶಿವಾಜಿಯನ್ನು ರಾಜನೆಂದು ಒಪ್ಪಿಕೊಳ್ಳಲು ಮುಜುಗರವಿತ್ತು. ಮರಾಠ ಕ್ಷತ್ರಿಯ ಕುಲವೆಂದು 96 ವಿಭಾಗಗಳನ್ನು ಉಲ್ಲೇಖಿಸುತ್ತದೆ. ಅದರಲ್ಲಿ ಭೋಸಲೆ ಎಂಬ ಹೆಸರಿಲ್ಲ. ಶಿವಾಜಿಯು ಭೋಸಲೆ ಅಡ್ಡ ಹೆಸರನ್ನು ಹೊಂದಿದ್ದ. ಮಹಾತ್ಮ ಜೋತಿಭಾ ಫುಲೆಯವರು ತಮ್ಮ ಪೋವಾಡೆ ಯಲ್ಲಿ ಶಿವಾಜಿಯನ್ನು ‘‘ಕೃಷಿಕ ಭೂಷಣ’’ ಎಂದು ಕರೆದಿರುವುದು ಇದೇ ಕಾರಣಕ್ಕೆ. ಶಿವಾಜಿ ರೈತ ಅಥವಾ ಕೃಷಿಕ ಸಮುದಾಯದಲ್ಲಿ ಬೆಳೆದು ಬಂದವನಾಗಿದ್ದ.

ಶಿವಾಜಿ ಸಾಮ್ರಾಜ್ಯ ಕಟ್ಟುವ ಸಂದರ್ಭದಲ್ಲಿ ಅವನ ಜೊತೆ ಜೊತೆಗೆ ಹೆಜ್ಜೆಯಿಟ್ಟವರಾರು. ಪ್ರಾಣಕ್ಕೆ ಪ್ರಾಣ ಕೊಟ್ಟು ಅವನನ್ನು ಕಾಪಾಡಿದವರಾರು? ಅವನಿಗೆ ದ್ರೋಹ ಬಗೆದವರಾರು? ಎಂಬಿತ್ಯಾದಿ ಪುಟಗಳನ್ನು ಬಿಡಿಸುತ್ತಾ ಹೋದರೆ ನಮ್ಮ ಎದೆ ಧಸ್ಸೆನ್ನುತ್ತದೆ. ಅದನ್ನು ಮುಂದಿನ ವಾರ ಹಂಚಿಕೊಳ್ಳುವೆ.

Tuesday, November 27, 2012

ಭಾಷೆಯನ್ನು ಕಲಿಸಬಾರದು...ಕಲಿಯಬಾರದು....

ನನ್ನ ತಂಗಿಯ ಎರಡೂವರೆ ವರ್ಷದ ಮಗಳು ಫಿಝಾ ಕಳೆದ ಒಂದು ತಿಂಗಳು ಮನೆಯಲ್ಲೇ ಇದ್ದಳು. ಅವಳಿರುವ ಪ್ರತಿ ಘಳಿಗೆಯೂ ನನ್ನ ಪಾಲಿಗೆ ಅಮೃತ ಘಳಿಗೆ. ಅವಳು ಕೊಡುವ ಕಾಟಗಳೆಲ್ಲ ಹಿತವಾಗಿರುತ್ತದೆ. ಸುಖವಾಗಿರುತ್ತದೆ. ಇಂತಹ ಫಿಝಾಳಿಗೆ ನಾನು ಇತ್ತೀಚೆಗೆ ಸುಮ್ಮನೆ ಆಡುವುದಕ್ಕಾಗಿ ಎಬಿಸಿಡಿ ಕಾರ್ಡ್‌ಗಳನ್ನು ಕೊಟ್ಟೆ. ಸುಮ್ಮನೆ ಆಟವಾಡುತ್ತಾ ಎಬಿಸಿಡಿ ಕಾರ್ಡ್‌ಗಳನ್ನು ಗುರುತಿಸುವುದನ್ನು ಹೇಳಿಕೊಡುತ್ತಾ ಹೋದೆ. ಅವಳು ಅದನ್ನು ಆಟವೆಂದು ನಂಬಿ, ಎಬಿಸಿಡಿಯನ್ನು ಸುಲಭವಾಗಿ ಹೇಳುತ್ತಾ ಹೋದಳು. ಇತ್ತೀಚೆಗೆ ಅವಳಿಗೆ ಏಕಾಏಕಿ ನನ್ನ ಮೇಲೆ ಅನುಮಾನ ಬಂದು ಬಿಟ್ಟಿತು. ಇದು ಆಟ ಅಲ್ಲ. ಇದು ಪಾಠ ಎನ್ನುವುದು ಸ್ಪಷ್ಟವಾದದ್ದೇ ಕಾರ್ಡ್‌ಗಳನ್ನು ಮುಟ್ಟಿ ನೋಡುವುದನ್ನೇ ಬಿಟ್ಟಳು. ಎಬಿಸಿಡಿ ಎನ್ನುವಷ್ಟರಲ್ಲಿ ಓಡಿ ಹೋಗುತ್ತಿದ್ದಳು. ಆಮೇಲೆ ಅವಳಿಗೆ ಒನ್ ಟೂ ತ್ರಿಯ ಪ್ಲಾಸ್ಟಿಕ್ ಅಕ್ಷರಗಳನ್ನು ತಂದುಕೊಟ್ಟೆ. ಅದರ ಆಕರ್ಷಣೆಯಲ್ಲಿ ಒಂದೇ ವಾರದಲ್ಲಿ ಅವಳು ಹತ್ತರವರೆಗೆ ಅಂಕಿಗಳನ್ನು ಹೇಳತೊಡಗಿದಳು. ಆದರೆ ಇತ್ತೀಚೆಗೆ ಅದರ ಕುರಿತಂತೆಯೂ ಅವಳಿಗೆ ಅನುಮಾನ ಬಂತು. ನಾವು ಒನ್‌ಟೂತ್ರಿ ಕುರಿತು ಹೆಚ್ಚು ಹೆಚ್ಚು ಆಸಕ್ತಿ ವಹಿಸಿದಂತೆ ಅವಳಿಗೆ ಅದರ ಕುರಿತ ಆಸಕ್ತಿ ಕಡಿಮೆಯಾಗ ತೊಡಗಿತು. ಇತ್ತೀಚೆಗಂತೂ ಎಬಿಸಿಡಿ, ವನ್‌ಟೂತ್ರಿಗಳನ್ನು ಮುಟ್ಟಿಯೂ ನೋಡುತ್ತಿಲ್ಲ. ‘‘ಎಬಿಸಿಡಿ ಹೇಳು ಮಗಳೆ’’ ಎಂದರೆ ಅವಳಿಗೆ ಸಿಟ್ಟು ಏರುತ್ತದೆ. ಹೇಳಿಕೊಟ್ಟರೆ, ಅದನ್ನು ತಿರುಚಿ ಹೇಳಿ ಸೇಡು ತೀರಿಸಿಕೊಳ್ಳುತ್ತಿದ್ದಳು. ಇನ್ನು ಕೆಲಸ ಕೆಟ್ಟಿತು ಎಂದು ಅವಳಿಗೆ ಏನನ್ನೂ ಹೇಳಿಕೊಡುವುದಕ್ಕೆ ಹೋಗಿಲ್ಲ. ಯಾಕೆಂದರೆ, ಯಾವಾಗ ಅವಳಿಗೆ ತಾನು ಆಡುತ್ತಿಲ್ಲ, ಕಲಿಯುತ್ತಿದ್ದೇನೆ ಎನ್ನುವುದು ಒಳ ಮನಸ್ಸಿಗೆ ಗೊತ್ತಾಗಿ ಬಿಟ್ಟಿತೋ, ಎಬಿಸಿಡಿಗಳು ಅವಳಾದಾಗಲು ಸಾಧ್ಯವಿಲ್ಲ. ನಮ್ಮದಾಗಿರುವ ಎಬಿಸಿಡಿಗಳನ್ನು ಅವಳು ಯಾವತ್ತೂ ಕಲಿಯಲು ಹೋಗುವುದಿಲ್ಲ. ಅದು ಅವಳ ಜಗತ್ತಿಗೆ ಸಂಬಂಧ ಪಟ್ಟ ವಿಷಯವಾಗಿರುವವರೆಗೆ ಮಾತ್ರ ಅವಳು ಅದರ ಕುರಿತಂತೆ ಆಸಕ್ತಿ ವಹಿಸಲು ಸಾಧ್ಯ. ನಾವು ಕಲಿಯುವುದು, ಕಲಿಸುವುದು ಎನ್ನುವುದನ್ನು ಹೇರುವುದು ಎಂಬುದಾಗಿ ತಿಳಿದುಕೊಂಡಿದ್ದೇವೆ. ಹೇರುವಾಗ ಸಹಜವಾಗಿಯೇ ಪ್ರತಿಭಟನೆ ವ್ಯಕ್ತವಾಗುತ್ತದೆ. ಹೀಗೆ ಕಲಿಕೆ ಎಂಬ ಹೇರುವಿಕೆಯ ಮೂಲಕ ಒಂದು ಭಾಷೆಯನ್ನು ಮಕ್ಕಳ ಪಾಲಿಗೆ ಕಷ್ಟವಾಗಿಸಿ, ಹಿಂಸೆಯಾಗಿಸಿ ಬಿಟ್ಟಿದ್ದೇವೆ.

ಸಾಧಾರಣವಾಗಿ ನಾವು ಪ್ರಾದೇಶಿಕ ಭಾಷೆಗಳನ್ನು ಕಲಿಯುವುದಿಲ್ಲ. ಬದಲಿಗೆ ಅದರೊಂದಿಗೆ ಬದುಕುತ್ತೇವೆ. ಅದನ್ನು ನಮ್ಮ ಮೇಲೆ ಯಾರೂ ಕಲಿಸುವ ನೆಪದಲ್ಲಿ ಹೇರುವುದಿಲ್ಲ. ಅದು ನಮ್ಮ ಬಾಲ್ಯದ ವ್ಯವಹಾರಗಳಿಗೆ ಅಗತ್ಯವಾಗಿರುತ್ತದೆ. ಆದುದರಿಂದ ಅದನ್ನು ಸಹಜವಾಗಿ ನಮ್ಮದಾಗಿಸಿಕೊಳ್ಳುತ್ತೇವೆ. ಕರಾವಳಿಯಲ್ಲಿ ಒಬ್ಬ ಮುಸ್ಲಿಮ್ ಹುಡುಗ ತನ್ನ ಮನೆಯೊಳಗೆ ಬ್ಯಾರಿ ಭಾಷೆಯನ್ನು ತನ್ನದಾಗಿಸಿಕೊಳ್ಳುತ್ತಾನೆ. ಆದರೆ ಮನೆಯಿಂದ ಹೊರಗಡೆ ಕಾಲಿಟ್ಟ ಹಾಗೆ ಅವನು ತುಳು ಭಾಷೆಯನ್ನು ತನ್ನದಾಗಿಸಿಕೊಳ್ಳ ತೊಡಗುತ್ತಾನೆ. ಮಸೀದಿಯಲ್ಲಿ ಅವನಿಗೆ ತಿಳಿಯದಂತೆಯೇ ಮಲಯಾಳಂನ್ನು ತನ್ನದಾಗಿಸಿಕೊಳ್ಳುತ್ತಾನೆ. ಶಾಲೆಗೆ ಕಾಲಿಟ್ಟವನು ಅಲ್ಲಿಯ ಹುಡುಗರೊಂದಿಗೆ ಆಡುತ್ತಾ, ಜಗಳಾಡುತ್ತಾ ಕನ್ನಡವನ್ನು ತನ್ನದಾಗಿಸಿಕೊಳ್ಳುತ್ತಾನೆ. ಹೀಗೆ ತೀರ ಹತ್ತನೆ ವರ್ಷದಲ್ಲಿ ಬ್ಯಾರಿ, ತುಳು, ಮಲಯಾಳಂ, ಕನ್ನಡ ಭಾಷೆಗಳು ಅವನದಾಗಿ ಬಿಟ್ಟಿರುತ್ತವೆ. ಇವೆಲ್ಲವನ್ನು ಅವನು ಯಾವುದೇ ಮೇಷ್ಟ್ರುಗಳ ಹಂಗಿಲ್ಲದೆಯೇ ತನ್ನದಾಗಿಸಿಕೊಂಡಿರುತ್ತಾನೆ. ಆದರೆ ಇದೇ ಸಂದರ್ಭದಲ್ಲಿ ಇಂಗ್ಲಿಷ್‌ನ್ನು ತನ್ನದಾಗಿಸಿಕೊಳ್ಳುವಾಗ ಮಾತ್ರ ಅವನು ಎಡವುತ್ತಾನೆ. ಇದು ಹುಡುಗರ ಸಮಸ್ಯೆಯಂತೂ ಅಲ್ಲವೇ ಅಲ್ಲ. ಇಂಗ್ಲಿಷ್‌ನ್ನು ಅವರಿಗೆ ಪರಿಚಯಿಸುವ ರೀತಿಯಿಂದಾಗಿಯೇ ಆ ಭಾಷೆ ಕಷ್ಟವಾಗಿ ಬಿಡುತ್ತದೆ. ಅನ್ಯವಾಗಿ ಬಿಡುತ್ತದೆ. ಇಷ್ಟೂ ಭಾಷೆಗಳನ್ನು ಸುಲಭವಾಗಿ ಅವನಿಗೆ ಅರಿವಿಲ್ಲದಂತೆಯೇ ತನ್ನದಾಗಿಸಿಕೊಂಡ ವಿದ್ಯಾರ್ಥಿ, ಇಂಗ್ಲಿಷ್‌ನ್ನು ಮಾತ್ರ ‘ಕಲಿಯ’ಬೇಕಾಗುತ್ತದೆ.

ಇತ್ತೀಚೆಗೆ ಟಿವಿಯಲ್ಲಿ ಒಂದು ಕಾರ್ಯಕ್ರಮ ನೋಡುತ್ತಿದ್ದೆ. ಅದರಲ್ಲಿ ನವಿಲು ಗರಿ ಮಾರಾಟ ಮಾಡುತ್ತಿದ್ದ ಬೀದಿಯ ಹುಡುಗ ಸುಲಲಿತವಾಗಿ ಇಂಗ್ಲಿಷ್ ಮಾತನಾಡುತ್ತಿರುವುದನ್ನು ‘ಅತ್ಯದ್ಭುತ’ ಎಂಬಂತೆ ತೋರಿಸುತ್ತಿದ್ದರು. ಯಾವ ಮೇಷ್ಟ್ರುಗಳೂ ಇಲ್ಲದೆ ಅವನು ಇಂಗ್ಲಿಷ್ ಕಲಿತಿದ್ದಾನೆ ಎಂಬ ವಿವರಗಳು ಬೇರೆ. ಬದುಕಿಗಿಂತ ದೊಡ್ಡ ಮೇಷ್ಟ್ರು ಇಲ್ಲವೆಂಬ ಸಂಗತಿ ಆ ಟಿವಿ ವಾಹಿನಿಯವರಿಗೆ ಗೊತ್ತೇ ಇರಲಿಲ್ಲ. ಅವನು ಇಂಗ್ಲಿಷ್‌ನ್ನು ಎಲ್ಲೂ ಕಲಿತಿರಲಿಲ್ಲ. ಬದಲಿಗೆ ತನ್ನ ಅಗತ್ಯಕ್ಕೋಸ್ಕರ ಇಂಗ್ಲಿಷ್‌ನ್ನು ತನ್ನದಾಗಿಸಿಕೊಂಡಿದ್ದ. ಅಂದರೆ, ಒಂದು ಭಾಷೆಯನ್ನು ಹೇಗೆ ತನ್ನದಾಗಿಸಿಕೊಳ್ಳಬೇಕೋ ಆ ಸಹಜದಾರಿಯಲ್ಲಿ ತನ್ನದಾಗಿಸಿಕೊಂಡಿದ್ದ. ಇಂಗ್ಲಿಷ್‌ನಲ್ಲಿ ಎಂ. ಎ ಮಾಡಿದ ವಿದ್ಯಾರ್ಥಿಗಳು ಒಂದು ವಾಕ್ಯವನ್ನು ಇಂಗ್ಲಿಷ್‌ನಲ್ಲಿ ಆಡಲು ತಡವರಿಸುವಾಗ, ಇವನು ಲೀಲಾಜಾಲವಾಗಿ ಇಂಗ್ಲಿಷ್ ಮಾತನಾಡಲು ಸಾಧ್ಯವಾದುದು, ಕಲಿಯುವುದರಿಂದಲ್ಲ, ಭಾಷೆಯ ಜೊತೆಗೆ ಬೆರೆಯುವುದರಿಂದ ಅಥವಾ ಭಾಷೆಯ ಜೊತೆಗೆ ಬದುಕುವುದರಿಂದ.


 ಇಂತಹ ಸಂದರ್ಭದಲ್ಲಿ ಒಂದು ತಿಂಗಳಲ್ಲಿ ನಿಮಗೆ ಇಂಗ್ಲಿಷ್ ಕಲಿಸುತ್ತೇವೆ ಎಂದು ಹೊರಡುವ ರ್ಯಾಪಿಡೆಕ್ಸ್ ಪುಸ್ತಕಗಳನ್ನು ನೆನಪಿಸಿಕೊಳ್ಲಿ. ಅದನ್ನು ಮುಂದಿಟ್ಟುಕೊಂಡು, ಒಂದೊಂದು ವಾಕ್ಯವನ್ನು ಬಾಯಿಪಾಠ ಕಲಿಯಲು ಯತ್ನಿಸುತ್ತಾ ಒಂದೇ ವಾರದಲ್ಲಿ ರ್ಯಾಪಿಡೆಕ್ಸ್ ಪುಸ್ತಕ ಅಟ್ಟ ಸೇರಿ ಬಿಡುತ್ತಿತ್ತು. ಅದರ ಬದಲಿಗೆ ಸುಮ್ಮನೆ ತೀರಾ ಸಹಜವಾಗಿ ಒಂದಿಷ್ಟು ಇಂಗ್ಲಿಷ್ ಕಾಮಿಕ್ಸ್‌ಗಳನ್ನು ತಂದಿಟ್ಟುಕೊಂಡು, ಸಣ್ಣದೊಂದು ಡಿಕ್ಷನರಿಯನ್ನೂ ಪಕ್ಕಕ್ಕಿಟ್ಟುಕೊಂಡಿದ್ದರೆ ಆರು ತಿಂಗಳಲ್ಲಿ ನಮ್ಮ ಇಂಗ್ಲಿಷ್ ಸುಧಾರಣೆಯಾಗಿ ಬಿಡುತ್ತಿತ್ತೇನೋ.

ಇಂಗ್ಲಿಷ್‌ನ ಒಂದು ವಾಕ್ಯವನ್ನು ನನ್ನ ತಲೆಗೆ ಹೊಗ್ಗಿಸಲು ಬೊಬ್ಬಿಡುತ್ತಿದ್ದ ರೂಫಿನಾ ಟೀಚರ್ ಈಗಲೂ ನನಗೆ ನೆನಪಾಗುತ್ತಾರೆ. ಎಲ್ಲದಕ್ಕೂ ಗೋಯಿಂಗ್, ಕಮಿಂಗ್...ಎಂದು ಇಂಗ್ ಸೇರಿಸುತ್ತಾ ಮಾತನಾಡುವಾಗ ನನ್ನ ಪ್ರಾಂಶುಪಾಲರಾದ ಅಬ್ರಹಾಂ ವರ್ಗೀಸರ ಬಿಪಿ ಜಾಸ್ತಿಯಾಗಿ ‘‘ಎಲವೋ ಇಂಗು ತಿಂದ ಮಂಗ...’’ ಎಂದು ಅಬ್ಬರಿಸುತ್ತಿರುವುದು ನೆನಪಾಗುತ್ತದೆ. ಅವರು ತಮ್ಮ ಶಕ್ತಿ ಮೀರಿ ನಮಗೆ ಇಂಗ್ಲಿಷ್ ಕಲಿಸಲು ಹೆಣಗುತ್ತಿದ್ದರು. ಆದರೆ ಒಂದು ವಾಕ್ಯವೂ ನನ್ನ ತಲೆಗೆ ಹೋಗುತ್ತಿರಲಿಲ್ಲ. ಬಹುಶಃ ಈಗ ಅರ್ಥವಾಗುತ್ತದೆ. ಹೇರುವಿಕೆಯನ್ನು ನಾನು ಬಾಲ್ಯದಲ್ಲಿ ಪ್ರತಿಭಟಿಸುತ್ತಿದೆ. ಆದುದರಿಂದಲೇ ಮಹಾ ಅಶಿಸ್ತಿನ ಹುಡುಗ ಎಂದು ಶಾಲೆಯಲ್ಲಿ ಹೆಸರುವಾಸಿಯಾಗಿದ್ದೆ. ಈ ಕಾರಣಕ್ಕೆ ಅವರ ಇಂಗ್ಲಿಷ್‌ನ್ನು ನನ್ನ ಮನಸ್ಸು ಸ್ವೀಕರಿಸುತ್ತಿರಲಿಲ್ಲ ಎಂದು ಕಾಣುತ್ತದೆ. ಇಂದು ಇಂಗ್ಲಿಷ್‌ನ್ನು ನಾವು ನಮ್ಮ ಮಕ್ಕಳಿಗೆ ಹೇರುವುದನ್ನು ನಿಲ್ಲಿಸಬೇಕಾಗಿದೆ. ಇಂಗ್ಲಿಷ್‌ನ್ನು ಮಾತ್ರವಲ್ಲ, ಯಾವುದೇ ವಿಷಯವನ್ನು ‘ಕಲಿಸುವು’ದನ್ನು ನಿಲ್ಲಿಸಬೇಕು. ಯಾಕೆಂದರೆ ಕಲಿಸುತ್ತಿದ್ದೇವೆ ಎನ್ನುವ ನಮ್ಮ ಭ್ರಮೆ, ಅಹಂಕಾರ ಕಲಿಯುವವರಿಗೆ ಹೇರಿಕೆಯಾಗಿ ಪರಿಣಮಿಸುತ್ತದೆ. ಸಾಧ್ಯವಾದರೆ, ನಾವು ಅವರೊಂದಿಗೆ ಇಂಗ್ಲಿಷ್‌ನಲ್ಲಿ ಪ್ರೀತಿಯಿಂದ ಮಾತನಾಡುತ್ತಾ, ಇಂಗ್ಲಿಷ್ ಮೂಲಕ ಆಟವಾಡುತ್ತಾ ಒಂದೊಂದು ಶಬ್ದವನ್ನು ಪರಿಚಯಿಸುತ್ತಾ ಹೋಗುವುದು ಒಳ್ಳೆಯ ಕ್ರಮ ಎನ್ನಿಸುತ್ತದೆ. ಸಹಜ ದಾರಿ ಎನ್ನಿಸುತ್ತದೆ. ಎಚ್‌ಬಿಓ ಚಾನೆಲ್‌ನಲ್ಲಿ ಇಂಗ್ಲಿಷ್ ಚಿತ್ರ ನೋಡುತ್ತಾ ನೋಡುತ್ತಾ ನನ್ನ ಇಂಗ್ಲಿಷ್‌ನ್ನು ನಾನು ನನಗೆ ತಿಳಿಯದೆಯೇ ತೀರಾ ಸಹಜವಾಗಿ ಸಣ್ಣದಾಗಿ ಸುಧಾರಿಸಿಕೊಂಡಿದ್ದೇನೆ. ಯಾವುದೇ ಭಾಷೆಯ ಅಗತ್ಯ ನಮಗೆ ಬಿತ್ತೆಂದರೆ, ಅದು ಸಹಜವಾಗಿಯೇ ನಮ್ಮದಾಗುತ್ತದೆ. ಅಗತ್ಯವಿಲ್ಲದವರಿಗೆ ಬಲವಂತವಾಗಿ ಭೂರಿಭೂಜನವನ್ನು ಉಣಿಸಿದರೂ ಅವರು ವಾಂತಿಮಾಡಿಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಹಸಿವಿರುವವರಿಗೆ ಗಂಜಿಚಟ್ನಿ ಬಡಿಸಿದರೂ ಗಬಗಬನೆ ಉಣ್ಣುತ್ತಾರೆ. ಉಣ್ಣುವುದು ಒಂದು ಸಹಜಕ್ರಿಯೆ. ಆದುದರಿಂದ ನಾವು ಮಕ್ಕಳಲ್ಲಿ ಮೊದಲು ಹಸಿವನ್ನು ಸೃಷ್ಟಿಸಬೇಕು. ಬಳಿಕವಷ್ಟೇ ಅವರಿಗೆ ಭೂರಿಭೋಜನ ಉಣಿಸುವ ಪ್ರಯತ್ನ ಮಾಡಬಹುದು. 


ಇದೇ ಸಂದರ್ಭದಲ್ಲಿ ಒಂದು ಸಣ್ಣ ಜೋಕು ನೆನಪಾಗತ್ತೆ. ನಗರದ ಹಿರಿಯರೊಬ್ಬರು ಇಂಗ್ಲೆಂಡಿಗೆ ಹೋಗಿ ಬಂದರು. ಅವರು ಗೆಳೆಯರೊಂದಿಗೆ ತನ್ನ ಅನುಭವವನ್ನು ಹಂಚಿಕೊಳ್ಳುತ್ತಿದ್ದರು ‘‘ಇಂಗ್ಲೆಂಡ್‌ನವರು ಎಷ್ಟು ಬುದ್ಧಿವಂತರು ಎಂದರೆ, ಅಲ್ಲಿರುವ ಮೂರು ವರ್ಷದ ಮಗು ಕೂಡ ನಮಗಿಂತ ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತೆ’’

Thursday, November 22, 2012

ಎದೆಯ ಧ್ವನಿಯನ್ನು ಆಲಿಸೋಣ....

ಸಮೂಹದೊಂದಿಗೆ ಸೇರಿ ರಾಕ್ಷಸನಂತಾಡುವ ಮನುಷ್ಯನನ್ನು ನೀವು ಯಾವತ್ತಾದರೂ ಖಾಸಗಿ ಯಾಗಿ ಭೇಟಿಯಾಗಿ ನೋಡಿ. ನಿಮಗೆ ಕೆಲವು ಆಘಾತಕಾರಿಯಾದ ಅಂಶಗಳು ದೊರೆಯುತ್ತವೆ. ಅರೆ! ನಾನು ಈವರೆಗೆ ಓದಿರುವುದು, ಕೇಳಿರುವುದು ಇದೇ ಮನುಷ್ಯನ ಕುರಿತೆ? ಎಂಬ ಅಚ್ಚರಿಗೆ ನೀವು ಒಳಗಾಗುತ್ತೀರಿ. ಗಾಂಧೀಜಿ ಈ ಕಾರಣಕ್ಕೆ ಸಮೂಹಕ್ಕಿಂತಲೂ ಮನುಷ್ಯನನ್ನು ಖಾಸಗಿಯಾಗಿ ಮುಖಾಮುಖಿಯಾಗಲು ಇಷ್ಟ ಪಡುತ್ತಿದ್ದರು. ಆದುದರಿಂದಲೇ, ಅವರು ಎಂತಹ ರಾಕ್ಷಸ ಗುಣದ ಮನುಷ್ಯನನ್ನು ಎದುರಿಸಲೂ ಅಂಜುತ್ತಿರಲಿಲ್ಲ. ಯಾಕೆಂದರೆ ಒಂಟಿ ಮನುಷ್ಯನ ಕುರಿತಂತೆ ಅವರಿಗೆ ಅಗಾಧ ಭರವಸೆಯಿತ್ತು. ಹೃದಯದ ಜೊತೆಗೆ ಮಾತನಾಡುವುದು ಅವರಿಗೆ ಕರತಲಾಮಲಕ ವಾಗಿತ್ತು.
   
ನಾನು ಮಂಗಳೂರಿನಲ್ಲಿ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿರುವಾಗ ಒಂದು ಘಟನೆ ನಡೆಯಿತು. ಸುರತ್ಕಲ್ ಗಲಭೆಯ ಕುರಿತಂತೆ ಮಂಗಳೂರಿನಲ್ಲಿ ಸದಾಶಿವ ಆಯೋಗ ತನಿಖೆ, ವಿಚಾರಣೆ ನಡೆಸುತ್ತಿತ್ತು. ನಾನು ಪತ್ರಿಕೆಯೊಂದಕ್ಕೆ ಅದರ ವರದಿಯನ್ನು ಮಾಡಲು ತೆರಳಿದ್ದೆ. ಪತ್ರಕರ್ತರ ಗ್ಯಾಲರಿಯಲ್ಲಿ ಕಿಕ್ಕಿರಿದ ಜನ. ಒಬ್ಬ ಮನುಷ್ಯ ನನ್ನ ಪಕ್ಕದಲ್ಲೇ ನಿಂತಿದ್ದ. ನಾನು ಅವರಿಗೆ ಇದ್ದುರದಲ್ಲೇ ತುಸು ಜಾಗ ಮಾಡಿಸಿ, ನನ್ನ ಪಕ್ಕದಲ್ಲೇ ಕುಳ್ಳಿರಿಸಿದೆ. ವಿಚಾರಣೆ ನಡೆಯುತ್ತಾ ನಡೆಯುತ್ತಾ ಮಧ್ಯಾಹ್ನವಾಯಿತು. ಒಳಗಿನ ಸೆಕೆಯಿಂದಲೂ, ವಿಚಾರಣೆಯಿಂದಲೂ ನಾವೆಲ್ಲರೂ ಕುದ್ದು ಹೋಗಿದ್ದೆವು. ಹೊರಗೆ ಬಂದದ್ದೇ ತಣ್ಣನೆಯ ಗಾಳಿ. ‘ಉಸ್ಸಪ್ಪ’ ಎನ್ನುವಾಗ ನನ್ನ ಪಕ್ಕದಲ್ಲಿ ಕುಳಿತಿದ್ದ ಆ ಮನುಷ್ಯ ನನ್ನನ್ನು ನೋಡಿ ನಕ್ಕಿತು. ‘‘ಪತ್ರಕರ್ತರ?’’ ಎಂದು ಕೇಳಿತು. ಹೌದು ಎಂದೆ. ಸರಿ, ಅದು ಇದು, ಮಾತನಾಡುತ್ತಾ, ಅವನು ತನ್ನ ಹೆಸರನ್ನೂ ಹೇಳಿದ. ನಾನು ‘ನನ್ನ’ ಹೆಸರನ್ನೂ ಪ್ರತಿಯಾಗಿ ವಿನಿಮಯಿಸಿದೆ. ‘‘ಬನ್ನಿ ಊಟಕ್ಕೆ ಹೋಗುವ’’ ಎಂದ. ಅವನದೇ ಬೈಕ್‌ನಲ್ಲಿ ಕುಳಿತು ಊಟಕ್ಕೆ ಹೋದೆ. ಹೊಟೇಲಲ್ಲಿ ಜೊತೆಯಾಗಿ ಊಟ ಮಾಡಿದೆವು. ದುಡ್ಡು ನಾನು ಪಾವತಿಸಿದೆ. ಅಪರಾಹ್ನ ಮತ್ತೆ ಆಯೋಗದ ವಿಚಾರಣೆಯ ಸಮಯ ಆರಂಭ ವಾಯಿತು. ನಾನು ಪತ್ರಕರ್ತರ ಜಾಗದಲ್ಲಿ ಹೋಗಿ ಕೂತೆ. ಆದರೆ ಆ ಮನುಷ್ಯ ಕಾಣಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ನೋಡಿದರೆ ಅವನು ಕಟಕಟೆಯಲ್ಲಿ ನಿಂತಿದ್ದ. ನನ್ನ ಎದೆ ಧಗ್ ಎಂದಿತು. ಸುರತ್ಕಲ್ ಗಲಭೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ, ಕುಖ್ಯಾತ ಗೂಂಡ, ಸಂಘಪರಿವಾರದ ವ್ಯಕ್ತಿ ಅವನಾಗಿದ್ದ. ಅವನ ಜೊತೆಗೆ ನಾನು ಉಂಡಿದ್ದೆ. ಮಾತನಾಡಿದ್ದೆ. ನಗುವನ್ನು ಹಂಚಿಕೊಂಡಿದ್ದೆ. ಆದರೆ ಅವೆಲ್ಲವನ್ನೂ ಚೆಲ್ಲಾಪಿಲ್ಲಿಗೊಳಿಸುವಂತೆ... ಇದೀಗ ನನ್ನ ಮುಂದೆ ಬೇರೆಯೇ ವ್ಯಕ್ತಿಯಾಗಿ ನಿಂತಿದ್ದಾನೆ. ಇಲ್ಲಿ ನಾನು ಅವನ ಯಾವ ಮುಖವನ್ನು ಸ್ವೀಕರಿಸಬೇಕು? ಬಹುಶಃ ಅವನೀಗ ಸಾರ್ವಜನಿಕ ವ್ಯಕ್ತಿಯಾಗಿ, ಸಮೂಹದ ವ್ಯಕ್ತಿಯಾಗಿ ನಿಂತಿದ್ದಾನೆ.

ಬಾಳಠಾಕ್ರೆಯ ಕೊನೆಯ ಐದು ವರ್ಷಗಳಲ್ಲಿ ಅವನನ್ನು ಚಿಕಿತ್ಸೆ ಉಪಚರಿಸಿದ್ದ ಡಾಕ್ಟರ್ ಒಬ್ಬ ಮುಸ್ಲಿಮ್ ಆಗಿದ್ದ. ಅವನ ಹೆಸರು ಡಾ. ಜಲೀಲ್. ಅವನಿಗೆ ಮಾತ್ರವಲ್ಲ, ಅವನ ಮಗನಿಗೂ ಮೆಚ್ಚಿನ ವೈದ್ಯನಾಗಿದ್ದ ಡಾಕ್ಟರ್ ಜಲೀಲ್. ಒಬ್ಬ ಡಾಕ್ಟರ್ ನನ್ನು ನಾವು ಮುಸ್ಲಿಮ್ ಡಾಕ್ಟರ್, ಹಿಂದೂ ಡಾಕ್ಟರ್ ಎಂದು ಕರೆಯುವುದು ತಪ್ಪು. ಅಮಾನವೀಯ. ಬಾಳಾಠಾಕ್ರೆಗೂ ಇದು ಚೆನ್ನಾಗಿ ಗೊತ್ತಿತ್ತು. ಡಾಕ್ಟರ್‌ಗಳಲ್ಲಿ ಮುಸ್ಲಿಮ್-ಹಿಂದೂ ಎಂದು ಇರುವುದಿಲ್ಲ. ಬರೇ ಡಾಕ್ಟರ್ ಎನ್ನುವ ಜಾತಿ, ಧರ್ಮ ಮಾತ್ರವಿರುತ್ತದೆ. ಇಷ್ಟು ಗೊತ್ತಿರುವ ಠಾಕ್ರೆ ಬೀದಿಗಳಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದ ಡ್ರೈವರ್‌ಗಳಲ್ಲಿ ಬಿಹಾರಿ-ಕನ್ನಡಿಗ ಎಂದು ವರ್ಗ ಮಾಡುತ್ತಿದ್ದ. ಒಬ್ಬ ಚಾಲಕನ ಧರ್ಮ ಕಾರ್ ಚಾಲನೆ ಮಾಡುವುದಷ್ಟೇ ಆಗಿರುತ್ತದೆ. ಅವನಲ್ಲಿ ಬಿಹಾರಿ, ಕನ್ನಡ ಚಾಲಕ, ಅಥವಾ ಹಿಂದೂ- ಮುಸ್ಲಿಮ್ ಚಾಲಕ ಎಂದಿರುವುದಿಲ್ಲ. ಹಾಗೆಯೇ ಮುಂಬಯಿ ನಗರದ ಬೀದಿ ವ್ಯಾಪಾರಿಗಳಿಗೂ ಧರ್ಮವಿರುವುದಿಲ್ಲ. ಹಿಂದೂ ವ್ಯಾಪಾರಿ, ಮುಸ್ಲಿಮ್ ವ್ಯಾಪಾರಿ, ತಮಿಳು ವ್ಯಾಪಾರಿ, ಬಿಹಾರದ ವ್ಯಾಪಾರಿ ಎಂದು ಯಾರನ್ನೂ ಕರೆಯುವುದಿಲ್ಲ. ಇದು ಠಾಕ್ರೆಗೆ ಖಾಸಗಿಯಾಗಿ ಚೆನ್ನಾಗಿ ಗೊತ್ತಿತ್ತು. ಆದುದರಿಂದಲೇ ಅವನ ಖಾಸಗಿ ವೈದ್ಯರಾಗಿ ಕೊನೆಯ ವರ್ಷಗಳಲ್ಲಿ ಒಬ್ಬ ‘ಮುಸ್ಲಿಮ್’ ವೈದ್ಯ ಚಿಕಿತ್ಸೆ ನೀಡಲು ಸಾಧ್ಯ ವಾಯಿತು.
 ಠಾಕ್ರೆಯ ಕುರಿತಂತೆ ಇನ್ನೊಂದು ಉದಾಹರಣೆ ಯನ್ನು ನೀಡಬಹುದು. 80ರ ದಶಕದಲ್ಲಿ ಠಾಕ್ರೆ ತಮಿಳರು ಮತ್ತು ಕನ್ನಡಿಗರ ವಿರುದ್ಧ ಶಂಖ ಊದಿದ ಸಮಯ. ಆದರೆ ಆ ಸಂದರ್ಭದಲ್ಲಿ ಠಾಕ್ರೆಯ ಎಡಬಲದ ಅಂಗರಕ್ಷಕರು ಕನ್ನಡಿಗರು, ಅದರಲ್ಲೂ ಮುಖ್ಯವಾಗಿ ತುಳುನಾಡಿನ ಬಂಟರಾಗಿದ್ದರು. ಅಲ್ಲಿ ಠಾಕ್ರೆಗೆ ಭಾಷೆ ಅಡ್ಡಿ ಬರಲಿಲ್ಲ. ಯಾಕೆಂದರೆ ಅದು ಠಾಕ್ರೆಯ ಖಾಸಗಿ ಬದುಕು. ಅಲ್ಲಿ ಅವರ ಮನಸ್ಸು ಹೇಳುವುದಷ್ಟೇ ಮುಖ್ಯ. ಸಾರ್ವಜನಿಕವಾಗಿ ಆಡುವ ರಾಜಕಾರಣ ಯಾವ ಪ್ರಯೋಜನಕ್ಕೂ ಬರುವು ದಿಲ್ಲ. ಪಾಕಿಸ್ತಾನ-ಕ್ರಿಕೆಟ್ ಮ್ಯಾಚ್ ಸಂದರ್ಭ ದಲ್ಲಿ ಪಿಚ್ ಅಗೆಸಿದ ಠಾಕ್ರೆಯೇ, ‘ಪುಂಡ’ ಕ್ರಿಕೆಟಿಗನೆಂದೇ ಹೆಸರಾದ ಪಾಕಿಸ್ತಾನದ ಮಿಯಾಂದಾದ್ ಅವರನ್ನು ಮನೆಗೆ ಕರೆಸಿ ಆತಿಥ್ಯ ನೀಡಿದ್ದನ್ನೂ ಇಲ್ಲಿ ನೆನಪಿಸಬಹುದಾಗಿದೆ.
  
ಇತ್ತೀಚೆಗೆ ನೀವು ಪತ್ರಿಕೆಗಳಲ್ಲಿ ಓದುತ್ತಿರಬ ಹುದು. ಕರಾವಳಿಯಲ್ಲಿ ಒಬ್ಬ ಹಿಂದೂ ವಿದ್ಯಾರ್ಥಿ ಮುಸ್ಲಿಮ್ ವಿದ್ಯಾರ್ಥಿನಿಯೊಂದಿಗೆ ಅಥವಾ ಒಬ್ಬ ಮುಸ್ಲಿಮ್ ವಿದ್ಯಾರ್ಥಿ ಹಿಂದೂ ವಿದ್ಯಾರ್ಥಿನಿಯ ಜೊತೆಗೆ ಮಾತನಾಡಿದರೆ ಅಥವಾ ಪಿಕ್‌ನಿಕ್‌ಗೆ ತೆರಳಿದರೆ ಸಾಕು ಸಂಘ ಪರಿವಾರ ಕೆರಳಿ ನಿಲ್ಲುತ್ತದೆ. ಅಮಾಯಕ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಲ್ಲೆ ನಡೆಸುತ್ತದೆ. ಅಂತರ್ಧಮೀಯ ಮದುವೆ ಇಡೀ ಊರಿಗೆ ಕಿಚ್ಚು ಹಚ್ಚುವಂತಹ ಸನ್ನಿವೇಶ ಕರಾವಳಿಯಲ್ಲಿದೆ. ಸಾರ್ವಜನಿಕ ಸಮಾವೇಶದಲ್ಲಿ ಸಂಘಪರಿವಾರ ನಾಯಕರ ಮುಖ್ಯ ಅಜೆಂಡಾವೇ ‘ಹಿಂದೂ ಹೆಣ್ಣು ಮಕ್ಕಳನ್ನು ಅಪಹರಿಸಿ, ಮುಸ್ಲಿಮರು ಮದುವೆಯಾಗುತ್ತಾರೆ’ ಎಂಬುದಾಗಿದೆ. ಇಂತಹದೇ ವಿಕಾರ ರಾಜಕೀಯವನ್ನು ಮಾಡುತ್ತಾ ಠಾಕ್ರೆ ತನ್ನ ಪಕ್ಷವನ್ನೂ ಕಟ್ಟಿದ್ದರು. ಆದರೆ ಅವರ ಖಾಸಗಿ ಬದುಕಿನ ಪುಟಗಳಲ್ಲಿ ಮಾತ್ರ, ನಾವು ಬೇರೆಯದೇ ಆದ ನಂಬಿಕೆಯನ್ನು ಓದುತ್ತೇವೆ. ಅದು ಅವರ ಸಾರ್ವಜನಿಕ ವಿಕಾರ ಮುಖಕ್ಕಿಂತ ಭಿನ್ನವಾದ ಆದ್ರ‰ ಮುಖ. ಅವರು ತನ್ನ ಮೊಮ್ಮಗಳನ್ನು ಆಕೆ ಪ್ರೀತಿಸಿದ ಮುಸ್ಲಿಮ್ ಯುವಕನಿಗೆ ದಾರೆಯೆರೆದುಕೊಟ್ಟರು. ಬಾಳಾ ಠಾಕ್ರೆಯವರ ಹಿರಿಯ ಮಗ ಬಿಂದುಮಾಧವ ಅವರ ಪುತ್ರಿ ನೇಹಾ ಅವರು ಮನಾನ್ ಎಂಬ ಮುಸ್ಲಿಮ್ ಹುಡುಗನನ್ನು ಪ್ರೀತಿಸಿದಳು. ಈ ಮನಾನ್‌ನ ತಂದೆ ಇನ್ನಾರೂ ಅಲ್ಲ. ಬಿಂದು ಮಾಧವ ಮತ್ತು ರಾಜ್ ಠಾಕ್ರೆಯವರ ಮೆಚ್ಚಿನ, ಹಿರಿಯ ಗೆಳೆಯನ ಮಗ. ತನ್ನ ಮೊಮ್ಮಗಳು ಮುಸ್ಲಿಮ್ ಹುಡುಗನನ್ನು ಪ್ರೀತಿಸಿದಳು ಎಂದು ಠಾಕ್ರೆ ಸಾರ್ವಜನಿಕ ಬೀದಿಯಲ್ಲಿ ಗರ್ಜಿಸಲಿಲ್ಲ. ಅಥವಾ ಶಿವಸೈನಿಕ ಗೂಂಡಾಗಳನ್ನು ಬಿಟ್ಟು ಹುಡುಗನನ್ನೋ, ಹುಡುಗನ ಕುಟುಂಬವನ್ನೋ ಥಳಿಸಲಿಲ್ಲ. ಲವ್‌ಜಿಹಾದ್ ಎಂದು ಬಂಬ್ಡ ಬಜಾಯಿಸಲಿಲ್ಲ. ರಾಜ್‌ಠಾಕ್ರೆ ಕುಟುಂಬ ಸೇರಿದಂತೆ ಶಿವಸೇನೆಯ ಹಲವಾರು ಮುಖಂಡರು ತಾಜ್‌ಹೊಟೇಲ್‌ನಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಿದ್ದರು. ಬಾಳಾಠಾಕ್ರೆ ಈ ಮದುವೆಯಲ್ಲಿ ಸಾರ್ವಜನಿಕವಾಗಿ ಭಾಗ ವಹಿಸಲಿಲ್ಲ ಎನ್ನುವ ಮಾತಿದೆ. ಆದರೆ ಖಾಸಗಿಯಾಗಿ ಮಾತೋಶ್ರೀಯಲ್ಲಿ ಠಾಕ್ರೆ ವಧೂವರರನ್ನು ಆಶೀರ್ವದಿಸಿದ್ದರು. ಇದು ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾಯಿತು.

ಪ್ರೀತಿ, ಪ್ರೇಮ ಎಂತಹ ಗಡಿ, ಕೋಟೆ ಗಳನ್ನೂ ನುಚ್ಚು ನೂರು ಮಾಡಬಹುದು ಎನ್ನುವುದಕ್ಕೆ ಇನ್ನೊಂದು ಉದಾಹರಣೆ, ಬಿಜೆಪಿಯ ಸರ್ವೋಚ್ಚ ನೇತಾರ ಅಡ್ವಾಣಿ. ಇವರು ಸಿಂಧಿ. ಇವರ ಸೋದರ ತಂಗಿ ಮದುವೆಯಾಗಿರುವುದು ಒಬ್ಬ ಮುಸ್ಲಿಮ್ ಹುಡುಗನನು.್ನ ವಿಶೇಷವೆಂದರೆ ಈ ಮದುವೆಗೆ ಅಡ್ವಾಣಿ ಖುದ್ದಾಗಿ ಹಾಜರಾಗಿ, ವಧೂವರರನ್ನು ಹಾರೈಸಿದ್ದರು. ಈ ಮದುವೆ ಇಡೀ ಕುಟುಂಬ ಒಂದಾಗಿ ಒಪ್ಪಿ ನಡೆಸಿದ ಆರೇಂಜ್‌ಡ್ ಮದುವೆಯಾಗಿತ್ತು. ಇಲ್ಲಿ ಹಿಂದೂ ಮುಸ್ಲಿಮ್ ಎನ್ನುವ ಯಾವುದೇ ಗಡಿಗಳಿರಲಿಲ್ಲ. ಯಾರಲ್ಲೂ ದ್ವೇಷ, ಸಿಟ್ಟು ಇರಲಿಲ್ಲ. ಎಲ್ಲವನ್ನೂ ‘ಪ್ರೀತಿ’ ಅಳಿಸಿ ಹಾಕಿತ್ತು. ಎಲ್.ಕೆ. ಅಡ್ವಾಣಿಯ ಡ್ರೈವರ್‌ಗಳಲ್ಲಿ ಮುಸ್ಲಿಮರಿದ್ದರು. ಆದರೆ ಇದೇ ಸಂದರ್ಭದಲ್ಲಿ, ಕೇರಳದಲ್ಲಿ ಅಡ್ವಾಣಿ ಆಗಮಿಸಿದಾಗ, ಭದ್ರತೆಗಾಗಿ ಇಲ್ಲಿನ ಸರಕಾರ ಇಬ್ಬರು ಮುಸ್ಲಿಮ್ ಚಾಲಕರನ್ನು ತಂಡದಿಂದ ತೆಗೆದು ಹಾಕಿತು.

ಗೋಹತ್ಯೆಯನ್ನು ರಾಜಕಾರಣ ಮಾಡಿಯೇ ಬಿಜೆಪಿ ಮತ್ತು ಸಂಘಪರಿವಾರ ಸಾಕಷ್ಟು ಮತಗಳನ್ನು ಬಾಚಿಕೊಂಡಿದೆ. ಆದರೆ ಈ ದೇಶದಲ್ಲಿ ಅತ್ಯಧಿಕ ಗೋಮಾಂಸ ರಫ್ತಾಗಿರು ವುದು ಎನ್‌ಡಿಎ ಆಡಳಿತ ಕಾಲದಲ್ಲಿ. ಆಗ ಈ ದೇಶದ ಪ್ರಧಾನಿಯಾಗಿದ್ದವರು ಅಟಲ್ ಬಿಹಾರಿ ವಾಜಪೇಯಿ. ಸಾರ್ವ ಜನಿಕವಾಗಿ ಗೋವು ನಿಷೇಧ ವಾಗಿದ್ದರೂ, ಖಾಸಗಿ ಯಾಗಿ ಅಟಲ್ ಬಿಹಾರಿ ವಾಜಪೇಯಿ ಗೋಮಾಂಸ ತಿನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿತ್ತು. ಈ ಕುರಿತಂತೆಯೇ ಒಮ್ಮೆ ವಿದೇಶದಲ್ಲಿ ಅಟಲ್ ಜೊತೆಗೆ ಯಾರೋ ಕೇಳಿದ್ದರಂತೆ ‘‘ಅಟಲ್‌ಜೀ...ದೇವತೆಗಳು ಆವಾಹಿಸಿಕೊಂಡಿ ರುವ ಗೋಮಾಂಸವನ್ನು ನೀವು ಭಕ್ಷಿಸುತ್ತಿದ್ದೀರಿ...’’
ಅದಕ್ಕೆ ಅಷ್ಟೇ ಲವಲವಿಕೆಯಿಂದ ಉತ್ತರಿಸಿದ ಅಟಲ್ ಬಿಹಾರಿ ವಾಜಪೇಯಿ ‘‘ಭಾರತದ ಗೋವುಗಳಲ್ಲಿ ಮಾತ್ರ ದೇವತೆಗಳಿರುತ್ತವೆ. ಇದು ವಿದೇಶಿ ಗೋವು’’ ಎಂದು ನಕ್ಕರಂತೆ. ಹೀಗೆ ಮಾತನಾಡುವಾಗ ಅವರ ಮುಂದೆ ಸಾರ್ವಜನಿಕ ವೇದಿಕೆಯಿರಲಿಲ್ಲ. ಲಕ್ಷಾಂತರ ಮತದಾರರಲಿಲ್ಲ. ಅದು ಅವರ ಖಾಸಗಿ ಕ್ಷಣವಾಗಿತ್ತು. ಅವರ ಅತ್ಯಂತ ಖಾಸಗಿ ಮಾತಾಗಿತ್ತು. ಸಾರ್ವಜನಿಕ ಸಮಾರಂಭದಲ್ಲಿ ನಾವು ನಮಗೆ ಬೇಕಾದುದನ್ನು ಮಾತನಾಡುವುದಕ್ಕಿಂತ, ಸಾರ್ವಜನಿಕರಿಗೆ ಬೇಕಾದುದನ್ನೇ ಮಾತನಾಡಬೇಕಾದ ಅನಿವಾರ್ಯತೆ ಇರುತ್ತದೆ.

ಚಿದಾನಂದಮೂರ್ತಿ ಕನ್ನಡದ ಖ್ಯಾತ ಚಿಂತಕರು. ಆದರೆ ಕಳೆದ ಎರಡು ದಶಕಗಳಿಂದ ಅವರು ಸಂಶೋಧನೆಗೆ ರಾಜೀನಾಮೆ ನೀಡಿ, ಅಪ್ಪಟ ಸಂಘಪರಿವಾರ ಕಾರ್ಯಕರ್ತರಾಗಿ ಕೆಲಸ ಮಾಡತೊಡಗಿದ್ದಾರೆ. ಅದರ ಹಿಂದೆ ಯಾವ ರಾಜಕೀಯ ಉದ್ದೇಶವಿದೆಯೋ, ಮುಸ್ಲಿಮರ ವಿರುದ್ಧ ದ್ವೇಷ ಕಾರುವುದನ್ನೇ ಅವರು ತನ್ನ ಬದುಕಿನ ಪರಮ ಗುರಿಯಾಗಿಸಿ ಕೊಂಡಿದ್ದಾರೆ. ಇಂಥವರ ಜೀವನದಲ್ಲಿ ಒಬ್ಬ ಮುಸ್ಲಿಮ್ ಬಹುಮುಖ್ಯ ಪಾತ್ರ ವಹಿಸಿದ್ದ ಎನ್ನುವುದನ್ನು ನೀವು ನಂಬುತ್ತೀರ? ಇದನ್ನು ಸ್ವತಃ ಚಿದಾನಂದಮೂರ್ತಿಯವರೇ ಹಿಂದೆ ಹಂಚಿ ಕೊಂಡಿದ್ದರು.
ಈ ಚಿದಾನಂದಮೂರ್ತಿಯವರು ಒಮ್ಮೆ ಜೀವನದಲ್ಲಿ ತೀವ್ರ ಖಿನ್ನತೆಗೊಳಗಾಗಿ, ಆತ್ಮಹತ್ಯೆಗೆ ಯತ್ನಿಸಿದ್ದರು.
ಕನ್ನಡದ ಭಾಷೆಯ ಕುರಿತಂತೆ, ಭವಿಷ್ಯದ ಕುರಿತಂತೆ ತೀವ್ರ ಭ್ರಮನಿರಸನಕ್ಕೊಳಗಾಗಿ, ಸುದೀರ್ಘ ಪತ್ರವೊಂದನ್ನು ಬರೆದಿಟ್ಟು ಅವರು ತುಂಗಾ ನದಿಗೆ ಹಾರಿದರು. ಈ ಸಂದರ್ಭದಲ್ಲಿ ಅವರು ಸತ್ತೇ ಹೋಗಬೇಕಾಗಿತ್ತು. ಆಗ ಒಬ್ಬ ಅಂಬಿಗ ಅವರ ಪ್ರಾಣವನ್ನು ರಕ್ಷಿಸಿದ. ಆ ಅಂಬಿಗ ಒಬ್ಬ ಮುಸಲ್ಮಾನನಾಗಿದ್ದ. ಸದ್ಯಕ್ಕೆ ಮುಸ್ಲಿಮರನ್ನು ಶತಾಯಗತಾಯ ದ್ವೇಷಿಸುತ್ತಿರುವ ಚಿದಾನಂದಮೂರ್ತಿ ಆ ಅಂಬಿಗನ ವಿರುದ್ಧ ಈ ಮೂಲಕ ಸೇಡು ತೀರಿಸುತ್ತಿದ್ದಾರೆಯೇ ಎಂಬ ಅನುಮಾನ ನನ್ನನ್ನು ಆಗಾಗ ಕಾಡಿದ್ದಿದೆ. ಚಿದಾನಂದಮೂರ್ತಿಯ ಬದುಕಿನ ಈ ಕತೆಯನ್ನು ನಾನು ಒಬ್ಬ ಮಿತ್ರರಿಗೆ ಹೇಳಿದಾಗ, ಆತ ಸಿಟ್ಟನ್ನು ನಟಿಸುತ್ತಾ ಹೇಳಿದ್ದ ‘‘ಎಲ್ಲಿದ್ದಾನೆ ಆ ಮುಸ್ಲಿಮ್ ಅಂಬಿಗ. ನಾವು ಮೊದಲು ಅವನಿಗೊಂದು ಪಾಠ ಕಲಿಸಬೇಕಾಗಿದೆ’’ ಸಾರ್ವಜನಿಕವಾಗಿ ಮುಸ್ಲಿಮರ ಕುರಿತಂತೆ ಅತ್ಯಂತ ಕಠೋರವಾಗಿ ರಾಜಕಾರಣ ಮಾಡುತ್ತಿರುವ ಚಿದಾನಂದ ಮೂರ್ತಿ, ಖಾಸಗಿಯಾಗಿಯೂ ಅಷ್ಟೇ ಕಟುವಾಗಿ ಮುಸ್ಲಿಮರನ್ನು ದ್ವೇಷಿಸುತ್ತಾರೆಯೆ? ಈ ಕುರಿತಂತೆ ನನಗೆ ಅನುಮಾನವಿದೆ.

ಸಂಘಪರಿವಾರ ಹೇಳುವಂತೆ ಪಾಕಿಸ್ತಾನಕ್ಕೆ ಕಾರಣ ಮಹಮ್ಮದ್ ಅಲಿ ಜಿನ್ನಾ. ಇವರ ಎದೆಯ ಒಳಬಾಗಿಲನ್ನು ತಟ್ಟಿದರೆ ತೆರೆದುಕೊಳ್ಳುವ ಅಚ್ಚರಿಗಳೋ ನಂಬಲು ಅಸಾಧ್ಯವಾದಂತಹವುಗಳು. ಜಿನ್ನಾ ಸಾಹೇಬರ ಅಜ್ಜನ ಹೆಸರು ಪೂಂಜ ಗೋಕುಲ್ ದಾಸ್ ಮೇಘ್‌ಜಿ. ಇವರು ಹಿಂದೂ ಭಾಟಿಯಾ ರಜ್‌ಪೂತ್. ಬಳಿಕ ಇವರು ಇಸ್ಲಾಂಗೆ ಮತಾಂತರವಾದರು. ಕಟ್ಟಾ ಮುಸ್ಲಿಂ ಎಂದು ಎಲ್ಲರೂ ನಂಬಿರುವ ಜಿನ್ನಾ ಅವರ ಪತ್ನಿಯ ಹೆಸರು ರತ್ನಾಬಾಯಿ. ಈಕೆ ಪಾರ್ಸಿ. ಇವರ ಮಗ ಖ್ಯಾತ ಉದ್ಯಮಿ ನುಸ್ಲುವಾಡಿಯಾ. ಇವರು ಭಾರತೀಯರಲ್ಲಿ ಒಂದಾಗಿ ಬಿಟ್ಟಿದ್ದಾರೆ. ಅಂದ ಹಾಗೆ ಅಪ್ಪಟ್ಟ ಪಾಶ್ಚಿಮಾತ್ಯ ಅನುಕರಣೆಯ ವ್ಯಕ್ತಿ ಜಿನ್ನಾ. ಇವರು ನಮಾಝ್ ಮಾಡುವುದು ತೀರಾ ಅಪರೂಪವಾಗಿತ್ತು. ಮದ್ಯ ಇವರಿಗೆ ತುಂಬಾ ಪ್ರೀತಿ. ಹಂದಿಮಾಂಸವೂ ಇವರ ಇಷ್ಟದ ಆಹಾರವಾಗಿತ್ತು ಎಂದು ಆಪ್ತರು ಹೇಳುತ್ತಾರೆ. ಗಾಂಧೀಜಿಗೆ ‘ಬಾಲ’ವಾಗಿ ಸೇರಿದ್ದ ‘ಮಹಾತ್ಮ’ ಎಂಬ ಪದವನ್ನು ದಿಟ್ಟವಾಗಿ ನೀವಾಳಿಸಿ ತೆಗೆದವರು ಜಿನ್ನಾ. ಸಭೆಯೊಂದರಲ್ಲಿ ಮಹಾತ್ಮಗಾಂಧಿಯ ಬಳಿಕ ಮಾತನಾಡುವಾಗ ಜಿನ್ನಾ ದಿಟ್ಟವಾಗಿ ‘‘ಮಿ. ಗಾಂಧಿ’ ಎಂದು ಕರೆಯುತ್ತಾರೆ. ಸೇರಿದ ಜನರೆಲ್ಲ ಇದನ್ನು ಪ್ರತಿಭಟಿಸಿ, ಮಹಾತ್ಮಗಾಂಧಿ ಎಂದು ಕರೆಯಲು ಒತ್ತಾಯಿಸುತ್ತಾರೆ. ಆದರೆ ಅದನ್ನು ಗಟ್ಟಿಯಾಗಿ ಅಲ್ಲಗಳೆದ ಜಿನ್ನಾ ‘ಮಿ. ಗಾಂಧಿ’ ಎಂದೇ ಕರೆದು ತನ್ನ ಮಾತನ್ನು ಮುಂದುವರೆಸುತ್ತಾರೆ.

 ವಿಪರ್ಯಾಸವನ್ನು ಗಮನಿಸಿ. ಇಂದು ಮದ್ರಸಗಳನ್ನು ಸಂಘಪರಿವಾರ ಸಹಿತ ಬಿಜೆಪಿ ನಾಯಕರು ಕಟುವಾಗಿ ಟೀಕಿಸುತ್ತಾರೆ. ಮದ್ರಸ ದೇಶದ್ರೋಹಿಗಳನ್ನು ಸೃಷ್ಟಿಸುತ್ತಿದೆ ಎಂದು ಅನುಮಾನಿಸುತ್ತಿದ್ದಾರೆ. ಸ್ವಾತಂತ್ರಪೂರ್ವದಲ್ಲಿ ಬ್ರಿಟಿಷ ವಿರುದ್ಧ ಹೋರಾಡಿದ ಮುಸ್ಲಿಮರಲ್ಲಿ ಹೆಚ್ಚಿನವರು ಮದ್ರಸದಿಂದ ಬಂದ ವಿದ್ಯಾರ್ಥಿಗಳು ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಜಿನ್ನಾ ಮದ್ರಸದ ವಿದ್ಯಾರ್ಥಿಯಾಗಿರಲಿಲ್ಲ. ಅವನು ಅಪ್ಪಟ ಪಾಶ್ಚಿಮಾತ್ಯ ದೃಷ್ಟಿವುಳ್ಳ ನಾಯಕ. ವೌಲಾನ ಅಬುಲ್ ಕಲಾಂ ಅಝಾದ್ ಅಪ್ಪಟ ಮದ್ರಸದಿಂದ ಬಂದ, ಇಸ್ಲಾಮಿ ವಿದ್ವಾಂಸ. ಆದರೆ ಜಿನ್ನಾ ಪಾಕಿಸ್ತಾನದ ಜೊತೆಗೆ ನಿಂತರು. ಆಝಾದ್ ಭಾರತದ ಜೊತೆಗೆ ನಿಂತರು. ಎಷ್ಟೆಂದರೆ, ಗಾಂಧಿಯ ಪಕ್ಕದಲ್ಲಿ ಆಝಾದ್ ಅವರನ್ನು ಕಲ್ಪಿಸಿಕೊಳ್ಳದೆ ಗಾಂಧಿಯ ಚಿತ್ರ ಪೂರ್ತಿಯಾಗುವುದಿಲ್ಲ ಎನ್ನುವವರೆಗೆ.

ಜಿನ್ನಾ ಪಾಕಿಸ್ತಾನವನ್ನು ಪಡೆದದ್ದು ಮುಸ್ಲಿಂ ಮತಾಂಧತೆಯ ಮೂಲಕ ಅಲ್ಲ. ಕೇವಲ ಒಂದು ಟೈಪ್‌ರೈಟರ್ ಮಶಿನ್ ಮೂಲಕ ಎನ್ನುವ ಹೇಳಿಕೆ ಈಗಾಗಲೇ ಜನಜನಿತವಾಗಿದೆ. ಸಂದರ್ಭವನ್ನಷ್ಟೇ ಅವರು ಬಳಸಿಕೊಂಡರು. ಪಾಕಿಸ್ತಾನ ನಿರ್ಮಾಣ ಸಂದರ್ಭದಲ್ಲಿ ಅವರಿಗೆ ಅದು ಮುಸ್ಲಿಮ್ ಮೂಲಭೂತವಾದಿಗಳ ಕೈ ಸೇರಬೇಕೆಂಬ ಯಾವ ಇಚ್ಛೆಯೂ ಇರಲಿಲ್ಲ. ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಬರೆದದ್ದೇ ಒಬ್ಬ ಭಾರತೀಯ. ಹಿಂದೂ. ಜಿನ್ನಾ ಅವರ ಆರಂಭದ ಭಾಷಣವೇ ಅವರ ಒಳಗಿನ ತಳಮಳವನ್ನು ಸೂಚ್ಯವಾಗಿ ಹೇಳುತ್ತದೆ. ಇತ್ತೀಚೆಗೆ ಅಡ್ವಾಣಿ ಪಾಕಿಸ್ತಾನಕ್ಕೆ ಹೋದಾಗ ಅವರು ಬಹುಶಃ ಜಿನ್ನಾ ಅವರ ಎದೆಯ ಖಾಸಗಿ ಬಾಗಿಲನ್ನು ತಟ್ಟಿದರು. ಜಿನ್ನಾ ಅವರನ್ನು ಸೆಕ್ಯುಲರ್ ಎಂದು ಕರೆಯುವ ಮೂಲಕ, ಇಡೀ ಪಾಕಿಸ್ತಾನ ಅವರನ್ನು ಮಾದರಿಯಾಗಿಟ್ಟುಕೊಂಡು ಸೆಕ್ಯುಲರ್ ದೇಶವಾಗಬೇಕು ಎಂಬ ಆಶಯ ಅಡ್ವಾಣಿ ಅವರ ಬಳಿಯಿತ್ತು. ಈ ಮೂಲಕ, ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ಸರಕಾರ ತನ್ನ ರಕ್ಷಣೆಯನ್ನು ಇನ್ನಷ್ಟು ಬಲಪಡಿಸಬೇಕು ಎನ್ನುವುದನ್ನು ಸೂಚ್ಯವಾಗಿ ತಿಳಿಸಿದ್ದರು. ಈ ಮಾತಿನ ಉದ್ದ-ಅಗಲ ಅರಿಯದೇ ಭಾರತದಲ್ಲಿ ಸಂಘಪರಿವಾರ ನಾಯಕರು ಕಿರುಚಾಡಿದರು.

ಕಮಲ್‌ಹಾಸನ್ ಭಾರತದ ಶ್ರೇಷ್ಠ ಕಲಾವಿದ. ಈತನ ಹೆಸರಿನ ಮುಂದಿರುವ ಹಾಸನ್ ಕಾರಣದಿಂದ ಅವರು ಹಲವು ಬಾರಿ ತೊಂದರೆಗೆ ಸಿಲುಕಿಕೊಂಡಿದ್ದಾರೆ. ವಿದೇಶಗಳಲ್ಲಿ ಹಲವು ಬಾರಿ ಹಾಸನ್ ಎನ್ನುವ ಕಾರಣಕ್ಕಾಗಿ ಇವರನ್ನು ತನಿಖೆಗೊಳಪಡಿಸಲಾಗಿದೆ. ಅವಮಾನ ಪಡಿಸಲಾಗಿದೆ. ಎಷ್ಟೋ ಭಾರತೀಯರು ಕಮಲ್ ಹಾಸನ್ ಅವರನ್ನು ಮುಸ್ಲಿಮರೆಂದೇ ತಿಳಿದುಕೊಂಡಿದ್ದಾರೆ. ಆದರೆ ಕಮಲ್ ಅವರು ಮೂಲತಃ ಬ್ರಾಹ್ಮಣರು. ಹಾಸನ್ ಎನ್ನುವ ಹೆಸರು ಅವರಿಗೆ ದೊರಕಿರುವುದರ ಹಿಂದೆ ಒಂದು ಹೃದಯಸ್ಪರ್ಶಿ ಕತೆಯಿದೆ.
 ಕಮಲ್ ಹಾಸನ್ ತಂದೆಯ ಹೆಸರು ಶ್ರೀನಿವಾಸನ್. ಅವರ ಆತ್ಮೀಯ ಮಿತ್ರರ ಹೆಸರು ಯಾಕೂಬ್ ಹಸನ್. ಇವರಿಬ್ಬರೂ ಸ್ವಾತಂತ್ರ ಹೋರಾಟಗಾರರು. ಬ್ರಿಟಿಷರ ವಿರುದ್ಧ ಧ್ವನಿಯೆತ್ತಿದ ಕಾರಣ ಇವರನ್ನು ಜೊತೆಯಾಗಿಯೇ ಜೈಲಲ್ಲಿಡಲಾಗಿತ್ತು. ಆಗ ತಮಿಳಿನಾಡಿನಲ್ಲಿ ಬ್ರಿಟಿಷರ ವಿರುದ್ಧ ಯಾವ ರೀತಿಯ ಆಕ್ರೋಶವಿತ್ತೋ, ಹಾಗೆಯೇ ಬ್ರಾಹ್ಮಣರ ವಿರುದ್ಧವೂ ಆಕ್ರೋಶವಿತ್ತು. ತಮಿಳುನಾಡಿನಲ್ಲಿ ದ್ರಾವಿಡ ಚಳವಳಿಯ ಕಾಲ ಅದು. ಆಗ ಜೈಲಿನಲ್ಲಿ ಉಳಿದ ಕೈದಿಗಳು ಶ್ರೀನಿವಾಸನ್ ವಿರುದ್ಧ ತಿರುಗಿ ಬಿದ್ದರು. ಇಂತಹ ಸಂದರ್ಭದಲ್ಲಿ ಯೂಕಬ್ ಹಸನ್ ಜೈಲಿನಲ್ಲಿರುವವರೆಗೂ ಶ್ರೀನಿವಾಸನ್ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದರು. ಈ ಯಾಕೂಬ್ ಹಸನ್ ಅವರನ್ನು ಬಳಿಕ ಶ್ರೀನಿವಾಸ್ ಎಷ್ಟು ಹಚ್ಚಿಕೊಂಡರು ಎಂದರೆ, ತನ್ನ ಮೂರು ಗಂಡು ಮಕ್ಕಳಿಗೂ ಹಸನ್ ಹೆಸರನ್ನು ನೀಡಿದರು. ಚಂದ್ರ ಹಾಸನ್, ಚಾರು ಹಾಸನ್, ಕಮಲ ಹಾಸನ್. ಇಂದು ದೇಶ ಕಮಲ್‌ನನ್ನು ಗುರುತಿಸುವುದು ಅವರ ತಂದೆಯ ಹೆಸರಿನ ಮೂಲಕ ಅಲ್ಲ, ಬದಲಿಗೆ ಅವರ ಮಿತ್ರ ಯಾಕೂಬ್ ಹಸನ್ ಮೂಲಕ. ಇದನ್ನು ಸ್ವತಃ ಕಮಲ್ ಹಾಸನ್ ಅವರೇ ಹೃದ್ಯವಾಗಿ ಟಿವಿ ಮಾಧ್ಯಮವೊಂದರಲ್ಲಿ ಹಂಚಿಕೊಂಡಿದ್ದಾರೆ. ಕಮಲ್ ಹಾಸನ್ ಅವರ ಹೆಚ್ಚಿನ ಚಿತ್ರಗಳಲ್ಲಿ ಹಿಂದೂ-ಮುಸ್ಲಿಮ್ ಸಂಬಂಧ ಆತ್ಮೀಯವಾಗಿ ಕಾಣಿಸಿಕೊಳ್ಳುವುದಕ್ಕೆ ಇದೂ ಕಾರಣವಿರಬಹುದು. ‘ಹೇ ರಾಮ್’ ಚಿತ್ರದಲ್ಲಿ ಮುಸ್ಲಿಮ್ ಸ್ನೇಹಿತನ ಸಂಸರ್ಗದಿಂದ ಗಾಂಧಿಯನ್ನು ಕೊಲ್ಲುವುದನ್ನು ಸಾಕೇತ್‌ರಾಮ್ ಕೈ ಬಿಡುತ್ತಾನೆ. ಅಷ್ಟೇ ಅಲ್ಲ, ತನ್ನ ಪ್ರಾಣವನ್ನು ಒತ್ತೆಯಿಟ್ಟು ಸ್ನೇಹಿತನ ಕುಟುಂಬವನ್ನು ರಕ್ಷಿಸುತ್ತಾನೆ. ತನ್ನ ತಂದೆಯನ್ನು ರಕ್ಷಿಸಿದ ಯೂಕೂಬ್ ಹಸನ್ ಅವರು ಕಮಲ್ ಹಾಸನ್ ಎದೆಯಲ್ಲಿ ಜೀವಂತವಾಗಿದ್ದುದೇ ಹೇರಾಮ್ ಚಿತ್ರಕ್ಕೆ ಕಾರಣವಾಗಿರಬಹುದು.

ನಾವು ಒಬ್ಬಂಟಿಯಾಗಿದ್ದಾಗ ಮನುಷ್ಯರಾಗಿಯೇ ಇರುತ್ತೇವೆ. ಆದರೆ ಸಾರ್ವಜನಿಕವಾಗಿ, ಸಮೂಹವಾಗಿ ಗುರುತಿಸಿಕೊಳ್ಳುವಾಗ ನಾವು ಮೃಗವಾಗಿ ಬಿಡುವ ಅಪಾಯ ಇಂದಿನ ರಾಜಕೀಯ ಸಂದರ್ಭಗಳಲ್ಲಿ ಹೆಚ್ಚುತ್ತಾ ಇದೆ. ಸಾರ್ವಜನಿಕ ವೇದಿಕೆಯಲ್ಲಿ ಒಬ್ಬ ಉನ್ಮತ್ತ ವ್ಯಕ್ತಿ ಆಡುವ ಭಾಷಣವನ್ನು ನಿಜವೆಂದೇ ಭಾವಿಸಿ, ಅದನ್ನು ಆವಾಹಿಸಿಕೊಂಡು ಇನ್ನೊಬ್ಬನನ್ನು ದ್ವೇಷಿಸಲು ಹೊರಡುತ್ತೇವೆ. ಈ ದೇಶದ ಎಲ್ಲ ಕೋಮುಗಲಭೆಗಳು ನಡೆದಿರುವುದು ಇಂತಹದೇ ಸಂದರ್ಭಗಳಲ್ಲಿ. ನಾವು ಒಬ್ಬಂಟಿಯಾಗಿದ್ದಾಗ ರಕ್ತಕ್ಕೆ ಅಂಜುತ್ತೇವೆ. ಸಾವಿಗೆ ಮರುಗುತ್ತೇವೆ. ಯಾವುದೇ ಬರ್ಬರ ಕೊಲೆ ನಡೆದಾಗ ಅದಕ್ಕೆ ಅಸಹ್ಯ ಪಟ್ಟುಕೊಳ್ಳುತ್ತೇವೆ. ಆದರೆ ಸಮೂಹದೊಂದಿಗೆ ಉನ್ಮತ್ತರಾಗಿರುವಾಗ ಹಾಗಿರಬೇಕೆಂದೇನೂ ಇಲ್ಲ. ಸಣ್ಣ ರಕ್ತ ಹನಿಗೆ ಅಂಜುವ ನಾವು ಸಮೂಹದೊಂದಿಗೆ ಸೇರಿ ಒಂದು ಕೊಲೆಯನ್ನೇ ಮಾಡಿ ಬಿಡಬಹುದು. ಈ ಕಾರಣದಿಂದಲೇ ಸಾರ್ವಜನಿಕ ಭಾಷಣಗಳನ್ನು ಆಲಿಸುವಾಗ ನಾವು ಸದಾ ಎಚ್ಚರವಾಗಿರಬೇಕು.

ವೇದಿಕೆಯಲ್ಲಿ ಮಾತನಾಡುವವ ತನ್ನ ಹೃದಯದ ಮಾತುಗಳನ್ನು ಆಡುತ್ತಿಲ್ಲ. ತಾನು ಏನು ಮಾತನಾಡಬೇಕೋ ಅದನ್ನು ಆಡುತ್ತಿಲ್ಲ. ಬದಲಿಗೆ ಸಮೂಹಕ್ಕೆ ಏನು ಬೇಕೋ ಅದನ್ನು ಆಡುತ್ತಿದ್ದಾನೆ ಎಂಬ ಪ್ರಜ್ಞೆ ಇಟ್ಟುಕೊಂಡು ಅದನ್ನು ಒಂದು ಕಿವಿಯಲ್ಲಿ ಕೇಳಿ, ಇನ್ನೊಂದು ಕಿವಿಯಲ್ಲಿ ಬಿಡಬೇಕು. ನಾನು ನಮ್ಮ ಎದೆಯ ಒಳಗಿನ ಖಾಸಗಿ ಧ್ವನಿಯನ್ನು ಆಲಿಸಲು ಕಲಿಯಬೇಕು. ನಮಗೆ ಕಮಲ್ ಹಸನ್‌ನ ತಂದೆಯಂಥವರು ಮಾದರಿಯಾಗಬೇಕು. ಸೌಹಾರ್ದ ಯಾವುದೇ ವೇದಿಕೆಗಳಲ್ಲಿ, ಸಮಾರಂಭಗಳಲ್ಲಿ ಹುಟ್ಟುವಂತಹದ್ದಲ್ಲ. ಅದು ಎರಡು ವ್ಯಕ್ತಿಗಳು ಪರಸ್ಪರರ ಹೃದಯವನ್ನು ಆಲಿಸುವಾಗ ಹುಟ್ಟುವಂಥದ್ದು. ಈ ಕಾರಣದಿಂದ ನಾವು, ಹೃದಯದ ಧ್ವನಿಯನ್ನು ಆಲಿಸುವುದಕ್ಕೆ ಶುರುಮಾಡೋಣ. ಸಾಧ್ಯವಾದರೆ, ಸಾರ್ವಜನಿಕ ವೇದಿಕೆಯ ಅಬ್ಬರದ ಭಾಷಣಗಳಿಗೆ ಶಾಶ್ವತ ಕಿವುಡರಾಗೋಣ.

Saturday, November 17, 2012

ಮನುಷ್ಯತ್ವ ಮತ್ತು ಇತರ ಕತೆಗಳು

 ಮಾತು
‘‘ಮಾತನಾಡುವುದನ್ನು ಬೇಗ ಮಾತನಾಡಿ ಮುಗಿಸು...ನನ್ನಲ್ಲಿ ಕರೆನ್ಸಿ ತುಂಬಾ ಕಡಿಮೆ ಇದೆ...’’ ಆ ಕಡೆಯಿಂದ ಗೆಳೆಯ ಹೇಳುತ್ತಿದ್ದ.
‘‘ಮುಗಿಸುವುದಕ್ಕಿರುವ ಮಾತುಗಳನ್ನು ಆಡದೇ ಇರುವುದೇ ಒಳ್ಳೆಯದು’’ ಈ ಕಡೆಯಿಂದ ಗೆಳೆಯ ಮಾತನಾಡಿ ಮುಗಿಸಿದ.

ವ್ಯಾಪಾರ
ಅದು ಸುಡುವ ಬಿಸಿಲಿನ ದಿನಗಳು.
ಒಬ್ಬ ಮರದಡಿಯಲ್ಲಿ ಬೋರ್ಡ್ ಹಾಕಿ ಕುಳಿತಿದ್ದ.
‘‘ಇಲ್ಲಿ ನೆರಳನ್ನು ಮಾರಲಾಗುತ್ತದೆ. ಒಂದು ಗಂಟೆಯ ನೆರಳಿಗೆ ನೂರು ರೂ.’’

ಜೇನು
ನಾಳೆಗಿರಲಿ ಎಂದು ನೊಣಗಳು ಜೇನು ಸಂಗ್ರಹಿಸಿದವು.
ಮನುಷ್ಯ ಅದನ್ನು ದೋಚಿ ಅವುಗಳಿಗೆ ಬುದ್ಧಿ ಹೇಳಿದ ‘‘ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ’’

ಮರ
ನೂರಾರು ವರ್ಷ ಬಾಳಿ ಬದುಕಿದ್ದ ಬೃಹತ್ ಮರವೊಂದು ಉರುಳಿ ಬಿತ್ತು.
‘‘ಗುರುಗಳೇ ಪುರಾತನ ಮರ ಬಿದ್ದು ಬಿಟ್ಟಿತು’ ಮರುಕದಿಂದ ಶಿಷ್ಯರು ಹೇಳಿದರು.
ಸಂತ ಖೇದದಿಂದ ಉತ್ತರಿಸಿದ ‘‘ನನಗೆ ದುಃಖ ಆ ಮರದ ಬಗ್ಗೆಯಲ್ಲ. ಅದರ ಸುತ್ತಮುತ್ತ ಹಲವು ಸಣ್ಣು ಪುಟ್ಟ ಗಿಡಗಳು ಮರವಾಗುವ ಕನಸು ಕಾಣುತ್ತಿದ್ದವು. ಪುರಾತನ ಮರ ಅವುಗಳ ಮೇಲೆಯೇ ಬಿದ್ದು ಬಿಟ್ಟಿತು’’

ಗೆಳೆಯರು
‘‘ನನಗೆ ಜಾತಿ, ಧರ್ಮ ಇತ್ಯಾದಿಗಳಲ್ಲಿ ನಂಬಿಕೆಯಿಲ್ಲ. ನನಗೆ ಮುಸ್ಲಿಮ್ ಗೆಳೆಯರಿದ್ದಾರೆ, ಕ್ರಿಶ್ಚಿಯನ್ ಗೆಳೆಯರಿದ್ದಾರೆ, ಹಿಂದೂ ಗೆಳೆಯರಿದ್ದಾರೆ, ಬ್ರಾಹ್ಮಣ ಗೆಳೆಯರಿದ್ದಾರೆ, ದಲಿತ ಗೆಳೆಯರಿದ್ದಾರೆ...’’ ಅವನು ಹೇಳಿದ.
‘‘ಹೌದಾ? ನನಗೆ ಬರೇ ಗೆಳೆಯರು ಮಾತ್ರ ಇದ್ದಾರೆ’’ ಇವನು ಉತ್ತರಿಸಿದ.


ಸೆಕೆ
‘ಯಾಕೋ ಒಡಲು ಉರಿಯುವಂತೆ ವಿಪರೀತ ಸೆೆಕೆ...ಯಾಕಿರಬಹುದು...?’
ಅವನು ಕೇಳಿದ.
‘ಬಹುಶಃ ಮಳೆಯಾಗುವ ಸೂಚನೆಯದು.. ಸಹನೆಯಿರಲಿ.’ ಇವನು ಸಂತೈಸಿದ.

ಕುಡುಕ
‘‘ಸಾರ್...ನನ್ನ ಕಿಡ್ನಿ ಮಾರ್ತಾ ಇದ್ದೇನೆ....ತಗೋತೀರಾ ಸಾರ್?’’
‘‘ಯಾಕೆ ಅಷ್ಟು ಹಣದ ಅಗತ್ಯ?’’
‘‘ಕುಡಿಯೋದಕ್ಕೆ ಹಣ ಬೇಕಾಗಿದೆ ಸಾರ್...ಹೇಗೂ ಕುಡಿದ್ರೆ ಕಿಡ್ನಿ ಹೋಗುತ್ತೆ ಅಂತ ಹೇಳ್ತಾರೆ...ಅದಕ್ಕೆ ಮೊದಲೇ ಅದನ್ನು ಮಾರಿ ಕುಡಿಯೋಣ ಅಂತ ಸಾರ್...’’

ಮನುಷ್ಯತ್ವ
‘‘ಅಮ್ಮಾ ನಿಮ್ಮ ಮಗನಿಗೆ ಅರ್ಜಂಟಾಗಿ ಆಪರೇಷನ್ ಮಾಡಬೇಕಾಗಿದೆ. ಹತ್ತು ಲಕ್ಷ ರೂ. ತೆಗೊಂಡು ಬಾ...’’
‘‘ಅಷ್ಟು ಹಣ ನನ್ನಲ್ಲಿ ಇಲ್ಲ ಕಣಪ್ಪ...’’
‘‘ಸರಿ ಹಾಗಾದ್ರೆ...ಮಾತ್ರೆ ಬರ್ದುಕೊಡ್ತೀನಿ...ನಿನ್ನ ಮಗನ್ನ ಕರ್ಕೊಂಡು ಹೋಗು’’
‘‘ಹಾಗಾದ್ರೆ ಆಪರೇಷನ್...’’
‘‘ಅದಕ್ಕೆ ಬೇರೆ ಪೇಷಂಟನ್ನು ನೋಡ್ಕೋತೀನಿ...ನಮಗೂ ಮನುಷ್ಯತ್ವ ಅನ್ನೋದು ಇದೆ...’’

Wednesday, November 14, 2012

ಈ ಮತಾಂತರ ಎಷ್ಟು ಸರಿ?

ಇತ್ತೀಚೆಗೆ ನನ್ನ ಊರಿನಲ್ಲಿರುವ ಬಾಲ್ಯದ ಸಹಪಾಠಿಗೆ ಮದುವೆಯಾಯಿತು. ಸಿಕ್ಕಿದಾಗಲೆಲ್ಲ  "ಮದುವೆಯಾಯಿತಾ" ಎಂದು ಕೇಳಿದರೆ ‘‘ಈ ತೋಟ ಕಾಯುವ ಮಾಣಿಯನ್ನು ಯಾರು ಮದುವೆಯಾಗುತ್ತಾರೆ ಮಾರಾಯ...ಒಳ್ಳೆಯ ಬ್ರಾಹ್ಮಣ ಹುಡುಗಿ ನಿನಗೆ ಗೊತ್ತಿದ್ದರೆ ಹೇಳು...ಮದುವೆಯಾಗುವೆ’’ ಎನ್ನುತ್ತಿದ್ದ. ನಾನೂ ಅದನ್ನು ತಮಾಷೆಯಾಗಿಯೇ ತೆಗೆದುಕೊಳ್ಳುತ್ತಿದ್ದೆ. ‘‘ಲವ್ ಮ್ಯಾರೇಜ್ ಆಗು’’ ಎಂದರೆ, ‘‘ತೋಟ ಕಾಯುವ ಮಾಣಿಯನ್ನು ಯಾರು ಲವ್ ಮಾಡ್ತಾರೆ ಮಾರಾಯ... ನಿನಗಾದರೆ ಪರವಾಗಿಲ್ಲ... ಹುಡುಗಿಯ ಜೊತೆಗೆ ಕೆಜಿಗಟ್ಟಳೆ ಚಿನ್ನವನ್ನೂ ಹಾಕ್ತಾರೆ.... ಅತ್ಲಾಗಿ ಬ್ಯಾರಿಯಾಗಿ ಕನ್ವರ್ಟ್ ಆದ್ರೆ ಹೇಗೆ ಎಂದು ಯೋಚಿಸುತ್ತಿದ್ದೇನೆ...’’ ಎಂದು ನಕ್ಕಿದ್ದ. ಆದರೆ ಅವನ ನಗುವಿನ ಆಳದಲ್ಲೊಂದು ಸಣ್ಣ ವಿಷಾದವೊಂದು ಹೆಪ್ಪುಗಟ್ಟಿರುವುದು ತೀರ ತಡವಾಗಿ ತಿಳಿಯಿತು. 

ಇತ್ತೀಚೆಗೆ ನನ್ನ ಆ ಸಹಪಾಠಿಗೆ ಮದುವೆಯಾಯಿತಂತೆ. ಅಷ್ಟು ಆತ್ಮೀಯನಾಗಿದ್ದ ಅವನು ತನ್ನ ಮದುವೆಯ ವಿಷಯವನ್ನು ನನಗೆ ತಿಳಿಸಿಯೇ ಇರಲಿಲ್ಲ. ಇನ್ಯಾರದೋ ಮೂಲಕ ತಿಳಿಯಿತು. ನನಗೇ  ಅಚ್ಚರಿ ಉಂಟು ಮಾಡುವಂತೆ ಅವನು ಅಂತರ್ಜಾತೀಯ ವಿವಾಹವಾಗಿದ್ದ. ಆದರೆ ಮದುವೆಗೆ ಮುನ್ನ ಹುಡುಗಿಯನ್ನು ಶುದ್ಧೀಕರಣ ಮಾಡಿ ಬ್ರಾಹ್ಮಣಳನ್ನಾಗಿ ಮತಾಂತರ ಮಾಡಲಾಯಿತಂತೆ. ನನಗೆ ಎರಡು ರೀತಿಯಲ್ಲಿ ಖುಷಿಯಾಯಿತು. ಒಂದು, ಕೊನೆಗೂ ನನ್ನ ಸಹಪಾಠಿಗೆ ವಿವಾಹವಾಯಿತು. ಎರಡನೆಯದು, ತೀರಾ ಸಂಪ್ರದಾಯಸ್ಥನಾಗಿದ್ದ ಅವನು ಅಂತರ್ಜಾತಿಯ ವಿವಾಹವಾಗಿದ್ದ. ಎಲ್ಲಕ್ಕಿಂತ ಮುಖ್ಯವಾಗಿ ಕೆಳಜಾತಿಯ ತರುಣಿಯನ್ನು ತನ್ನ ಜಾತಿಯ ಸ್ಥಾನಮಾನಕೊಟ್ಟು ‘ಔದಾರ್ಯ’ ಮೆರೆದಿದ್ದ. ಮದುವೆಯ ಸುದ್ದಿ ತಂದ ಆ ಇನ್ನೊಬ್ಬ ಗೆಳೆಯನಲ್ಲಿ ಪ್ರಶ್ನೆ ಹಾಕಿದೆ ‘‘ಎಂತ, ಲವ್ ಮ್ಯಾರೇಜಾ?’’ 

ಅವನು ಕಿಸಕ್ಕನೆ ನಕ್ಕ ‘‘ಎಂಥ ಲವ್? ಅವನು ಯಾವಾಗ ಲವ್ ಮಾಡ್ಲಿಕ್ಕೆ? ಬ್ರಾಹ್ಮಣರಲ್ಲೀಗ ಸಿಕ್ಕಾಪಟ್ಟೆ ಹುಡುಗಿಯರ ಶಾರ್ಟೇಜು. ಕಲಿತ ಹುಡುಗಿಯರು, ಹಳ್ಳಿಯಲ್ಲಿ ತೋಟ ನೋಡಿಕೊಂಡು ಇರುವ ಹುಡುಗನನ್ನು ಮದುವೆಯಾಗುವುದಕ್ಕೆ ಒಪ್ಪುವುದಿಲ್ಲವಂತೆ. ಅದಕ್ಕೆ ಕೆಳವರ್ಗದ, ಬಡ ಹುಡುಗಿಯನ್ನು ಶುದ್ಧೀಕರಣ ಮಾಡಿ ಮದುವೆಯಾಗಿದ್ದಾನೆ...’’

ಇದು ಗೊತ್ತಿಲ್ಲದ ವಿಷಯವೇನೂ ಆಗಿರಲಿಲ್ಲ. ಹೆಣ್ಣಿನ ಕುರಿತಂತೆ ಗಂಡಿನ ದರ್ಪ, ದುರಹಂಕಾರಕ್ಕೆ ಪ್ರಕೃತಿಯೇ ನೀಡಿದ ಶಾಪದಂತೆ ತರುಣಿಯರ ಸಮಸ್ಯೆ ಹಲವು ಜಾತಿಗಳನ್ನು ಕಾಡುತ್ತಿದೆ. ಒಂದೆಡೆ ತಮ್ಮ ಜಾತಿಯ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು. ಇನ್ನೊಂದೆಡೆ ಮದುವೆಯಾಗಿ ಸಕುಟುಂಬಸ್ಥನಾಗಬೇಕು. ಈ ಸಂಘರ್ಷ ಹಲವು ಜಾತಿಗಳ ಹುಡುಗರನ್ನು  ಕಾಡುತ್ತಿದೆ. ಹೆಣ್ಣಿನ ಕುರಿತಂಥ ತಾತ್ಸಾರ ಹೀಗೆ ಮುಂದುವರಿದರೆ ಇದು ಕೇವಲ ಬ್ರಾಹ್ಮಣ ಸಮಾಜವನ್ನು ಮಾತ್ರವಲ್ಲ, ಇಡೀ ಗಂಡು ಜಾತಿಯನ್ನೇ ಕಾಡಲಿದೆ. ಬ್ರಾಹ್ಮಣ ಸಮುದಾಯದಲ್ಲಿ ಅದರ ಒಂದು ಗ್ರಾಂಡ್ ರಿಹರ್ಸಲ್ ನಡೆಯುತ್ತಿದೆ ಅಷ್ಟೇ. ಬಹುಶಃ ಈ ಸಮಸ್ಯೆ ಬ್ರಾಹ್ಮಣ ತರುಣರಿಗೆ ಒಂದು ಹೊಸ ಅವಕಾಶವನ್ನೂ ತೆರೆದುಕೊಟ್ಟಿದೆ. ಜಾತಿ ಅಸಮಾನತೆಯ ಪಾಪಪ್ರಜ್ಞೆಯಿಂದ ಕಳಚಿಕೊಳ್ಳುವುದಕ್ಕೆ ಪೂರಕವಾಗಿ, ಈ ಅಂತರ್ಜಾತೀಯ ವಿವಾಹವನ್ನು ಬಳಸಿಕೊಳ್ಳಬಹುದಾಗಿದೆ. ನಿಧಾನಕ್ಕೆ ಇದು ಜಾತಿ ಅಸಮಾನತೆಯನ್ನೇ ಅಳಿಸುವುದಕ್ಕೆ ಸಹಾಯ ಮಾಡಬಹುದಾಗಿದೆ. ಆದುದರಿಂದ, ಈ ಕಾರಣಕ್ಕಾಗಿಯಾದರೂ ನನ್ನ ಸ್ನೇಹಿತ ಜಾತಿಯನ್ನು ಮೀರುವಂತಾಯಿತಲ್ಲ ಎಂದು ನನಗೆ ನಾನೇ ಖುಷಿ ಪಟ್ಟುಕೊಂಡಿದ್ದೆ.

ಆದರೆ ಇತ್ತೀಚೆಗೆ ಮುಂಬೈಯಿಂದ ಬಂದ ನನ್ನ ಗೆಳೆಯರಾದ ಕೆ. ಕೆ. ಸುವರ್ಣ ಅವರು ಬಿಚ್ಚಿಟ್ಟ ಸಂಗತಿ, ನನ್ನನ್ನು ಒಂದು ಕ್ಷಣ ತಲ್ಲಣಕ್ಕೀಡು ಮಾಡಿತು. ನಾನು ಬ್ರಾಹ್ಮಣ ತರುಣರ ಅಂತರ್ಜಾತೀಯ ವಿವಾಹದ ಕುರಿತಂತೆ ಮಾತಾಡಲು ತೊಡಗಿದಾಗ ಸುವರ್ಣ ಒಮ್ಮೆಲೆ ಸ್ಫೋಟಿಸಿದರು. ‘‘ಯಾರು ಹೇಳಿದ್ದು ಇದು ಅಂತರ್ಜಾತೀಯ ವಿವಾಹ ಅಂತ. ಇದು ಹಣದ ಆಮಿಷವೊಡ್ಡಿ ಕೆಳವರ್ಗದ ತರುಣಿಯರನ್ನು ಬ್ರಾಹ್ಮಣರ ತೊತ್ತಾಗಿಸುವ ಒಂದು ಭಾಗವೇ ಹೊರತು ಇನ್ನೇನು ಅಲ್ಲ...’’ ಎಂದು ಬಿಟ್ಟರು.  ಅವರು ಬಿಚ್ಚಿಟ್ಟ ಸಂಗತಿಯನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಬ್ರಾಹ್ಮಣರೊಳಗೆ ಇತ್ತೀಚೆಗೆ ತರುಣಿಯರ ಕೊರತೆಯಿಂದಾಗಿ, ಮದುವೆ ದಲ್ಲಾಳಿಗಳಿಗೆ ವಿಪರೀತ ಬೆಲೆ ಬಂದು ಬಿಟ್ಟಿದೆ. ಎಲ್ಲಿ, ಯಾವ ಮೂಲದಲ್ಲಿ ಬ್ರಾಹ್ಮಣ ಸಮುದಾಯದ, ಅದರಲ್ಲೂ ತಮ್ಮದೇ ಪಂಗಡದ ಹುಡುಗಿಯಿದ್ದಾರೆಂದು ಹುಡುಕಿ ತೆಗೆದು, ಕೈ ತುಂಬಾ ದುಡ್ಡು ಬಾಚುವ ದಲ್ಲಾಳಿಗಳ ಸಂಖ್ಯೆ ಹೆಚ್ಚುತ್ತಿದೆ. ಉತ್ತರಭಾರತದಿಂದ ಅದರಲ್ಲೂ ಕಾಶ್ಮೀರದಿಂದ ಹುಡುಗಿಯರನ್ನು ಕರಾವಳಿಗೆ ಕರೆತಂದು ಬ್ರಾಹ್ಮಣ ಹುಡುಗರಿಗೆ ಕಟ್ಟುವ ಕೆಲಸವನ್ನೂ ದಲ್ಲಾಳಿಗಳು ಮಾಡುತ್ತಿದ್ದಾರೆ. ಹಲವು ದಲ್ಲಾಳಿಗಳು ಇದನ್ನೇ ಬಳಸಿಕೊಂಡು ಹಲವು ಬ್ರಾಹ್ಮಣ ಕುಟುಂಬಕ್ಕೆ ವಂಚಿಸಿದ್ದಾರೆ.ಅನ್ಯ ಜಾತಿಯ ಹುಡುಗಿಯನ್ನೇ ಬ್ರಾಹ್ಮಣ ಹುಡುಗಿಯೆಂದು ತಲೆಗೆ ಕಟ್ಟಿ, ಅದು ರಾದ್ಧಾಂತವಾಗಿ, ವಿವಾಹವೇ ಮುರಿದ ಪ್ರಸಂಗಗಳಿವೆ. ಕೆಲವು ಕುಟುಂಬಗಳಂತೂ ಮರ್ಯಾದೆಗೆ ಅಂಜಿ ಬಾಯಿ ಮುಚ್ಚಿ ಕುಳಿತಿದ್ದಾರೆ. ಲಕ್ಷಾಂತರ ಹಣ ಪಡೆದು ಬ್ರಾಹ್ಮಣ ಕುಟುಂಬಗಳಿಗೆ ವಂಚಿಸಿದ ಪ್ರಕರಣಗಳಂತೂ ನೂರಾರು ಇವೆ. ಇಂತಹ ಸಂದರ್ಭದಲ್ಲೇ ಅವರು ಒಂದಿಷ್ಟು ಉಸಿರು ಬಿಡುವಂತಾದುದು ‘‘ಶುದ್ಧೀಕರಣ’’ದ ಮೂಲಕ ಕೆಳ ಜಾತಿಯ ತರುಣಿಯರನ್ನು ಮನೆತುಂಬಿಸಿಕೊಳ್ಳುವ ಪದ್ಧತಿ ಸಮಾಜದಲ್ಲಿ ಪ್ರಚಾರ ಪಡೆದ ಮೇಲೆ. ಹಾಗೆಂದು ಬ್ರಾಹ್ಮಣ ತರುಣರು ಕೇಳಿದಾಕ್ಷಣ ಯಾರೂ ತಮ್ಮ ಮನೆಯ ಮಗಳನ್ನು ಇಕೋ ಎಂದು ಕೊಡುವುದಿಲ್ಲ. ಹೆಣ್ಣು ಮಕ್ಕಳು ಹೆಚ್ಚಿರುವ ತೀರಾ ಬಡ ಕುಟುಂಬಕ್ಕೆ ಒಂದಿಷ್ಟು ವಧುದಕ್ಷಿಣೆಯನ್ನು ಕೊಟ್ಟು, ಅವರನ್ನು ಶುದ್ಧೀಕರಣಗೊಳಿಸಿ, ಬ್ರಾಹ್ಮಣ ಕುಟುಂಬದ ಸೊಸೆಯಾಗಿಸಲಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಗೋ ವನಿತಾಶ್ರಮ’ ಎನ್ನುವುದೊಂದಿದೆ. ಇದರ ಮುಖಂಡರು ಬಹಿರಂಗ ಸಭೆಯಲ್ಲೇ ಈ ಕುರಿತಂತೆ ಹೇಳಿಕೆ ನೀಡಿದ್ದರು. ‘‘ನಮ್ಮಲ್ಲಿ ವಿವಿಧ ತಳಿಯ ಅಪರೂಪದ ಗೋವುಗಳನ್ನು ಸಾಕಲಾಗುತ್ತದೆ. ಹಾಗೆಯೇ ಇಲ್ಲಿ, ಬಡ ವನಿತೆಯರಿಗೂ ಆಶ್ರಯ ನೀಡಲಾಗುತ್ತದೆ. ಕೆಳಜಾತಿಯ ತೀರಾ ಬಡ ಕುಟುಂಬದ ಹೆಣ್ಣು ಮಕ್ಕಳು ಇದ್ದರೆ, ನಿಮಗೆ ಸಾಕಲು ಕಷ್ಟವಾಗುತ್ತಿದೆಯಾದರೆ, ಅನಾಥ ಹೆಣ್ಣು ಮಕ್ಕಳು ಇದ್ದರೆ ಈ ಆಶ್ರಮಕ್ಕೆ ಸೇರಿಸಿ. ಈ ವನಿತೆಯರು ಗೋವುಗಳ ಸೇವೆಯನ್ನು ಮಾಡಿದಂತಾಗುತ್ತದೆ. ಹಾಗೆಯೇ ಇವರ ಮದುವೆಯ ವ್ಯವಸ್ಥೆಯನ್ನು ನಾವೇ ಮಾಡುತ್ತೇವೆ. ಈ ಆಶ್ರಮದಲ್ಲಿದ್ದ ಹಲವು ಕೆಳಜಾತಿಯ ಹೆಣ್ಣು ಮಕ್ಕಳನ್ನು ಬ್ರಾಹ್ಮಣರಂತಹ ಮೇಲ್ಜಾತಿಯ ತರುಣರಿಗೆ ಮದುವೆ ಮಾಡಿಕೊಟ್ಟಿದ್ದೇವೆ...’’ ಈ ಮಾತಿನ ರಹಸ್ಯ ಇಷ್ಟೇ. ಈ ಗೋವುಗಳ ಸೇವೆಗೆ ವೇತನವೇ ಇಲ್ಲದೆ ಬಡ ಹೆಣ್ಣು ಮಕ್ಕಳು ದೊರಕುತ್ತಾರೆ. ಅವರಿಗೆ ಒಂದಿಷ್ಟು ವೈದಿಕ ಆಚರಣೆ ಕಳಿಸಿ ಅವರನ್ನು ಶುದ್ಧೀಕರಣಗೊಳಿಸಿ, ಬ್ರಾಹ್ಮಣ ತರುಣರಿಗೆ ಮದುವೆ ಮಾಡಿಕೊಡುವುದಷ್ಟೇ ಅಂತಿಮ ಉದ್ದೇಶ. ತೀರಾ ಅನಾಥ ಹೆಣ್ಣು ಮಕ್ಕಳಾದರೆ ಇದರಿಂದ ಪ್ರಯೋಜನವಿದೆ. ಆದರೆ ಬಡತನದ ಕಾರಣದಿಂದ ಬಂದ ಹೆಣ್ಣು ಮಕ್ಕಳ ಕುಟುಂಬಕ್ಕೆ ಹಣದ ಆಮಿಶ ತೋರಿಸಿ ಅವರನ್ನು ಶುದ್ಧೀಕರಣಗೊಳಿಸಿ, ಆ ಕುಟುಂಬದಿಂದಲೇ ಬೇರ್ಪಡಿಸಿ, ಬ್ರಾಹ್ಮಣರ ತರುಣರಿಗೆ ವರ್ಗಾಯಿಸುವುದನ್ನು ಮದುವೆ ಎಂದು ಕರೆಯಲಾಗುತ್ತದೆಯೆ? ಈ ಪ್ರಶ್ನೆಯನ್ನು ಸುವರ್ಣ ಅವರು ಕೇಳುವುದಕ್ಕೂ ಒಂದು ಕಾರಣವಿತ್ತು. ಅವರ ದೂರದ ಸಂಬಂಧಿಕರ ಹುಡುಗಿಯೊಬ್ಬರನ್ನು ಇದೇ ರೀತಿ ಶುದ್ಧೀಕರಣ ಮಾಡಿ ಬ್ರಾಹ್ಮಣ ಕುಟುಂಬಕ್ಕೆ ಕೊಡಲಾಗಿತ್ತು. ಆನಂತರದ ಬಿಕ್ಕಟ್ಟು, ಅದು ವಧುವಿನ ಮೇಲೆ ಮತ್ತು ಆಕೆಯ ಕುಟುಂಬದ ಮೇಲೆ ಬಿದ್ದ ಪರಿಣಾಮಗಳೇ ಸುವರ್ಣರ ಆಕ್ರೋಶಕ್ಕೆ ಕಾರಣ.

ಮದುವೆ ಎಂದರೆ ಒಂದು ಹೆಣ್ಣು ಮತ್ತು ಗಂಡು ಒಂದಾಗುವುದಷ್ಟೇ ಅಲ್ಲ, ಎರಡು ಕುಟುಂಬಗಳು ಜೊತೆಯಾಗುವುದು. ಗಂಡಿಗೆ ಹೆಣ್ಣು ಮಾತ್ರ ದೊರಕುವುದಲ್ಲ, ಅವಳ ಜೊತೆಗೆ ತಾಯಿ ಸಮಾನಳಾದ ಅತ್ತೆ ಮತ್ತು ತಂದೆ ಸಮಾನರಾದ ಮಾವನೂ ದೊರಕುತ್ತಾರೆ. ಹಾಗೆಯೇ ಹೆಣ್ಣಿಗೂ ಕೂಡ. ಆದರೆ ಇಲ್ಲಿ ಹಾಗಲ್ಲ. ಬ್ರಾಹ್ಮಣ ಕುಟುಂಬಕ್ಕೆ ಬೇಕಾಗಿರುವುದು ಬರೇ ಹೆಣ್ಣು ಮಾತ್ರ. ಅವಳ ಕುಟುಂಬ ಅಂದರೆ ಆಕೆಯ ತಂದೆ, ತಾಯಿ ಯಾರೂ ಬೇಕಾಗಿಲ್ಲ. ಒಂದು ರೀತಿಯಲ್ಲಿ ಆಕೆ ತನ್ನ ಕುಟುಂಬದ ಜೊತೆಗೆ ಸಂಬಂಧವನ್ನೇ ಕಡಿದು ಕೊಳ್ಳುತ್ತಾಳೆ. ತನ್ನ ಸಂಸ್ಕೃತಿ, ಆಹಾರ, ಆಚಾರ, ವಿಚಾರ ಎಲ್ಲವನ್ನು ಬಲಿಕೊಟ್ಟು, ಆಕೆ ಬ್ರಾಹ್ಮಣ ಕುಟುಂಬವನ್ನು ಪ್ರವೇಶಿಸಬೇಕಾಗುತ್ತದೆ. ಆಕೆ ಇದೆಲ್ಲವನ್ನು ಮಾಡಬೇಕಾಗಿರುವುದು ಬಡ ಕೆಳಜಾತಿಯ ಕುಟುಂಬದಲ್ಲಿ ಹುಟ್ಟಿದ್ದೇನೆನ್ನುವ ಒಂದೇ ಕಾರಣಕ್ಕಾಗಿ. ಬಡ ಹಿಂದುಳಿದ ವರ್ಗದ ಕುಟುಂಬದ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕಿ, ಹಣದ ಆಮಿಷ ತೋರಿಸಿ ಆ ಹೆಣ್ಣನ್ನು ಶುದ್ಧೀಕರಣದ ಹೆಸರಲ್ಲಿ ಬ್ರಾಹ್ಮಣ ಕುಟುಂಬಕ್ಕೆ ಒಪ್ಪಿಸುವುದು ಅದು ಹೇಗೆ ವಿವಾಹ ಸಮ್ಮತಿಯನ್ನು ಪಡೆದುಕೊಳ್ಳುತ್ತದೆ? ಒಂದು ವೇಳೆ ಅವರಿಗೆ ಹೆಣ್ಣು ಒಪ್ಪಿಗೆಯಾದರೆ, ಆಕೆಯ ಇಡೀ ಕುಟುಂಬವನ್ನೇ ಬ್ರಾಹ್ಮಣ ಜಾತಿಗೆ ಶುದ್ಧೀಕರಣ ಮಾಡಿ ಸೇರಿಸಬಹುದಲ್ಲ? ಆಕೆಯ ತಂದೆ ತಾಯಿ ಬೇಡ. ಆಕೆಯ ಕುಟುಂಬ ಬೇಡ. ಬರೇ ಆಕೆ ಮಾತ್ರ, ಗಂಡಿನ ತೆವಲಿಗೆ, ಮನೆಯ ಚಾಕರಿಗೆ ಬೇಕು. ಇದು ಮದುವೆಯೆ? ಅಥವಾ ದಂಧೆಯೆ? ಎಂದು ಸುವರ್ಣ ಆಕ್ರೋಶ ವ್ಯಕ್ತಪಡಿಸುತ್ತಾರೆ. ಹೆಣ್ಣಿನ ಸಮ್ಮತಿಯನ್ನು ಮೀರಿ, ಬರೇ ದಲ್ಲಾಳಿಗಳ ಹಣದಾಸೆಗೆ ಬಡ ಬಿಲ್ಲವ, ಮೊಗವೀರ ತರುಣಿಯರನ್ನು ಶುದ್ಧೀಕರಣಗೊಳಿಸಿ ಬ್ರಾಹ್ಮಣ ತರುಣರಿಗೆ ಮದುವೆ ಮಾಡಿಕೊಡಲಾಗುತ್ತದೆ. ಅಲ್ಲಾದರೂ ಆಕೆ ಸುಖವಾಗಿರಲು ಹೇಗೆ ಸಾಧ್ಯ? ತನ್ನದಲ್ಲದ ಸಂಸ್ಕೃತಿ. ಆಚರಣೆ. ಹಣತೆತ್ತು ಕೊಂಡುಕೊಂಡ ಹೆಣ್ಣನ್ನು ಗಂಡಾಗಲಿ ಆತನ ತಂದೆತಾಯಿಯಾಗಲಿ ಮಾನಸಿಕವಾಗಿ ಪತ್ನಿ, ಸೊಸೆ ಎಂದು ಒಪ್ಪಿಕೊಳ್ಳಲು ಸಾಧ್ಯವೆ? ಆಕೆ ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಮಾಂಸ ತಿನ್ನಬೇಕು ಎನ್ನುವ ಆಸೆಯಾದರೂ ಅದನ್ನು ಅದುಮಿಟ್ಟುಕೊಳ್ಳಬೇಕು.  ಅನೇಕ ಸಂದರ್ಭದಲ್ಲಿ ಅಪರೂಪಕ್ಕೆ ತವರು ಮನೆಗೆ ಹೋಗುವ ಅವಕಾಶವೂ ಆಕೆಗಿರುವುದಿಲ್ಲ. ಕಾರಣವೆಂದರೆ, ಅಲ್ಲಿ ಆಕೆ ಮೀನು, ಮಾಂಸ ತಿಂದು ಬಂದರೆ? ಮನೆಯ ಆಚರಣೆಯನ್ನು ಕೆಡಿಸಿ ಬಂದರೆ? ಹೆಣ್ಣನ್ನು ಶುದ್ಧೀಕರಣ ಮಾಡಲಾಗಿದೆ. ಆದರೆ ಆಕೆಯ ಕುಟುಂಬವನ್ನು ಶುದ್ಧೀಕರಣ ಮಾಡಲಾಗಿಲ್ಲವಲ್ಲ? ಇಂತಹ ಬಿಕ್ಕಟ್ಟನ್ನು ಎದುರಿಸುತ್ತಾ, ಒಲ್ಲದ ಗಂಡನೊಂದಿಗೆ ಸಂಸಾರ ಮಾಡುವ, ವೈದಿಕೀಕರಣ ಅಥವಾ ಬ್ರಾಹ್ಮಣೀಕರಗೊಂಡ ಹೆಣ್ಣಿನ ಮಾನಸಿಕ ಸ್ಥಿತಿ ಅದೆಷ್ಟು ಭೀಕರವಾಗಿರಬೇಡ?

ಯಾವುದೇ ಧರ್ಮಕ್ಕೆ ಸ್ವ ಒಪ್ಪಿಗೆಯಿಂದ, ಯಾವ ಕಾರಣಕ್ಕೆ ಇರಲಿ ಮತಾಂತರವಾಗುವುದನ್ನು ನಾನು ಒಪ್ಪುತ್ತೇನೆ. ಹಣಕ್ಕಾಗಿ ಒಬ್ಬ ತಂದೆ ತಾನು ಶುದ್ಧೀಕರಣಗೊಂಡು ಬ್ರಾಹ್ಮಣನಾಗಲಿ, ಕ್ರೈಸ್ತನಾಗಲಿ, ಮುಸ್ಲಿಮನಾಗಲಿ. ಅದಕ್ಕೆ ಸಮಾಜದ ಅಭ್ಯಂತರವಿಲ್ಲ. ಆದರೆ ಹಣಪಡೆದು, ತನ್ನ ಮಗಳನ್ನು ಒಬ್ಬ ಇನ್ನೊಂದು ಧರ್ಮದ ಅಥವಾ ಜಾತಿಯ ಗಂಡಿಗೆ ಒಪ್ಪಿಸಿ ಕೈತೊಳೆದುಕೊಳ್ಳುವುದನ್ನು ಮದುವೆ ಎಂದು ಕರೆಯಲಾಗುವುದಿಲ್ಲ. ಶುದ್ಧೀಕರಣ ಎಂದು ಕರೆಯಲೂ ಆಗುವುದಿಲ್ಲ. ಜಾತಿಯನ್ನು ಮೀರಲು ಸಾಧ್ಯವಿಲ್ಲವೆಂದಾದರೆ ಬ್ರಾಹ್ಮಣ ತರುಣರು ಅನ್ಯ ಜಾತಿಯ ತರುಣಿಯರನ್ನು ಮರೆತು ತಮ್ಮ ತಮ್ಮ ಜಾತಿಯಲ್ಲೇ ಹುಡುಗಿಯನ್ನು ಹುಡುಕುವುದು ಹೆಚ್ಚು ಶೋಭೆ ತರುವ ವಿಷಯ. ಜಾತಿಯನ್ನು ಮೀರುವ ಎದೆಗಾರಿಕೆಯಿದ್ದರೆ, ಕೆಳಜಾತಿಯ ಕುಟುಂಬವನ್ನು ಮೇಲ್‌ಜಾತಿಗೆ ತರುವುದು ಮಾತ್ರವಲ್ಲ, ತಾನು ತನ್ನ ಮೇಲ್‌ಜಾತಿಯಿಂದ ಕೆಳಜಾತಿಗಿಳಿಯಲು ಸಿದ್ಧನಾಗಿರಬೇಕು. ಆಕೆಯ ತಂದೆತಾಯಿಯನ್ನು ಮಾವ, ಅತ್ತೆ ಎಂದು ಸ್ವಾಗತಿಸಲೂ ಸಿದ್ಧನಾಗಿರಬೇಕು. ಇಲ್ಲವಾದರೆ ಅದು ನಾಗರಿಕ ವ್ಯವಸ್ಥೆಯಲ್ಲಿ ಅಮಾನವೀಯವಾಗುತ್ತದೆ. ಹಾಗೆಯೇ ಕೈಯಲ್ಲಿ ಹಣದ ಕಟ್ಟು ಹಿಡಿದುಕೊಂಡು ಬ್ರಾಹ್ಮಣ ಹುಡುಗರಿಗಾಗಿ ಬಿಲ್ಲವ, ಮೊಗವೀರ, ಬಂಟ ಮೊದಲಾದ ಕೆಳಜಾತಿಯ ಬಡಹುಡುಗಿಯರನ್ನು ಹುಡುಕುತ್ತಾ ಓಡಾಡುವ ದಲ್ಲಾಳಿಗಳನ್ನು ಮದುವೆ ದಲ್ಲಾಳಿಗಳು ಎಂದು ಕರೆಯಲಾಗುವುದಿಲ್ಲ. ಅವರಿಗೆ ಬೇರೆ ಬೇರೆ ಹೆಸರುಗಳನ್ನು ಸಮಾಜ ನೀಡುತ್ತವೆ. ಆದುದರಿಂದ ವಿವಿಧ ಜಾತಿ ಸಂಘಟನೆಗಳು ಇಂತಹ ಸಮಾಜ ಬಾಹಿರ ದಲ್ಲಾಳಿಗಳಿಗೆ, ಇವರು ನಡೆಸುವ ದಂಧೆಗಳಿಗೆ ಕಡಿವಾಣ ಹಾಕಬೇಕಾಗಿದೆ. ಬಡ ಹೆಣ್ಣು ಮಕ್ಕಳನ್ನು ಹಣಕ್ಕಾಗಿ ಪರೋಕ್ಷವಾಗಿ ಮಾರಾಟ ಮಾಡುವ ಈ ವ್ಯವಸ್ಥೆಗೂ ಕಡಿವಾಣ ಹಾಕಬೇಕಾಗಿದೆ. ಹಾಗೆಯೇ ಬಲವಂತದ ಮತಾಂತರದ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಪೇಜಾವರಶ್ರೀ ಗಳೂ ಈ ವಿಷಯದವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕಾಗಿದೆ. ಹಣಕೊಟ್ಟು ಬಡ ಹೆಣ್ಣು ಮಕ್ಕಳನ್ನು ಬಲವಂತವಾಗಿ ಬ್ರಾಹ್ಮಣೀಕರಿಸಿ, ಮನೆ ಚಾಕರಿಗೆ ಬಳಸಿಕೊಳ್ಳುವ ಕೃತ್ಯ ತಪ್ಪು ಎಂದು ಸ್ಪಷ್ಟವಾಗಿ ಹೇಳಬೇಕಾಗಿದೆ. ಅವರು ಅದನ್ನು ಹೇಳುತ್ತಾರೆ ಎಂದು ನಾವೆಲ್ಲ ಬಯಸೋಣ. ಆದರೆ ಅವರು ಅಂತಹ ಹೇಳಿಕೆಯನ್ನು ನೀಡುತ್ತಾರೆ ಎಂಬ ಬಗ್ಗೆ ಸುವರ್ಣ ಅವರಿಗೆ ಯಾವ ನಂಬಿಕೆಯೂ ಇಲ್ಲ.

ಅವನ ಉಳಿದ ಮೂರು ಬೆರಳುಗಳು


ನಿನ್ನೆ ತಡ ರಾತ್ರಿ ನಮಾಜ್ ಮುಗಿಸಿ ಚಾಪೆ ಮಡಚುವ ಹೊತ್ತಿನಲ್ಲಿ ಹೊಳೆದ ಕೆಲವು ಸಾಲುಗಳು.
 
೧.
ಮಸೀದಿಯಲ್ಲಿ ನಮಾಜಿಗೆಂದು
ಸಾಲಾಗಿ ನಿಂತ ಧರ್ಮ ಪಂಡಿತರು
ಉರು ಹೊಡೆದ ಶ್ಲೋಕಗಳನ್ನು
ಪಟ ಪಟನೆ ಉದುರಿಸುತ್ತಿದ್ದಾರೆ,
ನಾನೋ, ಪದಗಳು ಸಿಕ್ಕದೆ
ಕಂಗಾಲಾಗಿದ್ದೇನೆ ನನ್ನ ದೊರೆಯೇ,
ನನಗೆ ನಿನ್ನನ್ನು ಆರಾಧಿಸಬೇಕಾಗಿದೆ
ಕೈಯೊಡ್ಡಿ ಬೇಡುವೆ
ನಾಲ್ಕು ಪದಗಳನ್ನು ಭಿಕ್ಷೆಯಾಗಿ ನೀಡು

ಧರ್ಮ ಪಂಡಿತನೊಬ್ಬ
ತನ್ನ ತೋರು ಬೆರಳನ್ನು ಹಿರಿದು
ನನ್ನ ಹಣೆಗೆ ಚುಚ್ಚಿ ಹೇಳಿದ,
ನೀನೊಬ್ಬ ದರ್ಮ ವಿರೋಧಿ...
ನನ್ನ ದೊರೆಯೇ
ಅವನ ಉಳಿದ ಮೂರು ಬೆರಳುಗಳು
ಅವನ ಎದೆಯ ಕಡೆಗೆ
ಚಾಚಿರುದನ್ನು ಅವನು ಕಂಡಿರಲಿಲ್ಲ...
೩.
ಅಮೃತ ಶಿಲೆಗಳಿಂದ
ಕಟ್ಟಲ್ಪಟ್ಟ ಆ ಭವ್ಯ ಮಸೀದಿಯ
ಮೀನಾರ ಆಕಾಶವನ್ನು ಚುಚ್ಚುತ್ತಿತ್ತು...
ನನ್ನ ದೊರೆಯೇ...
ನಿನ್ನ ಹುಡುಕುತ್ತ
ಆ ಮಿನಾರದ ತುತ್ತ ತುದಿಯನ್ನು ಏರಿದರೆ
ಮಿನಾರದ ಬುಡದಲ್ಲಿ
ತಲೆಗೆ ಸೂರಿಲ್ಲದೆ ಬಿಸಿಲಲ್ಲಿ ಒಣಗುತ್ತಿರುವ,
ಮಳೆಯಲ್ಲಿ ನೆನೆಯುತ್ತಿರುವ
ಲಕ್ಷಾಂತರ ಭಿಕಾರಿಗಳ ಕಂಡೆ...

ಮಸೀದಿಯ ಅಮೃತ ಶಿಲೆಯ
ನೆಲದ ಹಾಸು ಕನ್ನಡಿಯಂತೆ
ಹೊಳೆಯುತ್ತಿತ್ತು...
ನನ್ನ ದೊರೆಯೇ,
ನಿನಗೆಂದು ಬಾಗಿದವರು
ಆ ಕನ್ನಡಿಯಲ್ಲಿ
ತಮ್ಮ ಮುಖವನ್ನೇ ನೋಡಿ ಸುಖಿಸುತ್ತಿದ್ದಾರೆ...

ನಾನು ಮಾಡಿದೆ ಎಂದವನು
ಏನನ್ನು ಮಾಡಲಿಲ್ಲ
ನನ್ನ ದೊರೆಯೇ,
ನಾನು ಮಾಡಲಿಲ್ಲ ಎಂದವನು
ಎಲ್ಲವನ್ನು ಮಾಡಿದ...