Monday, July 17, 2017

ಮಮತೆ ಮತ್ತು ಇತರ ಕತೆಗಳು

ಜಾತಿ
ಅವನು ಬಾಡಿಗೆ ಮನೆ ಹುಡುಕುತ್ತಿದ್ದ.
ಅದೊಂದು ಮನೆ ಬಾಡಿಗೆಗಿತ್ತು. ಇವನು ಹೋಗಿ ವಿಚಾರಣೆ ನಡೆಸಿದ.
ಒಡೆಯ ಹೇಳಿದ ‘‘ನಮ್ಮ ಜಾತಿಯವರಿಗೆ ಮಾತ್ರ ಕೊಡೋದು. ಹೇಳಿ, ನಿಮ್ಮ ಜಾತಿ ಯಾವುದು’’
ಅವನು ಉತ್ತರಿಸಿದ ‘‘ನನ್ನದು ಮನುಷ್ಯ ಜಾತಿ...’’
ಒಡೆಯ ತಕ್ಷಣವೇ ಹೇಳಿದ ‘‘ಇಲ್ಲ ಇಲ್ಲ, ಆ ಜಾತಿಯವರಿಗೆ ಕೊಡುವುದಕ್ಕಾಗುವುದಿಲ್ಲ. ನಮ್ಮ ಜಾತಿಯವರಿಗೆ ಮಾತ್ರ...’’ ಎಂದು ಕದ ಇಕ್ಕಿದ.

ಗ್ಯಾರಂಟಿ
‘‘ಸಾರ್...ಈ ಫ್ರಿಜ್ಜಿಗೆ ಎಷ್ಟು ವರ್ಷ ಗ್ಯಾರಂಟಿಯಿದೆ’’
ಗ್ರಾಹಕ ಅಂಗಡಿಯಾತನಲ್ಲಿ ಕೇಳಿದ
‘‘ಮನುಷ್ಯನಿಗಿರುವ ಗ್ಯಾರಂಟಿಗಿಂತ ಎರಡು ದಿನ ಜಾಸ್ತಿ’’ ಅಂಗಡಿಯಾತ ತಣ್ಣಗೆ ಹೇಳಿದ

ಕೊಲೆ
‘‘ಬೀದಿಯಲ್ಲೊಂದು ಕೊಲೆ’’
‘‘ಹೌದಾ...ನಮ್ಮವರದಾ? ಅವರದಾ?’’
‘‘ನಮ್ಮವರದು....’’
‘‘ಹೌದಾ..ಅನ್ಯಾಯ ಬಂದ್ ನಡೆಸಬೇಕು....ಕೊಂದವರು ಯಾರು ನಮ್ಮವರೋ, ಅವರೋ...?’’
‘‘ನಮ್ಮವರೇ...’’
‘‘ಛೆ...ಸ್ವಲ್ಪದರಲ್ಲಿ ಮಿಸ್ಸಾಯಿತು...’’

ಹಣ
ಒಬ್ಬ ದಿನಕ್ಕೆ 200 ರೂಪಾಯಿ ದುಡಿಯುತ್ತಿದ್ದ. ಅದರಿಂದ 50 ರೂ.ಯನ್ನು ಉಳಿಸಿ, ತನ್ನ ತಂದೆ ತಾಯಿಯ ಕೈಗಿಡುತ್ತಿದ್ದ.
 ಆತ ನಿಧಾನಕ್ಕೆ ಹೆಚ್ಚು ಹಣ ಸಂಪಾದಿಸತೊಡಗಿದ.
ಇದೀಗ ಆತ ಪ್ರತಿ ದಿನ 10 ಸಾವಿರ ದುಡಿಯುತ್ತಿದ್ದಾನೆ.
ಆದರೆ, ತಂದೆ ತಾಯಿಗೆ ಕೊಡಲು ಅವನಲ್ಲಿ ಹಣವೇ ಇಲ್ಲ. 
ಕೇಳಿದರೆ ‘‘ನಿಮಗೇಕೆ ಹಣ?’’ ಎನ್ನುತ್ತಾನೆ. 
ಮೈ ತುಂಬಾ ಸಾಲ ಮಾಡಿಕೊಂಡು ಓಡಾಡುತ್ತಿದ್ದಾನೆ. 

ಓದು
‘‘ನಾನು ಓದಿದ ಸರ್ವ ಶ್ರೇಷ್ಠ ಚಿಂತಕರು ಅವರು. ನನ್ನ ಬದುಕಿಗೆ ಅವರೇ ನಾಯಕ’’ ಆತ ತನ್ನ ನೇತಾರನ ಹೆಸರು ಹೇಳಿ ಘೋಷಿಸಿದ.
ಸಂತ ವಿನಯದಿಂದ ಕೇಳಿದ ‘‘ನೀವು ಯಾವ ಯಾವ ಚಿಂತಕರನ್ನೆಲ್ಲ ಈವರೆಗೆ ಓದಿದ್ದೀರಿ’’
‘‘ಅವರನ್ನು ಬಿಟ್ಟರೆ ಇನ್ನಾರನ್ನೂ ಓದಿಲ್ಲ. ಯಾಕೆಂದರೆ ಇನ್ನಾರೂ ಅವರಷ್ಟು ದೊಡ್ಡ ಚಿಂತಕರೇ ಅಲ್ಲ’’ ಇವನು ಮತ್ತೆ ಎದೆ ತಟ್ಟಿ ಹೇಳಿದ.
ಸಂತ ನಿಟ್ಟುಸಿರಿಟ್ಟು ಅಲ್ಲಿಂದ ತೆರಳಿದ. 

ಮಮತೆ
ಒಬ್ಬ ವೃದ್ಧ ಕಾಲೆಳೆಯುತ್ತಾ ನಡೆಯುತ್ತಿದ್ದ.
ಅದನ್ನು ನೋಡಿದ ದಯಾಮಯ ಯುವಕನೊಬ್ಬ ಹೇಳಿದ ‘‘ನಾನು ನಿಮ್ಮನ್ನು ಹೆಗಲಲ್ಲಿ ಹೊತ್ತು ನಿಮ್ಮ ಮನೆಯವರೆಗೆ ನಡೆಯಲೆ?’’
ವೃದ್ಧ ಅವನನ್ನು ಮಮತೆಯಿಂದ ನೋಡಿ ಹೇಳಿದ ‘‘ನೀನು ನನ್ನನ್ನು ಹೊತ್ತುಕೊಳ್ಳುತ್ತೀಯೋ, ಇಲ್ಲವೋ ಗೊತ್ತಿಲ್ಲ. ಆದರೆ ನಿನ್ನನ್ನಂತೂ ನಾನು ನನ್ನ ಮನೆಯವರೆಗೆ ಹೊತ್ತುಕೊಂಡು ಹೋಗುವೆ’’ ಎಂದು ಅವನು ಕಾಲೆಳೆಯುತ್ತಾ ಮುಂದೆ ಸಾಗಿದ. 

ನೆರಳು
‘‘ನೆರಳಿಲ್ಲದ ಮನುಷ್ಯನಿದ್ದಾನೆಯೆ?’’ ಶಿಷ್ಯರು ಕೇಳಿದರು.
‘‘ಇದ್ದಾನೆ’’ ಸಂತ ನುಡಿದ.
‘‘ಯಾರು?’’ ಶಿಷ್ಯರು ಅಚ್ಚರಿಯಿಂದ ಪ್ರಶ್ನಿಸಿದರು.
‘‘ಯಾರು ಜೀವನದಲ್ಲಿ ತಪ್ಪನ್ನೇ ಮಾಡಿರುವುದಿಲ್ಲವೋ ಅವನಿಗೆ ನೆರಳಿರುವುದಿಲ್ಲ...’’
ಎಂದ ಸಂತ ಅಲ್ಲಿಂದ ಹೊರ ನಡೆದ. ಅವನ ನೆರಳು ಅವನನ್ನು ಹಿಂಬಾಲಿಸುತ್ತಿತ್ತು.