Friday, May 27, 2016

ಯು ಟರ್ನ್: ತಿರುಗಿ ಹೊಡೆವ ಕರ್ಮ ಫಲ!

‘ಯೂ ಟರ್ನ್’ ಚಿತ್ರ ನೋಡಿದೆ.
ಇದರ ಕುರಿತಂತೆ ಕೆಲವು ಮಾತುಗಳನ್ನು ಹಂಚಿಕೊಳ್ಳಲೇಬೇಕಾಗಿದೆ.
ಮೂರು ನಿಮಿಷದ ಒಂದು ಕಿರು ಚಿತ್ರವಾಗಬಹುದಾದ ವಸ್ತುವನ್ನು ಎರಡೂವರೆ ಗಂಟೆಯ ಥ್ರಿಲ್ಲರ್ ಚಿತ್ರವನ್ನಾಗಿಸಿದ ನಿರ್ದೇಶಕರ ಸಾಹಸಕ್ಕೆ ಭಲೇ ಎನ್ನಲೇ ಬೇಕು. ಹೌದು, ಚಿತ್ರದ ಉದ್ದೇಶವನ್ನು ಹೇಳಲು, ನಿಜವಾದ ಕತೆಯನ್ನು ಹೇಳಲು ಮೂರು ನಿಮಿಷ ಧಾರಾಳ ಸಾಕು. ಮೂರು ಪಾತ್ರಗಳನ್ನಷ್ಟೇ ಇಟ್ಟುಕೊಂಡು ಈ ಕಿರು ಚಿತ್ರವನ್ನು ಮುಗಿಸಿ ಬಿಡಬಹುದು. ಹಾಗೆಂದು ಚಿತ್ರವನ್ನು ನಿರ್ದೇಶಕ ಎಲ್ಲೂ ವಿನಾಕಾರಣ ಎಳೆದಿಲ್ಲ. ಚಿತ್ರದ ನಿರೂಪಣೆಯಲ್ಲಿ ಯಾವುದೂ ಅನಗತ್ಯ ಅನ್ನಿಸುವುದಿಲ್ಲ.
ಚಿತ್ರ ಆರಂಭದಿಂದ ಕೊನೆಯವರೆಗೂ ನಮ್ಮನ್ನು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುತ್ತದೆ.


ನಾವು ದಿನ ನಿತ್ಯ, ತೀರಾ ಸಣ್ಣ ತಪ್ಪು ಎಂದು ಭಾವಿಸಿ ಮಾಡುವ ಕೃತ್ಯವನ್ನು ಇಟ್ಟುಕೊಂಡು ನಿರ್ದೇಶಕ ಸಿನಿಮಾ ಮಾಡಿದ್ದು ಅಭಿನಂದನೀಯ. ಒಂದು ಥ್ರಿಲ್ಲರ್ ಚಿತ್ರದ ಮೂಲಕವೂ ಅದ್ಭುತವಾದ ಮಾನವೀಯ ಸಂದೇಶವನ್ನು ನೀಡಬಹುದು ಎಂದು ಯೋಚಿಸಿದ ಪವನ್ ಕುಮಾರ್ ಅವರಿಗೆ ಅಭಿನಂದನೆಗಳು. ಚಿತ್ರ ಆಮಿರ್ ಖಾನ್‌ನ ‘ತಲಾಶ್’ನ್ನು ಎಲ್ಲೋ ಹೋಲುತ್ತದೆ. ಆದರೆ ತಲಾಶ್ ಚಿತ್ರ ಥ್ರಿಲ್ಲರ್ ಚಿತ್ರದ ಬಿಗಿಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿತ್ತು. ‘ಯೂ ಟರ್ನ್’ ಚಿತ್ರ ಆಮಿರ್ ಖಾನ್‌ನ ತಲಾಶ್‌ಗಿಂತ ಹಲವು ಪಟ್ಟು ಚೆನ್ನಾಗಿದೆ. ಕ್ಲೆೃಮಾಕ್ಸ್‌ನ ರಹಸ್ಯವನ್ನು ಉಳಿಸಿಕೊಳ್ಳುವಲ್ಲಿಯೂ ನಿರ್ದೇಶಕ ಯಶಸ್ವಿಯಾಗಿದ್ದಾರೆ. ಕ್ಲೆೃಮಾಕ್ಸ್ ಬಹಿರಂಗವಾಗುವಾಗ ಅದು ಇನ್ನಷ್ಟು ತೀವ್ರವಾಗಿರಬೇಕಾಗಿತ್ತು. ಇಡೀ ಚಿತ್ರದಲ್ಲಿ ಗಮನಾರ್ಹವಾದುದು, ಸಬ್‌ಇನ್ಸ್‌ಪೆಕ್ಟರ್ ನಾಯಕ್ ಪಾತ್ರದಲ್ಲಿ ರೋಜರ್ ನಾರಾಯಣ್ ಅಭಿನಯ. ಒಬ್ಬ ಸಹೃದಯಿ ಯುವ ಪೊಲೀಸ್ ವ್ಯಕ್ತಿತ್ವವನ್ನು ಅವರು ಪರಿಣಾಮಕಾರಿಯಾಗಿ ತಮ್ಮ ನಟನೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಪತ್ರಕರ್ತೆ ರಚನಾ ಪಾತ್ರದಲ್ಲಿ ಶೃದ್ಧಾ ಶ್ರೀನಾಥ್ ಅಭಿನಯವೂ ಪರವಾಗಿಲ್ಲ. ರಾಧಿಕಾ ಚೇತನ್ ಅವರ ಮಾಯಾ ಪಾತ್ರ ಅಷ್ಟೇನೂ ತೀವ್ರವಾಗಿ ತಟ್ಟುವುದಿಲ್ಲ.


 ಪವನ್ ಕುಮಾರ್ ಅವರದು ಇದು ಮೂರನೇ ಚಿತ್ರ. ಲೈಫ್ ಇಷ್ಟೇನೆ...ಒಬ್ಬ ಯುವಕನ ಒಳಗಿನ ಪ್ರಾಯದ ತಳಮಳನ್ನು ವಿಭಿನ್ನವಾಗಿ ನಿರೂಪಿಸಿದ ಚಿತ್ರ. ಲೂಸಿಯಾ ಕುರಿತಂತೆ ಹೇಳಲೇ ಬೇಕಾಗಿಲ್ಲ. ರಾಜ್ಯದಾಚೆಗೂ ಚರ್ಚೆಗೊಳಗಾದ ಚಿತ್ರ. ಇದೀಗ ‘ಯೂ ಟರ್ನ್’ನಲ್ಲೂ ಅವರು ಯಶಸ್ವಿಯಾಗಿದ್ದಾರೆ. ಒಂದು ಚಿತ್ರದ ಗೆಲುವಿನ ಹ್ಯಾಂಗೋವರ್‌ನಲ್ಲಿ ಸಿಲುಕಿಕೊಳ್ಳದೇ ವಿಭಿನ್ನವಾಗಿ ಚಿತ್ರ ಮಾಡುತ್ತಾ ಹೋಗುವುದು ನಿರ್ದೇಶಕನ ಪಾಲಿಗೆ ಒಂದು ಸವಾಲೇ ಸರಿ. ಈ ಸವಾಲನ್ನು ಪವನ್ ಕುಮಾರ್ ಗೆದ್ದಿರುವುದು ನೆಮ್ಮದಿಯ ವಿಷಯ. ಇವರಿಂದ ಕನ್ನಡ ಚಿತ್ರರಂಗ ಇನ್ನಷ್ಟು ನಿರೀಕ್ಷಿಸುತ್ತಿದೆ.