Saturday, December 31, 2011

ಬಳಕೆ

‘‘ನಿಮ್ಮ ಭಾರತದಲ್ಲಿ ಕಸಗಳನ್ನು ಏನು ಮಾಡುತ್ತೀರಿ?’’
‘‘ಪಕ್ಕದ ಮನೆಯ ಕಾಂಪೌಂಡ್ಗೆ ಎಸೀತೇವೆ’’
‘‘ನಿಮ್ಮಲ್ಲಿ ಸಾರ್ವಜನಿಕ ಕಸದ ತೊಟ್ಟಿಗಳು ಇಲ್ಲವೇ?’’
‘‘ಇದೆ...ಆದರೆ ಅದನ್ನು ನಾವು ಬ್ರೂಣಗಳನ್ನು, ಈಗಷ್ಟೇ ಹುಟ್ಟಿದ ಹೆಣ್ಣು ಶಿಶುಗಳನ್ನು ಎಸೆಯೂದಕ್ಕೆ ಬಳಸುತ್ತೇವೆ’’

Friday, December 30, 2011

ಥ್ಯಾಂಕ್ಸ್ ಸತೀಶ್.....

ನನ್ನ ಗುಜರಿ ಅಂಗಡಿಯ ವಿನ್ಯಾಸವನ್ನು ಒಂದು ಚೂರು ತಿದ್ದಿ ತೀಡಿದ್ದೇನೆ. ನನ್ನ ಗೆಳೆಯ, ಕನ್ನಡದ ಖ್ಯಾತ ಕಲಾವಿದ ಸತೀಶ್ ಕಲ್ಮಾಡಿ, ನನ್ನ ಸಹೋದ್ಯೋಗಿ ಈ ಗುಜರಿ ಅಂಗಡಿಗೆ ಸುಂದರವಾದ ಬೋರ್ಡ್ ಬರೆದು ಕೊಟ್ಟಿದ್ದಾರೆ. ಅವರಿಗೆ ಹೃದಯ ಪೂರ್ವಕ ಕೃತಜ್ಞತೆ.

Thursday, December 29, 2011

ತಾಯಿ

ತನ್ನ ಮಕ್ಕಳು ಅತ್ತಾಗ ತಾಯಿ ನಗುವಳೇ?
ಹೌದಂತೆ,
ನಾನು ಹುಟ್ಟಿದಾಗ ಜೋರಾಗಿ ಅತ್ತೆನಂತೆ,
ಅದ ಕೇಳಿ ತಾಯಿ ನಕ್ಕಳಂತೆ!!

Wednesday, December 28, 2011

ರಕ್ತ ಮತ್ತು ಇತರ ಕತೆಗಳು


ಭಯ
ಒಬ್ಬ ಭಯೋತ್ಪಾದಕ.
ಆತ್ಮಹತ್ಯೆಗೆ ಸಿದ್ಧನಾಗುತ್ತಿದ್ದ.
ಮೈ ತುಂಬಾ ಬಾಂಬುಗಳು.
ಅವನ ಮಕ್ಕದಲ್ಲೇ ಪುಟಾಣಿ ಮಗುವೊಂದು ಆಡುತ್ತಿತ್ತು.
ಮಗು ಇದ್ದಕ್ಕಿದ್ದಂತೆಯೇ ಅವನತ್ತ ನೋಡಿತು.
ಕಣ್ಣಿಗೆ ಕಣ್ಣು ಸೇರಿಯೇ ಬಿಟ್ಟಿತು.
ಆತ ಭಯದಿಂದ ಸಣ್ಣಗೆ ನಡುಗಿ ಬಿಟ್ಟ.

ಒಂದು ಕನಸು
ಒಂದು ಕನಸು ಆಶ್ರಯಕ್ಕಾಗಿ ಬೀದಿ ಬೀದಿ ಅಲೆಯುತ್ತಿತ್ತು. ಆ ಊರಿನ ಶ್ರೀಮಂತನೊಬ್ಬನ ಮನೆಯ ಬಾಗಿಲನ್ನು ತಟ್ಟಿತು. ‘‘ನಾನೊಂದು ಕನಸು. ನನಗೆ ಆಶ್ರಯ ಕೊಡುವೆಯ?’’ ಶ್ರೀಮಂತನಲ್ಲಿ ಕೇಳಿತು.
ಶ್ರೀಮಂತ ಸಿಟ್ಟಿನಿಂದ ಹೇಳಿದ ‘‘ನಿನ್ನಂತಹ ಕನಸುಗಳಿಗೆ ನನ್ನ ಅರಮನೆಯಲ್ಲಿ ಜಾಗವಿಲ್ಲ’’ ಎಂದು ಹೊರಗಟ್ಟಿದ.
ಆ ಕನಸು ಅದೇ ಬೀದಿಯ ಭಿಕ್ಷುಕನೊಬ್ಬನ ಬಳಿಕ ಆಶ್ರಯ ಕೇಳಿತು ‘‘ನಾನೊಂದು ಕನಸು. ನನಗೆ ಆಶ್ರಯ ಕೊಡುವೆಯ?’’ ಭಿಕ್ಷುಕ ತನ್ನ ಗುಡಿಸಲಲ್ಲಿ ಆ ಕನಸಿಗೆ ಆಶ್ರಯ ಕೊಟ್ಟ.
ಕನಸು ಆ ಗುಡಿಸಲಲ್ಲಿ ಬೆಳೆಯಿತು. ಕನಸು ಬೆಳೆದಂತೆ ಆ ಭಿಕ್ಷುಕನೂ ಬೆಳೆದ. ಇತ್ತ ಕನಸನ್ನು ಹೊರ ಹಾಕಿದ ಶ್ರೀಮಂತ ಸಿಡಿಲಿಗೆ ಸಿಲುಕಿದ ಮರದಂತೆ ಬಾಡತೊಡಗಿದ. ನಿಧಾನಕ್ಕೆ ಬಿಕಾರಿಯೇ ಆದ.

ರಕ್ತ
ಕುರಿ ಕಡಿಯುತ್ತಿದ್ದ ಕಟುಕನಲ್ಲಿ ಆತ ಕೇಳಿದ
‘‘ಇದರ ರಕ್ತ ನೋಡಿ ನಿನಗೆ ಏನೂ ಅನ್ನಿಸುತ್ತಿಲ್ಲವೆ?’’
‘‘ಇಲ್ಲ, ಯಾಕೆಂದರೆ ಹಸಿದ ನನ್ನ ಮಕ್ಕಳ ಕಣ್ಣೀರಿನ ಬಣ್ಣ ರಕ್ತಕ್ಕಿಂತಲೂ ಕೆಂಪಗಿದೆ’’ ಕಟುಕ ಉತ್ತರಿಸಿದ.

ಕನಸು
ಒಬ್ಬ ಸುಂದರವಾದ ಕನಸು ಕಾಣುತ್ತಿದ್ದ.
ಇದ್ದಕ್ಕಿದ್ದಂತೆಯೇ ಯಾರೋ ಕರೆದರು. ನೋಡಿದರೆ ಪತ್ನಿ.
‘‘ಛೇ, ಕನಸನ್ನು ಕೆಡಿಸಿಬಿಟ್ಟೆ’’ ಗಂಡ ಕಿಡಿಯಾಗಿ ಹೇಳಿದ.
‘‘ಕನಸು ನಿಮ್ಮನ್ನು ಕೆಡಿಸುವುದಕ್ಕಿಂತ ಕನಸನ್ನು ನಾನು ಕೆಡಿಸುವುದೇ ವಾಸಿ. ಕಚೇರಿಗೆ ಹೊತ್ತಾಯಿತು ಏಳಿ’’ ಪತ್ನಿ ಖಾರವಾಗಿ ಉತ್ತರಿಸಿದಳು.

ಹೀಗೊಂದು ಪತ್ರ 
ಸಾಧಾರಣವಾಗಿ ಆತ ಇಮೇಲ್ ಮೂಲಕ, ಮೊಬೈಲ್‌ಗಳ ಮೂಲಕವೇ ಮಿತ್ರರ ಸಂದೇಶಗಳನ್ನು ಸ್ವೀಕರಿಸುವುದು. ಹೀಗಿರುವಾಗ ಒಂದು ದಿನ ಆತನಿಗೆ ಇನ್‌ಲೇಂಡ್ ಲೆಟರ್‌ನಲ್ಲಿ ಒಂದು ಪತ್ರ ಬಂತು.
ಅರೆ! ನನಗೆ ಪೋಸ್ಟ್ ಮೂಲಕ ಪತ್ರವೆ? ಯಾರಿಂದ? ಎಲ್ಲಿಂದ? ಅವನಿಗೆ ಅಚ್ಚರಿಯಾಯಿತು.
ಪೋಸ್ಟ್‌ಮೇನನ್ನು ನೋಡಿದ. ಒಣಗಿದ ಮುಖ. ಆತ ಪೋಸ್ಟ್‌ಮೇನ್‌ಗೆ ಹೇಳಿದ ‘‘ನನಗೆ ಪತ್ರ ಬರೆಯುವವರು ಯಾರೂ ಇಲ್ಲ’’
 ಪೋಸ್ಟ್ ಮೇನ್ ಉತ್ತರಿಸಿದ ‘‘ಇತ್ತೀಚೆಗೆ ನಮ್ಮ ಕಚೇರಿಯಿಂದ ರವಾನಿಸಲು ಪತ್ರಗಳೇ ಇಲ್ಲ. ಹೀಗೆ ಆದರೆ ನನ್ನ ಕೆಲಸವೇ ಹೋಗಿ ಬಿಡುತ್ತೆ. ಆದುದರಿಂದ ನಾನೇ ಎಲ್ಲ ವಿಳಾಸ ಹುಡುಕಿ ಪತ್ರ ಬರೆಯುತ್ತಿದ್ದೇನೆ. ಪ್ಲೀಸ್ ತಗೊಳ್ಳಿ...’’

ಉದ್ಧಾರ
ತನ್ನ ವರ್ಗಾವಣೆಗಾಗಿ ಮೇಷ್ಟ್ರು ರಾಜಕಾರಣಿಯಾಗಿರುವ ತನ್ನ ಶಿಷ್ಯನ ಮನೆ ಬಾಗಿಲನ್ನು ತುಳಿದರು.
ರಾಜಕಾರಣಿ ವ್ಯಂಗ್ಯದಿಂದ ಕೇಳಿದ ‘‘ಏನು ಸಾರ್? ಈ ಜನ್ಮದಲ್ಲಿ ಉದ್ಧಾರವಾಗೋದಿಲ್ಲ ಅಂತ ಶಾಲೆಯಲ್ಲಿ ಎಲ್ಲರೆದುರು ಹೇಳ್ತಾ ಇದ್ದಿರಿ?’’
ಮೇಷ್ಟ್ರು ತಣ್ಣಗೆ ಹೇಳಿದರು ‘‘ಎಲ್ಲಿ ಉದ್ಧಾರ ಆಗಿದ್ದೀಯ? ರಾಜಕಾರಣಿಯಾಗಿದ್ದೀಯೆ ಹೊರತು, ಉದ್ಧಾರ ಎಲ್ಲಿ ಆಗಿದ್ದಿ?’’
ಹಾಗೆಂದು ಮೇಷ್ಟ್ರು ಬಂದ ದಾರಿಯಲ್ಲೇ ವಾಪಾಸಾದರು.

ಗೊತ್ತಿಲ್ಲ
‘‘ಎಲ್ಲಿಗೆ ಹೊರಟಿದ್ದೀಯ?’’
‘‘ಒಂದಿಷ್ಟು ಖರೀದಿ ಮಾಡುವುದಕ್ಕಿತ್ತು. ಶಾಪಿಂಗ್‌ಗೆಂದು ಮಾಲ್ ಕಡೆ ಹೊರಟಿದ್ದೇನೆ’’
‘‘ಏನು ಖರೀದಿಸುವುದಕ್ಕೆ ಹೊರಟಿದ್ದೀಯ?’’
‘‘ಗೊತ್ತಿಲ್ಲ, ಶಾಪಿಂಗ್ ಮಾಲ್‌ನಲ್ಲಿ ಏನೇನಿದೆ ಎಂದು ನೋಡಿ ಖರೀದಿಸಲಿದ್ದೇನೆ’’

ಬಾಕ್ಸಿಂಗ್
ಇಬ್ಬರೂ ಬಾಕ್ಸಿಂಗ್ ಕಲಿಗಳು.
ಕಣದಲ್ಲಿ ಪರಸ್ಪರ ಹೋರಾಡುತ್ತಿದ್ದರು.
ಜನರು ಹುಚ್ಚೆದ್ದು ಕುಣಿದು, ಪ್ರೋತ್ಸಾಹಿಸುತ್ತಿದ್ದರು.
ಮೊದಲ ಬಾಕ್ಸರ್ ಎರಡನೆಯವನಿಗೆ ಬಲವಾಗಿ ಗುದ್ದಿದ.
ಎರಡನೆಯ ವ್ಯಕ್ತಿ ಆ ಏಟಿನ ಆಘಾತಕ್ಕೆ ತತ್ತರಿಸಿದ. ಅವನ ಮೂಗಿನಿಂದ ರಕ್ತ ಒಸರತೊಡಗಿತು.
ಏನನ್ನಿಸಿತೋ, ಮೊದಲನೆ ಬಾಕ್ಸರ್ ಮೆಲ್ಲಗೆ ಹೇಳಿಯೇ ಬಿಟ್ಟ ‘‘ನೋವಾಯಿತೇ...ಕ್ಷಮಿಸಿ ಬಿಡು’’
ಎರಡನೆಯಾತ ನೋವಿನಲ್ಲಿ ಮುಲುಗುತ್ತಾ ನುಡಿದ ‘‘ನೀನು ಮೊದಲು ನೀಡಿದ ಪೆಟ್ಟಿಗಿಂತಲೂ ಹೆಚ್ಚು ತೀಕ್ಷ್ಣವಾಗಿದೆ ನಿನ್ನ ಕ್ಷಮೆ’’

ಮೊಬೈಲು
ಮನೆಗೆ ತಂದ ಮೊಬೈಲನ್ನು ಹೆಂಡತಿ ಮಕ್ಕಳಿಗೆ ಪರಿಚಯಿಸುತ್ತಿದ್ದ
‘‘ಇದನ್ನು ಮೊಬೈಲು ಎಂದು ಕರೆಯುತ್ತಾರೆ. ಎಷ್ಟು ದೂರವಿದ್ದವರೊಂದಿಗೂ ಇದರಲ್ಲಿ ಮಾತನಾಡಬಹುದು...ಪ್ರಪಂಚದ ಎಲ್ಲೇ ಇದ್ದರೂ ಅವರೊಂದಿಗೆ ಮಾತನಾಡಬಹುದು’’ ಮಗ ಮೂಲೆಯಲ್ಲಿ ಕುಳಿತಿದ್ದ ತಾಯಿಗೆ ಕೂಗಿ ಹೇಳಿದ.
‘‘ಇನ್ನಾದರೂ ನನ್ನೊಟ್ಟಿಗೆ ಸರಿಯಾಗಿ ಮಾತನಾಡಬಹುದಲ್ಲ ಮಗ’’ ತಾಯಿ ಸಂಭ್ರಮದಿಂದ ಕೇಳಿದಳು.
ಮಗ ತಲೆತಗ್ಗಿಸಿದ.

Monday, December 26, 2011

ಇರುವೆ ನೀರು ಕುಡೀತ ಇದೆ

ಶ್...ಶ್...!!! ಸದ್ದು ಮಾಡಬೇಡಿ. ಇರುವೆ ನೀರು ಕುಡೀತ ಇದೆ:
ಈ ಫೋಟೋ ನನಗೆ facebook ನಲ್ಲಿ ಸಿಕ್ತು. ಕಾಸರಗೊಡಿನವರಾದ ಚಂದ್ರಶೇಖರ್ ಈ ಫೋಟೋ ತೆಗೆದಿದ್ದಾರೆ. ಒಳ್ಳೆಯ ಫೋಟೋವನ್ನು ತೆಗೆಯೋದಕ್ಕೆ, ಒಳ್ಳೆಯಾ ಕ್ಯಾಮರ, ನೋಡುವ ಕಣ್ಣು ಮಾತ್ರವಲ್ಲ ಒಳ್ಳೆಯ ಅದೃಷ್ಟವೂ ಬೇಕು. ಆ ಅದೃಷ್ಟವನ್ನು ತನ್ನದಾಗಿಸಿಕೊಂಡ ಛಾಯಾಗ್ರಾಹಕರಿಗೆ ನನ್ನ ಅಭಿನಂದನೆ.

ಆ...ಲಯದೊಳಗೆ.....

ನಾನು ಹತ್ತು ವರ್ಷಗಳ ಹಿಂದೆ ಮಡಿಕೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಕ್ರಿಸ್ಮಸ್ ಸಂದರ್ಭದಲ್ಲಿ ಬರೆದ ಪುಟ್ಟ ಕವಿತೆ. ಪಿ. ಲಂಕೇಶರ ‘ಲಂಕೇಶ್ ಪತ್ರಿಕೆ’ಯಲ್ಲಿ ಈ ಕವಿತೆ ಪ್ರಕಟವಾಗಿದೆ.

ನಾದವೊಂದು
ಮಂಜಿನ ಎದೆಯ ಕದ ತೆರೆದು
ಮುಂಜಾವಿನ ಮೊಂಬತ್ತಿ
ತಂದು ಹಚ್ಚಿಟ್ಟ ಹೊತ್ತು

ವೌನಕ್ಕೆ
ತಂದೆಯ ಗತ್ತು!

ಅದುರುವ ಚಿಗುರೆಲೆಯ ಮೇಲೆ
ಒಂದೇ ಒಂದು ಹನಿ
ಕಣ್ಣೆವೆಯ ತೊಟ್ಟು
ಕಳಚಿ ಬಿದ್ದ ಕಂಬನಿ!

ನಿನ್ನೆಯ ಸಂಜೆ
ಹರೆಯಕ್ಕೆ ಲಜ್ಜೆಯ ಬಣ್ಣ
ಬಳಿದ ಹುಡುಗಿ
ತಾಯಿ ಹೆಜ್ಜೆಯಲ್ಲಿ
ಇನ್ನಿಲ್ಲದಂತೆ...

ಲಯದೊಳಗೆ ಕರಗಿ...

ದೇವರ ಪಾದದ ಬಳಿ
ಚಿಟ್ಟೆಗಳಂತಿರುವ ಮಕ್ಕಳು
ಗಿಡಗಿಡಗಳಿಗೆ ಹಾರಿ
ಕಿತ್ತು ತಂದ ಹೂವುಗಳು!

Sunday, December 25, 2011

ಡಾನ್-2: ಅದ್ದೂರಿತನವೇ ಹೆಗ್ಗಳಿಕೆ

ಸುಮ್ನೆ ಟೈಮ್ ಪಾಸ್ಗಾಗಿ ಒಂದು ಚಿತ್ರ ಮತ್ತು ವಿಮರ್ಶೆ

‘ರಾ-1’ ಚಿತ್ರದಲ್ಲಿ ನಾಯಕನ ಮಗನಿಗೆ ಒಂದು ಆಸೆಯಿರುತ್ತದೆ. ಅದೆಂದರೆ ಯಾರೂ ಸೋಲಿಸಲಾಗದ ಖಳನಾಯಕನೊಬ್ಬನನ್ನು ತನ್ನ ತಂದೆ ಸೃಷ್ಟಿಸಬೇಕು. ಅಂತಹ ಒಂದು ವೀಡಿಯೋ ಗೇಮ್‌ನನ್ನು ಸೃಷ್ಟಿಸಲು ಹೋಗಿ ‘ರಾ-1’ನ ಸೃಷ್ಟಿಯಾಗುತ್ತದೆ. ಆದರೆ ಅಲ್ಲಿ ಅವನನ್ನು ಸೋಲಿಸಲು ‘ಜಿ-1’ ಇದ್ದಾನೆ. ರಾ-1 ಕಟ್ಟಕಡೆಗೆ ಸಾಯುತ್ತಾನೆ ಕೂಡ. ಆದರೆ ತನ್ನ ಮಗನ ಆಸೆಯನ್ನು ನಿಜವಾಗಿಯೂ ಈಡೇರಿಸಲು ಶಾರುಕ್ ಖಾನ್ ‘ಡಾನ್’ ಚಿತ್ರದಲ್ಲಿ ಪ್ರಯತ್ನಿಸಿದ್ದಾರೆ. ಡಾನ್ ಎಂದರೆ ಸೋಲೇ ಇಲ್ಲದ ಖಳನಾಯಕ. ‘ಡಾನ್-2’ ಚಿತ್ರದಲ್ಲೂ ಆ ಖಳನಾಯಕನ ದ್ವಿಗ್ವಿಜಯ ಮುಂದುವರಿಯುತ್ತದೆ.

ಡಾನ್ ಚಿತ್ರಕ್ಕೂ ಡಾನ್-2 ಚಿತ್ರಕ್ಕೂ ಒಂದು ಮುಖ್ಯ ವ್ಯತ್ಯಾಸವಿದೆ. ಡಾನ್-2ವಿನಲ್ಲಿ ಚಿತ್ರಕ್ಕೆ ಒಂದು ದಾರಿಯಿದೆ. ಗುರಿಯಿದೆ. ಆ ದಾರಿಯಲ್ಲೇ ತನ್ನ ಗುರಿಯೆಡೆಗೆ ನೇರವಾಗಿ, ವೇಗವಾಗಿ ಚಲಿಸುತ್ತಾ ಹೋಗುತ್ತದೆ. ಇದು ಚಿತ್ರದ ಹೆಗ್ಗಳಿಕೆಯೂ ಹೌದು. ದೌರ್ಬಲ್ಯವೂ ಹೌದು. ಬರ್ಲಿನ್ ಖಜಾನೆಯಿಂದ ಯುರೋಗಳ ಕರೆನ್ಸಿ ಪ್ಲೇಟ್‌ಗಳನ್ನು ಅಪಹರಿಸುವುದು ಈ ಬಾರಿ ಡಾನ್‌ನ ಗುರಿ. ಒಂದೆಡೆ ಪೊಲೀಸ್ ಅಧಿಕಾರಿಣಿ, ಜಂಗ್ಲಿಬಿಲ್ಲಿ ರೋಮಾ(ಪ್ರಿಯಾಂಕಾ ಛೋಪ್ರಾ) ಡಾನ್‌ನ ಹಿಂದೆ ಬಿದ್ದಿರುತ್ತಾಳೆ. ಅದರ ನಡುವೆಯೇ ಇಂತಹದೊಂದು ಯೋಜನೆಯನ್ನು ಹಾಕುತ್ತಾನೆ. ಈ ಯೋಜನೆಯಲ್ಲಿ ಡಾನ್ ಗುರಿ ಮುಟ್ಟುತ್ತಾನೋ ಇಲ್ಲವೋ ಎನ್ನುವುದು ಕಥೆಯ ಪ್ರಧಾನ ಅಂಶ. ಇದರ ಜೊತೆ ಜೊತೆಗೆ ಡಾನ್ ಮತ್ತೊಂದು ಯೋಜನೆಯನ್ನೂ ಹಾಕಿಕೊಂಡಿದ್ದಾನೆ. ತನ್ನ ಮೇಲಿರುವ ಎಲ್ಲ ಮೊಕದ್ದಮೆಗಳನ್ನು ಪೊಲೀಸ್ ಇಲಾಖೆ ಕೈ ಬಿಡಬೇಕು. ಒಂದು ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಆತನ ಯೋಜನೆ ಯಶಸ್ವಿಯಾಗುವುದೋ, ಇಲ್ಲವೋ ಎನ್ನುವುದನ್ನು ಡಾನ್-2 ಹೇಳ ಹೊರಡುತ್ತದೆ. ಚಿತ್ರದಲ್ಲಿ ಹಳೆಯ ಇನ್ನೊಂದು ಖಳ ಪಾತ್ರವೂ ಕತೆಯಲ್ಲಿ ಮುಖ್ಯವಾಗಿದೆ. ಅದು ಬೊಮನ್ ಇರಾನಿಯ ವರ್ದನ್ ಪಾತ್ರ.

ಚಿತ್ರದ ಓಟ ಆರಂಭವಾಗುವುದು ಡಾನ್ ಪೊಲೀಸರಿಗೆ ಶರಣಾಗುವ ಮೂಲಕ. ತನ್ನ ಯೋಜನೆಯ ಒಂದು ಭಾಗವಾಗಿಯೇ ಆತ ಪೊಲೀಸರಿಗೆ ಶರಣಾಗುತ್ತಾನೆ. ವರ್ಧನ್ ಜೊತೆಗೆ ಮತ್ತೆ ಅಲ್ಲಿಂದ ಪರಾರಿಯಾಗುತ್ತಾನೆ. ಅವರಿಬ್ಬರು ಜೊತೆಗೆ ಕರೆನ್ಸಿ ಪ್ಲೇಟ್ ಅಪಹರಣದ ಯೋಜನೆಯನ್ನು ರೂಪಿಸುತ್ತಾರೆ. ಅದಕ್ಕಾಗಿ ಅವರು ಬಳಸಿಕೊಳ್ಳುವ ಇನ್ನೊಬ್ಬ ಖಳ ಜಬ್ಬಾರ್. ಸ್ನೇಹಿತರಾಗಿದ್ದುಕೊಂಡು ಪರಸ್ಪರರ ವಿರುದ್ಧ ಸಂಚು ಹೆಣೆಯುತ್ತಾ, ಈ ತಂಡ ಮುಂದುವರಿಯುತ್ತದೆ. ಹಾಗೆಯೇ ಇವರಿಗೆ ಕಂಪ್ಯೂಟರ್ ವ್ಯೆಹಗಳನ್ನು ನಾಶ ಮಾಡಲು ಸಮೀರ್ (ಕುನಾಲ್) ಸಹಾಯ ಮಾಡುತ್ತಾನೆ. ಈ ಯೋಜನೆಯ ಸಣ್ಣ ಸುಳಿಯು ರೋಮಾ(ಪ್ರಿಯಾಂಕಾ ಛೋಪ್ರಾ)ಳಿಗೆ ಸಿಕ್ಕಿ ಅವಳೂ ಬರ್ಲಿನ್‌ಗೆ ಆಗಮಿಸುತ್ತಾಳೆ.

ರೋಮಾ ಮತ್ತು ಡಾನ್ ನಡುವಿನ ಕಣ್ಣಾಮುಚ್ಚಾಳೆ ಆಟ, ಛೇಸಿಂಗ್ ಹಿತವಾಗಿದೆ. ಡಾನ್ ಯೋಜನೆಯ ನಡುವೆಯೇ ತನ್ನ ಶತ್ರುಗಳನ್ನು ಒಬ್ಬೊಬ್ಬರನ್ನಾಗಿ ಮುಗಿಸುತ್ತಾ ಬರುತ್ತಾನೆ. ಫರ್ಹಾನ್ ಅಖ್ತರ್ ಚಿತ್ರದಲ್ಲಿ ಛೇಸಿಂಗ್, ಫೈಟಿಂಗ್, ಸಾಹಸ ದೃಶ್ಯಗಳಿಗೇ ಹೆಚ್ಚು ಒತ್ತು ಕೊಟ್ಟಿದ್ದಾರೆ. ಈ ಚಿತ್ರಕ್ಕೆ ಅದಷ್ಟೇ ಜೀವಾಳ ಎಂದು ಅವರು ಭಾವಿಸಿದ್ದಾರೆ. ಚಿತ್ರದಲ್ಲಿ ಶಾರುಕ್ ಡಾನ್ ಆಗಿ ಮೈತೋರುವ ಗುಣಗಳು ಚಿತ್ರದ ಅತ್ಯುತ್ಕಟ ಕ್ಷಣವಾಗಿರುತ್ತದೆ. ಆದರೆ ಒಂದು ಚಿತ್ರಕ್ಕೆ ಬೇಕಾಗಿರುವುದು ಇದಿಷ್ಟು ಮಾತ್ರವೆ?

ಯಾವ ರೀತಿಯಲ್ಲೂ ಅಮಿತಾಭ್ ಬಚ್ಚನ್ ನಟಿಸಿದ ಡಾನ್ ಚಿತ್ರಕ್ಕೆ ಡಾನ್-2 ಚಿತ್ರ ಸರಿಗಟ್ಟಲಾರದು. ಯಾಕೆಂದರೆ ಡಾನ್-2 ಚಿತ್ರದ ಕತೆ ತೆಳುವಾದುದು. ಅಥವಾ ಒಂದು ಯೋಜನೆಯನ್ನು ಬಿಟ್ಟರೆ ಅಲ್ಲಿ ಕತೆಯೇ ಇಲ್ಲ. ಮುಖ್ಯವಾಗಿ ಯಾವ ಪಾತ್ರಗಳಿಗೂ ಪೋಷಣೆಯೇ ಇಲ್ಲ. ಆದರೆ ಮೂಲ ಡಾನ್ ಹಾಗಲ್ಲ. ಅಲ್ಲಿ ಪ್ರತಿ ಪಾತ್ರಗಳೂ ಒಂದೊಂದು ಕತೆಗಳು. ದ್ವೇಷ, ಸಿಟ್ಟು, ಅಸಹಾಯಕತೆ, ಪ್ರೀತಿ, ಮೋಸ, ಸೇಡು ಇವೆಲ್ಲವುಗಳಿಂದ ಕೆನೆಗಟ್ಟಿದ ಪಾತ್ರಗಳು ಅಲ್ಲಿವೆ. ಆದರೆ ಡಾನ್-2ವಿನಲ್ಲಿ ಯಾವ ಪಾತ್ರಗಳೂ ನಮ್ಮನ್ನು ಆಳವಾಗಿ ತಟ್ಟುವುದಿಲ್ಲ, ಕಾಡುವುದಿಲ್ಲ. ಎಲ್ಲ ಪಾತ್ರಗಳನ್ನು ಡಾನ್ ಕೀ ಕೊಟ್ಟು ಬಿಟ್ಟಂತಿದೆ. ಎಲ್ಲವೂ ಅವರನ ಸುತ್ತಲೇ ಓಡಾಡುತ್ತದೆ. ರೋಮಾ ಪಾತ್ರವೂ ಇದಕ್ಕೆ ಹೊರತಾಗಿಲ್ಲ. ರೋಮಾ ಪಾತ್ರವನ್ನು ಇನ್ನಷ್ಟು ಗಟ್ಟಿಯಾಗಿ ಬೆಳೆಸುವ ಸಾಧ್ಯತೆಯಿದ್ದರೂ, ಡಾನ್ ಅದಕ್ಕೆ ಆಸ್ಪದ ನೀಡುವುದಿಲ್ಲ. ಆದುದರಿಂದ ಆ ಪಾತ್ರ ಈ ಚಿತ್ರದಲ್ಲಿ ತೀರಾ ತೆಳುವಾಗಿದೆ. ಬಹುಶಃ ನಿರ್ದೇಶಕರು ಮಿಶನ್ ಇಂಪಾಸಿಬಲ್ ಚಿತ್ರದ ಪ್ರಭಾವದಿಂದ ಡಾನ್-2ನ್ನು ಮಾಡಿರಬೇಕು.

ಮೂಲ ಡಾನ್ ಚಿತ್ರದಲ್ಲಿ ಪಾತ್ರಗಳು ಬದಲಾದಂತೆ ತಿರುವುಗಳು ಕಾಣಿಸಿಕೊಳ್ಳುತ್ತವೆ. ಡಾನ್-1ರಲ್ಲಿ ಶಾರುಕ್-ಅಮಿತಾಬ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎರಡು ಪಾತ್ರಗಳ ಸಂಘರ್ಷಗಳಿವೆ ಅಲ್ಲಿ. ಅಂತಹ ಒಳಗಿನ ಸಂಘರ್ಷಗಳನ್ನು ಇಲ್ಲಿ ಕಾಣುವುವುದಿಲ್ಲ. ರೋಮಾ ಮತ್ತು ಡಾನ್ ನಡುವೆ ಸಣ್ಣದೊಂದು ಪ್ರೀತಿಯ ಎಳೆಯನ್ನು ಜೋಡಿಸಲು ನಿರ್ದೇಶಕರು ಯತ್ನಿಸಿದ್ದಾರಾದರೂ, ಅದರಲ್ಲಿ ಯಶಸ್ವಿಯಾಗಿಲ್ಲ. ಡಾನ್‌ಗಾಗಿಯೇ ಬರೆದ ಹರಿತ ಸಂಭಾಷಣೆಯಿದೆ. ಸಂಗೀತಾ ಪರವಾಗಿಲ್ಲ. ವಿದೇಶಗಳ ಸುಂದರ ದೃಶ್ಯಗಳನ್ನು ಸೆರೆಹಿಡಿದ ಕ್ಯಾಮರ ಕೆಲಸ ಅದ್ಭುತವಾಗಿದೆ. ಸಾಹಸ ಹಾಲಿವುಡ್‌ಗೆ ಸರಿಗಟ್ಟುವ ಪ್ರಯತ್ನವನ್ನು ಮಾಡಿದೆ. ಒಟ್ಟಿನಲ್ಲಿ ಡಾನ್ ಭಾಗ-1ಕ್ಕೆ ಸರಿಗಟ್ಟುವುದಿಲ್ಲ. ಅದ್ದೂರಿತನಕ್ಕಾಗಿ ಡಾನ್-2ನ್ನು ಒಮ್ಮೆ ನೋಡಬಹುದು. ಒಟ್ಟಿನಲ್ಲಿ ಡಾನ್-3ಗಾಗಿ ಶಾರುಕ್ ಈಗಲೇ ಸಿದ್ಧತೆ ನಡೆಸುತ್ತಿರಬಹುದು.

Saturday, December 24, 2011

‘ಪರುಷಮಣಿ’ ಕೃತಿಯ ಕುರಿತಂತೆ ಬಂಜಗೆರೆ ಜಯಪ್ರಕಾಶ್
























ದಿ. ಬಿ. ಎಂ. ರಶೀದ್ ಅವರ ಕತೆ, ಕವಿತೆ, ಲೇಖನಗಳ ಸಮಗ್ರ ಸಂಗ್ರಹ ಪರುಷಮಣಿ ಕೃತಿಯ ಕುರಿತಂ
ತೆ ಬಂಜಗೆರೆ ಜಯಪ್ರಕಾಶ್ ಇಲ್ಲಿ ಬರೆದಿದ್ದಾರೆ. ೨೦೦೬ ರಲ್ಲಿ ಕೃತಿ ಬಿಡುಗಡೆಗೊಂದಾಗ ಸಮಾರಂಭದಲ್ಲಿ ಅದರ ಪರಿಚಯವನ್ನು ಮಾಡಿದವರು ಬಂಜಗೆರೆ ಜಯಪ್ರಕಾಶ್.

‘ಪರುಷಮಣಿ’ಎಂಬ ಕಲ್ಪನೆಯೇ ತುಂಬಾ ಕಾವ್ಯಾತ್ಮಾಕವಾದದ್ದು. ಮಾನವ ತನ್ನ ಭೌತಿಕ
ವಾಸ್ತವಗಳಾಚೆಗೆ ಪಡೆಯಬಯಸಿದ ರಮ್ಯಾದ್ಭುತ ಸೃಷ್ಟಿಶಕ್ತಿಯ ಸಂಕೇತವಾದ ಅದು ನಿರಂತರ ಆಶಾವಾದದ ಸಂಕೇತವೂ ಹೌದು, ಅದರಂತೆಯೇ ಮಾನವನ ಮಿತಿಗಳ ದ್ಯೋತಕವೂ ಹೌದು.
ಇಂತಹ ಮೋಹಕ ಹೆಸರಿನ ಬರಹ ಸಂಕಲನದ ಕೃತಿಕಾರ ಬಿ.ಎಂ.ರಶೀದ್ ನಮ್ಮ ನಡುವೆ ಈಗಿಲ್ಲ ಎನ್ನುವ ನೋವಿನ ನೆನಪಿನ ನಡುವೆಯೇ ಇಂತಹದೊಂದು ಅರ್ಥಪೂರ್ಣ ಕೃತಿಯನ್ನು ಪ್ರಕಟಿಸಿ ರಶೀದನ ನೆನಪನ್ನು ಚಿರಂತನವಾಗಿಸಲು ಏರ್ಪಟ್ಟಿರುವ ಈ ಕಾರ್ಯಕ್ರಮ ಸಾರ್ಥಕವಾದುದೆಂದು ನಾನು ಭಾವಿಸುತ್ತೇನೆ.

‘ಪರುಷಮಣಿ’ ಬಿ.ಎಂ.ರಶೀದ್ ಬೇರೆ ಬೇರೆ ಸಂದರ್ಭದಲ್ಲಿ ಬರೆದ ಆರು ಕತೆ, ಹತ್ತು
ಕವಿತೆ, ಹಾಗೂ ಕೆಲವು ಲೇಖನಗಳನ್ನು ಒಳಗೊಂಡಿವೆ. ಈ ಕೃತಿ ನಿದರ್ಶಿಸುವಂತೆ ರಶೀದ ನಮ್ಮ ನಡುವಿನ ಅತ್ಯಂತ ಪ್ರತಿಭಾವಂತ ಪ್ರಯೋಗಶೀಲ ಲೇಖಕನಾಗಿದ್ದ. ಕಥೆ ಹಾಗೂ ಕಾವ್ಯಗಳೆರಡರಲ್ಲೂ ಆತ ಪ್ರದರ್ಶಿಸಿರುವ ಸೃಜನಶೀಲ ಶಕ್ತಿ ಇದಕ್ಕೆ ನಿದರ್ಶನವೊದಗಿಸುತ್ತಿದೆ. ಹರೆಯಕ್ಕೆ ಸಹಜವಾದ ಪ್ರೀತಿ ಪ್ರೇಮಗಳ ಸುತ್ತ ಈ ಬರಹಗಳ ವಸ್ತು ಪ್ರಧಾನವಾಗಿ ಚಲಿಸುತ್ತದೆಯಾದರೂ ಅದರೊಳಗೆ ವ್ಯಕ್ತವಾಗುವ ಜೀವಪರ ನಿಲುವು ಹಾಗೂ ಒಂದು ಆಲೋಚನಾಪೂರ್ಣ ತಾತ್ವಿಕತೆ ಒಬ್ಬ ಬರಹಗಾರನಾಗಿ ರಶೀದ ಬೆಳೆಯಬಹುದಾಗಿದ್ದ ಎತ್ತರವನ್ನು ಸೂಚಿಸುವ ಕೈಮರದಂತಿವೆ.

ಈ ಸಂಕಲನದಲ್ಲಿ ನಾವು ಗಮನಿಸಬೇಕಾದ ಎರಡು ಮುಖ್ಯ ಕತೆಗಳಿವೆ. ಕಥಾವಸ್ತುವಿನ ನಿರ್ವಹಣೆಯ ದೃಷ್ಟಿಯಿಂದ ಈ ಎರಡೂ ಕಥೆಗಳು ರಶೀದನ ಸಾರ್ಥಕ ಕಥೆಗಳಾಗಿವೆ. ‘ಪರ್ಯಾಯ’ ಹಾಗೂ ‘ಕ್ಷಮಿಸಿ, ಬಯಕೆಗಳೇ ಇನ್ನೆಂದಾದರೊಮ್ಮೆ ಬರುವೆ...’ ಎಂಬ ಈ ಕಥೆಗಳು ಸಾಕಷ್ಟು ಪಳಗಿದ ಕಥೆಗಾರನೊಬ್ಬನ ಪ್ರತಿಭೆಯನ್ನು ಅತ್ಯಂತ ಹೃದ್ಯವಾಗಿ ನಮ್ಮ ಮುಂದಿಡುತ್ತಿವೆ.
ಪುಟ್ಟ ಕಥೆಯಾದ ‘ಗರ್ಭ’ ಮತ್ತು ‘ಇಲ್ಲೊಬ್ಬಳು ಅಮೃತಮತಿ’ ಕೂಡ ಕಥಾಶಿಲ್ಪದ ದೃಷ್ಟಿಯಿಂದ ಒಳ್ಳೆಯ ಕಥೆಗಳೇ ಆದರೂ ಅವುಗಳಲ್ಲಿ ಇರುವ ಅತೀ ಭಾವುಕತೆ ಅಥವಾ ಭಾವನೆಗಳ ಉತ್ಕಟತೆ
ಕೇವಲ ಒಂದು ತೀವ್ರ ಅನುಭವ ಕಟ್ಟಿಕೊಡುವಷ್ಟಕ್ಕೆ ಮಾತ್ರ ಯಶಸ್ವಿಯಾಗಿವೆ.

ಹಾಗಾಗಿ ನಾನು ಮೊದಲು ಪ್ರಸ್ತಾಪಿಸಿದ ಎರಡು ಕಥೆಗಳು ಒಂದುಮಟ್ಟಿಗೆ ಈ ಭಾವೋತ್ಕಟತೆಯ ಅಂಶವನ್ನು ಹೊಂದಿದಾಗಲೂ ಬದುಕಿನ ವಾಸ್ತವಗಳನ್ನು ಕಣ್ಣೆದುರಿಗೆ ತರುವಲ್ಲಿ ಹೆಚ್ಚು ಯಶಸ್ವಿಯಾಗಿವೆ. ಬಹುಪಾಲು ತರುಣ ಬರಹಗಾರರ ನಡುವೆ ಒಂದಲ್ಲ ಒಂದು ಸಲ ಬರಬಹುದಾದ ‘ನಕ್ಸಲೀಯ’ ವಸ್ತು ‘ಪರ್ಯಾಯ’ ಕಥೆಯೊಳಗೆ ಬಂದಿದೆ. ಆದರೆ ತರುಣ ಹುಮ್ಮಸ್ಸಿನ ಹೋರಾಟದ ವೈಭವೀಕರಣ ಈ ಕಥೆಯ ಕೇಂದ್ರವಾಗದೆ ಅದರ ಅಂಚುಗಳ ಸುತ್ತ ಹುಟ್ಟುವ ಮಾನವ ಸಂಬಂಧಗಳ ವೇದನೆ ಹಾಗೂ ಅಸಹಾಯಕ ಹಂಬಲಗಳು ಈ ಕಥೆಯ ಮುಖ್ಯ ಲಕ್ಷವಾಗಿದೆ.

‘ಮರೋ ಪ್ರಪಂಚಂ ಪಿಲಿಚಿಂದಿ’ ಎಂಬ ಸೂಚನೆಯೊಂದಿಗೆ ಬಂದೂಕು ಧರಿಸಿ ನಡೆದುಬಿಟ್ಟ ತನ್ನ ಮಗನ ನಿರೀಕ್ಷೆಯಲ್ಲಿರುವ ಪರಮೇಶ್ವರಯ್ಯ ಎಂಬ ಉಪನ್ಯಾಸಕ ಸಲೀಮ ಎಂಬ ಕವಿ ಹೃದಯದ ತರುಣನಲ್ಲಿ ತನ್ನ ಮಗನನ್ನು ಕಂಡುಕೊಳ್ಳುವ ಒಂದು ಹಂಬಲ ಕಥೆಯ ಉದ್ದಕ್ಕೂ ಸಶಕ್ತವಾಗಿ ನಿರ್ಮಿತವಾಗಿದೆ. ಕಿಡಿಕಾರುವ ತನ್ನ ಮಗನ ಮಾತುಗಳನ್ನು ನೆನೆಯುತ್ತಾ ಅದರ ಜೊತೆಜೊತೆಗೇ ನಿಹಲಿಸ್ಟನಂತೆ ವಾದಿಸುವ ಸಲೀಮನನ್ನು ಹಂಬಲಿಸುತ್ತಾ ಪರಮೇಶ್ವರಯ್ಯ ಭ್ರಮೆ ಮತ್ತು ವಾಸ್ತವಗಳ ನಡುವೆ ತೇಲಾಡುತ್ತಾ ತಮ್ಮ ಪ್ರೀತಿಯ ನಿರೀಕ್ಷೆ ಸಾಕಾರಗೊಳ್ಳುವ ಕನಸಿನಲ್ಲಿರುತ್ತಾರೆ. ಪರಮೇಶ್ವರಯ್ಯನಿಗೆ ಕಥೆಯ ಅಂತ್ಯದಲ್ಲಿ ಕೈಗೆ ಸಿಗುತ್ತಿದೆಯೆಂದು ಭಾಸವಾಗುವ ಸಲೀಮನ ಆಗಮನದ ಭರವಸೆ ಕೂಡ ಆತ ಕಾಣುತ್ತಿರುವ ಕನಸಿನ ಭಾಗವಿರಬಹುದೇ ಎಂಬಂತಹ ಸಂದಿಗ್ಧತೆಯನ್ನು ಉಂಟುಮಾಡುತ್ತಾ ಮುಕ್ತಾಯಗೊಳ್ಳುವ ಕಥೆ ತನ್ನ ಒಡಲೊಳಗೆ ಇಟ್ಟುಕೊಂಡಿರುವ ಗಂಭೀರ ತಾತ್ವಿಕ ಜಿಜ್ಞಾಸೆಯಿಂದಾಗಿ ಓದುಗನ ಮನಸ್ಸನ್ನು ಹಿಡಿದಿಡುತ್ತದೆ.

ರಶೀದ್ ಒಬ್ಬ ಕಥೆಗಾರನಾಗಿ ತನ್ನ ವಯಸ್ಸಿಗೆ ಮೀರಿರುವ ಪ್ರಬುದ್ಧತೆಯನ್ನು ಇಂತಹ ತಾತ್ವಿಕ ಜಿಜ್ಞಾಸೆಯ ನಿರ್ವಹಣೆಯಲ್ಲಿ ಪ್ರದರ್ಶಿಸಿದ್ದಾನೆ. ‘ಮಾಡಬೇಕಾದುದರ ಬಗ್ಗೆ ಬರೆಯೋನು, ಕೊರೆಯುವವನು ಅದನ್ನಾತ ಮಾಡುವುದೇ ಇಲ್ಲ. ಚಾ, ಆಲ್ಕೋಹಾಲ್, ಸಿಗರೇಟ್ ಇದ್ದ ಹಾಗೆ ಜನಗಳಿಗೆ ಬದುಕುವುದಕ್ಕೆ ಆವೇಶಮಯ ಭಾಷಣಾನೂ ಬೇಕು. ಮಾತಾಡೋನಿಗೆ ಮಾ
ತಾಡಿ ಮುಗಿವ ಮುನ್ನವೇ ಕೇಳುವವನಿಗೆ ಕೇಳಿ ಮುಗಿದಿರುತ್ತದೆ. ಅಲ್ಲಿಗೆ ಅವರವರ ಕರ್ತವ್ಯ ಮುಗಿದಿರುತ್ತದೆ’ ಎಂಬ ಸಲೀಮ, ‘ತಾತ್ವಿಕವಾಗಿ ಸಮರ್ಥನೀಯವಲ್ಲದ್ದು ಮಾತ್ರ ಹಿಂಸೆ ಅಪ್ಪಾಜಿ...’ ಎನ್ನುವ ರವಿ ಇವೆರಡೂ ಬಿಂದುಗಳ ನಡುವೆ ನಡೆಯುತ್ತಾ ಹೋಗುವ ಕಥೆ ಉದ್ದೇಶಿಸಿರುವುದು ಹೋರಾಟದ ಬಗ್ಗೆ ತೀರ್ಪು ಕೊಡಲಿಕ್ಕಲ್ಲ, ಬದಲಾಗಿ ತನ್ನ ಮಗನ ಹಂಬಲದಲ್ಲಿರುವ ಪರಮೇಶ್ವರಯ್ಯ ಒಬ್ಬ ಸಲೀಮನ ಪ್ರೀತಿಗೆ ಸಿಕ್ಕಿ ಆರ್ತವಾಗಿ ತೊಳಲಾಡುವ ಪರಿಸ್ಥಿತಿಯ ಅಸಹನೀಯತೆಯನ್ನು. ರವಿ ಹೇಳುವ ಮಾತಿನ ತೀವ್ರತೆ, ಸಲೀಮನ ಮಾತಿನ ನಿರಾಸಕ್ತಿ ಇವೆರಡೂ ಕಥೆಯನ್ನು ಬೆಳೆಸುತ್ತಾ, ಇಲ್ಲಿಗೆ ರವಿ ಮರಳಿ ಬರುತ್ತಾನೆ ಎಂಬ ಸಾಂತ್ವನದೊಂದಿಗೆ ಮುಕ್ತಾಯವಾಗುವುದು, ಕಡೆಗೂ ಅದೊಂದು ವಾಸ್ತವದ ಮುಕ್ತಾಯವಲ್ಲದಿರುವುದು ಕಥೆಯ ಪರಿಣಾಮವನ್ನು ಹೆಚ್ಚಿಸಿದೆ. ಕಥೆಯ ನಿರೂಪಣೆಯ ಆರಂಭದಲ್ಲಿ ಯಶವಂತ ಚಿತ್ತಾಲರ ಭಾಷಾ ಶೈಲಿಯ ನೆನಪು ಹುಟ್ಟುತ್ತದೆಯಾದರೂ ಅದೇನು ಕಥೆಗೆ ಎರವಲು ತಂದ ಭಾವನೆಯನ್ನು ಉಂಟುಮಾಡುವುದಿಲ್ಲ.

ನಾನು ಮೆಚ್ಚಿಕೊಂಡ ಎರಡನೆ ಕಥೆ ‘ಕ್ಷಮಿಸಿ ಬಯಕೆಗಳೇ...’ ಕೂಡ ಮತ್ತೊಂದು ಕಾಯುವಿಕೆಯ ವಸ್ತುವನ್ನೊಳಗೊಂಡ ಕಥೆಯಾಗಿದೆ. ಅಕಸ್ಮಾತಾಗಿ ಒಂದು ಪತ್ರ ಪರಿಚಯಕ್ಕೆ ಸಿಕ್ಕಿಕೊಂಡ ಪಾಪಣ್ಣ ಆ ಪತ್ರ ಸಂಬಂಧದ ವ್ಯಕ್ತಿಯನ್ನು ಕಾಣಬೇಕೆಂದು ನಿರೀಕ್ಷಿಸುತ್ತಾ, ಆ ನಿರೀಕ್ಷೆಯನ್ನೇ ಬದುಕಿನ ರುಚಿ ಹೆಚ್ಚಿಸುವ ಗುರಿ ಎಂಬಂತೆ ಕಾಪಾಡಿಕೊಳ್ಳುತ್ತಾ ಬಂದು, ಕಡೆಗೊಂದು ದಿನ ಆ ನಿರೀಕ್ಷೆ ನಿಜವೇ ಆಗಿಬಿಡುವ ಸಂದರ್ಭ ಎದುರಾಗಿದೆ ಎನಿಸಿದಾಗ ಆ ವಾಸ್ತವದಿಂದ ತಪ್ಪಿಸಿಕೊಂಡು ಓಡುತ್ತ್ತಾನೆ. ಈ ಬಗೆಯ ಕಥಾವಸ್ತುವುಳ್ಳ ಕಥೆಗಳು ಸ್ವಲ್ಪಮಟ್ಟಿಗೆ ಅಪರೂಪ ಎಂದು ಹೇಳಬಹುದು. ರಶೀದ ತನ್ನ ವಯಸ್ಸಿಗೆ ಸಹಜವಾಗಿ ಒದಗುವ ಮಾಮೂಲಿ ಅನುಭವಗಳನ್ನು ಒಂದು ಕಥಾಭಿತ್ತಿಯೊಳಗೆ ತಂದು ಅದಕ್ಕೊಂದು ಅರ್ಥ ಸಾಧ್ಯತೆಯನ್ನು ಸಾಹಿತ್ಯಿಕವಾಗಿ ನಿರ್ಮಿಸಬಲ್ಲ ಎಂಬುದಕ್ಕೆ ಈ ಕಥೆ ಒಂದು ಸುಂದರ ಸಾಕ್ಷಿಯಾಗಿದೆ.

ಕಾಯುವಿಕೆಯ ನೀರಸತೆಯನ್ನು ವಿವರಿಸುತ್ತಲೇ ಆ ಕಾಯುವಿಕೆ ಉಂಟುಮಾಡುವ ‘ಥ್ರಿಲ್’ ಅನ್ನು ಮನಗಾಣಿಸುವುದಕ್ಕೆಂದೇ ಕಥೆಯನ್ನು ರೂಪಿಸಿದಂತಿರುವ ರಶೀದ ಲಾಟರಿ ಕೊಂಡುಕೊಳ್ಳುವ ಪ್ರಸಂಗದಲ್ಲೂ ಆ ತಾತ್ವಿಕತೆಯನ್ನು ಪ್ರತಿಪಾದಿಸುತ್ತಾನೆ. ‘ನಿನ್ನ ಲಕ್ಷ ತಗಂಡು ಹೋಗಿ ಬಾವಿಗಾಕಯ್ಯ’ ಎಂದು ರೇಗಿದ ಪಾಪಣ್ಣ ಒಂದು ಮಿನಿ ಕೊಂಡು ಜೇಬಿಗಿಳಿಸಿದ. ಸುಮ್ಮನೆ ಫಲಿತಾಂಶಕ್ಕೆ ಕಾಯುವ ‘ಥ್ರಿಲ್’ಗಾಗಿಯಾದರೂ ಇರಲಿಯೆಂದು. ಬಹುಶ: ಕಾಯುವ ‘ಥ್ರಿಲ್’ ಬಂಪರ್ ಪ್ರೈಸ್ ಬಂದಾಗಲೂ ಸಿಗಲಾರದಲ್ಲವೇ ಅಂದುಕೊಂಡ. ಸ್ಫೂರ್ತಿ ಎಂಬ ಕನಸಿನ ಹುಡುಗಿಯ ಪತ್ರಗಳಿಗೆ ಕಾದ, ಹಾಗೆ ಪತ್ರಕ್ಕೆ ಕಾಯುವ ಸುಖ, ಬಿಚ್ಚಿ ಓದು ಓದುತ್ತಾ ಹೋದಂತೆ ತಣ್ಣಗಾಗಿಬಿಡುತ್ತದೆ. ಹಾತೊರೆದು ಕಾದದ್ದನ್ನು ಪಡೆದಾಗ ‘ಇಷ್ಟೇನಾ’ ಎಂದೆನಿಸಿಬಿಡುತ್ತದೆ. ‘ಮುಂದಕ್ಕೇನು’ ಎಂಬ ಶೂನ್ಯವೇ ಬಾಯಿ ತೆರೆದು ನುಂಗಲು ಬರುತ್ತದೆ.

‘ಪರುಷಮಣಿ’ಯಲ್ಲಿರುವ ಎಲ್ಲಾ ಕಥೆಗಳೂ ಗಮನ ಸೆಳೆಯುವ ಕಥೆಗಳೇ.ಆದರೆ ರಶೀದನ ಒಳಗೆ ರೂಪುಗೊಳ್ಳುತ್ತಿದ್ದ ಸಮರ್ಥ ಕಥೆಗಾರನ ಲಕ್ಷಣಗಳನ್ನು ಬಿಂಬಿಸುವುದಕ್ಕೆ ಇವೆರಡೂ ಕಥೆಗಳು ಒಳ್ಳೆಯ ಉದಾಹರಣೆಗಳಾಗಿ ನನ್ನ ಗಮನ ಸೆಳೆದವಾದ್ದರಿಂದ ನಿಮ್ಮ ಮುಂದೆ ಅವನ್ನು ಹಂಚಿಕೊಂಡೆ. ಭಾಷೆಯ ಬಳಕೆ, ಕಥಾಶಿಲ್ಪದ ನಿರ್ಮಾಣ, ಪಾತ್ರಗಳ ವಿನ್ಯಾಸ, ಹಾಗೂ ಸಂದರ್ಭ ನಿರ್ವಹಣೆ ಮುಂತಾದ ತಾಂತ್ರಿಕ ಅಂಶಗಳ ನೆಲೆಯಿಂದ ನೋಡಿದಾಗಲೂ ರಶೀದ ಬರೆಯಬಹುದಾಗಿದ್ದ ಮತ್ತೆಷ್ಟೋ ಕಥೆಗಳು ಕನ್ನಡಕ್ಕೆ ಮತ್ತೊಬ್ಬ ಶಕ್ತ ಕಥೆಗಾರನನ್ನು ಕೊಡಲಿದ್ದವು ಎಂಬುದನ್ನು ಹೇಳುವಂತಿವೆ.

ಕಥೆಯಂತೆಯೇ ಕಾವ್ಯದಲ್ಲೂ ಸಾಕಷ್ಟು ಭರವಸೆಯನ್ನು ಹುಟ್ಟಿಸಿದ್ದ ಕವಿ ರಶೀದ್. ಈ ಸಂಕಲನದಲ್ಲಿ ‘ನಾನು ಸುಮ್ಮನಿದ್ದರೆ! ಆದರೆ ...’, ‘ನಿನಗೆ ನಾನು ಹುಟ್ಟಿದ ನಿಮಿಷ’, ‘ಪರುಷಮಣಿ’ ಮುಂತಾದ ಕವಿತೆಗಳು ಆತನ ಸಶಕ್ತ ಅಭಿವ್ಯಕ್ತಿಗೆ ಸಾಕ್ಷಿಗಳಾಗಿವೆ. ಕಥೆಗಳಲ್ಲೇ ಕಾವ್ಯಮಯ ಭಾಷೆ ಬಳಸುವ ರಶೀದ ಕವಿತೆಗಳಲ್ಲೂ ಅರ್ಥಗರ್ಭಿತ ಪ್ರತೀಕಾತ್ಮಕ ಭಾಷೆಯ ಮುಖಾಂತರ ಒಂದು ಬೆಚ್ಚನೆಯ ಸಂವೇದನೆಯನ್ನು ಉಂಟುಮಾಡುತ್ತಾನೆ.

ಪರುಶಮಣಿಯಂತೂ ಒಂದು ಪ್ರಸಂಗಾತ್ಮಕ ಕವಿತೆಯಾಗಿದ್ದು, ಕವಿ ಬದುಕಿನ ಕಹಿ ಅನುಭವದ ಸಾರವನ್ನು ಹಿಂಡಿ ಕಾವ್ಯದ ಮದಿರೆಯಾಗಿ ಬಟ್ಟಲಿಗೆ ತುಂಬಿತ್ತಿದ್ದಾನೆ
‘ನಿನ್ನ ಸಕಲ ಸೌಭಾಗ್ಯಕ್ಕೂ ನೀನು ದೇವ ಸ್ತುತಿ
ಸಲ್ಲಿಸುವಾಗ ನಾನು ಮೊರೆಯಿಡುತ್ತೇನೆ;
‘ಇಲ್ಲವಾಗಲು ನನಗೆ ಒಂದೂ ಇಲ್ಲದಿರಲಿ ದೇವರೇ..’
ಆಗ ನನ್ನೆದೆಯ ಪರುಷಮಣಿ,
ಕ್ಯಾಲೆಂಡರಿನಂತೆ ನಿನ್ನ ಮುಖಕ್ಕೆ ತಗುಲಿ ಹಾಕಿದ್ದ
ಆ ಸೂಳೆ ನಗುವಿನ ವಿರುದ್ಧ ದಿಕ್ಕಿಗೆ
ತನ್ನ ದಿವ್ಯ ಬೆಳಕಿನ ತೋರು ಬೆರಳನ್ನು ಹಿರಿಯುತ್ತಾ
ನನಗೆ ನಿರ್ದೇಶಿಸುತ್ತದೆ;
‘ಮಗನೇ, ಈ ದಾರಿಯಲ್ಲಿ ನೀನು ನಡೆ
ಇದು ಮಾತ್ರ ನೀನು ನಡೆಯಬಹುದಾದ ದಾರಿ’

ಕವಿತೆಯ ಟಿಪ್ಪಣಿ ಸೂಚಿಸುವಂತೆ ಇದು ರಶೀದನ ಕಡೆಯ ಪ್ರಕಟಿತ ಕವನ. ಕಡೆಯ ಪ್ರಕಟಿತ ಕವನ ಎಂಬುದರಲ್ಲೇನೂ ಹೆಚ್ಚಿನ ವಿಶೇಷವಿರಲಾರದು.ಆದರೆ ರಶೀದ ತನ್ನ ಜೀವನಾನುಭವದಲ್ಲಿ ಸ್ಪರ್ಶಿಸಿದ ಕಠೋರ ವಾಸ್ತವಗಳನ್ನೂ, ಅದಕ್ಕೆ ಇದಿರಾಗಿ ಬದುಕಿಗೆ ಸೂಚಿಸ ಬಯಸಿದ್ದ ದಿವ್ಯ ದೈವಿಕ ಹಾದಿಯನ್ನೂ ಇದು ಧ್ವನಿಸುತ್ತದೆಯೆಂಬ ಕಾರಣಕ್ಕೆ ಮನಕಲಕುತ್ತದೆ.

ಆತನ ಬಹುತೇಕ ಕವಿತೆಗಳು ಪ್ರೀತಿಯ ಹುಡುಕಾಟದಲ್ಲಿ, ಅದನ್ನು ಕಳೆದುಕೊಂಡ ನೋವಿನಲ್ಲಿ ರೂಪಾಕಾತ್ಮಕವಾಗಿ ನರಳುತ್ತವೆ. ಅಥವಾ ಆ ನೋವನ್ನೇ ಹಾಡುತ್ತವೆ.
‘ಆದರೆ ಇದೊಂದನ್ನು ಮಾತ್ರ ನೀನು ಒಪ್ಪಬೇಕು;
ಸಾವು ಮಾತ್ರ ಬದುಕಿಗೆ ರುಜುವಾಗುತ್ತದೆಯೆನ್ನುವುದನ್ನು...
ನಿನ್ನ ಬೆಡಗಿನಿಂದ ಚಿರಸ್ಮರಣೀಯವಾದುದನ್ನು
ಕಟ್ಟುವೆನೆಂದ ಹೆಣ್ಣೇ...
ಇದೀಗ ಕರುಣಾಳು ಸಾವು ಮಾತ್ರ
ನಿನ್ನ ಬದುಕನ್ನು ಸ್ಮರಿಸುತ್ತದೆನ್ನುವುದನ್ನು...’
ಎಂದು ಅತ್ಯಂತ ವಿಷಾದಪೂರ್ಣ ದನಿಗಳನ್ನು ಹೊಮ್ಮಿಸುವ ಈ ಕವಿತೆಗಳು ಅಂತ:ಕರಣಪೂರಕವಾದ ಅಭಿವ್ಯಕ್ತಿಗಳಾಗಿವೆ ಎಂಬುದು ಕವಿತೆಗಳ ಲಕ್ಷಣಗಳಲ್ಲೊಂದು. ಆರ್ದ್ರತೆಯಿಂದ ಓದಿಗೆ ಹೊಸತೆನಿಸುವ ರೂಪಕಗಳಿಂದ ಯಾವುದೋ ದಿವ್ಯ ಯಾಚನೆಯ ಹಂಬಲದಿಂದೆಂಬಂತೆ ನಿರೂಪಿತವಾಗಿರುವ ಈ ಕವಿತೆಗಳು ರಶೀದ ಕೇವಲ ಕಥೆಗಾರ ಮಾತ್ರವಲ್ಲ ಬದಲಾಗಿ ಉತ್ತಮ ಕವಿ ಕೂಡ ಎಂಬುದನ್ನು ಯಾವುದೇ ರಿಯಾಯಿತಿಯ ಹಂಗಿಲ್ಲದೆ ನಿದರ್ಶಿಸುತ್ತಿವೆ.

ಕಥೆ, ಕವನಗಳಲ್ಲಿ ವ್ಯಕ್ತವಾಗುವ ಅಸೀಮ ಜೀವಪರತೆ ಹಾಗೂ ಬೆಚ್ಚನೆಯ ಮಾನವೀಯ ಸಂವೇದನೆಯನ್ನು ತನ್ನ ಲೇಖನ ಹಾಗೂ ವರದಿಗಳಲ್ಲೂ ರಶೀದ ವ್ಯಕ್ತಪಡಿಸಿದ್ದಾನೆ. ಕಾವ್ಯದಂತಹುದೇ ಭಾವೋತ್ಕಟತೆಯಿಂದ ನಿರೂಪಿತವಾಗಿರುವ ‘ನೀನೊಬ್ಬನೇ ಮುಖೇಶ’, ‘ಹಾಡುವ ನಟರು’ ಎಂಬ ಲೇಖನಗಳು, ಸ್ಟಾರ್ ಉಪೇಂದ್ರನ ವಿಕೃತಿಯನ್ನು ಸಾಮಾಜಿಕ ಜವಾಬ್ದಾರಿಯಿಂದ ಪ್ರಶ್ನಿಸುವ ಪತ್ರ, ‘ಈ ದೈವ ಸಾಮ್ರಾಜ್ಯವನ್ನು ನೀವು ಕಂಡಿದ್ದೀರಾ’ ಎಂಬ ಪರಿಚಯ ಲೇಖನ ಮುಂತಾದವು ಆತನ ಜೀವನ ಪ್ರೀತಿಗೆ ಹಾಗೂ ಬರಹಗಾರನಾಗಿ ಪಡೆದಿದ್ದ ಶಕ್ತಿಗೆ ನಿದರ್ಶನವಾಗಿವೆ.

‘ಕೊಂಗಾಣದ ಅಮಾನುಷ ಕೊಲೆಗಳು’ ಎಂಬ ವರದಿ ಕೇವಲ ಅಪರಾಧ ಕೃತ್ಯದ ವರದಿ ಎಂಬಂತಿರದೆ ಅಂತಹ ಕೃತ್ಯಗಳ ಹಿಂದಿನ ಮಾನವೀಯ ಕಾರಣಗಳು, ಅಮಾನವೀಯ ಸಾಮಾಜಿಕ ಪರಿಸರಗಳು ಮುಂತಾದವುಗಳೆಲ್ಲವನ್ನೂ ಅಧ್ಯಯನ ಸ್ವರೂಪದಲ್ಲಿ ಮಂಡಿಸುತ್ತಾ ವರದಿಗಾರನೊಬ್ಬನಿಗೆ ಇರಬೇಕಾದ ಹಲವು ಆಯಾಮಗಳ ಒಳನೋಟಗಳನ್ನು ಬಿಂಬಿಸುತ್ತವೆ.

ಸುಂದರವಾಗಿ ಮನಸೆಳೆಯುವಂತೆ ಪ್ರಕಟಗೊಂಡಿರುವ ಈ ಕೃತಿ ಹಲವರ ಪರಿಶ್ರಮದಿಂದಾಗಿರಬಹುದು. ಅದರಲ್ಲಿ ಮುಖ್ಯವಾಗಿ ಅಣ್ಣನಂತೆಯೇ ಶಕ್ತ ಬರಹಗಾರನಾಗಲು ಹೊರಟಿರುವ ಸೂಕ್ಷ್ಮ ಮನಸ್ಸಿನ ತರುಣ ಬಿ.ಎಂ.ಬಶೀರ್ ಪರಿಶ್ರಮ ಈ ಸಂದರ್ಭದಲ್ಲಿ ಖಂಡಿತವಾಗಿಯೂ ಶ್ಲಾಘನೀಯವಾಗಿದೆ. ಇದು ಉಪಚಾರದ ಮಾತಲ್ಲ. ಕಳೆದು ಹೋದ ತನ್ನ ಪ್ರೀತಿಯ ಅಣ್ಣನ ಪ್ರೀತಿಗಳಲ್ಲೊಂದಾಗಿದ್ದ ಸಾಹಿತ್ಯವನ್ನು ಸದಭಿರುಚಿಯಿಂದ ಸಂಕಲನಗೊಳಿಸಿ, ಅದನ್ನೊಂದು ಅರ್ಥಪೂರ್ಣ ಸ್ಮಾರಕವನ್ನಾಗಿಸಿ ರಶೀದನನ್ನು ನೆನೆಯುತ್ತಿರುವ ಈ ಕ್ರಮ ಸಂಬಂಧ ಹಾಗೂ ಸ್ನೇಹಗಳ ವ್ಯಾಖ್ಯಾನದಂತಿವೆ.
ತನ್ನ ಬರವಣಿಗೆ ಸೂಚಿಸುತ್ತಿರುವ ಆಯಾಮಗಳು, ಒಬ್ಬ ಬರಹಗಾರನಾಗಿ ತಾನು ತಲುಪಿದ್ದ ನೆಲೆಗಳು, ತನ್ನ ಸಾಹಿತ್ಯಾಭಿರುಚಿಗೆ ಇದ್ದ ಸಾಧ್ಯತೆಗಳು ಹಾಗೂ ಈಗ ಬರೆದಿರುವುದರಲ್ಲಿ ಇರುವ ಸತ್ವ ಇವುಗಳ ಬಗ್ಗೆ ನಾವೆಲ್ಲಾ ಇಲ್ಲಿ ಚರ್ಚಿಸುತ್ತಿರುವಾಗ ಇಲ್ಲಿ ಈಗ ರಶೀದನಿಲ್ಲ. ನಿರಂತರ ನಿರೀಕ್ಷೆಯ ಮಾಯಾ ಜಿಂಕೆಯ ಬೆನ್ನು ಹತ್ತಿ ಹೋದ ಮಾನವೀಯ ಕನಸುಗಳ ಅನ್ವೇಷಕ ಈಗ ವಿಶ್ರಮಿಸುತ್ತಿರಬಹುದು. ಈತನ ನೆನಪಿಗೆ, ಸಾಹಿತ್ಯ ಪ್ರೀತಿಗೆ ಹಾಗೂ ಸ್ನೇಹ ಪೂರ್ವಕ ವ್ಯಕ್ತಿತ್ವಕ್ಕೆ ಈ ಮಾತುಗಳು ಅಪೂರ್ಣ ಶ್ರದ್ಧಾಂಜಲಿ ಎಂದು ನಾನು ಸಮರ್ಪಿಸುತ್ತಿದೇನೆ.

ಡಾ.ಬಂಜಗೆರೆ ಜಯಪ್ರಕಾಶ
ದಿನಾಂಕ 21.1.2006

Sunday, December 18, 2011

ಬಾಗಿಲು

ಕಳ್ಳರಿಗೆ ಹೆದರಿ ಮುಂಬಾಗಿಲು ಮುಚ್ಚಿಟ್ಟೆ
ಆದರೆ ದುರದೃಷ್ಟ ನೋಡಿ...
ಒಳ ಬರಬೇಕಾದ ನನ್ನವರೆಲ್ಲ
ಮುಚ್ಚಿದ ಬಾಗಿಲು ನೋಡಿ
ಹಾಗೆಯೇ ಮರಳಿದರು
ಕಳ್ಳನೋ ಹಿತ್ತಲಿಂದ ಕನ್ನ ಕೊರೆದು
ನನ್ನ ಮನೆಯನ್ನು ದೋಚಿ ಹೋಗಿದ್ದಾನೆ!

Saturday, December 17, 2011

ಮರ್ಯಾದಸ್ಥರು ಮತ್ತು ಇತರ ಕತೆಗಳು





















ಮಸ್ತಕಾಭಿಷೇಕ

ಆಳೆತ್ತರದ ಬಾಹುಬಲಿಯ ವಿಗ್ರಹಕ್ಕೆ ತುಪ್ಪ, ಹಾಲು, ಜೇನನ್ನು ಅಭಿಷೇಕ ಮಾಡಲಾಯಿತು.
‘ಇದೇನು?’ ಎಂದು ಕೇಳಿದರೆ ‘ಧರ್ಮ’ ಎನ್ನಲಾಯಿತು.
ಆತನ ಪಾದತಲದಲ್ಲಿ ಪುಟಾಣಿ ಮಗುವೊಂದು ಹಾಲಿಲ್ಲದೆ ಹಸಿವಿನಿಂದ ಕಣ್ಣೀರಿನ ಅಭಿಷೇಕ ಮಾಡುತ್ತಿತ್ತು.
‘‘ಇದೇನು?’’ ಎಂದು ಕೇಳಿದರೆ ‘‘ಕರ್ಮ’’ ಎನ್ನಲಾಯಿತು.
ಮಸ್ತಕಾಭಿಷೇಕದ ಮರುದಿನ ಬಾಹುಬಲಿ ‘ಮೈಯೆಲ್ಲ ಉರಿ’ ಎಂದು ಕಣ್ಣೀರಿಡುತ್ತಿರುವುದನ್ನು ನಾನು ಕಂಡೆ.

ರೋಬೊಟ್
ಆತನೊಬ್ಬ ವಿಜ್ಞಾನಿ. ಒಂದು ರೋಬೊಟನ್ನು ಮಾಡಲು ಹೊರಟ. ಹೆಂಡತಿ ಮಕ್ಕಳನ್ನು ಮರೆತು, ಸುಮಾರು ಇಪ್ಪತ್ತು ವರ್ಷಗಳ ಕಾಲದ ಪರಿಶ್ರಮದ ಬಳಿಕ ಒಂದು ರೋಬೊಟನ್ನು ಮಾಡಿದ. ತನ್ನ ಹೆಂಡತಿಯಲ್ಲಿ ಕೂಗಿ ಹೇಳಿದದ ‘‘ನೋಡು, ನಾನೊಂದು ಅಪರೂಪದ ರೋಬೊಟನ್ನು ನಿರ್ಮಿಸಿದ್ದೇನೆ’’
ಅದಕ್ಕೆ ಹೆಂಡತಿ ನಿಟ್ಟುಸಿರಿಟ್ಟು ಉತ್ತರಿಸಿದಳು ‘‘ಅದರಲ್ಲೇನಿದೆ ವಿಶೇಷ. ಇಪ್ಪತ್ತು ವರ್ಷಗಳ ಹಿಂದೆ ನಾನು ಅಂತಹದೇ ರೋಬೊಟೊಂದನ್ನು ಮದುವೆಯಾಗಿದ್ದೇನೆ’’

ಹಾಲು ಮಾರುವವಳು
ಸಂತೆಯಲ್ಲಿ ಹಾಲು ಮಾರುವವಳು ಮತ್ತು ಮೊಸರು ಮಾರುವವಳು ಎದುರು ಬದುರಾದರು.
ಮೊಸರು ಮಾರುವವಳು ಕಾಲು ಕೆದರಿ ಜಗಳಿಕ್ಕಿಳಿದಳು. ಹಾಲು ಮಾರುವವಳನ್ನು ಯದ್ವಾತದ್ವಾ ನಿಂದಿಸ ತೊಡಗಿದಳು. ಆದರೆ ಹಾಲು ಮಾರುವವಳು ವೌನವಾಗಿದ್ದಳು.
ತುಸು ಹೊತ್ತಿನ ಬಳಿಕ ಯಾರೋ ಕೇಳಿದರು ‘‘ಅವಳು ಅಷ್ಟು ಬೈದರೂ ನೀನೇಕೆ ಸುಮ್ಮಗಿದ್ದೆ?’’
ಹಾಲು ಮಾರುವವಳು ಉತ್ತರಿಸಿದಳು ‘‘ಹಾಲು ಮೊಸರಿನ ಮೇಲೆ ಬಿದ್ದರೂ, ಮೊಸರು ಹಾಲಿನ ಮೇಲೆ ಬಿದ್ದರೂ ಪರಿಣಾಮ ಮೊಸರೇ ಆಗುವುದು...ಏನಾದರೂ ಅದರ ಲಾಭ ಅವಳಿಗೇ. ಅದಕ್ಕೆ ವೌನವಾಗಿದ್ದೆ’’

ಬೆಲೆ
ಒಂದು ಖಾಲಿ ಕಾಗದ ಮತ್ತು ಸಾವಿರ ರೂಪಾಯಿಯ ನೋಟು ಮುಖಾಮುಖಿಯಾಯಿತು.
‘‘ನನಗೆ ಸಮಾಜದಲ್ಲಿ ಬೆಲೆಯಿದೆ. ನೀನೋ ಖಾಲಿ ಕಾಗದ’’ ನೋಟು ಬಿಂಕದಿಂದ ಬೀಗಿತು.
‘‘ನಿನ್ನ ಬೆಲೆ ಸಾವಿರಕ್ಕಿಂತ ಹೆಚ್ಚು ಬಾಳದು. ಆದರೆ ನಾನು ಖಾಲಿಯಾಗಿದ್ದೇನೆ. ಕೆಲವೊಮ್ಮೆ ನನ್ನಲ್ಲಿ ಬರೆಯಲ್ಪಡುವುದಕ್ಕೆ ಬೆಲೆಯನ್ನು ಕಟ್ಟುದಕ್ಕೂ ಕಷ್ಟವಾಗಬಹುದು’’ ಖಾಲಿ ಕಾಗದ ವಿನಯದಿಂದ ಹೇಳಿತು.

ಖಡ್ಗ
ಒಬ್ಬ ಕಮ್ಮಾನರ ರಾಜನಿಗೆ ಒಂದು ಖಡ್ಗವನ್ನು ಮಾಡಿಕೊಟ್ಟ.
‘‘ಎಂಥವನ ತಲೆಯನ್ನೂ ಈ ಖಡ್ಗ ಕ್ಷಣಾರ್ಧದಲ್ಲಿ ಕತ್ತರಿಸಿ ಹಾಕುತ್ತದೆ’’ ಕಮ್ಮಾರ ರಾಜನಲ್ಲಿ ನುಡಿದ.
‘‘ಹೌದೆ?’’ ರಾಜ ಖಡ್ಗವನ್ನು ಬೀಸಿದ.
ಕಮ್ಮಾರನ ತಲೆ ಕೆಳಗುರುಳಿತು.
‘‘ಹೌದು, ನಿಜಕ್ಕೂ ಅಪರೂಪದ ಖಡ್ಗ ಇದು’’ ರಾಜ ತೃಪ್ತಿಯಿಂದ ಖಡ್ಗವನ್ನು ಒರೆಗೆ ಹಾಕಿಕೊಂಡ.

ಪೆಟ್ಟಿಗೆ
‘‘ಅಲ್ಲೊಂದು ಪೆಟ್ಟಿಗೆ ಅನಾಥವಾಗಿ ಬಿದ್ದಿದೆ. ಅದರೊಳಗೆ ಏನೋ ಇದ್ದ ಹಾಗಿದೆ’’ ಒಬ್ಬ ಹೇಳಿದ.
‘‘ಅದು ನನ್ನದು ಕಣ್ರೀ...ತುಂಬಾ ದಿನದಿಂದ ಅದನ್ನು ಹುಡುಕುತ್ತಾ ಇದ್ದೆ’’ ಜಿಪುಣನೊಬ್ಬ ಕೂಗಿ ಅತ್ತ ಧಾವಿಸಿದ.
ನೋಡಿದರೆ ಅಲ್ಲೊಂದು ಶವಪೆಟ್ಟಿಗೆ ಅನಾಥವಾಗಿ ಬಿದ್ದಿತ್ತು.

ಮರ್ಯಾದಸ್ಥರು!
‘‘ಪ್ರಾಯ 35 ದಾಟಿರಬೇಕಲ್ಲ...ಬಹುಶಃ ನೀನು ಈ ವೃತ್ತಿಗೆ ಹೊಸಬಳು...ಅಲ್ಲವೆ’’ ವೃದ್ಧ ಗಡ್ಡ ನೀಯುತ್ತಾ ಕೇಳಿದ.
ಮಹಿಳೆ ಮುಚ್ಚಿದ ಬುರ್ಖಾದೊಳಗಿಂದಲೇ ಹೇಳಿದಳು
‘‘ಹೌದು. ಈ ಊರಿನ ದೊಡ್ಡ ಮರದ ಮಿಲ್ಲಿನ ಸಾಹುಕಾರರ ಮಗ ನನ್ನ ಮಗಳನ್ನು ಮದುವೆಯಾಗಲು ಒಪ್ಪಿದ್ದಾರೆ. 50 ಪವನ್ ಬಂಗಾರ ಹಾಕಬೇಕು. ಎಲ್ಲೂ ಹಣ ಹುಟ್ಟಲಿಲ್ಲ. ನಾವು ಬಡವರು. ಬೇರೆ ವಿಧಿಯಿಲ್ಲ...ಅದಕ್ಕಾಗಿ ಬಂದಿದ್ದೇನೆ....’’

ವೃದ್ಧ ಬೆವರಿ, ಧಿಗ್ಗನೆ ಎದ್ದು ನಿಂತ. ಬಳಿಕ ಅವಸರವಸರವಾಗಿ ಮೊಬೈಲ್ ತೆಗೆದು ಫೋನಲ್ಲಿ ಮಾತನಾಡತೊಡಗಿದ ‘‘ಮಗನೇ...ಆ ಸಂಬಂಧ ನಮಗೆ ಬೇಡ. ಅವರು ಮರ್ಯಾದಸ್ಥರಲ್ಲ...’’

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

Thursday, December 15, 2011

ಬಾಗಿಲು ಮತ್ತು ಇತರ ಕತೆಗಳು

ಹಕ್ಕಿ ಮತ್ತು ಗರಿ
ಆದಿ ಅಂತ್ಯವಿಲ್ಲದ ದಿಗಂತವದು. ಬಾನಾಡಿಗಳು ಅದಾಗಲೇ ತಮ್ಮ ತಮ್ಮ ಗುರಿ ಹಿಡಿದು ಗೂಡು ಬಿಟ್ಟು ತೆರಳುತ್ತಿದ್ದವು. ಪ್ರಕೃತಿ ಅದನ್ನು ಸಂಭ್ರಮದಿಂದ ವೀಕ್ಷಿಸುತ್ತಿತ್ತು. ಹಕ್ಕಿಗಳು ಶೀಘ್ರ ಗುರಿ ತಲುಪಲಿ ಎಂದು ಹಾರೈಸುತ್ತಿದ್ದವು.
ಹೀಗೆ, ದಿಗಂತದಲ್ಲಿ ಹಕ್ಕಿಯೊಂದು ರೆಕ್ಕೆ ಬಿಚ್ಚಿ ಹಾರಿ ಹೋಗುತ್ತಿರುವ ಸಂದರ್ಭ, ರಭಸಕ್ಕೆ ಹಕ್ಕಿಯ ಗರಿಯೊಂದು ಉದುರಿ ಬಿತ್ತು. ಗರಿ ಸ್ವ್ವತಂತ್ರವಾಗಿ ಆಕಾಶದಲ್ಲಿ ತೇಲತೊಡಗಿತ್ತು.
ಗರಿ ಹೇಳಿಕೊಂಡಿತು ‘ನಾನೀಗ ಸ್ವತಂತ್ರ. ಹಕ್ಕಿಯ ಹಂಗಿಲ್ಲದೆ ಹಾರಾಡುತ್ತಿದ್ದೇನೆ’
ಗಾಳಿಯಲ್ಲಿ ತೇಲಾಡುತ್ತಾ ಹಕ್ಕಿಯನ್ನು ನೋಡಿ ಗರಿ ಹಂಗಿಸಿತು ‘ನನ್ನ ಸಂಗಾತಿಗಳನ್ನು ರೆಕ್ಕೆಯಂತೆ ಬಳಸಿ, ನೀನು ಆಕಾಶದಲ್ಲಿ ಹಾರಾಡುತ್ತಾ ಮೆರೆದೆ. ನಮ್ಮನ್ನು ಮರೆತೆ. ಈಗ ನೋಡು... ನನಗೀಗ ನಿನ್ನ ಹಂಗಿಲ್ಲ. ಎಲ್ಲಾ ಗರಿಗಳು ನನ್ನಂತೆಯೇ ಸ್ವತಂತ್ರವಾದರೆ ನಿನಗೆಲ್ಲಿ ಅಸ್ತಿತ್ವ’
ಮತ್ತೆ ಜೋರಾಗಿ ಪ್ರಕೃತಿಗೆ ಕೂಗಿ ಹೇಳಿತು ‘ನೋಡಿರಿ, ನೋಡಿರಿ ನಾನೀಗ ಸ್ವತಂತ್ರವಾಗಿ ಹಾರಾಡುತ್ತಿದ್ದೇನೆ. ನದಿಗಳೇ ನೋಡಿ, ನನ್ನ ದೆಸೆಯಿಂದ ಹಕ್ಕಿ ಹಾರುತ್ತಿದ್ದರೂ, ನೀವೆಲ್ಲ ಹಕ್ಕಿಯನ್ನೇ ಕೊಂಡಾಡಿದಿರಿ. ಈಗ ನೋಡಿ...’ ಆದರೆ ಗಾಳಿ ನಿಧಾನವಾಗಿ ಕಡಿಮೆಯಾಯಿತು. ಗರಿ ನಿಧಾನವಾಗಿ ನೆಲವನ್ನಪ್ಪಿತು. ಮತ್ತೆ ಅಲ್ಲಿಂದ ನೆಗೆದು ಹಾರುವುದಕ್ಕೆ ಯತ್ನಿಸಿತು. ಊಹುಂ...ಆಗುತ್ತಿಲ್ಲ. ಅದೆಷ್ಟು ಪ್ರಯತ್ನಿಸಿದರೂ ಹಾರುವುದಕ್ಕಾಗುತ್ತಿಲ್ಲ... ಗರಿ ಅಸಹಾಯಕತೆಯಿಂದ ಮೇಲೆ ನೋಡಿತು. ಅಲ್ಲಿ ಹಕ್ಕಿ ಸದ್ದು ಗದ್ದಲವಿಲ್ಲದೆ ಹಾರುತ್ತಾ ಹಾರುತ್ತಾ, ತನ್ನ ಗುರಿಯೆಡೆಗೆ ಸಾಗುತ್ತಿತ್ತು.

ಬಾಗಿಲು
ಒಬ್ಬ ಫಕೀರ ಶ್ರೀಮಂತನ ಮಹಲಿಗೆ ಬಂದವನು ಅಂಗಳದಲ್ಲಿ ನಿಂತು ಆ ಮನೆಯನ್ನೇ ನೋಡುತ್ತಿದ್ದ.
ಶ್ರೀಮಂತ ಅಚ್ಚರಿಯಿಂದ ಕೇಳಿದ ‘‘ಏನು ನೋಡುತ್ತಿರುವೆ?’’
‘‘ನಿನ್ನ ಮನೆಯ ಹೆಬ್ಬಾಗಿಲನ್ನು’’
ಶ್ರೀಮಂತ ಹೆಮ್ಮೆಯಿಂದ ಹೇಳಿದ ‘‘ಅದು ತೇಗದ ಮರದಿಂದ ಮಾಡಿದ ಬಲಿಷ್ಠ ಬಾಗಿಲು...’’
‘‘ಯಾರಿಗೆ ಹೆದರಿ ಈ ಬಾಗಿಲನ್ನು ತಯಾರಿಸಿದ್ದೀಯ?’’
‘‘ಕಳ್ಳಕಾಕರಿಗೆ ಹೆದರಿ...’’
‘‘ನೀನು ಯಾವಾಗ ಈ ಬಲಿಷ್ಟ ಬಾಗಿಲನ್ನು ತಯಾರಿಸಬೇಕೆಂದು ತೀರ್ಮಾಸಿದ್ದೆಯೋ ಆಗಲೇ ಕಳ್ಳ ನಿನ್ನ ಮನೆಯನ್ನು ಪ್ರವೇಶಿಸಿಯಾಗಿದೆ ಅವನನ್ನು ಮನೆಯೊಳಗಡೆ ಬಿಟ್ಟು ಬಾಗಿಲು ಭದ್ರ ಪಡಿಸಿ, ನೀನು ಹೊರಗೆ ಬಂದು ನಿಂತಿದ್ದೀಯ’’
ಎಂದವನೇ ಫಕೀರ ಮುಂದೆ ನಡೆದ.

ಹೆಸರು
ಅವನು ಓಡೋಡಿ ಬಂದ.
‘‘ಗುರುಗಳೇ ನನಗೆ ಗಂಡು ಮಗು ಹುಟ್ಟಿದೆ. ಸುಂದರವಾದ ಒಂದು ಹೆಸರನ್ನು ಹೇಳಿ’’
ಸಂತ ನುಡಿದ ‘‘ಸುಂದರವಾದ ಹೆಸರುಗಳಿಲ್ಲ. ಸುಂದರವಾದ ಮನುಷ್ಯರಿದ್ದಾರೆ. ಆ ಮಗುವಿನಿಂದಾಗಿಯೇ ಹೆಸರು ಸುಂದರವಾಗುತ್ತದೆ. ಹೋಗು, ಆ ಮಗುವನ್ನು ಹೆತ್ತ ತಾಯಿಯಲ್ಲಿ ಕೇಳು. ಅವಳ ಆಸೆಯಂತೆ ಹೆಸರನ್ನಿಡು’’

ನಗು
ಅವರೆಲ್ಲ ಹಿರಿಯರು, ಶ್ರೀಮಂತರು, ಅಧಿಕಾರಿಗಳು...ಎಲ್ಲರೂ ಮುಂಜಾನೆ ಆ ಮೈದಾನದಲ್ಲಿ ಸೇರಿ ಜೋರಾಗಿ ನಗುವಿನ ವ್ಯಾಯಾಮ ಮಾಡುತ್ತಿದ್ದರು. ಬಾರದ ನಗುವನ್ನು ಎಲ್ಲರೂ ಸೇರಿ ಜೋರಾಗಿ ನಗುವುದಕ್ಕೆ ಪ್ರಯತ್ನಿಸುತ್ತಿದ್ದರು. ಆ ನಗುವಿನಿಂದ ಅವರ ಆರೋಗ್ಯ ಉತ್ತಮವಾಯಿತೋ ಗೊತ್ತಿಲ್ಲ. ಪಕ್ಕದ ಗುಡಿಸಲಿನ ಮಕ್ಕಳು ಅವರನ್ನು ನೋಡಿ ನಕ್ಕು ನಕ್ಕು ತಮ್ಮ ಆರೋಗ್ಯವನ್ನು ಉತ್ತಮ ಪಡಿಸಿಕೊಂಡರು.

ಸ್ನೇಹಿತರು
‘‘ಸುಮ್ನೆ ಸ್ನೇಹಿತರ ಜೊತೆ ಅಲೆಯುತ್ತಿದ್ದೀಯಲ್ಲ, ಯಾವ ಲಾಭಕ್ಕಾಗಿ ಅವರನ್ನು ಜೊತೆ ಸೇರಿಸ್ಕೊಂಡಿದ್ದೀಯ?’’
ತಂದೆ ಮಗನ ಮುಂದೆ ಸಿಟ್ಟಿನಿಂದ ಕಿರುಚಿದ.
‘‘ನನ್ನಿಂದ ಯಾವ ಲಾಭವೂ ಇಲ್ಲದಿದ್ದರೂ ಅವರು ನನ್ನ ಜೊತೆಗಿದ್ದಾರೆ. ಅದಕ್ಕಾಗಿ ನಾನೂ ಅವರ ಜೊತೆಗಿದ್ದೇನೆ’’ ಮಗ ತಣ್ಣಗೆ ಹೇಳಿದ.

ಆಳ
‘‘ನೀರು ಆಳವಿದೆಯೆ?’’ ಆತ ಕೇಳಿದ.
ನೀರಲ್ಲಿದ್ದವ ‘‘ಇಲ್ಲ’’ ಎಂದ.
ಆತ ನೀರಿಗೆ ಹಾರಿದ. ನೋಡ ನೋಡುತ್ತಿದ್ದಂತೆ ಆತ ಮುಳುಗ ತೊಡಗಿದ ‘‘ಏನ್ರೀ...ಆಳವಿಲ್ಲ ಎಂದ್ರಿ...?’’
‘‘ಈಜಲು ಗೊತ್ತಿರುವವನ ಆಳಕ್ಕೂ, ಗೊತ್ತಿಲ್ಲದವನ ಆಳಕ್ಕೂ ವ್ಯತ್ಯಾಸವಿದೆ. ನನಗೆ ಈಜಲು ಗೊತ್ತಿದೆ’’

ಉಪ್ಪು
ಮದುವೆಯ ಊಟ ಭರ್ಜರಿಯಾಗಿತ್ತು.
ಯಾರೋ ಜೋರಾಗಿ ಹೇಳಿದರು ‘‘ಉಪ್ಪು ಜಾಸ್ತಿಯಾಗಿದೆ...’’
ಇನ್ನಾರೋ ವಿನಯದಿಂದ ಉತ್ತರಿಸಿದರು ‘‘ಮದುವೆ ಹೆಣ್ಣಿನ ತಂದೆಯ ಕಣ್ಣೀರು ಒಂದಿಷ್ಟು ಹೆಚ್ಚು ಬಿದ್ದಿರಬೇಕು. ಕ್ಷಮಿಸಿ ಬಿಡಿ. ಯಾವುದೇ ತಕರಾರು ಮಾಡದೇ ದಯವಿಟ್ಟು ಊಟ ಮುಗಿಸಿ’’

ವರದಿ
‘‘ನಗರದಲ್ಲಿ ಕೋಮುಗಲಭೆ, ಇಬ್ಬರ ಬರ್ಬರ ಕೊಲೆ’’
ವರದಿಗಾರ ಸುದ್ದಿ ಮಾಡುತ್ತಿದ್ದ.
ಇನ್ನೊಬ್ಬ ಕೇಳಿದ ‘‘ಅಂತದ್ದು ಯಾವುದೂ ನಡೆದಿಲ್ಲವಲ್ಲ?’’
‘‘ಇದು ಪ್ರಕಟವಾದ ಬಳಿಕ ನಡೆಯುತ್ತೆ. ಸುಮ್ಮನೆ ತಲೆಕೆಡಿಸಿಕೊಳ್ಳಬೇಡ’’ ವರದಿಗಾರ ಉತ್ತರಿಸಿದ.

Tuesday, December 13, 2011

ಕಳಚಿಟ್ಟು ಬಾ ಒಳಗೆ...

ಒಳ ಬರುವ ಮೊದಲು ಗೆಳೆಯ ಕೇಳಿದ
ಚಪ್ಪಲಿಯನ್ನು ಕಳಚಿಟ್ಟು ಬರಲೆ?
ಹೇಳಿದೆ:
ಗೆಳೆಯ ಕಾಲಿನಲ್ಲಿರುವ ಚಪ್ಪಲಿ
ಹಾಗೇ ಇರಲಿ
ನೀನು ಬಳಸಿ ಸವೆದು ಹೋಗಿರುವ
ನಿನ್ನ ಹೆಸರನ್ನು ಕಳಚಿ ಒಳಗೆ ಬಾ...

ಗೆಳೆಯಾ,
ತಪ್ಪು, ಹೆಸರನ್ನು ಹೊಲಿದ
ಚಮ್ಮಾರನದ್ದಲ್ಲ
ಅದನ್ನು ಧರಿಸಿ ನೀನು
ತುಳಿದ ದಾರಿಯದ್ದು

ನೀನು ಧರಿಸಿಕೊಂಡ
ಚಪ್ಪಲಿಯಲ್ಲಿ
ಅಂಟಿಕೊಂಡ ಧರ್ಮ, ಜಾತಿ
ವರ್ಗ, ಕುಲ, ಗೋತ್ರ...
ಇತ್ಯಾದಿ ಹೊಲಸುಗಳ ನೋಡು
ಒಳಗೆ ಬರುವುದಾದರೆ
ಕಳಚಿಟ್ಟು ಬಾ...
ಆ ನಿನ್ನ ಹೆಸರನ್ನ!

ಗೆಳೆಯಾ...
ಹೊಂಡ ತೋಡಿ ಮುಚ್ಚುವಾಗ
ನೀನೊಂದು ಬರೇ ಹೆಣ!
ನೀನು ಧರಿಸಿಕೊಂಡ
ಹೆಸರೆಂಬ ಚಪ್ಪಲಿಯನ್ನು
ಹರಿದು ಎಸೆದಿದ್ದಾರೆ ನೋಡು,
ಗುಜರಿ ಅಂಗಡಿಯ ತಕ್ಕಡಿಯಲ್ಲಿ
ತೂಗುತ್ತಿರುವ ನಿನ್ನ ಹೆಸರು
ಹತ್ತು ರೂಪಾಯಿಯಷ್ಟೂ
ಬೆಲೆ ಬಾಳುತ್ತಿಲ್ಲ!!