Monday, October 31, 2011

ಮದರಸದ ದಿನಗಳು ಭಾಗ-2: ಬ್ಯಾರಿ-ಮಲಯಾಳಂ ಸಂಘರ್ಷ

ಗುಜರಿ ಅಂಗಡಿಯಲ್ಲಿ -ಮದರಸದ ದಿನಗಳ- ಒಂದು ಕಂತನ್ನು ಈ ಹಿಂದೆ ಹಂಚಿಕೊಂಡಿದ್ದೆ. ಇದೀಗ ಅದರ ಎರಡನೆ ಕಂತನ್ನು ಹಂಚಿಕೊಳ್ಳುತ್ತಿದ್ದೇನೆ.

ಮದರಸ ಮತ್ತು ಶಾಲೆಯ ಒಂದು ಓದಿನ ಕ್ರಮದ ಒಂದು ಮುಖ್ಯ ವ್ಯತ್ಯಾಸವನ್ನು ನಾನು ಬಾಲ್ಯದಲ್ಲೇ ಗಮನಿಸಿದ್ದೆ. ಮೇಷ್ಟ್ರುಗಳು ಪಾಠ ಪುಸ್ತಕವನ್ನು ಬಿಡಿಸಿ ‘‘ಮಕ್ಕಳೇ ವೌನವಾಗಿ ಓದಿರಿ’’ ಎನ್ನುತ್ತಿದ್ದರು. ನಾವೆಲ್ಲರೂ ವೌನವಾಗಿ ಅಥವಾ ವೌನವನ್ನು ನಟಿಸಿ ಓದುತ್ತಿದ್ದೆವು. ಆದರೆ ಮದರಸದಲ್ಲಿ ಮುಸ್ಲಿಯಾರರು ಹಾಗಲ್ಲ. ‘‘ಮಕ್ಕಳೇ ಜೋರಾಗಿ ಓದಿರಿ’’ ಎನ್ನುತ್ತಿದ್ದರು. ಅಷ್ಟೇ ಅಲ್ಲ, ನಮ್ಮ ಸ್ವರ ತುಸು ಮೆಲ್ಲಗಾದರೂ ಬೆತ್ತ ಹಿಡಿದು ಓಡಾಡ ತೊಡಗುತ್ತಿದ್ದರು. ಆದುದರಿಂದ ನಾವು ಮದರಸದಲ್ಲಿ ಗಂಟಲು ಹರಿಯುವಂತೆ ಓದುತ್ತಿದ್ದೆವು.
‘ಅ-ಅಲಿಫ್, ಬ-ಬಾಹ್’ ಎಂದು ಜೋರಾಗಿ ನಾವು ಗುಣಿತಾಕ್ಷರಗಳನ್ನು ಓದುತ್ತಿದ್ದೆವು. ನಮ್ಮ ಮದರಸ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇದೆ. ಮದರಸದೊಳಗಿಂದ ಜೋರಾಗಿ ಎಲ್ಲರೂ ಆ, ಇ, ಉ, ಇ ಎನ್ನುವುದು ರಾಷ್ಟ್ರೀಯ ಹೆದ್ದಾರಿಗೆ ಅಪ್ಪಳಿಸುತ್ತಿತ್ತು. ಒಂದು ದಿನ ಬಸ್ ಕಾಯುತ್ತಿದ್ದ ನನ್ನ ಗೆಳೆಯ ಕೇಳಿದ ‘‘ಅಲ್ಲ ಮರಾಯ, ಮದರಸದೊಳಗೆ ಕರಾಟೆ ಕಲಿಸ್ತಾರ?’’ ನಾನು ನಕ್ಕು ಅವನಿಗೆ ವಿವರಿಸಿದೆ.

ಒಂದನೆ ತರಗತಿಯಲ್ಲಿ ನಮಗೆ ಅ, ಆ, ಇ, ಈ ಕಲಿಸಿದಂತೆಯೇ ಅರಬಿ ಅಕ್ಷರಗಳನ್ನೂ ಕಲಿಸುತ್ತಿದ್ದರು. ವಿಚಿತ್ರವೆಂದರೆ ನಮ್ಮದು ಅರಬಿ ಮಲಯಾಳ. ಅಂದರೆ ಅಕ್ಷರವಷ್ಟೇ ಅರೇಬಿಕ್. ಆದರೆ ಅದರ ಒಳಗಿನ ತಿರುಳು ಮಲಯಾಳಂನಲ್ಲಿರುತ್ತಿತ್ತು. ಅಂದರೆ ಮಲಯಾಳಂನ್ನು ಅರೇಬಿಕ್ ಅಕ್ಷರದಲ್ಲಿ ಬರೆದು ಕಲಿಸುತ್ತಿದ್ದರು. ಆದುದರಿಂದ, ಇತ್ತ ಮಲಯಾಳವನ್ನು ಕಲಿಯದೆ, ಅತ್ತ ಅರೇಬಿಕ್‌ನ್ನು ಅರ್ಥ ಮಾಡಿಕೊಳ್ಳದೆ ನನ್ನ ಸುಮಾರು ಐದು ವರ್ಷದ ಮದರಸದ ಕಲಿಕೆ ವ್ಯರ್ಥವಾಗಿತ್ತು. ಅದಕ್ಕೊಂದು ಮುಖ್ಯ ಕಾರಣವೂ ಇದೆ. ಸಾಧಾರಣವಾಗಿ ದಕ್ಷಿಣ ಕನ್ನಡದ ಮುಸ್ಲಿಮರನ್ನು ಬ್ಯಾರಿಗಳು ಎಂದು ಕರೆಯುತ್ತಾರೆ. ಒಂದು ಕಾಲದಲ್ಲಿ ಈ ಭಾಗದಲ್ಲಿ ‘ಆದಂ ಬ್ಯಾರಿ’ ‘ಯೂಸುಫ್ ಬ್ಯಾರಿ’ ‘ಇದ್ದಿನ್ ಬ್ಯಾರಿ’ ಎಂದೇ ಮುಸ್ಲಿಮರು ಗುರುತಿಸಿಕೊಳ್ಳುತ್ತಿದ್ದರು. ವ್ಯಾಪಾರ, ಪುಂಡಾಟಿಕೆ, ಪಾಳೇಗಾರಿಕೆ, ಸಾಹಸ ಎಲ್ಲವೂಗಳಲ್ಲೂ ಈ ಬ್ಯಾರಿಗಳದ್ದು ಎತ್ತಿದ ಕೈಯಾಗಿತ್ತು. ಆದರೆ ಅದೇನು ದುರಂತವೋ, ನಿಧಾನಕ್ಕೆ ಬ್ಯಾರಿ ಎನ್ನುವ ಅಸ್ಮಿತೆಯೇ ಅವರಿಗೆ ಅವಮಾನವಾಗಿ ಕಾಣತೊಡಗಿತು. ಬ್ಯಾರಿಯ ಅಸ್ಮಿತೆ ಕಳೆದುಕೊಂಡ ಅವರು, ಬಳಿಕ ಬ್ಯಾರಿ ಎಂದು ಯಾರಾದರೂ ಕರೆದರೆ, ಅವಾಚ್ಯ ಶಬ್ದ ಬಳಸಿದಂತೆ ಸಿಟ್ಟಿಗೇಳುತ್ತಿದ್ದರು. ಬ್ಯಾರಿ ಎಂದು ಗುರುತಿಸಲು ಹಿಂಜರಿಯುತ್ತಿದ್ದರು. ಬಹುಶಃ ಅದಕ್ಕೆ ತುಳುವ ಸಮಾಜದ ಸಾಂಸ್ಕೃತಿಕ ಪಲ್ಲಟವೂ ಕಾರಣವಾಗಿರಬಹುದು. ಹಾಗೆಯೇ ಮುಸ್ಲಿಮ್ ಬದುಕಿನಲ್ಲಿ ಕೇರಳದ ಮುಸ್ಲಿಮರ ಪ್ರಭಾವವೂ ಕಾರಣವಾಗಿರಬಹುದು.

ಅದಿರಲಿ. ನಮ್ಮ ಮನೆ ಭಾಷೆ ಬ್ಯಾರಿ. ಕರಾವಳಿಯ ಶೇ. 90ರಷ್ಟು ಮುಸ್ಲಿಮರಿಗೆ ಉರ್ದು ಬರುವುದಿಲ್ಲ. ಆದರೆ ನಮ್ಮ ಭಾಷೆಗೆ ಒಂದು ಸ್ಪಷ್ಟ ಅಸ್ತಿತ್ವವೇ ಇದ್ದಿರಲಿಲ್ಲ. ಯಾವುದಾದರೂ ದಾಖಲೆಗಳಲ್ಲಿ ಭಾಷೆ ಯಾವುದೆಂದು ಕೇಳಿದರೆ ನಾವು ಮಲಯಾಳಂ ಎಂದು ಹೇಳುತ್ತಿದ್ದೆವು. ಯಾಕೆಂದರೆ ಬ್ಯಾರಿ ಭಾಷೆ ಶೇ. 90ರಷ್ಟು ಮಲಯಾಳಂನ್ನು ಹೋಲುತ್ತಿತ್ತು. ಆದರೆ ಅತ್ತ ಮಲಯಾಳಿಗಳು ಬ್ಯಾರಿ ಭಾಷೆಯನ್ನು ಮಲಯಾಳಂ ಎಂದು ಒಪ್ಪುತ್ತಿರಲಿಲ್ಲ. ಅದೆಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಭಾಷೆಯ ಹೆಸರೇನು ಎನ್ನುವುದೂ ನಮಗೆ ಗೊತ್ತಿರಲಿಲ್ಲ. ‘ನಕ್ಕ್-ನಿಕ್ಕ್(ನನಗೆ-ನಿನಗೆ)’ ಎಂದು ಈ ಭಾಷೆಯನ್ನು ನಾವು ಕರೆಯುತ್ತಿದ್ದೆವು. ನಕ್ಕ್-ನಿಕ್ಕ್ ಭಾಷೆ. ಅಂದರೆ ನನಗೆ-ನಿನಗೆ ಅಷ್ಟೇ ಸೀಮಿತವಾದ ಭಾಷೆ ಎಂದು ಬಹುಶಃ ಆಳದಲ್ಲಿ ಒಪ್ಪಿಕೊಂಡಿದ್ದೆವು ಎಂದು ಕಾಣುತ್ತದೆ. (ಈ ಭಾಷೆಯ, ಸಂಘರ್ಷ, ಹೋರಾಟ, ಮತ್ತು ಒಂದು ಯಶೋಗಾಥೆಯ ಕುರಿತ ಇನ್ನಷ್ಟು ವಿವರಗಳನ್ನು ಇನ್ನೊಮ್ಮೆ ಹಂಚಿಕೊಳ್ಳುವೆ).

ನಮ್ಮ ಮದರಸಗಳಿಗೆ ಮುಸ್ಲಿಯಾರುಗಳು ಬೇಕೆಂದರೆ ನಾವು ಕೇರಳದಿಂದಲೇ ತರಿಸಬೇಕು. ಆಗ ಸ್ಥಳೀಯವಾಗಿ ಮುಸ್ಲಿಮರು ಧಾರ್ಮಿಕ ವಿದ್ಯಾಭ್ಯಾಸ ಕಲಿಯುವುದು ಕಡಿಮೆ. ಒಂದು ವೇಳೆ ಕಲಿಯುವುದಿದ್ದರೂ ಕೇರಳದಲ್ಲಿ ಹೋಗಿ ಕಲಿತು ಬರಬೇಕು. ಬರುವಾಗ ಅಪ್ಪಟ ಮಲಯಾಳ ಭಾಷೆಯಲ್ಲಿ ಮಾತನಾಡಿ ನಮ್ಮನ್ನೆಲ್ಲ ಹೆದರಿಸುತ್ತಿದ್ದರು. ಕೇರಳದಿಂದ ಬಂದ ಮುಸ್ಲಿಯಾರರು ನಮಗೆ ಮದರಸದ ಪಠ್ಯಗಳನ್ನು ಮಲಯಾಳಂನಲ್ಲೇ ಬೋಧಿಸುತ್ತಿದ್ದರು. ಪಠ್ಯಗಳಲ್ಲಿರುವ ಅಕ್ಷರಗಳೆಲ್ಲ ಅರೇಬಿಕ್ ಆಗಿದ್ದವು. ಆದರೆ ಮಾಧ್ಯಮ ಮಾತ್ರ ಮಲಯಾಳಂ. ಹೀಗೆ ನಾವು ಅರಬೀ-ಮಲಯಾಳಂ ಮೂಲಕ ಮದ್ರಸಗಳಲ್ಲಿ ಓದಿದೆವು. ಇದರ ಪರಿಣಾಮವಾಗಿ, ನಾವೆಲ್ಲ ಮದರಸದಲ್ಲಿ ಕುರ್‌ಆನನ್ನು ಓದಲು ಮಾತ್ರ ಕಲಿತೆವು. ಆದರೆ ಅದರ ಅರ್ಥ ಗೊತ್ತೇ ಇರಲಿಲ್ಲ. ನಾನು ಕುರ್‌ಆನ್‌ನ್ನು ಅರ್ಥ ಸಹಿತ ಓದಿದ್ದು ಮದರಸ ತೊರೆದ ಎಷ್ಟೋ ವರ್ಷಗಳ ಬಳಿಕ. ಅದೂ ಕನ್ನಡದಲ್ಲಿ. ಕುರ್‌ಆನನ ಕನ್ನಡ ಅನುವಾದ ಬಂದುದರಿಂದ ನಾವು ಕುರ್‌ಆನ್‌ನ್ನು ಅರ್ಥ ಸಹಿತ ಓದುವಂತಾಯಿತು. ಮದರಸ-ಮಸೀದಿ ವತಿಯಿಂದ ವರ್ಷಕ್ಕೊಮ್ಮೆ ಗಂಭೀರ ಮತ ಪ್ರಸಂಗವನ್ನು ಮಾಡುತ್ತಿದ್ದರು. ಅಂದರೆ ಧಾರ್ಮಿಕ ಭಾಷಣ. ಇದಕ್ಕೂ ಕೇರಳದಿಂದಲೇ ವೌಲ್ವಿಗಳು ಭಾಷಣ ಮಾಡಲು ಬರುತ್ತಿದ್ದರು. ಅವರು ಮಲಯಾಳಂನಲ್ಲಿ ಈ ಭಾಷಣವನ್ನು ಮಾಡಿದರೆ ಮಾತ್ರ ಅದಕ್ಕೊಂದು ಮರ್ಯಾದೆ. ನಾವೆಲ್ಲ ಮಲಯಾಳಂ ಎಂದರೆ ಮುಸ್ಲಿಮರ ಭಾಷೆ ಎಂದೇ ತಿಳಿದುಕೊಂಡಿದ್ದೆವು. ಹೇಗೆ ಉತ್ತರ ಕರ್ನಾಟಕದಲ್ಲಿ ಉರ್ದುವನ್ನು ಮುಸ್ಲಿಂ ಭಾಷೆ ಎಂದು ತಪ್ಪು ತಿಳಿದುಕೊಂಡಿದ್ದಾರೋ, ಹಾಗೆಯೇ ನಾವು ಮಲಯಾಳಂ ಕುರಿತಂತೆಯೂ ತಪ್ಪು ತಿಳಿದಿದ್ದೆವು. ಮಲಯಾಳಂ ಮಾತನಾಡುವವರೆಲ್ಲ ಮುಸ್ಲಿಮರು ಎಂದು ನಂಬಿದ್ದೆವು. ಹೀಗಿರುವಾಗ, ನಮ್ಮ ಉಪ್ಪಿನಂಗಡಿ ಸಮೀಪದ ಮುಸ್ಲಿಯಾರರೊಬ್ಬರು ಒಂದು ಕ್ರಾಂತಿಯನ್ನು ಮಾಡಿದರು. ಅವರು ಕೇರಳದಲ್ಲಿ ಕಲಿತು ಬಂದವರೇ ಆಗಿದ್ದರೂ, ಬ್ಯಾರಿ ಭಾಷೆಯಲ್ಲಿ ಮತ ಪ್ರಸಂಗವನ್ನು ಹೇಳಲು ಶುರು ಮಾಡಿದರು. ಇದು ಆಸುಪಾಸಿನಲ್ಲೆಲ್ಲ ಕುತೂಹಲಕ್ಕೆ ಕಾರಣವಾಗಿತ್ತು. ‘‘ಬ್ಯಾರಿ ಭಾಷೆಯಲ್ಲಿ ಮತ ಪ್ರಸಂಗವೆ?’’ ಎಂದು ಎಲ್ಲರೂ ಕಿಸ್ಸಕ್ಕನೆ ನಗುತ್ತಿದ್ದರು.
ಒಂದು ದಿನ ನಮ್ಮ ಮಸೀದಿಗೂ ಅವರನ್ನು ಕರೆಯಲಾಯಿತು. ಅವರು ಬ್ಯಾರಿ ಭಾಷೆಯಲ್ಲಿ ಮತಪ್ರಸಂಗ ಮಾಡುತ್ತಿದ್ದರೆ ನಾವೆಲ್ಲ ಕಿಸಕಿಸನೆ ನಗುತ್ತಿದ್ದೆವು. ಯಾಕೆಂದರೆ, ಆಳದಲ್ಲಿ ನಾವೆಲ್ಲ ನಾವಾಡುವ ಬ್ಯಾರಿ ಭಾಷೆಯ ಬಗ್ಗೆ ಕೀಳರಿಮೆಯಿಂದ ನರಳುತ್ತಿದ್ದೆವು. ಆದರೆ ನಿಧಾನಕ್ಕೆ ಅವರ ಪ್ರಸಂಗ ನಮಗೆಲ್ಲ ಇಷ್ಟವಾಗತೊಡಗಿತು. ಆ ಬಳಿಕ ಅವರು ಬ್ಯಾರಿ ಭಾಷೆಯಲ್ಲಿ ಮತ ಪ್ರಸಂಗ ನೀಡುವುದಕ್ಕಾಗಿಯೇ ಜನಪ್ರಿಯರಾದರು.

Saturday, October 29, 2011

ಈ ದೀಪಾವಳಿಯ ಎರಡು ಠುಸ್ಸ್ ಪಟಾಕಿಗಳು: ಏಳಾಂ ಅರಿವು ಮತ್ತು ರಾ-ವನ್

ಏಳಾಂ ಅರಿವು: ಮುರುಗದಾಸನಲ್ಲ, ಮೂರ್ಖದಾಸ!

ದೊಡ್ಡ ಯಶಸ್ಸು, ದೊಡ್ಡ ಪ್ರತೀಕ್ಷೆಗಳು ಕೆಲವೊಮ್ಮೆ ಸೃಜನಶೀಲ ಕಲಾವಿದನ ಕಣ್ಣಿಗೆ ಕತ್ತಲನ್ನು
ಕವಿಸುತ್ತದೆ. ‘ಘಜಿನಿ’ ಮೂಲಕ
ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಎ. ಆರ್. ಮುರುಗದಾಸ್ ಆ ಯಸಸ್ಸಿನ ಅಮಲಿನಲ್ಲಿದ್ದಾಗಲೇ ‘ಏಳಾಂ ಅರಿವು’ ಚಿತ್ರವನ್ನು ಘೋಷಿಸಿದರು. ಚಿತ್ರದ ಹೆಸರು, ವಿಭಿನ್ನ ಕತೆ, ನಾಯಕ ಪಾತ್ರದಲ್ಲಿರುವ ಸೂರ್ಯ ಇವೆಲ್ಲವೂ ಚಿತ್ರದ ಕುರಿತಂತೆ ಅಗಾಧ ನಿರೀಕ್ಷೆಯನ್ನು ಹುಟ್ಟಿಸಿ ಹಾಕಿತು. ಮಾಧ್ಯಮಗಳೂ ಸೇರಿದಂತೆ ರಾಷ್ಟ್ರಮಟ್ಟದ ಚಿತ್ರೋದ್ಯಮಿಗಳ ಕಣ್ಣು ‘ಏಳಾಂ ಅರಿವು’ ಚಿತ್ರದ ಮೇಲಿದ್ದವು ಘಜಿನಿ ಚಿತ್ರದಲ್ಲಿ ಪ್ರೇಮ ಮತ್ತು ಸೇಡನ್ನು ವಿಭಿನ್ನವಾಗಿ ನಿರೂಪಿಸಿದ ರೀತಿ ಎಲ್ಲರಿಂದಲೂ ಮೆಚ್ಚುಗೆ ಗಳಿಸಿತ್ತು. ಕ್ಷಣ ಕ್ಷಣಗಳನ್ನು ಕುತೂಹಲಕರವಾಗಿ ಕಟ್ಟಿಕೊಟ್ಟಿದ್ದರು ಮುರುಗದಾಸ್. ಇಂತಹ ನಿರ್ದೇಶಕರೊಬ್ಬ ‘ಬೌದ್ಧ ಸನ್ಯಾಸಿ’ಯೊಬ್ಬನ ಕತೆಯನ್ನು ಚಿತ್ರದ ಮೇಲೆ ತೋರಿಸುತ್ತೇನೆ ಎಂದಾಗ ಎಲ್ಲರ ಗಮನ ಅತ್ತ ಹರಿಯುವುದು ಸಹಜ.

‘ಏಳಾಂ ಅರಿವು’ ಚಿತ್ರವನ್ನು ನೋಡಿದಾಕ್ಷಣ ಮುರುಗದಾಸ್ ಯಶಸ್ಸಿನ ಭಾರವನ್ನು ಬೆನ್ನಲ್ಲಿ ಕಟ್ಟಿಕೊಂಡು ಏದುಸಿರು ಬಿಡುತ್ತಿರುವುದು ಸ್ಪಷ್ಟವಾಗುತ್ತದೆ
. ಅತ್ತ ಸಾಹಸ ಪ್ರಧಾನ ಚಿತ್ರವೂ ಆಗದೆ, ಇತ್ತ ಯಾವ ಯಾವ ಏಳನೇ ಅರಿವನ್ನು ಕಟ್ಟಿಕೊಡಗಲಾಗದೆ, ಕ್ಲೈಮಾಕ್ಸ್‌ನಲ್ಲಿ ತಮಿಳರ ಮೇಲಾಗುವ ದೌರ್ಜನ್ಯ ಮತ್ತು ತಮಿಳರು ಹೊಂದ ಬೇಕಾದ ಜಾಗೃತಿಯ ಕುರಿತ ರಾಜಕೀಯ ಭಾಷಣದೊಂದಿಗೆ ಚಿತ್ರ ಮುಗಿಯುತ್ತದೆ. ಈ ಭಾಷಣವನ್ನು ಕೇಳುವುದಕ್ಕಾಗಿ ಮೂರು ಗಂಟೆ ಚಿತ್ರಮಂದಿರದೊಳಗೆ ಕಳೆದೆವೇ ಎಂಬ ‘ಎಂಟನೆ ಅರಿವು’ ನಮಗಾಗುತ್ತದೆ.

1600 ವರ್ಷಗಳ ಹಿಂದೆ ತಮಿಳಿನಾಡಿನಿಂದ ಚೀನಾಕ್ಕೆ ತೆರಳಿದ ಬೋಧಿಧರ್ಮ ಎಂಬ ತಮಿಳಿಗ ಸನ್ಯಾಸಿ ಅಲ್ಲಿನ ಜನ
ರ ಸಂಕಟಗಳ ಪರಿಹಾರಕ್ಕೆ ಕಾರಣವಾಗುತ್ತಾನೆ. ಭೀಕರ ಕಾಯಿಲೆಯೊಂದು ಚೀನಾದ ಜನರ ಮೇಲೆರಗಿದಾಗ ಅವರನ್ನು ರೋಗದಿಂದ ಕಾಪಾಡುತ್ತಾನೆ. ಶತ್ರುಗಳು ಅವರ ಮೇಲೆರಗಿದಾಗ, ತನ್ನ ಕುಂಗ್‌ಫು ಮೂಲಕ ಅವರನ್ನು ಉಳಿಸುತ್ತಾನೆ. ಅಷ್ಟೇ ಅಲ್ಲ ಅವರೆಲ್ಲರಿಗೂ ಸಮರಕಲೆಯನ್ನು ಕಲಿಸಿಕೊಡುತ್ತಾನೆ. ಅವರೆಲ್ಲರ ಆರಾಧ್ಯನಾಗುತ್ತಾನೆ. ಮುಂದೆ ತನ್ನ ಕೆಲಸ ಮುಗಿಸಿ ವೃದ್ಧಾಪ್ಯ ಹತ್ತಿರವಾಗುತ್ತಿರುವಾಗ ಅವನು ಮರಳಿ ತಾಯಿ ನಾಡಿಗೆ ಹೊರಡಲು ತೀರ್ಮಾನಿಸುತ್ತಾನೆ. ಆದರೆ ಅವನು ತಮ್ಮ ಮಣ್ಣಲ್ಲೇ ಮಣ್ಣಾಗಬೇಕು. ಅದರಿಂದ ಊರಿಗೆ ಒಳ್ಳೆಯದಾಗುತ್ತದೆ ಎನ್ನುವುದು ಚೀನಾದ ಜನರ ಆಶಯ. ಆದುದರಿಂದ ಆತನ ಅನ್ನದಲ್ಲಿ ವಿಷ ಹಾಕಿ ಕೊಡುತ್ತಾರೆ. ಇದು ಬೋದಿಧರ್ಮನಿಗೆ ಗೊತ್ತಾಗುತ್ತದೆ. ಜನರ ಆಶಯದಂತೆ, ಆ ಅನ್ನವನ್ನು ತಿಂದು, ಅಲ್ಲೇ ಮಣ್ಣಾಗುತ್ತಾನೆ.

ಇದು ಆರಂಭದ 2
0 ನಿಮಿಷಗಳ ಕತೆ. ಇಷ್ಟನ್ನು ನಿರ್ದೇಶಕರು ಮನಮುಟ್ಟುವಂತೆ ಸೆರೆಹಿಡಿದಿದ್ದಾರೆ. ಬೋಧಿಧರ್ಮನ ಪಾತ್ರವನ್ನು ಸೂರ್ಯಕೂಡ ಆವಾಹಿಸಿಕೊಂಡಿದ್ದಾರೆ. ಎಲ್ಲೂ ಪಾತ್ರ ಗಾಂಭೀರ್ಯ ಕಳೆದುಹೋಗದಂತೆ ಜಾಗರೂಕತೆ ವಹಿಸಿದ್ದಾರೆ. ಆದರೆ ಚಿತ್ರದ ಅಧ್ವಾನ ಆರಂಭವಾಗುವುದು ತದನಂತರ. ಕತೆ, ನಿರ್ದೇಶನ, ಸಂಕಲನ ಎಲ್ಲವೂ ಈ ಅಧ್ವಾನಗಳಿಗೆ ಸಹಕರಿಸುತ್ತದೆ. 1600 ವರ್ಷಗಳ ಬಳಿಕ ಕತೆ ಆಧುನಿಕ ರೂಪವನ್ನು ಪಡೆಯುತ್ತದೆ. ಚೀನ ದೇಶ ಭಾರತದ ಮೇಲೆ ಜೈವಿಕ ಯುದ್ಧವನ್ನು ಹೇರಲು ಬಯಸುತ್ತದೆ. ಅದಕ್ಕಾಗಿ ಡೋಂಗ್ಲೀ(ಜೋನಿ ಟ್ರಿ ಗುಯೇನ್) ಎಂಬ ಏಜೆಂಟ್‌ನನ್ನು ಆರಿಸಿಕೊಳ್ಳುತ್ತದೆ. ಈತ ಮಾರ್ಷಲ್ ಆರ್ಟ್ ಮಾತ್ರವಲ್ಲ, ಇಪ್ನಾಟಿಸಂ ಸೇರಿದಂತೆ ಹಲವು ಸಮರ ಕಲೆಗಳಲ್ಲಿ ಪ್ರವೀಣ. ‘ಆಪರೇಷನ್ ರೆಡ್’ ಎಂದು ತನ್ನ ಕಾರ್ಯಾಚರಣೆಗೆ ಚೀನ ಹೆಸರಿಡುತ್ತದೆ.

ಇತ್ತ ಭಾರತದಲ್ಲಿ ಶುಭಾ ಶ್ರೀನಿವಾಸನ್(ಶ್ರುತಿ ಹಾಸನ್) ಎಂಬ ವಿಜ್ಞಾನಿ ವಂಶವಾಹಿಯ ಕುರಿತಂತೆ ಸಂಶೋಧನೆ ನಡೆಸುತ್ತಿರುತ್ತಾಳೆ. ತನ್ನ ಅಧ್ಯಯನಕ್ಕೆ ಬೋಧಿಧರ್ಮನನ್ನೇ ಆರಿಸಿಕೊಂಡು ಆತನ ಡಿಎನ್‌ಎ ಹೊಂದಿದವರು
ಯಾರಾದರೂ ಈಗ ಅವನ ವಂಶದಲ್ಲಿದ್ದಾರೆಯೋ ಎನ್ನುವುದನ್ನು ಅನ್ವೇಷನೆ ನಡೆಸುತ್ತಿರುತ್ತಾಳೆ. ಆಗ ಅರವಿಂದ್(ಸೂರ್ಯ) ಎಂಬ ಸರ್ಕಸ್ ಉದ್ಯೋಗಿ ಆ ವಂಶದವನೆನ್ನುವುದು, ಆತ ಆ ಡಿಎನ್‌ಎ ಹೊಂದಿದ್ದಾನೆ ಎನ್ನುವುದು ಅವಳಿಗೆ ತಿಳಿಯುತ್ತದೆ. ಆತನನ್ನು ಪ್ರೀತಿಸಿದಂತೆ ನಾಟಕವಾಗಿ ತನ್ನ ಸಂಶೋಧನೆಗೆ ಅವನನ್ನು ಗಿನಿಪಿಗ್ ಆಗಿ ಬಳಸಿಕೊಳ್ಳುತ್ತಾಳೆ. ತನ್ನ ಸಂಶೋಧನೆಯನ್ನು ಬೇರೆ ಬೇರೆ ವಿಶ್ವವಿದ್ಯಾಲಯಗಳಿಗೂ ಕಳುಹಿಸಿಕೊಡುತ್ತಾಳೆ.
ಅಂದ ಹಾಗೆ ಆಪರೇಶನ್ ರೆಡ್‌ನ ಉದ್ದೇಶ ಏನೆಂದರೆ ಭಾರತದಲ್ಲಿ ಮಾರಕ ರೋಗವನ್ನು ನಾಯಿಯೊಂದಕ್ಕೆ ಇಂಜೆಕ್ಟ್ ಮಾಡುವುದು. ಅದರ ಮೂಲಕ ಮಿಂಚಿನ ವೇಗದಲ್ಲಿ ಈ ರೋಗ ಹರಡತೊಡಗುತ್ತದೆ. ಈ ರೋಗಕ್ಕೆ ಮದ್ದು ಭಾರತದಲ್ಲಿ ಕಂಡು ಹಿಡಿದಿರುವುದಿಲ್ಲ. ಆದರೆ ಚೀನಾದವರು ಈ ಮದ್ದನ್ನು ಸಿದ್ಧುಪಡಿಸಿಕೊಂಡಿರುತ್ತಾರೆ. ಹೇಗೆ ಗೊತ್ತೆ? 1600 ವರ್ಷಗಳ ಹಿಂದೆ
ಚೀನಾದಲ್ಲಿ ಮಾರಕ ರೋಗ ಬಂದಿತ್ತಲ್ಲ, ಆಗ ಬೋಧಿಧರ್ಮ ಅವರನ್ನೆಲ್ಲ ವಾಸಿ ಮಾಡಿದ್ದನಲ್ಲ ಅದೇ ಮದ್ದು. ಭಾರತದಲ್ಲಿ ಲಕ್ಷಾಂತರ ಜನ ಸಾಯುವಾಗ ಈ ಮದ್ದಿಗಾಗಿ ಚೀನ ಹೇಳಿದಂತೆ ಭಾರತ ಕೇಳಬೇಕಾಗುತ್ತದೆ. ಇದು ಆಪರೇಷನ್ ರೆಡ್‌ನ ಗುರಿ.

ಇತ್ತ ಅರವಿಂದ್‌ನ ಡಿಎನ್‌ಎಯ ಮೂಲಕ ಬೋಧಿಧರ್ಮನನ್ನು ಮತ್ತೆ ತರಲು ಸಾಧ್ಯವೇ ಎನ್ನುವ ಸಂಶೋಧನೆಯನ್ನು ಶುಭಾ ಮಾಡುತ್ತಿರುವುದು ಚೀನಾಕ್ಕೆ ಸಿಟ್ಟು ತರಿಸುತ್ತದೆ. ಆಕೆಯನ್ನು ಕೊಲ್ಲುವುದಕ್ಕೆ ಏಜೆಂಟ್ ಡೋಂಗ್ಲಿ ನಿರ್ಧರಿಸುತ್ತಾನೆ. ಇದರ ಜೊತೆಗೆ ಡೋಂಗ್ಲಿ ನಾಯಿಯ ಮೂಲಕ ಹರಡಿದ ರೋಗ ತಮಿಳು ನಾಡಿನಾದ್ಯಂತ ಹರಡುತ್ತದೆ. ಇದರ ಕಾರಣ ಏನು ಎನ್ನುವುದು ಶುಭಾ ಮೂಲಕ ಅರವಿಂದ್‌ನಿಗೂ ಗೊತ್ತಾಗುತ್ತದೆ. ಶುಭಾ ಹೇಳುವ ಮಾ
ತನ್ನು ಯಾವ ವೈದ್ಯರೂ ನಂಬುತ್ತಿಲ್ಲ. ಆದುದರಿಂದ ಇವರು ಪ್ರತ್ಯೇಕ ಪ್ರಯೋಗಾಲಯದಲ್ಲಿ ಅರವಿಂದ್‌ನನ್ನು ಇಟ್ಟುಕೊಂಡು ಮತ್ತೆ ಬೋಧಿಧರ್ಮನಿಗೆ ಪುನರ್‌ಜ್ಜೀವ ಕೊಡುವ ಪ್ರಯತ್ನ ನಡೆಸುತ್ತಾರೆ. ಇದೇ ಸಂದರ್ಭದಲ್ಲಿ ಡೋಂಗ್ಲಿಯೂ ಇವರನ್ನು ಹುಡುಕುತ್ತಾ ಬರುತ್ತಾನೆ. ಚಿತ್ರದ ಕೊನೆಯಲ್ಲಿ ಡೋಂಗ್ಲಿ ಮತ್ತು ಬೋಧಿಧರ್ಮರ ನಡುವೆ ಮುಖಾಮುಖಿಯಾಗುತ್ತದೆ. ಕತೆ ಕೇಳಿ ಸುಸ್ತಾಯಿತೆ?

ಕನಿಷ್ಠ ತನ್ನ ಎಂದಿನ ಬಿಗಿ ನಿರೂಪಣೆ, ನಿರ್ದೇಶನದ ಮೂಲಕವಾದರೂ ಈ ಚಿತ್ರವನ್ನು ಪರಿಣಾಮಕಾರಿಯಾಗಿ ಮಾಡಿದ್ದಾರೆಯೋ ಎಂದರೆ ಅದೂ ಇಲ್ಲ. ಸಡಿಲವಾದ ನಿರ್ದೇಶನ. ಜಾಳು ನಿರೂಪಣೆ. ಕತೆಯ ಓಘ ಕೃತಕವಾಗಿದೆ. ಸೂರ್ಯನ ನಟನೆ ಪೇಲವವಾಗಿದೆ. ಶೃತಿ ಹಾಸನ್ ಗೊಂಬೆಯಂತೆ ನಟಿಸಿದ್ದಾರೆ. ಮುಖದಲ್ಲಿ ಭಾವನೆಗಳೇ ಇಲ್ಲ. ಅವರು ಆಡುವ ಇಂಗ್ಲಿಷ್ ತಮಿಳನ್ನು ಕೇಳಿದರೆ ಕಮಲ್ ಹಾಸನ್ ಮುಖಮುಚ್ಚಿಕೊಳ್ಳಬೇಕು. ಎಲ್ಲಕ್ಕಿಂತ ವಿಚಿತ್ರವೆಂದರೆ, ಅಂತ್ಯದಲ್ಲಿ ಚಿತ್ರವನ್ನು ಒಂದು ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡಿರುವುದು. ಸರ್ಕಸ್‌ನಲ್ಲಿ ಸಿಬ್ಬಂದಿಯಾಗಿರುವ ಅರವಿಂದ್, ತಮಿಳರ ಮೇಲೆ ಜಗತ್ತಿನಾದ್ಯಂತ ನಡೆ
ಯುತ್ತಿರುವ ಶೋಷಣೆ, ದೌರ್ಜನ್ಯದ ಕುರಿತಂತೆ ಆಗಾಗ ಭಾಷಣ ಕೊರೆಯತೊಡಗುತ್ತಾನೆ. ತಮಿಳರು ತಮ್ಮ ಅಸ್ಮಿತೆಯನ್ನು ಮರೆತಿದ್ದಾರೆ. ತಮ್ಮ ರಕ್ತಕಣಗಳಲ್ಲಿ ಬೋಧಿಧರ್ಮರಂತಹ ಮಹಾತ್ಮರಿದ್ದಾರೆ, ಅವರಿಗೆ ಜೀವ ನೀಡಬೇಕು....ಎಂಬಿತ್ಯಾದಿಯಾಗಿ...ಹೇಳಿಕೆ ನೀಡುವುದು. ಕ್ಯಾಪ್ಟನ್ ಪ್ರಭಾಕರನ್ ಅವರ ಹತ್ಯೆಯ ಕುರಿತಂತೆಯೂ ಈತ ತನ್ನ ಸಿಟ್ಟನ್ನು ವ್ಯಕ್ತಪಡಿಸುತ್ತಾನೆ ‘‘ಒಂಬತ್ತು ದೇಶಗಳು ಸೇರಿ ಒಬ್ಬನನ್ನು ಕೊಲ್ಲುವುದು ಯುದ್ಧವಲ್ಲ, ದ್ರೋಹ’’ ಎಂಬೆಲ್ಲ ಘೋಷಣೆಗಳು ಆಗಾಗ ಕೇಳಿ ಬರುತ್ತದೆ. ಚಿತ್ರ ಹಳಿ ತಪ್ಪಿರುವುದು ನಿರ್ದೇಶಕನ ಗಮನಕ್ಕೆ ಬಂದಿದೆ. ಆದುದರಿಂದಲೇ ಚಿತ್ರ ಮನರಂಜನೆಯ ಹಳಿಯಿಂದ ಜಾರಿ, ರಾಜಕೀಯ ಉದ್ದೇಶಕ್ಕೆ ವಾಲಿಕೊಳ್ಳುತ್ತದೆ. ಚಿತ್ರದಲ್ಲಿ ಅರವಿಂದ್‌ನ ಡಿಎನ್‌ಎಯಯಿಂದ ಬೋಧಿಧರ್ಮನನ್ನು ಜಾಗೃತಿಗೊಳಿಸುವುದಂತೂ ತಮಾಷೆಯಾಗಿದೆ. ವಿಜ್ಞಾನವೋ, ಜಾದುವೋ, ಮಂತ್ರವೋ ಒಂದೂ ಅರ್ಥವಾಗುವುದಿಲ್ಲ. ಅಂತೂ ಬೋಧಿಧರ್ಮ ಮತ್ತೆ ಬಂದು ಡೋಂಗ್ಲಿಯನ್ನು ಕೊಂದು, ಮಾರಕರೋಗವನ್ನು ವಾಸಿ ಮಾಡುತ್ತಾನೆ. ಜೊತೆಗೆ, ತಮಿಳರನ್ನು ಜಾಗೃತಿಗೊಳಿಸುವ ಕೆಲಸವನ್ನೂ ಮಾಡುತ್ತಾನೆ. ಇರುವುದರಲ್ಲಿ ಚೀನಾ ನಟ ಜೋ ಟ್ರಿಯ ಡೋಂಗ್ಲಿ ಪಾತ್ರ ಫೈಟಿಂಗ್ ನೋಡುವಂತಿದೆ.
ಮುರುಗದಾಸ್ ಒಂದು ಒಳ್ಳೆಯ ಕಲ್ಪನೆಯನ್ನು ಕೈಗೆತ್ತಿಕೊಂಡಿದ್ದಾರೆ. ಇದರಲ್ಲಿ ಅನುಮಾನವಿಲ್ಲ. ಆದರೆ ಯಾವುದೇ ಹೋಮ್‌ವರ್ಕ್‌ಗಳನ್ನು ಮಾಡಿಕೊಂಡಂತಿಲ್ಲ. ಅವರ ಅತಿ ಆತ್ಮವಿಶ್ವಾಸ ಅವರಿಗೆ ಕೈಕೊಟ್ಟಿದೆ. ಹ್ಯಾರಿಸ್ ಜಯರಾಜ್ ಅವರ ಸಂಗೀತದಲ್ಲೂ ಹೇಳಿಕೊಳ್ಳುವಂತಹದ್ದೇನೂ ಇಲ್ಲ. ಮುರುಗದಾಸ್ ಈ ಚಿತ್ರದ ಮೂಲಕ ಮೂರ್ಖದಾಸ್ ಆಗಿದ್ದಾರೆ.


ವೀಡಿಯೋ ಗೇಮ್ ಮಟ್ಟದಿಂದ ಮೇಲೇರದ ‘ರಾ-ವನ್’

‘ರಾ-ವನ್’ ಚಿತ್ರಕ್ಕೆ ಶಾರುಕ್ ತಂಡ ಈ ಬಗೆಯ ಪ್ರಚಾರ, ಹಣ, ವದಂತಿಗಳನ್ನು ಸುರಿಯದೇ ಇದ್ದಿದ್ದರೆ ನಾವು ಈ ಚಿ
ತ್ರವನ್ನು ಒಮ್ಮೆ ನೋಡಿ ‘ಪರವಾಗಿಲ್ಲ’ ಎಂದು ಹೇಳಿ ಮರೆತು ಬಿಡಬಹುದಿತ್ತು. ಆದರೆ ಅದಕ್ಕೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದ್ದಾರೆ ಸ್ವತಃ ಶಾರುಕ್ ಎನ್ನುವ ಸ್ಟಾರ್ ನಟ. ಸಿನಿಮಾವೊಂದನ್ನು ಪ್ರಚಾರದ ಮೂಲಕವೇ ಗೆಲ್ಲಿಸಲು ಮುಂದಾದರೆ, ಒಂದು ಚಿತ್ರದ ತೂಕಕ್ಕಿಂತ ಭಾರವಾದ ನಿರೀಕ್ಷೆಗಳನ್ನು, ವದಂತಿಗಳನ್ನು ಮಾಧ್ಯಮಗಳ ಮೂಲಕ ಬಿತ್ತಿದರೆ ಏನಾಗಬಹುದೇ ಅದೇ ‘ರಾ-ವನ್’ಗೂ ಆಗಿದೆ. ಒಂದು ವೀಡಿಯೋ ಗೇಮ್‌ಗೆ ಸರಿಗಟ್ಟಬಹುದಾದ ಚಿತ್ರಕ್ಕೆ ಈ ಪರಿಯಾದ ಪ್ರಚಾರಕವನ್ನು ಶಾರುಕ್ ಯಾಕೆ ಕೊಟ್ಟರು? ಎನ್ನುವುದೇ ಒಂದು ದೊಡ್ಡ ಪ್ರಶ್ನೆ. ಸ್ಟಾಂಪ್ ಸೈಝ್‌ನ ಫೋಟೋಗೆ ಆಕಾಶದೆತ್ತರದ ಚೌಕಟ್ಟು ನಿರ್ಮಿಸಿದಂತಿದೆ, ರಾ-ವನ್ ಪ್ರಚಾರಕ್ಕಾಗಿ ಶಾರುಕ್ ಸುರಿದ ಹಣ.
ಈಗಾಗಲೇ ರಜನೀಕಾಂತ್ ‘ಎಂದಿರನ್’ ಅಥವಾ ‘ರೋಬೊಟ್’ ಮೂಲಕ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ರಜನೀಕಾಂತ್ ಅವರ ಚಿಟ್ಟಿ ರೋಬೋಟ್ ಎಲ್ಲರ ಮೆಚ್ಚುಗೆಯನ್ನು ಗಳಿಸಿತ್ತು. ಏಕಕಾಲದಲ್ಲಿ ಒಳಿತು-ಕೆಡುಕಿನ ಪಾತ್ರಗಳನ್ನು ಆವಾಹಿಸಿಕೊಂಡ ಚಿಟ್ಟಿ, ತನ್ಮೂಲಕ ಮನುಷ್ಯ ಜಗತ್ತಿಗೆ ಹೃದಯಸ್ಪರ್ಶಿಸಂದೇಶವೊಂದನ್ನು ನೀಡುತ್ತಾನೆ. ಪ್ರೀತಿಗಾಗಿ ಹಪಹಪಿಸುವ ಯಂತ್ರವೊಂದು, ಅಂತಿಮವಾಗಿ ಅದನ್ನು ದಕ್ಕಿಸುವುದಕ್ಕಾಗಿ ಮನುಷ್ಯನ ಮೂಲಕವೇ ವಿಲನ್ ಆಗಿ ಪರಿವರ್ತನೆ ಹೊಂದುತ್ತದೆ. ಪ್ರೀತಿಗಾಗಿ ಮನುಷ್ಯನ ಜೊತೆಗೆ ಸ್ಪರ್ಧೆಗೆ ನಿಂತು ವಿಫಲವಾಗುತ್ತದೆ. ಅಂತಿಮವಾಗಿ, ತನ್ನನ್ನು ತಾನೇ ನ್ಯಾಯಾಲಯದಲ್ಲಿ ಕೊಂದುಕೊಳ್ಳುತ್ತದೆ. ಹಣ, ಸಾಹಸ ಮತ್ತು ಹೃದಯಸ್ಪರ್ಶಿ ಕತೆ. ಇದನ್ನು ಬೆಸೆದ ಸೂಪರ್‌ಸ್ಟಾರ್ ರಜನೀಕಾಂತ್. ರೋಬೊಟ್‌ನ್ನು ಮೆಚ್ಚಲು ಇದಕ್ಕಿಂತ ಹೆಚ್ಚೇನು ಬೇಕು?

ಶಾರುಕ್‌ಖಾನ್ ಮಾಡಿದ ಮೊದಲ ತಪ್ಪು, ರಜನೀಕಾಂತ್ ಅವರ ರೋಬೊಟ್ ಜೊತೆಗೆ ‘ರಾ-ವನ್’ನ್ನು ಸ್ಪರ್ಧೆಗಿಳಿಸಿದ್ದು. ಇದು ಎರಡು ಸೂಪರ್ ಸ್ಟಾರ್‌ಗಳ, ಸೂಪರ್ ಪವರ್‌ಗಳ ಜಂಗೀಕುಸ್ತಿಯಾಗಿ ಮಾರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ರಾ-ವನ್ ಮೂಲಕ ಜನರು ಭಾರೀ ದೊಡ್ಡದನ್ನೇ ನಿರೀಕ್ಷಿಸಿದರು. ಅಂದರೆ ರೋಬೋಟ್‌ಗಿಂತಲ್ಲೂ ಸಮರ್ಥನಾದ ಸೂಪರ್‌ಮ್ಯಾನ್‌ನ ನಿರೀಕ್ಷೆಯಲ್ಲಿದ್ದರು. ಆದರೆ ಗೋಮಟನ ನಿರೀಕ್ಷೆಯಲ್ಲಿರುವ ಜನರ ಕೈಗೆ ವೀಡಿಯೋ ಗೇಮೊಂದರ ವಿಸಿಡಿಯನ್ನು ನೀಡಿ ಕೈತೊಳೆದುಕೊಂಡಿದ್ದಾರೆ ಶಾರುಕ್. ಕತೆಯಲ್ಲಾಗಲಿ, ಪಾತ್ರಗಳಲ್ಲಾಗಲಿ ಜೀವಂತಿಕೆಯಿಲ್ಲ. ಒಂದು ವಾಕ್ಯದಲ್ಲಿ ಹೇಳಿ ಮುಗಿಸಬಹುದಾದ ಕತೆ. ನಾಯಕ, ಖಳನಾಯಕ. ಇವರ ಮಧ್ಯೆ ಒಂದು ಮಗು. ರಾ-ವನ್ ಅರ್ಥಾತ್ ರಾವಣ್ ಎಂಬ ಖಳನಾಯಕನಿಂದ ಈ ಮಗುವನ್ನು ರಕ್ಷಿಸುವ ಸೂಪರ್ ಪವರ್ ಉಳ್ಳ ಜಿ-ವನ್ ಅರ್ಥಾತ್ ಜೀವನ್.
ಶೇಖರ್ ಸುಬ್ರಹ್ಮಣ್ಯನ್ (ಶಾರುಕ್‌ಖಾನ್) ತನ್ನ ಮಗ ಪ್ರತೀಕ್‌ನಿಗಾಗಿಯೇ ಒಂದು ವಿಶೇಷ ವೀಡಿಯೋ ಗೇಮ್‌ನ್ನು ಮಾಡುವುದಕ್ಕೆ ಹೊರಡುತ್ತಾನೆ. ಮಗನಿಗೆ ನಾಯಕನಿಗಿಂತ ಖಳನಾಯಕನ ಮೇಲೆಯೇ ಇಷ್ಟ. ಆದುದರಿಂದ ಸೂಪರ್ ಪವರ್ ಉಳ್ಳ ಖಳನಾಯಕ ‘ರಾ-ವನ್’ನ್ನು ಸಿದ್ಧಪಡಿಸಲು ಮುಂದಾಗುತ್ತಾನೆ. ಜೊತೆಗೆ ಅವನನ್ನು ಎದುರಿಸಲು ಜಿ-ವನ್‌ನ್ನು ಕೂಡ. ಆದರೆ ರಾ-ವನ್ ಶೇಖರ್‌ನ ಕೈ ಮೀರುತ್ತದೆ. ಅದರ ಬಿಡುಗಡೆಯ ಸಮಾರಂಭದ ವೇಳೆ, ಬಾಲಕ ಪ್ರತೀಕ್ ರಾ-ವನ್ ಜೊತೆ ಆಡುವುದಕ್ಕೆ ಮುಂದಾಗುತ್ತಾನೆ. ಒಂದು ಹಂತದಲ್ಲಿ ಪ್ರತೀಕ್ ಆಟವನ್ನು ನಿಲ್ಲಿಸ ಬಯಸಿದರೂ ರಾ-ವನ್ ಆಟವನ್ನು ನಿಲ್ಲಿಸುವುದಕ್ಕೆ ಒಪ್ಪುವುದಿಲ್ಲ. ಅದು ಪ್ರತೀಕ್‌ನನ್ನು ಕೊಲ್ಲುವುದಕ್ಕೆ ನಿರ್ಧರಿಸುತ್ತದೆ. ಅಂದರೆ ಆಟದಿಂದ ಹೊರಗೆ ಪ್ರತೀಕ್‌ನನ್ನು ಹುಡುಕಿಕೊಂಡು ಬರುತ್ತದೆ. ಈ ಹಂತದಲ್ಲಿ ಪ್ರತೀಕ್‌ನ ತಂದೆ ಶೇಖರ್‌ಸುಬ್ರಹ್ಮಣ್ಯನನ್ನು ಕೊಂದು ಹಾಕುತ್ತದೆ. ಅಂತಿಮವಾಗಿ ರಾ-ವನ್ ವಿರುದ್ಧ ಜಿ-ವನ್‌ನನ್ನು ಸಿದ್ಧಪಡಿಸಬೇಕಾಗುತ್ತದೆ. ಜೀ-ವನ್ ಪ್ರತೀಕ್‌ನನ್ನು ರಕ್ಷಿಸಲು ಗೇಮ್ಸ್‌ನಿಂದ ಹೊರ ಬರುತ್ತಾನೆ. ಉಳಿದಂತೆ ಒಳಿತು-ಕೆಡುಕುಗಳ ನಡುವೆ ತಿಕ್ಕಾಟ. ಅಂತಿಮವಾಗಿ ಜಿ-ವನ್ ರಾವಣ್‌ನನ್ನು ಕೊಲ್ಲಲೇ ಬೇಕಲ್ಲ?

ದೃಶ್ಯ, ದೃಶ್ಯಗಳಲ್ಲೂ ವಿಶೇಷವನ್ನು ಅರಸಿಹೋದ ಪ್ರೇಕ್ಷಕರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ. ಯಾಕೆಂದರೆ, ರಾ-ವನ್ ಆಗಲಿ, ಜೀ-ವನ್ ಆಗಲಿ ಎಲ್ಲೂ ರಜನೀಕಾಂತ್ ಅವರ ರೋಬೊಟ್ ಚಿಟ್ಟಿಯನ್ನು ಸರಿಗಟ್ಟುವುದಿಲ್ಲ. ಎಂದಿರನ್‌ನ ಅರ್ಧಕ್ಕೂ ಬರುವುದಿಲ್ಲ ಶಾರುಕ್ ಅವರ ‘ರಾ-ವನ್’. ಇಲ್ಲಿ ಪಾತ್ರಗಳಿಗೆ ಬೆಳೆಯುವುದಕ್ಕೆ ಅವಕಾಶವೇ ಇಲ್ಲ. ಈ ಕಾರಣದಿಂದಲೇ ಇಡೀ ಚಿತ್ರ ವೀಡಿಯೋ ಗೇಮ್ ಮಟ್ಟಕ್ಕಿಂತ ಮೇಲೇರುವುದಿಲ್ಲ. ಕರೀನಾ ಕಪೂರ್, ಶಾರುಕ್ ಖಾನ್ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ನೀಡಿದ್ದಾರೆ ಎನ್ನುವುದನ್ನಷ್ಟೇ ಹೇಳಬಹುದು.

ಸಾಹಸ ದೃಶ್ಯಗಳ ಮೂಲಕವಾದರೂ ಗಮನ ಸೆಳೆಯುತ್ತದೆಯೋ ಎಂದರೆ ಅದೂ ಇಲ್ಲ. ಕ್ಲೈಮಾಕ್ಸ್ ರೈಲಿನ ಸಾಹಸ ದೃಶ್ಯ, ಛತ್ರಪತಿ ಟರ್ಮಿನಸ್ ಕುಸಿಯುವ ದೃಶ್ಯ ಒಂದಿಷ್ಟು ಪರಿಣಾಮಕಾರಿಯಾಗಿದೆ. ಅನುಭವ್ ಸಿನ್ಹಾ ಅವರಂತಹ ಅನನುಭವಿ ನಿರ್ದೇಶಕನ ಕೈಯಲ್ಲಿ ವಿಶೇಷ ಸ್ಕೋಪ್ ಇಲ್ಲದ ಕತೆಯೊಂದನ್ನು ಕೊಟ್ಟರೆ ಏನಾಗಬೇಕೇ ಅದೇ ಆಗಿದೆ. ರಾ-ವನ್ ಈ ದೀಪಾವಳಿಗೆ ಶಾರುಕ್ ಹಾರಿಸಿ ಬಿಟ್ಟ ಠುಸ್ ಪಟಾಕಿ.

Wednesday, October 26, 2011

ಸಂಜೆಯ ಹೆಗಲಲ್ಲಿ ಹೆಣ

ಕವಿತೆಯನ್ನು ತುಂಬಾ ಅಂದರೆ ತುಂಬಾ ಹಿಂದೆ ಬರೆದಿದ್ದೆ. ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು.

ನಿನ್ನೆ ಕತ್ತಲ ಶಿಲುಬೆಯಲ್ಲಿ
ತೂಗುತ್ತಿದ್ದವರು ಇದೀಗ
ರಕ್ತ ಸಿಕ್ತ ಮೂಡಣದಿಂದ
ಎದ್ದು ಬಂದರು!

ಉಂಡ ಎಲೆಯಿಂದ ಬೇರ್ಪಡುವಂತೆ
ಅವರು ಪರಸ್ಪರ ಕಳಚಿಕೊಂಡರು
ಅವನ ಮುಷ್ಟಿಯಿಂದ
ಮೊಲೆಯನ್ನು ಬಿಡಿಸಿಕೊಂಡ ಅವಳು
ಕಳಚಿಟ್ಟ ಇಸ್ತ್ರಿ ಪೆಟ್ಟಿಗೆ ತುಂಬಾ
ಮತ್ತೆ ಸುರಿವಳು ಕೆಂಡ

ಅಡುಗೆ ಮನೆಯಲ್ಲಿ
ಟಿಫಿನ್‌ಬಾಕ್ಸ್‌ಗಳು ಬಾಯಿತೆರೆದು
ಪಿಸುಗುಟ್ಟತೊಡಗಿದವು...
ಅತ್ತಿಂದಿತ್ತ ಚಲಿಸತೊಡಗಿದವು
ಮಹಾಸಾಗರದ ದಿಕ್ಸೂಚಿಯಂತೆ
ಗಡಿಯಾರ ಮುಳ್ಳುಗಳು!

ಬಿದ್ದ ವೌನದ ಬೀಗಕ್ಕೆ
ಇಬ್ಬರಲ್ಲೂ ನಕಲಿ ಕೀಗಳು

ಫ್ರಿಜ್ಜಿನಲ್ಲಿಟ್ಟ ತರಕಾರಿಯಂತೆ
ಅಕ್ಕಪಕ್ಕ ಕುಳಿತ ಕಣ್ಣುಗಳು
ಚಲಿಸುತ್ತಿರುವುದಾದರೂ ಏನು?
ಬದುಕೋ, ರೈಲಿನ ಚಕ್ರವೋ,
ಬಂಡಿಯೋ, ಹಳಿಯೋ...
ತಿಳಿದುಕೊಳ್ಳಲಾರದವರಂತೆ
ಈ ನಿಲ್ದಾಣದಲ್ಲಿ ಅವಳು
ಮತ್ತು ಅಲ್ಲಿ ಅವನು...

ಅದೋ ಕುದುರೆಯ ಖುರಪುಟ ಸದ್ದು
ಧಾವಿಸಿ ಬರುವ ಸಂಜೆ
ಹೆಗಲಲ್ಲಿ ಹೆಣ
ನಿಮ್ಮ ನಿಮ್ಮ ಕತೆಗಳು ಜೋಪಾನ
ಮುರಿಯಲಿ ವಿಕ್ರಮಾದಿತ್ಯನ ವೌನ
ಸಾಗುತಿರಲಿ ಹೀಗೆ ಪಯಣ....

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

Wednesday, October 19, 2011

ನಿಧಿ ಮತ್ತು ಇತರ ಕತೆಗಳು

ಅವಮಾನ
ಬಡವನೊಬ್ಬ ರಾಷ್ಟ್ರಧ್ವವನ್ನು ಲಂಗೋಟಿಯಾಗಿ ಬಳಸಿಕೊಂಡಿದ್ದ.
ಅದನ್ನು ಕಂಡ ದೇಶಭಕ್ತರು ಅವನ ಮೇಲೆ ಮುಗಿಬಿದ್ದರು.
‘‘ರಾಷ್ಟ್ರ ಧ್ವಜವನ್ನು ಲಂಗೋಟಿಯಾಗಿ ಧರಿಸಿದ್ದೀಯಲ್ಲ, ಭಾರತ ಮಾತೆಗೆ ಅವಮಾನ’’ ಅಬ್ಬರಿಸಿದರು.
ಬಡವ ತಣ್ಣಗೆ ಹೇಳಿದ ‘‘ನಾನು ಬೆತ್ತಲೆಯಾಗಿ ತಿರುಗಾಡುವುದರಿಂದ ನಿಮ್ಮ ಭಾರತಮಾತೆಗೆ ಅವಮಾನವಾಗುವುದಿಲ್ಲವೆಂದಾದರೆ, ನಾನು ಬಟ್ಟೆಯಿಲ್ಲದೆ ಓಡಾಡುವುದಕ್ಕೆ ಸಿದ್ಧ’’

ಕಾರಣ
‘‘ವಿಶ್ವ ಇಷ್ಟು ಶ್ರೀಮಂತವಾಗಿದೆ. ಆದರೂ ಈ ವಿಶ್ವದಲ್ಲಿ ಯಾಕೆ ಇಷ್ಟು ಬಡವರಿದ್ದಾರೆ?’’ ಶಿಷ್ಯ ಕೇಳಿದ.
‘‘ಯಾಕೆಂದರೆ ವಿಶ್ವವನ್ನು ದೇವರು ಸೃಷ್ಟಿಸಿದ್ದಾನೆ. ಬಡವನನ್ನು ಮನುಷ್ಯ ಸೃಷ್ಟಿಸಿದ್ದಾನೆ’’ ಸಂತ ಉತ್ತರಿಸಿದ.

ಭಂಗ
ಮಧ್ಯಾಹ್ನದ ಹೊತ್ತು.
ಗದ್ದೆಯಲ್ಲಿ ಕೆಲಸ ಮಾಡಿ ಬಂದಿದ್ದ ಸಂತ ತುಂಬಾ ಹಸಿದಿದ್ದ.
ಅಡುಗೆಯನ್ನು ಬಡಿಸಿದ್ದೇ, ಸಂತ ಉಣ್ಣುವುದರಲ್ಲಿ ತಲ್ಲೀನನಾದ.
ಅಷ್ಟರಲ್ಲಿ ಅವನ ತಲ್ಲೀನತೆಯನ್ನು ಶಿಷ್ಯನೊಬ್ಬ ಭಂಗ ಮಾಡಿದ
‘‘ಗುರುಗಳೇ...ಅಧ್ಯಾತ್ಮ ಎಂದರೆ ಏನು?’’
ಊಟ ಮಾಡುತ್ತಿದ್ದ ಸಂತ ಒಂದು ಕ್ಷಣ ಶಿಷ್ಯನನ್ನು ನೋಡಿದವನೇ ಹೇಳಿದ ‘‘ಅಧ್ಯಾತ್ಮವೆಂದರೆ, ಉಣ್ಣುತ್ತಿರುವಾಗ ಊಟದಲ್ಲಿ ಸಿಗುವ ಕಲ್ಲು’’

ಮಗು
ಅವನು ಸಂತನ ಬಳಿ ಬಂದು ನುಡಿದ
‘‘ಗುರುಗಳೇ, ನನ್ನ ಮಗನನ್ನು ಹೇಗೆ ಬೆಳೆಸಬೇಕೆಂದೇ ನನಗೆ ತಿಳಿಯುತ್ತಿಲ್ಲ. ನಾನು ಹೇಳಿದ ಹಾಗೆ ಅವನು ಕೇಳುತ್ತಿಲ್ಲ’’
ಸಂತ ನಕ್ಕು ನುಡಿದ ‘‘ಮಗುವನ್ನು ನಾನು ಬೆಳೆಸುತ್ತಿದ್ದೇನೆ ಎಂಬ ದುರಹಂಕಾರ ಬಿಡು. ಮಗು ಹುಟ್ಟಿರುವುದು ನಿನ್ನನ್ನು ಬೆಳೆಸುವುದಕ್ಕೆ. ಮೊದಲು ಮಗುವಿನ ಮೂಲಕ ನೀನು ಬೆಳೆ’’

ಭಯ
‘‘ನಾನು ಅತಿ ಹೆದರುವುದು ಸ್ವಾತಂತ್ರಕ್ಕೆ’’
‘‘ಯಾಕೆ?’’
‘‘ಯಾಕೆಂದರೆ ಸ್ವಾತಂತ್ರ ನನ್ನ ಆಲೋಚನೆ, ಕೃತ್ಯಗಳಿಗೆ ನನ್ನನ್ನೇ ಹೊಣೆ ಮಾಡುತ್ತದೆ. ಪಾರತಂತ್ರದಲ್ಲಿ ಇನ್ನೊಬ್ಬರ ಮೇಲೆ ಹೊಣೆ ಹಾಕಿ ನಾವು ‘ಸ್ವತಂತ್ರ’ವಾಗಿರುವ ಅವಕಾಶವಿರುತ್ತದೆ’’

ಜೈಲು
ಅಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿತ್ತು.
‘ಜೈಲು’ ಇದರ ಬಗ್ಗೆ ಎರಡು ವಾಕ್ಯಗಳಲ್ಲಿ ಬರೆಯಿರಿ ಎಂಬ ಪ್ರಶ್ನೆಯಿತ್ತು.
‘‘ನಾನೀಗ ಅದರೊಳಗೇ ಕುಳಿತು ಪರೀಕ್ಷೆ ಬರೆಯುತ್ತಿದ್ದೇನೆ’’ ವಿದ್ಯಾರ್ಥಿನಿ ಒಂದು ವಾಕ್ಯದಲ್ಲಿ ಉತ್ತರ ಪೂರ್ತಿಗೊಳಿಸಿದಳು.

ಅತ್ಯುತ್ತಮ
ಇಬ್ಬರು ತಪಸ್ಸು ಮಾಡುತ್ತಿದ್ದರು. ಅವರ ಜೊತೆಗೆ ಒಬ್ಬ ಕಳ್ಳನೂ ಸೇರಿ ತಪಸ್ಸು ಮಾಡತೊಡಗಿದ.
ಹಲವು ಸಮಯದ ಬಳಿಕ ದೇವರು ಪ್ರತ್ಯಕ್ಷನಾದ.
ಮೊದಲನೆಯವನ ಬಳಿ ದೇವರು ಕೇಳಿದ ‘‘ನಿನಗೇನು ಬೇಕು?’’

ಆತನು ‘‘ನನಗೆ ಜ್ಞಾನ ಬೇಕು’’ ಎಂದ.
ಎರಡನೆಯ ಭಕ್ತ ‘‘ನನಗೆ ಚಿನ್ನ, ಹಣ, ಸಂಪತ್ತು ಬೇಕು’’ ಎಂದ.
ಮೂರನೆಯ ಕಳ್ಳನ ಬಳಿ ದೇವರು ‘‘ನಿನಗೇನು ಬೇಕು?’’ ಎಂದು ಕೇಳಿದ.
‘‘ದೇವರೇ ನನಗೆ ಎರಡನೆಯವನ ಮನೆಯ ವಿಳಾಸ ಬೇಕು’’ ಕಳ್ಳ ನುಡಿದ.
ಈ ಕತೆಯನ್ನು ಮುಗಿಸಿದ ಸಂತ ಶಿಷ್ಯರ ಬಳಿ ಕೇಳಿದ ‘‘ಈ ಮೂವರು ಭಕ್ತರಲ್ಲಿ ಅತ್ಯುತ್ತಮನು ಯಾರು?’’
ಎಲ್ಲ ಶಿಷ್ಯರು ಒಕ್ಕೊರಲಲ್ಲಿ ಹೇಳಿದರು ‘‘ಜ್ಡಾನವನ್ನು ಕೇಳಿದ ಮೊದಲನೆಯವನು’’
ಸಂತ ಅದನ್ನು ಅಲ್ಲಗಳೆದ ‘‘ನಿಜಕ್ಕೂ ಮೂರನೆಯವನಾದ ಕಳ್ಳನೇ ಅತ್ಯುತ್ತಮನು. ಅವನು ತನ್ನ ಶ್ರಮದ ಮೇಲೆ ನಂಬಿಕೆಯಿಟ್ಟಿದ್ದಾನೆ’’

ನಿಧಿ
ಸಂತನ ಶಿಷ್ಯರು ಗದ್ದೆಯಲ್ಲಿ ಕೆಲಸ ಮಾಡುವಾಗ ಅವರಿಗೆ ನಿಧಿ ಸಿಕ್ಕಿತು. ಓಡಿ ಸಂತನಿಗೆ ವಿಷಯ ತಿಳಿಸಿದರು. ಸಂತ ಅದನ್ನು ಹೊರ ತೆಗೆಯಲು ಹೇಳಿದ. ಬಳಿಕ ಊರ ಜನರಿಗೆ ಹಂಚಿ ಬಿಟ್ಟ.
ಶಿಷ್ಯರು ಕೇಳಿದರು ‘‘ಆಶ್ರಮದ ಗದ್ದೆಯಲ್ಲಿ ಸಿಕ್ಕಿದ ನಿಧಿ. ಆಶ್ರಮದ ಕೆಲಸಕ್ಕೆ ಬಳಸುವುದಕ್ಕಾಗುತ್ತಿರಲಿಲ್ಲವೆ?’’
‘‘ಗದ್ದೆಯಲ್ಲಿ ನಿಧಿಗಳು ಭತ್ತ, ರಾಗಿಯ ತೆನೆಗಳಲ್ಲಿ ಬಚ್ಚಿಟ್ಟುಕೊಂಡಿರುತ್ತವೆ. ನಮಗೆ ಸಿಕ್ಕಿರುವುದು ಜಿಪುಣನೊಬ್ಬ ಜೋಪಾನವಾಗಿ ಬಚ್ಚಿಟ್ಟ ತನ್ನ ದಾರಿ
ದ್ರ್ಯ’’

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

Saturday, October 15, 2011

ಸ್ನೇಹ ಮತ್ತು ಇತರ ಕತೆಗಳು


ಬಿಂದು
ನನ್ನ ಮುಂದಿದ್ದ ಖಾಲಿ ಕಾಗದದ ಮೇಲೆ ಪೆನ್ನಿಂದ ಒಂದು ಬಿಂದುವನ್ನಿಟ್ಟೆ.
ಆಲದ ಬೀಜದಂತಿರುವ ಒಂದು ಬಿಂದು.
ಆ ಬಿಂದುವಿನ ಗರ್ಭದೊಳಗಿಂದ ಹೊರಬರುವ ಜೀವಕ್ಕಾಗಿ ಕಾಯುತ್ತಿದ್ದೇನೆ.

ದಾರಿ
ದೊಡ್ಡ ನಗರದಲ್ಲಿ ಸಂತ ಮತ್ತು ಶಿಷ್ಯ ದಾರಿ ತಪ್ಪಿದರು.
ತಮ್ಮ ಆಶ್ರಮದೆಡೆಗೆ ದಾರಿ ಹುಡುಕುತ್ತಾ ಗಲ್ಲಿ ಗಲ್ಲಿ ಅಲೆದರು.
ಕೊನೆಗೆ ಒಂದು ಕಟ್ಟಡದ ಕೆಳಗೆ ಸುಸ್ತಾಗಿ ಬಿದ್ದುಕೊಂಡರು.
ಶಿಷ್ಯ ಕೇಳಿದ ‘‘ಗುರುಗಳೇ, ಯಾರಲ್ಲಾದರೂ ದಾರಿ ಕೇಳೋಣವೆ?’’
ಸಂತ ಹೇಳಿದ ‘‘ನಮ್ಮ ಆಶ್ರಮದ ದಾರಿಯನ್ನು ಇನ್ನೊಬ್ಬರಲ್ಲಿ ಕೇಳುವುದು ನಾಚಿಕೆಗೇಡು. ಮೊದಲು ನಮ್ಮನ್ನು ದಾರಿ ತಪ್ಪಿಸಿದ ನಗರದ ಮೋಹದಿಂದ ಬಿಡಿಸಿಕೊಳ್ಳೋಣ. ದಾರಿ ತನ್ನಷ್ಟಕ್ಕೆ ತೆರೆದುಕೊಳ್ಳುತ್ತದೆ’’

ಗಾಜು
ಅವನಿಗೆ ಸಿಟ್ಟು ಬಂತು.
ಸಿಟ್ಟಿನಿಂದ ತನ್ನ ಕೈಯಲ್ಲಿದ್ದ ಗಾಜಿನ ಲೋಟವನ್ನು ನೆಲಕ್ಕಪ್ಪಳಿಸಿದ.
ಲೋಟ ಚೂರು ಚೂರಾಯಿತು.
ತುಸು ಹೊತ್ತಲ್ಲಿ ಆತ ಸಮಾಧಾನಗೊಂಡ. ಶಾಂತನಾದ.
ಆದರೆ ಚೂರಾದ ಲೋಟ ಒಂದಾಗಲಿಲ್ಲ.

ಕಲ್ಲು
ಕಾರ್ಮಿಕನೊಬ್ಬ ಹೊತ್ತು ತಂದ ಅತಿ ಭಾರವಾದ, ದೊಡ್ಡ ಕಲ್ಲು.
ಶಿಲ್ಪಿಗಳ ಕೈಯಲ್ಲಿ ದೇವರಾಯಿತು.
ದೇವಾಲಯ ಸೇರಿತು.
ಒಂದು ದಿನ ಕಾರ್ಮಿಕನಿಗೆ ತಾನು ಹೊತ್ತು ತಂದ ಆ ಕಲ್ಲನ್ನು ನೋಡಬೇಕೆಂದು ಮನಸ್ಸಾಯಿತು.
ದೇವಾಲಯಕ್ಕೆ ಬಂದ.
‘‘ನೀನು ಕೆಳ ಜಾತಿ. ಮುಟ್ಟಬಾರದು. ದೇವರು ಅಪವಿತ್ರವಾಗುತ್ತಾನೆ’’ ಅರ್ಚಕರು ನುಡಿದರು.
ಅದು ತಾನು ತಂದ ‘ಕಲ್ಲು’ ಎನ್ನುವುದು ಅವನಿಗೆ ಮನವರಿಕೆಯಾಯಿತು.

ಸಹಾಯ
ಒಂದು ಹುಲಿ.
ವಯಸ್ಸಾಗಿತ್ತು. ಅದಕ್ಕೆ ನಡೆದಾಡಲೂ ಸಾಧ್ಯವಾಗುತ್ತಿರಲಿಲ್ಲ.
ಆದುದರಿಂದ ಬೇಟೆ ಕಷ್ಟವಾಯಿತು. ಹಸಿವಿನಿಂದ ಕಂಗಾಲಾಗಿತ್ತು.
ಒಂದು ದಿನ ಅದರ ಮುಂದೆ ಎರಡು ಜಿಂಕೆಗಳು ಬಂದು ನಿಂತವು.
ಹುಲಿಯನ್ನು ಕಂಡು ಒಂದು ಜಿಂಕೆಗೆ ದುಃಖವಾಯಿತು. ಸಹಾಯ ಮಾಡಬೇಕು ಅನ್ನಿಸಿತು.
‘‘ನಾನೇನಾದರೂ ಸಹಾಯ ಮಾಡಲಾ?’’ ಜಿಂಕೆ ಕೇಳಿತು.
ಇನ್ನೊಂದು ಜಿಂಕೆ ಕೇಳಿತು ‘‘ಅದರ ಒಂದು ಹೊತ್ತಿನ ಆಹಾರವಾಗುವುದಕ್ಕೆ ನಿನಗೆ ಸಾಧ್ಯವಿದೆಯೆ?’’
ಮೊದಲ ಜಿಂಕೆ ಭಯದಿಂದ ‘‘ಇಲ್ಲ, ಇಲ್ಲ’’ ಎಂದಿತು.
‘‘ಹಾಗಾದರೆ ಬಾಯಿ ಮುಚ್ಚಿ ಸುಮ್ಮನಿರು. ಹುಲಿಗೆ ಜಿಂಕೆಗಳು ಸಹಾಯವಾಗುವುದು ಆಹಾರದ ಮೂಲಕ ಮಾತ್ರ. ನಡಿ, ಇಲ್ಲಿಂದ ಮೊದಲು ಹೋಗೋಣ’’

ಸ್ನೇಹ
‘‘ಗುರುಗಳೇ, ನನ್ನ ಪ್ರಾಣ ಮಿತ್ರ ಆಂತರಿಕವಾಗಿ ದುಷ್ಟನೆನ್ನುವುದು ತಿಳಿದು ಹೋಗಿದೆ. ನಾನವನ ಸ್ನೇಹವನ್ನು ಬಿಡಲೆ?’’
‘‘ದುಷ್ಟನಾಗಿದ್ದೂ ಅವನು ನಿನ್ನ ಸ್ನೇಹ ಮಾಡಿದ್ದಾನೆಂದರೆ ನಿನ್ನಲ್ಲೇನೋ ದುಷ್ಟತನವಿದೆ. ಮೊದಲು ಅದನ್ನು ಬಿಡು. ಆಗ ನಿನ್ನ ಸ್ನೇಹವನ್ನು ಅವನು ತಾನಾಗಿಯೇ ಬಿಡುತ್ತಾನೆ’’ ಸಂತ ತಣ್ಣಗೆ ಹೇಳಿದ.

ಹುಚ್ಚು
ನಗರದಲ್ಲಿ ಅಂದು ಬಂದ್ ಘೋಷಿಸಲಾಗಿತ್ತು.
ಅಲ್ಲಲ್ಲಿ ಪೊಲೀಸ್ ಪಹರೆ.
ಹುಚ್ಚನೊಬ್ಬ ಆ ದಾರಿಯಲ್ಲಿ ಯಾವ ಭಯವೂ ಇಲ್ಲದೆ ನಡೆದು ಹೋಗುತ್ತಿದ್ದ.
ಆತನಿಗೆ ಇನ್ನೊಬ್ಬ ಹುಚ್ಚ ಎದುರಾದ.
ಆತ ಕೇಳಿದ ‘ಇಂದೇಕೆ ಬೀದಿ ನಿರ್ಜನವಾಗಿದೆ. ಜನರೇಕೆ ನಮ್ಮ ಕಡೆಗೆ ಕಲ್ಲು ತೂರುತ್ತಿಲ್ಲ. ನಮ್ಮನ್ನು ನೋಡಿ ನಗುತ್ತಿಲ್ಲ? ನಮ್ಮನ್ನು ನೋಡಿ ಓಡಿಸುವುದಕ್ಕೆ ಯಾರೂ ಬರುತ್ತಿಲ್ಲ?’’
‘‘ಇಂದು ನಗರದಲ್ಲಿ ದಂಗೆ, ಗಲಾಟೆಯಂತೆ’’
‘‘ಯಾಕೆ ಗಲಾಟೆ?’’
‘‘ಜನರಿಗೆ ಹುಚ್ಚು, ಅದಕ್ಕೆ’’

ಗ್ರಂಥ
‘‘ಆ ಬೃಹತ್ ಧರ್ಮಶಾಸ್ತ್ರ ಗ್ರಂಥವನ್ನು ತಾವು ಓದಿಲ್ಲವೆ?’’ ಆ ಪಂಡಿತ ಸಂತನಲ್ಲಿ ಕೇಳಿದ.
‘‘ಇಲ್ಲ’’ ಎಂದ ಸಂತ.
‘‘ನಾನು ಓದಿದ್ದೇನೆ’’ ಪಂಡಿತ ಎದೆಯುಬ್ಬಿಸಿ ಹೇಳಿದ.
‘‘ಇಲ್ಲ...ನಾನು ಓದಿಲ್ಲ’’ ಸಂತನೂ ಹೆಮ್ಮೆಯಿಂದ ಪುನರುಚ್ಚರಿಸಿದ.

ಕಲ್ಲುಗಳು
ಅದೊಂದು ಬಂಡೆ.
ಇನ್ನೊಂದು ಬಂಡೆಯೊಂದಿಗೆ ವಿಚಿತ್ರವೊಂದನ್ನು ಹಂಚಿಕೊಳ್ಳುತ್ತಿತ್ತು.
‘‘ನನ್ನದೇ ಕಲ್ಲಿನಿಂದ ಇಲ್ಲಿನ ಮಸೀದಿಯನ್ನು ಕಟ್ಟಲಾಯಿತು. ಪಕ್ಕದ ದೇವಸ್ಥಾನಕ್ಕೆ ನನ್ನ ಕಲ್ಲನ್ನೇ ಬಳಸಿ ದೇವರ ಮೂರ್ತಿಯನ್ನು ನಿರ್ಮಿಸಲಾಯಿತು. ನನ್ನದೇ ಕಲ್ಲುಗಳನ್ನು ಬಳಸಿ ಉಭಯ ಸ್ಥಳಗಳಿಗೂ ರಸ್ತೆಯನ್ನು ನಿರ್ಮಿಸಲಾಯಿತು.
ಇದೀಗ,

ನನ್ನವೇ ಕಲ್ಲು ಚೂರುಗಳನ್ನು ಹಿಂದೂಗಳು ಮಸೀದಿಗೂ, ಮುಸ್ಲಿಮರು ದೇವಳಕ್ಕೂ ಎಸೆಯುತ್ತಿದ್ದಾರೆ...’’

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

Monday, October 3, 2011

ಗೋಡೆಕಪಾಟು

ಮಂಗಳೂರಿನಲ್ಲಿಜನವಾಹಿನಿಆಗ ಹುಟ್ಟಿದ್ದಷ್ಟೇ. ನನ್ನನ್ನು ಕೊಡಗು ಜಿಲ್ಲೆಯವರದಿಗಾರನಾಗಿ ರವಾನಿಸಲಾಯಿತು. ಅಲ್ಲೊಂದು ಕಚೇರಿಯನ್ನು ಹುಡುಕುವುದೂ ನನ್ನ ಹೆಗಲ ಮೇಲೆಯೇ ಬಿತ್ತು. ಕೊನೆಗೂ ಮಡಿಕೇರಿಯ ಟೋಲ್ಗೇಟ್ ಸಮೀಪ ಒಂದು ಕೊಠಡಿ ಸಿಕ್ಕಿತು. ಕೊಠಡಿ ಪ್ರವೇಶಿಸಿದಾಗ ಅಲ್ಲೊಂದು ಮುಚ್ಚಿದ ಗೋಡೆ ಕಪಾಟನ್ನು ನೋಡಿದೆ. ಅದರ ಬಾಗಿಲನ್ನು ತೆರೆದಾಗ ಒಂದು ವಿಶಿಷ್ಟ ಅನುಭವವೊಂದು ನನ್ನದಾಯಿತು. ಸುಮಾರು ಎರಡು ವರ್ಷಗಳ ಬಳಿಕ ಅನುಭವ ಕವಿತೆಯ ರೂಪ ಪಡೆಯಿತು. ಬಾಲಸುಬ್ರಹ್ಮಣ್ಯ ಕಂಜರ್ಪಣೆ ಮತ್ತು ಪಟ್ಟಾಭಿರಾಮ ಸೋಮಯಾಜಿಯವರ ಜೊತೆಗೆ ಟೀ ಕುಡಿಯುತ್ತಾ ಅದೇ ಕಚೇರಿಯಲ್ಲಿ ಕವಿತೆಯನ್ನು ಅವರ ಮುಂದಿಟ್ಟೆ. ಅವರೂ ಇಷ್ಟಪಟ್ಟರು. ಬಳಿಕ ಕವಿತೆಗೆ ಕತೆಯ ರೂಪಕೊಟ್ಟು, ‘ಗೋಡೆಕಪಾಟುಎಂಬ ಹೆಸರಿಟ್ಟು ನನ್ನಬಾಳೆಗಿಡ ಗೊನೆ ಹಾಕಿತುಸಂಕಲನದಲ್ಲಿ ಪ್ರಕಟಿಸಿದೆ. ಎಸ. ದಿವಾಕರ್ ಸಂಪಾದಕತ್ವದ ಕನ್ನಡದ ಶತಮಾನದ ಅತಿ ಸಣ್ಣ ಕತೆಗಳು ಸಂಕಲನದಲ್ಲೂ ಇದು ಪ್ರಕಟವಾಗಿದೆ.
ಮುಂದೆ ಕತೆಯನ್ನು ಆಧರಿಸಿ ಯುವ ಪ್ರತಿಭಾವಂತ ಕಲಾವಿದ, ನಿರ್ದೇಶಕ ಆಸಿಫ್ ಫಾರೂಖಿ ಒಂದು ಸಣ್ಣ ಟೆಲಿ ಫಿಲಂ ಮಾಡಿದರು. ಒಂದಿಷ್ಟು ವಾಚ್ಯವಾಗಿತ್ತಾದರೂ, ಬಹುಶಃ ದೃಶ್ಯ ರೂಪಕ್ಕಿಳಿಸುವಾಗ ಅದು ಅನಿವಾರ್ಯ ಅನ್ನಿಸಿತು.
ಆ ಕತೆಯನ್ನು ಇಲ್ಲಿ ಸುಮ್ಮಗೆ ಹಂಚಿಕೊಂಡಿದ್ದೇನೆ.

ಬದುಕಿನ ದಾರಿಯಲ್ಲಿ ನನ್ನನ್ನು ಕೈ ಹಿಡಿದು ನಡೆಸುತ್ತಿದ್ದ ಕಥೆಗಾರನ ಮನೆಯ ವಿಳಾಸ ಹುಡುಕಿ, ಆತನ ಮನೆ ಬಾಗಿಲ ಮುಂದೆ ಎದೆ ಬಡಿತವನ್ನು ಒತ್ತಿ ಹಿಡಿದು ನಿಂತೆ. ತುಸು ಹೊತ್ತಲ್ಲಿಯಾರದು?’ ಎನ್ನುತ್ತಾ ಬಾಗಿಲ ಸೆರೆಯಿಂದ ಇಣುಕಿದ ವ್ಯಕ್ತಿ ಉತ್ತರಕ್ಕಾಗಿ ಕಾಯತೊಡಗಿತು.
ಉದ್ದಕ್ಕೆ ಆರಿದ ಗಾಯದಂತೆ..ಸೀಳು ಬಿಟ್ಟ ಬಾಗಿಲಲ್ಲಿ ಹೊಳೆಯುವ ಒಂದು ಕಣ್ಣು ನನ್ನ ಗಾಬರಿಬಿದ್ದ ಕಣ್ಣುಗಳೊಂದಿಗೆ ಮಾತನಾಡಿ ತೃಪ್ತವಾದ ಬಳಿಕ ಬಾಗಿಲು ಪೂರ್ಣವಾಗಿ ತೆರೆದುಕೊಂಡವು.
ಬನ್ನಿಎಂದು ಅರೆ ನರೆತ ಗಡ್ಡ, ಬತ್ತಿದ ಮುಖದ ವ್ಯಕ್ತಿಯೊಂದು ಒಳಗೆ ಕರೆಯಿತು.
ನಾ... ನಾನು ನಿಮ್ಮ ಅಭಿಮಾನಿನನ್ನ ಪರಿಚಯ ಪತ್ರವನ್ನು ಮತ್ತೆ ಕಣ್ಣಲ್ಲಿಟ್ಟು ಹೇಳಿದೆ. ಮಾತಿಗೆ ಒಮ್ಮೆಗೆ ಅಳುಕಿ ಬಿದ್ದವನಂತೆಬನ್ನಿ. ಬನ್ನಿಎಂದು ಒಳಕರೆದು, ಒಳಗೆಲ್ಲಾ ನೆಲದ ಮೇಲೆ ಬಿದ್ದ ಕಸಕಡ್ಡಿಗಳನ್ನು ನಾನು ನೋಡುನೋಡುತ್ತಿದ್ದಂತೆಯೇ ಕಾಲಿನಿಂದ ಸರಿಸತೊಡಗಿದ.
ಕುರ್ಚಿಯಲ್ಲಿ ಒಣಗಲೆಂದಿಟ್ಟ ಎರಡು ನಿಕ್ಕರುಗಳನ್ನು ಒಮ್ಮೆಲೆ ಬಾಚಿ ಮುದ್ದೆ ಮಾಡಿ ಪ್ಯಾಂಟ್ ಕಿಸೆಗೆ ತುರುಕಿಕೊಂಡ. ‘ಕೂರಿ ಕೂರಿಎನ್ನುತ್ತಲೇ ಯಾರೋ ಉಂಡು ಬಿಟ್ಟ ಬಟ್ಟಲನ್ನು ಎತ್ತಿಈಗ ಬಂದೆಎಂದು ಒಳಹೋಗಿ ಇಟ್ಟು ಬಂದ.
ಕಥೆಗಾರ ಯಾಕೋ ತಪ್ಪು ಮಾಡಿದವನಂತೆ ಸಂಕೋಚದಿಂದ ನನ್ನ ಮುಂದೆ ನಿಂತಿದ್ದ. ‘ಪರವಾಗಿಲ್ಲ ಸಾರ್, ಸುಮ್ನೆ ಬಂದೆ. ನಿಮ್ಮೆಂದಿಗೆ ಮಾತನಾಡಬೇಕೆನ್ನುವುದು ಬಹಳ ದಿನದ ಕನಸಾಗಿತ್ತುಎಂದು ಪರಿಸ್ಥಿತಿಯನ್ನು ಕೈಯೊಳಗೆ ತರುವ ವ್ಯರ್ಥ ಪ್ರಯತ್ನ ಮಾಡಿದೆ.
ಅವನು ನಿಂತೆ ಇದ್ದ. ಅಲ್ಲಿದ್ದ ಒಂದೇ ಒಂದು ಮರದ ಕುರ್ಚಿಯಲ್ಲಿ ನಾನು ಕುಳಿತಿದ್ದೆ. ಆತ ಒಳಗಿಂದ ಬೇರೆ ಕುರ್ಚಿ ತಂದುಕೂರಬಹುದೆಂದು ನಾನು ತಿಳಿದಿದ್ದೆ. ಆದರೆ ಆತ ಪ್ರಯತ್ನ ಮಾಡಲೇ ಇಲ್ಲ. ನಾನು ಒಮ್ಮೆಲೆ ನಿಂತುಸಾರ್, ನೀವು ಕೂರಿಎಂದೆ. ‘ಬೇಡ, ಬೇಡ. ಅಪರೂಪ ಬಂದಿದ್ದೀರಿ. ನೀವೇ ಕೂರಿಎಂದ. ಆಮೇಲೆ ಒಳ ಹೋಗಿ ಚಾಪೆ ತಂದು ಹಾಸಿದ. ಅಲ್ಲಿ ಅವನು ಕೂರುವ ಮುನ್ನವೇ ನಾನು ಕೂತೆ. ಆತ ಕುರ್ಚಿಯಲ್ಲೂ, ನಾನು ಚಾಪೆಯಲ್ಲೂ ಕೂತ ಕ್ಷಣದಿಂದ ವಾತಾವರಣ ಹದಕ್ಕೆ ಬಂತು ಅನ್ನಿಸಿಹೇಗಿದ್ದೀರಿ ಸಾರ್?’ ಕೇಳಿದೆ. ಮತ್ತೆ ದಿಗಿಲುಗೊಂಡುಚೆ..ಚೆನ್ನಾಗಿದ್ದೇನೆಎಂದ. ‘ಏನಾದರೂ ಕುಡೀತೀರಾ?’ಎಂದು ಆತ ಕೇಳದಿದ್ದುದಕ್ಕೆ ನನಗೇನು ಅನ್ನಿಸಲಿಲ್ಲ. ತೀರಾ ಆತ್ಮೀಯನಂತೆಸಾರ್, ಕುಡಿಯುವುದಕ್ಕೆ ನೀರು ಬೇಕಾಗಿತ್ತುಎಂದೆ. ಕಥೆಗಾರ ದಡಬಡಿಸಿ ಎದ್ದು ಒಳನಡೆದ. ಹಲವು ಕ್ಷಣಗಳು ಕಳೆದರೂ ಹೊರ ಬರಲಿಲ್ಲ.
ನಾನು ಬಣ್ಣ ಮಾಸಿದ ಗೋಡೆಯಗಲಕ್ಕೂ ಕಣ್ಣಾಯಿಸಿದೆ. ಯಾವುದೋ ಅವ್ಯಕ್ತ ಪಾತ್ರವೊಂದನ್ನು ಕಥೆಗಾರ ಗೋಡೆತುಂಬಾ ಸ್ವತಂತ್ರವಾಗಿರಲು ಬಿಟ್ಟಂತೆ ಗೋಡೆಯ ಬಣ್ಣ ಬಗೆ ಬಗೆಯ ಆಕಾರವಾಗಿ ಕಣ್ಣೊಳಗೆ ಇಳಿಯತೊಡಗಿತು.
ಸಾರಿಯ ಮಳೆಗಾಲ ಮುಗಿಯಲಿ ಅಂತ ಕಾಯ್ತ ಇದ್ದೇನೆ, ಗೋಡೆಗೆ ಸುಣ್ಣ ಬಳಿಯಲುಕಥೆಗಾರನ ದನಿ ಕೇಳಿ ಅತ್ತ ಹೊರಳಿದೆ. ಅವನ ಕೈಯಲ್ಲಿ ನೀರಿನ ಪಾತ್ರೆಯಿರಲಿಲ್ಲ. ಸುಮ್ಮನಾದೆ. ಆತ ಮತ್ತೆ ಕುರ್ಚಿಯಲ್ಲಿ ಕೂತ. ಆಮೇಲೆ ಏನೋ ಹೊಳೆದವನಂತೆಒಮ್ಮೆ ಪೇಪರ್ ಕೊಡ್ತೀರಾ?’ ಅಂದ. ಕೋರಿಕೆಯನ್ನು ಪ್ರಸಾದವೆಂಬಂತೆ ಸ್ವೀಕರಿಸಿ ನನ್ನ ಕೈಯಲ್ಲಿದ್ದ ದೈನಿಕವನ್ನು ನೀಡಿದೆ. ಆತ ನೇರವಾಗಿ ಅದರ ಎರಡನೇ ಪುಟವನ್ನು ಬಿಡಿಸಿದ. ಬಳಿಕ ಕಿಸೆಯೊಳಗೆ ಏನನ್ನೋ ಹುಡುಕಾಡತೊಡಗಿದ. ಶರ್ಟಿನ ಕಿಸೆಯೊಳಗಿದ್ದ ಎಲ್ಲವನ್ನು ಹೊರಗೆಳೆದ. ಆಮೇಲೆ ಕಂಪಿಸುವ ಕೈಗಳಲ್ಲಿ ಒಂದು ಚೀಟಿಯನ್ನು ಎತ್ತಿಕೊಂಡುಕರ್ನಾಟಕ ಲಾಟರಿ ಟಿಕೆಟ್ಎಂದು ನಕ್ಕ. ಲಾಟರಿ ಟಿಕೆಟ್ ಅಂಕಿಗಳನ್ನು ಪತ್ರಿಕೆಯೊಂದಿಗೆ ತಾಳೆ ನೋಡುವುದರಲ್ಲಿ ಮುಳುಗಿದ.
ಒಮ್ಮೆಲೆ ಪೆಚ್ಚಾಗಿ ಅವನನ್ನೇ ನೋಡಿದೆ. ಅವನು ಅದನ್ನು ಅನುಭವಿಸುವುದಕ್ಕೆ ಸಾಕ್ಷಿಯಾಗಿ ಅವನ ತುಟಿಯಂಚಿನಲ್ಲಿ ಜೊಲ್ಲು ಕೆಳಬಾಗಿ ತೂಗುತ್ತಿತ್ತು. ಬಳಿಕಶಿಟ್ಅಂತ ಟಿಕೆಟನ್ನು ಮುಷ್ಠಿಯೊಳಗೆ ಹಿಚುಕಿ ಎಸೆದ. ಒಮ್ಮೆಲೆ ಅರಿವಿಗೆ ಬಂದು ಜೊಲ್ಲನ್ನು ಕೈಯಿಂದ ಒರೆಸಿಕೊಂಡ. ‘ಕೆಲವೊಮ್ಮೆ ಕರ್ನಾಟಕ ಲಾಟರಿಯವರದ್ದೂ ಕೂಡ ಮೋಸವೇನೋ ಅಂತನಿಸ್ತದೆಎಂದು ಮತ್ತೇನನ್ನೋ ಗೊಣಗಿದ. ವೌನವಾದ. ಕಥೆಗಾರನ ದುಃಖ ಅರ್ಥವಾಯಿತು.
ಸಾರ್, ನಿಮ್ಮಟ್ಟಿಗೆ ಮಾತಾಡ್ಬೇಕೂಂತ ಬಂದೆಎಂದೆ.
ಹಾಂ..ಮಾ..ಮಾತಾಡಿ. ಆದ್ರೆ ಸಂಜೆ ಸ್ವಲ್ಪ ಅರ್ಜೆಂಟ್ ಕೆಲ್ಸ ಇದೆಅವನಿಗೆ ಅವನು ಪಿಸುಗುಟ್ಟಿದ.
ಏನ್ಸಾರ್ ಕೆಲ್ಸ, ಹೊಸತೇನಾದ್ರೂ ಬರೀತಾ ಇದೀರಾ?’ ಕುತೂಹಲದಿಂದ ಕೇಳಿದೆ. ‘ಹಾಗೇನಿಲ್ಲಾ...’ ಎಂದು ಹೇಳಿದವನು ಯಾವುದೋ ಅನುಮಾನದಿಂದ ತಡೆದು ಮತ್ತೆ ಮುಂದುವರಿಸಿದಸಿಟೀಲಿ ಹೊಸ ಫಿಲ್ಮ್ ಬಂದಿದೆ..ನೋಡಿದ್ರಾ?’
ಯಾವ ಫಿಲ್ಮ್ ಸಾರ್?’ ನನ್ನ ಪ್ರಶ್ನೆಗೆ ಒಮ್ಮೆಲೆ ಜೀವ ಪಡೆದ ಅವನುನಾನಾ ಪಾಟೇಕರಿದ್ದು. ನಿಮ್ಗೆತ್ತಾ? ಈಗವನು ಮತ್ತೆ ರಂಗಭೂಮಿಯತ್ತ ತಿರುಗಿದ್ದಾನಂತೆ. ಏನೇ ಆಗ್ಲಿ ಅವನಿಗೆ ಒಳ್ಳೆ ಡೈರೆಕ್ಟರ್ ಸಿಗ್ಲಿಲ್ಲ ನೋಡಿಕೊರಗು ತೋಡಿಕೊಂಡ.
ಮಾತನಾಡುತ್ತಿದ್ದವನು ಒಮ್ಮೆಲೆ ನನ್ನ ಆಕಾಶ ನೀಲಿ ಬಣ್ಣದ ಶರ್ಟನ್ನು ನೋಡುತ್ತಾಅಂಗಿ ಚೆನ್ನಾಗಿದೆ. ಬಟ್ಟೆ ಎಲ್ಲಿ ಕೊಂಡ್ಕೊಂಡ್ರಿಎನ್ನುತ್ತಾ ಬಾಗಿ ಬಟ್ಟೆಯ ಗುಣಮಟ್ಟವನ್ನು ಕೈಯಲ್ಲಿ ಉಜ್ಜಿ ನೋಡತೊಡಗಿದ. ಆಮೇಲೆ ಮಾತಿನಲ್ಲೇ ಆಸೆಯನ್ನು ತುಂಬಿಕೊಂಡುಇನ್ನೊಮ್ಮೆ ಕಡೆ ಬಂದಾಗ ನನಗೊಂದು ಜೊತೆ ಬಟ್ಟೆ ತನ್ನಿ ಆಗದ?’ ಎಂದ. ತಲೆಯಾಡಿಸಿದೆ. ಕುರ್ಚಿಗೆ ಒರಗಿದಾತ ಮತ್ತೇನನ್ನೋ ಯೋಚಿಸತೊಡಗಿದ.
ನನಗೆ ಅಳು ಬಂದಂತಾಯಿತು. ನಾನು ಹೊತ್ತು ತಂದಿದ್ದ ಮಾತಿನ ಸರಕುಗಳು ಗಿರಾಕಿಗಳಿಲ್ಲದೆ ಒಣಗತೊಡಗಿದವು. ಆದರೂ ಮೆಲ್ಲಗೆ ಚೌಕಾಶಿಗಿಳಿದೆ. ‘ನಿಮ್ಮ ಮೆಚ್ಚಿನ ಲೇಖಕ ಯಾರು ಸಾರ್?’ಬಂದ ಪ್ರಶ್ನೆಗೆ ಒಮ್ಮೆಲೆ ದಡಬಡಾಯಿಸಿ ನನ್ನನ್ನೇ ನೋಡತೊಡಗಿದ.
ನಿಮ್ಮ ಮೇಲೆ ಪ್ರಭಾವ ಬೀರಿದ ಲೇಖಕ ಯಾರು ಸಾರ್?’ ಮತ್ತೆ ಕೇಳಿದೆ. ಅವನು ತಡವರಿಸತೊಡಗಿದ.
ಹೋಗ್ಲಿ ಸಾರ್, ನಿಮ್ಮ ಲೈಬ್ರರಿ ತೋರಿಸ್ತೀರಾಎಂದೆ. ಅವನು ಯಾಕೋ ತಲ್ಲಣಿಸಿದವನಂತೆ ಕಂಡ. ಏನೂ ಹೇಳದ ವೌನದ ಬಳಿಕಬನ್ನಿ, ಲೈಬ್ರರಿ ತೋರಿಸ್ತೀನಿಎನ್ನುತ್ತಾ ಒಳ ನಡೆದ. ನಾನು ಅವನ ಹಿಂದೆ.
ಎರಡನೆ ಕೋಣೆಯಲ್ಲಿ ಮುರುಕು ಸ್ಟೌವ್, ಮಸಿ ಹಿಡಿದ ಪಾತ್ರೆ ಪಗಡಿಗಳು, ಯಾರೋ ಉಂಡು ಬಿಟ್ಟ ತಟ್ಟೆ ಎಲ್ಲಾ ಸ್ವತಂತ್ರವಾಗಿ ಬಿದ್ದುಕೊಂಡಿದ್ದವು. ಬಹುಶಃ ಅಡುಗೆ ಕೋಣೆಯಿರಬೇಕು.
ನೋಡು ನೋಡುತ್ತಿದ್ದಂತೆಯೇ ಒಳಕೋಣೆಯೊಳಗೆ ಬಂದೆವು. ಅದೊಂದು ಕೂರುವುದಕ್ಕೆ ಕುರ್ಚಿಯೇ ಇಲ್ಲದ ಖಾಲಿ ಕೋಣೆ.. ಥೇಟ್ ಬಿಳಿ ಹಾಳೆಯಂತೆ. ಒಂದು ಭಾಗದಲ್ಲಿ ಗೋಡೆಯಲ್ಲಿ ಅಂಟಿಕೊಂಡಿರುವ ಕಪಾಟು. ಗೋಡೆ ಕಪಾಟಿಗೆ ಬೀಗ ಜಡಿಯಲಾಗಿತ್ತು. ಕುತೂಹಲದಿಂದ ಅದನ್ನೇ ದಿಟ್ಟಿಸತೊಡಗಿದೆ.
ಇದೇ ನನ್ನ ಲೈಬ್ರರಿಗೋಡೆ ಕಪಾಟಿನತ್ತ ಕೈ ತೋರಿಸಿ ಕಥೆಗಾರ ಹೇಳಿದ. ಬಳಿಕ ತನ್ನ ಪ್ಯಾಂಟಿನ ಕಿಸೆಯಿಂದ ತಡಕಾಡಿ ಸಣ್ಣ ಕೀಲಿ ಕೈಯೊಂದನ್ನು ಹೊರತೆಗೆದು ನನ್ನ ಕೈಯೊಳಗಿಟ್ಟ. ‘ನಿಧಾನಕ್ಕೆ ನೋಡಿ ಬಳಿಕ ಬನ್ನಿಎಂದವನೇ ಹೊರ ನಡೆದ.
ಸಣ್ಣ ಕೀಲಿ ಕೈಯೊಂದು ಮಾಂತ್ರಿಕನೊಬ್ಬನ ಮಂತ್ರದಂಡದಂತೆ ನನ್ನ ಕೈಯಲ್ಲಿತ್ತು. ಅದರ ಆಕರ್ಷಣೆಗೆ ನನ್ನ ಕೈ ಕಂಪಿಸುತ್ತಿತ್ತು. ಮೆಲ್ಲಗೆ ಗೋಡೆ ಕಪಾಟಿನ ಬಾಗಿಲು ತೆರೆದೆ.
ನೋಡಿದರೆ ಕಕ್ಕಾಬಿಕ್ಕಿ
ಅದೊಂದು ಕಿಟಕಿಯಾಗಿತ್ತು. ಹೊರಗಡೆ ಬೆಟ್ಟ, ಗುಡ್ಡ, ಆಕಾಶ, ಮರ ಗಿಡ, ಹಕ್ಕಿ ಕೂಡ ಇತ್ತು!