Thursday, February 9, 2012

ದಲಿತರು ‘ಸತ್ತ ದನ’ದ ವಾರಸುದಾರರಾಗಬೇಕೆ?

ಇದು ನಾನು 2008 ಫೆಬ್ರವರಿ 8ರಂದು ಪತ್ರಿಕೆಗಾಗಿ ಬರೆದ ಲೇಖನ
 
ಪೇಜಾವರ ಶ್ರೀಗಳ ಜೊತೆ ಸಂವಾದ ನಡೆಸುವಾಗ ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಚಿಂತಕರು, ದಲಿತ ಸಂಘಟಕರು, ಪತ್ರಕರ್ತರು ಕೇಳುವ ಸಾಮಾನ್ಯ ಪ್ರಶ್ನೆ ಒಂದಿದೆ. ‘‘ನೀವು ದಲಿತರನ್ನು ದೇವಸ್ಥಾನದ ಅರ್ಚಕರನ್ನಾಗಿಸಲು ಸಿದ್ಧರಿದ್ದೀರಾ?’’
 ಈ ಪ್ರಶ್ನೆಗಳಿಗೆ ಪೇಜಾವರರು ಕೂಡ ಅಡ್ಡ ಗೋಡೆಯಲ್ಲಿ ದೀಪವಿಟ್ಟು, ಬಹಳ ನಾಜೂಕಾಗಿ ಉತ್ತರಿಸುತ್ತಾರೆ. ಪೇಜಾವರರನ್ನು ಸಂಕಷ್ಟಕ್ಕೆ ಸಿಲುಕಿಸಲೆಂದೇ ಕೇಳುವ ಪ್ರಶ್ನೆ, ಮುಂದಿನ ದಿನಗಳಲ್ಲಿ ದಲಿತರನ್ನೇ ಸಂಕಷ್ಟಕ್ಕೆ ಸಿಲುಕಿಸೀತೆಂಬ ಪ್ರಜ್ಞೆ ಕೇಳಿದವರಲ್ಲಿ ಇದ್ದಂತಿಲ್ಲ.

ಒಂದು ಕಾಲದಲ್ಲಿ ಸಂಸ್ಕೃತವನ್ನು ಶೂದ್ರ, ದಲಿತರಿಂದ ಇದೇ ‘ಬ್ರಾಹ್ಮಣ’ ವರ್ಗ ಮುಚ್ಚಿಟ್ಟಿತು. ಪರಿಣಾಮವಾಗಿ ಒಂದು ಶ್ರೀಮಂತ ಭಾಷೆ ಜನಸಾಮಾನ್ಯರ ನಡುವಿನಿಂದ ಅಳಿದೇ ಹೋಯಿತು. ಇಂದು ಸಂಸ್ಕೃತವನ್ನು ನಾವು ಗುರುತಿಸುವುದು ‘ಸತ್ತ ಭಾಷೆ’ ಎಂದಾಗಿದೆ. ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಜಮೀನ್ದಾರರು ಜೀವಂತ ದನಗಳನ್ನು ದಲಿತರಿಗೆ ಯಾವತ್ತೂ ಕೊಟ್ಟ ಉದಾಹರಣೆಗಳಿರುತ್ತಿರಲ್ಲಿಲ್ಲ. ಆದರೆ ದನ ಸತ್ತಾಕ್ಷಣ ದಲಿತರಿಗೆ ಬುಲಾವ್ ಹೋಗುತ್ತಿತ್ತು. ದಲಿತರು ಪುಕ್ಕಟೆ ಸಿಕ್ಕಿದ ಕಾರಣ ಆ ಸತ್ತ ದನವನ್ನು ಆಹಾರಕ್ಕಾಗಿ ಹೊತ್ತೊಯ್ಯುತ್ತಿದ್ದರು. ಇದೀಗ ಅದೇ ಮಾರ್ಗವನ್ನು ಬ್ರಾಹ್ಮಣ ವರ್ಗ ಅನುಸರಿಸುತ್ತಿದೆ. ಜೀವಂತವಿದ್ದಾಗ ಸಂಸ್ಕೃತ ಭಾಷೆಯನ್ನು ಆಲಿಸುವುದಕ್ಕೂ ಅವಕಾಶ ನೀಡದ ಪುರೋಹಿತಶಾಹಿ ವರ್ಗ, ಅದು ಸತ್ತು ಹೋದ ಬಳಿಕ, ‘ಬನ್ನಿ ಉಪಯೋಗಿಸಿ’ ಎಂದು ಕರೆಯುತ್ತಾರೆ ಎಂದು ಕರೆ ನೀಡುತ್ತಿದ್ದಾರೆ. ಸತ್ತ ಸಂಸ್ಕೃತವನ್ನು ಶೂದ್ರ, ದಲಿತರ ಹೆಗಲಿಗೆ ಕಟ್ಟಿ, ತಾವು ಮಾತ್ರ ಇಂಗ್ಲಿಷ್ ಜೊತೆಗೆ ಅಮೆರಿಕದಲ್ಲಿ ಬೆಚ್ಚಗೆ ಬದುಕಲು ಸಿದ್ಧತೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ. ದಲಿತರಿಗೆ ಭಾರೀ ಉಪಕಾರ ಮಾಡುವವರಂತೆ ‘ಸಂಸ್ಕೃತ ಕಲಿಯುವುದಕ್ಕೆ’ ಕರೆ ನೀಡುತ್ತಿದ್ದಾರೆ.

‘ದಲಿತರನ್ನು ದೇವಸ್ಥಾನದ ಅರ್ಚಕರನ್ನಾಗಿಸಲು ಸಿದ್ಧರಿದ್ದೀರಾ?’ ಎಂಬ ಪ್ರಶ್ನೆ ಕೇಳುವವರು ಮೇಲಿನ ಉದಾಹರಣೆಯನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಇಂದು ಬ್ರಾಹ್ಮಣರನ್ನು ಇರುಸುಮುರಿಸುಗೊಳಿಸುವ ಈ ಪ್ರಶ್ನೆಯನ್ನು ನಾಳೆ ಬ್ರಾಹ್ಮಣರೇ ದಲಿತರಿಗೆ ಮರು ಪ್ರಶ್ನಿಸುವ ದಿನಗಳು ಬರಬಹುದು. ‘ಸತ್ತ ದನವನ್ನು’ ‘ಸತ್ತ ಸಂಸ್ಕೃತವನ್ನು’ ದಲಿತರಿಗೆ ಕೊಟ್ಟು ಉಪಕಾರ ಮಾಡುವ ಹಾಗೆ. ಇತ್ತೀಚಿನ ಪರ್ಯಾಯೋತ್ಸವ ವಿವಾದ ಒಂದನ್ನಂತೂ ಈ ನಾಡಿನ ಶೂದ್ರರಿಗೆ, ದಲಿತರಿಗೆ ಸ್ಪಷ್ಟಪಡಿಸಿದೆ. ಸದ್ಯದ ಸ್ಥಿತಿಯಲ್ಲಿ ಯಾವ ಕಾರಣಕ್ಕೂ ದಲಿತರು ದೇವಸ್ಥಾನದ ಒಳ ಹೊಕ್ಕು ಅರ್ಚಕ ಸ್ಥಾನವನ್ನು ಪಡೆಯುವುದು ಅಸಾಧ್ಯ. ಒಂದು ವೇಳೆ ಇದು ಸಾಧ್ಯವಾಯಿತು ಎಂದು ಇಟ್ಟುಕೊಳ್ಳೋಣ. ಆಗಲೂ ದಲಿತರ ಸಮಸ್ಯೆ ಮುಗಿಯುವುದಿಲ್ಲ.

 ದಲಿತರು ದೇವಸ್ಥಾನದ ಅರ್ಚಕರಾಗಿ ಯಾವ ಪೂಜಾ ವಿಧಾನವನ್ನು ಬಳಸಬೇಕು? ದಲಿತರ ದೈವಗಳೇ ಬೇರೆ. ಅವರ ಪೂಜಾ ವಿಧಾನಗಳೇ ಬೇರೆ. ಆ ವಿಧಾನವನ್ನು ದೇವಳದಲ್ಲಿ ಅನುಸರಿಸುವುದಕ್ಕೆ ಅವಕಾಶವಿದೆಯೇ? ಆಗ ವೇದ, ಮಂತ್ರಗಳ ಪ್ರಶ್ನೆ ಬರುತ್ತದೆ. ಅದನ್ನು ದಲಿತರಿಗೆ ಕಲಿಸಬೇಕಾದವರೂ ಬ್ರಾಹ್ಮಣರೇ, ಇತ್ತೀಚೆಗೆ ಸರಕಾರವೇ ದಲಿತರಿಗೆ ಅರ್ಚಕ ಹುದ್ದೆಯನ್ನು ಕೊಡುವ ಕುರಿತಂತೆ ಮಾತನಾಡಿತ್ತು. ಅರ್ಚಕರ ಸ್ಥಾನದಲ್ಲಿ ದಲಿತರಿಗೆ ಮೀಸಲಾತಿ ನೀಡುವ ಕುರಿತಂತೆ ಸರಕಾರ ಯೋಚಿಸುತ್ತಿದೆ ಎಂದು ತಿಳಿಸಿತು. ಮೀಸಲಾತಿ ನೀಡುವುದೇನೋ ಹೌದು. ಆಗ ದಲಿತರು ಆ ಅರ್ಚಕ ಸ್ಥಾನಕ್ಕೆ ಅರ್ಹವಾದ ವೇದ, ಮಂತ್ರಗಳನ್ನು (ತಮ್ಮದಲ್ಲದ, ಅನ್ಯ) ಕಲಿಯಬೇಕು. ಅದನ್ನು ಕಲಿಸುವ ಹೊಣೆ ಮತ್ತೆ ಬ್ರಾಹ್ಮಣರದ್ದಾಗುತ್ತದೆ. ದಲಿತರಿಗೆ ವೇದ, ಮಂತ್ರವನ್ನು ಕಲಿಸುವುದಕ್ಕಾಗಿ ಬ್ರಾಹ್ಮಣರು ಮತ್ತೆ ಸರಕಾರದಿಂದ ಸವಲತ್ತುಗಳನ್ನು ಬಾಚಿಕೊಳ್ಳುತ್ತಾರೆ. ಅಂತಿಮವಾಗಿ ವೇದ, ಮಂತ್ರವನ್ನು ಕಲಿತು ದಲಿತರ ಮಕ್ಕಳು ದೇವಸ್ಥಾನದೊಳಗೆ ಪ್ರವೇಶಿಸಿ ಪೂಜೆಗೆ ಅಣಿಯಾಗುವಾಗ, ಬ್ರಾಹ್ಮಣರ ಮಕ್ಕಳೆಲ್ಲಾ ಅಮೆರಿಕದಲ್ಲಿ ಕಂಪ್ಯೂಟರ್ ಮುಂದೆ ಕೂತು ಲಕ್ಷ ಲಕ್ಷ ಬಾಚುತ್ತಿರುತ್ತಾರೆ. ಆಗ ದಲಿತರಿಗೆ ಗೊತ್ತಾಗುತ್ತದೆ. ತಮ್ಮ ಕೈಗೆ ಸಿಕ್ಕಿರುವುದು ‘ಸತ್ತ ದನ’ ಎನ್ನುವುದು.

ಪೇಜಾವರರಲ್ಲಿ ಕೇಳಬಹುದಾದ ಅತ್ಯುತ್ತಮ ಪ್ರಶ್ನೆಯೆಂದರೆ ಒಂದೇ. ‘‘ನೋಡಿ...ನೀವು ನಿಮ್ಮ ಮಠಗಳನ್ನು, ದೇವಸ್ಥಾನಗಳನ್ನು ಹಿಂದೂಗಳ ದೇವಸ್ಥಾನ ಎನ್ನುತ್ತೀರಿ. ಶೂದ್ರರಿಂದ ಲಕ್ಷ ಲಕ್ಷ ರೂ.ಗಳನ್ನು ದೇಣಿಗೆ ಪಡೆಯುತ್ತೀರಿ. ಈ ಮಠದ ಆದಾಯದಿಂದ ನೀವು ಶೂದ್ರರ, ದಲಿತರ ಶಿಕ್ಷಣಕ್ಕಾಗಿ ಎಷ್ಟು ವೆಚ್ಚ ಮಾಡಿದ್ದೀರಿ? ಅದರ ಲೆಕ್ಕ ಕೊಡುತ್ತೀರಾ?’’ ಎಂಬ ಪ್ರಶ್ನೆಯನ್ನು ಕೇಳಿ. ಉದಾಹರಣೆಗೆ ಆದಿಚುಂಚನಗಿರಿ ಮಠ ತನ್ನವರಿಂದ ಎಷ್ಟು ದೇಣಿಗೆಗಳನ್ನು ಸಂಗ್ರಹಿಸುತ್ತಿದೆಯೋ, ಅದರ ಸ್ವಲ್ಪವನ್ನಾದರೂ ತನ್ನ ಸಮುದಾಯಕ್ಕಾಗಿ ವ್ಯಯ ಮಾಡುತ್ತಿದೆ. ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಜೈನರಾಗಿದ್ದರೂ, ಅಲ್ಲಿ ಸಂಗ್ರಹವಾಗಿರುವ ಹಣವನ್ನು ವ್ಯಾಪಕವಾಗಿ ಸಾಮಾಜಿಕ ಕಾರ್ಯಕ್ಕಾಗಿ ಬಳಸುವ ನಿದರ್ಶನವಿದೆ. ದಕ್ಷಿಣ ಕನ್ನಡದ ಉಳ್ಳಾಲ ದರ್ಗಾವನ್ನೇ ತೆಗೆದುಕೊಂಡರೂ, ಅಲ್ಲಿ ಸಂಗ್ರಹವಾದ ಹಣದಿಂದ ಶಾಲೆ, ಆಸ್ಪತ್ರೆಗಳನ್ನು ಕಟ್ಟಿ ಮುಸ್ಲಿಂ ಸಮುದಾಯಕ್ಕೆ ಸಹಾಯ ಮಾಡುವ ಕಾರ್ಯ ನಡೆಯುತ್ತಿದೆ. ಆದರೆ ಒಂದೆಡೆ ‘ಹಿಂದೂ’ ಎಂಬ ಹೆಸರಿನಲ್ಲಿ ಉಡುಪಿ ಮಠಗಳು ಎಲ್ಲ ಶೂದ್ರ, ದಲಿತರಿಂದ ದೇಣಿಗೆಗಳನ್ನು ಪಡೆಯುತ್ತಿವೆ. ಅದನ್ನು ವ್ಯಯಿಸುವ ಸಂದರ್ಭದಲ್ಲಿ ಪೇಜಾವರ ಶ್ರೀಗಳ ಬಳಗ ಶೂದ್ರ, ದಲಿತರನ್ನು ದೂರವಿಡುತ್ತವೆ. ಇದೊಂದೇ ಸಾಕು. ಈ ಉಡುಪಿಯಲ್ಲಿರುವ ಮಠ ಹಿಂದೂಗಳ ಮಠ ಅಲ್ಲ. ಬ್ರಾಹ್ಮಣರ ಮಠ ಎನ್ನುವುದನ್ನು ತಿಳಿದುಕೊಳ್ಳಲು. ಹೀಗಿರುವಾಗ ಅಲ್ಲಿ ನನಗೆ ಪೂಜೆಗೆ ಅವಕಾಶ ಕೊಡಬೇಕು ಎಂದು ದಲಿತರು ಕೇಳುವುದೇ ಹಾಸ್ಯಾಸ್ಪದ. ಗೋಕುಲಾಷ್ಠಮಿಗೂ- ಇಮಾಂ ಸಾಬಿಗೂ ಇರುವ ಸಂಬಂಧವೇ ದಲಿತರಿಗೂ ಅರ್ಚಕ ಹುದ್ದೆಗೂ ಇರುವ ಸಂಬಂಧ.

ದಲಿತರ ಉದ್ಧಾರ ಅವರು ಅರ್ಚಕರಾಗುವುದರಿಂದ ಸಾಧ್ಯವಿಲ್ಲ. ದಲಿತರು ಕಂಪ್ಯೂಟರ್ ಕಲಿಯಲಿ. ಇಂಗ್ಲಿಷ್ ಕಲಿಯಲಿ. ಆರ್ಥಿಕವಾಗಿ ಸುಭಿಕ್ಷರಾಗಲಿ. ಬ್ರಾಹ್ಮಣ್ಯವನ್ನು ತಲೆಯಲ್ಲಿ ಹೊತ್ತವರ ‘ಬಾಸ್’ಗಳಾಗಿ ಹುದ್ದೆ ನಿರ್ವಹಿಸಲಿ. ದಲಿತರ ಸ್ವಾತಂತ್ರದ ದಾರಿ ಅಲ್ಲಿದೆ. ಅರ್ಚಕ ಹುದ್ದೆ ಪೇಜಾವರರ ಕುಡಿಗಳಿಗೇ ಇರಲಿ. ಅದು ದಲಿತರಿಗೆ ಬೇಡವೇ ಬೇಡ. ದಲಿತರ ಉದ್ಧಾರಕ್ಕೆ ಅವರ ದೈವಗಳು, ಪಾಡ್ದನಗಳು, ಸಂಸ್ಕೃತಿಗಳೇ ಸಾಕು. ಬ್ರಾಹ್ಮಣ್ಯವನ್ನು ತಲೆಯಲ್ಲಿ ಹೊತ್ತವರೆಲ್ಲಾ ತಮ್ಮ ತಮ್ಮ ಮಕ್ಕಳಿಗೆ ಕಂಪ್ಯೂಟರ್ ಕಲಿಸಿ, ಇಂಗ್ಲಿಷ್ ಕಲಿಸಿ ಅವರನ್ನು ಅಮೆರಿಕದಂತಹ ಶ್ರೀಮಂತ ದೇಶಕ್ಕೆ ರವಾನಿಸುತ್ತಿರುವಾಗ, ಇಲ್ಲಿ ದಲಿತ ಮುಖಂಡರೆಂದು ಕರೆಸಿಕೊಂಡವರು, ಚಿಂತಕರೆಂದು ಕರೆಸಿಕೊಂಡವರು ‘ನಮಗೆ ದೇವಸ್ಥಾನದ ಅರ್ಚಕರಾಗಲು ಅವಕಾಶ ನೀಡಿ ಎಂದು ಕೇಳುವುದು ಹಾಸ್ಯಾಸ್ಪದ ಮಾತ್ರವಲ್ಲ. ಅದು ದಲಿತರ ಪಾಲಿನ ದುರಂತವೂ ಕೂಡಾ. ಆದುದರಿಂದ, ಬ್ರಾಹ್ಮಣರ ಸಾಂಸ್ಕೃತಿಕ ರಾಜಕಾರಣವನ್ನು ಅರ್ಥ ಮಾಡಿಕೊಳ್ಳುತ್ತಾ ದಲಿತರು ತಮ್ಮ ಹೆಜ್ಜೆಗಳನ್ನಿಡಬೇಕು. ಸತ್ತ ಸಂಸ್ಕೃತ, ಸತ್ತ ಸಂಸ್ಕೃತಿ ಇತ್ಯಾದಿಗಳನ್ನು ದಲಿತರ ಹೆಗಲಿಗೆ ಕಟ್ಟುವ ಹುನ್ನಾರದಿಂದ ದಲಿತರನ್ನು ಪಾರು ಮಾಡುವ ಕುರಿತಂತೆ ನಾಯಕರು ಯೋಚಿಸಬೇಕು. ನಾಳೆ ‘ದಲಿತರು ಅರ್ಚಕ ಹುದ್ದೆಯನ್ನು ನಿರ್ವಹಿಸಬಹುದು’ ಎಂದು ಕ್ರಾಂತಿಕಾರಿಯಂತೆ ಪೇಜಾವರರು ಘೋಷಿಸಬಹುದು. ಅಂತಹ ಸಂದರ್ಭದಲ್ಲಿ ಮೋಸವನ್ನು ಅರಿಯದೇ ಮುಗ್ಧ ದಲಿತರು ರೋಮಾಂಚನಗೊಂಡು ಅತ್ತ ಧಾವಿಸುವಂತಾಗಬಾರದು. ದಲಿತರು ಹುಲಿಗಳು. ಅವರಿಗೆ ಸತ್ತ ದನದ ಅಗತ್ಯವಿಲ್ಲ. ಜೀವಂತ ದನ, ಜಿಂಕೆಗಳನ್ನ್ನು ಬೇಟೆಯಾಡಿ ತಮ್ಮ ಆಹಾರವನ್ನು ಅವರು ಗಳಿಸಬಲ್ಲರು.
(ಫೆಬ್ರವರಿ 8, 2008)

4 comments:

  1. ಸಂಸ್ಕೃತ ಕಲಿಯಿರಿ ಅಂದರೂ ತಪ್ಪು, ಕಲಿಯಲು ಬಿಡದಿದ್ದರೂ ತಪ್ಪು. ನಿಮ್ಮ ಸಮಸ್ಯೆ ಏನು?

    ReplyDelete
  2. ಪ್ರವೀಣ್ ಸೂಡFebruary 15, 2012 at 6:12 AM

    ನಿಮ್ಮ ಲೇಖನ ತುಂಬಾ ಚೆನ್ನಾಗಿದೆ, ಜನಪರ ಕಾಳಜಿಯ ಲೇಖನ ಸಾರ್..

    ReplyDelete
  3. ಪ್ರವೀಣ್ ಸೂಡFebruary 15, 2012 at 6:15 AM

    ಸಂಸ್ಕೃತ ಜೀವಂತವಾಗಿದ್ದಾಗ ಅದನ್ನು ಬ್ರಹ್ಮಣ್ಯದ ಸ್ವತ್ತು ಮಾಡಿ, ಅದು ಸತ್ತ ನಂತರ ಕಲಿಸಲು ಬರುವುದೆ ನಮ್ಮ ಸಮಸ್ಯೆ ಅನಾಮಿಕರೆ...

    ReplyDelete
  4. ಸರ್, ನಾನು ರೋಮಾಂಚನಗೊಂಡಿದ್ದೇ ಹೆಚ್ಚು....!

    ReplyDelete