Monday, September 2, 2013

ಹೃದಯ ಬೆಸೆಯುವ ‘ಶೂದ್ರ’

ಲಂಕೇಶ್, ಅನಂತಮೂರ್ತಿ, ಶರ್ಮಾ ಮೊದಲಾದ ಹಿರಿಯ ಕವಿ, ಸಾಹಿತಿಗಳ ಒಡನಾಡಿಯಾಗಿದ್ದ, ಆಗಿರುವ ಶೂದ್ರ ಶ್ರೀನಿವಾಸ್ ಸಾಹಿತ್ಯ ಕನ್ನಡದ ವಲಯದಲ್ಲಿ ಚರ್ಚೆಯಾದದ್ದು ಕಡಿಮೆ. ಆವೇಶರಹಿತವಾಗಿ, ಎಳೆ ಬಿಸಿಲಿನ ಸುಖವನ್ನು ನೆನಪಿಸುವ ಅವರ ಬರಹ ಎಲ್ಲ ಹಿರಿಯ ಲೇಖಕರ ನೆರಳು ಬಿದ್ದು ಸಂಪನ್ನವಾದವುಗಳು. ಈಗಲೂ ತಮ್ಮ ಶೂದ್ರ ಸಾಹಿತ್ಯ ಪತ್ರಿಕೆಯನ್ನು ಯಶಸ್ವಿಯಾಗಿ ತರುತ್ತಿರುವ ಶ್ರೀನಿವಾಸ್ ಸಾಹಿತಿಯಾಗಿ, ವಿಮರ್ಶಕನಾಗಿ ತನ್ನದೇ ಒಂದು ಕಾಲುದಾರಿಯನ್ನು ನಿರ್ಮಿಸಿಕೊಂಡವರು. ಶೂದ್ರದಲ್ಲಿ ಪ್ರಕಟವಾಗುವ ಅವರ ಕನಸಿಗೊಂದು ಕಣ್ಣು ಅಂಕಣ, ಹಲವು ರೀತಿಯಲ್ಲಿ ಬರಹಗಾರರಿಗೆ ಮಾದರಿಯಾಗುವಂತಹದು. ಖಾಸಗಿ ನೆಲೆಯಲ್ಲಿ ಬರೆಯುತ್ತಲೇ ಅದನ್ನು ಸಾರ್ವತ್ರಿಕವಾಗಿಸುವ ಬಗೆ, ಒಬ್ಬ ಗೆಳೆಯನಾಗಿ ಹಂಚಿಕೊಳ್ಳುವ ಸೊಗಸು ಓದಿಯೇ ಅನುಭವಿಸಬೇಕು. ಶೂದ್ರ ಬರಹಗಳಿಗೆ ಮನಸ್ಸನ್ನು ಕಟ್ಟುವ ಶಕ್ತಿಯಿದೆ.

 ಇದೀಗ ಅವರ ಬರಹಗಳ ಸಂಗ್ರಹ ‘ಮಾತು ವೌನದ ಮುಂದೆ’ ಕೃತಿ ಹೊರ ಬಂದಿದೆ. ನೆಲಮನೆ ಪಬ್ಲಿಷಿಂಗ್ ಹೌಸ್ ಈ ಕೃತಿಯನ್ನು ಹೊರತಂದಿದೆ. ಹಲವು ವ್ಯಕ್ತಿ ಚಿತ್ರಗಳು, ಸಾಹಿತ್ಯದ ಚರ್ಚೆಗಳು, ತುರ್ತು ಪರಿಸ್ಥಿತಿಯ ನೆನಪುಗಳು...ಹೀಗೆ ಬಗೆಬಗೆಯ ಜಗತ್ತು ಈ ಕೃತಿಯಲ್ಲಿ ತೆರೆದುಕೊಳ್ಳುತ್ತದೆ. ಖಾನ್ ಅಬ್ದುಲ್ ಗಫಾರ್‌ಖಾನ್, ಅಮೃತರಾಯ್, ಶಿವರಾಣಿ ದೇವಿ, ಉಸ್ತಾದ್ ಬಿಸ್ಮಿಲ್ಲಾ ಖಾನ್ ಮೊದಲಾದವುಗಳು ಬರೆಯ ವ್ಯಕ್ತಿ ಚಿತ್ರಗಳಲ್ಲ. ಆ ಮೂಲಕ ಅವರು ಹೃದಯ ಬೆಸೆಯುವ ಕೆಲಸವನ್ನು ಮಾಡುತ್ತಾರೆ. ವ್ಯಕ್ತಿಯಾಚೆಗೆ ಅವರ ಬರಹಗಳು ಬೆಳೆಯುತ್ತಾ ಹೋಗುತ್ತವೆ. ಕೃತಿಗೆ ಡಾ. ಬಂಜಗೆರೆ ಜಯಪ್ರಕಾಶ್ ಅವರ ಗಟ್ಟಿಯಾದ ಮುನ್ನುಡಿಯೊಂದಿದೆ. ಕೃತಿಯ ಮುಖಬೆಲೆ 150 ರೂ.

No comments:

Post a Comment