Tuesday, February 5, 2013

ಕಮಲ್ ಹಾಸನ್ ಅವರ ವಿಶ್ವ ವಿ-ರೂಪಂ

 ‘ನೀವು ಒಂದೋ ನಮ್ಮ ಜೊತೆಗೆ, ಇಲ್ಲವೇ ಭಯೋತ್ಪಾದಕರ ಜೊತೆಗೆ’ ಸೆಪ್ಟೆಂಬರ್ 11ರ ದಾಳಿಯ ಬಳಿಕ ಅಮೆರಿಕದ ಅಂದಿನ ಅಧ್ಯಕ್ಷ ಜಾರ್ಜ್‌ಬುಶ್ ವಿಶ್ವದ ಮುಂದಿಟ್ಟ ಎರಡು ಆಯ್ಕೆಗಳು. ಅಮೆರಿಕದ ಜೊತೆಗೆ ನಿಲ್ಲದವರೆಲ್ಲ ಪರೋಕ್ಷವಾಗಿ ಭಯೋತ್ಪಾದಕರ ಜೊತೆಗೆ ನಿಂತಿದ್ದಾರೆಂದೇ ಅರ್ಥ ಎನ್ನುವ ಫತ್ವಾವನ್ನು ಜಾರ್ಜ್ ಬುಶ್ ಹೊರಡಿಸಿದ್ದರು. ಕಮಲ್ ಹಾಸನ್ ತನ್ನ ವಿಶ್ವವನ್ನು ಅಮೆರಿಕದ ಜೊತೆಗೆ ಜೋಡಿಸಿಕೊಂಡು, ವಿಶ್ವರೂಪಂನ್ನು ಬಿಡಿಸಿದ್ದಾರೆ. ಇದು ವಿವಾದವಾಗಬೇಕಾದ, ಚರ್ಚೆಯಾಗಬೇಕಾದ ಚಿತ್ರವೇ ಅಲ್ಲ. ಅಮೆರಿಕದ ಕಣ್ಣಲ್ಲಿ ಕಮಲ್‌ಹಾಸನ್ ಅಫ್ಘಾನಿಸ್ತಾನವನ್ನು ನೋಡಿದ್ದಾರೆ ಎನ್ನುವುದು ಯಾವ ಕಾರಣಕ್ಕೂ ಅಪರಾಧವಲ್ಲ. ಹಾಗೆ ನೋಡುವುದು ಜಗತ್ತಿನ ‘ಮುಖ್ಯವಾಹಿನಿ’ ಎಂದು ಸ್ವಯಂ ಘೋಷಿಸಿಕೊಂಡವರ ಹಕ್ಕು. ಇಡೀ ಚಿತ್ರ, ಅಮೆರಿಕ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತದೆ. ಮತ್ತು ಅಮೆರಿಕದ ವಿರುದ್ಧ ಹೋರಾಡುವವರು ಭಯೋತ್ಪಾದಕರು ಎನ್ನುವುದನ್ನು ಸಾಧಿಸುವುದಕ್ಕೆ ಪ್ರಯತ್ನಿಸುತ್ತದೆ. ಜಗತ್ತಿನ ಇಂದಿನ ರಾಜಕೀಯ ವಿದ್ಯಮಾನವನ್ನು ಕಮಲ್ ಹಾಸನ್ ಹೇಗೆ ಅರ್ಥಮಾಡಿಕೊಂಡಿದ್ದಾರೆ ಎನ್ನುವುದನ್ನಷ್ಟೇ ಈ ಚಿತ್ರದಲ್ಲಿ ನೋಡಬಹುದು. ಅದು ಅವರ ಅಭಿವ್ಯಕ್ತಿ ಸ್ವಾತಂತ್ರ. ನಾವದನ್ನು ಒಪ್ಪಲೇ ಬೇಕು. ಒಬ್ಬ ಸೃಜನ ಶೀಲ ಕಲಾವಿದ ವಿಶ್ವ ರಾಜಕೀಯದಂತೆ ಕುರಿತಂತೆ ಅಜ್ಞಾನಿಯಾಗುವುದಕ್ಕೆ ಎಲ್ಲ ಹಕ್ಕೂ ಇದೆ. ಅದನ್ನು ನಾವು ಮನ್ನಿಸಲೇಬೇಕು.

ಸೃಜನಶೀಲ ಅಭಿವ್ಯಕ್ತಿಯ ಇನ್ನೊಂದು ಹೆಸರು ಕಮಲ್. ಮನಸ್ಸು, ದೇಹ ಎಲ್ಲವನ್ನು ಅಭಿನಯದಲ್ಲಿ ತೊಡಗಿಸಿಕೊಳ್ಳುವ ಕಮಲ್ ಇಲ್ಲದ ಭಾರತೀಯ ಚಿತ್ರ ನೀರಸ. ‘ನಾಯಕನ್’ ಚಿತ್ರದ ಕಮಲ್ ಮೂಲಕ ಇಂದಿಗೂ ಧಾರಾವಿಯ ವರದರಾಜ ಮೊದಲಿಯಾರ್ ನಮ್ಮ ಏದುಸಿರುಗಳಲ್ಲಿ ಒಂದಾಗಿದ್ದಾರೆ. ಯಾವುದೇ ಪಾತ್ರ, ವಸ್ತುವನ್ನು ಬ್ಲಾಕ್ ಎಂಡ್ ವೈಟ್‌ನಲ್ಲಿ ಕಮಲ್ ನೋಡಿದ್ದು ಕಡಿಮೆ. ಆದರೆ ಕೆಲವು ಚಿತ್ರಗಳಲ್ಲಿ ಕಮಲ್ ಬೇಕು ಬೇಕೆಂದೆ ಎಡವಿ ಬೀಳುತ್ತಾರೆ. ಯಾಕೆ? ಕಮಲ್‌ನ ಆಳದಲ್ಲಿ ವಿಲಗುಟ್ಟುವ ಯಾವ ಗಾಯ ಅವರನ್ನು ಅವರಿಗರಿವಿಲ್ಲದೆ ಇಂತಹ ತಪ್ಪುಗಳನ್ನು ಮಾಡಿಸುತ್ತದೆ.

 ‘ದಶಾವತಾರಂ’ ಚಿತ್ರ ನಿಮಗೆ ಗೊತ್ತಿರಬಹುದು. ಅದರ ಮೊದಲ ಅಧ್ಯಾಯ ತೆರೆದುಕೊಳ್ಳುವುದು ಕಮಲ್‌ನ ಇಂತಹ ತಪ್ಪಿನ ಮೂಲಕವೇ. ಚೋಳರ ಕಾಲದಲ್ಲಿ ತಮಿಳುನಾಡಲ್ಲಿ ಶೈವ-ವೈಷ್ಣವರ ನಡುವಿನ ಸಂಘರ್ಷವನ್ನು ಅದು ತೋರಿಸುತ್ತದೆ. ಅಲ್ಲಿಯೂ ಅವರು ವಿಶ್ವರೂಪಂನ ತಪ್ಪುಗಳನ್ನೇ ಮಾಡುತ್ತಾರೆ. ಶೈವರನ್ನು ಖಳನಾಯಕರಾಗಿ, ಕ್ರೌರ್ಯ ಮೈವೆತ್ತ ರಾಕ್ಷರರಂತೆ ಬಿಂಬಿಸಿದರೆ, ವೈಷ್ಣವರನ್ನು ದಮನಿತ ಅಮಾಯಕರಂತೆ ತೋರಿಸುತ್ತಾರೆ. ಶೈವರ ಪಾತ್ರಗಳು ಅಲ್ಲಿ ವಿಕಾರವಾಗಿವೆ. ಅದು ಮೂರ್ತವಾಗಿಯೂ, ಅಮೂರ್ತವಾಗಿಯೂ. ವಿಷ್ಣು ಭಕ್ತನನ್ನು ಕಡಲಿಗೆಸೆಯುವ ಆ ದೃಶ್ಯ ಸಾಕಷ್ಟು ವಿವಾದಕ್ಕೆಡೆ ಮಾಡಿತ್ತು. ಪೆರಿಯಾರ್‌ನ ಕುರಿತಂತೆಯೂ ಸಣ್ಣದೊಂದು ಅಸಮಾಧಾನ ಚಿತ್ರದಲ್ಲಿ ಮಿಸುಕಾಡುತ್ತಿತ್ತು. ಕಮಲ್‌ನ ತಂದೆ ಶ್ರೀನಿವಾಸನ್ ಕಾಲಘಟ್ಟದಲ್ಲಿ ಮತ್ತು ತದನಂತರದ ಕಾಲಘಟ್ಟದಲ್ಲಿ ತಮಿಳುನಾಡಿನಲ್ಲಿ ಬ್ರಾಹ್ಮಣರು ಎದುರಿಸಿದ ದ್ರಾವಿಡ ಚಳವಳಿ, ಪೆರಿಯಾರ್ ಬೆಂಬಲಿಗರಿಂದ ನಡೆದ ಪ್ರತಿಭಟನೆಗಳು ಪರೋಕ್ಷವಾಗಿ ಆ ಚಿತ್ರದಲ್ಲಿ ತನ್ನ ಪರಿಣಾಮವನ್ನು ಬೀರಿರುವುದರಲ್ಲಿ ಯಾವ ಸಂಶಯವೂ ಇಲ್ಲ. ದ್ರಾವಿಡ ಚಳವಳಿಯ ಬಲಿಪಶುಗಳಲ್ಲಿ ಕಮಲ್ ಹಾಸನ್‌ನ ತಂದೆಯೂ ಒಬ್ಬರು. ಸ್ವಾತಂತ್ರ ಹೋರಾಟದ ಸಂದರ್ಭದಲ್ಲೇ ಬ್ರಾಹ್ಮಣ ವಿರೋಧಿ ಚಳವಳಿಯೂ ತಮಿಳು ನಾಡಿನಲ್ಲಿ ತಲೆಯೆತ್ತಿತ್ತು. ಈ ಸಂದರ್ಭದಲ್ಲಿ ಕಮಲ್‌ನ ತಂದೆ, ಸಂಬಂಧಿಕರೂ ಇದರ ಪರಿಣಾಮವನ್ನು ಅನುಭವಿಸಬೇಕಾಗಿತ್ತು. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಕಮಲ್‌ನ ತಂದೆ ಶ್ರೀನಿವಾಸನ್ ಜೈಲು ಸೇರಿದಾಗ ಅಲ್ಲಿ ಬ್ರಾಹ್ಮಣ ವಿರೋಧಿಗಳಿಂದ ಅವರ ಮೇಲೆ ಹಲ್ಲೆಯೂ ನಡೆದಿತ್ತು. ಆ ಸಂದರ್ಭದಲ್ಲಿ ಶ್ರೀನಿವಾಸನ್ ಅವರ ಗೆಳೆಯ, ಮುಸ್ಲಿಮ್ ಸ್ವಾತಂತ್ರ ಹೋರಾಟಗಾರ ಯಾಕೂಬ್ ಹಸನ್ ಅವರು ಶ್ರೀನಿವಾಸನ್‌ರನ್ನು ಕಾಪಾಡಿದ್ದರು. ಈ ಕಾರಣದಿಂದಲೇ ಶ್ರೀನಿವಾಸನ್ ತನ್ನ ಮೂರು ಮಕ್ಕಳಿಗೆ ಗೆಳೆಯನ ಸ್ಮರಣಾರ್ಥ ಹಸನ್ ಎಂಬ ಹೆಸರನ್ನೂ ಇಟ್ಟರು.

ತಂದೆಯ ಬದುಕಿನಲ್ಲಾದ ನೋವನ್ನು ಕಮಲ್ ಕೂಡ ಎದುರಿಸಿದ್ದಾರೆ. ಅದು ಆಳದಲ್ಲಿ ಮುಲುಗುಟ್ಟುತ್ತಿರುವುದರಿಂದಲೇ ದಶಾವತಾರಂ ಚಿತ್ರದಲ್ಲಿ ಅವರಿಂದ ಅಂತಹದೊಂದು ದೃಶ್ಯ ಹೊರ ಬರುವುದಕ್ಕೆ ಕಾರಣವಾಗಿರಬಹುದು. ಶೈವರ ಕುರಿತ ಸಿಟ್ಟು, ಆಕ್ರೋಶಗಳೇ ಅವರ ಪಾತ್ರಗಳನ್ನು ಅಷ್ಟು ಭೀಕರವಾಗಿ ಕಟ್ಟಿಕೊಡಲು ಅವರಿಗೆ ಅನಿವಾರ್ಯವನ್ನು ತಂದೊಡ್ಡಿರಬಹುದು. ವಿಶ್ವರೂಪವನ್ನೇ ತೆಗೆದುಕೊಳ್ಳೋಣ. ಇದೊಂದು ಅಪ್ಪಟ ಕಮರ್ಶಿಯಲ್ ಚಿತ್ರ. ಕಮರ್ಶಿಯಲ್ ಚಿತ್ರವೆನ್ನುವಾಗ ಅಭಿವ್ಯಕ್ತಿ ಸ್ವಾತಂತ್ರದ ಮಾತು ತನ್ನದೇ ಆದ ಸೀಮಿತತೆಯನ್ನು ಪಡೆಯುತ್ತದೆ. ಒಬ್ಬ ತನ್ನ ಕಮರ್ಶಿಯಲ್ ಚಿತ್ರವನ್ನು ಯಶಸ್ವಿಗೊಳಿಸಲು ಬೇಕಾಬಿಟ್ಟಿಯಾಗಿ ಅಶ್ಲೀಲ ದೃಶ್ಯಗಳನ್ನು ಹಾಕುವುದು ಹೇಗೆ ಅಭಿವ್ಯಕ್ತಿ ಸ್ವಾತಂತ್ರದ ವ್ಯಾಪ್ತಿಯಲ್ಲಿ ಬರುವುದಿಲ್ಲವೋ ಹಾಗೆಯೇ, ವಿವಾದ ಮಾಡುವುದಕ್ಕಾಗಿಯೇ ಕೆಲವೊಮ್ಮೆ ಹಿಂಸೆ, ಕ್ರೌರ್ಯ, ವಿದ್ವೇಷಗಳನ್ನು ತುರುಕುವುದೂ ಅಭಿವ್ಯಕ್ತಿ ಸ್ವಾತಂತ್ರದ ವ್ಯಾಪ್ತಿಯಲ್ಲಿ ಬರುವುದಿಲ್ಲ. ವಿಶ್ವರೂಪಂನಲ್ಲಿ ಕ್ರೌರ್ಯ, ರಕ್ತವನ್ನು ಕೆಲವೆಡೆ ಅತ್ಯಂತ ಭಯಾನಕವಾಗಿ ತೋರಿಸಲಾಗಿದೆ. ಇದು ಇಸ್ಲಾಮ್‌ನ ಕುರಿತಂತೆ ಯಾವ ಧೋರಣೆಯನ್ನೂ ಹೊಂದಿಲ್ಲ. ಆದರೆ, ಅಮೆರಿಕದ ಭಯೋತ್ಪಾದಕ ವಿರೋಧಿ ಹೋರಾಟಕ್ಕೆ ತನ್ನದೇ ಆದ ಶಹಬಾಷ್‌ಗಿರಿಯನ್ನು ನೀಡಲು ಪ್ರಯತ್ನಿಸುತ್ತದೆ. ಅಫ್ಘಾನಿಸ್ತಾನ ಸೇರಿದಂತೆ ಜಾಗತಿಕವಾಗಿ ಮುಸ್ಲಿಮ್ ರಾಷ್ಟ್ರಗಳ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ‘ಸರಿ’ ಎಂದು ಹೇಳಲು ಪ್ರಯತ್ನಿಸುತ್ತಿದೆ. ವಿಶ್ವ ಭಯೋತ್ಪಾದನೆಯ ಹೆಸರಿನಲ್ಲಿ ನಡೆಯುತ್ತಿರುವ ಅಘ್ಘಾನಿಸ್ತಾನ, ಇರಾಕ್‌ನಂತಹ ರಾಷ್ಟ್ರಗಳ ದಮನವನ್ನು ಇಷ್ಟು ಸರಳವಾಗಿ ಕಮಲ್ ಚಿಂತಿಸಿದ್ದಾರೆ ಎನ್ನುವುದು ಮಾತ್ರ ಅವರ ಸೃಜನಶೀಲ ವ್ಯಕ್ತಿತ್ವಕ್ಕೆ ಭಾರೀ ಅವಮಾನವೇ ಸರಿ. ಅಮೆರಿಕ ಭಾರತವನ್ನು ತನ್ನ ಚೇಲಾ ರಾಷ್ಟ್ರವಾಗಿಸಲು ಇಚ್ಚೆ ಪಡುತ್ತಿರುವ ದಿನಗಳಲ್ಲಿ, ಕಮಲ್ ಮೂಲಕ ಅಮೆರಿಮಕವೇ ಇಂತಹದೊಂದು ಸಿನಿಮಾವನ್ನು ಭಾರತಕ್ಕೆ ಬಡಿಸಿದೆ ಎಂದರೆ ಅದರಲ್ಲಿ ಅಚ್ಚರಿ ಪಡಬೇಕಾದುದೇನೂ ಇಲ್ಲ. ಮಾತು ಮಾತಿಗೆ ವಿಶ್ವರೂಪಂ ಎನ್ನುವ ತನ್ನ ಕಮರ್ಶಿಯಲ್ ಚಿತ್ರದ ಕುರಿತಂತೆ ಹುತಾತ್ಮ ಹೇಳಿಕೆಯನ್ನು ನೀಡುತ್ತಿರುವ ಕಮಲ್ ಅವರ ಭಾರತ ತ್ಯಜಿಸುವ ಮಾತು ತೀರಾ ಆಕಸ್ಮಿಕವೇನೂ ಅಲ್ಲ. ಬಾಲಿವುಡ್‌ನ್ನು ಬಿಟ್ಟು ಹಾಲಿವುಡ್‌ಗೆ ತೆರಳುವ ಅವರ ಕನಸಿಗೆ ನಿಧಾನಕ್ಕೆ ರೆಕ್ಕೆ ಬಂದಂತಿದೆ. ಹಾಲಿವುಡ್‌ನಲ್ಲಿ ತೊಡಗಿಸಿಕೊಳ್ಳುವ ಅವರ ಆಸೆಯ ಭಾಗವಾಗಿ, ಈಗಾಗಲೇ ನಿರ್ಮಾಪಕ ಬೇರಿ ಎಮ್. ಓಸ್‌ಬೋರ್ನ್(ಲಾರ್ಡ್ ಆಫ್ ದಿ ರಿಂಗ್ಸ್) ಕಮಲ್ ಜೊತೆಗೆ ಹೊಸ ಚಿತ್ರ ಮಾಡುವ ಕುರಿತಂತೆ ಮಾತುಕತೆ ನಡೆಸಿದ್ದಾರೆ. ಹಾಲಿವುಡ್‌ನಲ್ಲಿ ತೊಡಗಿಕೊಳ್ಳುವ ಉದ್ದೇಶದಿಂದಲೇ, ಆಂಗ್‌ಲೀಯಂತಹ ನಿರ್ದೇಶಕರೂ ಕಮಲ್ ಜೊತೆಗೆ ಈಗಾಗಲೇ ಕೈ ಜೋಡಿಸಿದ್ದಾರೆ. ಇದೆಲ್ಲದರ ಅರ್ಥ, ಭಾರತವನ್ನು ಬಿಡಲು ವರ್ಷಗಳ ಹಿಂದೆಯೇ ಕಮಲ್ ನಿರ್ಧರಿಸಿದ್ದಾರೆ. ಮತ್ತು ವಿಶ್ವರೂಪಂ ಚಿತ್ರದ ಮೂಲಕ ಅದಕ್ಕೊಂದು ವಾತಾವರಣವನ್ನು, ವೇದಿಕೆಯನ್ನು ನಿರ್ಮಿಸಿದ್ದಾರೆ.

   ಈ ಚಿತ್ರ ವಿವಾದವಾಗುವುದು ಕಮಲ್‌ಗೂ, ಕಮಲ್‌ನ ಹಿಂದಿರುವ ಅಮೆರಿಕ ಹಿತಾಸಕ್ತಿಗಳಿಗೆ ಅತ್ಯಗತ್ಯವಾಗಿತ್ತು. ಆ ಮೂಲಕ ವಿಶ್ವರೂಪಂ ಏನನ್ನು ಹೇಳುತ್ತದೆಯೋ ಅದನ್ನ್ನು ಸಮರ್ಥಿಸಿಗೊಳ್ಳುವುದೇ ಇದರ ಹಿಂದಿರುವವರ ಉದ್ದೇಶ. ಅಮೆರಿಕದ ಭಯೋತ್ಪಾದನಾ ವಿರೋಧಿ ಯುದ್ಧಕ್ಕೆ ಪರವಾಗಿರುವ ವಾತಾವರಣವನ್ನು ರೂಪಿಸುವುದೇ ಚಿತ್ರದ ಮೊದಲ ಗುರಿ. ಹಾಲಿವುಡ್ ಹಿತಾಸಕ್ತಿಗಳು ಕಮಲ್‌ನಂತಹ ಸೃಜನಶೀಲ ಕಲಾವಿದನನ್ನೇ ಇದಕ್ಕಾಗಿ ಬಳಸಿಕೊಂಡಿದೆ. ಭಾರತದಲ್ಲಿ ಒಂದು ಕೃತಕ ವಿವಾದವನ್ನು ವಿಶ್ವರೂಪಂಗಂಗಾಗಿ ಸೃಷ್ಟಿಸಲಾಯಿತು. ಈ ಕೃತಕ ವಿವಾದದ ನಿರ್ದೇಶನದ ಹೊಣೆಯನ್ನು ತಮಿಳುನಾಡಿನ ಜಯಲಲಿತಾ ಹೊತ್ತುಕೊಂಡರು. ಡಿಟಿಎಚ್‌ನಿಂದ ಈ ವಿವಾದ ಮೊದಲು ಆರಂಭವಾಯಿತು. ಪ್ರಸಾರ ಹಕ್ಕು ಜಯಲಲಿತಾ ಟಿವಿಗೆ ಸಿಗದೇ ವಿಜಯ್ ಟಿವಿಗೆ ಸಿಕ್ಕಿದಾಕ್ಷಣ, ಜಯಲಲಿತಾ ಹೊರಾಂಗಣ ಚಿತ್ರೀಕರಣವನ್ನು ಆರಂಭಿಸಿದರು. ಭಾರತದ ಶೇ. 00.1ರಷ್ಟಿರುವ ಮುಸ್ಲಿಮರ ಒಂದು ಗುಂಪನ್ನು ಬಳಸಿಕೊಂಡು ಜಯಲಲಿತಾ ಪ್ರತಿಭಟನೆಯನ್ನು ಹಮ್ಮಿಕೊಂಡರು. ಭಾರತದ ಮುಸ್ಲಿಮರು ವಿಶ್ವರೂಪಂನ್ನು ಪ್ರತಿಭಟಿಸುತ್ತಿದ್ದಾರೆ ಎಂಬಂತಹ ವಾತಾವರಣವನ್ನು ಮಾಧ್ಯಮಗಳು ಮುಖಪುಟದಲ್ಲಿ
ನಿರ್ಮಿಸಿದವು. ಈ ಮೂಲಕ ಒಂದು ಸಾಮಾನ್ಯದಲ್ಲಿ ಸಾಮಾನ್ಯವಾಗಿರುವ ಸಿನಿಮಾ(ತಂತ್ರಜ್ಞಾನ ಹೊರತು ಪಡಿಸಿ)ವನ್ನು ಅಭಿವ್ಯಕ್ತಿಯ ಸೋಲು-ಗೆಲುವುಗಳ ಮಾನದಂಡಗಳನ್ನಿಟ್ಟು ವಿಶ್ಲೇಷಣೆ ನಡೆದವು. ಅಭಿವ್ಯಕ್ತಿಯ ದಮನ ಎಂದಾಗ ಮುಸ್ಲಿಮ್ ಮತಾಂಧತೆ ಚರ್ಚೆಗೆ ಬರಲೇಬೇಕಲ್ಲ. ಮುಸ್ಲಿಮರ ಮತಾಂಧತೆ ಮತ್ತೊಮ್ಮೆ ಸುದ್ದಿಗೆ ಬಂದವು. ಕಮಲ್ ‘ನಾನು ನಷ್ಟದಿಂದ ಸರ್ವನಾಶವಾಗುತ್ತೇನೆ...ದೇಶ ಬಿಡುತ್ತೇನೆ’’ ಎಂದು ಅಲವತ್ತುಕೊಂಡರು. ಮಾಧ್ಯಮಗಳು ಕಂಗಾಲಾದವು. ಕಮಲ್‌ನನ್ನು ಸರ್ವನಾಶವಾಗಲು ಖಂಡಿತವಾಗಿಯೂ ಅವರ ಬೆನ್ನಿಗಿರುವವರು ಬಿಡಲಾರರು. ಕಮಲ್ ಸರ್ವನಾಶವಾಗುವಷ್ಟು ದಡ್ಡನಂತೂ ಅಲ್ಲವೇ ಅಲ್ಲ. ಯಾಕೆಂದರೆ, ಕಮಲ್ ಸರ್ವನಾಶವಾಗಬೇಕಾದರೆ ದಶಾವತಾರಂನಲ್ಲೇ ಸರ್ವನಾಶವಾಗಬೇಕಾಗಿತ್ತು. ಚಿತ್ರಮಂದಿರಗಳಿಂದ ಒಂದೇ ವಾರದಲ್ಲಿ ಎತ್ತಂಗಡಿಯಾದ ಹಲವು ಚಿತ್ರಗಳನ್ನು ಪಟ್ಟಿ ಮಾಡಬಹುದಾಗಿದೆ. ಅವರು ಮತ್ತೆ ಮತ್ತೆ ಎದ್ದು ಬಂದಿದ್ದಾರೆ. ಕಮಲ್ ಶೀಘ್ರವೇ ತನ್ನ ಮೆಚ್ಚಿನ ಹಾಲಿವುಡ್‌ನ ಜೊತೆಗೂಡುವ ದಿನ ಹತ್ತಿರವಾಗಲಿದೆ ಎನ್ನುವುದರ ಸಂಕೇತವೇ ಕಮಲ್ ಅವರ ವಿಶ್ವ ವಿರೂಪಂ.

 ಕಮಲ್ ‘ವಿಶ್ವ ರೂಪಂ’ನಲ್ಲಿ ಭಾರತೀಯ, ದೇಶಭಕ್ತ ಮುಸಲ್ಮಾನನಾಗಿ ನಟಿಸಿದ್ದಾರೆ. ನಾನು ಭಾರತೀಯ ಮುಸ್ಲಿಮರನ್ನು ಕೆಟ್ಟದಾಗಿ ಬಿಂಬಿಸಿಲ್ಲ ಎಂದಿದ್ದಾರೆ. ಕಮಲ್‌ನ ಪ್ರಕಾರ ಭಾರತೀಯ ಮುಸ್ಲಿಮರು ಒಳ್ಳೆಯವರಾಗಿ ಗುರುತಿಸಲ್ಪಡಬೇಕಾದರೆ ಒಂದೋ ಕಥಕ್ ಕಲಿಯಬೇಕು. ಇಲ್ಲವೇ ರಾ ಏಜೆಂಟ್ ಆಗಬೇಕು. ಇದರ ಜೊತೆ ಜೊತೆಗೆ ನಮಾಝ್ ಮಾಡಿದರೆ ಅದು ಸಹಿಸಲಾರ್ಹ.
***

‘ದಿ ಬೀಸ್ಟ್’ ಚಿತ್ರವನ್ನು ನೀವೂ ನೋಡಿರಬಹುದು. 80ರ ದಶಕದಲ್ಲಿ ಅಫ್ಘಾನಿಸ್ತಾನದ ಫಶ್ತೂನ್ ಗ್ರಾಮದಲ್ಲಿ ರಶ್ಯನ್ನರ ಜೊತೆಗೆ ಹೋರಾಟ ನಡೆಸಿದ ಯುವ ಮುಜಾಹಿದೀನ್‌ಗಳ ಹೃದಯವಿದ್ರಾವಕ ಕತೆ ಅದು. ಈ ಚಿತ್ರ ಹೊರ ಬಂದುದು 1988ರಲ್ಲಿ. ಚಿತ್ರವನ್ನು ನಿರ್ದೇಶಿಸಿದವರು ಕೆವಿನ್ ರೆನಾಲ್ಡ್ಸ್.(ರಾಬಿನ್ ಹುಡ್, ವಾಟರ್‌ವರ್ಲ್ಡ್‌ನಂತಹ ಅದ್ಭುತ ಚಿತ್ರಗಳನ್ನು ಈತ ನಿರ್ದೇಶಿಸಿದ್ದಾರೆ). ‘ದಿ ಬೀಸ್ಟ್’ ಚಿತ್ರ ಒಂದು ರಷ್ಯನ್ನರ ಟ್ಯಾಂಕರ್‌ನ್ನು ಹೊಡೆದುರುಳಿಸಲು ಅಫ್ಘಾನಿಸ್ತಾನದ ಫಶ್ತೂನರು ನಡೆಸುವ ಹೃದಯವಿದ್ರಾವಕ. ಬರೇ ಒಂದು ಕೋವಿಯಂತಹ ದುರ್ಬಲ ಆಯುಧವನ್ನು ಇಟ್ಟುಕೊಂಡು, ಮುಜಾಹಿದೀನ್‌ಗಳ ಯುವ ನಾಯಕ ತನ್ನ ತಂಡದೊಂದಿಗೆ ಗೆರಿಲ್ಲಾ ಯುದ್ಧದ ಮೂಲಕ ರಶ್ಯನ್ನರ ಟ್ಯಾಂಕ್‌ನ್ನು ಎದುರಿಸುತ್ತಾನೆ. ಟ್ಯಾಂಕರ್ ಅಫ್ಘಾನ್‌ನ್ನು ಕ್ರೂರವಾಗಿ ಧ್ವಂಸ ಮಾಡುತ್ತಿರುವಾಗ, ಆ ಟ್ಯಾಂಕರ್‌ನಲ್ಲಿದ್ದ ಒಬ್ಬ ಯೋಧ, ಅದನ್ನು ಪ್ರತಿಭಟಿಸುತ್ತಾನೆ. ಮಾತ್ರವಲ್ಲ, ಅಲ್ಲಿಂದ ಹೊರ ಹೋಗಿ ಮುಜಾಹಿದೀನ್‌ಗಳ ಜೊತೆ ನಿಂತು ರಷ್ಯನ್ ಸೈನಿಕರ ವಿರುದ್ಧ ಹೋರಾಡುತ್ತಾನೆ.

ಅಫ್ಘಾನಿಸ್ತಾನದ ಬರ್ಬರ ಸ್ಥಿತಿಯನ್ನು, ದುರಂತವನ್ನು, ಸೈನಿಕರ ಕ್ರೌರ್ಯವನ್ನು ಹೃದಯದ ಕಣ್ಣಿನ ಮೂಲಕ ನೋಡಿ, ‘ದಿ ಬೀಸ್ಟ್’ ಚಿತ್ರವನ್ನು ಕೆವಿನ್ ನಿರ್ದೇಶಿಸಿದ್ದಾನೆ. ಅಫ್ಘಾನಿಸ್ತಾನದ ಹೃದಯವನ್ನು ಯುದ್ಧವೆನ್ನುವ ಮಾರಿ ಹೇಗೆ ಕೊರೆದು ಹಾಕುತ್ತಿದೆ ಎನ್ನುವುದನ್ನು ಈ ಚಿತ್ರ ಹೃದಯಂಗಮವಾಗಿ ಕಟ್ಟಿಕೊಡುತ್ತದೆ. ಒಂದಾನೊಂದು ಕಾಲದಲ್ಲಿ ಅಮೆರಿಕವೆನ್ನುವ ಅಮೆರಿಕವೇ ತಾಲಿಬಾನ್‌ಗಳನ್ನು ಸ್ವಾತಂತ್ರ ಯೋಧರು ಎಂದು ಕರೆದಿತ್ತು. ಯಾಕೆಂದರೆ ತಾಲಿಬಾನರನ್ನು ಸೃಷ್ಟಿಸಿದ್ದೇ ಅಮೆರಿಕ. ರಷ್ಯನ್ನರ ವಿರುದ್ಧ ಅಫ್ಘಾನಿಸ್ತಾನ ಹೋರಾಟ ನಡೆಸಿದಾಗ ಅದನ್ನು ಮೆಚ್ಚಿದ ಅಮೆರಿಕವೇ ಇಂದು ವಿಶ್ವರೂಪಂನಲ್ಲಿ, ತನ್ನ ವಿರುದ್ಧದ ಅಫ್ಘಾನಿಗಳ ಹೋರಾಟವನ್ನು, ಭಯೋತ್ಪಾದಕರ ಕ್ರೌರ್ಯವಾಗಿ ಬಿಂಬಿಸಿದೆ. ಪರೋಕ್ಷವಾಗಿ ಅದಕ್ಕೆ ಇಸ್ಲಾಮನ್ನು ಹೊಣೆ ಮಾಡಿದೆ. ತಾನು ಮಾತ್ರ ಸಂಪೂರ್ಣ ಹೊಣೆ ಮುಕ್ತನಾಗಿದೆ.
ದಿ ಬೀಸ್ಟ್ ಚಿತ್ರವನ್ನು ನೋಡಿದ ಬಳಿಕ ನೀವು ‘ವಿಶ್ವರೂಪಂ’ನ್ನು ನೋಡಿದರೆ ಕಮಲ್ ಹಾಸ್ಯಕ್ಕೂ, ಅನುಕಂಪಕ್ಕೂ ಯೋಗ್ಯರಾಗುತ್ತಾರೆ.

2 comments:

  1. >>ಒಬ್ಬ ತನ್ನ ಕಮರ್ಶಿಯಲ್ ಚಿತ್ರವನ್ನು ಯಶಸ್ವಿಗೊಳಿಸಲು ಬೇಕಾಬಿಟ್ಟಿಯಾಗಿ ಅಶ್ಲೀಲ ದೃಶ್ಯಗಳನ್ನು ಹಾಕುವುದು ಹೇಗೆ ಅಭಿವ್ಯಕ್ತಿ ಸ್ವಾತಂತ್ರದ ವ್ಯಾಪ್ತಿಯಲ್ಲಿ ಬರುವುದಿಲ್ಲವೋ ಹಾಗೆಯೇ, ವಿವಾದ ಮಾಡುವುದಕ್ಕಾಗಿಯೇ ಕೆಲವೊಮ್ಮೆ ಹಿಂಸೆ, ಕ್ರೌರ್ಯ, ವಿದ್ವೇಷಗಳನ್ನು ತುರುಕುವುದೂ ಅಭಿವ್ಯಕ್ತಿ ಸ್ವಾತಂತ್ರದ ವ್ಯಾಪ್ತಿಯಲ್ಲಿ ಬರುವುದಿಲ್ಲ.<<
    ತಪ್ಪು!! ಸೊಲ್ಲೀಳಿಗೆ(ಅಭಿವ್ಯಕ್ತಿ ಸ್ವಾತಂತ್ರ) ಒಂದು ಚಿತ್ರದಲ್ಲಿರುವ ಅಶ್ಲೀಲ, ಕ್ರವ್ರಿಯ, ವಿದ್ವೇಶಗಳಿಂದಿಡಿದು ಕೋರ್ಟು, ಸೇನೆ, ಸರಕಾರದ, ಮತಗಳ ತೆಗಳಿಕೆಯವರೆಗೆ ವಿಸ್ತಾರವಾದುದ್ದು! ಸೊಲ್ಲೀಳಿಗೆಗೆ ಮಿತಿಯಿಲ್ಲ! ಮಿತಿಯಿದ್ದರೆ ಅದು ಸೊಲ್ಲೀಳಿಗೆಯಲ್ಲ!!
    ಇರಾಕ್ ಆಪ್ಗನಿಸ್ತಾನಗಳಲ್ಲಿ ಅಮೇರಿಕಾ ನಡೆಸುತ್ತಿರುವುದು 'ಅನ್ಯಾಯ' ಎಂದುಕೊಂಡಿರುವ ನಿಮ್ಮದೂ ಸರಳ ಚಿಂತನೆಯೇ. ಎಮ್. ಓಸ್‌ಬೋರ್ನ್ ಮತ್ತು ಲೀ ಅಂದರೆ ಅಮೇರಿಕಾವಲ್ಲ. ಇವರುಗಳ ಜೊತೆ ಕಮಲ್ ಮಾತಾಡಿದ್ದಾರೆ ಅಂದರೆ ಅಮೇರಿಕಾದ ಜೊತೆ ಸೇರಿ ಹೂಟ ಹೂಡಿದ್ದಾರೆ ಅಂತಲ್ಲ!! ಮಿಗಿಲಾಗಿ, ಅಮೇರಿಕಾದಲ್ಲಿ ನೆಲೆಸಿರುವ ಬಾಲಿವುಡ್ನಲ್ಲಿ ಅಮೇರಿಕಾದ ಯುದ್ದನೀತಿ ವಿರೋದಿಗಳೇ ಹೆಚ್ಚು!

    ReplyDelete
  2. ಬಶೀರ್, ಗುಜರಿಯಂಗಡಿಯು ಪ್ರಾರಂಭವಾದ ಮೊದಮೊದಲಲ್ಲಿ ನಮ್ಮಲ್ಲಿ ನಿಮ್ಮ ಬಗ್ಗೆ "ವಿಷಯಗಳನ್ನು ಸಾವಧಾನದಿಂದ ಕೂಲಂಕುಶವಾಗಿ ನೋಡುವ ಬದ್ಧತೆ ಮತ್ತು ತಾಕತ್ತು -ಎರಡೂ ಇರುವ ಸಮಚಿತ್ತದ ವ್ಯಕ್ತಿ" ಎಂದು ಭರವಸೆಯಾಗಿತ್ತು. ಈಗೀಗ ನಿಮ್ಮ ಲೇಖನಗಳು ಮತ್ತು ಕ್ರಿಯೆಗಳು ತಳೆಯುತ್ತಿರುವ ಏಕಪ‍‍ಕ್ಷೀಯ ನಿಲುವುಗಳನ್ನು ಕಂಡಾಗ ನಮಗೆ ಬರೀ ಭ್ರಮನಿರಸನವಾದಂತೆ ಅನಿಸುತ್ತಿದೆ. ನೀವು ಲಂಕೇಶರ ಉಡಾಫೆ, ಹುಂಬತನ, ಏಕಪ‍‍ಕ್ಷೀಯತೆಗಳನ್ನ ಆದರ್ಶವಾಗಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದೀರೇನೋ... ಆದರೆ ನಿಮ್ಮ ಲೇಖನಗಳು ಪ್ರತಾಪಸಿಂಹರ ಮುಸ್ಲಿಂ ಅವತರಣಿಕೆಯಾಗಿ ಮಾತ್ರ ಕಾಣಿಸುತ್ತವೆ; ದೂರದರ್ಶಿತ್ವ ಇಲ್ಲವಾಗಿದೆ. ಈ ತರಹದ ಏಕಪ‍‍ಕ್ಷೀಯತೆಯಿಂದ ಮುಸ್ಲಿಮರನ್ನ/ಶೋಷಿತರನ್ನ ಮೇಲೆತ್ತಲು ಸಾಧ್ಯ ಅಂತ ನೀವು ಭಾವಿಸಿದ್ದರೆ ಅದಕ್ಕಿಂತ ಬಾಲಿಶತನ, ದಡ್ಡತನ ಬೇರೆಯಿಲ್ಲ.

    ಈ ಲೇಖನದ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ನೋಡಿ:

    ೧)ನೀವು ಹೇಳಿದ್ದೀರಿ: "ಕಮಲ್‌ನ ತಂದೆ ...ತಮಿಳುನಾಡಿನಲ್ಲಿ ಬ್ರಾಹ್ಮಣರು ಎದುರಿಸಿದ ದ್ರಾವಿಡ ಚಳವಳಿ, ಪೆರಿಯಾರ್ ಬೆಂಬಲಿಗರಿಂದ ನಡೆದ ಪ್ರತಿಭಟನೆಗಳು ಪರೋಕ್ಷವಾಗಿ ಆ ಚಿತ್ರದಲ್ಲಿ ತನ್ನ ಪರಿಣಾಮವನ್ನು ಬೀರಿರುವುದರಲ್ಲಿ ಯಾವ ಸಂಶಯವೂ ಇಲ್ಲ......ಇದೆಲ್ಲದರ ಅರ್ಥ, ಭಾರತವನ್ನು ಬಿಡಲು ವರ್ಷಗಳ ಹಿಂದೆಯೇ ಕಮಲ್ ನಿರ್ಧರಿಸಿದ್ದಾರೆ. ಮತ್ತು ವಿಶ್ವರೂಪಂ ಚಿತ್ರದ ಮೂಲಕ ಅದಕ್ಕೊಂದು ವಾತಾವರಣವನ್ನು, ವೇದಿಕೆಯನ್ನು ನಿರ್ಮಿಸಿದ್ದಾರೆ."
    ಚಿತ್ರ ನೋಡಿದಾಗಲಂತೂ ನನಗೆ ಇದಕ್ಕೆ ತದ್ವಿರುದ್ಧವಾಗಿಯೇ ಅನ್ನಿಸಿತು. ಪುರಾವೆಗಳಿಲ್ಲದ ಇಂತಹ 'ಕೇವಲ ವೈಯಕ್ತಿಕ ಅನುಮಾನ'ಗಳನ್ನ ಸಾರ್ವಕಾಲಿಕ ಸತ್ಯಗಳಂತೆ ಘಂಟಾಘೋಷವಾಗಿ ಕೂಗುವುದು, ಚಿಂತನಾಶಕ್ತಿಯಿಲ್ಲದವರನ್ನು ದಾರಿತಪ್ಪಿಸುವ, ಒಂದು ವರ್ಗವನ್ನು ತುಷ್ಟೀಕರಿಸುವ, ಅಭದ್ರ ಮನಸ್ಥಿತಿಯ ಬಡಬಡಿಕೆಗಳಂತೆಯೂ ಕಾಣುತ್ತಿವೆ. ("ಹೌದು, ನಾನು ಅಭದ್ರನೇ; -ಮುಸ್ಲಿಮರೆಲ್ಲರೂ ಕೂಡಾ!" ಅಂತೇನಾದರೂ ಅನ್ನುವಿರಾದರೆ ನಿಮ್ಮೊಂದಿಗೆ ಒಂದು ಸಮುದಾಯವನ್ನೂ ಅನಾವಶ್ಯಕ ದೈನ್ಯಕ್ಕೆಳೆದ ಅಪರಾಧಿಗಳಾಗುತ್ತೀರಷ್ಟೇ.)

    ೨)ನಿಮ್ಮ ಅಂಬೋಣ: "ಕಮಲ್‌ನ ಪ್ರಕಾರ ಭಾರತೀಯ ಮುಸ್ಲಿಮರು ಒಳ್ಳೆಯವರಾಗಿ ಗುರುತಿಸಲ್ಪಡಬೇಕಾದರೆ ಒಂದೋ ಕಥಕ್ ಕಲಿಯಬೇಕು. ಇಲ್ಲವೇ ರಾ ಏಜೆಂಟ್ ಆಗಬೇಕು. ಇದರ ಜೊತೆ ಜೊತೆಗೆ ನಮಾಝ್ ಮಾಡಿದರೆ ಅದು ಸಹಿಸಲಾರ್ಹ."
    -ಹಾಸ್ಯಾಸ್ಪದ ತೀರ್ಪು ಇದು. ರಾ ಏಜೆಂಟನಾಗಿರುವುದು ಅವನ ಆಯ್ಕೆಯಷ್ಟೇ . ಮುಸ್ಲಿಮರೆಲ್ಲ ರಾ ಎಜೆಂಟರಾಗಿ, ಕಥಕ್ ಕಲಿಯಿರಿ ಅಂತೆಲ್ಲಿ ಹೇಳಿದ್ದಾನೆ? 'ರಾ ಏಜೆಂಟನಾದರೂ - ಕಥಕ್ ಕಲಿತರೂ ತನ್ನ ಧರ್ಮಕ್ಕೆ ಚ್ಯುತಿಯಾಗದು" ಅಂತನ್ನುವ ಉದಾರಿ. ಸಾಂಧರ್ಭಿಕವಾಗಿ ಕಥಕ್ ಮಾಸ್ತರನ ವೇಷದಲ್ಲಿದ್ದಾಗ ತಾನು ಚಿಕನ್ ತಿನ್ನಲಾರ; -ತನ್ನ ಪ್ರೀತಿಯ ಹೆಂಡತಿಗಾಗಿ ಚಿಕನ್ ತಯಾರಿಸದೆಯೂ ಇರಲಾರ. ಭಯೋತ್ಪಾದನೆಯ ಅತಿರೇಕವನ್ನ್ ತಡೆಯಲಿಕ್ಕೆ ಹೋಗುವುದು ದೇಶಭಕ್ತಿಗಿಂತಲೂ ಹೆಚ್ಚಾಗಿ ಮಾನವೀಯತೆಯ ಪರವಾಗಿ ಆ ಸಂದರ್ಭದಲ್ಲಿ ಅನಿವಾರ್ಯ ಆಯ್ಕೆಯಾಗಿ ಮೂಡಿಬರುತ್ತದೆಯಷ್ಟೇ. ಸರಿಯಾಗಿ ನೋಡಿ, ಚಿತ್ರದಲ್ಲಿ ನಾಯಕನು ಎಂಥ ಸಂದರ್ಭದಲ್ಲೂ ನಮಾಝ್ ಬಿಡದ ಧಾರ್ಮಿಕ ಕಟ್ಟಾಳು.

    ೩) "ಒಂದಾನೊಂದು ಕಾಲದಲ್ಲಿ ಅಮೆರಿಕವೆನ್ನುವ ಅಮೆರಿಕವೇ ತಾಲಿಬಾನ್‌ಗಳನ್ನು ಸ್ವಾತಂತ್ರ ಯೋಧರು ಎಂದು ಕರೆದಿತ್ತು. ಯಾಕೆಂದರೆ ತಾಲಿಬಾನರನ್ನು ಸೃಷ್ಟಿಸಿದ್ದೇ ಅಮೆರಿಕ. ರಷ್ಯನ್ನರ ವಿರುದ್ಧ ಅಫ್ಘಾನಿಸ್ತಾನ ಹೋರಾಟ ನಡೆಸಿದಾಗ ಅದನ್ನು ಮೆಚ್ಚಿದ ಅಮೆರಿಕವೇ ಇಂದು ವಿಶ್ವರೂಪಂನಲ್ಲಿ, ತನ್ನ ವಿರುದ್ಧದ ಅಫ್ಘಾನಿಗಳ ಹೋರಾಟವನ್ನು, ಭಯೋತ್ಪಾದಕರ ಕ್ರೌರ್ಯವಾಗಿ ಬಿಂಬಿಸಿದೆ." --ಅಮೆರಿಕವೇ ಬಿಂಬಿಸಿದೆ ಅನ್ನುವುದು ಇತ್ಯಾದಿ ಎಲ್ಲಾ ಓಕೆ, ಆದರೆ ವಿಶ್ವರೂಪಂನಲ್ಲಿ ಅಮೆರಿಕನ್ ಹಿತಾಸಕ್ತಿಗಳೇ ಬಂದು ಬಿಂಬಿಸಿವೆ ಅನ್ನುವುದು ಮಾತ್ರಾ ಪುರಾವೆಯಿಲ್ಲದ ಹುಚ್ಚುಹುಚ್ಚಾದ ಬಡಬಡಿಕೆ. ಇದೇ ರೀತಿ ವಾದಿಸುವುದೇ ಸಿಂಧುವಾಗುತ್ತದೆ ಅಂತಾದರೆ ಯಾವುದೋ ಕುಗ್ರಾಮದ ನನ್ನ ಹಿಂದೆಯೂ ಅಮೇರಿಕನ್ ಹಿತಾಸಕ್ತಿಗಳೇ ಚಿತಾವಣೆ ನಡೆಸಿ ಈ ಪ್ರತಿಕ್ರಿಯೆಯನ್ನ ಬರೆಸಿವೆ ಅಂತಲೂ, ಅಲ್-ಖೈದಾವೇ ನಿಮ್ಮ ಹಿಂದೆ ಇವೆಯಂತಲೂ ವಿತಂಡವಾದ ಹೂಡಬಹುದು.

    ಅನಿವಾರ್ಯವಾಗಿ ಆತ್ಮಹತ್ಯಾ ಬಾಂಬರ್ ಆಗುವ ಬಾಲಕ ಇನ್ನೂ ಉಯ್ಯಾಲೆಯಲ್ಲಿ ಆಡಲು ಬಯಸುವಂಥ ಮುಗ್ಢನಾಗಿರುವ, ಅಮೇರಿಕದ ದಾಳಿಗಳಲ್ಲಿ ಒಬ್ಬ ಉಗ್ರನಿಗೆ ಹತ್ತು ನಾಗರೀಕರು ಅನಾವಶ್ಯವಾಗಿ ಬಲಿಯಾಗುವ, ನಾಯಕ "ತಾನೇ ವಿಲನ್ -ತನ್ನ ಪಾಪಗಳೇ ಅಗಣಿತ -ತನಗೆಲ್ಲೂ ಕ್ಷಮೆಯಿಲ್ಲ" ಎಂದೆಲ್ಲಾ ಹಲಬುವಂತಹ ದೃಷ್ಯಗಳು, ಈ ತರಹದ ಹತ್ತಾರು ಮಾನವೀಯ ಚಿತ್ರಣಗಳು ನಿಮ್ಮ ಕಣ್ಣಿಗೆ ಬೀಳಲಿಲ್ಲ. ಬದಲಿಗೆ, ಚಿತ್ರವನ್ನು ಸರಿಯಾಗಿ - ಇಡಿಯಾಗಿ ನೋಡದೇ, ಅಸಹನೆಯಿಂದ ಪೂರ್ವಾಗ್ರಹಗಳಿಂದ ನೋಡುವ ಮೂಲಕ, ಹೇಗೆಲ್ಲಾ ತಪ್ಪು ತಪ್ಪಾಗಿ ಅರ್ಥೈಸಲು ಬರುತ್ತೆ ಅಂತ ತೋರಿಸಿದ್ದೀರ ಅಷ್ಟೆ.

    ನೀವು ಹೀಗೆ ಪ್ರತಾಪಸಿಂಹರ ಮಾದರಿಯ ವಾದಗಳನ್ನು ಮಾಡುತ್ತಾ ಇರುವುದು ವಿಚಾರಶಕ್ತಿಯುಳ್ಳವರೇ ಆದ ನಿಮ್ಮಿಂದ ಆಗಬಹುದಾದ ಎಷ್ಟೊ ಅರ್ಥಪೂರ್ಣ ಕೆಲಸಗಳನ್ನ ಅಸಾಧ್ಯವಾಗಿಸುತ್ತಿದೆಯಷ್ಟೆ. ~~@#@$

    ReplyDelete