Tuesday, February 12, 2013

ಸಿಹಿ ಸುದ್ದಿ.....!

 
ಇತ್ತೀಚಿಗೆ ಸಾವು
ಸಂಭ್ರಮದ ವಿಷಯವಾಗಿದೆ...
ಸಿಹಿ ತಿಂಡಿಯ ಅಂಗಡಿಗಳು
ಸಾಲು ಸಾಲಾಗಿ ತೆರೆಯುತ್ತಿವೆ....

ದೇಶ ಸೂತಕದ ಮನೆಯಾಗಿದೆ
ತಿಥಿಯೂಟ ಹಬ್ಬದ ಸಂಭ್ರಮ
ಪಡೆದಿದೆ....

ಮನರಂಜನೆಗಳಿಗೆ ಸಿನಿಮ ಮನೆಗಳು
ಟಿವಿ ಪೆಟ್ಟಿಗೆಗಳು ಸಾಕಾಗುತ್ತಿಲ್ಲ.
ನಟನೆಗಳನ್ನು ನೋಡಿ ಮನಸ್ಸುಗಳಿಗೆ
ಆಲಸ್ಯ ಹಿಡಿದು ಹೋಗಿದೆ...
ಅವಕ್ಕೆ ನಿಜ ಮನುಷ್ಯನೊಬ್ಬ
ವಿಲ ವಿಲ ಒದ್ದಾಡೂದು ನೋಡಬೇಕಾಗಿದೆ...

ಹೆಣ್ಣೊಬ್ಬಳ ಅತ್ಯಾಚಾರದ ಸುದ್ದಿ
ಎಷ್ಟು ರಸವತ್ತಾಗಿರುತ್ತದೆಯೆಂದರೆ
ವರದಿಗಾರ ಈಗಷ್ಟೇ ಒಂದು ಹೆಣ್ಣನ್ನು
ಕೊಂದು ಅದರ ರಕ್ತದಿಂದ ಸುದ್ದಿಯನ್ನು
ಹೀರಿ ಕೊರೆಯುತ್ತಿದ್ದಾನೆ
ಯಾಕೆಂದರೆ ಸುದ್ದಿಯ ಗುರಿ
ಮನ ರಂಜಿಸೋದು


ಮುದ್ರಣ ಮಶೀನ್ ಗಳೆಲ್ಲ
ರುದ್ರವರ್ಣ ತಾಳಿವೆ
ಸುರಿದ
ಷ್ಟೂ ಬಣ್ಣಗಳ 
ದಾಹ ತೀವ್ರವಾಗಿದೆ
 
ಇಂಕುಗಳ ಬದಲಿಗೆ
ರಕ್ತವನ್ನೇ ಪೂರೈಸೂದಕ್ಕೆ
ಜನರನ್ನು ನೇಮಿಸಲಾಗಿದೆ...
ಇಷ್ಟಕ್ಕೂ
ಬಣ್ಣದ ಇಂಕುಗಳು ಮಾರುಕಟ್ಟೆಯಲ್ಲಿ
ಭಾರೀ ದುಬಾರಿ...ರಕ್ತ ಬಲು ಅಗ್ಗ!
ಪತ್ರಿಕೆಗಳು ಬಣ್ಣ ಬಣ್ಣದ
ಪುಟಗಳಾಗಿ ಸೂಳೆಯರಂತೆ
ಮೈ ಬಳುಕಿಸುತ್ತಿವೆ

ದೀಪಾವಳಿಗೆ ಹಣತೆಯ
ಬೆಳಕು ಸಾಕಾಗೋದಿಲ್ಲ
ನೆರೆಮನೆಗೆ ಬಿದ್ಧ ಬೆಂಕಿಯಿಂದ
ಆಚರಿಸುವ ಹಬ್ಬಕ್ಕೆ
ನಮ್ಮ ಮನದೊಳಗೆ
ಪುಳಕ 
ಆ ಬೆಳಗಿಗೆ ನಮ್ಮ ಕಣ್ಣು ಹೃದಯ
ಧಗ ಧಗ ಉರಿದರೆ
ಹಬ್ಬಕ್ಕೊಂದು ಮಜಾ...

ದೇಶ ಪ್ರೇಮಕ್ಕೆ ಒಂದಿಷ್ಟು
ರಕ್ತ ಮೆತ್ತಿದರೇನೆ
ರುಚಿ ಜಾಸ್ತಿ....

ಇತ್ತೀಚೆಗೆ ಸಾವು
ಸಂಭ್ರಮದ ವಿಷಯವಾಗಿದೆ...
ಸಿಹಿ ತಿಂಡಿಯ ಅಂಗಡಿಗಳು
ಸಾಲು ಸಾಲಾಗಿ ತೆರೆಯುತ್ತಿವೆ....

No comments:

Post a Comment