Wednesday, February 20, 2013

ಕಾರ್ತಿಕದ ಕತ್ತಲಲಿ ಆಕಾಶ ದೀಪ

ವಿಜಾಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ ಕೊ ಚೆನ್ನಬಸಪ್ಪ ತನ್ನ ಮಾತಿನಿಂದ ನೆರೆದ ಜನರನ್ನು ದಂಗು ಬಡಿಸಿದ್ದಾರೆ. ಈ ಪ್ರಾಯದಲ್ಲೂ ಅವರ ಸತ್ಯದ ಕುರಿತ ಬದ್ಧತೆ ಮುಕ್ಕಾಗಿಲ್ಲ. ನಿಷ್ಟುರತೆಯ ಅಲಗು ಮೊಂಡಾಗಿಲ್ಲ. ಅವರ ಮಾತಿನ ಆಯ್ದ ಭಾಗಗಳು ಇಲ್ಲಿವೆ.

ಈ ದೇಶ ಈಗಾಗಲೇ ಸಹಿಸಲಾರದಷ್ಟು ಹದಗೆಟ್ಟು, ನೈತಿಕ ದೃಷ್ಟಿಯಿಂದ ಅಧಃ ಪಾತಾಳಕ್ಕೆ ಕುಸಿದಿದೆ. ಎಷ್ಟೇ ಆರ್ಥಿಕಾಭಿವೃದ್ಧಿ ಆಗಿದ್ದರೂ ಅದು ನೈತಿಕ ಅಧಃಪತನದ ಕೊರತೆಯನ್ನು ತುಂಬಲಾರದು. ಈ ಅವನತಿಗೆ ಎರಡು ಘೋರ ಅಪಾಯಗಳಿವೆ. ಒಂದು ಜಾತೀಯತೆ, ಇನ್ನೊಂದು ಭ್ರಷ್ಟಾಚಾರ. ಇವುಗಳ ಅಪಾಯದಿಂದ ಪಾರಾಗದೆ ಈ ದೇಶ ಉಳಿಯಲಾರದು. ಈ ಎರಡೂ ಅಪಾಯಗಳು ಘೋರ ವಿಷ ಸರ್ಪಗಳಿದ್ದಂತೆ. ಒಂದು ನಾಗರಹಾವು ಇನ್ನೊಂದು ಉರಿಮಂಡಲ. ನಾಗರಹಾವು ಭ್ರಷ್ಟಾಚಾರ, ಜಾತೀಯತೆ- ಉರಿಮಂಡಲ. ಇವುಗಳಲ್ಲಿ ಯಾವುದು ಹೆಚ್ಚು ಅಪಾಯಕಾರಿ? ಜಾತೀಯತೆ ಉರಿಮಂಡಲದ ವಿಷ ಹೆಚ್ಚು ಅಪಾಯಕಾರಿ. ಹಾಗೆಂದು ವಿಷ ವೈದ್ಯ ತಜ್ಞರು ಹೇಳುತ್ತಾರೆ. ಈ ಜಾತೀಯತೆಯ ವಿಷ ಸರ್ಪಕ್ಕೆ ವೊದಲು ಬಲಿಯಾದವರು ಬೌದ್ಧರು.
 

 ಚಾತುರ್ವರ್ಣ ಪದ್ಧತಿಯಲ್ಲಿ ಸಂಸ್ಥಾಪಕರೂ, ಸಮಾಜದಲ್ಲಿ ಮೇಲು-ಕೀಳುಗಳ ಪ್ರತಿಪಾದಕರೂ ಆದ ಸನಾತನಿಗಳು ಬೌದ್ಧರನ್ನು ದಯೆ, ದಾಕ್ಷಿಣ್ಯ, ಕರುಣೆ, ಮಾನವೀಯತೆ ... ಕಿಂಚಿತ್ತೂ ಇಲ್ಲದೆ ಕಗ್ಗೊಲೆ ಮಾಡಿ ಈ ದೇಶದಿಂದಲೆ ಅವರನ್ನು ಓಡಿಸಿದರು. ಓಡಿಸಲಾಗದೆ ಇಲ್ಲಿ ಉಳಿದಿದ್ದ ಸಹಸ್ರಾರು ಬೌದ್ಧ ಭಿಕ್ಷುಗಳನ್ನು, ಸನ್ಯಾಸಿಗಳನ್ನು ಗುಹೆಗಳಲ್ಲಿದ್ದು ಧ್ಯಾನ, ತಪಸ್ಸು, ಧರ್ಮ ಸಾಧನೆ ಮಾಡುತ್ತಿದ್ದವರನ್ನು ಸಜೀವ ದಹನ ಮಾಡಿದರು.

ಅಜಂತಾ ಭೌದ್ಧ ವಿಹಾರಗಳಲ್ಲಿ ಧ್ಯಾನಮಗ್ನರಾಗಿದ್ದ ಬೌದ್ಧ ಸನ್ಯಾಸಿಗಳನ್ನು ಸಜೀವ ದಹನ ಮಾಡಿ, ಗುಹೆಯ ಬಾಗಿಲಿಗೆ ಬಂಡೆ ಜಡಿದು, ಕಳ್ಳೆಯನ್ನು ಮುಚ್ಚಿ ಅವುಗಳು ಯಾರಿಗೂ ಕಾಣದಂತೆ ಮಾಡಿದರು. ಕ್ರಿ.ಶ. ಐದು ಆರನೆ ಶತಮಾನದಲ್ಲಿ ಕಣ್ಮರೆ ಮಾಡಿದ್ದ ಈ ಬೌದ್ಧ ವಿಹಾರಗಳು ಕ್ರಿ.ಶ.19ನೆ ಶತಮಾನದಲ್ಲಿ ಆಕಸ್ಮಿಕವಾಗಿ ಪತ್ತೆಯಾದವು! ಅವುಗಳ ಬಾಗಿಲು ತೆಗೆದು ಒಳ ಹೊಕ್ಕು ನೋಡಿದಾಗ ಆ ಗುಹೆಗಳ ಮಾಳಿಗೆ, ಗೋಡೆಗಳು ಹತ್ತಿ ಉರಿದ ಬೆಂಕಿಯ ಕಾಡಿಗೆಯ ಕಪ್ಪು ಇನ್ನೂ ದಟ್ಟವಾಗಿ ಮೆತ್ತಿದ್ದು ಕಾಣುತ್ತಿತ್ತು.

ಸನ್ಯಾಸಿಗಳನ್ನು ಕೊಂದು ನಿರ್ನಾಮ ಮಾಡಿದಂತೆ ನಿರ್ನಾಮ ಮಾಡಲಾಗದ ಬೌದ್ಧ ಚೈತ್ಯಾಲಯಗಳನ್ನು ವೈಷ್ಣವ ಮತ್ತು ಶೈವ ದೇವಾಲಯಗಳನ್ನಾಗಿ  ಪರಿವರ್ತಿಸಿದರು ಈ ಸನಾತನಿಗಳು. ಅದಕ್ಕೊಂದು ಪ್ರತ್ಯಕ್ಷ ನಿದರ್ಶನ ಇಂದಿನ ಒಡಿಶಾ ರಾಜ್ಯದಲ್ಲಿರುವ ಪೂರಿ ಜಗನ್ನಾಥ ದೇವಾಲಯ. ಇಂಥ ಉದಾಹರಣೆಗಳು ಭಾರತದಲ್ಲಿ ನೂರಾರು ಇವೆ. ಇಷ್ಟೆಲ್ಲ ಅನಾಹುತ ಮಾಡಿದರೂ, ಮಾರಣ ಹೋಮ ಮಾಡಿದರೂ, ಎಷ್ಟೋ ಚೈತ್ಯಾಲಯಗಳನ್ನು ಧ್ವಂಸ ಮಾಡಿದರೂ,  ದೇವಾಲಯಗಳನ್ನಾಗಿ ಪರಿವರ್ತಿಸಿದರೂ...ಬೌದ್ಧ ಧರ್ಮವನ್ನು ಭಾರತ ದೇಶದಿಂದ ಸಂಪೂರ್ಣ ನಾಶ ಮಾಡಲು ಸಾಧ್ಯವಾಗಲಿಲ್ಲ! ಅದು ಈಗಲೂ ಈ ದೇಶದಲ್ಲಿ ಜೀವಂತವಾಗಿದೆ. ಅದರ ಅನುಯಾಯಿಗಳು ಈಗಲೂ ವೃದ್ಧಿಯಾಗುತ್ತಿದ್ದಾರೆ! ಹಿಂದೂಗಳೆಂಬ ಶೂದ್ರರು, ಅದರಲ್ಲೂ ಅಸ್ಪಶ್ಯರು ಇಂದಿಗೂ ಮತಾಂತರ ಹೊಂದಿ ಬೌದ್ಧರಾಗುತ್ತಿದ್ದಾರೆ.

ನಮ್ಮ ದೇಶದ ಜಾತಿ ದ್ವೇಷದ ಅಗ್ನಿಕುಂಡದಲ್ಲಿ ಬೆಂದು ಹೋಗಿ ಇಡೀ ದೇಶ ಗೋದ್ರೋತ್ತರ ಕಾಳ್ಗಿಚ್ಚಿಗೆ ಬಲಿಯಾಗುವುದಕ್ಕಿಂತ ಬೌದ್ಧರಾಗಿ ಬದುಕುಳಿಯುವುದು ಉತ್ತಮ.ಸನಾತನಿಗಳ ಅಗ್ನಿಕುಂಡಕ್ಕೆ ಹಾನಿಯಾಗುವುದಕ್ಕಿಂತ ಮತಾಂತರದಿಂದ ಈ ದೇಶ ಉಳಿದು ಮಹಾಕವಿ ಕುವೆಂಪು ಹಾರೈಸಿದಂತೆ ಈ ದೇಶ-ಕನಿಷ್ಠ ಈ ಕರ್ನಾಟಕವು ಸರ್ವ ಜನಾಂಗದ ಶಾಂತಿಯತೋಟವಾಗುವಂತೆ ಮಾಡಬೇಕಾಗಿ ನಿಮ್ಮಲ್ಲಿ ಕೈಮುಗಿದು ಬೇಡಿಕೊಳ್ಳುತ್ತೇನೆ.

ಇನ್ನು ಕೊನೆಯದಾಗಿ ಭ್ರಷ್ಟಾಚಾರದ ಅರ್ಬುದ (CANCER) ರೋಗ ನಮ್ಮ ದೇಶಕ್ಕೆ ಅಂಟಿದ ಮಹಾವ್ಯಾಧಿ ಹಿರಿಬೇನೆ. ಅದು ಕಾಳಿಂಗ ಸರ್ಪದ ವಿಷದಂತೆ. ನಾಗರಹಾವಿನ ವಿಷ ಬೇಗನೆ ಏರುತ್ತದೆ. ತಕ್ಕ ಔಷಧ ಕೊಟ್ಟರೆ, ಉರಿಮಂಡಲ ವಿಷಕ್ಕಿಂತ ಬೇಗನೆ ಇಳಿಸಬಹುದು. ಒಂದು ವೇಳೆ ವಿಷ ಇಳಿಯದೆ ಹೋಗಿ ಸತ್ತರೂ ಅವನೊಬ್ಬ ಸಾಯುತ್ತಾನೆ. ಅದೇನು ಅಷ್ಟು ನಷ್ಟವೇನಲ್ಲ. ಆದರೆ ಜಾತೀಯತೆ, ಪರಮತ ದ್ವೇಷವೆಂಬ ವಿಷ ಮನಸ್ಸಿಗೆ ತಗಲುವ ವಿಷ. ಆ ವಿಷ ಹಾವು ಕಚ್ಚಿದವನ ದೇಹದ ಸಾವಿನಿಂದ ಕೊನೆಯಾದೀತು. ಸಾಯದೆ ಉಳಿದವರು ಬದುಕಿರುತ್ತಾರೆ.

ಆದ್ದರಿಂದ ಇಡೀ ಜನಾಂಗದ ಮನಸ್ಸಿನಲ್ಲಿ ವಿಷಬೀಜ ಬಿತ್ತಿದ ಜಾತೀಯತೆಯಿಂದ ವಿಷವಿತರಕ  ವರ್ತಕರನ್ನು  ಜನ ದೂರವಿಡಬೇಕು. ದ್ವೇಷದ ಕಿಚ್ಚನ್ನು ಹಚ್ಚಬೇಡಿ. ಈ ಕರ್ನಾಟಕ,  ಈ ಶಹರ ವಿಜಾಪುರ ಸುಲ್ತಾನರ ಆಳ್ವಿಕೆ ಇದ್ದಾಗ ಸರ್ವಜನಾಂಗದ ಶಾಂತಿಯ ತೋಟವಾಗಿತ್ತು. ಇಲ್ಲಿ ಹಿಂದೂ-ಇಸ್ಲಾಂ ಧರ್ಮಗಳ ಐಕ್ಯಮತದ ಸೂಫಿ ದರ್ಗಾ (ಸಮಾಧಿ) ಈಗಲು ಜೀವಂತ ಇದೆ. ಆ ದರ್ಗಾ ಅನೇಕ ಸಹಸ್ರ ಸಹಸ್ರ ಜನರ ಸಂಕಟ ದುಃಖಕ್ಕೆ ಪರಿಹಾರ ನೀಡುತ್ತಿದೆ. ಆ ಶರಣರನ್ನು ಕರ್ನಾಟಕದ ಸಾಧಾರಣ ಹಿಂದೂ ಜನ ಪೂಜಿಸುತ್ತಿದ್ದಾರೆ. ಅಂಥ ಶಾಂತಿಧಾಮದ ಅಮೃತ ಕಲಶದಲ್ಲಿ ದ್ವೇಷದ ವಿಷದ ಹುಳಿ ಹಿಂಡಬೇಡಿ. “ನರಜನ್ಮ ಬಂದಾಗ ನಾಲಗೆಯು ಇದ್ದಾಗ ರಾಮಾ ಎನಬಾರದೆ?” ಎಂದ ದಾಸವರೇಣ್ಯರ ಈ ನಾಡಿನಲ್ಲಿ ಸಾಹಿತಿಗಳ ಸುಳ್ಳನ್ನು ಬಿತ್ತರಿಸಲಾರೆ ಈ ಸರಸ್ವತಿಯ ಪವಿತ್ರ ಪೀಠದಿಂದ.ಅವರಾಡಿದ ಅಪ್ಪಟ ತಾಜಾ ಸುಳ್ಳಿನ ಒಂದು ಸ್ಯಾಂಪಲ್ ಕೊಡುತ್ತೇನೆ. ಶ್ರೀರಂಗಪಟ್ಟಣದಲ್ಲಿ ಸ್ಥಾಪನೆಯಾಗಲಿರುವರ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಟಿಪ್ಪು ವಿಶ್ವವಿದ್ಯಾನಿಲಯ ಎಂದು ಹೆಸರಿಡಬೇಕೆಂದು ನಿರ್ಧರಿಸಿರುವುದನ್ನು ವಿರೋಧಿಸುವಾಗ ಟಿಪ್ಪು ಹಿಂದುಗಳ ದ್ವೇಷಿಯೆಂದೂ, ಅವನು 71,000 ಹಿಂದುಗಳನ್ನು ಬಲಾತ್ಕಾರವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದನೆಂಬ ಸುಳ್ಳನ್ನು ಹೇಳುತ್ತಿದ್ದಾರೆ.

ಇದನ್ನು ಕೇಳಿದೊಡನೆ ಅವನ ಆಳ್ವಿಕೆಯ ಕಾಲದಲ್ಲು ಕೊಡಗು ಪ್ರಾಂತ್ಯದಲ್ಲಿ ಅಷ್ಟು ಜನಸಂಖ್ಯೆ ಇತ್ತೆ ಎಂಬ ಸಂಶಯ ಬಂದು ಸರಕಾರವೇ ಪ್ರಕಟಿಸಿರುವ ‘ಕೂರ್ಗ್ ಗೆಝಟಿಯರ್’ ತೆಗೆದು ನೋಡಿದೆ. 1971ರಲ್ಲಿ ಇಡೀ ಕೂರ್ಗ್ ರಾಜ್ಯದಲ್ಲಿ ಕೇವಲ 1,65,321 ಜನರಿದ್ದರು. 1961ರ ಜನಗಣತಿ ಪ್ರಕಾರ ಒಟ್ಟು 3,22,829 ಪ್ರಜಾಸಂಖ್ಯೆ ಇತ್ತು (ಪುಟ-69). ಹಾಗಾದರೆ  1792-1799ರ ಅವಧಿಯಲ್ಲಿ ಅಲ್ಲಿ ಎಷ್ಟು ಜನರಿದ್ದಿರಬಹುದು ಎಂದು ಲೆಕ್ಕ ಹಾಕಿದರೆ ಒಂದು ಲಕ್ಷ (ನೂರು ಸಾವಿರ)ಕ್ಕಿಂತ ಹೆಚ್ಚಾಗಿರಲಾರದು.

ಆ ನೂರು ಸಾವಿರ ಜನರಲ್ಲಿ  71 ಸಾವಿರ ಜನರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದರೆ ಈ ಇನ್ನೂರ ಹತ್ತು ವರ್ಷಗಳಲ್ಲಿ ಎಷ್ಟು ಜನ ಮುಸ್ಲಿಮರಿರಬೇಕು? ಕನಿಷ್ಠ 2,00,000 ಇರಬೇಕು!! ಆದರೆ ಈಗ ಕೊಡಗು ಜಿಲ್ಲೆಯ ಒಟ್ಟು ಮುಸ್ಲಿಮರು 14,730 ಮಾತ್ರ ಇದ್ದಾರೆ. (ಕೂರ್ಗ್ ಗೆಝಟಿಯರ್ ಪುಟ 98 ನೋಡಿ) ಸರಸ್ವತಿಯ ಸುಪುತ್ರರೂ ಸಂಶೋಧಕರೂ ಆದಂಥವರೆಂದು ಹೇಳಿಕೊಳ್ಳುವವರು ಇಂಥ ಹಸಿ ಸುಳ್ಳನ್ನು ಹೇಳಬಹುದೇ?

ಟಿಪ್ಪು ಹಿಂದು ಮತದ್ವೇಷಿ ಎಂಬುದೂ ಅಪ್ಪಟ ಸುಳ್ಳಿನ ಮುದ್ದೆ. ಯಾಕೆಂದರೆ ಮರಾಠಿಗರಿಂದ ಭಗ್ನವಾದ ಶೃಂಗೇರಿ ಶ್ರೀಶಾರದಮ್ಮನ ದೇವಾಲಯವನ್ನು ಪುನಃ ನಿರ್ಮಾಣ ಮಾಡಿದವರು ಹೈದರ್ ಮತ್ತು ಟಿಪ್ಪು. ಶ್ರೀಶೃಂಗೇರಿ ಜಗದ್ಗುರುಗಳಿಗೆ ಕನ್ನಡದಲ್ಲಿ  ಪತ್ರಗಳನ್ನು ಬರೆದು ಅಮ್ಮನ ಮೆರವಣಿಗೆಗೆ ಪಲ್ಲಕಿ ಕಾಣಿಕೆ ಕೊಟ್ಟವನು ಟಿಪ್ಪು. ಅಂಥವನು ಹಿಂದೂ ಮತದ್ವೇಷಿಯೇ? (ನೋಡಿ, ಮಹಮ್ಮದ್ ವೊಯಿದ್ದೀನ್ ಅವರು ಬರೆದು, ಓರಿಯಂಟ್ ಲಾಂಗ್ಮನೆ, 2000ದಲ್ಲಿ ಪ್ರಕಟಿಸಿದ ಪುಸ್ತಕದ Plates 21ರಿಂದ 27 ರವರೆಗೆ Appendix-5 ಪುಟ 136-37) ಈ ದಾಖಲೆಗಳು ಸುಳ್ಳೊ ಅಥವಾ ಈಗಿನ ಸಂಶೋಧಕರು ಹೇಳುವುದು ಸುಳ್ಳೊ? ಜನ ತೀರ್ಮಾನಿಸಬೇಕು. ಕೋಮು ದ್ವೇಷದ ಕಿಚ್ಚು ಹಚ್ಚಬೇಡಿ. ಸಾಹಿತಿಗಳು ಕೋಮು ಸೌಹಾರ್ದದ ಶಾಂತಿ ಸಂದೇಶವನ್ನು ಸಾರ ಬೇಕಾಗಿ ಸಾಹಿತಿಗಳನ್ನು ಬೇಡಿಕೊಳ್ಳುತ್ತೇನೆ.

No comments:

Post a Comment