Monday, December 31, 2012

ಹೊನ್ನೆಮರಡು ನಡುಗಡ್ಡೆಯಲ್ಲಿ ಪತ್ರಕರ್ತರು ಮತ್ತು ಸೂರ್ಯನ ಪತ್ರಿಕಾಗೋಷ್ಠಿ!

 ಪ್ರಾರ್ಥನೆ ಎಂದರೇನು?
ಕಣ್ತೆರೆದು ನೋಡೋದು
ಕಿವಿತೆರೆದು ಕೇಳೋದು
ನನ್ನ ದೊರೆಯೇ...
ನಿನ್ನ ಅನುಭವದಿಂದ
ರೋಮಾಂಚನಗೊಳ್ಳುವುದು...!

                             -ಒಬ್ಬ ಸೂಫಿ ಕವಿಯ ಹಾಡು

ಸಾಧಾರಣವಾಗಿ ವಾರ್ತಾ ಇಲಾಖೆಗಳಿರುವುದು, ಸರಕಾರಿ ಕಾರ್ಯಕ್ರಮ ಗಳಿಗೆ ಪತ್ರಕರ್ತರನ್ನು ಸಾಗಿಸುವ ಮಾಧ್ಯಮ ವಾಗಿ ಮಾತ್ರ ಎಂದು ಕೆಲವು ಅಧಿಕಾರಿಗಳು ನಂಬಿರುತ್ತಾರೆ. ರಾಜಕಾರಣಿಗಳ ಕಾರ್ಯ ಕ್ರಮಗಳಿಗೆ ಪತ್ರಕರ್ತ ರನ್ನು ಕೊಂಡೊಯ್ಯುವುದು. ಸದಾ ಜಿಲ್ಲಾ ಉಸ್ತುವಾರಿಯ ನೆರಳಲ್ಲಿ ಓಡಾಡಿಕೊಂಡು, ತಮ್ಮ ಸ್ಥಾನವನ್ನು ಕಾಪಾಡಿಕೊಳ್ಳುವುದು, ಇಷ್ಟಾದರೆ ನಮ್ಮ ಕೆಲಸ ಮುಗಿಯಿತು ಎಂದು ನಂಬಿದವರ ದೊಡ್ಡ ಸಂಖ್ಯೆಯೇ ಇದೆ.. ಆದರೆ ಎಲ್ಲ ವಾರ್ತಾಧಿ ಕಾರಿಗಳು ಹೀಗೆಯೇ ಇರಬೇಕೆಂದಿಲ್ಲ. ತನ್ನ ಸೀಮಿತ ಅಧಿಕಾರ ಮತ್ತು ವ್ಯಾಪ್ತಿಯಲ್ಲಿ ಪತ್ರಿಕೋ ದ್ಯಮದ ಅನಂತ ಸಾಧ್ಯತೆಗಳಿಗೆ ತಮ್ಮನ್ನು ತೆರೆದು ಕೊಂಡ ಹಲವು ಅಧಿಕಾರಿಗಳನ್ನು ನಮ್ಮ ನಡುವೆ ಗುರುತಿ ಸಬಹುದಾಗಿದೆ. ಡಿಸೆಂಬರ್ 27, 28ರಂದು ಇಂತಹದೇ ಒಂದು ಯಶಸ್ವೀ ಪ್ರಯೋಗವನ್ನು ಶಿವಮೊಗ್ಗ ಜಿಲ್ಲಾ ವಾರ್ತಾಧಿಕಾರಿಯೊಬ್ಬರು ನಡೆಸಿದರು. ಪತ್ರಕರ್ತರು ಮತ್ತು ಪರಿಸರದ ನಡುವೆ ಒಂದು ಕೊಂಡಿಯಾಗಿ, ಪತ್ರಕರ್ತರಲ್ಲಿ ಪರಿಸರದ ಕುರಿ ತಂತೆ ಹೊಸ ಒಳನೋಟವನ್ನು ನೀಡಲು ಪ್ರಯತ್ನಿಸಿದವರು ಶಿವಮೊಗ್ಗ ವಾರ್ತಾಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು. ಅವರ ಈ ‘ಸಾಹಸ’ಕ್ಕೆ ಕೈ ಜೋಡಿಸಿದ್ದು ಭಾರತೀಯ ಸಾಹಸ ಸಮನ್ವಯ ಕೇಂದ್ರ ಹೊನ್ನೆಮರಡು. ಮುಖ್ಯವಾಗಿ ಶಿವಮೊಗ್ಗ ಜಿಲ್ಲಾ ಪತ್ರಕರ್ತರನ್ನೇ ಕೇಂದ್ರವಾಗಿಟ್ಟುಕೊಂಡು ಮಾಡಿದ ಈ ಕಾರ್ಯಕ್ರಮದಲ್ಲಿ, ಬೆಂಗಳೂರು, ಮಂಗಳೂರಿನ ಪತ್ರಕರ್ತರೂ ಸೇರಿಕೊಂಡಿದ್ದರು. ‘‘ಶಿವಮೊಗ್ಗದ ಹೊನ್ನೆಮರಡುವಿನಲ್ಲಿ ವಿಚಾರ ಸಂಕಿರಣ ಇದೆ. ಹೋಗ್ತೀರಾ?’’ ಎಂದು ಗೆಳೆಯರೊಬ್ಬರು ಕೇಳಿದಾಗ ನಾನು ನಿರಾಕರಿಸಿದ್ದೆ. ಆದರೆ ಅದೇ ಕ್ಷಣದಲ್ಲಿ ‘‘ನೋಡ್ರೀ...ಅರ್ಧ ಗಂಟೆ ದೋಣಿಯಲ್ಲಿ ಪಯಣ....ರಾತ್ರಿ ಹೊನ್ನೆಮರಡು ದ್ವೀಪದಲ್ಲಿ ಟೆಂಟು.... ಬೆಳದಿಂಗಳ ರಾತ್ರಿಯ ಊಟ...’’ ಎಂಬಿತ್ಯಾದಿ ಯಾಗಿ ಹೇಳಿದ್ದೆ....ಧಿಗ್ಗನೆ ಎದ್ದು ಕೂತು ‘‘ಇಗೋ ಹೊರಟೆ’’ ಎಂದು ಸಿದ್ಧನಾಗಿ ಬಿಟ್ಟಿದ್ದೆ.
ಹೊನ್ನೆಮರಡುವಿಗೆ ಶಿವಮೊಗ್ಗದಿಂದ ಸುಮಾರು ಒಂದೂವರೆ ಗಂಟೆಯ ಪ್ರಯಾಣ ಬೇಕು. ಸಾಗರ ತಲುಪಿದರೆ, ಕೇವಲ ಇಪ್ಪತ್ತು ನಿಮಿಷದಲ್ಲಿ ಹೊನ್ನೆಮರಡನ್ನು ತಲುಪಬಹುದು. ಈ ಹೊನ್ನೆಮರಡುವಿನ ವಿಶೇಷ ಆಕರ್ಷಣೆ ಯೆಂದರೆ ಇಲ್ಲಿನ ಪುಟ್ಟ ದ್ವೀಪ, ದೋಣಿಯ ಪಯಣ... ನಡುಗಡ್ಡೆಯಲ್ಲಿ ವಾಸ್ತವ್ಯ... ಸೂರ್ಯೋದಯ, ಸೂರ್ಯಾಸ್ತ...ಪ್ರಕೃತಿ.... ಶರಾವತಿ ಅಣೆಕಟ್ಟಿನ ಹಿನ್ನೀರು...ಎಲ್ಲಕ್ಕಿಂತ ವಿಶೇಷ ವೆಂದರೆ...ಇಲ್ಲಿ ಯಾವುದೇ ಕೃತಕ ನಿರ್ಮಾಣಗಳಿಲ್ಲ. ಧಾಬಾಗಳಿಲ್ಲ. ಒಂದು ಪ್ರವಾಸಿಧಾಮವೆಂದಾಕ್ಷಣ, ಬೆಲ್ಲಕ್ಕೆ ನೊಣ ಮುತ್ತಿ ದಂತೆ ಮುತ್ತಿಕೊಳ್ಳುವ ಅಂಗಡಿ ಮುಂಗಟ್ಟು ಗಳಿಲ್ಲ. ಹೊಟೇಲು ಗಳಿಲ್ಲ. ಅದಕ್ಕೆ ಮುಖ್ಯ ಕಾರಣವೇ ಭಾರತೀಯ ಸಾಹಸ ಸಮನ್ವಯ ಕೇಂದ್ರ ಮತ್ತು ಅದರ ಮುಖ್ಯ ರೂವಾರಿ ಗಳಾಗಿರುವ ಡಾ. ಎಸ್. ಎಲ್. ಎನ್. ಸ್ವಾಮಿ ಮತ್ತು ಅವರ ಪತ್ನಿ ನೊಮಿತೋ ಕಮ್ದಾರ್ ಅವರು ಕಾವಲು.
ಈ ಕೇಂದ್ರ ಈ ಭಾಗದಲ್ಲಿ ಸ್ಥಾಪನೆಯಾಗಿ ಇಪ್ಪತ್ತು ವರ್ಷ ಗಳಾಗಿವೆ. ಬಂಗಾರಪ್ಪ ಕಾಲದಲ್ಲಿ ಇದಕ್ಕೆ ಅನುಮತಿ ದೊರಕಿತು. ಇವರಿಗೆ ಅನುಮತಿ ನೀಡುವ ಸಂದರ್ಭದಲ್ಲಿ ಅನೇಕ ಟೀಕೆ, ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಇದೊಂದು ಪ್ರವಾಸಿ ತಾಣವಾಗುತ್ತದೆ, ಇದರಿಂದ ಇವರು ದುಡ್ಡು ಬಾಚಿಕೊಳ್ಳುತ್ತಾರೆ...ಪರಿಸರ ಕೆಡುತ್ತದೆ ಎಂಬಿತ್ಯಾದಿಯಾಗಿ. ಆದರೆ ಎಲ್ಲ ಪ್ರತಿಭಟನೆ ಯನ್ನು ಮೀರಿ, ಬಂಗಾರಪ್ಪ ಅವರು ಸ್ವಾಮಿ ತಂಡಕ್ಕೆ ಅನುಮತಿಯನ್ನು ನೀಡಿದ್ದರು. ಮಾತ್ರವಲ್ಲ ಹೊನ್ನೆಮರಡುವಿನಲ್ಲಿ ಮೊದಲ ಬಾರಿಗೆ ಬೋಟಿಂಗ್ ಮಾಡಿದ್ದೇ ಬಂಗಾರಪ್ಪ ಅವರಂತೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಹೊನ್ನೆಮರಡುವಿಗೆ ಈ ಕೇಂದ್ರ ಸಲ್ಲಿಸಿದ ಅತಿ ದೊಡ್ಡ ಕೊಡುಗೆ ಯೆಂದರೆ, ಪ್ರವಾಸಿಗರಿಂದ ಪರಿಸರ ಕೆಡುವುದನ್ನು ತಪ್ಪಿಸಿರುವುದು. ಒಂದು ಸಣ್ಣ ಮನೆ ಮತ್ತು ಅಂಗಳದಂತಹ ಪುಟ್ಟ ವೃತ್ತಾಕಾರದ ವೇದಿಕೆ ಹೊರತು ಪಡಿಸಿ ಯಾವುದೇ ನಿರ್ಮಾಣಗಳು ಇಲ್ಲಿ ಆಗಿಲ್ಲ. ಅದಕ್ಕಿಂತ ಮುಖ್ಯವಾಗಿ... ಹೊನ್ನೆಮರಡು ಪ್ರದೇಶದಲ್ಲಿ ಒಂದು ತುಂಡು ಪ್ಲಾಸ್ಟಿಕ್ ಕೂಡ ನೋಡುವುದಕ್ಕೆ ಸಿಕ್ಕಿಲ್ಲ. ಬಹುಶಃ ಇವರ ಕಾವಲು ಇಲ್ಲದೇ ಇದ್ದಿದ್ದರೆ ಇಂದು ಪ್ರವಾ ಸಿಗರು ಈ ಪ್ರದೇಶವನ್ನು ಲೂಟಿ ಹೊಡೆಯುತ್ತಿ ದ್ದರೋ ಏನೋ.

 ಡಿಸೆಂಬರ್ 27 ಮತ್ತು 28 ಎರಡು ದಿನಗಳ ಕಾಲ ವಾರ್ತಾ ಇಲಾಖೆ ಮತ್ತು ಸಾಹಸ ಸಮನ್ವಯ ಕೇಂದ್ರದ ವತಿಯಿಂದ ಪರಿಸರ ಮತ್ತು ಮಾಧ್ಯಮ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಹಮ್ಮಿ ಕೊಳ್ಳಲಾಯಿತು. ಆದರೆ ಡಿಸೆಂಬರ್ 27ರಂದು ಪತ್ರಕರ್ತರು ಒಟ್ಟು ಸೇರುವುದು ತಡವಾದುದರಿಂದ ಮೊದಲ ದಿನದ ಕಾರ್ಯಕ್ರಮ ತಡವಾಗಿಯೇ ಆರಂಭವಾಯಿತು. ಹೊನ್ನೆಮರಡು ಮುಟ್ಟುವಾಗಲೇ ಸಂಜೆಯಾಗಿತ್ತು. ಅಲ್ಲಿ ನಮಗಾಗಿ ಪರಿಸರ ಲೇಖಕ ನಾಗೇಶ್ ಹೆಗಡೆ ಬಳಗ ಕಾಯುತ್ತಿತ್ತು. ನಾಗೇಶ್ ಹೆಗಡೆ ಯವರ ಮಾತುಗಳು ಮತ್ತು ಪತ್ರಕರ್ತರ ಸಂವಾದ ಜೊತೆ ಜೊತೆಯಾಗಿ ನಡೆಯಿತು. ಪರಿಸರ ಪತ್ರಿಕೋದ್ಯಮ, ಜಿಲ್ಲಾ ವರದಿಗಾರರ ಕಾಳಜಿ, ಅವರ ಅಸಹಾಯಕತೆ ಇತ್ಯಾದಿಗಳೆಲ್ಲ ಆ ಸಂಜೆ ಚರ್ಚೆಗೊಳಗಾದವು. ಮುಂದಿನ ಕಾರ್ಯಕ್ರಮಕ್ಕೆ ಅದೊಂದು ಪೀಠಿಕೆಯಂತೆ ಇತ್ತು. 

ಸಂವಾದ ಕಾರ್ಯಕ್ರಮ ಮುಗಿದಂತೆಯೇ ಪೂರ್ಣಚಂದ್ರ ನಿಧಾನ ತನ್ನ ಬೆಳಕನ್ನು ಚೆಲ್ಲ ಹತ್ತಿದ್ದ. ರಾತ್ರಿ ದಟ್ಟವಾಗುತ್ತಾ ಹೋದ ಹಾಗೆ, ಬೆಳದಿಂಗಳು ಮಲ್ಲಿಗೆಯಂತೆ ಹರಡ ತೊಡಗಿದವು. ಸ್ವಾಮಿ ಅವರಿಂದ ಮಾರ್ಗದರ್ಶನ, ನೊಮಿತೋ ನೇತೃತ್ವದಲ್ಲಿ ದೋಣಿ ಚಲಾಯಿಸುವ ಕುರಿತು ಮಾಹಿತಿಗಳೂ ಸಿಕ್ಕಿದವು. ಸರಿ, ನಮ್ಮ ನಮ್ಮ ದೋಣಿಗಳನ್ನು ನಾವೇ ಆಯ್ಕೆ ಮಾಡಿಕೊಂಡೆವು. ನಮ್ಮ ನಮ್ಮ ಹುಟ್ಟುಗಳನ್ನೂ ಕೈಗೆತ್ತಿಕೊಂಡೆವು. ನಮ್ಮ ದೋಣಿಯಲ್ಲಿ ನಾನು, ಬೆಂಗಳೂರಿನ ಹೊಸ ದಿಗಂತ ಪತ್ರಿಕೆಯ ಪ್ರಮೋದ್, ಮಂಜುನಾಥ್ ಮತ್ತು ಸಹರಾ ಪತ್ರಿಕೆಯ ವರದಿಗಾರರು ಜೊತೆಗಿದ್ದರು. ಶರಾವತಿ ಅಣೆಕಟ್ಟಿನ ಹಿನ್ನೀರು ತಣ್ಣಗೆ ನಿದ್ದೆಯ ಮೂಡಿನಲ್ಲಿತ್ತು. ಚಳಿ ವಿಶೇಷವಾಗಿರಲಿಲ್ಲ. ಬೆಳದಿಂಗಳ ರಾತ್ರಿಯ ಪ್ರಕೃತಿಯ ವೌನದ ಮುಂದೆ ಪತ್ರಕರ್ತರ ಈಗೋಗಳು, ದುಷ್ಟತನ ಗಳೆಲ್ಲ ಸದ್ದಡಗಿ ಕುಳಿತಿದ್ದವು. ನನಗೋ ಹುಟ್ಟು ಚಲಾಯಿಸುತ್ತಿರುವ ರೋಮಾಂಚನ. ಹೆಗಲಲ್ಲಿ ಕ್ಯಾಮರಾ ಬೇರೆ. ಮಧ್ಯೆ ಮಧ್ಯೆ ಕ್ಲಿಕ್ಕಿಸುತ್ತಿದೆ. ಆದರೆ ಅದಕ್ಕಿಂತಲೂ, ಸುಮ್ಮಗೆ ಇವನ್ನೆಲ್ಲ ದೋಣಿಯಲ್ಲಿ ಕುಳಿತು ಆಸ್ವಾದಿಸುವುದೇ ಹಿತವೆನಿಸಿತ್ತು. ನಡುಗಡ್ಡೆ ತಲುಪಿದಾಗ ಗಂಟೆ ಸುಮಾರು ಹತ್ತಾಗಿತ್ತು. ನಮ್ಮ ನಮ್ಮ ಸಾಮಾನು ಸರಂಜಾ ಮುಗಳನ್ನು ನಾವೇ ಹೊತ್ತು ಕೊಂಡು, ಒಂದು ಕೊಡ ನೀರಿನ ಜೊತೆಗೆ ನಡುಗಡ್ಡೆ ಏರಿದೆವು. ಅಲ್ಲಿ ಟೆಂಟ್ ಹಾಕಬೇಕಾ ಗಿದೆ. ಸರಿ. ಅದಕ್ಕೂ ಸ್ವಾಮಿಯವರ ಪತ್ನಿ ನೊಮಿತೋ ಮಾರ್ಗ ದರ್ಶನ ನೀಡಿದರು. ನಮ್ಮ ನಮ್ಮ ಟೆಂಟ್ ಗಳನ್ನು ನಾವೇ ಸಿದ್ಧ ಪಡಿಸಿದೆವು. ಅಷ್ಟರಲ್ಲಿ ಎಲ್ಲರನ್ನು ಸುತ್ತು ಸೇರಿಸಿ ನೊಮಿತೋ ಅವರು ತಮ್ಮ ಆದೇಶ ವನ್ನು ಹೊರಡಿಸಿಯೇ ಬಿಟ್ಟರು. ‘‘ಯಾರೂ ಯಾವ ಕಾರಣಕ್ಕೂ ಸಿಗರೇಟು ಸೇದಬಾರದು. ಮದ್ಯ ಸೇವಿಸಬಾರದು. ನಾನ್‌ವೆಜ್ ತಿನ್ನೋ ಹಂಗಿಲ್ಲ...’’ ಇದಕ್ಕೆಲ್ಲ ಸಹಿ ಹಾಕಿದ ಬಳಿಕವೇ ಸಾಹಸ ಕೇಂದ್ರದವರು ನಮ್ಮನ್ನು ಇಲ್ಲಿಗೆ ಕರೆದೊಯ್ಯುತ್ತಾರೆ. ಆದರೂ ಮತ್ತೊಂದು ಮುಂಜಾಗೃತಾ ಎಚ್ಚರಿಕೆಯನ್ನು ನೀಡಿದರು.
 
ಅಂದಿನ ಇಡೀ ಬೆಳದಿಂಗಳ ರಾತ್ರಿಯನ್ನು ಅರೇಬಿಯನ್ ನೈಟ್ಸ್‌ನ ರಾತ್ರಿಯಂತೆ ರಮ್ಯವಾಗಿ ಸಿದ್ದು ಗುಡ್ಡಪ್ಪ ಜೋಗಿ ತಂಡದ ಜೋಗೇರಾಟ. ಮೈಕ್ ಇಲ್ಲ. ಯಾವುದೇ ವಿದ್ಯುತ್ ಬೆಳಕಿಲ್ಲ. ಆದರೆ ಗುಡ್ಡಪ್ಪ ಜೋಗಿ ಯವರ ಶಂಖದ ಕಂಠಕ್ಕೆ ರಾತ್ರಿ ಥಕ್ಕಾಗಿ ಬಿಟ್ಟಿತ್ತು. ಅವರು ಒಂದು ರಮ್ಯ ಜಗತ್ತನ್ನು ತನ್ನ ಕಂಠ, ಹಾಡುಗಳ ಮೂಲಕ ಆ ನಡುಗಡ್ಡೆಗೆ ತಂದು ನಿಲ್ಲಿಸಿದ್ದರು. ಅವರ ಬಳಗ, ಹಾಡುತ್ತಾ, ಕುಣಿಯು ತ್ತಿದ್ದರೆ, ಎಲ್ಲ ಪಾತ್ರಗಳೂ ಥಕಥಕನೆ ಜೀವ ತಳೆದು ಕುಣಿಯುತ್ತಿದ್ದವು. ಶೀಲಾವತಿ ಪ್ರಸಂಗವನ್ನು ತಮ್ಮ ಜೋಗಿ ಹಾಡಿಗೆ ವಸ್ತುವಾಗಿರಿಸಿಕೊಂಡಿದ್ದರೂ ಗೀಗೀ ಪದಗಳು, ಜಾನಪದ ಹಾಡುಗಳು, ಶಿಶುನಾಳ ಶರೀಫರ ಹಾಡು....ಎಲ್ಲರನ್ನು ತನ್ಮಯಗೊಳಿಸಿದ್ದವು. ಸುಮಾರು ಎರಡು-ಎರಡೂವರೆ ಗಂಟೆಗಳ ಕಾಲ ಅವರು ನಮ್ಮನ್ನು ಆ ನಡುಗಡ್ಡೆ ಯಿಂದ ತಮ್ಮ ನಾದಲೋಕಕ್ಕೆ ಕರೆದೊಯ್ದಿದ್ದರು. ಅವರ ತಂಬೂರಿ ನಾದಕ್ಕೆ ನಾವೆಲ್ಲ ಶರಣೆಂದಿದ್ದೆವು. ಜೋಗೇರಾಟ ಮುಗಿದದ್ದೇ ನಮಗೆಲ್ಲ ಅವರ ಜೊತೆಗೆ ಫೋಟೋ ತೆಗೆಸಿಕೊಳ್ಳುವ ಸಂಭ್ರಮ. ಇವರು ಸಲ್ಮಾನ್, ಆಮೀರ್‌ಖಾನ್‌ಗೂ ಹೆಚ್ಚು ನಮಗೆ. ಇದಾದ ಬಳಿಕ ಪತ್ರಕರ್ತ ಬದುಕಿಗೆ ತೀರಾ ಅಪರಿಚಿತವಾದ ‘ಸಸ್ಯಾಹಾರಿ’ ಊಟ. ಆದರೆ ನೊಮಿತೋ ಮತ್ತು ಬಳಗದ ಪ್ರೀತಿ ಆ ಊಟವನ್ನು ತುಂಬಾ ತುಂಬಾ ರುಚಿಯಾಗಿಸಿತ್ತು. ಆ ಬಳಿಕ ಪುರುಳೆಗಳನ್ನೆಲ್ಲ ತಂದು ಬೆಂಕಿ ಹಾಕಿ ಮಾತುಕತೆ. ಬಳಿಕ ಬೆಳದಿಂಗಳನ್ನು ನೋಡುತ್ತಾ, ಹಿಮದ ಕಚಗುಳಿಯ ನಡುವೆಯೇ ನಿದ್ದೆ. ಮರುದಿನ ಸೂರ್ಯೋದಯವನ್ನು ನೋಡುವ ಕನಸಿನ ಜೊತೆಗೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ನಾನು ಸೂರ್ಯೋದಯವನ್ನು ನೋಡಿಯೇ ಇಲ್ಲ. ಸೂರ್ಯೋದಯವನ್ನು ನೋಡದೆ ಸುಮಾರು ಎರಡು ವರ್ಷಗಳಾಗಿರಬಹುದೇನೋ. ಆದುದರಿಂದ, ಯಾವನೋ ವಿವಿಐಪಿಯನ್ನು ನೋಡುವ ಸಂಭ್ರಮವನ್ನು ಕಣ್ಣಲ್ಲಿ ತುಂಬಿಕೊಂಡು ನಾವೆಲ್ಲ ನಿದ್ದೆ ಹೋದೆವು. ಬೆಳಗ್ಗೆ 5.30ಕ್ಕೆ ಎಚ್ಚರ. ಸರಿ....ಮತ್ತೆ ಹಾಕಿದ ಟೆಂಟನ್ನು ಕೀಳಬೇಕು. ಬೆಂಕಿಯ ಕಿಡಿಯನ್ನು ಹಾರಿಸಿ, ಬೂದಿಗೆ ನೀರು ಹಾಕಿ, ಅವನ್ನೆಲ್ಲ ಪರಸ್ಪರ ಮುಖಕ್ಕೆ ಫ್ಯಾರನ್‌ಲವ್ಲಿ ಥರ ಹಚ್ಚಿಕೊಂಡೆವು. ಸೂರ್ಯನನ್ನು ಎದುರುಗೊಳ್ಳುವುದಕ್ಕೆ ಮೇಕಪ್ ಮಾಡಿಕೊಳ್ಳುವ ರೀತಿಯಲ್ಲಿ. ಸರಿ 6 ಗಂಟೆಯ ಹೊತ್ತಿಗೆ ಪೂರ್ವದಲ್ಲಿ ಸೂರ್ಯನ ಪತ್ರಿಕಾಗೋಷ್ಠಿ. ರಾಜಕಾರಣಿಗಳಂತೆ ಅವನು ಕಾಯಿಸಿಲ್ಲ. ಸರಿಯಾದ ಸಮಯಕ್ಕೆ ಹಾಜರ್. ಚಕಚಕನೆ ಕ್ಲಿಕ್ಕಿಸಿದವು ಕ್ಯಾಮರಾಗಳು. ಕಣ್ಣುಗಳು. ಹೃದಯಗಳು.
  ನಮ್ಮ ತಂಡದಲ್ಲಿ ಎಲ್ಲರೂ ತರುಣರೇ. ಆದರೆ ಇವರ ನಡುವೆ ಹಿರಿಯ ಪತ್ರಕರ್ತ ದಿವಾಕರ ಹೆಗ್ಡೆ ತಮ್ಮ ಪ್ರಾಯ, ಆರೋಗ್ಯಕ್ಕೆ ಸವಾಲು ಹಾಕಿ ನಮ್ಮೆಡನೆ ಸೇರಿಕೊಂಡಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ತಂಡದ ಪ್ರಧಾನ ಆಕರ್ಷಣೆ ಕಾಮ್ರೇಡ್ ಎಂ. ಲಿಂಗಪ್ಪ. ಅವರಿಗೆ ವರ್ಷ 86. ಆದರೆ ದೇಹ ಜಗ್ಗಿಲ್ಲ. ಹಲ್ಲು ಉದುರಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಒಳಗಿನ ಬೆಂಕಿ ಇನ್ನೂ ಉರಿಯುತ್ತಲೇ ಇದೆ. ಶಿವಮೊಗ್ಗದಲ್ಲಿ ಇವರದೊಂದು ಎರಡು ಪುಟದ ದಿನ ಪತ್ರಿಕೆಯಿದೆ. ಅದರ ಹೆಸರು ‘ಕ್ರಾಂತಿ ಭಗತ್’. ಸುಮಾರು ಮೂರು ದಶಕಗಳಿಂದ ಅದು ಪ್ರಕಟವಾಗುತ್ತಾ ಬರುತ್ತಿದೆ ಎಂದರೆ ಸಣ್ಣ ಮಾತಲ್ಲ. ಮಾತು ಮಾತಿಗೆ ಇವರು ಕ್ರಾಂತಿಯನ್ನೇ ಘೋಷಣೆ ಮಾಡುವವರು. ಒಂದಾನೊಂದು ಕಾಲದಲ್ಲಿ ಜಾರ್ಜ್ ಫೆರ್ನಾಂಡಿಸ್ ಜೊತೆಗೆ ಓಡಾಡಿದವರಂತೆ. ಮರಾಠಿ ಕ್ರಾಂತಿಗೀತೆಗಳನ್ನು ಹಾಡುತ್ತಾರೆ. ಆದರೆ ಇವರು ಹಾಡಲು ಬಾಯಿ ತೆರೆದರೆ, ಉಳಿದ ಯುವಕರು ಅವರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಾರೆ. ನಿಂಗಪ್ಪ ಮಾತನಾಡಲು ಶುರು ಹಚ್ಚಿದರೆ ಅದಕ್ಕೆ ನಿಲ್ದಾಣವೇ ಇರುತ್ತಿರಲಿಲ್ಲ. ಆದುದರಿಂದ ಇವರನ್ನು ಯಾರೂ ಬಾಯಿ ತೆರೆಯಲು ಬಿಡುತ್ತಿರಲಿಲ್ಲ. ಒಂದು ರೀತಿಯಲ್ಲಿ, ಆ ನಡುಗಡ್ಡೆಯಲ್ಲಿ ಅವರು ಇಂದಿನ ಕಮ್ಯುನಿಸಂನ ರೂಪಕದಂತೆ ನನಗೆ ಕಂಡರು. ಅವರೊಂದು ಅಸಹಾಯಕ, ಅಪ್ರಸ್ತುತ ಒಂಟಿ ದನಿ. ಅದು ಅವರಿಗೇ ಗೊತ್ತಿಲ್ಲ. ಕಡಿದಾಳು ಶಾಮಣ್ಣರ ಮೇಲೆ ನಕ್ಸಲ್ ಬೆಂಬಲಿಗ ಎಂದು ಕೇಸು ದಾಖಲಿಸಿದಾಗ, ನಿಂಗಪ್ಪನವರು ಈಶ್ವರಪ್ಪನವರನ್ನು ತಡೆದು ನಿಲ್ಲಿಸಿ ‘‘ನನ್ನ ಮೇಲೆ ಯಾಕೆ ನಕ್ಸಲ್ ಬೆಂಬಲಿಗ ಎಂದು ಕೇಸು ದಾಖಲಿಸಿಲ್ಲ?’’ ಎಂದು ತರಾಟೆಗೆ ತೆಗೆದುಕೊಂಡರಂತೆ. ಇದಾದ ಬಳಿಕ ಈಶ್ವರಪ್ಪ ಅವರು ಕೈ ಮುಗಿದು ‘‘ನಿಂಗಪ್ಪ ಅವರೇ, ನಿಮ್ಮ ಮೇಲೂ ಕೇಸು ದಾಖಲಿಸಲಾಗುತ್ತದೆ. ಪೊಲೀಸರು ಭರವಸೆ ನೀಡಿದ್ದಾರೆ. ಬೇಗನೆ ನಿಮ್ಮನ್ನೂ ಬಂಧಿಸುತ್ತೇವೆ’’ ಎಂದ ಬಳಿಕವಷ್ಟೇ ನಿಂಗಪ್ಪ ನಿರುಮ್ಮಳರಾದರಂತೆ. ನಿಂಗಪ್ಪರ ಜೊತೆಗೂ ನಾನು ಫೋಟೋ ತೆಗೆಸಿಕೊಂಡೆ. ಮಾತನಾಡುತ್ತಾ ಅವರಿಗೆ ನಾನು ಹೇಳಿದೆ ‘‘ನಿಂಗಪ್ಪ ಅವರೇ, ನೀವು ಯಯಾತಿ ಇದ್ದ ಹಾಗೆ. ಶಿವಮೊಗ್ಗದ ಎಲ್ಲ ಯುವಕರ ಪ್ರಾಯವನ್ನೂ ನೀವು ತೆಗೆದುಕೊಂಡು ನಳನಳಿಸುತ್ತಿದ್ದೀರಿ. ಯುವಕರೆಲ್ಲ ಮುದುಕರಂತೆ ಸುಸ್ತಾಗಿ ಹೋಗಿದ್ದಾರೆ’’
 
ಸೂರ್ಯಾಸ್ತ ಮುಗಿದ ಬಳಿಕ ನಡುಗಡ್ಡೆಯಿಂದ ಮತ್ತೆ ಹೊನ್ನೆಮರಡು ತೀರ ಸೇರಿದೆವು. ಅಲ್ಲಿ ತಿಂಡಿ ಇತ್ಯಾದಿಗಳೆಲ್ಲ ಮುಗಿಸಿ ಮತ್ತೆ ಈಜು. ಈ ಎಲ್ಲ ಸಂದರ್ಭದಲ್ಲೂ ಸ್ವಾಮಿ ಬಳಗದ ಕಣ್ಗಾವಲು, ಎಚ್ಚರಿಕೆ, ಜಾಗರೂಕತೆಯಿತ್ತು. ಈ ಕಾರಣದಿಂದಲೇ ಕಳೆದ ಎರಡು ದಶಕದಲ್ಲಿ ಒಂದೇ ಒಂದು ಅವಘಡ ಈ ಭಾಗದಲ್ಲಿ ನಡೆದಿಲ್ಲ. ಪ್ರಕೃತಿಯ ಜೊತೆಗೆ ಪತ್ರಕರ್ತರ ಈ ಕೂಡುವಿಕೆ ನಿಜಕ್ಕೂ ಅವರಲ್ಲಿ ಒಂದು ಹೊಸ ಒಳನೋಟವನ್ನು ತೆರೆಸಲಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಯಾವುದೇ ಒಣ ವಿಚಾರಸಂಕಿರಣಕ್ಕಿಂತಲೂ ಈ ಒಡನಾಟ ಪತ್ರಕರ್ತರನ್ನು ಹೆಚ್ಚು ಪ್ರಬುದ್ಧರನ್ನಾಗಿಸಬಹುದು. ಸೂಫಿ ಕವಿಯೊಬ್ಬ ಹೇಳುತ್ತಾನೆ. ‘‘ಪ್ರಾರ್ಥನೆಯೆಂದರೆ, ಕಣ್ತೆರೆದು ನೋಡೋದು, ಕಿವಿ ತೆರೆದು ಕೇಳೋದು...’’ ಹೌದು...ಸೂರ್ಯಾಸ್ತ, ಸೂರ್ಯೋದಯವನ್ನು ನೋಡುವ ಕಣ್ಣು, ಪ್ರಕೃತಿಯನ್ನು ಕಣ್ತುಂಬಿಸಿಕೊಳ್ಳುವ ಮನುಷ್ಯ, ಹಕ್ಕಿಗಳ ಚಿಲಿಪಿಲಿ, ನೀರಿನ ಜುಳುಜುಳುವನ್ನು ಆಲಿಸುವ ಕಿವಿ...ಈ ಮೂಲಕವೇ ದೇವರ ಅನುಭವವನ್ನು ತನ್ನದಾಗಿಸಿಕೊಂಡು ರೋಮಾಂಚನಗೊಳ್ಳಬೇಕು. ಅದುವೇ ನಿಜವಾದ ಪ್ರಾರ್ಥನೆ. ಹೊನ್ನೆಮರಡುವಿನಲ್ಲಿ ಕಳೆದ ಎರಡು ದಿನಗಳಲ್ಲಿ ದೇವರ ಅನುಭವವನ್ನು ನಮ್ಮದಾಗಿಸಿಕೊಂಡು ನಾವೆಲ್ಲ ರೋಮಾಂಚನ ಗೊಂಡೆವು.

2 comments:

  1. oMdu sanna tappu... sUryastha mugida mele alla. sUryodayada nantara nAvu nadugaddeyinda base campge bandevu, tindi tindu swim mAdalu hodevu. alva Basheer?

    ReplyDelete
  2. ಹೊನ್ನೇಮರಡುವಿನಿಂದ ಒಂದು ೭೦ ಕಿ.ಮೀ. ಕ್ರಮಿಸಿದ್ದರೆ ಶಿರಸಿಗೆ ಬಂದು ನನ್ನ ಮನೆಯಲ್ಲಿ ೨ ದಿವಸ ಉಳಿದು ಹೋಗಬಹುದುತ್ತು . ನನ್ನ ಮನೆ ನಿಮ್ಮ ಉಸಿರು ಕಟ್ಟಿಸಲಾರದು. ಏಕೆಂದರೆ ನನ್ನ ಮನೆ ನಿಮ್ಮ ಕಥೆಯ ಹಳೆ ಸ್ನೇಹಿತನ ಹೊಸ ಮನೆಯಂತೆ ಜಗಮಗಿಸುತ್ತಿಲ್ಲ .....ಹಳೆ ಸ್ನೇಹಿತನ ೨೦ ವರ್ಷಗಳ ಹಿಂದಿನ ಮನೆಯಂತಿದೆ. ಅದರ ಜೊತೆಗೆ ಬೆಲ್ಲದ ತುಂಡು ಮತ್ತು ತಣ್ಣಗಿನ ನೀರು ಕೂಡ ಇಲ್ಲಿ ಲಭ್ಯ .....

    ReplyDelete