Sunday, January 1, 2012

ಚಿಕ್ಕಿಯ ಬೆಳಗಿನ ತಿಂಡಿ!

ಚಿಕ್ಕಿ ಮತ್ತು ಪಿಂಕಿ ಒಂದನೇ ತರಗತಿಯಲ್ಲಿ ಕಲಿಯುತ್ತಿರುವ ಎರಡು ಪುಟ್ಟ ಗುಬ್ಬಚ್ಚಿ ಮರಿಗಳು. ಇಬ್ಬರು ಒಬ್ಬರನ್ನೊಬ್ಬರು ಗಾಢವಾಗಿ ಹಚ್ಚಿಕೊಂಡವರು. ಚಿಕ್ಕಿ ತನ್ನ ಶಾಲೆಯ ಹಿಂದುಗಡೆಯ ಓಣಿಯಲ್ಲಿರುವ ಜೋಪಡಾಪಟ್ಟಿಯ ಗುಡಿಸಲಿಂದ ಬರುತ್ತಾಳೆ. ಪಿಂಕಿ ಶ್ರೀಮಂತ ಮನೆಯ ಬಂಗಾರ ತೊಟ್ಟಿಲಿಂದ ಈಗಷ್ಟೇ ಇಳಿದು ಬಂದವಳು.

ಒಂದು ದಿನ ಬೆಳಗ್ಗೆ ಇಬ್ಬರು ಜೊತೆಯಾದರು. ಪಿಂಕಿ ಸದಾ ಚಿಂವ್ ಚಿಂವ್ ಎನ್ನುವ ಹುಡುಗಿ, ಹೇಳಿದಳು ‘‘ನಮ್ಮ ಮನೆಯಲ್ಲಿವತ್ತು ಬೆಳಗ್ಗೆ ತಿಂಡಿಗೆ ಅಮ್ಮ ನೀರುಸೌತೆಯ ಕಡುಬು ಮಾಡಿದ್ದಳು. ನಿಮ್ಮ ಮನೆಯಲ್ಲಿ ಎಂತ?’’
ಚಿಕ್ಕಿ ಒಂದರೆಕ್ಷಣ ವೌನವಾಗಿದ್ದಳು ಮೆಲ್ಲನೆ ಬಾಯಿ ತೆರೆದಳು ‘‘ನಮ್ಮ ಮನೆಯಲ್ಲಿ ಬೆಳಗ್ಗೆ ಉಪವಾಸ’’
ಉಪವಾಸ! ಪಿಂಕಿಗೆ ಅದು ಯಾವ ಬಗೆಯ ತಿಂಡಿ ಎಂದು ಅರ್ಥವಾಗಲಿಲ್ಲ.
ಪಿಂಕಿ ಕೇಳಿದಳು ‘‘ಅದು ಸಿಹಿಯಾಗಿರತ್ತ?’’
ಚಿಕ್ಕಿ ವೌನವಾಗಿದ್ದಳು.
ಪಿಂಕಿ ಮತ್ತೆ ಕೇಳಿದಳು. ‘‘ಅದನ್ನು ಹೇಗೆ ಮಾಡುತ್ತಾರೆ? ಅದಕ್ಕೆ ಗೋಡಂಬಿ ಹಾಕ್ತಾರಾ?’’
ಗೋಡಂಬಿ! ಈ ವಸ್ತುವನ್ನು ಚಿಕ್ಕಿ ಇದೇ ಮೊದಲ ಬಾರಿ ಕೇಳಿದ್ದಳು ‘‘ಗೋಡಂಬಿ ಅಂದ್ರೇನು? ಅದು ಸಿಹಿಯಾಗಿರತ್ತ?’’
ಪಿಂಕಿ ನಕ್ಕು ಕೇಳಿದಳು ‘‘ಅಯ್ಯೋ ದೇವರೆ, ನಿನಗೆ ಗೋಡಂಬಿ ಗೊತ್ತಿಲ್ಲವ? ನಮ್ಮ ಮನೆಯ ಎಲ್ಲ ಪದಾರ್ಥಕ್ಕೆ ಗೋಡಂಬಿ ಹಾಕ್ತಾರೆ...ಸಿಹಿಯಾಗಿರಲ್ಲ, ಆದ್ರೆ ಒಂಥರಾ ತಿನ್ನೋಕೆ ನೆಲಕಡಲೆ ಥರ ಚೆನ್ನಾಗಿರತ್ತೆ...ನೀವು ಬೆಳಗ್ಗೆ ಮಾಡೋ ಉಪವಾಸಕ್ಕೆ ಗೋಡಂಬಿ ಹಾಕಲ್ವಾ?’’
ಚಿಕ್ಕಿ ಮೆಲ್ಲ ಬಾಯಿ ತೆರೆದಳು ‘‘ಹೂಂ. ಗೋಡಂಬಿ, ತುಪ್ಪಾ, ಸಕ್ಕರೆ, ಬೆಲ್ಲ, ಎಲ್ಲ ಹಾಕ್ತಾರೆ...ಅದು ಒಲೆಯಲ್ಲಿ ಬೇಯುವಾಗ ಅಕ್ಕ ಪಕ್ಕದಲ್ಲೆಲ್ಲ ಪರಿಮಳ ಬರತ್ತೆ....’’
ಪಿಂಕಿಗೆ ಬಾಯಿಯಲ್ಲಿ ನೀರು ಬಂತು ‘‘ನಿಮ್ಮ ಮನೆಯಲ್ಲಿ ದಿನಾ ಬೆಳಗ್ಗೆ ಅದನ್ನೇ ಮಾಡೋದಾ?’’
ಚಿಕ್ಕಿ ತಲೆಯಾಡಿಸಿದಳು ‘‘ಹೌದು, ನಮ್ಮ ಮನೆಯಲ್ಲಿ ದಿನಾ ಬೆಳಗ್ಗೆ ಉಪವಾಸ’’ ಬಳಿಕ ಯಾಕೋ ವೌನವಾದಳು.
***
ಅಂದು ಪಿಂಕಿಯ ಮನೆಯಲ್ಲಿ ದೊಡ್ಡ ಗಲಾಟೆ. ಬೆಳಗ್ಗಿನ ತಿಂಡಿ ತಿನ್ನುವುದಕ್ಕೆ ಪಿಂಕಿ ಕೇಳುತ್ತಿಲ್ಲ. ‘‘ತಿನ್ನೇ...ನೀರುದೋಸೆ ಚೆನ್ನಾಗಿದೆ ಕಣೇ....’’ ತಾಯಿ ಒತ್ತಾಯಿಸುತ್ತಿದ್ದರೂ ಪಿಂಕಿಯದು ಒಂದೇ ಹಟ ‘‘ನನಗೆ ಉಪವಾಸ ಮಾಡಿಕೊಡು...ನನಗೆ ಅದು ಇಷ್ಟ...’’
‘ಇದೆಂಥದು ಉಪವಾಸ! ಅದನ್ನು ಮಾಡಿಕೊಡುವುದು ಹೇಗೆ...?’ ಪಿಂಕಿಯ ತಾಯಿಗೆ ಅಚ್ಚರಿ.
‘‘ಉಪವಾಸ ಅನ್ನೋದು ತಿಂಡಿಯಲ್ಲ ಕಣೇ...ಅಂಥದೊಂದು ತಿಂಡಿ ಇಲ್ಲ’’ ಪಿಂಕಿಯ ತಾಯಿ ಸಮಜಾಯಿಶಿ ನುಡಿದಳು.
ಪಿಂಕಿ ಹಟ ಬಿಡಲಿಲ್ಲ ‘‘ನನ್ನ ಗೆಳತಿ ಚಿಕ್ಕಿಯ ಮನೆಯಲ್ಲಿ ದಿನಾ ಬೆಳಗ್ಗೆ ಉಪವಾಸವಂತೆ....ಅದಕ್ಕೆ ಗೋಡಂಬಿ, ತುಪ್ಪ ಎಲ್ಲ ಹಾಕ್ತಾರಂತೆ. ನಿನ್ನೆಯೂ ಚಿಕ್ಕಿಯ ಮನೆಯಲ್ಲಿ ಬೆಳಗ್ಗೆ ಉಪವಾಸ ಅಂತೆ. ಗೊತ್ತಾ?’’ ಹೇಳಿಯೇ ಬಿಟ್ಟಳು.
ಪಿಂಕಿಯ ತಾಯಿ ದಂಗಾಗಿ ನಿಂತು ಬಿಟ್ಟಳು. ಯಾಕೋ ಎನೋ ಆಕೆಯ ಕಣ್ಣು ತುಂಬಿತ್ತು. ಪಿಂಕಿಯನ್ನು ಮೆಲ್ಲನೆ ಎದೆಗೊತ್ತಿಕೊಂಡಳು.
ಅಂದು ಪಿಂಕಿಯ ತಾಯಿ ಮಗಳ ಟಿಫಿನ್‌ಬಾಕ್ಸ್‌ನಲ್ಲಿ ಎಂದಿಗಿಂತ ಎರಡು ಸೌಟು ಜಾಸ್ತಿ ಉಪ್ಪಿಟ್ಟು ಹಾಕಿದಳು. ಮತ್ತು ಪಿಂಕಿಗೆ ಹೇಳಿದಳು ‘‘ನಿನ್ನ ಗೆಳತಿ ಚಿಕ್ಕಿಯಲ್ಲಿ ಹೇಳು, ದಿನಾ ಬೆಳಗ್ಗೆ ಉಪವಾಸವನ್ನು ತಿನ್ನುವುದು ಸರಿಯಲ್ಲ, ಹೊಟ್ಟೆ ಹಾಳಾಗತ್ತೆ, ಹೊಟ್ಟೆ ನೋವಾಗತ್ತೆ. ಇನ್ನು ಮುಂದೆ ನಾನು ಟಿಫಿನ್‌ಬಾಕ್ಸ್ ತುಂಬಾ ತಿಂಡಿ ತರ್ತೇನೆ, ಅದನ್ನೇ ತಿನ್ನು ಅಂತ ಹೇಳು...ಆಯ್ತ್’’
ಪಿಂಕಿ ತಾಯಿಯನ್ನೇ ನೋಡಿದಳು. ಏನು ಅನಿಸಿತೋ ‘‘ಆಯ್ತಮ್ಮ...’’ ಎಂದವಳೇ ಚೀಲ ಹೆಗಲೇರಿಸಿ, ಟಿಫಿನ್‌ಬಾಕ್ಸ್‌ನ್ನು ಹೆಮ್ಮೆಯಿಂದ ಕೈಯಲ್ಲಿ ಧರಿಸಿ, ಮನೆಯಿಂದ ಹೊರಗೆ ಹೆಜ್ಜೆಯಿಟ್ಟಳು.

ಚೇತನ ತೀರ್ಥ ಹಳ್ಳಿಯವರ ಫೇಸ್‌ಬುಕ್ ಸ್ಟೇಟಸ್‌ಗೆ ಮಾಲತಿ ಶೆಣೈ ಅವರು ಒಂದು ಕಮೆಂಟ್ ಹಾಕಿದ್ದರು. ಆ ಕಮೆಂಟ್‌ನ ಸ್ಫೂರ್ತಿಯಿಂದ ಈ ಪುಟ್ಟ ಕತೆಯನ್ನು ಬರೆದಿದ್ದೇನೆ.

13 comments:

  1. ಬಷೀರ್ ಅವರೇ
    ನಿಮ್ಮ ಪುಟ್ಟ ಕಥೆಗಳು ತುಂಬಾ ತೀಕ್ಷ್ಣವಾಗಿವೆ
    ಧನ್ಯವಾದಗಳು

    ReplyDelete
  2. ಅದ್ಭುತವಾಗಿದೆ ಕತೆ. ಓದುತ್ತಾ ಮನಸ್ಸು ಭಾರ ಆಯ್ತು . ಬಡತನವನ್ನು, ಮಾತ್ರವಲ್ಲ,ಮಗುವಿನ ಮುಗ್ದತನವನ್ನು
    ಅತ್ಯಂತ ಸೊಗಸಾಗಿ ವ್ಯಾಖ್ಯಾನಿಸಿದ ಬರಹ. ವಿಷಯದ ಆಳಕ್ಕೆ ಹೋಗುವ ನಿಮ್ಮ ಶೈಲಿ ನಂಗೆ ತುಂಬಾನೇ ಇಷ್ಟ
    ಏ.ಕೆ.ಕುಕ್ಕಿಲ

    ReplyDelete
  3. ಗುಜರಿ ಅಂಗಡಿಯ ನವಾಬರೇ, ಎಂಥ ಚಂದದ ಕಥೆ ಹೆಣೆದಿದ್ದೀರಿ. ಕಣ್ಣು ತೆವಾವಾಗಲು ಹೊಡೆಯಬೇಕಾಗಿಲ್ಲ, ಚಿವುಟಬೇಕಾಗಿಲ್ಲ ಇಂಥ ಕಥೆ, ಕಣ್ಣನ್ನು ಮನಸನ್ನು ಒಂದೇ ಬಾರಿಗೆ ವದ್ದೆ ಮಾಡಿಬಿಡುತ್ತದೆ. ನಿಮಗೆ ನನ್ನ ವಂದನೆಗಳು.

    ReplyDelete
  4. just too good

    ReplyDelete
  5. chikkiya belaggina thindi kathe thumba chennagide. badathanada chitra kanna munde kattithu. nannadondu salaheyu ide. bada magu chikki mathu shrimantha magu pinky onde shaleyalli kaliyuvudu sadhyave? adannu swalpa marpadu madiddare kathe innu hechu naijavagiruthithu. Anyway, kathe hridayasparshiyagithu. abhinandanegalu

    sagar,mangalore

    ReplyDelete
  6. thindu thindu ajeernavaagiruva nammanthavarige tiffin box thumba upavasa kaluhisiddakke dhanyavadagalu - tumkurnaveed

    ReplyDelete
  7. this was my status msg..
    ನಿಹಾರಿಕಳಿಗೆ ಚಿಕ್ಕವಳಿದ್ದಾಗ ಒಂದು ಅಭ್ಯಾಸ ಇತ್ತು. ಬೆಳಿಗ್ಗೆ ಎದ್ದ ಕೂಡಲೆ ಅಮ್ಮ ಏನು ತಿಂಡಿ ಅಂತ ಕೇಳುವುದು. ಒಂದು ದಿನ ನಾನು ಅವಳಿಗೆ ’ಇವತ್ತು ಉಪವಾಸ ಅಂದೆ. ಹಲ್ಲುಜ್ಜಿ, ಮುಖ ತೊಳೆದು, ಅಡಿಗೆ ಮನೆಗೆ ಬಂದು ಕೂತು..ಎಲ್ಲಿ?? ಸ್ವಲ್ಪ ’ಉಪವಾಸ’ ಬಡಿಸು ಅಂತ ಹೇಳಿದಳು.....(@ Chetana Teerthahalli sorry for copy paste.....)

    you have woven such an heartwarming story....going hungry is sad

    ReplyDelete
  8. Very touching story. But I wonder if we still have that society where rich and the poor study together.

    ReplyDelete
  9. ಸೊಗಸಾದ ಕತೆ ಎಂದು ತಲೆದೂಗಿ ಮರೆತುಬಿಡಲು ಮನಸ್ಸಾಗದು. ಮನಮುಟ್ಟುವ ಕತೆ. ಆದರೆ ಕತೆಯ ಸೆಟ್ಟಿಂಗ್ ಯಾಕೋ ಈ ದಿನಕ್ಕೆ ತುಸು ಅಪ್ರಸ್ತುತವೆನಿಸುತ್ತದೆ. ರಾಧಿಕಾ ಅವರು ಹೇಳಿದಂತೆ, ಈ ದಿನ ಹೀಗೆ ಶ್ರೀಮಂತರ ಮಕ್ಕಳೂ ಜೋಪಡಪಟ್ಟಿ ಮಕ್ಕಳೂ ಒಟ್ಟಿಗೇ ಓದುತ್ತವಾ? ಖಾಸಗೀಕರಣದ ಭರದಲ್ಲಿ ಸಿರಿಯೇ ಜಾತಿಯಾಗಿ ಕೂತಿರುವಾಗ, ಕೊಳ್ಳುವವರ ತಾಖತ್ತಿಗೆ ತಕ್ಕಂತೆ ವಿವಿಧ ’ಗುಣಮಟ್ಟದ’ ವಿದ್ಯಾಭ್ಯಾಸಗಳು ಸಿಗುತ್ತವೆ. ಸರಕಾರೀ ಶಾಲೆ (ಅಥವಾ ಆಸ್ಪತ್ರೆ ಅಥವಾ ಮತ್ತೇನಾದರೂ) ಕೊಳ್ಳಲು ಕಾಸಿಲ್ಲದವರ ಪಿಂಜರಾಪೋಲು ಅಷ್ಟೇ. ಅಕಸ್ಮಾತ್ ಅವರ ಶಾಲೆಗೆ ಇವನೋ ಇವರ ಶಾಲೆಗೆ ಅವನೋ ಸೇರಿದರೆ ಆ ಮಗುವಿನ ಶಾಲಾ ಜೀವನ ನರಕವೇ ಸರಿ. ಮಗು ಎಲ್ಲ ವರ್ಗದೊಂದಿಗೆ ಬೆರೆಯಲಿ ಅಂತ ಬೇಕಂತಲೇ ’ಸಾಮಾನ್ಯ’ ಶಾಲೆಗೆ ಹಾಕಿ ಮಗುವಿನ ನೂರು ನೋವಿನೊಂದಿಗೆ ಹೆಣಗುತ್ತಿರುವ ಅನುಭವದಿಂದ ಹೇಳುತ್ತಿದ್ದೇನೆ, ನಮ್ಮಲ್ಲಿ ಶಿಕ್ಷಣವನ್ನ ರಾಷ್ಟ್ರೀಕರಿಸದ ಹೊರತು ಉಳಿಗಾಲವಿಲ್ಲ.

    ReplyDelete
  10. gujari angadiyalli kannada katha ratnagalannu hanchutta iddira. dhanyavadagalu

    anantha.m

    ReplyDelete
  11. ತುಂಬಾ ಮಿಡಿಯುವ ಕಥೆ...

    ReplyDelete
  12. ಚನ್ನಾಗಿದೆ ಸರ್

    ReplyDelete