Tuesday, November 11, 2014

ಮಲಾಲಾ ಆತ್ಮಕತೆ: ಅರ್ಧಸತ್ಯ

" ಐ ಆ್ಯಮ್ ಮಲಾಲ’’ ಕೃತಿ ಮಲಾಲಾ ಯೂಸುಫ್ ಝಾಯಿಯ ಆತ್ಮಕತೆ. 2014ರ ನೊಬೆಲ್ ಶಾಂತಿ ಪುರಸ್ಕೃತ ಬಾಲಕಿ, ಇಂದು ಹಲವು ಅಂತಾರಾಷ್ಟ್ರೀಯ ಕಾರಣಗಳಿಗಾಗಿ ಜಗತ್ತಿನಾದ್ಯಂತ ಸುದ್ದಿಯಾಗಿದ್ದಾರೆ.ತಾಲಿಬಾನ್ ಮತ್ತು ಮುಸ್ಲಿಮ್ ಮೂಲಭೂತವಾದದ ವಿರುದ್ಧಸೆಡ್ಡು ಹೊಡೆದ ಬಾಲಕಿಯಾಗಿ ಪಶ್ಚಿಮ ದೇಶಗಳು ಈಕೆಯನ್ನು ಗೌರವಿಸುತ್ತಿದೆ. ಇದೇ ಸಂದರ್ಭದಲ್ಲಿ ಪಶ್ಚಿಮ ದೇಶದ ಸೋಗಲಾಡಿತನ ಮತ್ತು ದ್ವಂದ್ವಗಳ ಸೃಷ್ಟಿಯಾಗಿಯೂ ಮಲಾಲಾ ಗುರುತಿಸಲ್ಪಡುತ್ತಿದ್ದಾಳೆ. ಭಯೋತ್ಪಾದನೆಯ ವಿರುದ್ಧದ ತನ್ನ ಹೋರಾಟಕ್ಕೆಮಲಾಲ ಎನ್ನುವ ಹೆಣ್ಣು ಮಗಳನ್ನು ಪಶ್ಚಿಮ ದೇಶಗಳುಗುರಾಣಿಯಾಗಿಸಿಕೊಳ್ಳುತ್ತಿದೆ ಎನ್ನುವುದು ಒಂದುಟೀಕೆ.ಇದೇಸಂದರ್ಭದಲ್ಲಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಂತಹ ದೇಶಗಳಲ್ಲಿ ಮಹಿಳೆಯಶೋಷಣೆಯ ವಿರುದ್ಧ ಹುಟ್ಟಿಕೊಂಡ ಧ್ವನಿಯಾಗಿಯೂ ಮಲಾಲಾ ನಮ್ಮ ನಡುವೆ ಗುರುತಿಸಲ್ಪಡುತ್ತಾಳೆ. ಪಶ್ಚಿಮ ದೇಶಗಳು ಕಟ್ಟಿಕೊಡುತ್ತಿರುವ ಮಲಾಲಾ ಆಚೆಗೂ ಆಕೆಯಿಂದ ಈ ಜಗತ್ತು ಪಡೆದುಕೊಳ್ಳುವಂತಹದ್ದು ದೊಡ್ಡದಿದೆ. ಆದುದರಿಂದ, ಈ ಬಾಲಕಿಯ ಧ್ವನಿ ಯಾವ ರೀತಿಯಲ್ಲೂ ತಿರಸ್ಕಾರಕ್ಕೆಒಳಗಾಗುವಂತಹದ್ದಲ್ಲ.ಈ ಸಂದರ್ಭದಲ್ಲೇ ಮಲಾಲಾ ಆತ್ಮಕತೆ ಸುದ್ದಿಯಾಗತೊಡಗಿತು. ಈ ಕೃತಿ ಕೆಲವು ಕಾರಣಗಳಿಂದ ಮುಖ್ಯವಾಗುತ್ತದೆ. ಇದೇ ಸಂದರ್ಭದಲ್ಲಿ ಒಂದು ಆತ್ಮಕತೆಯಾಗಿ ಇದನ್ನು ಓದುವಾಗ ಹಲವು ಸಂಶಯಗಳನ್ನೂ ಹುಟ್ಟಿಸುತ್ತದೆ. ಇದು ಮಲಾಲಾ ಆತ್ಮಕತೆಯಾಗಿದ್ದರೂ ಅದನ್ನು ನಿರೂಪಿಸಿರುವುದು ಕ್ರಿಸ್ಟಿನಾಲ್ಯಾಂಬ್ ಎನ್ನುವ ಪಶ್ಚಿಮ ದೇಶದ ಪತ್ರಕರ್ತೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳ ವಿದೇಶಿ ವರದಿಗಾರ್ತಿಯಾಗಿ ಕೆಲಸಮಾಡಿರುವವರು ಲ್ಯಾಂಬ್. ಇದೊಂದು ಬೃಹತ್ ಕೃತಿ.ಇದು ಕೇವಲ ಮಲಾಲಾ ಆತ್ಮಕತೆಯಲ್ಲ.ಬದಲಿಗೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹೆಣ್ಣುಮಕ್ಕಳಶೋಚನೀಯ ಸ್ಥಿತಿಗಳ ಕುರಿತಂತೆಯೂ ಕೃತಿ ಪ್ರೌಢವಾಗಿ ಮಾತನಾಡುತ್ತದೆ. ಅಲ್ಲಿಯ ರಾಜಕೀಯ ಬದಲಾವಣೆಗಳ ಬಗ್ಗೆ ಚರ್ಚಿಸುತ್ತದೆ. ಆದುದರಿಂದ ಲ್ಯಾಂಬ್ ಅವರು ಮಲಾಲಾಮಾತುಗಳನ್ನು ಕೇವಲ ನಿರೂಪಿಸಿದ್ದಾರಷ್ಟೇ ಎಂದು ನಂಬುವಂತೆ ಈ ಕೃತಿ ಇಲ್ಲ. ತನ್ನ ಮಾತುಗಳನ್ನು ಕ್ರಿಸ್ಟಿನಾಲ್ಯಾಂಬ್ ಮಲಾಲಾ ಬಾಯಿಯಲ್ಲಿ ಆಡಿಸಿದ್ದಾಳೆಯೋ ಎಂಬ ಅತೃಪ್ತಿ ಪುಟಪುಟಗಳಲ್ಲೂ ನಮಗೆ ಕಾಣಿಸುತ್ತದೆ. ಏಷ್ಯಾದ ರಾಜಕೀಯ ಮಗ್ಗುಲುಗಳನ್ನು ಪಶ್ಚಿಮ ದೇಶದ ಕಣ್ಣಿನಲ್ಲಿ ನೋಡಲಾಗಿರುವ ಕೃತಿ ಇದಾಗಿರಬಹುದೇ ಎಂಬ ಅನುಮಾನ ನಮ್ಮನ್ನು ಕಾಡುತ್ತದೆ. ಆದುದರಿಂದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ದುಃಸ್ಥಿತಿಗೆ ಕಾರಣವಾದ ಪಶ್ಚಿಮ ದೇಶಗಳ ಆಷಾಢಭೂತಿತನ ಇಲ್ಲಿ ಕಾಣ ಸಿಗುವುದಿಲ್ಲ. ತಾಲಿಬಾನ್‌ಗಳ ಕ್ರೌರ್ಯದ ಕುರಿತಂತೆ ಮಾತನಾಡುವ ಮಲಾಲ ಕೃತಿ, ತಾಲಿಬಾನ್ ಹುಟ್ಟಿಗೆ ಕಾರಣವಾಗಿರುವ ಅಮೆರಿಕದಂತಹ ದೇಶಗಳಸಂಚುಗಳ ಕುರಿತಂತೆ ಮೌನವಾಗುತ್ತದೆ. ಆದುದರಿಂದ ಒಂದು ದೊಡ್ಡ  ಕೃತಿಯಾಗಿಯೂ ಇದು ಪಾಕಿಸ್ತಾನ, ಅಫ್ಘಾನಿಸ್ತಾನದ ವಾಸ್ತವಗಳ ಆಳಕ್ಕಿಳಿಯದೆ ಮೇಲಿಂದ ಮೇಲೆ ನಿರೂಪಿತವಾಗುತ್ತಾ ಹೋಗುತ್ತದೆ. 
ಇಡೀ ಕೃತಿ ರೋಚಕವಾಗಿದೆ. ನಿರೂಪಣೆ ಅಷ್ಟೇ ನಾಟಕೀಯವೂ ಆಗಿದೆ. ಮಲಾಲಾಳ ಮುಗ್ಧತೆ ಇಲ್ಲಿ ಕಾಣುವುದಿಲ್ಲ. ಪ್ರಬುದ್ಧ ಪತ್ರಕರ್ತೆಯ ಧ್ವನಿ ಆತ್ಮಕತೆಯಲ್ಲಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ರಾಜಕೀಯ ಹೇಗೆ ಅಲ್ಲಿನ ಶಿಕ್ಷಣ ಮತ್ತು ಮಹಿಳೆಯ ಮೇಲೆ ಪ್ರಭಾವ ಬೀರಿತು, ತಾಲಿಬಾನಿಗಳು ಹೇಗೆ ಸಂಗೀತದ ತುಟಿಯನ್ನು ಹೊಲಿದರು ಎನ್ನುವುದನ್ನು ಕೃತಿ ಹೇಳುತ್ತದೆ. ಪಾಕಿಸ್ತಾನದ ಆಡಳಿತದ ಇತಿಹಾಸವನ್ನು ಮುಟ್ಟುತ್ತಾ, ಹೇಗೆ ಅಲ್ಲಿ ಮೂಲಭೂತವಾದ ಹಂತಹಂತವಾಗಿ ತನ್ನ ಕಬಂಧ ಬಾಹುವನ್ನು ಚಾಚಿತು ಎನ್ನುವುದನ್ನು ಹೇಳುತ್ತದೆ. ಹಲವು ವಾಸ್ತವಗಳನ್ನು ಮುಟ್ಟೂದಕ್ಕೆ, ವಿಪರ್ಯಾಸಗಳ ತೊಡಕುಗಳನ್ನು ಮುಟ್ಟಲು ಈ ಕೃತಿಗೆ  ಯಾಕೆ ಸಾಧ್ಯವಾಗಲಿಲ್ಲ ಎಂದರೆ ಇದನ್ನು ಮಲಾಲಾ ಮತ್ತು ಲ್ಯಾಂಬ್ ಜೊತೆಗೂಡಿ ಬರೆದಿದ್ದಾರೆ. ಅಥವಾ ಮಲಾಲಾಳನ್ನು ನೆಪವಾಗಿಟ್ಟುಕೊಂಡು ಲ್ಯಾಂಬ್ ನಿರೂಪಿಸಿದ ಕತೆಯಿದು.ಪಶ್ಚಿಮದ ಪತ್ರಕರ್ತೆ ತನ್ನ ಕಣ್ಣಿನ ಮೂಲಕಕಂಡ ಪಾಕಿಸ್ತಾನ, ಅಫ್ಘಾನಿಸ್ತಾನದ ಚರಿತ್ರೆಯನ್ನು ಮಲಾಲ ಮೂಲಕ ನಿರೋಪಿಸಿದ್ದಾರೆ. .ಈ ಎಲ್ಲ ಮಿತಿಗಳನ್ನು ಅರಿತು ಈ ಕೃತಿಯನ್ನು ಓದಿದರೆ ಹೆಣ್ಣಿನ ಶೋಷಣೆಯ ಹಿಂದಿರುವ ರಾಜಕೀಯದ ಒಂದು ಮುಖವನ್ನು ನಾವು ನಮ್ಮದಾಗಿಸಿಕೊಳ್ಳುವಲ್ಲಿ ಸಂಶಯವಿಲ್ಲ.
ಇದನ್ನು ಕನ್ನಡಕ್ಕಿಳಿಸಿದ ಬಿ.ಎಸ್. ಜಯಪ್ರಕಾಶ್ ನಾರಾಯಣ ಅವರ ಪ್ರಯತ್ನವನ್ನು ನಾವುಮೆಚ್ಚಬೇಕಾಗಿದೆ. ಒಂದು ಭಾಷೆಯಿಂದ ಮತ್ತೊಂದು ಭಾಷೆಗೆಇಂತಹ ಆತ್ಮಕತೆಗಳನ್ನು ಇಳಿಸುವುದು ಸುಲಭವಲ್ಲ.ಇಂತಹ ಸಂದರ್ಭದಲ್ಲಿ ತನ್ನ ಸರಳಗನ್ನಡದಲ್ಲಿ ಮಲಾಲಾ ಕತೆಯ ರೋಚಕತೆ ಸಡಿಲವಾಗದಂತೆ ಜೋಪಾನವಾಗಿ ಅನುವಾದಿಸಿದ್ದಾರೆ. ಕನ್ನಡಕ್ಕೆ ಬಂದ ಒಂದು ಅಪರೂಪದಇಂಗ್ಲಿಷ್ ಅನುವಾದಇದು ಎನ್ನುವುದರಲ್ಲಿ ಎರಡು ಮಾತಿಲ್ಲ.
***
ಆಕೃತಿ ಪುಸ್ತಕ ಬೆಂಗಳೂರು ಈ ಅನುವಾದಿತ ಕೃತಿಯನ್ನು ಹೊರತಂದಿದೆ. ಕೃತಿಯ ಮುಖ ಬೆಲೆರೂ. 250/- ಕೃತಿಗಾಗಿ  080-2340 9479
ದೂರವಾಣಿ ಸಂಖ್ಯೆ ಯನ್ನು ಸಂಪರ್ಕಿಸಬಹುದು. 


No comments:

Post a Comment