Saturday, December 28, 2013

ನನ್ನ ಷರಟಿನ ದುಃಖ ಯಾರಿಗೂ ಬರಬಾರದು...

 ‘‘ಆಶಾ ಭಾವ ಹಾಗೂ ಪ್ರಾಮಾಣಿಕತೆಗಳಿಲ್ಲದೆ ಹೋದಲ್ಲಿ ಕವಿತೆ ಎನ್ನುವುದು ಹೇಳಿಕೆಗಳ ಕಟ್ಟಾಗಿಯಷ್ಟೇ ಉಳಿಯುವುದು. ಈ ಎಚ್ಚರದ ಕಾರಣದಿಂದಲೇ ಸುಬ್ಬು ಹೊಲೆಯಾರರು ತಮ್ಮ ಓರಗೆಯ ಕವಿಗಳ ನಡುವೆ ಭಿನ್ನವಾಗಿ ಕಾಣಿಸುತ್ತಾರೆ’’ ‘ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ...’ ಸುಬ್ಬು ಹೊಲೆಯಾರರ ಹೊಸ ಕವನ ಸಂಕಲನ. ಈ ಕುರಿತಂತೆ ಚ. ಹ. ರಘುನಾಥ್ ಬರೆದಿರುವ ಮೇಲಿನ ಸಾಲುಗಳು ಇಡೀ ಕವಿತೆಗೆ ಹಿಡಿದಿರುವ ಕನ್ನಡಿ. ಹಾಗೆ ನೋಡಿದರೆ ಕವಿತೆಯೆನ್ನುವುದು ಕೇವಲ ಕವಿಯ ಕನ್ನಡಿ ಮಾತ್ರವಲ್ಲ, ಅದು ಸಮಾಜಕ್ಕೆ ಹಿಡಿಯುವ ಕನ್ನಡಿಯೂ ಕೂಡ. ತನ್ನ ಹೃದ್ಯವಾದ ಭಾಷೆಯಲ್ಲಿ ಸಮಾಜದ ಎದೆಯನ್ನು ಕಲಕುವ ಸಾಲುಗಳನ್ನು ಇಲ್ಲಿ ಬರೆದಿದ್ದಾರೆ. ಅನ್ಯಾಯ, ಶೋಷಣೆಯ ವಿರುದ್ಧ ತಮ್ಮ ಕೆಂಡದಂತಹ ಸಿಟ್ಟನ್ನು ಇನ್ನಷ್ಟು ಮಾಗಿಸಿ, ಅದು ಕಲೆಯಾಗುವವರೆಗೆ ಸಹನೆಯಿಂದ ಕಾದು, ಕವಿತೆಯ ರೂಪ ಕೊಟ್ಟಿದ್ದಾರೆ ಸುಬ್ಬು ಹೊಲೆಯಾರ್. ಈ ಕೃತಿಗೆ 2010ರ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ ದೊರಕಿದೆ.

ಕಪ್ಪು ಹುಡುಗನ ಒಂದು ಕಾವ್ಯ, ಕರಿಬೆಲ್ಲ, ಅನ್ನದ ಮೇಲಿನ ಹೆಸರು, ಇಂತಿ ನಿಮ್ಮ ಹನಿಯೊಂದು...ಸುಬ್ಬು ಹೊಲೆಯಾರ್ ಕವಿತೆಯ ಭಾಷೆ ಹೃದಯಕ್ಕೆ ಸಂಬಂಧಿಸಿದ್ದು ಎನ್ನುವುದನ್ನು ಸಾರುವ ಕವಿತೆಗಳಿವು. ಇಂತಹ ಹಲವು ಕವಿತೆಗಳು ಇಲ್ಲಿವೆ. ದಲಿತ ಹಿನ್ನೆಲೆಯ ನೋವುಗಳನ್ನು, ಮನುಷ್ಯನಿಗೆ ಎದೆಯ ನವಿರು ಭಾಷೆಯಲ್ಲೇ ಕಟ್ಟಿಕೊಟ್ಟು, ಅವರ ಹೃದಯ ಇಬ್ಬನಿಯಂತೆ ತೋಯುವುದನ್ನು ಕಾದು ಕುಳಿತ ಕವಿ ಸುಬ್ಬೂ ಹೊಲೆಯಾರ್. ಸಂಸ್ಕೃತಿ ಪ್ರಕಾಶನ ಬಳ್ಳಾರಿ(9483974089) ಪ್ರಕಟಿಸಿರುವ ಈ ಸಂಕಲನದ ಮುಖಬೆಲೆ 100.

No comments:

Post a Comment