Monday, October 21, 2013

ಗಣಿ ಪಾತಾಳದಲ್ಲಿ ಸಿಲುಕಿಕೊಂಡ ಮನುಷ್ಯ

2010ರ ಅಕ್ಟೋಬರ್‌ನಲ್ಲಿ ಚಿಲಿ ಎಂಬ ಪುಟ್ಟ ದೇಶದಲ್ಲಿ ನಡೆದ ಗಣಿ ದುರಂತ ಮತ್ತು ಏಳು ನೂರು ಮೀಟರ್ ಆಳದಲ್ಲಿ ಸಿಲುಕಿಕೊಂಡ 33 ಗಣಿಗಾರರ ಸಾವು ಬದುಕಿನ ಹೋರಾಟದ ಕತೆಯೇ ಸರೋಜಾ ಪ್ರಕಾಶ ಬರೆದ ‘ಚಿಲಿಯ ಕಲಿಗಳು’ ಕೃತಿ. 33 ಜನ ಪಾತಾಳದಲ್ಲಿ ಕಳೆದ 69 ದಿನಗಳನ್ನು ಎದೆ ತಟ್ಟುವಂತೆ ಈ ಕೃತಿಯಲ್ಲಿ ಲೇಖಕಿ ನಿರೂಪಿಸಿದ್ದಾರೆ. ಇದು ಕೇವಲ ಗಣಿಯಲ್ಲಿ ಸಿಲುಕಿಕೊಂಡವರ ಕತೆ ಮಾತ್ರವಲ್ಲ. ಈ ಗಣಿಯೆಂಬ ಉದ್ಯಮದ ಒಳಸುಳಿಗಳನ್ನು, ಅದರ ಆಳವನ್ನು ಈ ಪುಟ್ಟ ಕೃತಿ ಸರಳವಾಗಿ ತೆರೆದಿಡುತ್ತದೆ.
ಆರಂಭದಲ್ಲಿ ಯಾವುದೋ ಒಂದು ದೇಶದ ಗಣಿಗೆ ಸಂಬಂಧ ವಿಷಯ, ಕೊನೆಯಲ್ಲಿ ಇಡೀ ಮನುಷ್ಯ ಕುಲದ, ಮನುಷ್ಯ ಸಂಬಂಧದ, ಮನುಷ್ಯ ಬಲದ ವಿಷಯವಾಗಿ ಕೊನೆಯಾಗುವುದು ಈ ಕೃತಿಯ ಹೆಗ್ಗಳಿಕೆ. ಒಬ್ಬನಿಗಾಗಿ ಮತ್ತೊಬ್ಬ ಅಥವಾ, ಒಬ್ಬನಿಗಾಗಿ ಎಲ್ಲರೂ ಬದುಕಿದಾಗ ಹೇಗೆ ಮನುಷ್ಯತ್ವ ವಿಜೃಂಭಿಸುತ್ತದೆ ಎನ್ನುವುದನ್ನು ಹೃದಯಸ್ಪರ್ಶಿಯಾಗಿ ಈ ಕೃತಿ ತೆರೆದಿಡುತ್ತದೆ. ಇದೊಂದು ಅಪ್ಪಟ ಸಾಹಸಮಯ ಕೃತಿಯೂ ಹೌದು. ಹಾಗೆಯೇ ಮನುಷ್ಯ ಸಂಬಂಧಗಳನ್ನು ತೆರೆದಿಡುವ ಕೃತಿಯೂ ಹೌದು. ಗಣಿಗಾರಿಕೆಯ ಕುರಿತಂತೆ, ಗಣಿದುರಂತಗಳ ಕುರಿತಂತೆ ಅಪಾರ ಮಾಹಿತಿಯನ್ನು ಈ ಕೃತಿ ಸರಳವಾಗಿ ಅರ್ಥವಾಗುವಂತೆ ತೆರೆದಿಡುತ್ತದೆ. ಭೂಮಿ ಬುಕ್ಸ್ ಬೆಂಗಳೂರು ಹೊರತಂದಿರುವ ಈ ಕೃತಿಯ ಮುಖಬೆಲೆ 110 ರೂಪಾಯಿ.

No comments:

Post a Comment