Wednesday, January 23, 2013

ಗಾಜು ಮತ್ತು ಇತರ ಕತೆಗಳು

ಹರಿದ ಹಾಳೆ
ಒಂದು ಸಾವಿರ ಪುಟಗಳ ಕೃತಿ ಅದು.
ಯಾರೋ ಮಧ್ಯದಲ್ಲಿ ಒಂದೇ ಒಂದು ಹಾಳೆಯನ್ನು ಹರಿದಿದ್ದರು.
ಅಷ್ಟೂ ದೊಡ್ಡ ಕೃತಿಯನ್ನು ಓದಿದ ಅವನು ಹರಿದ ಆ ಒಂದು ಹಳೆಯ ಕುರಿತಷ್ಟೇ ಚಿಂತಿಸ ತೊಡಗಿದ.

ಗಾಜು
‘‘ಸಂಬಂಧ ಒಡೆದರೆ, ಗಾಜು ಒಡೆದಂತೆ. ಮತ್ತೆ ಮುಟ್ಟಲು ಹೋದರೆ ಕೈ ಗಾಯವಾಗುತ್ತದೆ...’’
ಅವಳಿಗೆ ಯಾರೋ ಸಲಹೆ ನೀಡಿದರು.
  ‘‘ಕನಿಷ್ಟ ಇನ್ನೊಬ್ಬರ ಕಾಲಿಗೆ ತಾಗದ ಹಾಗೆ ಎತ್ತಿ ಎಸೆಯುವುದಕ್ಕಾದರೂ ಹೆಣ್ಣು ಆ ಗಾಜಿನ ಜೂರುಗಳನ್ನು ಮುಟ್ಟಲೇ ಬೇಕು...’’
ಅವಳು ಉತ್ತರಿಸಿದಳು.

ತಟ್ಟೆ
ಆತನಿಗೆ ಆ ಹೊಟೇಲ್‌ನಲ್ಲಿ ದಲಿತ ವೃದ್ಧನೊಬ್ಬನಿಗೆ ಪ್ರತ್ಯೇಕ ತಟ್ಟೆ.
ಯಾರೋ ಕೇಳಿದರು ‘‘ಪ್ರತಿಭಟಿಸು’’
ದಲಿತ ವೃದ್ಧ ಹೇಳಿದ ‘‘ಇಲ್ಲ...ಆ ನೀಚರು ಉಂಡ ತಟ್ಟೆಯಲ್ಲಿ ನಾನು ಊಟ ಮಾಡಲಾರೆ’’

ಯೋಧ
‘‘ನಿಜವಾದ ಯೋಧ ಹೇಗಿರಬೇಕು?’’
ಶಿಷ್ಯ ಸಂತನಲ್ಲಿ ಕೇಳಿದ.
‘‘ಅವನ ಶತ್ರುವು ಅವನನ್ನು ಇಷ್ಟಪಡಬೇಕು’’ ಸಂತ ಉತ್ತರಿಸಿದ.

ಗಡ್ಡ
‘‘ನೀನೊಬ್ಬ ಮುಸ್ಲಿಮನಲ್ಲವೆ? ಮತ್ತೇಕೆ ಗಡ್ಡವಿಡುವುದಿಲ್ಲ?’’ ಪಂಡಿತ ಅವನನ್ನು ತಡೆದು ಕೇಳಿದ.
ಅವನು ನಕ್ಕು ‘‘ನಮ್ಮ ಮನೆಯ ಮೇಕೆಗೂ ಗಡ್ಡವಿದೆ. ಅದಕ್ಕೆ’’ ಎಂದು ಹೇಳಿ ಮುಂದೆ ಹೋದ.

ಅಭಿವೃದ್ಧಿ
ಅಧಿಕಾರಿ ಬಂದು ಹೇಳಿದ ‘‘ದೇಶದ ಅಭಿವೃದ್ಧಿಗಾಗಿ ನೀನು ನಿನ್ನ ಭೂಮಿಯನ್ನು ಬಿಟ್ಟುಕೊಡಬೇಕು?’’
ರೈತನ ಕುಟುಂಬ ಬೀದಿಗೆ ಬಿತ್ತು. ಜೋಪಡಾ ಪಟ್ಟಿಯಲ್ಲಿ ವಾಸಿಸ ತೊಡಗಿದ. ಒಂದು ದಿನ ಅಧಿಕಾರಿಯ ಬಳಿ ಹೋಗಿ ಕೇಳಿದ ‘‘ಅದ್ಯಾವುದೋ ದೇಶದ ಅಭಿವೃದ್ಧಿಗಾಗಿ ನನ್ನ ಭೂಮಿ ಕಿತ್ತುಕೊಂಡಿರಿ. ಹೇಳಿ...ಆ ದೇಶ ಅಭಿವೃದ್ಧಿಯಾಯಿತೆ?’’

3 comments:

  1. ಬಹಳ ಚನ್ನಾಗಿದೆ! ತುಂಬಾ ಪುಟ್ಟದಾಗಿ ಮನಮುಟ್ಟುವಂತಿದೆ! Zen ಕಥೆಗಳನ್ನು ನೆನಪಿಸುತ್ತವೆ.

    ReplyDelete
  2. gaju mathu thatte chennagithu.

    ReplyDelete