Sunday, January 20, 2013

ನಂಬರ್ ಮತ್ತು ಇತರ ಕತೆಗಳು...

ವ್ಯಕ್ತಿ
ಪತ್ರಿಕೆಯಲ್ಲಿ ಬಂದ ಒಂದು ಸುದ್ದಿ.
ಇಲ್ಲಿ ನಡೆದ ಭೀಕರ ಕೋಮುಗಲಭೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟ ಹೆಸರು ತಿಳಿಯದ "ವ್ಯಕ್ತಿಯೊಬ್ಬ" ಇಂದು ಮೃತ ಪಟ್ಟಿದ್ದಾನೆ.

ಯುದ್ಧ
"ಯುದ್ಧವಾಗಲಿ, ಗಡಿಯಲ್ಲಿ ಯುದ್ಧವಾಗಲಿ''
ಅವನು ಬೀದಿಯಲ್ಲಿ ಚೀರುತ್ತಿದ್ದ.
ಅವನ ಮಗ ಅಮೇರಿಕಾದಲ್ಲಿ ಐಟಿ ಕಂಪೆನಿ ನಡೆಸುತ್ತಿದ್ದ.
"ಯುದ್ಧ ಬೇಡ, ಯುದ್ಧ ಬೇಡ, ಶಾಂತಿ, ಶಾಂತಿ..." ಆ ಹಿರಿಯ ಪ್ರತಿ ದಿನ ಪ್ರಾರ್ಥಿಸುತ್ತಿದ್ದ.
ಅವನ ಮಗ ಗಡಿಯಲ್ಲಿ ನಿಂತು ದೇಶ ಕಾಯುತ್ತಿದ್ದ.

ನಂಬರ್
ಅವನ ಅನ್ನದ ಬಟ್ಟಲಲ್ಲಿ ಕಲ್ಲು ಸಿಕ್ಕಿತು.
ದಂಪತಿ ನಡುವೆ ಹೊಡೆದಾಟ ಶುರುವಾಯಿತು.
ಯಾರೋ ಮಹಿಳಾ ಸಹಾಯವಾಣಿಗೆ ಫೋನ್ ಮಾಡಿದರು.
ಮಹಿಳ ಸಹಾಯವಾಣಿಯವರು, ಟಿವಿ ಚಾನೆಲ್ಗಳ ನಂಬರ್ ಕೊಟ್ಟರು.

ಧರ್ಮ
"ಶಾಂತಿಯನ್ನು ಬೋಧಿಸುವ ನಿಜವಾದ ಧರ್ಮ ಯಾವುದು?''
ಗುಂಪಿನಲ್ಲಿ ಯಾರೋ ಕೇಳಿದರು.
"ನಮ್ಮದು"
"ನಮ್ಮದು"
"ನಮ್ಮದು"
ಅರ್ಧ ಗಂಟೆಯಲ್ಲಿ ಅಲ್ಲಿ ನಾಲ್ಕು ಹೆಣ ಬಿದ್ದವು.
20 ಜನ ಗಾಯಗೊಂಡು ಆಸ್ಪತ್ರೆ ಸೇರಿದರು.

ನದಿ
ತನ್ನೂರಿನ ನದಿಯನ್ನು ಕಸ, ಕಡ್ಡಿ, ತ್ಯಾಜ್ಯ ಹಾಕಿ ಕೆಡಿಸಿದವನು ಲಕ್ಷಾಂತರ ವೆಚ್ಚ ಮಾಡಿ ವಿದೇಶದಲ್ಲಿ ದೋಣಿಯಾನ ಮಾಡಿ, ಫೋಟೋ ಹೊಡೆಸಿಕೊಂಡ.

ಊರು
ಅಪರಿಚಿತ ಕೇಳಿದ "ಈ ಊರಿನಲ್ಲಿ ಸಾಹಿತಿಗಳು, ಚಿಂತಕರು, ಕವಿಗಳು ಇಲ್ಲವೇ?"
ಗ್ರಾಮಸ್ಥ ಉತ್ತರಿಸಿದ "ಓಹೋ ಬೇಕಾದಷ್ಟು ಇದ್ದಾರೆ..."
"ನನಗವರನ್ನು ಭೇಟಿ ಮಾಡಬೇಕಾಗಿದೆ"
"ಇದೆ ದಾರಿಯಲ್ಲಿ ಒಂದು ಕಿಲೋಮೀಟರ್ ಹೋದರೆ ಈ ಊರಿನ ಜೈಲು ಸಿಗತ್ತೆ. ಎಲ್ಲ ಅಲ್ಲಿದ್ದರೆ..."

ನಿವೃತ್ತಿ
ಗದ್ದೆಯಲ್ಲಿ ನೂರಾರು ಕ್ವಿಂಟಾಲ್ ಬತ್ತ ಬೆಳೆದ ರೈತ ನಿವೃತ್ತನಾದ.
ಸುದ್ದಿಯಾಗಲಿಲ್ಲ.
ಕ್ರೀಸ್ನಲ್ಲಿ ಸಾವಿರಾರು ರನ್ ತೆಗೆದ ಸಚಿನ್ ನಿವೃತ್ತನಾದ.
ದೇಶ ಗೋಳಾಡ ತೊಡಗಿತು.

No comments:

Post a Comment