Sunday, December 30, 2012

ಅಹಿಂದ ಎನ್ನುವ ಕರುಳ ಬಂಧ!

 ಬಹಳ ಹಿಂದಿನ ಮಾತಿದು. ಮೋಂಟ ನಮ್ಮ ಮನೆಗೆ ತುಂಬಾ ಆಪ್ತ. ಆತ ನಮ್ಮ ಮನೆಗೆ ಕಟ್ಟಿಗೆಗಳನ್ನು ಹೊತ್ತು ತರುತ್ತಿದ್ದ. ತೆಂಗಿನ ಗಿಡಗಳ ಬುಡಗಳನ್ನು ಬಿಡಿಸುವುದಕ್ಕೆ ಬರುತ್ತಿದ್ದ. ನನ್ನ ಮನೆಯ ಜಮೀನಿನಲ್ಲಿ ನನ್ನ ಮತ್ತು ನನ್ನ ತಂದೆಯ ಬೆವರು ಬೀಳುವುದಕ್ಕಿಂತ ಹೆಚ್ಚಾಗಿ ಮೋಂಟನ ಬೆವರು ಹರಿದಿದೆ. ನಾನು ತೀರಾ ಸಣ್ಣವನಿರುವಾಗಲೇ ಆತ ನನ್ನ ಮನೆಗೆ ಬರುತ್ತಿದ್ದ. ನಾನು ಬೆಳಗ್ಗೆ ತಡವಾಗಿ ಎದ್ದು ಹಲ್ಲುಜ್ಜಿ ಟೇಬಲ್ ಮೇಲೆ ರೊಟ್ಟಿ ತಿನ್ನುತ್ತಿದ್ದರೆ ಆತ, ಬೆವರಿಳಿಸಿ ದುಡಿದು ನಮ್ಮ ಮನೆಯ ಹೊರಗೆ ಮೆಟ್ಟಿಲಲ್ಲಿ ಕೂತು ರೊಟ್ಟಿ ತಿನ್ನುತ್ತಿದ್ದ. ವಿಶೇಷವೆಂದರೆ ತೀರಾ ಸಣ್ಣವನಿದ್ದ ನನ್ನನ್ನು ಅವನು ಬಹುವಚನದಿಂದ ಕರೆಯುತ್ತಿದ್ದ. ನಾನು ಆತನನ್ನು ಏಕವಚನದಿಂದ ಕರೆಯುತ್ತಿದ್ದೆ. ಪಿಯುಸಿಗೆ ಕಾಲಿಡುತ್ತಿದ್ದ ಹಾಗೆ ನನಗೆ ನಿಧಾನಕ್ಕೆ ವಿಪರ್ಯಾಸ ಅರ್ಥವಾಗತೊಡಗಿತು. ಬಳಿಕ ಆತನನ್ನು ಮನೆಯ ಒಳಗೆ ಕರೆದು ರೊಟ್ಟಿ ಕೊಡುವಷ್ಟು ನಾನು ಸುಧಾರಿಸಿದೆ. ನಿಧಾನಕ್ಕೆ ಅವನಿಗೆ ಹತ್ತಿರವಾಗಲು ಪ್ರಯತ್ನಿಸಿದೆ. ದುರದಷ್ಟವಶಾತ್, ನಾವು ಹತ್ತಿರವಾಗುವುದು ಅಷ್ಟು ಸುಲಭವಿರಲಿಲ್ಲ. ‘‘ನನ್ನನ್ನು ಏಕವಚನದಿಂದ ಕರಿ’’ ಎಂದು ಅವನಲ್ಲಿ ಹೇಳುವುದಾಗಲಿ, ಅವನನ್ನು ಬಹುವಚನದಿಂದ ಕರೆಯುವುದಾಗಲಿ ನನ್ನಿಂದ ಸಾಧ್ಯವೇ ಆಗಲಿಲ್ಲ. ಎಷ್ಟೋ ಸಮಯದ ಬಳಿಕ, ಅಲ್ಲಿಲ್ಲಿ ಅವನು ಎದುರಾದರೆ ಅವನಿಗೆ ಐವತ್ತೋ, ನೂರೋ ಹಣ ಕೊಡುತ್ತಿದ್ದೆ. ಅವನದನ್ನು ನೇರ ಹೆಂಡದಂಗಡಿಗೆ ದಾಟಿಸುತ್ತಿದ್ದ ಎನ್ನುವುದು ಗೊತ್ತಿದ್ದರೂ. ಅದು ನನ್ನ ಪಾಪ ಪ್ರಜ್ಞೆಯ ಫಲವಾಗಿರಬಹುದು. ಇತ್ತೀಚೆಗೆ ಮೋಂಟ ತೀರಿಕೊಡ. ಆದರೆ ಪ್ರಶ್ನೆ ಈಗಲೂ ನನ್ನಲ್ಲಿ ಉಳಿದಿದೆ. ಯಾಕೆ ಅವನನ್ನು ಬಹುವಚನದಿಂದ ನನಗೆ ಕರೆಯಲು ಸಾಧ್ಯವಾಗಲಿಲ್ಲ? ಈ ಕ್ಷಣದಲ್ಲೂ ಆತನನ್ನು ‘‘ನೀವು’’ ಎಂದು ಕರೆಯಲಾಗದಂತೆ ನನ್ನನ್ನು ಕಟ್ಟಿ ಹಾಕಿದ ಶಕ್ತಿ ಯಾವುದು? ನಿಜಕ್ಕೂ ನನ್ನನ್ನು ನಾನು ಜಾತ್ಯತೀತ ಎಂದು ಕರೆದುಕೊಳ್ಳಲು ಅರ್ಹನೆ...ಈ ಪ್ರಶ್ನೆಗಳು ಈ ಕ್ಷಣದಲ್ಲೂ ನನ್ನನ್ನು ಕಾಡುತ್ತಿದೆ.

 ಇತ್ತೀಚಿನ ದಿನಗಳಲ್ಲಿ ದಲಿತರು-ಮುಸ್ಲಿಮರು-ಕ್ರಿಶ್ಚಿಯನ್ನರು-ಹಿಂದುಳಿದ ವರ್ಗಗಳು ಒಂದಾಗುವ ಮಾತುಗಳು ಕೇಳಿ ಬರುತ್ತಿವೆ. ಹಲವು ರಾಜಕೀಯ ಪಕ್ಷಗಳ ಸಮಾರಂಭಗಳಲ್ಲೂ ಇದು ನಡೆಯುತ್ತಿದೆ. ಆದರೆ ಈ ಒಂದಾಗುವ ಮಾತುಗಳು ಕೇಳಿ ಬರುತ್ತಿರುವುದಾದರೂ ಯಾವ ಉದ್ದೇಶಕ್ಕೆ? ಈ ಮೂರು ಗುಂಪಿಗೂ ಒಬ್ಬ ಸಮಾನವಾದ ಶತ್ರುವಿದ್ದಾನೆ. ಆ ಶತ್ರುವಿನ ಕಾರಣಕ್ಕಾಗಿ ನಾವು ಒಂದಾಗಿದ್ದೇವೆ. ಒಂದು ವೇಳೆ ಈ ಶತ್ರು ಇಲ್ಲದೇ ಇರುತ್ತಿದ್ದರೆ ಅಥವಾ ಹುಟ್ಟಿಕೊಳ್ಳದೇ ಇರುತ್ತಿದ್ದರೆ ಮುಸ್ಲಿಮರು, ದಲಿತರು ಅಥವಾ ಹಿಂದುಳಿದವರ್ಗ -ದಲಿತರು ಒಂದಾಗುವ ಮಾತುಗಳು ಬರುತ್ತಿತ್ತೆ? ಒಂದು ರೀತಿಯಲ್ಲಿ ಪೇಜಾವರಶ್ರೀಗಳಿಗೂ ದಲಿತರು ಬೇಕಾಗಿರುವುದು ಇದೇ ಕಾರಣಕ್ಕೆ. ದಲಿತರ ಕೇರಿಗೆ ಕಾಲಿಡದೇ ಇದ್ದರೆ, ಮುಂದಿನ ದಿನಗಳಲ್ಲಿ ಅಪಾಯ ತನ್ನ ಕಾಲ ಬುಡಕ್ಕೇ ಬರಬಹುದು ಎನ್ನುವ ಆತಂಕದಿಂದ, ತನ್ನ ಪೀಠದಿಂದ ಕೆಳಗಿಳಿದು ದಲಿತ ಕೇರಿಯೆಡೆಗೆ ದಾವಿಸಿದ್ದಾರೆ. ಇಂದು ಮುಸ್ಲಿಮರು, ಕ್ರಿಶ್ಚಿಯನ್ನರು ತಮ್ಮ ತಮ್ಮ ಪೀಠದಿಂದ ಕೆಳಗಿಳಿದು ದಲಿತರ ಜೊತೆ ಒಂದಾಗುವುದಕ್ಕೂ ಇಂತಹದೇ ಇನ್ನೊಂದು ಬಗೆಯ ಆತಂಕ. ಬಹುಶಃ ಅಹಿಂದ ಚಳವಳಿಯ ಬಹುದೊಡ್ಡ ಬಿರುಕು ಕೂಡ ಇದೇ ಆಗಿದೆ. ಈ ದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ದಲಿತರು ಒಟ್ಟು ಸೇರುವುದಕ್ಕೆ ಒಬ್ಬ ಸಮಾನ ಶತ್ರುವಿನ ಅಗತ್ಯವಿತ್ತೆ? ಎನ್ನುವ ಪ್ರಶ್ನೆಯನ್ನು ಎಲ್ಲರೂ ಹಾಕಿಕೊಳ್ಳಬೇಕಾಗಿದೆ. ಮುಸ್ಲಿಮರು ಮತ್ತು ದಲಿತರ ನಡುವಿನ ಸಂಬಂಧ ಕರುಳಬಳ್ಳಿಯದು. ಆ ಸಂಬಂಧವನ್ನು ಉಭಯ ಸಮುದಾಯ ಜೋಪಾನವಾಗಿ, ಗಟ್ಟಿ ಮಾಡಿಕೊಂಡಿದ್ದಿದ್ದರೆ ಯಾವ ಶತ್ರುವಿನ ಭಯವೂ ಈ ಸಮುದಾಯಗಳಿಗೆ ಸದ್ಯದ ದಿನಗಳಲ್ಲಿ ಇರುತ್ತಿರಲಿಲ್ಲ. ಶತ್ರುವಿದ್ದರೂ ತಲೆಯೆತ್ತುವ ಧೈರ್ಯ ಮಾಡುತ್ತಿರಲಿಲ್ಲ. ಮುಖ್ಯವಾಗಿ ಅಲ್ಪಸಂಖ್ಯಾತರು ದಲಿತರ ಜೊತೆಗಿನ ಕರುಳ ಸಂಬಂಧವನ್ನು ಮರೆತರು. ಅದರ ಪರಿಣಾಮವನ್ನು ಇದೀಗ ದಲಿತರೂ ಉಣ್ಣುತ್ತಿದ್ದಾರೆ. ಅಲ್ಪಸಂಖ್ಯಾತರೂ ಉಣ್ಣುತ್ತಿದ್ದಾರೆ.

ದಲಿತರು ಎನ್ನುವ ಶಬ್ದಕ್ಕೆ ವಿರುದ್ಧಾರ್ಥ ಬ್ರಾಹ್ಮಣ ಎಂದು ಬಹುತೇಕ ಜನರು ತಿಳಿದುಕೊಂಡಿದ್ದಾರೆ. ಆದರೆ ಬ್ರಾಹ್ಮಣ್ಯ ಎನ್ನುವುದು ಒಂದು ಆಲೋಚನೆ ಎನ್ನುವ ಪ್ರಜ್ಞೆ ನಮ್ಮಲ್ಲಿರಬೇಕಾಗಿದೆ. ಆ ಆಲೋಚನೆ ನಮ್ಮ ನಿಮ್ಮಲ್ಲೆಲ್ಲ ಗುಟ್ಟಾಗಿ ಮನೆ ಮಾಡಿಕೊಂಡಿರಬಹುದು. ಮನು ಸಂವಿಧಾನದ ಫಲವನ್ನು ಕೇವಲ ಬ್ರಾಹ್ಮಣರು ಮಾತ್ರ ಉಂಡಿಲ್ಲ. ಇಂದು ಅಹಿಂದ ಜೊತೆಗೆ ಗುರುತಿಸಿಕೊಳ್ಳಲು ತಹತಹಿಸುವ ಶೂದ್ರರು, ಮುಸ್ಲಿಮರು, ಕ್ರಿಶ್ಚಿಯನ್ನರೂ ಈ ದೇಶದಲ್ಲಿ ಉಂಡಿದ್ದಾರೆ. ಇಂದು ಬ್ರಾಹ್ಮಣ್ಯವಾದ ನೇರ ಕಾರ್ಯಾಚರಣೆಯನ್ನು ನಿಲ್ಲಿಸಿ, ಬ್ರಾಹ್ಮಣೇತರ ಕೈಗಳ ಮೂಲಕ ತನ್ನ ಹಿತಾಸಕ್ತಿಯನ್ನು ಸಾಧಿಸಿಕೊಳ್ಳುತ್ತಿದೆ. ಮನುಸಂವಿಧಾನವನ್ನು ಬರೆದು ಅದನ್ನು ಉಳಿದವರ ಕೈಯಲ್ಲಿಟ್ಟು, ಅವರು ದೂರದಲ್ಲಿ ನಿಂತು ಅದನ್ನು ಗಮನಿಸುತ್ತಿದ್ದಾರೆ. ಅಂದರೆ ಅದರ ಲಾಭಗಳನ್ನು ಇತರ ಮೇಲ್ವರ್ಗಗಳೊಂದಿಗೆ ಹಂಚಿಕೊಳ್ಳುವಷ್ಟು ಉದಾರರಾಗಿದ್ದಾರೆ. ಇದರ ಪರಿಣಾಮವನ್ನು ನಾವು ಅಲ್ಲಲ್ಲಿ ನೋಡುತ್ತಿದ್ದೇವೆ. ಖೈರ್ಲಾಂಜಿ, ಗುಜರಾತ್, ಧರ್ಮಪುರಿ...ಹೀಗೆ. ದಲಿತರ ಮೇಲಿನ ದೌರ್ಜನ್ಯದಲ್ಲಿ ಶೂದ್ರರೂ ಸೇರಿಕೊಂಡಿದ್ದಾರೆ. ಮುಸ್ಲಿಮರೂ ದಲಿತರನ್ನು ತುಳಿದಿದ್ದಾರೆ. ಕ್ರಿಶ್ಚಿಯನ್ನರ ಪಾಲೇನು ಸಣ್ಣದಲ್ಲ. ಬ್ರಾಹ್ಮಣ್ಯವೆನ್ನುವುದು ಶೂದ್ರರಲ್ಲಿ, ಮುಸ್ಲಿಮರಲ್ಲಿಯೂ ವಿಷದ ಹಾವಿನಂತೆ ತಣ್ಣಗೆ ಮಲಗಿರುವುದನ್ನು ನಾನು ನೋಡಿದ್ದೇನೆ.
   
ಮುಸ್ಲಿಮರು ತಮ್ಮ ಧರ್ಮ ಸಹೋದರತೆಯನ್ನು, ಸಮಾನತೆಯನ್ನು ಬೋಧಿಸುತ್ತದೆ ಎಂದು ಗಾಢವಾಗಿ ನಂಬಿದ್ದಾರೆ. ಹಾಗಿದ್ದರೂ ಇಸ್ಲಾಂ ತಾನು ಸ್ವೀಕರಿಸಬಹುದಾದ ಧರ್ಮ ಎಂದು ಅಂಬೇಡ್ಕರ್‌ಗೆ ಯಾಕೆ ಅನ್ನಿಸಲಿಲ್ಲ? ಇದೇ ಪ್ರಶ್ನೆಯನ್ನು ನನ್ನೊಬ್ಬ ಆತ್ಮೀಯ ಧರ್ಮಗುರುವಿಗೆ ಕೇಳಿದ್ದೆ. ಅವರು ಹೇಳಿದರು ‘‘ಬಹುಶಃ ಇಸ್ಲಾಮನ್ನು ಅವರು ಅರ್ಥ ಮಾಡಿಕೊಳ್ಳಲು ವಿಫಲರಾಗಿರಬೇಕು’’ ವಿಪರ್ಯಾಸವೆಂದರೆ, ಇಸ್ಲಾಮನ್ನು ಅಂಬೇಡ್ಕರ್ ಅರ್ಥ ಮಾಡಿಕೊಳ್ಳಲು ವಿಫಲರಾದುದಲ್ಲ. ಇಲ್ಲಿನ ಮುಸ್ಲಿಮರು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇಸ್ಲಾಮಿನೊಳಗೆ ಗಡ್ಡವೇ ಹೊರತು, ಗಡ್ಡದೊಳಗೆ ಇಸ್ಲಾಮ್ ಅಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಅವರು ಬಹುತೇಕ ವಿಫಲರಾಗಿದ್ದಾರೆ. ಭಾರತದ ಜಾತೀಯತೆಯ ಚರಂಡಿ ಈ ದೇಶದ ಮುಸ್ಲಿಮರ ಮನದಾಳದಲ್ಲಿ ಇನ್ನೂ ಅಂತರ್‌ಗಂಗೆಯಂತೇ ಹರಿಯುತ್ತಿದೆ. ಇಸ್ಲಾಂ ತಾನು ಸ್ವೀಕರಿಸಬಹುದಾದ ಧರ್ಮ ಎಂದು ಅಂಬೇಡ್ಕರ್‌ಗೆ ಆ ಕಾಲದಲ್ಲಿ ಅನ್ನಿಸದೇ ಇರುವುದು ಭಾರತದ ಇಂದಿನ ಸಂದರ್ಭದಲ್ಲಿ ನೋಡಿದರೆ, ಅದು ಇಲ್ಲಿನ ಮುಸ್ಲಿಮರ ಅತಿ ದೊಡ್ಡ ಸೋಲು. ಅದಕ್ಕಾಗಿ ಇಲ್ಲಿನ ಮುಸ್ಲಿಮರು ಈಗಲೂ ಬೆಲೆ ತೆರುತ್ತಲೇ ಇದ್ದಾರೆ. ಇದು ಮುಸ್ಲಿಮರಿಗಷ್ಟೇ ಸೀಮಿತವಾಗಿಲ್ಲ. ಕ್ರೈಸ್ತ ಧರ್ಮಕ್ಕೆ ಮತಾಂತರವಾದ ದಲಿತರ ಶವ ದಫನ ಹಲವು ಚರ್ಚುಗಳಲ್ಲಿ ವಿವಾದವಾದುದನ್ನು ನಾವು ನೋಡಿದ್ದೇವೆ. ದಲಿತ ಪಾದ್ರಿಗಳೇ ಅಲ್ಲಿ ಕೀಳರಿಮೆಯಿಂದ ಬದುಕುವ ಸನ್ನಿವೇಶವಿದೆ. ದಲಿತರು ದಲಿತರಾಗಿದ್ದುಕೊಂಡು ಅವಮಾನ ಅನುಭವಿಸುವುದಕ್ಕಿಂತ ಇದು ಕ್ರೂರವಾದುದು. ಇವೆಲ್ಲವೂ ಯಾಕೆ ಸಂಭವಿಸುತ್ತಿದೆಯೆಂದರೆ, ಇಂದು ನಾವು ರಾಜಕೀಯ ಕಾರಣಗಳಿಗಾಗಿ ದಲಿತರನ್ನು ಪ್ರೀತಿಸತೊಡಗಿರುವುದು. ದಲಿತರನ್ನು ಪ್ರೀತಿಸುವುದಕ್ಕೆ ಈ ದೇಶದ ಅಲ್ಪಸಂಖ್ಯಾತರಿಗೆ ರಾಜಕೀಯ ಕಾರಣಗಳ ಅಗತ್ಯವಿಲ್ಲ. ಕರುಳ ಸಂಬಂಧವೊಂದೇ ಸಾಕು. ಅವರೊಂದಿಗೆ ನೂರಾರು ಜನ್ಮ ಜೊತೆ ಜೊತೆಯಾಗಿ ಬಾಳುವುದಕ್ಕೆ.

ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿರಬಹುದು. ಬೌದ್ಧರಾಗಿದ್ದರೂ ಅವರು ಅತ್ಯುತ್ತಮ ಮುಸ್ಲಿಮರಾಗಿಯೂ, ಅತ್ಯುತ್ತಮ ಕ್ರಿಶ್ಚಿಯನ್ನರಾಗಿಯೂ ಬಾಳಿದರು. ಆದುದರಿಂದಲೇ ನಮಗಾರಿಗೂ ಅಂಬೇಡ್ಕರ್ ಇಲ್ಲದ ಭಾರತವನ್ನು ಕಲ್ಪಿಸಲು ಸಾಧ್ಯವಾಗುವುದಿಲ್ಲ. ಈ ದೇಶದ ಅಹಿಂದ ವರ್ಗ ನಿಜ ಕಾರಣಕ್ಕಾಗಿ ಒಂದುಗೂಡುವ ಅಗತ್ಯವಿದೆ. ಒಬ್ಬ ದಲಿತನಿಗೆ ನೋವಾದಾಗ ಅದಕ್ಕಾಗಿ ಈ ದೇಶದ ಸರ್ವ ಶೋಷಿತರ ಕರುಳೂ ಸಹಜವಾಗಿ ಮಿಡಿಯಬೇಕು. ಅಂತಹ ಪ್ರಾಮಾಣಿಕ ಸಂಬಂಧವಷ್ಟೇ ಅಹಿಂದವನ್ನು ಬಲವಾಗಿ ಜೋಡಿಸೀತು. ಇದಕ್ಕೆ ಹೊರತು ಪಡಿಸಿದ ಎಲ್ಲ ಸಮಾಗಮಗಳೂ ಸಭೆ ಮುಗಿದು ವಿಸರ್ಜನೆಯಾಗುವವರೆಗೆ ಮಾತ್ರ ಉಳಿದೀತು. ಅದು ಈ ದೇಶದ ಬಿಕ್ಕಟ್ಟಿಗೆ ಪರಿಹಾರವನ್ನು ನೀಡಲಾರದು.

2 comments:

  1. ಮಾನ್ಯ ಬಶೀರ್ ಸಾರ್,
    ನಿಮ್ಮ ಬರಹದ ಒಟ್ಟು ಸಾರ ಅರ್ಥವಾಗುತ್ತದೆ. ಹಿಂದೂ ಧರ್ಮವೆನ್ನುವುದೇ ಒಂದು ಶ್ರೇಣೀಕೃತ ವ್ಯವಸ್ಥೆ. ಇಲ್ಲಿ ಶ್ರೇಣಿ... ಜಾತಿಯಿಂದ (ಹುಟ್ಟಿನಿಂದ) ತೀರ್ಮಾನವಾಗುತ್ತದೆ. ಮೇಲಿನವರು ಕೆಳಗಿನವರನ್ನು ತುಳಿಯುವ ಜನ್ಮಸಿದ್ಧ ಹಕ್ಕನ್ನು ಸದಾ ಹೊಂದಿರುತ್ತಾರೆ. ಹಾಗೇ ಮೇಲಿನವರಿಗೆ ತಗ್ಗಿಬಗ್ಗಿ ನಡೆಯಬೇಕಾದ ಅನಿವಾರ್ಯತೆಯನ್ನೂ! ಆದರೆ ಈ ದೇಶದಲ್ಲಿ ವಿದ್ಯೆಯನ್ನು ಕೆಲವರ್ಗದವರಿಗೆ ಮಾತ್ರಾ ಮೀಸಲು ಮಾಡಿ, ಉಳಿದವರನ್ನು ಕಲಿಕೆಯಿಂದ ದೂರಮಾಡಿ, ಕೊನೆಗೆ ಅವರನ್ನು ತಮ್ಮ ಸೇವೆಗಾಗೇ ಸದಾ ಉಳಿಸಿಕೊಳ್ಳಬೇಕು ಎನ್ನುವ ರೋಗ ಈ ದೇಶದಲ್ಲಿ ಗುಣವಾಗದಷ್ಟು ಹಬ್ಬಿದೆ. ಬಹುಶಃ ಬೇರೆಡೆ ಇದು ಸಿರಿವಂತಿಕೆ/ ಬಡತನದ ವರ್ಗವಾಗಿ ಚಾಲ್ತಿಯಲ್ಲಿರಬಹುದು. ಇಲ್ಲಿ ಮಾತ್ರಾ ಹುಟ್ಟಿನ ಕಾರಣದಿಂದ ಚಾಲ್ತಿಯಲ್ಲಿದೆ. ಇದು ದುರಂತ!
    ಇನ್ನು ನಿಮ್ಮ ಕೊನೆಯ ಮಾತುಗಳು ಯಾಕೋ ಸರಿಯಲ್ಲ ಅನ್ನಿಸಿತು. ಒಬ್ಬ ದಲಿತನಿಗೆ ನೋವಾದರೆ ಮಿಡಿಯಬೇಕಾದ್ದು ಈ ದೇಶದ ಅಹಿಂದದವರ ಮನಸ್ಸು ಮಾತ್ರವಲ್ಲಾ!! ಮನುಶ್ಯತ್ವದಲ್ಲಿ ನಂಬಿಕೆಯಿರುವವರಿಗೆಲ್ಲಾ ಈ ಮಿಡಿತ ಇರಬೇಕು. ಇರುತ್ತದೆ.

    ವಂದನೆ

    ಆನಂದ್

    ReplyDelete
  2. I agree with anand about last sentence...

    ReplyDelete